Pages

Tuesday, July 20, 2010

ಸುಧಾಕರಶರ್ಮರು ಬರೆಯಲಿರುವರು

ವೇದಸುಧೆಯ ಅಭಿಮಾನಿಗಳೇ, ನಮಸ್ಕಾರ.
ವೇದಾಧ್ಯಾಯೀ ಸುಧಾಕರಶರ್ಮರು ಸತ್ಯಾನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕ್ರಿಯಾಶೀಲ ವ್ಯಕ್ತಿ. ಅವರಿಂದ ರಾಜ್ಯದಾದ್ಯಂತ ಉಪನ್ಯಾಸಗಳು, ಗುಂಪುಚರ್ಚೆಗಳು, ಸತ್ಸಂಗಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಅವರಿಗೆ ಸಮಯದ ಅಭಾವವು ತುಂಬಾ. ವೇದಸುಧೆಯ ಮೂಲಕ ಅವರಿಗೆ ನಿಷ್ಟುರ ಪ್ರಶ್ನೆಗಳನ್ನು ಕೇಳಲಾಗಿತ್ತು. ಅವರಿಂದ ಉತ್ತರವು ತಡವಾದ್ದರಿಂದ ಶರ್ಮರಿಗೆ ಬೇಸರವಾಗಿರಬಹುದೆಂಬ ಅನುಮಾನಕ್ಕೆ ಕಾರಣವಾಗಿ ಅವರಿಗೆ ವೈಯಕ್ತಿಕವಾಗಿ ಮೇಲ್ ಮಾಡಿದ್ದೆ. ಆದರೆ ಸಮಯದ ಕೊರತೆಯೇ ವೇದಸುಧೆಯಲ್ಲಿ ಬರೆಯದಿರಲು ಕಾರಣವೆಂಬ ಸ್ಪಷ್ಟೀಕರಣ ನೀಡಿ ನನಗೆ ಸುಧೀರ್ಘ ಪತ್ರವನ್ನು ಬರೆದಿದ್ದಾರೆ. ಆದ್ದರಿಂದ ಮುಂದೆ ಅವರ ವಿಚಾರಗಳನ್ನು ಅವರಿಗಾಗಿಯೇ ಇರುವ ಪ್ರತ್ಯೇಕ ಪುಟದಲ್ಲಿ ನಿರೀಕ್ಷಿಸಬಹುದು.
-ಹರಿಹರಪುರಶ್ರೀಧರ್

ಅಧಿಕಮಾಸದ ಹಿನ್ನೆಲೆ

ವೇದಸುಧೆ ಬಳಗದ ಶ್ರೀ ಹಂಸಾನಂದಿಯವರು ಉತ್ತಮ ಬರಹಗಾರರು.ಹಾಸನದವರಾದ ಇವರು ಸಧ್ಯ ಕ್ಯಾಲಿಫೋರ್ನಿಯಾದಲ್ಲಿದ್ದಾರೆ. ಶ್ರೀಯುತರ ಈ ಲೇಖನ ಓದಿ.
-ಶ್ರೀಧರ್

’ದುರ್ಭಿಕ್ಷದಲ್ಲಿ ಅಧಿಕ ಮಾಸ’ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ’ಮೊದಲೇ ಕೊಳೆ ಅದರ ಮೇಲೆ ಮಳೆ’ ಅನ್ನೋ ಗಾದೆಗೂ ಇದೇ ಅರ್ಥ. ಮೊದಲೇ ಕಷ್ಟಗಳು ಇದ್ದಾಗ, ಅದರ ಮೇಲೆ ಇನ್ನಷ್ಟು ಕಷ್ಟಗಳನ್ನು ಬರುವುದನ್ನು ಸೂಚಿಸುತ್ತವೆ ಹೀಗೆ...’ದುರ್ಭಿಕ್ಷದಲ್ಲಿ ಅಧಿಕ ಮಾಸ’ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ’ಮೊದಲೇ ಕೊಳೆ ಅದರ ಮೇಲೆ ಮಳೆ’ ಅನ್ನೋ ಗಾದೆಗೂ ಇದೇ ಅರ್ಥ. ಮೊದಲೇ ಕಷ್ಟಗಳು ಇದ್ದಾಗ, ಅದರ ಮೇಲೆ ಇನ್ನಷ್ಟು ಕಷ್ಟಗಳನ್ನು ಬರುವುದನ್ನು ಸೂಚಿಸುತ್ತವೆ ಹೀಗೆ ದುರ್ಭಿಕ್ಷದಲ್ಲಿ ಅಧಿಕಮಾಸ ಅಂತ ಗಾದೆ ಯಾಕೆ ಬಂದಿದೆ ಗೊತ್ತಾ? ಇದ್ದಕ್ಕಿದ್ದ ಹಾಗೆ ಒಂದು ತಿಂಗಳು ಹೆಚ್ಚಾಗಿ ಹೇಗೆ ಬರುತ್ತೇ ಅಂತೀರಾ?

ಈ ಮಾಸ ಅನ್ನೋ ಪದ ಮಾ ಅನ್ನೋ ಮೂಲದಿಂದ ಬಂದಿದೆ. ಪೂರ್ಣಿ’ಮಾ’, ಅ’ಮಾ’ವಾಸ್ಯೆ ಗಳಲ್ಲಿರುವ ಮಾ ಇದೇನೆ. ಕನ್ನಡದಲ್ಲಿ ಚಂದ್ರ ಅನ್ನೋ ಅರ್ಥ ಬರುವ ತಿಂಗಳು ಎನ್ನುವ ಪದವನ್ನೇ ನಾವು ಮಾಸ ಅನ್ನೋ ಅರ್ಥದಲ್ಲೇ ಬಳಸ್ತೀವೆ. ಈ ಓವರ್‌ಲೋಡೆಡ್ ಪದ ಎಷ್ಟು ಸರ್ವೇಸಾಮಾನ್ಯ ಆಗಿಹೋಗಿದೆ ಅಂದರೆ, ತಿಂಗಳು ಎಂದರೆ ಚಂದ್ರ ಅನ್ನೋದೇ ನಮ್ಮಲ್ಲಿ ಹಲವರಿಗೆ ಮರೆತುಹೋಗಿದೆ. ಆದಿರಲಿ. ತಿಂಗಳು, ಅಥವಾ ಮಾಸ, ಎಂದರೆ, ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಯವರೆಗಿರುವ ಅವಧಿ. ಇದು ಸುಮಾರಾಗಿ ಇಪ್ಪತ್ತೊಂಬತ್ತೂವರೆ ದಿನ, ಅಥವಾ ಸುಲಭವಾಗಿ ಮೂವತ್ತು ದಿನ ಅಂತ ಇಟ್ಟುಕೊಳ್ಳಬಹುದು.

ಕರ್ನಾಟಕದಲ್ಲಿ ನಮಗೆ ವರ್ಷದ ಮೊದಲ ಹಬ್ಬ ಯುಗಾದಿ. ಕರಾವಳಿಯಲ್ಲಿ ಬಿಟ್ಟರೆ, ಉಳಿದವರೆಲ್ಲ ಚಾಂದ್ರಮಾನ ಯುಗಾದಿಯನ್ನೇ ಆಚರಿಸುವುದು ಪದ್ಧತಿ. ಯುಗಾದಿ ಬರುವುದು ಚೈತ್ರದ ಮೊದಲ ದಿನ. ಅಂದ ಹಾಗೆ, ತಿಂಗಳುಗಳಿಗೆ ಚೈತ್ರ, ವೈಶಾಖ ಅಂತಲೇ ಹೆಸರೇಕೆ ಬಂತು ಗೊತ್ತಾ? ಇದೂ ನೂರಾರು ವರ್ಷ ಆಕಾಶವನ್ನು ನೋಡ್ತಾ ಬಂದ ನಮ್ಮ ಪೂರ್ವಿಕರ ಗಮನದ ಹರಹನ್ನು ತೋರಿಸುತ್ತೆ. ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಗೆ ಸುಮಾರು ಮೂವತ್ತು ದಿನ ಬೇಕಾಗಿದ್ದರೂ, ಚಂದ್ರ ಆಕಾಶದಲ್ಲಿ ಒಂದು ಸುತ್ತು ಸುತ್ತೋದಕ್ಕೆ ಇಪ್ಪತ್ತೇಳು-ಇಪ್ಪತ್ತೆಂಟು ದಿನ ಸಾಕು ಅನ್ನೋದು ಅವರಿಗೆ ಗೊತ್ತಾಗಿತ್ತು. ಹೇಗೆ ಅದು? ಈಗಿನ ತರಹ ಆಗ ಲೈಟ್ ಪಲ್ಯೂಷನ್ ಇರಲಿಲ್ಲ ಬಿಡಿ ಆಗ :-) ರಾತ್ರಿ ನಕ್ಷತ್ರಗಳು ಚೆನ್ನಾಗಿ ಕಾಣೋವು. ಹಾಗಾಗೇ, ಚಂದ್ರ ಯಾವಾಗಲೂ ಆಕಾಶದಲ್ಲಿ ಒಂದೇ ದಾರಿಯಲ್ಲೇ ಹೋಗ್ತಾನೆ ಅಂತ ಅವರಿಗೆ ತಿಳಿದಿತ್ತು.
ಹೀಗೆ ಚಂದ್ರ ಹೋಗೋವಾಗ ಕೆಲವು ನಕ್ಷತ್ರಗಳಿಗೆ ಅವನು ಕೆಲವು ದಿನ ಹತ್ತಿರವಾಗಿ ಕಾಣ್ತಾನೆ ಅನ್ನೋದನ್ನೂ ಅವರು ಕಂಡುಕೊಂಡರು. ಚಂದ್ರ ಆಕಾಶದಲ್ಲಿ ಹೊರಟ ಜಾಗಕ್ಕೇ ಮತ್ತೆ ಸುಮಾರು ೨೭-೨೮ ದಿನಗಳಲ್ಲಿ ಬರೋದ್ರಿಂದ, ಪ್ರತಿ ರಾತ್ರಿಯೂ ಅವನ ದಾರಿಯಲ್ಲಿ ಹತ್ತಿರವಾಗಿರೋ ಒಂದು ನಕ್ಷತ್ರವನ್ನು ಗುರುತಿಟ್ಟುಕೊಂಡು, ಅದರಿಂದ ದಿವಸದ ಲೆಕ್ಕಾಚಾರ ಹಾಕೋಕ್ಕೆ ಆರಂಭಿಸಿದರು. ಇವೇ ೨೭ ನಕ್ಷತ್ರಗಳು. ಅವುಗಳಿಗೇ ಅಶ್ವಿನಿ-ಭರಣಿ-ಕೃತಿಕಾ -... ರೇವತಿ ಅಂತ ಹೆಸರು. ಇದೇ ಆಕಾಶವನ್ನು ಸೂರ್ಯ ಒಂದು ವರ್ಷದಲ್ಲಿ ಸುತ್ತೋದ್ರಿಂದ, ಹೀಗೆ ಆಕಾಶವನ್ನ ಪಟ್ಟಿಹಾಕಿ ಅಳತ್ ಮಾಡಿಟ್ಟಿದ್ದು, ಸೂರ್ಯ ಎಲ್ಲಿದ್ದಾನೆ, ಚಂದ್ರ ಎಲ್ಲಿದ್ದಾನೆ ಅನ್ನೋದನ್ನ ಹೇಳೋದಕ್ಕೆ ಅನುಕೂಲ ಆಯ್ತು. ಅಂದರೆ, ಆಕಾಶವನ್ನು ೨೭ ಕಿತ್ತಳೆ ತೊಳೆಗಳ ತರಹ ವಿಂಗಡಿಸಿ, ಒಂದೊಂದಕ್ಕೂ ಒಂದು ನಕ್ಷತ್ರದ ಜಾಗ ಅಂದ್ರೆ, ಸರಿಯಾದ ಹೋಲಿಕೆ ಆಗುತ್ತೆ.

ಇವನ್ನೆಲ್ಲ ಯಾವುದೋ ಪೂಜೆ ಪುನಸ್ಕಾರ ಮಾಡೋ ಮಂತ್ರ ಹೇಳೋ ಗೊಡ್ಡು ಜನಗಳು ಮಾತ್ರ ತಿಳ್ಕೋತಿದ್ರು ಅನ್ನಬೇಡ್ರೀ! ಹಳ್ಳಿ ಹಳ್ಳೀಲಿ ಹೋಗಿ ಕೇಳಿ - ಯಾವ ಮಳೆ ಬಂದರೆ ಏನು ಅನುಕೂಲ ಅಂತ, ಹೇಳಿಯಾರು. ಹೀಗೆ ಅಶ್ವಿನಿ ಮಳೆ ಅಂದರೆ, ಸೂರ್ಯ ಅಶ್ವಿನಿಯ ಭಾಗದಲ್ಲಿ ಇರುವಾಗ ಬೀಳೋ ಮಳೆ ಅಂತ ಅರ್ಥ ಮಾಡಿಕೋಬೇಕು.

ತಿಂಗಳನ್ನು ಮಾಡಲು ಚಂದ್ರನನ್ನಿಟ್ಟವರು, ಮಳೆಗೆ ಮಾತ್ರ ರವಿಯ ಮೊರೆ ಹೋದರೇಕೆ? ಅದು ಸ್ವಾರಸ್ಯವಾದ ವಿಷಯವೇ. ಬೇಸಿಗೆ-ಮಳೆ-ಚಳಿಗಾಲಗಳು ಸೂರ್ಯ ಆಗಸದಲ್ಲಿ ನಕ್ಷತ್ರಗಳ ಹಾಸಿನಲ್ಲಿ ಎಲ್ಲಿದ್ದಾನೆ ಎಂಬುದರ ಮೇಲೆ ಹೊಂದಿಕೊಂಡಿದೆ ಅನ್ನೋದನ್ನು ಅವರು ಅನುಭವದಿಂದ ಅರಿತರು. ಸುಮಾರು ಸರಾಸರಿ ೩೬೦ ದಿನಗಳಲ್ಲಿ ಕಾಲಗಳು ಮತ್ತೆ ಮತ್ತೆ ಬರುತ್ತವೆ ಅಂಬೋದೂ ಅವರಿಗೆ ಗೊತ್ತಾಯ್ತು. ಬಹಳ ವರ್ಷಗಳು ಇದನ್ನೇ ನೋಡಿ, ಒಂದು ವರ್ಷಕ್ಕೆ ೩೬೫ ದಿನಗಳು ಅನ್ನೋದನ್ನು ತಿಳಿದುಕೊಂಡಿದ್ದರು.
ಆದರೆ, ದಿನ-ನಿತ್ಯದ ಕ್ಯಾಲೆಂಡರ್ ಬಳಕೆಗೆ ಸೂರ್ಯನನ್ನು ಬಳಸೋದು ಕಷ್ಟ. ಮೊದಲನೇದಾಗಿ, ಸೂರ್ಯ ಯಾವ ನಕ್ಷತ್ರದ ಬಳಿ ಇದ್ದಾನೆ ಅನ್ನೋದು ನೇರವಾಗಿ ಕಾಣೋಲ್ಲ- ಸೂರ್ಯನ ಬೆಳಕಿನಿಂದ. ಹಾಗಾಗಿ, ಸೂರ್ಯ ಹುಟ್ಟುವ ಮೊದಲು ಪೂರ್ವದಲ್ಲಿ ಯಾವ ನಕ್ಷತ್ರಗಳು ಕಾಣುತ್ತವೆ, ಸಂಜೆ ಮುಳುಗಿದ ನಂತರ ಯಾವ ನಕ್ಷತ್ರಗಳು ಕಾಣುತ್ತವೆ ಎನ್ನೋದನ್ನು ನೋಡಿ, ಸೂರ್ಯ ಯಾವ ನಕ್ಷತ್ರದ ಭಾಗದಲ್ಲಿದಾನೆ ಅನ್ನೋದನ್ನ ಕಂಡುಹಿಡೀಬೇಕಾಗತ್ತೆ. ಆದರೆ, ಚಂದ್ರನ ವಿಷಯ ಹಾಗಲ್ಲ. ಮೊದಲನೆದಾಗಿ, ೨೭ ನಕ್ಷತ್ರಗಳನ್ನ ಮಾಡಿರೋದೇ ಚಂದ್ರನ ಚಲನೆಯ ಮೇಲೆ ಆದ್ದರಿಂದ, ಪ್ರತಿದಿನ ಅವನು ಒಂದು ನಕ್ಷತ್ರದ ಬಳಿ ಇರುತ್ತಾನೆ! ಮತ್ತೆ, ಮಳೆಗಾಲವನ್ನು ಬಿಟ್ಟು, ಉಳಿದ ತಿಂಗಳುಗಳಲ್ಲಿ, ಸುಮಾರು ತಿಂಗಳಲ್ಲಿ ೨೫ ದಿನವಾದರೂ, ಚಂದ್ರನನ್ನು ನೋಡಬಹುದು.

ಅದೂ ಅಲ್ಲದೆ, ಅರ್ಧ ತಿಂಗಳು ಚಂದ್ರ ಹೆಚ್ಚುತ್ತಾನೆ, ಇನ್ನರ್ಧಕ್ಕೆ ಕುಗ್ಗುತ್ತಾನೆ. ಆದ್ದರಿಂದ, ತಿಂಗಳನ್ನು ಎರಡು ಪಕ್ಷ - ಒಂದೊಂದು ಪಕ್ಷಕ್ಕೆ ೧೫ ತಿಥಿ - ಸುಮಾರು ಒಂದು ತಿಥಿ ಒಂದು ದಿನದಷ್ಟೇ. ಹಾಗೇ, ಪ್ರತಿದಿನ ಚಂದ್ರ ಒಂದು ನಕ್ಷತ್ರದ ಬಳಿ ಇರುವುದರಿಂದ, ಆಯಾ ದಿನಕ್ಕೆ ಒಂದು ತಿಥಿ, ಒಂದು ನಕ್ಷತ್ರ ಕೊಟ್ಟರೆ, ಆ ದಿನವನ್ನು ಕ್ಯಾಲೆಂಡರ್ ನಲ್ಲಿ ಸೂಚಿಸುವುದು ಸುಲಭವಾಯಿತು. ಇನ್ನುವರ್ಷದ ೧೨ ತಿಂಗಳುಗಳನ್ನು ಆಯಾ ತಿಂಗಳು ಚಂದ್ರ ಯಾವ ನಕ್ಷತ್ರದ ಬಳಿ ಇರುತ್ತಾನೋ, ,ಅದರಿಂದ ಕರೆದರು. ಉದಾಹರಣೆಗೆ ಚಂದ್ರ ಚಿತ್ತಾ ನಕ್ಷತ್ರದ ಬಳಿಯಿದ್ದು ಆಗುವ ಹುಣ್ಣೀಮೆ ಚೈತ್ರ ಮಾಸಕ್ಕೆ ಸೇರಿದ್ದು. ಹಾಗೇ, ಚಂದ್ರ ಹುಣ್ಣಿಮೆಯಂದು ಅಶ್ವಿನಿ ನಕ್ಷತ್ರದ ಬಳಿ ಇದ್ದರೆ, ಅದು ಆಶ್ವಯುಜ ಮಾಸ ಅಷ್ಟೇ. ಉಳಿದ ಎಲ್ಲಾ ತಿಂಗಳಿಗೂ ಹೀಗೇ ಅರ್ಥ ಕಲ್ಪಿಸಬಹುದು.

ಸರಿ; ಬರಿ ತಿಥಿ, ಮಾಸ, ನಕ್ಷತ್ರಗಳದ್ದೇ ಕಾರುಬಾರಾಯ್ತು ಅಂತೀರಾ? ನಾನು ಹೀಗೇ ಎಲ್ಲೆಲ್ಲಿಗೋ ಹೋಗುತ್ತಾ ಇದ್ದರೆ, ಇವನು ಬರೆಯೋದು ಓದೋದು ದುರ್ಭಿಕ್ಷದಲ್ಲಿ ಅಧಿಕಮಾಸ ಇದ್ದಹಾಗೆ ಅಂದು ಬಿಟ್ಟರೆ ಕಷ್ಟ! ಅದಕ್ಕೆ ಮೊದಲೆ ಅಧಿಕಮಾಸದ ವಿವರ ಕೊಟ್ಟುಬಿಡ್ತೀನಿ. ಸುಮಾರು ೨೯.೫ ದಿನಗಳಿರುವ ೧೨ ತಿಂಗಳು ಎಂದರೆ, ಒಂದು ಚಾಂದ್ರಮಾನ ವರ್ಷದಲ್ಲಿ ೩೫೪ ದಿವಸ. ಅಂದರೆ, ಚೈತ್ರ ಶುದ್ಧ ಪಾಡ್ಯದಂದು ಆಚರಿಸುವ ಈ ವರ್ಷದ ಯುಗಾದಿಗೂ, ಅದೇ ದಿವಸ ಆಚರಿಸುವ ಮುಂದಿನ ವರ್ಷದ ಯುಗಾದಿಗೂ ಮಧ್ಯ ೩೫೪ ದಿವಸ ಅಷ್ಟೇ; ಆದರೆ, ಸರಾಸರಿ ಕಾಲಗಳ ವರ್ಷ ೩೬೫ ದಿನದ್ದು ಎಂದು ಆಗಲೇ ಹೇಳಿದ್ದೇನೆ. ಉದಾಹರಣೆಗೆ ಈ ವರ್ಷ ಮಾರ್ಚ್ ೩೧ಕ್ಕೆ ಇತ್ತು ಯುಗಾದಿ ಅಂತ ಇಟ್ಟುಕೊಳ್ಳಿ. ಮುಂದಿನ ವರ್ಷ ಅದು ಮಾರ್ಚ್ ೨೦ ಕ್ಕೆ ಬರುತ್ತೆ. ಅದರ ಮುಂದಿನ ವರ್ಷ ಮಾರ್ಚ್ ೯ಕ್ಕೆ - ಅದರ ಮುಂದಿನ ವರ್ಷ ಫೆಬ್ರವರಿ ೨೭ಕ್ಕೆ! ಹೀಗೇ ಹೋಗ್ತಾ ಹೋದರೆ, ಹತ್ತು ವರ್ಷ ಆಗೋ ಹೊತ್ತಿಗೆ, ನಮ್ಮ ಯುಗಾದಿ ಬೇಸಿಗೆಯ ಆರಂಭದಲ್ಲಿ ಬರೋ ಬದಲು ಚಳಿಗಾಲದ ಆರಂಭಕ್ಕೆ ಹೊರಟು ಹೋಗುತ್ತಲ್ಲವೇ? ಆಗ, ಉಗಾದಿಗೆ ಉಗುಳುನೀರು ಅನ್ನೋ ಗಾದೆಗಳೆಲ್ಲ ಸುಳ್ಳಾಗಿಹೋಗಲ್ವೇ? ವೇದ ಸುಳ್ಳಾಗಬಹುದು, ಆದರೆ ಗಾದೆ ಸುಳ್ಳಾಗೋಲ್ಲ, ಅಲ್ವಾ? ಹಾಗಿದ್ದರೆಇದಕ್ಕೆ ಏನು ಮಾಡೋದು ಅಂತೀರಾ?

ಆದರೆ, ನಿಮಗೆ ಯಾವತ್ತಾದರು ಡಿಸೆಂಬರ್‌ನಲ್ಲಿ ಯುಗಾದಿ ಹಬ್ಬ ಮಾಡಿರೋ ನೆನಪಿದಿಯೇ? ಯೋಚಿಸ್ತಾ ತಲೇ ಕೆರ್ಕೋಬೇಡಿ. ಯಾಕಂದ್ರೆ ಅದು ಯಾವತ್ತೂ ಆಗಿಲ್ಲ, ಆಗೋದೂ ಇಲ್ಲ! ಈ ತೊಂದರೆ ಅಗೋದು ಚಂದ್ರನ ವರ್ಷಕ್ಕೂ , ಸೂರ್ಯನ ವರ್ಷಕ್ಕೂ ಇರೋ ೧೧ ದಿವಸದ ಅಂತರದಿಂದ ಅಂತ ನಿಮಗೀಗಾಗಲೆ ಮನವರಿಕೆಯಾಗಿರಬೇಕು. ಇದನ್ನ ಹೇಗಪ್ಪಾ ಸರಿ ಮಾಡೋದು? ಲೆಕ್ಕ ಹಾಕಿ - ೧೨ ತಿಂಗಳಿಗೆ ೧೧ ದಿನ ಹಿಂದೆ ಬೀಳೋದಾದರೆ, ಒಂದು ತಿಂಗಳಿಗೆ ೧೧/೧೨ ದಿನ ಆಯಿತು. ಈ ಲೆಕ್ಕದಲ್ಲಿ, ಇಪ್ಪತ್ತೊಂಬತ್ತೂವರೆ ದಿವಸ ಹಿಂದೆ ಬೀಳೋಕೇ ಎಷ್ಟು ತಿಂಗಳು ಬೇಕು? ಸುಮಾರು ೩೨.೧೮ ತಿಂಗಳು.

ಅಂದರೆ ಏನಾಯ್ತು? ಸುಮಾರು ೩೨-೩೩ ತಿಂಗಳಿಗೆ ಒಂದು ಹೆಚ್ಚುವರಿ ತಿಂಗಳನ್ನ ಸೇರಿಸಿದರೆ, ನಾವು ಯುಗಾದಿ ಚಳಿಗಾಲಕ್ಕೆ ಓಡಿಹೋಗೋದನ್ನ ತಪ್ಪಿಸಬಹುದು. ಮೊದಲು ಮಾಡಿದ ಲೆಕ್ಕವನ್ನೇ ಇನ್ನೊಂದು ಸಲ ಮಾಡೋಣ. ಮೊದಲ ವರ್ಷದ ಯುಗಾದಿ ಮಾರ್ಚ್ ೩೧ಕ್ಕೆ. ಎರಡನೇ ವರ್ಷದ ಯುಗಾದಿ ಮಾರ್ಚ್ ೨೦ಕ್ಕೆ (ಈಗ ೧೨ ತಿಂಗಳು ಮುಗಿದಿದೆ). ಮೂರನೇ ವರ್ಷದ ಯುಗಾದಿ ಮಾರ್ಚ್ ೯ಕ್ಕೆ (ಈಗ ೨೪ ತಿಂಗಳು ಮುಗಿದವು). ಇನ್ನು ಮುಂದಿನ ವರ್ಷ - ಓ, ಅಷ್ಟರೊಳಗೆ ೩೩ ತಿಂಗಳು ದಾಟಿ ಹೋಗುತ್ತವೆ ಅಲ್ವಾ? ಹಾಗಿದ್ದರೆ ನಾವು ಒಂದು ಹೆಚ್ಚುವರಿ ತಿಂಗಳನ್ನ ಸೇರಿಸಿಬಿಡೋಣ. ಈ ಹೆಚ್ಚುವರಿ ತಿಂಗಳನ್ನು ಸೇರಿಸದಿದ್ದರೆ, ಹೊಸವರ್ಷದ ಯುಗಾದಿ ಫೆಬ್ರವರಿ ೨೭ಕ್ಕೆ ಬರಬೇಕಿತ್ತು. ಆದರೆ, ನಾವು ಒಂದು ತಿಂಗಳನ್ನು ನಡುವೆ ಜಾಣತನದಿಂದ ಸೇರಿಸಿಬಿಟ್ಟೆವಲ್ಲ? ಹಾಗಾಗಿ ಮೂರನೆ ವರ್ಷದ ಯುಗಾದಿ, ಅವತ್ತಿಗೆ ಮೂವತ್ತು ದಿನ ಮುಂದೆ, ಅಂದರೆ ಮಾರ್ಚ ೨೯ಕ್ಕೆ ಬರುತ್ತೆ! ಅದರ ಮುಂದಿನ ವರ್ಷ ಮಾರ್ಚ್ ೧೮ಕ್ಕೆ, ಅದರ ಮುಂದಿನ ವರ್ಷ ಮಾರ್ಚ್ ೧೧ಕ್ಕೆ, ಅದರ ಮುಂದಿನ ವರ್ಷ - ಮರೀಬೇಡಿ - ೩೨-೩೩ ತಿಂಗಳು ಕಳೆದಿವೆ ಆಗಲೆ, ಹಾಗಂದ್ರೆ, ಏನರ್ಥ? ಯುಗಾದಿ ಫೆಬ್ರವರಿ ೨೮ಕ್ಕೆ ಬದಲಾಗಿ, ಮಾರ್ಚ್ ೩೦ಕ್ಕೆ ಬರುತ್ತೆ.

ಈ ಜಾಣತನದಿಂದೇನಾಯಿತು ನೋಡಿ? ಯುಗಾದಿ ಹಬ್ಬ ಚಳಿಗಾಲಕ್ಕೆ ಹೋಗೋದಿಲ್ಲ, ಉಗಾದಿಗೆ ಉಗುಳುನೀರೂ ತಪ್ಪೋದಿಲ್ಲ. ಇಷ್ಟೇ ಅಧಿಕ ಮಾಸದ ಗುಟ್ಟು. ಚಂದ್ರನ ವರ್ಷ-ಸೂರ್ಯನ ವರ್ಷಗಳು ಆದಷ್ಟೂ ಒಂದಕ್ಕೊಂದಕ್ಕೆ ಬಿಡದೇ ಹೊಂದಿಕೆಯಾಗಿರುವಂತೆ ಮಾಡಿರುವ ಪದ್ಧತಿ ಇದು.

ಇದು ಭಾರತದಲ್ಲಿ ಮಾತ್ರವಲ್ಲದೆ, ಯಹೂದಿಗಳ ಹಿಬ್ರೂ ಪಂಚಾಂಗದಲ್ಲೂ ರೂಢಿಯಲ್ಲಿದೆ. ಅಧಿಕ ಮಾಸ ಯಾವಾಗ ಬರುತ್ತೆ ಅನ್ನೋದರ ಲೆಕ್ಕಾಚಾರ ಸ್ವಲ್ಪ ಬೇರೆಯಾದರೂ, ಸರಾಸರಿ ಎರಡೂ ಸಮಾಂತರವಾಗಿ ಹೋಗುತ್ತವೆ. ಇದನ್ನ ಯಾರು ಕೊಟ್ಟು-ಯಾರು ಕೊಂಡರೋ ಗೊತ್ತಿಲ್ಲ ನನಗೆ; ಅಥವ ಎರಡೂ ಕಡೆ ಬೇರೆಬೇರೆಯಾಗೇ ಈ ಸತ್ಯವನ್ನು ಕಂಡುಕೊಂಡಿರಲೂಬಹುದು.

ಈ ಎಲ್ಲ ಲೆಕ್ಕಾಚಾರಗಳಿರುವುದರಿಂದ, ಇನ್ನೊಂದು ಚಕ್ರವೂ ಪ್ರಾರಂಭವಾಗುತ್ತೆ. ಈ ಅಧಿಕ ಮಾಸಗಳನ್ನು ಹಾಕಿದಾಗಲೂ, ಪ್ರತಿ ವರ್ಷ ಚಂದ್ರನ ವರ್ಷವೂ ಸೂರ್ಯನ ವರ್ಷವೂ ಪೂರ್ತಿ ಸರಿಯಾಗಿ ಒಂದುಗೂಡದು ಅನ್ನೋದನ್ನು ನೀವು ಗಮನಿಸಿರಬಹುದು. ಆದರೆ, ೧೯ ವರ್ಷಗಳಲ್ಲಿ, ಇವೆರಡೂ ಮತ್ತೆ ಸೇರುತ್ತವೆ. ಅಂದರೆ, ಪ್ರತಿ ೧೯ ವರ್ಷಗಳಲ್ಲಿ ಕ್ಯಾಲೆಂಡರ್ ದಿನಾಂಕವೂ, ಚಂದ್ರನ ತಿಥಿ-ನಕ್ಷತ್ರಗಳೂ ಒಂದುಗೂಡುತ್ತವೆ. ಅಂದರೆ, ೧೯೮೦ರ ಜನವರಿ ಒಂದರಂದು ಚಂದ್ರ ಶುಕ್ಲ ಪಾಡ್ಯ, ಅಶ್ವಿನೀ ನಕ್ಷತ್ರದಲ್ಲಿ ಇರುತ್ತಾನೆ ಅಂದುಕೊಳ್ಳಿ (ಸುಮ್ಮನೇ ಅಂದುಕೊಳ್ಳಿ - ನಾನೇನೂ ಪಂಚಾಂಗ ನೋಡಿಲ್ಲ!) ; ೧೯೯೯ ರ ಜನವರಿ ಒಂದರಂದೂ ಕೂಡ ಶುಕ್ಲ ಪಾಡ್ಯ, ಅಶ್ವಿನಿ ನಕ್ಷತ್ರವಾಗಿರುತ್ತೆ. ಹಾಗೇ ೨೦೧೮, ಜನವರಿ ಒಂದರಂದೂ ಅದೇ ತಿಥಿ, ನಕ್ಷತ್ರ! ಇದು ನಿದಾನವಾಗಿ ದೂರ ಸರಿಯುವುದಾದರೂ, ಒಬ್ಬ ವ್ಯಕ್ತಿಯ ಜೀವಿತ ಕಾಲದಲ್ಲಿ ಅಳತೆ ಮಾಡುವಷ್ಟ ಬದಲಾಗದು ಎಂದೇ ಹೇಳಬಹುದು. ೧೯-೨೦ನೇ ಶತಮಾನದಲ್ಲಿ, ಇನ್ನೂ ಜನನ-ಪತ್ರಗಳು ಇಲ್ಲದ ಸಮಯದಲ್ಲಿ, ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕ ತಿಳಿಯದೆ, ಬರೀ ತಿಥಿ-ವಾರ-ನಕ್ಷತ್ರ-ಸಂವತ್ಸರಗಳಿರುವ ಜಾತಕಗಳಿದ್ದಾಗ, ಈ ಹತ್ತೊಂಬತ್ತು ವರ್ಷದ ಚಕ್ರವನ್ನು ಗಮನದಲ್ಲಿರಿಸಿ ಅವರು ಹುಟ್ಟಿದ ದಿನವನ್ನು ಕಂಡುಹಿಡಿದ ಸಂದರ್ಭಗಳೂ ಇವೆ. ಪುರಂದರದಾಸರು ಅಥವ ತ್ಯಾಗರಾಜರು ಮೊದಲಾದ ಪುರಾತನರು ಇಂತಹ ತಿಂಗಳು ಇಂತಹ ತಾರೀಕು ಜನಿಸಿದರು, ಅಥವಾ ಮರಣಿಸಿದರು ಎಂದು ಹೇಳುವಾಗಲೂ ಈ ಹತ್ತೊಂಬತ್ತು ವರ್ಷದ ಚಕ್ರ ತನ್ನ ಕೈಚಳಕ ತೋರಿರುತ್ತದೆ.

-ಹಂಸಾನಂದಿ

ಚಿತ್ರ ಕೃಪೆ - ಇಂಗ್ಲಿಷ್ ವಿಕಿಪಿಡಿಯ


(ಸುಮಾರು ಮೂರು ವರ್ಷಗಳ ಮೊದಲು ಬರೆದಿದ್ದಿದು. ಕೆಲವು ಚಿಕ್ಕಪುಟ್ಟ ಬದಲಾವಣೆ/ತಿದ್ದುಪಡಿಗಳೊಂದಿಗೆ ಹಾಕಿದ್ದೇನೆ)

Sunday, July 18, 2010

ಗುರುಪೂಜಾ ಭಾಷಣ

ದಿನಾಂಕ ೧೮.೭.೨೦೧೦ ಭಾನುವಾರದಂದು ಸಂಘದ ಒಂದು ಗುರುಪೂಜಾ ಉತ್ಸವದಲ್ಲಿ ನಾನು ಮಾಡಿದ ಭಾಷಣದ ಧ್ವನಿ ಇಲ್ಲಿದೆ.
-ಶ್ರೀಧರ್

ಆತ್ಮೀಯ ವೇದಸುಧೆಯ ಅಭಿಮಾನಿಗಳೇ ನಮಸ್ತೆ.

ವೇದಸುಧೆಯು ಜನರಿಗೆ ಹತ್ತಿರವಾಗಬೇಕೆಂದು ನಿತ್ಯವೂ ಒಂದಿಷ್ಟು ಪ್ರಯತ್ನ ಸಾಗಿದೆ. ಇದರ ಫಲವಾಗಿ ಈಗಾಗಲೇ ಹಲವು ಮಿತ್ರರು ತಮ್ಮ ತಮ್ಮ ಹೆಸರಿನಲ್ಲಿ ವೇದಸುಧೆಗೆ ತಾವೇ ನೇರವಾಗಿ ಬರೆಯುತ್ತಿದ್ದಾರೆ. ಮುಖ್ಯಪುಟದಲ್ಲಿ ಈ ಎಲ್ಲಾ ಲೇಖನಗಳು ಪ್ರಕಟವಾಗುತ್ತವೆ. ಅಲ್ಲದೆ ಅವರವರ ಅಭಿರುಚಿಗೆ ತಕ್ಕಂತೆ ವೇದಸುಧೆಯ ಉಪಯೋಗ ಪಡೆಯಲು ನಾಲ್ಕು ಪ್ರತ್ಯೇಕ ಪುಟಗಳು ಆರಂಭಗೊಂಡಿದೆ.

1.ಮುಖಪುಟ: ಇದು ಎಲ್ಲರಿಗಾಗಿ
2.ಎಲ್ಲರಿಗಾಗಿ ವೇದ-ಈ ವಿಷಯದಲ್ಲಿ ಶ್ರೀ ಸುಧಾಕರಶರ್ಮರ ಉಪನ್ಯಾಸಗಳು
3.ವಿವೇಕವಾಣಿ-ವಿವೇಕಾನಂದ-ರಾಮಕೃಷ್ಣರ ವಿಚಾರಗಳು
4.ವೇದಮಂತ್ರಗಳ ಪುಟ
5.ಭಾವಸಂಗಮ

ಪ್ರಶ್ನೋತ್ತರಗಳು, ಚಿಂತನ-ಮಂಥನ,ಉಭಯಕುಶಲೋಪರಿ-ಹೀಗೆ ಇನ್ನೂ ಆರು ಪುಟಗಳು ಸಧ್ಯದಲ್ಲೇ ಆರಂಭಗೊಳ್ಳುವುವು.
ನಿಮ್ಮೆಲ್ಲರ ಸಹಕಾರವು ಎಂದಿನಂತೆ ನಿರೀಕ್ಷಿಸುತ್ತಾ....ನಿಮ್ಮ ಸಲಹೆ/ಪ್ರತಿಕ್ರಿಯೆಗಳನ್ನು ವಿಶೇಷ ಪುಟಗಳಲ್ಲಿ ಬರೆಯಲು ಅನುಕೂಲವಿಲ್ಲದ್ದರಿಂದ ಇದೇ ಬರಹದಡಿ ಯಾವುದೇ ಪುಟಗಳಬಗ್ಗೆ ಪ್ರತಿಕ್ರಿಯೆ/ಸಲಹೆ ನೀಡಲು ಅವಕಾಶವಿರುತ್ತದೆ.
ಮತ್ತೆ ಮತ್ತೆ ಭೇಟಿಯಾಗೋಣ,
-ಶ್ರೀಧರ್

Saturday, July 17, 2010

ಯೋಚಿಸಲೊ೦ದಿಷ್ಟು..... ೩

೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ,ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ,ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯ ಹಸ್ತವನ್ನು ಚಾಚಿದಾಗ, ನಮ್ಮ ಬದುಕು ಸು೦ದರವೂ ಹಾಗೂ ಅರ್ಥಪೂರ್ಣವೂ ಆಗುತ್ತದೆ.
೨.ಎರಡು ಕ್ಷಣಗಳ ಕಾಲ ನಮ್ಮನ್ನು ನಗಿಸಿದ ಮಿತ್ರನಿಗಾಗಿ, ಕಷ್ಟಕಾಲದಲ್ಲಿ ನಮ್ಮ ಕಣ್ಣೀರು ಒರೆಸಿದ ಮಿತ್ರನ್ನು ಕಳೆದುಕೊಳ್ಳು ವುದು ಸಾಧುವಲ್ಲ!

೩. ಸಾಧನೆಗೆ ಅನುಭವದ ಅಗತ್ಯವಿಲ್ಲ. ಅದಕ್ಕೆ ಛಲದ ಮತ್ತು ಬುಧ್ಧಿಶಕ್ತಿಯ ಅಗತ್ಯವಿದೆ!

೪. ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪಿಸುವುದು ಒಳ್ಳೆಯದೇ. ಆದರೆ ಅದು ಮು೦ದಿನ ತಪ್ಪಿಗೆ ರಹದಾರಿಯಾಗಬಾರದು!

೫. “ ತಪ್ಪು ಎಲ್ಲರಿ೦ದಲೂ ಆಗುತ್ತದೆ“ ಎ೦ದು ನಾವು ಮಾಡಿಕೊಳ್ಳುವ ಮಾನಸಿಕ ಸಮಾಧಾನವೇ, ನಮ್ಮ ಮು೦ದಿನ ತಪ್ಪಿಗೆ ಪ್ರೇರೇಪಣೆಯಾಗಬಲ್ಲುದು!

೬.ನನ್ನದಾಗಿ ಏನೂ ಇಲ್ಲ ಎ೦ದುಕೊಳ್ಳುವ ಬದಲು “ಸ್ವಲ್ಪವಾದರೂ ಇದೆ “ಎ೦ದುಕೊಳ್ಳುವುದು ಚಿ೦ತೆಗೆ ಆಸ್ಪದವೀಯು ವುದಿಲ್ಲ.

೭.“ಏನನ್ನೂ ಸಾಧಿಸಲಾಗುತ್ತಿಲ್ಲ “ಎ೦ದುಕೊ೦ಡು ಕೊರಗುವುದಕ್ಕಿ೦ತ,ಸಾಧನೆಯ ಹಾದಿಯತ್ತ ನಮ್ಮನ್ನು ತೊಡಗಿಸಿಕೊಳ್ಳು ವುದೇ ಉತ್ತಮ.

೮. ಯಾವುದೇ ವಿಚಾರದ ಬಗ್ಗೆಯೂ ತೀವ್ರ ಚಿ೦ತನೆ ತರವಲ್ಲ. ಅದು ನಮ್ಮ ಸಾಧನೆಯ ಹಾದಿಯನ್ನು ಗೊ೦ದಲಮಯವಾಗಿಸಬಲ್ಲುದು!

೯. .ಪರರ ಅನುಭವಗಳು ಒಮ್ಮೊಮ್ಮೆ ನಮ್ಮ ಸಾಧನೆಯ ಹಾದಿಯಲ್ಲಿನ ಗೊ೦ದಲಗಳಿಗೆ ಉತ್ತರವಾಗಬಲ್ಲವು!

೧೦. ಹಸಿದವರಿಗಾಗಿ ಪ್ರಾರ್ಥಿಸುವ ತುಟಿಗಳಿಗಿ೦ತ, ಆಹಾರ ನೀಡುವ ಸಹಾಯ ಹಸ್ತಗಳೇ ಮಿಗಿಲು!

11. ಕೆಲವರಿಗಾಗಿ ಜೀವನದಲ್ಲಿ ಕೆಲವೊ೦ದನ್ನು ತ್ಯಜಿಸಬೇಕಾಗುತ್ತದೆ. ಆದರೆ ಕೆಲವೊ೦ದಕ್ಕಾಗಿ ಕೆಲವರನ್ನು ತ್ಯಜಿಸಬಾರದು. ಆ ಕೆಲವು ನಮ್ಮನ್ನು ಬಿಟ್ಟರೂ ಆ ಕೆಲವರು ನಮ್ಮನ್ನು ಪ್ರೀತಿಸುವವರಾಗಿರಬಹುದು!

೧೨.ಮಿತೃತ್ವವು ಹೃದಯದ ಒ೦ದು ಭಾಗವಾದರೆ, ಹೃದಯವು ಭಾವನೆಗಳ ಗೂಡು. ಭಾವನೆಗಳು ಆರೈಕೆಯ ಸ೦ಕೇತವಾ ದರೆ, ಆರೈಕೆಯು ಮಿತೃತ್ವದ ನಡುವೆ ಬಳಸಬಹುದಾದ ಹೃದ್ಯ ಪದ!

13. ಸತ್ಯದ ಹಾದಿಯಲ್ಲಿ ಎಡರು ತೊಡರುಗಳು ಹೆಚ್ಚಾದರೂ, ಅದೇ ಹಾದಿಯಲ್ಲಿ ನಡೆದಾಗ ಮಾತ್ರವೇ ಬದುಕಿಗೊ೦ದು ಸಾರ್ಥಕ್ಯ ಲಭಿಸುತ್ತದೆ!

೧೪.ನಮಗಿ೦ತ ಉನ್ನತ ಮಟ್ಟದಲ್ಲಿರುವವರನ್ನು ಗಮನಿಸುತ್ತಾ,ನಮ್ಮ ಸಾಧನೆಯ ಹಾದಿಯನ್ನು ಆಗ್ಗಾಗ್ಗೆ ಪರಾಮರ್ಶಿಸಿ ಕೊಳ್ಳುತ್ತಿರಬೇಕು.

೧೫. ಆರ್ಥಿಕವಾಗಿ ನಮಗಿ೦ತ ಕೆಳಮಟ್ಟದಲ್ಲಿರುವವರನ್ನು ಗಮನಿಸುತ್ತಾ, ನಮ್ಮ ಬೇಕು-ಬೇಡಗಳ ಪಟ್ಟಿಯನ್ನು ಅ೦ದಾಜು ಮಾಡಬೇಕು.

೧೬. ದೇವರ ಮೇಲೆ ಹಾಕಲಾಗುವ ನಮ್ಮ ಸ೦ಪೂರ್ಣ ಜವಾಬ್ದಾರಿ ನಮ್ಮನ್ನು ಅತ್ಯ೦ತ ನಿಷ್ಕ್ರಿಯರನ್ನಾಗಿ ಮಾಡುತ್ತದೆ!

೧೭. ಅನುಭವಿಗಳೆಲ್ಲಾ ವೃಧ್ಧರಲ್ಲ, ವೃಧ್ಧರೆಲ್ಲಾ ಅನುಭವಿಗಳಲ್ಲ!

೧೮. ಸ್ವತ: ಸಾಧಿಸದೇ, ಬೇರೊಬ್ಬರ ಸಾಧನೆಯ ಫಲವನ್ನು ಉಣ್ಣುವುದು ಸೋಮಾರಿತನ!

೧೯. ಉಪಕರಿಸಿ, ಫಲ ಅಪೇಕ್ಷಿಸುವುದು ಸಾಧುವಲ್ಲ, ಅದರಲ್ಲಿಯೂ, ಬೇರೊಬ್ಬರಿಗೆ ಸಹಾಯ ಮಾಡದೇ, ಅವರಿ೦ದ ಸಹಾಯ ಅಪೇಕ್ಷಿಸುವುದು ಅಸಾಧುವಾದುದು!

೨೦.ದೀರ್ಘಕಾಲ ಹೊಗೆಯಾಡುತ್ತಿರುವುದಕ್ಕಿ೦ತಲೂ ಕ್ಷಣಕಾಲ ದೇದೀಪ್ಯಮಾನವಾಗಿ ಬೆಳಗುವುದು ಲೇಸು.

ಮೂಕ ರೋದನ !

ವೇದದ ಮಹತ್ವವನ್ನರಿಯುವ ಮತ್ತು ವೇದ ಸಂತುಲಿತ ಜೀವನವನ್ನು ನಡೆಸಲು ಬಯಸುವ ಎಲ್ಲ ದೇಶಬಾಂಧವರ ಆದ್ಯ ಕರ್ತವ್ಯ ವೇದದಷ್ಟೇ ಮಹತ್ವವನ್ನು ಪಡೆದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿರುವ ಗೋಮಾತೆಯ ರಕ್ಷಣೆ. ಅದರಲ್ಲೂ ಭಾರತೀಯ ಗೋ ತಳಿಗಳು ದಿನೇ ದಿನೇ ಕ್ಷೀಣಿಸುತ್ತಿವೆ. ಉತ್ತರಕರ್ನಾಟಕದ ಬಹುಭಾಗಗಳಲ್ಲಿ ದಲ್ಲಾಳಿಗಳಿಗೆ ರಾಸುಗಳ ಮಾರಾಟ್ ನಡೆದೇ ಇದೆ. ಇದೀಗ ಕರ್ನಾಟಕ ಸರಕಾರ ಗೋನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಆಕಳುಗಳನ್ನು ಕಾಳಸಂತೆಯಲ್ಲೋ ಅಥವಾ ಹೊರನಾಡಿಗರಿಗೋ, ಪರನಾಡಿಗರಿಗೋ ಮಾರಾಟಮಾಡುತ್ತಾರೆ. ಬದುಕಲು ಗಂಜಿಹುಡುಕುವ ಸ್ಥಿತಿಯಲ್ಲಿರುವ ರೈತ ತನ್ನುಳಿವಿಗಾಗಿ ಇಂತಹ ಮುಗ್ಧ, ಸಾತ್ವಿಕ ಜೀವಿಗಳನ್ನು ಬಲಿಕೊಡುತ್ತಿದ್ದಾನೆ. ಇದನ್ನು ತಪ್ಪಿಸಲು ಮಠ-ಮಾನ್ಯಗಳು ಪಹರೆ ನಡೆಸುತ್ತಿದ್ದರೂ, ಜನ ಜಾಗ್ರತಿ ಹಮ್ಮಿಕೊಂಡಿದ್ದಾರೂ ಇದಿನ್ನೂ ಪೂರ್ತಿಯಾಗಿ ಅಳವಡಿಕೆಯಾಗಿಲ್ಲ.

ದಿನವೂ ಹುಲ್ಲು-ನೀರನ್ನು ಸ್ವೀಕರಿಸುತ್ತ ಅಮೃತತುಲ್ಯ ಹಾಲನ್ನು ನಮಗೀಯುವ ಗೋವು ನಮಗೆಲ್ಲ ಪ್ರಾತಃಸ್ಮರಣೀಯ, ಮಾತ್ರವಲ್ಲ ನೀವೆಲ್ಲ ತಿಳಿದಂತೆ ಗೋವಿನಲ್ಲಿಯೇ ಎಲ್ಲಾ ದೇವತೆಗಳ ವಾಸವಿದೆ ಎಂದು ಭಾವಿಸಿದ್ದೇವೆ ನಾವು. ನಮ್ಮ ಗೃಹಪ್ರವೇಶಕ್ಕಾಗಲೀ ಒಳ್ಳೆಯ ಕಾರ್ಯಕ್ರಮಗಳಲ್ಲಾಗಲೀ ಗೋಪೂಜೆ ಕಡ್ಡಾಯವಾಗಿದೆ -ಇದು ನಮ್ಮ ಆರ್ಷೇಯ ವೇದ ಸಂಸ್ಕೃತಿ. ಉಂಡಮನೆಗೆ ಎರಡು ಬಗೆಯಬೇಡ ಎನ್ನುವುದು ಗಾದೆ, ಆದರೆ ಹಾಲುಂಡ ಮನೆಯನ್ನೇ ನಾವು ಕೆಡವಲು ಹೊರಟಿದ್ದೇವೆ. ವನ್ಯ ಪ್ರಾಣಿಗಳಿಗಾದರೂ ರಕ್ಷಣೆ ಇದೆ ಆದರೆ ನಮ್ಮ ನಡುವೆಯೇ ಇದ್ದು ನಿತ್ಯವೂ ನಮಗೆ ಹಾಲನ್ನು ಸುರಿಸಿ ಬದುಕು ಹಸನಾಗಿಸುವ ಗೋಮಾತೆಯನ್ನು ಮಾತ್ರ ನಾವು ಉಡಾಫೆಮಾತುಗಳಿಂದ ಇನ್ನೂ ಇನ್ನೂ ಇನ್ನೂ ದೂರ ಇಟ್ಟಿದ್ದೇವೆ.

ಕಾಲಘಟ್ಟದಲ್ಲಿ ವೇದದ ತತ್ವ ಸಾರುತ್ತದೆ - ಬೆಳಿಗ್ಗೆ ಎದ್ದು ಶೌಚಾದಿ ನಿತ್ಯಕರ್ಮ ಮುಗಿಸಿ ರಾತ್ರಿ ಕಂಡ ಕೆಟ್ಟ ಕನಸಿನಿಂದ ನೊಂದಿದ್ದರೆ ಅದನ್ನು ಗೋವಿನ ಕಿವಿಯಲ್ಲಿ ಹೇಳಿ ಪ್ರಾರ್ಥಿಸು ! ತಮಗೆಲ್ಲ ಇದು ತಿಳಿದಿರಬಹುದು. ನನ್ನ ತಂದೆಯ ದಿನಚರಿ ಇವತ್ತಿಗೂ ಇದೇ ಇದೆ. ಇದರರ್ಥ ಗೋವು ನಮ್ಮ ಅಹವಾಲನ್ನು ಸ್ವೀಕರಿಸುತ್ತದೆ ಎಂದಲ್ಲವೇ? ಅದೇ ಬಯಲುನಾಡಿನ ಮಠವೊಂದರಲ್ಲಿ ಮೂಕಪ್ಪ ಸ್ವಾಮಿಗಳೆಂಬ ಹೆಸರಿನಲ್ಲಿ ಯಾವ ಒಬ್ಬ ಸನ್ಯಾಸಿಗೂ ಕಡಿಮೆ ಇರದ ಆಚರಣೆ ತೋರುವ ಮೂಕ ಬಸವ ಸ್ವಾಮಿಗಳನ್ನು ನಾವು ನೋಡುತ್ತೇವೆ. ಅಂದಮೇಲೆ ಕೇವಲ ಮಾತು ಬಂದರೆ ಮಾತ್ರ ಎಲ್ಲವೂ ತಿಳಿಯುತ್ತದೆ ಇಲ್ಲದಿದ್ದರೆ ಇಲ್ಲ ಎಂಬ ನಮ್ಮ ಭಾವನೆ ಸಲ್ಲ. ಆದರೂ ದೈವ ಕೊಟ್ಟ ಆ ಶರೀರದಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಬೇಕಾಗಿ ಹೋರಾಡುವ ಅನುಕೂಲಗಳಿಲ್ಲ.

ಅನುಭಾವಿಗಳಾದ ತಮಗೆಲ್ಲ ಹೆಚ್ಚಿಗೆ ಹೇಳಿ ಕೇಳಲಾರೆ. ನನ್ನದೊಂದು ಸಣ್ಣ ಕೋರಿಕೆ, ಎಲ್ಲೆಲ್ಲಿ ಇಂತಹ ಅನಾಹುತಗಳು ನಡೆಯುತ್ತವೆಯೋ ಅದನ್ನು ತಡೆಗಟ್ಟಲು ನಾವೆಲ್ಲ ಶ್ರಮಿಸೋಣ ಎಂಬುದು. ಇದಕ್ಕೆ ತಮ್ಮೆಲ್ಲರ ಸಹಮತವನ್ನು ಯಾಚಿಸುತ್ತೇನೆ. ದಯವಿಟ್ಟು ನಾವು ಬದುಕುಪೂರ್ತಿ ಹಾಲುಂಡ ಮನೆಗೆ ಎರಡು ಬಗೆಯುವುದು ಬೇಡ ಅಲ್ಲವೇ?


ಸಚಿತ್ರ ಸುದ್ದಿ ಋಣ -ವಿಜಯಕರ್ನಾಟಕ ದಿನಪತ್ರಿಕೆ


[ಮೇಲಿನ ಚಿತ್ರವನ್ನು ಕ್ಲಿಕ್ಕಿಸಿ ದೊಡ್ಡದು ಮಾಡಿ ಸುದ್ದಿ ತಿಳಿದುಕೊಳ್ಳಬಹುದು]


ಮೂಕ ರೋದನ !

ನನ್ನೊಡೆಯ ಗೆಣೆಕಾರ ನಿನಗೆರಗಿ ಬೇಡುವೆನು
ಮಾರದಿರು ನನ್ನನೀಗ
ಚೆನ್ನಾಗಿ ಬಾಳೆಂದು ಮನಪೂರ್ತಿ ಹರಸಿಹೆನು
ತೂರದಿರು ಕಟುಕಗೀಗ

ಹನ್ನೆರಡು ಮಕ್ಕಳನು ಹೆತ್ತು ಕೊಟ್ಟೆನು ನಿನಗೆ
ಹಾಲುಣಿಸಿ ಬಹಳ ದಿನವು
ಇನ್ನೆರಡು ವರುಷದಲಿ ಆಯುಷ್ಯ ಮುಗಿಯುವುದು
ನೀರುಣಿಸು ಉಳಿದ ದಿನವೂ

ನಿನ್ನ ಮಕ್ಕಳ ಕಂಡೆ ಮಡದಿ ಕೊಟ್ಟುದನುಂಡೆ
ನನ್ನೆಣಿಕೆ ಮೀರಿ ನೆಡೆದು
ಮುನ್ನ ಹಾಲೀವಾಗ ಪ್ರೀತಿ ಸಿಹಿಸಿಹಿಯುಂಡೆ
ಇನ್ನದಕೆ ಜೀವ ಬರದು !

ಒಡೆಯ ಕೈಮುಗಿಯುವೆನು ಕಣ್ಣಲ್ಲೇ ಪ್ರಾರ್ಥಿಪೆನು
ಅಡಿಗಳಿಗೆ ಎರಗಿ ನಾನು
ಬಡವಾಯ್ತು ಈ ಜೀವ ಸಹಿಸಲಾರದು ನೋವ
ಒಡನಾಡಿ ಕ್ಷಮಿಸೆಯೇನು ?

ಹಣದ ಥೈಲಿಯ ಹುಡುಕಿ ಕಣಕಣದಿ ಅದ ನೆನೆದು
ಗುಣಮರೆತು ಹೋದೆಯಲ್ಲಾ?
ಹೆಣಗಾಟವೀ ಬದುಕು ದೈವ ಚಿತ್ರಿತ ತೊಡಕು
ಒಣಗುತಿದೆ ದೇಹವೆಲ್ಲ !

ಹುಲ್ಲು-ಕಸವನು ತಿಂದು ಸಿಗುವಂತ ನೀರ್ಕುಡಿದು
ಹಾಲೆರೆದೆ ಭವದಿ ನಿಮಗೆ
ಕಲ್ಲು-ಮಣ್ಣೊಳಗಿಟ್ಟು ಮುಚ್ಚಿಬಿಡು ದೇಹವನು
ಅಲ್ಲಿಗದು ಸಾಕು ನನಗೆ

ವಿ.ಆರ್.ಭಟ್
---------------------------------------------------------------
ಭಟ್ಟರೇ,
ಕಣ್ ತೇವವಾಗಿದೆ, ಸಂಕಟವಾಗಿದೆ. ಬಾಯ್ ಒಣಗಿದೆ.ಈ ದೃಶ್ಯವನ್ನು ನೋಡಲಾರೆ.
ಹೃದಯಶೂನ್ಯ ರಾಜಕಾರಣಿಗಳ ಕೈಗೆ ನಮ್ಮ ಜುಟ್ಟನ್ನು ಕೊಟ್ಟು ಈಗ ಸಂಕಟಪಡುವ ಸ್ಥಿತಿ ಬಂದೊದಗಿದೆ. ಗೋಹತ್ಯಾ ನಿಷೇಧ ಕಾನೂನಿಗೆ ವಿರುದ್ಧವಾಗಿ ಹೋರಾಟಮಾಡಲು ನಮ್ಮ ಮಾಜಿ ಪ್ರಧಾನಿಗಳು ಹೊರಟಿದ್ದಾರೆ.ಯಾಕೆ ಹೀಗೆ? ಎಲ್ಲಕ್ಕೂ ರಾಜಕೀಯವೇ? ನಮಗೆ ಈ ರಾಜಕಾರಣಿಗಳಿಂದ ಇನ್ನೇನೂ ಬೇಡ, ಪ್ರತ್ಯಕ್ಷ ದೇವತೆಯಾದ ಗೋಮಾತೆಯ ಮೇಲೆ ಇಂತಹಾ ಅತ್ಯಾಚಾರವೆಸಗುವ ರಾಕ್ಷಸರನ್ನು ಬಗ್ಗುಬಡೆಯಬಾರದೇ? ಇಲ್ಲೂ ರಾಜಕೀಯ ಬೇಕೆ? ಕಣ್ಣಲ್ಲಿ ನೀರು ಬರುವುದರ ಜೊತೆಗೆ ರಕ್ತ ಕುದಿಯುತ್ತಿದೆ, ನಮ್ಮ ಯುವಜಜಾಂಗಕ್ಕೇನಾಗಿದೆ? ಶ್ರೀ ರಾಮಚಂದ್ರಾಪುರದ ಮಠದ ರಾಘವೇಶಭಾರತಿಗಳಂತೂ ಗೋರಕ್ಷಣೆಗಾಗಿ ಅದೆಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೋ! ಆದರೂ ನಿರಂತರ ಗೋಹತ್ಯೆ ನಡೆಯುತ್ತಿದೆಯಲ್ಲಾ! ಗೋಹತ್ಯಾ ನಿಶೇಧ ಕಾನೂನಿಗೆ ಪ್ರತಿಭಟಿಸುವ ನಮ್ಮ ರಾಜಕಾರಣಿಗಳ ಶೈಲಿ ಹೇಗಿದೆ, ಗೊತ್ತಾ? ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಗೋಮಾಂಸ ಭಕ್ಷಿಸಿ ಪ್ರತಿಭಟಿಸಿದ ಅಸಹ್ಯಕರ ಪ್ರತಿಭಟನೆ ನಡೆದಿದೆ!
ತಾಯಿಯ ಹಾಲುಂಡು ಬೆಳೆಯುವುದು ಮಗುವಾಗಿದ್ದಾಗ ೧-೨ ವರ್ಷಗಳು. ಇನ್ನು ಜೀವನ ಪರ್ಯಂತ ಗೋಮಾತೆಯ ಹಾಲಿನಿಂದಲೇ ಬೆಳೆವ ನಾವು ಎಂತಹಾ ನೀಚರಾಗಿ ವರ್ತಿಸುತ್ತಿದೇವೆ?!
ಹಾ!! ಈ ನೀಚ ಪ್ರತಿಭಟನೆಯೆಲ್ಲಾ ರಾಜಕೀಯ ಪ್ರೇರಿತ. ವೈಯಕ್ತಿಕವಾಗಿ ನೀವು ರಾಜಕಾರಣಿಗಳನ್ನು ಮಾತನಾಡಿಸಿದರೆ ನೂರಕ್ಕೆ ೯೫ ಜನ ರಾಜಕಾರಣಿಗಳಿಗೆ ಗೋಹತ್ಯೆ ನಿಷೇಧವಾಗಬೇಕೆಂಬ ಮನಸ್ಸು. ಆದರೆ ಇದು ಎಲ್ಲಿ ಬಿ.ಜೆ.ಪಿ ಯವರಿಗೆ ಇದರ ಲಾಭವಾಗುತ್ತದೋ ಎಂದು ಕೆಟ್ಟ ರಾಜಕಾರಣ!
ಜನಸಾಮಾನ್ಯರಾದ ನಮಗೆ ಈ ರಾಜಕಾರಣ ಬೇಕೆ? ಯಾವ ಪಕ್ಷವಾದರೇನು? ಉತ್ತಮ ಆಡಳಿತ ಮಾಡಿದರಾಯ್ತು. ಈಗಿನ ಬಿ.ಜೆ.ಪಿ ಆಡಳಿತದಲ್ಲಿ ಜನರಿಗೆ ಬೇಸರಮೂಡಿಯಾಗಿದೆ.ಮುಂದೆ ವಿರೋಧ ಪಕ್ಷದವರೇ ಆಳಲು ಅವಕಾಶವಿದ್ದೇ ಇದೆ. ಜನ ಜಾಗೃತಿ ಮೂಡಿಸಿ ಬೇರೆ ಸರ್ಕಾರದ ರಚನೆಯಾಗಲಿ. ಆದರೆ ಯಾವ ಪಕ್ಷದ ಸರ್ಕಾರವಾದರೂ ಇರಲಿ, ಇಲ್ಲಿ ನೆಲದ ಸಂಸ್ಕೃತಿಯುಳಿಸುವ ಹೊಣೆ ಎಲ್ಲರದ್ದೂ ಅಲ್ಲವೇ? ಅದು ಯಾವ ಪಕ್ಷದ ಗುತ್ತಿಗೆಯೂ ಅಲ್ಲ. ಹಾಗೆ ನೋಡಿದರೆ ವಿರೋಧ ಪಕ್ಷಗಳು ಗೋಹತ್ಯಾ ನಿಷೇಧಕಾನೂನಿಗೆ ಬೆಂಬಲಿಸಿ ಜನರ ಒಲವು ಪಡೆಯಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ಈ ನೆಲದ ಪರಂಪರೆಗೆ ಮಾರಕವಾಗುವ ಯಾವುದೇ ವಿಷಯದಲ್ಲಿ ಪಕ್ಷಬೇಧಮರೆತು ಹೋರಾಡಿದರೆ ದೇಶಕ್ಕೂ ಒಳ್ಳೆಯದು, ಜನರ ಒಲವನ್ನೂ ವಿರೋಧಪಕ್ಷಗಳು ಜಾಣತನದಿಂದ ಪಡೆಯಲೂಬಹುದು. ರಾಜಕೀಯ ಮಾತು ಬೇಡವೆಂದರೂ ಅದಿಲ್ಲದೆ ಏನೂ ಇಲ್ಲ. ಹಾಗಾಗಿ ಕ್ಷಮೆ ಇರಲಿ.
-ಹರಿಹರಪುರಶ್ರೀಧರ್
------------------------------------------
ಈ ರೀತಿ ಗೋವುಗಳನ್ನು ನಿರ್ದಯವಾಗಿ ಸಾಗಿಸುವುದನ್ನು ನೀವಾರಾದರೂ ಕಂಡರೆ,
ಕಸಾಯಿಖಾನೆಗೆ ಗೋವುಗಳನ್ನು ಕರೆದೊಯ್ಯುತ್ತಿರುವುದನ್ನು ಕಂಡರೆ,
ನಾವೂ ನೀವು ಅವುಗಳನ್ನು ರಕ್ಷಿಸಬಹುದು. ಅಲ್ಲಿಯೇ ಇರುವ ಜನರನ್ನು ಒಂದುಗೂಡಿಸಿ, ಗೋವುಗಳನ್ನು ತಡೆದು, ಅಗತ್ಯಬಿದ್ದರೆ ಪೋಲೀಸರ ಸಹಾಯವನ್ನೂ ಪಡೆಯಬಹುದು ಗೋರಕ್ಷಣಾ ಕೇಂದ್ರಗಳಿಗೆ ಅವುಗಳನ್ನು ಸಾಗಿಸಬಹುದು.
ಅದಕ್ಕಾಗಿ ಸಂಪರ್ಕ ದೂರವಾಣಿಸಂಖ್ಯೆಗಳು -
ಶ್ರೀ ರಾಜು - 98447 48501
ಮತ್ತು
ಗೋಶಾಲೆ - 08182 260947.
ಹೆಚ್ಚಿನ ಮಾಹಿತಿ ಮಾರ್ಗದರ್ಶನಕ್ಕಾಗಿಯೂ ಇವರನ್ನು ಸಂಪರ್ಕಿಸಬಹುದು.
- ಸುಧಾಕರ ಶರ್ಮಾ