Pages

Wednesday, June 5, 2013

ಸಂಪಾದಕೀಯ

           ಕಳೆದ ನಾಲ್ಕೈದು ವರ್ಷಗಳ ಮುಂಚೆ ನಾನು ಯಾವ ವಿಷಯದಲ್ಲಿ ವೇದಾಧ್ಯಾಯೀ ಸುಧಾಕರಶರ್ಮರೊಡನೆ ವಾದ ಮಾಡುತ್ತಿದ್ದೆನೋ ಅದೇ ವಿಷಯದಲ್ಲಿ ನಾನೀಗ ಬೇರೆಯವರಿಗೆ ಉತ್ತರಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಇಂದು ಮೂರ್ನಾಲ್ಕು ಜನ ಮಿತ್ರರು ಹರಟೆ ಹೊಡೆಯುತ್ತಿದ್ದೆವು. ಮಿತ್ರರೊಬ್ಬರು ನನಗೆ ಒಂದು ಸಲಹೆ ಕೊಟ್ಟರು " ನೋಡೀ, ನೀವು ಸಾಕಷ್ಟು ಸದ್ವಿಚಾರದ ಚಿಂತನೆ ಮಾಡುತ್ತಿರುವಿರಿ, ಆದರೆ ಒಂದು ವಿಷಯದಲ್ಲಿ ನನಗೂ ನಿಮಗೂ ಭೇದ ಇದೆ. ಅದೇನಪ್ಪಾ ಅಂದರೆ ನಿಮಗೆ ಸತ್ಯ ಎನಿಸಿದ್ದನ್ನು ಬರೆಯಿರಿ, ಆದರೆ ಬೇರೆಯವರನ್ನೇಕೆ ಖಂಡಿಸುತ್ತೀರಿ?

      ನಾನೂ ಶರ್ಮರೊಡನೆ ಇದೇ ವಿಚಾರದಲ್ಲಿ ಜಗಳವನ್ನೇ ಮಾಡುತ್ತಿದ್ದೆ. ಮೊನ್ನೆ ಅವರ ಭೇಟಿಯಾದಾಗ ಶರ್ಮರು ಹೇಳಿದರು" ನೋಡಿ, ನಿಮ್ಮ ಪರಿಚಯವಾದ ದಿನಗಳಿಗೂ ಇಂದಿಗೂ ನನ್ನಲ್ಲಿ ಸುಧಾರಣೆ ಆಗಿಲ್ಲವಾ? ನಿಮ್ಮ ತುಡಿತ ನನಗೆ ಅರ್ಥವಾಗಿದೆ. ನಾನು ಸತ್ಯದ ಹಾದಿಗಾಗಿ ವೇದದ ವಿರುದ್ಧದ ವಿಚಾರಗಳನ್ನು  ಖಂಡಿಸುತ್ತಿದ್ದಾಗ ನನ್ನೊಡನೆ ಹೆಚ್ಚು ಜನರು ಬರುತ್ತಿರಲಿಲ್ಲ. ಈಗ ವೇದದ ವಿಚಾರವನ್ನು ಹೇಳಿ ಖಂಡಿಸಬೇಕಾದ ವಿಚಾರವನ್ನು ಬಿಟ್ಟಿರುವುದರಿಂದ   ನನ್ನ ಹತ್ತಿರ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ವೇದದ ವಿಚಾರವನ್ನು ಹೆಚ್ಚು ಜನರಿಗೆ ತಲುಪಿಸಲು ಸಾಧ್ಯವಾಗಿದೆ.
     
         ಹೌದು, ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರು ಆಳವಾಗಿ ವೇದವನ್ನು ಅಧ್ಯಯನ ಮಾಡಿದ್ದಾರೆ.ವೇದಕ್ಕೆ ವಿರುದ್ಧವಾದದ್ದನ್ನು ಖಂಡಿಸುವ ಸಾಮರ್ಥ್ಯವೂ ಅವರಿಗಿದೆ. ಆದರೂ ಖಂಡಿಸುವ ಪರಿಗಿಂತಲೂ  ವೇದದ ವಿಚಾರವನ್ನು  ಮನಕ್ಕೆ ನಾಟುವಂತೆ ಮಂಡಿಸುತ್ತಾರೆ.  ವೇದದ ವಿಚಾರಕ್ಕಾಗಿ ಅವರನ್ನು ಅರಸಿಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.

           ನಾನಾದರೋ ಸಾಮಾಜಿಕ ಕಾರ್ಯದಲ್ಲಿ ಹಲವರೊಡನೆ ಜೋಡಿಸಿಕೊಂಡಿರುವವನು. ನನ್ನ ಪರಿಚಿತರೆಲ್ಲರೂ ನಾನು ಒಪ್ಪಿರುವ ವಿಚಾರವನ್ನು ನೂರಕ್ಕೆ ನೂರು ಒಪ್ಪುತ್ತಾರೆಂದೇನೂ ಅಲ್ಲ. ಇಲ್ಲೇ ನನಗೆ ಸಮಸ್ಯೆ ಎದುರಾಗಿರುವುದು. ವೇದಕ್ಕೆ ವಿರುದ್ಧವಾದುದನ್ನು  ನನ್ನ ಮನಸ್ಸು  ಒಪ್ಪುವುದಿಲ್ಲ. ತಟ್ಟನೆ ವಿರೋಧಿಸಿ ಬಿಡುವ ಸ್ವಭಾವ ನನ್ನದು.ಆದರೆ ನನ್ನ ಮಿತ್ರರು ನನಗೆ ಕೊಡುತ್ತಿರುವ ಸಲಹೆ ಎಂದರೆ " ನಮ್ಮ ಹಿರಿಯರು ನೂರಾರು ವರ್ಷಗಳಿಂದ ಆಚರಿಸಿಕೊಂಡು  ಬಂದಿರುವ ಹಲವು ವಿಚಾರಗಳನ್ನು ಅವು ವೇದ ಸಮ್ಮತವಲ್ಲವೆಂದು ಬಿಡಲು  ಸಾಧ್ಯವಿಲ್ಲ. ನಮಗೆ ಅದರಲ್ಲಿ ಸಮಾಧಾನವಿದೆ. ಮೂರ್ತಿ ಪೂಜೆ ಬೇಡ ಅಂತೀರಿ.ವೇದದಲ್ಲಿ ಮೂರ್ತಿ ಪೂಜೆ ಇಲ್ಲದಿರಬಹುದು. ನೂರಾರು ವರ್ಷಗಳಿಂದ ಆಚರಿಸಿಕೊಂಡು  ಬಂದಿರುವ ನಮ್ಮ ಪೂರ್ವಿಕರು ಹೆಡ್ದರೇನಲ್ಲ. ನೀವು ನಿಮ್ಮ ಪಾಡಿಗೆ ವಿಚಾರಗಳನ್ನು ಮಂಡಿಸುತ್ತಾ ಹೋಗಿ, ಯಾರ ತಂಟೆಗೂ ಬರಬೇಡಿ. ನಿಮ್ಮ ವಿಚಾರ ಬೇಕಾದರೆ ಜನರು ಸ್ವೀಕರಿಸುತ್ತಾರೆ, ಇಲ್ಲದಿದ್ದರೆ ಇಲ್ಲ, ಅಷ್ಟೆ."
      ನನ್ನ ಮಿತ್ರರು ಈ ಮಾತು ಹೇಳಬೇಕಾದರೆ ಅದು ಕೇವಲ ಅವರ ಮಾತಲ್ಲ, ಎಂಬ ಅರಿವು ನನಗಿದೆ. ಈ ಬಗ್ಗೆ ಸಾಕಷ್ಟು ಯೋಚಿಸಿದ ನಂತರ "ಹೌದಲ್ವಾ, ನಾನು ಯಾವುದೋ ವಿಚಾರವನ್ನು ಖಂಡಿಸಿ ವಿರೋಧ ಎದುರಿಸುವ ಬದಲು ,ವೇದದ ವಿಚಾರವನ್ನು ನಾನು ಅರ್ಥ ಮಾಡಿಕೊಂಡಂತೆ ತಿಳಿಸುತ್ತಾ ಹೋಗುವುದು, ಇಲ್ಲಿಯವರೆಗೂ  ಸ್ಥಳೀಯ ಪತ್ರಿಕೆಗಳಲ್ಲಿ ನಾನು ಬರೆದಿರುವ ಲೇಖನಕ್ಕಾಗಲೀ, ಅಥವಾ ಬ್ಲಾಗ್ ಬರಹಕ್ಕಾಗಲೀ " ಇದು ತಪ್ಪು" ಎಂದು ಯಾರೂ ನೇರವಾಗಿ ಹೇಳಿಲ್ಲ. ತಪ್ಪು ಎನಿಸಿದರೆ "ಇದು ತಪ್ಪು, ಇದು ಸರಿ " ಎಂದು ತಿಳಿಸಿರೆಂದೇ ನನ್ನ ಕೋರಿಕೆ. ಆದರೆ ಯಾಕೋ ಯಾರೂ ನೇರವಾಗಿ ಅವರ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಇರಲಿ. ವೇದಾಧ್ಯಾಯೀ ಸುಧಾಕರಶರ್ಮರೇ ಖಂಡನಾ ಮಾರ್ಗವನ್ನು ಬಿಟ್ಟಮೇಲೆ ನನ್ನದು ಯಾವ ದೊಡ್ದ ವಿಷಯ?  ಇನ್ನು ಮುಂದೆ ಯಾರ ಮನಸ್ಸಿಗೂ ಕಸಿವಿಸಿಯಾಗದಂತೆ ಬರೆಯಬೇಕೆಂದುಕೊಂಡಿದ್ದೇನೆ. ಆ ದಿಕ್ಕಿನಲ್ಲಿ ಸಾಗಲು ಭಗವಂತನು ಶಕ್ತಿ ಕೊಡಲಿ.

-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ

Saturday, May 25, 2013

ಕುಸುಮ: 30

 “ಎಲ್ಲರಿಗಾಗಿ ವೇದ” -   ಬ್ರಾಹ್ಮಣ ವರ್ಣ  
                             
ಬ್ರಾಹ್ಮಣ ವರ್ಣದ ಕರ್ತವ್ಯಗಳ ಬಗ್ಗೆ ಕಳೆದ ವಾರ ಒಂದಿಷ್ಟು ವಿಚಾರ ಮಾಡಿದ್ದೆವು. ಈ ವಾರವೂ ಅದೇ ವಿಷಯವನ್ನು ಮುಂದುವರೆಸೋಣ. ಋಗ್ವೇದದ ಏಳನೇ ಮಂಡಲದ 103 ನೇ ಸೂಕ್ತದ 7ನೇ ಮಂತ್ರವನ್ನು ನೋಡೋಣ.

ಬ್ರಾಹ್ಮಣಾಸೋ ಅತಿರಾತ್ರೇ ನ ಸೋಮೇ ಸರೋ ನ ಪೂರ್ನಮಭಿತೋ ವದಂತ: |
ಸಂವತ್ಸರಸ್ಯ ತದಹ:  ಪರಿ ಷ್ಠ ಯನ್ಮಂಡೂಕಾ:  ಪ್ರಾವೃಷೀಣಂ ಬಭೂವ ||

ಅರ್ಥ:-
ಯತ್ = ಹೇಗೆ
ಸಂವತ್ಸರಸ್ಯ = ವರ್ಷದ
ಪ್ರಾವೃಷೀಣಮ್ = ಮಳೆಗಾಲದ
ಅಹ: = ದಿನವು
ಬಭೂವ = ಇರುತ್ತದೋ
ಮತ್ತು 
ತತ್ ಅಹ: = ಆ ದಿನ
ಮಂಡೂಕಾ: = ಶುದ್ಧ ಮನಸ್ಕರು
ಪೂರ್ಣಮ್ = ಪೂರ್ಣವಾಗಿ
ಸರ: = ಜ್ಞಾನವನ್ನು
 ಅಭಿತ: = ಎಲ್ಲೆಡೆಯಲ್ಲೂ
ವದಂತ: = ಉಪದೇಶಿಸುತ್ತಾ
ಪರಿಷ್ಠ: = ಉತ್ತಮ ರೀತಿಯಲ್ಲಿ ದೃಢವಾಗಿ ನಿಲ್ಲುತ್ತಾರೋ
ಹಾಗೆಯೇ
ಅತಿರಾತ್ರೇ = ದಾನಕರ್ಮದ ಮಿತಿಯನ್ನು ದಾಟಿ
ಸೋಮೇ ನ = ವಿವೇಕವನ್ನು ಹಂಚುವಂತೆ
ಬ್ರಾಹ್ಮಣಾಸ: = ಬ್ರಹ್ಮ ಜ್ಞಾನಿಗಳೇ
ಪರಿಷ್ಠ: = ದೃಢವಾಗಿ ನಿಲ್ಲಿ
ಭಾವಾರ್ಥ:-
 ವರ್ಷಾಕಾಲದಲ್ಲಿ ಜಲಧಾರೆಗಳು ಹರಿಯುವಂತೆ, ಶುದ್ಧ ಮನಸ್ಕರ ಹೃದಯಗಳಿಂದ ಜ್ಞಾನ ಅನುಕಂಪಗಳು ಸ್ರವಿಸುವಂತೆ  ಹೇ ಬ್ರಾಹ್ಮಣರೇ ಸಾರಾಸಾರ ವಿವೇಕವನ್ನು ಮಿತಿಯಿಲ್ಲದಂತೆ ಪಸರಿಸುವ ಕಾರ್ಯದಲ್ಲಿ ತೊಡಗಿರಿ.
ಈ ವೇದ ಮಂತ್ರದ ಅರ್ಥದ ಕಡೆ ಗಮನ ಹರಿಸಿದರೆ ನಿಜವಾದ ಬ್ರಾಹ್ಮಣ ಯಾರು? ಎಂಬ ಕಲ್ಪನೆ ಸಿಗುತ್ತದೆ. ನಾಲ್ಕೂ ವರ್ಣಗಳ ಕರ್ತವ್ಯವನ್ನು ನೋಡುತ್ತಾ ಹೋದಾಗ ಜ್ಞಾನಪ್ರಸಾರದಂತಹ ಪ್ರಮುಖ ಹೊಣೆಯು ಬ್ರಾಹ್ಮಣಪಾಲಿಗೆ ಬಂದಿರುವುದರಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ಬ್ರಾಹ್ಮಣ ತನ್ನ ವೈಯಕ್ತಿಕ ಬದುಕನ್ನು ಆದರ್ಶವಾಗಿಯೇ ಇಟ್ಟುಕೊಳ್ಳಬೇಕು. ಬೇರೆಯವರಿಗೆ ಆದರ್ಶವಾಗಿರುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಅವನು ಬಹಳ ತ್ಯಾಗವನ್ನು ಮಾಡಬೇಕಾಗುತ್ತದೆ.ಕಷ್ಟಪಡಬೇಕಾಗುತ್ತದೆ. ಇವನ ನಡೆ, ನುಡಿ,ವ್ಯವಹಾರ, ಆಹಾರ-ವಿಹಾರ ಎಲ್ಲದರಲ್ಲೂ ಇನ್ನೊಬ್ಬರಿಗೆ ಆದರ್ಶವಾಗಿರುವಂತಿರಬೇಕು. ಬದುಕನ್ನು ಆದರ್ಶವಾಗಿಟ್ಟುಕೊಂಡು ಜ್ಞಾನಪ್ರಸಾರವನ್ನು ಹೇಗೆ  ಮಾಡಬೇಕೆಂಬುದನ್ನು ಈ ಮಂತ್ರದಲ್ಲಿ ಬಣ್ಣಿಸಲಾಗಿದೆ. ವರ್ಷಾಕಾಲದಲ್ಲಿ ಜಲಧಾರೆಗಳು ಹರಿಯುವಂತೆ  ಜ್ಞಾನಪ್ರಸಾರಕಾರ್ಯದಲ್ಲಿ ತೊಡಗಿಕೊಳ್ಳಿ, ಎನ್ನುತ್ತದೆ, ಈ ಮಂತ್ರ. ಮಳೆಗಾಲದಲ್ಲಿ ನದಿ-ತೊರೆಗಳು  ಹೇಗೆ ತುಂಬಿಹರಿಯುತ್ತವೆಯೋ ಹಾಗೆ  ಬ್ರಾಹ್ಮಣನು        ಜ್ಞಾನಪ್ರಸಾರವನ್ನು ಮಾಡಬೇಕು. ಅಂದರೆ ನಿಜಬ್ರಾಹ್ಮಣನು ಜ್ಞಾನಭಂಡಾರವಾಗಿದ್ದು ಸಮಾಜದಲ್ಲಿ ಹೆಚ್ಚು ಹೆಚ್ಚು  ಜ್ಞಾನಪ್ರಸಾರ ಮಾಡಬೇಕು.
ಮತ್ತೊಂದು ಹೋಲಿಕೆ ಇನ್ನೂ ಚೆನ್ನಾಗಿದೆ. “ಶುದ್ಧ ಮನಸ್ಕರ ಹೃದಯಗಳಿಂದ ಜ್ಞಾನ ಅನುಕಂಪಗಳು ಸ್ರವಿಸುವಂತೆ” ಬ್ರಾಹ್ಮಣರೇ ಸಾರಾಸಾರ ವಿವೇಕವನ್ನು ಮಿತಿಯಿಲ್ಲದಂತೆ ಪಸರಿಸುವ ಕಾರ್ಯದಲ್ಲಿ ತೊಡಗಿರಿ.ಅಂದರೆ ಇಲ್ಲಿ “ಅನುಕಂಪ” ಎಂಬ ಮಾತಿಗೆ ಒತ್ತು ಕೊಡಲಾಗಿದೆ. ಒಬ್ಬ ಬ್ರಾಹ್ಮಣನಿಗೆ ಸಮಾಜದ ಮೇಲೆ ಅನುಕಂಪವಿರಬೇಕು. ಅನುಕಂಪವಿದ್ದವನು “ ಈ ಸಮಾಜ ಹೇಗಾದರೂ ಇರಲಿ” ಎಂಬ ಭಾವನೆಯನ್ನು ಹೊಂದಲಾರ. “ಲೋಕದಾ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ” ಎಂಬ ವಚನವನ್ನು ಹೇಗೂ ಬಳಸಿಕೊಳ್ಳುವ ಬುದ್ಧಿವಂತರಿದ್ದಾರೆ. ಯಾವುದೇ ಮಾತನ್ನು ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ ಯಾರಿಗೆ ಹೇಳಿದರೆಂಬುದು ಬಹಳ ಮುಖ್ಯವಾಗುತ್ತದೆ. ವೇದವು ಬ್ರಾಹ್ಮಣನ ಕರ್ತವ್ಯದಲ್ಲಿ ಸ್ಪಷ್ಟವಾಗಿ ತಿಳಿಸುತ್ತದೆ “ ಅವನಿಗೆ ಸಮಾಜದ ಬಗ್ಗೆ ಅನುಕಂಪವಿರಬೇಕು”. ಅನುಕಂಪವಿದ್ದಾಗ ಸಮಾಜವು ತಪ್ಪುದಾರಿಗೆ ಹೋಗದಂತೆ ತಿದ್ದುವ ಕೆಲಸವನ್ನು ಬ್ರಾಹ್ಮನನು ಮಾಡಬೇಕಾಗುತ್ತದೆ. ಇದೆಲ್ಲಾ ಬ್ರಾಹ್ಮಣನ ಅಧಿಕಾರವಲ್ಲಾ, ಇವೆಲ್ಲಾ ಅವನ ಕರ್ತವ್ಯಗಳು, ಎಂಬ ಅರಿವಿರಬೇಕು.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಶ್ರೇಷ್ಠಪುರುಷನ ಆಚರಣೆ ಪ್ರಭಾವವನ್ನು ಚೆನ್ನಾಗಿ ಹೇಳಿದ್ದಾನೆ…..
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನ: |
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತ ||

[ಭಗವದ್ಗೀತೆ ಅಧ್ಯಾಯ-3 ಶ್ಲೋಕ- 21]
ಯತ್ ಯತ್ ಆಚರತಿ ಶ್ರೇಷ್ಠ: ತತ್ ತತ್ ಏವ ಇತರ: ಜನ: ಸ ಯತ್ ಪ್ರಮಾಣಂ  ಕುರುತೇ ಲೋಕ: ತತ್ ಅನುವರ್ತತೇ….
ಅರ್ಥ:
ಶ್ರೇಷ್ಠ ಪುರುಷನು ಯಾವ ಯಾವ ಆಚರಣೆ ಮಾಡುತ್ತಾನೋ,ಇನ್ನಿತರೇ ಜನರೂ  ಸಹ ಅದರಂತೆಯೇ ನಡೆದುಕೊಳ್ಳುತ್ತಾರೆ. ಯಾವುದನ್ನು ಆಧಾರವಾಗಿಟ್ಟುಕೊಂಡು ನಡೆಯುತ್ತಾನೋ ಜನರೂ ಅದರಂತೆ ಅನುಸರಿಸುತ್ತಾರೆ. ಇದು ನಿಜ ಬ್ರಾಹ್ಮಣನಿಗೆ ಸರಿಯಾಗಿ ಸಲ್ಲುತ್ತದೆ. ತಾನು ಮಾಡುವ ಆಚರಣೆಗಳು ಹೇಗಿರಬೇಕು, ಅದಕ್ಕೆ ಆಧಾರ ಏನಾಗಿರಬೇಕು, ಎಂಬುದನ್ನು ಸರಿಯಾಗಿ ವಿವೇಚಿಸಿ ನಡೆಯಬೇಕಾದ್ದು ಒಬ್ಬ ಬ್ರಾಹ್ಮಣನ ಕರ್ತವ್ಯ.ಅಂದಮಾತ್ರಕ್ಕೆ ಬ್ರಾಹ್ಮಣ ಶ್ರೇಷ್ಠ ಉಳಿದ ವರ್ಣ ಕನಿಷ್ಠ ಎಂದಲ್ಲ. ಬ್ರಾಹ್ಮಣನು ನಡೆಯಬೇಕಾದ್ದೇ ಹೀಗೆ. ಹಾಗೆ ನಡೆಯಲಾರದವನು ಬ್ರಾಹ್ಮಣನಾಗಿರಲಾರ.

Thursday, May 23, 2013

ನ್ಯಾಯ ಶಾಸ್ತ್ರ

   
              ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ, ಹಾಸನದ ಜನಮಿತ್ರ ಸ್ಥಳೀಯ ಪತ್ರಿಕೆಯಲ್ಲಿ ಪ್ರತೀ ಭಾನುವಾರ ನಾನು ಬರೆಯುತ್ತಿರುವ "ಎಲ್ಲರಿಗಾಗಿ ವೇದ " ಲೇಖನವನ್ನು  ವೇದಸುಧೆಯಲ್ಲೂ ಪ್ರಕಟಿಸುವುದಾಗಿ ತಿಳಿಸಿದ್ದೆ. ಆದರೆ ಈಗಾಗಲೇ ಅದು 28 ಲೇಖನಗಳಾಗಿದ್ದು  ಪ್ರತೀ ವಾರವೂ ಹೆಚ್ಚುತ್ತಲೇ ಹೋಗುತ್ತದೆ. ಆದ್ದರಿಂದ ಇದುವರಗೆ ಪ್ರಕಟಿಸಿರುವ ಎಲ್ಲಾ  ಲೇಖನಗಳನ್ನೂ ಇದೇ ಬಳಗದ "ವೇದಭಾರತೀ" ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವೆ. ಇಂದು ಆರಂಭದ ಎಂಟು ಲೇಖನಗಳು ಪ್ರಕ   ಟವಾಗಿವೆ. ಲೇಖನ ಓದಲು  ವೇದಸುಧೆಯ ತಲೆಬರಹದಡಿ ಕೊಂಡಿ ಇದೆ. ಇಲ್ಲಿಂದಲೇ ವೇದ ಭಾರತಿಯನ್ನು ಪ್ರವೇಶಿಸ ಬಹುದಾಗಿದೆ. ನೀವು ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಲೇಖನವನ್ನು ಉತ್ತಮಪಡಿಸಿಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಪ್ರಶ್ನೆ ಇದ್ದರೆ ವೇದಾಧ್ಯಾಯೀ ಸುಧಾಕರ ಶರ್ಮರ ಸಹಾಯ ಪಡೆಯುವೆ.

ಕುಸುಮ: 29

“ಎಲ್ಲರಿಗಾಗಿ ವೇದ” - ಚತುರ್ವರ್ಣಗಳು
                    
ಹಿಂದಿನ ಸಂಚಿಕೆಯಲ್ಲಿ ಮನುಷ್ಯರೆಲ್ಲರೂ ಸಮಾನರೆಂಬುದನ್ನು ವೇದ ಮಂತ್ರದ ಆಧಾರದಿಂದ ವಿಚಾರಮಾಡಿದ್ದೇವೆ. ಆದರೂ ವೇದದಲ್ಲಿ  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ  ನಾಲ್ಕು ವರ್ಣಗಳಿವೆಯಲ್ಲಾ! ಇದು ತಾರತಮ್ಯವಲ್ಲವೇ? ಎಂಬ ಸಂದೇಹವು ಬರಬಹುದು.ಈ ಬಗ್ಗೆ ವಿಚಾರಮಾಡುವಾಗ ಪೂರ್ವಾಗ್ರಹವಿಲ್ಲದೆ ವಿಚಾರಮಾಡಿದರೆ ನಮಗೆ ಉತ್ತರ ಸಿಕ್ಕೀತು. ಭಗವದ್ ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವ ಮಾತಿನಿಂದಲೇ ಆರಂಭ ಮಾಡೋಣ.
ಚಾತುರ್ವರ್ಣ್ಯಂ  ಮಯಾ ಸೃಷ್ಟಂ ಗುಣಕರ್ಮ ವಿಭಾಗಶ: |
“ಗುಣ ಮತ್ತು ಕರ್ಮಗಳನುಸಾರವಾಗಿ  ಬ್ರಾಹ್ಮಣ , ಕ್ಷತ್ರಿಯ, ವೈಶ್ಯ ಮತ್ತು ಶೂದ್ರ” ಎಂಬ ನಾಲ್ಕು ವರ್ಣಗಳು ನನ್ನಿಂದ ರಚಿಸಲ್ಪಟ್ಟಿವೆ- ಎಂಬುದು ಶ್ರೀ ಕೃಷ್ಣನ ಮಾತು.  ಹಾಗಾದರೆ ವರ್ಣ ಎಂದರೇನು?  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಈ ವರ್ಣಗಳ ಕರ್ತವ್ಯಗಳೇನು? ಎಂಬ ಬಗ್ಗೆ ವಿಚಾರ ಮಾಡೋಣ.
ವರ್ಣ ಎಂದರೇನು?   
ವರ್ಣ ಮತ್ತು ಈಗ ರೂಢಿಯಲ್ಲಿರುವ ಜಾತಿ ಈ ಎರಡೂ ಪದಗಳು ಒಂದೇ ಎಂಬ ಭಾವನೆ ಜನ ಮಾನಸದಲ್ಲಿ ಉಳಿದು ಬಿಟ್ಟಿದೆ. ಇದಕ್ಕೆ ಪುಷ್ಟಿ ಕೊಡುವಂತೆ ರೂಢಿಯಲ್ಲಿರುವ ಬ್ರಾಹ್ಮಣ ಇತ್ಯಾದಿ ಜನರನ್ನು ಸವರ್ಣೀಯರು ಎಂದು ಕರೆಯುವುದೂ ರೂಢಿಯಲ್ಲಿದೆ. ವೇದದ ಅನುಸಾರ ವರ್ಣ ಪದ ಪ್ರಯೋಗಕ್ಕೂ ಜಾತಿ ಎಂಬ ಪದಕ್ಕೂ ಅರ್ಥ ಅಜಗಜಾಂತರ. ನಿಜವಾಗಿ ಜಾತಿ ಎಂದರೇನು? ಹುಟ್ಟಿನಿಂದ ಬರುವುದು ಜಾತಿ. ನಾವೆಲ್ಲಾ ಮನುಶ್ಯಜಾತಿ ಎಂಬುದಷ್ಟೇ ಸತ್ಯ. ಕಾರಣ ಜಾತಿ ಎಂದರೆ ಹುಟ್ಟಿನಿಂದ ಸಾಯುವವರೆಗೂ ಇರುವಂತಹದ್ದು. ಮನುಶ್ಯನಾಗಿ ಹುಟ್ಟಿದ್ದೇವೆ ಮನುಶ್ಯನಾಗಿ ಸಾಯುತ್ತೇವೆ. ಅಂತೆಯೇ ಆನೆ, ನಾಯಿ ಇತ್ಯಾದಿ ಪ್ರಾಣಿಗಳೂ ಕೂಡ. ಆದರೆ ವರ್ಣ ಎಂದರೆ ನಾವು ಆರಿಸಿಕೊಳ್ಳುವಂತಹದ್ದು. ಉಧಾಹರಣೆಗೆ ಒಬ್ಬ ವಿದ್ಯಾರ್ಥಿ ಓದಿ ವಕೀಲನಾಗುತ್ತಾನೆ, ಗುಮಾಸ್ತನಾಗುತ್ತಾನೆ, ವೈದ್ಯನಾಗುತ್ತಾನೆ. ಇವೆಲ್ಲಾ ಹುಟ್ಟಿನಿಂದ ಬಂದ ಪದವಿಗಳಲ್ಲ. ತಾನು ಆರಿಸಿಕೊಂಡಿದ್ದು.  ಹೀಗೆಯೇ ಒಂದು ಸಾಮಾಜಿಕ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಡೆಸಲು ಮನುಷ್ಯನ ಕರ್ತವ್ಯವನ್ನು  ನಾಲ್ಕು ಭಾಗಗಳಾಗಿ ವಿಂಗಡಿಸಿದರು. ಅದರಲ್ಲಿ ಮೊದಲನೆಯದು  ಜ್ಞಾನಪ್ರಸಾರ, ಎರಡನೆಯ ವಿಭಾಗ ದೇಶದ ರಕ್ಷಣೆ ಮತ್ತು ರಾಜ್ಯಭಾರ, ಮೂರನೆಯದು ಸಂಪನ್ಮೂಲ ಸಂಗ್ರಹ-ವಿತರಣೆ, ನಾಲ್ಕನೆಯದು ಶ್ರಮದ ಕೆಲಸ. ಈ ನಾಲ್ಕೂ ವರ್ಣಗಳೂ ಸಾಮರಸ್ಯದಿಂದ ಕರ್ತವ್ಯನಿರ್ವಹಿಸಿದಾಗ ಮಾತ್ರ ಒಂದು ಸುಂದರ ಸಮಾಜವನ್ನು                    ಕಾಣ  ಬಹುದಾಗಿತ್ತು. ಅಲ್ಲದೆ ಒಂದೇ ಕುಟುಂಬದಲ್ಲಿ ಈ ನಾಲ್ಕೂ ವರ್ಣೀಯರೂ ಇರಬಹುದಾಗಿತ್ತು. ಒಂದು ಕುಟುಂಬದ ಎಲ್ಲಾ ಸದಸ್ಯರೂ ಒಂದೇ ವರ್ಣವನ್ನು ಆರಿಸಿಕೊಳ್ಳಬೇಕೆಂಬ ನಿಯಮವೇನಿರಲಿಲ್ಲ. ಅವರವರ ಗುಣ-ಸ್ವಭಾವಗಳಿಗೆ ತಕ್ಕಂತೆ ಆಯಾ ವರ್ಣವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವು ಪ್ರತಿಯೊಬ್ಬ ಮನುಶ್ಯನಿಗೂ ಇತ್ತು. ಅಪ್ಪ ಬ್ರಾಹ್ಮಣ ವರ್ಣವನ್ನು ಆರಿಸಿಕೊಂಡಿದ್ದರೆ ಮಕ್ಕಳೆಲ್ಲರೂ ಬ್ರಾಹ್ಮಣ ವರ್ಣವನ್ನೇ ಆರಿಸಿಕೊಳ್ಳಬೇಕೆಂಬ ನಿಯಮವೇನಿರಲಿಲ್ಲ. ಅದು ಅವನ ಇಚ್ಚೆ. ಮಗನಿಗೆ ವ್ಯಾಪಾರ ಮಾಡುವ ಬಗ್ಗೆ ಆಸಕ್ತಿ ಇದ್ದರೆ ಅವನು ವೈಶ್ಯ ವರ್ಣವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು, ಮತ್ತೊಬ್ಬ ಮಗನಿಗೆ ಶ್ರಮದ ಕೆಲಸ ಮಾಡಲು ಇಚ್ಛೆ ಮತ್ತು ಸ್ವಭಾವವಿದ್ದರೆ ಅವನು ಶೂದ್ರ ವರ್ಣವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಒಂದು ಅಂಶವನ್ನು ಸರಿಯಾಗಿ ಗಮನಿಸಬೇಕು. ಶೂದ್ರ ತಂದೆಯ ಮಗ ಶೂದ್ರವರ್ಣವನ್ನೇ ಅಥವಾ ಬ್ರಾಹ್ಮಣ ತಂದೆಯ ಮಗ ಬ್ರಾಹ್ಮಣ ವರ್ಣವನ್ನೇ ಆಯ್ಕೆ ಮಾಡಿಕೊಳ್ಳಬೇಕಾಗಿರಲಿಲ್ಲ. ಅಷ್ಟೇ ಅಲ್ಲ ವೈದ್ಯನ ಮಗನಾಗಿ ಹುಟ್ಟಿದ ಮಾತ್ರಕ್ಕೆ ವೈದ್ಯನಾಗಲು ಸಾಧ್ಯವೇ? ಅವನು MBBS ಓದಿ ನಂತರವಷ್ಟೇ ವೈದ್ಯನಾಗಬೇಕಲ್ಲವೇ? ಅಥವಾ ಅವನು ಓದಿ ಪೋಲೀಸ್ ಅಧಿಕಾರಿಯೂ ಆಗಬಹುದು ಇಲ್ಲವೇ ಕೃಷಿಕನೂ ಆಗಬಹುದಲ್ಲವೇ? ಹಾಗೆಯೇ  ಬ್ರಾಹಣನ ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ಅವನು ಬ್ರಾಹ್ಮಣನಾಗುತ್ತಿರಲಿಲ್ಲ. ಅವನ ಗುಣ ಸ್ವಭಾವಗಳಿಗನುಗುಣವಾಗಿ ಅವನು ಯಾವ ವರ್ಣವನ್ನು  ಆಯ್ಕೆ ಮಾಡಿಕೊಳ್ಳುತ್ತಿದ್ದನೋ ಆ ವರ್ಣ ಅವನದಾಗುತ್ತಿತ್ತು. ಹೀಗೆ ನಾಲ್ಕೂ ವರ್ಣಗಳನ್ನೂ ಅವರವರ ಸ್ವಭಾವಗಳಿಗೆ ತಕ್ಕಂತೆ ಆಯ್ಕೆಮಾಡಿಕೊಳ್ಳುತ್ತಿದ್ದರು. ಈ ನಾಲ್ಕೂ ವರ್ಣಗಳೂ ಒಂದು ಸಮಾಜದ ವ್ಯವಸ್ಥೆಗೆ ಪೂರಕವಾಗಿ ಸಾಮರಸ್ಯದಿಂದ ಕಾರ್ಯನಿರ್ವಹಿಸುತ್ತಿದ್ದವು. ಇನ್ನು ಮುಂದೆ ನಾಲ್ಕೂ ವರ್ಣದ ಕರ್ತವ್ಯಗಳೇನೆಂದು ವಿಚಾರ ಮಾಡೋಣ.
ಬ್ರಾಹ್ಮಣ ವರ್ಣ:-
ಬ್ರಾಹ್ಮಣಾಸ: ಸೋಮಿನೋ ವಾಚಮಕ್ರತ ಬ್ರಹ್ಮ ಕೃಣ್ವಂತ: ಪರಿವತ್ಸರೀಣಮ್ |
ಅಧ್ವರ್ಯವೋ ಘರ್ಮಿಣ: ಸಿಷ್ವಿದಾನಾ ಆವಿರ್ಭವಂತಿ ಗುಹ್ಯಾ ನ ಕೇ ಚಿತ್ ||
[ಋಕ್ 7.103.8]
ಸೋಮಿನ: = ಬ್ರಹ್ಮಾನಂದದ ಸವಿಯನ್ನು ಕಾಣುವವರು[ಪಂ.ಸುಧಾಕರ ಚತುರ್ವೇದಿಗಳ ವ್ಯಾಖ್ಯೆ]
ಬ್ರಾಹ್ಮಣಾಸ: = ಬ್ರಹ್ಮಜ್ಞಾನಿಗಳು
ಪರಿವತ್ಸರೀಣಮ್ = ವರ್ಷ ಪೂರ್ಣ
ಬ್ರಹ್ಮ ಕೃಣ್ವಂತ: = ಜ್ಞಾನವನ್ನು ಪ್ರಸರಿಸಿಸುತ್ತಾ
ವಾಚಂ ಅಕ್ರತ = ಉಪದೇಶಿಸುತ್ತಾರೆ
ಅಧ್ವರ್ಯ: = ಅಹಿಂಸಕರಾದ
ಘರ್ಮಿಣ: = ತಪಸ್ವಿಗಳು
ಸಿಷ್ಟಿದಾನಾ: = ಶ್ರಮಿಸುತ್ತಾ
ಕೇ  ಚಿತ್ = ಕೆಲವರು
ಗುಹ್ಯಾ: ನ = ಗೂಢವಾಗಿದ್ದವರಂತೆ
ಆವಿರ್ಭವಂತಿ = ಆವಿರ್ಭವಿಸುತ್ತಾರೆ
 ಭಾವಾರ್ಥ:-
ಬ್ರಹ್ಮಾನಂದದ ಸವಿಯನ್ನು ಕಾಣುವ ಬ್ರಹ್ಮಜ್ಞಾನಿಗಳಾದ ಬ್ರಾಹ್ಮಣರು  ನಿರಂತರವಾಗಿ  ಈಶ್ವರೀಯ ಜ್ಞಾನವನ್ನು ಪ್ರಸರಿಸಿಸುತ್ತಾ, ಅಹಿಂಸಕರಾಗಿದ್ದು, ತಪಸ್ವಿಗಳೂ ಆದ ಇವರು ಅವಿರತ ದುಡಿಮೆಯಲ್ಲಿ ವಿಶ್ವಾಸವಿಟ್ಟವರು, ಇಂತಹವರು ಬಯಸದೆಯೂ ಪ್ರಕಟಗೊಳ್ಳುತ್ತಾರೆ. ನಾಲ್ಕು ಶಬ್ಧಗಳಲ್ಲಿ ಬ್ರಾಹ್ಮಣನ ಕರ್ತವ್ಯವನ್ನು ಇಲ್ಲಿ ಹೇಳಿದ್ದರೂ  ಒಂದೊಂದು ಶಬ್ಧವೂ ಅದೆಷ್ಟು ಮಹತ್ವ ಉಳ್ಳದ್ದು ಎಂಬುದನ್ನು ಸ್ವಲ್ಪ ವಿಚಾರಮಾಡೋಣ.ಮೊದಲನೆಯದು….
ನಿರಂತರವಾಗಿ  ಈಶ್ವರೀಯ ಜ್ಞಾನದ ಪ್ರಸಾರ: ಒಬ್ಬ ವ್ಯಕ್ತಿ ನಿಜವಾದ ಬ್ರಾಹ್ಮಣನೆನಿಸಿಕೊಳ್ಳಬೇಕಾದರೆ ಅವನು ನಿರಂತರವಾಗಿ ವೇದ ಜ್ಞಾನದ  ಪ್ರಸಾರಮಾಡಬೇಕು. ಎರಡನೆಯದು…..
ಅಹಿಂಸಕ: ಅವನು ಅಹಿಂಸಕನಾಗಿರಬೇಕು. ಅಹಿಂಸೆ ಎಂಬ ಪದಕ್ಕೆ ಅದೆಷ್ಟು ವಿಶಾಲಾರ್ಥವಿದೆಯೋ! ಕೇವಲ   ಪ್ರಾಣಿ ಹಿಂಸೆ ಮಾಡದವನಿಗೆ ಅಹಿಂಸಕನೆಂದು ಹೇಳಲಾಗದು. ಅವನ ಮಾತಿನಿಂದ, ನಡತೆಯಿಂದ,ಅವನ ವ್ಯವಹಾರದಿಂದ ಯಾರಿಗೂ ನೋವಾಗದಂತೆ ನಡೆಯುವವನನ್ನು ಅಹಿಂಸಕನೆಂದು ಚಿಕ್ಕದಾದ ವಿವರಣೆಯಲ್ಲಿ ಸಧ್ಯಕ್ಕೆ ಅರ್ಥ ಮಾಡಿಕೊಳ್ಳೋಣ. ಅದರ ವ್ಯಾಪ್ತಿ ಇಷ್ಟಕ್ಕೇ ಮುಗಿಯುವುದಿಲ್ಲವಾದರೂ ಇಷ್ಟಾದರೂ ಗುಣಗಳಿದ್ದರೆ ಅವನನ್ನು ಅಹಿಂಸಕನೆಂದು ತಿಳಿಯಬಹುದು.
ತಪಸ್ವಿ: ಅವನು ತಪಸ್ವಿಯಾಗಿರಬೇಕು. ಇಲ್ಲೂ ಈ ಪದದ ವ್ಯಾಪ್ತಿ ಬಲು ದೊಡ್ದದು. ಸಧ್ಯಕ್ಕೆ ಅದರ ಅರ್ಥಗಳಲ್ಲಿ ಒಂದಾದ “ ವ್ರತ ನಿಯಮಾದಿಗಳಿಂದ ದೇಹವನ್ನು ದಂಡಿಸುತ್ತಾ ಧ್ಯಾನ ಮಾಡುವವನು” ಎಂಬ ಅರ್ಥವನ್ನಷ್ಟೇ ತೆಗೆದುಕೊಳ್ಳೋಣ. ಮುಂದಿನದು…..
ದುಡಿಮೆಯಲ್ಲಿ ವಿಶ್ವಾಸವಿಟ್ಟವರು: ಅವನು ಸುಮ್ಮನೆ ಸೋಮಾರಿಯಾಗಿ ಕುಳಿತು ತಿನ್ನುವಂತಿಲ್ಲ. ದುಡಿಮೆಯಲ್ಲಿ ವಿಶ್ವಾಸ ಇಟ್ಟಿರಬೇಕು.
ಮೇಲಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡಮೇಲೆ, ಇಷ್ಟೂ ಅರ್ಹತೆಗಳಿದ್ದರೆ ಅವನನ್ನು “ಬ್ರಾಹ್ಮಣ” ಎನ್ನಬಹುದು. ಬ್ರಾಹ್ಮಣನ ಕರ್ತವ್ಯಗಳ ಬಗ್ಗೆ ವೇದವು ಇನ್ನೂ ಬಹಳ ವಿಚಾರಗಳನ್ನು ತಿಳಿಸುತ್ತದೆ. ಮುಂದಿನ ಲೇಖನಗಳಲ್ಲಿ ಆ ಬಗ್ಗೆ ವಿಚಾರ ಮಾಡೋಣ.