Pages

Tuesday, November 23, 2010

ಭಗವಂತನ ಆಕಾರ-ನಿರಾಕಾರ ಒಂದು ಜಿಜ್ಞಾಸೆ

ದೇವರ ಬಗ್ಗೆ ವಿಮರ್ಶೆ ಮಾಡುವಾಗ ಮೊದಲಿಗೆ ಕೆಲವು ವೈರುಧ್ಯಗಳನ್ನು ಬಿಡಿಸಿಕೊಳ್ಳಬೇಕಾಗಿದೆ. - ಭಗವಂತನನ್ನು ಸರ್ವವ್ಯಾಪಿ ಎಂದು ಹೇಳುವ ಉಸುರಿನಲ್ಲೇ ಭಗವಂತನ ಚಿತ್ರ, ರೂಪ,ಆಕಾರಗಳನ್ನು ಒಪ್ಪುತ್ತೇವೆ. ಆದರೆ, ಯಾವುದೇ ಚಿತ್ರ, ರೂಪ, ಆಕಾರವು ಸರ್ವವ್ಯಾಪಿಯಲ್ಲ ಎಂಬುದು ಸ್ಪಷ್ಟವಾಗಿಯೇ ಇದೆ. ಸರ್ವವ್ಯಾಪಿ ಎನ್ನುವವರು ಚಿತ್ರ, ಆಕಾರಗಳನ್ನು ಸ್ವೀಕರಿಸುವಂತಿಲ್ಲ. ರೂಪ, ಆಕಾರವನ್ನು ಸ್ವೀಕರಿಸುವವರು ದೇವರು ಎಲ್ಲ ಕಡೆಯೂ ಇದ್ದಾನೆ ಎನ್ನುವಂತಿಲ್ಲ. ಈ ಗೊಂದಲವನ್ನು ಮೊದಲು ಬಿಡಿಸೋಣವೇ?
-ಸುಧಾಕರ ಶರ್ಮಾ

-------------------------------------------------------

[ಸರ್ವವ್ಯಾಪಿ ಎನ್ನುವವರು ಚಿತ್ರ, ಆಕಾರಗಳನ್ನು ಸ್ವೀಕರಿಸುವಂತಿಲ್ಲ. ರೂಪ, ಆಕಾರವನ್ನು ಸ್ವೀಕರಿಸುವವರು ದೇವರು ಎಲ್ಲ ಕಡೆಯೂ ಇದ್ದಾನೆ ಎನ್ನುವಂತಿಲ್ಲ]
ಶ್ರೀ ಶರ್ಮಾಜಿ, ನಿಮ್ಮ ಆ ವಾದವನ್ನೇ ನಾನು ಒಪ್ಪುವುದಿಲ್ಲ. ಭಗವಂತನು ಸರ್ವವ್ಯಾಪಿ ಎನ್ನುವವರು ಭಗವಂತನಿಗೆ ಆಕಾರವನ್ನೇಕೆ ಕೊಡಬಾರದು? ಚಿತ್ರದಲ್ಲಿ ಭಗವಂತನಿದ್ದಾನೆಂದರೆ ಬೇರೆಡೆ ಇಲ್ಲವೆಂದೇನೂ ಅಲ್ಲ.ಆದರೆ ಎಲ್ಲೆಡೆ ಇರುವ ಭಗವಂತನನ್ನು ಕಾಣುವುದಾದರೂ ಹೇಗೆ? ಭಗವಚ್ಛಕ್ತಿಯನ್ನು ಒಪ್ಪುವವರು ಅದಕ್ಕೊಂದು ರೂಪವನ್ನು[ನೆಪಮಾತ್ರಕ್ಕೆ]ಕೊಟ್ಟರು.ಇದರಿಂದ ನಮ್ಮ ಗಮನವನ್ನು ಭಗವಂತನೆಡೆ ಕೇಂದ್ರೀಕರಿಸಲು ಸುಲಭವಾಗುವುದಿಲ್ಲವೇ?ಕಾಶಿಯ ವಿಶ್ವನಾಥನ ದೇವಾಲಯದಲ್ಲಿ ಕಾಣುವ ಭಗವಂತನನ್ನು ನಮ್ಮೂರ ಮಾರಮ್ಮನಗುಡಿಯಲ್ಲೂ ,ನಮ್ಮ ತೋಟದ ಅರಳೀಮರದಲ್ಲೂ ,ಮನೆ ಮುಂದಿನ ತುಳಸಿಯಲ್ಲೂ , ಹರಿವ ನದಿ,ಗಿರಿ-ಪರ್ವತ, ಎಲ್ಲೆಲ್ಲೂ ಕಾಣುವಂತಹ ವಿಶಾಲ ದೃಷ್ಟಿಕೋನ ನಮ್ಮ ಹಿಂದೂ ಧರ್ಮದಲ್ಲಿದೆ[ಹಿಂದುವೆಂಬ ಪದವೂ ಚರ್ಚೆಗೊಳಗಾಗುತ್ತದೆಂಬ ಅರಿವಿದೆ]ಹಾಗಾಗಿ ನನ್ನ ನಂಬಿಕೆಯಲ್ಲಿ ನನಗೆ ವಿಶ್ವಾಸವಿದೆ.
-ಹರಿಹರಪುರಶ್ರೀಧರ್
--------------------------------------------------------
ಪ್ರತಿಕ್ರಿಯೆ ಮೇಲುನೋಟಕ್ಕೆ ಸೊಗಸಾಗಿದೆ. ಸೂಕ್ಷ್ಮವಾಗಿ ನೋಡಿದಾಗ ಕೆಲವು ತೊಡಕುಗಳಿವೆ.
ಚಕ್ಕುಬಂದಿಯಿಲ್ಲದೆ ಆಕಾರ ಸಿಗುವುದಿಲ್ಲ. ಚಕ್ಕುಬಂದಿ ಬಂದಾಗ ಸರ್ವವ್ಯಾಪಿ ಎಂಬುದಕ್ಕೆ ಅರ್ಥವೆಲ್ಲಿ ಉಳಿಯಿತು! ಇದನ್ನೇ ವೈರುಧ್ಯವೆಂದು ಕರೆದದ್ದು!
ಇನ್ನು ದೇವರ ಚಿತ್ರವನ್ನು ನೋಡುವಾಗ, ಎಷ್ಟು ಸಲ ಆ ಚಿತ್ರದ ಫ್ರೇಮ್ ನಲ್ಲಿ, ಮೊಳೆಯಲ್ಲಿ, ದಾರದಲ್ಲಿ, ಗೋಡೆಯಲ್ಲಿ ನಾವು ದೇವರನ್ನು ಕಂಡಿದ್ದೇವೆ, ಪ್ರಾಮಾಣಿಕ ಉತ್ತರ ಬರಲಿ.
ಏಕಾಗ್ರತೆ, ಕೇಂದ್ರೀಕರಣ ಎಂಬುದೊಂದು ನೆಪವಾಗಿಯೇ ಕಾಣುತ್ತದೆ. ಏಕೆಂದರೆ ಇದಕ್ಕೆ ಬೇಕಾದ್ದು "ಏಕಾಗ್ರ". ಒಂದು ಚೂಪಾದ ಅತ್ಯಂತ ಕಿರಿದಾದ "Point". ಗಾತ್ರವುಳ್ಳ ಆಕಾರಗಳಲ್ಲ. ಯೋಗಶಾಸ್ತ್ರದಲ್ಲಿ ಮೂಗಿನ ತುದಿ, ಭ್ರೂಮಧ್ಯೆಗಳನ್ನು ಇದಕ್ಕಾಗಿ ಬಳಸಲು ಸಲಹೆ ಕೊಟ್ಟಿದ್ದಾರೆ.
ಇನ್ನು ಭಗವಂತ ಎಂಬ ಅಸ್ತಿತ್ವವನ್ನು ಕಾಣುವುದಲ್ಲ, ಕೇಳುವುದಲ್ಲ, ಮೂಸುವುದಲ್ಲ, ರುಚಿನೋಡುವುದೂ ಅಲ್ಲ, ಮುಟ್ಟುವುದೂ ಅಲ್ಲ. ಅನುಭವಿಸುವುದು.
ಗಮನಿಸಿ. ಇಂದ್ರಿಯಗಳು ಕೇವಲ ಸಂವೇದನೆಗಳನ್ನು ಮಿದುಳಿಗೆ ತಲುಪಿಸುತ್ತವೆ, ಅವು ಸ್ವತಃ ನೋಡುವುದೂ ಇಲ್ಲ, ಕೇಳುವುದೂ ಇಲ್ಲ!! ಮಿದುಳನ್ನು Monitor ಮಾಡುತ್ತಿರುವ ಒಳಗಿನ ಚೇತನವೇ ನಿಜವಾಗಿ ನೋಡುವುದು, ಕೇಳುವುದು. ಅಂತೆಯೇ ಅನುಭವಿಸುವುದೂ ಕೂಡ ಅದೇ!!!
ಹಾಗಾಗಿ ಶರೀರದಲ್ಲಿರುವ ಆ ಚೇತನವು ಅನುಭವಿಸಲು ಯೋಗ್ಯವಾದ ವಿಷಯವೇ ಆ ಭಗವಂತ. ಆ ಅನುಭವವೇ "ಆನಂದ". ಆನಂದದ ಅನುಭವ ಯಾರ್ಯಾರಿಗೆ ಆಗಿದೆಯೋ ಅವರೆಲ್ಲರಿಗೂ ಭಗವಂತನ ಅನುಭವ ಆಗಿಯೇ ಇದೆ!!! (ಆನಂದದ ಸ್ವರೂಪದ ಬಗ್ಗೆ ಮತ್ತೊಮ್ಮೆ ಚರ್ಚಿಸುವ)
ಇದು ಇಡೀ ಹಿಂದೂಧರ್ಮದ ಮೂಲಸ್ರೋತಸ್ಸಾದ ವೇದಗಳ ವೈಜ್ಞಾನಿಕ ಚಿಂತನೆ, ಮಾರ್ಗದರ್ಶನ.
ಎಲ್ಲೆಡೆಯೂ ಇರುವ ಭಗವಂತ ವಿಗ್ರಹದಲ್ಲಿಲ್ಲವೇ? ಇರುವುದು ನಿಜವಾದರೂ ವಿಗ್ರಹಕ್ಕೂ ಭಗವಂತನಿಗೂ ಇರುವ ಸಂಬಂಧ ವ್ಯಾಪ್ಯ-ವ್ಯಾಪಕ ಸಂಬಂಧ.
ಇದರ ವೈಜ್ಞಾನಿಕ ವಿಶ್ಲೇಷಣೆಯನ್ನು ಮತ್ತೊಮ್ಮೆ ನೋಡೋಣ.
(Pending topics = ಆನಂದ ಸ್ವರೂಪ ಮತ್ತು ವ್ಯಾಪ್ಯ-ವ್ಯಾಪಕ ಸಂಬಂಧ)
ಒಪ್ಪುವ,ಒಪ್ಪದಿರುವ ವಿಚಾರದಲ್ಲಿ ಸ್ವಾತಂತ್ರ್ಯ ನಿಮ್ಮದೇ. ಒಪ್ಪಿದರೂ ನೀವು ನಮ್ಮ ಆತ್ಮೀಯರೇ! ಒಪ್ಪದಿದ್ದರೂ ನೀವು ನಮ್ಮ ಆತ್ಮೀಯರೇ!!
-ಸುಧಾಕರ ಶರ್ಮಾ

----------------------------------------------------
ಭಗವಂತನು ಸರ್ವವ್ಯಾಪಿ ಎನ್ನುವವರು ಭಗವಂತನಿಗೆ ಆಕಾರವನ್ನೇಕೆ ಕೊಡಬಾರದು?
ಭಗವಂತನಿಗೆ ಆಕಾರ ಕೊಡಲು ನಾವ್ಯಾರು.ನಾವು ಕೊಡುವ ಆಕಾರ ಭಗವಂತನದ್ದಾಗಿರುವುದಿಲ್ಲ ಅದು ನಮ್ಮ ಬುದ್ಧಿಮಟ್ಟಕ್ಕೆ ತಕ್ಕಂತ ರೂಪವಿರುತ್ತದೆ.
ಮನುಷ್ಯನಿಗೆ ಎಲ್ಲ ಜೀವಿಗಳಿಗಿಂತ ಬುದ್ಧಿ ಹೆಚ್ಚು ಆದರೆ ಆ ಬುದ್ಧಿ ಭಗವಂತನಿಗೆ ಆಕರ ಕೊಡುವಷ್ಟು ಸಮರ್ಥ ಅಂತ ಅನ್ನಿಸುವುದಿಲ್ಲ.

ಆದರೆ ಎಲ್ಲೆಡೆ ಇರುವ ಭಗವಂತನನ್ನು ಕಾಣುವುದಾದರೂ ಹೇಗೆ?
ಭಗವಂತನನ್ನು ನಾವು ಎಲ್ಲೆಡೆ ಕಾಣುತ್ತಿದ್ದೇವೆ ಮತ್ತು ಕಾಣಬಹುದು.ಅವನನ್ನು ನಮ್ಮಂತೆ ರೂಪವಿರುವ ಕಲ್ಲಿನ ಮೂರ್ತಿಯಲ್ಲೇ ಇದ್ದರೆ ಅವನು ಭಗವಂತ ಅಂತ ಹೇಳುವುದು ಸರಿಯೇ.ಭಗವಂತನನ್ನು ಕಣ್ಣಿನಿಂದಲೇ ಕಾಣಬೇಕೆಂದರೆ ಸೂರ್ಯ,ಚಂದ್ರ,ಮರ ಗಿಡ,ಬೆಟ್ಟ,ನೀರು,ಹಣ್ಣುಗಳಲ್ಲಿ ಕಾಣಬಹುದು. ಆದರೆ ಭಗವಂತನನ್ನು ಕಣ್ಣಿನಿಂದ ಕಾಣುವುದಕ್ಕಿಂತ ಅನುಭವಿಸಿದರೆ ಅವನ ಗುಣಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.
ಇದರಿಂದ ನಮ್ಮ ಗಮನವನ್ನು ಭಗವಂತನೆಡೆ ಕೇಂದ್ರೀಕರಿಸಲು ಸುಲಭವಾಗುವುದಿಲ್ಲವೇ?
ನನ್ನ ಪ್ರಕಾರ ಭಗವಂತ shortcut ಹಾದಿಯಲ್ಲಿ ಸಿಗುವವನಲ್ಲ.ನಮ್ಮ ದೌರ್ಬಲ್ಯವನ್ನು ನಾವು ಸರಿಪಡಿಸಿಕೊಳ್ಳಬೇಕು, ನಮಗೆ ಏಕಾಗ್ರತೆ ಇಲ್ಲ ಅಂದರೆ ಅದು ನಮ್ಮ ಪ್ರಾಬ್ಲಮ್ ಅಲ್ಲವೇ?
ಭಗವಂತನ ನಿಯಮ, ನಮಗೆ ಜೀವನ ಸಿಕ್ಕಿರುವ ಉದ್ದೇಶ, ಅವನ ಸೃಷ್ಟಿಯ ವೈಜ್ಞಾನಿಕತೆ ಮತ್ತು ಕೋಟ್ಯಾನುಕೋಟಿ ಅದ್ಭುತ ಗುಣಗಳನ್ನು ಅರಿತು ಮುನ್ನೆಡೆಯಲು ಆಕಾರ ಬೇಕೆಬೇಕೆ ?

ವಿಶಾಲ್
---------------------------------------------------------
ಸ್ವಾಮೀ ಶರ್ಮರೇ ನಮಸ್ಕಾರ, ನಾನೊಬ್ಬ ಏನೊ ತಿಳಿಯದ ವ್ಯಕ್ತಿ ಎಂದು ತಿಳಿದುಕೊಳ್ಳಿ. ಆಗ ನನಗೆ ನಿರಾಕಾರ ದೇವರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರುವುದಿಲ್ಲ. ಇದಕ್ಕೆ ಒಂದು ಕ್ಷುಲ್ಲಕ ಉದಾಹರಣೆ ಕೊಡುತ್ತೇನೆ- ಹದಿಹರೆಯದ ಹುಡುಗನೊಬ್ಬ ಹುಡುಗಿಯೊಬ್ಬಳನ್ನು ನೋಡಿದರಷ್ಟೇ ಅವನಿಗೆ ಅವನಲ್ಲಿನ ವಿಷಯಾಸಕ್ತಿ ಜಾಗ್ರತವಾಗಿ, ಪ್ರೇಮವೋ ಕಾಮವೋ ಘಟಿಸುತ್ತದೆ, ಹುಡುಗಿಯನ್ನೇ ನೋಡದ ಹುಡುಗನಿಗೆ ಯಾರದೋ ವರ್ಣನೆಯಿಂದ ಹುಡುಗಿ ಹೀಗಿದ್ದಾಳೆ ಎಂಬ ಕಲ್ಪನೆ ಬರವುದಿಲ್ಲ ! ಒಂದೊಮ್ಮೆ ಬರುವುದಾದರೂ ಇನ್ನೊಬ್ಬ ಹುಡುಗಿಯನ್ನಾದರೂ ತೋರಿಸಿ ನೋಡಪ್ಪಾ ಹೀಗಿದ್ದಾಳೆ ಎಂದರೆ ಆಗ ಆತನಿಗೆ ರೂಪದ ಕಲ್ಪನೆಯಾಗುತ್ತದೆ. ಇದೇ ರೀತಿ ಹುಟ್ಟಿದಾರಭ್ಯ ತಂದೆಯನ್ನೇ ಕಂಡಿರದ ವ್ಯಕ್ತಿಗೆ ತಂದೆಯ ಛಾಯಾಚಿತ್ರವನ್ನು ತೋರಿಸಿದರೆ ಮಾತ್ರ ಆತ ಈತ ತನ್ನ ತಂದೆ ಎಂಬುದನ್ನು ಮನಗಾಣಬಹುದು.

ಈಗ ನಮ್ಮದನ್ನೇ ತೆಗೆದುಕೊಳ್ಳೋಣ. ಜಗತ್ತಿನ ಅಸಂಖ್ಯ ಜನರಾಶಿಯಲ್ಲಿ ಒಬ್ಬರಂತೇ ಒಬ್ಬರಿಲ್ಲ, ಪ್ರತಿಯೊಬ್ಬರಿಗೂ ಕೊನೇ ಪಕ್ಷ ಏನಾದರೂ ಒಂದು ವ್ಯತ್ಯಾಸ ಇದ್ದೇ ಇರುತ್ತದೆ. [ಅದೇ ಮಾನವ ನಿರ್ಮಿತ ಗಾಡ್ರೆಜ್ ಬೀಗ ತೆಗೆದುಕೊಳ್ಳಿ --ಅಲ್ಲಿ ಒಂದೇ ಥರದ ಬೀಗಗಳು ಇರುತ್ತವೆ ಆದರೆ ಅವು ಅಲ್ಲಲ್ಲಿ ಹಂಚಿಹೋಗಿರುತ್ತವೆ, ಹೀಗಾಗಿ ಗೊತ್ತಾಗುವುದಿಲ್ಲ!] ನಾನು ನಾನಲ್ಲವೆಂದು ನನಗೇ ಅನ್ನಿಸಿದ್ದರೂ ನನ್ನಿಂದ ನಡೆಯುವ ಎಲ್ಲಾ ಲೌಕಿಕ ಕಾರ್ಯಗಳಿಗೆ ನನ್ನ ಪ್ರಸ್ತುತಿ ಅಥವಾ ನನ್ನ ಛಾಯಾಚಿತ್ರದ ಪ್ರಸ್ತುತಿ ಇದ್ದೇ ಇರುತ್ತದೆ. ಅದು ನನ್ನನ್ನು ಇತರರಿಂದ ಬೇರ್ಪಡಿಸಲೋಸುಗ, ಅಲ್ಲವೇ ? ಹೀಗೇ ಪರಮಾತ್ಮ ಸರ್ವವ್ಯಾಪಿಯೇ ಆದರೂ ಅತನ ಆ ನಿರಾಕಾರವನ್ನು ಪರಿಗಣಿಸಿ ನಿರ್ವಿಷಯ ಧ್ಯಾನದಲ್ಲಿ ತಲ್ಲೀನರಾಗಬಲ್ಲ ಜನ ಎಷ್ಟು ಸಿಗುತ್ತಾರೆ? ಇದನ್ನೆಲ್ಲಾ ತಿಳಿದೇ ಹುಡುಗನೊಬ್ಬ ಹುಡುಗಿಯ ಛಾಯಾಚಿತ್ರವನ್ನು ಕಂಡು ಅದರಲ್ಲಿ ತಲ್ಲೀನನಾಗುವಂತೇ ಭಕ್ತನೊಬ್ಬ ಮೂರ್ತಿಯಲ್ಲಿ ಪರಮಾತ್ಮನಿದ್ದಾನೆ ಎಂಬ ಭಾವನೆಯಿಂದ ತಲ್ಲೀನನಾಗಲಿ-ಅಲ್ಲಿಂದ ಮುಂದಕ್ಕೆ ಹಂತ ಹಂತವಾಗಿ ಆತನಿಗೆ ಮುಂದೆ ನಡೆಯಲು ಸಾಧ್ಯ ಎಂಬುದರ ಪರಿವೆಯನ್ನು ತಳೆದು ಕಾಲುಗಟ್ಟಿಯಾಗದ ಹಸುಗೂಸಿಗೆ ಓಡಾಡಲು ಚಿಕ್ಕ ತಳ್ಳುಗಾಡಿಯನ್ನು ಕೊಟ್ಟಂತೇ ನಮಗೆ ಋಷಿಗಳು/ತತ್ಸಮಾನರು ಮೂರ್ತಿಗಳನ್ನು ಕೊಟ್ಟರು ಎಂಬುದು ನನ್ನ ಅಭಿಪ್ರಾಯ. ಎಲ್ಲರೂ ತಮ್ಮ ಮಟ್ಟಕ್ಕೆ ಬೆಳೆಯಲು ತಕ್ಷಣಕ್ಕೆ ಸಾಧ್ಯವೇ ? ಹೀಗಾಗಿ ಜನಸಾಮಾನ್ಯನಿಗೆ ಕಲ್ಪನೆಗಾಗಿ ಮೊದಲಾಗಿ ಕೊಟ್ಟ ಈ ಮೂರ್ತಿಪೂಜೆಯನ್ನು ಮೇಲ್ಮಟ್ಟಕ್ಕೆ ಹೋದಾಗ ವರ್ಜಿಸಬಹುದು ಎಂದು ಶಂಕರರೇ ಹೇಳಿದ್ದಾರಲ್ಲವೇ ? ನಾನು ಅದೇ ತತ್ವಕ್ಕೆ ಆತುಕೊಳ್ಳುತ್ತೇನೆ. ನಾನು ತಮಗೆ ವಿರುದ್ಧವಲ್ಲ, ಆದರೆ ತಾವು ನಮಗಿಂತಾ ಮೇಲ್ಮಟ್ಟಕ್ಕೆ ತಲ್ಪಿದ್ದೀರಿ ಎಂಬುದು ಈ ಮಾತಿನ ಅರ್ಥ, ನಮಸ್ಕಾರ.


5 comments:

  1. ಭಟ್ಟರೇ!
    ಒಂದೆರಡು ಸಮಸ್ಯೆಗಳನ್ನು ಬಿಡಿಸಿಕೊಳ್ಳಲೇಬೇಕು.
    ಹುಡುಗಿಯನ್ನು ನೋಡದವನಿಗೆ ಹುಡುಗಿಯನ್ನೋ, ಹುಡುಗಿಯ ಚಿತ್ರವನ್ನೋ ತೋರಿಸುವ ವಿಷಯ.
    ತೋರಿಸುವವರು ಹೊಣೆಯರಿತು ತೋರಿಸಿದರೆ ತೊಂದರೆಯಿಲ್ಲ. ಹೇಗೂ ಈ ವ್ಯಕ್ತಿ ಹುಡುಗಿಯನ್ನು ಕಂಡಿಲ್ಲ, ಏನು ತೋರಿಸಿದರೂ ಆಯಿತು ಎಂದು ಮಂಗನ ಚಿತ್ರವನ್ನು ತೋರಿಸಿದರೆ, ಹುಡುಗ ಜೀವನಪೂರ್ತಿ ಮಂಗನ ಹಿಂದೆಯೇ ಬೀಳುತ್ತಾನೆ!!!
    ಛಾಯಾಚಿತ್ರವೇನಿದ್ದರೂ ಪ್ರತಿಬಿಂಬ. ಇದಕ್ಕೆ ಮೂಲದಲ್ಲಿ ತಂದೆಯೋ, ಅಥವಾ ನ್ನದೋ ಬಿಂಬವಿರಬೇಕು. ಬಿಂಬವೇ ಇಲ್ಲದಿರುವಾಗ ಬರುವ ಛಾಯಾಚಿತ್ರ ಅಥವಾ ಯಾವುದೇ ಪ್ರತೀಕ (Representation) ಕಲ್ಪನೆಯೆನಿಸುತ್ತದೆಯೇ ಹೊರರು ಸತ್ಯವಾಗಲಾರದು.
    ಇನ್ನು ವಿಗ್ರಹಾರಾಧನೆಯಿಂದ ಮೇಲೆದ್ದು ನಿರಾಕಾರ ಪೂಜೆಗೆ, ಭಾವನೆಗೆ ಜನ ಬರುತ್ತಾರೆಂಬುದು ನಮಗಾಗಿ ನಾವೆ ಕಟ್ಟಿಕೊಂಡ ಸುಂದರ ಜೇಡರಬಲೆ! ದಿನದಿಂದ ದಿನಕ್ಕೆ ವಿಗ್ರಹಗಳ, ದೇವಸ್ಥಾನ, ಚರ್ಚುಗಳ, ಮಸೀದಿಗಳ ಒಟ್ಟಿನಲ್ಲಿ ದೇವರನ್ನು ಹುಡುಕಿಕೊಂಡು ಹೋಗಲು ಬೇಕಾದ ಗುರಿ/ಸ್ಥಖಳಗಳು ಹೆಚ್ಚುತ್ತಲೇ ಇವೆ. ಇವನ್ನು ಬಿಟ್ಟು ನಿಜವಾಗಲೂ ನಿರಾಕಾರ ಉಪಾಸನೆಗೆ ಪರಿವರ್ತಿತರಾದವರು ಎಷ್ಟು ಮಂದಿ? ಒಂದಷ್ಟು ಜನರ ವಿಳಾಸ/ಪರಿಚಯಗಳನ್ನು ಕೊಡಬಲ್ಲಿರಾ? ಜೇಡರಬಲೆಗೋ, ಸುಳಿಗೋ ಸಿಲುಕುವುದು ಸುಲಭ, ಹೊರಬರಲು ಕಷ್ಟಸಾಧ್ಯ! ಒಂದುವೇಳೆ ದಿಕ್ಕು ಒಂದೇ ಆಗಿದ್ದಲ್ಲಿ ಹೆಚ್ಚಿನ ಚಿಂತೆಯಿರಲಿಲ್ಲ. ದಿಕ್ಕೇ ವಿರುದ್ಧವಾಗಿರುವಾಗ ವಿಗ್ರಹಾರಾಧನೆಯನ್ನು ಮೆಟ್ಟಿಲಾಗಿ ಮಾಡಿಕೊಂಡು ನಿರಾಕಾರೋಪಾಸನೆಗೆ ಬರುವುದು ಅಸಂಭವ.
    ಆಗಿರುವವರಿದ್ದಾರೆ. ಅವರ ಈ ಪರಿವರ್ತನೆಗೆ ವೇದಗಳ ಅಧ್ಯಯನವೇ ಕಾರಣವಾಗಿರುವ ದಾಖಲೆಗಳು ನಮ್ಮಲ್ಲಿವೆ. ಅವರ ಪರಿವರ್ತನೆಯ ಮೊದಲ ಹೆಜ್ಜೆಯೇ ವಿಗ್ರಹಾರಾಧನೆಯನ್ನು ಬಿಡುವುದಾಗಿದೆ! ಹೀಗಿರುವಾಗ ಮೊದಲೇ ನೇರವಾಗಿಯೇ ವೇದಗಳ ವಿಚಾರವನ್ನು ತಿಳಿದು, ಆಚರಿಸುವುದು ಸಮಯ, ಶ್ರಮ ಮೊದಲಾದುವನ್ನು ಉಳಿಸುವುದಿಲ್ಲವೇ?
    ಇನ್ನು ನನ್ನನ್ನು ದೊಡ್ಡಮನುಷ್ಯನೆಂದು ಹೇಳಿದ್ದೀರಿ. ಖಂಡಿತಾ ಅಲ್ಲ. ಒಬ್ಬ `ಸಾಮಾನ್ಯ ಮನುಷ್ಯ'ನಾಗಲು ಪ್ರಯತ್ನಿಸುತ್ತಿದ್ದೇನೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದೇನೆ.
    ಮೊದಲನೆಯ ಹೆಜ್ಜೆ ಇದೇ ಆಗಿದೆ - ಜಡವಸ್ತುಗಳಲ್ಲಿ ದೇವರನ್ನು ಕಾಣುವುದಕ್ಕಿಂತ ಜೀವಂತ ಸಹಜೀವಿಗಳಲ್ಲಿ ದೇವರನ್ನು ಕಾಣುವಂತಾದರೆ, ಉಣ್ಣದ ವಿಗ್ರಹಗಳಿಗೆ ಉಳಿಸುವ ವ್ಯರ್ಥಪ್ರಯತ್ನ ಮಾಡುವುದಕ್ಕಿಂತ ಉಣ್ಣುವ ಜೀವಿಗಳೊಡನೆ ಹಂಚಿ ತಿನ್ನುವುದು ಲೇಸಲ್ಲವೇ?
    ಈ ದಿಕ್ಕಿನಲ್ಲಿ ಚಿಂತಿಸುವವರೆಲ್ಲರೂ ಮಹಾತ್ಮರೇ!
    ಚಿಂತಿಸುವವರ ಸಂಖ್ಯೆ ಕಡಿಮೆಯಿರುವಾಗ, ಚಿಂತಿಸುವ ಕೆಲವೇ ಮಂದಿ ಮಹಾತ್ಮರೆನಿಸಿಕೊಂಡುಬಿಡುತ್ತಾರೆ.
    ಇಲ್ಲೊಂದು ಆತ್ಮವಂಚನೆ ಇರಬಹುದೇ?
    ಮಹಾತ್ಮರನ್ನು, ಅಟ್ಟಕ್ಕೇರಿಸಿ, ಅಪತಾರಪುರುಷರನ್ನಾಗಿಸಿ, ನೀವೇ ದೇವರೆಂದು ಹೇಳುತ್ತಾ, ನಾವು ಹುಲುಮಾನವರು, ನಿಮ್ಮಂತೆ ಇರಲಾಗುವುದಿಲ್ಲ ಎಂದು ಹಲಬುತ್ತಾ ನಾವು ಇದ್ದಂತೆಯೇ ಇದ್ದುಬಿಡಲು ಒಂದು ನಪವಾಗುತ್ತಿದೆಯೇ?! ಸ್ವಲ್ಪ ಪ್ರಾಮಾಣಿಕ ವಿಮರ್ಶೆಯಾಗಬೇಕೆನಿಸುತ್ತದೆ.
    ಮತ್ತೊಮ್ಮೆ - ಇಲ್ಲಿಯ ವಿಚಾರಗಳನ್ನು ನೀವು ಒಪ್ಪಲೇಬೇಕೆಂಬ ಹಠವಿಲ್ಲ.
    ವಿಷಯವನ್ನು ತಿಳಿಸುವ ಭರದಲ್ಲಿ ಅಕಸ್ಮಾತ್ ಕಠಿಣ ಪದಗಳೋ, ಕಠಿಣ ಶೈಲಿಯೋ ಎದುರಾದಲ್ಲಿ ದಯವಿಟ್ಟು ಕ್ಷಮಿಸಿರಿ. ಕಾಠಿಣ್ಯ ನನ್ನ ಉದ್ದೇಶ ಖಂಡಿತಾ ಅಲ್ಲ. ಕೆಲವೊಮ್ಮೆ ಇದ್ದದ್ದನ್ನು ಇದ್ದಂತೆ ಹೇಳುವಾಗ, ಬಹುಜನರ ಚಿಂತನೆಗಿಂತ ಭಿನ್ನವಾದ ವಿಚಾರಗಳು ಬಂದಾಗಲೂ ಹಾಗೆ ಕಾಣುವುದುಂಟು. ಏನೂ ಇರಲಿ.
    ಕ್ಷಮೆಯಂತೂ ಇರಲಿ (ಕ್ಷಮೆ = Excuse and also Tolerance)
    -ಸುಧಾಕರ ಶರ್ಮಾ

    ReplyDelete
  2. ಆತ್ಮೀಯರಾದ ಶರ್ಮಾಜಿಯವರಿಗೆ ನಮಸ್ಕಾರ,

    ಒಂದು ಅನುಭವವನ್ನು ತಮ್ಮಲ್ಲಿ ಹೇಳಬೇಕೆಂದು ಬಂದೆ. ಭಗವಾನ್ ಶ್ರೀ ಶ್ರೀಧರಸ್ವಾಮಿಗಳು ವರದಹಳ್ಳಿಯಲ್ಲಿ ನೆಲೆಸಿದ್ದುದು ತಮಗೆ ತಿಳಿದೇ ಇರುತ್ತದೆ. ಅವರಕಾಲದಲ್ಲಿ ನಡೆದ ಒಂದೆರಡು ಘಟನೆಗಳು ಹೀಗಿವೆ :

    ೧. ಒಬ್ಬನಿಗೆ ಮಾತು ಬರುತ್ತಿರಲಿಲ್ಲ. ಆ ಊರಿಗೆ ಶ್ರೀಗಳು ಹೋಗಿದ್ದಾಗ ಆ ಮೂಕನ ತಂದೆ ಶ್ರೀಧರರನ್ನು ಭೇಟಿಮಾಡಿ ಪ್ರಾರ್ಥಿಸಿದರಂತೆ. ಆಗ ಶ್ರೀಧರರು ಒಂದೇ ನಿಮಿಷ ತಮ್ಮ ದಿವ್ಯಚಕ್ಷುವಿನಿಂದ ಅವರನ್ನು ನೋಡಿ ಹತ್ತಿರದ ಗುಡ್ಡದ ಮೇಲಿರುವ ದೇವಿಗೆ ಹಿಂದೆ ಅವರ ಕುಟುಂಬದವರು ಹರಕೆಮಾಡಿಕೊಂಡಿದ್ದನ್ನು ಒಪ್ಪಿಸಿರಲಿಲ್ಲವೆಂದೂ ಕೂಡಲೇ ಒಂದು ಬಂಗಾರದ ನಾಲಿಗೆಯನ್ನು ಮಾಡಿಸಿ ದೇವಿಗೆ ಅರ್ಪಿಸಿದರೆ ಮಾತು ಬರುತ್ತದೆಂದೂ ಹೇಳುತ್ತಾರೆ. ನಂತರ ಹಾಗೇ ಮಾಡಿದ ಆ ತಂದೆ ದೇವಿಯ ವಿಗ್ರಹಕ್ಕೆ ಬಂಗಾರದ ನಾಲಿಗೆ ತೊಡಿಸುತ್ತಿದ್ದಂತೇ ಎದುರಲ್ಲಿರುವ ಹುಡುಗ ಮಾತನಾಡತೊಡಗುತ್ತಾನೆ !

    ೨. ಊರೂರು ಸುತ್ತುತ್ತಾ ಒಮ್ಮೆ ಒಂದೂರಲ್ಲಿ ಗುಡ್ಡದಲ್ಲಿ ನೆಲೆಸಿರುವ ದೇವಿಯ ಗುಡಿಗೆ ಶ್ರೀಧರರು ಬರುತ್ತಾರೆ. ಅಲ್ಲಿ ದೇವಿಯನ್ನು ಪೂಜಿಸುವ ಅರ್ಚಕರು ಪೂಜಿಸಲು ಸರಿಯಾದ ಹರಿವಾಣ, ಪಂಚಪಾತ್ರೆ ಉಪಯೋಗಿಸದೇ ಅಂತೂ ಹಾಗೂ ಹೀಗೂ ಪೂಜಿಸುತ್ತಿರುತ್ತಾರೆ. ಅದಕ್ಕೆ ಅವರಲ್ಲಿನ ಬಡತನ ಕಾರಣವಾಗಿರುತ್ತದೆ. ಊರಲ್ಲಿರುವ ಶ್ರೀಮಂತರು ಲೋಭಿಗಳಾಗಿದ್ದು ದೇವಸ್ಥಾನಕ್ಕೆ ಏನನ್ನೂ ಕೊಟ್ಟಿರುವುದಿಲ್ಲ. ಇದನ್ನರಿತ ಶ್ರೀಧರರು ತಾನು ಮರದ ಪಂಚಪಾತ್ರೆಯನ್ನಿಟ್ಟುಕೊಂಡು ಯಾರೋ ಭಕ್ತರು ತಮಗೆ ನೀಡಿದ್ದ ಬೆಳ್ಳಿಯ ಪೂಜಾಪಾತ್ರೆಗಳನ್ನೂ ದೇವಿಗೆ ಒಂದು ಹೊಸದಾದ ಸೀರೆಯನ್ನೂ ಕೊಡುತ್ತಾರೆ. ಆವತ್ತಿನ ಪೂಜೆನಡೆದು ಸೀರೆಯನ್ನುಡಿಸಿ ಅಲಂಕಾರಮಾಡಿ ಮಂಗಲಾರತಿ ಮಾಡುವ ವೇಳೆ ದೇವಿಯ ಕಣ್ಣಿಂದ ಧಾರಾಕಾರವಾಗಿ ನೀರುಹರಿಯುತ್ತದೆ!

    ೩. ವರದಹಳ್ಳಿಯಲ್ಲಿ ಅವರು ತಪಸ್ಸನ್ನಾಚರಿಸುತ್ತಿದ್ದ ಗುಡ್ಡದ ಮೇಲೆ ಒಂದು ಕಟ್ಟಡವಿದೆ. ಒಮ್ಮೆ ಗುರುಗಳು ಯಲ್ಲಿ ಒಳಗಡೆ ಇರುವ ಜಾಗ ಹಲವು ಯತಿಗಳಿಂದ ಭರ್ತಿಯಾಗಿದೆಯೆಂದೂ ತಾವು ಹೊರಗಡೆ ಬಂದು ಒಂದು ಚಾಪೆಯೆಮೇಲೆ ಕುಳಿತು ಧ್ಯಾನಾಸಕ್ತರಾಗುತ್ತೇವೆಂದೂ ಹೇಳಿ ಹಾಗೇ ಮಾಡುತ್ತಾರೆ. ಆದರೆ ಶಿಷ್ಯಂದಿರಿಗೆ ಒಳಭಾಗದಲ್ಲಿ ಯಾರೂ ಕಾಣಿಸುವುದಿಲ್ಲವಾಗಿ ಅದು ಹಾಸ್ಯಾಸ್ಪದವಾಗಿ ತೋರುತ್ತದೆ. ಆದರೂ ಗುರುವಾಜ್ಞೆಯಂತೇ ಅರ್ಘ್ಯ ಪಾದ್ಯಾದಿಗಳಿಂದ ಒಳಗಡೆ ಇರುವ ಅತಿಥಿ ಮುನಿಜನರಿಗೆ ಪೂಜೆ ಅರ್ಪಿಸುತ್ತಾರೆ. ಹತ್ತಿರವೇ ಇರುವ ಶಿಷ್ಯನೊಬ್ಬನಿಗೆ ಅವರು ಇದ್ದಿರುವುದನ್ನು ನೋಡಬೇಕೆಂಬ ಭಾವನೆ ಕುತೂಹಲ ಕೆರಳುತ್ತದೆ. ಒಮ್ಮೆ ಆತ ಅನಿರೀಕ್ಷಿತವಾಗಿ ಕಟ್ಟಡದ ಹೊರಭಾಗದಲ್ಲಿ ನಿಂತಿರುವಾಗ ಭಯಂಕರ ಶರೀರದ ಬಾಗಿಲ ಭಟರಿಬ್ಬರನ್ನು ಪ್ರತ್ಯಕ್ಷ ಕಾಣುತ್ತಾನೆ. ಆದಾದ ಮರುಕ್ಷಣದಲ್ಲೇ ಅವರು ಮಾಯವಾಗುತ್ತಾರೆ. ಶ್ರೀಧರರು ಆಮೇಲೆ ತಿಳಿಹೇಳುತ್ತಾರೆ--" ಮಗಾ ಬಂದ ಮುನಿಜನರ ಸೇವೆಗಾಗಿ ಅವರು ಹಾಗೆ ನಿಂತಿದ್ದಾರಪ್ಪಾ " ಎಂದು.

    ೪. ಮುರುಡೇಶ್ವರ ದೇವಸ್ಥಾನ ಆ ಕಾಲಕ್ಕೆ ಶಿಥಿಲವಾಗಿತ್ತು. ಅಲ್ಲಿಗೆ ಬಂದ ಶ್ರೀಧರರಿಗೆ ಅದನ್ನು ಹೇಗದರೂ ಮಾಡಿ ಜನರ ಸಹಾಯದಿಂದ ಹೊಸದಾಗಿ ನಿರ್ಮಿಸಿಕೊಡುವಂತೇ ಭಕ್ತರು ವಿನಂತಿಸಿದಾಗ ಕ್ಷಣಹೊತ್ತು ನಿಂತ ಗುರುಗಳು ೩೦ವರ್ಷಗಳ ಬಳಿಕ ಈ ದೇವಸ್ಥಾನ ಅಭೂತಪೂರ್ವವಾಗಿ ಕಟ್ಟಲ್ಪಡುತ್ತದೆಂದೂ ಅದರ ಬಗ್ಗೆ ಯಾರೂ ಯೋಚಿಸಬೇಕಾಗಿಲ್ಲವೆಂದೂ ಹೇಳುತ್ತಾರೆ. ಆಮೇಲೆ ಅವರು ಹೇಳಿದಹಾಗೇ ಈಗ ಅದು ಹೇಗಿದೆ ಅದಕ್ಕೆ ಯಾರು ಕಾರಣ ಎಂಬುದು ಎಲ್ಲರಿಗೂ ತಿಳಿದಿದೆಯಲ್ಲವೇ?

    ಈ ಮೇಲಿನ ಎಲ್ಲಾ ಘಟನೆಗಳನ್ನು ಆಶ್ರಮದ ದಾಖಲೆಗಳಲ್ಲಿ ಕಾಣಬಹುದಾಗಿದೆ. ಇನ್ನೂ ನೂರಾರು ದಾಖಲೆಗಳು ಅವರ ಚರಿತ್ರೆಯಲ್ಲಿ ನೋಡಸಿಗುತ್ತವೆ. ಶ್ರೀಧರರು ಹೇಳಿದ್ದೂ ಮೂರ್ತಿ ಪೂಜೆಯನ್ನೇ, ಆಮೇಲಾಮೇಲೆ ಎತ್ತರ ಎತ್ತರಕ್ಕೆ ನಿಧಾನವಾಗಿ ಅಧ್ಯಾತ್ಮಿಕ ಬೆಟ್ಟವನ್ನು ಹತ್ತಲು ಸಾಧ್ಯ ಎಂಬುದು ಅವರ ಅಭಿಮತ. ಏನೂ ಗೊತ್ತಿರದ ಸಾದಾ ಮನುಷ್ಯನೊಬ್ಬ ವೇದದ ಅರ್ಥವನ್ನೂ ಅದರ ರಸಪಾಕವನ್ನೂ ಅನುಭವಿಸಲು ನೇರವಾಗಿ ಸಾಧ್ಯವಾಗುವುದಿಲ್ಲ ಎಂಬುದು ನನ್ನ ಅಭಿಮತ. ಬರೇ ವೇದ ಮಂತ್ರಗಳು ಏನು ಹೇಳುತ್ತವೆ ಎಂಬುದನ್ನು ತಿಳಿದರೆ ಅದು ಗಣಕಯಂತ್ರದಲ್ಲಿ ಕಾರು ಚಾಲನೆ ಮಾಡಲು ಕಲಿತಂತೇ ಆಗುತ್ತದೆ. ಆದರೆ ನಿಜವಾಗಿಯೂ ಚಾಲಕನಾಗುವವ ನಿಜವಾದ ರಸ್ತೆಯಲ್ಲೇ ಅದನ್ನು ಚಲಾಯಿಸಿ ಕಲಿಯಬೇಕಾಗುತ್ತದೆ. ವೇದ ಈ ಕಲಿಕೆಯ ದಾರಿ, ಮೂರ್ತಿಪೂಜೆ ಈ ಕಲಿಕೆಯ ಸಲಕರಣೆ.

    ನಾಸ್ತಿಕನೊಬ್ಬ ಅಗ್ನಿಗೆ ಅಗ್ನಿ ಎಂದು ಯಾರೋ ಹೆಸರಿಟ್ಟರು ಅದಕ್ಕೇ ಅದನ್ನು ನಾವು ಅಗ್ನಿ ಎನ್ನುತ್ತೇವೆ, ಅಗ್ನಿಗೆ ಬಾಗಿಲು ಎಂದರೂ ಆಗುತ್ತದೆ ಎಂದು ವಾದಿಸುತ್ತಿದ್ದ, ಹಾಗೇನೇ ಅಪ್ಪ-ಅಮ್ಮ ಎಲ್ಲಾ ನಾವು ಇಟ್ಟುಕೊಂಡಿರುವ ಹೆಸರು ಅಂತಾನೆ. ಹಾಗಾದರೆ ಅಪ್ಪನನ್ನು ಮಗನೇ ಎಂದೂ ಅಮ್ಮನನ್ನು ತಂಗೀ ಎಂದೂ ಕರೆಯಲು ಸಾಧ್ಯವೇ? ಆಕಾಶವನ್ನು ಪಾತಾಳ ಎನ್ನಬಹುದೇ ? ಆರ್ಷೇಯ ಋಷಿಗಳು ಆಕಾರರಹಿತ ದೇವರೆಂಬ ನೀರನ್ನು ಮೂರ್ತಿ ಎನ್ನುವ ಬಿಂದಿಗೆಗಳಲ್ಲಿ ಹಿಡಿದಿಟ್ಟಿದ್ದಾರೆ. ಒಂದು ವ್ಯವಸ್ಥೆಯಲ್ಲಿ ಆ ಮಂತ್ರಿ ಈ ಅಧಿಕಾರಿ ಆ ಗುಮಾಸ್ತ ಇವರೆಲ್ಲಾ ಇರುವಂತೇ ಆಯಾ ಕೆಲಸಗಳಿಗೆ ಬೇಕಾಗಿ ನಮ್ಮ ಅನುಕೂಲಕ್ಕಾಗಿ ಇಂತಿಂತಹ ರೂಪ ಎಂದು ಹೆಸರಿಸಿದ್ದಾರೆ. ರೂಪವೇ ಇಲ್ಲವಾದರೆ ಹಲವುತೆರನಾದ ದೇವರ ಸ್ತೋತ್ರಗಳೂ ಊರ್ಜಿತವಲ್ಲ. ಜಗನ್ನಿಯಾಮಕನನ್ನು ಹಲವು ವಿಧದಲ್ಲಿ ಹಲವು ರೂಪಗಳಲ್ಲಿ ಆರಾಧಿಸಿದರೂ ಆಮೇಲೆ ಅದು ತನಗೇ ಸಲ್ಲುತ್ತದೆ ಎಂಬುದನ್ನೂ ಗೀತೆಯಲ್ಲಿ ಭಗವಂತ ಹೇಳುತ್ತಾನೆ. ಗೀತೆಯನ್ನು ಬೋಧಿಸಿದ ಭಗವಂತನೇ ಕೃಷ್ಣನರೂಪದಲ್ಲಿದ್ದನಲ್ಲ ! ತಾವು ಗೀತೆಯನ್ನು ಒಪ್ಪುವಿರಾದರೆ ಆಗ ಕೃಷ್ಣನನ್ನೂ ಒಪ್ಪಬೇಕಲ್ಲಾ ? ಅಂತಹ ಗೀತಾಚಾರ್ಯ ಹೇಳಿದ್ದೂ ಉಪಾಸನೆಯ ಮಾರ್ಗವನ್ನೇ ಅಲ್ಲವೇ ? ರೂಪವೇ ಇಲ್ಲದ ಪರಮಾತ್ಮ ತನ್ನ ಮೂಲರೂಪದಿಂದ ಅವತಾರಿಯಾಗಿ ಬಂದುದು ಸುಳ್ಳು ಎನ್ನುತ್ತೀರೇನು ? ಅವತಾರ ನಿಜವಾದರೆ ಎಲ್ಲಾ ರೂಪಗಳೂ ನಿಜವೇ. ರೂಪದಲ್ಲೂ ವಿರೂಪದಲ್ಲೂ ಆಕಾರದಲ್ಲೂ ನಿರಾಕಾರದಲ್ಲೂ ವಿಜೃಂಭಿಸುವ ವಿರಾಟ್ ಶಕ್ತಿಯೇ ಪರಮಾತ್ಮ.

    ತರ್ಕಿಸುತ್ತಿರುವುದಕ್ಕೆ ಕ್ಷಮೆಯಿರಲಿ, ತಮಗೆ ಮತ್ತೊಮ್ಮೆ ನಮಸ್ಕಾರಗಳು.

    ReplyDelete
  3. With due regards to Swami Sridharji,
    ಶ್ರೀಧರರು ಪವಾಡಗಳಿಂದಾಗಿ ದೊಡ್ಡವರಾಗಬೇಕಾಗಿಲ್ಲ.
    ಜಗತ್ತಿನಲ್ಲಿ ಸೃಷ್ಟಿಕ್ರಮವೆಂಬುದಿದೆ. Nature's Law ಎನ್ನಿ, Physical Laws ಎನ್ನಿ, ಭೌತಿಕ ನಿಯಮಗಳೆನ್ನಿ. ಅದಕ್ಕೆ ವಿರುದ್ಧವಾದ ಘಟನೆಗಳು ಕಂಡುಬಂದಲ್ಲಿ ಪ್ರಶ್ರಾರ್ಥಕ ಚಿಹ್ನೆ ಅನಿವಾರ್ಯ, ಅದಕ್ಕೆ ಸಂಬಂಧಪಟ್ಟ Documentation ಕೂಡ ಪರೀಕ್ಷಾರ್ಹವೇ ಆಗಿರುತ್ತವೆ.
    ಇನ್ನು ನೀವೇ ಹೇಳಿದಂತೆ ಅದು ಅವರ 'ಅಭಿಮತ'ವಾಗಿತ್ತು ಎಂಬುದು ಸರಿ. ಯಾರದೇ 'ಅಭಿಮತ' ನಮ್ಮದು ವಿರೋಧವಿಲ್ಲ. ಆದರೆ, ಸತ್ಯದ ಅನ್ವೇಷಣೆಯ ವಿಚಾರ ಬಂದಾಗ 'ಅಭಿಮತ'ಗಳನ್ನು ದಾಟಿಯೇ ಹೋಗಬೇಕಾಗುತ್ತದೆ. ನನ್ನ 'ಅಭಿಮತ'ವನ್ನೂ ಕೂಡ! OBJECTIVE ಆಗಿರುವ ವಿಷಯಗಳನ್ನು ನಾನು ವ್ಯಕ್ತಪಡಿಸಿದಾಗ ಅವನ್ನು ನನ್ನ 'ಅಭಿಮತ'ವೆಂದು ತೆಗೆದುಹಾಕಬೇಕೇ ಬೇಡವೇ ಎಂದು ನೀವೇ ಯೋಚಿಸಿ.
    ಅಂತಿಮವಾಗಿ ಸತ್ಯದ ನಿರ್ಣಯ ಮಾಡುವಾಗ 'ವೇದ'ಗಳು ಪರಮ ಪ್ರಮಾಣವಾಗಲು ಬೇಕಾದ ಎಲ್ಲ ಅರ್ಹತೆಗಳನ್ನು ಪಡೆದಿದೆ. ಅದಕ್ಕೆ ವಿರುದ್ಧವಾದ ಮಾತುಗಳು ಯಾರೇ ಎಲ್ಲೇ ಹೇಳಿರಲಿ 'ಅಭಿಮತ'ದ ಹಂತದಲ್ಲೇ ಉಳಿಯುತ್ತದೆಯೇ ಹೊರತು ಸತ್ಯವಾಗಲಾರದು.
    'ಅಭಿಮತ' (ವ್ಯಕ್ತಿಯ ಇತಿ-ಮಿತಿಗೆ ಸಿಲುಕಿರುತ್ತದೆ) ಬೇಕೋ, 'ಸತ್ಯ' (ಇದು ವಸ್ತುನಿಷ್ಠ, ವ್ಯಕ್ತಿ ನಿಷ್ಠವಲ್ಲ, ಆದ್ದರಿಂದ ವ್ಯಕ್ತಿಯ ಇತಿ-ಮಿತಿಗಳ ಹಂಗಿಲ್ಲದೆ, ಸಾರ್ವಜನಿಕ, ಸಾರ್ವಕಾಲಿಕ, ಸಾರ್ವದೇಶೀಕ, ಸಾರ್ವಭೌಮ ಆಗಿರುತ್ತದೆ) ಬೇಕೋ You are free to choose!!

    ವಿಶೇಷ ಸೂಚನೆ: ಸತ್ಯವು/ವೇದವು ಹೇಗೆ ಸಾರ್ವಜನಿಕ, ಸಾರ್ವಕಾಲಿಕ, ಸಾರ್ವದೇಶೀಕ, ಸಾರ್ವಭೌಮ ಎಂಬುದರ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸೋಣ.

    ReplyDelete
  4. Dear Sharmaji Swamy Vivekananda already given explanation about your doubt. Please read that

    ReplyDelete
  5. ಅನಾನಿಮಸ್ ಹೆಸರಲ್ಲಿ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಅಲ್ಲದೆ ನೀವು ಯಾವ ಕೊಂಡಿಯನ್ನೂ ಕೊಟ್ಟಿಲ್ಲ. ಹೆಸರು ಈ ಮೇಲ್ ವಿಳಾಸವಿಲ್ಲದ ಪ್ರತಿಕ್ರಿಯೆಗಳನ್ನು ಇನ್ನು ಮುಂದೆ ಪರಿಗಣಿಸಲಾಗುವುದಿಲ್ಲವೆಂಬುದನ್ನು ದಯಮಾಡಿ ಗಮನಿಸುವುದು.

    ReplyDelete