Pages

Sunday, April 3, 2011

ಅಸತೋಮಾ ಸದ್ಗಮಯ

ಯುಗಾದಿ ಹಬ್ಬದ ಮುನ್ನಾದಿನವಾದ ಇಂದು ಸ್ವಲ್ಪ ಚಿಂತನ-ಮಂಥನ ಮಾಡಬೇಕೆನಿಸಿದೆ.ವಿಕೃತಿ ಸಂವತ್ಸರ ಇಂದು ಮುಗಿದು ನಾಳೆಯಿಂದ ಖರ ಸಂವತ್ಸರವು ಆರಂಭವಾಗುತ್ತದೆ.ಹೀಗೆಯೇ ನಮ್ಮ ನಮ್ಮ ವಯೋಮಾನದಂತೆ ಹಲವು ಸಂವತ್ಸರಗಳು ಕಳೆದುಹೋಗಿದ್ದಾಗಿದೆ. ಅದರೊಟ್ಟಿಗೆ ನಮ್ಮ ಆಯುಷ್ಯವೂ ಕೂಡ ಕಡಿಮೆಯಾಗುತ್ತಾ ಬರುತ್ತಿದೆ. ಪ್ರತಿ ವರ್ಷವೂ ಕೂಡ ಹೊಸಸಂವತ್ಸರವು ನಿಮಗೆ ಶುಭತರಲಿ ಎಂಬ ಶುಭ ಕಾಮನೆಗಳು ಕೇಳಿಬರುವುದು ಸರ್ವೇ ಸಾಮಾನ್ಯ. ಇದು ಎಸ್.ಎಂ.ಎಸ್ ಕಾಲ. ಇಂದೂ ಕೂಡ ನೂರಾರು ಎಸ್.ಎಂ.ಎಸ್ ಗಳು ನಿಮ್ಮ ಮೊಬೈಲ್ ನಲ್ಲಿ ಬಂದು ಕುಳಿತಿದ್ದಾಗಿದೆ.ಎಲ್ಲವೂ ಶುಭ ಹಾರೈಕೆಗಳೇ. ಆದರೆ ಯಾರಿಗಾದರೂ "ಸತ್ಯದಲ್ಲೇ ನಡೆಯೋಣ, ಸತ್ಯವನ್ನೇ ಆಚರಿಸೋಣ ಎಂಬ ಒಂದು ಎಸ್.ಎಂ.ಎಸ್ ಬಂದಿದೆಯೇ?" ಬಂದಿದ್ದರೆ ಪಡೆದವರು ಪುಣ್ಯವಂತರು.

ವೇದಸುಧೆಯ ಗೌರವ ಸಂಪಾದಕರಾದ ಹಾಸನದ ಶ್ರೀ ಕವಿ ನಾಗರಾಜ್ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ಒಂದು ಸತ್ಸಂಗ ನಡೆಯಿತು. ಬೇಲೂರಿನ ವೇದಾಧ್ಯಾಯೀ ವಿಶ್ವನಾಥಶರ್ಮರು ಅಗ್ನಿಹೋತ್ರವನ್ನು ನಡೆಸಿಕೊಟ್ಟರು.ನಾವೆಲ್ಲರೂ ಸಾಮಾನ್ಯವಾಗಿ ಹೇಳುವ ಒಂದು ಮಂತ್ರವನ್ನು ಅಗ್ನಿಹೋತ್ರ ನಡೆಯುವಾಗ ಶ್ರೀ ಶರ್ಮರು ಹೇಳಿ ಅದರ ಅರ್ಥವನ್ನೂ ವಿವರಿಸಿದರು. ಹೌದು, ನಮಗೆಲ್ಲರಿಗೂ ಅದರ ಅರ್ಥವೂ ತಿಳಿದಿದೆ. ಆದರೆ ಅದರ ಒಳಹೊಕ್ಕು ಆ ಮಂತ್ರದ ಅರ್ಥವನ್ನು ತಿಳಿದಿದ್ದೇವೆಯೇ? ಎಂದು ಸ್ವಲ್ಪ ವಿಚಾರ ಮಾಡೋಣ.

ಅಸತೋಮಾ ಸದ್ಗಮಯ|
ತಮಸೋಮಾ ಜ್ಯೋತಿರ್ಗಮಯ|
ಮೃತ್ಯೋರ್ಮಾ ಅಮೃತಂಗಮಯ|
ಓಂ ಶಾಂತಿ: ಶಾಂತಿ: ಶಾಂತಿ: ||

ಅಸತ್ಯದಿಂದ ಸತ್ಯದ ಕಡೆ ಹೋಗೋಣ
ಕತ್ತಲೆಯಿಂದ ಬೆಳಕಿನತ್ತ ಹೋಗೋಣ
ಮೃತ್ಯುವಿನಿಂದ ಅಮೃತತ್ವ ಕಡೆಗೆ ಹೋಗೋಣ
ಎಲ್ಲರಿಗೂ ಶಾಂತಿ ಸಿಗಲಿ-
ಇದು ಭಾವಾರ್ಥ. ಆದರೆ ಇದರ ಒಳಹೊಕ್ಕು ನಾವು ಮಂತ್ರವನ್ನು ಅರ್ಥ ಮಾಡಿಕೊಂಡಿದ್ದೇವೆಯೇ? ಹಾಗೆ ಒಂದು ವೇಳೆ ಮಂತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೇ ಆದರೆ ಇಂದು ನಮ್ಮ ಬಾಳು ನೆಮ್ಮದಿಯಿಂದ ಇರಲೇ ಬೇಕಲ್ಲವೇ?

"ಅಸತ್ಯದಿಂದ ಸತ್ಯದ ಕಡೆ ಹೋಗೋಣ"- ಸರಳವಾಗಿ ಹೇಳುವ ಈ ಮಾತಿಗೆ ಎಷ್ಟು ಅರ್ಥವಿದೆ! ಅಸತ್ಯ ಅಂದರೇನು? ಸತ್ಯ ಎಂದರೇನು? -ಈ ಪದಗಳ ಅರ್ಥವನ್ನು ಮೊದಲು ತಿಳಿದುಕೊಳ್ಳಬೇಕಲ್ಲವೇ? ಇಲ್ಲಿ ನಾವು ವೇದಾಂತಿಗಳಾಗುವುದೇನೂ ಬೇಡ. ಆದರೆ "ಅಸತ್ಯದಿಂದ ಸತ್ಯದ ಕಡೆ ಹೋಗೋಣ"- ಎಂದು ಮಂತ್ರವನ್ನು ಹೇಳಿದ ಮೇಲೆ ಮಂತ್ರದಂತೆ ನಡೆಯಬೇಕಲ್ಲವೇ? ನಾವು ಹಾಗೆ ಮಾಡುತ್ತಿದ್ದೇವೆಯೇ? ದೇವರ ಹೆಸರಿನಲ್ಲಿ ಮಾಡುತ್ತಿರುವ ಪೂಜೆ-ಪುನಸ್ಕಾರಗಳು, ಆಚರಿಸುತ್ತಿರುವ ಆಚರಣೆಗಳು, ಹವನ-ಹೋಮಗಳು, ಇತ್ಯಾದಿಗಳನ್ನು ಸತ್ಯಪಥದಲ್ಲಿ ಆಚರಿಸುತ್ತಿದ್ದೇವೆಯೇ? ಶ್ರೀ ಸುಧಾಕರಶರ್ಮರು ಬಹಳ ನಿಷ್ಟುರವಾಗಿಯೇ ಒಂದು ಮಾತು ಹೇಳುತ್ತಾರೆ. ಸರ್ವವ್ಯಾಪಿಯೂ, ಸಾರ್ವಭೌಮನೂ, ಸರ್ವಜ್ಞನೂ ಆದ ಭಗವಂತನಿಗೆ ನಾವು ಏನೇನೋ ಆಕಾರಕೊಟ್ಟು , ಅವನನ್ನು ಕುಬ್ಜನನ್ನಾಗಿ ಮಾಡಿಬಿಡುತ್ತೀವಲ್ಲಾ! ಸುಳ್ಳು ಸುಳ್ಳು ಕಥೆಗಳನ್ನೇ ಹೇಳುತ್ತಾ ಅದನ್ನೇ ನಿಜವೆನಿಸಲು ಹೊರಟಿದ್ದೀವಲ್ಲಾ! ಇದು ಅಸತ್ಯದಿಂದ ಸತ್ಯದ ಕಡೆ ಹೋಗೋಣವೆಂದು ಮಂತ್ರ ಹೇಳುವ ನಮಗೆ ಎಷ್ಟು ಸರಿ ಹೊಂದುತ್ತದೆ?

ತಮಸೋಮಾ ಜ್ಯೋತಿರ್ಗಮಯ|
"ಕತ್ತಲೆಯಿಂದ ಬೆಳಕಿನತ್ತ ಹೋಗೋಣ"- ನಾವು ಅದೇ ಕತ್ತಲೆಯಲ್ಲಿ ಸಿಕ್ಕಿಹಾಕಿಕೊಂಡು ನೆರಳುತ್ತಿಲ್ಲವೇ?

ಮೃತ್ಯೋರ್ಮಾ ಅಮೃತಂಗಮಯ|
"ಮೃತ್ಯುವಿನಿಂದ ಅಮೃತತ್ವ ಕಡೆಗೆ ಹೋಗೋಣ"- ನಾವೆಲ್ಲಾ ಮೃತ್ಯುವಿನ ಭೀತಿಯಲ್ಲಿಯೇ ಕಾಲ ಹಾಕುತ್ತಿಲ್ಲವೇ? ನಾವು ತಿನ್ನುತ್ತಿರುವ ಆಹಾರವು ವಿಷಪೂರಿತವಾಗಿದೆ, ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಆದರೂ ನಾವು ನಮ್ಮ ಆಹಾರದ ಶೈಲಿ ಬದಲಿಸಲು ಸಿದ್ಧರಿಲ್ಲ. ಹೀಗಾದರೆ ಅಮೃತತ್ವದ ಕಡೆ ಹೋಗುವುದಾದರೂ ಹೇಗೆ?
ಅಷ್ಟೇ ಅಲ್ಲ, ನಮ್ಮ ಚಿಂತನೆಗಳು, ಆಲೋಚನೆಗಳು,ನಮ್ಮ ಬದುಕಿನ ಶೈಲಿ, ಆಹಾರ ಕ್ರಮ -ಇವೆಲ್ಲವೂ ಕೂಡ ನಮ್ಮ ಆರೋಗ್ಯದ ಮೇಲೆ ಪ್ರಭಾವವನ್ನು ಬೀರುತ್ತವೆ. 
ಸಧ್ಯದ ಪರಿಸ್ಥಿತಿಯಲ್ಲಿ ನಾವೆಲ್ಲಿದ್ದೇವೆಂಬುದನ್ನು ಕೇವಲ ಕೆಲವೇ ಶಬ್ಧಗಳಲ್ಲಿ ಇಲ್ಲಿ ಪ್ರಸ್ತಾಪಿಸಲಾಗಿದೆ.
ವೇದಸುಧೆಯ ಅಭಿಮಾನಿಗಳೇ ಹೊಸವರ್ಷದಲ್ಲಿ ಮೇಲೆ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಸ್ವಲ್ಪ ಚಿಂತನ-ಮಂಥನ ನಡೆಸೋಣ. ಅರ್ಥವನ್ನು ತಿಳಿದು ಮಂತ್ರವನ್ನು ಪಠಿಸೋಣ. ಹಾಗಲ್ಲದೆ ಕಂಠಪಾಠವಾದ ಮಂತ್ರವನ್ನು ಅರ್ಥ ತಿಳಿಯದೆ ಪಠಿಸಿದರೆ ಬರುವ ಭಾಗ್ಯವಾದರೂ ಏನು?
ಇಂತಹ ಪವಿತ್ರವಾದ ಭರತ ಭೂಮಿಯಲ್ಲಿ ಹುಟ್ಟಿರುವುದೇ ನಮ್ಮ ಪೂರ್ವಜನ್ಮದ ಪುಣ್ಯದ ಫಲ ವಲ್ಲವೇ? ವೇದದ ಭೂಮಿಯಲ್ಲಿ ಜನ್ಮತಾಳಿರುವ ನಾವು ವೇದ ವೆಂದರೆ ಜ್ಞಾನ ಎಂಬುದನ್ನು ಮನವರಿಕೆ ಮಾಡಿಕೊಂಡು ಕೆಲವಾದರೂ ವೇದಮಂತ್ರಗಳ ಅರ್ಥವನ್ನು ತಿಳಿದುಕೊಂಡಿದ್ದೇ ಆದರೆ ನಮ್ಮ ನೆಮ್ಮದಿಯ ಜೀವನಕ್ಕೆ ಬೇಕಾದ ಸಮಸ್ತವೂ ಅದರಲ್ಲಿದೆ ಎಂಬುದನ್ನು ತಿಳಿಸುತ್ತಾ, ವೇದವನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ವೇದಾಧ್ಯಾಯೀ ಸುಧಾಕರ ಶರ್ಮರ ಹಲವು ಉಪನ್ಯಾಸಗಳ ಆಡಿಯೋ ವೇದಸುಧೆಯ "ಶರ್ಮರ ಪುಟದಲ್ಲಿ ಲಭ್ಯವಿದೆ. ಹೊಸ ಬರಹಗಳಿಗಾಗಿ ಕಾಯುವ ಅಗತ್ಯವಿಲ್ಲ. ಈಗಾಗಲೇ ರುಚಿಯಾದ ಅಡುಗೆ ಸಿದ್ಧವಾಗಿದೆ. ಅದನ್ನು ಉಣಬಡಿಸಲು ವೇದಸುಧೆಯು ಸಾಕಷ್ಟು ಶ್ರಮಪಟ್ಟು ಸಂಗ್ರಹಿಸಿ ಪ್ರಕಟಿಸಿದೆ. ಅವುಗಳನ್ನು ಕೇಳಿದ್ದೇ ಆದರೆ ವೇದಪಥದಲ್ಲಿ ಕ್ರಮಿಸಲು ನಮಗೆ ಸಾಧ್ಯವಾಗುವುದರಲ್ಲಿ ಸಂಶಯವಿಲ್ಲ.

3 comments:

  1. ಶ್ರೀಧರ್ ಜೀ. ನಿನ್ನ ವೇದನೆ, ಕಾಳಜಿ, ಕಳಕಳಿ ಅರ್ಥವಾಗುತ್ತದೆ. ನಿಮ್ಮ ತುಡಿತಕ್ಕೆ ಧನ್ಯವಾದಗಳು. ನಮಗೆ ಇಷ್ಟಾದರೂ ಚಿಂತಿಸುವ ಶಕ್ತಿಯನ್ನು ಆ ದೇವರು ಕರುಣಿಸಿದ್ದಾನಲ್ಲ; ಅದೇ ಮಹಾ ಪ್ರಸಾದವೆಂದು ಭಾವಿಸೋಣ. ಅಸತ್ಯ, ತಮಸ್ಸು, ಮೃತ್ಯು- ಇವು ನಿಜವಾಗಿಯೂ ಏನು ಎಂಬುದನ್ನೇ ತಿಳಿಯದೇ ಅವುಗಳಲ್ಲೇ ಸಿಲುಕಿ ಒದ್ದಾಡುತ್ತಿರುವ ಕೋಟ್ಯಾಂತರ ಜೀವಿಗಳು ನಮ್ಮ ಕಣ್ಣಮುಂದೆಯೇ ಇವೆಯಲ್ಲವೇ!? ನಾವು ಮೊದಲು ಆಶಾವಾದಿಗಳಾಗೋಣ. ನಮ್ಮ ಪಥದಲ್ಲಿ ನಾವು ಸಾಗೋಣ. ಅನುಸರಿಸುವ ಇಚ್ಛಾಶಕ್ತಿ ಇದ್ದವರು ಅನುಸರಿಸಿಯೇ ತೀರುತ್ತಾರೆ. ನಾವು ಹಿಂದೆ ತಿರುಗಿ ನೋಡುವ ಅಗತ್ಯವಿಲ್ಲ; ಏಕೆಂದರೆ ಎಡವಿ ಬೀಳುವ ಸಾಧ್ಯತೆಗಳೂ ಇರುತ್ತವೆ; ಜೋಕೆ!

    ReplyDelete
  2. ಪ್ರಭಾಕರ್ ಜಿ,
    ನಿಮ್ಮ ಎಚ್ಚರಿಕೆಯ ಮಾತುಗಳನ್ನು ಒಪ್ಪುವೆ. ನಾನು ಆಶಾವಾದಿ.ಹಿಂದಿನ ದಿನಗಳಿಗಿಂತಲೂ ಇಂದಿನ ದಿನಗಳು ಚೆನ್ನಾಗಿವೆ ಎಂದೇ ನನ್ನ ಅನಿಸಿಕೆ. ಕಾರಣ ನಾನು ಬೆಳೆದ ಪರಿಸರ, ಹುಟ್ಟಿದ ಮನೆ. ನನ್ನ ಬಾಲ್ಯದ ದಿಗಳನ್ನು ಒಮ್ಮೆ ನೆನಪು ಮಾಡಿಕೊಂಡರೆ ಸಾಕು, ಅಂದಿನ ಸಾಮಾಜಿಕ ಸ್ಥಿತಿಯಲ್ಲಿ ನಡೆಯುತ್ತಿದ್ದ ಶೋಷಣೆಯಿಂದ ಬೆಂದು ಬಳಲಿದ್ದ ದಿನಗಳು ಕಣ್ಮುಂದೆ ಬಂದು ಕಣ್ಣು ತೇವವಾಗುತ್ತವೆ.ಇಂದು ಸಮಾಜವು ಸಾಕಷ್ಟು ಸುಧಾರಿಸಿದೆ ಎಂಬ ನಿಲುವು ನನ್ನದು. ಸಮಾಜವು ಸುಧಾರಣೆಯತ್ತ ಇಂದೂ ಸಾಗುತ್ತಿದೆ. ಇದು ನನ್ನ ಅನುಭವ. ನಾನು ಕಂಡ ಸತ್ಯ. ನಿಮ್ಮದು ಬೇರೆಯಾಗಿರಬಹುದು.ಹಂಚಿಕೊಳ್ಳಿ.

    ReplyDelete
  3. ಇದೇನು ಸಾರ್? ಯಾರಿಗೆ +1ಯಾರಿಗೆ -1 ?
    ಏನಾದ್ರೂ ಅಭಿಪ್ರಾಯ ಹಂಚಿಕೊಳ್ಳಿ

    ReplyDelete