Pages

Monday, February 7, 2011

ವಿನಾ ದೈನ್ಯೇನ ಜೀವನಂ.......



’ಅನಾಯಾಸೇನ ಮರಣಂ ವಿನಾ ದ್ಯೆನ್ಯೇನ ಜೀವನಂ.. .. ಎಂಬುದು ಎಲ್ಲ ಸಜ್ಜನರ ನಿತ್ಯ ಆಶಯ, ಪ್ರಾರ್ಥನೆ. ಅನಾಯಾಸವಾದ ಅಂತ್ಯ ನಮ್ಮ ಕೈಯಲ್ಲಿಲ್ಲ; ಅದು ಭಗವಂತನ ಇಚ್ಛೆ. ಅಂದರೆ ಜೀವನ ಪೂರ್ತಿ ಯಾರ ಮುಂದೆಯೂ ದೇಹಿ.ಎಂದು ಕೈ ಚಾಚುವ ಪರಿ ಬರದಿರಲಿ ಮತ್ತು ಅಂತ್ಯದಲ್ಲಿ ಹೆಚ್ಚು ಭಯ, ನೋವು ಮತ್ತು ಸಂಕಟಗಳಿಲ್ಲದ ನಿರಾಯಾಸವಾದ ಮರಣ ಬರಲಿ ಎಂಬುದೇ ಇದರ ಸಂದೇಶ. ಈ ಸಂಸ್ಕೃತ ಶ್ಲೋಕ ಬಹಳ ಆಳವಾದ ಮತ್ತು ವಿಸ್ತಾರವಾದ ಅರ್ಥವನ್ನು ಹೊಂದಿದೆ. ಆದಷ್ಟೂ ಇತರರನ್ನವಲಂಬಿಸದೇ ಜೀವನ ನಡೆಸುವ ಅವಕಾಶ ಪ್ರತಿಯೊಬ್ಬ ಮಾನವನಿಗೂ ಇದ್ದೇ ಇದೆ. ಅದನ್ನು ಅವನು ವಿವೇಚನೆಯಿಂದ ಬಳಸಬೇಕಷ್ಟೆ. ಇದರ ಮತ್ತೊಂದು ಅರ್ಥ - ಮನುಷ್ಯ ಹೆಚ್ಚು ಪರಾವಲಂಬಿಯಾಗದೇ, ತನ್ನೆಲ್ಲಾ ಅವಶ್ಯಕತೆಗಳನ್ನು ತಾನೇ ಸ್ವತ: ಪೂರೈಸಿಕೊಳ್ಳಲಿ ಎಂಬುದು. ಈ ಸಂದೇಶವನ್ನು ಅರಿತು ನಡೆಸುವ ಬದುಕೇ ನಿಜವಾದ ಮತ್ತು ಸಾರ್ಥಕವಾದ ಬದುಕು.

       ಹಾಗಾದರೆ ಜೀವನ ಪರ್ಯಂತ ನಾವು ಬೇರೆಯವರ ಸಹಾಯ-ಬೆಂಬಲ ಪಡೆಯದೇ ಜೀವನ ನಡೆಸುವುದು ಸಾಧ್ಯವೇ? ಖಂಡಿತಾ ಇಲ್ಲ. ಅಂತಹ ಜೀವನ ಸನ್ಯಾಸಿಯೊಬ್ಬನಿಂದ ಸಾಧ್ಯವಾದೀತು.


ದ್ವಾವಿಮೌ ಪುರುಷೌ ಲೋಕೇನ ಭೂತೌನ ಭವಿಷ್ಯತ: |

ಪ್ರಾರ್ಥಿತಂ ಯಶ್ಚ ಕುರುತೇ ಯಶ್ಚನಾರ್ಥ ಯತೇ ಪರಂ ||

 ಅಂದರೆ ಯಾರು ಕೇಳಿದ್ದನ್ನೆಲ್ಲವನ್ನು ಕೊಡುತ್ತಾರೋ, ಮತ್ಯಾರು ಯಾರಿಂದಲೂ ಏನನ್ನೂ ಬಯಸುವುದಿಲ್ಲವೋ - ಅಂತಹ ಇಬ್ಬರು ಹಿಂದೆಯೂ ಇರಲಿಲ್ಲ, ಮುಂದೆಯೂ ಇರಲಾರರು.


 ನಮ್ಮ ಜೀವನದ ಪ್ರತಿ ಹಂತದಲ್ಲೂ ನಾವು ಒಂದಲ್ಲ ಒಮ್ಮೆ ಪರರ ಸಹಾಯವನ್ನು (ಅದು ಯಾವುದೇ ರೂಪದಲ್ಲಿರಬಹುದು) ಪಡೆದೇ ಇದ್ದೇವೆ ಎನ್ನುವುದು ನಿಶ್ಚಿತ. ಹಾಗಿಲ್ಲದಿದ್ದಲ್ಲಿ, ಪ್ರತಿಯೊಬ್ಬರೂ ಇಂದು ವ್ಯವಸ್ಥಿತ ರೀತಿಯಲ್ಲಿ ಬೆಳೆದು, ಒಂದು ಶಿಸ್ತುಬದ್ಧ ಜೀವನ ನಡೆಸಲು ಸಾಧ್ಯವೇ ಆಗುತ್ತಿರಲಿಲ್ಲ. ನಮ್ಮ ವೈಯುಕ್ತಿಕ, ಆರ್ಥಿಕ ಮತ್ತು ಬೌದ್ಧಿಕ ಅವಶ್ಯಕತೆಗಳಿಗೋಸ್ಕರ ಮತ್ತು ಅಂತಹ ಹತ್ತು ಹಲವಾರು ಸನ್ನಿವೇಶಗಳಲ್ಲಿ ನಾವು ಸಾಕಷ್ಟು ಹೆಚ್ಚಿನ ರೀತಿಯಲ್ಲಿಯೇ (ಅದರ ಗಾತ್ರ ಮತ್ತು ಸ್ವರೂಪದಲ್ಲಿ ವ್ಯತ್ಯಾಸವಿರಬಹುದು) ಇತರರ ಬೆಂಬಲ ಪಡೆದೇ ಇರುತ್ತೇವೆ. ಅದು ಕಷ್ಟ ಕಾಲದಲ್ಲಿ ಹಣ ಸಹಾಯ ಇರಬಹುದು, ರೋಗ-ರುಜಿನಗಳಾದಾಗ ವೈಯುಕ್ತಿಕ ಸೇವೆಯ ರೂಪದಲ್ಲಿರಬಹುದು; ಮಾನಸಿಕ ಕ್ಲೇಷಕ್ಕೊಳಗಾದಾಗ ಮಾನಸಿಕ ಸಾಂತ್ವನ ನೀಡುವಂತಹದಾಗಿರಬಹುದು ಇತ್ಯಾದಿ. ಆದರೆ ಈ ರೀತಿ ಬಾಹ್ಯ ನೆರವು ಪಡೆಯುವಾಗ ಮಾತ್ರ ನಮ್ಮ ವಿವೇಚನಾ ಮಟ್ಟ ಅತ್ಯಂತ ಚುರುಕಾಗಿರಬೇಕು - ಅದೊಂದು ರೀತಿಯ balancing act! ಸಹಜವಾಗಿಯೇ ಸ್ವಾರ್ಥಿಯಾಗಿರುವ ಮಾನವ ತನಗೆ ಎಲ್ಲೆಡೆಯಿಂದ ಸಸೂರಾಗಿ ಬರುವ ಎಲ್ಲಾ ಸವಲತ್ತುಗಳನ್ನು ತಕ್ಷಣ (ಯಾವುದೇ ಸಂಕೋಚವಿಲ್ಲದೇ ಮತ್ತು ಅನೇಕ ಸಂದರ್ಭಗಳಲ್ಲಿ ತನ್ನ ಅವಶ್ಯಕತೆಗಳಿಗೂ ಮೀರಿ) ಬಾಚಿಕೊಂಡು ಬಿಡುತ್ತಾನೆ. ಬಹುತೇಕ ಸಂದರ್ಭಗಳಲ್ಲಿ ಆತ ಎಷ್ಟು ಸ್ವಾರ್ಥಿಯಾಗುತ್ತಾನೆಂದರೆ, ಹಾಗೆ ಅನೇಕ ಕಡೆಗಳಿಂದ ಸ್ವೀಕರಿಸಿದ ಸಹಾಯ-ಸವಲತ್ತುಗಳ ಕಾರಣಕರ್ತರನ್ನು ಕೂಡ ಮರೆತೇ ಬಿಡುತ್ತಾನೆ.  ಹಾಗೆ ಪಡೆಯುವುದೇ ತನ್ನ ಹಕ್ಕು ಎಂದು ಭಾವಿಸುತ್ತಾನೆ. ಉಪಕಾರ ಸ್ಮರಣೆ ದೂರವೇ ಉಳಿದ ಮಾತು. ಮೇಲೇರಿದ ನಂತರ ಏಣಿಯನ್ನೇ ಮರೆಯುವಂತೆ. ಇಂತಹ ಸಂದರ್ಭಗಳಲ್ಲಿಯೇ ನಾವು ಬಹು ಎಚ್ಚರದಿಂದಿರಬೇಕು. ಹೀಗೆ ನಾಚಿಕೆ ಬಿಟ್ಟು ಕಂಡದ್ದೆಲ್ಲಾ ಬಾಚುತ್ತಾ ಹೋಗುವ ಪ್ರವೃತ್ತಿ ನಿಜಕ್ಕೂ ನಮ್ಮ ಸ್ವಾಭಿಮಾನದ ಮತ್ತು ಸಚ್ಚಾರಿತ್ರ್ಯದ ದಿವಾಳಿತನವೇ ಸರಿ. ಸ್ವಾಭಿಮಾನ ಮಾನವನ ಅತ್ಯಂತ ಪ್ರಮುಖ ಸದ್ಗುಣಗಳಲ್ಲಿ ಒಂದು. ನಮ್ಮತನವನ್ನು ಬಿಟ್ಟು ನಾವೆಂದಿಗೂ ಬಾಳಬಾರದು. ಆದುದರಿಂದ ಸಂಪಾದನೆಗಿಂತ ಕಡಿಮೆ ಖರ್ಚು ಮಾಡುವುದೇ  ಪಾಂಡಿತ್ಯ; ಅದೇ ನಿಜವಾದ ಚಾತುರ್ಯ ಮತ್ತು ಜಾಣತನ. ಇಲ್ಲಿ ಎಚ್ಚರದ ಮತ್ತೊಂದು ಮಾತೆಂದರೆ ಸ್ವಾಭಿಮಾನ ಅತೀ ಹೆಚ್ಚಾಗಿ ಅದು ದುರಭಿಮಾನಕ್ಕೆ ಎಡೆಮಾಡಿಕೊಡುವ ಸಂದರ್ಭಗಳ ಬಗ್ಗೆ ಕೂಡ ನಾವು ಜಾಗರೂಕರಾಗಿರಬೇಕು.


ಸಮಾಜವೆಂಬ ಅಚ್ಚಿನಿಂದ ಹೊರಬಂದ ನಾವು ಜೀವನ ಸಾಗಿಸಲು ನಮ್ಮ ಅರ್ಹತೆಗೆ ತಕ್ಕ ದಾರಿ ಕಂಡು ಕೊಳ್ಳುತ್ತೇವೆ; ಹೆಚ್ಚಿನ ಸಂದರ್ಭಗಳಲ್ಲಿ ಆ ಭಗವಂತನೇ ಒಂದು ದುಡಿಮೆಗೆ ನಮ್ಮನ್ನು ಹಚ್ಚಿರುತ್ತಾನೆ (ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯಾನೇ?). ಅಂತಹ ಒಂದು ದಾರಿ ಸಿಕ್ಕ ಕೂಡಲೇ ನಾವು ಕಂಡದ್ದಕ್ಕೆ ಕೈ ಚಾಚುವ ಪ್ರವೃತ್ತಿಯ ಬಗ್ಗೆ ಜಾಗೃತರಾಗಬೇಕು. ಅಂದರೆ ನಮ್ಮ ನಿಜವಾದ ಅವಶ್ಯಕತೆಗಳ ಮತ್ತು ಅವುಗಳನ್ನು ಪೂರೈಸುವ ವ್ಯವಸ್ಥೆಯನ್ನು ನಾವು ಅಚ್ಚುಕಟ್ಟಾಗಿ ಯೋಜಿಸಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬುದು ನಮ್ಮ ನಿತ್ಯ ಮಂತ್ರವಾಗಬೇಕು. ಸದಾಕಾಲ ಜುಟ್ಟಲ್ಲಿ ಮಲ್ಲಿಗೆ ಹೂವಿರಲು ಸಾಧ್ಯವಿಲ್ಲ. ಪಾಲಿಗೆ ಬಂದದ್ದನ್ನು ದೇವರ ಪ್ರಸಾದ ಎಂದು ಸ್ವೀಕರಿಸುವ ನಮ್ರ ಜೀವನಶೈಲಿ ನಮ್ಮ ಗುರಿಯಾಗಬೇಕು. ಪರಮಾತ್ಮನ ದಯೆಯಿದ್ದರೆ ಇತರರಿಗೆ ಸಹಾಯಕವಾಗುವ ಪ್ರತಿಯೊಂದು ಕ್ಷಣವೂ ನಮಗೆ ಬರಲಿ, ಅಂತಹ ಸಹಾಯ ನೀಡಬಲ್ಲ ಶಕ್ತಿ ಕೂಡ ಬರಲಿ ಎಂಬುದು ಆ ಭಗವಂತನಲ್ಲಿ ನಮ್ಮ ನಿರಂತರ ಪ್ರಾರ್ಥನೆಯಾಗಬೇಕು. ಆದಷ್ಟೂ ಬೇರೆಯವರ ಮುಲಾಜಿಲ್ಲದೇ, ಬೇರೆಯವರ ಕೃಪಾಕಟಾಕ್ಷಕ್ಕೆ ಕಾಯದೇ, ಸ್ವಾವಲಂಬಿಯಾಗಿ, ಎದೆಯುಬ್ಬಿಸಿ ಸಾಗಿಸುವ ಜೀವನದ ಆನಂದವೇ ಬೇರೆ - ಆತ್ಮತೃಪ್ತಿಯೇ ಬೇರೆ. ಅದೊಂದು ಅವರ್ಣನೀಯ ಅನುಭವ.


     ಸತ್ಪಾತ್ರರಿಗೆ ದಾನ ಮಾಡುವುದು ಎಷ್ಟು ಸೂಕ್ತವೋ ಅಷ್ಟೇ ಮುಖ್ಯವಾದದ್ದು ಸತ್ಪಾತ್ರರಿಂದ ಸಹಾಯ ಪಡೆಯುವುದೂ ಕೂಡ. ನಿಮ್ಮ ಕ್ರಿಯಾಶೀಲತೆಯನ್ನು, ನಿಮ್ಮ ಕಾರ್ಯಸಿದ್ಧಿಯನ್ನು ಅಥವಾ ನಿಮ್ಮ ಬೌದ್ಧಿಕ ಶಕ್ತಿಯನ್ನು ನೋಡಿ ಒಳಗೊಳಗೇ ಹೊಟ್ಟೆಕಿಚ್ಚು ಪಡುವ ಮಂದಿಯಿಂದ ನೀವೇನಾದರೂ ಸಹಾಯ ಪಡೆದಲ್ಲಿ ಅದು ನಿಮಗೇ ಕಂಟಕವಾಗಬಲ್ಲದು; ನಿಮ್ಮಲ್ಲಿರುವ ಅಂತ:ಶಕ್ತಿ ಕೂಡಾ ಅಂತಹ ನಕಾರಾತ್ಮಕ ಅಲೆಗಳ ಪ್ರಭಾವದಿಂದ ಕುಂಠಿತವಾಗಬಲ್ಲದು. ಆದುದರಿಂದ ನಾವು ಯಾರಿಂದ (ಅದೂ ಅತ್ಯಂತ ಅನಿವಾರ‍್ಯವಾದ ಸಂದರ್ಭಗಳಲ್ಲಿ) ಸಹಾಯ ಹಸ್ತ ಬೇಡುತ್ತಿದ್ದೇವೆ ಎಂಬ ಬಗ್ಗೆ ಕೂಡ ಅತೀ ಎಚ್ಚರಿಕೆಯಿಂದ ಇರಬೇಕು. ಹಾಗಾದಾಗ ಮಾತ್ರ ನಾವು ಪಡೆದ ಸಹಾಯ ನಮಗೆ ಅನುಕೂಲವಾದೀತು; ನಮ್ಮ ಉದ್ದೇಶ ಸಾಧನೆಗೆ ದಾರಿಯಾದೀತು. ಅದೇ ರೀತಿ ನಾವು ಸಹಾಯ ಮಾಡುವಾಗ ಕೂಡ ದರಿದ್ರರಾದವರಿಗೇ ಸಹಾಯ ಮಾಡಬೇಕು. ಹಣವುಳ್ಳವರಿಗೇ ಸಹಾಯ ಮಾಡುವುದೂ ಒಂದೇ ಸಮುದ್ರಕ್ಕೆ ಒಂದು ಕೊಡ ನೀರು ಹಾಕುವುದೂ ಒಂದೇ. ಆದುದರಿಂದ ಯಾವಾಗಲೂ ವ್ಯಾಧಿಯುಳ್ಳವರಿಗೆ ಔಷಧಿ ನೀಡಿ ಉಪಚರಿಸಬೇಕೇ ವಿನಾ ವ್ಯಾಧಿಯಿಲ್ಲದವರಿಗಲ್ಲ. ಹಾಗೆ ಮಾಡಿದ ಸಹಾಯ ಮಾತ್ರ ಸಾರ್ಥಕತೆ ಹೊಂದಬಲ್ಲದು. ನಮ್ಮ ಮನಸ್ಸಿಗೂ ಹಾಗೂ ಸಹಾಯ ಪಡೆದವರಿಗೂ ಸಾಕಷ್ಟು ಸಂತೃಪ್ತಿ, ನೆಮ್ಮದಿ ತರಬಲ್ಲದು.   

ನಾವು ಎಲ್ಲರಿಗೂ ದಾನ ಮಾಡುವುದಿಲ್ಲ; ಎಲ್ಲರಿಂದಲೂ ದಾನ (ಸಹಾಯ) ಸ್ವೀಕರಿಸುವುದಿಲ್ಲ.  ಹಾಗೆ ದಾನ ಪಡೆದುಕೊಳ್ಳುವವರಿಗೆ ಕೊಡುವವರಿಂದ ಪೂರ್ವ ಜನ್ಮದಲ್ಲಿ ಬರಬೇಕಾದ ಹಳೇ ಬಾಕಿ ವಸೂಲಾತಿ ಅದಾಗಿರಬಾರದೇಕೆ? ಹಾಗಿದ್ದಲ್ಲಿ ನಾವು ನಿಜವಾಗಿ ಏನನ್ನೂ ದಾನ ಮಾಡುವುದೇ ಇಲ್ಲ; ನಮ್ಮ ಹಳೇ ಬಾಕಿ ತೀರಿಸಿದೆವು ಅಷ್ಟೆ! ಬಹುಶ: ನಮ್ಮ ಪೂರ್ವ ಜನ್ಮಗಳಲ್ಲಿ ಶೇಖರಿಸಿದ ಋಣದ ಭಾರಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಯೇ ಈ ಕೊಡು-ಕೊಳ್ಳುವಿಕೆ. ನಿಜಾರ್ಥದಲ್ಲಿ ನೋಡಿದಾಗ ದಾನ ಕೊಡುವುದು-ಪಡೆದು ಕೊಳ್ಳುವುದು ಎರಡೂ ಜೀವನದ ಸಹಜ ಕ್ರಿಯೆಗಳು; ಒಂದು ರೀತಿ ವ್ಯಕ್ತಿಯ ಪೂರ್ವ ಜನ್ಮದ ಕರ್ಮಫಲದ ಸಂಚಯಿತ ಕ್ರಿಯೆಗಳು. ದಾನ ಸ್ವೀಕರಿಸುವುದೂ ಅಷ್ಟೆ. ಅದೊಂದು ನಾವು ಬೇರೆಯವರಿಂದ ನಮ್ಮ ಹಿಂದಿನ ಜನ್ಮಗಳಲ್ಲಿ ಬರಬೇಕಾದ ನಮ್ಮ ಹಳೇಬಾಕಿ ಹಿಂದಕ್ಕೆ ಪಡೆಯುವ ಕ್ರಿಯೆ. ಆದರೆ, ವಿಷಯ ಅಷ್ಟು ಸರಳವಲ್ಲ. ಇದು ನಮ್ಮ ಪೂರ್ವಜನ್ಮಗಳಲ್ಲಿ ಅರ್ಜಿಸಿದ ಕರ್ಮಫಲವೇ ಆದರೂ ಕೂಡ ನಾವು ಈ ಪ್ರಕ್ರಿಯೆಯಲ್ಲಿ ಬಹಳ ಎಚ್ಚರವಿರಲೇ ಬೇಕಾಗುತ್ತದೆ. ದಾನ ಮಾಡುವವರು (ಬಹುತೇಕ ಮಂದಿ) ಯಾರೂ ಎಂದಿಗೂ ಕೈ ಬಿಟ್ಟು ದಾನ ಮಾಡುವುದಿಲ್ಲ. ಯಾರೋ ಒಂದು ಸಾವಿರ ರೂ. ಸಹಾಯ ಕೇಳಿದರೆ ಒಂದು ೪೦೦-೫೦೦ ಕೊಟ್ಟು ಕೈ ತೊಳೆದುಕೊಳ್ಳುವವರೇ ಹೆಚ್ಚು ಮಂದಿ. ಆಗ ಆ ಋಣ ಭಾರದ ಬಾಕಿ ಇನ್ನೂ ಉಳಿಯುತ್ತದೆ. ವ್ಯತಿರಿಕ್ತವಾಗಿ ನಾವು ದಾನ (ಸಹಾಯ) ಸ್ವೀಕರಿಸುವಾಗ ನಮಗೆ ಅಗತ್ಯಕ್ಕೆ ಹೆಚ್ಚಿನದ್ದನ್ನೇ ಅಪೇಕ್ಷೆ ಪಡುತ್ತೇವೆ. ಹಾಗೆ ನಮಗೆ ನಿಜವಾಗಿ ಬರಬೇಕಾದ್ದಕ್ಕಿಂತ ಹೆಚ್ಚಿಗೆ ಪಡೆಯುವುದೂ ಕೂಡ  ನಮ್ಮ ಮುಂದಿನ ಜನ್ಮಗಳಿಗೆ ಪುನ: ಹೊತ್ತು ಹೋಗುವ ಋಣದ ಚೀಲವನ್ನು ಇನ್ನಷ್ಟು ಭಾರವನ್ನಾಗಿಸುತ್ತದೆ. ಆದುದರಿಂದ, ದಾನ ಮಾಡುವಾಗ ಕೈ ಬಿಟ್ಟು, ಮನಬಿಚ್ಚಿ ದಾನ ಮಾಡಿ. ದಾನ ಸ್ವೀಕರಿಸುವಾಗ ಕನಿಷ್ಠ ಅವಶ್ಯವಿದ್ದಷ್ಟು ಮಾತ್ರ ಕೃತಜ್ಞತೆಯಿಂದ ಸ್ವೀಕರಿಸಿ. ಅನ್ಯರ ಋಣ ಭಾರ ನಮ್ಮ ಮೇಲೆ ಹೆಚ್ಚದಂತೆ ಎಚ್ಚರ ವಹಿಸಿ.   

     ತಾತ್ಪರ್ಯ ಇಷ್ಟೆ. ಮನುಷ್ಯ ಸರ್ವ ಸ್ವತಂತ್ರನಾಗಿ ತಾನೊಬ್ಬನೇ ಜೀವಿಸಲು ಸಾಧ್ಯವೇ ಇಲ್ಲ. ಅವನಿಗೆ ಇತರರ ಬೆಂಬಲ (ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಇತ್ಯಾದಿ) ಬೇಕೇ ಬೇಕು. ಹಾಗಿರುವಾಗ ಜೀವನ ಪರ್ಯಂತ ಈ ಕೊಡು-ಕೊಳ್ಳು ಗಳ ಪ್ರಕ್ರಿಯೆ ನಡೆದೇ ಇರುತ್ತದೆ. ಇದು ಹರಿಯುವ ನೀರಿನಂತೆಯೇ ನಿರಂತರ; ಸೂರ್ಯ-ಚಂದ್ರರಷ್ಟೇ ನಿತ್ಯ-ಸತ್ಯ. ಆದರೆ ಈ ಕೊಡು-ಕೊಳ್ಳು ವಿಕೆಯ ಪ್ರಮಾಣವನ್ನು ಸರಿಯಾದ ಮಟ್ಟದಲ್ಲಿ (ಅಂದರೆ ಲೌಕಿಕ ಮತ್ತು ತಾತ್ವಿಕ ದೃಷ್ಟಿಗಳೆರಡರಿಂದಲೂ) ಕಾಪಾಡುವ ಹೊಣೆ ಮತ್ತು ಜವಾಬ್ದಾರಿ ಮಾತ್ರ ನಮ್ಮದು. ಕೊಡುವುದು ಸ್ವಲ್ಪ ಜಾಸ್ತಿಯಾದರೂ ಪರವಾಗಿಲ್ಲ (ಹೆಚ್ಚಾದರೂ ಇನ್ನೂ ಒಳ್ಳೆಯದೇ!) ಆದರೆ ಕೊಳ್ಳುವುದು ಮಾತ್ರಾ ಅತೀ ಕಡಿಮೆ ಇರಬೇಕು.   ಹಾಗಾದಾಗ ನಮ್ಮ ಜೀವನ ನಮಗೂ ಸುಂದರವಾಗಿರುತ್ತದೆ; ಸಮಾಜ ಕೂಡ ಅದನ್ನು ಅನುಮೋದಿಸುತ್ತದೆ; ಮತ್ತು ಭಗವಂತ ಕೂಡ ಅದನ್ನು ಮೆಚ್ಚುತ್ತಾನೆ.
   ಫೈನಲ್ ಕಿಕ್:
ಸತ್ಪಾತ್ರರಿಗೆ ದಾನ/ಸಹಾಯ ಮಾಡಿ. ಸತ್ಪಾತ್ರರಿಂದ ಮಾತ್ರಾ ದಾನ/ಸಹಾಯ ಸ್ವೀಕರಿಸಿ. ಆದರೆ, ಜೀವನದ ಅಂತ್ಯಕಾಲದಲ್ಲಿ ಈ ಕೊಟ್ಟ ಮತ್ತು ಸ್ವೀಕರಿಸಿದ ಲೆಕ್ಕ ಮಾತ್ರಾ ಕನಿಷ್ಠಪಕ್ಷ ಸಮ ಸಮವಾಗಿರಲಿ. ಈ ಎರಡರ ಪ್ರಕ್ರಿಯೆಯಲ್ಲೂ ಸದಾ ನಿರಪೇಕ್ಷ ಭಾವ ಇರಲಿ.


01.07.2008                                                                                  
[ಸೆಪ್ಟೆಂಬರ್ ೨೦೦೮ ರ ಸ್ವಯಂ ಪ್ರಕಾಶ, ೨೪.೯.೨೦೦೮ ರ ಜನಹೋರಾಟ ಮತ್ತು ೨೦.೨.೨೦೦೯ ರ ನಾವಿಕ ಪತ್ರಿಕೆಗಳಲ್ಲಿ ಪ್ರಕಟಿತ ಲೇಖನ]

9 comments:

  1. ನಮಸ್ತೆ.
    ಬರಹ ತುಂಬಾ ಚೆನ್ನಾಗಿದೆ ಸುರೇಶ್, ಮಧ್ಯೆ ಮಧ್ಯೆ ಶರ್ಮರ ಮಾತುಗಳು ನೆನಪಾಯ್ತು. ವಾರಕ್ಕೊಂದಾದರೂ ಇಂತಹ ಬರಹ ನಿಮ್ಮಿಂದ ಮೂಡಿಬರಲಿ.

    ReplyDelete
  2. Dear Sridhar ,
    All the articles have come out well except
    ವಿನಾ ದೈನ್ಯೇನ ಜೀವನಂ.......this article has appeared throughout as shown below !!!.....ENTIRE ARTICLE is like this !!!...can you kindly rectify and Re-post please ??...Thanks & regards !!..


    'C£ÁAiÀiÁ¸ÉãÀ ªÀÄgÀtA «£Á zÉå£ÉåãÀ fêÀ£ÀA.. ..’ JA§ÄzÀÄ J®è ¸ÀdÓ£ÀgÀ ¤vÀå D±ÀAiÀÄ, ¥ÁæxÀð£É. C£ÁAiÀiÁ¸ÀªÁzÀ CAvÀå £ÀªÀÄä PÉÊAiÀÄ°è®è; CzÀÄ ¨sÀUÀªÀAvÀ£À EZÉÒ. CAzÀgÉ fêÀ£À ¥ÀÆwð AiÀiÁgÀ ªÀÄÄAzÉAiÀÄÆ ‘zÉû.......


    ಫೈನಲ್ ಕಿಕ್:
    ¸ÀvÁàvÀæjUÉ zÁ£À/¸ÀºÁAiÀÄ ªÀiÁr. ¸ÀvÁàvÀæjAzÀ ªÀiÁvÁæ zÁ£À/¸ÀºÁAiÀÄ ¹éÃPÀj¹. DzÀgÉ, fêÀ£ÀzÀ CAvÀåPÁ®zÀ°è F PÉÆlÖ ªÀÄvÀÄÛ ¹éÃPÀj¹zÀ ¯ÉPÀÌ ªÀiÁvÁæ PÀ¤µÀ×¥ÀPÀë ¸ÀªÀÄ ¸ÀªÀĪÁVgÀ°. F JgÀqÀgÀ ¥ÀæQæAiÉÄAiÀÄ®Æè ¸ÀzÁ ¤gÀ¥ÉÃPÀë ¨sÁªÀ EgÀ°.

    ReplyDelete
  3. ಶ್ರೀ ಜಗದೀಶ್,
    ನಮಸ್ತೆ,
    ಸುರೇಶರು ನುಡಿಯಲ್ಲಿ ಬರೆದಿದ್ದರಿಂದ ಓದಲು ಆಗದಂತೆ ಪ್ರಕಟವಾಗಿರಬಹುದು. ನನ್ನಲ್ಲಿ ನುಡಿ ಮತ್ತು ಬರಹ ಎರಡೂ ಇರುವುದರಿಂದ ನನ್ನ ಅರಿವಿಗೆ ಬರಲಿಲ್ಲ. ಈಗ ಕನ್ವರ್ಟ್ ಮಾಡಿ ಹಾಕಿರುವೆ. ಓದಲು ಸಾಧ್ಯವಾಗುತ್ತಾ ತಿಳಿಸಿ.

    ReplyDelete
  4. Dear Sridhar !!!
    You are INCREDIBLY efficient !!!...LOVE YOU for what you are !!!....Just saw the article , THANK YOU so much Sridhar , keep it up ,I am with you !!!...

    ReplyDelete
  5. BTW Sridhar Sir , In the fifth para there's a phrase bಚಿಟಚಿಟಿಛಿiಟಿg ಚಿಛಿಣ!...what does it mean ???...

    ReplyDelete
  6. Sridhar Sir , every article is worth reading , recalling & referring often ....so how about bringing them out in book form at regular intervals ?...just a suggestion for your kind consideration ....

    ReplyDelete
  7. [bಚಿಟಚಿಟಿಛಿiಟಿg ಚಿಛಿಣ!...]
    ಈ ಪದ ಲೇಖನದಲ್ಲಿ ಯಾವ ಭಾಗದಲ್ಲಿದೆ, ಎಂದು ತಿಳಿಸಿದರೆ ಸರಿಯಾಗಿ ಓದಲನುಕೂಲವಾಗುವಂತೆ ಕನ್ವರ್ಟ್ ಮಾಡಲು ಪ್ರಯತ್ನಿಸುವೆ.

    ReplyDelete
  8. ಅದೀನಾಃ ಸ್ಯಾಮ ಶರದಃ ಶತಮ್ (ಯಜುರ್ವೇದ.36.24.) - ನೂರು ವರ್ಸಗಳ ಕಾಲ ದೈನ್ಯತೆಯಿಲ್ಲದೆ ಬಾಳೋಣ ಎಂಬುದು ವೈದಿಕ ಪ್ರಾರ್ಥನೆ. ಸಂಸ್ಕೃತ ಸುಭಾಷಿತಗಳ ಮೂಲ ಇಲ್ಲಿದೆ!
    ಯಜ್ಞದಲ್ಲಿ ಮಾತು ಮಾತಿಗೂ "ಇದಂ ನ ಮಮ" ಎನ್ನುತ್ತಾ "ಕೊಡಬೇಕು. ಕೊಟ್ಟಿದ್ದೇನೆ, ಇದು ನನ್ನದಲ್ಲ" ಎಂಬ ಭಾವನೆಯಿಂದ ಕೊಡಬೇಕು ಎಂಬ ಶಿಕ್ಷಣವಿದೆ.
    ಇಲ್ಲೊಂದು ನಿಯಮ - ಕೊಟ್ಟಿದ್ದನ್ನು ತಕ್ಷಣ ಮರೆಯಬೇಕು, ಪಡೆದದ್ದನ್ನು ಎಂದಿಗೂ ಮರೆಯಬಾರದು. (ಇಲ್ಲಿ ಎಷ್ಟು ಎಂಬ ಪ್ರಮಾಣ Quantity ಮುಖ್ಯವೇ ಅಲ್ಲ).
    ಕೊಡುವಾಗ, ತೆಗೆದುಕೊಳ್ಳುವಾಗ ಅನುಸರಿಸಬೇಕಾದ ನಿಯಮವನ್ನು ನಮ್ಮ ಗುರುಗಳು ತಿಳಿಸುತ್ತಿದ್ದರು.
    ಮುಖ್ಯವಾಗಿ ಎರಡನ್ನು ನೋಡಬೇಕು - ಒಂದು ಉದಾರತೆ ಮತ್ತೊಂದು ಸಾಮರ್ಥ್ಯ.
    ಕೊಡುವಾಗ - ಉದಾರತೆಯಿಂದ ಸಾಮರ್ಥ್ಯವಿದ್ದಷ್ಟೂ ಕೊಡಬೇಕು. ಸಾಮರ್ಥ್ಯ ಮೀರಿ ಕೊಡಲು ಸಾಲ-ಸೋಲ ಮಾಡಬಾರದು. ಅಂತೆಯೇ ಇರುವಾಗ ಜಿಪುಣತನ ಮಾಡಬಾರದು.
    ತೆಗೆದುಕೊಳ್ಳುವಾಗ - ಕೊಡುವವರು ಉದಾರತೆಯಿಂದ ಕೊಡುತ್ತಿದ್ದಾರೆಯೇ ಅಥವಾ ಇನ್ನಾವುದೋ ಒತ್ತಡಕ್ಕೆ ಸಿಲುಕಿ ಕೊಡುತ್ತಿದ್ದಾರೆಯೇ ನೋಡಬೇಕು. ಕೊಡುತ್ತಿರುವುದು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಇದೆಯೋ ಅಥವಾ ಹೆಚ್ಚಿದೆಯೋ, ಕಡಿಮೆಯಿದೆಯೋ ಪರೀಕ್ಷಿಸಬೇಕು. ಎಲ್ಲಿ ಉದಾರತೆ ಅರ್ಥಾತ್ ಕೊಡುವ ಮನಸ್ಸಿದೆಯೋ ಮತ್ತು ಕೊಡುತ್ತಿರುವುದು ಅವರ ಸಾಮರ್ಥ್ಯಕ್ಕೆ ಸರಿಯಾಗಿದೆಯೋ ನೋಡಿ ಸ್ವೀಕರಿಸಬೇಕು. ಯಾವುದರಲ್ಲೇ ವ್ಯತ್ಯಾಸವಾಗಿದ್ದರೂ ತೆಗೆದುಕೊಳ್ಳಬಾರದು.
    ಕೊನಯದಾಗಿ ಕಿಕ್ ಅಲ್ಲ ಕಿಸ್ ಅರ್ಥಾತ್ ಫ್ಲೈಯಿಂಗ್ ಕಿಸ್ - ನ ಪಾಪತ್ವಾಯ ರಾಸೀಯ (ಋಗ್ವೇದ.7.32.18.) - ನನ್ನ ದಾನಗಳು ಪಾಪಕ್ಕಾಗಿ ಬಳಸಲ್ಪಡದಿರಲಿ.

    ReplyDelete
  9. ಶರ್ಮಾಜಿಯವರಿಗೆ ಗೌರವಪೂರ್ವಕ ನಮಸ್ಕಾರಗಳು,

    [ಇಂದು ತಾನೇ ತಮ್ಮ ಪ್ರತಿಕ್ರಿಯೆ ನೋಡಿದೆ]. ತಮ್ಮ ನುಡಿಗಳು ನನಗೆ ಅತ್ಯಂತ ಪ್ರೋತ್ಸಾಹದಾಯಕವಾಗಿದೆ. ವಿಷಯಕ್ಕೆ ಸಂಬಂಧಿಸಿದ ಈ ವಿಚಾರಗಳೂ ಮನನೀಯವಾಗಿದೆ. ಧನ್ಯವಾದಗಳು.

    ReplyDelete