Pages

Saturday, April 30, 2011

ಆತ್ಮೀಯ ವೇದಸುಧೆಯ ಅಭಿಮಾನಿಗಳೇ,
ನಮಸ್ತೆ. ಇತ್ತೀಚೆಗೆ ಪುಟ್ಟಬರ್ತಿಸಾಯಿಬಾಬ ಅವರು ಇಹಲೋಕವನ್ನು ತ್ಯಜಿಸಿದ್ದಾರೆ. ಅವರ ಬಗ್ಗೆ ಲಕ್ಷಾಂತರ ಭಕ್ತರು ತಮ್ಮ ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ.ಸಾಯಿಬಾಬಾ ಅವರು ಆಂದ್ರದಲ್ಲಿ ಒಂದು ಜಿಲ್ಲೆಗೆ ನೀರುಣಿಸುವ ಹಾಗೂ ಉತ್ತಮವಾದ ಆಸ್ಪತ್ರೆಯನ್ನು ತೆರೆದು ಜನರ ಸೇವೆ ಮಾಡಿದ್ದಾರೆಂಬ ಬಗ್ಗೆ ಅವರ ಬಗ್ಗೆ ಮೆಚ್ಚುಗೆ ಇದೆ. ವೇದಸುಧೆಯಲ್ಲಿ ಬಳಗದ ಹಿರಿಯ ಸದಸ್ಯರಾದ ಶ್ರೀ ವಿ.ಆರ್.ಭಟ್ಟರು ಒಂದು ಉತ್ತಮವಾದ ಲೇಖನವನ್ನು ಬರೆದು ಅದರಲ್ಲಿ ಆರೋಗ್ಯಕರ ಚರ್ಚೆ ನಡೆದು ಶ್ರೀ ಕವಿನಾಗರಾಜ್, ಶ್ರೀಸುಧಾಕರಶರ್ಮರು, ಕವಿ ಸುರೇಶ್ ಇವರುಗಳು ಪಾಲ್ಗೊಂಡು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುತ್ತಾರೆ.ಯಾವಾಗ ಒಂದು ಲೇಖನವು ಹಲವು ಜನರ ಚರ್ಚೆಗೆ ಕಾರಣವಾಗುತ್ತದೋ ಅದು ಸಾರ್ಥಕವಾಯಿತೆಂದೇ ಅದರ ಅರ್ಥ. ಸತ್ಯವೆಂಬುದು ಯಾರೂ ಬದಲಾವಣೆ ಮಾಡಲು ಸಾಧ್ಯವಾಗದಂತಹ ಒಂದು ವಿಷಯ. ಆದರೂ ಜನರು ಅವರರವರ ಮನಸ್ಸಿಗೆ ಹಿತವೆನಿಸಿದ್ದನ್ನು "ಇದು ಸತ್ಯ" ವೆಂದು ಭಾವಿಸುತ್ತಾರೆ. ಇದು ಸಹಜ. ನನ್ನ ಮನ ಒಪ್ಪುವುದು ನನಗೆ ಸತ್ಯವಾಗಿ ತೋರುತ್ತದೆ. ನಿಮ್ಮ ಮನ ಒಪ್ಪುವುದು ನಿಮಗೆ ಸತ್ಯವಾಗಿ ತೋರುತ್ತದೆ. ಆದರೆ ನಿಜವಾಗಿ ಸತ್ಯವು ಬೇರೆಲ್ಲೋ ಇರುತ್ತದೆ. ವೇದಸುಧೆಯ ಮುಖ್ಯವಾದ ಒಂದು ಉದ್ಧೇಶವೆಂದರೆ ಯಾವುದೇ ವಿಚಾರವನ್ನು ಕುರುಡಾಗಿ ಒಪ್ಪಬಾರದು, ಅಲ್ಲದೆ ದೇವರ ಬಗ್ಗೆಯೂ ಕೂಡ ಭಯ ದೂರವಾಗಬೇಕು.ಇಂತಹ ಒಂದು ಮಾನಸಿಕತೆಯ ಜಾಗೃತಿಯಾದರೆ ಸಮಾಜಕ್ಕೆ ಅದು ಒಳ್ಳೆಯದಲ್ಲವೇ? ಪ್ರಸ್ತುತ ಚರ್ಚೆಯಲ್ಲಿರುವ ಶ್ರೀ ವಿ.ಆರ್.ಭಟ್ಟರ ಲೇಖನದ ಕೊಂಡಿ ಇಲ್ಲಿದೆ.http://vedasudhe.blogspot.com/2011/04/blog-post_25.html ಎಲ್ಲರೂ ಓದಲೇ ಬೇಕಾದ ಲೇಖನವಿದು. ದಯಮಾಡಿ ಓದಿ. ನಿಮ್ಮ ನಿಮ್ಮ ಪ್ರತಿಕ್ರಿಯೆಯನ್ನು ಕೊಡಿ. ನಿಮ್ಮ ಪ್ರತಿಕ್ರಿಯೆ ಅದು ನಿಮ್ಮ ವಿಚಾರವೂ ಆಗಬಲ್ಲದು. ಯಾರೂ ಕೂಡ ವಿಚಾರ ಭೇದವನ್ನು ವೈಯಕ್ತಿವಾಗಿ ತೆಗೆದುಕೊಳ್ಳುವುದು ಬೇಡ. ಅಂತೂ ಸತ್ಯಪಥದತ್ತ ಯಾರೂ ಕೊಂಡೊಯ್ಯಬಹುದು. ಎಲ್ಲರಿಗೂ ಬೇಕಾಗಿರುವುದು ಸತ್ಯಪಥ.

Friday, April 29, 2011

ಸಂಪ್ರದಾಯಗಳು ಸಂಕೋಲೆಗಳಾಗದಿರಲಿ

     ಕೈ  ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು ಕೈಗೆ ಬಳೆ ಹಾಕಿಕೊಳ್ಳದೆ ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ ಕಾಲವಿತ್ತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವರ ಪಾಡು ಅನುಭವಿಸಿದವರಿಗೇ ಗೊತ್ತು. ಆಕೆಗೆ ಶುಭ ಕಾರ್ಯಗಳಲ್ಲಿ ಆಹ್ವಾನವಿರುತ್ತಿರಲಿಲ್ಲ. ಆಕೆ ಎದುರಿಗೆ ಬಂದರೆ ಅಪಶಕುನವೆಂದು ಭಾವಿಸುವವರಿದ್ದರು. ಹೊಸ ಪೀಳಿಗೆಯವರಿಗೆ ಇಂತಹ ಅನಿಷ್ಟ ಸಂಪ್ರದಾಯದ ಪರಿಚಯ ಇರಲಾರದು. ಪ್ರಾರಂಭದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವುದು ನಿಂತರೂ ಕೈಗೆ ಬಳೆ ಹಾಕಿಕೊಳ್ಳಲು, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ, ಸುಧಾರಣೆಯಾಗಿದೆ. ಕಳೆದ ಎರಡು-ಮೂರು ದಶಕಗಳಿಂದೀಚೆಗೆ ಈ ಸಂಪ್ರದಾಯದ ಆಚರಣೆ ಕಂಡು ಬರುತ್ತಿಲ್ಲ. ಒಂದು ಅನಿಷ್ಟ ಸಂಪ್ರದಾಯದ ಅಂತ್ಯವಾಗಿರುವುದು ಸಮಾಧಾನದ ಸಂಗತಿ.
     ಸಂಪ್ರದಾಯವೆಂದರೆ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುವ ಆಚರಣೆಗಳು, ನಡವಳಿಕೆಗಳು. ಸರಿಯೋ, ತಪ್ಪೋ ವಿಚಾರ ಮಾಡದೆ ಅದನ್ನು ಮುಂದುವರೆಸಿಕೊಂಡು ಬರುವವರನ್ನು ಸಂಪ್ರದಾಯವಾದಿಗಳು ಎನ್ನುತ್ತಾರೆ. ಕೆಲವನ್ನು ಆಚರಿಸಿ ಕೆಲವನ್ನು ಕೈಬಿಡುವ ಅನುಕೂಲ/ಅವಕಾಶವಾದಿಗಳೂ ಇದ್ದಾರೆ. ಅರ್ಥವಿಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಸ್ವತಃ ಸಂಪ್ರದಾಯಗಳನ್ನು ಆಚರಿಸದಿದ್ದರೂ, ಅರ್ಥವಿಲ್ಲವೆಂದು ತಿಳಿದಿದ್ದರೂ, ಇತರರ ಸಲುವಾಗಿ ಅವನ್ನು ಬೆಂಬಲಿಸುವವರ ಸಂಖ್ಯೆ ಸಹ ಗಣನೀಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಎಲ್ಲರನ್ನೂ ಹೊಂದಿಸಿಕೊಂಡು, ಹೊಂದಿಕೊಂಡು ಸಮನ್ವಯ ಮಾಡಿ ಸದ್ವಿಚಾರ ತಿಳಿಸಲು ಹೆಣಗುವವರೂ ಇದ್ದಾರೆ. ಎಲ್ಲಾ ಸಂಪ್ರದಾಯಗಳೂ ಕೆಟ್ಟವಲ್ಲ; ಹಾಗೆಯೇ ಎಲ್ಲವೂ ಒಳ್ಳೆಯವು ಎಂದು ಹೇಳಲಾಗುವುದಿಲ್ಲ. ಯಾವ ಆಚರಣೆಗಳಿಂದ ಯಾರಿಗೂ ತೊಂದರೆಯಿಲ್ಲವೋ, ಯಾವುದರಿಂದ ಮನುಷ್ಯನ ಬೌದ್ಧಿಕ ವಿಕಾಸ, ಅಭಿವೃದ್ಧಿಗೆ ಸಹಕಾರವಾಗುವುದೋ, ಸಂತಸ ಹರಡುವುದೋ, ತಾರತಮ್ಯ ಇಲ್ಲದಿರುವುದೋ ಅಂತಹವುಗಳನ್ನು ಒಳ್ಳೆಯ ಸಂಪ್ರದಾಯಗಳೆನ್ನಬಹುದು. ಇದಕ್ಕೆ ತದ್ವಿರುದ್ಧವಾದ ಸಂಪ್ರದಾಯಗಳನ್ನು ಕೆಟ್ಟವು ಎಂದುಕೊಳ್ಳಬಹುದು. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ, ಈಗಂತೂ ಹೊಸ ಹೊಸ ಸಂಪ್ರದಾಯಗಳು, ಆಚರಣೆಗಳು ಚಾಲ್ತಿಗೆ ಬರುತ್ತಿವೆ, ಹಿಂದಿನ ಅನುಭವಗಳಿಂದ ಹೇಳುವುದಾದರೆ ಕ್ರಮೇಣ ಅವು ಗಟ್ಟಿಗೊಳ್ಳುತ್ತವೆ.

     ಬಾಲ ಗಂಗಾಧರನಾಥ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವ ಸಲುವಾಗಿ ಹುಟ್ಟುಹಾಕಿದ ಸಾರ್ವಜನಿಕ ಗಣೇಶ ಉತ್ಸವಗಳು ಇಂದು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಮೊದಲು ಊರಿಗೆ ಒಂದರಂತೆ ಇದ್ದುದು, ಈಗ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟು ಅಲ್ಲಿ ನಡೆಸುವ ಕಾರ್ಯಕ್ರಮಗಳು, ಪೈಪೋಟಿ, ವಂತಿಕೆ ವಸೂಲಿ, ವಿಸರ್ಜನೆ ಸಮಯದಲ್ಲಿ ಕುಡಿದು ಕುಣಿಯುವ ಯುವಕರು, ಮತೀಯ ಘರ್ಷಣೆಗಳು, ಇತ್ಯಾದಿಗಳನ್ನು ಗಮನಿಸಿದರೆ ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ ಎಂದು ಅನ್ನಿಸದೇ ಇರದು. ಒಳ್ಳೆಯ ರೀತಿಯಲ್ಲಿ ಆಚರಿಸುವವರು ಇದ್ದರೂ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಗಣೇಶೋತ್ಸವಗಳು ಮುಗಿಯುವವರೆಗೂ ಶಾಂತಿ, ಸುವ್ಯವಸ್ಥೆಗಳಿಗಾಗಿ ಸಂಬಂಧಿಸಿದವರು ಹಗಲೂ ರಾತ್ರಿ ಹೆಣಗುವ, ಇಂತಹ ಉತ್ಸವಗಳು (ಗಣೇಶೋತ್ಸವ ಮಾತ್ರ ಅಲ್ಲ, ಎಲ್ಲಾ ಮತೀಯ/ಧಾರ್ಮಿಕ ಉತ್ಸವಗಳು ಸೇರಿ) ಏಕಾದರೂ ಬರುತ್ತವೋ ಎಂದು ಅಂದುಕೊಳ್ಳುವ ಪರಿಸ್ಥಿತಿ ಇಂದು ಇದೆ. ನಾನು ಗಣೇಶೋತ್ಸವವನ್ನಾಗಲೀ, ಇಂತಹ ಇತರ ಉತ್ಸವಗಳನ್ನಾಗಲೀ ವಿರೋಧಿಸುತ್ತಿಲ್ಲ, ಅದನ್ನು ಆಚರಿಸಲಾಗುತ್ತಿರುವ ರೀತಿಯ ಬಗ್ಗೆ ಮಾತ್ರ ಬೆರಳು ತೋರಿಸುತ್ತಿದ್ದೇನೆ.

     ಸಂಕಷ್ಟಹರ ಗಣಪತಿ ಪೂಜೆಯನ್ನು ಇಂದು ಸಾಮೂಹಿಕ ಸನ್ನಿಯಂತೆ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರು ಇದನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ? ಹೆಚ್ಚಿನವರು ಸ್ವಸಹಾಯ ಪದ್ಧತಿಯ ಹೋಟೆಲ್ಲಿನಲ್ಲಿ ಹಣ ಕೊಟ್ಟು ಕಾಫಿ ಕುಡಿದಂತೆ ದೇವಸ್ಥಾನಕ್ಕೆ ಹೋಗಿ ಹಣ ಕೊಟ್ಟು ಚೀಟಿ ಬರೆಸಿ ಹೋಗುತ್ತಾರೆ, ಪ್ರಸಾದ ಕೊಡುವ ಸಮಯಕ್ಕೆ ಬಂದು ಕೈಮುಗಿದು ಪ್ರಸಾದ ಪಡೆದು ಹೋಗುತ್ತಾರೆ. ಪೂಜೆಯ ಸಮಯದಲ್ಲಿ ದೇವಸ್ಥಾನದಲ್ಲಿದ್ದವರೂ ಪರಸ್ಪರ ಮಾತುಕತೆಗಳಲ್ಲಿ ತೊಡಗಿರುತ್ತಾರೆ. ಇಂತಹ ಆಚರಣೆಯಿಂದ ಯಾರಿಗೆ ಪ್ರಯೋಜನ? ಯಾರ ಕಷ್ಟಗಳು ಪರಿಹಾರವಾಗುತ್ತದೆ? ಶ್ರದ್ಧೆಯಿಂದ, ಅರ್ಥ ತಿಳಿದುಕೊಂಡು ಮಾಡುವ ಕ್ರಿಯೆಗಳಿಂದ ಮಾತ್ರ ಫಲ ಸಿಗಲು ಸಾಧ್ಯವಲ್ಲವೇ? ಇಲ್ಲದಿದ್ದರೆ ಅವು ತೋರಿಕೆಗೆ ಮಾಡುವ ಆಚರಣೆಗಳು ಅಷ್ಟೆ. ಇಸ್ಲಾಮ್ ಮತ ಪ್ರಾರಂಭವಾದ ಸಂದರ್ಭದಲ್ಲಿ ಧ್ವನಿವರ್ಧಕವಿರಲಿಲ್ಲ. ಆದರೆ ಇಂದು ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿವರ್ಧಿಸಿ ನಮಾಜು, ಉಪದೇಶಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅದನ್ನು ಕೇಳಲು ಇಚ್ಛಿಸದವರಿಗೂ ಬಲವಂತವಾಗಿ ಕೇಳುವಂತೆ ಮಾಡುತ್ತಿರುವುದು ಒಂದು ರೀತಿಯ ಶಬ್ದಮಾಲಿನ್ಯವಲ್ಲವೇ?


     ಜಾತ್ರೆ, ಪೂಜೆ, ಇತ್ಯಾದಿಗಳ ಹೆಸರಿನಲ್ಲಿ ದೇವರನ್ನು ಸಂತುಷ್ಟಗೊಳಿಸುವ(?) ಕಾರಣದಿಂದ ಪ್ರಾಣಿಬಲಿ ನೀಡುವ ಸಂಪ್ರದಾಯ ಒಳ್ಳೆಯದೆಂದು ಹೇಳಬಹುದೆ? ಇದನ್ನು ಸಮರ್ಥಿಸುವ ಜನರಿಗೆ ಕಡಿಮೆಯೇನಿಲ್ಲ. ಶಿಕಾರಿಪುರದಲ್ಲಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಾತ್ರೆಯ ಸಮಯದಲ್ಲಿ ಕೋಣಬಲಿ ತಡೆಯಲು ಒಂದು ಗ್ರಾಮದಲ್ಲಿ ಪೋಲಿಸರ ನೆರವಿನೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ, ಗ್ರಾಮಸರಿಗೆ ಕಾನೂನಿನಲ್ಲಿ ಇರುವ ನಿಷೇಧ, ಉಲ್ಲಂಘಿಸಿದರೆ ಆಗುವ ಪರಿಣಾಮಗಳು, ಇತ್ಯಾದಿ ತಿಳುವಳಿಕೆ ಹೇಳಲು ಮುಂಚಿತವಾಗಿ ನಡೆಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಪಶುವೈದ್ಯರ ಸಹಾಯದಿಂದ ಸಿರಿಂಜಿನಲ್ಲಿ ಕೋಣನ ರಕ್ತವನ್ನು ತೆಗೆದು ಸಾಂಕೇತಿಕವಾಗಿ ದೇವಿಗೆ ಅರ್ಪಿಸಲು ಗ್ರಾಮದ ಮುಖ್ಯಸರು ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರೂ, ಪೋಲಿಸರ ಕಣ್ಗಾವಲು ಇದ್ದರೂ ಎಲ್ಲರ ಕಣ್ಣುತಪ್ಪಿಸಿ ಕೋಣಬಲಿ ನೀಡಿದ ಪ್ರಸಂಗ ಬೇಸರ, ಮುಜುಗರ ಉಂಟುಮಾಡಿತ್ತು. ಎಲ್ಲಾ ಮಾಧ್ಯಮಗಳಲ್ಲೂ ವಿಷಯ ಅತಿರಂಜಿತವಾಗಿ ಪ್ರಚಾರಗೊಂಡಿತು. ಕೆಲವರ ಮೇಲೆ ಪ್ರಕರಣ ದಾಖಲಿಸಿದರೂ ರಾಜಕೀಯ ನಾಯಕರ ಮಧ್ಯಪ್ರವೇಶ ಪ್ರಕರಣವನ್ನು ದುರ್ಬಲಗೊಳಿಸಿದ್ದು ಸುಳ್ಳಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡುವ ಸಲುವಾಗಿ ಪರವಾಗಿ ಮತ್ತು ವಿರೋಧವಾಗಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಳಸಿಕೊಂಡವು. ಅನಿಷ್ಟ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದವರೂ ಸಾತ್ವಿಕ ಕಾರಣಕ್ಕೆ ವಿರೋಧಿಸದೆ ವಿರೋಧಿಗಳನ್ನು ವಿರೋಧಿಸಲು ಮಾತ್ರ ಬಳಸಿದ್ದು ನೋವಿನ ವಿಷಯ. ಮಾಧ್ಯಮಗಳೂ ಕೆಸರೆರಚಾಟಕ್ಕೆ ಸಾಥ್ ನೀಡಿದವೇ ಹೊರತು, ಅವುಗಳಿಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಶಕ್ತಿಯಿದ್ದರೂ ಮಾಡಲಿಲ್ಲ. ಇಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಅಂಧ ಸಂಪ್ರದಾಯಗಳ ಕುರಿತು ತಿಳಿಸುವ ಸಲುವಾಗಿ ಕೆಲವನ್ನು ಮಾತ್ರ ಸಾಂಕೇತಿಕವಾಗಿ ಉದಾಹರಿಸಿದ್ದೇನೆ.
     ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕು ಅನ್ನುವುದಕ್ಕಿಂತ ಕೆಟ್ಟ ಸಂಪ್ರದಾಯಗಳನ್ನು ಗುರುತಿಸಿ ಅವುಗಳಿಂದ ದೂರ ಉಳಿಯಲು ಮತ್ತು ಸಾಧ್ಯವಾದರೆ ತಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯ. ಮಠ-ಮಂದಿರಗಳು, ಮಸೀದಿಗಳು, ಚರ್ಚುಗಳು, ಇತ್ಯಾದಿಗಳು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಶ್ರದ್ಧಾ ಕೇಂದ್ರಗಳಾಗಿವೆ. ಈ ಕೇಂದ್ರಗಳು ವಾಸ್ತವವಾಗಿ ಸತ್ಕರ್ಮಗಳನ್ನು ಪೋಷಿಸುವ, ಜ್ಞಾನ ಪಸರಿಸುವ ಕೆಲಸ ಮಾಡಬೇಕು. ವಿಷಾದದ ಸಂಗತಿಯೆಂದರೆ ಹೆಚ್ಚಿನವು ಋಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ, ವೈದ್ಯಕೀಯ ಸಂಸ್ಥೆಗಳನ್ನು, ಕಲ್ಯಾಣ ಮಂದಿರಗಳನ್ನು ಕಟ್ಟಿ ಹಣ ಮಾಡುವ ಕೇಂದ್ರಗಳಾಗಿವೆ. ತಿರಳಿಗಿಂತ ಸಿಪ್ಪೆಗೆ ಹೆಚ್ಚು ಮಾನ್ಯತೆ ಕೊಡಲಾಗುತ್ತಿದೆ. ನಿಜ, ತಿರುಳಿನ ರಕ್ಷಣೆಗೆ ಸಿಪ್ಪೆಯಿರಬೇಕು, ಆದರೆ ಸಿಪ್ಪೆಯೇ ತಿರುಳಾಗಬಾರದು. ಆ ಕಾರಣದಿಂದಾಗಿ ಉತ್ತರಾಧಿಕಾರಕ್ಕಾಗಿ ಕಚ್ಚಾಡುವ, ಒಡೆತನ ಸಾಧಿಸಬಯಸುವವರ ಕೂಟ ಅಲ್ಲಿ ಮನೆ ಮಾಡಿವೆ. ಮೂಲ ಉದ್ದೇಶ ಮರೆತು ಭೌತಿಕ ಆಸ್ತಿ, ಸಂಪತ್ತು ಕ್ರೋಢೀಕರಿಸಲು ನೀಡುವ ಮಹತ್ವವೇ ಇದಕ್ಕೆ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ.

     ನನಗೆ ಬಂದಿದ್ದ ಇ-ಮೇಲ್ ಒಂದರಿಂದ ರೂಢಿಗತ ಸಂಪ್ರದಾಯಗಳಿಗೆ ಹೇಗೆ ಮನಸ್ಸು ಒಗ್ಗಿಕೊಳ್ಳುತ್ತದೆ ಎಂಬುದಕ್ಕೆ ಅತ್ಯತ್ತಮ ಉದಾಹರಣೆ ಸಿಕ್ಕಿತು. ಅದೆಂದರೆ ಬಲಶಾಲಿ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಮರವೊಂದಕ್ಕೆ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಪ್ರಯತ್ನವೇ ಮಾಡುವುದಿಲ್ಲ. ಆನೆ ಎಷ್ಟು ಬಲಶಾಲಿಯೆಂದರೆ ಅದಕ್ಕೆ ಆ ಸರಪಳಿ ಮತ್ತು ಮರ ಲೆಕ್ಕವೇ ಅಲ್ಲ. ಅದು ಮನಸ್ಸು ಮಾಡಿದರೆ ಸರಪಳಿ ತುಂಡರಿಸಬಲ್ಲದು ಮತ್ತು ಮರವನ್ನು ಕಿತ್ತು ಬಿಸಾಡಬಲ್ಲದು. ಆದರೂ ಅದು ಮಾಡುವುದಿಲ್ಲ. ಏಕೆಂದರೆ ಆನೆ ಚಿಕ್ಕದಾಗಿದ್ದಾಗ ಅದನ್ನು ಅದೇ ರೀತಿ ಕಟ್ಟಿ ಹಾಕಲಾಗುತ್ತಿತ್ತು. ಚಿಕ್ಕದಾಗಿದ್ದರಿಂದ ಅದರಿಂದ ಬಿಡಿಸಿಕೊಳ್ಳಲು ಅದು ಎಷ್ಟೇ ಪ್ರಯತ್ನಿಸಿದರೂ ಆಗ ಆಗುತ್ತಿರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗಿ ಮರಕ್ಕೆ ಕಟ್ಟಿ ಹಾಕಿದರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂಬ ಭಾವ ಗಟ್ಟಿಗೊಂಡು ಅದು ದೊಡ್ಡದಾದ ಮೇಲೂ ಹಾಗೆ ಕಟ್ಟಿಹಾಕಿದರೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೇ ಇರಲಿಲ್ಲ. ನಮ್ಮ ಸ್ಥಿತಿ ಸಹ ಅದೇ ರೀತಿ ಇದೆ. ನಮಗೆ ವಿಚಾರ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಕೆಲವು ಸಂಪ್ರದಾಯಗಳು ಅರ್ಥಹೀನವೆಂದು ನಮಗೆ ತಿಳಿಯುತ್ತದೆ, ಮನಸ್ಸು ಮಾಡಿದರೆ ಅದನ್ನು ಧಿಕ್ಕರಿಸುವ, ಮುಂದುವರೆಸದಿರುವ ಶಕ್ತಿ ನಮಗಿದೆ, ಆದರೂ ನಾವು ಹಾಗೆ ಮಾಡುವುದಿಲ್ಲವೆಂಬುದು ವಿಷಾದದ ಸಂಗತಿ. 'ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳಲಾಗುವುದೇ' ಎಂಬ ಪ್ರಚಲಿತ ಗಾದೆ ಮಾತು ತಿಳಿಸುವುದೂ ವಿಚಾರ ಮಾಡಿ ಮುಂದುವರೆಯಿರಿ ಎಂದೇ. ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕಬೇಕಾಗಿಲ್ಲ. ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಹಿತವೆನಿಸುವ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬಹುದು, ಆದರೆ ಅನಿಷ್ಠ ಸಂಪ್ರದಾಯಗಳನ್ನು ನಿಲ್ಲಿಸುವ ಮತ್ತು ಸದ್ಯಕ್ಕೆ ಒಳ್ಳೆಯದೆನಿಸಿದರೂ ಕಾಲಾನುಕಾಲಕ್ಕೆ ಅದರ ಆಚರಣೆಯಿಂದ ಆಗುವ ಪರಿಣಾಮಗಳನ್ನೂ ಗಮನಿಸಿ ಯೋಗ್ಯತಾನುಸಾರ ನಿರ್ಣಯಿಸಿ ಅಂತಹವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸುವುದು ಇಂದಿನ ಅಗತ್ಯವಾಗಿದೆ. ಸಂಪ್ರದಾಯಗಳು ನಮ್ಮನ್ನು ಕಟ್ಟಿಹಾಕುವ ಸರಪಳಿಗಳಾಗದಿರಲಿ; ನಮ್ಮನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸುವ ದಾರಿದೀಪಗಳಾಗಲಿ.
***************
-ಕ.ವೆಂ.ನಾಗರಾಜ್.

ಯೋಚಿಸಲೊ೦ದಿಷ್ಟು...೩೨

೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ!
೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು.. ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹಾಗೂ ನಮ್ಮ ಮಾನಸಿಕ ಭಾವನೆಗಳನ್ನು ಆಗಾಗ ವಿಮರ್ಶೆ ಮಾಡಿಕೊಳ್ಳುತ್ತಲೇ ಇರಬೇಕು.
೩.ದೇವರು ನಮ್ಮ ಹೃದಯ ಮತ್ತು ನಾಲಿಗೆಗಳು ಮೃದುವಾಗಿರಲೆ೦ದೇ ಅವುಗಳಿಗೆ ಎಲುಬನ್ನು ನೀಡಲಿಲ್ಲ!
೪. “ಬೇರೊಬ್ಬರ ಸಹಾಯ ಪಡೆಯದೇ.. ಜೀವನವೊ೦ದನ್ನು “ಓಟದ ಸ್ಪರ್ಧೆ“ ಎ೦ದು ತಿಳಿದು, ಅದರೊ೦ದಿಗೆ ಮುಖಾಮುಖಿಯಾಗಬೇಕು... ಎಲ್ಲರೂ ನಮ್ಮನ್ನು ಅನುಸರಿಸಲು ಆರ೦ಭಿಸುತ್ತಾರೆ“!- ಹಿಟ್ಲರ್
೫.ಒಮ್ಮೊಮ್ಮೆಏನು ಹೇಳಿದೆವೆನ್ನುವುದು ಮುಖ್ಯವಾಗಲಾರದು.. ಹೇಗೆ ಹೇಳಿದೆವೆನ್ನುವುದೇ ಮುಖ್ಯವಾಗುತ್ತದೆ!! ಸಮಸ್ಯೆಗಳು ಹುಟ್ಟಿಕೊಳ್ಳುವುದೂ ಹಾಗೆಯೇ..!!
೬. ನಾವು ಕಳೆದುಕೊಳ್ಳುತ್ತಿರುವುದನ್ನು “ಉಳಿಸಿಕೊಳ್ಳುವ“ ಹಾಗೂ ಇನ್ನೇನನ್ನೂ ಕಳೆದುಕೊಳ್ಳಲು “ಬಾಕಿ ಇಲ್ಲ“ ಎನ್ನುವ ಸ೦ಧರ್ಭಗಳಲ್ಲಿ ಸಾಮಾನ್ಯವಾಗಿ ನಿಜವನ್ನೇ ನುಡಿಯುತ್ತೇವೆ!
೭. ಸಾಮಾನ್ಯರು ದೇವರಲ್ಲಿ “ ತ೦ದೆ ಯಾವುದೇ ಸಮಸ್ಯೆಯೂ ನನ್ನನ್ನು ಕಾಡದಿದರಲಿ“ ಎ೦ದು ಬೇಡಿಕೊ೦ಡರೆ, ವಿಶೇಷ ವ್ಯಕ್ತಿಗಳೆನ್ನಿಸಿಕೊ೦ಡವರು “ ತ೦ದೆ ಸಮಸ್ಯೆಗಳನ್ನೆದುರಿಸುವ ಶಕ್ತಿಯನ್ನು ಸದಾ ನನಗೆ ನೀಡು“ ಎ೦ದು ಬೇಡಿಕೊಳ್ಳುತ್ತಾರೆ!
೮. ನಾವು ಆಡುವ ಮಾತುಗಳ ಕುರಿತು ಚಿ೦ತಿಸಬೇಕೇ ವಿನ: ನಾವು ಚಿ೦ತಿಸಿದ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಬಾರದು!
೯. ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಒಮ್ಮೆ ಸೂರ್ಯ ಹೊಳೆದರೆ, ಮತ್ತೊಮ್ಮೆ ಮಳೆ ಸುರಿಯುತ್ತದೆ ! ಆದರೆ ಅವರಿಬ್ಬರ ಉಪಸ್ಥಿತಿ ಹಾಗೂ ಸೇರುವಿಕೆಯಿ೦ದಲೇ ನಯನ ಮನೋಹರ ಕಾಮನಬಿಲ್ಲಿನ ಸೃಷ್ಟಿಯಾಗುವುದು!
೧೦. ಎಷ್ಟೇ ರಹಸ್ಯಗಳನ್ನು ಮುಚ್ಚಿಟ್ಟುಕೊ೦ಡರೂ ಆತ್ಮೀಯರು ಆ ರಹಸ್ಯಗಳನ್ನು ಹೊರಗೆಳೆಯುವಲ್ಲಿ ಸಫಲರಾಗುತ್ತಾರೆ!
೧೧. ನೈಜ ಪ್ರೀತಿಯಿದ್ದಲ್ಲಿ ಮಾತ್ರವೇ ಆತ್ಮೀಯರ ನಡುವೆ ಉಚ್ಛ ಮಟ್ಟದ ಸ೦ತಸ ಹಾಗೂ ದು:ಖಗಳೆ೦ಬ ಭಾವನೆಗಳು ಹರಿದಾಡಲು ಸಾಧ್ಯ!
೧೨. ಯಾವುದೇ ವ್ಯಕ್ತಿಯೂ ಸಮಯವನ್ನು ಪ್ರೀತಿಸಲಾರ. ತಾನು ಯಾರೊ೦ದಿಗೆ ಸಮಯವನ್ನು ಕಳೆಯಬೇಕೆ೦ದು ಇಚ್ಚಿಸುತ್ತಾನೋ ಅವರನ್ನು ಪ್ರೀತಿಸುತ್ತಾನೆ- ರೋಮಿಯೋ
೧೩. ನಮ್ಮ ಸ೦ಗಾತಿಯೊ೦ದಿಗಿನ ಎಲ್ಲಾ ಜೀವನ ಶರತ್ತುಗಳನ್ನೂ ಒಪ್ಪಿಕೊ೦ಡರೆ ಎಲ್ಲಾ ಸ೦ಸಾರಿಗಳ ಬದುಕೂ ಸು೦ದರವೇ!!!
೧೪. ನಮ್ಮ ಹಿ೦ದಿನ ದಿನಗಳನ್ನು ತೃಪ್ತಿಯಿ೦ದ ಕಳೆದು ಮು೦ದಿನ ದಿನಗಳನ್ನು ಭರವಸೆಯಿ೦ದ ಎದುರ್ಗೊಳ್ಳಬೇಕು.
೧೫. ಸಾಧನೆಯ ಹಾದಿಯಲ್ಲಿ ಒದಗಿಬರುವ ಯಾವುದೇ ಅವಕಾಶವನ್ನೂ ಕೈಬಿಡಬಾರದು! ಎದುರಾದ ಮೊದಲ ಅವಕಾಶವನ್ನು ಕೈಚೆಲ್ಲಿ ಎರಡನೆಯ ಅವಕಾಶಕ್ಕೆ ಕಾದು ಕುಳಿತರೆ, ಒಮ್ಮೊಮ್ಮೆ ಎರಡನೆಯ ಅವಕಾಶ ಒದಗುವುದೇ ಇಲ್ಲ.. ಅಕಸ್ಮಾತ್ ಒದಗಿದಲ್ಲಿ ಅದು ಮೊದಲನೆಯ ಅವಕಾಶಕ್ಕಿ೦ತಲೂ ಕಠಿಣ ಶ್ರಮವನ್ನು ಬೇಡುತ್ತದೆ!!

Wednesday, April 27, 2011

ವೇದೋಕ್ತ ಜೀವನ ಪಥ: ಮಾನವಧರ್ಮ - ೧


ಸಹೃದಯರೇ,
                   ಮೂರು ಶಾಶ್ವತ ಪದಾರ್ಥಗಳ, ಅನಾದಿ ತತ್ತ್ವಗಳ - ಅಂದರೆ, ಪರಮಾತ್ಮ, ಜೀವಾತ್ಮ ಮತ್ತು ಪ್ರಕೃತಿ - ಪರಿಚಯ ಈಗಾಗಲೇ ಮಾಡಿಕೊಡಲಾಗಿದೆ. ಇನ್ನುಮುಂದೆ ಮಾನವಧರ್ಮದ ಬಗ್ಗೆ ಪಂಡಿತ ಸುಧಾಕರ ಚತುರ್ವೇದಿಯವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ, ಜಿಜ್ಞಾಸೆ ಮುಂದುವರೆಸೋಣ.

ವೇದೋಕ್ತ ಜೀವನ ಪಥ: ಮಾನವಧರ್ಮ - ೧

     ಪರಮಾತ್ಮ ಮತ್ತು ಪ್ರಕೃತಿಯ ನಡುವೆ, ಅಲ್ಪಜ್ಞನೂ, ಅಲ್ಪಶಕ್ತನೂ, ಪರಿಚ್ಛಿನ್ನನೂ ಆದ ಜೀವಾತ್ಮನಿದ್ದಾನೆ. ಪರಮಾತ್ಮ ಸರ್ವಥಾ ನಿರಾಕಾರ, ನಿರ್ವಿಕಾರ, ಅವನು ಪತನ ಹೊಂದುವ ಪರಿಸ್ಥಿತಿ ಮೂರು ಕಾಲಕ್ಕೂ ಇಲ್ಲ. ಪ್ರಕೃತಿ ಜಡವಾದ ಕಾರಣ, ಪೂರ್ಣತಃ ಅನುಭವರಹಿತ. ಅದರ ಉತ್ಥಾನ-ಪತನಗಳಿಗೆ ಏನೂ ಅರ್ಥವಿಲ್ಲ. ಉಳಿದವನು ಜೀವಾತ್ಮ. ಅವನು ಸ್ವರೂಪತಃ ಪರಿಚ್ಛಿನ್ನನಾಗಿರುವುದರಿಂದ ಅವನ ಶಕ್ತಿಗಳಿಗೂ, ಜ್ಞಾನಕ್ಕೂ ಸಹ ಒಂದು ಪರಿಮಿತಿಯಿದೆ. ಈ ಪರಿಮಿತಿಯ ಕಾರಣದಿಂದ ಜೀವಾತ್ಮನು ತನ್ನ ಉದ್ಧಾರಕ್ಕಾಗಿ ಭಗವಂತನಿಂದ ಕೊಡಲ್ಪಟ್ಟ ಮನಸ್ಸು, ಇಂದ್ರಿಯಗಳು, ದೇಹ ಇವುಗಳನ್ನು ತನ್ನ ವಶದಲ್ಲಿಟ್ಟುಕೊಳ್ಳುವುದನ್ನು ಬಿಟ್ಟು, ತಾನೇ ಅವುಗಳಿಗೆ ವಶೀಭೂತನಾಗಿ ಹೋಗುತ್ತಾನೆ. ಈ ದೌರ್ಬಲ್ಯದ ಪರಿಣಾಮವಾಗಿ ಅವನು ಭಗವಂತನ ಸೃಷ್ಟಿಯನ್ನು ಸುಖ-ಶಾಂತಿಗಳ ಬೀಡಾಗಿ ಮಾಡುವ ಬದಲು, ಅದನ್ನು ನಾರಕೀಯ ಸಂಕಟಗಳ ವೇದಿಕೆಯನ್ನಾಗಿ ಮಾಡುತ್ತಾನೆ. ಈ ರೀತಿ, ತನ್ನ ಇಹವನ್ನು ಕೆಡಿಸಿಕೊಳ್ಳುವುದಲ್ಲದೆ, ಇತರರ ಇಹವನ್ನೂ ಹಾಳುಮಾಡುತ್ತಾನೆ. ಇಹವನ್ನೇ ಸುಧಾರಿಸಿಕೊಳ್ಳಲಾರದವನ ಮುಂದೆ ಪರದ ಪ್ರಶ್ನೆ ನಿರರ್ಥಕ. ಏಕೆಂದರೆ, ಪರದ ಆಧಾರ ಇಹವೇ ಆಗಿರುತ್ತದೆ. ಪರವನ್ನು ಗುರಿಯಾಗಿಟ್ಟುಕೊಂಡು ಇಹವನ್ನು ಹದಗೊಳಿಸಿಕೊಳ್ಳುವುದು, ಸುಧಾರಿತವಾದ ಇಹದ ಆಧಾರದ ಮೇಲೆ ಪರವನ್ನು ಸಾಧಿಸುವುದು. ಬೇರೆಯ ರೀತಿಯಲ್ಲಿ ಹೇಳಬೇಕೆಂದರೆ, ಇಹ-ಪರಗಳೆರಡನ್ನೂ ಸಾಧಿಸಿಕೊಳ್ಳುವುದು. ಇದಕ್ಕೆ ಒಂದು ನಿರ್ದಿಷ್ಟ ಮಾರ್ಗವನ್ನು ಅವಲಂಬಿಸಬೇಕಾಗುತ್ತದೆ. ಆ ನಿರ್ದಿಷ್ಟ ಮಾರ್ಗವನ್ನು ಋಗ್ವೇದ ಈ ರೀತಿ ವರ್ಣಿಸುತ್ತದೆ:-

ತೇ ನಸ್ತ್ರಾಧ್ವಂ ತೇsವತ ತ ಉ ನೋ ಅಧಿ ವೋಚತ |
ಮಾ ನಃ ಪಥಃ ಪಿತ್ರ್ಯಾನ್ಮಾನವಾದಧಿ ದೂರಂ ನೈಷ್ಟ ಪರಾವತಃ ||
(ಋಕ್. ೮.೩೦.೩)

     ವಿದ್ವಜ್ಜನರೇ! [ತೇ ನಃ ತ್ರಾಧ್ವಮ್] ಆ ನೀವು ನಮಗೆ ಬಲ ಕೊಡಿರಿ. [ತೇ ಆವತ] ಆ ನೀವು ರಕ್ಷಿಸಿರಿ. [ತ ಉ ನೋ ಅಧಿ ವೋಚತ] ಆ ನೀವೇ ನಮಗೆ ಉಪದೇಶ ಕೊಡಿರಿ. [ನಃ ಪಿತ್ರ್ಯಾತ್ ಮಾನವಾತ್ ಪರಾವತಃ ಪಥಃ ಅಧಿ] ನಮ್ಮನ್ನು ಪಾಲಕನ ಶಕ್ತಿಸಂಪನ್ನವಾದ, ಮಾನವೀಯವಾದ, ಪರಪ್ರಾಪ್ತಿ ಸಾಧಕವಾದ ಮಾರ್ಗದಿಂದ, [ಮಾ ದೂರಂ ನೈಷ್ಟ] ದೂರಕ್ಕೆ ಕರೆದೊಯ್ಯಬೇಡಿ.

     ವೇದಗಳ ಶೈಲಿ ತನ್ನದೇ ಆದ ಅದ್ಭುತ ಶೈಲಿ. ಇಹ-ಪರಗಳೆರಡನ್ನೂ ಶಾಧಿಸುವ ನಿರ್ದಿಷ್ಟ ಮಾರ್ಗವನ್ನು ತಿಳಿಯಲಪೇಕ್ಷಿಸುವ ನಿಜವಾದ ಜಿಜ್ಞಾಸುಗಳು ಜ್ಞಾನಿಗಳಲ್ಲಿ ಬೇಡಿಕೊಳ್ಳುವ ರೀತಿಯದು. ಪ್ರತಿಯೊಬ್ಬ ಧರ್ಮಜಿಜ್ಞಾಸುವಿನ ಹೃದಯಾಂತರಾಳದಲ್ಲಿಯೂ ಅಡಗಿರಬೇಕಾದ ಮೂರು ಅಂಶಗಳು ಈ ಮಂತ್ರದಲ್ಲಿ ಸ್ಪಷ್ಟವಾಗಿ ವರ್ಣಿತವಾಗಿದೆ. ಧರ್ಮದ ಆ ನಿರ್ದಿಷ್ಟವಾದ ಮಾರ್ಗ, ಈ ಲೋಕದಲ್ಲಿ ಪಾಲನೆ-ಪೋಷಣೆ ನೀಡುವ ಶಕ್ತಿ ಹೊಂದಿರಬೇಕು. ಎರಡನೆಯದಾಗಿ, ಅದು ಯಾವುದಾದರೊಂದು ಸಂಪ್ರದಾಯಕ್ಕೆ ಅಥವಾ ಜನಾಂಗಕ್ಕೆ ಅನ್ವಯಿಸುವ ಮಾರ್ಗವಾಗಿರದೆ, ಸಂಪೂರ್ಣ ಮಾನವ ಜಾತಿಗೆ ಅನ್ವಯಿಸುವ ಮಾರ್ಗವಾಗಿರಬೇಕು. ಮೂರನೆಯದಾಗಿ, ಅದು ಆಧ್ಯಾತ್ಮಿಕ ವಿಕಾಸವನ್ನೂ ಸಾಧಿಸಿ, ಪರಲೋಕವನ್ನೂ ಕೂಡ ಗಳಿಸಿಕೊಡುವ ಮಾರ್ಗವಾಗಿರಬೇಕು. ಈ ಮೂರರಲ್ಲಿ ಯಾವುದೇ ಒಂದು ಅಂಶಕ್ಕೆ ಲೋಪ ಬಂದರೂ, ಅದು ಪೂರ್ಣವಾದ ಧರ್ಮಮಾರ್ಗವೆನ್ನಿಸಲಾರದು. ಇಂತಹ ಇಹ-ಪರ ಸಾಧಕವಾದ ಮಾನವ ಪಥವನ್ನೇ 'ಧರ್ಮ' ಎಂದು ಕರೆಯುತ್ತಾರೆ. ಯಾವುದೇ ಒಂದು ಮತ-ಸಂಪ್ರದಾಯದಲ್ಲಿಯೂ, ಧರ್ಮದ ಯಾವುದಾದರೊಂದು ಅಂಶ ಅಡಕವಾಗಿರಬಲ್ಲದೇ ಹೊರತು, ಅದರ ಸಂಕುಚಿತ ಪರಿಧಿಯಲ್ಲಿ ಸಂಪೂರ್ಣ ಧರ್ಮದ ವಿಶಾಲ ತತ್ತ್ವ ಹಿಡಿಸಲಾರದು. ಮತಗಳು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಎಂದು ಹಲವಾರು ಇರಬಲ್ಲವು. ಅವುಗಳ ಹಿಂದೆ ವ್ಯವಚ್ಛೇದಕವಾದ ವಿಶೇಷಣಗಳನ್ನೂ ಉಪಯೋಗಿಸಬಹುದು. ಅದರೆ, ಧರ್ಮ ಸಾರ್ವಭೌಮ ಹಾಗೂ ಸಾರ್ವಕಾಲಿಕವಾದ ಏಕಮಾತ್ರ ತತ್ತ್ವವಾಗಿರುವುದರಿಂದ ಅದರ ಹಿಂದೆ ಇಂತಹ ಯಾವ ವಿಶೇಷಣಗಳನ್ನೂ ಉಪಯೋಗಿಸಲು ಸಾಧ್ಯವಿಲ್ಲ. ವಿಶೇಷಣವಿಡಲೇಬೇಕಾದರೆ ಅದು ಜ್ಞಾನಾಶ್ರಿತವಾದುದರಿಂದ 'ವೈದಿಕ ಧರ್ಮ' ಎನ್ನಬಹುದು. ಸಂಪೂರ್ಣ ಮಾನವ ಸಮಾಜಕ್ಕೆ ಅನ್ವಯಿಸಬಹುದಾದ ಕಾರಣ 'ಮಾನವ ಧರ್ಮ' ಎನ್ನಬಹುದು. ಈ ಧರ್ಮ, ಜೀವಾತ್ಮನು ಪತಿತನಾಗದಂತೆ ಅವನನ್ನು ಎತ್ತಿಹಿಡಿಯುವುದರಿಂದ ಅದನ್ನು ಧರುಣ ಎಂದರೆ ಧಾರಕತತ್ತ್ವ ಎಂದು ವೇದಗಳಲ್ಲಿ ಕರೆದಿದೆ. ಉದಾಹರಣೆಗೆ ಋಗ್ವೇದ - ದಿವೋ ಧರ್ಮನ್ ಧರುಣೀ
(ಋಕ್.೫.೧೫.೨.) - ಧರುಣ ಎಂದರೆ ಧಾರಕವಾದ ಜ್ಯೋತಿಯ ಧರ್ಮದಲ್ಲಿ ಎಂದು ಹೇಳಿರುವುದನ್ನು ನಾವು ನೋಡಬಹುದು. ಧರ್ಮದ ಉದ್ದೇಶ್ಯ, ಕರ್ಮ-ಭೋಗ-ಯೋನಿಯಲ್ಲಿರುವ ಮಾನವನ ಆತ್ಮವನ್ನು ಪತನ ಹೊಂದಲು ಅವಕಾಶ ಕೊಡದೆ, ಆಧ್ಯಾತ್ಮಿಕ ದೃಷ್ಟಿಯಿಂದ ಅವನನ್ನು ಎತ್ತಿ ಹಿಡಿದು, ಇಹ-ಪರಗಳೆರಡನ್ನೂ ಸಾಧಿಸುವ ಸಾಮರ್ಥ್ಯವನ್ನು ಅವನಲ್ಲಿ ತುಂಬಿಕೊಡುವುದೇ ಆಗಿದೆ.

Monday, April 25, 2011

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ....


ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ....

ಯಾವುದನ್ನು ಇಷ್ಟಪಡುವುದಿಲ್ಲವೋ ಅದೇ ಬಂದು ನಮ್ಮನ್ನು ಅಪ್ಪಿಕೊಳ್ಳುವುದು ಪ್ರಕೃತಿಯ ವೈಚಿತ್ರ್ಯಗಳಲ್ಲೊಂದು. ಕಷ್ಟ ಬೇಡಾ ಎಂದು ಹಂಬಲಿಸಿದರೆ ಕಷ್ಟಗಳ ಜಡಿಮಳೆಯೇ ಸುರಿಯುವುದು, ಯಾವುದು ಉತ್ತೀರ್ಣವಾಗಲಿ ಎನ್ನುತ್ತೇವೋ ಅದು ಅನುತ್ತೀರ್ಣಗೊಳ್ಳುವುದು ಇದು ಅನೂಚಾನವಾಗಿ ಎಲ್ಲರೂ ಅನುಭವಿಸುವ ಸತ್ಯ. ಅಂತೆಯೇ ಇವತ್ತಿನ ಈ ಸಂಗತಿ ಸಂತೋಷದಿಂದ ಶ್ರುತಪಡಿಸುತ್ತಿರುವುದಲ್ಲ; ಬದಲಾಗಿ ಅನಿವಾರ್ಯವಾಗಿ ಬರೆಯಬೇಕಾಗಿ ಬಂದ ಪ್ರಸಂಗ. ಹಲವಾರು ದಿನಗಳಿಂದ ಯಾವುದನ್ನು ಬರೆಯುವ ಸಂಭವ ಸದ್ಯಕ್ಕೆ ಬಾರದೇ ಇರಲಿ ಎಂದು ಬಯಸುತ್ತಿದ್ದೆನೋ ಅದು ಬಂದುಬಿಟ್ಟಿದೆ-ಅದೆಂದರೆ ನಮ್ಮೆಲ್ಲರಿಗೆ ಚಿರಪರಿಚಿತರಾದ ಪುಟ್ಟಪರ್ತಿ ಸತ್ಯಸಾಯಿಬಾಬಾ ಅವರ ದೇಹಾಂತ್ಯ.

ಆಂಧ್ರ ಪ್ರದೇಶದ ಅತೀ ಉಷ್ಣ ತಾಪಮಾನವುಳ್ಳ ಜಾಗದಲ್ಲಿ ಬಡಕುಟುಂಬದಲ್ಲಿ ಜನಿಸಿದ ಒಬ್ಬ ಸಾಮಾನ್ಯ ಹುಡುಗ ಜಗತ್ತಿನಾದ್ಯಂತ ಕೋಟ್ಯಂತರ ಜನರ ಆಶಾಕಿರಣವಾಗಿ ಬೆಳಗುವುದು ಸಾಧ್ಯವೆಂದರೆ ಅದೊಂದು ಅತಿಮಾನುಷ ಶಕ್ತಿಯ ಆವಾಸ ಎನ್ನಲು ಅಡ್ಡಿಯಿಲ್ಲ. ಹಿಂದೆ ರಾಮ, ಕೃಷ್ಣ ಹೀಗೆಲ್ಲಾ ದೇವರು ಅವತಾರ ಎತ್ತಿ ಬಂದಂತೇ ಯಾವುದೋ ಋಷಿ ಅಥವಾ ಮುನಿ ತನ್ನ ತಪಸ್ಸನ್ನು ಭುವಿಯ ಜನರ ಸದುಪಯೋಗಕ್ಕೆ ಧಾರೆ ಎರೆಯುವ ಮನಸ್ಸಾಗಿ ಇಂತಹ ರೂಪದಲ್ಲಿ ಜನಿಸಿದ್ದು ನಿಜವೆನಿಸುತ್ತದೆ. ಮಾಧ್ಯಮಗಳವರು ಏನೇ ಹೇಳಿದರೂ ಕೋಟ್ಯಂತರ ಜನರು ಪ್ರತಿಯೊಬ್ಬರೂ "ನಮ್ಮ ಕಷ್ಟ ಕಳೆಯಿತು" " ನಮ್ಮ ಸಮಸ್ಯೆ ಬಗೆಹರಿಯಿತು " ಎಂದರೆ ಸುಮ್ಮನೇ ಹಾಗೆ ಹೇಳಲಿಕ್ಕೆ ಯಾರಿಗೂ ತಲೆಕೆಟ್ಟಿಲ್ಲ; ಅವರಲ್ಲಿ ಅನೇಕರು ಗಣ್ಯಾತಿಗಣ್ಯರೂ ಸಂಪದ್ಭರಿತರೂ ಆಗಿದ್ದವರಿದ್ದು ಘನವಿದ್ವಾಂಸರೂ ಬಹಳ ಜನರಿದ್ದರೆಂಬುದರಲ್ಲಿ ಅನುಮಾನವಿಲ್ಲ.

ಯಾವುದೇ ಶಾಲೆಗೆ ಹೋಗದೇ ಯಾವ ವ್ಯಾಸಂಗವನ್ನೂ ಮಾಡದೇ ಜಗತ್ತಿನ ಹಲವು ಭಾಷೆಗಳನ್ನು ಮಾತನಾಡುವುದು, ಸಾಗರಗರ್ಭದಂತಹ ವೇದಗಳನ್ನು ಓದದೇ ಪ್ರವಚನದಲ್ಲಿ ಅವುಗಳ ಸಾರವನ್ನು ಶ್ಲೋಕಸಹಿತ ಹೇಳುವುದು, ಯಾರಿಗೂ ನೋವಾಗದ ರೀತಿಯಲ್ಲಿ ಹೇಗೆ ಬದುಕಬೇಕೆಂಬುದಕ್ಕೆ ಸರಿಯಾದ ಸೂತ್ರಗಳನ್ನು ರೂಪಿಸುವುದು ಸಾಧ್ಯವಾಗುವುದು ಯಾವುದೋ ಜನಸಾಮಾನ್ಯನಿಗಲ್ಲ; ಅವರಲ್ಲಿರುವ ಆ ಅವ್ಯಕ್ತ ಶಕ್ತಿ ತನ್ನನ್ನು ತೋರ್ಪಡಿಸಿಕೊಂಡು ಜಗತ್ತಿನಲ್ಲಿ ಯಾರ್ಯಾರಿಗೆ ತೊಂದರೆ ಇದೆಯೋ ಅವರೆಲ್ಲಾ ಬಂದು ಬಗೆಹರಿಸಿಕೊಳ್ಳಲಿ ಎಂಬುದನ್ನು ಸೂಚಿಸಲಿಕ್ಕಾಗಿ ಬಾಬಾ ಪವಾಡ ಮಾಡಬೇಕಾಗಿ ಬಂತು. ಪವಾಡದ ಪ್ರತ್ಯಕ್ಷದರ್ಶಿಗಳು ಹಲವರು ಹೇಳುವಂತೇ ಎಲ್ಲಾ ಪವಾಡಗಳೂ ಅನಿರೀಕ್ಷಿತವಾಗಿ ಆ ಕ್ಷಣಕ್ಕೆ ಅಲ್ಲಲ್ಲೇ ಘಟಿಸುವಂಥವು ಮತ್ತು ಹೆಚ್ಚಾಗಿ ಬಾಬಾ ಕೈ ತಿರುವಿದಾಗ ನಡೆಯುತ್ತಿದ್ದ ಪವಾಡಗಳು.

ಹಿಂದೆ ನಾನು ಅನೇಕಾವರ್ತಿ ಹೇಳಿದಂತೇ ಈ ಲೋಕದಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯವೆಂಬ ೫ ಕೋಶಗಳಿವೆ, ಆದರೆ ಮಾನವನ ಜ್ಞಾನ ಪ್ರಯತ್ನದಿಂದ ವಿಜ್ಞಾನಮಯ ಕೋಶದವರೆಗೂ ಹೋಗುತ್ತದೆ. ಶ್ರೇಷ್ಠ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಆನಂದಮಯ ಕೋಶದ ಅರಿವುಂಟಾಗುತ್ತದೆ. ಅದನ್ನರಿತ ನಿಜವಾದ ಜ್ಞಾನಿಗೆ ಪವಾಡನಡೆಸುವುದು ಬಹಳ ಸುಲಭ. ಅಂಥವರಿಗೆ ಸಂಕಲ್ಪಸಿದ್ಧಿ ಕೂಡ ಪ್ರಾಪ್ತವಾಗುತ್ತದೆ. [ಅಂದರೆ ಕೇವಲ ಅವರು ಸಂಕಲ್ಪಿಸಿದರೂ ಸಾಕು ಹೇಗೋ ಆ ಕೆಲಸ ಸಲೀಸಾಗಿ ನಡೆದುಹೋಗುತ್ತದೆ] ಆದರೆ ಈ ಪವಾಡಗಳು ವಿಜ್ಞಾನಕ್ಕೆ ಧಕ್ಕುವುದಿಲ್ಲ. ವಿಜ್ಞಾನ ಅವುಗಳಿಗೆ ಕಾರಣ ಹುಡುಕಿದರೂ ಸಿಗುವುದಿಲ್ಲ ಯಾಕೆಂದರೆ ಅವು ವಿಜ್ಞಾನಮಯಕೋಶದ ಪರಿಮಿತಿಯನ್ನೂ ಮೀರಿದ ಜಾಗದಲ್ಲಿ ಹುಟ್ಟಿದಂಥವು! ಇದನ್ನೇ ಸೂಕ್ಷ್ಮವಾಗಿ ಹೇಳುತ್ತಾ ಬಾಬಾ ಆಧ್ಯಾತ್ಮವನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಡಿ ಎಂದರು, ಹಾಗೊಮ್ಮೆ ಅದನ್ನು ನಡೆಸಿದರೂ ಯಾವುದೋ ಅವಘಡಗಳು ಸಂಭವಿಸಬಹುದಿತ್ತೇನೋ. ಈ ಜಗತ್ತಿನಲ್ಲಿ ಶೂನ್ಯ ಎಂಬುದೇ ಇಲ್ಲಾ ಎಂದು ಅವರು ಹೇಳಿದರು, ಅದರರ್ಥ ಬಾಬಾ ಕೈತಿರುವಿದಾಗ ಇನ್ನಾವುದೋ ಅಗೋಚರ ಅತಿಮಾನುಷ ಹಸ್ತ ಅವರು ಸಂಕಲ್ಪಿಸಿದ ವಸ್ತುವನ್ನು ಅವರ ಕೈಗೆ ನೀಡುತ್ತಿತ್ತು! ಲೌಕಿಕ ಬುದ್ಧಿವಂತಿಕೆ ಜಾಸ್ತಿಯಾದ ನಾವು ಎಲ್ಲವನ್ನೂ ಕೇವಲ ವೈಜ್ಞಾನಿಕ ಪರೀಕ್ಷೆಗೇ ಒಳಪಡಿಸಿದೆವು ಆದರೆ ಆತ್ಮ ಎಂದರೇನು? ಅದರ ಅಸ್ಥಿತ್ವ ಯಾವ ರೂಪದಲ್ಲಿರುತ್ತದೆ? ಅದು ಶರೀರದಲ್ಲಿ ಯಾವ ಜಾಗದಲ್ಲಿರುತ್ತದೆ? ಯಾವಾಗ ಎಲ್ಲಿಂದ ಹೇಗೆ ಬರುತ್ತದೆ ಮತ್ತು ಯಾವಾಗ ಎಲ್ಲಿಗೆ ಹೇಗೆ ತೆರಳುತ್ತದೆ ? -ಈ ಪ್ರಶ್ನೆಗಳಿಗೆ ನಮ್ಮ ಅತ್ಯಾಧುನಿಕ ವಿಜ್ಞಾನ ಇವತ್ತಿಗೂ ಗಪ್ ಚುಪ್ ! ಸೌರಮಂಡಲದ ಆಕಾಶಕಾಯಗಳನ್ನು ಗುರುತ್ವಾಕರ್ಷಣ ಶಕ್ತಿ ನಿರ್ಮಿಸಿ ಹಾಗೆ ನಿಯಮಿತಗೊಳಿಸಿದವರು ಯಾರು ? --ಈಗಲೂ ನಮ್ಮ ವಿಜ್ಞಾನ ಊಹೂಂ ! ಅಂದಮೇಲೆ ವಿಜ್ಞಾನವೇ ಎಲ್ಲವೂ ಅಲ್ಲ ಅದರ ಹೊರತಾಗಿ ಇನ್ನೇನೋ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ನ್ಯಾಯ ಇದಾಗಿದೆ.

ಒಂದೆರಡು ಸಣ್ಣ ಪವಾಡಗಳ ಉದಾಹರಣೆಯನ್ನು ಬಳಸಿಕೊಳ್ಳುತ್ತೇನೆ:

೧. ಕರ್ನಾಟಕ ವಿಧಾನಸಭೆಯ ಮಾಜಿಸ್ಪೀಕರ್ ಆದಂತಹ ರಮೇಶ್‍ಕುಮಾರ್ ಅವರು ತಾನು ಸ್ವತಃ ನೋಡಿದ್ದನ್ನು ಹೇಳಿದ್ದಾರೆ: ಒಮ್ಮೆ ಪುಟ್ಟಪರ್ತಿಗೆ ಅವರು ಹೋಗಿದ್ದಾಗ ನಡೆದ ದರ್ಶನದ ಬಳಿಕ ಬಾಬಾ ಕೆಲವರನ್ನು ಆಪ್ತ ಸಂದರ್ಶನಕ್ಕೆ ಒಳಗೆ ಕರೆದರಂತೆ. ಅವರಲ್ಲಿ ರಮೇಶ್ ಕೂಡಾ ಒಬ್ಬರು. ಅವರ ಜೊತೆಗೆ ಸಾಲಿನಲ್ಲಿ ಅಮೇರಿಕದ ಪಾಮೋಲಿವ್ ಕಂಪನಿಯ ಯಜಮಾನರು ಮತ್ತವರ ಮಡದಿಕೂಡ ಇದ್ದರಂತೆ. ಆ ಹೆಂಗಸಿನ ಹತ್ತಿರ ನಿನಗೇನು ಬೇಕು ಎಂದು ಬಾಬಾ ಕೇಳಿದಾಗ " ಐ ವಾಂಟ್ ಪೀಸ್ " [ನನಗೆ ಶಾಂತಿ ಬೇಕು] ಎನ್ನುತ್ತಾ ಚೆಕ್‍ಬುಕ್ ತೆಗೆದು ೫೦೦ಕೋಟಿ ರೂಪಾಯಿಗಳ ಚೆಕ್ ಒಂದನ್ನು ಬಾಬಾಗೆ ಬರೆದುಕೊಟ್ಟಳಂತೆ! ಬಾಬಾ ಮೊದಲು "ಗುಡ್" ಎಂದರಂತೆ. ಆಮೇಲೆ ಆ ಚೆಕ್ಕನ್ನು ಹರಿದು ಚಿಕ್ಕ ಚಿಕ್ಕ ತುಂಡುಮಾಡಿ ಕೈಲಿ ಭಸ್ಮವಾಗಿ ಪರಿವರ್ತಿಸಿ ಅದನ್ನೇ ಅವಳಕೈಗೆ ಹಾಕಿ " ಟೇಕ್ ಪೀಸ್, ಡೋಂಟ್ ಎವರ್ ಡಿಸ್ಪ್ಯೂಟ್ ವಿತ್ ಯುವರ್ ಹಸ್ಬಂಡ್, ಲರ್ನ್ ಹೌ ಟು ಲಿವ್ ವಿದೌಟ್ ಹರ್ಟಿಂಗ್ ಎನಿಬಡಿ [ ಈ ಭಸ್ಮ ತಗೋ, ಗಂಡನ ಜೊತೆ ಜಗಳವಾಡುವುದನ್ನು ಬಿಟ್ಟುಬಿಡು ಯಾರಿಗೂ ನೋವುಂಟುಮಾಡದ ರೀತಿಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿ ] " ಎಂದುಬಿಟ್ಟರಂತೆ! ಹಣದ ಆಸೆ ಇದ್ದರೆ ಯಾರಾದರೂ ತಮಗೆ ಕೊಟ್ಟ ೫೦೦ ಕೋಟಿ ರೂಪಾಯಿಗಳ ಚೆಕ್ಕನ್ನು ಭಸ್ಮಮಾಡುತ್ತಿದ್ದರೇ?

೨. ಬೆಂಗಳೂರಿನಲ್ಲಿ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡವರಲ್ಲಿ ಆದಿಚುಂಚನಗಿರಿ ಮಠಾಧೀಶರು, ದೇವೇಗೌಡರು ಮತ್ತು ಸಾಯಿಬಾಬಾ ಇದ್ದರಂತೆ. [ಇದು ಆದಿಚುಂಚನಗಿರಿ ಮಠಾಧೀಶರೇ ಸ್ವತಃ ಅನುಭವದಿಂದ ಹೇಳಿದ್ದು!] ಬಾಬಾರ ಕೈಲಿರುವ ಕರ್ಚೀಫ್ ಕೆಳಗೆಬಿತ್ತು. ಆಗ ಪಕ್ಕದಲ್ಲಿ ಕುಳಿತಿದ್ದ ದೇವೇಗೌಡರು ಅದನ್ನು ಎತ್ತುಕೊಡಲು ಮುಂದಾದಾಗ ಆಗಿನ್ನೂ ಕರ್ನಾಟಕದ ಸಿ.ಎಂ. ಆಗಿದ್ದ ಗೌಡರನ್ನು " ಇರ್ಲಿ ಬಿಡಿ ಪ್ರೈಮ್ ಮಿನಿಷ್ಟ್ರೇ , ಬಿಡಿ ಪ್ರೈಮ್ ಮಿನಿಷ್ಟ್ರೇ, ಬಿಡಿ ಪ್ರೈಮ್ ಮಿನಿಷ್ಟ್ರೇ " ಎಂದು ಬಾಬಾ ಹೇಳಿದರಂತೆ. ಎಲ್ಲರೂ ಅದೇನೋ ಬಾಬಾ ನೆನಪಿರದೇ ತಪ್ಪುಚ್ಚರಿಸುತ್ತಿದ್ದಾರೆ ಎಂದುಕೊಂಡರು. ಆದರೆ ಅದಾದ ೧೫ ದಿನಗಳಲ್ಲೇ ಹರದನ ಹಳ್ಳಿಯ ಹೈದ ಭಾರತದ ಪ್ರಧಾನಿಪಟ್ಟವನ್ನು ಅಲಂಕರಿಸಿದ್ದು ಈಗ ಇತಿಹಾಸ!

ಇಂತಹ ಪವಾಡಗಳಿಂದ ಬಾಬಾಗೆ ಯಾವ ಲಾಭವೂ ಇರಲಿಲ್ಲ. " ನೀವು ಯಾಕೆ ಉಂಗುರ, ನೆಕ್ಲೇಸ್ ಎಲ್ಲಾ ಸೃಷ್ಟಿಸಿಕೊಡುತ್ತೀರಿ ? " ಎಂದು ಯಾರೋ ಕೇಳಿದಾಗ ಬಾಬಾ ಹೇಳಿದ್ದು ಹೀಗೆ- " ನೀವು ಅತ್ಯಂತ ಪ್ರೀತಿಪಾತ್ರರಿಗೆ ಎಷ್ಟೋ ಸರ್ತಿ ಪ್ರೀತಿಯಿಂದ ಗಿಫ್ಟ್ ಕೊಡುವುದಿಲ್ಲವೇ ? ತಂದೆ ಮಕ್ಕಳಿಗೆ ಏನಾದರೂ ತಂದುಕೊಡುವುದಿಲ್ಲವೇ ? ಅದೇ ರೀತಿಯಲ್ಲಿ ಪ್ರೀತಿಯಿಂದ ಅವರ ಖುಷಿಗಾಗಿ ಹಾಗೆ ಕೊಡುತ್ತೇನೆ " ! ಇದನ್ನು ಪುಷ್ಟೀಕರಿಸಲು ನಾವು ಇತಿಹಾಸ ಕೆದಕಿದರೆ ಬಾಬಾ ಪ್ರಚಾರಪ್ರಿಯರೂ ಆಗಿರಲಿಲ್ಲ! ಅವರು ವಿದೇಶಕ್ಕೆ ಹೋಗಿದ್ದು ಒಮ್ಮೆಮಾತ್ರ-ಉಗಾಂಡಾಕ್ಕೆ. ಅಲ್ಲಿನ ಜನರಿಗೆ ಅಲ್ಲಿಗೆ ಹೋದಾಗ ಹೇಳಿದರಂತೆ " ನಾನು ನಿಮ್ಮನ್ನು ನನ್ನತ್ತ ಆಕರ್ಷಿಸಲು ಬಂದಿಲ್ಲ, ನಿಮ್ಮ ನಿರ್ವ್ಯಾಜ ಪ್ರೀತಿಕಂಡು ನಿಮ್ಮನ್ನೆಲ್ಲಾ ನೋಡಿ ಸಂತೋಷ ಹಂಚಿಕೊಳ್ಳುವ ಮನಸ್ಸಾಗಿ ಬಂದಿದ್ದೇನೆ. " ಅದೇ ಮೊದಲು ಮತ್ತು ಅದೇ ಕೊನೆ-ಮತ್ತೆ ಬಾಬಾ ವಿದೇಶಗಳಿಗೆ ಹೋಗಲೇ ಇಲ್ಲ. ಜಗತ್ತಿನ ಹಲವಾರು ದೇಶಗಳ ಜನರೇ ಅವರನ್ನು ಹುಡುಕುತ್ತಾ ಅವರಿದ್ದೆಡೆಗೇ ಬಂದರು; ಸಹಾಯ ಪಡೆದರು.

"ಲವ್ ಆಲ್ ಸರ್ವ್ ಆಲ್" ಇದು ಅವರ ಬೋಧನೆ. ಅದನ್ನು ಆಚರಿಸಿಯೂ ತೋರಿಸಿದರು. ಸರಕಾರಗಳು ಮಾಡಲಾಗದ ಕೆಲಸಗಳು ಅವರಿಂದ ನಡೆದವು. ಹಳ್ಳಿಗಳಲ್ಲಿ ಬಡಜನರಿಗೆ ಗ್ರಾಮಸೇವೆ ನಡೆಯಿತು: ಜೀವನಾವಶ್ಯಕ ವಸ್ತುಗಳು, ಬಟ್ಟೆಗಳು ಮುಂತಾದವು ನೀಡಲ್ಪಟ್ಟವು. ನೀರಿಲ್ಲದ ಜಿಲ್ಲೆಗಳ ಹಾಹಾಕಾರ ತಣಿಸಲು ನೀರು ಸರಬರಾಜು ಮಾಡುವ ಯೋಜನೆಗಳು ಶಾಶ್ವತವಾಗಿ ಕಾರ್ಯಗತವಾದವು. ದಿಕ್ಕಿಲ್ಲದ ಬಡಜನರಿಗೆ ಅವರ ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಿಶ್ಶುಲ್ಕ ಆಸ್ಪತ್ರೆಗಳು ಸ್ಥಾಪಿತವಾದವು. ಅನಕ್ಷರಸ್ಥರಿಗೆ ಶಾಲೆಗಳು-ಶಿಕ್ಷಣ ಸಂಸ್ಥೆಗಳು ರೂಪತಾಳಿದವು. ಇವೆಲ್ಲಾ ನಡೆಯುತ್ತಲೇ ಇವೆ. ಅವರು ಯಾವ ರಾಜಕೀಯ ಪಕ್ಷವನ್ನಾಗಲೀ ಯಾವುದೇ ಒಂದು ಮತವನ್ನಾಗಲೀ ಆತುಕೊಂಡವರಲ್ಲ. ಸರ್ವಧರ್ಮಗಳ ಸಕಲದೇಶಗಳ ಮಾನವರನ್ನು ಏಕರೂಪದಿಂದ ನೋಡಿದರು ಬಾಬಾ. ಹೆಣ್ಣುಮಕ್ಕಳಿಗೂ ವೇದ ಬೋಧಿಸಿ ಉಪನಯನ ಮಾಡಿಸಿದ ಔದಾರ್ಯ ಮತ್ತು ಪರಿಜ್ಞಾನ ಅವರದ್ದು. " ದೇಹಿ " ಎಂದು ಬಂದರೆ ಇಲ್ಲಾ ಎನ್ನಬಾರದು ಎಂಬ ಭಾರತೀಯ ಆರ್ಷೇಯ ಪದ್ಧತಿಯನ್ನು ಸತತವಾಗಿ ಅನುಷ್ಠಾನದಲ್ಲಿಟ್ಟ ಒಬ್ಬರೇ ಸಂತ ಬಾಬಾ ಎಂದರೆ ತಪ್ಪಾಗಲಿಕ್ಕಿಲ್ಲ.

ಮಾಧ್ಯಮಗಳು ಆಗಾಗ ಹಲವು ವಿಷಯಗಳನ್ನು ಮನಸೋ ಇಚ್ಛೆ ವಿಕೃತವಾಗಿ ಬರೆದವು. ಬಾಬಾ ಹಾಗೆ ಹೀಗೆ ಎಂದೆಲ್ಲಾ ನೂರೆಂಟು ಇಲ್ಲದ್ದನ್ನು ಹೇಳಿದವು. ಆದರೂ ನಿಜಕ್ಕೂ ಹೇಳುತ್ತೇನೆ ಕೇಳಿ ನನ್ನಂತರಂಗ ಅವುಗಳನ್ನು ಪ್ರಶ್ನಿಸುತ್ತಲೇ ಇತ್ತು. ’ಬಾಬಾ ದೈವಾಂಶ ಸಂಭೂತರು’ ಎನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿತ್ತು. ಆದರೂ ಮರುಳು ಮನಸ್ಸು ಏನುಮಾಡಿತು ಬಲ್ಲಿರೋ ? ವ್ಯಾವಹಾರಿಕವಾಗಿ ಪುಟ್ಟಪರ್ತಿಯ ಯಾವುದೋ ವಸತಿ ನಿಲಯಕ್ಕೆ ನಾವೆಲ್ಲಾ ಕೆಲವರು ಹೋಗಿದ್ದರೂ ’ಪ್ರಶಾಂತಿ ನಿಲಯ’ದ ಗೇಟನ್ನು ನಾನು ಕಂಡಿದ್ದರೂ ಅದರೊಳಗೆ ಹೋಗಲು ನನ್ನ ಮರುಳು ಮನಸ್ಸು ಆಗ ಬಿಡಲೇ ಇಲ್ಲ. ಬಾಬಾ ಒಂದೊಮ್ಮೆ ಹೇಳಿದ್ದರಂತೆ " ನನ್ನನ್ನು ನೇರವಾಗಿ ದರ್ಶಿಸಲೂ ಪಡೆದುಬರಬೇಕು " ಎಂಬುದಾಗಿ. ಹೀಗಾಗಿ ನಾನು ಪಡೆದಿರದ ಆ ಭಾಗ್ಯ ನನಗೆ ಆ ಅವಕಾಶ ನೀಡಲಿಲ್ಲ-ಅದಕ್ಕಾಗಿ ಪಶ್ಚಾತ್ತಾಪವಾಗುತ್ತಿದೆ. ನೋಡಿ ಸಮಯವೇ ಹೀಗೆ: ಯಾರಿಗೂ ಕಾಯುವುದಿಲ್ಲ. ಬಾಬಾ ಜನಿಸಿದ್ದರು, ಅವರ ಕರ್ತವ್ಯ ಮುಗಿಯಿತು. ಈಗ ಮರಳಿಯೇ ಬಿಟ್ಟರು. ಮತ್ತೆ ಬಾಬಾ ಬೇರೇ ದೇಹದಲ್ಲಿ ಜನಿಸಬಹುದು; ಅದು ಬೇರೇ ಪ್ರಶ್ನೆ. ಆದರೆ ಇವತ್ತಿನವರೆಗೆ ಈ ದೇಹದಿಂದಿದ್ದ ಬಾಬಾ ಈಗ ಈ ಶರೀರವನ್ನು ತ್ಯಜಿಸಿಬಿಟ್ಟಿದ್ದಾರೆ. ಈಗ ಜೀವಂತ ಬಾಬಾ ಮತ್ತೆ ನೋಡಲು ಸಿಗುವರೇ ? ಸಮಯ ಮೀರಿಹೋಯಿತು. ಅದಕ್ಕೇ ಯಾವುದಕ್ಕೂ ವಿವೇಚಿಸಿ ನಡೆಯಬೇಕು ಎನ್ನುತ್ತಾರೆ.

ಇನ್ನು ಅಷ್ಟೆಲ್ಲಾ ಪವಾಡ ನಡೆಸುವ ಕೋಟ್ಯಂತರ ಭಕ್ತರ ಸಂಕಷ್ಟ ಪರಿಹರಿಸುವ ಬಾಬಾ ತಾನೇ ತಿಂಗಳಕಾಲ ಆಸ್ಪತ್ರೆಯಲ್ಲಿ ಸಾದಾ ಮನುಷ್ಯನೊಬ್ಬ ಮಲಗಿದಂತೇ ಆ ತೊಂದರೆ ಈ ತೊಂದರೆ ಎನ್ನುತ್ತಾ ಮಲಗಿದ್ದು ಯಾಕೆ-ಅವರಿಗೆ ಅವರೇ ಪರಿಹಾರ ಮಾಡಿಕೊಳ್ಳಲಾಗುತ್ತಿರಲಿಲ್ಲವೇ ? --ಇದು ಹಲವರ ಪ್ರಶ್ನೆ. ಮನುಷ್ಯರೂಪದಲ್ಲಿ ಜನಿಸಿದ ಯಾವುದೇ ಆತ್ಮಕ್ಕೆ ಐಹಿಕ ಬಾಧೆಗಳು ಸಹಜ. ಅನೇಕಾವರ್ತಿ ಇಂಥಾ ಪುಣ್ಯಾತ್ಮರು ತಮ್ಮ ಶಿಷ್ಯಗಣದ ನೋವನ್ನು ತಾವು ಪಡೆದು ಅನುಭವಿಸಿ ಅವರಿಗೆಲ್ಲಾ ನಲಿವನ್ನೂ ಸುಖವನ್ನೂ ನೀಡುತ್ತಾರೆ. ತೊಂದರೆಗಳು ರಾಮನನ್ನಾಗಲೀ ಕೃಷ್ಣನನ್ನಾಗಲೀ, ಏಸು-ಬುದ್ಧ-ಮಹಾವೀರ-ಪೈಗಂಬರ ಇಂತಹ ಯಾರನ್ನೇ ಆಗಲಿ ಬಿಡಲಿಲ್ಲ. ಹಲವು ಋಷಿಗಳೂ ಸನ್ಯಾಸಿಗಳೂ ಅನೇಕ ಸಂಕಟಗಳನ್ನು ಅನುಭವಿಸಿದ್ದಾರೆ. ಅದರಂತೇ ಬಾಬಾ ದೇಹ ವಿಸರ್ಜಿಸಲು ಕಾರಣಬೇಕಿತ್ತು. ಅವರು ಯಾವುದೋ ಒಂದು ತಿಥಿ-ಮಿತಿಗಾಗಿ ಕಾದಿದ್ದರು. ಇಂದು ಆ ಘಳಿಗೆ ಕೂಡಿಬಂತು; ಹೊರಟುಬಿಟ್ಟಿದ್ದಾರೆ. ಸಾಮಾನ್ಯವಾಗಿ ಮಹಾತ್ಮರು ದೇಹವನ್ನು ವಿಸರ್ಜಿಸುವಾಗ ಹೇಳುತ್ತಾ ಇರುವುದಿಲ್ಲ. ಹೇಳದೇ ಇದ್ದರೇ ಹಲವು ಭಕ್ತರು ನೋವನ್ನು ಅನುಭವಿಸುತ್ತಾರೆ-ಇನ್ನು ಹೇಳಿಬಿಟ್ಟರೆ ಎಷ್ಟೊಂದು ಜನ ಸುತ್ತ ನೆರೆದು ದೇಹವಿಸರ್ಜನೆಗೆ ತಡೆಯಾಗಬಹುದೆಂಬ ಕಾರಣದಿಂದ ಕರ್ತವ್ಯ ಮುಗಿದ ನಂತರ ಸುಮ್ಮನೆ ತೆರಳಿಬಿಡುತ್ತಾರೆ.

ಇವತ್ತಿನ ಜಗಕ್ಕೆ ಬೇಕಾದ ಮಿಕ್ಕಿದ್ದೆಲ್ಲವನ್ನೂ ನಾವು ಪಡೆದಿದ್ದೇವೆ; ಪಡೆಯುವವರಿದ್ದೇವೆ. ಆದರೆ ಎಲ್ಲರೂ ಒಂದೇ ಎಂಬ ಏಕೋಭಾವಮಾತ್ರ ಇಲ್ಲ. ಜಗತ್ತು ಸ್ಥಿರವಲ್ಲ, ನಾವು ಶಾಶ್ವತವಲ್ಲ, ಈ ಜಗತ್ತಿನಲ್ಲಿ ನಾವು ಯಾವಲೆಕ್ಕವೂ ಅಲ್ಲ, ಜಗತ್ತನ್ನಾಳುವ ಶಕ್ತಿಯನ್ನು ಆರಾಧಿಸುವ ಮೊದಲ ಹೆಜ್ಜೆಯಾಗಿ ಎಲ್ಲರನ್ನೂ ಪ್ರೀತಿಸಲು ಕಲಿಯಬೇಕು, ಎಲ್ಲರಿಗೂ ಹಂಚಿ ಬದುಕಲು ಕಲಿಯಬೇಕು-ಎಂಬ ಉದಾತ್ತ ತತ್ವಗಳನ್ನು ಸರಳ ರೀತಿಯಲ್ಲಿ ಅನುಸರಿಸಿ ಮಾನವ ಸೇವೆಯೇ ಮಾಧವ ಸೇವೆ ಎಂಬುದನ್ನು ಎತ್ತಿಹಿಡಿದ ಬಾಬಾ ತಾನೊಬ್ಬ ಶ್ರೇಷ್ಠಜೀವಿ ಎಂಬುದನ್ನು ತಮ್ಮ ಬದುಕಿನ ಆದರ್ಶದಿಂದ ತೋರಿಸಿದ್ದಾರೆ. ಪುಟ್ಟಪರ್ತಿಯಲ್ಲಿ ಇರುವ ಶಿಸ್ತು, ಸಂಯಮ, ನೀತಿ-ನಿಯಮಗಳನ್ನು ಅವಲೋಕಿಸಿದರೆ ಸರಕಾರ ನಡೆಸುವ ರಾಜಕಾರಣಿಗಳು ಕಲಿಯಬಹುದಾದ ಪಾಠಗಳು ಹಲವು.

ನಾನು ಬಾಬಾ ಭಕ್ತನಾಗಿರಲಿಲ್ಲ. ಆದರೆ ಅವರ ಚರ್ಯೆಗಳನ್ನು ಗಮನಿಸುತ್ತಾ ಬಂದ ನನ್ನಂತರಂಗ ಯಾಕೋ ಅವರನ್ನು ನೆನೆಯುವಂತೇ ಮಾಡುತ್ತಿತ್ತು. ಇನ್ನು ಪುಟ್ಟಪರ್ತಿಯಲ್ಲಿ ಅವರ ಸಮಾಧಿಯೇ ಹೊರತು ಜೀವಂತವಾಗಿ ಅವರನ್ನು ನೋಡುವುದು ಸಾಧ್ಯವಿಲ್ಲವಲ್ಲ. ಈ ಘಳಿಗೆಯಲ್ಲಾದರೂ ಮಲಿನವಾದ ಮನಸ್ಸಿನ ಕೊಳೆಯನ್ನು ನಾಶಮಾಡುವ ಸಲುವಾಗಿ ಹೊರಟುನಿಂತ ಬಾಬಾರವರಿಗೆ ಜಗದ ಎಲ್ಲರಪರವಾಗಿ ಈ ಕೆಳಗಿನ ಶ್ಲೋಕದೊಂದಿಗೆ ಸಾಷ್ಟಾಂಗ ವಂದನೆಗಳು,ಅಭಿನಂದನೆಗಳು-

ಶರೀರಂ ಸುರೂಪಂ ಯಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||

Saturday, April 23, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ - ೩

ಪ್ರಕೃತಿಯ ವರ್ಣನೆಯನ್ನು ಅಥರ್ವವೇದ ಹೀಗೆ ಮಾಡುತ್ತದೆ:-


ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ ||
(ಅಥರ್ವ. ೧೦.೮.೩೦)


     [ಏಷಾ] ಈ ಪ್ರಕೃತಿಯು, [ಸನತ್ನೀ] ಸನಾತನವಾದುದು. [ಸನಮೇವ] ಅನಾದಿ ಕಲದಿಂದಲೇ, [ಜಾತಾ] ಪ್ರಸಿದ್ಧವಾದುದು. [ಏಷಾ ಪುರಾಣೀ] ಈ ಅನಾದಿ ಪ್ರಕೃತಿಯು, [ಸರ್ವಂ ಪರಿ ಬಭೂವ] ಎಲ್ಲ ಸ್ಪಷ್ಟ ಪದಾರ್ಥಗಳಿಗಿಂತ ಮೊದಲಿದ್ದಿತು. [ಉಷಸಃ] ಸಂಕಲ್ಪಮಯನಾದ ಪ್ರಭುವಿನ ಇಚ್ಛೆಯಂತೆ, [ವಿಭಾತೀ ಮಹೀ ದೇವೀ] ವಿವಿಧ ರೂಪದಲ್ಲಿ ಪ್ರಕಾಶಕ್ಕೆ ಬರುವ, ಮಹತ್ತತ್ವವಾದ ಈ ಸರ್ವದಾತ್ರೀ ಪ್ರಕೃತಿಯು, [ಸಾ] ತಾನಾಗಿ, [ಏಕೇನ ಏಕೇನ ಮಿಷತಾ] ಕಣ್ಣು ರೆಪ್ಪೆ ಹೊಡೆಯುವ ಪ್ರತಿಯೊಂದು ಪ್ರಾಣಿಯ ಮೂಲಕವೂ, [ವಿಚಷ್ಟೇ] ಕಂಡು ಬರುತ್ತದೆ, ಕೆಲಸ ಮಾಡುತ್ತಿದೆ, ಮಾತನಾಡುತ್ತಿದೆ.

     ಈ ಮಂತ್ರ ಪ್ರಕೃತಿಯ ಅನಾದಿತ್ವವನ್ನು ಎತ್ತಿ ಹಿಡಿಯುತ್ತಿದೆ. ಸ್ವತಃ ಜಡವಾದ ಕಾರಣ, ತಾನೇ ಏನನ್ನೂ ಮಾಡಲಾರದ, ಪ್ರಭುಸಂಕಲ್ಪದಿಮದ ಜಗದ್ರೂಪ ತಾಳಿ, ಬೆಳಕಿಗೆ ಬರುವಂತಹುದು. ಅದು ತತ್ತ್ವವನ್ನು ನೋಡಬಲ್ಲ ವೈಜ್ಞಾನಿಕರೊಂದಿಗೆ - ಮೂಕಭಾಷೆಯಲ್ಲೇ ಇರಲೊಲ್ಲದೇಕೆ - ಮಾತನಾಡುತ್ತದೆ, ಇಣಿಕಿ ನೋಡುತ್ತದೆ.


      ವೇದಗಳಲ್ಲಿ ವಾದಗಳನ್ನು - ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶೂನ್ಯವಾದ, ಸಂದೇಹವಾದ, ಅಜ್ಞೇಯವಾದ ಮೊದಲಾದುವುಗಳನ್ನು - ಕಾಣಲು ಯತ್ನಿಸುವುದು ಕೇವಲ ಬೌದ್ಧಿಕ ವ್ಯಾಯಾಮ ಮಾತ್ರ. ವೇದಗಳಲ್ಲಿರುವುದು ಸತ್ಯದ ಪ್ರಕಾಶನ ಮಾತ್ರ. ಯಾವ ವಾದವೂ ಇಲ್ಲ. ಪರಮಾತ್ಮ, ಜೀವಾತ್ಮ, ಪ್ರಕೃತಿ - ಈ ಮೂರೂ ಅನಾದಿ, ಅನಂತ. ಅದೇ ಕಾರಣದಿಂದ ನಿತ್ಯ, ಶಾಶ್ವತ. ಪರಮಾತ್ಮ ಸದಾ ಏಕರೂಪ, ಜೀವಾತ್ಮ ಸದೇಹ-ವಿದೇಹ ಸ್ಥಿತಿಗಳನ್ನುಳ್ಳವನು. ಪ್ರಕೃತಿ, ಕಾರಣ-ಕಾರ್ಯರೂಪಗಳಲ್ಲಿ ಪರಿಣಾಮ ಹೊಂದುವ ಜಡತತ್ತ್ವ. ಪರಮಾತ್ಮ ಸಚ್ಚಿದಾನಂದಸ್ವರೂಪ, ಜೀವಾತ್ಮ ಸಚ್ಚಿತ್ಸ್ವರೂಪ, ಪ್ರಕೃತಿ ಸತ್ಸ್ವರೂಪಿಣಿ. ಇದೊಂದೇ ಸಾರಿಯಲ್ಲ ಸೃಷ್ಟಿಯಾಗಿರುವುದು. ಅನಾದಿ ಕಾಲದಿಂದಲೂ ಸೃಷ್ಟಿ-ಸ್ಥಿತಿ-ಪ್ರಳಯಗಳು ಆಗುತ್ತಾ ಬಂದಿವೆ.


ಸೂರ್ಯಾಚಂದ್ರಮಸೌ ಧಾತಾ ಯಥಾಪೂರ್ವಮಕಲ್ಪಯತ್ |
ದಿವಂ ಚ ಪೃಥಿವೀಂ ಚಾಂತರಿಕ್ಷಮಥೋ ಸ್ವಃ ||
(ಋಕ್. ೧೦.೧೯೦.೩)


     [ಅಸೌ ಧಾತಾ] ಈ ಸರ್ವಾಧಾರನಾದ ಪರಮಾತ್ಮನು, [ಯಥಾ ಪೂರ್ವಂ] ಮೊದಲಿನಂತೆಯೇ, [ಸೂರ್ಯಾ ಚಂದ್ರಮಸೌ] ಸೂರ್ಯ-ಚಂದ್ರರನ್ನೂ, [ದಿವಂ ಚ] ದ್ಯುಲೋಕವನ್ನೂ, [ಪೃಥಿವೀಂ] ಪೃಥಿವಿಯನ್ನೂ, [ಅಂತರಿಕ್ಷಂ] ಅಂತರಿಕ್ಷವನ್ನೂ, [ಅಥ ಉ] ಹಾಗೆಯೇ [ಸ್ವಃ] ಆನಂದಮಯ ಸ್ಥಿತಿಯನ್ನು, [ಅಕಲ್ಪಯತ್] ರಚಿಸಿದನು.

     ಹಿಂದೆ ಸೃಷ್ಟಿಗಳಾಗಿವೆ. ಮುಂದೆ ಆಗುತ್ತಾ ಹೋಗುತ್ತದೆ. ಸೃಷ್ಟಿಯೂ ಕೂಡ ಪ್ರವಾಹ ರೂಪದಿಂದ ಅನಾದಿ-ಅನಂತ.


     ಮೂರು ಶಾಶ್ವತ ಪದಾರ್ಥಗಳ, ಅನಾದಿ ತತ್ತ್ವಗಳ ಪರಿಚಯ ಪಡೆದುದಾಯಿತು. ಇನ್ನು ಮುಂದುವರೆಯೋಣ. ಧರ್ಮದ ಸ್ವರೂಪವನ್ನು ಅರ್ಥ ಮಾಡಿಕೊಳ್ಳೋಣ.
**************************

Thursday, April 21, 2011

ವೈದಿಕವೆಂದು ಮಾಡುವ ಅಷ್ಟೂ 100% ಅವೈದಿಕ!!


ವೇದಗಳಲ್ಲಿ ಈಗ ಬ್ರಾಹ್ಮಣರು ನಡೆಸುವ ಮರಣೋತ್ತರ ಕರ್ಮಾಂಗಗಳ ವಿವರಣೆ ಇದೆಯೇ??? ಇರಲಿಕ್ಕಿಲ್ಲ.          -ಸುಬ್ರಮಣ್ಯ ಮಾಚಿಕೊಪ್ಪ                                                                                  ಇರಲಿಕ್ಕಿಲ್ಲ ಎಂಬ ನಿಮ್ಮ ನಿರೀಕ್ಷೆ ಸರಿ! ಮರಣವಾಗಿದೆ. ಇತ್ತ ಮೃತ ಶರೀರ. ಅದನ್ನು ವಾಯುಮಾಲಿನ್ಯವಾಗದಂತೆ ಸುಟ್ಟು ಬೂದಿ ಮಾಡಿದರೆ ಅದರ ವಿಚಾರದಲ್ಲಿ ನಮ್ಮ ಕರ್ತವ್ಯ ಮುಗಿದಂತೆ. "ಭಸ್ಮಾಂತಂ ಶರೀರಮ್" (ವೇದ) ಅತ್ತ ಶರೀರವನ್ನು ತೊರೆದ ಜೀವಾತ್ಮ. ಅದು ಶರೀರದಲ್ಲಿದ್ದಾಗ, ಶರೀರದಲ್ಲಿದ್ದಾಗ ಮಾಡಿದ ಕರ್ಮಗಳನುಸಾರ ಪುನರ್ಜನ್ಮವನ್ನೋ, ಮೋಕ್ಷವನ್ನೋ ಪಡೆಯುತ್ತದೆ. ಅದರ ಕರ್ಮಗಳಿಗೆ ಅದೇ Responsible. ಈ ವಿಚಾರದಲ್ಲಿ ಯಾರೂ ಮೂಗು ಹಾಯಿಸಲು ಅವಕಾಶವೇ ಇಲ್ಲ. ಪಕ್ತಾರಂ ಪಕ್ವಃ ಪುನರಾವಿಶಾತಿ (ವೇದ) - ನಾವು ಮಾಡಿದ ಕರ್ಮಗಳ ಅಡುಗೆಯು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ತಿನ್ನುವವರೆಗೂ ಬಿಡುವುದಿಲ್ಲ. ನಮ್ಮ ಪುಣ್ಯವನ್ನು ಬೇರೊಬ್ಬರ Accountಗೆ ಬದಲಾಯಿಸುವುದಾಗಲಿ, ಇಲ್ಲಿ ಚಪ್ಪಲಿ ದಾನ ಮಾಡಿದರೆ ಅವರಿಗೆ ಅಲ್ಲಿ (ಎಲ್ಲೋ ಕಂಡವರಿಲ್ಲ, ಕೇಳಿದವರಿಲ್ಲ, ಹೋದವರು ಒಂದು SMS ಕಳಿಸಿಲ್ಲ!!!) ಚಪ್ಪಲಿ ಸಿಗುತ್ತದೆ ಎಂಬುದೆಲ್ಲಾ ಪುರಾಣಗಳಲ್ಲಿ ಬಂದಿರುವ ಕಾಗಕ್ಕ ಗುಬ್ಬಕ್ಕನ ಕಥೆಗಳು. ಇಂತಹ ಪಿಂಡಪ್ರದಾನಗಳಾಗಲೀ, ತಿಥಿ-ಮತಿಗಳಾಗಲಿ ವೇದಗಳಲ್ಲಿ ಎಲ್ಲಿಯೂ ಹೇಳಲ್ಪಟ್ಟಿಲ್ಲ. ಇಂದು ಇವರು ವೈದಿಕವೆಂದು ಮಾಡುವ ಅಷ್ಟೂ 100% ಅವೈದಿಕ!! ಶ್ರಾದ್ಧ, ತರ್ಪಣ, ಪಿತೃಯಜ್ಞ ಎಂದೆಲ್ಲಾ ವೇದಗಳು ಹೇಳಿರುವುದು ಬದುಕಿರುವ ತಂದೆ-ತಾಯಿಗಳು, ಹಿರಿಯರ ವಿಚಾರದಲ್ಲಿ. ಶ್ರದ್ಧೆಯಿಂದ ಮಾಡಿದ ಸೇವೆಯೇ ಶ್ರಾದ್ಧ, ಬದುಕಿರುವವರಿಗೆ. ತೃಪ್ತಿಯಾಗುವಂತೆ ಮಾಡಿದ್ದೇ ತರ್ಪಣ, ಬದುಕಿರುವವರಿಗೆ. ಪಿತೃಗಳ ಸೇವೆಯನ್ನು ಅತ್ಯುತ್ತಮವಾಗಿ ಮಾಡುವುದೇ ಪಿತೃಯಜ್ಞ, ಬದುಕಿರುವವರಿಗೆ!!
  -ಸುಧಾಕರಶರ್ಮಾ  
  ನನ್ನ ಮಾತು:   ಶ್ರಾದ್ಧವನ್ನು ಆಡುಭಾಷೆಯಲ್ಲಿ ತಿಥಿ/ವೈದಿಕ...ಹೀಗೆಲ್ಲಾ ಕರೆಯುತ್ತಾರೆ. ನನ್ನ ಈ ವಯಸ್ಸಿಗೆ ಶ್ರಾದ್ಧದ ವಿಚಾರದಲ್ಲಿ ಆಗಿರುವ ಅನುಭವದ ಆಧಾರದಲ್ಲಿ ಎರಡುಮಾತು ಬರೆಯ ಬೇಕೆನಿಸಿದೆ. ಒಂದು ಘಟನೆಯಂತೂ ನಮ್ಮ ಸೋದರತ್ತೆಯವರು ಮೃತರಾದಾಗ ನಾನು ಪಟ್ಟಪಾಡು.ನಮ್ಮ ಗೌರತ್ತೆ ಅವರ ಹತ್ತನೆಯ ವಯಸ್ಸಿನಲ್ಲಿ ಮದುವೆಯಾಗಿ ಹನ್ನೊಂದನೆಯ ವಯಸ್ಸಿನಲ್ಲಿ ವಿಧವೆಯಾಗಿ!! ನಂತರ ನಮ್ಮ ಮನೆಯಲ್ಲಿಯೇ ಉಳಿದು ತಾಯಿಗಿಂತ ಹೆಚ್ಚಾಗಿ ಪ್ರೀತಿಸಿ  ನಮ್ಮನ್ನೆಲ್ಲಾ ಸಾಕಿ ಬೆಳೆಸಿದ ಮಹಾತಾಯಿ. ಅವರು ನಮ್ಮ ಮನೆಯಲ್ಲಿ ಕೊನೆಯುಸಿರೆಳೆದಾಗ ಅವರ ಅಂತ್ಯಕಾರ್ಯ ಯಾರು ಮಾಡಬೇಕೆಂಬ ಜಿಜ್ಞಾಸೆ. ಹಣ ಖರ್ಚುಮಾಡಲು ನಾನು ಸಿದ್ಧನಿದ್ದರೂ ತಂದೆ ತಾಯಿಯುಳ್ಳ ನಾನು ಮಾಡಬಾರದೆಂಬ ಸಲಹೆ ಎಲ್ಲರಿಂದ .ನಮ್ಮತಂದೆಗಾದರೋ ಶ್ರಾದ್ಧಕರ್ಮಗಳನ್ನು ಮಾಡುವಷ್ಟು ಶಾರೀರಿಕ ತ್ರಾಣವಿರಲಿಲ್ಲ. ಆಗ ಕಂಡುಕೊಂದ ದಾರಿ....ಬಾಡಿಗೆ  ಕರ್ತೃ ತರುವುದು.!! ಹೇಗೋ ಅದೂ ಆಯ್ತು. ಸತ್ತ ಐದನೆಯ ದಿನಕ್ಕೆ ಕರ್ಮಗಳು ಆರಂಭವಾದರೆ ಎಂಟನೆಯ ದಿನಕ್ಕೆ ಕರ್ತೃ ನಾಪತ್ತೆ!! ನಮ್ಮದು ಹಳ್ಳಿ ಬೇರೆ. ನಮ್ಮ ಹಳ್ಳಿ ಹರಿಹರಪುರದಿಂದ ಹೊಳೇನರಸೀಪುರಕ್ಕೆ ಆ ಬಾಡಿಗೆ ಕರ್ತೃವನ್ನು ಹುಡುಕಿಕೊಂಡು ಹೋದರೆ ಅವನನ್ನು ಮತ್ತೊಬ್ಬ ಪುರೋಹಿತರು ಸೆರೆ ಮಾಡಿಕೊಂಡಿದ್ದರು. ಆ ಪುರೋಹಿತರನ್ನು ವಿಚಾರಿಸದರೆ  ಅವರಿಂದ ಬಂದ ಉತ್ತರ " ನೀನು ಯಾರೋ ಪುರೋಹಿತನ್ನು ಗೊತ್ತು ಮಾಡಿಕೊಂಡಿದ್ದೀಯಲ್ಲಾ! ಅವನನ್ನೇ ಕೇಳು, ಅವನೇ ಯಾರನ್ನಾದರೂ ಹುಡುಕಲಿ!" ಅಂದಿನ ನನ್ನ ಮನ:ಸ್ಥಿತಿ ಹೇಗಿತ್ತೆಂದರೆ " ಇವತ್ತು ಈ ಕರ್ತೃ ಬಾರದಿದ್ದರೆ ಏನೋ ವಿಪತ್ತು ಸಂಭವಿಸಿ ಬಿಬಹುದು! ದೊಡ್ದ ಅನಾಹುತವಾಗಿಬಿಡಬಹುದು!" ಎಂದೆಲ್ಲಾ ಅಜ್ಞಾನದಿಂದ ಕೂಡಿದ ಭೀತಿ!! ನಾನು ಆಪುರೋಹಿತರನ್ನು ರಸ್ತೆಯಲ್ಲಿ ಭೇಟಿಯಾಗಿದ್ದೆ.ಭಯದಿಂದ ಅಲ್ಲೇ ಅವರ ಕಾಲಿಗೆ ಬಿದ್ದೆ. ಉಹೂಂ, ಅವರ ಹೃದಯ ಕರಗಲೇ ಇಲ್ಲ.[ಹೃದಯ ಇದ್ದರೆ ತಾನೇ?!] ಕೊನೆಗೆ ನಮ್ಮ ಬಂಧುವೂ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ವೇದಪಂಡಿತರಾದ ಶ್ರೀ ಲಕ್ಷ್ಮೀನರಸಿಂಹ ಮೂರ್ತಿಗಳ ಹತ್ತಿರ ಹೋದೆ. ಅವರು ಏನೋ ಏರ್ಪಾಡು ಮಾಡಿದರು. ಮುಂದೆ ಎಲ್ಲಾ ಕಾರ್ಯಕ್ರಮ ನಡೆಯಿತು ಎನ್ನಿ.  ಅಂದು ನನ್ನ ವಯಸ್ಸು 26-27 ಇದ್ದಿರಬಹುದು. ಅಮ್ಮನ ಧಾರ್ಮಿಕ ಆಚರಣೆಗಳಿಂದ ಪ್ರಭಾವಿತನಾಗಿದ್ದವನು. ಅಂದಿನ ನನ್ನ ಮನ:ಸ್ಥಿತಿ! ಪರಿಸ್ಥಿತಿ! ಹೇಗಿತ್ತೆಂಬುದನ್ನು ಈಗ ಊಹಿಸಿಕೊಂಡರೂ ಆ ಹೃದಯಹೀನ,ನಿರ್ದಯೀ ಪುರೋಹಿತನ ಮುಖ ನನ್ನ ಕಣ್ಮುಂದೆ ಕಟ್ಟಿದಂತಾಗುತ್ತದೆ. ಈಗಲೂ ಹೊಳೇನರಸೀಪುರದ ರಾಜಬೀದಿಯಲ್ಲಿ ಆ ವ್ಯಕ್ತಿಯ ಕಾಲು ಹಿಡಿದುಕೊಂಡು ಬಿದ್ದಿದ್ದೀನೇನೋ ಎಂದು ನನ್ನ ಕಣ್ಣಾಲಿ ನೀರು ತುಂಬಿಕೊಳ್ಳುತ್ತವೆ. ಇಂತಹ ಕೆಟ್ಟ ಅನುಭವ ಆದಮೇಲೂ ಸುಮಾರು ಮೂವತ್ತು ವರ್ಷ ಇಂತಹಾ ಕೆಟ್ಟ ವ್ಯವಸ್ಥೆಯನ್ನು ಸಹಿಸಿಕೊಂಡುಬಿಟ್ಟೆನಲ್ಲಾ!ಎಂದು ದು:ಖಿತನಾಗುತ್ತೇನೆ. ಆದರೆ ಶ್ರಾದ್ಧಕರ್ಮಗಳನ್ನು ಮಾಡಬೇಡವೇ? ಎಂದರೆ  ಬದುಕಿರುವಾಗ ಅಪ್ಪ-ಅಮ್ಮನನ್ನು ದೇವರಂತೆ ನೋಡಿಕೊಂಡಿರುವ ನನಗೆ ವರ್ಷಕ್ಕೊಮ್ಮೆ ನನ್ನ ಬಂಧುಬಳಗದೊಡನೆ ಅವರ ಸ್ಮರಣೆ ಮಾಡುವಾಸೆ. ಈಗ ಯಾವ ಪದ್ದತಿ ನಡೆದುಬಂದಿದೆಯೋ ಅದೇ ಪದ್ದತಿಯಲ್ಲಿ ಇದುವರೆವಿಗೂ ಶ್ರಾದ್ಧವನ್ನು  ಮಾಡುತ್ತಿದ್ದೇವೆ.ಆದರೆ ಕಳೆದ ವರ್ಷದಿಂದ ನನ್ನ ಮನದಲ್ಲಿ ಚಿಂತನೆಯೊಂದು ಮೂಡಿದೆ.ನಮ್ಮ ಅಪ್ಪ-ಅಮ್ಮನು ಸತ್ತದಿನ ನಮ್ಮ ಅಣ್ಣತಮ್ಮ -ಅಕ್ಕ-ತಂಗಿ ಎಲ್ಲರೂ ನಮ್ಮ ಮನೆಗೆ ಬರುತ್ತಾರೆ. ಹೇಗೂ ಇಬ್ಬರು ಬ್ರಾಹ್ಮಣಾರ್ಥಕ್ಕೆಂದು ಕರೆಯುವ ಸಂಪ್ರದಾಯ ನಡೆದು ಬಂದಿದೆ. ಇರಲಿ. ಆದರೆ ಯಾವ ವಿಧಿಗಳಿಲ್ಲದೆ ಅಪ್ಪ-ಅಮ್ಮನ ಸ್ಮರಣೆಯಲ್ಲಿ ಒಟ್ಟಿಗೆ ಊಟಮಾಡಿ ಅಂದು ಕೈಲಾದ ಒಂದು ಸತ್ಕಾರ್ಯವನ್ನು ಮಾಬೇಕೆಂಬುದು ನನ್ನ ಚಿಂತನೆ. ಅದು ಪೂರ್ಣವಾಗಿ ಸಫಲವಾಗಬೇಕೆಂದರೆ ನನ್ನ ಚಿಂತನೆ ನನ್ನ ಅಣ್ಣತಮ್ಮ ,ಅಕ್ಕ-ತಂಗಿಯರಿಗೆ ಅರ್ಥವಾಗಬೇಕು. ಅವರುಗಳಿಗೆ ಮನಸ್ಸಿಗೆ ಕಿರಿಕಿರಿ ಮಾಡಿ ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಮುಂದೊಂದು ದಿನ ನನ್ನ ಚಿಂತನೆ ಕಾರ್ಯಗತಗೊಳ್ಳುವುದರಲ್ಲಿ ನನಗಂತೂ ವಿಶ್ವಾಸವಿದೆ. ನನ್ನ ವಿಶ್ವಾಸಕ್ಕೆ ಕಾರಣ ಇಷ್ಟೆ." ಕಳೆದ ಯುಗಾದಿ ಹಬ್ಬದ ದಿನದಿಂದ ನಿತ್ಯವೂ ತಪ್ಪದೆ ಅಗ್ನಿಕಾರ್ಯ ನಡೆಯುತ್ತಿದೆ. ಅದೇ ನನ್ನ ಸರ್ವತ್ರ. ಯಾರಿಂದಲೂ ಅಡ್ದಿಯಿಲ್ಲ. ಎಲ್ಲರೂ ಸಂತೋಷವಾಗಿಯೇ ಇದ್ದಾರೆ. ಅದಕ್ಕೆ ಕಾರಣ ನನ್ನ ಆರೋಗ್ಯದಲ್ಲಿ ಆಗುತ್ತಿರುವ ಸುಧಾರಣೆ.                                                       -ಹರಿಹರಪುರ ಶ್ರೀಧರ್

ಯೋಚಿಸಲೊ೦ದಿಷ್ಟು...೩೧

೧. ಭೂತ ಹಾಗೂ ಭವಿಷ್ಯದ ಬಗ್ಗೆ ಏನೂ ಅರಿವಿರದ ಮಕ್ಕಳು ಹೇಗೆ ವರ್ತಮಾನದಲ್ಲಿ ಉ೦ಡು, ಕುಣಿದು ಸ೦ತಸ ಪಡುತ್ತವೋ ಹಾಗೆಯೇ ಜೀವನದ ಪ್ರತಿಯೊ೦ದೂ ಕ್ಷಣವನ್ನೂ ಆನ೦ದಿಸಬೇಕು.
೨. ಏನೂ ಅಲ್ಲದ್ದಕ್ಕಾಗಿ ಎಲ್ಲವನ್ನೂ ಕಲೆದುಕೊಳ್ಳುವುದೇ ಜೀವನ!!
೩. ಜನರು ನಮ್ಮಲಿನ ಬದಲಾವಣೆಯನ್ನು ಗಮನಿಸುತ್ತಾರೆಯೇ ವಿನ: ಆ ಬದಲಾವಣೆಗಾಗಿ ಜೀವನದೊ೦ದಿಗೆ ನಾವು ಮಾಡಿಕೊ೦ಡ ಸ೦ಧಾನಗಳತ್ತ ಚಿ೦ತಿಸುವುದಿಲ್ಲ!
೪. ನಮ್ಮ ಜನನ ಸಹಜವಾದದ್ದಾದರೂ ನಮ್ಮ ಸಾವು ಸಹಜವಾಗಬಾರದು!! ಬದುಕಿನಲ್ಲೊ೦ದು ಮಹತ್ವಾಕಾ೦ಕ್ಷೆಯಿರಲಿ.. ಹೊಸ ಇತಿಹಾಸವನ್ನು ಬರೆಯಿರಿ!! ( ಸ್ವಾಮಿ ವಿವೇಕಾನ೦ದರು)
೫. ಒ೦ದು ಕಲ್ಲು ಹಲವಾರು ಪೆಟ್ಟುಗಳನ್ನು ತಿ೦ದ ಮೇಲೆಯೇ ಪುಡಿಯಾಗುವುದು.. ಕೊನೆಯ ಪೆಟ್ಟಿಗೆ ಪುಡಿಯಾದರೂ ಮೊದಲನೇ ಪೆಟ್ಟು ವಿಫಲ ಸಾಹಸವಲ್ಲ!! ಯಶಸ್ಸು ಎ೦ದರೆ ಸತತ ಪ್ರಯತ್ನಗಳ ಪರಿಣಾಮ!
೬. ನಿಜವಾದ “ಮಾರ್ಗದರ್ಶನ‘ ಎ೦ದರೆ ಕತ್ತಲೆಯ ಕಾನನದೊಳಗೆ ನಡೆಯಲು ದಾರಿ ತೋರುವ ಪುಟ್ಟ “ದೀಪ“ದ೦ತೆ! ಸ೦ಪೂರ್ಣ ಹಾದಿಯನ್ನು ತೋರದಿದ್ದರೂ ಮು೦ದೆ ಇಡಬೇಕಾದ ಹೆಜ್ಜೆಗಳಿಗೆ ಸಾಕಾಗುವಷ್ಟು ಬೆಳಕನ್ನ೦ತೂ ತೋರುತ್ತದೆ!
೭. ನಮ್ಮಲ್ಲಿರದ ಧನವನ್ನು ( ಸಾಲವನ್ನು ಮಾಡುವುದರ ಮೂಲಕ) ನಮಗೆ ಅಗತ್ಯವಿರದ ವಸ್ತುಗಳನ್ನು ಕೊಳ್ಳುವುದಕ್ಕಾಗಿ ವ್ಯಯಿಸುವುದು, ನಮಗೆ ಗೊತ್ತಿರದ ವ್ಯಕ್ತಿಗಳನ್ನು ಪ್ರಭಾವಿಸಲು ಪ್ರಯತ್ನಿಸುವುದು ಕೇವಲ ನಮ್ಮ “ ಪ್ರತಿಷ್ಠೆ“ ಯನ್ನು ಕಾಯ್ದುಕೊಳ್ಳುವ ಯತ್ನವಷ್ಟೇ!
೮. ಯಾವುದೋ ಒ೦ದು ಕ್ಷಣವೇ ಜೀವನವಲ್ಲ! ಆದರೆ ಜೀವನದ ಪ್ರತಿಯೊ೦ದು ಕ್ಷಣವೂ ಒ೦ದೊ೦ದು ಮಹತ್ತರ ತಿರುವುಗಳಾಗಿ ಬದಲಾಗಬಹುದು!
೯. ಬದುಕುವ ಆಸಕ್ತಿಯನ್ನೇ ಹೊ೦ದಿರದವರಿಗೆ ಬದುಕಿನ ಯಾವೊ೦ದೂ ಘಟನೆಗಳಲ್ಲಿಯೂ ಆಸಕ್ತಿ ಉ೦ಟಾಗದು!
೧೦. ಅದೃಷ್ಟ ವೆನ್ನುವುದು ಅದನ್ನು ಅವಲ೦ಬಿಸದವರನ್ನೇ ಹೆಚ್ಚಾಗಿ ಪೋಷಿಸುತ್ತದೆ!
೧೧. ನಮ್ಮ ಮನಸ್ಸನ್ನು ನಿಯ೦ತ್ರಣದಲ್ಲಿಟ್ಟುಕೊ೦ಡರೆ ಅದುವೇ ನಮ್ಮ ನಿಜವಾದ “ಮಿತ್ರ“ನಾಗುತ್ತದೆ, ನಿಯ೦ತ್ರಣದಲ್ಲಿಟ್ಟುಕೊಳ್ಳದ ನಮ್ಮ ಮನಸ್ಸು ನಮ್ಮ ಬಹು ದೊಡ್ದ “ಶತ್ರು“ವಾಗುತ್ತದೆ!- ಡಾ|| ಅಬ್ದುಲ್ ಕಲಾಮ್.
೧೨. ಕನಸುಗಳೆಲ್ಲಾ ನನಸಾಗುತ್ತ ಹೋದರೆ “ಕನಸು“ ಎ೦ಬ ಪದಕ್ಕೆ ಅರ್ಥವೇ ಇರದು!
೧೩. ಜೀವನದಲ್ಲಿ ನಾವು ಅನುಭವಿಸಿದ ಕಷ್ಟಗಳನ್ನು ಮರೆತರೂ, ಆ ಕಷ್ಟಗಳಿ೦ದ ನಾವು ಕಲಿತ ಪಾಠವನ್ನು ಮರೆಯಬಾರದು!
೧೪. “ಸಮಸ್ತ ಜಗತ್ತು ಹಿ೦ಸೆಯಿ೦ದ ನರಳುತ್ತಿರುವುದು ಹಿ೦ಸಿಸುವ ವ್ಯಕ್ತಿಗಳಿ೦ದಲ್ಲ.. ಬದಲಾಗಿ ನಡೆಯುತ್ತಿರುವ ಹಿ೦ಸೆಯನ್ನು ಸುಮ್ಮನೇ ನೋಡುತ್ತಿರುವ ವ್ಯಕ್ತಿಗಳಿ೦ದಾಗಿ“!- ನೆಪೋಲಿಯನ್.
೧೫. ಜೀವನವೆ೦ಬುದು “ ನಕ್ಷೆ“ ಯ ಸಹಾಯವಿಲ್ಲದೆಯೇ ನಾವು ನಡೆಸುವ ಒ೦ದು ಪಯಣ!

Wednesday, April 20, 2011

ಅಂತಿಮ ಸತ್ಯ!

ಮೊನ್ನೆ ತಾನೇ ನನ್ನ ಅತ್ತೆಯವರು ದೈವಾಧೀನರಾದರು. ಅವರ ಅಂತಿಮ ಸಂಸ್ಕಾರದಲ್ಲಿ ನಾನೂ ಭಾಗಿಯಾಗಿದ್ದೆ. ಸುಮಾರು 5 ಎಕರೆಯಷ್ಟು ವಿಶಾಲವಾದ ರುದ್ರಭೂಮಿಯಲ್ಲಿ ಚಟ್ಟದ ಮೇಲೆ ಶವವನ್ನು ಮಲಗಿಸಿ ಅಂತಿಮ ವಿಧಿ-ವಿಧಾನಗಳನ್ನು ನಡೆಸುತ್ತಿದ್ದಾಗ ಮನದಾಳದಲ್ಲಿ ಮೂಡಿದ ಮಿಡಿತಗಳು ಹಲವಾರು.  ತಂದೆ-ತಾಯಿಯವರಿಗೆ ಮುದ್ದಿನ ಮಗಳಾಗಿ, ಸಹಜಾತರಿಗೆ ಸೋದರಿಯಾಗಿ, ಅನೇಕರಿಗೆ ಪ್ರಿಯ ಗೆಳತಿಯಾಗಿ, ಗಂಡನಿಗೆ ಅನುರೂಪಳಾದ ಸತಿಯಾಗಿ, ತನ್ನ ಮಕ್ಕಳಿಗೆ ಪ್ರೀತಿ-ವಾತ್ಸಲ್ಯದ ಮಡುವಾಗಿ, ತನ್ನ ಅತ್ತೆ-ಮಾವ, ಮೈದುನ-ನಾದಿನಿಯರಿಗೆ ಸಹಕಾರಿಯಾಗಿ, ಅಳಿಯಂದರಿಗೆ ಗೌರವ-ಲೇಪಿತ ಮಮತಾಮಯಿಯಾಗಿ ತುಂಬು ಬಾಳು ನಡೆಸಿದ್ದ ನನ್ನ ಅತ್ತೆ , ಎಲ್ಲರಂತೆ, ಕೊನೆಗೆ ಹೋಗುವಾಗ ಮಾತ್ರಾ ಏಕಾಕಿ!  ಕೇವಲ ಬೆರಳೆಣಿಕೆಯಷ್ಟು ಮಂದಿ ಅಂತಿಮ ಯಾತ್ರೆಗೆ   ಸಾಥ್  ನೀಡಿದವರು (ಅದೂ ಅಲ್ಲಿಯವರೆಗೆ ಮಾತ್ರಾ!!). ನಂತರದ ಪ್ರಯಾಣದ ಹಾದಿಯಲ್ಲಿ.....?

ಸಾವು ನಿಶ್ಚಿತ ಎಂಬುದು ಎಲ್ಲರೂ ಅರಿತ ಮಾತು. ಆದರೆ ಸಾಯುವತನಕವೂ ಎಲ್ಲರಿಗೂ ಅದು ಮರೆತ ಮಾತು! ಹಾಗಾಗಿ ಸಾವು ಎರಗುವವರೆಗೆ ನಮಗೆ ಸಾವಿನ ಪ್ರಜ್ಞೆ ಯಾವಾಗಲೂ ಬಹುತೇಕ ಬರುವುದೇ ಇಲ್ಲ. ಹಾಗಾಗಿಯೇ ಆ ಪ್ರಜ್ಞೆಯ ಅನುಪಸ್ಥಿತಿಯಲ್ಲಿ ನಾವು ಎಲ್ಲ ಲೌಕಿಕವಾದ ಮತ್ತು ಅಶಾಶ್ವತವಾದ ವಸ್ತು/ವಿಷಯ/ವ್ಯಕ್ತಿಗಳ ಬಗ್ಗೆಯೇ ವಿಚಾರ ಮಾಡುತ್ತಾ ನಮ್ಮ ಬಹುಮೂಲ್ಯ ಸಮಯವನ್ನು ಕಳೆದು ಬಿಡುತ್ತೇವೆ. ಮುಂದಿನ ಕ್ಷಣವೇ   ಸಾವು ಬರಬಹುದು ಎಂಬ ನಿರಂತರ ಪ್ರಜ್ಞೆ, ಬಹುಶ: ನಮ್ಮನ್ನು ಒಂದು ಉತ್ತಮ ಜೀವನಶೈಲಿಯತ್ತ ಒಯ್ಯಬಲ್ಲದು ಎನಿಸುತ್ತದೆ. ಏನೇ ಅಂದರೂ ಸಾವೇ ಅಂತಿಮವಾದ ಸತ್ಯ; ಉಳಿದೆಲ್ಲವೂ ಮಿಥ್ಯ. ಹಾಗಾಗಿ ಸತ್ಯಾನ್ವೇಷಣೆಗೆ ಹೆಚ್ಚು ಶ್ರಮ ಪಡಬೇಕಿಲ್ಲ. ನಮ್ಮ ಸುತ್ತಮುತ್ತ ಸಂಭವಿಸುವ ಸಾವುಗಳ ಅರಿವು ಮತ್ತು ನನಗೂ ಅದೊಂದು ದಿನ ಬಂದೇ ಬರುತ್ತದೆಂಬ ಅರಿವೇ ಅಂತಿಮ ಸತ್ಯ. ಪುರಂದರದಾಸರ ಈ ಕೃತಿಯನ್ನು ನೋಡಿ:

ಹಿಗ್ಗುವೆ ಯಾಕೊ ಈ ದೇಹಕ್ಕೆ ಹಿಗ್ಗುವೆ ಯಾಕೊ                             || ಪ ||

ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ
ಅಗ್ನಿಯೊಳಗೆ ಬಿದ್ದು ದಗ್ಧವಾಗೊ ದೇಹಕ್ಕೆ                                 || ಅ.ಪ.||

ಸತಿ ಪುರುಷರು ಕೂಡಿ ರತಿಕ್ರೀಡೆಗಳ ಮಾಡಿ
ಪತನಾದ ಇಂದ್ರಿಯ ಪ್ರತಿಮೆಯ ದೇಹಕ್ಕೆ                                   

ಆಗದ ಭೋಗಗಳ ಆಗುಮಾಡುತಲಿದ್ದು
ರೋಗ ಬಂದರೆ ಬಿದ್ದು ಹೋಗುವ ದೇಹಕ್ಕೆ                                  

ಪರರ ಸೇವೆಯ ಮಾಡಿ ನರಕ ಭಾಜನನಾಗಿ
ಮರಳಿ ಮರಳಿ ಬಿದ್ದು ಉರುಳುವ ದೇಹಕ್ಕೆ                                   

ಸೋರುವುದೊಂಭತ್ತು ಬಾಗಿಲ ಮಲಗಳು
ನೀರಿಲ್ಲದಿದ್ದರೆ ನಾರುವ ದೇಹಕ್ಕೆ                                               

ಪುರಂದರವಿಠಲನ ಚರಣ ಕಮಲಕ್ಕೆ
ಎರಗದೆ ತಿರುಗುವ ಗರುವದ ದೇಹಕ್ಕೆ                                         

ಅಂತಕನ ದೂತರು ಬಂದು ಎಳೆದೊಯ್ಯುವಾಗ ಪಕ್ಕಕ್ಕೆ ಸರಿದು ದೂರಾಗುವವರೇ ಎಲ್ಲರೂ. ಬಂದದ್ದು ನಾನೊಬ್ಬನೇ - ಹೋಗಬೇಕಾದ್ದೂ ನಾನೊಬ್ಬನೇ. ಉಳಿದೆಲ್ಲವೂ ಜೀವನ ಪಯಣದ ಹಾದಿಯ ತಾತ್ಕಾಲಿಕ ಸಂಗಾತಿಗಳು ಅಷ್ಟೇ.  ಇರುವ ತನಕ  ಬಾಳುವ ಬಾಳಿನ ರೀತಿ ತನಗೂ ಮತ್ತು ತನ್ನನ್ನವಲಂಬಿಸಿದವರಿಗೂ ಸಹನೀಯವಾಗಿರುವಂತೆ ನೋಡಿಕೊಂಡು, ಕಮಲಜಲಪತ್ರಭಾವದಲ್ಲಿ ಶಾಶ್ವತ ಸತ್ಯವಾದ ಸಾವಿನ ನಿರಂತರ ಪ್ರಜ್ಞೆಯೊಂದಿಗೆ ನಡೆಯುವುದೇ ಸೂಕ್ತವೇನೋ?

Monday, April 18, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ -2

     ವೇದಗಳು ಸ್ಪಷ್ಟವಾಗಿ ಪರಮಾತ್ಮನು ಜಡವಾದ ಪ್ರಕೃತಿ ತತ್ವದಿಂದ ಜಗದ್ರಚನೆ ಮಾಡಿದನು ಎಂದು ಹೇಳುತ್ತವೆ. ಕೇಳಿರಿ:-


ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ
ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ ||
(ಋಕ್. ೧೦.೧೨೯.೧)


     [ತದಾನೀಮ್] ಆಗ, ಸೃಷ್ಟಿಯಾಗುವ ಮುನ್ನ [ಅಸತ್ ನ ಆಸೀತ್] ಅಭಾವ ಅಥವಾ ಶೂನ್ಯವಿರಲಿಲ್ಲ. [ಸತ್ ನೋ ಆಸೀತ್] ಈ ವಿಶ್ವದ ಸತ್ತೆ ಅಥವಾ ಭಾವವೂ ಇರಲಿಲ್ಲ. [ರಜಃ ನ ಆಸೀತ್] ಲೋಕವೂ ಇರಲಿಲ್ಲ. [ಯತ್ ಪರಃ] ಯಾವುದು ಮೇಲಿದೆಯೋ, [ವ್ಯೋಮಾ ನೋ] ಆ ಆಕಾಶವೂ ಇರಲಿಲ್ಲ. [ಆವರೀವಃ ಕಿಮ್] ಆವರಿಸುವ ಏನೋ ಒಂದು ತತ್ವವಿತ್ತು. [ಕುಹ] ಎಲ್ಲಿತ್ತು? [ಕಸ್ಯ ಶರ್ಮನ್] ಆನಂದಮಯನಾದ ಪರಮಾತ್ಮನ ಆಶ್ರ್ರಯದಲ್ಲಿತ್ತು. [ಗಹನಂ ಗಭೀರಂ ಅಂಭಃ] ಗಹನವೂ, ಗಂಭೀರವೂ ಆದ ಏನೋ ಒಂದು ತರಳ ಪದಾರ್ಥವು, [ಆಸೀತ್] ಇದ್ದಿತು.


     ಸೃಷ್ಟಿಗೆ ಮುನ್ನ ಸ್ಥೂಲ ಜಗತ್ತಿರಲಿಲ್ಲ. ಆದರೆ ಏನೋ ಒಂದು ಸೂಕ್ಷ್ಮವಾದ ತರಳ ಅಂದರೆ ಹರಿದಾಡುವ ದ್ರವರೂಪವಾದ ವಸ್ತುವಿತ್ತು. ಬೇರಾವ ಅಧಿಷ್ಠಾನ ಅಂದರೆ ಆಶ್ರಯ ಸ್ಥಾನವಿಲ್ಲದುದರಿಂದ, ಅದು ಪರಮಾತ್ಮನ ಆಶ್ರಯದಲ್ಲಿಯೇ ಇತ್ತು. ಅಭಾವ ಅಥವಾ ಶೂನ್ಯವಂತೂ ಇರಲಿಲ್ಲ.

ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ ||
(ಋಕ್. ೧೦.೧೨೯.೨)

     [ಮೃತ್ಯುಃ ನ ಆಸೀತ್] ಸಾವು ಇರಲಿಲ್ಲ. [ತರ್ಹಿ] ಅದೇ ಕಾರಣದಿಂದ [ಅಮೃತಃ ನ} ಅಮರತ್ವವೂ ಇರಲಿಲ್ಲ. [ರಾತ್ರ್ಯಾ] ರಾತ್ರಿಯ [ಅಹ್ನಃ] ಹಗಲಿನ [ಪ್ರಕೇತಃ] ಚಿಹ್ನೆಯೇ [ನ ಆಸೀತ್] ಇರಲಿಲ್ಲ. [ತತ್ ಏಕಮ್] ಆ ಒಂದು ತತ್ವ ಮಾತ್ರ [ಸ್ವಧಯಾ] ತನ್ನದೇ ಆದ ಅಸ್ತಿತ್ವದಿಂದ [ಅವಾತಮ್] ವಾಯುರಹಿತವಾಗಿ [ಆಸೀತ್] ಬೇರೆಯವರಿಗೆ ಪ್ರಾಣ ನೀಡಬಲ್ಲದಾಗಿತ್ತು. [ತಸ್ಮಾತ್ ಅನ್ಯತ್] ಅದರಿಂದ ಭಿನ್ನವಾದ [ಕಿಂಚನ ಪರಃ] ಯಾವುದೇ ಬೇರೆ ವಸ್ತುವೂ [ನ ಆಸ] ಇರಲಿಲ್ಲ.


     ಸೃಷ್ಟಿಯಾಗುವ ಮೊದಲೂ ಕೂಡ ಅದೇನೋ ಒಂದು ಅನಾದಿ ಪದಾರ್ಥವು ಇದ್ದೇ ಇತ್ತು. ಆದರೆ ಸೂರ್ಯ, ಪೃಥಿವೀ, ಚಂದ್ರ ಮೊದಲಾದ ಗ್ರಹಗಳ ರಚನೆಯೇ ಆಗಿರಲಿಲ್ಲವಾದ ಕಾರಣ, ಇರುಳು, ಹಗಲು ಎಂದು ವಿಭಾಗ ಮಾಡಿ ಹೇಳಲಾಗುತ್ತಿರಲಿಲ್ಲ. ಆ ಏನೋ ಒಂದು ತತ್ವದ ಲಕ್ಷಣವೇನು? ಆಲಿಸಿರಿ:-

ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ ||
(ಋಕ್.೧೦.೧೨೯.೩)


     [ಅಗ್ರೇ] ಸೃಷ್ಟಿಗೆ ಮುನ್ನ [ಇದಂ ಸರ್ವಮ್] ಇದೆಲ್ಲವೂ [ಅಪ್ರಕೇತಮ್] ಲಕ್ಷಣರಹಿತವಾಗಿ [ಸಲಿಲಮ್] ದ್ರವರೂಪವಾಗಿ [ತಮಸಾ ಗೂಳ್ಹಮ್] ಅಂಧಕಾರದಿಂದ ಗೂಢವಾಗಿ [ತಮಃ ಆಸೀತ್] ಪ್ರಕೃತಿಯ ರೂಪದಲ್ಲಿತ್ತು. [ಯತ್] ಯಾವುದು ಇದ್ದಿತೋ, ಅದು [ತುಚ್ಛ್ಯೇನ] ತನ್ನ ತುಚ್ಛತ್ವದಿಂದ [ಅಭಿ ಆಪಿಹಿತಮ್] ನಾಲ್ಕೆಡೆಯಿಂದಲೂ ಮುಚ್ಚಲ್ಪಟ್ಟುದಾಗಿ [ಆಸೀತ್] ಇದ್ದಿತು. [ತತ್] ಅದು [ತಪಸಃ ಮಹಿನಾ] ಪರಮ ತೇಜಸ್ವಿಯಾದ ಪ್ರಭುವಿನ ಮಹಿಮೆಯಿಂದ [ಏಕಂ ಅಜಾಯತ] ಒಂದು ಎಂದಾಯಿತು.

     ಡಾರ್ವಿನ್ನನ ಅನುಯಾಯಿಗಳ ಅಭಿಪ್ರಾಯದಂತೆ, ಮಾನವನ ಉತ್ತರೋತ್ತರ ಉತ್ಕ್ರಾಂತಿ, ಅಂದರೆ ವಿಕಾಸ ಒಂದು ಸತ್ಯ ತಾನೇ? ಸ್ವಲ್ಪ ಹೊತ್ತು ಆ ತತ್ವ ಸತ್ಯವೆಂದು ಭಾವಿಸಿದರೆ, ಆದಿಮಾನವ ಅತ್ಯಂತ ಅವಿಕಸಿತ ಬುದ್ಧಿಯವನಾಗಿದ್ದನು. ಆದಿಮಾನವನ ಕಾಲದಲ್ಲೇ ಅವಿರ್ಭವಿಸಿದ ವೇದಗಳಲ್ಲಿ, ೨೦ನೆಯ ಶತಮಾನದ ಭೌತಿಕ ವಿಜ್ಞಾನಿಗಳೂ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವ, ಸೃಷ್ಟಿಯ ಪೂರ್ವಸ್ಥಿತಿಯ ಈ ಪರಮ ವೈಜ್ಞಾನಿಕ ವರ್ಣನೆ ಕಂಡುಬರಬೇಕಾದರೆ ಅದರ ಹಿಂದೆ ಭಗವಂತನ ಕೈವಾಡವಿರಲೇಬೇಕು. ನಾವೇನೂ ಡಾರ್ವಿನ್ನನ ವಿಕಾಸವಾದವನ್ನು ಒಪ್ಪುವುದಿಲ್ಲ. ಮಾನವನ ಬುದ್ಧಿ ಆಗಿಗಿಂತ ಈಗ ಹೆಚ್ಚಿದೆ ಎಂದು ನಾವು ಹೇಳಲಾರೆವು. ಈ ಸಮಯದಂತೆ, ಹಿಂದೆ ಅದೆಷ್ಟು ಸಾರಿ ವಿಜ್ಞಾನ ಬೆಳೆದು ನಾಶವಾಗಿದೆಯೋ? ಆದರೆ, ಇನ್ನೂ ಯಾವ ಶಾಲಾ-ಕಾಲೇಜುಗಳೂ, ಪ್ರಾಧ್ಯಾಪಕ-ಆಚಾರ್ಯರೂ ಕಲಿಸಿಕೊಡಲು ಇಲ್ಲದಿದ್ದಾಗ ಇಂತಹ ಸ್ಥಿತಿ ಚಿತ್ರಣವನ್ನು ಕಾಣಬೇಕಾದರೆ, ವೇದಗಳು ಈಶ್ವರವಾಣಿಯೇ ಆಗಿರಬೇಕೆಂಬುದರಲ್ಲಿ ಸಂದೇಹವೇ ಇಲ್ಲ. ಇಂದಿನ ವೈಜ್ಞಾನಿಕರು ಉಗ್ಗಡಿಸುವ ನೇಬ್ಯುಲಾ ಸಿದ್ಧಾಂತಕ್ಕೂ, ವೇದಗಳ ಈ ಕಥನಕ್ಕೂ ವ್ಯತ್ಯಾಸವೇನಿದೆ?


     ತಾತ್ಪರ್ಯವಿಷ್ಟೆ. ಭಗವಂತ ಅಭಾವದಿಂದ ಸೃಷ್ಟಿಯನ್ನು ರಚಿಸಿಲ್ಲ. ಸೃಷ್ಟಿಗೆ ಉಪಾದಾನ ಕಾರಣವೂ ಇದೆ. ಆ ಉಪಾದಾನ ಕಾರಣ (Material Cause) ಪ್ರಕೃತಿ. ಅದು ಪರಮಾಣುಗಳ ಸಂಘಾತ. ಪ್ರತಿಯೊಂದು ಪರಮಾಣುವೂ, ವಿಶ್ವಚೇತನ (ಪರಮಾತ್ಮ), ಪರಿಚ್ಛಿನ್ನ ಚೇತನ (ಜೀವಾತ್ಮ) ಇವರಂತೆಯೇ ಅನಾದಿ. ಯಾವ ರೀತಿ ಜೀವಾತ್ಮರು ಎಷ್ಟಿದ್ದಾರೆಂದು ಎಣಿಸಲು ಅಲ್ಪಜ್ಞರಾದ ನಮಗೆ ಸಾಧ್ಯವಿಲ್ಲವೋ, ಅದೇ ರೀತಿ ಪರಮಾಣುಗಳೆಷ್ಟಿವೆ ಎಂದು ಎಣಿಸಲೂ ಸಾಧ್ಯವಿಲ್ಲ. ಅರ್ಬುದಾರ್ಬುದಕ್ಕಿಂತ ಅತಿ ಹೆಚ್ಚು ಪರಮಾಣುಗಳಿಂದ ಸೃಜಿತವಾದ ನಕ್ಷತ್ರಗಳೆಷ್ಟಿವೆ ಎಂಬುದನ್ನೇ ಎಣಿಸಲಾಗಿಲ್ಲ. ಒಂದು ಘನ ಅಂಗುಲ ಪ್ರಮಾಣದ ಕಲ್ಲು ಅಥವಾ ಹೆಂಟೆಯಲ್ಲಿ ಎಷ್ಟು ಪರಮಾಣುಗಳಿವೆ ಎಂದು ಎಣಿಸುವುದೂ ದುಸ್ತರವೇ. ಇನ್ನು ಸೃಷ್ಟಿಗಾಗಿ ಉಪಯೋಗಿಸಲ್ಪಟ್ಟ ಪರಮಾಣುಗಳೆಷ್ಟಿವೆ ಎಂದು ನಾವು ಎಣಿಸಬಲ್ಲೆವೇ? ಆದರೆ, ಇಷ್ಟೇನೋ ನಿಜ. ಪರಮಾಣುಗಳು ಯಾವುದೇ ಒಂದು ನಿಶ್ಚಿತ ಪ್ರಮಾಣದಲ್ಲಿವೆ. ಅವು ಒಂದೊಂದು ಸಾರಿ ಕಣರೂಪದಲ್ಲಿ ಇರುತ್ತವೆ, ರೂಪ ಬದಲಾಯಿಸುತ್ತವೆಯೇ ಹೊರತು ನಾಶ ಹೊಂದುವುದಿಲ್ಲ. ಹೊಸ ಪರಮಾಣುಗಳೂ ಹುಟ್ಟುವುದಿಲ್ಲ.

       . . . .(ಮುಂದಿನ ಕಂತಿನಲ್ಲಿ: ಅಥರ್ವವೇದದಲ್ಲಿ ಪ್ರಕೃತಿಯ ವರ್ಣನೆ)



ಪುನರ್ಜನ್ಮ-ಒಂದು ವಿವರಣೆ

ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?

Sunday, April 17, 2011

ಡಾ|| ದೀಪಕ್ ವೈಯೋಲಿನ್ ಕಛೇರಿ

(Link)

ವೇದಗಳು ಮತ್ತು ಸಿರಿಭೂವಲಯದ ಸ್ಫೋಟಕ ಮಾಹಿತಿ!

ಸಿರಿಭೂವಲಯದ ಬಗ್ಗೆ ಈಗಾಗಲೇ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ನಾನು ಹಾಸನದ ಶ್ರೀ ಸುಧಾರ್ಥಿಯವರೊಡನೆ ನಡೆಸಿದ ಸಂದರ್ಶನವನ್ನು ವೇದಸುಧೆಯಲ್ಲಿ ಪ್ರಕಟಿಸಲಾಗಿತ್ತು. ಇತ್ತೀಚೆಗೆ ಶ್ರೀ ಸುಧಾರ್ಥಿಯವರ ಒಂದು ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸಿದ ವೇದಸುಧೆ ಬಳಗದ ಸದಸ್ಯರೂ ಪತ್ರಕರ್ತರೂ ಆದ ಶ್ರೀ ಹೆಚ್.ಎಸ್.ಪ್ರಭಾಕರ್ ತಮ್ಮ ವಿಚಾರಗಳನ್ನು ವೇದಸುಧೆಯೊಡನೆ ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ.
-ಹರಿಹರಪುರಶ್ರೀಧರ್
ಸಂಪಾದಕ



ಕವಿ ಕುಮುದೇಂದು ಮುನಿಯ ಅತ್ಯಂತ ಪ್ರಾಚೀನ ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯ ಎಂಬ ಕನ್ನಡ ಅಂಕ ಕಾವ್ಯದಲ್ಲಿನ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ ಕೃತಿ ಹಾಸನದಲ್ಲಿ ೨೦೧೧ ಏಪ್ರಿಲ್ ೧೦ ರಂದು ಬಿಡುಗಡೆಯಾಯಿತು. ಈ ಪದ್ಯ ಕೃತಿಯ ಸಂಗ್ರಾಹಕರು ಹಾಸನದ ಹಾಲುವಾಗಿಲು ಗ್ರಾಮದ ಸಾಹಿತಿ ಮತ್ತು ಕೃಷಿಕರೂ ಆದ ಸುಧಾರ್ಥಿಯವರು!

ವೇದಗಳಿಗೂ ಮತ್ತು ಕ್ರಿ.ಶ. ೮೦೦ ರ ಕಾಲದ ಜೈನ ಧರ್ಮ ಮೂಲದ ಸಿರಿಭೂಲಯ ಎಂಬ ಅಂಕ ಕಾವ್ಯಕ್ಕೂ ಏನು ಸಂಬಂಧ ಎಂದು ನೀವು ಪ್ರಶ್ನಿಸಬಹುದು. ಸಂಬಂಧವಿರುವ ಸಾಧ್ಯತೆಗಳು ನನಗೆ ಗೋಚರಿಸಿರುವುದರಿಂದ ಈ ಜಿಜ್ಞಾಸೆಗೆ ತೊಡಗಿದ್ದೇನೆ! ಕನ್ನಡ ವರ್ಣಮಾಲೆಯ ೬೪ ಅಕ್ಷರಗಳನ್ನು ಕನ್ನಡದ ೬೪ ಅಂಕಿಗಳಿಗೆ ಸಂಕೇತಿಸಿ ಅತ್ಯಂತ ನಿಗೂಢ ಹಾಗೂ ಜಟಿಲವಾಗಿ ಇದು ರಚಿಸಲ್ಪಟ್ಟಿದೆ. ಈ ಕಾವ್ಯದಲ್ಲಿನ ಅಂಕಿಗಳನ್ನು ಅಕ್ಷರಗಳಾಗಿ ರೂಪಾಂತರಿಸಿಕೊಂಡು (ಡೀಕೋಡ್ ಮಾಡಿ) ಅದರಲ್ಲಿ ಹುದುಗಿರುವ ಅಗಾಧವಾದ ಜ್ಞಾನ ರಾಶಿಯ ಅಂತರ್ ಸಾಹಿತ್ಯವನ್ನು ಕೆದಕಿ ತೆಗೆಯುವುದು ಅಷ್ಟು ಸುಲಭವಲ್ಲ ಎಂಬ ಕಾರಣಕ್ಕಾಗಿಯೇ ಹಲವು ಕುಂಟು ನೆಪಗಳ ಸಹಿತ ಇದು ಇಂದಿಗೂ ಸಾಹಿತ್ಯ ಲೋಕದಲ್ಲಿ ಅವಗಣನೆಗೆ ಒಳಗಾಗಿದೆ!

ಆದರೂ ಈ ಪ್ರಾಚೀನ ಕನ್ನಡ ಕೃತಿಯ ಕುರಿತು ತಲೆಕೆಡಿಸಿಕೊಂಡು, ಸದ್ಯಕ್ಕೆ ಲಭ್ಯವಿರುವ ಅದರ ಕೆಲವೇ ಅಧ್ಯಾಯಗಳ ಅಂಕ ಚಕ್ರಗಳನ್ನಾದರೂ ಬಿಡಿಸಿ ಎಲ್ಲರೂ ಓದಬಹುದಾದ ಅಕ್ಷರ ರೂಪಕ್ಕೆ ತರಲು ಹಾಗೂ ಅದರ ನಿಖರವಾದ ಮೂಲ ಕೆದಕಲು ಕಳೆದ ೨೫ ವರ್ಷಗಳಿಂದಲೂ ಹರಸಾಹಸ ಮಾಡುತ್ತಿರುವ ಸುಧಾರ್ಥಿಯವರ ಪರಿಶ್ರಮದ ಫಲವೇ ಈ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹವಾಗಿದೆ. ಈ ಮುನ್ನ ಇವರು ಸಿರಿಭೂವಲಯವನ್ನು ಪರಿಚಯಿಸುವ ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯ ಸಾರ ಎಂಬ ಕೃತಿಯನ್ನೂ ಪ್ರಕಟಿಸಿದ್ದಾರೆ.

ಏ. ೧೦ ರಂದು ಬಿಡುಗಡೆಯಾದ .ಪದ್ಯಗಳ ಸಂಗ್ರಹ ಕೃತಿಯಲ್ಲಿ ಸುಧಾರ್ಥಿಯವರು ಸಿರಿಭೂಲಯದ ಸಂಕ್ಷಿಪ್ತ ಪರಿಚಯ ನೀಡಿದ್ದಾರೆ. ಅದನ್ನು ಓದುತ್ತಾ ಹೋದಂತೆ, ಈಗ ನಾವು ನಂಬಿಕೊಂಡು ಬಂದಿರುವ ಅಥವಾ ನಮಗೆ ಬೋಧಿಸಲ್ಪಟ್ಟಿರುವ ಭಾರತೀಯ ಸಾಂಸ್ಕೃತಿಕ, ಸಾಹಿತ್ಯಿಕ, ಐತಿಹಾಸಿಕವಾದ ಅನೇಕ ಸಂಗತಿಗಳು ಬುಡಮೇಲಾಗುತ್ತವೆ ಹಾಗೂ ಕೆಲವು ವಿಷಯಗಳಂತೂ ನಮ್ಮನ್ನು ಅಲುಗಾಡಿಸುವುದಂತೂ ನಿಜ! ವೇದಗಳ ಕುರಿತಾದ ನಿಜವಾದ ಪರಿಚಯವೂ ಸಹ ಇದೇ ರೀತಿಯ ಕಂಪನಗಳನ್ನು ಉಂಟುಮಾಡುತ್ತವಲ್ಲವೆ!?

ಕನ್ನಡದ ಪ್ರಪ್ರಥಮ ಶಾಸನ-ನಮಗೆ ತಿಳಿದಂತೆ ಹಲ್ಮಿಡಿ ಶಾಸನ. ಊಹು...! ಈ ಕೃತಿಯ ಪ್ರಕಾರ ಅದಲ್ಲವೇ ಅಲ್ಲ! ಅದಕ್ಕಿಂತಲೂ ಪ್ರಾಚೀನವಾದ ಕನ್ನಡ ಶಾಸನಗಳಿವೆ!! ಕನ್ನಡ ಭಾಷೆಗೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದೆ. ಇದು ಈಗ ನಾವು ನಂಬಿರುವ ಚರಿತ್ರೆ- ಛೆ! ಅಲ್ಲ; ಜೈನರ ಪ್ರಥಮ ತೀರ್ಥಂಕರ ವೃಷಭದೇವನ ಕಾಲದಲ್ಲೇ ಕನ್ನಡ ಭಾಷೆಯಿತ್ತು....!!- ಸಿರಿ ಭೂಲಯದಲ್ಲಿ ಈ ರೀತಿಯ ಅನೇಕ ಪಲ್ಲಟಕಾರಿ ವಿಷಯಗಳು ಇವೆಯಾದರೂ, ಪ್ರಕೃತ ಇಲ್ಲಿ ನಮಗೆ ಅಗತ್ಯವಾದ ಹಾಗೂ ಸಂಬಂಧಪಟ್ಟ ಆಯ್ದ ವಿಷಯಗಳನ್ನು ಮಾತ್ರ ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ:

ಆದಿ ತೀರ್ಥಂಕರ ವೃಷಭದೇವನಿಂದ ಆತನ ಮಗಳು ಸುಂದರಿಗೆ ಬೋಧಿಸಲ್ಪಟ್ಟ ಕೇವಲ ಜ್ಞಾನವನ್ನು ಗ್ರಹಿಸಿದ ಆತನ ೨ನೇ ಮಗ ಬಾಹುಬಲಿಯೇ ಮುಂದೆ ಗೊಮ್ಮಟನೆನಿಸುತ್ತಾನೆ. ಈ ಮಹತ್ವದ ಕೇವಲ ಜ್ಞಾನವೇ ದಿವ್ಯ ಧ್ವನಿ ಎನಿಸಿ, ಪ್ರತಿಯೊಬ್ಬ ತೀರ್ಥಂಕರನ ಗಣಧರರ (ಶಿಷ್ಯರ) ಮೂಲಕ ಮುಂದಿನ ತೀರ್ಥಂಕರರವರೆಗೆ ತಲುಪಿಸಲ್ಪಟ್ಟು ೨೨ನೇ ತೀರ್ಥಂಕರ ನೇಮಿಯ ಕಾಲದವರೆಗೂ ಹರಿದುಬಂತು. ಈ ನೇಮಿಯಿಂದ ಈ ದಿವ್ಯ ವಾಣಿಯು ಶ್ರೀ ಕೃಷ್ಣನಿಗೆ ಉಪದೇಶವಾಯಿತು! ನಂತರ ಶ್ರೀ ಕೃಷ್ಣನು ಅದನ್ನು (ವೇದ) ವ್ಯಾಸ ಮಹರ್ಷಿಗೆ ತಿಳಿಸಿಕೊಟ್ಟ! ವ್ಯಾಸರು ಅದನ್ನೇ ತಮ್ಮ ಜಯ (ಮಹಾಭಾರತ) ಕಾವ್ಯದಲ್ಲಿ ೧೬೩ ಶ್ಲೋಕಗಳ ಭಗವದ್ಗೀತೆಯಾಗಿ ನಿರೂಪಿಸಿದರು. ಯುದ್ಧ ವಿಮುಖನಾಗಲಿದ್ದ ಪಾರ್ಥನಿಗೂ ಶ್ರೀ ಕೃಷ್ಣ ಗೀತೋಪದೇಶ ರೂಪದಲ್ಲಿಈ ದಿವ್ಯ ವಾಣಿಯನ್ನು ಉಪದೇಶಿಸಿದ (ಕ್ರಿ.ಪೂ. ೧೯೫೪)!

ಮುಂದೆ, ೨೩ನೇ ತೀರ್ಥಂಕರ ಪಾರ್ಶ್ವನಾಥನ ಶಿಷ್ಯನಾಗಿದ್ದ ಗೌತಮನು ನಂತರ ಬುದ್ಧನಾಗಿ ಬೌದ್ಧ ಮತ ಸ್ಥಾಪಿಸಿದ (ಸುಮಾರು ಕ್ರಿ.ಪೂ. ೪೫೦). ನಂತರ ೨೪ನೇ ತೀರ್ಥಂಕರ ಮಹಾವೀರನಿಂದ ಈ ದೇವ ವಾಣಿಯು ಅವನ ಗಣಧರ (ಬೇರೆ) ಗೌತಮನಿಗೆ ಉಪದೇಶವಾಯಿತು (ಕ್ರಿ.ಪೂ. ೨೦೧). ಹೀಗೆಯೇ ಒಬ್ಬರಿಂದೊಬ್ಬರಿಗೆ ಹರಿದುಬಂದ ಈ ದಿವ್ಯವಾಣಿ ಕೊನೆಗೆ ಕರ್ನಾಟಕಕ್ಕೆ ಬಂತು! ಚಕ್ರವರ್ತಿ ಅಮೋಘ ವರ್ಷ ನೃಪತುಂಗ ಹಾಗೂ ಗಂಗರಸ ಸೈಗೊಟ್ಟ ಸಿವಮಾರರಿಗೆ ಗುರುವೂ ಆಗಿದ್ದ ಕುಮುದೇಂದು ಮುನಿಯು ಈ ಭಗವದ್ವಾಣಿಯನ್ನು ಕನ್ನಡ ಅಂಕಿಗಳಲ್ಲಿ; ನವಮಾಂಕ ಕ್ರಮದಲ್ಲಿ; ಕನ್ನಡವೂ ಸೇರಿದಂತೆ ಜಗತ್ತಿನ ೭೧೮ ಭಾಷೆಗಳ ಸಮಗ್ರ ಸಾಹಿತ್ಯವೂ ಅಡಕಗೊಂಡಂತೆ,ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯ ಎಂಬ ಬಹುಭಾಷಾ ಸಾಂಗತ್ಯ ಕಾವ್ಯವಾಗಿ ಅದನ್ನು ಕ್ರಿ.ಶ. ೮೦೦ ರಲ್ಲಿ ರಚಿಸಿದ... ಈ ವಿಷಯಗಳಿಗೆಲ್ಲ ಆಧಾರಗಳೇನು ಎಂದು ಪ್ರಶ್ನಿಸಿದಾಗ, ಸಿರಿಭೂವಲಯ ದಲ್ಲಿನ ಪದ್ಯಗಳಲ್ಲಿನ ಅಂಶಗಳೇ ಆಧಾರ ಎಂದು ಸುಧಾರ್ಥಿಯವರು ಸ್ಪಷ್ಟಪಡಿಸುತ್ತಾರೆ!

ಮುಂದೆ ಅದು ಆಧುನಿಕ ಕಾಲದಲ್ಲಿ ಹೇಗೆ ನಷ್ಟಕ್ಕೆ, ಅವಗಣನೆಗೆ ಒಳಗಾಗಿ, ಯಾರ‍್ಯಾರ ಕೈ ಸೇರಿತು; ಕೊನೆಗೆ ಅದು ಹಾಸನದ ಸುಧಾರ್ಥಿ ಅವರವರೆಗೂ ಹೇಗೆ ಹರಿದುಬಂತು ಹಾಗೂ ಅದರ ಜಟಿಲತೆಯ ಸ್ವರೂಪ ಪರಿಚಯ ಇತ್ಯಾದಿಗಳನ್ನೆಲ್ಲ ಇಲ್ಲಿ ವಿವರಿಸಲು ಸ್ಥಳಾಭಾವವಿದೆ. ಮುಖ್ಯವಾದ ಸಂಗತಿಯನ್ನಷ್ಟೆ ನಾನಿಲ್ಲಿ ಪ್ರಸ್ತಾಪಿಸಿದ್ದೇನೆ. ಸಮಗ್ರ ಮಾಹಿತಿಗಾಗಿ ಆಸಕ್ತರು ಕೆಳಕಂಡ ವಿಳಾಸ ಹಾಗೂ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು:

ಸುಧಾರ್ಥಿ, ಹಾಲುವಾಗಿಲು ಗ್ರಾಮ, ತಟ್ಟೆಕೆರೆ ಅಂಚೆ, ಹಾಸನ-೫೭೩೨೦೧

ದೂರವಾಣಿ: ೦೮೧೭೨ ೨೫೭೧೮೬ ಮೊಬೈಲ್ ೯೪೪೯೯೪೬೨೮೦

ಈಗ ನನ್ನ ಪ್ರಶ್ನೆಗಳು ಇಂತಿವೆ:

೧) ಆದಿ ತೀರ್ಥಂಕರ ವೃಷಭದೇವನ ಕಾಲ (ಈತನ ಕಾಲ ಸ್ಪಷ್ಟವಾಗಿಲ್ಲ; ಒಬ್ಬೊಬ್ಬ ತೀರ್ಥಂಕರರ ನಡುವೆ ಲಕ್ಷಾಂತರ ವರ್ಷಗಳ ಅಂತರವಿದೆ ಎಂಬ ಉತ್ಪ್ರೇಕ್ಷೆಯನ್ನು ನಂಬುವಂತಿಲ್ಲ! ಶ್ರೀ ಕೃಷ್ಣನ ಕಾಲಕ್ಕೂ ಹಿಂದೆ ಅಂದರೆ ಅಂದಾಜು ೪ ರಿಂದ ೫ ಸಾವಿರ ವರ್ಷಗಳಷ್ಟು ಹಿಂದೆ ಎಂದು ಊಹಿಸೋಣ!) ಆತ ತನ್ನ ಮಗಳು ಸುಂದರಿಗೆ ಬೋಧಿಸಿದ ಕೇವಲ ಜ್ಞಾನದ ಮೂಲ ಯಾವುದು? ಏಕೆಂದರೆ ಭಗವದ್ಗೀತೆಯ ಮೂಲ ನಮಗೆ ತಿಳಿದಂತೆ ವೇದೋಪನಿಷತ್ತುಗಳೇ ಅಗಿವೆ!

೨) ವೃಷಭದೇವನ ಕಾಲದಿಂದಲೂ ಜೈನ ಧರ್ಮವು ಅಹಿಂಸೆಯನ್ನು ಪರಮ ಧರ್ಮವಾಗಿ ಪಾಲಿಸುತ್ತಿತ್ತೆ? ಏಕೆಂದರೆ, "ಯಜ್ಞ ಯಾಗಾದಿಗಳಲ್ಲಿ ಪ್ರಾಣಿ ಹಿಂಸೆ ಇದೆ ಎಂದು ವೇದೋಪನಿಷತ್ತುಗಳಲ್ಲಿ ಉಲ್ಲೇಖವಿದೆ "ಎಂಬ ನಂಬಿಕೆಯೇ ಜೈನ ಧರ್ಮೀಯರು ವೇದಗಳನ್ನು ದೂರವಿಟ್ಟರು ವೇದೋಪನಿಷತ್ತುಗಳು ಇವರಿಗೆ ಆಧಾರಗಳಲ್ಲ ಎಂಬುದು ಐತಿಹಾಸಿಕ ಸತ್ಯ. ಹಾಗಾದರೆ ವೃಷಭದೇವನ ಕಾಲಕ್ಕಾಗಲೇ ವೇದಗಳು ಅಪಾರ್ಥಕ್ಕೀಡಾಗಿ ತಿರುಚಲ್ಪಟ್ಟಿದ್ದವೆ?

೩) ಕುಮುದೇಂದು ಮುನಿಯು ಯಾಪನೀಯ ಜೈನ ಪಂಗಡಕ್ಕೆ ಸೇರಿದವನಾಗಿದ್ದ. ಈ ಯಾಪನೀಯರು ವೇದಗಳೂ ಸೇರಿದಂತೆ ಸರ್ವ ಧರ್ಮ ಸಮನ್ವಯ ಸಾಧಕರು. ಇದೇ ಕಾರಣಕ್ಕಾಗಿ ಅಂದಿನ ದಿಗಂಬರ ಜನ ಸಂಪ್ರದಾಯದವರು ಇವರನ್ನು ಜೈನರೆಂದು ಮಾನ್ಯ ಮಾಡಿರಲಿಲ್ಲ! ಈ ಕಾರಣದಿಂದಾಗಿ ಜೈನರಿಗೆ ಪೂಜ್ಯವಾದ ಧವಳಗಳ ವಿಚಾರವೂ ಸಿರಿಭೂಲಯದಲ್ಲಿ ಅಡಕವಾಗಿದ್ದರೂ ಸಹ ಅವರು ಈ ಕಾವ್ಯವನ್ನು ಮಾನ್ಯ ಮಾಡಿರಲಿಲ್ಲ! ಇನ್ನು ಇತ್ತ, ಸನಾತನ ಹಿಂದೂ ಸಂಪ್ರದಾಯಸ್ಥರಂತೂ " ಈ ಜೈನ ಸಂಪ್ರದಾಯದವನಿಗೆ ವೇದಗಳು ಹಾಗೂ ಉಪನಿಷತ್ತುಗಳ ವಿಚಾರವೇನು ತಿಳಿದೀತು?" ಎಂದು ವೇದ ವಿಚಾರಗಳನ್ನೂ ಒಳಗೊಂಡ ಈ ಕಾವ್ಯವನ್ನು ಉಪೇಕ್ಷಿಸಿದರು; ಹೀಗಾಗಿ ಎರಡೂ ಕಡೆಯವರಿಂದ ಇದು ಹೆಚ್ಚು ಪ್ರಚಾರಕ್ಕೆ ಬರಲೇಇಲ್ಲ ಎಂದು ಹೇಳಲಾಗಿದೆ! ವೇದಗಳ ಕುರಿತು ಜೈನ, ಬೌದ್ಧ ಅಥವಾ ಅನ್ಯ ಧರ್ಮೀಯರಿಗೆ ಏಕಿಷ್ಟು ಮತ್ಸರ ಅಥವಾ ತಾತ್ಸಾರ!?

೪) ಬೌದ್ಧರ ಕಾಲದಲ್ಲಂತೂ ಬಹುತೇಕ ನಾಶವೇ ಆಗಿದ್ದ ವೇದಗಳನ್ನು ಮತ್ತೆ ಎತ್ತಿಹಿಡಿಯಲು ಶಂಕರಾಚಾರ್ಯರು ಎಷ್ಟೆಲ್ಲ ಶ್ರಮಪಟ್ಟರು ಎಂಬುದು ಎಲ್ಲರಿಗೂ ಗೊತ್ತಿರುವುದೇ! ಜಗತ್ತಿನ ಯಾವುದೇ ಸಾಹಿತ್ಯ ಅಥವಾ ಧಾರ್ಮಿಕ ಸಂದೇಶಗಳಿಗೂ ವೇದಗಳೇ ಮೂಲಾಧಾರ ಎಂಬುದು ಸತ್ಯ. ಹೀಗಿದ್ದೂ "ಇದನ್ನೆಲ್ಲ ನಾವೇ ಸೃಷ್ಟಿಸಿದ್ದು; ನಮ್ಮದೇ ಶ್ರೇಷ್ಠ...ನಾವು ಪ್ರತ್ಯೇಕ..." ಎಂದು ವಾದಿಸುತ್ತಾ ಜಗತ್ತಿನಾದ್ಯಂತ ಹಲವು ಗುಂಪುಗಳನ್ನಾಗಿ ಏಕೆ ಮಾಡಿಕೊಳ್ಳಲಾಯಿತು ಮತ್ತು ಏಕೆ ಮಾಡಿಕೊಂಡು ಬರಲಾಗುತ್ತಿದೆ!? ಇದನ್ನೆಲ್ಲ ತೊಡೆದುಹಾಕಲು ಇರುವ ಪರಿಹಾರವಾದರೂ ಏನು?
-------------------------------------------------------------------
ಈ ಹಿಂದೆ ಪ್ರಕಟವಾಗಿದ್ದ ಈ ಕೆಳಗಿನ ಭಾಗವನ್ನು ಪುನ: ಇದೇ ವಿಷಯಕ್ಕೆ ಸಂಬಂಧಿಸಿರುವುದರಿಂದ ಪುನ: ಪ್ರಕಟಿಸಲಾಗಿದೆ.
-ಸಂಪಾದಕ
ಮೊನ್ನೆ ನನ್ನ ಮಗ ಸುಬ್ರಹ್ಮಣ್ಯನ ಸ್ನೇಹಿತ ಅನಂತ ನಮ್ಮ ಮನೆಗೆ ಬಂದು " ಅಂಕಲ್, ನಮ್ಮ ಬಂಧುಗಳೊಬ್ಬರು ಸುಧಾರ್ಥಿ ಅಂತಾ ಇದಾರೆ. ಅವರ ಪರಿಚಯ ನಿಮಗೆ ಮಾಡಿಕೊಡಬೇಕು, ಅವರು "ಸಿರಿಭೂವಲಯ" ಅನ್ನೋ ಒಂದು ದೊಡ್ದ ಗ್ರಂಥದ ಬಗ್ಗೆ ೨೫-೩೦ ವರ್ಷಗಳಿಂದ ಸಂಶೋಧನೆ ಮಾಡ್ತಾ ಇದಾರೆ. ಅವರ ಮನೆಗೆ ಹೋಗೋಣ, ಯಾವಾಗ ಫ್ರೀ ಟೈಮ್ ಸಿಗುತ್ತೆ? ಹೇಳಿ "ಅಂದ. ಸರಿ ಮುಂದಿನ ಗುರುವಾರ ಭೇಟಿ ಮಾಡಲು ಫಿಕ್ಸ್ ಆಯ್ತು.ಈಮಧ್ಯೆ ನನ್ನ ಮಿತ್ರರಾದ ಸಾಹಿತ್ಯ ಸಂಶೋಧಕರಾದ ಡಾ|| ಶ್ರೀವತ್ಸ.ಎಸ್.ವಟಿ ಯವರು ನಿನ್ನೆ ಹಾಸನ ಆಕಾಶವಾಣಿಗೆ ರೆಕಾರ್ಡಿಂಗ್ ಗೆ ಬಂದಿದ್ದವರು ನಮ್ಮ ಮನೆಗೆ ಬಂದಿದ್ದರು. ಅವರೊಡನೆ ಅನೌಪಚಾರಿಕ ಮಾತುಕತೆ ನಡೆಸುವಾಗ ಅವರೊಡನೆ "ಸಿರಿಭೂವಲಯ" ದ ಬಗ್ಗೆ ಪ್ರಸ್ಥಾಪಿಸಿದೆ. ಅವರು ಆಗಾಗಲೇ ೪-೫ ವರ್ಷಗಳಲ್ಲೇ ತರಂಗ ಪತ್ರಿಕೆಯಲ್ಲಿ ಈ ಬಗ್ಗೆ ವಿಶೇಷ ಲೇಖನ ಬರೆದಿದ್ದಾರೆ. ಅವರೊಡನೆ ನಡೆದ ಮಾತು ಕತೆ ವೇದಸುಧೆಯ ಅಭಿಮಾನಿಗಳಿಗಾಗಿ ಹಾಕಿರುವೆ. ಗುರುವಾರ ಶ್ರೀ ಸುಧಾರ್ಥಿಯವರೊಡನೆ ನಡೆಯುವ ಮಾತುಕತೆಯನ್ನೂ ಇಲ್ಲಿ ಅಪ್ ಲೋಡ್ ಮಾಡುವೆ. ಈ ಬಗ್ಗೆ ವೇದಸುಧೆಯ ಬಳಗದ ಇನ್ಯಾರಿಗಾದರೂ ಮಾಹಿತಿ ಇದ್ದರೆ ದಯಮಾಡಿ ತಿಳಿಸಿ. ಬಹಳ ಅಪರೂಪವಾದ ಅದ್ಭುತವಾದ ಈ ಗ್ರಂಥದ ಪೀಠಿಕೆಯ ಪರಿಚಯ ಮಾಡುವುದರಲ್ಲೇ ೨೫-೩೦ ವರ್ಷದ ಸಂಶೋಧನೆ ಕಳೆದಿದೆ, ಅಂತಾರೆ, ಶ್ರೀ ವಟಿಯವರು. ಅವರ ಮಾತುಗಳನ್ನೇ ಕೇಳಿ.















ತರಂಗ ಪತ್ರಿಕೆಯಲ್ಲಿನ ಅವರ ಬರಹವನ್ನು ತೋರಿಸುತ್ತಾ ವಿವರಣೆ ಕೊಡುತ್ತಿರುವ ಡಾ|| ಶ್ರೀವತ್ಸ.ಎಸ್. ವಟಿ, ಜೊತೆಯಲ್ಲಿ ಹೊಯ್ಸಳ ಟೂರಿಸಮ್ ಪತ್ರಿಕೆಯ ವ್ಯವಸ್ಥಾಪಕರಾದ ಶ್ರೀ ದಾಸೇಗೌಡ.





ಅಂತರ್ಜಾದಲ್ಲೂ ಒಂದಷ್ಟಿದೆ. ನೋಡಿ: http://en.wikipedia.org/wiki/Siribhoovalaya

Saturday, April 16, 2011

“ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ.....”

 “ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ.....” ಎನ್ನುವ ಶ್ರಿ ಕನಕದಾಸರ ಕೃತಿ ಮಾಯೆಯ ಮಾಯಾಜಾಲವನ್ನು ವಿಧವಿಧವಾದ ಉಪಮೆಗಳೊಂದಿಗೆ ಬಿಂಬಿಸುತ್ತದೆ. ಮಾಯೆಯ ಮೋಡಿಗೆ ಒಳಗಾಗದವರಿಲ್ಲ; ಮಾಯೆಯ ಜಾಲಕ್ಕೆ ಸಿಲುಕದವರಿಲ್ಲ ಮತ್ತು ಮಾಯೆಯ ಬಲೆಗೆ ಬಿದ್ದು ಸಂಕಟಕ್ಕೀಡಾಗದವರಿಲ್ಲ. ವಿಪರ್ಯಾಸವೆಂದರೆ, ಮಾಯೆಯೆಂದು ತಿಳಿದೂ ಅದರ ಪಾಶದಲ್ಲಿ ಸಿಲುಕಿಕೊಳ್ಳುವ ಮಾಯೆಯ ಆಕರ್ಷಣೆ ಅಷ್ಟು ಪ್ರಬಲವಾದದ್ದು. ಒಂದು ರೀತಿ ಸತ್ಯವನ್ನು, ವಾಸ್ತವವನ್ನು ಮತ್ತು ನಿಜಸ್ಥಿತಿಯನ್ನು ಮರೆ ಮಾಚಿ, ಅಸತ್ಯದ ಕಡೆಗೆ, ಅವಾಸ್ತವದ ಕಡೆಗೆ ಮತ್ತು ಮಿಥ್ಯದ ಕಡೆಗೆ ನಮ್ಮನ್ನು ಹೊರಳಿಸುವ ಈ ಮಾಯೆಯ ಪ್ರಭಾವ ಅಗಾಧವಾದದ್ದು. ಮಾಯೆಗೆ ವ್ಯಾಖ್ಯಾನಗಳು ಹಲವಾರು. ಕೆಲವರಿಗೆ ಅದು ಬಂಧನವೆಂದಾದರೆ ಮತ್ತೆ ಕೆಲವರಿಗೆ ಅದು ದುರ್ಮಾರ್ಗದೆಡೆಗೆ ಒಯ್ಯುವ ಸಾಧನವೆನಿಸಬಹುದು. ಏನೇ ಆಗಲಿ, ಮಾಯೆಯ ಆಟಕ್ಕೆ ತಲೆ ಬಾಗಿದವನಿಗೆ ಅಪಾಯ, ನಷ್ಟ, ಮಾನಹಾನಿ, ದೇಹಹಾನಿ ಮುಂತಾದ ತೊಂದರೆಗಳು ಕಟ್ಟಿಟ್ಟ ಬುತ್ತಿ. ಬಂಗಾರದ ಜಿಂಕೆಯ ವೇಷದ ರಾವಣನ ಮಾಯಕ್ಕೆ ಬಲಿ ಬಿದ್ದು ನಂತರ ಕೋಟಲೆಗಳ ಸರಮಾಲೆಯನ್ನೇ ಎದುರಿಸಿದ ಸೀತಾಮಾತೆ, ಮೇನಕೆಯ ವೈಯಾರಕ್ಕೆ ಮರುಳಾಗಿ, ಬಾಗಿ, ತಪೋಭಂಗವನ್ನನುಭವಿಸಿದ ವಿಶ್ವಾಮಿತ್ರ ಋಷಿಯಿಂದ ಹಿಡಿದು ಹಗ್ಗವನ್ನು ಹಾವೆಂದು ಭ್ರಮಿಸಿ ಗೋಳಿಡುವ ಪಾಮರರ ಪರಿಪಾಟಲು ಈ ಮಾಯೆ ಯಾರನ್ನೂ ಕೈಬಿಟ್ಟಿಲ್ಲ (ಶನಿ ಗ್ರಹದ ಹಾಗೆ!) ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗಾಗಿ ಜೀವನದಲ್ಲಿ ಇಂತಹ ಮೋಹ-ಪಾಶಗಳೆಂಬ ಬಲೆಗಳು ಎದುರಾದಾಗ ಜಾಗರೂಕರಾಗಿ ಅವುಗಳ ನಿಜ ಸ್ವರೂಪವನ್ನರಿತು ಮುಂದುವರೆಯುವುದು ಅತ್ಯಂತ ಅವಶ್ಯಕ.

ಮಾಯೆಯ ಪರಿಕಲ್ಪನೆ ಕೂಡಾ ಒಬ್ಬೊಬ್ಬರಿಗೆ ಒಂದೊಂದು. ಮಾಯೆ ಕುರಿತು ಸರ್ವಜ್ಞನ ಈ ವಚನ ನೋಡಿ: “ಮಾಯೆ ಗೆದ್ದಿಹ ಸೊಲ್ಲು ಬಾಯಿ ಮಾತಲ್ಲವೇ? ಮಾಯೆಯಿಂ ಕಾಯ ಆಗಿರಲು, ಇವರುಗಳಾ! ಮಾಯೆ ಗೆಲಲುಂಟೆ ಸರ್ವಜ್ಞ.” ಅರ್ಥಾತ್ ಮಾಯೆಯನ್ನು ಅಂದರೆ ಹೆಣ್ಣನ್ನು ಗೆದ್ದೆನೆಂದು ಹೇಳುವವರು ಬರೀ ಬಾಯಿ ಮಾತಿನ ಶೂರರು. ನಮ್ಮ ಶರೀರ ಸೃಷ್ಠಿ ಆಗಿರುವುದೇ ಮಾಯೆ. ಅಂದರೆ ಹೆಣ್ಣಿನಿಂದ. ಆದುದರಿಂದ ಮಾಯೆ ಗೆಲಲು ಸಾಧ್ಯವೇ? [ಹೆಣ್ಣಿಗೂ ಗಂಡು ಮಾಯೆಯೇ ಆಗಿರಬಾರದೇಕೆ (?)] ಹಾಗೆ ನೋಡಿದರೆ ಪ್ರಪಂಚದಲ್ಲಿರುವ ಎಲ್ಲಾ ಲೌಕಿಕ (ಪ್ರಾಪಂಚಿಕ) ವಸ್ತುಗಳೂ ಮಾಯೆಯೇ. ಅದು ಚಿನ್ನವಿರಬಹುದು, ಭೂಮಿಯಿರಬಹುದು, ಹೆಣ್ಣಿರಬಹುದು ಅಥವಾ ಇನ್ಯಾವುದೇ ವಸ್ತುವಿರಬಹುದು. ಇಂತಹ ಲೌಕಿಕ ವಸ್ತುಗಳ ಆಕರ್ಷಣೆ ಎಷ್ಟೆಂದರೆ ಅವುಗಳ ಪ್ರಾಪ್ತಿಗಾಗಿ ಮಾನವ ಏನನ್ನು ಮಾಡಲೂ ಸಿದ್ಧನಾಗಿಬಿಡುತ್ತಾನೆ. ಅದಕ್ಕಾಗಿ ಎಲ್ಲಾ ನೈತಿಕ ಮೌಲ್ಯಗಳಿಗೂ ತಿಲಾಂಜಲಿ ನೀಡಲೂ ಹಿಂಜರಿಯುವುದಿಲ್ಲ. ಅಷ್ಟೇ ಏಕೆ, ಅವುಗಳ ಪ್ರಾಪ್ತಿಗಾಗಿ, ತನಗರಿಯದೆಯೇ ತನ್ನ ಸರ್ವಸ್ವವಾದ ಪ್ರಾಣತ್ಯಾಗಕ್ಕೂ ಸಿದ್ಧನಾಗುತ್ತಾನೆ. ಈ ಮಾಯೆಯೆಂಬ ಆಕರ್ಷಣೆ ಅಷ್ಟು ಪ್ರಬಲವಾದದ್ದು. ಮಾಯೆಯ ಮೂಲಗಳಾದ “ಹೆಣ್ಣು-ಹೊನ್ನು-ಮಣ್ಣಿ”ಗಾಗಿ ತಮ್ಮ ರಾಜ್ಯ-ಪ್ರಾಣಗಳನ್ನೇ ಕಳೆದುಕೊಂಡ ಅಸಂಖ್ಯಾತ ನಿದರ್ಶನಗಳು ಪ್ರಪಂಚದ ಇತಿಹಾಸದ ಗರ್ಭದಲ್ಲಿ ಅಡಗಿ ಕುಳಿತಿವೆ. ಇಷ್ಟಾಗಿಯೂ ನಾವು ಪುನ: ಪುನ: “ಇರುಳು ಕಂಡ ಭಾವಿಗೆ ಹಗಲು ಬಿದ್ಧಂತೆ” ನಡೆಯುತ್ತಿರುವುದು ಈ ಮಾಯೆಯೆಂಬ ಭ್ರಮಾಲೋಕದ ಮಹಿಮೆಯಿಂದಲೇ!

ಸೂಕ್ಷ್ಮವಾಗಿ ಮನನ ಮಾಡಿದಾಗ ಸ್ಪಷ್ಟವಾಗುವ ಅಂಶವೆಂದರೆ, ಈ ಪ್ರಾಪಂಚಿಕ ವಸ್ತುಗಳೇ ನಿಜವಾದ ಮಾಯೆಯ ಸ್ವರೂಪಗಳು. ಮೇಲ್ನೋಟಕ್ಕೆ ಇವು ಆರಾಮದಾಯಕ ಮತ್ತು ಸುಖಕರ ಸಾಧನಗಳೆಂದು ತೋರಿದರೂ, ಆಂತರಿಕವಾಗಿ ಅವು ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೆ ನಿಜವಾದ ಕಾರಣಕರ್ತರುಗಳು.  ಹಾಗೆಂದು ಲೌಕಿಕ ವಸ್ತುಗಳನ್ನು ಸಂಪೂರ್ಣ ವರ್ಜಿಸಬೇಕೆಂದಲ್ಲ. ಪ್ರಪಂಚಕ್ಕೆ ಬಂದ ಮೇಲೆ, ಅದರಲ್ಲೂ ದಿವ್ಯವಾದ ಈ ಮಾನವ ಜನ್ಮ ಪಡೆದ ಮೇಲೆ, ಇರುವ ತನಕ, ಪ್ರಾಪಂಚಿಕ ಮತ್ತು ಅಂತಿಮವಾಗಿ  ಅಲೌಕಿಕ ಸಾಧನೆಗೆ ಈ ಪ್ರಾಪಂಚಿಕ ವಸ್ತುಗಳೇ ಮೆಟ್ಟಿಲುಗಳಷ್ಟೇ ಆಗಬೇಕು. ಆದರೆ ಸುಖ, ಶಾಂತಿ ಮತ್ತು ನೆಮ್ಮದಿಗಳನ್ನು ಅವುಗಳಲ್ಲಿ ಅರಸುವುದು ಕತ್ತಲಲ್ಲಿ ಸೂಜಿಯನ್ನು ಹುಡುಕಿದಂತೆಯೇ. ಬರೀ ಆಸೆ, ಬರೀ ಪರಿಶ್ರಮವಷ್ಟೇ ಆದೀತು. ಆದುದರಿಂದ, ಅವುಗಳ ಸಂದರ್ಭಾನುಸಾರ ಮತ್ತು ಅವಶ್ಯಾನುಸಾರ ಸಂಗ್ರಹಣೆ, ಯುಕ್ತಾಯುಕ್ತಾನುಸಾರ ಬಳಕೆ ಮತ್ತು ಮುಂದಿನ ಪೀಳಿಗೆಗಾಗಿ ಅವುಗಳ ಸಂರಕ್ಷಣೆ ? ಅಂತಹ ವಸ್ತುಗಳ ಮಾಯೆಯ ಪಾಶದಿಂದ ಬಿಡಿಸಿಕೊಳ್ಳಬಹುದಾದಂತಹ ಕೆಲವು ಸರಳೋಪಾಯಗಳು. “ಕಂಕುಳಲ್ಲಿರುವ ಮಗುವನ್ನು ಊರೆಲ್ಲಾ ಹುಡುಕಿದಂತೆ” ನಿಜವಾದ ಸುಖ-ಶಾಂತಿ ನಮ್ಮ ಆಂತರ್ಯದಲ್ಲಿಯೇ ಇದೆ ಎಂಬ ಜ್ಞಾನ ಮತ್ತು ತಿಳುವಳಿಕೆ ಹೆಚ್ಚಿದಷ್ಟೂ ಈ ಪ್ರಾಪಂಚಿಕ ವಸ್ತುಗಳ ಮೇಲಿನ ಮೋಹ ಕಡಿಮೆಯಾಗುತ್ತಾ ಹೋಗುತ್ತದೆ.  ಯಾವುದೇ ಪ್ರಾಪಂಚಿಕ ವಸ್ತುಗಳು ಹೆಚ್ಚಾದರೂ - ಹಣ, ಭೂಮಿ, ಆಭರಣಗಳು, ಇತ್ಯಾದಿ - ಅವುಗಳಿಂದ ಸುಖ, ಶಾಂತಿ, ನೆಮ್ಮದಿಗಿಂತ ಚಿಂತೆ, ಭಯ, ಅವನತಿ ಮತ್ತು ಅಪಾಯಗಳೇ ಹೆಚ್ಚು. ಅದೇ ಅಶಾಂತಿಯ ಮತ್ತು ದುರ್ಮಾರ್ಗದ ಬಾಳುವೆಗೆ ಮುನ್ನುಡಿ. ಇಂದಿನ ಅನೇಕ ರಾಜಕಾರಣಿಗಳ ಮತ್ತು ಧನದಾಹಿಗಳ ಬದುಕು ಕೂಡ ಹೀಗೇ ಆಗಿದೆ. ನೋಡಲಿಕ್ಕಷ್ಟೇ ಅವರು ಮುಖಂಡರು, (ನ)ಗಣ್ಯರು; ಆದರೆ ಆಂತರ್ಯದಲ್ಲಿ ಅವರೆಲ್ಲರೂ ಅಶಾಂತಿಯಿಂದ, ಅಭದ್ರತೆಯಿಂದ ಮತ್ತು ಪಾಪಪ್ರಜ್ಞೆ(ಅದಿದ್ದವರಲ್ಲಿ ಮಾತ್ರಾ!) ಯಿಂದ ಮತ್ತು ಇವುಗಳ ಪ್ರಭಾವದಿಂದ ವಾಸಿಯಾಗದಂತಹ ಅನೇಕ ಖಾಯಿಲೆಗಳಿಂದ ಬಳಲಿ ಬೆಂಡಾದವರೇ/ಬೆಂಡಾಗುತ್ತಿರುವವರೇ.  ಆದರೆ ಇಂತಹ ಪ್ರಾಪಂಚಿಕ ವಸ್ತು/ವ್ಯಕ್ತಿಗಳ ಮೂಲಕ ನಮಗುಂಟಾಗುವ ಮಾಯಾ ಪ್ರಪಂಚದ ಅನುಭವಗಳೇ ಮುಂದೆ ನಮ್ಮನ್ನು ಮಾಯಾಪಾಶದಿಂದ ಬಿಡಿಸಿಕೊಳ್ಳುವ ಸಾಧನಗಳಾದಾವು; ಆಗಬೇಕು. ಅಂಥವುಗಳ ಮಿಥ್ಯ ಅವಲಂಬನೆಯಿಂದ ಉಂಟಾದ ಕಷ್ಟ-ಕೋಟಲೆಗಳು, ನಷ್ಟಗಳು, ಅವಮಾನಗಳು ಇತ್ಯಾದಿ ನಮ್ಮ ಕಣ್ತೆರೆಸಬೇಕು. ಒಮ್ಮೆ ಸಂಪತ್ತನ್ನೇ ಸರ್ವಸ್ವವೆಂದು ತಿಳಿದಿದ್ದ ಶ್ರೀ ಪುರಂದರದಾಸರು ಅದಕ್ಕೆಂದೇ ನಂತರ ಈ ರೀತಿ ಹಾಡಿದ್ದು: “ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು | ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ......”

ಆದುದರಿಂದ ಲೌಕಿಕ ವಸ್ತುಗಳನ್ನು ನಾವು ಪರಿಭಾವಿಸುವ ರೀತಿಯಲ್ಲಿ ಜಾಗ್ರತೆ ವಹಿಸಬೇಕು. ಒಬ್ಬ ಸಾಮಾನ್ಯ ಮನುಷ್ಯ ಓರ್ವ ಸುಂದರ ಯುವತಿಯಲ್ಲಿ ಸೌಂದರ್ಯ ಮತ್ತು ಆಕರ್ಷಣೆ ಕಂಡರೆ, ಅದೇ ರಾಮಕೃಷ್ಣ ಪರಮಹಂಸರು ಅವಳಲ್ಲಿ ದೇವೀ ಅಥವಾ ಮಾತೃಸ್ವರೂಪವನ್ನು ಕಾಣುತ್ತಾರೆ. ಬೇಲೂರು ಶಿಲಾಬಾಲಿಕೆ - ಸಾಮಾನ್ಯ ಮನುಷ್ಯ ಮತ್ತು ಕಲೋಪಾಸಕನಲ್ಲಿ ಬೇರೆ ಬೇರೆ ಭಾವನೆಗಳನ್ನೇ ಉಂಟುಮಾಡುತ್ತದೆ. ಮಾಯೆಯೆ ಪರದೆಯನ್ನು ಸರಿಸಿದಾಗಲೇ ಸತ್ಯದರ್ಶನ ಸಾಧ್ಯವಾಗುತ್ತದೆ. ಕಡು ಲೋಭಿಯಲ್ಲಿರುವ ಧನ ಆತನ ಕಣ್ಣಿಗಷ್ಟೇ ಆಪ್ಯಾಯಮಾನವಾದರೆ, ಧನವಂತನಾದ ಗುಣವಂತ ಆ ಹಣವನ್ನು ಸತ್ಪಾತ್ರರಿಗೆ ಮತ್ತು ಸಮಾಜಮುಖೀ ಕಾರ್ಯಗಳಿಗೆ ವಿನಿಯೋಗಿಸುವುದರಲ್ಲಿಯೇ ಸಾರ್ಥಕ್ಯ ಕಂಡುಕೊಳ್ಳುತ್ತಾನೆ. ಕಲಿತ ವಿದ್ಯೆಯನ್ನು, ಕೌಶಲ್ಯಗಳನ್ನು ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಳ್ಳುವಲ್ಲಿ ಕೂಡ ಈ ಮಾಯೆಯ ಪ್ರಭಾವ ಅಗಾಧವಾದುದು. ಈ ಸಂಪನ್ಮೂಲಗಳು ಒಳಿತಿಗೂ-ಕೇಡಿಗೂ ಸಮನಾಗಿ ಬಳಸಿಕೊಳ್ಳುವಂತಹವು. ಸಮಾಜದ ಅತೀ ಗಣ್ಯರು, ವಿದ್ಯಾವಂತರು ಮತ್ತು ಪ್ರಾಜ್ಞರು ಎನಿಸಿಕೊಂಡ ಬಹು ಮಂದಿ ಇಂದು ನಡೆಸುತ್ತಿರುವ ಅನೇಕ ಅನಾಚಾರಗಳೇ ಇದಕ್ಕೆ ಸಾಕ್ಷಿ. ಹಣ, ಯಶಸ್ಸು, ಅಧಿಕಾರ, ಕೀರ್ತಿ ಮುಂತಾದವುಗಳ ಸಂಗ್ರಹಣೆಗಾಗಿ ವಿದ್ಯಾವಂತರೇ ಇಂದು ಎಲ್ಲ ವಾಮಮಾರ್ಗಗಳನ್ನು ಅನುಸರಿಸುತ್ತಿರುವುದು ಕೂಡ ಈ ಮಾಯೆಯೆಂಬ ಬಿಸಿಲು ಕುದುರೆಯನ್ನೇರಿಯೇ! ಕಾಮನಬಿಲ್ಲಿನಷ್ಟು ಆಕರ್ಷಕ ದೃಶ್ಯ ಮತ್ತೊಂದಿಲ್ಲ. ಆದರೆ ಅದು ಅಷ್ಟೇ ಕ್ಷಣಿಕ! ಆ ಸತ್ಯದ ಅರಿವು ನಮ್ಮ ಅಂತರಾಳಕ್ಕಿರಬೇಕಷ್ಟೇ!

ಹಾಗಾಗಿ ಹೊರನೋಟಕ್ಕೆ ಕಂಡು ಬರುವುದೆಲ್ಲಾ ವಾಸ್ತವವಾದುದಲ್ಲ ಎಂಬ ಅಂಶ ತಡವಾಗಿಯಾದರೂ ನಮಗೆ ಸ್ಪಷ್ಟವಾಗಬೇಕು. ನಿಜಾರ್ಥಗಳು-ಗೂಡಾರ್ಥಗಳು ಬೇರೆ ಬೇರೆಯೇ ಇರುತ್ತವೆ.  ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲ ಇತ್ಯಾದಿಗಳಂತೆ! ಯಾವ ವಸ್ತುಗಳ-ವ್ಯಕ್ತಿಗಳ ಸದ್ಬಳಕೆಯಿಂದ/ಸಂಪರ್ಕದಿಂದ ಶಾಶ್ವತ ಸುಖ ಅಥವಾ ಶಾಶ್ವತ ನೆಮ್ಮದಿಯೆಡೆಗೆ ನಡೆಯಲು ಸಾಧ್ಯ ಎಂಬ ಒಳ ಚಿಂತನೆ ಬಹಳ ಅವಶ್ಯ. ಒಂದು ಫಲವನ್ನು ಒಬ್ಬನೇ ಸವಿಯುವ ಸವಿಯೇ ಬೇರೆ. ಅದೇ ಫಲವನ್ನು ನಾಲ್ಕಾರು ಜನರಿಗೆ ಹಂಚಿ ಸಾಮೂಹಿಕವಾಗಿ ಸೇವಿಸುವ ಭಾವವೇ ಬೇರೆ. ಅದೇ ಅದರ ನಿಜವಾದ ಸವಿ. ಎಲ್ಲವೂ ನಮಗಿರಲಿ ಎಂಬ ಉತ್ಕಟಾಪೇಕ್ಷೆ ಎಲ್ಲರಲ್ಲಿ ಸಹಜವೇ. ಆದರೂ ಅಷ್ಟೂ ನಮಗೆ ನಿಜವಾಗಿ ಬೇಕೇ? ಎಂದು ನಮ್ಮ ಅಂತರಾತ್ಮವನ್ನು ಪ್ರಶ್ನಿಸಿಕೊಂಡಾಗ ನಿಜ ತಂತಾನೇ ಸ್ಪಷ್ಟವಾಗುತ್ತದೆ. ಕೂಡಿಟ್ಟ ಹಣ, ಕಟ್ಟಿದ ಮನೆ-ಮಠಗಳು, ಬೆಳೆಸಿದ ತೋಟ-ಜಮೀನುಗಳು, ಸಂಗ್ರಹಿಸಿದ ಆಭರಣಗಳು ಎಲ್ಲವೂ ಒಂದೇ ಪ್ರಕೃತಿಯ ವಿಕೋಪದಿಂದ - ಸುನಾಮಿ, ಭೂಕಂಪ, ಪ್ರವಾಹ, ಅಗ್ನಿ, ಬಿರುಗಾಳಿ, ದರೋಡೆ ಇತ್ಯಾದಿ - ಕ್ಷಣಮಾತ್ರದಲ್ಲಿ ನಮ್ಮ ಕಣ್ಮುಂದೆಯೇ ನಾಶವಾಗಬಹುದು.  ಹಾಗೆ ನಿರಂತರ ನಾಶವಾಗುತ್ತಿರುವುದನ್ನು ಕೂಡ ನಾವು ನಿತ್ಯ ಗಮನಿಸುತ್ತಲೇ ಇದ್ದೇವೆ. [ಜಪಾನಿನಲ್ಲಿ ಮೊನ್ನೆಯಷ್ಟೇ ಆದ ದುರಂತಕ್ಕಿಂತ ಬೇರೆ ಉದಾಹರಣೆ ಬೇಕೇ?] ಅಂದರೆ ಲೌಕಿಕವೆಲ್ಲವೂ ಅಶಾಶ್ವತ ? ಆ ಲೌಕಿಕ ಸಂಪತ್ತು-ಸವಲತ್ತುಗಳನ್ನು ನಾವೆಷ್ಟು ಪಾರಮಾರ್ಥಿಕವಾಗಿ ಪರಿಭಾವಿಸಿದ್ದೆವು ಮತ್ತು ಬಳಸಿದ್ದೆವು ಎಂಬುದಷ್ಟೇ ಮುಂದೆ ಶಾಶ್ವತವಾಗುತ್ತದೆ; ಮುಂದಿನ ಜನ್ಮಜನ್ಮಾಂತರಗಳಿಗೆ ಪ್ರಸ್ತುತವಾಗುತ್ತದೆ. ಮಳೆ ಬಂದಾಗ ಆ ಮಳೆ ನೀರು ಯಾವುದೇ ಭೇದ-ಭಾವವಿಲ್ಲದೇ ಎಲ್ಲೆಡೆ ಬೀಳುತ್ತದೆ. ಹರಿಯುವಾಗ ತನ್ನೊಡನೆ ಎಷ್ಟೊಂದು ಕೊಳೆ-ಕಸ-ಕಡ್ಡಿ ಇತ್ಯಾದಿಗಳನ್ನು ಒಯ್ಯುತ್ತದೆ. ಆದರೆ ಅದು ಒಂದು ನಿರ್ದಿಷ್ಟ ದೂರದವರೆಗೆ ಮಾತ್ರಾ. ಹರಿಯುವ ಹಾದಿಯಲ್ಲಿಯೇ ಹೊತ್ತು ತಂದ ಇಂತಹ ಅನೇಕ ಕಲ್ಮಷಗಳನ್ನು ಅದು ಸ್ವಲ್ಪ ಸ್ವಲ್ಪವೇ ವಿಸರ್ಜಿಸುತ್ತಾ ಮುಂದೆ ನದಿಯಾಗಿ ತಿಳಿಯಾದ ಶುಭ್ರ ಜಲಧಾರೆ ಪ್ರವಹಿಸುತ್ತದೆ. ನಮ್ಮ ಜೀವನ  ಕೂಡಾ ಇಂತಹ ಮಳೆ ಹರಿವಿನ ಪ್ರವಾಹದಂತಿರಬೇಕು. ಪ್ರಪಂಚಕ್ಕೆ ಕಾಲಿಟ್ಟ ಮೇಲೆ, ವ್ಯಕ್ತಿಗಳ, ವಸ್ತುಗಳ ಮತ್ತು ನಮ್ಮ ಸಂಸ್ಕಾರದ ಮತ್ತು ಸಂಪರ್ಕಗಳ ಪ್ರಭಾವದಿಂದ ನಮ್ಮ ಜೀವನಯಾತ್ರೆಯಲ್ಲಿ ಅನೇಕ ತಪ್ಪುಗಳನ್ನೆಸಗುತ್ತೇವೆ; ಅನೇಕರಿಗೆ ತೊಂದರೆ ಕೊಟ್ಟಿರುತ್ತೇವೆ ಮತ್ತು ಮಾನಸಿಕವಾಗಿ ನಾವೂ ಸಾಕಷ್ಟು ಕ್ಷೇಷಕ್ಕೊಳಗಾಗಿರುತ್ತೇವೆ. ಅರಿತೋ ಅರಿಯದೆಯೋ ಅನೇಕರ ಸಂಪರ್ಕದಿಂದ ದುಷ್ಟ ಆಚಾರ-ವಿಚಾರಗಳ ದಾಸರಾಗಿಬಿಟ್ಟಿರುತ್ತೇವೆ. ಪ್ರಾಪಂಚಿಕ ವಸ್ತುಗಳ ದುರ್ಬಳಕೆಯಿಂದ ನಮ್ಮ ಮನಸ್ಸಿಗೆ, ನಮ್ಮ ದೇಹಕ್ಕೆ ಮತ್ತು ಇಡೀ ಸಮಾಜಕ್ಕೆ ಸಾಕಷ್ಟು ಹಾನಿ ಮಾಡಿರುತ್ತೇವೆ. ಇಂತಹ ಒಂದು ಕಲ್ಮಷಗಳ ಅರಿವು ಮತ್ತು ಮಳೆ ಹರಿವಿನಂತೆ ಅಲ್ಲಲ್ಲಿಯೇ ಅವುಗಳನ್ನು (ಅಂದರೆ ಮಾಯೆಯನ್ನು)  ಬಿಟ್ಟು ಬಿಡಬೇಕೆಂಬ ಅರಿವು ಮತ್ತು ಅಂತಿಮವಾಗಿ ಹರಿವ ತಿಳಿ ನೀರಿನಂತೆ ನಮ್ಮ ಮನಸ್ಸು ಮತ್ತು ದೇಹ ಎರಡೂ ಆಗಬೇಕೆಂಬ ಅರಿವು ? ಈ ಮಾಯೆಯೆಂಬ ಪಾಶದಿಂದ ಹೊರಬರಲು ಸಹಕಾರಿ.

ಆದರೆ ಯಾವುದು ಮಾಯೆ ಎಂಬುದನ್ನು ಗುರುತಿಸುವುದೇ ಕಷ್ಟಸಾಧ್ಯವಾದ ಕೆಲಸವೆಂದರೆ ತಪ್ಪಲ್ಲ. ಉತ್ತಮ ಸಂಸ್ಕಾರ, ಉತ್ತಮ ನಡವಳಿಕೆ, ಚಿಕ್ಕಂದಿನಿಂದ ಗುರು-ಹಿರಿಯರಲ್ಲಿ ಶ್ರದ್ಧಾಭಕ್ತಿ, ಸದ್ವಿದ್ಯಾರ್ಜನೆ, ಪರೋಪಕಾರ ಬುದ್ಧಿ, ಉಪಕಾರ ಸ್ಮರಣೆ, ಕರುಣೆ, ಪರಮಾತ್ಮ ತತ್ವದಲ್ಲಿ ಅಚಂಚಲ ನಂಬಿಕೆ ಮುಂತಾದ ಉದಾತ್ತ ಗುಣಗಳು ಮಾಯಾಪಾಶಗಳನ್ನು ನಿವಾರಿಸುವಲ್ಲಿ ಪ್ರಬಲ ಅಸ್ತ್ರಗಳಾಗಬಲ್ಲವು. ಯಾವುದೇ ವಿಷಯದ ಬಗ್ಗೆ ಜಿಜ್ಞಾಸೆಗಳು, ದ್ವಂದ್ವಗಳು ಮತ್ತು ಅನಿಶ್ಚಯತೆ ಎದುರಾದಾಗ ಸೂಕ್ತ ಗುರುವಿನ ಆಸರೆ, ಸಹಾಯ, ಮಾರ್ಗದರ್ಶನ ಲಭ್ಯವಾದರೆ ಮಾಯೆಯನ್ನು ಜಯಿಸುವಲ್ಲಿ ಅದಕ್ಕಿಂತ ಬೇರೆ ಏನೂ ಹೆಚ್ಚಿನದು ಬೇಕಾಗದು. ಲೋಕದಲ್ಲಿ ಸರ್ವವ್ಯಾಪಿಯಾಗಿರುವ ಈ ಮಾಯೆಯ ಪರದೆಯನ್ನು ಸರಿಸಿ, ನಿಜ ಸತ್ಯದ, ಜೀವನಾರ್ಥದ, ಸಂಬಂಧಗಳ ಮಿಥ್ಯೆಯ ಮತ್ತು ಮೋಕ್ಷದೆಡೆಗೆ ಸಾಗುವ ಪರಿಯನ್ನೇ ಶ್ರೀ ಕೃಷ್ಣ ಅರ್ಜುನನಿಗೆ ಭಗವದ್ಗೀತೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಸ್ತುತ ಪಡಿಸಿರುವುದು. ಭಗವದ್ಗೀತೆ ಮಾಯೆಯೆಂಬ ಮೋಡವನ್ನು ಸರಿಸಿ, ಬೆಳಕಿನೆಡೆಗೆ, ಜ್ಞಾನದೆಡೆಗೆ ಮತ್ತು ಪರತತ್ವ ಸಾಧನೆಯೆಡೆಗೆ ನಮ್ಮನ್ನೊಯ್ಯುವ ದಿವ್ಯ ನಾವೆ. ಆದುದರಿಂದಲೇ, ಮಾಯೆಯ ಮೋಡಿ ನಿರಂತರವಾದರೆ ಅದಕ್ಕೆ ನಾವು ಹಾಕುವ ನಿಯಂತ್ರಣ ಕ್ರಮಗಳೂ ಕೂಡ ನಿರಂತರವಾಗಿರಬೇಕು. ಇದು ದಿನನಿತ್ಯದ ನಿಲ್ಲದ ಪ್ರಕ್ರಿಯೆಯಾಗಬೇಕು. ಅದೇ ಮಾಯೆಯನ್ನು ಮೆಟ್ಟಿ ನಿಲ್ಲುವ ನಿರಂತರ ಸಾಧನೆ. ಮಾಯಾಪಾಶದಿಂದ ಬಿಡುಗಡೆ ಪಡೆವ ಹಾದಿ.

|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

ಕವಿ ವೆಂ. ಸುರೇಶ್

Friday, April 15, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ - 1

      ಸಹೃದಯರೇ, ಪಂ. ಸುಧಾಕರ ಚತುರ್ವೇದಿಯವರು ಭಗವಂತನ ಸ್ವರೂಪದ ಕುರಿತು ಹಾಗೂ ಜೀವಾತ್ಮದ ಸ್ವರೂಪ ಕುರಿತು ವೇದಗಳು ಏನು ಹೇಳುತ್ತವೆ ಎಂಬ ಬಗ್ಗೆ ತಿಳಿಸಿರುವುದನ್ನು ಓದಿರುವಿರಿ ಹಾಗೂ ಆ ವಿಷಯಗಳಲ್ಲಿ ಅರ್ಥಪೂರ್ಣ ಚರ್ಚೆಗಳನ್ನೂ ಮಾಡಿರುವಿರಿ. ಇನ್ನುಮುಂದೆ ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ ಕುರಿತು ವೇದ ಏನು ಹೇಳುತ್ತದೆ ಎಂಬುದನ್ನು ಪಂಡಿತರ ಮಾತುಗಳಲ್ಲೇ ನೋಡೋಣ.

ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ


     ಸೃಷ್ಟಿಯ ನಿಮಿತ್ತ ಕಾರಣ, ಮಹಾನ್ ವಿಶ್ವಚೇತನ, ಅಂದರೆ ಭಗವಂತನು. ಅವನು ಈ ಸೃಷ್ಟಿಯನ್ನು ರಚಿಸಿರುವುದು ಪರಿಚ್ಛಿನ್ನ ಚೇತನರಾದ ಜೀವಾತ್ಮರ ಸಲುವಾಗಿ. ಈ ವಿಷಯಗಳನ್ನು ವಿಸ್ತಾರವಾಗಿ ಅರಿತುದಾಯಿತು. ಈ ವಿಶ್ವಬ್ರಹ್ಮಾಂಡದ ಕಡೆ ಗಮನವಿತ್ತು ನೋಡಿದಾಗ, ಅಷ್ಟೇ ಸಿಕ್ಕುಗಟ್ಟಿದ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಭಗವಂತನು ಚೇತನ ಜೀವಾತ್ಮರಿಗಾಗಿ ಸೃಷ್ಟಿಯನ್ನು ರಚಿಸಿದ, ಸರಿ. ಅದರೆ ಏತರಿಂದ ಸೃಜಿಸಿದ? ಕೆಲವು ಮತದವರು 'ಭಗವಂತ ಸೃಷ್ಟಿಯಾಗಲಿ ಎಂದ, ಸೃಷ್ಟಿಯಾಗಿ ಹೋಯಿತು' - ಎನ್ನುತ್ತಾರೆ. ಯಾರಿಗೆ ಹೇಳಿದ ಭಗವಂತ ಸೃಷ್ಟಿಯಾಗಿ ಹೋಗಲಿ ಎಂದು? ಶೂನ್ಯಕ್ಕೇನು? ಶೂನ್ಯ ಎಂದರೆ ಅಭಾವ, ಏನೂ ಇಲ್ಲದಿರುವಿಕೆ. ಅಭಾವದಿಂದ ಭಾವೋತ್ಪತ್ತಿ, ಅಸತ್‌ನಿಂದ ಸದುತ್ಪತ್ತಿ ಎಂದಿಗೂ ಆಗಲಾರದು. ಮಣ್ಣಿದ್ದರೆ ಮಡಕೆ, ನೂಲಿದ್ದರೆ ಬಟ್ಟೆ, ಮರದ ಹಲಗೆಗಳಿದ್ದರೆ ಕಾಲುಮಣೆ ಇದು ಸರಿ. ಕಾರಣವಿಲ್ಲದೆ ಕಾರ್ಯ ಉದ್ಭವಿಸಲಾರದು. ಶೂನ್ಯದಿಂದ ಮಡಕೆಯಾಗಲಾರದು, ಶೂನ್ಯದಿಂದ ಬಟ್ಟೆಯಾಗಲಾರದು, ಶೂನ್ಯದಿಂದ ಕಾಲುಮಣೆಯಾಗಲಾರದು. ಹೀಗಿರುವಾಗ ಇಷ್ಟು ದೊಡ್ಡ ಬ್ರಹ್ಮಾಂಡ ಶೂನ್ಯದಿಂದ ಆಗಿಹೋಯಿತೇ? ಕೆಲವರು 'ಭಗವಂತ ಸರ್ವಶಕ್ತ, ಅವನು ಏನು ಬೇಕಾದರೂ ಮಾಡಬಲ್ಲನು' ಎನ್ನುವುದುಂಟು. ಆದರೆ ವೈಜ್ಞಾನಿಕ ವಿಶ್ಲೇಷಣದ ಮುಂದೆ ಈ ವಾದ ಅರೆಕ್ಷಣವೂ ನಿಲ್ಲಲಾರದು. ಅಸಂಭವವಾದುದು ಎಂದಿಗೂ ಸಂಭವವಾಗಲಾರದು. 'ದೇವರು ಸರ್ವಶಕ್ತನಾದುದರಿಂದ ಅವನು ತಾನೇ ಎತ್ತಿ ಹಿಡಿಯಲಾರದ ವಸ್ತುವನ್ನು ರಚಿಸಬಲ್ಲನೇ?' - ಎಂದು ನಾವು ಪ್ರಶ್ನಿಸುತ್ತೇವೆ. 'ಓಹೋ, ರಚಿಸಬಲ್ಲ' ಎಂದು ನೀವು ಹೇಳಿದರೆ, 'ಅವನು ಆ ವಸ್ತುವನ್ನು ಎತ್ತಿ ಹಿಡಿಯಲಾರ, ಹೀಗೆ ಅವನ ಸರ್ವಶಕ್ತಿತ್ವ ಕುಂಠಿತವಾಯಿತು' - ಎಂದು ಒಪ್ಪಬೇಕಾಗುತ್ತದೆ. 'ರಚಿಸಲಾರ' ಎಂದರಂತೂ ಅವನ ಸರ್ವಶಕ್ತಿತ್ವಕ್ಕೆ ಚ್ಯುತಿ ಸ್ಪಷ್ಟ. 'ಭಗವಂತ ತನ್ನಂತಹ ಇನ್ನೊಬ್ಬ ಭಗವಂತನನ್ನು ಸೃಜಿಸಬಲ್ಲನೇ?' ಎಂದು ನಾವು ಪ್ರಶ್ನಿಸಿದರೆ ನೀವು 'ಇಲ್ಲ' ಎನ್ನಲೇಬೇಕಾಗುತ್ತದೆ. ಇದರ ತಾತ್ಪರ್ಯವೇನು? ಎಲ್ಲಾ ಮಾಡಬಲ್ಲ ಶಕ್ತಿಯಲ್ಲ ಸರ್ವಶಕ್ತಿ. ಬೇರೆಯವರ ಸಹಾಯವಿಲ್ಲದೆ ತನ್ನ ಗುಣ-ಕರ್ಮ-ಸ್ವಭಾವಕ್ಕನುಸಾರವಾಗಿ ಸೃಷ್ಟಿ-ಸ್ಥಿತಿ-ಲಯಗಳನ್ನು ಪ್ರವಾಹರೂಪದಲ್ಲಿ ಮಾಡುತ್ತಾ ಹೋಗುವುದೇ ಸರ್ವಶಕ್ತಿ - ಎಂಬುದೇ ಸಾಧುವಾದ, ತರ್ಕಬದ್ಧ ಹಾಗೂ ತಾತ್ವಿಕವಾದ ಪಕ್ಷ. ಭಗವಂತನೂ ಶೂನ್ಯದಿಂದ ಸೃಷ್ಟಿಯನ್ನು ರಚಿಸಲಾರನು.


     ಇನ್ನೊಂದು ಭ್ರಾಮಕ ವಾದವಿದೆ. ಅದನ್ನು 'ಅಭಿನ್ನ ನಿಮಿತ್ತೋಪಾದಾನ ಕಾರಣವಾದ' - ಎಂಬ ಉದ್ದವಾದ ಹೆಸರಿನಿಂದ ಕರೆಯುತ್ತಾರೆ. 'ಭಗವಂತನೇ ಈ ಜಗತ್ತಿಗೆ ನಿಮಿತ್ತ ಕಾರಣ, ಅವನೇ ಉಪಾದಾನ ಕಾರಣ. ಭಗವಂತನೇ ಜಗತ್ತನ್ನು ರಚಿಸುತ್ತಾನೆ, ಅವನೇ ಜಗತ್ತಾಗುತ್ತಾನೆ' - ಎನ್ನುವುದೇ ಆ ವಾದದ ಸಾರ. ಏನರ್ಥ ಇದಕ್ಕೆ? ಬ್ರಹ್ಮವೇ ಜೀವವಾಯಿತು ಅಥವಾ ಬ್ರಹ್ಮದಿಂದಲೇ ಜೀವೋತ್ಪತ್ತಿಯಾಯಿತು - ಎಂಬ ವಾದಕ್ಕೆ ವಿರುದ್ಧವಾಗಿ ನಾವು ಹಿಂದಿನ ಅಧ್ಯಾಯದಲ್ಲಿ ಎತ್ತಿದ್ದ ಆಕ್ಷೇಪಣೆಗಳನ್ನು ಪಾಠಕರು ಜ್ಞಾಪಿಸಿಕೊಳ್ಳಬಹುದು. 'ಬ್ರಹ್ಮ ಪೂರ್ಣತಃ ಜಡವಾಗಿ ಅದರಿಂದ ಜಗತ್ತಾಯಿತು' - ಎಂದರೆ, ಈಗ ಬ್ರಹ್ಮವಿಲ್ಲವೇ ಇಲ್ಲವೇ? - ಎಂಬ ಪ್ರಶ್ನೆ ಹುಟ್ಟುತ್ತದೆ. ಎರಡನೆಯದಾಗಿ, ಸಂಪೂರ್ಣ ಬ್ರಹ್ಮವೇ ಜಡವಾಗಿ ಹೋದ ಮೇಲೆ, ಚೇತನ ಉಳಿಯಲೇ ಇಲ್ಲ, ಆ ಜಡೀಭೂತ ಬ್ರಹ್ಮಕ್ಕೆ ಜಗದಾಕಾರ ಕೊಟ್ಟವರಾರು? ತನ್ನಷ್ಟಕ್ಕೆ ತಾನೇ ನಿಯಮಪೂರ್ವಕವಾಗಿ ಬೇರೆ ಸಾರ್ಥಕರೂಪ ತಾಳೂವುದು ಜಡಕ್ಕೆ ಸಾಧ್ಯವಿಲ್ಲವಷ್ಟೇ?. 'ಹಾಗಲ್ಲ, ಬ್ರಹ್ಮನ ಯಾವುದೋ ಒಂದು ಭಾಗ ಮಾತ್ರ ಜಡವಾಯಿತು, ಉಳಿದ ಚೇತನ ಭಾಗ ಜಗತ್ತಿಗೆ ನಿಮಿತ್ತ ಕಾರಣವಾಯಿತು' - ಎಂದರೆ, ಬ್ರಹ್ಮದ ಅಖಂಡತ್ವದ ಗತಿ ಏನಾಯಿತು? 'ಬ್ರಹ್ಮ ಪ್ರಜ್ಞಾನ, ಬ್ರಹ್ಮ ನಿರ್ವಿಕಾರ' - ಎಂಬ ಹೇಳಿಕೆಗಳಿಗೆ ಅರ್ಥವೇನುಳಿಯಿತು?


     ನಿಜವಾಗಿ ಇಂತಹ ವಾದಗಳೆಲ್ಲಾ ಕೇವಲ ಭ್ರಾಂತಿವಿಲಾಸ ಮಾತ್ರ. ವೇದಗಳು ಸ್ಪಷ್ಟವಾಗಿ ಪರಮಾತ್ಮನು ಜಡವಾದ ಪ್ರಕೃತಿ ತತ್ವದಿಂದ ಜಗದ್ರಚನೆ ಮಾಡಿದನು ಎಂದು ಹೇಳುತ್ತವೆ.

. . . . . . . ಏನು ಹೇಳುತ್ತವೆ? ಮುಂದಿನ ಕಂತಿನಲ್ಲಿ ನೋಡೋಣ.

Thursday, April 14, 2011

Ishtu Dina Nechchi Nambi Sound Clip and Quote

ಇಷ್ಟುದಿನ ನೆಚ್ಚಿನಂಬಿ


ರಚನೆ: ಹರಿಹರಪುರಶ್ರೀಧರ್
ಗಾಯಕಿ: ಶ್ರೀಮತಿ ಲಲಿತಾ ರಮೇಶ್

   (Link)

ಇಷ್ಟು ದಿನ ನೆಚ್ಚಿ ನಂಬಿ
ಕಷ್ಟ ಪಟ್ಟು ಪಟ್ಟು ಹಿಡಿದು
ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು|
ಎಷ್ಟೋ ದಿನ ಗಟ್ಟಿಯಾಗಿ
ಕೆಟ್ಟಮಾತುಗಳನು ಆಡಿ
ಸಿಟ್ಟು ಮಾಡಿ ಕೆಟ್ಟಿದ್ದೆಲ್ಲ ಸಾಕು ಸಾಕು |ಪ|

ಯಾರೇ ಬರಲಿ ಊರೇ ಇರಲಿ
ಹೊಗಳಿ ಹೊಗಳಿ ಅಟ್ಟಕ್ಕೇರಿ
ಪಟ್ಟ ಕಟ್ಟಿ ಮೆರೆದಿದ್ದೆಲ್ಲಾ ಸಾಕು ಸಾಕು|
ಇಷ್ಟು ದಿನ ಮಾಡಿದ್ದೆಲ್ಲಾ
ಇಲ್ಲೇ ಬಿಟ್ಟು ಹೋಗುವಾಗ
ತಂಟೆಮಾಡ್ದೆ ಒಂಟಿಯಾಗಿ ಹೋಗ್ಲೇ ಬೇಕು |೧|

ಬಂದು ಬಳಗ ಬಂದಾರೆಂದು
ಮಂದಿ ಮಾತು ಕಟ್ಟಿಕೊಂಡು
ಕೂಟ ಮಾಡಿ ಕುಣಿದದ್ದೆಲ್ಲಾ ಸಾಕು ಸಾಕು|
ನೊಂದು ಬೆಂದು ಮುಂದೆ ಬಂದು
ಹಿಂದಿಂದೆಲ್ಲಾ ಮರೆತು ಕೊಂಡು
ಎಲ್ಲಾ ನಂದೇ ಎಂದಿದ್ದೆಲ್ಲಾ ಸಾಕು ಸಾಕು |೨|

ಸ್ನಾನ ಸಂಧ್ಯಾ ಜಪವ ತಪವ
ನಿತ್ಯಮಾಡಿದೆನೆಂದು ಬೀಗುತ
ಉತ್ತಮನೆಂದು ಮೆರೆದಿದ್ದೆಲ್ಲಾ ಸಾಕು ಸಾಕು|
ಹೇಳದೆ ಕೇಳದೆ ಅಂತ್ಯವು ಬರಲು
ಕಂತೆಯನೊಗೆಯುವ ಮುಂಚೆಯಾದರೂ
ಆತ್ಮನ ಚಿಂತನೆ ಕಿಂಚಿತ್ತಾದರು ಮಾಡ್ಲೇ ಬೇಕು ||೩||

ಮನಸೆಳೆದ ವೈಯೋಲಿನ್ ಕಛೇರಿ

ನಿನ್ನೆ ಒಂದು ಅದ್ಭುತ ಸಂಗೀತ ಸಂಜೆ. ಮೂರು ಗಂಟೆಗಿಂತಲೂ ಹೆಚ್ಚು ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಅಂತಹ ಮೋಡಿ ಮಾಡಿದ್ದು ಡಾ|| ದೀಪಕ್ ಎಂಬ ತರುಣ ಮತ್ತು ಅವನ ಪಕ್ಕವಾದ್ಯ ಸಂಗಡಿಗರಾದ ಬೆಂಗಳೂರಿನ ಮೃದಂಗವಿದ್ವಾನ್ ಶ್ರೀಫಣೀಂದ್ರ ಭಾಸ್ಕರ್ ಮತ್ತು ಘಟಂವಿದ್ವಾನ್ ಶ್ರೀ ರಘುನಂದನ್.ಸಂದರ್ಭ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಾಲಯದವರು ಶ್ರೀ ರಾಮೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ವೈಯೋಲಿನ್ ವಾದನಕಛೇರಿ.ವೈಯೋಲಿನ್ ನುಡಿಸಿದವರು ಬೇರೆ ಯಾರೂ ಅಲ್ಲ! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರ ಸೋದರರೂ ವೇದಸುಧೆ ಬಳಗದ ಸದಸ್ಯರೂ ಆದ ಕವಿ ಸುರೇಶ್ ಅವರ ಪುತ್ರ ಡಾ|| ಬಿ.ಎಸ್.ಆರ್.ದೀಪಕ್.ವೇದಸುಧೆಯ ವಾರ್ಷಿಕೋತ್ಸವದಲ್ಲಿ ದೀಪಕ್ ತಂಗಿ ಬಿ.ಎಸ್.ಆರ್ ಅಂಬಿಕಾ ಅವರು ವೈಯೋಲಿನ್ ನುಡಿಸಿ ನಮ್ಮೆಲ್ಲರ ಗಮನ ಸೆಳೆದ ನೆನಪು ಮಾಸುವದರೊಳಗಾಗಿ ದೀಪಕ್ ನಮ್ಮೆಲ್ಲರನ್ನೂ ಮೋಡಿ ಮಾಡಿ ತಮ್ಮ ಕೈ ಚಳಕ ತೋರಿಸಿಬಿಟ್ಟರು. ಆಯುರ್ವೇದ ವೈದ್ಯರಾದ ದೀಪಕ್ ನಿಜವಾಗಿ ಎಲ್ಲರ ಹೃದಯವನ್ನು ಗೆದ್ದಿದ್ದು ಅಷ್ಟೇ ಅಲ್ಲ ಮನೋ ಒತ್ತಡದ, ರಕ್ತದ ಒತ್ತಡ ಇರುವವರಿಗೆ ಅವರಿಗೆ ಗೊತ್ತಿಲ್ಲದಂತೆ ಚಿಕಿತ್ಸೆ ನೀಡಿದ್ದರು.ಕಾರ್ಯಕ್ರಮ ಮುಗಿದೊಡನೆ ಹರ್ಷಚಿತ್ತರಾಗಿ ವೇದಿಕೆಯತ್ತ ಹಲವಾರು ಹಿರಿಯರು ಧಾವಿಸಿ ತರುಣ ಸಂಗೀತ ವಿದ್ವಾಂಸರುಗಳಿಗೆ ನೂರ್ಕಾಲ ಬಾಳುವಂತೆ ಹಾರೈಸುತ್ತಿದ್ದುದನ್ನು ಗಮನಿಸಿದಾಗ ನನ್ನ ಹೃದಯ ತುಂಬಿಬಂದಿತ್ತು. ಈ ತರುಣರಿಗೆ ಧೀರ್ಘಾಯುಷ್ಯವನ್ನು ನೀಡಿ ಅವರ ಸೇವೆ ಸಮಾಜಕ್ಕೆ ಸದಾಕಾಲ ದೊರೆಯಲೆಂದು ನಿಂತಲ್ಲೇ ಆ ಭಗವಂತನಲ್ಲಿ ನಾನು ಪ್ರಾರ್ಥಿಸಿದ್ದೆ.
ಡಾ|| ದೀಪಕ್ ಅವರ ಪರಿಚಯ:
* Belongs to keladi kavimanetan family.
* Completed B.A.M.S. with distinction last March and presently doing housemanship in Shivamogga.
* Completed Vidwat (Proficiency) last year securing 1st Rank. .
* Student of Vid. TS Krishnamurthy and presently Dr. K Varad arangan, B'lore.
* B grade Artist of AIR.
* Has performed in more than 150 concerts so far, including those in Navarathri utsav, Shringeri, Mysore Dasara, Hampi utsav, AIR and Dooradarshan programmes.






ಪಕ್ಕವಾದ್ಯದಲ್ಲಿ ಸಹಕಾರ ನೀಡಿದ ವಿದ್ವಾಂಸರ ವಿವರ:
1. ಮೃದಂಗ: ವಿದ್ವಾನ್ ಫಣೀಂದ್ರ ಭಾಸ್ಕರ್, ಬೆಂಗಳೂರು. ವಿದ್ವಾನ್ ಶ್ರೀ ಹೆಚ್.ಎಸ್. ಸುಧೀಂದ್ರರವರ ಶಿಷ್ಯ. ಆಕಾಶವಾಣಿಯ ಬಿ ಗ್ರೇಡ್ ಕಲಾವಿದ, ಫಿಲಿಪ್ಸ್ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್.
2. ಘಟಂ: ವಿದ್ವಾನ್ ರಘುನಂದನ್, ಬೆಂಗಳೂರು. ದಿ. ವಿದ್ವಾನ್ ಶ್ರೀ ಪಿ.ಜಿ.ಲಕ್ಶ್ಮಿನಾರಾಯಣ ಮತ್ತು ಈಗ ವಿದ್ವಾನ್ ಶ್ರೀ ಹೆಚ್.ಎಸ್. ಸುಧೀಂದ್ರರವರ ಶಿಷ್ಯ.



ನಿನ್ನೆಯ ಕಾರ್ಯಕ್ರಮದಲ್ಲಿ ನುಡಿಸಿದ ರಚನೆಗಳು:
1. ಕಾಂಬೋದಿ ರಾಗದ ಅಟ್ಟತಾಳವರ್ಣ - ಸರಸಿಜನಾಭ
2. ಹಂಸಧ್ವನಿ ರಾಗ - ರಘುನಾಯಕ (ಸಾಹಿತ್ಯ) ಆದಿತಾಳ
3. ಶುದ್ಧಬಂಗಾಳ ರಾಗ - ರಾಮಭಕ್ತಿಸಾಮ್ರಾಜ್ಯ - ಆದಿತಾಳ
4. ಹಂಸನಾದ ರಾಗ - ಬಂಟುರೀತಿ - ಆದಿತಾಳ
5. ರಾಗಮಾಲಿಕಾ - ಭಾವಯಾಮಿ ರಘುರಾಮಂ - ರೂಪಕತಾಳ
6.ಶುದ್ಧಧನ್ಯಾಸಿ ರಾಗ - ನಾರಾಯಣ - ಖಂಡಛಾಪುತಾಳ
7. ಖರಹರಪ್ರಿಯರಾಗ - ರಾಮನೀ ಸಮಾನಮೆವರು - ರೂಪಕತಾಳ
8. ನಾದನಾಮಕ್ರಿಯರಾಗ - ದಾಸನ ಮಾಡಿಕೋ ಎನ್ನ - ಆದಿತಾಳ
9. ಭೌಳೆ ರಾಗ - ಶ್ರೀಮನ್ನಾರಾಯಣ - ಆದಿತಾಳ
10. ದೇಶ್ ರಾಗದ ತಿಲ್ಲಾನ - ಆದಿತಾಳ
11. ಮಧ್ಯಮಾವತಿ ರಾಗ - ಭಾಗ್ಯದಾ ಲಕ್ಶ್ಮೀ ಬಾರಮ್ಮ - ಆದಿತಾಳ
12. ಕುರುಂಜಿ ರಾಗ - ಪವನಜಾ ಸ್ತುತಿ ಪಾತ್ರ - ಖಂಢಛಾಪು ತಾಳ
13. ಸೌರಾಷ್ಟ ರಾಗ - ಪವಮಾನ - ಆದಿತಾಳ.



ಯೋಚಿಸಲೊ೦ದಿಷ್ಟು...೩೦

೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ?
೨. ಪ್ರತಿ ಸೂರ್ಯಾಸ್ತಮಾನವು ನಮ್ಮ ಆಯುಷ್ಯದಲ್ಲಿನ ಒ೦ದೊ೦ದು ದಿನಗಳನ್ನೂ ಕಡಿಮೆಗೊಳಿಸುತ್ತಲೇ ಹೋದರೆ,ಜೀವನದಲ್ಲಿ ಹೊಸ ಹೊಸ ನಿರೀಕ್ಷೆಗಳ ಉದಯಕ್ಕೆ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನಗಳ ಮಿತಿಯಿಲ್ಲ.. ಅವು ಪ್ರತಿಕ್ಷಣಗಳಲ್ಲಿಯೂ ಹುಟ್ಟುತ್ತಲೇ ಹೋಗುತ್ತವೆ!
೩.ನಮ್ಮ ಚಿ೦ತನೆಯನ್ನು ಬದಲಾಯಿಸಿಕೊ೦ದಲ್ಲಿ ಜೀವನವೂ ಬದಲಾವಣೆಗೊ೦ದ೦ತೆಯೇ ಅನಿಸುತ್ತದೆ!
೪. ನಿರಾಶಾವಾದಿಗಳು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರೆ,ಆಶಾವಾದಿಗಳು ಅವುಗಳ ಪರಿಹಾರದತ್ತ ತಮ್ಮ ಗಮನ ಕೊಡುತ್ತಾರೆ !
೫. ನಮ್ಮ ಮೌಲ್ಯವನ್ನು ನಾವೇ ವರ್ಧಿಸಿಕೊಳ್ಳಬೇಕು!
೬. ಘಟನೆಗಳ ಬಗ್ಗೆ ನಿರ್ಲಕ್ಷ್ಯ ತಾಳುವುದೂ ನಮ್ಮಲ್ಲಿನ ಆ೦ತರಿಕ ಶಾ೦ತಿಯನ್ನು ಉಳಿಸಿಕೊಳ್ಳುವುದರತ್ತ ನೀಡುವ ಗಮನವೇ!
೭. ನಾವು ನಿರ್ಲಕ್ಷಕ್ಕೊಳಗಾಗಿದ್ದೇವೆ೦ದು ಅನಿಸಿದ ಕೂಡಲೇ ಅಲ್ಲಿ೦ದ ನಮ್ಮ ವಾಪಾಸಾತಿಯು ಮು೦ದೆ ನಾವು ಮುಜುಗರಕ್ಕೊಳಗಾಗುವುದನ್ನು ತಪ್ಪಿಸುತ್ತದೆ!
೮. ಒತ್ತಡವು ಎಲ್ಲವನ್ನೂ ಸೃಷ್ಟಿಸಿದರೂ ಇನ್ನೊಬರ ಹೃದಯದಲ್ಲಿ ನಮ್ಮ ಬಗ್ಗೆ ಪ್ರೀತಿಯನ್ನು ಹುಟ್ಟಿಸದು!
೯. ಸಮಸ್ಯೆಗಳನ್ನು ಹ೦ಚಿಕೊಳ್ಳುವುದು ಹಾಗೂ ಅವುಗಳ ಪರಿಹಾರಕ್ಕಾಗಿ ಇನ್ನೊಬ್ಬರ ಸಹಾಯವನ್ನು ಬೇಡುವುದು ನಮ್ಮ ದೌರ್ಬಲ್ಯವನ್ನು ಹಾಗೂ ಅಶಕ್ತತೆಯನ್ನು
ಪ್ರತಿಬಿ೦ಬಿಸದು!
೧೦. ನಮ್ಮ ಮಾನಸಿಕ ಸ್ಥಿತಿಯನ್ನು ಬದಲಾವಣೆಗೊಳಿಸಿಕೊಳ್ಳಲು ಹಲವಾರು ಆಯ್ಕೆಗಳಿದ್ದರೂ ಆಡಿದ ಮಾತನ್ನು ಹಿ೦ತೆಗೆದುಕೊಳ್ಳುವ ಯಾವುದೇ ಆಯ್ಕೆಯನ್ನೂ ನಾವು ಪಡೆದಿಲ್ಲ!
೧೧. ಪುಸ್ತಕಗಳು ಕಣ್ಣೆದುರಿದ್ದರೂ ಓದಲು ಕಷ್ಟಪಡುವ೦ತೆ, ನಮ್ಮ ಆತ್ಮೀಯರ ಮನಸ್ಸಿನ ಭಾವನೆಗಳನ್ನು ಓದುವಲ್ಲಿಯೂ ನಾವು ಒಮ್ಮೊಮ್ಮೆ ವಿಫಲಗೊಳ್ಳುತ್ತೇವೆ!
೧೨. ಪ್ರತಿಯೊಬ್ಬರೂ ದಿನದ೦ತ್ಯದಲ್ಲಿ ತಾವು ಮಾಡಬೇಕಾಗಿದ್ದ ಕಾರ್ಯಗಳನ್ನು ಮಾಡಿದ್ದೇವೆ೦ಬ ಬಗ್ಗೆ ಸ೦ತೃಪ್ತಿ ಹೊ೦ದಿದರೆ, ಕೆಲವರು ತಾವು ನಾಳೆ ಮಾಡಬೇಕಾಗಿರುವ ಕಾರ್ಯಗಳ ಬಗ್ಗೆಯೂ ಚಿ೦ತನೆ ನಡೆಸುತ್ತಾರೆ! ( ಡಾ|| ಎ.ಪಿ.ಜೆ ಅಬ್ದುಲ್ ಕಲಾ೦)
೧೩. ಯಾವುದೇ ಕಾರ್ಯದಲ್ಲಿಯೂ ವಿಜಯ ಸಾಧಿಸುವುದು ಎ೦ದರೆ ಆ ಕಾರ್ಯದ “ಸೀಮಿತತೆ“ ಗಳ ಬಗ್ಗೆ ಚಿ೦ತಿಸುವುದಲ್ಲ.. ಬದಲಾಗಿ ಕಾರ್ಯ ಸಾಧನೆಯ “ಸಾಧ್ಯತೆ“ಗಳ ಬಗ್ಗೆ ಚಿ೦ತಿಸುವುದು ಮಾತ್ರ!!
೧೪. ಕೇವಲ ಒ೦ದು ಸಣ್ಣ ಬಿ೦ದು ವಾಕ್ಯವನ್ನು ಅ೦ತ್ಯ ಗೊಳಿಸಬಹುದು.. ಆದರೆ ಕೆಲವು ಹೆಚ್ಚುವರಿ ಬಿ೦ದುಗಳು ವಾಕ್ಯದ ಮು೦ದುವರಿಕೆಯನ್ನು ಸೂಚಿಸುತ್ತವೆ! ಪ್ರತಿ ಅ೦ತ್ಯವೂ ಮತ್ತೊದು ಹೊಸತರ ಆರ೦ಭವಾಗಿರುತ್ತದೆ!!
೧೫.ಸಾಧನೆಯೆಡೆಗಿನ ತನ್ನ “ದಾಹ“ದಿ೦ದಲೇ ಕ್ರಿಯಾತ್ಮಕ ವ್ಯಕ್ತಿಯೊಬ್ಬ ಪ್ರೇರಣೆಗೊಳ್ಳುತ್ತಾನೆಯೇ ವಿನ: ಮತ್ತೊಬ್ಬರನ್ನು ಸೋಲಿಸಬೇಕೆ೦ಬ ಹಠದಿ೦ದಲ್ಲ!!

Tuesday, April 12, 2011

ವಾಕ್ಪಥ (vakpatha): ವಾಕ್ಪಥದ ಎರಡನೇ ಗೋಷ್ಠಿ

ವಾಕ್ಪಥ (vakpatha): ವಾಕ್ಪಥದ ಎರಡನೇ ಗೋಷ್ಠಿ

ವಾಕ್ಪಥದ ಗುಂಗಿನಲ್ಲಿ .............


ಈ ಸಾರಿಯ ವಾಕ್ಪಥ ಸರಿಯಾದ ದಿಸೆಯಲ್ಲಿಯೇ ಹೊರಳಿದೆ
ಪ್ರಭು ಅವರ ಗೈರು ಹಾಜರಿಯಲ್ಲಿ ಪಥಿಕರು ಬರುತ್ತಾರೋ ಇಲ್ಲವೋ ಅಂತ ಆತಂಕ ಬೇರೆಯಿತ್ತು ಮನದಲ್ಲಿ .
ಅದರಲ್ಲೂ ಮಂಜು ಅವರು ಮತ್ತು ಕೊನೆಗಳಿಗೆಯಲ್ಲಿ ಮಧ್ವೇಶ್ ಅವರು ರಜೆ ತೆಗೆದುಕೊಂಡ ಕಾರಣ ನನ್ನಲ್ಲೂ ಸಂದೇಹ ಮನೆಮಾಡಿತ್ತು .
ಆದರೆ ಪಥಿಕರ ಉತ್ಸಾಹ ಮತ್ತು ಬಂದವರ ಖುಷಿ ಯೋಚಿಸಿದಾಗ ನನಗೆ ತುಂಬಾ ತುಂಬಾ ಸಂತಸವಾಯ್ತು
.
ಮೊದಲಿಗೆ ಜಪಾನ್ ನ ಸುನಾಮಿಯ ಸಂತ್ರಸ್ತರಿಗೆ ವಾಕ್ಪಥಿಕರು ಎರಡು ನಿಮಿಷದ ಮೌನ ಶೃದ್ಧಾಂಜಲಿ ಅರ್ಪಿಸಿದ್ದರು.
ನನಗೆ ಮಾತು ಬರುವುದಿಲ್ಲ ಎನ್ನುತ್ತಲೇ ವಾಕ್ಪಥ ಕ್ಕೆ ಬಂದಿದ್ದ ಎಲ್ಲರೂ ತುಂಬಾನೇ ಚೆನ್ನಾಗಿ ತಮ್ಮ ತಮ್ಮ ಭಾವ ವ್ಯಕ್ತ ಪಡಿಸಿದ್ದರು.
ಜಾನಪದದ ಮನೋಜ್ಞ ಚಿತ್ರಣ ನಮ್ಮೆಲ್ಲರೆದುರಿಗೆ ಕಟ್ಟಿ ಕೊಟ್ಟಿದ್ದರು ಈ ಸಾರಿಯ ಭಾಷಣಕಾರರು.
ನಮ್ಮ ನಿಮ್ಮೆಲ್ಲರ ಪ್ರೀತಿಯ ವಾಕ್ಪಥದ ಎರಡನೇ ಹೆಜ್ಜೆಯಲ್ಲೇ
ಸಾಗಾರದಾಚೆಯ ಸಹಪಥಿಕರು ತಮ್ಮ ಸಂತೋಷ ವ್ಯಕ್ತ ಪಡಿಸಿದ್ದು ಹೀಗೆ :-

Prabhu avare,

vakPatha sabeya varadhi thumba chennagidhe, "vakpatha - Neladha nudiya Kampu " bahala arthagarbithavagiruva vaakya.

Dhanyavadagalu
Lokesh

This is absolutely wonderful Prabhu. I see that our Bangalore counterparts have already gone ahead of us in a couple of things - the very detailed KANNADA report of the meetingl the fact that they have not only speakers but other roles such as grammarian also signed up for the next session already (btw, I loved the role title of "ವ್ಯಾಕರಣ ಶುದ್ದಿ"...should it have been "ಶುದ್ಧಿ" as opposed to "ಶುದ್ದಿ" though?); it is noteworthy that the next session's speaker already has a topic decided!!

The report is beautifully written, however, it could use a little more structure - like listing the speakers and their speech titles before deliving into the details of hte speech. I was a bit lost reading through the second pargraph, where this strucutre could have helped...but that is a minor point anways.
The most beautiful aspect of the entire vAkpatha is the complete webpage, with very valuable pieces of information with distinct sections for the upcoming session details, pictures/videos (it is so nice to see them all in pictures...really!!), "ಹುಡುಕು ಪೆಟ್ಟಿಗೆ"!!!!, tracking visitor count and so on...

The most beautiful picture, and I still cannot belive this, is the one that shows vAkpathigaLu sitting on the floor listening to the speeches....Way to go guys!! All the very best to you!!


~Raghu

ವಾಕ್ಪಟುಗಳು ತಂಡದ ಸ್ಥಾಪಕರಾದ ರಘು ಹಾಲೂರ್ ಮತ್ತು ವಾಕ್ಪಟುಗಳು ತಂಡದ ಅತ್ಯಂತ ಪ್ರತಿಭಾವಂತ ಸದಸ್ಯರಾದ ಅಶೋಕ್ ಹಂದಿಗೋಳ್ ಅವರುಗಳ ಮೆಚ್ಚುಗೆಯ ನುಡಿಗಳು... ಈ ಎಲ್ಲಾ ಪ್ರಶಂಸೆಗೆ ಶೇ:೧೦೦ ಅರ್ಹತೆ ನಿಮ್ಮೆಲ್ಲರಿಗೂ!!!

ಪ್ರಭು

ಪೂಜ್ಯ ಪಂಡಿತ್ ಸುಧಾಕರ ಚತುರ್ವೇದಿಯವರ ಜನ್ಮದಿನ ವಿಶೇಷ










ಅಪ್ರತಿಮ ಸಾಧಕ-ಮಾರ್ಗದರ್ಶಿಗೆ ನಮಿಸೋಣ

ಇಂದು ಶ್ರೀಯುತ ಪಂಡಿತ ಸುಧಾಕರ ಚತುರ್ವೇದಿಯವರು 115ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ನೆನೆಯೋಣ, ಅವರ ವಿಚಾರಗಳನ್ನು ತಿಳಿಯೋಣ, ನಮಿಸೋಣ, ಶುಭ ಹಾರೈಸೋಣ!






ಪಂಡಿತ ಸುಧಾಕರ ಚತುರ್ವೇದಿಯವರ ಕುರಿತು ಕೆಲವು ಮಾಹಿತಿ:
1. 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿದವರು, ಅಪ್ಪಟ ಕನ್ನಡಿಗರು.
2. 11ನೆಯ ವಯಸ್ಸಿಗೆ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿದವರು.
3. ಇವರು ಚತುರ್ವೇದಿ ಮನೆತನದವರಲ್ಲ. ನಾಲ್ಕೂ ವೇದಗಳನ್ನು ಇಪ್ಪತ್ತೈದು ವರ್ಷಗಳ ಕಾಲ ಸತತ ಅಭ್ಯಾಸ ಮಾಡಿದ ನಿಜವಾದ ಪಂಡಿತರು. ಈ ಕಾರಣಕ್ಕಾಗಿ ಸಾರ್ವದೇಶಿಕ ಆರ್ಯ ಪ್ರತಿನಿಧಿ ಸಭೆಯ ನಿರ್ಣಯಾನುಸಾರ 'ಚತುರ್ವೇದಿ' ಎಂಬ ಉಪಾಧಿ ಪಡೆದವರು.
4. ವೈದಿಕ ವಾಗ್ಮಿಗಳು, ಬ್ರಹ್ಮಚರ್ಯವ್ರತಪಾಲಕರು, ಯಾವುದೇ ವೈದಿಕ ವಿಷಯಗಳನ್ನು ಸರಳವಾಗಿ ವಿವರಿಸುವ ನೈಪುಣ್ಯತೆ ಹೊಂದಿದವರು. ಇವರ ಅನೇಕ ಲೇಖನಗಳು, ವಿಚಾರಗಳು ಪುಸ್ತಕರೂಪದಲ್ಲಿ ಪ್ರಕಟಗೊಂಡಿವೆ. ಸತ್ಯಾನ್ವೇಶಿಗಳಿಗೆ ನಿಜವಾಗಿ ಮಾರ್ಗದರ್ಶಿಯಾಗಿವೆ.
5. ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿರದಿಂದ ಕಂಡವರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಸಾಕ್ಷಿಯಾದವರು. ಆ ಕುರಿತು ಅವರ ಮಾತು: "1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೆನಸಿಕೊಂಡರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ. ದೊಡ್ಡದಾದ ತೋಟದಂತಿದ್ದ ಅಲ್ಲಿ ಸುತ್ತಲೂ 3-4 ಅಂತಸ್ತಿನ ಗೋಡೆ, ಒಂದೇ ಬಾಗಿಲು. ನೋಡುತ್ತಿದ್ದಂತೆ ಎಲ್ಲರ ಮೇಲೂ ಗುಂಡಿನ ದಾಳಿ. ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರು. ಆದರೆ ಅಂದಿನ ಬ್ರಟಿಷ್ ಸರ್ಕಾರ ಕೇವಲ 670 ಜನ ಮಾತ್ರ ಸತ್ತಿದ್ದಾರೆ ಎಂದು ಹೇಳಿತು. ಮಂತ್ರ ಬರುತ್ತಿದ್ದರಿಂದ ಗಾಂಧೀಜಿಯವರು ನನ್ನ ಬಳಿ ಅಂತ್ಯ ಸಂಸ್ಕಾರ ಮಾಡಲು ಹೇಳಿದರು. ಅವರ ಆಜ್ಞೆಯಂತೆ ನದಿತಟದಲ್ಲಿ ಸಾವಿರಕ್ಕೂ ಹೆಚ್ಚು ಜನರ ಅಂತ್ಯಸಂಸ್ಕಾರ ಮಾಡಿದ್ದೆ."
6. ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡವರು. ಗಾಂಧೀಜಿ ಸೇರಿದಂತೆ ಹಲವಾರು ಸ್ವಾತಂತ್ರ್ಯ ಸೇನಾನಿಗಳ ಒಡನಾಡಿಯಾಗಿದ್ದವರು. 13 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಅವರ ಅಂದಿನ ಸ್ಥಿತಿ ಹೇಗಿತ್ತೆಂದರೆ ಕಿತ್ತು ತಿನ್ನುತ್ತಿದ್ದ ಬಡತನ, ಹೊಟ್ಟೆಗೆ ಏನೂ ಇರುತ್ತಿರಲಿಲ್ಲ, 3-4 ದಿನಗಳು ಏನೂ ತಿನ್ನಲು ಸಿಗದೆ ನೀರು ಮಾತ್ರ ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದವರು. ಯಾರಾದರೂ ಆಲೂಗೆಡ್ಡೆ ಕೊಟ್ಟರೆ ಬೇಯಿಸಿಕೊಂಡು ತಿನ್ನಲೂ ಸಾಧನಗಳಿರಲಿಲ್ಲ. ಹಸಿವು ಕಚ್ಚಿಕೊಂಡಿದ್ದರೂ ಏನೂ ಮಾಡಲಾಗುತ್ತಿರಲಿಲ್ಲವೆಂದು ನೆನೆಸಿಕೊಳ್ಳುತ್ತಾರೆ.
7. ಲಾಹೋರಿನಲ್ಲಿದ್ದಾಗ ಭಗತ್ ಸಿಂಗ್ ಇವರ ವಿದ್ಯಾರ್ಥಿಯಾಗಿದ್ದ. ಗಣಿತದಲ್ಲಿ ತೇರ್ಗಡೆಯಾಗಲು ಆತನಿಗೆ 15 ಅಂಕಗಳು ಬೇಕಿದ್ದವು. ಇವರ ಹತ್ತಿರ ಅಂಕ ಕೊಡಲು ಭಗತ್ ಕೇಳಿದಾಗ "ಲಕ್ಷಣವಾಗಿ ಫೇಲಾಗು, ನನ್ನಿಂದ ಇಂತಹ ಕೆಲಸ ಅಸಾಧ್ಯ" ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಭಗತ್ ಮತ್ತು ಅವನ ಇತರ ಒಡನಾಡಿಗಳು ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಹುತಾತ್ಮರಾದವರು. ಹೋರಾಟದ ದಾರಿ ಬೇರೆಯಾದರೂ ಗಾಂಧೀಜಿ ಮತ್ತು ಅವರುಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ.
8. ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯದ ಅರ್ಥ ತಿಳಿದುಕೊಳ್ಳುವ, ಅಭಿವೃದ್ಧಿ ಕಡೆಗೆ ಗಮನ ಹರಿಸುವುದರೊಂದಿಗೆ ಕಿರಿಯರಿಗೆ ಸ್ವಾತಂತ್ರ್ಯದ ಮಹತ್ವ ತಿಳಿಸುವ ಅಗತ್ಯ ಹೆಚ್ಚು ಎಂಬುದು ಅವರ ಅಭಿಮತ.
9. ಆಚಾರಕ್ಕಿಂತ ವಿಚಾರಕ್ಕೆ ಹೆಚ್ಚು ಮಹತ್ವ, ಪ್ರಾಧಾನ್ಯತೆ ಕೊಟ್ಟವರು. ನಂಬಿದ ತತ್ವ, ಆದರ್ಶಗಳಿಗೆ ಬದ್ಧರಾದವರು. ಅವರ ಮಾತುಗಳು ಕೆಲವರಿಗೆ ಕಠಿಣವೆನಿಸಿದರೂ ಅದರಲ್ಲಿ ಸತ್ಯವಿದೆ, ತತ್ವವಿದೆ. ಆದರೆ ಪೂರ್ವಾಗ್ರಹ ಪೀಡಿತರಲ್ಲ. ತಾವು ನಂಬಿದ ಯಾವುದೇ ವಿಚಾರ ತಪ್ಪು ಎಂದು ಸಾಧಾರವಾಗಿ ಯಾರೇ ತಿಳಿಸಿಕೊಟ್ಟರೂ ಇದುವರೆಗೂ ನಂಬಿದ ವಿಚಾರ ಬಿಟ್ಟು ಸತ್ಯದ ಹಾದಿ ತುಳಿಯಲು ಸಿದ್ಧವಿರುವವರು.
10. ವೇದ, ಭಗವದ್ಗೀತೆ, ಇತ್ಯಾದಿಗಳನ್ನು ಅರ್ಥವತ್ತಾಗಿ ಸರಳವಾಗಿ ಶ್ರೋತೃಗಳೆದುರಿಗೆ ಬಿಚ್ಚಿಡುವ ಕಲೆ ಇವರಿಗೆ ಒಲಿದಿದೆ. ಅನಿಷ್ಟ ಸಂಪ್ರದಾಯಗಳ ವಿರುದ್ಧದ ಇವರ ಸಮರ, ಇವರ ಸಾಹಿತ್ಯ ಸೇವೆಗಳಿಗಾಗಿ ಇವರು ವಂದನೀಯರು.
11. ಪ್ರಸ್ತುತ ಇವರು ಬೆಂಗಳೂರಿನ ಜಯನಗರ 5ನೆಯ ಬ್ಲಾಕಿನಲ್ಲಿರುವ ಶ್ರೀ ಕೃಷ್ಣ ಸೇವಾಶ್ರಮ ಆಸ್ಪತ್ರೆಯ ಎದುರು ಸಾಲಿನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದಾರೆ.
12. ಎಲ್ಲಾ ಪಕ್ಷಗಳ ನಾಯಕರು, ಪ್ರತಿಷ್ಠಿತರು ಇವರನ್ನು ಕಂಡು ನಮಸ್ಕರಿಸಿ ಆಶೀರ್ವಾದ ಪಡೆದು ಹೋಗುತ್ತಾರೆ. ಆದರೆ ಇವರನ್ನೇ ಮರೆಯುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿಯನ್ನು ನಯವಾಗಿ ತಿರಸ್ಕರಿಸಿದ ಇವರಿಗೆ ಕೇಂದ್ರ ಸರ್ಕಾರದಿಂದಾಗಲೀ, ರಾಜ್ಯ ಸರ್ಕಾರದಿಂದಾಗಲೀ ಯಾವುದೇ ಅಧಿಕೃತ ಗೌರವವಾಗಲೀ, ಸನ್ಮಾನವಾಗಲೀ ದೊರೆತಿಲ್ಲ. ಇದಕ್ಕೆ ಅಡ್ಡಿಯಾಗಿರುವುದು ಸರ್ಕಾರದ ಕಟ್ಟಳೆಗಳು. ಅರ್ಜಿ ಹಾಕಿ ಸನ್ಮಾನ ಪಡೆಯಬೇಕು! ಅಂತಹ ಕೇಳಿ ಪಡೆಯುವ ಗೌರವದ ಅಗತ್ಯ ಈ ಹಿರಿಯ ಜೀವಕ್ಕಿಲ್ಲ!
ಈ ಮೇರು ವ್ಯಕ್ತಿತ್ವಕ್ಕೆ ನಮಿಸೋಣ! ಅವರ ವಿಚಾರಗಳನ್ನು ತಿಳಿಯೋಣ! ಅವರ ಮಾರ್ಗದರ್ಶನ ಸದಾ ಸಿಗಲಿ ಎಂದು ಬಯಸೋಣ!

*******************
-ಕ.ವೆಂ.ನಾಗರಾಜ್.