Pages

Monday, March 30, 2015

ಪ್ರಖರ ಸತ್ಯವಾದಿ ಪಂ. ಸುಧಾಕರ ಚತುರ್ವೇದಿಯವರಿಗೆ 119 ವರ್ಷಗಳು - ಮಹಾನ್ ವ್ಯಕ್ತಿಯ ಮಾರ್ಗದರ್ಶನ ಸದಾ ನಮಗಿರಲಿ!


     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (28.3.2015) 118ವಸಂತಗಳನ್ನು ಕಂಡು 119ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ  ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ ೧೮೯೭ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು ೬-೭ ವರ್ಷದವರಾಗಿದ್ದಾಗ -ಅಂದರೆ ಸುಮಾರು ೧೧೦ ವರ್ಷಗಳ ಹಿಂದೆ-  ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು.  ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವ9ತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ, ಆತ್ಮಗೌರವದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು ೧೫ ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ  ಇತಿಹಾಸದ ನೈಜ ಜೀವಂತ ಪ್ರತಿನಿಧಿ.
     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಎರಡು ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. 
     ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು. ಹಾಸನದ ವೇದಭಾರತಿ ಅವರ ವಿಚಾರಗಳನ್ನು ಅನುಷ್ಠಾನಗೊಳಿಸುವತ್ತ ಪುಟ್ಟದಾದರೂ ದಿಟ್ಟ ಹೆಜ್ಜೆಯನ್ನಿಟ್ಟಿದೆ.
-ಕ.ವೆಂ.ನಾಗರಾಜ್.
**************
ಪಂಡಿತರೊಡನೆ: 
[ಮೂರು ವರ್ಷಗಳ ಹಿಂದಿನ ಫೋಟೋ]



Sunday, March 29, 2015

ಜೀವನವೇದ-2


ಸಂಮೃದ್ಧ ಮನೆ :                                                  
ಒಂದು ಸಂಮೃದ್ಧವಾದ ಮನೆ ಅಂದರೆ ಹೇಗಿರಬೇಕು? ಮನೆಯ ಯಜಮಾನ ಹೇಗಿರಬೇಕು? ಎಂಬ ವಿಚಾರವನ್ನು  ಅಥರ್ವಣ ವೇದದಲ್ಲಿನ ಒಂದು ಮಂತ್ರದಲ್ಲಿ ಹೀಗೆ ಹೇಳಿದೆ.

ಇಮೇ ಗೃಹಾ ಮಯೋಭುವ ಊರ್ಜಸ್ವಂತ: ಪಯಸ್ವಂತ:|
ಪೂರ್ಣಾ ವಾಮೇನ ತಿಷ್ಠಂತಸ್ತೇ ನೋ ಜಾನಂತ್ವಾಯತ: ||

[ಅಥರ್ವಣವೇದದ ೭ನೇ ಕಾಂಡ ೬೦ನೇ ಸೂಕ್ತ ೨ನೇ ಮಂತ್ರ]

 ಈ ಮಂತ್ರದ ಅರ್ಥವೇನೆಂದರೆ ನಮ್ಮ ಮನೆಗಳು ಆಹಾರಧಾನ್ಯಗಳಿಂದಲೂ ಹಾಲು ಮೊಸರಿನಿಂದಲೂ ತುಂಬಿದ್ದು, ಎಲ್ಲರಿಗೂ ಈ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಸಿಗುವಂತಾಗಲೀ.
ಈ ಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ಗೌರವಯುತ ಗೃಹವೆಂದರೆ ಆ ಮನೆಯಲ್ಲಿ ಆಹಾರಧಾನ್ಯದ ಸಂಗ್ರಹವಿರಬೇಕು. ಆಹಾರಧಾನ್ಯದ ಸಂಗ್ರಹವಿರಬೇಕೆಂದರೆ ಆ ಮನೆಯೊಡೆಯ ಆಹಾರಧಾನ್ಯವನ್ನು ಸಂಮೃದ್ಧವಾಗಿ ಬೆಳೆದಿರಬೇಕು. ಹಾಲು ಮೊಸರು ಸದಾಕಾಲವಿರುವಂತೆ ಹಸುಕರುಗಳನ್ನು ಸಾಕಿಕೊಂಡಿರಬೇಕು. ಮನೆಗೆ ಅತಿಥಿಗಳು ಸಂತೋಷದಿಂದ ಬಂದುಹೋಗುವಂತಿರಬೇಕು. ಮನೆಯಲ್ಲಿ ಸುಖಶಾಂತಿ ನೆಮ್ಮದಿ ನೆಲಸಿರಬೇಕು.
ಇಂದಿನ ಕಾಲಕ್ಕೆ ನಾವು ಈ ವೇದಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ಸಂಮೃದ್ಧವಾದ ಮನೆ ಅಂದರೆ ಮನೆಯ ಯಜಮಾನನು ಸತ್ಯಮಾರ್ಗದಲ್ಲಿ ದುಡಿದು ಸಂಪತ್ತನ್ನು ಗಳಿಸಿರಬೇಕು. ಆ ಸಂಪತ್ತಿನಿಂದ ಮನೆಗೆ ಬಂದ ಅತಿಥಿಗಳ ಸತ್ಕಾರವು ಚೆನ್ನಾಗಿ ನಡೆಯುತ್ತಿರಬೇಕು. ಅದು ಸುಸಂಕೃತ ಮನೆಯಾಗಿದ್ದು  ಮನೆಯಲ್ಲಿ ಯಾವಾಗಲೂ ಸಂತಸದ ವಾತಾವರಣ ನೆಲಸಿರಬೇಕು.‘

ಮನೆಯ ಯಜಮಾನ ಹೇಗಿರಬೇಕು?

ಊರ್ಜಂ ಬಿಭ್ರದ್ವಸುವನಿಃ ಸುಮೇಧಾ ಅಘೋರೇಣ ಚಕ್ಷುಷಾ ಮಿತ್ರಿಯೇಣ|
ಗೃಹಾನೈಮಿ ಸುಮನಾ ವಂದಮಾನೋ  ರಮಧ್ವಂ ಮಾ ಬಿಭೀತ ಮತ್||

[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರ]

 ಈ ಮಂತ್ರದ ಅರ್ಥ ಹೀಗಿದೆ. ಮನೆಯ ಯಜಮಾನನು ಶಕ್ತಿವಂತನಾಗಿರಬೇಕು, ಧನಾರ್ಜನೆ ಮಾಡುತ್ತಿರಬೇಕು, ಮೇಧಾವಂತನಾಗಿರಬೇಕು, ಮನೆಯ ಸದಸ್ಯರೊಡನೆ ಕ್ರೋಧರಹಿತನೂ, ಸ್ನೇಹಪೂರ್ಣ ಕಣ್ಣುಗಳಿಂದ ನೋಡುವವನೂ, ಸುಪ್ರಸನ್ನ ಮನಸ್ಸುಳ್ಳವನೂ, ಎಲ್ಲರಿಂದ ಪ್ರಶಂಸಿಸಲ್ಪಡುವವನೂ ಆಗಿದ್ದು ಎಲ್ಲರೊಡನೆ ಆನಂದದಿಂದ ಪ್ರಸನ್ನನಾಗಿರಬೇಕು.

ಈ ಮಂತ್ರದ ಒಂದೊಂದೂ ಶಬ್ಧಗಳೂ ಅತ್ಯಂತ ಮಹತ್ವ ಉಳ್ಳವುಗಳೇ ಆಗಿವೆ. ಈ ಮಂತ್ರದ ಒಂದೊಂದೇ ಶಬ್ಧದ ಬಗ್ಗೆ ವಿಚಾರ ಮಾಡೋಣ. ಮನೆಯ ಯಜಮಾನನಿಗಿರಬೇಕಾದ ಪ್ರಥಮ ಅರ್ಹತೆ ಎಂದರೆ.. . . . . .

ಊರ್ಜಂ ಬಿಭ್ರತ್ :

ಊರ್ಜಮ್ ಎಂದರೆ ಪ್ರಾಣಬಲ ಅಥವಾ ಶಕ್ತಿ, ಬಿಭ್ರತ್ ಅಂದರೆ ಧಾರಣೆ ಮಾಡು. ಅಂದರೆ ಮನೆಯ ಯಜಮಾನನು ಶಕ್ತಿಯನ್ನು ಹೊಂದಿದವನಾಗಿರಬೇಕು. ಮನೆಯ ಯಜಮಾನನು ಶಕ್ತಿಶಾಲಿಯಾಗಿದ್ದರೆ ಅವನಲ್ಲಿ ಯಾರ ಬಗ್ಗೆಯೂ ದ್ವೇಷ,ಅಸೂಯೆ, ಮಾತ್ಸರ್ಯ ಭಾವನೆಗಳಿರದೆ ಎಲ್ಲರೊಡನೆ  ಪವಿತ್ರವಾದ ಪ್ರೇಮಭಾವ ಇದ್ದು ಕುಟುಂಬವು ಸಂತಸದಿಂದ ಇರುತ್ತದೆ. ಯಜಮಾನನೇನಾದರೂ ಶಕ್ತಿಹೀನನಾಗಿದ್ದರೆ ಸಣ್ಣ ಸಣ್ಣ ವಿಷಯಗಳಿಗೂ ಎಲ್ಲರ ಮೇಲೆ ಕೋಪ ಮಾಡಿಕೊಂಡು ರೇಗಾಡುತ್ತಾ  ಕುಟುಂಬದ ನೆಮ್ಮದಿಯು ಹಾಳಾಗುತ್ತದೆ. ಆದ್ದರಿಂದ ಗೃಹಸ್ಥನು ತನ್ನ ಶರೀರ ಮತ್ತು  ಇಂದ್ರಿಯಗಳನ್ನು ಶಕ್ತಿಯುತವಾಗಿ ಇಟ್ಟುಕೊಳ್ಳಬೇಕೆಂಬುದು ವೇದದ ಆಶಯ. ಯಜಮಾನನಿಗಿರಬೇಕಾದ ಎರಡನೆಯ ಅರ್ಹತೆ ಎಂದರೆ. . . . .  .
ವಸುವನೀ
ವಸುವನೀ ಎಂದರೆ ಉತ್ತಮ ಮಾರ್ಗದಲ್ಲಿ ಧರ್ಮದಿಂದ ಧನವನ್ನು ಸಂಪಾದಿಸುವವರು ಎಂದು ಅರ್ಥ. ವಾಮಮಾರ್ಗದಲ್ಲಿ ಎಂದೂ ಹಣವನ್ನು  ಸಂಪಾದಿಸ ಕೂಡದು. ಇದು ವೇದದ ಆದೇಶ.
ಯಜುರ್ವೇದದ ೪೦ನೇ ಅಧ್ಯಾಯದ ೧೬ ನೇ ಮಂತ್ರದಲ್ಲಿ ಸಂಪತ್ತನ್ನು ಯಾವ ಮಾರ್ಗದಲ್ಲಿ ಗಳಿಸಬೇಕೆಂಬುದನ್ನು ತಿಳಿಸುತ್ತದೆ.ಆಮಂತ್ರದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೂಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ ||

ಅರ್ಥ
ದೇವ = ದಿವ್ಯ ಸ್ವರೂಪನೇ
ಅಗ್ನೇ = ಪ್ರಕಾಶಮಯ ಭಗವಾನ್
ತೇ = ನಿನಗೆ
ಭೂಯಿಷ್ಠಾಮ್ = ಅತ್ಯಧಿಕವಾಗಿ
ನಮ ಉಕ್ತಿಂ ವಿಧೇಮ = ಸತ್ಕಾರಪೂರ್ವಕವಾಗಿ ನಮಸ್ಕರಿಸುತ್ತೇವೆ.
ವಿದ್ವಾನ್ = ಸರ್ವಜ್ಞನಾದ ನೀನು
ಅಸ್ಮತ್ = ನಮ್ಮಿಂದ
ಜುಹುರಾಣಮ್ = ಕುಟಿಲತೆಯನ್ನು
ಏನ: = ಪಾಪವನ್ನು
ಯುಯೋಧಿ = ಬೇರೆ ಮಾಡು
ಅಸ್ಮಾನ್ = ನಮ್ಮನ್ನು
ರಾಯೇ = ಸುಖಕ್ಕಾಗಿ
ಸುಪಥಾ = ಒಳ್ಳೆಯ ಮಾರ್ಗದಲ್ಲಿ ನಡೆಸು
ವಿಶ್ವಾನಿ ವಯುನಾನಿ = ನಮಗೆ ಸಕಲ ಪ್ರಶಸ್ತ ಜ್ಞಾನಗಳನ್ನು
ನಯ: = ಲಭಿಸುವಂತೆ ಮಾಡು

ಈ ಮಂತ್ರದ ಸಾರವೇನು?
ಜ್ಞಾನದಾತನಾದ ಪ್ರಭುವೇ, ನಮ್ಮಿಂದ ಕುಟಿಲತೆಯನ್ನೂ, ಪಾಪಾಚರಣೆಯನ್ನೂ ದೂರಮಾಡು.ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತಾ, ಸನ್ಮಾರ್ಗದಲ್ಲಿ ಸಂಪತ್ತನ್ನು ಗಳಿಸುವಂತೆಮಾಡು. ನಮ್ಮ ಕಲ್ಯಾಣಕ್ಕಾಗಿ ನಿನಗೆ ಅತ್ಯಧಿಕ ನಮಸ್ಕಾರಗಳನ್ನು ಮಾಡುತ್ತೇನೆ.
ಈ ಮಂತ್ರದಲ್ಲಿ ಒಂದು ಶಬ್ಧಪ್ರಯೋಗವಾಗಿದೆ. ಅದು ರಾಯೇ  ಅಂದರೆ ನಮ್ಮ ಸುಖಕ್ಕಾಗಿ ಸಂಪತ್ತನ್ನು ಗಳಿಸಬೇಕೆಂಬುದೇ ವೇದದ ಆಶಯ. ಆದರೆ ಸಂಪತ್ತನ್ನು ಗಳಿಸುವಾಗ ಸನ್ಮಾರ್ಗದಲ್ಲಿ ಗಳಿಸಲು ದಾರಿಮಾಡಿಕೊಡು, ಎಂಬುದು ದೇವರಲ್ಲಿ  ನಮ್ಮ ಪ್ರಾರ್ಥನೆ. ಇದರಿಂದ ಏನು ಅರ್ಥವಾಗುತ್ತದೆ ಎಂದರೆ  ವೇದವು ಕೇವಲ ವೈರಾಗ್ಯವನ್ನು ಹೇಳುವುದಿಲ್ಲ.ಜೀವನದಲ್ಲಿ ಸುಖವಾಗಿರಿ. ಆದರೆ ಸುಖವಾಗಿರಲು ಅಗತ್ಯವಾದ ಹಣವನ್ನು ಸಂಪಾದಿಸಲು ವಾಮ ಮಾರ್ಗಹಿಡಿಯಬೇಡಿ. ಸನ್ಮಾರ್ಗದಲ್ಲಿ ಧನಾರ್ಜನೆ ಮಾಡಿ, ಜೀವನದಲ್ಲಿ ಸುಖವಾಗಿರಿ, ಎಂಬುದು ವೇದದ ಆಶಯ.
ಹಣವನ್ನು ಹೇಗೆ ಸಂಪಾದಿಸಬೇಕು? ಯಾರಿಗೂ ಕಷ್ಟವನ್ನು ಕೊಡದೆ, ದುರ್ಜನರಿಗೆ ತಲೆಬಾಗದೆ, ಸನ್ಮಾರ್ಗವನ್ನು ಬಿಡದೆ, ಸ್ವಲ್ಪ ದುಡಿದರೂ ಅದೇ ಬಹಳವೆಂದು ದುಡಿದ ಸಂಪಾದನೆಯೇ ಶ್ರೇಷ್ಠ ಎನ್ನುತ್ತದೆ ಮತ್ತೊಂದು ಸುಭಾಷಿತ.
ವಸುವನೀ ಪದದ ಬಗ್ಗೆ ವಿಮರ್ಶೆ ಮಾಡುತ್ತಿದ್ದೆವಲ್ಲವೇ? ವಸು ಎಂಬ ಪದಕ್ಕೆ ಯೋಗ್ಯ ಜೀವನವೆಂದೂ ಅರ್ಥವಿದೆ. ನಾವು ಎಷ್ಟು ಹಣ ಸಂಪಾದಿಸುತ್ತೇವೆಂಬುದಕ್ಕಿಂತ ಎಷ್ಟು ಸರಳವಾಗಿ ಕಡಿಮೆ ಖರ್ಚಿನಲ್ಲಿ ಜೀವನ ಮಾಡುತ್ತೇವೆಂಬುದೂ ಗಣನೆಗೆ ಬರುತ್ತದೆ. ಆದ್ದರಿಂದ ನೆಮ್ಮದಿಯ ಜೀವನಕ್ಕೆ ಹೆಚ್ಚು ಸಂಪಾದನೆ ಬೇಕೆಂದೇನೂ ಅಲ್ಲ, ಆದರೆ ದುಡಿಮೆಯನ್ನು ವ್ಯವಸ್ಥಿತವಾಗಿ ಖರ್ಚು ಮಾಡುತ್ತಾ ಸಂಸಾರ ಮಾಡುವವನನ್ನೂ ವಸುವನೀ ಎನ್ನಬಹುದು.
ಇನ್ನೊಂದು ಬಹಳ ಸತ್ಯವಾದ ವಿಚಾರವೆಂದರೆ ಮಿತವಾಗಿ ಹಣವನ್ನು ಬಳಸುವುದರಿಂದ ವಿಲಾಸೀ ಜೀವನಕ್ಕೆ ಅವಕಾಶವೇ ಇರುವುದಿಲ್ಲ. ಆಗ ಸಹಜವಾಗಿ ಯಾವ ರೋಗದ ಭಯ ಇರುವುದಿಲ್ಲ.ನ್ಯಾಯಮಾರ್ಗದಲ್ಲಿ ದುಡಿಯುವವನಿಗೆ ಭೋಗದ ಪ್ರಶ್ನೆಯೇ ಇಲ್ಲ. ಆಗ ರೋಗದ ಭಯವೆಲ್ಲಿ?

Saturday, March 28, 2015

ವೇದದ ಅರಿವನ್ನು ಮೂಡಿಸುವ ಕೆಲಸವನ್ನು ವೇದದ ಅಭಿಮಾನಿಗಳು ಮಾಡಬೇಕು

ಯುವ ಮಿತ್ರರು ಕೆಲವರು ಎಲ್ಲೆಲ್ಲೋ ಹುಡುಕಿ ವೇದಕ್ಕೆ ಅಪಚಾರವಾಗುವ ಸಂಗತಿಗಳನ್ನು ತಮ್ಮ ಬರಹಗಳಲ್ಲಿ ಕೋಟ್ ಮಾಡುತ್ತಿದ್ದಾರೆ. ಅವರಿಗೆ ಪುಷ್ಠಿ ಕೊಡುವ ವಿಚಾರ ಎಂದರೆ ಆ ಮಾತು ವಿವೇಕಾನಂದರೇ ಹೇಳಿದ್ದು, ಶಂಕರಾಚಾರ್ಯರೇ ಹೇಳಿದ್ದು .ಅಂತಾ ಮಹಾಮಹಿಮರೇ ಹೇಳಿದಮೇಲೆ ವೇದವು ಗೋಹತ್ಯೆಗೆ ಅವಕಾಶ ಮಾಡಿಕೊಟ್ಟಿದೆ, ವೇದದಲ್ಲಿ ಅಸಮಾನತೆಗೆ ಅವಕಾಶವಿದೆ.....ಹೀಗೆಲ್ಲಾ ಬರೆಯುತ್ತಿದ್ದಾರೆ. ಅಂತಾ ಮಿತ್ರರಲ್ಲಿ ನನ್ನದು ಒಂದು ಪ್ರಶ್ನೆ ಇದೆ. ಯಾಕೆ ನಿಮಗೆ ವೇದದಲ್ಲಿ ಸದ್ವಿಚಾರಗಳು ಕಾಣಲೇ ಇಲ್ಲವೇ?-ಇದು ಮೊದಲನೆಯದು. ಎರಡನೆಯದೆಂದರೆ ಒಂದು ವೇಳೆ  ವೇದಕ್ಕೆ ಅಪಚಾರವಾಗುವಂತಾ ಸಂಗತಿಗಳು ವೇದಲ್ಲಿವೆ ಎಂದು ಯಾರೇ ಬರೆದಿದ್ದರೂ ಅದು ಸ್ವೀಕಾರಾರ್ಹವಲ್ಲ. ಮೂರನೆಯ ಮತ್ತು ಕಟ್ಟಕಡೆಯ ಸಂಗತಿ ಎಂದರೆ ಮೂಲ ವೇದದಲ್ಲಿ ಇಂತಾ ಮಾನವ ವಿರೋಧಿ ಸಂಗತಿಗಳಿವೆ ಎಂದು ಯಾರಾದರೂ  ಪ್ರೂವ್ ಮಾಡಿದರೆ ಅಂತಾ ವೇದದಿಂದ ಆಗಬೇಕಾದ್ದೇನಿದೆ? ಅದನ್ನು ಅಧ್ಯಯನ ಮಾಡಬೇಕೇಕೇ?

ಮತ್ತೆ ಮತ್ತೆ ಹೇಳುವೆ. ನಮ್ಮ ಋಷಿಮುನಿಗಳು ಸಾವಿರಾರು ವರ್ಷಗಳು ತಪಸ್ಸು ಮಾಡಿ ಕಂಡುಕೊಂಡ  ಸತ್ಯವೇ ವೇದ. ಅದು ಮಾನವತೆಯನ್ನು ಉಳಿಸಲು, ನೆಮ್ಮದಿಯ ಜೀವನ ಮಾಡಲು, ಸಾಮಾಜಿಕ ಸದ್ಭಾವನೆಗೆ ಇರುವ ಸೂತ್ರಗಳು. ಅದನ್ನು ವಿರೋಧಿಸುವುದೆಂದರೆ ಮಾನವೀಯ ಮೌಲ್ಯಗಳನ್ನು ವಿರೋಧಿಸಿದಂತೆಯೇ. ಯಾರೋ ಸ್ವಾರ್ಥಕ್ಕಾಗಿ ಬರೆದುಕೊಂಡಿರುವ ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವ,  ಮೇಲು-ಕೀಳು ಭಾವನೆಯನ್ನು ಬಿತ್ತುವ  ಸಾಹಿತ್ಯವನ್ನು ಹುಡುಕಿ ಹುಡುಕಿ ಓದುವಿರೇಕೇ? ಇದರಿಂದ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವೇ? ನಾನು ಬರೆದಿರುವ ಪುಸ್ತಕದ ಬಗ್ಗೆ ನಾನೇ ಹೇಳುವುದು ಉಚಿತವಲ್ಲ. ಆದರೂ ಸಾಮಾಜಿಕ ಸದ್ಭಾವನೆಯನ್ನು ಅರಳಿಸುವ ಅದೆಷ್ಟು ಮಂತ್ರಗಳಿವೆ-ಎಂಬುದನ್ನು ನನ್ನ  " ಜೀವನವೇದ " ಪುಸ್ತಕವನ್ನು ಓದಿ, ನಂತರ ಹೇಳಿ.

ನಾನೇನೂ ವೇದವನ್ನು ಅರೆದು ಕುಡಿದಿಲ್ಲ. ಆದರೆ ಮಾನವೀಯ ಮೌಲ್ಯಗಳನ್ನು ಬಿತ್ತುವ ನೂರಾರು ಮಂತ್ರಗಳ ಅರ್ಥವನ್ನು  ಪಂಡಿತ್ ಸುಧಾಕರ ಚತುರ್ವೇದಿಗಳು, ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಂದ ತಿಳಿದುಕೊಂಡಿದ್ದೇನೆ. ಸಾಮಾಜಿಕ ಸದ್ಭಾವನೆಯನ್ನು ಕಾಪಾಡುವ ಇಂತಾ ವಿಚಾರಗಳನ್ನು ಪಡೆಯುವ ಬದಲು ಯಾರೋ ಸ್ವಾರ್ಥಪರರು ಬರೆದಿರುವ ಮಾನವವಿರೋಧೀ ಅಂಶಗಳನ್ನು ಹುಡುಕುವಿರೇಕೇ?

ವೇದದ ಪರ ವಕಾಲತ್ತು ವಹಿಸುವ ಮಿತ್ರರಲ್ಲೂ ನನ್ನ ನಿವೇದನೆ ಇದೆ. ಅದೇನೆಂದರೆ ಈ ಗೊಂದಲಗಳಿಗೆಲ್ಲಾ ಕಾರಣ ಅರಿವಿನ ಕೊರತೆ, ಅಷ್ಟೆ. ಇದನ್ನು ಯಾವುದೇ ಜಾತಿಯ ಪರ-ವಿರುದ್ಧ ಎಂದು ಭಾವಿಸಬೇಕಾಗಿಲ್ಲ. ವೇದದಲ್ಲಿ ಜಾತಿಯೆಂಬುದೇ ಇಲ್ಲ. ಇಷ್ಟೆಲ್ಲಾ ಗೊಂದಲಕ್ಕೆ ಕೆಲವೇ ಶತಮಾನಗಳಿಂದ ಆಚರಣೆಯಲ್ಲಿರುವ ಜಾತಿ ಪದ್ದತಿಯೇ ಕಾರಣ. ಜಾತಿ-ಜಾತಿ ನಡುವಿನ ದ್ವೇಷವು ಜನರನ್ನು ಹುಚ್ಚರನ್ನಾಗಿಸಿದೆ. ಮಾನವಕೋಟಿ ಒಂದೇ ಎಂಬ ಭಾವನೆ ಇಂದಿನ ಪರಿಸ್ಥಿತಿಯಲ್ಲಿ ಮೂಡುವುದು ಕಷ್ಟವಾದರೂ ವೇದದ ಅಭಿಮಾನಿಗಳು ಜಾತಿ-ಜಾತಿ ನಡುವೆ ಸದ್ಭಾವನೆಯನ್ನು ಅರಳಿಸುವ ಕೆಲಸವನ್ನು ಮಾಡಬೇಕೇ ಹೊರತೂ ಕಂದಕವನ್ನು ಹಿರಿದು ಮಾಡುವ ಕೆಲಸವನ್ನು ಮಾಡಲೇ    ಬಾರದು. ವೇದದ ಅರಿವಿಲ್ಲದಿದ್ದವರಿಗೆ ವೇದದ ಅರಿವನ್ನು ಮೂಡಿಸುವ ಕೆಲಸವನ್ನು ವೇದದ ಅಭಿಮಾನಿಗಳು ಮಾಡಬೇಕು.ಇದಕ್ಕೆ ಬಲು ತಾಳ್ಮೆ ಬೇಕು.

Tuesday, March 24, 2015

ಜನರಿಗೆ ಸತ್ಯ ತಿಳಿಸುವವರಾರು?

ಜನರಿಗೆ ಸತ್ಯ ತಿಳಿಸುವವರಾರು?   ಹಲವು ಸಂದರ್ಭದಲ್ಲಿ ನನ್ನ ಕಣ್ಮುಂದೆ ಈ ಪ್ರಶ್ನೆ ಹೆಮ್ಮರವಾಗಿ ನಿಲ್ಲುತ್ತದೆ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ  ಅಸತ್ಯ-ಅಧರ್ಮ-ದಬ್ಬಾಳಿಕೆ-ಬೂಟಾಟಿಕೆ-ಭಯದ ವಾತಾವರಣ ಎದ್ದು ಕಾಣುತ್ತದೆ. ಬ್ರಷ್ಟಾಚಾರದ ವಿರುದ್ಧ ಹೋರಾಟಮಾಡುವ ಹೆಸರಲ್ಲಿ ಜನರಿಂದ ಸುಲಿಗೆ ಮಾಡುವವರಿಗೇನೂ ಕಮ್ಮಿ ಇಲ್ಲ. ಧರ್ಮದ ಹೆಸರಲ್ಲೂ ಸುಲಿಗೆ. ರಾಜಕಾರಣವಂತೂ ಹೊಲಸೆದ್ದು ಹೋಗಿದೆ, ಎಂದೇ ಹೇಳಬೇಕಾಗುತ್ತದೆ. ಸಾಮಾನ್ಯವಾದ ಪ್ರಾಮಾಣಿಕ ಸೇವಾಮನೋಭಾವನೆಯ ವ್ಯಕ್ತಿಯು ರಾಜಕೀಯ ಪ್ರವೇಶಮಾಡಿ ಒಂದು ನಗರಸಭೆಗೆ ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಅಲ್ಲೂ ಹಣದ,ಜಾತಿಯ ಪ್ರಭಾವ. ಇನ್ನು ದೇವಾಲಯಗಳಲ್ಲಿ ಭಕ್ತರಲ್ಲಿಯೇ ತಾರತಮ್ಯ. ಶ್ರೇಣೀಕೃತ ಭಕ್ತರು!  ಮಠಮಂದಿರಗಳಲ್ಲೂ ತಾರತಮ್ಯ. ಜಾತಿಗೆ ಪ್ರಾಶಸ್ತ್ಯ!

ಇದಕ್ಕೆಲ್ಲಾ ಕಾರಣ ಏನು ಗೊತ್ತೇ? ನಮಗೆ ಸತ್ಯದರ್ಶನವಾಗಿಲ್ಲ. ಸತ್ಯ ತಿಳಿದಿಲ್ಲ. ಭಗವಂತನ ಅಸ್ತಿತ್ವದ ಬಗ್ಗೆಯೇ ಸರಿಯಾದ ಅರಿವಿಲ್ಲ. ಭಗವಂತನು ನಿರಾಕಾರಿ, ಸರ್ವವ್ಯಾಪಿ, ಸರ್ವಶಕ್ತ ಎಂಬ ನಿಜದ ಅರಿವು ನಮಗುಂಟಾದರೆ,  ಬದುಕಿನ ಉದ್ದೇಶ ತಿಳಿದರೆ  ಮುಂದೆ ಯಾವಕ್ಷೇತ್ರವೂ ನಮಗೆ ಸಮಸ್ಯೆ ಎನಿಸುವುದೇ ಇಲ್ಲ.  ಹಲವು ವೇಳೆ ನಾವು ಭಯದ ನೆರಳಲ್ಲೇ ಬದುಕು ಸಾಗಿಸುತ್ತೇವೆ. ಕಾರಣ ಬೇರೆ ಏನೂ ಅಲ್ಲ. ಸತ್ಯದ ಅರಿವಿರುವುದಿಲ್ಲ. ನಮ್ಮಲ್ಲಿ  ಮನೆ ಮಾಡಿರುವ ಭಯ ಮತ್ತು ಮೌಢ್ಯ ಎರಡು ಸಂಗತಿಗಳು ದೂರವಾದರೆ ನಮ್ಮನ್ನು ಧರ್ಮದ ಹೆಸರಲ್ಲಿ ,ದೇವರಹೆಸರಲ್ಲಿ, ಕಾನೂನಿನ ಹೆಸರಲ್ಲಿ  ಶೋಷಿಸುವ, ವಂಚಿಸುವ ಜನರನ್ನು ಮೆಟ್ಟಿ ನಿಲ್ಲಲು ಸಾಮರ್ಥ್ಯ ತಾನೇ ತಾನಾಗಿ ಬರುತ್ತದೆ.

ಸ್ವತಂತ್ರ ಭಾರತದಲ್ಲಿ ಆಗಬೇಕಾಗಿರುವುದು ಜನರಿಗೆ ಸತ್ಯವನ್ನು ತಿಳಿಸುವ ಕೆಲಸ. ವೇದದ ನಿಜವಾದ ಅರಿವಿದ್ದರೆ ಸತ್ಯವು ಮನವರಿಕೆಯಾಗುತ್ತದೆ. ವೇದದ ಹೆಸರಿನಲ್ಲಿಯೇ ನಡೆಯುತ್ತಿರುವ ಬೂಟಾಟಿಕೆಗಳೆಲ್ಲಾ ದೂರವಾಗ ಬೇಕಾದರೆ ವೇದದ ನಿಜ ಅರಿವು ಮೂಡಬೇಕು

ವೇದದ ಅರಿವು ಮೂಡಿದರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆಂದು ಹೇಗೆ ಹೇಳುವಿರಿ-ಎಂಬುದು ತಾನೇ ನಿಮ್ಮ ಪ್ರಶ್ನೆ.ಅದಕ್ಕೆ ವೇದದಲ್ಲಿಯೇ ಉತ್ತರವಿದೆ.

ನಾವು ಬಹುಪಾಲು ಭಯದಿಂದ ಬದುಕಿರುವುದು ದೇವರ ಹೆಸರಲ್ಲಿ. ಆ ದೇವರ ಬಗ್ಗೆ ಸ್ಪಷ್ಟ    ಕಲ್ಪನೆ ವೇದದಲ್ಲಿ ದೊರೆಯುತ್ತದೆ. ಅದೊಂದು ಶಕ್ತಿ .ಇಡೀ ಬ್ರಹ್ಮಾಂಡದ ಎಲ್ಲಾ ಚಲನವಲನ-ಚಟುವಟಿಕೆಗಳ ನಿಯಂತ್ರಣ  ಶಕ್ತಿ. ಅದನ್ನು ನೋಡಲು ಸಾಧ್ಯವೇ ಇಲ್ಲ.ಅನುಭವಿಸಬಹುದು ಅಷ್ಟೆ. ಆಶಕ್ತಿಯ ಸರಿಯಾದ ಅರಿವಿಲ್ಲದೆ ದೇವರವಾರಸುದಾರರೆಂದು ಬೀಗುವ ದಳ್ಳಾಳಿಗಳ ಆಟಾಟೋಪಕ್ಕೆ  ನಾವೆಲ್ಲಾ ಬಲಿಯಾಗಿದ್ದೇವೆಂದರೆ ನನಗೆಲ್ಲೋ ತಲೆಕೆಟ್ಟಿದೆ-ಎನಿಸಬಹುದು.ಆದರೆ ಅದೇ ಸತ್ಯ.

ಭಗವಂತನು ನಿಮ್ಮಲ್ಲಿ, ನನ್ನಲ್ಲಿ, ಒಂದು ಹುಳುವಿನಲ್ಲೂ ಇದ್ದಾನೆ.ಎಲ್ಲವನ್ನೂ ನಡೆಸುತ್ತಿದ್ದಾನೆ.ಅವನು ಒಬ್ಬನೇ.ಅವನ ಹೆಸರಲ್ಲಿ ಕಿತ್ತಾಟ ನಡೆಯುತ್ತಿಲ್ಲವೇ? ಬೇಕೇ?

ಇನ್ನು ಜಾತಿಯ ಬಗ್ಗೆ ಸಂಘರ್ಷ. ವೇದದಲ್ಲಿ ಜಾತಿಯ ಸುಳಿವೂ ಇಲ್ಲ. ಮಾನವರೆಲ್ಲರೂ ಒಬ್ಬ ತಾಯಿಯ ಮಕ್ಕಳೆಂದು ವೇದವು ಸಾರುತ್ತದೆ. ಆದರೂ ವೇದದ ಹೆಸರಲ್ಲೇ ಜಾತೀಯತೆ ನಡೆಯುತ್ತದೆ.ಈ ಬಗ್ಗೆ ಸರಿಯಾದ ತಿಳುವಳಿಕೆ ಕೊಡುವವರಾರು?

ಸ್ವಾತಂತ್ರ್ಯ ಬಂದು ಏಳು ದಶಕಗಳು ಮುಗಿಯುತ್ತಾ ಬಂತು. ಯಾವ ಋಷಿಮುನಿಗಳ ತಪಸ್ಸಿನಿಂದ ನಮಗೆ "ವೇದವೆಂಬ" ಒಂದು ಜ್ಞಾನ ಭಂಡಾರ ಲಭ್ಯವಾಗಿದೆಯೋ ಅದರ ಸೂತ್ರಗಳ ಮೇಲೆ ನಮ್ಮ ವ್ಯವಸ್ಥೆಯನ್ನು ಬಲಪಡಿಸುತ್ತಾ ಹೋಗಿದ್ದರೆ ನಮ್ಮ ದೇಶವು ಇಂದಿನ ಕೆಟ್ಟಸ್ಥಿತಿಯಲ್ಲಿರಬೇಕಾಗಿರಲಿಲ್ಲ. ಇನ್ನೂ ಕಾಲಮಿಂಚಿಲ್ಲ. ನಮ್ಮ ದೇಶವನ್ನು ಮುನ್ನಡೆಸುವುದಕ್ಕೆ    ಹೊರಗಿನಿಂದ ಶಿಕ್ಷಣ ಪಡೆಯಬೇಕಾಗಿಲ್ಲ. ವೇದವೆಂಬ ಜ್ಞಾನ ಭಂಡಾರದ ವ್ಯಾಪಕ ಅಧ್ಯಯನ ಆಗಬೇಕು. ಇಲ್ಲಿ ಒಂದು ತಪ್ಪು ಭಾವನೆ ಕೂಡ ಇದೆ. ವೇದವೆಂದರೆ ಹೋಮಹವನಗಳನ್ನು    ಮಾಡಿಸಲು ಬೇಕಾದ ಮಂತ್ರಗಳನ್ನು ಕಲಿಯುವುದು! ಈ ಭಾವನೆ ದೂರವಾಗಬೇಕು. ವೇದವೆಂದರೆ ಸಮಸ್ತ ಬದುಕಿನ ಜ್ಞಾನ ಭಂಡಾರ. ಅದರ ಆಮೂಲಾಗ್ರ ಅಧ್ಯಯನ ಆದರೆ ನಮ್ಮ  ಸಾಮಾಜಿಕ ಬದುಕಿನ, ವೈಯಕ್ತಿಕ ಬದುಕಿನ, ರಾಷ್ಟ್ರದ ಅಭಿವೃದ್ಧಿಯ ಎಲ್ಲಾ ವಿಚಾರಕ್ಕೂ  ಮಾರ್ಗದರ್ಶನ ಸಾಧ್ಯ. ಈ ಬಗ್ಗೆ ಒತ್ತಾಯ ಮಾಡುವ ಶಕ್ತಿ ವೃದ್ಧಿಯಾಗಬೇಕಾಗಿದೆ.

Friday, March 20, 2015

ಜೀವನವೇದ-1






ವೇದಭಾರತಿಯ ಕಾರ್ಯಕ್ರಮಗಳ ಒತ್ತಡದಲ್ಲಿ ವೇದಸುಧೆಯನ್ನು ಗಮನಿಸಲು ಸಾಧ್ಯವಾಗಿರಲಿಲ್ಲ. ಈಗಾಗಲೇ ನನ್ನ ಪುಸ್ತಕ "ಜೀವನವೇದ" ಲೋಕಾರ್ಪಣೆಯಾಗಿದೆ. ಪುಸ್ತಕವನ್ನು ಲೋಕಾರ್ಪಣೆಮಾಡಿದ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ ಶ್ರೀ ಮಲ್ಲೇಪುರಮ್ ವೆಂಕಟೇಶ್ ಮತ್ತು ಪುಸ್ತಕವನ್ನು ಕುರಿತು ಮಾತನಾಡಿದ ವಿಕ್ರಮ ಸಾಪ್ತಾಹಿಕ ಪತ್ರಿಕೆಯ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ಅವರ ಮಾತುಗಳನ್ನು ಕೇಳಿ.ನಾಳೆ ಉಗಾದಿ ಹಬ್ಬದಿಂದ ಆರಂಭಿಸಿ ಪ್ರತಿ ಭಾನುವಾರ "ಜೀವನವೇದದ" ಒಂದೊಂದು ಲೇಖನವನ್ನು ಇಲ್ಲಿ ಪ್ರಕಟಿಸಲಾಗುವುದು. ಶ್ರೀಸುಧಾಕರಶರ್ಮರ ಆರೋಗ್ಯವನ್ನು ನೋಡಿಕೊಂಡು ಅವರ ಉಪನ್ಯಾಸವನ್ನೂ ಸಹ ವಾರಕ್ಕೊಂದಾದರೂ ಪ್ರಕಟಿಸಬೇಕೆಂಬ ಆಸೆ ಇದೆ.ಎಂದಿನಂತೆ ಸಹಕರಿಸುತ್ತೀರಾಗಿ ನಂಬಿಕೆ ಇದೆ. ಹೊಸವರ್ಷವು ಎಲ್ಲರಿಗೂ ಶುಭವನ್ನು ತರಲಿ.
---------------------------------------------------------------------------------------------------------
ಭಾಗ-೧
 ಜೀವನ ಎಂದರೆ ಹಿಡಿಯಷ್ಟು ಸುಖ, ಬೆಟ್ಟದಷ್ಟು ಕಷ್ಟ- ಎಂಬುದು ಸಾಮಾನ್ಯರ ಮಾತು. ಯಾಕೆ ಹೀಗೆ? ಜೀವನದಲ್ಲಿ ನೆಮ್ಮದಿ ಸಿಗುವುದು ಯಾಕೆ ದುಸ್ತರವಾಗುತ್ತದೆ? ಸುಖೀಕುಟುಂಬ ಎಂಬುದು ಗಗನಕುಸುಮವೇ? ಜೀವನದಲ್ಲಿ ಸುಖವಾಗಿರಲು, ನೆಮ್ಮದಿಯಾಗಿರಲು ನಮ್ಮ ಋಷಿಮುನಿಗಳು ಏನಾದರೂ ಸೂತ್ರಗಳನ್ನು ನೀಡಿದ್ದಾರೆಯೇ? ನಮ್ಮ ಆಧುನಿಕ ವಿಜ್ಞಾನದ ಸಲಕರಣೆಗಳು ಜೀವನಕ್ಕೆ ಎಷ್ಟು ನೆಮ್ಮದಿಯನ್ನು ಕೊಟ್ಟಿದೆ? ಎಷ್ಟು ನೆಮ್ಮದಿ ಹಾಳಾಗಿದೆ? ಹೀಗೆಲ್ಲಾ ಯೋಚಿಸುವಾಗ ಕಟ್ಟ ಕಡೆಗೆ ನಾವು ಆಶ್ರಯಿಸುವುದು ನಮ್ಮ ಋಷಿ ಮುನಿಗಳು ನೀಡಿದ ಮಾರ್ಗವನ್ನು. ಆ ಹೊತ್ತಿಗೆ ನಮ್ಮ ಜೀವನದ ಆಯುಷ್ಯವು ಬಹುಪಾಲು ಮುಗಿದಿರುತ್ತದೆ. ಕಡೆಯ ದಿವಸಗಳನ್ನು ಭಗವಚ್ಚಿಂತನೆಯಲ್ಲಿ ಕಳೆಯುತ್ತಾ ಅಂತಿಮ ದಿನಗಳನ್ನು ಎಣಿಸುವಂತಹ ಸ್ಥಿತಿ ಬರಬೇಕೇ? ಅಧ್ಯಾತ್ಮ ಚಿಂತನೆ ಎಂದರೆ ವೃದ್ಧಾಪ್ಯದಲ್ಲಿ ಮಾಡಬೇಕಾದ್ದೇ? ನಮ್ಮ ಜೀವನಕ್ಕೆ ನಿಜವಾಗ ಮಾರ್ಗದರ್ಶನ ಎಲ್ಲಿದೆ? ಇನ್ನು ಮುಂದೆ ಚಿಂತನೆ ಮಾಡುತ್ತಾ ಸಾಗೋಣ, ನನ್ನೊಡನೆ ನೀವೂ ಬರುವಿರಾ? ಸ್ವರ್ಗ ಎಲ್ಲಿದೆ? ಸತ್ತಮೇಲೆ ಸ್ವರ್ಗ-ನರಕಗಳೋ? ಬದುಕಿದ್ದಾಗಲೋ? ಸ್ವರ್ಗವೆಲ್ಲಿದೆಯೋ ಗೊತ್ತಿಲ್ಲ.ಆದರೆ ಹಲವಾರು ಮನೆಗಳು ನಿತ್ಯ ನರಕವಾಗಿ ಇರುವುದಂತೂ ಸತ್ಯ. ಹಾಗಾದರೆ ಮನೆಗಳನ್ನು ಸ್ವರ್ಗವಾಗಿ ಮಾಡಲು ಸಾಧ್ಯವಿಲ್ಲವೇ? ಸಾಧ್ಯ, ಎನ್ನುತ್ತದೆ ವೇದ. ಮನೆಯು ಸ್ವರ್ಗದಂತಿರಬೇಕಾದರೆ ಹೀಗಿರಬೇಕು ಎಂದು ವೇದವು ಕೆಲವು ಜೀವನ ಸೂತ್ರಗಳನ್ನು ಹೇಳುತ್ತದೆ. ಅದನ್ನು ಅನುಸರಿಸಿದ್ದೇ ಆದರೆ ಮನೆಯನ್ನು ಸ್ವರ್ಗ ಮಾಡುವುದೇನೂ ಕಷ್ಟಸಾಧ್ಯವಲ್ಲ. ಹಿಂದುಗಳಲ್ಲಿ ವಿವಾಹ ಸಂದರ್ಭದಲ್ಲಿ ಸಪ್ತಪದೀ ಎಂಬ ಒಂದು ವಿಧಿ ಇರುತ್ತದೆ. ಪುರೋಹಿತರು ಮಂತ್ರ ಹೇಳುತ್ತಾರೆ. ವಧು-ವರರು ಒಟ್ಟು ಏಳು ಹೆಜ್ಜೆ ಹಾಕುತ್ತಾರೆ. ಆ ಏಳು ಮಂತ್ರಗಳು ಒಂದೊಂದೂ ಉತ್ಕೃಷ್ಟ. ಅದರಲ್ಲಿ ಒಂದು ಮಂತ್ರದ ಅರ್ಥವನ್ನು ಇಲ್ಲಿ ತಿಳಿಯೋಣ.
 ಸಖೇ ಸಪ್ತಪದೀ ಭವ 
 ನೀನು ನನಗೆ ಮಿತ್ರಳಂತೆ ಇರು/ನೀನು ನನಗೆ ಮಿತ್ರನಂತೆ ಇರು ಇದು ವಿವಾಹ ಸಂದರ್ಭದಲ್ಲಿ ಗಂಡು-ಹೆಣ್ಣು ಪರಸ್ಪರ ಹೇಳಿಕೊಳ್ಳುವ ಮಾತು. ನಾನೂ ನೀನೂ ಪರಸ್ಪರ ಮಿತ್ರರಂತೆ ಇರೋಣ ಎಂಬ ಸಂಕಲ್ಪವನ್ನು ನೂರಾರು ಜನರ ಮುಂದೆ ಮಾಡುವುದೇ ಸಪ್ತಪದೀ. ಎಷ್ಟು ಜನರಿಗೆ ಇದು ಆ ಸಂದರ್ಭದಲ್ಲಿ ಅರ್ಥವಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ಅರ್ಥವಾಗಿ ಅದರಂತೆ ಜೀವನ ಮಾಡಿದ್ದೇ ಆದರೆ ಅದೇ ಸ್ವರ್ಗ. ಸ್ವರ್ಗ ಇನ್ನೆಲ್ಲೂ ಇಲ್ಲ. ಪತಿ-ಪತ್ನಿಯರು ಪರಸ್ಪರ ಮಿತ್ರರಂತೆ ಇದ್ದರೆ ಆ ದಾಂಪತ್ಯ ಹೇಗಿದ್ದೀತು? ದಾಂಪತ್ಯವು ಗಟ್ಟಿಯಾಗಿ ಸದಾಕಾಲ ಸಂತೋಷವಾಗಿರಲೆಂದು ನಮ್ಮ ಹಿರಿಯರು ಕೊಟ್ಟ ಸೂತ್ರ ಸಪ್ತಪದೀ. ಸಖೇ ಸಪ್ತಪದೀ ಭವ ಎಂಬ ಮಂತ್ರವನ್ನು ಹೇಳಿ ಮದುವೆಯಾಗಿದ್ದೇನೆ. ಇದಕ್ಕೆ ಮದುವೆಗೆ ಬಂದ ನೂರಾರು ಜನರು ಸಾಕ್ಷಿಯಾಗಿದ್ದಾರೆ, ಎಂದು ಯಾರಾದರೂ ಮದುವೆಯ ನಂತರ ಯೋಚಿಸಿದ್ದಾರೆಯೇ? ಹಾಗೆ ಒಂದು ವೇಳೆ ಮಂತ್ರದ ಅರ್ಥವನ್ನು ತಿಳಿದು ಮನ: ಪೂರ್ವಕವಾಗಿ ವಧು-ವರರು ಈ ಮಂತ್ರವನ್ನು ಹೇಳಿದ್ದೇ ಆದರೆ ಈಗ ನಡೆಯುತ್ತಿರುವಂತಹ ಡೈವರ್ಸ್ ಗಳು ನಡೆಯಲು ಸಾಧ್ಯವೇ? ಡೈವರ್ಸ್ ಗಳ ವಿಚಾರದಲ್ಲಿ ಎಂತಹ ಚರ್ಚೆಗಳು ಟಿ.ವಿ. ಮಾಧ್ಯಮಗಳಲ್ಲಿ ನಡೆಯುತ್ತವೆ! ಗಂಡು-ಹೆಣ್ಣಿಗೆ ಹೊಂದಾಣಿಕೆ ಆಗದಿದ್ದಮೇಲೆ ಜೀವನ ಪರ್ಯಂತ ಹೀಗೆಯೇ ಕಾಲ ಹಾಕಲು ಸಾಧ್ಯವೇ? ಅದಕ್ಕೆ ನನ್ನ ಮಗಳಿಗೆ ಡೈವರ್ಸ್ ಕೊಟ್ಟು ಬಾ ಎಂದು ಹೇಳಿದೆ ಎಂದು ಒಬ್ಬ ತಾಯಿಯು ಹೇಳುತ್ತಾಳೆಂದರೆ,ಎಂತಹ ಸಂದರ್ಭದಲ್ಲಿ ಈ ಸಮಾಜವಿದೆ! ಎಂಬುದನ್ನು ಸ್ವಲ್ಪ ಆಳವಾಗಿ ಚಿಂತನೆ ನಡೆಸಬೇಡವೇ? ಡೈವರ್ಸ್ ಕೊಡುವ ಪರಿಸ್ಥಿತಿ ಯಾಕೆ ಬಂತು? ಈ ಬಗ್ಗೆ ಪತಿ-ಪತ್ನಿಯರಾಗಲೀ ಅಥವಾ ಅವರ ಅಪ್ಪ-ಅಮ್ಮನಾಗಲೀ ವಿಚಾರ ಮಾಡುತ್ತಾರೆಯೇ? ಮದುವೆಗೆ ಮುಂಚೆ ಹಣಕ್ಕೋ, ಪದವಿಗೋ, ರೂಪಕ್ಕೋ ಬಲಿಯಾಗಿ ಮದುವೆಯಾದಮೇಲೆ ಈಗ ಸಂಸಾರದಲ್ಲಿ ಸುಖವಿಲ್ಲ ಎಂದರೆ ಹೇಗೆ ಸಿಗಲು ಸಾಧ್ಯ? ಆ ಬಗ್ಗೆ ಮದುವೆಗೆ ಮುಂಚೆ ಯೋಚಿಸಬೇಕಿತ್ತು , ಅಲ್ಲವೇ? ಮದುವೆ ಎಂದರೆ ಇದು ಜೀವನ ಪರ್ಯಂತದ ಕುಟುಂಬವ್ಯವಸ್ಥೆ.ಅದು ಸುಭದ್ರವಾಗಿರಬೇಕೆಂದರೆ ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆಗೆ ನೋಡಬೇಕಾದ ಅಂಶಗಳೇನೆಂಬ ಬಗ್ಗೆ ನಮಗೆ ಅರಿವಿರಬೇಕಲ್ಲವೇ? ಸಾಮಾನ್ಯವಾಗಿ ಮದುವೆ ಮಾಡುವಾಗ ಹಿಂದು ಸಮಾಜದಲ್ಲಿ ಹೆಚ್ಚು ಮಹತ್ವಕೊಡುವುದು ಗಂಡು-ಹೆಣ್ಣಿನ ಜಾತಕಕ್ಕೆ. ಇಷ್ಟು ಗುಣಗಳಿದ್ದರೆ ಮದುವೆ ಮಾಡಿಕೊಳ್ಳಬಹುದು,ಇಲ್ಲದಿದ್ದರೆ ಇಲ್ಲ. ಮದುವೆಯಾಗಬೇಕಾದ ಹುಡುಗ-ಹುಡುಗಿರ ವಿದ್ಯೆ, ರೂಪ, ಸ್ವಭಾವಗಳ ಹೊಂದಾಣಿಕೆಯಾಗಬೇಕಲ್ಲವೇ? ಹುಡುಗಿ ಅತ್ಯಂತ ಶ್ರೀಮಂತ ಮನೆಯವಳಾಗಿದ್ದು ಹಣದಾಸೆಯಿಂದ ಹುಡುಗನು ಆಕೆಯನ್ನು ಮದುವೆಯಾಗಿದ್ದರೆ ಈ ದಂಪತಿಗಳ ಜೀವನದಲ್ಲಿ ಹೊಂದಾಣಿಕೆ ಬರಲು ಸಾಧ್ಯವೇ? ಶ್ರೀಮಂತರಾದವರೆಲ್ಲಾ ಕೆಟ್ಟವರಲ್ಲ. ಶ್ರೀಮಂತ ಮನೆಯ ಹುಡುಗ-ಹುಡುಗಿಯರಲ್ಲೂ ಬಡವರನ್ನು ಮದುವೆ ಯಾಗಬೇಕೆಂದು ಬಯಸುವವರೂ ಇದ್ದಾರೆ. ಅಂತಹ ಸಂದರ್ಭದಲ್ಲಿ ಅವರ ಶ್ರೀಮಂತಿಕೆ-ಬಡತನ ಗಣನೆಗೆ ಬರುವುದಿಲ್ಲ ಬದಲಾಗಿ ಅವರ ಸ್ವಭಾವಗಳು, ಸದ್ಗುಣಗಳು ಗಣನೆಗೆ ಬರುತ್ತವೆ.ಈ ವಿಚಾರಗಳನ್ನು ಗಮನಿಸದೆ ಎಲ್ಲವೂ ಸರಿಯಾಗಿದೆ ಜಾತಕ ಒಂದು ಕೂಡಿಬಂದರೆ ಮದುವೆ ಆದಂತೆಯೇ ಎಂಬ ವಿಚಾರವಿದ್ದರೆ ಅದೇ ಬಲು ಅಪಾಯದ ಅಂಶವೆಂಬುದು ಹಲವರಿಗೆ ಅರ್ಥವಾಗುವುದೇ ಇಲ್ಲ. ಸುಖ ದಾಂಪತ್ಯಕ್ಕೆ ವೇದವು ಏನು ಹೇಳುತ್ತದೆ? ನೋಡೋಣ. ಅಥರ್ವಣ ವೇದದ ಒಂದು ಮಂತ್ರವು ಇನ್ನೂ ಅದ್ಭುತವಾಗಿ ಹೇಳುತ್ತದೆ.

 ಇಹೇಮಾವಿಂದ್ರ ಸಂ ನುದ ಚಕ್ರವಾಕೇವ ದಂಪತೀ| [ಕಾಂಡ ೧೪ ಸೂಕ್ತ ೨ ಮಂತ್ರ ೬೪] 

ಅರ್ಥ:- ಪತಿ ಪತ್ನಿಯರಿಬ್ಬರೂ ಚಕ್ರವಾಕ ಪಕ್ಷಿಗಳಂತೆ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲಿ. ವೇದ ಮಂತ್ರಗಳೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಇರುವ ಮಂತ್ರಗಳೇ? ಈ ಮೇಲಿನ ಮಂತ್ರದ ಅರ್ಥವನ್ನು ಗ್ರಹಿಸಿದಾಗ ಆಶ್ಚರ್ಯವಾಗದೇ ಇರದು. ಚಕ್ರವಾಕ ಪಕ್ಷಿಗೆ ಕೋಕ ಪಕ್ಷಿ ಎಂತಲೂ ಹೇಳುತ್ತಾರೆ. ಗಂಡು ಹೆಣ್ಣು ಸದಾಕಾಲ ಒಟ್ಟೊಟ್ಟಿಗೆ ಇದ್ದು ಸಾಯುವವರೆಗೂ ಸಂತೋಷ ಅನುಭವಿಸಿಯೇ ಸಾಯುತ್ತವೆ. ಅಂತಹ ಪಕ್ಷಿಗಳಂತೆ ಪತಿ ಪತ್ನಿಯರು ಪರಸ್ಪರ ಪ್ರೀತಿಯಿಂದಿರಬೇಕು-ಎಂಬುದು ವೇದದ ಆಶಯ. ಈಗ ಹೇಳಿ, ವೇದವು ವೈರಾಗ್ಯವನ್ನು ಹೇಳುವುದೇ? ಇಲ್ಲಿ ಕೋಕ ಪಕ್ಷಿಯಂತೆ ಪರಸ್ಪರ ಪ್ರೀತಿಯಿಂದ ಪತಿ ಪತ್ನಿಯರು ಇರಬೇಕೆಂಬುದು ಸ್ವಲ್ಪ ವಿಪರೀತವೆನಿಸಿದರೂ ಜೀವನದ ಹಲವು ಘಟ್ಟಗಳಲ್ಲಿ ನಾವು ಹೇಗೆ ಜೀವನವನ್ನು ನಿರ್ವಹಿಸಬೇಕೆಂಬ ಸರಿಯಾದ ಮಾರ್ಗದರ್ಶನವನ್ನು ವೇದವು ನಮಗೆ ನೀಡುತ್ತದೆ.

Wednesday, March 11, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 10


     ಜಿಲ್ಲಾ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಸ್ಕೃತ ಭಾರತಿಯ ಅಧ್ಯಕ್ಷರಾದ ಡಾ. ಪ್ರಸನ್ನ ಎನ್.ರಾವ್ ರವರು ಸಮ್ಮೇಳನ ಯಶಸ್ವಿಯಾಗಿ ನಡೆದ ಕುರಿತು ಹರ್ಷ ವ್ಯಕ್ತಪಡಿಸಿದರು. ಸಂಸ್ಕೃತದ ಅಧ್ಯಯನದಿಂದ ನಮ್ಮ ಸಂಸ್ಕೃತಿ ಉನ್ನತಿ ಕಾಣುವುದೆಂದು ಅವರು ಅಭಿಪ್ರಾಯಿಸಿದರು.


     ಸಂಸ್ಕೃತ ಶಿಕ್ಷಣ ನೀಡುವಲ್ಲಿ ಗಣನೀಯ ಸೇವೆ ಸಲ್ಲಿಸಿ ನಿವೃತ್ತರಾದ ಹಲವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಚ್ಚುಕಟ್ಟಾಗಿ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಿದ ಅಡಿಗೆ ಕಂಟ್ರಾಕ್ಟರ್ ವೆಂಕಟೇಶರನ್ನು ಅಭಿನಂದಿಸಲಾಯಿತು.





     ಸಮ್ಮೇಳನದ ಯಶಸ್ಸಿಗೆ ಶ್ರಮ ವಹಿಸಿ ದುಡಿದ ಸಂಸ್ಕೃತ ಭಾರತಿಯ ದಕ್ಷಿಣ ಕರ್ನಾಟಕದ ಸಂಪರ್ಕ ಪ್ರಮುಖ ಶ್ರೀ ಶ್ರೀನಿವಾಸನ್ ಮತ್ತು ವೇದಭಾರತಿಯ ಸಂಯೋಜಕ ಶ್ರೀ ಹರಿಹರಪುರ ಶ್ರೀಧರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಂಘಟನೆ ಮಾಡಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಿದ ರಕ್ಷಿತ್ ಭಾರದ್ವಾಜರನ್ನೂ ಅಭಿನಂದಿಸಲಾಯಿತು. ಹರಿಹರಪುರ ಶ್ರೀಧರ್ ಸಮ್ಮೇಳನದ ಯಶಸ್ಸಿಗೆ ಸಂಬಂಧಿಸಿದ ಎಲ್ಲರ ಸಂಘಟಿತ ಪ್ರಯತ್ನ ಕಾರಣವಾಗಿದೆಯೆಂದು ನುಡಿದರು. ವಂದೇಮಾತರಮ್ ನೊಂದಿಗೆ ಸಭಾಕಾರ್ಯಕ್ರಮ ಸಂಪನ್ನಗೊಂಡಿತು. ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
-ಕ.ವೆಂ.ನಾಗರಾಜ್.
*******************
ಹೆಚ್ಚಿನ ವಿವರಗಳು ಮತ್ತು ಫೋಟೋಗಳಿಗೆ ಕ್ಲಿಕ್ಕಿಸಿ: ಸಂಸ್ಕೃತ ಸಂಭ್ರಮ

Saturday, March 7, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 7

      ಹಾಸನದಲ್ಲಿ ನಡೆದ ಜಿಲ್ಲಾ ಸಂಸ್ಕೃತ ಸಮ್ಮೇಳನದಲ್ಲಿ ಸದ್ಬಾವನಾಗೋಷ್ಠಿಯ ನಂತರದಲ್ಲಿ ಬೆಂಗಳೂರಿನ ಡಾ. ಅನಿಲಕುಮಾರರು 'ಶುಲ್ಬಸೂತ್ರೇಷು ಗಣಿತಮ್' ಕುರಿತು ವಿವರಿಸಿದರು. ಆ ಸಂಬಂಧದ ಕೆಲವು ಚಿತ್ರಗಳಿವು:





     ಬೆಂಗಳೂರು ಸಂಸ್ಕೃತ ವಿ.ವಿ.ಉ ಕುಲಪತಿ ಡಾ. ಶ್ರೀನಿವಾಸ ವರಖೇಡಿಯವರು 'ದೇಶೀನಾಯಕತ್ವಮ್' ಕುರಿತು ವಿದ್ಯಾರ್ಥಿ ಸಮೂಹದೊಂದಿಗೆ ನಡೆಸಿದ ಸಂವಾದ ಎಲ್ಲರಿಗೂ ಮೆಚ್ಚುಗೆಯಾಯಿತು. ಇಂತಹ ಕಾರ್ಯಕ್ರಮವನ್ನು ಪ್ರತಿ ಶಾಲಾ, ಕಾಲೇಜುಗಳಲ್ಲೂ ನಡೆಸಿದರೆ ಉತ್ತಮ ಪರಿಣಾಮ ಬೀರುವುದೆಂಬ ಅಭಿಪ್ರಾಯ ವ್ಯಕ್ತವಾಯಿತು.


     
     ನಂತರದಲ್ಲಿ ಢಾ. ಶುಭಾರವರು 'ಸಂಸ್ಕೃತ ವಿಕಿಪೀಡಿಯ' ಕುರಿತು ಅಮೂಲ್ಯ ಮಾಹಿತಿಗಳನ್ನು ಸಭೆಗೆ ಪ್ರಾತ್ಯಕ್ಞಿಕೆ ಮೂಲಕ ವಿವರಿಸಿದರು. ಡಾ. ಗುರುಮೂರ್ತಿಯವರು 'ಸಂಸ್ಕೃತದ ಪ್ರಸ್ತುತತೆ' ಕುರಿತು ಮಾತನಾಡಿದರು. ಶ್ರೀ ಅನಂತನಾರಾಯಣ ಕಾರ್ಯಕ್ರಮದ ನಿರ್ವಹಣೆ ಮಾಡಿದರು.



-ಕ.ವೆಂ.ನಾಗರಾಜ್.


Friday, March 6, 2015

ಹಿಂದೂ ಚಟುವಟಿಕೆಗಳ ಏಳಿಗೆ ಸಹಿಸದವರು ಅದನ್ನು ಖಂಡಿಸುವಾಗ ವೇದವನ್ನು ತೆಗಳುವುದು ಸಾಮಾನ್ಯವಾಗಿ ಬಿಟ್ಟಿದೆ.ಇದಕ್ಕೆ ಎರಡು ಕಾರಣ. ವೈದಿಕಧರ್ಮದ ಹೆಸರಿನಲ್ಲಿಯೇ ವೇದವನ್ನು ತಪ್ಪಾಗಿ ಅರ್ಥೈಸಿ ಮೌಢ್ಯಗಳನ್ನು ಬಿಂಬಿಸುತ್ತಿರುವ ಒಂದು ಗುಂಪು.   ಹಾಗೂ ಈ ಬಲಿಷ್ಠ  ಗುಂಪು ಹರಡುತ್ತಿರುವ   ಮೌಢ್ಯಗಳನ್ನು ವಿರೋಧಿಸಲು ವೇದವನ್ನು ಅಧ್ಯಯನ ಮಾಡದೇ ವೇದವನ್ನು ವಿರೋಧಿಸುವ  ಮತ್ತೊಂದು ಸಣ್ಣ  ಗುಂಪು. ದೊಡ್ದಗುಂಪು ಮೌಢ್ಯಗಳನ್ನು ಎಗ್ಗಿಲ್ಲದೇ ಮುಂದುವರೆಸಿಕೊಂಡು ಹೋದರೆ . ಸಣ್ಣ ಗುಂಪು ಅದನ್ನು ಬಂಡವಾಳ ಮಾಡಿಕೊಂಡು ಮಾನವೀಯತೆಯನ್ನು ರಕ್ಷಿಸಲು ಸಂವಿಧಾನದಂತಿರುವ ವೇದವನ್ನು ವಿರೋಧಿಸಿ ಪ್ರಚಾರ ಗಿಟ್ಟಿಸುವುದು. ಎರಡೂ ಗುಂಪುಗಳು ಮಾಡುತ್ತಿರುವುದು ವೇದವಿರೋಧೀ ಹಾಗೂ ಮಾನವತೆಯ ವಿರೋಧೀ ಕೆಲಸಗಳೇ!! ಇವರಿಗೆ ಬುದ್ಧಿ ಹೇಳುವವರೇ ಇಲ್ಲ. ವೇದವನ್ನು ಸರಿಯಾಗಿ ಬಲ್ಲವರೂ ಸಹ ಸಮಾಜದಲ್ಲಿ ಮರೆಯಾಗಿದ್ದಾರೆ. ಒಟ್ಟಿನಲ್ಲಿ ಯಾವುದು ವಿಶ್ವದ ಅಭ್ಯುದಯಕ್ಕೆ ,ಮಾನವೀಯತೆಯ ಉಳಿವಿಗೆ,ವಿಶ್ವದ ಜನರ ನೆಮ್ಮದಿಯ ಬದುಕಿಗೆ ನಿಜವಾದ ಮಾರ್ಗದರ್ಶನ ವಾಗಬಲ್ಲದೋ ಅಂತಹ ವೇದವನ್ನು ಸರಿಯಾಗಿ ಅಧ್ಯಯನ ಮಾಡಿ ಸಮಾಜಕ್ಕೆ ಅದರ ಸಾರವನ್ನು ತಿಳಿಸುವ ಕೆಲಸ ಮಾಡುವವರ ಸಂಖ್ಯೆ ಹೆಚ್ಚಬೇಕಾಗಿದೆ. ಇದು ಯಾವ ಗುಂಪನ್ನು ಬಲಪಡಿಸಲು ಅಲ್ಲ, ಬದಲಿಗೆ ವಿಶ್ವದ ಜನರ ನೆಮ್ಮದಿಯ ಬದುಕಿಗೆ ಅತ್ಯಂತ ತುರ್ತಾಗಿ ಆಗಬೇಕಾದ ಕೆಲಸ. ಹಿಂದೂ ಹೆಸರಿನಲ್ಲಿ ಜನರು ಹೆಚ್ಚು ಸಂಘಟಿತರಾಗುತ್ತಿರುವುದು ಕಣ್ಣಿಗೆ ಕಾಣುತ್ತಿರುವ ದೃಶ್ಯ. ಹಿಂದುನಾಯಕರುಗಳು "ವೇದದ ಆಧಾರದಲ್ಲಿ ಜನರಿಗೆ ಮಾರ್ಗದರ್ಶನ ಮಾಡಿ ಇರಬಹುದಾದ   ಮೌಢ್ಯಗಳನ್ನು ದೂರಗೊಳಿಸಿ "ಹಿಂದುಶಕ್ತಿ" ಗೆ ವೇದದ ವಿಚಾರವನ್ನು ತಲುಪಿಸಿವ ಕೆಲಸಕ್ಕೆ ಆಧ್ಯತೆಕೊಡಬೇಕಾದುದು ಇಂದಿನ  ಅನಿವಾರ್ಯತೆ.

Thursday, March 5, 2015

ದಲಿತ ಕಾಲೊನಿ ಶ್ರೀದೇವೀ ನಗರದಲ್ಲಿ ಅಗ್ನಿಹೋತ್ರ

ಇವತ್ತು ನನ್ನ ಹುಟ್ಟೂರು ನೆನಪಾಯ್ತು. ಹೌದು ತೇಟ್ ಹಾಗೆಯೇ! ಬೀದಿ ತುಂಬಾ ರಂಗೋಲಿ! ರಾಮಮಂದಿರದ ಬಾಗಿಲಲ್ಲಿ ಹಸಿರು ಚಪ್ಪರ!! ಇದೆಲ್ಲಾ ಚನ್ನರಾಯಪಟ್ಟಣದ ದಲಿತ ಕಾಲೊನಿ ಎಂದು ಹೇಳುವ ಶ್ರೀದೇವೀ ನಗರದಲ್ಲಿ ಇಂದು ಕಂಡಿದ್ದು!! ಹುಣ್ಣಿಮೆ ಪ್ರಯುಕ್ತ ಅಲ್ಲಿನ ಜನರಿಗಾಗಿ ಸತ್ಯನಾರಾಯಣ ಪೂಜೆ ಏರ್ಪಡಿಸಿರುವುದಾಗಿಯೂ ನಾನು ಅಲ್ಲಿ ಬಂದು ಭಾಷಣ ಮಾಡಬೇಕೆಂದು ಆಹ್ವಾನ ಕೊಟ್ಟವರು ಸಂಸ್ಕೃತಭಾರತಿಯ ಶ್ರೀ ವಿಶ್ವನಾಥ ದೀಕ್ಷಿತ್. ಅಲ್ಲಿನ ಜನರಿಂದ ಅಗ್ನಿಹೋತ್ರ ಮಾಡಿಸಲು ಅವಕಾಶ ವಿದ್ದರೆ ವೇದಭಾರತಿಯ ಸದಸ್ಯರೊಡನೆ ನಾನು ಬರುವುದಾಗಿ ತಿಳಿಸಿದ್ದೆ. ಅದರಂತೆ ಇಂದು ನಾವು ಹನ್ನೊಂದು ಜನ ವೇದಭಾರತಿಯ ಸದಸ್ಯರು ಬೆಳಿಗ್ಗೆ 8.30 ಕ್ಕೆ ಚನ್ನರಾಯಪಟ್ಟಣದಲ್ಲಿದ್ದೆವು. ಶ್ರೀದೇವಿನಗರಕ್ಕೆ ಪ್ರವೇಶಿಸಿದಾಗ ಅಲ್ಲಿನ ಹಬ್ಬದ ವಾತಾವರಣ ಕಂಡು ಚಕಿತಗೊಂಡೆವು. ಮೊದಲು ಅಗ್ನಿಹೋತ್ರ ಮಾಡಲು ನಿರ್ಧರಿಸಿ ಅಲ್ಲಿನ ಇಬ್ಬರು ದಂಪತಿಗಳನ್ನು ಕೂರಿಸಿದೆವು. ಪ್ರೇಮಾ ಭಗಿನಿ ಕೂಡ ಅಗ್ನಿಹೋತ್ರ ಮಾಡಲು ಕುಳಿತರು. ಆರಂಭದಲ್ಲಿ "ಎಲ್ಲರಿಗಾಗಿ ವೇದ" ಉದ್ದೇಶವನ್ನು ತಿಳಿಸಿದ್ದಾಯ್ತು. ಅಗ್ನಿಹೋತ್ರ ಹೇಗೆ ಮಾಡಬೇಕೆಂಬ ಸೂಚನೆ ಕೊಟ್ಟೆ. ಬಹಳ ಶ್ರದ್ಧಾ ಭಕ್ತಿಯಿಂದ ಅಗ್ನಿಹೋತ್ರ ನಡೆಯಿತು. ಮಧ್ಯೆ ವಿವರಣೆ ನೀಡಿದ್ದಾಯ್ತು. ಕೊನೆಯಲ್ಲಿ ಹಲವರ ಕೈಲಿ ದ್ರಾಕ್ಷಿ ಗೋಡಂಬಿ ಕೊಟ್ಟು ಪೂರ್ಣಹುತಿ ನೀಡಲಾಯ್ತು. ನಂತರ ಅಲ್ಲಿನ ಯೋಜನೆಯಂತೆ ಸತ್ಯನಾರಾಯಣ ಪೂಜೆ ನಡೆಯಿತು. ನಂತರ ಪೂಜೆ-ವ್ರತದ ವೈದಿಕ ಕಲ್ಪನೆಯನ್ನು ನಾನು ಕೊಟ್ಟಾಗ ಜನರು ಆಲಿಸುತ್ತಿದ್ದ ಪರಿ ಕಣ್ತುಂಬಿ ಬಂದಿತ್ತು. ಹೌದು ಸರಿಯಾದ ವೈದಿಕ ಕಲ್ಪನೆ ಕೊಟ್ಟರೆ ಜನ ಸ್ವೀಕರಿಸಲು ಸಿದ್ಧ. ಕೊಡುವವರು ಬೇಕು ಅಷ್ಟೆ. ಪ್ರಸಾದ ಸ್ವೀಕರಿಸಿ ಹೊರಡುವಾಗ ಕಾಲಿಗೆ ನಮಸ್ಕರಿಸಿದ ಮುಗ್ಧ ಜನರ ಪ್ರೀತಿಯಿಂದ ನನ್ನ ಕಣ್ ತುಂಬಿ ಬಂದಿತ್ತು.



































Tuesday, March 3, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 6

ಸದ್ಭಾವನಾ ವಿಚಾರಗೋಷ್ಠಿ
"ಸಂಸ್ಕೃತ ಎಂದರೆ ಒಳ್ಳೆಯದು; ಸಂಸ್ಕೃತಿ ಎಂದರೆ ಒಳ್ಳೆಯ ಕೆಲಸ!"
     ಸಂಸ್ಕೃತ ಸಮ್ಮೇಳನದ ಅಂಗವಾಗಿ ಸದ್ಭಾವನಾಗೋಷ್ಠಿ ಏರ್ಪಡಿಸಲಾಗಿತ್ತು. ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠದ ಕೃಷ್ಣರಾಜನಗರ ಶಾಖಾಮಠದ ಮುಖ್ಯಸ್ಥರಾದ ಶ್ರೀ ಶ್ರೀ ಶಿವಾನಂದಪುರಿ ಮಹಾಸ್ವಾಮಿಯವರ ಉಪಸ್ಥಿತಿಯಲ್ಲಿ ನಡೆದ ಗೋಷ್ಠಿಯ ನಿರ್ವಹಣೆಯನ್ನು ಬೆಂಗಳೂರು ಸಂಸ್ಕೃತ ವಿ.ವಿ.ಯ ನಿವೃತ್ತ ಕುಲಪತಿ ಶ್ರೀ ಮಲ್ಲೇಪುರಂ ವೆಂಕಟೇಶರು ಮಾಡಿದರು. ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಶ್ರೀ ಶಂಕರಪ್ಪ ಮತ್ತು ವೇದಭಾರತಿಯ ಗೌರವಾಧ್ಯಕ್ಷ ಶ್ರಿ ಕವಿನಾಗರಾಜ್ ತಮ್ಮ ವಿಚಾರಗಳನ್ನು ಮಂಡಿಸಿದರು. ಶ್ರೀ ಶ್ರೀ ಶಿವಾನಂದಪುರಿ ಮಹಾಸ್ವಾಮಿಯವರು ಪೂರಕ ವಿಚಾರಗಳನ್ನು ಹಂಚಿಕೊಳ್ಳುವುದರ ಜೊತೆಗೆ ಆಶೀರ್ವಚನ ನೀಡಿದರು. ಶ್ರೀ ಜಿ.ಎಸ್. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
     ಶ್ರೀ ಮಲ್ಲೇಪುರಂ ವೆಂಕಟೇಶರು ಗೋಷ್ಠಿಯನ್ನು ಆರಂಭಿಸುತ್ತಾ, "ವೇದಗಳ ಕುರಿತು ಇದ್ದ ಅಪಪ್ರಚಾರಗಳನ್ನು ತೊಡೆಯುವಲ್ಲಿ ಮಹರ್ಷಿ ದಯಾನಂದ ಸರಸ್ವತಿಯವರು ಅನುಪಮ ಕೊಡುಗೆ ನೀಡಿದ್ದಾರೆ. ನಂತರದಲ್ಲೂ ಅನೇಕ ಮಹನೀಯರು ವೇದಗಳು ಸಾಮರಸ್ಯದ ಭಾವವನ್ನೇ ಭೋಧಿಸುತ್ತವೆ ಎಂಬುದನ್ನು ಪ್ರತಿಪಾದಿಸಿದ್ದಾರೆ. ಸಾಮರಸ್ಯ ಅನ್ನುವುದು ಸನಾತನ ಧರ್ಮದ ತಳಹದಿಯಾಗಿದೆ" ಎಂದರು.
     ಮೊದಲಿಗೆ ಮಾತನಾಡಿದ ಶ್ರೀ ಕವಿ ನಾಗರಾಜರು, "ನಾಲ್ಕೂ ವೇದಗಳ ಯಾವುದೇ ಮಂತ್ರದಲ್ಲಿ ಜಾತಿ ಹುಟ್ಟಿನಿಂದ ಬರುವುದೆಂಬ ಬಗ್ಗೆ ಉಲ್ಲೇಖವಿಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇತ್ಯಾದಿ ಪದಗಳನ್ನು ಮಂತ್ರಗಳನ್ನು ಬಳಸಲಾಗಿದ್ದರೂ ಅವು ಎಂದೂ ಜಾತಿಸೂಚಕವಾಗಿರಲಿಲ್ಲ. ಆದರೆ, ಸುದೀರ್ಘವಾದ ಯಾವುದೋ ಹಿಂದಿನ ಕಾಲಘಟ್ಟದಲ್ಲಿ ಹುಟ್ಟಿನಿಂದ ಜಾತಿಯನ್ನು ಬಳಸುವ ಸಂಪ್ರದಾಯ ಬೆಳೆದುಕೊಂಡು ಬಂದಿತು. 'ಶಾಸ್ತ್ರಾದ್ರೂಢಿರ್ಬಲೀಯಸೀ'- ಶಾಸ್ತ್ರಗಳಿಗಿಂತಲೂ ಸಂಪ್ರದಾಯಗಳೇ ಬಲಶಾಲಿ ಎಂಬ ನಾಣ್ಣುಡಿಯಂತೆ ಸಾಂಪ್ರದಾಯಿಕರು ಈ ವ್ಯವಸ್ಥೆಯನ್ನು ಬಲಗೊಳಿಸಿದರು. ಇಂದಿನ ರಾಜಕಾರಣಿಗಳೂ, ಸರ್ಕಾರಗಳೂ ಸಹ ಬಾಯಿಯಲ್ಲಿ ಜಾತ್ಯಾತೀತತೆಯ ಮಾತನಾಡುತ್ತಿದ್ದರೂ ಜಾತೀಯತೆಯನ್ನು ಬಲಗೊಳಿಸುತ್ತಲೇ ನಡೆದಿರುವುದು ಸಾಮರಸ್ಯ ಸಾಧನೆಗೆ ಅಡ್ಡಿಯಾಗಿದೆ. ಈಗ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿಗಣತಿಯ ಉದ್ದೇಶ ಸಹ ಹುಟ್ಟಿನ ಜಾತಿಯನ್ನು ಬಲಗೊಳಿಸುವುದೇ ಆಗಿದೆ. ಗಣತಿಯ ನಮೂನೆಯಲ್ಲಿ ತಮ್ಮ ಜಾತಿಯನ್ನು ಹೇಳಿಕೊಳ್ಳಲು ಇಚ್ಛಿಸದವರನ್ನು 'ಜಾತಿ ಇಲ್ಲ' ಎಂಬ ಕಲಮಿನಲ್ಲಿ ದಾಖಲಿಸಿಕೊಳ್ಳುತ್ತಾರೆ. ಆದರೆ ಅವರನ್ನು 'ಮನುಷ್ಯ ಜಾತಿ' ಎಂಬ ಕಲಮಿನಲ್ಲಿ ದಾಖಲಿಸಿಕೊಳ್ಳುವುದು ಸೂಕ್ತ. ವೇದಗಳಲ್ಲಿ ಸಾಮರಸ್ಯ ಮತ್ತು ಸಮಾನತೆಯ ಭಾವಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ವೇದಗಳ ಆಶಯವನ್ನು ಅನುಷ್ಠಾನಗೊಳಿಸುವಲ್ಲಿ ಹಾಸನದ ವೇದಭಾರತಿ ಪುಟ್ಟದಾದರೂ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಜಾತಿ, ಮತ, ಪಂಥ, ಲಿಂಗ ಬೇಧವಿಲ್ಲದೆ ಆಸಕ್ತರೆಲ್ಲರಿಗೂ ವೇದಮಂತ್ರಗಳನ್ನು ಕಲಿಯಲು, ಅರ್ಥ ತಿಳಿಯಲು, ಅಗ್ನಿಹೋತ್ರದಲ್ಲಿ ಪಾಲುಗೊಳ್ಳಲು ಅವಕಾಶ ಮಾಡಿಕೊಟ್ಟಿದೆ. ನೈಜ ಸಾಮರಸ್ಯ ಸಾಧಿಸಲು ಎಲ್ಲರೂ ಕೈ ಜೋಡಿಸೋಣ" ಎಂದರು.
     ಶ್ರೀ ಶಂಕರಪ್ಪನವರು ಮಾತನಾಡಿ, "ವೇದಭಾರತಿ ಉತ್ತಮ ಕೆಲಸ ಮಾಡುತ್ತಿದೆ. ವಿವಿಧ ಮಠಾಧೀಶರುಗಳು, ಸಾಧು-ಸಂತರು ತಮ್ಮ ಮಠಗಳಿಂದ ಹೊರಬಂದು ಸಾಮಾನ್ಯರೊಂದಿಗೆ ಬೆರೆಯಬೇಕಿದೆ. ಸಾಮರಸ್ಯ, ಸಮಾನತೆಗಳಿಂದ ಮೊದಲು ಅವರು ಮೇಲ್ಪಂಕ್ತಿ ಹಾಕಬೇಕು. ಈ ರೀತಿ ಮಾಡಿದ್ದೇ ಆದಲ್ಲಿ ಜಾತಿ ವೈಮನಸ್ಯಗಳು ದೂರವಾಗುತ್ತವೆ" ಎಂದು ಅಭಿಪ್ರಾಯಪಟ್ಟರು.
         ಶ್ರೀ ಶ್ರೀ ಶಿವಾನಂದಪುರಿ ಮಹಾಸ್ವಾಮಿಯವರು ಆಶೀರ್ವಚನ ಮಾಡುತ್ತಾ, "ಸಂಸ್ಕೃತವನ್ನು ಕಲಿಯಲು ಎಲ್ಲರೂ ಮನಸ್ಸು ಮಾಡಬೇಕು. ಸಂಸ್ಕೃತದ ಮಂತ್ರಗಳು, ಶ್ಲೋಕಗಳಲ್ಲಿ ಮಾನವ ಕಲ್ಯಾಣದ ಅಂಶಗಳೇ ಬಿಂಬಿತವಾಗಿವೆ. ಭಗವದ್ಗೀತೆಯ ಪಠಣ, ಅಧ್ಯಯನ ನಮ್ಮ ಹೃದಯಗಳನ್ನು ವಿಶಾಲಗೊಳಿಸುತ್ತದೆ, ನಮ್ಮ ಅರಿವನ್ನು ಹೆಚ್ಚಿಸುತ್ತದೆ" ಎಂದರು.