Pages

Thursday, November 11, 2010

ಜ್ಞಾತನಾಗು



ಚಿತ್ರ ಋಣ: ಅಂತರ್ಜಾಲ

ಬದುಕು ಕಲಿಸುವ ಪಾಠ ಬಹಳ ಮೌಲ್ಯದ್ದಹುದು
ಕೆದಕಿ ಬರೆದರು ಹೊತ್ತಗೆಗಳ ಪೂರ್ವಜರು
ಪದಕ ಪದವಿಯ ವಿಶ್ವವಿದ್ಯಾಲಯಕಂ ಮಿಗಿಲು
ಅದಕುಂಟೆ ಸರಿಸಾಟಿ | ಜಗದಮಿತ್ರ

ಓದುತ್ತ ಅರಿ ಮೊದಲು ಮಾಡುತ್ತ ತಿಳಿ ಹಲವು
ಬಾಧಕವೇ ಬೇಡವೆನ್ನುತ ಕೂರಬೇಡ
ಹಾದಿಬೀದಿಯಲೊಮ್ಮೆ ನೋಡುತ್ತ ಕಲಿ ಕೆಲವು
ಆದರಿಸು ಆದರ್ಶ | ಜಗದಮಿತ್ರ

ದೇಹಕ್ಕೆ ಸ್ನಾನವನು ಮಾಳ್ಪ ರೀತಿಯಲೊಮ್ಮೆ
ಸಾಹಸದಿ ಮನಸನ್ನು ಸ್ನಪನಗೊಳಿಸುವೊಲು
ಆಹಾರ-ನಿದ್ದೆ-ಮೈಥುನಗಳಲಿ ಹದವಿರಿಸಿ
ವಿಹರಿಸು ಧ್ಯಾನದಲಿ | ಜಗದಮಿತ್ರ

ಮನವು ಎಲ್ಲಕು ಮೂಲ ಕಾರಣವು ಕಾರ್ಯಕ್ಕೆ
ಅನುಗೊಳಿಸು ಅಭ್ಯಸಿಸಿ ಪ್ರಾಜ್ಞ ಜೀವಿತವ
ಮನುಕುಲದಿ ಸಮಯ ಸದ್ವಿನಿಯೋಗಿಸುತ ನಡೆಸು
ನೆನೆವಂತ ಕೆಲಸಗಳ | ಜಗದಮಿತ್ರ

ಉತ್ತಮದ ಪುಸ್ತಕಗಳೇ ನಮ್ಮ ಆಸ್ತಿಗಳು
ಪತ್ತಿನಲಿ ಮನವನ್ನು ಮುದಗೊಳಿಸುವುದಕೆ
ಹೊತ್ತುಹೊತ್ತಿಗೆ ಅವುಗಳಂ ತೆರೆದು ತುಂಬುತ್ತ
ಎತ್ತು ನಿನ್ನಯ ಮಟ್ಟ | ಜಗದಮಿತ್ರ

ಸುಜ್ಞಾನಿಗಳ ಬದುಕು ಪರರಜ್ಞಾನ ನೀಗಿಸಲು
ವಿಜ್ಞಾನಿಗಳು ಶ್ರಮಿಸಿ ಸಂಶೋಧಿಸುವರು
ಅಜ್ಞಾನಕಿಂತ ಬೇರೊಂದು ದೋಷವದಿಲ್ಲ
ಪ್ರಜ್ಞಾನ ನೀ ಗಳಿಸು | ಜಗದಮಿತ್ರ

-ವಿ.ಆರ್.ಭಟ್

3 comments:

  1. ತುಂಬಾ ಚೆನ್ನಾಗಿ ಮೂಡಿಬಂದಿದೆ. 'ಜಗದ ಮಿತ್ರ ' ನ ಪಯಣ ನಿರಂತರ ಸಾಗಲಿ.

    ReplyDelete
  2. ಶ್ರೀ ಸುರೇಶ್,
    ಒಬ್ಬ ಜಗದಮಿತ್ರ, ಮತ್ತೊಬ್ಬ ಮೂಢ ಇಬ್ಬರು ವೇದಸುಧೆಯ ಮುಂಚೂಣಿಯಲ್ಲಿ ಮಾರ್ಗದರ್ಶಕರಾಗಿದ್ದಾರೆ, ಅಲ್ವಾ? ಒಬ್ಬರು ಜಗದ ಮಿತ್ರನೆಂದು ತಮ್ಮನ್ನು ಕರೆದು ಕೊಂಡರೆ ನಾವೂ ಹಾಗೆಯೇ ಕರೆಯಲಡ್ದಿ ಇಲ್ಲ, ಆದರೆ ಮತ್ತೊಬ್ಬರು ತಮ್ಮದು ಮೂಢ ಉವಾಚವೆನ್ನುತ್ತಾರೆ, ನನ್ನಂತಹ ಮೂಢನಾದರೋ ನಿತ್ಯವೂ ಇವರ ಮಾತಿಗಾಗಿ ಕಾಯುತ್ತೇನೆ!

    ReplyDelete
  3. ಓದಿದ,ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

    ReplyDelete