Pages

Wednesday, December 1, 2010

ಮೂಢ ಉವಾಚ -13

ಆರು ಅರಿಗಳನು ಅರಿಯದವರಾರಿಹರು?
ದೇವಕಾಮದ ಫಲವಲ್ಲವೇ ಚರಾಚರರು||
ನಿತ್ಯಮುಕ್ತ ಪರಮಾತ್ಮನಾಧೀನ ಕಾಮವಾದರೆ|
ಕಾಮನಾಧೀನರಾಗಿಹರು ನರರು ಮೂಢ||


ಆತ್ಮನೇ ತಾನೆಂಬ ಅರಿವು ಮರೆಯಾಗಿ|
ತನು-ಮನವೆ ತಾವೆಂದುಭ್ರಮಿತರಾಗಿರಲು||
ತುಂಬಿದಜ್ಞಾನದಿಂ ಜನಿಸುವುದು ಕಾಮ|
ಕಾಮಫಲಿತಕ್ಕಾಗಿ ಕರ್ಮಗೈವರೋ ಮೂಢ||


ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು||
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು|
ಕಾಮ ಅದಕಿಲ್ಲ ಪೂರ್ಣ ವಿರಾಮ ಮೂಢ||


ಹೊನ್ನು ಕಾರಣವಲ್ಲ ಹೆಣ್ಣು ಕಾರಣವಲ್ಲ|
ಮಣ್ಣು ಕಾರಣವಲ್ಲ ಮನಸು ಕಾರಣವಲ್ಲ||
ಬೇಕು ಬೇಕು ಬೇಕೆಂಬ ಅನಂತಾತೃಪ್ತತೆಗೆ|
ಕಾಮ ಕಾರಣವಲ್ಲದೆ ಮತ್ತೊಂದಲ್ಲ ಮೂಢ||
***************
-ಕವಿನಾಗರಾಜ್.

2 comments:

  1. ಕಾಮಕ್ಕೆ ವಿರಾಮ ಹಾಕಬೇಕಲ್ಲಾ! ಅದೇ ಸಾಧನೆ!!

    ReplyDelete
  2. ಧನ್ಯವಾದ, ಶ್ರೀಧರ್.
    ಕಾಮ ಎಂದರೆ ಕೇವಲ ಲೈಂಗಿಕ ತೃಷೆಯಲ್ಲ, ಆಸೆ, ಬಯಕೆಗಳೂ ಕಾಮವೇ . ಕಡಿವಾಣ ಹಾಕುವವನು ಜಾಣ.

    ReplyDelete