Pages

Thursday, May 19, 2011

ಯೋಚಿಸಲೊ೦ದಿಷ್ಟು...೩೪

೧.ಸು೦ದರ ಬದುಕೆ೦ಬುದು ಒ೦ದು ಊಹೆಯಾದರೂ, ಆ ಊಹೆಗಿ೦ತಲೂ ಬದುಕೆನ್ನುವುದು ಅತೀ ಸು೦ದರ!!

೨. ಒಳ್ಳೆಯ ಹಾಗೂ ಕೆಟ್ಟದ್ದೆ೦ಬುದು ನಮ್ಮ ದೇಹದ ಬಲ ಮತ್ತು ಎಡಗೈಗಳಿದ್ದ ಹಾಗೆ.. ಅವು ತಮ್ಮದೇ ಆದ ಉದ್ದೇಶವನ್ನು ಸಾಧಿಸುತ್ತವೆ!!

೩. ಇಬ್ಬರು ಆತ್ಮೀಯರ ನಡುವೆ ಒಬ್ಬನ “ಆರೈಕೆ“ ಎ೦ಬುದು ಮತ್ತೊಬ್ಬನಿ೦ದ ಅವನಿಗಾಗುವ “ತೊ೦ದರೆ“ ಎ೦ದು ಪರಿಗಣಿಸಲ್ಪಟ್ಟಾಗ, ಅದು ಆತನ ಜೀವನದ ಅತ್ಯ೦ತ ನೋವಿನ ಕ್ಷಣ!

೩. ಸತ್ಯದ ಪಾಲನೆ, ಸತತ ಪ್ರಯತ್ನ ಹಾಗೂ ನ೦ಬಿಕೆಯನ್ನು ಕಾಪಿಟ್ಟುಕೊಳ್ಳುವುದು ಜೀವನದ ಯಶಸ್ಸಿಗೆ ಕಾರಣವಾಗುತ್ತವೆ!

೪. ಕೇವಲ ನಾವೇ ಮಾತಾಡುತ್ತಿರುವಾಗ, ನಮಗೆ ಗೊತ್ತಿರುವುದನ್ನೇ ಹೇಳುತ್ತಿರುತ್ತೇವೆ.. ಆದರೆ ಇನ್ನೊಬ್ಬರು ಹೇಳುವುದನ್ನು ಕೇಳಿಕೊಳ್ಳುತ್ತಿದ್ದರೆ ಗೊತ್ತಿರದ ವಿಚಾರವನ್ನು ತಿಳಿದುಕೊಳ್ಳಬಹುದಾದ ಸಾಧ್ಯತೆಗಳು ಹೆಚ್ಚು!!

೫. ಹಿ೦ದುಳಿಯುವುದೇನೂ ತಪ್ಪಲ್ಲ.! ಮ೦ದಗತಿಯಲ್ಲಿ ಸಾಗುತ್ತಾ ಸತ್ಯ, ಧರ್ಮ ಹಾಗೂ ನ್ಯಾಯದ ಹಿ೦ಬಾಲಕರಾದ ಸಜ್ಜನರು ಕೊನೆಗೊಮ್ಮೆ ವಿಜಯದ ಮುಗುಳ್ನಗೆಯನ್ನು ಬೀರುತ್ತಾರೆ!- ಡಾ|| ವೀರೇ೦ದ್ರ ಹೆಗ್ಗಡೆ

೬. ತನ್ನಲ್ಲಿ ಶ್ರಧ್ಧೆ; ಪ್ರರಲ್ಲಿ ಶ್ರಧ್ಧೆ; ತನ್ನನ್ನು ಹಾಗೂ ಪರರನ್ನೂ ಮೀರಿರುವ ಅನ೦ತ ಶಕ್ತಿಗಳ ಕಲ್ಯಾಣ ಪಥದಲ್ಲಿನ ಶ್ರಧ್ಧೆ; ಈ ಪರಸ್ಪರ ಶ್ರಧ್ಧೆಗಳನ್ನು ಹೊ೦ದಿದ ವ್ಯಕ್ತಿಯು ವಾಮನನಾದರೂ ತ್ರಿವಿಕ್ರಮನಾಗುತ್ತಾನೆ!- ವಿ.ಕೃ.ಗೋಕಾಕ್

೭.ಕೆಲವು ರೋಗಗಳಿಗೆ ನಾವು ಆತಿಥ್ಯ ನೀಡುತ್ತೇವೆ.. ಕೆಲವು ರೋಗಗಲು ಅಭ್ಯಾಗತರ೦ತೆ ಬ೦ದು ನಮ್ಮಲ್ಲಿಯೇ ನೆಲೆಸಿಬಿಡುತ್ತವೆ!!- ಎಮ್.ವಿ.ಸೀತಾರಾಮಯ್ಯ

೮.ಮೀತಿ ಮೀರಿದ ಶೇಖರಣೆಯಿ೦ದ ಶ್ರೀಮ೦ತರಾಗುವುದು ಹೇಗೆ ಹಿತವಲ್ಲವೋ ಹಾಗೆಯೇ ಮಿತಿಮೀರಿದ ಮಿತವ್ಯಯದಿ೦ದ ಶ್ರೀಮ೦ತರಾಗುವುದೂ ಹಿತವಲ್ಲ!!- ಎಡ್ಮ೦ಡ್ ಬರ್ಕ್

೯.ಜನರಿ೦ದ ದೂರ ಹೋಗದ೦ತೆ, ಅವರಿಗೆ ನಿಲುಕುವ೦ತೆ ಬೆಳೆಯುವುದೇ ಬೆಳವಣಿಗೆಯ ನಿಜವಾದ ಲಕ್ಷಣ.. ಏಕೆ೦ದರೆ ನಾವು ವಾಸಿಸುವುದು ಜನರ ಮಧ್ಯದಲ್ಲಿಯೇ!!- ಆರ್.ಎಮ್.ಹಡಪದ್

೧೦. ಯಾವುದಾದರೂ ಕೆಲಸಗಳಲ್ಲಿ ತೊಡಗಿಕೊ೦ಡಿರುವುದು ಮನದಲ್ಲಿನ ಬೇಗುದಿಯನ್ನು ಕಡಿಮೆಗೊಳಿಸುತ್ತದೆ ಹಾಗೂ ಅಸ೦ತೋಷವು ನಮ್ಮಲ್ಲಿ ಸದಾ ನೆಲೆಸುವುದನ್ನು ತಡೆಯುತ್ತದೆ.

೧೧. ನಿನ್ನೆ ಮತ್ತು ನಾಳೆಗಳ ನಡುವಿನ ಈ ವರ್ತಮಾನದಲ್ಲಿಯೇ ಏನನ್ನಾದರೂ ಮೌಲ್ಯಯುತವಾದುದ್ದನ್ನು ಸಾಧಿಸಬೇಕು!

೧೨. ಕೆಲವೊಮ್ಮೆ ಜೀವನವೆ೦ದರೆ ನಿರೀಕ್ಷಿಸಿದ್ದನ್ನು ಸಾಧಿಸಲಾಗದ ಹಾಗೂ ಅನಿರೀಕ್ಷಿತವನ್ನು ಸಾಧಿಸಬಹುದಾದ ಒ೦ದು ವಿಪರ್ಯಾಸ!

೧೩. ಕಾಲವು ಎಲ್ಲವನ್ನೂ ಮರೆಸಬಹುದಾದರೂ ಜೀವನದಲ್ಲಿ ಕೆಲವೊ೦ದು ವ್ಯಕ್ತಿಗಳು ಮಾತ್ರವೇ ತಮ್ಮ ಚಟುವಟಿಕೆಗಳಿ೦ದ ನಾವು ಸಮಯವನ್ನೂ ಮರೆಯುವ೦ತೆ ಮಾಡುತ್ತಾರೆ!!

೧೪. ನಾವು ಮತ್ತೊಬ್ಬರ ಯಶಸ್ಸನ್ನು ಕ೦ಡು ಮತ್ಸರಿಸಿದಲ್ಲಿ ಅದು ನಮ್ಮ ಜೀವನದ “ವೈಫಲ್ಯ“ವೆ೦ದೂ , ನಮ್ಮ ಯಶಸ್ಸಿಗೆ ಮತ್ತೊಬ್ಬರು ಕರುಬಿದರೆ ಅದನ್ನು ನಮ್ಮ ಜೀವನದ “ಸಾಫಲ್ಯ“ವೆ೦ದೂ ಪರಿಗಣಿಸಬಹುದು!

೧೫. ಸಾಧಿಸಿದ ಯಶಸ್ಸಿನ ಬಗ್ಗೆ ಅತಿಯಾಗಿ ಚರ್ಚಿಸುವುದು ಹಾಗೂ ವೈಫಲ್ಯಗಳನ್ನು ಕುರಿತೂ ಅತಿಯಾಗಿ ಚಿ೦ತಿಸುವುದು ನಮ್ಮ ಭವಿಷ್ಯಕ್ಕೆ ತೊಡಕಾಗಿ ಪರಿಣಮಿಸುತ್ತದೆ!

Tuesday, May 17, 2011

ವೇದೋಕ್ತ ಜೀವನ ಪಥ: ಮಾನವ ಧರ್ಮ -3

ಅದೇ ಅಥರ್ವವೇದ ಮತ್ತೆ ಹೇಳುತ್ತಲಿದೆ:


ಉದ್ಯಾನಂ ತೇ ಪುರುಷ ನಾವಯಾನಂ ಜೀವಾತುಂ ತೇ ದಕ್ಷತಾತಿಂ ಕೃಣೋಮಿ |
ಆ ಹಿ ರೋಹೇಮಮಮೃತಂ ಸುಖಂ ರಥಮಥ ಜಿರ್ವಿರ್ವಿದಥಮಾ ವದಾಸಿ ||
(ಅಥರ್ವ. ೮.೧.೬.)


     [ಪುರುಷ] ಓ ದೇಹಧಾರಿ ಜೀವ! [ತೇ ಯಾನಂ ಉತ್] ನಿನ್ನ ಮಾರ್ಗ ಮೇಲಕ್ಕಿದೆ. [ನ ಆವಯಾನಮ್] ಕೆಳಕ್ಕೆ ಹೋಗುವುದಲ್ಲ. [ತೇ] ನಿನಗಾಗಿ, [ಜೀವಾತುಮ್] ಜೀವನಕಲೆಯನ್ನೂ, [ದಕ್ಷತಾತಿಮ್] ಜೀವನಸಾಮರ್ಥ್ಯವನ್ನೂ, [ಕೃಣೋಮಿ] ಉಂಟುಮಾಡುತ್ತೇನೆ. [ಇಮಮ್ ಅಮೃತಂ ಸುಖಂ ರಥಮ್] ಈ ಜೀವಂತವಾದ ಸುಖಕರವಾದ ಜೀವನರಥವನ್ನು, [ಹಿ ಆರೋಹ] ನಿಜವಾಗಿ ಏರು. [ಅಥ] ಆಮೇಲೆ [ಜಿರ್ವಿ] ವಾರ್ಧ್ಯಕ್ಯ ಪಡೆದು [ವಿದಥಮ್] ಜ್ಞೇಯವಾದ ಸತ್ಯಜ್ಞಾನವನ್ನು, [ಆ ವದಾಸಿ] ಪ್ರಸರಿಸುತ್ತಾ ಓಡಾಡುವೆ.

     ಹೌದು, ಧರ್ಮದ ಮಾರ್ಗ ಧಾರಕಮಾರ್ಗ, ಎತ್ತಿ ಹಿಡಿಯುವ ಮಾರ್ಗ. ಪತನಕ್ಕಿಲ್ಲಿ ಅವಕಾಶವೇ ಇಲ್ಲ. ಇಹದಲ್ಲಿ ಸೊಗಸಾಗಿ ಬಾಳಿ, ಇತರರನ್ನೂ ಸೊಗಸಾಗಿ ಬಾಳಿಸಿ, ಪರದಲ್ಲಿ ಅವಿಚ್ಛಿನ್ನ ಆನಂದವನ್ನು ಪಡೆದುಕೊಳ್ಳುವ ಜೀವನಕಲೆಯ ಮತ್ತು ಜೀವನಸಾಮರ್ಥ್ಯದ ದಿವ್ಯಮಾರ್ಗ. ನಾವು ಹಿಂದೆ ಹೇಳಿರುವಂತೆ, ಧರ್ಮವಿರುವುದು ಮಾನವ ಮಾತ್ರರಿಗೆಲ್ಲಾ ಒಂದೇ. ಅದು ಮತಗಳಂತೆ ಸಾವಿರಾರು ಇಲ್ಲ. ಆದರೂ ವೇದಗಳಲ್ಲಿ ಧರ್ಮ ಎಂಬ ಶಬ್ದವನ್ನು ಏಕವಚನ, ಬಹುವಚನ ಎರಡರಲ್ಲಿಯೂ ಬಳಸಲಾಗಿದೆ. ಉದಾಹರಣೆಗೆ, 'ತಾನಿ ಧರ್ಮಾಣಿ ಪ್ರಥಮಾನ್ಯಾಸನ್' (ಯಜು.೩೧.೧೬.) - ಅವು ಪ್ರಥಮ ಧರ್ಮಗಳಾದವು, ಎಂಬಲ್ಲಿ ಬಹುವಚನಪ್ರಯೋಗವಿದೆ. 'ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ'(ಋಕ್. ೫.೬೩.೭.) - ಧರ್ಮದಿಂದ ಸ್ನೇಹಪರ ಹಾಗೂ ವರಣೀಯ ನರ-ನಾರಿಯರು ಜ್ಞಾನಿಗಳಾಗುತ್ತರೆ, ಎಂಬಲ್ಲಿ ಏಕವಚನ ಪ್ರಯೋಗವಿದೆ. ಬಹುವಚನ ಪ್ರಯೋಗ ಕಂಡು ಪಾಠಕರು ವೇದಗಳು ಅನೇಕ ಧರ್ಮಗಳನ್ನು ಉಪದೇಶಿಸುತ್ತವೆ ಎಂದು ಭ್ರಾಂತರಾಗುವ ಸಂಭವವಿದೆ. ಆದರೆ, ಅಂತಹ ಭ್ರಾಂತಿಗೆ ಅವಕಾಶವಿಲ್ಲ. ಏಕೆಂದರೆ, ನಾವು ಈಗ ಯಾವ ಭಾವನೆಯನ್ನು ಧರ್ಮ ಎಂಬ ಶಬ್ದವನ್ನು ಗ್ರಹಿಸುತ್ತೇವೋ, ಅದನ್ನು ಸೂಚಿಸಲು ವೇದಗಳು ಋತ ಎಂಬ ಶಬ್ದವನ್ನು ಬಳಸುತ್ತವೆ. ಧರ್ಮ ಎಂಬ ಶಬ್ದದ ಅರ್ಥ ಧಾರಕ ಎಂದು. ವಸ್ತುತಃ ಸದ್ಗುಣವೇ ಧಾರಕತತ್ವ. ಅಂತಹ ಸದ್ಗುಣ ಒಂದೇ ಅಲ್ಲ ಇರುವುದು. ಅನೆಕ ಸದ್ಗುಣಗಳಿವೆ. ಯಾವುದಾದರೂ ಸದ್ಗುಣವನ್ನು ಸೂಚಿಸುವಾಗ ವೇದ ಧರ್ಮ ಎಂಬ ಶಬ್ದವನ್ನೂ, ಅನೇಕ ಧರ್ಮಗಳನ್ನು ಸೂಚಿಸಬೇಕಾದಾಗ ಧರ್ಮಗಳು ಎಂಬ ಶಬ್ದವನ್ನೂ ಉಪಯೋಗಿಸುತ್ತವೆ. ಎಲ್ಲ ಧರ್ಮಗಳು ಎಂದರೆ ಆತ್ಮೋದ್ಧಾರಕವಾದ ಸದ್ಗುಣಗಳ ಮೊತ್ತವನ್ನು, ಒಟ್ಟನ್ನು ಸೂಚಿಸುವಾಗ, ವೇದ ಋತ ಎಂಬ ವ್ಯಾಪಕ ಶಬ್ದವನ್ನು ಬಳಸುತ್ತದೆ. ವೇದಗಳ ಶೈಲಿಯಲ್ಲಿ ಧರ್ಮ ಒಂದು ಸದ್ಗುಣವಾದರೆ, ಋತ ಸಮಸ್ತ ಸದ್ಗುಣಗಳ ರಾಶಿ. ಸಾರ್ವಭೌಮ ಈಶ್ವರೀಯ ವಿಧಾನವೇ, ಆತ್ಮನ ಉನ್ನಾಯಕವಾದ ಜೀವನಕ್ರಮವೇ ಋತ. ಆ ಈಶ್ವರೀಯ ವಿಧಾನ ವೇದಗಳಲ್ಲಿ ಪ್ರಕಟವಾಗಿರುವುದರಿಂದ, ವೇದಗಳನ್ನೂ ಕೂಡ ಋತ ಎಂದು ನಿರ್ದೇಶಿಸುವುದುಂಟು. ಸುಲಭವಾದ ಮಾತುಗಳಲ್ಲಿ ಹೇಳಬೇಕಾದರೆ, ಆತ್ಮೋದ್ಧಾರದ ಸಮಸ್ತ ಸದ್ಗುಣಗಳ ಸಂಘಾತವೇ ಋತ, ಈಗಿನ ಬಳಕೆಯ ಮಾತಿನಲ್ಲಿ ಅದೇ ಧರ್ಮ. ಆ ಸದ್ಗುಣಗಳು ಜೀವನಕ್ಕಿಳಿದು ಬಂದಾಗ, ಅವೆಲ್ಲಾ ಸೇರಿ ಒಂದು ಜೀವನಮಾರ್ಗಕ್ಕೆ ರೂಪ ಕೊಡುತ್ತವೆ.
******************************

Monday, May 16, 2011

ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ

ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ  ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ "ವಿಶ್ವಗುರುವಿನ" ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ "ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದ್ದರೆಂದೂ" ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗ್ಭವೇತ್"-ಎಲ್ಲರೂ ಸುಖವಾಗಿರಬೇಕು........, ಯಾರಿಗೂ ದು:ಖ ಬರುವುದು ಬೇಡ". ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!
ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು " ಇದೇನೋ ನೀನು "ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!" ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ" ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ?
ಅವರು ನಿರುತ್ತರರಾಗಿದ್ದರು.
ಬ್ರಾಹ್ಮಣರೆಂದು ಕರೆಸಿಕೊಳ್ಳುವ , ಅಲ್ಪಸ್ವಲ್ಪ ಸಾಮಾಜಿಕ  ಅರಿವು ಹೊಂದಿರುವ ಇವರೇ ಹೀಗೆ ಚಿಂತಿಸಿದರೆ ಹಿಂದುಸಮಾಜವು  ಇನ್ನೂ ಯಾವ ಬಗೆಯ ಅಜ್ಞಾನದ ಸುಳಿಯಲ್ಲಿ ಸಿಲುಕಿ ಬಳಲುತ್ತಿರಬಹುದೆಂದು ಚಿಂತೆಗೊಳಗಾಗುತ್ತೇನೆ. ಚಿಂತೆಗೆ ಕಾರಣವಿದೆ. ಯಜ್ಞೋಪವೀತವನ್ನು ಧಾರಣೆ ಮಾಡಿರುವ ಎಲ್ಲರಿಗೂ ವೈಜ್ಞಾನಿಕವಾಗಿ ಅದರ ಮಹತ್ವವನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ, ಸಂಧ್ಯಾವಂದನೆ ಮಾಡುವ, ಗಾಯತ್ರಿ ಮಂತ್ರ ಜಪಿಸುವ, ಊಟಮಾಡುವಾಗಿನ ಪರಿಶಂಚನೆಗೂ ಅರ್ಥ ವಿವರಣೆ ಕೊಟ್ಟು ಅದರಿಂದಾಗಿ ನಮ್ಮ  ಆರೋಗ್ಯದ ಮೇಲಾಗುವ ಸತ್ಪರಿಣಾಮದ ಬಗೆಗೆ ಅರಿವು ಮಾಡಿಸಲಾಗುತ್ತದೆ.ಆದರೆ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗ್ಭವೇತ್"- ಎಂದು ಪ್ರಾರ್ಥಿಸುವ ನಾವು ನಮ್ಮೊಡನೆ ಉಪನಯನ ಸಂಸ್ಕಾರದಿಂದ, ವೇದಾಧ್ಯಯನದಿಂದ ಎಷ್ಟು ಜನ ನಮ್ಮ ಸೋದರರು ವಂಚಿತರಾಗಿದ್ದಾರೆಂಬ ಬಗ್ಗೆ ಯೋಚಿಸಿದ್ದೇವೆಯೇ?  " ಆತ್ಮವತ್ ಸರ್ವ ಭೂತೇಶು" ಎನ್ನುವ ನಮಗೆ ಮಾನವ ಜಾತಿಯಲ್ಲೂ ಒಂದುಬಹುದೊಡ್ದ ಭಾಗ ಈ ಸಂಸ್ಕಾರಗಳಿಂದ ವಂಚಿತವಾಗಿದೆ, ಎಂದು ಅನಿಸುವುದಿಲ್ಲವೇ?ಅವರಿಗೆ ಉತ್ತಮ ಆರೋಗ್ಯ ಬೇಡವೇ? ಉತ್ತಮ ಬದುಕು ಬೇಡವೇ?
ನನಗೆ ಚಿಂತೆ ಕಾಡಲೂ ಇನ್ನೂ ಕಾರಣಗಳಿವೆ. ವೇದಾಧ್ಯಯನವನ್ನು ಮಾಡಿರುವ ಅದೆಷ್ಟು ವಿದ್ವಾಂಸರುಗಳಿಲ್ಲ! ಅವರಲ್ಲಿ ಈ ಚಿಂತೆ ಯಾಕೆ ಕಾಡುತ್ತಿಲ್ಲ? ನಮ್ಮ ವೈದಿಕ ಪರಂಪರೆಯಿಂದ ಒಂದು ಆರೋಗ್ಯಯುತವಾದ ಜೀವನ ನಡೆಸಬಹುದೆಂದಾದರೆ ಆ ಜೀವನ ಕೆಲವರಿಗೆ ದಕ್ಕಿದರೆ ಸಾಕೇ?

ಸಮಾನೋ ಮಂತ್ರ:  ಸಮಿತಿ: ಸಮಾನೀ
ಸಮಾನಂ ವ್ರತಂ ಸಹ ಚಿತ್ತಮೇಷಾಮ್|
ಸಮಾನೇನ ವೋ ಹವಿಷಾ ಜುಹೋಮಿ
ಸಮಾನಂ ಚೇತೋ ಅಭಿಸಂವಿಶಧ್ವಮ್||
[ಅಥರ್ವ-೬.೬೪.೨]

ಅಥರ್ವ ವೇದ ಈ ಮಂತ್ರ ಏನು ಹೇಳುತ್ತದೆ?

ಸಮಾನೋ ಮಂತ್ರ: = ಮಾನವರೆಲ್ಲರ ಮಂತ್ರವು ಸಮಾನವಾಗಿರಲಿ
ಸಮಿತಿ: ಸಮಾನೀ= ಸಮಿತಿಯು ಸಮಾನವಾಗಿರಲಿ[ ಸಮಿತಿ ಎಂದರೆ ಸಭೆ, ಕೂಟ, ಸಂಸ್ಥೆ,ಸಮಾಜ,ಸೇರುವಿಕೆ]
ಸಮಾನಂ ವ್ರತಂ=ವ್ರತವೂ ಸಮಾನವಾಗಿರಲಿ[ವ್ರತವೆಂದರೆ ಕಟ್ಟು, ಕಟ್ಟಳೆ,ನಿಯಮ,ಶಾಸನ,ವಿಧಿ, ಯಜ್ಞ,ಪೂಜೆ,ಧಾರ್ಮಿಕ ಪ್ರತಿಜ್ಞೆ ]

ಸಹ ಚಿತ್ತಮೇಷಾಮ್= ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ
ವ:=ನಿಮ್ಮೆಲ್ಲರಿಗೂ
ಸಮಾನೇನ  ಹವಿಷಾ=ಸಮಾನವಾದ ಖಾದ್ಯ,ಪೇಯಗಳನ್ನೇ
ಜುಹೋಮಿ=ದಾನ ಮಾಡುತ್ತೇನೆ
 ಸಮಾನಂ ಚೇತ:=ಸಮಾನವಾದ ಚೈತನ್ಯದಲ್ಲಿಯೇ
ಅಭಿಸಂವಿಶಧ್ವಮ್= ಎಲ್ಲೆಡೆಯಿಂದಲೂ ಪ್ರವೇಶಿಸಿರಿ



ಈ ಮಂತ್ರದ ಅರ್ಥವನ್ನು ತಿಳಿದಾಗ ಆ ಭಗವಂತನೇ ನೀಡಿರುವ  ಸವಲತ್ತನ್ನೂ ಕೂಡ ನಾವು ಸರಿಯಾಗಿ ಎಲ್ಲರೂ ಅನುಭವಿಸಲು ಸಾಧ್ಯವಾಗಿಲ್ಲವಲ್ಲಾ! [ಸುಪ್ರೀಮ್ ಕೋರ್ಟ್ ಆದೇಶವಿದ್ದರೂ ಸಹ ಸರ್ಕಾರವು  ಕಾರ್ಯಕ್ರಮವನ್ನು ಅನುಷ್ಠಾನ ಮಾಡದಿರುವಂತೆ]
ಯಾಕೆ ಹೀಗೆ? ಯಾಕೆ ಹೀಗೆ? ಚಿಂತೆ ಕಾಡುತ್ತಿರುವುದು ತಪ್ಪೇ?
ಸಾಮಾಜಿಕ ಸಾಮರಸ್ಯದ ಬಗೆಗೆ ಚಿಂತನೆ ಮಾಡುವಾಗ  ನಿಜವಾಗಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಅದು ಮಾಂಸಾಹಾರ ಸೇವನೆ ಯ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸುವುದೇನೂ ಕಷ್ಟವಿಲ್ಲ. ಆದರೂ ಬೆಳೆದುಬಂದಿರುವ ರೂಢಿಯಿಂದ ಹಲವರು ಮಾಂಸಾಹಾರದ ಅಭ್ಯಾಸವನ್ನು ಮಾಡಿಕೊಂಡಿರುವುದು ಸುಳ್ಳಲ್ಲ. ಮಾಂಸಾಹಾರಿ ಮಿತ್ರರನ್ನು ಬಹಳ ಆತ್ಮೀಯವಾಗಿ ವಿಚಾರಿಸಿದಾಗ ಅವರಿಂದ ಪ್ರಾಮಾಣಿಕವಾಗಿ ಬರುವ ಉತ್ತರವೇನು ಗೊತ್ತೇ? “ ಬಾಯಿ ಚಪಲ ದಿಂದಾಗಿ ಮಾಂಸಾಹಾರ ಬಿಡಲು ಆಗುತ್ತಿಲ್ಲ” ಸಸ್ಯಾಹಾರವು ಆರೋಗ್ಯಕ್ಕೆ ಉತ್ತಮವೆಂದು ಹೇಳಿದರೆ ಉತ್ತರ ಒಂದು ಸಿದ್ಧವಾಗಿರುತ್ತದೆ” ಬಹುತೇಕ  ವಿಜ್ಞಾನಿಗಳು ಭಾರತೀಯರಲ್ಲ. ಪಾಶ್ಚಿಮಾತ್ಯರಲ್ಲಿ ಮಾಂಸಾಹಾರ ಸರ್ವೇ ಸಾಮಾನ್ಯ. ಆದ್ದರಿಂದ ಮಾಂಸಾಹಾರಿ ವಿಜ್ಞಾನಿಗಳಿರಲಿಲ್ಲವೇ?
ನಿಜವಾಗಿ ಪಾಶ್ಚಿಮಾತ್ಯ ವಿಜ್ಞಾನಿಗಳ ಆಹಾರ ಕ್ರಮವನ್ನು ಇವರೇನೂ ಅಧ್ಯಯನ ಮಾಡಿಲ್ಲ. ಆದರೂ ಅವರೆಲ್ಲರನ್ನೂ ಮಾಂಸಾಹಾರಿಗಳೆಂದು ಪರಿಗಣಿಸಿ ಮಾಂಸಾಹಾರ ಸೇವನೆಗೂ ಜ್ಞಾನಕ್ಕೂ  ಸಬಂಧವಿಲ್ಲ” ಎಂಬ ಸ್ವಂತ ತೀರ್ಮಾನಕ್ಕೆ ಬಂದು ಅದಕ್ಕೇ ಅಂಟಿಕೊಳ್ಳುವರಿಗೇನೆನ್ನಬೇಕು?
ಯಜ್ಞಕ್ಕೆ ಅಧ್ವರ ಎಂಬ ಸಮಾನ ಪದವೂ ಇದೆ. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದಾಯ್ತು. ಹಾಗಾಗಿ ಹಿಂಸೆ ಮಾಡದೆ ,ಪ್ರಾಣಿಯನ್ನು ಕೊಲ್ಲದೆ ಮಾಂಸಾಹಾರ ಸೇವನೆ ಸಾಧ್ಯವೇ? ಆದ್ದರಿಂದ ಯಜ್ಞವನ್ನು ಮಾಡಬೇಕಾದ ಎಲ್ಲಾ ಮಾನವರೂ ಕೂಡ ಸಸ್ಯಾಹಾರಿಗಳೇ ಆಗಿರಬೇಕಲ್ಲವೇ?
ಈ ಮಾತು ಹೇಳುವಾಗ  ಮಾಂಸಪ್ರಿಯರು ಕೂಡಲೇ ಉತ್ತರಿಸುತ್ತಾರೆ “ ನಾವು ಕುರಿ-ಕೋಳಿ ಕೊಂದು ತಿನ್ನದಿದ್ದರೆ , ಅವುಗಳ ಸಂಖ್ಯೆ ಎಷ್ಟಾಗುತ್ತಿತ್ತು ಗೊತ್ತಾ?
ಎಂತಹಾ ಪ್ರಶ್ನೆ!
ಸಿಂಹ, ಹುಲಿ ಇತ್ಯಾದಿ ಪ್ರಾಣಿಗಳ ಆಹಾರವೇ ಮತ್ತೊಂದು ಪ್ರಾಣಿಯ ಮಾಂಸ. ಸಿಂಹ, ಹುಲಿಗಳಿಗೆ  ಸಸ್ಯಾಹಾರ ಉಣಿಸಲು ಸಾಧ್ಯವೇ? ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಆಹಾರ. ಆದರೆ ಯಾವ ಪ್ರಾಣಿಯೂ ಮನುಷ್ಯನಿಗೆ ಆಹಾರವಾಗಬಾರದು. ಮನುಷ್ಯನ ದೇಹದ ರಚನೆಯೂ ಕೂಡ ಸಸ್ಯಾಹಾರಕ್ಕೇ ರಚಿತವಾಗಿದ್ದು.
ಇಂತಹ ಸೂಕ್ಷ್ಮ ವಿಷಯಗಳ ಬಗೆಗೆ ಚಿಂತನ-ಮಂಥನ ಮಾಡಬಾರದೇ?
ಬದಲಾಗಬೇಕಾದವರು ಕೇವಲ ಒಂದು ವರ್ಗವಲ್ಲ. ವೇದಜ್ಞಾನವನ್ನು ಹೊಂದಿರುವವರು ವೇದಜ್ಞಾನವಿಲ್ಲದ ಆದರೆ ಅದನ್ನು ಕಲಿಯುವ ಆಸಕ್ತಿ ಇರುವ ಯಾವುದೇ ವ್ಯಕ್ತಿಗಾಗಲೀ ಕಲಿಸಿಕೊಡಲು ಮುಂದೆ ಬರಬೇಕು, ಅಂತೆಯೇ ವೇದಜ್ಞಾನವಿಲ್ಲದವರು ವೇದಜ್ಞಾನವನ್ನು ಪಡೆಯಲು ಬೇಕಾದ ಮಾನಸಿಕತೆಯನ್ನು ಹೊಂದಬೇಕು. ಅಲ್ಲವೇ?
 ಇಡೀ ವಿಶ್ವಕ್ಕೆ ಉತ್ತಮ ಬದುಕು  ನೀಡುವ ಸಾಮರ್ಥ್ಯವು ವೇದದಲ್ಲಿದ್ದು ಅದನ್ನು ಬಲ್ಲವರು ಆಸಕ್ತರಿಗೆ ನೀಡಲು 
ಮನಸ್ಸು ಮಾಡಬೇಕು,ಪಡೆಯುವವರೂ ಕೂಡ ಪಡೆಯಲು ಬೇಕಾದ ಮಾನಸಿಕತೆಯನ್ನು ಬೆಳಸಿಕೊ ಳ್ಳಬೇಕು. ಏನಂತೀರಾ?


Sunday, May 15, 2011

ಕಾ ಣ ದ ಕೈ




ಜೀವನವೊಂದು ಅಪೂರ್ವವಾದ, ಅನುಪಮವಾದ ಮತ್ತು ಅನನ್ಯವಾದ ಅನುಭವದ ಪಯಣ. ನಿತ್ಯ ಜೀವನದ ಏಳು-ಬೀಳುಗಳನ್ನು ದಾಟಿ, ನಿಗದಿಪಡಿಸಿಕೊಂಡ ಗುರಿಯತ್ತ ಸಾಗುವಾಗ ಬರುವ ಅಡೆ-ತಡೆಗಳನ್ನು ಎದುರಿಸಿ, ಅಂತಿಮವಾಗಿ ಸಾಫಲ್ಯವನ್ನು ಕಂಡಾಗ-ಸಾರ್ಥಕ್ಯ ಸಿದ್ಧಿಯಾದಾಗ ಅದರ ಅನುಭವವೇ ಅನನ್ಯ; ಅತೀತ. ಆದರೆ ಇಂತಹ ಒಂದು ಅನಿಶ್ಚಿತವಾದ ಜೀವನ ಪಯಣದಲ್ಲಿ ನಾವೆಷ್ಟೋ ಸಾರಿ ಹಲವಾರು ತೊಂದರೆಗಳಿಗೆ ಸಿಲುಕಿಕೊಂಡಿದ್ದೇವೆ; ದಾರಿಯಲ್ಲಿ ಹಲವಾರು ವಿಘ್ನಗಳು ಎದುರಾಗಿವೆ; ಅನರೀಕ್ಷಿತವಾದ ಸಮಸ್ಯೆಗಳನ್ನು ಕೂಡ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಅಂತಹ ಸನ್ನಿವೇಶಗಳಿಂದ ಮನುಷ್ಯ ಪ್ರಯತ್ನದಿಂದ ಪಾರಾದರೂ, ಇನ್ನು ಕೆಲವು ಸಂಕಷ್ಟಗಳು/ಸಮಸ್ಯೆಗಳು ಮಾನವ ಪ್ರಯತಕ್ಕೂ ಮೀರಿದ್ದಾಗಿರುತ್ತವೆ. ಆಗ ನಾವು ಕೈ ಚೆಲ್ಲಿ ಕೂರದೇ ಗತ್ಯಂತರವಿಲ್ಲದಂತಾಗಿರುತ್ತದೆ. ದೇವರಿದ್ದಾನೋ ಇಲ್ಲವೋ ಎಂಬ ಬಗ್ಗೆ ಚರ್ಚಿಸಲು ನಾವೇನೂ (ಕು) ಬುದ್ಧಿಜೀವಿಗಳಲ್ಲ; ಆ ಬಗ್ಗೆ ಚರ್ಚೆ ಇಲ್ಲಿ ಅಪ್ರಸ್ತುತ ಮತ್ತು ಅನಗತ್ಯ ಕೂಡಾ. ಆದರೂ ಬಹಳ ಸಂದರ್ಭಗಳಲ್ಲಿ ಕಾಣದ ಕೈ ಯೊಂದು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿರುವ ಅನೇಕ ಘಟನೆಗಳು ನನ್ನ ಜೀವನದಲ್ಲಂತೂ ಸಾಕಷ್ಟು ಸಂಭವಿಸಿವೆ. ಇದೇ ರೀತಿ ಅನೇಕರ ಸತ್ಯ ಅನುಭವಗಳನ್ನೂ ನಾನು ಕೇಳಿದ್ದೇನೆ. ಸಾಮಾನ್ಯವಾಗಿ ಹೇಳಬಹುದಾದರೆ, ಬಹುಶ: ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇಂತಹ ಅನುಭವವನ್ನು - ನಿಗೂಢ ಶಕ್ತಿಯ ಸಹಾಯವನ್ನು - ಅನುಭವಿಸಿಯೇ ಇರುತ್ತಾನೆ. ಆದರೆ ವಿಚಾರವಂತರ(?) ತರ್ಕಕ್ಕೆ ಇಲ್ಲಿ ಸಾಕ್ಷಾಧಾರಗಳು ಸಿಗದಿರಬಹುದು; ವಿವರಣೆ ಇಲ್ಲದಿರಬಹುದು. ಆದರೂ ಆದ ಅನುಭವ ಸುಳ್ಳಲ್ಲವಲ್ಲ! ಅನಿರೀಕ್ಷಿತ ವಲಯದಿಂದ ಬಂದ ಸಹಾಯ ಹುಸಿಯಲ್ಲವಲ್ಲ! ಆ ನಿಗೂಢ ಶಕ್ತಿಯ ಕಲ್ಪನೆ ಮಾತ್ರಾ ಆಯಾ ವ್ಯಕ್ತಿಯ ಸಂಸ್ಕಾರಕ್ಕೆ ಮತ್ತು ವಿವೇಚನೆಗೆ ಬಿಟ್ಟ ವಿಚಾರ. ನನ್ನ ಜೀವನದಲ್ಲಿ ಜರುಗಿದ ಇಂತಹ ಕೆಲವು ಘಟನೆಗಳನ್ನು ಇಲ್ಲಿ ಮುಂದಿಡ ಬಯಸುತ್ತೇನೆ.
ಸುಮಾರು ೨೦ ವರ್ಷಗಳ ಹಿಂದಿನ ಮಾತು. ಚೊಚ್ಚಲ ಹೆರಿಗೆಗಾಗಿ ನನ್ನ ಮಡದಿಯನ್ನು ಸರ್ಕಾರೀ ಆಸ್ಪತ್ರೆಗೆ ದಾಖಲಿಸಿದ್ದೆವು. ಸಿಸೇರಿಯನ್ ಆಪರೇಷನ್ ಆಗಿದ್ದರಿಂದ ಒಂದು ವಾರ ಅಲ್ಲಿಯೇ ಇರಬೇಕಾಯಿತು. ಹೊಲಿಗೆ ಬಿಚ್ಚಿದ ವೈದ್ಯರು ಮನೆಗೆ ಹೋಗಲು ಅನುಮತಿ ಇತ್ತರು. ಆಗ ಸುಮಾರು ಬೆಳಿಗ್ಗೆ ೯ ಗಂಟೆ. ನಾವುಗಳು ೧೦.೩೦ರ ವೇಳೆಗೆ ಮನೆಗೆ ಹೋಗುವುದೆಂದು ತೀರ್ಮಾನಿಸಿದೆವು. ಆದರೆ ಹೊರಡುವ ಸ್ವಲ್ಪ ಮುಂಚೆ ನನ್ನ ಶ್ರೀಮತಿ ಈಗ ಬೇಡ, ಸಂಜೆ ಹೋಗೋಣ ಎಂದಾಗ ನಾನೂ ತಲೆಯಾಡಿಸಿದ್ದೆ. ಆದರೆ ಸ್ವಲ್ಪ ಸಮಯದಲ್ಲಿಯೇ ನನ್ನ ಶ್ರೀಮತಿ ಪುನ: ಮನಸ್ಸು ಬದಲಾಯಿಸಿ ತಕ್ಷಣ ಹೊರಡಲು ಒತ್ತಾಯಿಸಿದಾಗ ನಾವು ಮನೆಗೆ ಹೊರಟೆವು. ನಾವು ಮನೆ ಸೇರಿ ಇನ್ನೂ ೧೦ ನಿಮಿಷ ಕೂಡ ಆಗಿರಲಿಲ್ಲ. ನನ್ನ ಮಡದಿಯನ್ನು ಮತ್ತು ಮಗುವನ್ನು ಉಪಚರಿಸುತ್ತಿದ್ದ ನರ್ಸ್ ಓಡುತ್ತಾ ನಮ್ಮ ಮನೆಗೆ ಬಂದಾಗ ನಮಗೆ ಗಾಭರಿ. ವಿಷಯ ಏನೆಂದರೆ, ಯಾವ ಹಾಸಿಗೆಯ ಮೇಲೆ ನನ್ನ ಶ್ರೀಮತಿ ಮತ್ತು ಮಗು ಒಂದು ವಾರ ಕಳೆದಿದ್ದರೋ ಮತ್ತು ಮಗು ಯಾವ ಸ್ಥಳದಲ್ಲಿ ಮಲಗುತ್ತಿತ್ತೋ ಅದರ ಮೇಲೆ ಹಳೆ ಸರ್ಕಾರೀ ಆಸ್ಪತ್ರೆ ಕಟ್ಟಡದ ಒಳಛಾವಣಿಯ ಗಾರೆಯ ಒಂದು ದೊಡ್ಡ ತುಂಡು ಬಿದ್ದಿತ್ತು! ಸಾಯಂಕಾಲ ಹೊರಡೋಣವೆಂದು ಕೊಂಡಿದ್ದ ವಿಚಾರವನ್ನು ನೆನೆಸಿಕೊಂಡ ನಾವೆಲ್ಲಾ ನಿಜವಾಗಿ ಆಗ ನಡುಗಿಬಿಟ್ಟೆವು. ತಕ್ಷಣ ಹೊರಡಲು ಪ್ರೇರೇಪಿಸಿದ ಆ (ದಿವ್ಯ) ಶಕ್ತಿಗೆ ಶರಣಾದೆವು. ಆ ನನ್ನ ಮಗನೇ ಇಂದು ರಾಜ್ಯ ಮಟ್ಟದ ಓರ್ವ ಪ್ರತಿಭಾನ್ವಿತ ವಯಲಿನ್ ವಾದಕ ಎಂಬುದನ್ನು ಈ ಘಟನೆಯ ಹಿನ್ನೆಲೆಯಲ್ಲಿ ನೆನೆಸಿಕೊಂಡಾಗಲೆಲ್ಲಾ ಮೈ-ಮನಸ್ಸು ಝುಮ್ ಎನ್ನುತ್ತದೆ; ಆ ದಿವ್ಯ ಪ್ರೇರಣೆಗೆ ತಲೆಬಾಗುತ್ತದೆ.

ಮತ್ತೊಂದು ಘಟನೆ. ನನ್ನ ತಂದೆಯವರು ಅನೇಕ ವರ್ಷಗಳಿಂದ ಹೃದಯ ರೋಗ ಪೀಡಿತರು. ಅವರಿಗೆ ಅಪರೇಷನ್ ಕೂಡ ಆಯಿತು. ಆದರೂ ವಯಸ್ಸಿನ ಪ್ರಭಾವದಿಂದ ಆಗಾಗ್ಯೆ ತೊಂದರೆಗಳು ಮರುಕಳಿಸುತ್ತಿದ್ದು, ಪದೇ ಪದೇ ಆಸ್ಪತ್ರೆಗೆ ಹೋಗಬೇಕಾಗಿತ್ತು. ಒಮ್ಮೆ ಆಫೀಸಿನಿಂದ ಮನೆಗೆ ಹೊರಟಿದ್ದೆ. ಆಗಲೇ ಸಾಕಷ್ಟು ತಡವಾಗಿತ್ತು. ಹೊರಡುವ ವೇಳೆ ಆಫೀಸಿನ ಜವಾನ ೧೦೦ ರೂ. ಸಾಲ ಕೇಳಿದ. ಮಾರನೇ ದಿನವೇ ಸಂಬಳದ ದಿನ. ಜೇಬಿನಲ್ಲಿ ಸರಿಯಾಗಿ ೧೦೫ ರೂ ಇತ್ತು. ಹೇಗಿದ್ದರೂ ನಾಳೆ ಸಂಬಳವಾಗುತ್ತದಲ್ಲ ಎಂದೆಣಿಸಿ ಅವನಿಗೆ ೧೦೦ ರೂ. ನೀಡಿ ಮನೆಗೆ ಹೊರಟೆ. ಮನೆಗೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ತಂದೆಯವರಿಗೆ ಹೃದಯದ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೊರಡಲೇ ಬೇಕಾಯಿತು,. ಆದರೆ ಜೇಬಿನಲ್ಲಿದ್ದುದು ಐದೇ ರೂಪಾಯಿ ಮಾತ್ರಾ! ದುರದೃಷ್ಟವಶಾತ್ ಸಣ್ಣ ಉಳಿತಾಯ ಏಜೆಂಟ್ ಆಗಿದ್ದ ನನ್ನ ಶ್ರೀಮತಿ ವಸೂಲಾದ ಎಲ್ಲಾ ಹಣವನ್ನೂ ಅಂದೇ ಅಂಚೆ ಕಚೇರಿಗೆ ಜಮಾ ಮಾಡಿ ಬಿಟ್ಟಿದ್ದಳು. ಹಾಗಾಗಿ ಮನೆಯಲ್ಲಿಯೂ ದುಡ್ಡಿರಲಿಲ್ಲ. ಆಸ್ಪತ್ರೆಗೆ ಹೋದರೆ ಇ.ಸಿ.ಜಿ. ವಗೈರೆಗಾಗಿ ಕನಿಷ್ಟ ೫೦೦ ರೂ.ಗಳಾದರೂ ಬೇಕಿತ್ತು. ಹೇಗಾದರಾಗಲಿ ಡಾಕ್ಟರರಿಗೇ ಹೇಳಿ ಮುಂದೆ ಕೊಟ್ಟರಾಯಿತು ಎಂದು ಕೊಂಡು ಹೊರಡಲು ಸಿದ್ಧರಾದೆವು. ಆ ಕ್ಷಣದಲ್ಲಿ ಮನೆಯ ಕಾಲಿಂಗ್ ಬೆಲ್ ಸದ್ದು ಮಾಡಿತು. ನನ್ನ ಮಡದಿಯ ಬಳಿ ಆರ್.ಡಿ. ಖಾತೆ ತೆರೆದಿದ್ದ ನಮ್ಮ ಮೈಸೂರಿನ ನೆಂಟರೊಬ್ಬರು ಒಂದು ವರ್ಷದಿಂದಲೂ ಆ ಬಾಬ್ತು ದುಡ್ಡು ಕೊಟ್ಟಿರಲಿಲ್ಲ. ನಾವೇ ಕಟ್ಟುತ್ತಿದ್ದೆವು. ಆ ಹಣ ನೀಡಲು ಅವರು ಆಗ ಬಂದಿದ್ದರು! ನನ್ನ ಶ್ರೀಮತಿ ಇರುವ ವಿಷಯವನ್ನು ಅವರಿಗೆ ತಿಳಿಸಿ, ಶೀಘ್ರ ಹಣ ಪಡೆದು ನನಗೆ ಕೊಟ್ಟಳು. ಮುಂದಿನದೆಲ್ಲವೂ ಸುಖಾಂತ. ಸುಮಾರು ಒಂದು ವರ್ಷದಿಂದ ಬಾರದ ಆ ವ್ಯಕ್ತಿ, ಯಾವುದೇ ಪೂರ್ವ ಸೂಚನೆಯಿಲ್ಲದೇ ನಮ್ಮ (ಕಷ್ಟದ) ಸಮಯಕ್ಕೆ ಸರಿಯಾಗಿ ಹಾಜರಾಗಿ ನೆರವಾದುದು ವಿಧಿಯ ಕೈವಾಡ (ಪವಾಡ) ವಲ್ಲದೇ ಮತ್ತೇನು?

ಇತ್ತೀಚೆಗೆ ನಡೆದ ಮತ್ತೊಂದು ಘಟನೆಯನ್ನು ನೋಡಿ. ನಾನು ಮತ್ತು ನನ್ನ ಮಗ ಕಾರ್ಯಾರ್ಥವಾಗಿ ಬೆಂಗಳೂರಿಗೆ ಹೋಗಿದ್ದೆವು. ವಾಪಸು ಬರಲು ಬಸ್ ಸ್ಟ್ಯಾಂಡಿಗೆ ಬಂದಾಗ ಸುಮಾರು ಐದು ಗಂಟೆ ಆಗಿತ್ತು. ನಾವು ಬಂದ ಕ್ಷಣದಲ್ಲೇ ಶಿವಮೊಗ್ಗಕ್ಕೆ ಒಂದು ಬಸ್ಸು ಹೊರಟು ನಿಂತಿತ್ತು. ಸಾಕಷ್ಟು ಆಸನಗಳು ಖಾಲಿಯೇ ಇದ್ದವು. ಅದೇ ಕ್ಷಣದಲ್ಲಿ ಇನ್ನು ೧೫ ನಿಮಿಷದ ನಂತರ ಹೊರಡುವ ಮತ್ತೊಂದು ಬಸ್ಸು ಅಲ್ಲಿಗೆ ಬಂದಿತು. ನನ್ನ ಮಗ ಆಗಲೇ ಹೊರಟು ನಿಂತಿದ್ದ ಬಸ್ಸಿಗೇ ಹೊರಡಲು ಒತ್ತಾಯಿಸಿದ. ಆದರೆ ನನಗೇನಸಿತೋ ತಿಳಿಯದು. ಬೇಡ, ಆರಾಮಾಗಿ ಮುಂದಿನ ಬಸ್ಸಿಗೆ ಹೋಗೋಣ ಎಂದು ಹಿಂದೆ ಸರಿದೆ (ನನ್ನ ಮಗನ ಮುಂದುವರೆದ ಒತ್ತಾಯದ ನಡುವೆಯೂ). ನಂತರ ನಮ್ಮ ಪ್ರಯಾಣ ನಂತರದ ಬಸ್ಸಿನಲ್ಲಿ ಸಾಗಿತು. ಸುಮಾರು ರಾತ್ರಿ ೧೦ ಗಂಟೆ ವೇಳೆ ನಾವು ಪಯಣಿಸುತ್ತಿದ್ದ ಬಸ್ಸು ತಕ್ಷಣ ನಿಂತಿತು. ಮುಂದೆ ನೋಡಿದರೆ ಮತ್ತೊಂದು ಬಸ್ಸು ತೀವ್ರವಾದ ಅಪಘಾತಕ್ಕೊಳಗಾಗಿ ಸಾಕಷ್ಟು ಸಾವು-ನೋವುಗಳಾಗಿದ್ದವು. ಹಾಗಾಗಿ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಯಿತು. ಮುಂದೆ ಸಾಗುವಾಗ ಅಪಘಾತವಾದ ಬಸ್ಸನ್ನು ಸಮೀಪದಿಂದ ನೋಡಿದ ನಮಗಾದ ಆಘಾತ ಅಷ್ಟಿಷ್ಟಲ್ಲ. ಅದು ಬೇರೆ ಯಾವುದೇ ಬಸ್ ಆಗಿರದೆ ನಾವು ಬೆಂಗಳೂರಿನಲ್ಲಿ ಸ್ಟ್ಯಾಂಡ್‌ಗೆ ಬಂದ ಕೂಡಲೇ ಹೊರಡು ರೆಡಿಯಾಗಿದ್ದ ಮೊದಲನೇ ಬಸ್! ಅಂದು ಆ ಸಮಯದಲ್ಲಿ ಪರಮಾತ್ಮ ನನಗೆ ಅಂತಹ ಮನಸ್ಸು ಹೇಗೆ ಕೊಟ್ಟ? ನಾನೇಕೆ ನನ್ನ ಮಗನ ಮಾತಿನಂತೆ ಆ ಬಸ್ಸಿಗೇ ಹತ್ತಲಿಲ್ಲ? ಎಂಬುದನ್ನು ನಾನು ಇಂದಿಗೂ ವಿಚಾರ ಮಾಡುತ್ತಲೇ ಇದ್ದೇನೆ.

ನಾವು ಮನೆ ಕಟ್ಟಲು ಉಪಕ್ರಮಿಸಿದಾಗ ಏನೂ ಅನುಭವವಿಲ್ಲದ ನಾವು ಬಹಳ ಚಿಂತೆಯಲ್ಲಿದ್ದೆವು. ಆಗ ನನ್ನ ಸ್ನೇಹಿತರೊಬ್ಬರ ಗೆಳೆಯರಾದ ಶ್ರೀನಿವಾಸ ಎಂಬುವವರು ಪರಿಚಿತರಾಗಿ, ನಮ್ಮ ಸಂದರ್ಭವನ್ನು ಅರಿತು ಸಹಾಯ ಮಾಡಲು ಮುಂದಾದರು. ಯಾವುದೇ ಪೂರ್ವ ಪರಿಚಯವಿಲ್ಲದಿದ್ದರೂ ಮೊದಲಿಂದ ಕೊನೆಯವರೆಗೆ ನಿರ್ಮಾಣ ಪೂರ್ಣವಾಗುವವರೆಗೆ ಸ್ವತ: ತಾವೇ ನಿಂತು ನಿಗಾ ವಹಿಸಿ ನಮ್ಮೆಲ್ಲ ಜವಾಬ್ದಾರಿಯನ್ನು ಸಾಕಷ್ಟು ತಾವೇ ಹೊತ್ತಿದ್ದರು. ಮನೆ ನಿರ್ಮಾಣವಾದ ಸ್ವಲ್ಪ ಸಮಯದಲ್ಲೇ ಯಾವುದೋ ಕಾರಣಕ್ಕಾಗಿ ನಾವು ಮನೆಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ನಡೆಸಿದೆವು. ಅದಾದ ಒಂದೆರಡು ವರ್ಷದಲ್ಲೇ ನಾನು ಸೇವೆಯಿಂದ ಸ್ವಯಂ ನಿವೃತ್ರಿ ಪಡೆದು ಆ ಮನೆಯನ್ನು ಮಾರಿ ಶಿವಮೊಗ್ಗಕ್ಕೆ ಬಂದೆ. ನನ್ನ ನಾದಿನಿಯ ಮೂಲಕ (ಅವರ ಪತಿಯೂ ಶ್ರೀನಿವಾಸನೇ!) ಅಕಸ್ಮಾತ್ ಸಿಕ್ಕ ಮಾಹಿತಿಯನ್ನನುಸರಿಸಿ ಹೊರಟಾಗ ನಾವು ಕೆಳದಿ ಕವಿ ಮನೆತನಕ್ಕೆ ಸೇರಿದ ವಿಷಯ ತಿಳಿಯಿತು. ನಮ್ಮ ಮನೆ ದೇವರು ಕೊಲ್ಲೂರು ಮೂಕಾಂಬಿಕೆ. ಆದರೆ ನಮ್ಮ ವಂಶದ ಬಗ್ಗೆ ತಿಳಿಯುತ್ತಾ ಹೋದಂತೆ ಕೊಲ್ಲೂರು ಮೂಕಾಂಬಿಕೆ ನಮ್ಮ ಆರಾಧ್ಯ ದೈವವೆಂದೂ, ಶ್ರೀ ವೆಂಕಟರಮಣಸ್ವಾಮಿ ನಮ್ಮ ಕುಲದೇವರೆಂಬ ಅಂಶವೂ ಹೊರಬಂದಿತ್ತು. ಶಿವಮೊಗ್ಗೆಯಲ್ಲಿ ಹೊಸದಾಗಿ ಬಂದಾಗ ನಮಗೆ ಆಶ್ರಯ ನೀಡಿದ್ದೂ ಮತ್ತು ಹೊಸ ನಿವೇಶನ ಖರೀದಿಸಲು ಸಹಾಯ ಮಾಡಿದ್ದೂ ಕೂಡ ನನ್ನ ಷಡ್ಡುಕರಾದ ಶ್ರೀನಿವಾಸ ರವರೇ! ಹೊಸ ಗೆಳೆಯನಾಗಿ ಬಂದ ಆ ಶ್ರೀನಿವಾಸ ನೇ ನಮಗೆಲ್ಲಾ ಆ ವೆಂಕಟರಮಣಸ್ವಾಮಿಯ ರೂಪದಲ್ಲಿ ಬಂದು ಮನೆ ನಿರ್ಮಿಸಲು ಸಹಾಯ ಮಾಡಿದ್ದು, ನಂತರ ನಮಗರಿವಿಲ್ಲದೆಯೇ ಆ ಮನೆಯಲ್ಲಿ ಶ್ರೀನಿವಾಸನ ಕಲ್ಯಾಣೋತ್ಸವ
ನಡೆದದ್ದು, ಶಿವಮೊಗ್ಗೆಯಲ್ಲಿ ನೆಲೆಸಲೂ ಪುನ: ಶ್ರೀನಿವಾಸನೇ ನೆರವಾದದ್ದು ಮತ್ತು ನಂತರ ವೆಂಕಟರಮಣಸ್ವಾಮಿಯೇ (ಶ್ರೀನಿವಾಸನೇ) ನಮ್ಮ ಕುಲದೇವರೆಂದು ತಿಳಿದದ್ದು - ಎಲ್ಲಾ ನೆನೆದಾಗ ನಾವು ಶ್ರೀನಿವಾಸ, ಶ್ರೀನಿವಾಸ ಅನ್ನದೇ ಬೇರೆನೆನ್ನಲು ಸಾಧ್ಯ?
ಇಂತಹ ಘಟನೆಗಳು - ಅನುಭವಗಳು ಹತ್ತು ಹಲವಾರು. ಇವುಗಳಿಗೆ ಮೂಲ ಶಕ್ತಿಯನ್ನಾಗಲೀ ಅಥವಾ ಆ ಸಮಯದ ಮನ: ಪ್ರೇರಣೆಗೆ ಕಾರಣವನ್ನಾಗಲೀ ಹುಡುಕುವುದು ಬಹಳ ಕಷ್ಟಕರವಾದ ಕೆಲಸ. ಆದರೆ ಒಂದು ಅಂಶವಂತೂ ಸತ್ಯ. ನಮಗೆ ಕಾಣಿಸದ, ನಮ್ಮನ್ನು ಮೀರಿದ, ನಮಗೆ ಇನ್ನೂ ಅರ್ಥವಾಗದ ಅತೀಂದ್ರಿಯವಾದ ಶಕ್ತಿ ಎಂಬುದೊಂದಿದೆ ಎನ್ನುವುದು. ಆಸ್ಥಿಕರು ಇದನ್ನು ಪರಮಾತ್ಮ/ದೇವರು ಎಂದರೆ (ಕು)ವಿಚಾರವಾದಿಗಳೆನಿಸಿಕೊಂಡವರು ಅದಕ್ಕೆ ಕಾಕತಾಳೀಯ ಇಲ್ಲವೇ ಪವಾಡ ವೆಂಬ ಹಣೆಪಟ್ಟಿ ಕಟ್ಟುವರು. ಆದರೆ ಈ ಇಬ್ಬರೂ ಇಂತಹ ಒಂದು ಅತೀಂದ್ರಿಯ ಶಕ್ತಿಯನ್ನು, ಅದರ ಮೂಲವನ್ನು ಸಂಪೂರ್ಣವಾಗಿ ಬೇಧಿಸುವಲ್ಲಿ ಮಾತ್ರ ಇಂದಿಗೂ ಅಸಮರ್ಥರಾಗಿರುವುದೆಂಬುದಂತೂ ಸತ್ಯ.

ಅದೇ ರೀತಿ ಪ್ರಕೃತಿಯ ಅನೇಕ ವೈಶಿಷ್ಟ್ಯಗಳನ್ನೂ ಗಮನಿಸಿ. ಆಗ ತಾನೇ ಹುಟ್ಟಿದ ಕರು ನಾಲ್ಕೈದು ಬಾರಿ ಎದ್ದು ಕುಳಿತು ನಿಂತುಕೊಂಡ ಮೇಲೆ ಅದು ತಾಯಿ ಹಸುವಿನ ಕೆಚ್ಚಲಿನ ಕಡೆಗೇ ಸಾಗುವುದನ್ನು ಅದಕ್ಕೆ ಕಲಿಸಿದವರಾರು? ಗೂಡಿನಲ್ಲಿ ಇನ್ನೂ ಕಣ್ತೆರೆಯದ ಮರಿಹಕ್ಕಿಗಳು ತಾಯಿಹಕ್ಕಿ ಬಂದೊಡನೆಯೇ ಚೀ ಗುಟ್ಟುತ್ತಾ ಬಾಯಿ ತೆರೆದುಕೊಳ್ಳುವುದೂ ಒಂದು ಆಶ್ಛರ್ಯವೇ. ದೇಶದಿಂದ ದೇಶಕ್ಕೆ ವಲಸೆ ಬಂದು, ಸಂತಾನ ಬೆಳೆಸಿ, ಪುನ: ಸಾವಿರಾರು ಮೈಲು ಕ್ರಮಿಸಿ ಸ್ವದೇಶ ಸೇರುವ ಹಕ್ಕಿಗಳಿಗೆ ದಾರಿದೀಪ ಯಾರು? ನದೀ ಅಥವಾ ಸಮುದ್ರ ತೀರಗಳಲ್ಲಿ ಮೊಟ್ಟೆಯೊಡೆದು ಹೊರ ಬರುವ ಅಸಂಖ್ಯಾತ ಆಮೆ ಮರಿಗಳು ನೇರವಾಗಿ ನದಿ ಇಲ್ಲವೇ ಸಮುದ್ರದೆಡೆಗೇ ಸಾಗಲು ಕಲಿಸಿದವರಾರು? ಯಾವುದೇ ತರಬೇತಿ ಇಲ್ಲದೇ ಈಜುವ ಹಸು, ನಾಯಿ, ಬೆಕ್ಕು, ಹುಲಿ, ಚಿರತೆ ಮುಂತಾದ ಪ್ರಾಣಿ-ಪಕ್ಷಿಗಳಿಗೆ ಈಜಲು ಕಲಿಸಿದವರಾರು? ಇಂತಹ ಪ್ರಕೃತಿಯ ನಿಗೂಢಗಳು ಅಸಂಖ್ಯಾತ ಮತ್ತು ಅಪಾರ.

ಎಲ್ಲವೂ ನನ್ನಿಂದಲೇ - ನನ್ನಿಂದಲೇ ಎಲ್ಲವೂ ಎಂದು ಭಾವಿಸಿರುವ ನಾವುಗಳು ಇಂತಹ ಅನುಭವಗಳನ್ನು ಮತ್ತು ಪ್ರಕೃತಿಯ ಮೇಲಿನಂತಹ ಚಮತ್ಕಾರಗಳನ್ನು ನೋಡಿದಾಗ ನಮ್ಮ ಕುಬ್ಜತನದ ಅರಿವಾದೀತು. ಕಷ್ಟಗಳು, ಸಮಸ್ಯೆಗಳು ಎಲ್ಲರಿಗೂ ಬಂದೇ ಬರುತ್ತದೆ. ಅಂತಹ ಕೈ ಮೀರಿದ ಅನೇಕ ಸಂದರ್ಭಗಳಲ್ಲಿ ನಮಗೆ ಅನಿರೀಕ್ಷಿತವಾದ ಜಾಗದಿಂದ, ಅಪರಿಚಿತ ವ್ಯಕ್ತಿಯಿಂದ ಇಲ್ಲವೇ ಕಾಣದ ಒಂದು ಶಕ್ತಿಯಿಂದ ಸಹಾಯ ಒದಗಿ ಬಂದಿರುತ್ತದೆ. ಅಂತಹ ಸಂದರ್ಭಗಳನ್ನು ನಾವೆಂದೂ ಮರೆಯಬಾರದು. ಆ ಉಪಕಾರ ಸ್ಮರಣೆ ಕಾಣುವ ಮತ್ತು ಕಾಣದಿರುವ ಶಕ್ತಿಗಳಿಗೂ ಸದಾ ನಮ್ಮಿಂದ ಸಲ್ಲಿಕೆಯಾಗಬೇಕು. ತೆಗೆದುಕೊಂಡ ಸಹಾಯವನ್ನು ಮತ್ತು ಉಪಕಾರವನ್ನು ನೆನೆಯದಿರುವವನು ಮಹಾದ್ರೋಹಿಯೇ ಸರಿ. ಇಂತಹ ಅನುಭವಗಳು ನಾವು ಇತರರ ಸಂಕಷ್ಟಗಳಿಗೆ ಸ್ಪಂದಿಸಲು ಸ್ಫೂರ್ತಿದಾಯಕ ಅಂಶಗಳಾಗಬೇಕು. ಆದರೆ ಪರರ ಕಷ್ಟದ ಕಾಲದಲ್ಲಿ ನೀವೇನಾದರೂ ಸಹಾಯ ಮಾಡಿದ್ದರೆ ಅದಕ್ಕಾಗಿ ಹೆಮ್ಮೆ ಪಡಬೇಡಿ; ಸಹಾಯ ಪಡೆದವನ ಮನಸ್ಸಿನಲ್ಲಿ ಅಂತಹ ಒಂದು ಭಾವನೆಗೂ ಎಡೆಮಾಡಬೇಡಿ. ಅಂತಹ ಒಂದು ಸದವಕಾಶ ನಿಮಗೆ ಸಿಕ್ಕಿತಲ್ಲ ಎಂದು ಸಂತಸ ಪಡಿ; ಅದಕ್ಕಾಗಿ ಆ ಶಕ್ತಿಗಳಿಗೆ ಋಣಿಯಾಗಿರಿ. ಏಕೆಂದರೆ ಆ ಭಗವಂತ ಅಥವಾ ಆ ಕಾಣದ ಕೈ ನಿಮ್ಮ ಮೂಲಕ ಆ ಒಳ್ಳೆಯ ಕೆಲಸವನ್ನು ಮಾಡಿಸಿದ್ದಾನಷ್ಟೆ. ಅವನೇ ನಿಜವಾದ ನಿರ್ದೇಶಕ. ನೀವೊಬ್ಬ ಕೇವಲ ನಟ ಅಥವಾ ಸಾಧನ ಮಾತ್ರ. ಪರರಿಗೆ ಸಹಾಯ ಮಾಡುವಾಗ ಮತ್ತು ಪರರಿಂದ ಸಹಾಯ ಪಡೆಯುವಾಗ ಇಂತಹ ಭಾವ ಸದಾ ನಮದಾಗಿರಲಿ. ಅರ್ಥವಾಗದ್ದಕ್ಕೆ, ಅರಗಿಸಿಕೊಳ್ಳಲಾರದ್ದಕ್ಕೆ ಮತ್ತು ವಿವರಣಾತೀತವಾದಂತಹ ಅಂತಹ ಶಕ್ತಿಗಳಿಗೆ ಸದಾ ಶರಣು, ಶರಣು ಎನ್ನಿ.

ಎಲ್ಲವೂ ನೀನೇ, ನಿನ್ನಿಚ್ಛೆಯೇ ನಡೆಯಲಿ ಎಂಬ ಸ್ಥಿತಿಯನ್ನು ಮುಟ್ಟಿದಾಗ ಮಾತ್ರ ಶರಣಾಗತಿ ಪೂರ್ಣವಾದಂತೆ. ನಾನು ನಿನಗೆ ಶರಣು ಎಂದು ಬಾಯಿಮಾತಿನಲ್ಲಿ ಹೇಳಿಬಿಟ್ಟು ಮನ ಬಂದಂತೆ ಮಾಡಬಹುದು, ಶರಣಾಗತಿ ಸುಲಭ ಎಂದು ಭಾವಿಸುವುದು ಉಂಟು. ಆದರೆ ವಸ್ತು ಸಂಗತಿ ಬೇರೆ. ಒಮ್ಮೆ ಶರಣು ಹೋದಮೇಲೆ ನಿಮಗೆ ಇಷ್ಟ-ಅನಿಷ್ಟ ಏನೂ ಇರಲಾರದು. ನಿಮ್ಮ ಸಂಕಲ್ಪ ಪೂರ್ಣವಾಗಿ ಅಳಿಸಿಹೋಗಬೇಕು. ಭಗವಂತನ ಸಂಕಲ್ಪವೇ ಪ್ರಧಾನವಾಗಬೇಕು.


ರಮಣ ಶ್ರೀ
-
* ಕವಿ ವೆಂ ಸುರೇಶ್
ಸೌಪರ್ಣಿಕಾ, ೩ನೇ ಮುಖ್ಯ ರಸ್ತೆ,
೩ನೇ ಅಡ್ಡ ರಸ್ತೆ, ಬಸವೇಶ್ವರನಗರ,
ಶಿವಮೊಗ್ಗ ೨೫.೯.೨೦೦೮



Monday, May 9, 2011

ಯೋಚಿಸಲೊ೦ದಿಷ್ಟು...೩೩

೧. ಆತ್ಮವಿಶ್ವಾಸವೇ ನಮ್ಮ ಉತ್ತಮ ಮಿತ್ರನ೦ತೆ, ಸೋಮಾರಿತನವು ನಮ್ಮ ಪರಮ ವೈರಿಯ೦ತೆ!
೨. ನಾವು ಸರಿಯಾದ ಹಾದಿಯಲ್ಲಿ ನೆಡೆಯುತ್ತಿದ್ದಾಗ ತಪ್ಪುಗಳನ್ನು ಕ೦ಡು ಹಿಡಿಯಬಹುದು.. ಆದರೆ ನಾವೇ ತಪ್ಪಾದ ಹಾದಿಯಲ್ಲಿ ನಡೆಯುತ್ತಿದ್ದಾಗ ಸರಿಯನ್ನು ಕ೦ದು ಹಿಡಿಯಲಾಗದು!
೩. ನಮ್ಮಿ೦ದ ನಮ್ಮ ಭವಿಷ್ಯವನ್ನು ಬದಲಾಯಿಸಲಾಗದು... ಆದರೆ ನಮ್ಮ ಹವ್ಯಾಸಗಳನ್ನು ಬದಲಿಸಬಹುದು.. ಉತ್ತಮ ಹವ್ಯಾಸಗಳು ನಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ! – ಡಾ|| ಅಬ್ದುಲ್ ಕಲಾಮ್.
೩. ಆತ್ಮೀಯರ ನಡುವೆ ಪ್ರೇಮದ ಅವಸಾನವಾದಲ್ಲಿ ಕೇವಲ “ಔಪಚಾರಿಕ ನಡೆಗಳು“ ಸೃಷ್ಟಿಯಾಗುತ್ತವೆ... ಔಪಚಾರಿಕತೆಯ ಉದ್ಭವವಾದ ಕೂಡಲೇ ಎಲ್ಲವೂ ಮುಗಿಯಿತೆ೦ದು ಅರ್ಥ..! ನೈಜತೆ ತನ್ನ ಅಸ್ತಿತ್ವವನ್ನು ಕಳೆದುಕೊ೦ಡು.. ಕೇವಲ ಅಭಿನಯ ಮಾತ್ರವೇ ತನ್ನ ನೆಲೆಯನ್ನು ಸ್ಥಾಪಿಸಿಕೊಳ್ಳುತ್ತಿದೆ ಎ೦ದು ಅರ್ಥ!!
೪. ಪ್ರತಿಯೊಬ್ಬರೂ ನಮಗಾಗಿ ಏನನ್ನಾದರೂ ಮಾಡಬಹುದು.. ಆದರೆ ಎಲ್ಲವನ್ನೂ ಅವರೇ ಮಾಡಲಾರರು..!! ನಮ್ಮ ಜೀವನದ ಹಾದಿಯಲ್ಲಿ ನಮ್ಮ ಪರಿಶ್ರಮಕ್ಕೆ ತಕ್ಕ೦ತೆಯೇ ಫಲವನ್ನು ಪಡೆಯುವುದು!
೫. ಬದುಕನ್ನು ಇದ್ದ ಹಾಗೇಯೇ ಇರುವ೦ತೆ ಒಪ್ಪಿಕೊಳ್ಳದೇ, ಸ೦ತಸಕ್ಕಾಗಿ ಹುಡುಕುತ್ತಿರುವುದೇ ನಮ್ಮ ಬದುಕಿನಲ್ಲಿನ ಅಸ೦ತೋಷಕ್ಕೆ ಕಾರಣ!
೬. ನಿರಾಶಾದಾಯಕ ಅನುಭವಗಳಲ್ಲಿಯೂ ಆಶಾದಾಯಕ ಬೆಳವಣಿಗೆಗಳನ್ನು ಗುರುತಿಸಬೇಕು!!
೭. ನಮ್ಮ ಸೋಲಿಗಾಗಿ ಯಾರನ್ನೂ ಕಾರಣಕರ್ತರನ್ನಾಗಿಸ ಕೂಡದು.. ಸೋಲಿಗಾಗಿ ಚಿ೦ತನೆ ನಡೆಸಬೇಕು.. ಜಯದ ಹಾದಿಯತ್ತ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು!
೮. ಹೃದಯವೆ೦ಬುದು ಒ೦ದು ಫಲವತ್ತಾದ ಭೂಮಿಯ೦ತೆ.. ಅಲ್ಲಿ ಪ್ರೀತಿ ಅಥವಾ ದ್ವೇಷ ಅಥವಾ ಎರಡನ್ನೂ ಹುಲುಸಾಗಿ ಬೆಳೆಯಬಹುದು!
೯. “ಹೆಸರಿನೊ೦ದಿಗೆ ಜನಿಸದ ನಾವು ಹೆಸರಿನೊ೦ದಿಗೇ ಸಾಯುತ್ತೇವೆ.. ನಮ್ಮ ಹೆಸರು ಕೇವಲ “ಪದ“ವಾಗಿರದೆ ಒ೦ದು ಇತಿಹಾಸವಾಗಿ ಬದಲಾಗಬೇಕು“ -ಚಾಣಕ್ಯ
೧೦. ಸ್ವತ: ಬಾಯಾರಿದಾಗಲೇ ನೀರಿನ ಮೌಲ್ಯದ ಅರಿವಾಗುವುದು.. ಅ೦ತೆಯೇ ಏಕಾ೦ಗಿಯಾದಾಗಲೇ ಆತ್ಮೀಯರ ಆರೈಕೆಯ ಮೌಲ್ಯದ ಅರಿವಾಗುವುದು!
೧೧. ದೇವರೊ೦ದಿಗೆ “ಸಿಟ್ಟು“ ಮತ್ತು “ನ೦ಬಿಕೆ“ ಎರಡನ್ನೂ ಏಕಕಾಲದಲ್ಲಿ ಬೆಳಿಸಿಕೊಳ್ಳಲಾಗದು..!
೧೨. ದೇವರ ಮೇಲಿನ“ಎಲ್ಲವೂ ನೀನೇ“.. “ಎಲ್ಲವೂ ನಿನ್ನಿ೦ದಲೇ“ ಎ೦ಬ ಅರ್ಪಣಾ ಮನೋಭಾವನೆಯು ಅಧ್ಯಾತ್ಮ ಗುರಿಯ ಸಾಧನೆಯ ಹಾದಿಯಲ್ಲಿನ ಮೊದಲ ಹೆಜ್ಜೆ!
೧೩. ಗೆಳೆತನವೆ೦ಬುದು ಒ೦ದು ಕನ್ನಡಿಯಿದ್ದ೦ತೆ!ಅದು ಒಡೆಯದ೦ತೆ ಕಾಪಿಟ್ಟುಕೊಳ್ಳಬೇಕು.
೧೪. ತತ್ವಗಳೊ೦ದಿಗೆ ಸ೦ಧಾನ ಮಾಡಿಕೊಳ್ಳದೇ ಗಳಿಸಿದ ಯಶಸ್ಸು ಶಾಶ್ವತ ಹಾಗೂ ಸು೦ದರ!
೧೫.ಸಾಧಕರು ಸಮಸ್ಯೆಗಳಿ೦ದ ಸೋಲನ್ನು ಅನುಭವಿಸರು! ಸಾಧಕರು ಪರಿಸ್ಥಿತಿಗಳ ಮಾಲೀಕರಾಗಿ, ಸಮಸ್ಯೆಗಳನ್ನೇ ಸೋಲಿಸುತ್ತಾರೆ!!

Sunday, May 8, 2011

|ಶಿಖರಿಶಿರೋಮಣಿತುಂಗಹಿಮಾಲಯ- ಶೃಂಗನಿಜಾಲಯ-ಮಧ್ಯಗತೇ|


|ಶಿಖರಿಶಿರೋಮಣಿತುಂಗಹಿಮಾಲಯ-
ಶೃಂಗನಿಜಾಲಯ-ಮಧ್ಯಗತೇ|

ಗಂಗಾನದಿಯಲ್ಲಿ ಮಿಂದು ಪುನೀತರಾದ ಭಗವಾನ್ ಶಂಕರರು ಗಂಗಾತಟಕ್ಕೆ ಮೆಟ್ಟಿಲುಗಳನ್ನೇರಿ ಬರುವಾಗ ಅಸ್ಪೃಷ್ಯನೊಬ್ಬ ದಾರಿಗಡ್ಡಲಾಗಿ ಮಲಗಿಬಿಟ್ಟಿದ್ದ. ದಾರಿ ಕೊಡೆಂದು ಕೇಳಲಾಗಿ ದಾಟಿಹೋಗೆಂದು ಶಂಕರರಿಗೆ ಹೇಳಿದ. ಏನೇ ಮಾಡಿದರೂ ಅಗಲವಾದ ಪಾವಟಿಗೆಗಳನ್ನು ಹತ್ತುವಾಗ ಆತನ ಸ್ಪರ್ಷ್ಯವಾಗುವುದು ಅನಿವಾರ್ಯವಾಗಿತ್ತು. ಆತನಲ್ಲಿ ಏನೇ ಹೇಳಿದರೂ ಆತ ಅತಿಯಾದ ಕೋಪವನ್ನು ತೋರುತ್ತಿದ್ದ. ಶಂಕರರೂ ಸ್ವಲ್ಪ ಗದರಿದರು. ’ತೊಲಗಾಚೆ’ ಎಂದರು. ಆ ಕ್ಷಣ ಆತ ಕೇಳಿದ " ನೀನು ತೊಲಗಾಚೆ ಎಂದಿದ್ದು ನನ್ನ ದೇಹಕ್ಕೋ ಅಥವಾ ನನ್ನ ಆತ್ಮಕ್ಕೋ ? ದೇಹಕ್ಕಾದರೆ ನಿನ್ನದೂ ನನ್ನದೂ ಮತ್ತು ಇತರ ಎಲ್ಲಜೀವಿಗಳದೂ ಜಡಶರೀರವಷ್ಟೇ ? ದೇಹದೊಳಗಿನ ಆತ್ಮಕ್ಕಾದರೆ ನನ್ನೊಳಗೂ ನಿನ್ನೊಳಗೂ ಮತ್ತು ಇತರ ಎಲ್ಲಾ ಜೀವಿಗಳೊಳಗೂ ಇರುವ ಆ ಆತ್ಮವೊಂದೇ ಆಗಿದೆ. " ಶಂಕರರು ತಬ್ಬಿಬ್ಬಾಗಿಬಿಟ್ಟರು. ದಿಟ್ಟಿಸಿ ನೋಡುತ್ತಾರೆ ಆತನಲ್ಲಿ ಸಾಕ್ಷಾತ್ ವಿಶ್ವನಾಥನ ರೂಪ ಗೋಚರಿಸುತ್ತದೆ. ಮಹಾದೇವನೇ ತನ್ನನ್ನು ಪರೀಕ್ಷಿಸಲು ಬಂದಿದ್ದನ್ನು ನೋಡಿದ ಶಂಕರರ ಬಾಯಿಂದ ’ಮನೀಷಾ ಪಂಚಕಮ್’ ಹೊರಡಲ್ಪಟ್ಟಿತು!

ಅಂದಿನ ಗೊಂಡಾರಣ್ಯಗಳಲ್ಲಿ ಕಾಲುದಾರಿಯೂ ಇಲ್ಲದ ಜಾಗಗಳಲ್ಲಿ ತಾವೇ ದಾರಿಯನ್ನು ಕಲ್ಪಿಸಿಕೊಂಡು ಶಂಕರರು ಓಡಾಡುತ್ತಿದ್ದರು. ಮಾರ್ಗಮಧ್ಯೆ ಅವರಿಗೆ ಹಲವು ಅಡೆತಡೆಗಳು ಕಾಣಿಸುತ್ತಿದ್ದವು. ಹೇಳಿಕೇಳಿ ಎಳೆಯ ವಟುವಾಗಿದ್ದ ಅವರ ಜೊತೆಗೆ ಆರಂಭದ ದಿನಗಳಲ್ಲಿ ಸಂಚರಿಸಲು ಯಾರೂ ಇದ್ದಿರಲಿಲ್ಲವೆನಿಸುತ್ತದೆ. ಈ ಸೃಷ್ಟಿಯ ಹಲವು ಅಶರೀರ ರೂಪಗಳು ತಮ್ಮ ಮುಕ್ತಿಗಾಗಿ ಶಂಕರರನ್ನು ಅಡರಿಕೊಳ್ಳುತ್ತಿದ್ದವು. ಪಿಶಾಚಿಗಳು, ದೆವ್ವ-ಭೂತಗಳು, ಬ್ರಹ್ಮರಾಕ್ಷಸಾದಿಗಳು ಮಾರ್ಗದಲ್ಲಿ ಸದಾ ಇರುತ್ತಲೇ ಇದ್ದವು. ಇಂದೂ ಕೂಡ ಅವು ಇರುತ್ತವಾದರೂ ನಮಗೆ ಅವುಗಳ ಗೋಚರಿಸುವಿಕೆ ನೇರವಾಗಿ ಕಾಣದೇ ಪರೋಕ್ಷವಾಗಿ ಕಾಣಿಸುತ್ತದೆ. ಉದಾಹರಣೆಗೆ ಎಲ್ಲವೂ ಸರಿಯಾಗಿದ್ದ ವಾಹನ ಬ್ರೇಕ್ ಫೇಲಾಗುವುದು, ಇದ್ದಕ್ಕಿದ್ದಂತೇ ಯಾವುದೋ ಪ್ರಾಣಿ ಅಡ್ಡಬಂದು ಆಮೇಲೆ ನಾಪತ್ತೆಯಾಗುವುದು, ಚಲಿಸುತ್ತಿರುವ ವಾಹನದಲ್ಲಿ ಭಾರಜಾಸ್ತಿ ಎನಿಸಿ ಅಲ್ಲಾಡಿದಂತಾಗುವುದು, ವಾಹನ ಎಷ್ಟೇ ವೇಗದಲ್ಲಿ ಚಲಿಸಿದರೂ ದಾರಿಸಾಗದೇ ಉಳಿಯುವುದು, ವಾಹನದ ವೇಗ ಮಿತಿಮೀರಿದಂತೆನಿಸಿವುದು ---ಇವೆಲ್ಲಕ್ಕೂ ಕೆಲವೊಮ್ಮೆ ಸ್ಥಾನಿಕ ಅಶರೀರಿಗಳ ಆಕ್ರಮಣ ಅಥವಾ ಉಪದ್ರವ ಕಾರಣವಾಗುತ್ತದೆ. ದಿವ್ಯಶಕ್ತಿಯುಳ್ಳ ಶಂಕರರು ಅವುಗಳಿಗೆಲ್ಲಾ ಉತ್ತರಿಸುತ್ತಿದ್ದರು, ಕಾಲಾನಂತರದಲ್ಲಿ ಮಾರ್ಗಗಳಲ್ಲಿ ಚಲಿಸುವ ಜನರಿಗೆ ಉಪಯುಕ್ತವಾಗಲಿ ಎಂಬ ಕಾರಣಕ್ಕೆ ’ಮಾರ್ಗ ಬಂಧು ಸ್ತೋತ್ರ’ ವನ್ನು ರಚಿಸಿದರು. ಈ ಮಾರ್ಗಬಂಧು ಸ್ತೋತ್ರದ ವೈಶಿಷ್ಟ್ಯವೆಂದರೆ ಇಹದಲ್ಲಿ ಚಲಿಸುವವರಿಗೂ, ಧ್ಯಾನಮಾರ್ಗದಲ್ಲಿ ಪರಾಶಕ್ತಿಯ ಗೋಚರವನ್ನು ಬಯಸಿ ಚಲಿಸುವವರಿಗೂ ಇದು ಉಪಯುಕ್ತವಾಗಿದೆ. ಧ್ಯಾನಕ್ಕೆ ಕುಳಿತಾಗಲೂ ಕೂಡ ಮನಸ್ಸನ್ನು ಕೇಂದ್ರೀಕೃತಗೊಳಿಸಲು ಅಡ್ಡಿಪಡಿಸುವ ಹಲವು ಭಾವತರಂಗಗಳು ಬರುತ್ತವೆ. ಅವುಗಳೆಲ್ಲದರಿಂದ ಮುಕ್ತಿ ಸಿಗಬೇಕಾದರೆ ಶಂಕರರ ’ಮಾರ್ಗ ಬಂಧು ಸ್ತೋತ್ರ’ ವನ್ನು ಪಠಿಸಿದರೆ ಉತ್ತಮ.

ಆದಿ ಶಂಕರರು ಮಾತೆಯ ಬಗ್ಗೆ ಬಹಳ ಕಾಳಜಿ ಉಳ್ಳವರಾಗಿದ್ದರು. ಏಕಮಾತ್ರ ಸಂತಾನವಾದ ಅವರು ಸನ್ಯಾಸಿಯಾಗುತ್ತೇನೆಂದು ಹೊರಟಾಗ ಅವರ ತಾಯಿ ಬಹಳ ಪ್ರಯಾಸದಿಂದ ಒಪ್ಪಿಕೊಳ್ಳಬೇಕಾಯಿತು. ಇದ್ದೊಬ್ಬ ಮಗ ಸನ್ಯಾಸಿಯಾಗಿಬಿಟ್ಟರೆ ಸಂಸಾರಿಯಾದ ತನ್ನನ್ನು ನೋಡಿಕೊಳ್ಳುವವರಾರು?. ಆದರೂ ಆ ಮಹಾತಾಯಿ ತನ್ನ ಸ್ವಾರ್ಥವನ್ನು ಮರೆತು ಜಗದ ಜನತೆಗೆ ಉಪಕಾರವಾಗಲಿ ಎಂಬ ದೃಷ್ಟಿಯಿಂದ ಮಗನನ್ನು ಹರಸಿ ಬೀಳ್ಕೊಟ್ಟರು, ಹೊರಡುವಾಗ ಮಗ ಹೇಳಿದ " ಅಮ್ಮಾ ನಿನ್ನ ಕೊನೆಗಾಲದಲ್ಲಿ ಎಲ್ಲಿದ್ದರೂ ನಾನು ಬಂದು ತಲುಪುತ್ತೇನೆ. " ಹೊರಟ ಶಂಕರರು ದೇಶಾಂತರ ಹಲವು ಪ್ರದೇಶಗಳಲ್ಲಿ ಸಂಚರಿಸಿದರು. ಹೀಗಿರುವಾಗ ಒಮ್ಮೆ ಅವರಿಗೆ ತಾಯಿಯ ಅಂತ್ಯ ಸಮೀಪಿಸಿದ ದೃಷ್ಟಾಂತವಾಯಿತು. ಆ ಕೂಡಲೇ ಹೊರಟುನಿಂತ ಅವರು ಪೂರ್ವಾಶ್ರಮದ ಕಾಲಟಿಯ ಮನೆಗೆ ಓಡೋಡಿ ಹೋದರು. ಶಂಕರರ ಅಮ್ಮ ಕೊನೆಯ ಘಟ್ಟದಲ್ಲಿದ್ದರು. ಮಗ ಬಂದುದನ್ನು ಗ್ರಹಿಸುತ್ತಲೇ ಇಹವನ್ನು ತೊರೆದರು. ತೊಡೆಯಮೇಲೆ ತಲೆಇಟ್ಟು ಇಹವನ್ನು ತ್ಯಜಿಸಿದ ಅಮ್ಮನ ಅಂತ್ಯಕ್ರಿಯೆಗೆ ವ್ಯವಸ್ಥೆಮಾಡಬೇಕಾಗಿತ್ತು. ಸನ್ಯಾಸಿಯಾದವನು ಇಹದ ಬಂಧನವನ್ನು ಕಳಚಿಕೊಳ್ಳುವುದರಿಂದ ಅಮ್ಮನ ಉತ್ತರಕ್ರಿಯೆಗಳನ್ನು ಅವರು ಮಾಡುವಂತಿರಲಿಲ್ಲ. ಆದರೆ ಶಂಕರರು ಅಮ್ಮನಿಗೆ ವಚನವಿತ್ತಿದ್ದರು! ಬಹುಶಃ ಧರ್ಮಸಂಕಟವೆಂದರೇ ಇದು! ಸನ್ಯಾಸಿ ಶಂಕರರು ತಾನೇ ಅಮ್ಮನ ಅಂತ್ಯಕ್ರಿಯೆಯನ್ನು ಪೂರೈಸಲು ನಿಂತರು. ಅಕ್ಕ-ಪಕ್ಕದ ಬ್ರಾಹ್ಮಣರಾದಿಯಾಗಿ ಯಾರೇ ಆಗಲಿ ಅವರ ಸಹಾಯಕ್ಕೆ ಬರಲಿಲ್ಲ-ಏಕೆಂದರೆ ಸನ್ಯಾಸಿ ಉತ್ತರಕ್ರಿಯೆಯನ್ನು ಮಾಡುತ್ತಾನೆ ಎಂಬ ಕಾರಣಕ್ಕಾಗಿ. ಆದರೂ ಶಂಕರರು ಧೃತಿಗೆಡಲಿಲ್ಲ. ಅಲ್ಲಿಲ್ಲಿ ಅಲೆದು ಒಂದಷ್ಟು ಸೌದೆ ಒಟ್ಟುಗೂಡಿಸಿದರು, ಚಿತೆಯನ್ನು ಮನೆಯ ಮಗ್ಗುಲಲ್ಲೇ ನಿರ್ಮಿಸಿದರು. ಗತಿಸಿದ ಅಮ್ಮನ ಶರೀರವನ್ನು ಚಿತೆಯಮೇಲಿಟ್ಟು ದಹಿಸಿದರು. ಅಮ್ಮನ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಿದರು. [ಈ ನೆನಪಿನಲ್ಲಿ ಕೇರಳದಲ್ಲಿ ಇವತ್ತಿಗೂ ಹಲವೆಡೆ ಸತ್ತವ್ಯಕ್ತಿಗಳನ್ನು ಮನೆಗಳ ಮಗ್ಗುಲಲ್ಲೇ ಸುಡುವುದು ವಾಡಿಕೆ.]

ಸನ್ಯಾಸಿಗಳಿಗೆ ಜನ್ಮಕೊಟ್ಟ ಅಪ್ಪನೂ ನಮಸ್ಕರಿಸಬಹುದು. ಆದರೆ ತಾಯಿಯಿಂದ ಮಾತ್ರ ಅವರು ನಮಸ್ಕಾರವನ್ನು ಸ್ವೀಕರಿಸುವುದಿಲ್ಲ! ತಾಯ ಋಣ ಅಂಥದು. ಒಂಬತ್ತು ತಿಂಗಳು ಹೊತ್ತು-ಹೆತ್ತು ಸಲಹುವ ಮಮತಾಮಯಿ ತಾಯಿ ಎಂದೂ ತನ್ನ ಮಗುವಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಗಾದೆಯೊಂದು ಹೀಗಿದೆ ’ತಾಯಿ ಮಗನ ಹೊಟ್ಟೆಯನ್ನು ನೋಡುತ್ತಾಳೆ ಹೆಂಡತಿ ಗಂಡನ ಜೇಬು ನೋಡುತ್ತಾಳೆ’ ಇದರರ್ಥ : ದುಡಿದು ಮರಳಿದ ಮಗನ ಹೊಟ್ಟೆ ಯಾವ ರೀತಿ ಹಸಿದು ಪರಿತಪಿಸಿತ್ತಿರಬಹುದು ಎಂಬುದು ತಾಯಿಯ ಚಿಂತೆ ಆದರೆ ಇಂದಿನ ದುಡಿಮೆ ಎಷ್ಟಾಗಿರಭುದು ಎಂಬುದು ಹೆಂಡತಿಯ ಚಿಂತೆ! ತನ್ನ ಊಟಕ್ಕೂ ಮೊದಲು ಮಗನ/ಮಕ್ಕಳ ಊಟವಾಯಿತೇ ಎಂಬುದನ್ನು ತಾಯಿ ಖಾತ್ರಿಪಡಿಸಿಕೊಳ್ಳುತ್ತಾಳೆ. ಒಮ್ಮೆ ತನಗಿರದಿದ್ದರೂ ಮಕ್ಕಳಿಗೆ ಏನನ್ನಾದರೂ ಒದಗಿಸಲು ಪ್ರಯತ್ನಿಸುವ ಆ ತಾಯ ತಾಯ್ತನದ ಜವಾಬ್ದಾರಿ, ಕಳಕಳಿ ಕೇವಲ ಬಾಯಿಂದ ಹೇಳಿ ತೀರಿಸಲಾಗುವ ಋಣವದಲ್ಲ. ತನ್ನ ತಾಯಿಯಲ್ಲೂ ಜಗನ್ಮಾತೆಯನ್ನೇ ಕಂಡ ಶಂಕರರು ’ ದೇವ್ಯಪರಾಧ ಕ್ಷಮಾಪಣ ಸ್ತೋತ್ರ’ವನ್ನು ರಚಿಸಿದರು. ಅದರಲ್ಲಿ ಹಲವು ಸರ್ತಿ ಹೇಳಿದರು--" ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ " [ಒಬ್ಬ ಕೆಟ್ಟ ಮಗುವಿರಬಹುದೇ ಹೊರತು ಕೆಟ್ಟ ತಾಯಿ ಇರಲಾರಳು]

ಆಶುಕವಿತ್ವದ ಆಚಾರ್ಯ ಶಂಕರರು ಹೋದಲ್ಲೆಲ್ಲಾ ಹಲವು ಕೃತಿಗಳನ್ನು ಸರಳ ಸಂಸ್ಕೃತದಲ್ಲಿ ರಚಿಸಿದರು. ಮನೋಹರವಾದ ಶಬ್ದಲಾಲಿತ್ಯದಿಂದ ಕೂಡಿದ ಸ್ತೋತ್ರಗಳು, ಶ್ಲೋಕಗಳು ಎಷ್ಟೇ ಸರ್ತಿ ಉಚ್ಚರಿಸಿದರೂ ಮತ್ತೆಮತ್ತೆ ತಿನ್ನಬೇಕೆನಿಸುವ [ಉಲಿಯಬೇಕೆನಿಸುವ] ಹಪಹಪಿಕೆಯನ್ನೂ ಮನಶ್ಯಾಂತಿಯನ್ನೂ ಕರುಣಿಸುವ ರಸಪೂರಿತ ಹಣ್ಣುಗಳು! ಆಸೇತು ಹಿಮಾಲಯ ಪರ್ಯಂತ ಹಲವಾರು ಬಾರಿ ತಿರುಗಾಡಿದ ಶಂಕರರು ಇಡೀ ಅಖಂಡ ಭರತಖಂಡವನ್ನೂ [ಅಪಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಹಿತದ ಭಾರತ] ಒಮ್ಮೆ ಮಾತೆಯಾಗಿಯೂ ಇನ್ನೊಮ್ಮೆ ಪಿತೃವಾಗಿಯೂ ಕಂಡು ಸ್ತೋತ್ರಗಳನ್ನು ಅನುಗ್ರಹಿಸಿದರು. ಜಗತ್ತೇ ಅರ್ಧನಾರೀಶ್ವರ ಶಕ್ತಿಯ ಪ್ರತೀಕವೆಂಬುದು ಅವರ ಅಭಿಮತವಾಗಿತ್ತು.

ಅಯಿ ಜಗದಂಬ ಮದಂಬ ಕದಂಬ-
ವನಪ್ರಿಯವಾಸಿನಿ ಹಾಸರತೇ |
ಶಿಖರಿಶಿರೋಮಣಿತುಂಗಹಿಮಾಲಯ-
ಶೃಂಗನಿಜಾಲಯ-ಮಧ್ಯಗತೇ|
ಮಧುಮಧುರೇ ಮಧುಕೈಟಭಭಂಜಿನಿ
ಕೈಟಭಭಂಜಿನಿ ರಾಸರತೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||

ಹಿಮಾಲಯಗಳೂ ಗಿರಿಶಿಖರಗಳೂ ಕದಂಬವನಗಳೂ ಶೃಂಗನಿಜಾಲಯಗಳೂ ಎಲ್ಲೆಲ್ಲೂ ದೇವಿಯ, ಜಗನ್ಮಾತೃಕೆಯ ರೂಪವನ್ನು ಕಂಡ, ಆ ದಿವ್ಯರೂಪದ ಮನಸಾ ಉಂಡ ಮಹಾಮಹೋಪಾಧ್ಯಾಯ ಶಂಕರರು ಮುಂದಿನ ಪೀಳಿಗೆಗೆ ತಾನು ಕಂಡ ಸೌಂದರ್ಯವನ್ನು ಸ್ತೋತ್ರಗಳಲ್ಲಿ ಕಟ್ಟಿಕೊಟ್ಟರು.

ಹಿಂದೊಮ್ಮೆ ತಮಿಳುನಾಡಿನ ಮಧುರೆಯಲ್ಲಿ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದಲ್ಲಿ ನೆಲೆಸಿರುವ ಮೀನಾಕ್ಷಿ ಅಮ್ಮನವರು ಕಾರಣಾಂತರಗಳಿಂದ ಕ್ರೋಧಗೊಂಡು ರಾತ್ರಿಯಹೊತ್ತು ಕಾಳಿಯಾಗಿ ಸಂಚರಿಸುತ್ತ ಆಲಯವನ್ನು ಪ್ರವೇಶಿಸುವ ಜನರನ್ನೂ ಪ್ರಾಣಿಗಳನ್ನೂ ನುಂಗುತ್ತಾ ತಿರುಗುತ್ತಿದ್ದಳಂತೆ. ಹಲವಾರು ಬಲಿಗಳನ್ನು ತೆಗೆದುಕೊಳ್ಳುತ್ತಿದ್ದ ಮಹಾಕಾಳಿಯ ಆ ರೂಪವನ್ನು ನೆನೆಯುತ್ತಾ ಹಗಲಿನಲ್ಲೂ ಅರ್ಚಕರು ದೇವಸ್ಥಾನಕ್ಕೆ ಹೋಗುವುದಕ್ಕೆ ಹೆದರತೊಡಗಿದರು! ತೀರ್ಥಯಾತ್ರೆಮಾಡುತ್ತಾ ಬಂದ ಶಂಕರರು ಯಾರ ಮಾತನ್ನೂ ಕೇರ್‍ಳದೇ ರಾತ್ರಿಹೊತ್ತು ಅಲ್ಲೇ ತಂಗಿದರು. ಆ ರಾತ್ರಿ ಅಮ್ಮ ಮೀನಾಕ್ಷಿ ಕಾಳಿಯಾಗಿ ಭಯಂಕರವಾಗಿ ಘರ್ಜಿಸುತ್ತಾ ಏಕಾಏಕಿಯಾಗಿ ಕುಳಿತ ಶಂಕರರೆಡೆಗೆ ಬಂದು ತಿನ್ನುವುದಾಗಿ ಹೆದರಿಸಿದಳು. ಶಂಕರರು ಹೇಳಿಕೇಳಿ ೧೬-೧೭ರ ಹರೆಯದ ಬಾಲಕ! ಪುಕ್ಕಲನಾಗಿದ್ದರೆ ಓಡಿಹೋಗಬೇಕಾಗಿತ್ತು. ಆದರೆ ಶಂಕರರ ವಿಷಯದಲ್ಲಿ ಹಾಗಿರಲಿಲ್ಲ, ಅಮ್ಮನ ರೂಪವನ್ನೇ ಬದಲಿಸಲು ಅವರು ಅಲ್ಲುಳಿದಿದ್ದರು! ಮೀನಾಕ್ಷಿಯನ್ನು ಕಂಡು ನಕ್ಕುಬಿಟ್ಟರು! ಭಯಂಕರಳಾದ ತನ್ನನ್ನು ನೋಡಿ ನಗುತ್ತಿರುವ ಹುಡುಗನನ್ನು ಕಂಡು ಅಮ್ಮನಿಗೂ ಆಶ್ಚರ್ಯವಾಯಿತು. " ಜಗತ್ತಿಗೇ ಅಮ್ಮನಾದ ನೀನು ಮಕ್ಕಳನ್ನೆಲ್ಲಾ ಹೀಗೆ ಹೆದರಿಸುವುದೇ ? " ಎಂಬ ಶಂಕರರ ಪ್ರಶ್ನೆಗೆ ಅಮ್ಮನಲ್ಲಿ ಉತ್ತರವಿರಲಿಲ್ಲ. ಅಮ್ಮನ ಆವೇಶ ನಿಧಾನಾವಾಗಿ ಇಳಿಯುತ್ತಾ ಸಾಗಿತು. ಶಂಕರರಲ್ಲಿ ಸುಂದರೇಶ್ವರನ ರೂಪ ಆಕೆಗೆ ಮನದಟ್ಟಾಯಿತು. ಆದರೂ ಆಕೆ ಪಣವೊಂದನ್ನೊಡ್ಡಿ ಅದನ್ನು ಗೆಲ್ಲುವಂತೇ ಆಜ್ಞಾಪಿಸಿದಳು. ಅದರಂತೇ ಆ ರಾತ್ರಿ ಆ ಪಣವನ್ನು ಗೆಲ್ಲುವ ಸಲುವಾಗಿ ಶಂಕರರು ಚಕ್ರಬಂಧವೊಂದನ್ನು ರಚಿಸುತ್ತಾ ಶ್ಲೋಕದಲ್ಲಿ ಅವುಗಳನ್ನು ವಿವರಿಸುತ್ತಾ ಕುಳಿತರು. ಬೆಳಗಾಗುವಷ್ಟರಲ್ಲಿ ದೇವಿಗೆ ಸೌಮ್ಯಕಳೆ ಬಂದಿತ್ತು. ಶಂಕರರನ್ನು ಪ್ರೀತಿಯಿಂದ ಮೈದಡವಿ ವಿಗ್ರಹದಲ್ಲಿ ಐಕ್ಯವಾದವಳು ಮುಂದೆಂದೂ ಮತ್ತೆ ಕಾಳಿಯ ಉಗ್ರಸ್ವರೂಪವನ್ನು ಧರಿಸಲಿಲ್ಲ. ಅಂದಿನದಿನ ರಚಯಿತವಾದ ಆ ಚಕ್ರಬಂಧವೇ ಶ್ರೀಚಕ್ರವೆಂದು ಪ್ರಸಿದ್ಧಿಪಡೆಯಿತು! ಅದರ ಆರಾಧನೆಗೆ ಸೌಂದರ್ಯಲಹರೀ ಮತ್ತು ಲಲಿತಾ ಸಹಸ್ರನಾಮಗಳು ಶಂಕರರಿಂದ ಕೊಡಲ್ಪಟ್ಟವು. ಇಂದಿಗೂ ಆ ಚಕ್ರವನ್ನು ಗೃಹ ಗೋಷ್ಠಗಳಾದಿಯಾಗಿ ಹಲವೆಡೆ ಧನಾಕರ್ಷಕ ಯಂತ್ರವೆಂದು ಇಟ್ಟು ಪೂಜಿಸುವುದನ್ನು ನೋಡಬಹುದು. ಇದೇ ಶ್ರೀಚಕ್ರವನ್ನು ಶಂಕರರು ಆಮೇಲೆ ಹಲವೆಡೆಗಳಲ್ಲಿ ಶಿಲೆಗಳಮೇಲೆ ಕೊರೆದು ಪ್ರತಿಷ್ಠಾಪಿಸಿದರು. ಪ್ರಮುಖವಾಗಿ ತಿರುಪತಿ, ಶೃಂಗೇರಿ ಮುಂತಾದೆಡೆಗಳಲ್ಲಿ ಅವುಗಳನ್ನು ವಿಗ್ರಹಗಳೆಡೆಯಲ್ಲೇ ಬರೆದರು.

ಸನಾತನ ಧರ್ಮ ತನ್ನ ಮೂಲಧ್ಯೇಯಗಳನ್ನು ಕಳೆದುಕೊಂಡು ಕ್ರಮೇಣ ಹಿಂಸಾತ್ಮಕವಾಗಿ ಪರಿವರ್ತವಾಗುತ್ತಿರುವ ಸನ್ನಿವೇಶದಲ್ಲಿ ಪರಶಿವನ ನೇರ ಅವತಾರವಾಗಿ ಶಂಕರನಾಗಿ ಕೇರಳದ ಕಾಲಟಿಯಲ್ಲಿ ಆರ್ಯಾಂಬೆ ಹಾಗೂ ಶಿವಗುರು ಎಂಬ ದಂಪತಿಯ ಮಗುವಾಗಿ ಜನಿಸಿ ಕೇವಲ ೩೨ ವರ್ಷಗಳಕಾಲ ಭೌತಿಕ ಕಾಯದಿಂದ ಜೀವಿಸಿದ್ದ ಶ್ರೀ ಶಂಕರರು ಹಿಮಾಲಯದ ಕೇದಾರನಾಥದಲ್ಲಿ ಶಿಖರಗಾಮಿಯಾಗಿ ನಡೆದು ಅದೃಷ್ಯರಾದರು, ಪ್ರಕೃತಿಯಲ್ಲಿ ಭೌತಿಕವಾಗಿ ಕಾಣದಾದರು. ಆದರೂ ಇಂದಿಗೂ ಅನೇಕ ನಾಸ್ತಿಕ ಜನರಿಗೆ ಅವರ ಪ್ರೌಢಿಮೆಯನ್ನೂ ಪಾಂಡಿತ್ಯವನ್ನೂ, ಎಳವೆಯ ಅನನ್ಯ ಸಾಧನೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ತತ್ವವೊಂದು ಹೀಗಿದೆ-- ಮೌಂಟ್ ಎವರೆಷ್ಟ್ ಏರಿದವರಿಗೆ ಮಾತ್ರ ಅಲ್ಲಿಂದ ಭೂಮಂಡಲ ಯಾವರೀತಿ ಕಾಣುತ್ತದೆ ಎಂಬುದು ತಿಳಿಯುತ್ತದೆ ಹೇಗೋ ಹಾಗೇ ಅವರವರ ದೃಷ್ಟಿಕೋನದಂತೇ ಮುಂದೆ ಹಲವಾರು ಪಂಥಗಳೂ ಭಕ್ತಿಪಂಥಗಳೂ ಹುಟ್ಟಿಕೊಂಡರೂ ಯಾವುದೇ ಕೊರತೆಯನ್ನಾಗಲೀ ಸಂಶಯವನ್ನಾಗಲೀ ಇಡದೇ ಹಲವು ಜ್ವಲಂತ ಸಾಕ್ಷಿಗಳೊಂದಿಗೆ ಸದಾ ಅ-ದ್ವೈತ ಎಂದು ಸಾರುವ ಪ್ರಕೃತಿಧರ್ಮವನ್ನು ಗಮನಿಸಿದರೆ ಶಂಕರರು ಪ್ರಕೃತಿಯ ಸಹಜ ಧರ್ಮವನ್ನೇ ನಮಗೆ ತಿಳಿಸಿದ್ದಾರೆ ಎಂಬುದು ಗೋಚರವಾಗುತ್ತದೆ. ಕೇವಲ ೩೨ ವಯಸ್ಸೇ ಆಗಿದ್ದರೂ ಹಲವರಿಗೆ ಶಂಕರರು ಮಾತಾ-ಪಿತೃ ಸ್ವರೂಪಿಯಾಗಿ ಕಂಡಿದ್ದಾರೆ; ಕಾಣುತ್ತಾರೆ. ಶಂಕರರಿಗೂ ಮತ್ತು ಅವರಲ್ಲಿರುವ ಮಾತೆಯರೂಪಕ್ಕೂ ನಮಿಸಿದರೆ ಜನ್ಮದಿನವಾದ ಇಂದು ಅವರನ್ನು ನೆನೆದಿದ್ದೂ ಆಗುತ್ತದೆ ಮತ್ತು ಮಾತೆಯರ ದಿನವಾದ ಇಂದು ಅವರನ್ನೂ ಸ್ಮರಿಸಿದ ಹಾಗಾಗುತ್ತದೆ ಎಂಬಕಾರಣದಿಂದ ಹೀಗೆ ನಿಮ್ಮೊಂದಿಗೆ ವಿಷಯ ಪ್ರಸ್ತಾಪಿಸಿದೆ.

ಪದಕಮಲಂ ಕರುಣಾನಿಲಯೇ
ವರಿವಸ್ಯತಿ ಯೋನುದಿನಂ ಸ ಶಿವೇ |
ಅಯಿ ಕಮಲೇ ಕಮಲಾನಿಲಯೇ
ಕಮಲಾನಿಲಯಃ ಸ ಕಥಂ ನ ಭವೇತ್ |
ತವ ಪದಮೇವ ಪರಂಪದಮಿತ್ಯನು-
ಶೀಲಯತೋ ಮಮ ಕಿಂ ನ ಶಿವೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||


|| ಸಮಸ್ತ ಸನ್ಮಂಗಳಾನೀ ಭವಂತು ||