Pages

Sunday, April 1, 2012

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರವರ ವಿಚಾರಗಳು

        ರಾಗ-ದ್ವೇಷಗಳು ಇರಬೇಕು! ಹೌದು ಇರಬೇಕು! ಆಶ್ಚರ್ಯವೆನಿಸಿತೇ? ಸತ್ಕಾರ್ಯದಲ್ಲಿ ರಾಗ, ದುಷ್ಕಾರ್ಯದಲ್ಲಿ ದ್ವೇಷ ಇರಬೇಕು ಎನ್ನುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ವಿಚಾರ ಕೇಳಿ:


     ಭೂತ, ಪ್ರೇತ, ಪಿಶಾಚಿಗಳು ಕಾಡುವುದೇಕೆ? ಈ ಪದಗಳ ನಿಜವಾದ ಅರ್ಥವೇನು? ಕೇಳೋಣ ಬನ್ನಿ, ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ದ್ವನಿಯಲ್ಲಿ:
     ಒಂದು ಉಪನ್ಯಾಸದ ಸಂದರ್ಭದಲ್ಲಿ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ಹಾಸ್ಯವಾಗಿ ಹೇಳಿದ್ದ ಉದಾಹರಣೆಯಿದು: "ಅಕ್ಕ ಪಕ್ಕ ವಾಸಿಸುವ ಇಬ್ಬರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಎಂದು ಇಟ್ಟುಕೊಳ್ಳೋಣ. ಒಬ್ಬ ದೇವರನ್ನು ಪ್ರಾರ್ಥಿಸುತ್ತಾನೆ - ಓ, ದೇವರೇ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ. ಅವನ ಎರಡು ಕಣ್ಣುಗಳೂ ಹೋಗಲಿ. ಇನ್ನೊಬ್ಬನೂ ಹಾಗೆಯೇ ಪ್ರಾರ್ಥಿಸುತ್ತಾನೆ. ದೇವರು ಯಾರ ಮಾತನ್ನು ಕೇಳಬೇಕು? ಅವನ ಮಾತು ಕೇಳಿದರೆ ಇವನಿಗೆ ಕೋಪ, ಇವನ ಮಾತು ಕೇಳಿದರೆ ಅವನಿಗೆ ಕೋಪ." ದೇವರಿಗೆ ಯಾರ ಮೇಲೂ ಕೋಪವೂ ಇಲ್ಲ, ವಿಶೇಷ ಪ್ರೀತಿಯೂ ಇಲ್ಲ. ದೇವರು ಆಸ್ತಿಕರಿಗೆ ವಿಶೇಷ ಅನುಗ್ರಹ ತೋರುತ್ತಾನೆ ಎಂದೇನೂ ಇಲ್ಲ, ನಾಸ್ತಿಕರಿಗೆ ಕೇಡು ಮಾಡುತ್ತಾನೆ ಅನ್ನುವುದೂ ಸುಳ್ಳು. ದೇವರು ಎಲ್ಲಾ ಜೀವಿಗಳನ್ನೂ ನೋಡುವುದು ಒಂದೇ ರೀತಿಯಲ್ಲಿ. ದೇವರನ್ನು ನಾವು ಪೂಜಿಸುತ್ತೇವೆ, ಸ್ತುತಿಸುತ್ತೇವೆ, ಪ್ರಾರ್ಥಿಸುತ್ತೇವೆ. ಏಕೆ ಹಾಗೆ ಮಾಡುತ್ತೇವೆ? ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಉದ್ದೇಶ ನಮ್ಮನ್ನು ಚೆನ್ನಾಗಿಟ್ಟಿರು, ನಮಗೆ ಒಳ್ಳೆಯದು ಮಾಡು, ನಮಗೆ ಬಂದಿರುವ ಕಷ್ಟಗಳಿಂದ ಪಾರು ಮಾಡು ಎಂದು ಕೇಳುವುದೇ ಆಗಿದೆ. ನಮಗೆ ಉಪಯೋಗಿಸಿಕೊಳ್ಳಲು ಇಡೀ ಸೃಷ್ಟಿಯನ್ನು ಕೊಟ್ಟ ಭಗವಂತನನ್ನು ಆ ಉಪಕಾರಕ್ಕಾಗಿ ಕೃತಜ್ಞರಾಗಿ ಸ್ಮರಿಸಿಕೊಳ್ಳುವುದೇ ನಿಜವಾದ ಪೂಜೆ. ಅವನ ಸೃಷ್ಟಿಗೆ ಹಾನಿಯಾಗದಂತೆ ಉಪಯೋಗಿಸಿಕೊಳ್ಳುವುದು ನಿಜವಾದ ಅನುಷ್ಟಾನ. ಏನೂ ಅಗತ್ಯವಿಲ್ಲದ ಕರುಣಾಮಯಿ ದೇವರಿಗೆ ನಾವು ಏನನ್ನು ತಾನೇ ನೈವೇದ್ಯವಾಗಿ ಅರ್ಪಿಸಬಲ್ಲೆವು? ಪಂ. ಸುಧಾಕರ ಚತುರ್ವೇದಿಯವರ ಶಿಷ್ಯ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಕಳೆದ ವಾರ ಬೆಂಗಳೂರಿನ ಅವರ ನಿವಾಸಕ್ಕೆ ಹೋಗಿದ್ದಾಗ ಅವರ ವಿಚಾರದ ತುಣುಕನ್ನು ವಿಡಿಯೋ ಚಿತ್ರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಈಗ ಚರ್ಚಿತವಾಗುತ್ತಿರುವ ವಿಷಯಕ್ಕೆ ಈ ವಿಚಾರವೂ ಪೂರಕವಾಗಿದೆಯೆಂದು ಭಾವಿಸುವೆ. 
-ಕ.ವೆಂ.ನಾಗರಾಜ್.

No comments:

Post a Comment