Pages

Sunday, May 8, 2011

|ಶಿಖರಿಶಿರೋಮಣಿತುಂಗಹಿಮಾಲಯ- ಶೃಂಗನಿಜಾಲಯ-ಮಧ್ಯಗತೇ|


|ಶಿಖರಿಶಿರೋಮಣಿತುಂಗಹಿಮಾಲಯ-
ಶೃಂಗನಿಜಾಲಯ-ಮಧ್ಯಗತೇ|

ಗಂಗಾನದಿಯಲ್ಲಿ ಮಿಂದು ಪುನೀತರಾದ ಭಗವಾನ್ ಶಂಕರರು ಗಂಗಾತಟಕ್ಕೆ ಮೆಟ್ಟಿಲುಗಳನ್ನೇರಿ ಬರುವಾಗ ಅಸ್ಪೃಷ್ಯನೊಬ್ಬ ದಾರಿಗಡ್ಡಲಾಗಿ ಮಲಗಿಬಿಟ್ಟಿದ್ದ. ದಾರಿ ಕೊಡೆಂದು ಕೇಳಲಾಗಿ ದಾಟಿಹೋಗೆಂದು ಶಂಕರರಿಗೆ ಹೇಳಿದ. ಏನೇ ಮಾಡಿದರೂ ಅಗಲವಾದ ಪಾವಟಿಗೆಗಳನ್ನು ಹತ್ತುವಾಗ ಆತನ ಸ್ಪರ್ಷ್ಯವಾಗುವುದು ಅನಿವಾರ್ಯವಾಗಿತ್ತು. ಆತನಲ್ಲಿ ಏನೇ ಹೇಳಿದರೂ ಆತ ಅತಿಯಾದ ಕೋಪವನ್ನು ತೋರುತ್ತಿದ್ದ. ಶಂಕರರೂ ಸ್ವಲ್ಪ ಗದರಿದರು. ’ತೊಲಗಾಚೆ’ ಎಂದರು. ಆ ಕ್ಷಣ ಆತ ಕೇಳಿದ " ನೀನು ತೊಲಗಾಚೆ ಎಂದಿದ್ದು ನನ್ನ ದೇಹಕ್ಕೋ ಅಥವಾ ನನ್ನ ಆತ್ಮಕ್ಕೋ ? ದೇಹಕ್ಕಾದರೆ ನಿನ್ನದೂ ನನ್ನದೂ ಮತ್ತು ಇತರ ಎಲ್ಲಜೀವಿಗಳದೂ ಜಡಶರೀರವಷ್ಟೇ ? ದೇಹದೊಳಗಿನ ಆತ್ಮಕ್ಕಾದರೆ ನನ್ನೊಳಗೂ ನಿನ್ನೊಳಗೂ ಮತ್ತು ಇತರ ಎಲ್ಲಾ ಜೀವಿಗಳೊಳಗೂ ಇರುವ ಆ ಆತ್ಮವೊಂದೇ ಆಗಿದೆ. " ಶಂಕರರು ತಬ್ಬಿಬ್ಬಾಗಿಬಿಟ್ಟರು. ದಿಟ್ಟಿಸಿ ನೋಡುತ್ತಾರೆ ಆತನಲ್ಲಿ ಸಾಕ್ಷಾತ್ ವಿಶ್ವನಾಥನ ರೂಪ ಗೋಚರಿಸುತ್ತದೆ. ಮಹಾದೇವನೇ ತನ್ನನ್ನು ಪರೀಕ್ಷಿಸಲು ಬಂದಿದ್ದನ್ನು ನೋಡಿದ ಶಂಕರರ ಬಾಯಿಂದ ’ಮನೀಷಾ ಪಂಚಕಮ್’ ಹೊರಡಲ್ಪಟ್ಟಿತು!

ಅಂದಿನ ಗೊಂಡಾರಣ್ಯಗಳಲ್ಲಿ ಕಾಲುದಾರಿಯೂ ಇಲ್ಲದ ಜಾಗಗಳಲ್ಲಿ ತಾವೇ ದಾರಿಯನ್ನು ಕಲ್ಪಿಸಿಕೊಂಡು ಶಂಕರರು ಓಡಾಡುತ್ತಿದ್ದರು. ಮಾರ್ಗಮಧ್ಯೆ ಅವರಿಗೆ ಹಲವು ಅಡೆತಡೆಗಳು ಕಾಣಿಸುತ್ತಿದ್ದವು. ಹೇಳಿಕೇಳಿ ಎಳೆಯ ವಟುವಾಗಿದ್ದ ಅವರ ಜೊತೆಗೆ ಆರಂಭದ ದಿನಗಳಲ್ಲಿ ಸಂಚರಿಸಲು ಯಾರೂ ಇದ್ದಿರಲಿಲ್ಲವೆನಿಸುತ್ತದೆ. ಈ ಸೃಷ್ಟಿಯ ಹಲವು ಅಶರೀರ ರೂಪಗಳು ತಮ್ಮ ಮುಕ್ತಿಗಾಗಿ ಶಂಕರರನ್ನು ಅಡರಿಕೊಳ್ಳುತ್ತಿದ್ದವು. ಪಿಶಾಚಿಗಳು, ದೆವ್ವ-ಭೂತಗಳು, ಬ್ರಹ್ಮರಾಕ್ಷಸಾದಿಗಳು ಮಾರ್ಗದಲ್ಲಿ ಸದಾ ಇರುತ್ತಲೇ ಇದ್ದವು. ಇಂದೂ ಕೂಡ ಅವು ಇರುತ್ತವಾದರೂ ನಮಗೆ ಅವುಗಳ ಗೋಚರಿಸುವಿಕೆ ನೇರವಾಗಿ ಕಾಣದೇ ಪರೋಕ್ಷವಾಗಿ ಕಾಣಿಸುತ್ತದೆ. ಉದಾಹರಣೆಗೆ ಎಲ್ಲವೂ ಸರಿಯಾಗಿದ್ದ ವಾಹನ ಬ್ರೇಕ್ ಫೇಲಾಗುವುದು, ಇದ್ದಕ್ಕಿದ್ದಂತೇ ಯಾವುದೋ ಪ್ರಾಣಿ ಅಡ್ಡಬಂದು ಆಮೇಲೆ ನಾಪತ್ತೆಯಾಗುವುದು, ಚಲಿಸುತ್ತಿರುವ ವಾಹನದಲ್ಲಿ ಭಾರಜಾಸ್ತಿ ಎನಿಸಿ ಅಲ್ಲಾಡಿದಂತಾಗುವುದು, ವಾಹನ ಎಷ್ಟೇ ವೇಗದಲ್ಲಿ ಚಲಿಸಿದರೂ ದಾರಿಸಾಗದೇ ಉಳಿಯುವುದು, ವಾಹನದ ವೇಗ ಮಿತಿಮೀರಿದಂತೆನಿಸಿವುದು ---ಇವೆಲ್ಲಕ್ಕೂ ಕೆಲವೊಮ್ಮೆ ಸ್ಥಾನಿಕ ಅಶರೀರಿಗಳ ಆಕ್ರಮಣ ಅಥವಾ ಉಪದ್ರವ ಕಾರಣವಾಗುತ್ತದೆ. ದಿವ್ಯಶಕ್ತಿಯುಳ್ಳ ಶಂಕರರು ಅವುಗಳಿಗೆಲ್ಲಾ ಉತ್ತರಿಸುತ್ತಿದ್ದರು, ಕಾಲಾನಂತರದಲ್ಲಿ ಮಾರ್ಗಗಳಲ್ಲಿ ಚಲಿಸುವ ಜನರಿಗೆ ಉಪಯುಕ್ತವಾಗಲಿ ಎಂಬ ಕಾರಣಕ್ಕೆ ’ಮಾರ್ಗ ಬಂಧು ಸ್ತೋತ್ರ’ ವನ್ನು ರಚಿಸಿದರು. ಈ ಮಾರ್ಗಬಂಧು ಸ್ತೋತ್ರದ ವೈಶಿಷ್ಟ್ಯವೆಂದರೆ ಇಹದಲ್ಲಿ ಚಲಿಸುವವರಿಗೂ, ಧ್ಯಾನಮಾರ್ಗದಲ್ಲಿ ಪರಾಶಕ್ತಿಯ ಗೋಚರವನ್ನು ಬಯಸಿ ಚಲಿಸುವವರಿಗೂ ಇದು ಉಪಯುಕ್ತವಾಗಿದೆ. ಧ್ಯಾನಕ್ಕೆ ಕುಳಿತಾಗಲೂ ಕೂಡ ಮನಸ್ಸನ್ನು ಕೇಂದ್ರೀಕೃತಗೊಳಿಸಲು ಅಡ್ಡಿಪಡಿಸುವ ಹಲವು ಭಾವತರಂಗಗಳು ಬರುತ್ತವೆ. ಅವುಗಳೆಲ್ಲದರಿಂದ ಮುಕ್ತಿ ಸಿಗಬೇಕಾದರೆ ಶಂಕರರ ’ಮಾರ್ಗ ಬಂಧು ಸ್ತೋತ್ರ’ ವನ್ನು ಪಠಿಸಿದರೆ ಉತ್ತಮ.

ಆದಿ ಶಂಕರರು ಮಾತೆಯ ಬಗ್ಗೆ ಬಹಳ ಕಾಳಜಿ ಉಳ್ಳವರಾಗಿದ್ದರು. ಏಕಮಾತ್ರ ಸಂತಾನವಾದ ಅವರು ಸನ್ಯಾಸಿಯಾಗುತ್ತೇನೆಂದು ಹೊರಟಾಗ ಅವರ ತಾಯಿ ಬಹಳ ಪ್ರಯಾಸದಿಂದ ಒಪ್ಪಿಕೊಳ್ಳಬೇಕಾಯಿತು. ಇದ್ದೊಬ್ಬ ಮಗ ಸನ್ಯಾಸಿಯಾಗಿಬಿಟ್ಟರೆ ಸಂಸಾರಿಯಾದ ತನ್ನನ್ನು ನೋಡಿಕೊಳ್ಳುವವರಾರು?. ಆದರೂ ಆ ಮಹಾತಾಯಿ ತನ್ನ ಸ್ವಾರ್ಥವನ್ನು ಮರೆತು ಜಗದ ಜನತೆಗೆ ಉಪಕಾರವಾಗಲಿ ಎಂಬ ದೃಷ್ಟಿಯಿಂದ ಮಗನನ್ನು ಹರಸಿ ಬೀಳ್ಕೊಟ್ಟರು, ಹೊರಡುವಾಗ ಮಗ ಹೇಳಿದ " ಅಮ್ಮಾ ನಿನ್ನ ಕೊನೆಗಾಲದಲ್ಲಿ ಎಲ್ಲಿದ್ದರೂ ನಾನು ಬಂದು ತಲುಪುತ್ತೇನೆ. " ಹೊರಟ ಶಂಕರರು ದೇಶಾಂತರ ಹಲವು ಪ್ರದೇಶಗಳಲ್ಲಿ ಸಂಚರಿಸಿದರು. ಹೀಗಿರುವಾಗ ಒಮ್ಮೆ ಅವರಿಗೆ ತಾಯಿಯ ಅಂತ್ಯ ಸಮೀಪಿಸಿದ ದೃಷ್ಟಾಂತವಾಯಿತು. ಆ ಕೂಡಲೇ ಹೊರಟುನಿಂತ ಅವರು ಪೂರ್ವಾಶ್ರಮದ ಕಾಲಟಿಯ ಮನೆಗೆ ಓಡೋಡಿ ಹೋದರು. ಶಂಕರರ ಅಮ್ಮ ಕೊನೆಯ ಘಟ್ಟದಲ್ಲಿದ್ದರು. ಮಗ ಬಂದುದನ್ನು ಗ್ರಹಿಸುತ್ತಲೇ ಇಹವನ್ನು ತೊರೆದರು. ತೊಡೆಯಮೇಲೆ ತಲೆಇಟ್ಟು ಇಹವನ್ನು ತ್ಯಜಿಸಿದ ಅಮ್ಮನ ಅಂತ್ಯಕ್ರಿಯೆಗೆ ವ್ಯವಸ್ಥೆಮಾಡಬೇಕಾಗಿತ್ತು. ಸನ್ಯಾಸಿಯಾದವನು ಇಹದ ಬಂಧನವನ್ನು ಕಳಚಿಕೊಳ್ಳುವುದರಿಂದ ಅಮ್ಮನ ಉತ್ತರಕ್ರಿಯೆಗಳನ್ನು ಅವರು ಮಾಡುವಂತಿರಲಿಲ್ಲ. ಆದರೆ ಶಂಕರರು ಅಮ್ಮನಿಗೆ ವಚನವಿತ್ತಿದ್ದರು! ಬಹುಶಃ ಧರ್ಮಸಂಕಟವೆಂದರೇ ಇದು! ಸನ್ಯಾಸಿ ಶಂಕರರು ತಾನೇ ಅಮ್ಮನ ಅಂತ್ಯಕ್ರಿಯೆಯನ್ನು ಪೂರೈಸಲು ನಿಂತರು. ಅಕ್ಕ-ಪಕ್ಕದ ಬ್ರಾಹ್ಮಣರಾದಿಯಾಗಿ ಯಾರೇ ಆಗಲಿ ಅವರ ಸಹಾಯಕ್ಕೆ ಬರಲಿಲ್ಲ-ಏಕೆಂದರೆ ಸನ್ಯಾಸಿ ಉತ್ತರಕ್ರಿಯೆಯನ್ನು ಮಾಡುತ್ತಾನೆ ಎಂಬ ಕಾರಣಕ್ಕಾಗಿ. ಆದರೂ ಶಂಕರರು ಧೃತಿಗೆಡಲಿಲ್ಲ. ಅಲ್ಲಿಲ್ಲಿ ಅಲೆದು ಒಂದಷ್ಟು ಸೌದೆ ಒಟ್ಟುಗೂಡಿಸಿದರು, ಚಿತೆಯನ್ನು ಮನೆಯ ಮಗ್ಗುಲಲ್ಲೇ ನಿರ್ಮಿಸಿದರು. ಗತಿಸಿದ ಅಮ್ಮನ ಶರೀರವನ್ನು ಚಿತೆಯಮೇಲಿಟ್ಟು ದಹಿಸಿದರು. ಅಮ್ಮನ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಿದರು. [ಈ ನೆನಪಿನಲ್ಲಿ ಕೇರಳದಲ್ಲಿ ಇವತ್ತಿಗೂ ಹಲವೆಡೆ ಸತ್ತವ್ಯಕ್ತಿಗಳನ್ನು ಮನೆಗಳ ಮಗ್ಗುಲಲ್ಲೇ ಸುಡುವುದು ವಾಡಿಕೆ.]

ಸನ್ಯಾಸಿಗಳಿಗೆ ಜನ್ಮಕೊಟ್ಟ ಅಪ್ಪನೂ ನಮಸ್ಕರಿಸಬಹುದು. ಆದರೆ ತಾಯಿಯಿಂದ ಮಾತ್ರ ಅವರು ನಮಸ್ಕಾರವನ್ನು ಸ್ವೀಕರಿಸುವುದಿಲ್ಲ! ತಾಯ ಋಣ ಅಂಥದು. ಒಂಬತ್ತು ತಿಂಗಳು ಹೊತ್ತು-ಹೆತ್ತು ಸಲಹುವ ಮಮತಾಮಯಿ ತಾಯಿ ಎಂದೂ ತನ್ನ ಮಗುವಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಗಾದೆಯೊಂದು ಹೀಗಿದೆ ’ತಾಯಿ ಮಗನ ಹೊಟ್ಟೆಯನ್ನು ನೋಡುತ್ತಾಳೆ ಹೆಂಡತಿ ಗಂಡನ ಜೇಬು ನೋಡುತ್ತಾಳೆ’ ಇದರರ್ಥ : ದುಡಿದು ಮರಳಿದ ಮಗನ ಹೊಟ್ಟೆ ಯಾವ ರೀತಿ ಹಸಿದು ಪರಿತಪಿಸಿತ್ತಿರಬಹುದು ಎಂಬುದು ತಾಯಿಯ ಚಿಂತೆ ಆದರೆ ಇಂದಿನ ದುಡಿಮೆ ಎಷ್ಟಾಗಿರಭುದು ಎಂಬುದು ಹೆಂಡತಿಯ ಚಿಂತೆ! ತನ್ನ ಊಟಕ್ಕೂ ಮೊದಲು ಮಗನ/ಮಕ್ಕಳ ಊಟವಾಯಿತೇ ಎಂಬುದನ್ನು ತಾಯಿ ಖಾತ್ರಿಪಡಿಸಿಕೊಳ್ಳುತ್ತಾಳೆ. ಒಮ್ಮೆ ತನಗಿರದಿದ್ದರೂ ಮಕ್ಕಳಿಗೆ ಏನನ್ನಾದರೂ ಒದಗಿಸಲು ಪ್ರಯತ್ನಿಸುವ ಆ ತಾಯ ತಾಯ್ತನದ ಜವಾಬ್ದಾರಿ, ಕಳಕಳಿ ಕೇವಲ ಬಾಯಿಂದ ಹೇಳಿ ತೀರಿಸಲಾಗುವ ಋಣವದಲ್ಲ. ತನ್ನ ತಾಯಿಯಲ್ಲೂ ಜಗನ್ಮಾತೆಯನ್ನೇ ಕಂಡ ಶಂಕರರು ’ ದೇವ್ಯಪರಾಧ ಕ್ಷಮಾಪಣ ಸ್ತೋತ್ರ’ವನ್ನು ರಚಿಸಿದರು. ಅದರಲ್ಲಿ ಹಲವು ಸರ್ತಿ ಹೇಳಿದರು--" ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ " [ಒಬ್ಬ ಕೆಟ್ಟ ಮಗುವಿರಬಹುದೇ ಹೊರತು ಕೆಟ್ಟ ತಾಯಿ ಇರಲಾರಳು]

ಆಶುಕವಿತ್ವದ ಆಚಾರ್ಯ ಶಂಕರರು ಹೋದಲ್ಲೆಲ್ಲಾ ಹಲವು ಕೃತಿಗಳನ್ನು ಸರಳ ಸಂಸ್ಕೃತದಲ್ಲಿ ರಚಿಸಿದರು. ಮನೋಹರವಾದ ಶಬ್ದಲಾಲಿತ್ಯದಿಂದ ಕೂಡಿದ ಸ್ತೋತ್ರಗಳು, ಶ್ಲೋಕಗಳು ಎಷ್ಟೇ ಸರ್ತಿ ಉಚ್ಚರಿಸಿದರೂ ಮತ್ತೆಮತ್ತೆ ತಿನ್ನಬೇಕೆನಿಸುವ [ಉಲಿಯಬೇಕೆನಿಸುವ] ಹಪಹಪಿಕೆಯನ್ನೂ ಮನಶ್ಯಾಂತಿಯನ್ನೂ ಕರುಣಿಸುವ ರಸಪೂರಿತ ಹಣ್ಣುಗಳು! ಆಸೇತು ಹಿಮಾಲಯ ಪರ್ಯಂತ ಹಲವಾರು ಬಾರಿ ತಿರುಗಾಡಿದ ಶಂಕರರು ಇಡೀ ಅಖಂಡ ಭರತಖಂಡವನ್ನೂ [ಅಪಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಹಿತದ ಭಾರತ] ಒಮ್ಮೆ ಮಾತೆಯಾಗಿಯೂ ಇನ್ನೊಮ್ಮೆ ಪಿತೃವಾಗಿಯೂ ಕಂಡು ಸ್ತೋತ್ರಗಳನ್ನು ಅನುಗ್ರಹಿಸಿದರು. ಜಗತ್ತೇ ಅರ್ಧನಾರೀಶ್ವರ ಶಕ್ತಿಯ ಪ್ರತೀಕವೆಂಬುದು ಅವರ ಅಭಿಮತವಾಗಿತ್ತು.

ಅಯಿ ಜಗದಂಬ ಮದಂಬ ಕದಂಬ-
ವನಪ್ರಿಯವಾಸಿನಿ ಹಾಸರತೇ |
ಶಿಖರಿಶಿರೋಮಣಿತುಂಗಹಿಮಾಲಯ-
ಶೃಂಗನಿಜಾಲಯ-ಮಧ್ಯಗತೇ|
ಮಧುಮಧುರೇ ಮಧುಕೈಟಭಭಂಜಿನಿ
ಕೈಟಭಭಂಜಿನಿ ರಾಸರತೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||

ಹಿಮಾಲಯಗಳೂ ಗಿರಿಶಿಖರಗಳೂ ಕದಂಬವನಗಳೂ ಶೃಂಗನಿಜಾಲಯಗಳೂ ಎಲ್ಲೆಲ್ಲೂ ದೇವಿಯ, ಜಗನ್ಮಾತೃಕೆಯ ರೂಪವನ್ನು ಕಂಡ, ಆ ದಿವ್ಯರೂಪದ ಮನಸಾ ಉಂಡ ಮಹಾಮಹೋಪಾಧ್ಯಾಯ ಶಂಕರರು ಮುಂದಿನ ಪೀಳಿಗೆಗೆ ತಾನು ಕಂಡ ಸೌಂದರ್ಯವನ್ನು ಸ್ತೋತ್ರಗಳಲ್ಲಿ ಕಟ್ಟಿಕೊಟ್ಟರು.

ಹಿಂದೊಮ್ಮೆ ತಮಿಳುನಾಡಿನ ಮಧುರೆಯಲ್ಲಿ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದಲ್ಲಿ ನೆಲೆಸಿರುವ ಮೀನಾಕ್ಷಿ ಅಮ್ಮನವರು ಕಾರಣಾಂತರಗಳಿಂದ ಕ್ರೋಧಗೊಂಡು ರಾತ್ರಿಯಹೊತ್ತು ಕಾಳಿಯಾಗಿ ಸಂಚರಿಸುತ್ತ ಆಲಯವನ್ನು ಪ್ರವೇಶಿಸುವ ಜನರನ್ನೂ ಪ್ರಾಣಿಗಳನ್ನೂ ನುಂಗುತ್ತಾ ತಿರುಗುತ್ತಿದ್ದಳಂತೆ. ಹಲವಾರು ಬಲಿಗಳನ್ನು ತೆಗೆದುಕೊಳ್ಳುತ್ತಿದ್ದ ಮಹಾಕಾಳಿಯ ಆ ರೂಪವನ್ನು ನೆನೆಯುತ್ತಾ ಹಗಲಿನಲ್ಲೂ ಅರ್ಚಕರು ದೇವಸ್ಥಾನಕ್ಕೆ ಹೋಗುವುದಕ್ಕೆ ಹೆದರತೊಡಗಿದರು! ತೀರ್ಥಯಾತ್ರೆಮಾಡುತ್ತಾ ಬಂದ ಶಂಕರರು ಯಾರ ಮಾತನ್ನೂ ಕೇರ್‍ಳದೇ ರಾತ್ರಿಹೊತ್ತು ಅಲ್ಲೇ ತಂಗಿದರು. ಆ ರಾತ್ರಿ ಅಮ್ಮ ಮೀನಾಕ್ಷಿ ಕಾಳಿಯಾಗಿ ಭಯಂಕರವಾಗಿ ಘರ್ಜಿಸುತ್ತಾ ಏಕಾಏಕಿಯಾಗಿ ಕುಳಿತ ಶಂಕರರೆಡೆಗೆ ಬಂದು ತಿನ್ನುವುದಾಗಿ ಹೆದರಿಸಿದಳು. ಶಂಕರರು ಹೇಳಿಕೇಳಿ ೧೬-೧೭ರ ಹರೆಯದ ಬಾಲಕ! ಪುಕ್ಕಲನಾಗಿದ್ದರೆ ಓಡಿಹೋಗಬೇಕಾಗಿತ್ತು. ಆದರೆ ಶಂಕರರ ವಿಷಯದಲ್ಲಿ ಹಾಗಿರಲಿಲ್ಲ, ಅಮ್ಮನ ರೂಪವನ್ನೇ ಬದಲಿಸಲು ಅವರು ಅಲ್ಲುಳಿದಿದ್ದರು! ಮೀನಾಕ್ಷಿಯನ್ನು ಕಂಡು ನಕ್ಕುಬಿಟ್ಟರು! ಭಯಂಕರಳಾದ ತನ್ನನ್ನು ನೋಡಿ ನಗುತ್ತಿರುವ ಹುಡುಗನನ್ನು ಕಂಡು ಅಮ್ಮನಿಗೂ ಆಶ್ಚರ್ಯವಾಯಿತು. " ಜಗತ್ತಿಗೇ ಅಮ್ಮನಾದ ನೀನು ಮಕ್ಕಳನ್ನೆಲ್ಲಾ ಹೀಗೆ ಹೆದರಿಸುವುದೇ ? " ಎಂಬ ಶಂಕರರ ಪ್ರಶ್ನೆಗೆ ಅಮ್ಮನಲ್ಲಿ ಉತ್ತರವಿರಲಿಲ್ಲ. ಅಮ್ಮನ ಆವೇಶ ನಿಧಾನಾವಾಗಿ ಇಳಿಯುತ್ತಾ ಸಾಗಿತು. ಶಂಕರರಲ್ಲಿ ಸುಂದರೇಶ್ವರನ ರೂಪ ಆಕೆಗೆ ಮನದಟ್ಟಾಯಿತು. ಆದರೂ ಆಕೆ ಪಣವೊಂದನ್ನೊಡ್ಡಿ ಅದನ್ನು ಗೆಲ್ಲುವಂತೇ ಆಜ್ಞಾಪಿಸಿದಳು. ಅದರಂತೇ ಆ ರಾತ್ರಿ ಆ ಪಣವನ್ನು ಗೆಲ್ಲುವ ಸಲುವಾಗಿ ಶಂಕರರು ಚಕ್ರಬಂಧವೊಂದನ್ನು ರಚಿಸುತ್ತಾ ಶ್ಲೋಕದಲ್ಲಿ ಅವುಗಳನ್ನು ವಿವರಿಸುತ್ತಾ ಕುಳಿತರು. ಬೆಳಗಾಗುವಷ್ಟರಲ್ಲಿ ದೇವಿಗೆ ಸೌಮ್ಯಕಳೆ ಬಂದಿತ್ತು. ಶಂಕರರನ್ನು ಪ್ರೀತಿಯಿಂದ ಮೈದಡವಿ ವಿಗ್ರಹದಲ್ಲಿ ಐಕ್ಯವಾದವಳು ಮುಂದೆಂದೂ ಮತ್ತೆ ಕಾಳಿಯ ಉಗ್ರಸ್ವರೂಪವನ್ನು ಧರಿಸಲಿಲ್ಲ. ಅಂದಿನದಿನ ರಚಯಿತವಾದ ಆ ಚಕ್ರಬಂಧವೇ ಶ್ರೀಚಕ್ರವೆಂದು ಪ್ರಸಿದ್ಧಿಪಡೆಯಿತು! ಅದರ ಆರಾಧನೆಗೆ ಸೌಂದರ್ಯಲಹರೀ ಮತ್ತು ಲಲಿತಾ ಸಹಸ್ರನಾಮಗಳು ಶಂಕರರಿಂದ ಕೊಡಲ್ಪಟ್ಟವು. ಇಂದಿಗೂ ಆ ಚಕ್ರವನ್ನು ಗೃಹ ಗೋಷ್ಠಗಳಾದಿಯಾಗಿ ಹಲವೆಡೆ ಧನಾಕರ್ಷಕ ಯಂತ್ರವೆಂದು ಇಟ್ಟು ಪೂಜಿಸುವುದನ್ನು ನೋಡಬಹುದು. ಇದೇ ಶ್ರೀಚಕ್ರವನ್ನು ಶಂಕರರು ಆಮೇಲೆ ಹಲವೆಡೆಗಳಲ್ಲಿ ಶಿಲೆಗಳಮೇಲೆ ಕೊರೆದು ಪ್ರತಿಷ್ಠಾಪಿಸಿದರು. ಪ್ರಮುಖವಾಗಿ ತಿರುಪತಿ, ಶೃಂಗೇರಿ ಮುಂತಾದೆಡೆಗಳಲ್ಲಿ ಅವುಗಳನ್ನು ವಿಗ್ರಹಗಳೆಡೆಯಲ್ಲೇ ಬರೆದರು.

ಸನಾತನ ಧರ್ಮ ತನ್ನ ಮೂಲಧ್ಯೇಯಗಳನ್ನು ಕಳೆದುಕೊಂಡು ಕ್ರಮೇಣ ಹಿಂಸಾತ್ಮಕವಾಗಿ ಪರಿವರ್ತವಾಗುತ್ತಿರುವ ಸನ್ನಿವೇಶದಲ್ಲಿ ಪರಶಿವನ ನೇರ ಅವತಾರವಾಗಿ ಶಂಕರನಾಗಿ ಕೇರಳದ ಕಾಲಟಿಯಲ್ಲಿ ಆರ್ಯಾಂಬೆ ಹಾಗೂ ಶಿವಗುರು ಎಂಬ ದಂಪತಿಯ ಮಗುವಾಗಿ ಜನಿಸಿ ಕೇವಲ ೩೨ ವರ್ಷಗಳಕಾಲ ಭೌತಿಕ ಕಾಯದಿಂದ ಜೀವಿಸಿದ್ದ ಶ್ರೀ ಶಂಕರರು ಹಿಮಾಲಯದ ಕೇದಾರನಾಥದಲ್ಲಿ ಶಿಖರಗಾಮಿಯಾಗಿ ನಡೆದು ಅದೃಷ್ಯರಾದರು, ಪ್ರಕೃತಿಯಲ್ಲಿ ಭೌತಿಕವಾಗಿ ಕಾಣದಾದರು. ಆದರೂ ಇಂದಿಗೂ ಅನೇಕ ನಾಸ್ತಿಕ ಜನರಿಗೆ ಅವರ ಪ್ರೌಢಿಮೆಯನ್ನೂ ಪಾಂಡಿತ್ಯವನ್ನೂ, ಎಳವೆಯ ಅನನ್ಯ ಸಾಧನೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ತತ್ವವೊಂದು ಹೀಗಿದೆ-- ಮೌಂಟ್ ಎವರೆಷ್ಟ್ ಏರಿದವರಿಗೆ ಮಾತ್ರ ಅಲ್ಲಿಂದ ಭೂಮಂಡಲ ಯಾವರೀತಿ ಕಾಣುತ್ತದೆ ಎಂಬುದು ತಿಳಿಯುತ್ತದೆ ಹೇಗೋ ಹಾಗೇ ಅವರವರ ದೃಷ್ಟಿಕೋನದಂತೇ ಮುಂದೆ ಹಲವಾರು ಪಂಥಗಳೂ ಭಕ್ತಿಪಂಥಗಳೂ ಹುಟ್ಟಿಕೊಂಡರೂ ಯಾವುದೇ ಕೊರತೆಯನ್ನಾಗಲೀ ಸಂಶಯವನ್ನಾಗಲೀ ಇಡದೇ ಹಲವು ಜ್ವಲಂತ ಸಾಕ್ಷಿಗಳೊಂದಿಗೆ ಸದಾ ಅ-ದ್ವೈತ ಎಂದು ಸಾರುವ ಪ್ರಕೃತಿಧರ್ಮವನ್ನು ಗಮನಿಸಿದರೆ ಶಂಕರರು ಪ್ರಕೃತಿಯ ಸಹಜ ಧರ್ಮವನ್ನೇ ನಮಗೆ ತಿಳಿಸಿದ್ದಾರೆ ಎಂಬುದು ಗೋಚರವಾಗುತ್ತದೆ. ಕೇವಲ ೩೨ ವಯಸ್ಸೇ ಆಗಿದ್ದರೂ ಹಲವರಿಗೆ ಶಂಕರರು ಮಾತಾ-ಪಿತೃ ಸ್ವರೂಪಿಯಾಗಿ ಕಂಡಿದ್ದಾರೆ; ಕಾಣುತ್ತಾರೆ. ಶಂಕರರಿಗೂ ಮತ್ತು ಅವರಲ್ಲಿರುವ ಮಾತೆಯರೂಪಕ್ಕೂ ನಮಿಸಿದರೆ ಜನ್ಮದಿನವಾದ ಇಂದು ಅವರನ್ನು ನೆನೆದಿದ್ದೂ ಆಗುತ್ತದೆ ಮತ್ತು ಮಾತೆಯರ ದಿನವಾದ ಇಂದು ಅವರನ್ನೂ ಸ್ಮರಿಸಿದ ಹಾಗಾಗುತ್ತದೆ ಎಂಬಕಾರಣದಿಂದ ಹೀಗೆ ನಿಮ್ಮೊಂದಿಗೆ ವಿಷಯ ಪ್ರಸ್ತಾಪಿಸಿದೆ.

ಪದಕಮಲಂ ಕರುಣಾನಿಲಯೇ
ವರಿವಸ್ಯತಿ ಯೋನುದಿನಂ ಸ ಶಿವೇ |
ಅಯಿ ಕಮಲೇ ಕಮಲಾನಿಲಯೇ
ಕಮಲಾನಿಲಯಃ ಸ ಕಥಂ ನ ಭವೇತ್ |
ತವ ಪದಮೇವ ಪರಂಪದಮಿತ್ಯನು-
ಶೀಲಯತೋ ಮಮ ಕಿಂ ನ ಶಿವೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||


|| ಸಮಸ್ತ ಸನ್ಮಂಗಳಾನೀ ಭವಂತು ||

5 comments:

  1. ಒಳ್ಳೇ ಬರಹ. ಆದರೆ!!! "ಪಿಶಾಚಿಗಳು, ದೆವ್ವ-ಭೂತಗಳು, ಬ್ರಹ್ಮರಾಕ್ಷಸಾದಿಗಳು ಮಾರ್ಗದಲ್ಲಿ ಸದಾ ಇರುತ್ತಲೇ ಇದ್ದವು. ಇಂದೂ ಕೂಡ ಅವು ಇರುತ್ತವಾದರೂ ನಮಗೆ ಅವುಗಳ ಗೋಚರಿಸುವಿಕೆ ನೇರವಾಗಿ ಕಾಣದೇ ಪರೋಕ್ಷವಾಗಿ ಕಾಣಿಸುತ್ತದೆ"-ಇದು ತಮಾಷೆಗೆ ಬರೆದಂತಿದೆ. ಎಲ್ಲಿವೆ ದೆವ್ವ ಭೂತ??? ನಮ್ಮ ಮನಸಿನಾಳದ ಯಾವುದೋ ಪದರದಲ್ಲೋ?? ಅಥವಾ ಭೂಮಿಯ ಮೇಲೋ???

    ReplyDelete
  2. ಲೇಖನ ಮನಮುಟ್ಟಿತು. ಗುರು ಶಂಕರಾಚಾರ್ಯರ ಬಗ್ಗೆ ಓದಿದಷ್ಟೂ ಮತ್ತೆ ಮತ್ತೆ ಓದಬೇಕೆಂಬ ಹಂಬಲ ಬರುವುದು.
    ಅತೀಂದ್ರಿಯ ಅನುಭವಗಳು ನನಗೆ ಕಂಡಂತೆ ಸಾಕಷ್ಟು ಜನರಿಗೆ ಆಗಿದೆ/
    ಆಗುತ್ತಿದೆ. ಅದನ್ನು ದೆವ್ವ/ಪಿಶಾಚಿಗಳೆಂದು ಕೆಲವರು ಕರೆದರೆ ಇನ್ನು ಕೆಲವರು ಅದನ್ನು ಕೇವಲ ಕಾಕತಾಳೀಯ ಘಟನೆಗಳೆಂದು ವರ್ಣಿಸುತ್ತಾರೆ. ಏನೇ ಅಂದರೂ ಅವುಗಳ ಅನುಭವವನ್ನು ಅಲ್ಲಗೆಳೆಯುವಂತಿಲ್ಲ. ಮತ್ತೊಮ್ಮೆ ಉತ್ತಮ್ಮ ಲೇಖನಕ್ಕಾಗಿ ಅಭಿನಂದನೆಗಳು.

    ReplyDelete
  3. ಸನ್ಮಾನ್ಯ ಸುಬ್ರಹ್ಮಣ್ಯರೇ, ನಮ್ಮ ಆಧುನಿಕ ವಿಜ್ಞಾನ ಆತ್ಮವನ್ನೇ ಕಂಡಿಲ್ಲ ! ಆತ್ಮ ಇದೇ ಎಂಬುದನ್ನು ಎಲ್ಲರೂ ಒಪ್ಪಲೆಬೇಕಲ್ಲಾ ? ಅಂತೆಯೇ ಕೇವಲ ವೈಜ್ಞಾನಿಕ ನಿಷ್ಕರ್ಷೆಗೆ ಸಿಲುಕುವ ವಿಚಾರಗಳು ಮಾತ್ರ ಪರಿಪೂರ್ಣ ಎಂದು ತಿಳಿಯುವುದು ನಮ್ಮ ಮೂರ್ಖತನವಾಗುತ್ತದೆ, ವಿಜ್ಞಾನ ಸರಿ, ಆದರೆ ವಿಜ್ಞಾನವೇ ಪರಿಪೂರ್ಣವಲ್ಲ! ವಿಜ್ಞಾನದ ಆಚೆ ಇನ್ನೇನೋ ಇದೆ ಎಂದು ನಿಮಗನಿಸುವುದಿಲ್ಲವೇ ? ಕೇವಲ ಭೌತಿಕ ಪ್ರಾಪಂಚಿಕ ದೃಷ್ಟಿಯಲ್ಲಿ ಯೋಚಿಸುವುದು ನಮ್ಮ ಜ್ಞಾನದ ದಾಹಕ್ಕೆ ನಾವೇ ಹಾಕುವ ಕಡಿವಾಣ !

    ಓದಿದ,ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು

    ReplyDelete
  4. ಸ್ನೇಹಿತರೇ ವಂದನೆ, ಲೇಖನದ ಪ್ರತಿಕ್ರಿಯೆಗಳು ವಿಕೋಪಕ್ಕೆ ಎಡೆಮಾಡಿದವು, ಲೇಖನವನ್ನು ತೆಗೆದಿರಿ ಎಂಬುದೂ ತಿಳಿಯಿತು, ಶರ್ಮರಿಗೆ ನನ್ನ ಉತ್ತರವಿಷ್ಟೇ:
    ಸನ್ಮಾನ್ಯ ಶರ್ಮರೇ, ತಮ್ಮ ಪ್ರತಿಕ್ರಿಯೆಯಲ್ಲೇ ನಾನು ಹೇಳಬೇಕಾದದ್ದೂ ಅಡಗಿದೆ, ಆದರೂ ತಡವಾಗಿ ಸಮಯಮಾಡಿಕೊಂಡು ಉತ್ತರಿಸುತ್ತಿದ್ದೇನೆ. ಸತ್ಯದರ್ಶನಾಕಂಕ್ಷಿಗಳಾದ ನಾವೆಲ್ಲಾ ನಿಮ್ಮಷ್ಟು ವಿದ್ವತ್ತನ್ನು ಸಂಪಾದಿಸಿಲ್ಲ. ರಾಮಾಯಣ-ಮಹಾಭಾರತ ಮೊದಲಾದ ಮಹಾಕಾವ್ಯಗಳು ಕವಿಕಪೋಲ ಕಲ್ಪಿತವೆನ್ನಬಹುದಾದ ತಮಗೆ ನೀರಿನಲ್ಲಿ ಮುಳುಗಿರುವ ರಾಮಸೇತುವೂ ಹಳೆಯ ದ್ವಾರಕೆಯೂ ಕಾಣಸಿಗುವುದರಿಂದ ಅವು ಕೇವಲ ಕಾವ್ಯಗಳೋ ಅಥವಾ ಸಹಸ್ರಮಾನಗಳ ಹಿಂದೆ ಘಟಿಸಿದ ನೈಜ ಜೀವನದ ಕಥೆಯಾಧರಿತ ಮಹಾಕಾವ್ಯಗಳೋ ಎಂಬುದು ಮನಸ್ಸಿಗೆ ಬಂದಿರಬೇಕಲ್ಲ?

    ಇನ್ನು ಅಶ್ವತ್ಥಾಮ, ಬಲಿ. ವ್ಯಾಸ ಮೊದಲಾಗಿ ಆಂಜನೇಯನವರೆಗೆ ಅವರೆಲ್ಲರೂ ಚಿರಂಜೀವಿಗಳು ಎಂದು ನಮ್ಮ ಪೂರ್ವಜರು ಹೇಳಿದ್ದಾರೆ. ಆಂಜನೇಯನ ಇರುವಿಕೆ ಆಗಾಗ ನಮ್ಮಂಥವರಿಗೆ ದೃಷ್ಟಾಂತಗಳ ಮೂಲಕ ಕಂಡುಬರುತ್ತದೆ. ಸಶರೀರಿಗಳಾಗಿ ಕಣ್ಣಿಗೆ ಕಾಣದ ಅವರೆಲ್ಲಾ ಇದ್ದಾರೆ ಎನ್ನುವುದನ್ನು ನೀವು ನಂಬಲಿಕ್ಕಿಲ್ಲ ಅಲ್ಲವೇ? ಒಂದೊಮ್ಮೆ ಇದ್ದದ್ದೇ ಹೌದಾದರೆ ಅವರು ಯಾವ ರೂಪದಲ್ಲಿ ಇದ್ದಾರೆ ಎಂಬುದನ್ನು ತಿಳಿಯಬೇಕಲ್ಲಾ ? ಗುರು ಸಮರ್ಥ ರಾಮದಾಸರು ಹೇಳುತ್ತಾರೆ : ಈ ಭುವಿಯಲ್ಲಿ ಜನಿಸಿದ ಮಾನವಜೀವಿಗೆ ಆತ ಸರ್ವತಂತ್ರ ಸ್ವತಂತ್ರನಾದ ಸನ್ಯಾಸಿಯೇ ಆದರೂಕೂಡ ಕೇವಲ ಸಮಾಧಿಸ್ಥಿತಿಯಲ್ಲಿ ಮಾತ್ರ ಐಹಿಕಬಾಧೆಗಳು ತಟ್ಟುವುದಿಲ್ಲ, ಸಮಾಧಿಯಿಂದ ಹೊರಬಂದ ಅವರಿಗೂ ಲೌಕಿಕ ಕಟ್ಟಳೆಗಳು ಆಚರಣೆಗಳು ಎಡತಾಕುತ್ತವೆ ಎಂದು. ಅಂದಮೇಲೆ ಸಾಧುವಾಗಿ ಜನ್ಮಪಡೆದ ವ್ಯಕ್ತಿಯೋರ್ವ ಬಾಬಾ ಆಗಲೀ ಇನ್ಯಾರೋ ಆಗಲೀ ಈ ಜನ್ಮದ ಅನುಬಂಧಗಳನ್ನು ಅನುಸರಿಸಲೇಬೇಕಲ್ಲ? ಅಂತಹ ಹಲವು ಜಂಜಾಟಗಳ ಮಧ್ಯೆ ಸುಖಲೋಲುಪರಾಗದೇ ಮಿತ ಆಹಾರದಿಂದ ಲೋಕದ ಹಿತವನ್ನು ಬಯಸಿದ ಸಾಯಿಬಾಬಾ ಉತಮಪುರುಷ ಎಂದರೆ ತಪ್ಪೇನಿದೆ ಸ್ವಾಮೀ?

    ಇನ್ನು ಕಾಣದ ಅತಿಮಾನುಷ ಶಕ್ತಿಗಳು ಕೆಲಸಮಾಡುವ ಕುರಿತು ಭಗವಾನ್ ಶ್ರೀಧರರು ಹೇಳಿದ್ದಾರೆ. ಅವರು ಆಗಿನ್ನೂ ಸಾಧುವಾಗಿದ್ದಾಗ, ಇನ್ನೂ ಹರೆಯದಲ್ಲೇ ಇದ್ದಾಗ ಸಜ್ಜನಗಡದಲ್ಲಿ ಒಮ್ಮೆ ಅವರನ್ನು ಕೆಲವುಜನ " ಸುಮ್ಮನೇ ಸಾಧಕ ಅಂತ ಬಂದಿದ್ದಾನೆ ಠೊಣಪ, ಬಿಟ್ಟಿ ಕೂಳು ಸಿಗುತ್ತದೆ ಎಂದು ಇಲ್ಲಿ ಹಾಯಾಗಿದ್ದಾನೆ" ಎಂದು ಮೂದಲಿಸುತ್ತಾ ಇಲ್ಲದ ಕೆಲಸಗಳನ್ನು ಒಪ್ಪಿಸಿದರಲ್ಲದೇ ಸದಾ ಒಂದು ಕಣ್ಣಿಟ್ಟು ನೋಡುತ್ತಲೇ ಇದ್ದರು. ಒಂದು ರಾತ್ರಿ ಅಲ್ಲಿ ಚಳಿ ವಿಪರೀತವಾಗಿ ಶ್ರೀಧರರಿಗೆ ಬಹಳ ತೊಂದರೆಯಾಯಿತು. ಆಗ ಸಮರ್ಥರ ಸಮಾಧಿಗೆ ಹೊದಿಸಿದ್ದ ಶಾಲನ್ನು ಮಲಗಿದ್ದ ಶ್ರೀಧರರ ಮೈಮೇಲೆ ರಾಮದಾಸರ ಆ ಶಕ್ತಿ ಹೊದಿಸಿತು. ಇದನ್ನು ಕಂಡ ಅಲ್ಲಿನ ಆ ತಕರಾರೀ ಜನ ಶ್ರೀಧರರೇ ಶಾಲನ್ನು ಕದ್ದು ಹೊದ್ದಿರಬೇಕೆಂದು ತಿಳಿದು ಶ್ರೀಧರರರನ್ನು ಹೊಡೆಯಲು ಬಂದರು. ಆಗ ಶ್ರೀಧರರು ಧ್ಯಾನಾಸಕ್ತರಾಗಿದ್ದರು. ಹಾಗೆ ಬಂದ ಆ ಜನರನ್ನು ಕಾಣದ ಕೈಗಳು ಗುದ್ದತೊಡಗಿದವು. ನೋವು ತಾಳಲಾರದೇ ಅವರು ಬೆಟ್ಟ ಇಳಿದು ಓಡಿದರು. ಆದರೂ ಗುದ್ದುವುದು ನಿಲ್ಲಲಿಲ್ಲ. ಆಮೇಲೆ ಪುನಃ ಬೆಟ್ಟವೇರಿ ಸಮರ್ಥರ ಸಮಾಧಿಯಲ್ಲಿ ಪ್ರಾರ್ಥಿಸಿದರಲ್ಲದೇ ಶ್ರೀಧರರಿಗೆ ವಂದಿಸಿದರು. ಆಗ ಗುದ್ದುವುದು ತಂತಾನೇ ನಿಂತುಹೋಯಿತು! ಗುದ್ದಿದ್ದು ಆಂಜನೇಯ ಎಂದು ಶ್ರೀಧರರು ಹೇಳಿದ್ದಾರೆ. ಇದು ಕವಿ/ಸಾಹಿತಿಯ ಕಪೋಲಕಲ್ಪಿತ ಕಥೆಯಲ್ಲ ಬದಲಾಗಿ ನಡೆದ ಘಟನೆ. ಇಂತಹ ಹಲವು ಶಕ್ತಿಗಳನ್ನು ನೀವೂ ಯಥೇಚ್ಛವಾಗಿ ಹೊಗಳುವ ಆಧುನಿಕ ವಿಜ್ಞಾನ ಕಾಣುವುದಿಲ್ಲ! ಹೀಗಾಗಿ ತಮ್ಮಂತಹ ಪ್ರಾಜ್ಞರೂ ಕೂಡ ’ವಿಜ್ಞಾನ ಕಂಡಿದ್ದು ಮಾತ್ರ ಸತ್ಯ’ ಎನ್ನುವುದು ವಿಷಾದದ ಸಂಗತಿಯಾಗುತ್ತದೆ

    ನನ್ನಲ್ಲಿ ಗೊಂದಲವಿಲ್ಲ. ನಾನು ನಿರಾಳವಾಗಿ ಕೆಲವು ತತ್ವಗಳನ್ನು ಅನುಮೋದಿಸುತ್ತಿದ್ದೇನೆ. ಯಾವುದು ನನ್ನ ಬುದ್ಧಿಮಟ್ಟಕ್ಕೆ ಸಮಂಜಸವೆನಿಸುವುದೋ ಅದನ್ನು ತುಲನಾತ್ಮಕವಾಗಿ ಅವಲೋಕಿಸಿ ಸರಿಯೆಂಬುದನ್ನು ಪರಾಂಬರಿಸಿದ ನಂತರವೇ ಒಪ್ಪಿಕೊಂಡಿದ್ದೇನೆ; ಒಪ್ಪಿಕೊಳ್ಳುತ್ತೇನೆ. ಸತ್ಯದರ್ಶನದ ಹಾದಿಯಲ್ಲಿ ನೀವು ಹೇಳಿದ್ದನ್ನೂ ಕೂಡ ನಾನು ಸಾರಸಗಾಟಾಗಿ ಕಣ್ಮುಚ್ಚಿ ಒಪ್ಪಿಕೊಳ್ಳುವುದಿಲ್ಲ, ನಿಮ್ಮ ಅಭಿಪ್ರಾಯಗಳಿಗೆ ನನ್ನಲ್ಲಿ ಭೇದಗಳಿವೆ. ಹಾಗಂತ ನಿಮ್ಮ ಎಲ್ಲಾ ಅಭಿಪ್ರಾಯಗಳನ್ನು ತಳ್ಳಿಹಾಕುವುದೂ ಇಲ್ಲ. ನನ್ನ ಅಭಿಪ್ರಾಯಗಳನ್ನು ಇತರರಮೇಲೆ ಬಲವಂತವಗಿ ಹೇರುವ ಇರಾದೆ ನನ್ನದಲ್ಲ. ಅವರಿಗೆ ಇಷ್ಟವಾದುದನ್ನು ಅವರು ಸ್ವೀಕರಿಸುತ್ತಾರೆ; ಅಪಥ್ಯವಾದುದನ್ನು ಬಿಡುತ್ತಾರೆ. ಕೇವಲ ನಾನು ಹೇಳುವುದೇ ಪರಮಸತ್ಯ ಎಂದು ನಾನೆಲ್ಲೂ ಹೇಳಹೊರಡುವುದಿಲ್ಲ. ವೇದವನ್ನು ಸಂಕಲಿಸಿದ ಮಹರ್ಷಿ ವ್ಯಾಸರೇ ಭಾಗವತ ಪುರಾಣವನ್ನೂ ಬರೆದರು. ಇಲ್ಲಿ ನೀವು ಹೇಳುವುದು ವೇದದ ಉಲ್ಲೇಖ. ಕೇವಲ ವೇದವೇ ಸತ್ಯ ಮಿಕ್ಕಿದ್ದೆಲ್ಲಾ ಸುಳ್ಳು ಎಂದು ಯಾವುದರಿಂದ ಪ್ರತಿಪಾದಿಸುತ್ತೀರಿ ಸ್ವಾಮೀ? ಯಾಕೆಂದರೆ ವೇದದ ಕರ್ತೃ ಯಾರೆಂಬುದು ಹಲವು ವಿಜ್ಞಾನಿಗಳಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆಯಲ್ಲಾ!
    Mail from Sri V.R.Bhat

    ReplyDelete
  5. ಈ ಪ್ರಶ್ನೆ ಮೇಲಿಂದ ಮೇಲೆ ಬರಬೇಕು. ವಿಮರ್ಶೆ ಮಾಡಿ. ಸತ್ಯವಾದರೆ ಸ್ವೀಕರಿಸಿ, ಸುಳ್ಳಾದರೆ ಹೇಗೆ ಎಂಬುದನ್ನು ಸಾಧಾರವಾಗಿ ತಿಳಿಸಿ.
    -ವೇದಗಳು ಸಕಲ ಮಾನವರಿಗಾಗಿದೆ.
    -ವೇದಗಳು ಸಕಲ ಮಾನವರ ಹಿತವನ್ನು ಬಯಸುತ್ತದೆ.
    -ವೇದಗಳು ಜಗತ್ತಿನ ಅತ್ಯಂತ ಪ್ರಾಚೀನ ಜ್ಞಾನಭಂಡಾರ. ಮಿಕ್ಕೆಲ್ಲ ಜ್ಞಾನಭಂಡಾರಗಳ ಮೇಲೂ ಇದರ ಪ್ರಭಾವವಿದೆ.
    -ವೇದಗಳಲ್ಲಿ ತದ್ವಿರುದ್ಧವಾದ ಸಿದ್ಧಾಂತಗಳಿಲ್ಲ.
    -ವೇದಗಳಲ್ಲಿ ಕಲಬೆರಕೆಯಿಲ್ಲ. ಕಲಬೆರಕೆಯಾಗದಂತಹ ವ್ಯವಸ್ಥೆಯಿದೆ.
    -ವೇದಗಳು ಸೃಷ್ಟಿನಿಯಮಕ್ಕೆ ಅನುಗುಣವಾದ Physical Laws, Laws of Nature, ಭೌತವಿಜ್ಞಾನ ಮೋದಲಾದವಿಗಳ ನಿಯಮಗಳಿಗೆ ವಿರುದ್ಧವಾದ ಅಪದ್ಧಗಳನ್ನು ಆಡುವುದಿಲ್ಲ.
    -ಅರ್ಥವನ್ನು ಲೆಕ್ಕಿಸದೆ, ಕೆಲವೊಮ್ಮೆ ಇಲ್ಲವೆಂದೇ ಹೇಳುತ್ತಾ, ತಾವಾಡಿದ್ದೇ ವೇದ ಎಂದೂ, ಬಡಬಡಿಸುವ ಎಲ್ಲವೂ ವೇದವಲ್ಲ! ಅಲ್ಲೆಲ್ಲಾ ಸಮಾನ್ಯಜ್ಞಾನಕ್ಕೆ. ತರ್ಕಕ್ಕೆ ವಿರುದ್ಧವಾದ ಅಂಶಗಳು ಬೇಕಾದಷ್ಟಿವೆ. ಅವನ್ನು ಸಮರ್ಥಿಸುತ್ತಿಲ್ಲ.
    -ವೇದಗಳು ತರ್ಕಬದ್ಧವಾಗಿವೆ.
    -ವೇದಗಳು ಸಾರ್ವಕಾಲಿಕವಾದ್ದರಿಂದ ತಿದ್ದುಪಡಿಯ ಅವಶ್ಯಕತೆಯಿಲ್ಲ.
    -ವೇದಗಳಲ್ಲಿ ಕೇವಲ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದದ ಸಂಹಿತಭಾಗ (ಸುಮಾರು 20,379 ಮಂತ್ರಗಳಿವೆ). ರೂಢಿಯಲ್ಲಿ ಬ್ರಾಹ್ಮಣಗ್ರಂಥಗಳನ್ನೂ, ಆರಣ್ಯಕಗಳನ್ನೂ, ಉಪನಿಷತ್ತುಗಳನ್ನೂ ಇನ್ನೂ ಯಾವ್ಯಾವುದೋ ಗ್ರಂಥಗಳನ್ನು ವೇದವೆಂದು ಗುರುತಿಸುವ ಸಂಪ್ರದಾಯಗಳು ಬಂದಿವೆ. ಅವನ್ನು ಇಲ್ಲಿ ಮಾನ್ಯ ಮಾಡಲಾಗುವುದಿಲ್ಲ.
    ಸಧ್ಯಕ್ಕೆ ಇಷ್ಟು ಸಾಕು. ಇಷ್ಟೂ ಗುಣಗಳು ಇಂದಿನ ಯಾವುದೇ ಜ್ಞಾನಭಂಡಾರದಲ್ಲಿ ಇಲ್ಲವಾದ್ದರಿಂದ ವೇದಗಳು ಉತ್ತಮ.
    ವೇದಮಂತ್ರಗಳನ್ನು ಹೇಳಿದ್ದರಿಂದ ಸ್ವರ್ಗದಲ್ಲಿ Seat ಸಿಗುತ್ತದೆ ಎಂಬುದರಿಂದ ಉತ್ತಮವಲ್ಲ! (ಅದು ಸತ್ಯದೂರವೇ!)
    Mail from Sri Sudhakarasharma

    ReplyDelete