Pages

Saturday, September 10, 2016

ಯಾರು ಯೋಗಿ? ಸುಖೀ ಯಾರು?

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅರ್ಜುನ ಮೂಲಕ ನಮಗೆ ಹೇಳಿರುವ ಮಾತು ಕೇಳಿ...
ಅಧ್ಯಾಯ : 5 , ಶ್ಲೋಕ : 23
ಶಕ್ನೋತೀಹೈವ ಯಃ ಸೋಢುಂ ಪ್ರಾಕ್ಶರೀರವಿಮೋಕ್ಷಣಾತ್ |
ಕಾಮಕ್ರೋದೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ||
ಯಾವ ಸಾಧಕನು ಈ ಮನುಷ್ಯ ಶರೀರದಲ್ಲಿ ಶರೀರ ನಾಶವಾಗುವುದಕ್ಕಿಂತ ಮೊದಲೇ ಕಾಮಕ್ರೋಧಗಳಿಂದ ಉಂಟಾಗುವ ಉದ್ವೇಗವನ್ನು ಸಹಿಸಿಕೊಳ್ಳಲು ಸಮರ್ಥನೋ ಆ ಮನುಷ್ಯನೇ ಯೋಗಿ , ಅವನೇ ಸುಖೀ.
ಎಷ್ಟು ಸರಳವಾಗಿದೆ ಅಲ್ಲವೇ?
ಆದರೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಲು ಕಷ್ಟ. ಸ್ವಲ್ಪ ವಿಶ್ಲೇಷಿಸೋಣ.
ಮೊದಲಿಗೆ ...

ಕಾಮದಿಂದಾಗುವ ಉದ್ವೇಗ :
ಕಾಮ ಎಂದೊಡನೆ ಸ್ತ್ರೀ ಪುರುಷರ ನಡುವೆ ಇರುವ ಭೋಗ ಎಂದು ಭಾವಿಸಬೇಕಾಗಿಲ್ಲ.
ಕಾಮ ಎಂದರೆ ಬಯಕೆ, ಇಚ್ಛೆ, ವಿಷಯಾಭಿಲಾಷೆ.
ಸಣ್ಣಪುಟ್ಟ ಬಯಕೆಗಳೇ ಸಾಕು ನಮ್ಮನ್ನು ವಿಚಲಿತರನ್ನಾಗಿ ಮಾಡಲು,
ಅದು ಅಧಿಕಾರ ಇರಬಹುದು, ಗೌರವದ ಪ್ರಶ್ನೆ ಇರಬಹುದು, ಎಷ್ಟು ಬೇಗ ನಮ್ಮನ್ನಷ್ಟೇ ಅಲ್ಲ ಸಾದು ಸಂತರನ್ನೂ ಉದ್ವೇಗಗೊಳಿಸದೇ ಇರದು. ಒಬ್ಬ ಸಾದುವಿಗೆ ಸಾಮಾನ್ಯನೊಬ್ಬ ಗೌರವ ಕೊಡಲಿಲ್ಲ ಎಂಬ ಕಾರಣಕ್ಕೆ ಅವರು ಎಷ್ಟು ತಾಳ್ಮೆ ಕಳೆದುಕೊಂಡರೆಂದರೆ........
ನಾವು ಲೌಕಿಕರೆ ಪರವಾಗಿಲ್ಲ ಎನಿಸದೇ ಇರಲಿಲ್ಲ.

ಯಾವುದೋ ಸಮಾರಂಭದಲ್ಲಿ ಯೋಜಕರ ಕಾರ್ಯ ಒತ್ತಡದಿಂದ ಗಣ್ಯರೊಬ್ಬರನ್ನು ಗಮನಿಸದಿದ್ದಾಗ ಗಣ್ಯರ ಮುಖ ನೋಡ ಬೇಕು.....

ಇನ್ನು ಕ್ರೋಧದಿಂದಾಗುವ ಉದ್ವೇಗ : ಯಾರೋ ಒಬ್ಬ ಅವನ ಅಜ್ಞಾನದಿಂದ ತಪ್ಪೆಸಗಿದ ಪರಿಣಾಮ ಮತ್ತೊಬ್ಬನಿಗೆ ಅವಮಾನವಾಗುವ ಪ್ರಸಂಗ ಬರುತ್ತದೆ. ತಕ್ಷಣ ಎರಡನೆಯವನು ಅವನ ದೃಷ್ಟಿಯಿಂದಲೇ ಕ್ರೋಧವನ್ನು ಪ್ರಕಟಿಸುತ್ತಾನೆ.ಮೊದಲನೆಯವನಿಗೆ ಅವನ ತಪ್ಪಿನ ಅರಿವಿರುವುದಿಲ್ಲ ಅವನು ಶಾಂತವಾಗೇ ಇರುತ್ತಾನೆ. ಎರಡನೆಯವನು ಕ್ರೋಧದಿಂದ ಕುದ್ದು ಹೋಗುತ್ತಾನೆ. ಇದನ್ನೇ ಉದ್ವೇಗ ಎನ್ನುವುದು.

ಈ ಸ್ಥಿತಿಗಳಿಂದ ಹೊರಬಂದಾಗ ಅವನು ಯೋಗಿಯೂ ಹೌದು. ಸುಖಿಯೂ ಹೌದು.

No comments:

Post a Comment