Pages

Sunday, March 4, 2012

ವೇದ ಧರ್ಮವು ಪರಮ ಅಹಿಂಸಾಧರ್ಮ

     ಹಾಸನದ ಸಮೀಪ ದೊಡ್ದಪುರದಲ್ಲಿ ಸಾಂಕೇತಿಕ ಅಶ್ವಮೇಧಯಾಗ ನಡೆಯುತ್ತಿದೆ. ಅಲ್ಲಿಗೆ ಬಂದಿರುವ ಕೆಲವು ವೇದ ವಿದ್ವಾಂಸರನ್ನು ಭೇಟಿಮಾಡಿ " ಯಜ್ಞದಲ್ಲಿ  ಪ್ರಾಣಿಬಲಿಯನ್ನು ವೇದವು ಸಮ್ಮತಿಸುತ್ತದೆಯೇ? ಎಂದು ಕೇಳಿದರೆ "ಕೆಲವು ಯಜ್ಞಗಳು ಪ್ರಾಣಿಬಲಿ ಇಲ್ಲದೆ ಪೂರ್ಣಗೊಳ್ಳುವುದೇ ಇಲ್ಲವೆನ್ನುತ್ತಾರೆ" . ಅಲ್ಲದೆ ನಾವು ಉಪಯೋಗಿಸುವ  ಹಲವು  ಔಷಧಿಗಳು  ಪ್ರಾಣಿಯನ್ನು ಕೊಂದು ತಯಾರಾಗುತ್ತವೆ ಎನ್ನುವ ವಿಚಾರ ನಿಮಗೆ ಗೊತ್ತೇ? ಎನ್ನುವ ತರ್ಕ ಕೂಡ ವಿದ್ವಾಂಸರು ಮಾಡುತ್ತಾರೆ. ಅಲ್ಲದೆ  ಯಜ್ಞಗಳಿಗೆ ಆಹುತಿಯಾದ ಪ್ರಾಣಿಗಳು ಮೋಕ್ಷ ಪಡೆಯುತ್ತವೆ ಎನ್ನುವ ತರ್ಕ ಕೂಡ ಮಾಡುತ್ತಾರೆ.ಹೀಗೆ ಚರ್ಚೆ ಸಾಗಿದಾಗ ನನಗೆ ಸಮಾಧಾವಾಗುವ ವಿಚಾರಗಳು ಇಲ್ಲಿ ಸಿಗುವುದಿಲ್ಲವೆಂದು ಮನಗಂಡಾಗ ನಾನು ಪಂ.ಸುಧಾಕರಚತುರ್ವೆದಿಗಳ ವೇದೋಕ್ತ ಜೀವನಪಥದಲ್ಲಿ ಉಲ್ಲೇಖಿಸಿರುವ ಹಲವು ಮಂತ್ರಗಳನ್ನು ಅವರ ಗಮನಕ್ಕೆ ತಂದು  ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವ ವೇದದ ಆಧಾರವನ್ನು ನನಗೆ ಕೊಡಲು ಕೋರಿ ನನ್ನ ಚರ್ಚೆಯನ್ನು ಮುಗಿಸಿದ್ದಾಯ್ತು. ಅಂತೂ ಸಾಂಕೇತಿಕ ಅಶ್ವಮೇಧಯಾಗದಲ್ಲಿ  ಪ್ರಾಣಿಬಲಿ ಯಾಗದಿದ್ದರೂ ಸಾಂಕೇತಿಕವಾಗಿ ಒಂದು ಬೊಂಬೆಯನ್ನಾದರೂ ಬಲಿಕೊಡಬಹುದು.

ಪ್ರತ್ಯಕ್ಷ  ಬಲಿ ಕೊಟ್ಟರೇನು?  ಸಾಂಕೇತಿಕವಾದರೇನು?  ಒಟ್ಟಿನಲ್ಲಿ ಪ್ರಾಣಿಬಲಿಯನ್ನು ಪೋಷಿಸಿದನ್ತಾಯ್ತು. ವೈಜ್ಞಾನಿಕವಾಗಿ ಇಷ್ಟು ಮುಂದುವರೆದಿರುವ ಕಾಲದಲ್ಲೂ  ಇಂತಹಾ ಒಂದು ಅವಿವೇಕಿ ವಿಚಾರಕ್ಕೆ ಅಂಟಿಕೊಂಡಿರುವ ವೇದ ವಿದ್ವಾಂಸರನ್ನು  ನನ್ನಂತಹ ಸಾಮಾನ್ಯನು ಬದಲಾಯಿಸಲು ಸಾಧ್ಯವೇ? ನನ್ನ ಮೂರ್ಖ ಪ್ರಯತ್ನ ಬಿಟ್ಟು ನಾನು ಯಾವ ವಿಚಾರವನ್ನು ಅವರ ಗಮನಕ್ಕೆ ತಂದೇನೋ ಆ ಅಂಶಗಳನ್ನು ವೇದಸುಧೆಯ ಅಭಿಮಾನಿಗಳ ಗಮನಕ್ಕೂ ತರುವೆ. ಆಸಕ್ತಿ ಇದ್ದವರು ಚರ್ಚೆಮಾಡಬಹುದು. 
----------------------------------------------------------------
ಯಜ್ಞದಲ್ಲಿ ಪ್ರಾಣಿ  ಬಲಿಯುಂಟು ಎಂಬ ಮಾತನ್ನು ಕೇಳುವಾಗ ನನ್ನ ಮನದೊಳಗೆ 
ತಡೆಯಲಾರದ ಸಂಕಟ .  ಹಾಗಾದರೆ ನಿಜವಾಗಿ ವೇದಗಳಲ್ಲಿ ಹೇಳಿದೆಯೇ? 
ಎಂದು  ಚಿಂತಿಸುವಾಗ ವೇದ ಗ್ರಂಥಗಳಲ್ಲಿ  ಪರಿಹಾರವನ್ನು ಹುಡುಕ ಬೇಕೆಂಬ 
ಕಾತುರತೆ. ಆದರೆ  ನನಗೆ ವೇದಜ್ಞಾನ ಇಲ್ಲವಲ್ಲ.  ನನ್ನಂತವರಿಗೆ ವೇದವು ಅರ್ಥ ವಾಗುತ್ತದೆಯೇ?  ಎಂದು ಯೋಚಿಸುವಾಗ ಕಣ್ಮುಂದೆ ಬಂದಿದ್ದು " ಪಂ.ಸುಧಾಕರ ಚತುರ್ವೆದಿಗಳು ಬರೆದಿರುವ  ವೇದೋಕ್ತ ಜೀವನ ಪಥ ಗ್ರಂಥ " ಈ ಪುಸ್ತಕದಲ್ಲಿ ಅಲ್ಲಲ್ಲಿ  ವೇದ ಮಂತ್ರಗಳಿಗೆ ಆಧಾರ ನೀಡಲಾಗಿದೆ. ಅದೇ ನನ್ನಂತಹ  ಸಾಮಾನ್ಯರಿಗೆ ಸುಲಭವಾಗಿ ನಿಲುಕುವ  ಗ್ರಂಥ.  

ನನ್ನ ಕಣ್ಮುಂದೆ  ಎರಡೇ ದಾರಿ.  ಒಂದು ವೇದೋಕ್ತ ಜೀವನ ಪಥದಲ್ಲಿ ಹೇಳಿರು  ವಂತೆ  ಯಜ್ಞದಲ್ಲಿ ಪ್ರಾಣಿಬಲಿ ಹೇಳಿಲ್ಲವೆಂಬ ವಿಚಾರವು   ಸತ್ಯವಾಗಿರ ಬೇಕು. ಅಥವಾ ಯಜ್ಞದಲ್ಲಿ ಪ್ರಾಣಿಬಲಿಗೆ ಅವಕಾಶವಿದೆ, ಕುದುರೆಯನ್ನು ವಧೆ ಮಾಡದೆ 
ಅಶ್ವಮೇಧಯಾಗವು ಪೂರ್ಣವಾಗುವುದಿಲ್ಲವೆಂಬ  ವಿಚಾರವು ಸತ್ಯವಾಗಿರಬೇಕು. 
ಸತ್ಯವು ಎರಡಾಗಿರಲು ಸಾಧ್ಯವಿಲ್ಲ. ಸತ್ಯ ಎಂಬುದು ಒಂದೆ. ನನಗೊಂದು ಸತ್ಯ ,
ಬೇರೊಬ್ಬರಿಗೊಂದು ಸತ್ಯ ಇರಲು ಸಾಧ್ಯವಿಲ್ಲ. ನಿಜವಾಗಿ ಯಾವುದು 
ಸತ್ಯವೆಂಬುದು ತಿಳಿಯ ಬೇಕಲ್ಲವೇ? 
ಈಗ ಪಂ.ಸುಧಾಕರ ಚತುರ್ವೆದಿಗಳು ಬರೆದಿರುವ  ವೇದೋಕ್ತ ಜೀವನ ಪಥ ಗ್ರಂಥದ ಆಧಾರದಲ್ಲಿ ಕೆಲವು ವಿಚಾರಗಳನ್ನು ಪರಿಶೀಲಿಸೋಣ.

ಪಂ.ಸುಧಾಕರ ಚತುರ್ವೆದಿಗಳು ಬರೆದಿರುವ  ವೇದೋಕ್ತ ಜೀವನ ಪಥ
ಪುಟ ಸಂಖ್ಯೆ: 55
------------------------------------------------------

ಆಧಾರ: ಋಗ್ವೇದ [7.103.8]

ಬ್ರಾಹ್ಮಣಾಸ:   ಸೋಮಿನೋ ವಾಚಮಕ್ರತ ಬ್ರಹ್ಮ  ಕೃಣ್ವ೦ತ:  ಪರಿವತ್ಸರೀಣಂ|
ಅಧ್ವರ್ಯವೋ  ಘರ್ಮಿಣ: ಸಿಷ್ವಿದಾನಾ  ಆವಿರ್ಭವ೦ತಿ  ಗುಹ್ಯಾ ನ ಕೆ ಚಿತ್ ||

ಸೋಮಿನ: = ಬ್ರಹ್ಮಾನಂದದ ಸವಿಯನ್ನು ಕಾಣುವವರು 
ಅಧ್ವರ್ಯವ: =  ಅಹಿಂಸಕರೂ
ಘರ್ಮಿಣ:= ತಪಸ್ವಿಗಳೂ
ಸಿಷ್ವಿದಾನಾ := ಪರಿಶ್ರಮದಿಂದ ಬೆವರುವವರೂ
ಬ್ರಾಹ್ಮಣಾಸ:=  ಬ್ರಾಹ್ಮಣರು 

ಪರಿವತ್ಸರೀಣಂ  ಬ್ರಹ್ಮಮ್   ಕೃಣ್ವ೦ತ: = ಸಮಸ್ತ ವಿಶ್ವದಲ್ಲಿಯೂ ವೇದ ಜ್ಞಾನವನ್ನು  ಪಸರಿಸುತ್ತಾ 

ಕೇ   ಚಿತ್ ಗುಹ್ಯಾ:  ನ =ಕೆಲವರು ಗುಪ್ತವಾಗಿದ್ದವರಂತೆ

ಆವಿರ್ಭವಂತಿ= ಬೆಳಕಿಗೆ ಬರುತ್ತಾರೆ.

ಭಗವದುಪಾಸನೆಯಿಂದ  ಆನಂದ ಪ್ರಾಪ್ತಿ , ಅಹಿಂಸಾ ತತ್ವ, ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆಗಳು ,ಕಷ್ಟ ಸಹಿಷ್ಣುತೆ -ಇವು ಬ್ರಾಹ್ಮಣರ ಲಕ್ಷಣಗಳು. ಅಂದಮೇಲೆ  ಒಬ್ಬ ಬ್ರಾಹ್ಮಣ ಪುರೋಹಿತರು ಪ್ರಾಣಿ ಬಲಿಯನ್ನು  ಪ್ರೋತ್ಸಾಹಿಸುವುದು ಸರಿಯೇ? 
----------------------------------------------------
ವೇದ ಧರ್ಮವು ಪರಮ ಅಹಿಂಸಾಧರ್ಮ:

ವೇದದಲ್ಲಿ ಅಹಿಂಸಾ ಪ್ರತಿಪಾದನೆಯನ್ನು ಇನ್ನು ಮುಂದೆ ನೋಡೋಣ.

ಆಧಾರ: ಋಗ್ವೇದ [1.1.4]

ಅಗ್ನೇ  ಯಂ  ಯಜ್ಞಮಧ್ವರಂ ವಿಶ್ವತ: ಪರಿಭೂರಸಿ |
ಸ ಇದ್      ದೇವೇಷು ಗಚ್ಚತಿ| 

ಅಗ್ನೇ= ಓ ಜ್ಯೋತಿರ್ಮಯ 
ಯಂ ಅಧ್ವರಂ ಯಜ್ಞಮ್ = ಯಾವ ಹಿಮ್ಸಾರಹಿತವಾದ ಯಜ್ಞವನ್ನು 
ತ್ವಂ ವಿಶ್ವತ: ಪರಿಭೂರಸಿ= ನೀನು ಎಲ್ಲೆಡೆಯಿಂದ ಅಧ್ಯಕ್ಷನಾಗಿ ಆವರಿಸುತ್ತೀಯೋ
ಸ ಇತ್ = ಅದೇ 
ದೇವೇಷು ಗಚ್ಚತಿ = ದಿವ್ಯತತ್ವಗಳನ್ನು  ಸೇರುತ್ತದೆ. [ ನನ್ನ ಮಾತು:   ಭಗವಂತನನ್ನು  ಸೇರುತ್ತದೆ] 
----------------------------------------
ಆಧಾರ: ಯಜುರ್ವೇದ [1.1]

ಯಜಮಾನಸ್ಯ  ಪಶೂನ್ ಪಾಹಿ =ಯಜ್ಞ ಕರ್ತನ ಪಶುಗಳನ್ನು ಪಾಲಿಸು 
----------------------------------------
ಆಧಾರ: ಯಜುರ್ವೇದ [13.41]

ಅಶ್ವಂ ಮಾ ಹಿಂಸೀ = ಕುದುರೆಯನ್ನು ಹಿಂಸಿಸಬೇಡ 
----------------------------------------------
ಆಧಾರ: ಯಜುರ್ವೇದ [13.43]

ಗಾಂ  ಮಾ ಹಿಂಸೀ = ಹಸುವನ್ನು ಹಿಂಸಿಸಬೇಡ 
-----------------------------------------------
ಆಧಾರ: ಯಜುರ್ವೇದ [13.44]

ಅವಿಂ  ಮಾ ಹಿಂಸೀ = ಮೇಕೆಯನ್ನು  ಹಿಂಸಿಸಬೇಡ 
-------------------------------------------
ಆಧಾರ: ಯಜುರ್ವೇದ [13.47]

ಇಮಂ ಮಾ ಹಿಂಸೀದ್ವಿರ್ ಪಾದಂ  ಪಶುಮ್ = 
ದ್ವಿಪಾದ ಪಶುವನ್ನು ಹಿಂಸಿಸಬೇಡ 
------------------------------------------

ಆಧಾರ: ಅಥರ್ವ ವೇದ  [10.1.29]

ಅನಾಗೋ  ಹತ್ಯಾ  ವೈ ಭೀಮಾ = ನಿಷ್ಪಾಪವಾದ ಪ್ರಾಣಿಯನ್ನು  ಕೊಲ್ಲುವುದು 
ಭಯಂಕರ ಪಾಪ 
-----------------------------------------------
ಆಧಾರ: ಅಥರ್ವ  ವೇದ  [8.2.25]

ಸರ್ವೋವೈ ತತ್ರ ಜೀವತಿ 
ಗೌರಶ್ವ: ಪುರುಷ: ಪಶು:|
ಯತ್ರೆದಂ ಬ್ರಹ್ಮ ಕ್ರಿಯತೇ
ಪರಿಧಿರ್ಜೀವನಾಯ ಕಮ್||

ಯತ್ರ = ಎಲ್ಲಿ
ಇದಂ ಬ್ರಹ್ಮ = ಈ ವೇದವು
ಕಮ್ = ಒಳಿತಾಗಿ
ಜೀವನಾಯ = ಜೀವನಕ್ಕೆ 
ಪರಿಧಿ: ಕ್ರಿಯತೇ = ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ 
ಗೌ: = ಹಸುವು
ಅಶ್ವ: =  ಕುದುರೆ
ಪುರುಷ: = ಮಾನವನು 
ಪಶು: = ಇತರ ಮೃಗಗಳು 
ಸರ್ವ: = ಎಲ್ಲವೂ
ವೈ = ನಿಜವಾಗಿ
ಜೀವತಿ = ಬದುಕುತ್ತವೆ.

 ಎಲ್ಲಿ ಈ ವೇದವು ಸರ್ವ ಜೀವಿಗಳ ಒಳಿತಿಗಾಗಿ  ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ ಎಲ್ಲಾ ಜೀವಿಗಳೂ ನಿಜವಾಗಿ ಬದುಕುತ್ತವೆ. ಅಂದರೆ ಇಲ್ಲಿ "ಆವರಣ" ಎಂಬ ಪದವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು.                       " ಸರ್ವಜೀವಿಗಳ ಒಳಿತಿಗಾಗಿ ಎಲ್ಲಿ ವೇದವು ಆವರಣವಾಗಿ ಮಾಡಲ್ಪದುತ್ತದೋ" ಅಂದರೆ ವೇದವು ಎಲ್ಲಾ ಜೀವಿಗಳಿಗೆ ರಕ್ಷಣೆಯಾಗಿ ಎಲ್ಲಿ ಸುತ್ತು ಗೋಡೆ ಯಾಗಿ ನಿಲ್ಲುತ್ತದೋ ಅಲ್ಲಿ ಎಲ್ಲಾ ಜೀವಿಗಳು ನಿಜವಾಗಿ ಬದುಕುತ್ತವೆ" . ಎಷ್ಟು ವಿಶಾಲವಾದ ಅರ್ಥವಿದೆ! 

ಅಂದರೆ ವೇದವು ಎಲ್ಲಾ ಜೀವಿಗಳ ನೆಮ್ಮದಿಯ,ನಿರ್ಭೀತ ಬದುಕಿಗಾಗಿ ಕರೆಕೊದುತ್ತದೆಯೇ ಹೊರತೂ ಯಾವ ಜೀವಿಗಳ ಹಿಂಸೆಗೆ ಆಸ್ಪದವೇ ಇಲ್ಲ ಎಂದು ಭಾವಿಸಬಹುದಲ್ಲವೇ? 

ಅಲ್ಲದೆ  ಒಂದು ಪದವನ್ನು ಸಮಯಕ್ಕೆ ತಕ್ಕಂತೆ ಅರ್ಥೈಸುತ್ತಾರಾದರೂ  ವಿಶ್ವದ ಒಳಿತಿಗಾಗಿಯೇ ಇರುವ ವೇದವನ್ನು ನಾವು ಹೀಗೆಯೇ ಅರ್ಥೈಸಬೇಕಲ್ಲವೇ? 

ವೇದದಲ್ಲಿ  ಈ ಮೇಲಿನ  ಅಂಶಗಳೆಲ್ಲಾ  ಇರುವುದನ್ನು ಆಧಾರ ಸಮೇತ  ಪಂ. ಸುಧಾಕರ ಚತುರ್ವೆದಿಗಳು  ಉಲ್ಲೇಖಿಸಿರುವುದರಿಂದ  ಮೂಲ ವೇದದಲ್ಲಿ  ಹಿಂಸೆ ಯನ್ನು ಪ್ರೋತ್ಸಾಹಿಸುವ  ಅಂಶಗಳು  ಕಾಣ ಬರುವುದಿಲ್ಲ ವೆಂಬ  ವಿಚಾರವನ್ನು ಅನಿವಾರ್ಯವಾಗಿ ಒಪ್ಪಬೇಕಾಗಿದೆ. ಈಗ  ಹೇಳಿ  ಈ ಆಧಾರಗಳು ಸುಳ್ಳೇ? 
ಸುಳ್ಳಾಗಿದ್ದರೆ ಸತ್ಯ ಯಾವುದು? 

ಕೊನೆಯ ಮಾತು:

ಮೂಲವೇದ ಗ್ರಂಥವು ಯಾವುದು? ಎನ್ನುವ ವಿಚಾರದಲ್ಲೂ ಗೊಂದಲಗಳು ಇರಬಹುದು. ಆದರೆ  ಇಡೀ ಪ್ರಪಂಚದ ನೆಮ್ಮದಿಗೆ "ಅಹಿಂಸಾ ಮಾರ್ಗವು  ಇಂದಿನ ಅತೀ ಅಗತ್ಯವಾದ  ವಿಚಾರವಾಗಿದ್ದು,  ಮನುಕುಲಕ್ಕೆ ಬೆಳಕಾಗಿರುವ ವೇದದ ಕಡೆ  ಇಡೀ ವಿಶ್ವವು  ನೋಡುತ್ತಿರುವ ಸಂದರ್ಭದಲ್ಲಿ  ಯಜ್ಞ ದಲ್ಲಿ ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವುದು ತರವಲ್ಲವೆನ್ಬುದು ನನ್ನ ಸ್ಪಷ್ಟ ನಿಲುವು.

20 comments:

  1. ಚಂದನ ವಾಹಿನಿಯಲ್ಲಿ ಇಂದು ಪ್ರಸಾರವಾದ 'ಹೊಸಬೆಳಕು'ಕಾರ್ಯಕ್ರಮದಲ್ಲೂ ವೇದದಲ್ಲಿ ಪ್ರಾಣಿಹಿಂಸೆಗೆ ಅವಕಾಶವಿಲ್ಲವೆಂಬ ಅಂಶವನ್ನು ಒತ್ತಿ ತಿಳಿಸಲಾಗಿದೆ.
    ಈಗ ದೊಡ್ಡಪುರದಲ್ಲಿ ಸಾಂಕೇತಿಕವಾಗಿ ಕುದುರೆಯ ಬೊಂಬೆಯನ್ನು ಅಗ್ನಿಗೆ ಅರ್ಪಿಸಲಾಗುವುದೆಂದು ಹೇಳಲಾಗಿದೆ. ಹಾಗಿದ್ದಲ್ಲಿ ಕುದುರೆಯ ಬೊಂಬೆಯನ್ನೇ -ನಿಜವಾದ ಕುದುರೆಯ ಬದಲಿಗೆ- ಮೆರವಣಿಗೆ ಮಾಡಬಹುದಿತ್ತು. ಪ್ರಾಣಿಬಲಿಯನ್ನು ಸಾಂಕೇತಿಕವಾಗಿ ಮಾಡಿದರೂ ಪ್ರಾಣಿಬಲಿಯನ್ನು ಮಾಡುವ ಉದ್ದೇಶವಿತ್ತೆಂದು ಭಾವಿಸಬಹುದಲ್ಲವೇ? ಮೆರವಣಿಗೆಯಲ್ಲಿ ಬಂದ ಕುದುರೆ ತನ್ನ ನಿಜವಾದ ಆಯಸ್ಸು ಪೂರ್ಣಗೊಳ್ಳುವವರೆಗೆ ಬದುಕಲಿ ಎಂಬುದು ನನ್ನ ಹಾರೈಕೆ.

    ReplyDelete
    Replies
    1. ಶ್ರೀಧರ್ ಅವ್ರೆ.. ನಿಮಗೆ ಮೊದಲು ಅನಂತ ವಂದನೆಗಳು.. ಒಂದೊಳ್ಳೆ ವಿಚಾರವನ್ನು ಚರ್ಚೆಗೆ ತಂದಿದ್ದಕ್ಕೆ..
      ಅಶ್ವಮೇಧಯಾಗದಲ್ಲಿ ಕುದುರೆಯನ್ನು ಕೊನೆಗೆ ಬಲಿಕೊಡುವುದು ಆಚರೆಣೆಯೇ..
      ನಿಮಗೆ ಇನ್ನೊಂದು ವಿಷಯ ತಿಳಿಯಪಡಿಸುತ್ತೇನೆ, ಕೃಷ್ಣಾನದಿಯ ತೀರದಲ್ಲಿ, ರಾಜನೊಬ್ಬ "ಗೋವುಗಳನ್ನೇ" ಬಲಿಕೊಟ್ಟನೆಂದು ಪುರಾಣಗಳಲ್ಲಿ ಉಲ್ಲೇಖವಿದೆ..

      ಇಲ್ಲಿ ಬಹಳ ಜಾಗರೂಕತೆಯಿಂದ ನಾವು ವಿಚಾರಿಸಬೇಕಿದೆ..
      ಮೊದಲು ಈ ಅಹಿಂಸೆ ಅನ್ನೋ ಶಬ್ದದ ವಿವರಣೆ ನಾವು ಮಾಡಬೇಕಾಗುತ್ತದೆ..

      ಕೇವಲ ಕುದುರೆ,ಮೇಕೆ ಇಂಥಾ ಪ್ರಾಣಿಗಳನ್ನು ಕೊಲ್ಲುವುದೊಂದೇ ಹಿಂಸೆಯೇ..? ಸಸ್ಯಗಳನ್ನು, ಮರದ ಎಲೆ,ಹೂ,ಹಣ್ಣುಗಳನ್ನು, ಜೇನಿಗಾಗಿ ಆ ಹುಳುಗಳನ್ನು ಕೊಲ್ಲುವುದೂ ಹಿಂಸೆಯೇ ಅಲ್ಲವೇ..!!??
      ಒಂದು ಕುದುರೆಯನ್ನು ಕೊಂದು, ಬಲಿ ಕೊಡುವುದು ಹಿಂಸೆಯಾದರೆ, ಯಜ್ಞದಲ್ಲಿ ನವಧಾನ್ಯಗಳನ್ನೂ ಅರ್ಪಿಸುವುದೂ ಹಿಂಸೆಯೇ..
      ಆದರೆ, ಈ ವಿಷಯದಲ್ಲಿ ಸ್ಪಷ್ಟವಾದ ಉಕ್ತಿಯಿದೆ.."ವೈದೀ ಹಿಂಸಾ ನ ಪಾಪಸಾಧನಂ."
      ಅಂದ್ರೆ, ವೇದೋಕ್ತ ಕರ್ಮಗಳಿಗೆ ಮಾಡುವ ಹಿಂಸೆಯು, ಪಾಪಕ್ಕೆ ಕಾರಣವಾಗುವುದಿಲ್ಲ..
      ಹೀಗಾಗಿಯೇ ಮನೆಯಲ್ಲಿ "ವೈಶ್ವದೇವ"ಯಜ್ನವನ್ನು ಮಾಡುವುದು..
      -Bhimasen Purohit

      Delete
    2. ಶ್ರೀಯುತ ಭೀಮಸೇನ ಪುರೋಹಿತರಿಗೆ ವಂದನೆಗಳು. ನನ್ನ ಪ್ರತಿಕ್ರಿಯೆಗೆ ಉತ್ತರವಾಗಿ ನೀವು ಇದನ್ನು ಬರೆದಿರುವುದರಿಂದ ನನ್ನ ಅನಿಸಿಕೆ ದಾಖಲಿಸಿರುವೆ. ಸಸ್ಯಹಿಂಸೆಯೂ ಹಿಂಸೆ ಎಂಬುದನ್ನು ಒಪ್ಪುವೆ. ಆದರೆ ಅದು ಕುದುರೆಯನ್ನು ಬಲಿ ಕೊಡಲು ಸಮರ್ಥನೆಯೆನಿಸುವುದಿಲ್ಲ. ಸಾಂಕೇತಿಕ ಅಶ್ವಮೇಧ ಯಾಗಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಕರಪತ್ರದಲ್ಲಿ ಕುದುರೆ ನಮ್ಮೊಳಗಿನ ಮೃಗೀಯ ಸಂಸ್ಕಾರಗಳ ಪ್ರತೀಕ ಎಂದು ಬಣ್ಣಿಸಲಾಗಿದೆ. ವಾಸ್ತವವಾಗಿ ಕುದುರೆ ಶಕ್ತಿ ಮತ್ತು ವೀರ್ಯದ ಪ್ರತೀಕ. ಕುದುರೆ ಮಾನವನಿಗೆ ಅನುಕೂಲಿಯಾಗಿ ವರ್ತಿಸಿರುವುದನ್ನು ನಾವು ಕಂಡಿದ್ದೇವೆಯೇ ಹೊರತು ಇತರ ಜೀವಿಗಳಿಗೆ ಮಾರಕವಾಗಿ ವರ್ತಿಸಿದ್ದನ್ನು ಅರಿತಿಲ್ಲ. ವಾಸ್ತವವಾಗಿ ಮಾನವನಷ್ಟು ಮೃಗೀಯವಾಗಿ ವರ್ತಿಸುವ ಬೇರೆ ಜೀವಿ ಇರಲಿಕ್ಕಿಲ್ಲ. ವೇದದ ಯಾವ ಮಂತ್ರದಲ್ಲಿ ಹಿಂಸೆಗೆ ಅವಕಾಶವಿದೆ ಎಂಬ ಬಗ್ಗೆ ಆ ಮಂತ್ರದ ಉಲ್ಲೇಖ ಮಾಡಿ ಬರೆದರೆ ಉಪಕಾರವಾಗುತ್ತದೆ. ನೀವು ಹೇಳಿದ "ವೈದೀ ಹಿಂಸಾ ನ ಪಾಪಸಾಧನಂ" ಎಂಬುದು ಎಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂಬ ಕುರಿತು ತಿಳಿಯಲು ಕುತೂಹಲಿಯಾಗಿದ್ದೇನೆ.

      Delete
  2. ನಮ್ಮ ಉಳಿವಿಗಾಗಿ ದೇವರನ್ನು ತೃಪ್ತಿ ಪಡಿಸುತ್ತೇವೆಂಬ ಕುರುಡು ನಂಬಿಕೆಯಿಂದ ಬಲಿಗಾಗಿ ಯಾ ಮಾನವನ ಕಬಳಿಕೆಗಾಗಿ ಇರುವೆಯಿಂದ ಹಿಡಿದು ಯಾವುದೇ ಜೀವಿಯನ್ನು ವಧಿಸುವುದೂ ಖಂಡಿತಕ್ಕೂ ಪಾಪಕೃತ್ಯ, ಹೇಯಕೃತ್ಯ. ನಾವು ಯಜ್ಞ-ಯಾಗಗಳಲ್ಲೊಂದೇ ಅಲ್ಲ ಹೊರಗಡೆ ಕಟುಕರು ನಿರ್ದಯೆಯಿಂದ ಕಡಿಯುವ ಸನ್ನಿವೇಶ ಒಮ್ಮೆ ನೋಡಿದರೆ ಮನುಷ್ಯನಾಗಿ ಯಾಕಾದರೂ ಹುಟ್ಟಿದೆವಪ್ಪಾ ಎನಿಸುತ್ತದೆ. ಪ್ರತೀ ಭಾನುವಾರ ಹೊಸದಿಗಂತದ ೭ ನೇ ಪುಟದಲ್ಲಿಡಾ| ಸತ್ಯನಾರಾಯಣ ಭಟ್ ಅವರು ಬರೆಯುವ ಅಂಕಣ ’ಪೃಥಿವೀಸೂಕ್ತ’ ನನ್ನ ಅತೀ ಮೆಚ್ಚಿನ ಅಂಕಣಗಳಲ್ಲೊಂದು. ಜ್ಞಾನ ದಾಹಿಗಳಿಗೆ, ಆಯ್ದುಕೊಂಡ ಒಂದೊಂದೂ ವಿಷಯವಸ್ತುವಿನ ಪರಿಪೂರ್ಣ ಮಾಹಿತಿಯನ್ನು ತಮ್ಮ ಪ್ರಪಂಚ ಪರ್ಯಟನೆಯ ಸ್ವಾನುಭವದಿಂದ ಉಣಬಡಿಸುವ ಈ ಆಯುರ್ವೇದ ವೈದ್ಯರನ್ನು ನಾನೊಮ್ಮೆ ಸಂಪರ್ಕಿಸಿದಾಗ ಹೇಳಿದೆ "ಸ್ವಾಮೀ ಶ್ರೀಸೂಕ್ತ, ಪುರುಷಸೂಕ್ತ, ನಾರಾಯಣ ಸೂಕ್ತಗಳ ಜೊತೆಗೇ ಪೃಥಿವೀಸೂಕ್ತವನ್ನೂ ಇಟ್ಟು ಪೂಜಿಸುವ, ಆಗಾಗ ತೆಗೆದು ಓದಿ ಆಸ್ವಾದಿಸುವ ಮನಸ್ಸಾಗುತ್ತದೆ " ಎಂದು. ಅವರು ಖುಷಿಪಟ್ಟರೂ "ಇವತ್ತಿನ ಕಾಲದಲ್ಲಿ ಪ್ರಕಾಶಕರುಗಳು ನೋಡುವುದು ವ್ಯಾವಹಾರಿಕ ಲಾಭವನ್ನಷ್ಟೇ. ಇಂಥದ್ದನ್ನೆಲ್ಲಾ ಪುಸ್ತಕರೂಪದಲ್ಲಿ ಪ್ರಕಟಿಸಲು ಯಾರೂ ಮುಂದೆಬರುವುದಿಲ್ಲ. ಇಂಥದ್ದಕ್ಕೆ ಓದುಗರ ಸಂಖ್ಯೆಯೂ ಕಮ್ಮಿ ಇರುತ್ತದೆ " ಎನ್ನುತ್ತಾ ಪಶ್ಚಾತ್ತಾಪಪಟ್ಟುಕೊಂಡರು. ಈ ಜಗತ್ತಿನಲ್ಲಿ ನಾವು ಕಳೆದುಕೊಳ್ಳುತ್ತಿರುವ ಸಸ್ಯ ಪ್ರಭೇದಗಳು, ವನ್ಯಜೀವಿಗಳು, ಜಲಚರಗಳು ಮುಂತಾದ ಹಲವು ಹತ್ತು ಮಾಹಿತಿಗಳನ್ನು ವಾರಕ್ಕೊಂದರಂತೇ ಕೊಡಮಾಡುವ ಅವರ ಈ ಪ್ರಯತ್ನ ಅನವದ್ಯ, ಹೃದ್ಯ. ಆಸಕ್ತರು ಪ್ರತೀ ಭಾನುವಾರದ ಹೊಸದಿಗಂತವನ್ನು ಕೊಂಡು ಓದಬಹುದು ಅಥವಾ ಅಂತರ್ಜಾಲದ ಮೂಲಕವೂ ಓದಬಹುದು. ಲೇಖಕ ಡಾ| ಭಟ್ಟರಿಗೆ ಕವಿಹೃದಯವೂ ಇದೆ ಎಂಬುದು ಗೊತ್ತು. ಅನೇಕ ವಿಷಯಗಳನ್ನು ಸಂಗಮಿಸಿಯೇ ವಿಷಯಪೂರಣ ಮಾಡುವ ಅವರ ಲೇಖನದ ಹೂರಣ ಚೆನ್ನಾಗಿರುತ್ತದೆ. ಅನುಕೂಲ/ಆಸಕ್ತಿ ಇದ್ದವರು ಓದಲಿ ಎಂದು ಇಲ್ಲಿ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ಈ ವಾರ ಡಾಲ್ಫಿನ್ ಹತ್ಯೆಯ ಕುರಿತು ಬರೆದಿದ್ದು ಓದಿ ಬಹಳ ಬೇಸರಗೊಂಡೆ. ಅದರ ಕೊಂಡಿ ಈ ಕೆಳಗಿದೆ:

    http://hosadigantha.in/epaper.php?date=03-04-2012&name=03-04-2012-7

    ReplyDelete
  3. Bhimasen Purohit ನಮ್ಮಲ್ಲಿ ಇರೋ ಒಂದು ಭಾವವನ್ನು ಸ್ಪಷ್ಟಪಡಿಸುವೆ.. ಯಾವ ಜೀವಿ ಯಜ್ಞಕ್ಕಾಗಿ ಬಲಿಯಾಗುತ್ತದೆಯೋ ಅದು ಮುಂದಿನ ಜನ್ಮದಲ್ಲಿ ಉತ್ತಮವಾದ ಸಜ್ಜನಿಕೆಯ ಜೀವಿಯಾಗಿ ಹುಟ್ಟುತ್ತದೆ..

    ರಾಜನೊಬ್ಬ ಗೋವುಗಳನ್ನು ಬಲಿಕೊಟ್ಟಿದ್ದ ವಿಷಯವನ್ನು ಹಿಂದಷ್ಟೇ ಪ್ರಸ್ತಾಪಿಸಿದ್ದೆ. ಅದೇ ಪುರಾಣದ ಕಥೆಯಲ್ಲೇ ಮುಂದೆ ಹೇಳುತ್ತಾರೆ.. ಹಾಗೆ ಬಲಿಕೊಟ್ಟ ಹಸುಗಳೆಲ್ಲ ಮತ್ತೆ ಪುನರ್ಜನ್ಮ ತಾಳಿ, ಅತ್ಯುತ್ತಮವಾದ, ಶ್ರೇಷ್ಠ ಆಕಳುಗಳಾಗಿದ್ದವು, ಎಂದು.
    ಅಂದರೆ, ಮಾತು ಸ್ಪಷ್ಟವಾಯಿತಷ್ಟೇ, ಆ ಕಾಲದಲ್ಲಿ ಕುದುರೆ ಮುಂತಾದವನ್ನು ಬಲಿಕೊಡೋದು ಇತ್ತು.
    ಆದರೆ ಅದು ಕ್ರೌರ್ಯ ಅಂತಲ್ಲ.. ಆಗಿನ ಕಾಲದ ಋಷಿ-ಮುನಿಗಳಿಗೆ, ಯಜ್ಞದ ಆಧ್ವರ್ಯುಗಳಿಗೆ, ಹಾಗೆ ಬಲಿಕೊಟ್ಟ ಪ್ರಾಣಿಗಳನ್ನು ಮತ್ತೆ ಸೃಷ್ಟಿ ಮಾಡುವ ಸಾಮರ್ಥ್ಯವಿತ್ತು.. ಹೀಗಾಗಿಯೇ ಅವರು, ೧) ಯಜ್ಞದ ಭಾಗವಾಗಿ ಮತ್ತು ೨) ಆ ಜೀವಿಗೆ ಸದ್ಗತಿ ಸಿಗಲಿ ಅಂಬ ಕಾರಣಗಳಿಗಾಗಿ ಬಲಿ ಕೊಡುತ್ತಿದ್ದರು..

    ಆದರೆ, ಕಲಿಗಾಲದಲ್ಲಿ, ಹಾಗೆ ಸತ್ತ ಪ್ರಾಣಿಗಳನ್ನು ಬದುಕಿಸುವ ಸಾಮರ್ಥ್ಯವಿಲ್ಲ. ಹೀಗಾಗಿಯೇ ಇನ್ನೊಂದು ಅಂಶವನ್ನು ಋಷಿಗಳು ಸ್ಪಷ್ಟ ಪಡಿಸಿದ್ದಾರೆ. ಏನೆಂದರೆ, ಈ ಕಲಿಗಾಲದಲ್ಲಿ, ಪ್ರಾಣಿಬಲಿ ಸರ್ವಥಾ ಅಯೋಗ್ಯವಾದದ್ದು.. ಅಂತ.. ಅದಕ್ಕೆಂದೇ, ಯಜ್ಞದ ಆಚರಣೆಗೂ ಭಂಗ ಬರಬಾರದು, ಋಷಿಗಳ ಮಾತನ್ನೂ ಮೀರಬಾರದು ಅಂತಲೇ, ಅದರದೊಂದು ಮಣ್ಣಿನ ಅಥವಾ ಹಿಟ್ಟಿನ ಪ್ರತಿಕೃತಿ ಮಾಡಿ ಬಲಿಕೊಡುತ್ತಾರೆ..
    -Bhimasen Purohit

    ReplyDelete
    Replies
    1. ಬೇರೊಂದು ಜೀವಿಯನ್ನು ಉದ್ಧಾರ (ಉತ್ತಮ ಜನ್ಮ?)ಮಾಡುವ ಸಲುವಾಗಿ ಬಲಿ ಕೊಡುವುದು ಉಚಿತವೇ ಎಂಬುದನ್ನು ಗಮನಿಸಬೇಕು. ಕೀಳು ಜನ್ಮ ಎಂದು ಭಾವಿಸುವ ಯಾವುದೇ ಪ್ರಾಣಿ/ಕೀಟ ಸಹ ಬದುಕಿರುವವರೆಗೂ ಸಾಯಲು ಬಯಸುವುದಿಲ್ಲ ಎಂಬುದು ಸತ್ಯಸ್ಯ ಸತ್ಯ. ಹಾಗಿರುವಾಗ ಬೇರೊಂದು ಜೀವಿಯ ಬಲಿ ಕೊಡುವ ಹಂಬಲವೇ ಕ್ರೂರ.

      Delete
  4. ವೆದಪಂಡಿತರನ್ನು ವಿಚಾರಿಸಿ. ಪ್ರತಿದಿನ ಊಟಕ್ಕೂ ಮುಂಚೆ. ಗೃಹಸ್ಥರು ಈ "ವೈಶ್ವದೇವ"ಯಜ್ನವನ್ನು ಮಾಡುತ್ತಾರೆ. ಅಂದರೆ, ಅಗ್ನಿಗೆ ಮಾಡಿದ ಅಡಿಗೆಯ ಸ್ವಲ್ಪ ಭಾಗವನ್ನು ಅರ್ಪಿಸುವುದು..
    ಈ ಯಜ್ಞದ ಅವಶ್ಯಕತೆ ಏನು?ಅನ್ನೋದು ಭಾಳ ದಿನದಿಂದ ನನ್ನ ಕಾಡಿತ್ತು. ಆ ನಂತರ ನಮ್ಮ ತಂದೆಯವರು ಹೇಳಿದ ಪ್ರಮಾಣವಾಕ್ಯಗಳಿಂದ ಸ್ಫುಟವಾಯಿತು..
    ಅದೇನೆಂದರೆ, ನಾವು ಸಸ್ಯಾಹಾರಿಗಳೂ, ಸಸ್ಯಗಳನ್ನು ಕೊಂದು ಆ ಪಾಪದಿಂದ ಲೆಪಿತರಾಗಿರುತ್ತೇವೆ..
    ಅದನ್ನು ಕ್ಷಮಿಸು ಎಂದು ಪ್ರಾರ್ಥನೆ ಮಾಡಿಯೇ, ಆ ಭಾಗವನ್ನು ಅಗ್ನಿಗೆ ಅರ್ಪಿಸುವುದು..

    ಅಂದ ಮೇಲೆ, ಒಂದಂತೂ ಸ್ಪಷ್ಟವಾಯಿತು.. ಕೇವಲ ಪ್ರಾಣಿವಧೆಯೊಂದೆ ಹಿಂಸೆಯಲ್ಲ.. ಸಸ್ಯಹಿಮ್ಸೆಯೂ ಹಿಂಸೆಯೇ..ಆ ಪಾಪದ ಪ್ರಯಶ್ಚಿತ್ತವೆ "ವೈಶ್ವದೇವ."

    -Bhimasen Purohit

    ReplyDelete
  5. ಪ್ರಕೃತಿಯನ್ನು ಇದ್ದಾಂಗೆ ಉಪಭೋಗಿಸುವುದಕ್ಕೆ ಮನುಷ್ಯರನ್ನು ಬಿಟ್ಟು ಉಳಿದ ಜಂತುಗಳಿಗೆ ಅವಕಾಶ(ಅಧಿಕಾರ) ಇದೆ. ಆದರೆ ತನಗೆ ದೊರೆತ ಪ್ರಕೃತಿಯನ್ನು ಸಂಸ್ಕರಿಸಿ ಭುಂಜಿಸುವುದು ನಮಗೆ ಹೇಳಿಸಿದ್ದು. ಅದುವೇ ಸಂಸ್ಕೃತಿ. ಇನ್ನು ಪ್ರಕೃತಿಯನ್ನು ಸಂಸ್ಕರಿಸುವ ನೆಪದಲ್ಲಿ ವಿಕೃತಿಗೊಳಿಸಿ ವಿಘ್ನಸಂತೋಷಿಗಳಾಗುವವರು ಹೆಚ್ಚಾಗುತ್ತಿದ್ದಾರೆ. ಅದು ವಿಕೃತಿ.
    -ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

    ReplyDelete
  6. Vasanth Kumar 10:09am Mar 5
    ಯಜ್ಝ ಯಾಗ ಎಂಬುದಕ್ಕೆ ಅಧ್ವರ ಎಂಬ ಅರ್ಥವೂ ಇದೆ.. ಅಂದರೆ ಅಹಿಂಸೆ ಎಂದು ಅರ್ಥ. ಹಾಗಿದ್ದಲ್ಲಿ ಯಜ್ಞ, ಯಾಗಾದಿಗಳಲ್ಲಿ ಪ್ರಾಣಿ ಬಲಿ ಎಂಬುದು ಖಂಡಿತಾ ಇಲ್ಲ. ಜಗತ್ತಿನ ಯಾವ ಜೀವಿಗಳನ್ನೂ ಹಿಂಸಿಸಬೇಡಿ ಎಂದು ವೇದಗಳು ಘ್ಹಂಟಾಘೋಷವಾಗಿ ಸಾರಿವೆ. ಹಾಗಿದ್ದಲ್ಲಿ ಪಶುಬಲಿ ಎಲ್ಲಿಂದ ಬಂತು? ಯಾವುದೇ ಯಜ್ಞ್ನ ಕಾರ್ಯದಲ್ಲಿ ನಿಮ್ಮ ’ಪಶುತ್ವ’ ವನ್ನು ಬಲಿಕೊಡಿ ಎಂದು ವೇದಗಳು ಹೇಳಿವೆ. ಅಂದರೆ ನಿಮ್ಮಲ್ಲಿರುವ ಮೃಗೀಯ ಭಾವನೆಗಳನ್ನು ಬಿಟ್ಟು ಮಾನವತೆಯನ್ನು ಬೆಳೆಸಿಕೊಳ್ಳಿ ಎಂದರ್ಥ.. ಇದನ್ನೇ ಕೆಲವರು ಅರ್ಥ ತಿರುಚಿ ಪಶುಬಲಿ ಎಂದು ಅರ್ಥೈಸಿದ್ದಾರೆ...

    (ನಿನ್ನೆ ಬೆಳಿಗ್ಗೆ ೯.೩೦ಕ್ಕೆ ಚಂದನವಾಹಿನಿಯಲ್ಲಿ ಪ್ರಸಾರವಾದ ’ವೇದ’ಗಳ ಕುರಿತಾದ ’ಹೊಸಬೆಳಕು’ ಕಾರ್ಯಕ್ರಮದಲ್ಲಿ, ಮಾನ್ಯ ಶ್ರೀ ಸುಧಾಕರ ಶರ್ಮಾ ಅವರು)

    ReplyDelete
    Replies
    1. Glany Fernandes ಉತ್ತಮ ಮಾಹಿತಿಗೆ ಧನ್ಯವಾದಗಳು...ಯಜ್ನ ಯಾಗಗಳಿಂದ ಭಗವಂತ ಒಲಿಯಬೇಕು, ಭಗವಂತನಿಗೆ ಬೇಕಿರುವುದು ಪ್ರೀತಿಯ, ಮಮತೆಯ, ವಾತ್ಲಲ್ಯದ ಹ್ರದಯ

      Delete
  7. ಈ ಮೇಲಿನ ಅಶ್ವಮೇಧ ಯಾಗದ ಅಹಿಂಸೆಯ ಬಗೆಗಿನ ಲೇಖನವನ್ನು ಬರೆದಿರುವ ಶ್ರೀಧರ್ ರವರೆ...
    ನೀವು ಕೆಲವು ವಿಷಯಗಳನ್ನು ಗಮನಿಸಬೇಕು.
    ನೀವು ಭೇಟಿಯಾದ ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡ ವೇದ ವಿದ್ವಾಂಸರು ಅವಿವೇಕಿ ಚಿಂತಗೆ ಅಂಟಿಕೊಂಡಿದ್ದಾರೆ ಎಂದು ಟೀಕಿಸಿದ್ದೀರಿ.( ಏಕೆಂದರೆ ಅವರು ನಿಮ್ಮ ಚಿಂತನೆಯನ್ನು ಸರಿ ಎಂದು ಒಪ್ಪಿಕೊಂಡಿಲ್ಲ.)
    ನಿಮ್ಮ ಮನಸಿನಲ್ಲಿರುವ ಅಭಿಪ್ರಾಯ ಪರಮ ಸತ್ಯ ಎಂದು ನೀವು ಭಾವಿಸಿರುವ ಹಾಗಿದೆ. ನಿಮ್ಮ ಮಾತುಗಳನ್ನು ಒಪ್ಪದವರೆಲ್ಲ ನಿಮಗೆ ಅವಿವೆಕಿಗಳಾಗಿ ಕಾಣ ಬಹುದು.. ನೀವು ಕೂಡ ಅವರ ಕಣ್ಣಿಗೆ ಹಾಗೆಯೇ ಕಾಣ ಬಹುದು ಅದು ಸಹಜ..
    ನೀವು ವೇದವು ವೇದವು ಅಹಿಂಸೆಯನ್ನು ಪ್ರತಿಪಾದಿಸುತ್ತದೆ ಎಂದು ಕೆಲ ಮಂತ್ರಗಳ ಅಧಾರ ಕೊಟ್ಟಿರುತ್ತೀರಿ..
    ನಾನು ವೇದವು ಹಿಂಸೆಯನ್ನೇ ಪ್ರತಿಪಾದಿಸುತ್ತದೆ ಎಂದು ಅದಕ್ಕೆ ಕೆಲವು ಮಂತ್ರಗಳನ್ನು ಅಧಾರ ಕೊಡುತ್ತೇನೆ..ಏನು ಹೇಳುತ್ತೆರೀರಿ...? ವೇದಗಳಲ್ಲಿಯೇ ಕೆಲ ಭಾಗಳಲಿ ಹೇಳಿದ ವಿಷಯದ ವಿರೋಧ ಮತ್ತೊಂದು ಭಾಗದಲ್ಲಿ ಕಂಡು ಬರುವುದನ್ನು ನೀವು ಗಮನಿಸಿದ್ದೀರಾ...? ಮತ್ತು ನೀವು ನೇರವಾಗಿ ವೇದವನ್ನು ತಿಳಿದವರಲ್ಲ.. ಯಾರೋ ಮಾಡುವ ಪ್ರವಚನಗಳನ್ನು ಕೇಳಿ ಮತ್ತು ಪುಸ್ತಗಳನ್ನು ಓದಿ ಅದರಿಂದ ಪ್ರಭಾವಿತರಾಗಿ ಒಂದು ಅಭಿಪ್ರಾಯಕ್ಕೆ ಬಂದಿದ್ದೀರಿ. ಆ ನಿಮ್ಮ ಅಭಿಪ್ರಾಯಕ್ಕೆ ಧಕ್ಕೆ ಮಾಡುವವರೆಲ್ಲ ಅವಿವೆಕಿಗಳಾಗಿ ಕಾಣುತ್ತಿದ್ದಾರೆ. ವೇದದ ತುಂಡು ತುಂಡು ಭಾಗಗಳನ್ನು ಉಪಯೋಗಿಸಿಕೊಂಡು ಏನು ಬೇಕಾದರೂ ವಾದಿಸಬಹುದು. "ಕತ್ತೆ"ಯನ್ನು "ಕುದುರೆ"ಯೆಂದು ಸಾಬೀತು ಮಾಡಬಹುದು.. ನೀವು ನೀಡುವ ಆಧಾರಗಳು ಹಾಗೆಯೇ ಇವೆ. ಅದೇ ವೇದ ಅದೇ ಅಧ್ಯಾಯ ಮತ್ತೊಂದು ಮಂತ್ರವನ್ನು ತೆಗೆದು ಅದರ ಅರ್ಥ ಹೀಗೇ ಎಂದು ಅದೇ ಆಧಾರವನ್ನು ತಲೆಕೆಳಗೆ ಮಾಡಿ ಹಾಕಬಹುದು.. ಇದೆಲ್ಲ ತರ್ಕ ತಿಳಿದವರು ಮಾಡುವ ಕೆಲಸಗಳು. ತರ್ಕ ಚೆನ್ನಾಗಿ ತಿಳಿದವರು ತಮಗೆ ಅನುಕೂಲವಾಗುವ ಮತ್ತು ತಮ್ಮ ವಾದಕ್ಕೆ ಹೊಂದುವ ಮಂತ್ರಭಾಗಗಳನ್ನು ಎತ್ತಿ ಉದಾಹರಿಸುತ್ತಾರೆ. ಕೆಲ ಸಾರಿ ಅವುಗಳ ಅರ್ಥವನ್ನು ತಮ್ಮ ವಾದಕ್ಕೆ ತಕ್ಕಂತೆ ತಿರುಚಿಕೊಳ್ಳುತ್ತಾರೆ. ನೀವು ಉದಾಹರಿಸಿರುವ ಬ್ರಾಹ್ಮಣಾಸ: ಸೋಮಿನೋ ವಾಚಮಕ್ರತ ಈ ಮಂತ್ರದಲ್ಲಿ ಅಧ್ವರ್ಯವೋ ಘರ್ಮಿಣ: ಎಂಬ ವಾಕ್ಯದಲ್ಲಿ "ಅಧ್ವರ್ಯವಃ" ಎಂಬ ಶಬ್ದಕ್ಕೆ ನೀವು ನೀಡಿರುವ ಅರ್ಥ ಅಧ್ವರ್ಯವ: = ಅಹಿಂಸಕರೂ ಎಂದು.. ಆದರೆ ದಯಮಾಡಿ ಸಾಯಣಾಚಾರ್ಯರು ಬರೆದ ಋಗ್ವೇದ ಭಾಷ್ಯ ಮತ್ತು "ನಿರುಕ್ತ" ಗ್ರಂಥದ ಆಧಾರದ ಮೇಲೆ ಮತ್ತು "ಮೀಮಾಂಸಾ ಶಾಸ್ತ್ರ" ದ ಅನುಸಾರ ಈ ಶಬ್ದದ ಅರ್ಥ ನೋಡಿ. (ಇದು ವೇದದ ಅರ್ಥ ತಿಳಿಯುವ ಸರಿಯಾದ ಕ್ರಮ ) ಅಧ್ವರ್ಯವಃ ಅಂದರೆ ಅಹಿಂಸಕರು ಎಂಬ ಅರ್ಥ ಇಲ್ಲ.
    ಇದೆ ರೀತಿ "ಯಜಮಾಸ್ಯ ಪಶೂನ್ ಪಾಹಿ" ಎಂಬ ವಾಕ್ಯದ ಅರ್ಥ ಕೂಡ ತುಂಬಾ ಬಾಲೀಶವಾಗಿ ನೀಡಿದ್ದೀರಿ. "ಯಜಮಾನನ ಪಶುಗಳನ್ನು ರಕ್ಷಿಸು" ಎಂದು ಇಂದ್ರನಲ್ಲಿ ಬ್ರಮ್ಹಣರು ಪ್ರಾರ್ಥಿಸುವ ಮಂತ್ರ ಅದು. ಅದರ ಅರ್ಥ ಪಶುಗಳನ್ನು ಕೊಲ್ಲಬಾರದು ಎಂದು ಅಲ್ಲ. ಯಜಮಾನನ ಮನೆಯಲ್ಲಿ ಕುದುರೆ, ಕೋಳಿ..ಹಸು ಎಮ್ಮೆ ಎತ್ತು ಮುಂತಾದ ಪಶುಸಂಪತ್ತು ಇರುತ್ತದೆ.. ಅವುಗಳನ್ನು ವಿವಿಧ ರೋಗಬಾಧೆಗಳಿಂದ ರಕ್ಷಿಸು ಎಂಬ ಆಶಯ ಅದರ ಹಿಂದೆ ಇದೆ.

    ReplyDelete
  8. ಯಜ್ಞದಲ್ಲಿ ಪಶುಬಲಿ ಯಾವುದೇ ತಪ್ಪು ಕಲ್ಪನೆಯಿಂದ ಚಾಲ್ತಿಗೆ ಬಂದದ್ದಲ್ಲ. ನಾನು ಇದಕ್ಕೆ ಅಧಾರ ಕೊಡಲು ಹೋಗುವುದಿಲ್ಲ. ಏಕೆಂದರೆ.. ಅದಕ್ಕೆ ವಿರುದ್ಧವಾದ ಮತ್ತೊಂದು ಅಧಾರ ಸಿದ್ಧವಾಗಿರುತ್ತದೆ. ಸಂಸ್ಕೃತ ಭಾಷೆ ಅಷ್ಟೊಂದು ವಿಶಾಲವಾದ ಭಾಷಾ ಸಂಪತ್ತನ್ನು ಸಾಹಿತ್ಯವನ್ನೂ ಹೊಂದಿದೆ. ಇಂತಹ ವಿಷಯಗಳನ್ನೆಲ್ಲ... ಸಾಮಾನ್ಯ ಗ್ರಹಿಕೆಯಿಂದ ನಾವೀನಾವೇ ಆಲೋಚಿಸಬೇಕು.. "ಅವರು ಹೀಗೇ ಹೇಳಿದರು" ... "ಇವರು ಹೀಗೇ ಹೇಳಿದರು" ಎಂದು ಬೇರೆಯವರ ಅಭಿಪ್ರಾಯಗಳ, ಪ್ರವಚನಗಳ ಆಧಾರದ ಮೇಲೆ ನಮ್ಮ ಚಿಂತನೆ ನಿಲ್ಲ ಬಾರದು. ವೇದ ಕಾಲದಲ್ಲಿ ಪ್ರಾಣಿವಧೆ ಒಂದು ಸಾಮಾನ್ಯ ಸಂಗತಿಯಾಗಿತ್ತು.. ಇಂದಿನ ನಮ್ಮ ಬದಲಾದ ಕಾಲಮಾನಕ್ಕೆ ಮತ್ತು ಜೀವನವಿಧಾನಕ್ಕೆ ಅದೊಂದು ಹೇಯ ಕೃತ್ಯವಾಗಿ ಕಾಣಬಹುದು, ನಾವು ಕಾಲಚಕ್ರದಲ್ಲಿ ಹಿಂದಕ್ಕೆ ಪ್ರಯಾಣ ಮಾಡಿ ಅಂದಿನ ವೇದ ಕಾಲೀನ ಜೀವನ ವಿಧಾನ ...ಸ್ಥಿತಿಗತಿಗಳ ಪರಿಕಲ್ಪನೆ ನಮ್ಮ ಮನಸಿಗೆ ಬಂದರೆ ..ಎಲ್ಲ ವಿವರ ನಮ್ಮ ಮನಸಿನಲ್ಲಿ ಸಿಗುತ್ತದೆ.

    ಕೆಲವೊಂದು ಉದಾಹರಣೆ ಕೇಳಿ
    ೧, ಅಂದಿನ ಕಾಲದಲ್ಲಿ ಸ್ತ್ರೀಯರಿಗೆ ಉಪನಯನ ಮಾಡುತ್ತಿದ್ದರು
    ೨, ಶ್ರಾದ್ಧದಲ್ಲಿ ಮಾಂಸಾಹಾರದ ಅಡಿಗೆ ಮಾಡಿಸುತ್ತಿದ್ದರು. ( ಶ್ರೀರಾಮ ದಶರಥನ ಶ್ರಾದ್ಧಕ್ಕೆ ಒಳ್ಳೆ ಜಾತಿಯ ಹಸುಗಳನ್ನು ಕೊಲ್ಲಿಸಿ ಬ್ರಾಮ್ಹನರಿಗೆ ಊಟ ಬಡಿಸಿದ್ದ. ಇದು ವಾಲ್ಮೀಕಿ ಬರೆದದ್ದು - ಯಾರೋ ಅನಾಮಧೇಯ ಹೇಳಿದ್ದಲ್ಲ.)
    ೩, ವಾತಾಪಿ ಎಂಬುವನು ತನ್ನ ಸಹೋದರ ಇಲ್ವಲನ ಜೊತೆ ಸೇರಿ ಬ್ರಾಮ್ಹನರ ವಧೆ ಮಾಡುತ್ತಿದ್ದ. ಇಲ್ವನ ಅತಿಥಿಯನ್ನು ಒಳಗೆ ಕರೆಯುತ್ತಿದ್ದ. ವಾತಾಪಿ ಮೇಕೆಯ ವೇಷವನ್ನು ಧಾರಣೆ ಮಾಡುತ್ತಿದ್ದ. ಆ ಮೇಕೆಯನ್ನು ಕಡಿದು ಭೋಜನ ಸಿದ್ಧ ಮಾಡಿ ಅತಿಥಿಗೆ ಬಡಿಸಿ ಅವನು ಊಟ ಮಾಡಿದ ಮೇಲೆ ಇಲ್ವಲನು "ವಾತಾಪಿ ಹೊರಗೆ ಬಾ" ಎಂದು ಕರೆಯುತ್ತಿದ್ದ. ಆಗ ವಾತಾಪಿ ಅತಿಥಿಯಾ ಹೊಟ್ಟೆ ಸೀಳಿಕೊಂಡು ಹೊರಗೆ ಬರುತ್ತಿದ್ದ. ಈ ವಿಷಯ ತಿಳಿದ ಅಗಸ್ತ್ಯ ಮುನಿಯು ಅವರ ಮನೆಗೆ ಊಟಕ್ಕೆ ಹೋದರೆ ಎಂದಿನಂತೆಯೇ ನಡೆಯಿತು .. ಆದರೆ ಊಟ ಮೊಗುದ ಕೂಡಲೇ.. ಅಗಸ್ತ್ಯರು " ವಾತಾಪಿ ಜೀರ್ನೋ ಭವ" ಎಂದು ಹೇಳಿದ ಕೂಡಲೇ... ವಾತಾಪಿ ಹೊಟ್ಟೆಯಲ್ಲಿ ಜೀರ್ಣವಾಗಿ ಹೋದ... ಅಲ್ಲಿ ಅಗ್ಗಸ್ತ್ಯರು ಊಟ ಮಾಡಿದ್ದು ಮೇಕೆ ಮಾಂಸವನ್ನು.. ಈ ಕಥೆ ಚಂದಮಾಮ ಪುಸ್ತಕದಲ್ಲಿ ಕೂಡ ಬಂದಿದೆ. ಎಲ್ಲರಿಗೂ ಗೊತ್ತಿದೆ. ಈಗಲೂ ಪ್ರತಿದಿನ ಊಟ ಆದ ಕೂಡಲೇ "ವಾತಾಪಿ ಜೀರ್ನೋ ಭವ" ಎಂದು ಹೇಳುವ ರೂಢಿ ಚಾಲ್ತಿಯಲ್ಲಿದೆ.
    ಇಷ್ಟು ಸಾಕು....ಅಂದುಕೊಳ್ಳುತ್ತೇನೆ...
    ಮಾಂಸಾಹಾರ... ಪಶುಬಲಿ...ಮುಂತಾದವುಗಳು.....ಅಗಸ್ತ್ಯ..... ರಾಮ... ವಿಶ್ವಾಮಿತ್ರ ಮುಂತಾದರ ಜೀವನದಲ್ಲಿ ...ನಮ್ಮ ವೈದಿಕ ಇತಿಹಾಸದಲ್ಲಿ ... ಎಷ್ಟು ಸಾಮಾನ್ಯ ಎಂಬುದನ್ನು ತಿಳಿಸಲಿಕ್ಕೆ. ಇಂದಿನ ಕಾಲದಲ್ಲಿ ಪ್ರಾಣಿಬಲಿ ಬೇಡ ಎಂದು ಹೇಳಿ... ಅದು ನ್ಯಾಯವಾಗಿರುತ್ತದೆ. ಆದರೆ ವೇದದಲ್ಲಿ ಅಹಿಂಸೆ ಹೇಳಿದೆ ಎಂದು ಯಾರದೂ ಮಾತು ಕೇಳಿಕೊಂಡು ...ಯಾವುದೂ ಮಂತ್ರದ ತುಂಡನ್ನು ಉದಾಹರಣೆ ಕೊಡಬೇಡಿ...
    ಈ ಅಲ್ಪನ ಬಗ್ಗೆ ಕ್ಷಮೆ ಇರಲಿ...
    ನನಗೆ ಅನಿಸಿದ್ದನ್ನು ನಾನು ಹೇಳಿದ್ದೇನೆ.
    ನಮಸ್ಕಾರ

    ReplyDelete
  9. ಮಾನ್ಯ ದತ್ತಾತ್ರೇಯರವರೆ,

    ನಾನು ವೇದಾಧ್ಯಯನ ಮಾಡಿದವನೂ ಅಲ್ಲ. ತಮ್ಮಷ್ಟು ಸಂಸ್ಕೃತ ಪಾಂಡಿತ್ಯವೂ ನನಗಿಲ್ಲ..ತೀರಾ ಸಾಮಾನ್ಯ ವ್ಯಕ್ತಿಯಾಗಿ ನನ್ನಚಿಂತನೆ ಯನ್ನು ತಮ್ಮ ಮುಂದಿಡುತ್ತೇನೆ.

    ೧. ವೇದಗಳು ಪುರಾಣಗಳಿಗಿಂತಲೂ ಪ್ರಾಚೀನವಾದುದು. ಆದುದರಿಂದ ವೇದಗಳ ಉಲ್ಲೇಖ ಪುರಾಣಗಳಲ್ಲಿದೆ. ಆದರೆ ಪುರಾಣಗಳ ಉಲ್ಲೇಖ ವೇದಗಳಲ್ಲಿ ಇರಲು ಸಾಧ್ಯವಿಲ್ಲ. ಪುರಾಣಗಳಲ್ಲಿ ವೇದಗಳನ್ನು ತಿರುಚಿರುವ ಸಾಧ್ಯತೆಗಳಿವೆ. ಆದುದರಿಂದ ವೇದಗಳಿಗೆ ಪುರಾಣಗಳ ಸಮರ್ಥನೆ ಸರಿಯೆನಿಸುವುದಿಲ್ಲ...

    ೨. ಯಜ್ಝ ಅಂದರೆ ’ಅಧ್ವರ’ ಅಹಿಂಸೆ ಎಂಬ ಅರ್ಥವಿದೆಯೆಂದು ನಮ್ಮಂತಹವರಿಗೆ ತಿಳಿದವರು ಹೇಳಿದ, ಓದಿದ ನೆನಪು. ಪ್ರಾಣಿಬಲಿ ಎಂದರೆ ಹಿಂಸೆ, ಹಿಂಸೆಯೆಂಬುದನ್ನು ಮಾನವ ಧರ್ಮ ಎಂದು ತಾವು ಒಪ್ಪುವುದಾದರೆ ಅದು ನಮ್ಮೆಲ್ಲರ ದೌರ್ಭಾಗ್ಯ.

    ೩. ಪ್ರಾಣಿಬಲಿ ಎಂಬುದು ಮೂಢನಂಬಿಕೆ. ಅದನ್ನು ತಡೆಗಟ್ಟಲು ಸರಕಾರವೇ ಕಾನೂನು ರೂಪಿಸಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದುದರಿಂದ ತಮ್ಮ ಬರಹ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೆ. ಇದನ್ನು ತಾವು ಅರಿತುಕೊಳ್ಳಬೇಕು. ವೇದ, ಶಾಸ್ತ್ರಗಳ ವಿಷಯದಲ್ಲಿ ಅಲ್ಪಮತಿಯಾಗಿರುವ ನಮ್ಮಂತಹವರಿಗೆ ಈ ನಂಬಿಕೆಗಳನ್ನು ಆಚರಿಸಲು ಪ್ರೋತ್ಸಾಹಿಸಬೇಡಿ ಎಂದು ಕಳಕಳಿಯ ಪ್ರಾರ್ಥನೆ...

    ReplyDelete
    Replies
    1. ವಸಂತ್ ರವರೆ..ನಾನು ಪ್ರಾಣಿಬಲಿ .. ನಡೆಯಲಿ ..ಮಾಡಿ ಎಂದು ನನ್ನ ಪ್ರತಿಕ್ರಿಯೆಯಲ್ಲಿ ಎಲ್ಲೂ ನಾನು ಹೇಳಿಲ್ಲ. ಪ್ರಾಣಿಬಲಿಯನ್ನು ನಾನು ವಿರೋಧಿಸುತ್ತೇನೆ. ಆದರೆ ಯಜ್ಞದಲ್ಲಿ ಪಶುವನ್ನು ಕೊಲ್ಲುವ ವಿಧಾನ ತಪ್ಪು ಕಲ್ಪನೆಯಿಂದ ಪ್ರಾರಂಭವಾದದ್ದು.. ಮತ್ತು ವೇದಗಳಲ್ಲಿ ಹಾಗೆ ಹೇಳಿಯೇ ಇಲ್ಲ ಎಂದು ವಾದಿಸಿದ ಶ್ರೀಧರ್ ರವರಿಗೆ ಉತ್ತರ ಕೊಟ್ಟಿದ್ದೇನೆ. ಅವರ ವಾದ ತಪ್ಪು ಎಂದು. ಹಿಂಸೆಯನ್ನು ಮಾನವ ಧರ್ಮ ಎಂದು ನಾನು ಹೇಳುವುದಿಲ್ಲ .. ಹೇಳಿಯೂ ಇಲ್ಲ.
      "ಪ್ರಾಣಿಬಲಿ ಎಂಬುದು ಮೂಢನಂಬಿಕೆ. ಅದನ್ನು ತಡೆಗಟ್ಟಲು ಸರಕಾರವೇ ಕಾನೂನು ರೂಪಿಸಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ". ಎಂಬ ಈ ನಿಮ್ಮ ಮಾತಿಗೆ ಉತ್ತರ ಏನೆಂದರೆ.. ಸರ್ಕಾರಕ್ಕೂ ವೇದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ...? ಸಾವಿರಾರು ವರ್ಷಗಳ ಕೆಳಗೆ ದೇಶದ ಚಕ್ರವರ್ತಿ ರಾಜರುಗಳು ಮಹರ್ಷಿಗಳ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದ ಯಜ್ಞಗಳಲ್ಲಿ ಪಶುವಧೆ ನಡೆಯುತ್ತಿತ್ತು. ಬಲಿ ಅಲ್ಲ. ( ವಧಿಸಿದ ಪಶುವಿನ ಹೊಟ್ಟೆಯಲ್ಲಿನ "ವಪೆ' ಎಂಬ ಭಾಗವನ್ನು ಮಾತ್ರ... ಯಜ್ಞದಲ್ಲಿ ಆಹುತಿ ಕೊಡಲಾಗುತ್ತದೆ.. ಅದರ ಶವವನ್ನು ಭೂಮಿಯಲ್ಲಿ ಹೂಳಲಾಗುತ್ತದೆ. ಇತ್ತೇಚೆಗೆ ನಡೆಯುವ ಪ್ರಾಣಿಬಲಿ-ನಂತರದ ಭಕ್ಷಣೆ ಅಲ್ಲಿ ನಡೆಯುವುದಿಲ್ಲ.
      ಹಾಗಾದರೆ ಯಜ್ಞ ನಡೆಸಿದ ಚಕ್ರವರ್ತಿಗಳು-- ಮಹರ್ಷಿಗಳು ಮಂತ್ರದ್ರಷ್ಟಾರರು ಅವರು ಕಂಡುಕೊಂಡ ಮಂತ್ರಗಳು (ವೇದಗಳು) ಎಲ್ಲರೂ ಮೂಢನಂಬಿಕೆ ಹೊದಿದ್ದರು ಹಾಗೂ ಇಂದಿನ ಘನಸರ್ಕಾರ ಮಾತ್ರ ವಿವೆಕವಂತ ಎನ್ನುವುದು ನಿಮ್ಮ ಅಭಿಪ್ರಾಯವೇ...? ಕಾನೂನಿಗೂ ವೇದಕ್ಕೂ ಎಲ್ಲಿಂದೆಲ್ಲಿಯ ಸಂಬಂದ ...ವಸಂತ್...?

      ನಾವೆಲ್ಲಾ ಮರೆಯುತ್ತಿರುವ ವಿಷಯ ಏನೆಂದರೆ ಯಜ್ಞದಲ್ಲಿ ಪಶುವನ್ನು ಕೊಲ್ಲುವುದು ಅದನ್ನು ಮನುಷ್ಯರು ತಿನ್ನುವುದಕ್ಕಾಗಿ ಅಲ್ಲ. ( ಮಾರಮ್ಮನ ಜಾತ್ರೆ..ಮುಂತಾದ ಅನೇಕ ಗ್ರಾಮೀಣ ಆಚರಣೆಗಳಲ್ಲಿ ಮನುಷ್ಯರು ತಾವು ತಿನ್ನಲಿಕ್ಕಾಗಿ ಪಶುಗಳನ್ನು ಕೊಲ್ಲುತ್ತಾರೆ ಮತ್ತು ತಿನ್ನುವ ಮೊದಲು ದೇವರಿಗೆ ಸಮರ್ಪಿಸಿದ್ದೆವೆಂದು ಭಾವಿಸಿತ್ತಾರೆ- ಈ ರೀತಿಯ ಪಶುಬಲಿ ನಿಷೇಧಕ್ಕೆ ಒಳಗಾಗಿದೆ.) ಆದರೆ ಯಜ್ಞದಲ್ಲಿ ಕಡಿದ ಪಶುವನ್ನು ಯಾರೂ ತಿನ್ನುವುದಿಲ್ಲ. ಗಮನಿಸಿ. ತಿನ್ನುವ ಆಸೆಯಿಂದ ಹುಟ್ಟಿಕೊಂಡ ಗ್ರಾಮೀಣ ಮೂಢ ನಂಬಿಕೆಯ ಆಚರಣೆ ಇದಲ್ಲ. ಇದು ವೇದ ಪ್ರತಿಪಾದಿತ ಯಜ್ಞದ ಪ್ರಮುಖ ಘಟ್ಟ. ಅಂತಹ ಯಜ್ಞದ ವಿಧಾನವೇ ತಪ್ಪು ಎಂದು ನೀವು ಹೇಳುವುದಾದರೆ ವೇದವೇ ತಪ್ಪು ಎಂದಾಯಿತು.

      ಸರ್ಕಾರ ನಡೆಯುದು ಹೇಗೆ...? ಸಂವಿಧಾನದ ಪ್ರಕಾರ. ಅಲ್ಲವೇ...? ಸಂವಿಧಾನ ಬರೆದದ್ದು ಯಾರು...? ಅಂಬೇಡ್ಕರ್...
      ಅಂಬೇಡ್ಕರ್ ಏನಾಗಿದ್ದರು ಗೊತ್ತೇ...? ಬೌದ್ಧ ಧರ್ಮೀಯರು.... ಅವರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಪರಿವರ್ತನೆಗೊಂಡವರು... ಯಾಕೆ ಪರಿವರ್ತನೆಗೊಂಡರು...? ಮತ್ತು ಬೌದ್ಧ ಧರ್ಮ ಹೇಗೆ ಪ್ರಾರಂಭವಾಯಿತು...? ಅದರ ಮೂಲ...ತತ್ವ ಏನು ಎಂಬುದು ಎಲ್ಲರಿಗೂ ಗೊತ್ತು...
      ವೇದ ಧರ್ಮವನ್ನು ವಿರೋಧಿಸಿಯೇ ಬೌಧ್ಧ ಧರ್ಮ ಬೆಳೆದದ್ದು. ಮತ್ತು ವಿರೋಧಿಸಲಿಕ್ಕಾಗಿಯೇ ಹುಟ್ಟಿಕೊಂಡದ್ದು.. ಶೂನ್ಯವಾದ ಅದರ ಮೂಲ ತತ್ವ... ವೈದಿಕ ಆಚರಣೆಯಲ್ಲಿ... ಯಜ್ಞ ಇದೆ.. ಯಜ್ಞದಲ್ಲಿ ಪಶುಬಲಿ ಇದೆ. ಅದು ತಪ್ಪು.... ಅಹಿಂಸೆಯೇ ಪರಮ ಧರ್ಮ...ಎನ್ನುವ ಚಿಂತನೆಯೊಂದಿಗೆ ಪ್ರಾರಂಭವಾದದ್ದು ಬೌದ್ಧ ಧರ್ಮ.
      ಈ ಬೌದ್ಧರ ಹಾವಳಿ ಅತಿಯಾದಾಗ... ೧೨ ಶತಮಾನದಲ್ಲಿ ಹುಟ್ಟಿದವರೇ ಶಂಕರಾಚಾರ್ಯರು. ಅವರು ಮಾಡಿದ್ದೇನು....? ಬೌದ್ಧ ಮತಪ್ರಚಾರಕರನ್ನು ವಾದಕ್ಕೆ ಎಳೆದು ವಾದದಲ್ಲಿ ಸೋಲಿಸಿ...ದೇಶದಿಂದ ಅಟ್ಟುತ್ತಿದ್ದರು... ಈ ಮೂಲಕ ಬೌದ್ಧ ಧರ್ಮದವರನ್ನು ಓಡಿಸಿ ಮತ್ತೆ ವೈದಿಕ ಆಚರಣೆಗಳನ್ನು... ಭಾಷ್ಯ ರಚನೆಯ ಮೂಲಕ ಸ್ತೋತ್ರ ರಚನೆಯ ಮೂಲಕ ಪ್ರಚಾರ ಪಡಿಸಿದವರು... ಅವರು ಈಶ್ವರನ ಅವತಾರ ಎಂದು ಹೇಳುತ್ತಾರೆ... (ನಾನು ನಂಬುವುದಿಲ್ಲ.) ಸರ್ಕಾರದ ಮಾತನ್ನು ಅದರ ಕಾನೂನನ್ನು ನೀವು ಶಿರೋಧಾರ್ಯ ಎಂದು ಭಾವಿಸುವುದಾದರೆ.. ನೀವು ಬೌದ್ಧ ಧರ್ಮವನ್ನು ಒಪ್ಪಿಕೊಳ್ಳಬೇಕು.. ಮತ್ತು ವೇದ.. ಋಷಿಗಳು... ಶಂಕರಾಚಾರ್ಯರು..ಎಲ್ಲ ಮೂರ್ಖರು ಎಂದು ಒಪ್ಪಿಕೊಳ್ಳಬೇಕು....ಸಾಧ್ಯವೇ...?

      ಬಿಡಿ..ಅಹಿಂಸೆಯೇ ಬೇರೆ... ಯಜ್ಞದ ಚರ್ಚೆಯೇ ಬೇರೆ... ಎರಡನ್ನು ಸೇರಿಸಿ ಗೊಂದಲ ಮಾಡಿಕೊಳ್ಳಬೇಡಿ....
      ಪ್ರತಿದಿನ ಕೋಟ್ಯಂತರ ಪ್ರಾಣಿ ಪಕ್ಷಿಗಳನ್ನು ಆಹಾರಕ್ಕಾಗಿ ಕೊಲೆ ಮಾಡುವ ವಿಷಯದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಒಂದು ಯಜ್ಞ ನಡೆದರೆ ಅದರ ವಿಧಾನವನ್ನೇ ಮೂಢ ನಂಬಿಕೆ....ಪರಂಪರೆಯನ್ನೇ ತಪ್ಪು ಎಂದು ನಾವು ವಾದಿಸಲು ಶುರು ಮಾಡುತ್ತೇವೆ.. ಅದು ದುರಂತ ಅಲ್ಲವೇ...?

      Delete
    2. This comment has been removed by the author.

      Delete
    3. ಕ್ಷಮಿಸಿ...ಶಂಕರರು ಹುಟ್ಟಿದ್ದು ೮ನೆ ಶತಮಾನದಲ್ಲಿ ೧೨ ಅಲ್ಲ.
      ಪಶುವನ್ನು ಕೊಲ್ಲುವುದು ತಪ್ಪೋ ಸರಿಯೋ...ಎನ್ನುವುದು ಬೇರೆ ವಿಚಾರ.
      ಆದರೆ ..ಯಜ್ಞದಲ್ಲಿ ಪಶುಬಲಿ ಇಲ್ಲವೇ ಇಲ್ಲ ...ಅದು ತಪ್ಪು ಆಚರಣೆ... ವೇದದಲ್ಲಿ ಹೇಳಿಯೇ ಇಲ್ಲ. ಎಂದು ವಾದಿಸಬೇಡಿ...
      ಏಕೆಂದರೆ ...ಪಶುಬಲಿ ಯಜ್ಞದಲ್ಲಿ ಇಲ್ಲದೇ ಹೋಗಿದ್ದರೆ... ಬೌದ್ಧರಿಗೆ...ತಮ್ಮ ಧರ್ಮವನ್ನು ಭಾರತದಲ್ಲಿ ..ತರಲು ಸಾಧ್ಯವೇ ಆಗುತ್ತಿರಲಿಲ್ಲ. .. . ಸ್ವಲ್ಪ ಯೋಚಿಸಿ..(ಬೌದ್ಧ ಧರ್ಮ ಎಷ್ಟು ಸರಿ.... ವೈದಿಕ ಧರ್ಮ ಎಷ್ಟು ಸಾಚಾ ಅನ್ನುವು ಬೇರೆಯದೇ ಚರ್ಚೆ.).

      Delete
  10. ಶ್ರೀ ದತ್ತ ರಾಜ್, ನಮಸ್ತೆ. ಈ ವಿಚಾರದಲ್ಲಿ ನಾನೊಬ್ಬ ಕುತೂಹಲಿ ಅಷ್ಟೆ. ಜೊತೆಗೆ ವೇದಸುಧೆಯಲ್ಲಿ ಈ ಬಗೆಗಿನ ಎಲ್ಲಾ ನನ್ನ ಲೇಖನಗಳನ್ನೂ ಮತ್ತು ಇಲ್ಲಿನ ಎಲ್ಲಾ ನೂರು ದಾಟಿದ ಚರ್ಚೆಗಳನ್ನೂ ನೀವು ಸರಿಯಾಗಿ ಗಮನಿಸಿ. ಅದರಂತೆ......1. ನಾನು ವೇದವನ್ನು ಅಧ್ಯಯನ ಮಾಡಿಲ್ಲ. 2. ನನಗೆ ಆಧಾರ ಪಂ. ಸುಧಾಕರ್ ಚತುರ್ವೇದಿಗಳು ಬರೆದಿರುವ " ವೇದೋಕ್ತ ಜೀವನ ಪಥ ಮತ್ತು " ಅದಕ್ಕೆ ಹೊಂದುವ ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳು. 3 .ನಾನು ಈಗಾಗಲೇ ಸ್ಪಷ್ಟ ಪಡಿಸಿರುವೆ. ನಾನೊಬ್ಬ ಅಂಚೆ ಪೇದೆ. ನೀವು ಸತ್ಯ ಹೇಳಿದರೂ ಅದನ್ನು ವೇದಸುಧೆಯಲ್ಲಿ ಪ್ರಕಟಿಸುವೆ. ನನಗೆ ಅಂತಿಮವಾಗಿ ಬೇಕಾಗಿರುವುದು ಸತ್ಯ. ಅದನ್ನು ಓದುಗರು ನಿರ್ಧರಿಸುತ್ತಾರೆ. 4.ನನ್ನ ವಿಚಾರವನ್ನು ಒಪ್ಪದವರು ಅವಿವೇಕಿಗಳು " ಎಂದು ನಾನು ಬರೆದಿದ್ದರೆ ಅದಕ್ಕೆ ಕ್ಶಮೆ ಕೋರುವೆ. ನಾನು ಹಿಂದಿನ ಎಲ್ಲಾ ಚರ್ಚೆಗಲನ್ನೂ ಮತ್ತೊಮ್ಮೆ ಪರಾಮರ್ಶಿಸಲು ಹೋಗುವುದಿಲ್ಲ. 5. ನಾನು ಸುಧಾಕರಶರ್ಮರಿಗೆ ವೇದಸುಧೆಯಲ್ಲಿ ಹಾಕಿರುವ ಪ್ರಶ್ನೆಗಳನ್ನು ನೀವು ದಯಮಾಡಿ ಗಮನಿಸಿ," ನಿಮ್ಮ ವಿಚಾರಗಳನ್ನೇ ಏಕೆ ಒಪ್ಪಬೇಕು? ಅದರ ಅರ್ಥ ಹೀಗೂ ಆಗಿರಬಹುದಲ್ಲವೇ? ಎಂಬ ನನ್ನ ಒತ್ತನ್ನು ನೀವು ಗಮನಿಸಬೇಕು. 6. ನನ್ನ ದೃಷ್ಟಿಯಲ್ಲಿ ಸತ್ಯ ಎಂಬುದು ನಿಮಗೂ, ನನಗೂ, ಎಲ್ಲರಿಗೂ ಒಂದೇ ಆಗಿರಬೇಕು. ಅದು ಯಾವುದು ಎಂಬುದೇ ಇಲ್ಲಿ ಚರ್ಚೆಗೆ ಒಲಗಾಗಿರುವ ವಿಷಯ.7.ಅಂತಿಮವಾಗಿ ವೇದಾಧ್ಯಯನ ಎಂದರೇನು? ಎಂಬುದನ್ನೂ ಕೂದ ತಿಳಿದು ಕೊಳ್ಲಬೇಕಲ್ಲವೇ? ಕೇವಲ ವೇದಮಂತ್ರಗಳನ್ನು ಕಲಿಯುವುದು ವೇದಾಧ್ಯಯನವೇ? ಯಾವುದೋ ಒಂದು ಶಾಖೆಯನ್ನು ಅಧ್ಯಯನ ಮಾಡುವುದು ವೇದಾಧ್ಯಯನವೇ? ಇದರ ವಿವರಣೆ ಕಷ್ತ ವಾದೀತು. ನಾನೊಬ್ಬ ಸಾಮಾನ್ಯ ವ್ಯಕ್ತಿ. ವೇದಾಧ್ಯಾಯೀಯೂ ಅಲ್ಲ, ವೇ.ಬ್ರ.ಶ್ರೀ ಮೊದಲೇ ಅಲ್ಲ. ಆದರೆ ವೇದವನ್ನು ಗೌರವುಸುವ ವ್ಯಕ್ತಿ. ಮತ್ತು ಸಾಮಾನ್ಯರಿಗೂ ನಿಮ್ಮಂತವರಿಂದ ವಿಷಯ ತಿಳಿದು ವೇದ ಪ್ರಚಾರ ಮಾದ ಬೇಕೆಂಬ ಆಸಕ್ತಿ ಹೊಂದಿರುವ ವ್ಯಕ್ತಿ. 8. ದಯಮಾಡಿ ಸಂಬಮ್ಧಿಸಿದ ಎಲ್ಲಾ ಲೇಖನಗಳ ನ್ನೂ ಪೂರ್ಣ ಓದಿ ನಂತರ ನಿಮ್ಮ ವಿವರವಾದ ಉತ್ತರವನ್ನು ನೀಡಿ.

    ReplyDelete
  11. This comment has been removed by the author.

    ReplyDelete
  12. ಆತ್ಮೀಯರೇ,
    ಈಗ್ಗೆ ನಡೆಸಲಾದ ಸಾಂಕೇತಿಕ ಅಶ್ವಮೇಧ ಯಜ್ಞದ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ಬಂದವು. ನಂತರ ವೇದಗಳಲ್ಲಿ ಪ್ರಾಣಿ ಬಲಿ ಇದೆಯೇ ಇಲ್ಲವೇ? ಎಂಬ ಚಿಂತನೆ ಮಂಥನವಾಯಿತು. ಇಲ್ಲಿ ನಿಜವಾಗಿ ಪ್ರಶ್ನೆ ಮಾಡಬೇಕಾಗಿರುವುದು ಏನೆಂದರೆ ಪ್ರಾಣಿಹಿಂಸೆ ಯಾಗದಲ್ಲಿ ಬೇಕೇ ಬೇಡವೇ? ಇದ್ದರೆ ಏಕೆ ಬೇಕು? ಬೇಡವಾದರೆ ಏಕೆ ಬೇಡ? ಎಂಬುದಾಗಬೇಕಾಗಿತ್ತು. ಆದರೆ, ವೇದದಲ್ಲಿ ಪ್ರಾಣಿಹಿಂಸೆ ಬಗ್ಗೆ ಏನು ಹೇಳಿದೆ ?ಎಂಬುದಾಗಿದೆ. ನನ್ನ ಪ್ರಶ್ನೆ ಇಷ್ಟೇ. ಈ ವಿಚಾರದಲ್ಲಿ ವೇದವನ್ನೇಕೆ ಎಳೆದು ತರುತ್ತಿರಿ? ವೇದದಲ್ಲಿ ಏನಾದರು ಹೇಳಿರಲಿ, ಬಿಟ್ಟಿರಲಿ ಅದು ಇಲ್ಲಿ ಹೇಗೆ ಪ್ರಸ್ತುತ?
    ಈ ಬಗ್ಗೆ ಪ್ರಶ್ನೆ ಮಾಡುವ ಮುಂಚೆ ವೇದದಲ್ಲಿ ಹೇಳಿರಬಹುದಾದ ಎಲ್ಲವನ್ನು ನಾವು ಪ್ರಶ್ನಿಸುವ, ಪಾಲಿಸುವ ಸಂಕಲ್ಪವಿದ್ದಲ್ಲಿ ಖಂಡಿತ ಪ್ರಶ್ನೆ ಮಾಡೋಣ. ಅದರಂತೆ ಪಾಲಿಸೋಣ. ಆದರೆ ಇಲ್ಲಿ ಕೇವಲ ಯಾವುದೊ ಒಂದು ಆಚರಣೆಗೆ ಮಾತ್ರ ಸೀಮಿತ ಮಾಡಿ ರಬ್ಬರಿನಂತೆ ಎಳೆಯುವುದರಿಂದಹೆಚ್ಚಿನ ಪ್ರಯೋಜನವೇನು ಸಿಗದು . ಏಕೆಂದರೆ ವೇದದಲ್ಲಿ ಹೇಳಿರುವ ಹೆಚ್ಚಿನ ಆಚರಣೆಗಳು ಇಂತಹ ಯಾಗ ಯಜ್ಞಗಳಲ್ಲಿ ನಡೆಯುವುದಿಲ್ಲ. ಪ್ರಶ್ನಿಸುವುದೇ ಆದರೆ ಎಲ್ಲವನ್ನು ಪ್ರಶ್ನಿಸಿ. ವೇದಗಳಲ್ಲಿ ಹೇಳಿರುವ ಎಲ್ಲವನ್ನು ಈ ಲೌಕಿಕ ಜಗತ್ತಿನಲ್ಲಿ ಪಾಲಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೂ ಕಾಲಮಾನ ಪರಿಸ್ಥಿತಿಗೆ ತಕ್ಕಂತೆ ಎಷ್ಟು ಸಾಧ್ಯವೋ ಅಷ್ಟನ್ನು ಇಂದಿಗೂ ನಿರ್ಮಲವಾದ ಮನಸ್ಸಿನಿಂದ ಅವರವರ ನಂಬುಗೆಗೆ ತಕ್ಕಂತೆ ಆಚರಿಸಿಕೊಂಡು ಬರುತ್ತಿದ್ದಾರೆ. ಒಳ್ಳೆಯದನ್ನು ಆಚರಣೆಗೆ ತರುವ ಸಂಕಲ್ಪ ಮಾಡಿದರೆ ಕೆಟ್ಟ ಆಚರಣೆಗಳು ತನ್ನ ತನ ಕಳೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಇಲ್ಲಿ ಒಳ್ಳೆಯದು ಎನ್ನುವುದು ಸಾಪೆಕ್ಷ್ಯವಾದರೂ, ಒಳ್ಳೆಯದನ್ನು ಅನುಭವದ ಆಧಾರದಲ್ಲಿ ಸಾಧಿಸಬಹುದಾಗಿದೆ. ಇದಕ್ಕೆ ನಾವು ಮಾಡುವ ದೃಡ ಸಂಕಲ್ಪವೇ ಸಹಕಾರಿ. ವೇದಗಳು ಬದುಕಿನ ದಾರಿ ತೋರಿಸುವ ದಾರಿ ದೀಪ ಎಂದು ನಂಬಿರುವ ಮಂದಿಗೆ ಗೊಂದಲವಾಗುವುದು ಬೇಡ. ಏಕೆಂದರೆ, ವೇದವನ್ನು ಸಮಗ್ರವಾಗಿ ಚಿಂತನೆ ಮಾಡಿದವರು ಈ ಬಗ್ಗೆ ತಲೆ ಕೊಳ್ಳುವುದಿಲ್ಲ. ಪಾಮರರಾದ ನಮನ್ನು ಗೊಂದಲಗಳ ಗೋಜಲಿಗೆ ತಳ್ಳುವುದು ಖಂಡಿತ ಅನಪೇಕ್ಷಿತ. ವೇದಸುಧೆಯಲ್ಲಿ ನಮಗೆ ಸಿಗುತ್ತಿರುವ ಸುಧೆ ನಿರಂತರವಾಗಿ ಸಿಗುತ್ತಲೇ ಇರಲಿ. ಇದು ನನ್ನ ಕಳಕಳಿಯ ಮನವಿ.

    ಹೆಚ್ ಏನ್ ಪ್ರಕಾಶ್

    ReplyDelete
  13. ಶ್ರೀ ಹೆಚ್ ಎನ್ ಪ್ರಕಾಶರ ಆಲೋಚನೆಗಳು ಸ್ವಲಪ್ ಮಟ್ಟಿಗೆ ಸರಿಯೇನೋ ಅನಿಸುತ್ತದೆ.........ವೈದಿಕ ಧರ್ಮಾಚರಣೆ ಇಂದಿಗೆ ಸಂಪೂರ್ಣ ಸಾಧ್ಯವಾಗಲಿಕ್ಕಿಲ್ಲ.
    ಗಮನಿಸಬೆಕಾದ ಒಂದು ಅಂಶವಿದೆ..........
    ಅದೆಂದರೆ:
    ವೇದಗಳಲ್ಲಿ ಹೇಳಿದ ವಿಚಾರಗಳನ್ನು ಪೂರ್ಣವಾಗಿ ಅರ್ಥೈಸಿಕೊಳ್ಳುವುದು ನಮಗೆ ಕಷ್ಟವಾದಾಗ - ಅದರ ಸುಲಭ ರೂಪವಾಗಿ ಉಪನಿಷತ್ತುಗಳು - ಅದನ್ನೂ ಅರ್ಥೈಸಿಕೊಳ್ಳುವುದು ನಮಗೆ ಕಷ್ಟವಾದಾಗ - ಭಗವದ್ಗೀತೆಯೂ ಅವತರಿಸಿರಬೇಕು.

    ಮತ್ತು ವೇದೋಕ್ತ ವಿಚಾರಗಳ ಆಚರಣೆಯನ್ನು ಸುಲಭವಾಗಿ ಅನುಸರಿಸಲು ಪೂರಕವಾಗಿ/ಉದಾಹರಣೆಯಾಗಿ ಪುರಾಣೇತಿಹಾಸಗಳು
    ರಚಿತವಾಗಿರಬಹುದು.......

    ಮತ್ತು ಜನಜೀವನವು/ಜನಸಂಖ್ಯೆಯು - ವ್ಯಾಪಕತೆಯನ್ನು/ಹೆಚ್ಚಳವನ್ನು ಸಾಧಿಸಿದಾಗ ಗತ್ಯಂತರವಿಲ್ಲದೇ ಅನ್ಯಾನ್ಯ ಪ್ರದೇಶಗಳಲ್ಲಿ ನೆಲೆಸಿ ಜೀವಿಸುವ ಪರಿಪಾಠ ಅನಿವಾರ್ಯವಾದಾಗ ಇಲ್ಲವೇ ಆಚರಣೆಗಳು (ಬಹುಷ:) ಶಿಥಿಲವಾದಾಗ ಸ್ಮೃತಿಗಳೂ ಬಂದಿರಬೇಕು..

    ಅಲ್ಲಲ್ಲಿ ಅಥವಾ ಬೇರೆ ಬೇರೆ ಪ್ರದೇಶಗಳಲ್ಲಿ ಹಾಗೆ ನೆಲಸಿದ ಜನಾಂಗಗಳು ತಮ್ಮ ಗುರು/ಹಿರಿಯರಲ್ಲಿದ್ದ ಆಚರಣೆಗಳನ್ನು ಕಾಪಿಡುವ ಕಾರಣಕ್ಕಾಗಿ ಗೃಹ್ಯ ಸೂತ್ರಗಳು ಬಂದಿರಬಹುದು......

    ಇವೆಲ್ಲವನ್ನೂ ನನ್ನ ದೃಷ್ಟಿಕೋಣ/ವಿಚಾರದಲ್ಲಿ ಮೂಡಿಬಂದವು....

    ನಮ್ಮ ಇಂದಿನ "ಹಿಂದೂ ಲಾ" ಅನ್ನು ಗಮನಿಸಿದಾಗ ಅದು ಯಾಜ್ಞವಲ್ಕ್ಯ ಸ್ಮೃತಿಗೆ - ಚಳುಕ್ಯರ ವಿಕ್ರಮಾದಿತ್ಯನ ಕಾಲದಲ್ಲಿ ಗುಲಬರ್ಗಾದ 'ಮರತೂರು' ಎಂಬಲ್ಲಿದ್ದ, 'ವಿಜ್ಞಾನೇಶ್ವರ'ನ 'ಮಿತಾಕ್ಷರ'ವೇ ಸರಿ ಎಂಬ ಅಂಶ ಕಂಡುಬರುತ್ತದೆ.

    ಇಷ್ಟೂ ವಿಚಾರಗಳನ್ನು ಪ್ರಸ್ತುತಪಡಿಸಲು ಕಾರನ ಇಷ್ಟೆ....

    "ಅಂದು ಮಂತ್ರ ದ್ರಷ್ಟಾರರ ದೃಗ್ಗೋಚರವಾಗಿ - "ಶೃತಿ" ಪರಂಪರೆಯಿಂದ ಇಂದಿನವರೆಗೂ ಸಾಗಿ ಬಂದಿರುವ ಜ್ಞಾನರಾಶಿ ಪೂರ್ಣ ಪರಿಚಯ/ಅರಿವು ಇಲ್ಲದ ನಾವು ಮೂಲಾರ್ಥವನ್ನು ತಿಳಿಯುವ ಗೋಜಿಗೆ ಹೋಗದೇ, ನಮಗೆ ಸರಿ ಕಾಣಿಸುವಂತೆ ಯಾರೇ ಅರ್ಥೈಸಿದರೂ ಅದನ್ನೇ ಸರೀ ಎಂದು ನಂಬುವಂತಹ ಪರಿಸ್ಥಿತಿಯಲ್ಲಿದ್ದೇವೆ.....

    ದಯಮಾಡಿ ಗಮನಿಸಿ ಮೇಲಿನದು ನನ್ನ ವ್ಯಕ್ತಿಗತ ಚಿಂತನೆಯಲ್ಲಿ ಮೂಡಿಬಂದಿದ್ದು....ತಪ್ಪಿದ್ದರೆ ತಿಳಿಸಿ........

    ತಮ್ಮವ,
    ಮಂಡಗದ್ದೆ ರಮೇಶ ಜೋಯಿಸ್

    ReplyDelete