Pages

Tuesday, May 31, 2011

ಮೇಲಕ್ಕೇರಿದ ಮೈಲಾರಶರ್ಮ: ಲೇಖಕನ ಪ್ರತಿಕ್ರಿಯೆ:

     ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದ ಎಲ್ಲರಿಗೂ ವಂದಿಸುವೆ. ಚಿಂತನೆ, ಜಿಜ್ಞಾಸೆಗಳಿಗೆ ಅವಕಾಶವಾದ ಲೇಖನ ಸಾರ್ಥಕವೆಂದು ಅನ್ನಿಸಿದೆ. ಪ್ರಾರಂಭದಲ್ಲೇ ಸ್ಪಷ್ಟಪಡಿಸಿಬಿಡುತ್ತೇನೆ. ನಾನು ಪೂರ್ವಾಗ್ರಹ ಪೀಡಿತನಾಗಿ ನನ್ನದೇ ಅಭಿಪ್ರಾಯ ಸರಿಯೆಂದು ವಾದಿಸಲು ಹೋಗುವುದಿಲ್ಲ, ಆದರೆ ನಾನು ಹೊಂದಿರುವ ಅಭಿಪ್ರಾಯ ಸರಿಯಲ್ಲವೆಂದು ನನಗೆ ಮನವರಿಕೆಯಾಗುವವರೆಗೂ ಅದನ್ನು ಬದಲಾಯಿಸಿಕೊಳ್ಳುವ ಮನೋಭಾವ ನನ್ನದಲ್ಲ. ನಡೆದುಕೊಂಡು ಬಂದಿರುವ ನಡವಳಿಕೆಗಳು/ ಸಂಪ್ರದಾಯಗಳು/ ವಸ್ತುಸ್ಥಿತಿಯೊಂದಿಗೆ ರಾಜಿ/ಹೊಂದಾಣಿಕೆ ಮಾಡಿಕೊಳ್ಳುವೆನಷ್ಟೆ. ನನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿರುವವರ ಅಭಿಪ್ರಾಯಗಳಿಗೆ ನಾನು ವಿರೋಧಿಯಲ್ಲ. ಅದು ಅವರ ಹಕ್ಕು, ಅದನ್ನು ಗೌರವಿಸುವೆ. ಅಂತಹವರ ಅಭಿಪ್ರಾಯಗಳಿಂದ ನಾನು ನೊಂದುಕೊಳ್ಳುವುದಾಗಲೀ, ಬೇಸರಪಟ್ಟುಕೊಳ್ಳುವುದಾಗಲೀ ಮಾಡುವುದಿಲ್ಲ. ವೈಚಾರಿಕ ಭಿನ್ನತೆಯೂ ಸಹ ಚಿಂತನೆ, ಜಿಜ್ಞಾಸೆಗಳಿಗೆ ಸಹಕಾರಿ. ನನ್ನ ಲ್ಯಾಪ್ ಟಾಪ್‌ನ ದೋಷದಿಂದಾಗಿ ಲೇಖನಕ್ಕೆ ಬರೆದ ಪ್ರತಿಕ್ರಿಯೆ ಪ್ರಕಟಗೊಳ್ಳುತ್ತಿರಲಿಲ್ಲ. ಎಲ್ಲರಿಗೂ ಒಟ್ಟಿಗೆ ಪ್ರತಿಕ್ರಿಯಿಸಿದರೆ ದೊಡ್ಡದಾಗುವ ಕಾರಣದಿಂದ ಇದನ್ನು ಪ್ರತ್ಯೇಕವಾಗಿ ಪ್ರಕಟಿಸಿರುವೆ. ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ವಂದನೆಗಳು.
     ಮಿತ್ರ ಶ್ರೀಧರರು ಭಾವನಾತ್ಮಕವಾಗಿ ಪತಿ-ಪತ್ನಿಯರ ಮತ್ತು ಇತರ ಸಂಬಂಧಿಕರ ಭಾವನೆಗಳ ಬಗ್ಗೆ ಹೇಳುತ್ತಾರೆ. ಸಂಬಂಧಗಳು ಮಧುರವಾಗಿರಲೇಬೇಕು, ಅದಕ್ಕಾಗಿ ಪತಿ-ಪತ್ನಿಯರು ಹೊಂದಾಣಿಕೆ ಮಾಡಿಕೊಳ್ಳಲೇಬೇಕು ಎಂಬುದು ಸರಿ. ನಿಜ, ಮೃತರಾದ ನಂತರ ಅಂತ್ಯ ಸಂಸ್ಕಾರವಾಗುವವರೆಗೂ ಜಡವಾದ ಶರೀರವನ್ನು ನೋಡಲು, ಕಡೆಯ ಸಲವಾದರೂ ಕಣ್ತುಂಬಿಕೊಳ್ಳಲು ಬಯಸುವುದು ಮಾನವ ಸಹಜ ಗುಣ. ಮೃತರೊಡನೆ ನಾವು ಹೊಂದಿದ್ದ ಆತ್ಮೀಯತೆ ಅನುಸರಿಸಿ ಅವರನ್ನು ದೀರ್ಘಕಾಲದವರೆಗೂ ನೆನಪಿಸಿಕೊಳ್ಳುತ್ತಿರುತ್ತೇವೆ. ಸಾಂಸಾರಿಕ ಜೀವನಕ್ಕೂ, ಮೃತರಾದ ನಂತರದ ಉತ್ತರಕ್ರಿಯೆಗಳಿಗೂ ತಳುಕು ಹಾಕುವುದು ತರವಲ್ಲ. 'ಎಲ್ಲರೂ ದೇಹದಾನ ಮಾಡಲು ತೊಡಗಿದರೆ ಮುಂದೊಂದು ದಿನ ದೇಹ ಪಡೆಯಲು ಆಸ್ಪತ್ರೆಯವರೂ ಮುಂದೆ ಬರಲಾರರು' ಎಂಬ ಮಾತಿಗೆ ನಾನು ಪ್ರತಿಕ್ರಿಯಿಸುವುದೇನೆಂದರೆ ಅಂತಹ ಸ್ಥಿತಿ ಬರಲಿ ಎಂದು. ಅಗತ್ಯವಿರುವ ವಸ್ತುಗಳನ್ನು ಕೊಟ್ಟರೆ ಅದು ದಾನ, ಅದು ಅಗತ್ಯ. ಒಂದು ವೇಳೆ ಅಂತಹ ಅಗತ್ಯವಿಲ್ಲದಿದ್ದರೆ ದೇಹವನ್ನು ಸುಡುವುದು ಒಳ್ಳೆಯ ಕೆಲಸ. ಶರೀರದ ಮಾರಾಟ ಒಂದು ದಂಧೆಯಾದರೂ, ನೆಗಡಿಯೆಂದು ಮೂಗನ್ನೇ ಕತ್ತರಿಸುವುದಿಲ್ಲವಲ್ಲವೇ? ಬದುಕಿರುವಾಗಲೇ ತಮ್ಮ ಆತ್ಮೀಯರಿಗಾಗಿ ತಮ್ಮ ಒಂದು ಕಿಡ್ನಿಯನ್ನು ಕೊಟ್ಟ ಪುಣ್ಯಾತ್ಮರು ಇರುವ ಭೂಮಿಯಿದು. ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾ, ನರಕಯಾತನೆ ಪಡುತ್ತಿರುವವರನ್ನು ನೋಡಿದವರಿಗೆ, ಸತ್ತ ಮೇಲಾದರೂ ನಮ್ಮ ಶರೀರದ ಕಿಡ್ನಿ ಅವರ ಬದುಕಿಗೆ ಬೆಳಕಾಗುವುದಾದರೆ ಸಾರ್ಥಕವೆಂದು ಅನ್ನಿಸುವುದಿಲ್ಲವೇ? ಅನಾಥರ, ಚಿಕಿತ್ಸೆಗೆ ಬಂದವರ ಕಿಡ್ನಿಗಳನ್ನು ಚಿಕಿತ್ಸೆಯ ನೆಪದಲ್ಲಿ ಕಳ್ಳತನದಿಂದ ಶಸ್ತ್ರಚಿಕಿತ್ಸೆ ಮಾಡಿ ಅಪಹರಿಸುವವರ ಕುಕೃತ್ಯಕ್ಕೆ ಸಹ ಇಂತಹ ದೇಹದಾನದಿಂದ ಕಡಿವಾಣ ಬೀಳುವುದು. ಭಾರತದ ಜನಸಂಖ್ಯೆ ೧೧೦ ಕೋಟಿ. ಪ್ರತಿನಿತ್ಯದ ಸರಾಸರಿ ಅಂದಾಜು ಸಾವು ೬೨೩೮೯. ಸರಾಸರಿ ಅಂದಾಜು ಜನನ ೮೬೮೫೩. ಭಾರತದಲ್ಲಿನ ಅಂಧರ ಸಂಖ್ಯೆ ೬೮೨೪೯೭. ಸಾಯಲಿರುವ ಪ್ರತಿ ವ್ಯಕ್ತಿ ತನ್ನ ಕಣ್ಣುಗಳನ್ನು ದಾನ ಮಾಡಿದರೆ ಹತ್ತೇ ದಿನಗಳಲ್ಲಿ ಎಲ್ಲಾ ಅಂಧರಿಗೆ ಸಾಲುವಷ್ಟು ಕಣ್ಣುಗಳು ದೊರೆಯುತ್ತವೆ. ಭಾರತ ಸಾಧಿಸಬಹುದು. ಆದರೂ ಸಾಧಿಸಿಲ್ಲ. ಬೇರೆಯವರ ವಿಷಯ ಬೇಡ, ನಮ್ಮ ಕಣ್ಣುಗಳನ್ನು ದಾನ ಮಾಡಲು ನಾವು ನಿರ್ಧರಿಸಬಹುದಲ್ಲವೇ? 'ಶರೀರದಾನ ಮಾಡಿದರೆ ನಾವು ಜಡವಸ್ತುವಿನಂತೆ, ನಾವು ಭಾವನೆಗಳಿಲ್ಲದವರು' ಎಂಬುದು ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಸುಟ್ಟರೆ ಪೂರ್ಣ ಶರೀರ ನಾಶಗೊಳ್ಳುತ್ತದೆ. ದಾನ ಮಾಡಿದರೆ ಕನಿಷ್ಠ ಪಕ್ಷ ಮೃತರ ಕೆಲವು ಅಂಗಗಳಾದರೂ - ಕಿಡ್ನಿ, ಕಣ್ಣು, ಇತ್ಯಾದಿ - ಬೇರೆಯವರ ಶರೀರಗಳಲ್ಲಿ ಬದುಕಿರುತ್ತವೆ, ಅದರಿಂದ ಅವರುಗಳ ಬಾಳೂ ಬೆಳಕಾಗಿದೆ ಎಂಬುದನ್ನು ಜ್ಞಾಪಿಸಿಕೊಂಡರೆ ಧನ್ಯತೆಯ ಭಾವನೆ ಮೂಡಬಹುದು. ದೇಹದಾನ ಮಾಡಬಯಸುವವರು ಮತ್ತು ಸಹಕರಿಸುವ ಕುಟುಂಬದವರಿಗೆ ಸಹ ದೇಹ ಸುಡುವವರಿಗೆ/ಹೂಳೂವವರಿಗೆ ಭಾವನೆಗಳು, ಕಳಕಳಿಯಿಲ್ಲವೆಂದು ಅನ್ನಿಸಬಹುದಲ್ಲವೇ?
     'ಬದುಕು ಮತ್ತು ಭಾವನೆಗಳಿಗೆ ಅವಿನಾಭಾವ ಸಂಬಂಧವಿದೆ. ಭಾವನಾರಹಿತ ಜೀವನವು ಬದುಕೇ ಅಲ್ಲ. ಒಮ್ಮೆ ಭಾವನೆಗಳು ನಾಶವಾಗುತ್ತಾ ಬಂದರೆ ಬದುಕು ಯಾಂತ್ರಿಕ. ಇಂತಹ ಬದುಕು ಬೇಕೆ? ಅಥವಾ ಭಾವನೆಗಳ ಜೊತೆಗೆ ಪ್ರೀತಿವಾತ್ಸಲ್ಯ ಮಮಕಾರಗಳಿಂದ ಕೂಡಿದ ಜೀವನ ಬೇಕೆ?' ಎಂಬ ಶ್ರೀಧರರ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ದೇಹವನ್ನು ಸುಟ್ಟರೆ ಮಾತ್ರ ಪ್ರೀತಿ, ವಿಶ್ವಾಸಗಳಿವೆ, ದಾನ ಮಾಡಿದರೆ ಇಲ್ಲ ಎಂಬಲ್ಲಿ ಮಾತ್ರ ನಾನು ಭಿನ್ನನೆನಿಸಿಕೊಳ್ಳುವೆ. 'ಭಾವನಾರಹಿತವಾದ ಪತಿ/ಪತ್ನಿ/ಮಕ್ಕಳು ಮಾತ್ರ ದೇಹದಾನ ಮಾಡಲು ಒಪ್ಪ ಬಲ್ಲರು ಅಥವಾ ಆ ಮಟ್ಟಕ್ಕೆ [ಅದು ಅತ್ಯುನ್ನತ ಸ್ಥಿತಿ ಎಂದು ನಾನು ತಿಳಿಯುವೆ] ಕುಟುಂಬದವರೆಲ್ಲಾ ಬೆಳೆದಿರಬೇಕು' ಎಂಬ ಅವರ ಮಾತಿನಲ್ಲೇ ವಿರೋಧಾಭಾಸ ನನಗೆ ಕಂಡಿದೆ. ಒಂದೆಡೆ ಭಾವನಾರಹಿತರಾದವರು ಇನ್ನೊಂದೆಡೆ ಅತ್ಯುನ್ನತ ಸ್ಥಿತಿ ತಲುಪಿದವರು ಎಂದು ಅನ್ನಿಸಿಕೊಳ್ಳುವುದು ಸಾಧ್ಯವೇ? ಸಾವಿನ ವಿಷಯ ಬಂದಾಗ ಆತ್ಮೀಯರು ಆ ವಿಷಯ ಮಾತನಾಡಲು ಬಯಸುವುದಿಲ್ಲ. ಅಂತಹ ವಿಷಯ ಮಾತನಾಡಬೇಡ ಎಂದು ಬಾಯಿ ಮುಚ್ಚಿಸುವುದು ಸಾಮಾನ್ಯ. ನನ್ನ ಬರಹದ ಬಗ್ಗೆ ಮಿತ್ರ ಶ್ರೀಧರರ ಪ್ರತಿಕ್ರಿಯೆಯೂ ಸಹ ಇದಕ್ಕೆ ಒಂದು ಉದಾಹರಣೆ. ಅಂತಹುದರಲ್ಲಿ ಸಾವಿನ ನಂತರ ದೇಹದಾನ ಮಾಡುವ ವಿಚಾರದಲ್ಲಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸುವುದು ಕಷ್ಟ ಮತ್ತು ಸೂಕ್ಷ್ಮವಾದ ವಿಚಾರ. ಭಾವನೆ ಅರ್ಥವಾಗುವಂತೆ ಮತ್ತು ಒಪ್ಪಿಕೊಳ್ಳುವಂತೆ ಪರೋಕ್ಷವಾಗಿ ಹೇಳಬೇಕಾಗುತ್ತದೆ. ಆಗ ದೇಹದಾನ ಮಾಡಿದ ಮೈಲಾರಶರ್ಮರಂತಹವರು ನೆರವಿಗೆ ಬರುತ್ತಾರೆ.
     ಶ್ರೀಯುತ ಜಗದೀಶರು ಉಲ್ಲೇಖಿಸಿದ 'ಶರೀರಮಾತ್ರಮ್ ಖಲುಧರ್ಮಸಾಧನಂ' ಎಂಬ ಉಕ್ತಿಗೆ ನನ್ನ ಸಹಮತವಿದೆ. ಧೃಢ ಮನಸ್ಸು ಮತ್ತು ಶರೀರಗಳಿಂದ ಅದ್ಭುತಗಳನ್ನು ಸಾಧಿಸಬಹುದು. ಆದರೆ ಈ ಮಾತು ಜೀವಂತ ಶರೀರಕ್ಕೆ ಅನ್ವಯಿಸುತ್ತದೆ. ಅವರಂತೆ ನನಗೂ ಸಹ 'ಪುನರಪಿ ಜನನಂ ಪುನರಪಿ ಮರಣಂ' ಎಂಬ ವಿಚಾರದಲ್ಲಿ ನಂಬಿಕೆಯಿದೆ. ದೇವನ ಅತ್ಯದ್ಭುತ ನಿರ್ಮಾಣವಾದ  ನವರಸದರಮನೆಯಾದ ಈ ದೇಹ ಪಡೆಯುವಲ್ಲಿ ದೇವನ ಕರುಣೆಯೊಂದಿಗೆ ಜೀವಿಯ ಕರ್ಮಫಲವೂ ಸೇರುತ್ತದೆ. ಇಂತಹ ದೇಹದ ಒಡೆತನವನ್ನು ದೇವನನ್ನು ಹೊರತುಪಡಿಸಿ ಸ್ವತಃ ಜೀವಿಯೂ ಸೇರಿದಂತೆ ಯಾರಾದರೂ ಸಾಧಿಸಲು ಸಾಧ್ಯವೇ ಎಂಬುದೇ 'ತಾಯಿಯ ಸ್ವತ್ತಲ್ಲ, ತಂದೆಯ ಸ್ವತ್ತಲ್ಲ, ಪತ್ನಿಯ ಸ್ವತ್ತಲ್ಲ, ಮಕ್ಕಳ ಸ್ವತ್ತಲ್ಲ' ಎಂಬ ಮೂಢನ ಉದ್ಗಾರದ ಒಳಾರ್ಥ. ಭಗವದ್ಗೀತೆ ಬೋಧಿಸಿದಂತೆ ಪ್ರತಿ ಜೀವಿಯೂ ತನ್ನ ಕರ್ಮಕ್ಕೆ ತಕ್ಕಂತೆ ಫಲ ಪಡೆಯುತ್ತಾನೆ. ಎಲ್ಲರೂ ತಾವೇ ಬೇಯಿಸಿದ ಪದಾರ್ಥವನ್ನು ತಿನ್ನಲೇಬೇಕು. ಮೃತ ಶರೀರವನ್ನು ಸುಡಲಿ, ಬಿಡಲಿ, (ಕೇವಲ ಸುಡುವುದಕ್ಕೆ ಮಾತ್ರವಲ್ಲ, ಸಂಪ್ರದಾಯಕ್ಕನುಸಾರವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಿ, ಬಿಡಲಿ) ಅದು ಜೀವಿಯ ಪುನರ್ಜನ್ಮದ ಮೇಲೆ ಪರಿಣಾಮ ಬೀರಲಾರದು. ಜೀವಿತಾವಧಿಯಲ್ಲಿನ ಕರ್ಮಕ್ಕನುಗುಣವಾಗಿ ಮುಂದಿನ ಜನ್ಮವಿರುತ್ತದೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿದೆ. ಜಗದೀಶರು ಕೊಟ್ಟ 'ಕೇವಲ ಫೋಟೋದಲ್ಲಿನ ತಂದೆಯ ಚಿತ್ರದ ಕಣ್ಣಿಗೆ ಚುಚ್ಚಿದರೆ ಸಹಿಸುತ್ತಾರೆಯೇ' ಎಂಬ ಉದಾಹರಣೆ ಈ ವಿಷಯಕ್ಕೆ ಅಷ್ಟೊಂದು ಸೂಕ್ತವೆನಿಸದು. ಮೃತ ದೇಹಕ್ಕೆ ನೋವಾಗುತ್ತದೆ ಅಥವಾ ಸಂಬಂಧಿಕರ ಮನಸ್ಸಿಗೆ ನೋವಾಗುತ್ತದೆ ಅದನ್ನು ಸುಡದೆ/ಹೂಳದೆ ಇರುತ್ತಾರೆಯೇ? ಅವರಂತೆ ನಾನೂ ಸಹ ಯಾರ ಮನಸ್ಸನ್ನೂ ನೋಯಿಸಲು ಉದ್ದೇಶಿಸಿಲ್ಲ. ನನ್ನ ಅಭಿಪ್ರಾಯವನ್ನು ಎಲ್ಲರೂ - ನನ್ನ ಕುಟುಂಬದ ಸದಸ್ಯರುಗಳೂ ಸೇರಿ - ಒಪ್ಪಬೇಕೆಂದು ನನ್ನ ಆಗ್ರಹವಿಲ್ಲ. ಗಲ್ಲು ಶಿಕ್ಷೆಗೆ ಒಳಗಾದವರನ್ನೂ ಅವರ ಅಂತಿಮ ಇಚ್ಛೆ ಏನೆಂದು ಕೇಳಿ ಸಾಧ್ಯವಿದ್ದರೆ ನೆರವೇರಿಸುತ್ತಾರೆ. ಅದೇ ರೀತಿ ದೇಹದಾನ ಮಾಡಬಯಸುವವರು ಮೃತರಾದ ನಂತರ ಅವರ ಇಚ್ಛೆಯನ್ನು ನೆರವೇರಿಸುವುದು, ಬಿಡುವುದು ಸಂಬಂಧಿಕರಿಗೆ ಸೇರಿದ್ದು. ಕೆಲವು ಜಾತಿಗಳಲ್ಲಿ ಸತ್ತವರಿಗೆ ಇಷ್ಟವೆಂದು ಮಾಂಸ, ಮದ್ಯ, ಸಿಗರೇಟು, ಇತ್ಯಾದಿಗಳನ್ನೂ ಎಡೆ ಇಡುವುದನ್ನು ಕಂಡಿದ್ದೇನೆ. ಅಂತಹುದರಲ್ಲಿ ದೇಹದಾನ ಮಾಡಬಯಸಿದಲ್ಲಿ ಆ ಆಸೆಯನ್ನು ನೆರವೇರಿಸಲು ಸಂಬಂಧಿಕರು ಮನಸ್ಸು ಮಾಡಬಹುದು. ಇದನ್ನು ಬಾಲಿಶ ಹೇಳಿಕೆ ಎಂದು ಪರಿಗಣಿಸಿದರೆ ನನ್ನ ಅಭ್ಯಂತರವಿಲ್ಲ.
     ಮಿತ್ರ ಮಹೇಶ ಪ್ರಸಾದ ನೀರ್ಕಜೆಯವರ ಅಭಿಪ್ರಾಯಗಳು ನನ್ನ ಬರಹಕ್ಕೆ ಪೂರಕವಾಗಿದೆ. ನಡೆದ ಚರ್ಚೆಗಳು ಉಪಯುಕ್ತವಾಗಿದೆ. ಸಂಪದದಲ್ಲಿ ಮಿತ್ರ ಗಣೇಶರು ಬರೆದ ದೇಹದಾನ ಕುರಿತ ಲೇಖನ ಸಹ ಇದಕ್ಕೆ ಪೂರಕವಾಗಿದ್ದು ಅದನ್ನೂ ಓದಲು ವಿನಂತಿಸುವೆ. ಶ್ರೀಯುತ ಜಗದೀಶರೇ ಉಲ್ಲೇಖಿಸಿದ ಮುತ್ತಿನಂತಹ ಮಾತುಗಳಿಂದ ಮುಗಿಸುವೆ: The most difficult requirement of becoming knowledgable is that you must give up certainty!”  ಪೂರ್ವಾಗ್ರಹವಿಲ್ಲದೆ ನಮ್ಮದೇ ಸರಿಯೆಂಬ ವಿಚಾರಕ್ಕೆ ಅಂಟಿಕೊಳ್ಳದೆ ವಿಚಾರ ಮಾಡೋಣ, ವಿಮರ್ಶಿಸೋಣ, ನಿಜವ ತಿಳಿಯೋಣ!
ನಮಸ್ಕಾರಗಳು.
-ಕ.ವೆಂ.ನಾಗರಾಜ್.

ದೇಹದಾನ - ಕೆಲವು ಮಾಹಿತಿಗಳು


Valves from the heart of a brain-dead 40-day- old infant have saved two other children from premature death in a hospital here. The infant’s eyes were also donated for cornea grafting.
[ಚಿತ್ರ ಕೃಪೆ: ಬಿ.ಬಿ.ಸಿ]


A doctor in India is steadying his nerves to dissect his father's embalmed body to help anatomy students' research at a medical college.
**************
'ಸಂಪದ' ತಾಣದಲ್ಲಿ ನನ್ನ ಲೇಖನಕ್ಕೆ ಶ್ರೀ ಗಣೇಶರು ನೀಡಿದ ಪ್ರತಿಕ್ರಿಯೆ ಹೀಗಿದೆ:
ಕವಿನಾಗರಾಜರೆ,
ನೂರಾರು ವರ್ಷ ಆರೋಗ್ಯವಂತರಾಗಿ ಬಾಳಿ ಎಂದು ಮೊದಲಿಗೆ ಹಾರೈಸುವೆ. ನಿಮ್ಮ ಅಂಗಾಂಗ ದಾನ,ದೇಹದಾನದ ನಿರ್ಧಾರಕ್ಕೆ ಜೈ. ಕೊನೆಯಲ್ಲಿ ಹೇಳಿದ ಮಾತು ತುಂಬಾ ಚೆನ್ನಾಗಿದೆ-"...ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು." ನಿಮ್ಮ ಮುಕ್ತಕಗಳು ನಾಗರತ್ನಮ್ಮನವರು ಹೇಳಿದಂತೆ ಅನರ್ಘ್ಯ ರತ್ನಗಳು.
ಮೈಲಾರ ಶರ್ಮ ಹಾಗೂ ಅವರ ಕುಟುಂಬದವರು ಇತರರಿಗೆ ಆದರ್ಶಪ್ರಾಯರು.
-ಗಣೇಶ.
****************
'ದೇಹದಾನ' ಕುರಿತು ಮಿತ್ರ ಶ್ರೀ ಗಣೇಶರು 'ಸಂಪದ'ದಲ್ಲಿ ಬರೆದ ಲೇಖನವನ್ನು ಅವರ ಅನುಮತಿ ನಿರೀಕ್ಷಿಸಿ ಇಲ್ಲಿ ಪ್ರತಿ ಮಾಡಿರುವೆ:
'ದೇಹದಾನ'
     "ಕಳೆದ ವರ್ಷ ಮಾರ್ಚ್‌ನಲ್ಲಿ ನನ್ನ ತಾಯಿಯವರು ಆಸ್ಪತ್ರೆಯಲ್ಲಿ ನಿಧನರಾದಾಗ ನಡೆದ ಘಟನೆ : ೫೨ ವರ್ಷ ತಾಯಿಯನ್ನು ಹೆಚ್ಚು ಕಮ್ಮಿ ಕ್ಷಣವೂ ಬಿಟ್ಟಿರದ ತಂದೆಯವರು, ತಾಯಿಯ ಬಳಿ ಸ್ವಲ್ಪ ಹೊತ್ತು ನಿಂತು ನೋಡಿ, ಹೊರಬಂದು, ನನ್ನನ್ನು ಕರೆದು, "ಅಮ್ಮನ ದೇಹದಾನ ಮೆಡಿಕಲ್ ಕಾಲೇಜ್‌ಗೆ ಮಾಡುವಂತೆ ಡಾಕ್ಟ್ರಿಗೆ ತಿಳಿಸು" ಎಂದರು. ನನಗೆ ಆಗ ಏನು ಹೇಳುವುದು, ಏನು ಮಾಡುವುದು ತೋಚಲೇ ಇಲ್ಲ. " ಈ ದೇಹದಲ್ಲಿ ಏನಿದೆ? ಅವಳು ನಮ್ಮೆಲ್ಲರ ಹೃದಯದಲ್ಲಿರುವಳು. ನಾಳೆ ಹೇಗೂ ಸುಡುವರು,ಅದರ ಬದಲು..."ಎಂದೆಲ್ಲಾ ತಮ್ಮ ದುಃಖ ನುಂಗಿ ಹೇಳುತ್ತಲೇ ಇದ್ದರು. ಸಿನೆಮಾ ನಟ ಲೋಕೇಶ್‌ರ ನಿಧನಾನಂತರ ಅವರ ದೇಹವನ್ನು ಮೆಡಿಕಲ್ ಕಾಲೇಜ್‌ಗೆ ದಾನ ನೀಡಿದ್ದು ಗೊತ್ತಿತ್ತು. http://www.chitraloka.com/flash-back/137-memories-tragedies/1754-body-donated-to-hospital.html  ಮನಸ್ಸನ್ನು ಎಷ್ಟು ಗಟ್ಟಿ ಮಾಡಿದರೂ ನನ್ನಿಂದ ಒಪ್ಪಲು ಸಾಧ್ಯವಾಗಲಿಲ್ಲ. ತಮ್ಮ ತಂಗಿಯ ಅಭಿಪ್ರಾಯ ಕೇಳಿ ಬರುವೆ ಎಂದು ತಂದೆಯ ಬಳಿ ಹೇಳಿ ಬಂದೆ. ಎಲ್ಲರೂ ಬೇಡ ಎಂದು ಒತ್ತಾಯಿಸಿದ್ದರಿಂದ ಅಪ್ಪ ಸುಮ್ಮನಾದರು.
     ನಂತರವೂ ಪ್ರತಿದಿನ ನಮ್ಮಲ್ಲಿ ನಡೆಯುವ ಕ್ರಿಯಾಕರ್ಮಗಳ ಬಗ್ಗೆ ತಂದೆಯವರು ವಿರೋಧಿಸುತ್ತಲೇ ಇದ್ದರು. "ಬದುಕಿರುವಾಗ ನೀನು ಚೆನ್ನಾಗಿ ನೋಡಿರುವೆ. ಅದು ಮುಖ್ಯ. ಇದೆಲ್ಲಾ ವ್ಯರ್ಥ..." ಎಂದು ಹೇಳುತ್ತಿದ್ದರು.
ಒಂದೆರಡು ತಿಂಗಳ ನಂತರ ತಂದೆಯವರು ಒಂದು ಅರ್ಜಿ ತಂದು ಸಹಿ ಹಾಕಲು ಹೇಳಿದರು. ನೋಡಿದರೆ ಅವರ ದೇಹದಾನದ ಅರ್ಜಿ. ಒಬ್ಬ ಡಾಕ್ಟರ್ ಮಗ ತನ್ನ ತಂದೆಯ ದೇಹವನ್ನೇ ಬಗೆದು ಮಕ್ಕಳಿಗೆ ಪಾಠ ಮಾಡಿದರೆ, http://www.bbc.co.uk/news/world-south-asia-11710741 ನಾನು ದೇಹದಾನದ ಅರ್ಜಿಗೇ ಸಹಿ ಹಾಕಲು ಹಿಂದೇಟು ಹಾಕಿದೆ.
     ಆರೋಗ್ಯವಂತರಾಗೇ ಇದ್ದ ನನ್ನ ತಂದೆಯವರು ಎಪ್ರಿಲ್ ೨೫ರಂದು ನಮ್ಮಲ್ಲಿ (ಕೊನೆಯ) ಊಟಮಾಡಿ, ತಂಗಿ ಮನೆಗೆ ಹೋದವರು, ಎಪ್ರಿಲ್ ೨೯ರಂದು ಮನೆಯಲ್ಲಿ ಮಲಗಿದ್ದಂತೆ ತೀರಿದರು. ದುಃಖದಲ್ಲಿದ್ದವನಿಗೆ ದೇಹದಾನವಾಗಲಿ, ಅಂಗಾಂಗ ದಾನವಾಗಲೀ ನೆನಪಾಗಲೇ ಇಲ್ಲ. ತೀರಿಹೋದ ೪೧ ದಿನದ ಮಗುವಿನ ಹೃದಯದ ಕವಾಟ ದಾನದಿಂದಾಗಿ ೨ ಮಕ್ಕಳಿಗೆ ಜೀವದಾನ ಎಂಬ ಪತ್ರಿಕಾ ವರದಿ ಇದೇ ೨೨ನೇ ತಾರೀಕಿನಂದು ಓದಿದೆ. http://www.manipalworldnews.com/news_local.asp?id=3249 ಕವಾಟ ದಾನದ ಬಗ್ಗೆ ಮಗುವಿನ ತಂದೆತಾಯಿಯ ಮನವೊಲಿಸಿದ Mohan (Multi Organ Harvesting Aid Network) foundation ಪ್ರಯತ್ನ ನಿಜಕ್ಕೂ ಪ್ರಶಂಸನೀಯ. http://www.mohanfoundation.org/  ಆದರ್ಶ ಅಧ್ಯಾಪಕರಾಗಿದ್ದ ತಂದೆಯವರು ಸಾವಲ್ಲೂ ಆದರ್ಶರಾಗಲು ನಾನು ಬಿಡಲಿಲ್ಲ..
-ಗಣೇಶ
*******
ಮಿತ್ರ ಗಣೇಶರೇ, ನಿಮ್ಮ ಪ್ರಾಮಾಣಿಕ ಅನಿಸಿಕೆಗೆ ವಂದಿಸುವೆ.

ವೇದ,ಉಪನಿಷತ್ತು, ಅರಣ್ಯಕ, ಪುರಾಣ

ನಮ್ಮ ದೇಶದಲ್ಲಿ ವೇದಗಳ ಜೊತೆ ಜೊತೆಗೇ ಉಪನಿಷತ್ತುಗಳ, ಅರಣ್ಯಕಗಳ, ಪುರಾಣಗಳ ಹಾಗೂ ಇನ್ನಿತರ ಗ್ರಂಥಗಳ ಅಧ್ಯಯನವು ನಡೆದು ಬಂದಿದೆ. ಎಲ್ಲದರಲ್ಲೂ ವೇದದ ಹಲವು ಅಂಶಗಳು ಇರುವುದು ಸುಳ್ಳಲ್ಲ . ಇವೆಲ್ಲವೂ ವೇದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡ ಗ್ರಂಥಗಳೇನಲ್ಲ[ಇದು ನನ್ನ ತಿಳುವಳಿಕೆ] ನಮ್ಮ ದೇಶದಲ್ಲಿ ಸಾವಿರಾರು ಋಷಿಗಳು ಜನ್ಮತಾಳಿ ಅವರವರ ತಪಸ್ಸಿನಿಂದ ಅವರು ಕಂಡುಕೊಂಡ ಸತ್ಯವನ್ನು ನಮಗೆಲ್ಲಾ ಅವರವರ ರೀತಿಯಲ್ಲಿ ತಿಳಿಸಿದ್ದಾರೆ. ಇದು ನಮ್ಮ ಭಾಗ್ಯವೆಂಬುದು ನನ್ನ ಅಭಿಮತ.


ಯಥಾ ನಧ್ಯ: ಸ್ಯಂದಮಾನಾ ಸಮುದ್ರೇ
ಅಸ್ತಂ ಗಚ್ಚತಿ ನಾಮರೂಪೇ ವಿಹಾಯ
ತಥಾ ವಿದ್ವಾನ್ ನಾಮರೂಪಾತ್ ವಿಮುಕ್ತ:
ಪರಾತ್ಪರಂ ಪುರುಷಮುಪೈತಿ ದಿವ್ಯಂ
[ಸಂಸ್ಕೃತ ಕಲಿತಿಲ್ಲವಾದ್ದರಿಂದ ಮೇಲಿನ ಸೂಕ್ತಿಯಲ್ಲಿ ವ್ಯಾಕರಣ ದೋಷ ವಿದ್ದರೆ ಪಂಡಿತರು ದಯಮಾಡಿ ತಿದ್ದಿ]


"ಹರಿಯುತ್ತಾ ಹರಿಯುತ್ತಾ ಹೇಗೆ ನದಿಗಳು ತಮ್ಮ ನಾಮರೂಪವನ್ನು ಕಳೆದುಕೊಂಡು ಸಮುದ್ರದಲ್ಲಿ ಒಂದಾಗುತ್ತವೋ ಹಾಗೆ ಜ್ಞಾನಿಗಳು ನಾಮರೂಪವನ್ನು ಬಿಟ್ಟು ದಿವ್ಯ ಪರಾತ್ಪರ ಪುರುಷನನ್ನು ಪಡೆಯುತ್ತಾರೆ"....ಈ ಚಿಂತನೆ ನಮಗೆ ಹಿತವೆನಿಸುತ್ತದೆಯಲ್ಲವೇ? ಆದರೆ ವೇದಾಧ್ಯಾಯೀ      ಶ್ರೀ ಸುಧಾಕರಶರ್ಮರ ಚಿಂತನಾ ಲಹರಿಯೇ ಬೇರೆ. ವೇದಸುಧೆ ಬಳಗದ ಶ್ರೀ ವಿ.ಆರ್.ಭಟ್ಟರು ಕೇಳಿರುವ ಪ್ರಶ್ನೆಗೆ ಇಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ಉತ್ತರಿಸಿದ್ದಾರೆ.ವೇದಸುಧೆಯ ಅಭಿಮಾನಿಗಳೆಲ್ಲರೂ ಈ ಚರ್ಚೆಯಲ್ಲಿ ದಯಮಾಡಿ ಪಾಲ್ಗೊಳ್ಳಿ. ಇಲ್ಲಿ ಯಾರದೋ ವಾದ ಗೆಲ್ಲಬೇಕೆಂದಿಲ್ಲ. ಆದರೆ ಆರೋಗ್ಯಕರ ಚರ್ಚೆನಡೆದು ನಮ್ಮ ಜ್ಞಾನ ಹೆಚ್ಚಿಸಿಕೊಳ್ಳೋಣ. ಆದರೆ ಯಾವುದೇ ಕಾರಣಕ್ಕೂ ವೈಯಕ್ತಿಕ ನಿಂದನೆಗೆ ಅವಕಾಶವಿಲ್ಲ. ಅಂತಹ ಪ್ರತಿಕ್ರಿಯೆಗಳನ್ನು ವೇದಸುಧೆಯು ಪ್ರಕಟಿಸುವುದಿಲ್ಲ.
ವಿ.ಸೂ:- ಶ್ರೀ ಸುಧಾಕರಶರ್ಮರು ತಮ್ಮ   ಅನಾರೋಗ್ಯದ ಕಾರಣ    ಹೆಚ್ಚಾಗಿ ಅಂತರ್ಜಾಲತಾಣವನ್ನು ಇಣುಕುತ್ತಿಲ್ಲ. ಆದರೂ  ನಾವು ಚರ್ಚೆ ಮುಂದುವರೆಸೋಣ. ಅವರ ಆರೋಗ್ಯ ಸ್ಥಿತಿ ಉತ್ತಮಗೊಂಡಾಗ ಶರ್ಮರು ತಮ್ಮ ಉತ್ತರವನ್ನು ನೀಡುತ್ತಾರೆ.
-----------------------------------------------------
ಶ್ರೀ ವಿ.ಆರ್.ಭಟ್ಟರ ಪ್ರಶ್ನೆ:
ವೇದವನ್ನು ಸಂಕಲಿಸಿದ ಮಹರ್ಷಿ ವ್ಯಾಸರೇ ಭಾಗವತ ಪುರಾಣವನ್ನೂ ಬರೆದರು. ಇಲ್ಲಿ ನೀವು ಹೇಳುವುದು ವೇದದ ಉಲ್ಲೇಖ. ಕೇವಲ ವೇದವೇ ಸತ್ಯ ಮಿಕ್ಕಿದ್ದೆಲ್ಲಾ ಸುಳ್ಳು ಎಂದು ಯಾವುದರಿಂದ ಪ್ರತಿಪಾದಿಸುತ್ತೀರಿ ಸ್ವಾಮೀ? ಯಾಕೆಂದರೆ ವೇದದ ಕರ್ತೃ ಯಾರೆಂಬುದು ಹಲವು ವಿಜ್ಞಾನಿಗಳಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆಯಲ್ಲಾ!
ಶ್ರೀ ಸುಧಾಕರಶರ್ಮರ ಉತ್ತರ:
ಈ ಪ್ರಶ್ನೆ ಮೇಲಿಂದ ಮೇಲೆ ಬರಬೇಕು. ವಿಮರ್ಶೆ ಮಾಡಿ. ಸತ್ಯವಾದರೆ ಸ್ವೀಕರಿಸಿ, ಸುಳ್ಳಾದರೆ ಹೇಗೆ ಎಂಬುದನ್ನು ಸಾಧಾರವಾಗಿ ತಿಳಿಸಿ.
-ವೇದಗಳು ಸಕಲ ಮಾನವರಿಗಾಗಿದೆ.
-ವೇದಗಳು ಸಕಲ ಮಾನವರ ಹಿತವನ್ನು ಬಯಸುತ್ತದೆ.
-ವೇದಗಳು ಜಗತ್ತಿನ ಅತ್ಯಂತ ಪ್ರಾಚೀನ ಜ್ಞಾನಭಂಡಾರ. ಮಿಕ್ಕೆಲ್ಲ ಜ್ಞಾನಭಂಡಾರಗಳ ಮೇಲೂ ಇದರ ಪ್ರಭಾವವಿದೆ.
-ವೇದಗಳಲ್ಲಿ ತದ್ವಿರುದ್ಧವಾದ ಸಿದ್ಧಾಂತಗಳಿಲ್ಲ.
-ವೇದಗಳಲ್ಲಿ ಕಲಬೆರಕೆಯಿಲ್ಲ. ಕಲಬೆರಕೆಯಾಗದಂತಹ ವ್ಯವಸ್ಥೆಯಿದೆ.
-ವೇದಗಳು ಸೃಷ್ಟಿನಿಯಮಕ್ಕೆ ಅನುಗುಣವಾದ Physical Laws, Laws of Nature, ಭೌತವಿಜ್ಞಾನ ಮೋದಲಾದವಿಗಳ ನಿಯಮಗಳಿಗೆ ವಿರುದ್ಧವಾದ ಅಪದ್ಧಗಳನ್ನು ಆಡುವುದಿಲ್ಲ.
-ಅರ್ಥವನ್ನು ಲೆಕ್ಕಿಸದೆ, ಕೆಲವೊಮ್ಮೆ ಇಲ್ಲವೆಂದೇ ಹೇಳುತ್ತಾ, ತಾವಾಡಿದ್ದೇ ವೇದ ಎಂದೂ, ಬಡಬಡಿಸುವ ಎಲ್ಲವೂ ವೇದವಲ್ಲ! ಅಲ್ಲೆಲ್ಲಾ ಸಮಾನ್ಯಜ್ಞಾನಕ್ಕೆ. ತರ್ಕಕ್ಕೆ ವಿರುದ್ಧವಾದ ಅಂಶಗಳು ಬೇಕಾದಷ್ಟಿವೆ. ಅವನ್ನು ಸಮರ್ಥಿಸುತ್ತಿಲ್ಲ.
-ವೇದಗಳು ತರ್ಕಬದ್ಧವಾಗಿವೆ.
-ವೇದಗಳು ಸಾರ್ವಕಾಲಿಕವಾದ್ದರಿಂದ ತಿದ್ದುಪಡಿಯ ಅವಶ್ಯಕತೆಯಿಲ್ಲ.
-ವೇದಗಳಲ್ಲಿ ಕೇವಲ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದದ ಸಂಹಿತಭಾಗ (ಸುಮಾರು 20,379 ಮಂತ್ರಗಳಿವೆ). ರೂಢಿಯಲ್ಲಿ ಬ್ರಾಹ್ಮಣಗ್ರಂಥಗಳನ್ನೂ, ಆರಣ್ಯಕಗಳನ್ನೂ, ಉಪನಿಷತ್ತುಗಳನ್ನೂ ಇನ್ನೂ ಯಾವ್ಯಾವುದೋ ಗ್ರಂಥಗಳನ್ನು ವೇದವೆಂದು ಗುರುತಿಸುವ ಸಂಪ್ರದಾಯಗಳು ಬಂದಿವೆ. ಅವನ್ನು ಇಲ್ಲಿ ಮಾನ್ಯ ಮಾಡಲಾಗುವುದಿಲ್ಲ.
ಸಧ್ಯಕ್ಕೆ ಇಷ್ಟು ಸಾಕು. ಇಷ್ಟೂ ಗುಣಗಳು ಇಂದಿನ ಯಾವುದೇ ಜ್ಞಾನಭಂಡಾರದಲ್ಲಿ ಇಲ್ಲವಾದ್ದರಿಂದ ವೇದಗಳು ಉತ್ತಮ.

Sunday, May 29, 2011

ಮೇಲಕ್ಕೇರಿದ ಮೈಲಾರಶರ್ಮ



     ನಾನು ಹಾಸನದ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದವರು ಮೈಲಾರಶರ್ಮ. ನನಗೆ ಸುಮಾರು ೩೫-೩೬ ವರ್ಷಗಳಿಂದ ಪರಿಚಯಸ್ಥರು. ನನಗಿಂತ 8-10 ವರ್ಷ ದೊಡ್ಡವರು. ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದ ಸರಳ ವ್ಯಕ್ತಿ, ಸಂಪ್ರದಾಯಸ್ಥ. ನಿವೃತ್ತರಾದ ಮೇಲೆ ಪೂಜೆ, ಪುನಸ್ಕಾರ, ತೀರ್ಥಕ್ಷೇತ್ರಗಳಿಗೆ ಪ್ರವಾಸ ಮಾಡಿಕೊಂಡಿದ್ದವರು. ಅವರು ದಿನಾಂಕ ೨೭-೦೫-೨೦೧೧ರ ಬೆಳಿಗ್ಗೆ ವಿಧಿವಶರಾದರು. ನನಗೆ ಆಶ್ಚರ್ಯ ಮತ್ತು ಸಂತೋಷದ ವಿಷಯವಾಗಿ ತಿಳಿದದ್ದೇನೆಂದರೆ ಅವರ ದೇಹವನ್ನು ಹಾಸನದ ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಿದ್ದು. ಅವರ ಕಣ್ಣುಗಳೂ ಸಹ ಉಪಯೋಗಕ್ಕೆ ಬಂದದ್ದು. ಅವರು ನಿಧನಾನಂತರ ತಮ್ಮ ದೇಹವನ್ನು ಮತ್ತು ಕಣ್ಣುಗಳನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರಂತೆ. ಅವರ ಇಚ್ಛೆಯನ್ನು ಅವರ ಕುಟುಂಬದವರು ನೆರವೇರಿಸಿದ್ದೂ ಸಹ ಒಂದು ಒಳ್ಳೆಯ ಬೆಳವಣಿಗೆಯಾಗಿ ನನಗೆ ಕಂಡಿತು. ಮೈಲಾರಶರ್ಮ, ನೀವು ಧನ್ಯ, ನಿಮ್ಮ ಕುಟುಂಬದವರೂ ಧನ್ಯರು. ನಿಮ್ಮ ಈ ಕೆಲಸ ಇತರರಿಗೆ ಮಾರ್ಗದರ್ಶಿಯಾಗಿದೆ. ನಿಮಗೆ ನನ್ನ ನಮಸ್ಕಾರಗಳು.
     ದೇಹದಲ್ಲಿ ಪ್ರಾಣವಿರುವವರೆಗೂ ದೇಹಕ್ಕೆ ಅರ್ಥವಿರುತ್ತದೆ. ನಂತರದಲ್ಲಿ ಅದು ವ್ಯಕ್ತಿಯೆಂದು ಗುರುತಿಸಲ್ಪಡದೆ ವ್ಯಕ್ತಿಯ ಹೆಣವೆಂದು ಕರೆಯಲ್ಪಡುತ್ತದೆ. ಸತ್ತ ನಂತರದಲ್ಲಿ ಜನರು ಹೆಣವನ್ನು ಸುಡುವುದೋ, ಹೂಳುವುದೋ, ಇತ್ಯಾದಿ ತಮ್ಮ ಸಂಪ್ರದಾಯಗಳಿಗನುಸಾರವಾಗಿ ಮಾಡುತ್ತಾರೆ. ಹಿಂದೂಗಳು ಪುನರ್ಜನ್ಮವನ್ನು ನಂಬುತ್ತಾರೆ. ಭಗವದ್ಗೀತೆಯಲ್ಲಿ, ವೇದದ ಉಲ್ಲೇಖಗಳಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ ಆತ್ಮ ಅವಿನಾಶಿ, ಅನಂತ. ಮರಣಾನಂತರ ಆತ್ಮ ಇನ್ನೊಂದು ಜೀವಿಯಾಗಿ ಜನ್ಮ ತಾಳುತ್ತದೆ. ಹಳೆಯ, ಹರಿದ ಅಂಗಿಯನ್ನು ತೊರೆದು ಹೊಸ ಅಂಗಿಯನ್ನು ತೊಡುವಂತೆ ಆತ್ಮ ಜೀರ್ಣ ಶರೀರ ತೊರೆದು ಇನ್ನೊಂದು ಶರೀರಧಾರಣೆ ಮಾಡುತ್ತದೆ ಎಂಬುದು ಪ್ರಚಲಿತ ನಂಬಿಕೆ. ಮೃತ ಶರೀರವನ್ನು ಉತ್ತರಕ್ರಿಯಾಕರ್ಮಗಳಿಂದ ಪಂಚಭೂತಗಳಲ್ಲಿ ಲೀನಗೊಳಿಸಲಾಗುತ್ತದೆ. ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಿದ್ದಲ್ಲಿ ಅದನ್ನು ಅವನ ಇಚ್ಛೆಯಂತೆ ಆತನ ಮೃತಶರೀರವನ್ನು ವಿಲೇವಾರಿ ಮಾಡಿದರೆ ಅದರಲ್ಲಿ ತಪ್ಪಿಲ್ಲವೆಂದು ನನ್ನ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಅವರು ಬಯಸಿದಲ್ಲಿ ಮಾಡಿಕೊಳ್ಳಬಹುದು. ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವರು. ಹೀಗಿರುವಾಗ ಅವನಿಗೆ ಅವನ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಕೇಳಿದ ಉಪನ್ಯಾಸಗಳು, ಓದಿದ ಕೆಲವು ಗ್ರಂಥಗಳು, ಸಂಸ್ಕಾರವಶಾತ್ ಹೊಂದಿರುವ ಅಭಿಪ್ರಾಯಗಳು ಕಾರಣವಾಗಿ ಮೂಡಿದ ಕೆಲವು ಮುಕ್ತಕಗಳನ್ನು ತಮ್ಮ ಮುಂದಿಟ್ಟಿರುವೆ:


ತಾಯಿಯ ಸ್ವತ್ತಲ್ಲ ತಂದೆಯ ಸ್ವತ್ತಲ್ಲ
ಪತ್ನಿಯ ಸ್ವತ್ತಲ್ಲ ಮಕ್ಕಳ ಸ್ವತ್ತಲ್ಲ |
ಮಿತ್ರರ ಸ್ವತ್ತಲ್ಲ ತನ್ನದಲ್ಲವೆ ಅಲ್ಲ
ಶರೀರವಿದಾರ ಸ್ವತ್ತು ಗೊತ್ತಿಲ್ಲ ಮೂಢ ||


ಪಂಚಭೂತಗಳಿಂದಾದುದೀ ಮಲಿನ ದೇಹ
ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ |
ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ
ಇಂತಪ್ಪ ದೇಹವನು ನಾನೆನಲೆ ಮೂಢ ||


ತನುವು ಸುಂದರವೆಂದು ಉಬ್ಬದಿರು ಮನುಜ
ಹೊಳೆವ ಚರ್ಮದೊಳಗಿಹುದು ಹೊಲಸು ||
ತನುವಿನೊಳಿಲ್ಲ ಬಣ್ಣದೊಳಿಲ್ಲ ಚೆಲುವು ಹೊರಗಿಲ್ಲ
ಒಳಗಿನ ಗುಣದಲ್ಲಿ ಚೆಲುವಿಹುದು ಮೂಢ ||


ದೇಹವೆಂಬುದು ಅನಂತ ಆಪತ್ತುಗಳ ತಾಣ
ಹೇಳದೆ ಕೇಳದೆ ಸಾವು ಬರುವುದು ಜಾಣ |
ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ
ಸಾಧು ಸಂತರ ಮಾತು ನೆನಪಿರಲಿ ಮೂಢ ||


ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು |
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ ||


ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ ||


ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ ||
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ ||


ಪರಮಾತ್ಮ ರಚಿಸಿಹನು ನವರಸದರಮನೆಯ
ನಡೆದಾಡುವೀ ಮಹಲಿನರಸ ಜೀವಾತ್ಮ |
ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ
ಇಂದ್ರಿಯಗಳು ಕಾವಲಿಗಿಹವು ಮೂಢ ||


ನೀರು ಹರಿಯುವುದು ಬೆಂಕಿ ಸುಡುವುದು
ಬಾಲನವನಂತ್ಯದಲಿ ಮುಪ್ಪಡರಿ ಕುಗ್ಗುವನು |
ಚಣಚಣಕೆ ತನುವು ಬದಲಾಗುತಿಹುದು
ಬದಲಾಗುವುದೆ ತನುಗುಣವು ಮೂಢ ||


ತನುವು ನೀನಲ್ಲವೆನೆ ಯಾವುದದು ನಿನದು?
ಆ ಜಾತಿ ಈ ಜಾತಿ ನಿನದಾವುದದು ಜಾತಿ? |
ಬಸವಳಿಯದಿರಳಿವ ದೇಹದಭಿಮಾನದಲಿ
ಜೀವರಹಸ್ಯವನರಿತವನೆ ಜ್ಞಾನಿ ಮೂಢ ||


ಜೀವಿಗಳಿವರು ಎಲ್ಲಿಂದ ಬಂದವರು
ಬಂದದ್ದಾಯಿತು ಮತ್ತೆಲ್ಲಿ ಹೋಗುವರು |
ಎಲ್ಲಿಂದ ಬಂದಿಹರಲ್ಲಿಗೇ ಹೋಗುವರು
ಕೆಲದಿನ ನಮ್ಮೊಡನಿರುವರು ಮೂಢ ||


ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು
ಚಿರಂಜೀವ ನಿತ್ಯ ಶಾಶ್ವತವು ಮೂಢ ||


ಕಾಣಿಸದು ಕಣ್ಣಿಗೆ ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೆ ಮೂಢ ||


ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||


ಅಚ್ಚರಿಯು ಅಚ್ಚರಿಯು ಏನಿದಚ್ಚರಿಯು
ಆತ್ಮವಿದು ಅಚ್ಚರಿಯು ಹೇಳಲಚ್ಚರಿಯು |
ಕೇಳಲಚ್ಚರಿಯು ಅರಿಯಲಚ್ಚರಿಯು
ಆತ್ಮವನರಿಯದಿಹದಚ್ಚರಿಯು ಮೂಢ ||


ಭೂಮಿಯೊಂದಿರಬಹುದು ಮಣ್ಣಿನ ಗುಣ ಭಿನ್ನ
ಜಲವೊಂದಿರಬಹುದು ಜಲದಗುಣ ಭಿನ್ನ |
ಜ್ಯೋತಿಯೊಂದಿರಬಹುದು ಪ್ರಕಾಶ ಭಿನ್ನ
ಭಿನ್ನದೀ ಜಗದಿ ಆತ್ಮವವಿಚ್ಛಿನ್ನ ಮೂಢ ||


     ವೈಯಕ್ತಿಕವಾಗಿ ನಾನೂ ಸಹ ನನ್ನ ಮರಣಾನಂತರ ನನ್ನ ದೇಹದ ಉಪಯೋಗಕ್ಕೆ ಬರುವಂತಹ ಅಂಗಗಳನ್ನು ತೆಗೆದು ಯಾರಿಗಾದರೂ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಲು ಮತ್ತು ನನ್ನ ದೇಹವನ್ನು ಸಹ ಹತ್ತಿರದ ಯಾವುದಾದರೂ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮನಸ್ಸನ್ನು ನನ್ನ ಸಂಬಂಧಿಕರು ಮಾಡಬೇಕೆಂದು ಬಯಸುತ್ತೇನೆ. ನನ್ನ ಸಂಬಂಧಿಕರಿಗಾಗಲೀ, ಮಿತ್ರರಿಗಾಗಲೀ ನಾನು ನನ್ನ ಈ ಅಭಿಪ್ರಾಯದಿಂದ ನೋವಾಗದಿರಲಿ ಎಂಬುದು ನನ್ನ ಮನದಾಳದ ಬಯಕೆ. ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು.

Saturday, May 28, 2011

ವೇದಸುಧೆಯ ಆತ್ಮೀಯ ಅಭಿಮಾನೀ ಬಂಧುಗಳೇ,
ನಮಸ್ತೆ. ನಿಮಗೆಲ್ಲರಿಗೂ ತಿಳಿದಿರುವಂತೆ  ನಮ್ಮ ನಿಮ್ಮೆಲ್ಲರ  ನೆಮ್ಮದಿಯ ಬದುಕಿಗಾಗಿ ಒಂದಿಷ್ಟು ಉತ್ತಮ ವಿಚಾರಗಳನ್ನು ನೀಡುತ್ತಾ , ಸಂದೇಹಗಳು ಬಂದಾಗ ಆರೋಗ್ಯಪೂರ್ಣ ಚರ್ಚೆಮಾಡುತ್ತಾ ವೇದಸುಧೆಯ ಚಟುವಟಿಕೆಗಳು ಆತ್ಮೀಯ ವಾತಾವರಣದಲ್ಲಿ ಸಾಗುತ್ತಿರುವುದು ಸರಿಯಷ್ಟೆ. ಆದರೆ ಒಮ್ಮೊಮ್ಮೆ  ಕೆಲವು ವಿಚಾರಗಳು ಎಲ್ಲರಿಗೂ ಒಪ್ಪಿಗೆ ಯಾಗುವುದಿಲ್ಲ. ಸತ್ಯ ಏನೇ ಇರಲಿ ತಾವು ನಂಬಿದ ವಿಚಾರವನ್ನು ಯಾರಾದರೂ ಖಂಡಿಸಿದಾಗ ಬೇಸರಗೊಂಡು ಕಡೆಗೆ ಚರ್ಚೆ ವೈಯಕ್ತಿಕ ಮಟ್ಟಕ್ಕೆ  ಸಾಗಲು ಅನುವು ಮಾಡುತ್ತದೆ. ಅಂತಹ ಒಂದು ಪ್ರಸಂಗ ವೇದಸುಧೆಯಲ್ಲಿ ನಡೆದಿದೆ. ಆತ್ಮೀಯರಾದ ಶ್ರೀ ಮಹೇಶ್ ನೀರ್ಕಜೆಯವರು ನನಗೆ ಎಸ್,ಎಂ.ಎಸ್. ಮಾಡಿದಾಗ ಅಂತಹ ಪ್ರಸಂಗವು ನನ್ನ ಕಣ್ಣಿಗೆ ಬಿತ್ತು. ಚರ್ಚೆಗಳು ತೀರಾ ವೈಯಕ್ತಿಕ  ಮಟ್ಟಕ್ಕೆ  ಇಳಿದಿದ್ದರಿಂದ ಆ ಎರಡು ಪ್ರತಿಕ್ರಿಯೆಗಳನ್ನು
 ತೆಗೆಯಲಾಗಿದೆ. ವೇದಸುಧೆಯಲ್ಲಿ ನೇರವಾಗಿ ಚರ್ಚೆ ಮಾಡಲು ಅನುಕೂಲವಿರಲೆಂಬ ಕಾರಣಕ್ಕಾಗಿ ಓದುಗರು ಬರೆದ ಪ್ರತಿಕ್ರಿಯೆಗಳನ್ನು ಪರಿಶೀಲಿಸದೆ ಪ್ರಕಟವಾಗಲು ಅವಕಾಶ ಕಲ್ಪಿಸಲಾಗಿದೆ. ಆದರೆ ಮುಂದೆ ಈ ಬಗ್ಗೆಯೂ ವೇದಸುಧೆ ಬಳಗವು ಒಂದು ಹೊಸನಿಲುವು ತೆಗೆದುಕೊಳ್ಳಬೇಕಾಗಬಹುದು. ಅಂತೂ ಯಾರೋ ಒಬ್ಬ ಓದುಗರ ಪ್ರತಿಕ್ರಿಯೆಯನ್ನು ಆಧರಿಸಿ ವೇದಸುಧೆಯು ತನ್ನ ನೀತಿಯನ್ನು ಬದಲಿಸಿಕೊಳ್ಳುವುದಿಲ್ಲ, ಬದಲಿಗೆ ಬಳಗದ ಹಿರಿಯ ಸದಸ್ಯರೊಡನೆ ಸಮಾಲೋಚಿಸಿ ನಿರ್ಧರಿಸಲಾಗುವುದು.     

ವೇದೋಕ್ತ ಜೀವನ ಪಥ: ಮಾನವಧರ್ಮ - ೫

ಕೇಳಿರಿ:-

ಪರಾ ಯಾಹಿ ಮಘವನ್ನಾ ಚ ಯಾಹೀಂದ್ರ ಭ್ರಾತರುಭಯತ್ರಾ ತೇ ಅರ್ಥಮ್ |
ಯತ್ರಾ ರಥಸ್ಯ ಬೃಹತೋ ನಿಧಾನಂ ವಿಮೋಚನಂ ವಾಜಿನೋ ರಾಸಭಸ್ಯ ||
(ಋಕ್. ೩.೫೩.೫.)


     [ಮಘವನ್] ಓ ಸೌಭಾಗ್ಯಶಾಲಿ, [ಭ್ರಾತಃ] ಸೋದರ, [ಇಂದ್ರ] ಇಂದ್ರಿಯವಾನ್ ಜೀವಾತ್ಮನ್, [ಯತ್ರ] ಎಲ್ಲಿ [ಬೃಹತಃ ರಥಸ್ಯ] ಮಹಾನ್ ಶರೀರದ [ನಿಧಾನಮ್] ಆಶ್ರಯವಿದೆಯೋ [ರಾಸಭಸ್ಯ] ಮೋಕ್ಷಕ್ಕಾಗಿ ಹಾತೊರೆದು ಕೂಗುವ [ವಾಜಿನಃ] ಜ್ಞಾನವಾನ್ ಆತ್ಮನ [ವಿಮೋಚನಮ್] ಮುಕ್ತಿಯಿದೆಯೋ [ಉಭಯತ್ರಾ] ಆ ಎರಡೂ ಕಡೆಗೂ [ತೇ ಅರ್ಥಮ್] ನಿನ್ನ ಹಿತದ ಸಲುವಾಗಿ [ಆ ಯಾಹಿ] ಬಾ [ಚ] ಮತ್ತು [ಪರಾಯಾಹಿ] ಹೋಗು.
      ಭಾವನೆ ಸ್ಪಷ್ಟವಾಗಿದೆ. ಧರ್ಮವು ಕೇವಲ ಐಹಿಕಸುಖದ ಸಾಧನವೂ ಅಲ್ಲ, ಕೇವಲ ಆಮುಷ್ಮಿಕ ಸುಖದ ಸಾಧನವೂ ಅಲ್ಲ, ಇಹ-ಪರಗಳೆರಡಕ್ಕೂ ಗಮನವಿತ್ತು, ಎರಡನ್ನೂ ಸಾಧಿಸಿಕೊಡಬಲ್ಲ ಮಾರ್ಗವೇ ಧರ್ಮ. ಆ ಜೀವನಮಾರ್ಗ ರೂಪಗೊಳ್ಳುವುದು ಆತ್ಮೋದ್ಧಾರಕಾರಿಗಳಾದ ಸದ್ಗುಣಗಳ ಸಮೂಹದಿಂದ.
*********************************

Friday, May 27, 2011

ಯೋಚಿಸಲೊ೦ದಿಷ್ಟು...೩೫

೧. ನಿನ್ನೆ ಸಾಧಿಸಲಾಗದ್ದಕ್ಕೆ ಬೇಸರ ಬೇಡ.. “ನಾಳೆ‘‘ ಎ೦ಬುದು ನಮಗಾಗಿ ಕಾಯುತ್ತಿದೆ!
೨. ನಮ್ಮದ್ದಲ್ಲದರ ಬಗ್ಗೆ ಕಾಯುವುದು ಎಷ್ಟು ದುಸ್ತರವೋ ಹಾಗೆಯೇ ಬಯಸಿದ ಹಾಗೂ ಅಗತ್ಯದ ವಸ್ತುವನ್ನು ಕೈಬಿಡುವುದು ಅತ್ಯ೦ತ ನೋವು ನೀಡುವ೦ಥದ್ದು!
೩.ಎಲ್ಲಾ ಶಕ್ಥಿಯೂ ನಿಮ್ಮೊಳಗೇ ಇದೆ.. ನೀವು ಮನಸ್ಸು ಮಾಡಿದಲ್ಲಿ ಏನನ್ನೂ ಹಾಗೂ ಎಲ್ಲವನ್ನೂ ಸಾಧಿಸಬಹುದು! – ಸ್ವಾಮಿ ವಿವೇಕಾನ೦ದ
೪. ಏನೂ ಇಲ್ಲದಿದ್ದಾಗ ನಾವು ನಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತೇವೆ ಹಾಗೂ ಎಲ್ಲವನ್ನೂ ಹೊ೦ದಿದ್ದಾಗ ನಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತೇವೆ ಎ೦ಬವುಗಳ ಮೂಲಕ ನಮ್ಮ ಜೀವನದ ಯಶಸ್ಸನ್ನು ಪರಿಗಣಿಸಲಾಗುತ್ತದೆ! ( ಹರೀಶ ಆತ್ರೇಯರ ಚರವಾಣಿ ಸ೦ದೇಶ)
೫. ನಾವು ಮೊದಲು ನಮ್ಮನ್ನು ಸ್ನೇಹಿಸಲು ಕಲಿಯಬೇಕು.. ಇತರರೂ ನಮ್ಮನ್ನು ಸ್ನೇಹಿಸತೊಡಗುತ್ತಾರೆ!
೬.ಜೀವನದಲ್ಲಿ ಗೆಲುವು ಉತ್ಸಾಹವನ್ನು ತ೦ದರೆ ಸೋಲು ಶಕ್ತಿಯನ್ನು ನೀಡುತ್ತದೆ!
೭.ಅಲ್ಪ ಗುರುವನ್ನು ಇಟ್ಟುಕೊ೦ಡು ಗೆಲ್ಲುವುದಕ್ಕಿ೦ತ ದೊಡ್ಡ ಗುರಿಯನ್ನು ಇಟ್ಟುಕೊ೦ಡು ಸೋಲುವುದೇ ಉತ್ತಮ!- ರಾಬರ್ಟ್ ಬ್ರೌನಿ೦ಗ್
೮. ಕೆಲಸದ ಆರ೦ಭದಲ್ಲಿ ತೋರುವ ಉತ್ಸಾಹ ಹಾಗೂ ಶ್ರಧ್ಧೆಯನ್ನು ಅ೦ತ್ಯದವರೆಗೂ ಕಾಪಾಡಿಕೊ೦ಡು ಬ೦ದಲ್ಲಿ ಯಾವುದೇ ಕಾರ್ಯದಲ್ಲಿಯೂ ಸೋಲು ಕಾಣಿಸದು.
೯. ಜೀವನ ವೆ೦ಬ ಹೆದ್ದಾರಿಯಲ್ಲಿ ಸೋಲುವುದು ಕಡಿಮೆ.. ತಿರುವುಗಳಲ್ಲಿ ಕಾಲು ಜಾರುವುದೇ ಹೆಚ್ಚು!
೧೦. ಅನೇಕರು ಗೆದ್ದಾಗ ಸೋಲುತ್ತಾರೆ.. ಕೆಲವರು ಸೋತಾಗ ಗೆಲ್ಲುತ್ತಾರೆ!
೧೧. ಸ೦ಸ್ಕೃತಿಯೆ೦ದರೆ ಸ್ವಗುಣ ಹಾಗೂ ಪರಗುಣಗಳ ಮಿಶ್ರಣ!- ಡಿ.ವಿ.ಜಿ.
೧೨. ಬಲಹೀನನು ಸ೦ಪತ್ತನ್ನು ಸೃಷ್ಟಿಸಿದರೆ, ಬಲವ೦ತನು ಅದನ್ನು ನು೦ಗಿ ದಾರಿದ್ರ್ಯವನ್ನು ಹ೦ಚುತ್ತಾನೆ!
೧೩.ಸಮಸ್ಯೆ ಬ೦ದಾಗ ಗಾಬರಿಯಾಗದೆ, ಸೂಕ್ತ ಸಲಹೆಗಳನ್ನು ಪಡೆದಲ್ಲಿ ಸಮಸ್ಯೆಗಳ ನಿವಾರಣೆ ಸಾಧ್ಯ- ಡಿ.ವೀರೇ೦ದ್ರ ಹೆಗ್ಗಡೆ
೧೪. ಅಹ೦ಕಾರ ಕ್ಷಯಿಸಿದ೦ತೆ ನಮ್ಮೊಳಗಿನ ಅಸಮಾಧಾನವೂ ಕ್ಷಯಿಸುತ್ತದೆ. ಲೋಕಕ್ಕೆ ನಮ್ಮಿ೦ದಾಗುವ ಭಾರ ಕಡಿಮೆಯಾಗುತ್ತದೆ. ಜೀವನ ಭಾರವನ್ನು ಹಗುರ ಮಾಡುವ ಯೋಗವೇ “ಸ೦ಸ್ಕೃತಿ“! – ಎಮರ್ ಸನ್
೧೫. “ಅಸಾಧ್ಯತೆ“ಗಳ ಬೆನ್ನುಹತ್ತಿದಾಗಲೇ “ಸಾಧ್ಯತೆ“ ಗಳ ಅರಿವಾಗುವುದು!

ವೇದೋಕ್ತ ಜೀವನ ಪಥ - ಮಾನವಧರ್ಮ - 4

ಋಗ್ವೇದದ ಈ ಮಂತ್ರವನ್ನು ಗಮನಿಸಿರಿ:


ಪ್ರತ್ಯಾನ್ಮಾನಾದಧ್ಯಾ ಯೇ ಸಮಸ್ವರನ್ಶ್ಲೋಕಯಂತ್ರಾಸೋ ರಭಸಸ್ಯ ಮಂತವಃ |
ಅಪಾನಕ್ಷಾಸೋ ಬಧಿರಾ ಅಹಾಸತ ಋತಸ್ಯ ಪಂಥಾಂ ನ ತರಂತಿ ದುಷ್ಕೃತಃ ||
(ಋಕ್. ೯.೭೩.೬.)


     [ಯೇ] ಯಾರು [ಪ್ರತ್ಯಾತ್ ಮಾನಾತ್ ಅಧಿ] ಶಾಶ್ವತ ಪ್ರಮಾಣವಾದ ವೇದಜ್ಞಾನದ ಆಶ್ರಯದಲ್ಲಿ [ಆ ಸಂ ಅಸ್ವರನ್] ಎಲ್ಲೆಡೆಯಿಂದಲೂ ಒಳಿತಾಗಿ ಜ್ಞಾನವನ್ನು ಪಡೆದುಕೊಳ್ಳುತ್ತಾರೋ ಅವರು [ಶ್ಲೋಕ ಯಂತ್ರಾಸಃ] ವೇದಮಂತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರೂ [ರಭಸಸ್ಯ ಮಂತವಃ] ಸರ್ವಶಕ್ತಿಮಾನ್ ಪ್ರಭುವನ್ನು ತಿಳಿದವರೂ ಆಗುತ್ತಾರೆ. [ಆಪಾನಕ್ಷಾಸಃ] ಜ್ಞಾನದೃಷ್ಟಿಯಿಂದ ಕುರುಡರೂ [ಬಧಿರಾಃ] ಕಿವುಡರೂ ಆದವರು [ಋತಸ್ಯ ಪಂಥಾಮ್] ಋತದ, ಈಶ್ವರೀಯ ವಿಧಾನದ, ಧರ್ಮದ ಮಾರ್ಗವನ್ನು [ಆಹಾಸತ] ತ್ಯಜಿಸುತ್ತಾರೆ. [ದುಷ್ಕೃತಃ] ದುಷ್ಕರ್ಮನಿರತರು [ನ ತರಮತಿ] ಪಾರುಗಾಣುವುದಿಲ್ಲ.

     ವೇದಗಳೇ ಶಾಶ್ವತವಾದ, ಸಾರ್ವಕಾಲಿಕವೂ, ಸಾರ್ವಭೌಮವೂ ಆದ ಸತ್ಯಶಾಶ್ತ್ರಗಳು. ಅದು ಬೋಧಿಸುವ ಮಾರ್ಗ ಋತದ ಮಾರ್ಗ, ಧರ್ಮದ ಮಾರ್ಗ. ವೇದಗಳ ನಿರ್ಮಲಜ್ಞಾನ ಪಡೆದು, ಜ್ಞಾನದಾಯಕ ಮಂತ್ರಗಳ ಮೇಲೆ ಅಧಿಕಾರ ಪಡೆದು, ಪ್ರಭು ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬಹುದು. ಆದರೆ, ಜ್ಞಾನದ ಬೆಳಕನ್ನು ನೋಡಲಾರದ, ಜ್ಞಾನದ ಉಪದೇಶವನ್ನು ಕೇಳಲಾರದ, ಮೂಢಜನರು ಋತದ ಮಾರ್ಗವನ್ನು, ಧರ್ಮಪಥವನ್ನು ಬಿಟ್ಟುಬಿಡುತ್ತಾರೆ. ಅ0ತಹ ದುಷ್ಕರ್ಮಿಗಳು ಜೀವನದ ಪಥವನ್ನು ಎಂದಿಗೂ ಕಾಣಲಾರರು. ನಾವು ಈ ಅಧ್ಯಾಯದ ಪ್ರಾರಂಭದಲ್ಲಿಯೇ ಹೇಳಿರುವಂತೆ, ಧರ್ಮದ ಮಾರ್ಗ ಕೇವಲ ಇಹಕ್ಕೆ ಸಂಬಂಧಿಸಿದುದಲ್ಲ, ಕೇವಲ ಪರಕ್ಕೆ ಸಂಬಂಧಿಸಿದುದೂ ಅಲ್ಲ, ಜೀವನಕ್ಕೆ ಎರಡು ಮುಖಗಳಿವೆ, ಒಂದು ಚೇತನಾಂಗ, ಮತ್ತೊಂದು ಜಡಾಂಗ. ಚೇತನಾಂಗಕ್ಕೆ ಅಧ್ಯಾತ್ಮಿಕ ಪೋಷಣೆ ಬೇಕು, ಜಡಾಂಗಕ್ಕೆ ಭೌತಿಕ ಪೋಷಣೆ ಬೇಕು. ಇದರರ್ಥ ಆತ್ಮೋದ್ಧಾರಕ್ಕಾಗಿ ಸಾಧನೆಯನ್ನೂ, ದೇಹಪೋಷಣೆಗಾಗಿ ಲೌಕಿಕ ಕರ್ಮಗಳನ್ನೂ ನಡೆಯಿಸಿಕೊಂಡು ಹೋಗುವಂತಹ ಜೀವನಕ್ರಮವನ್ನು ಅವಲಂಬಿಸಬೇಕು. ಸಾಂಸಾರಿಕಾಭ್ಯುದಯ, ಪಾರಮಾರ್ಥಿಕೋತ್ಕರ್ಷ - ಎರಡನ್ನೂ ಸಾಧಿಸಿಕೊಡುವ ಜೀವನಪಥವೇ ಧರ್ಮ.
****************************************

Thursday, May 26, 2011

ನಾ ಕಂಡ ಅಪರೂಪದ ಖಾಸಗೀ ಆಸ್ಪತ್ರೆ

ನನ್ನ ಪತ್ನಿಗೆ ಒಂದೆರಡು ತಿಂಗಳುಗಳಿಂದ ಎಡಗೈ ಎತ್ತಲಾಗದಷ್ಟು ನೋವು.ಹಾಸನದ ಸ್ಥಳೀಯ ವೈದ್ಯರ ಸಲಹೆ,ಉಪಚಾರ, ಎಲ್ಲವೂ ನಡೆದಿದ್ದರೂ ಪೂರ್ಣ ಸಮಾಧಾನವಾಗಿರಲಿಲ್ಲ. ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರ ಸಲಹೆ ಮೇರೆಗೆ ನಿನ್ನೆ ಶಿವಮೊಗ್ಗ ಪಯಣಿಸಿದೆ. ಅಲ್ಲಿ ನಾಗರಾಜರ ಸೋದರರೂ ವೇದಸುಧೆಯ ಬಳಗದ ಸಕ್ರಿಯ ಸದಸ್ಯರೂ ಆದ ಶ್ರೀ ಕವಿ ಸುರೇಶ್ ರು ನನ್ನ ಜೊತೆಗಿದ್ದು ಒಬ್ಬ ವೈದ್ಯರಲ್ಲಿ ಕರೆದುಕೊಂಡು ಹೋದರು. ಸಾಮಾನ್ಯವಾದ ಒಂದು ಚಿಕ್ಕ ಖಾಸಗೀ ಆಯುರ್ವೇದ ಆಸ್ಪತ್ರೆ.ಒಳಗೆ ಪ್ರವೇಶಿಸುತ್ತಿದ್ದಂತೆ  ಕೆಳಗಿನ ಫಲಕವು ನಮ್ಮನ್ನು ಸ್ವಾಗತಿಸುತ್ತದೆ.


ಅರ್ಥ:
ಪ್ರತಿನಿತ್ಯವೂ ಹಿತವಾದ ಆಹಾರ ಸೇವನೆ,ಹಿತವಾದವಿಹಾರ,ಪ್ರತಿಯೊಂದು ವಿಚಾರವನ್ನೂ ವಿಮರ್ಷೆಮಾಡಿ ನಿರ್ಧಾರವನ್ನು ತೆಗೆದುಕೊಳ್ಳುವವನೂ,ಇಂದ್ರಿಯ ವಿಷಯಗಳಲ್ಲಿ ಅನಾಸಕ್ತಿಯುಳ್ಳವನೂ,ತ್ಯಾಗವಂತನೂ,ಸಕಲ ಜೀವಿಗಳಲ್ಲಿ ಸಮಭಾವವನ್ನು ಹೊಂದಿರುವವನೂ,ಯಾವಾಗಲೂ ಸತ್ಯವನ್ನು ನುಡಿಯುವವನೂ,ಕ್ಷಮಾಗುಣ ಉಳ್ಳವವನೂ,ಶಾಸ್ತ್ರ ತಿಳಿಸಿರುವಂತೆ ಜೀವನ ನಡೆಸುವವನೂ,ಸದಾಕಾಲವೂ ಆರೋಗ್ಯವಂತನಾಗಿರುತ್ತಾನೆ.
                  ಆಸ್ಪತ್ರೆಯನ್ನು ಪ್ರವೇಶಿಸುತ್ತಿದ್ದಂತೆ ಆತ್ಮೀಯವಾಗಿ ನಮ್ಮ ಕುಳ್ಳಿರಿಸಿ ನಮ್ಮ ಕೈಗೆ ಒಂದು ಪತ್ರವನ್ನು ಕೊಟ್ಟು ಅದರಲ್ಲಿ ನಮ್ಮ ದೈನಂದಿನ ಜೀವನ ಶೈಲಿಯ ಎಲ್ಲಾ ವಿವರಗಳನ್ನೂ ಪಡೆದರು. ಅಲ್ಲಿದ್ದ ಒಬ್ಬಿಬ್ಬ ವ್ಯಕ್ತಿಗಳನ್ನು ವೈದ್ಯರು ನೋಡಿದಮೇಲೆ ನಮ್ಮ ಸರದಿ ಬಂತು.ಡಾ|| ಚಿತ್ರಲೇಖ ನನ್ನ ಪತ್ನಿಯೊಡನೆ ಆತ್ಮೀಯವಾಗಿ ಮಾತುಕತೆ ಆರಂಭಿಸಿ ಅವಳಿಂದ ಅವಳ ಸಮಸ್ಯೆಗಳ  ಎಲ್ಲಾ ವಿವರವನ್ನೂ ಸಮಾಧಾನಚಿತ್ತದಿಂದ ಕೇಳಿ ಪಡೆಯುವಾಗ ಒಂದು ಗಂಟೆಗೂ ಹೆಚ್ಚು ಸಮಯ ಕಳೆದಿತ್ತು.[ಸಾಮಾನ್ಯವಾಗಿ ೫-೧೦ ನಿಮಿಷಗಳಲ್ಲಿ ಸಮಾಲೋಚನೆ ಮುಗಿಯುತ್ತದೆ] ಇಂಟರ್ ಕಾಮ್ ನಿಂದ ಅವರಿಗೊಂದು ಕರೆ ಬಂತು ಒಬ್ಬ ರೋಗಿಯ ಸ್ಥಿತಿ ಗಂಭೀರವಾಗಿದ್ದಿರಬಹುದು.ರೋಗಿಯನ್ನುಪಚರಿಸುತ್ತಿದ್ದ ಸಹಾಯಕಿಗೆ ಒಂದಿಷ್ಟು ಸಲಹೆ ನೀಡಿ ಹತ್ತು ನಿಮಿಷದಲ್ಲಿ ಬರುವುದಾಗಿ ತಿಳಿಸಿದರು. ನಂತರ ಒಂದೈದು ನಿಮಿಷಗಳಲ್ಲಿ ನಾನೇ ವೈದ್ಯರಿಗೆ ಹೇಳಿದೆ" ಪರವಾಗಿಲ್ಲ ಡಾಕ್ಟರ್ ಆ ರೋಗಿಯನ್ನು ನೋಡಿಬನ್ನಿ."ನೀವು ಕುಳಿತಿರಿ, ಇನ್ನೈದು ನಿಮಿಷಗಳಲ್ಲಿ  ಬಂದೆ"ಎಂದು ತಿಳಿಸಿ  ವೈದ್ಯರು ಆ ರೋಗಿಯನ್ನು ನೋಡಲು ಹೋದರು. ಆ ಹೊತ್ತಿಗಾಗಲೇ ನನ್ನಾಕೆಯ ಮುಖ ಅರಳಿತ್ತು.ಅವಳಲ್ಲಿ ಆತ್ಮವಿಶ್ವಾಸವನ್ನು ವೈದ್ಯರು ತುಂಬಿದ್ದರು.ನನ್ನಾಕೆ ಹೇಳಿದಳು" ಇವರು ಪ್ರತ್ಯಕ್ಷ ದೇವತೆ ಕಣ್ರೀ" 
 ನನಗೂ ತುಂಬಾ ಸಮಾಧಾನವಾಗಿತ್ತು. ವೈದ್ಯರು ಪುನ: ಬಂದರು
ಅವರು ಹೇಳಿದರು" ನಿಮಗೆ ಏನೂ ಆಗಿಲ್ಲ. ನಿತ್ಯ ನಿಮ್ಮ ಬದುಕಿನ ಕ್ರಮದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಿ. ಈ ಔಷಧವನ್ನು ತೆಗೆದುಕೊಳ್ಳಿ, ನೀವು ಒಂದು ತಿಂಗಳಲ್ಲಿ ಪರ್ಫೆಕ್ಟ್ ಆಗುತ್ತೀರಿ"
ನಾನು ಕೇಳಿದೆ" ಇಷ್ಟೊಂದು ಕೈ ನೋವಿದೆಯಲ್ಲಾ, ಕೈ ಎತ್ತಲು ಆಗುತ್ತಿಲ್ಲವಲ್ಲಾ, ಪಂಚಕರ್ಮ ಚಿಕಿತ್ಸೆ ಏನಾದರೂ ಆರಂಭಿಸುವಿರಾ?
" ಅದೇನೂ ಬೇಡ ,ಒಂದು ತಿಂಗಳು ನಾನು ಸೂಚಿಸಿರುವ ಕ್ರಮದಲ್ಲಿ ನಿಮ್ಮ ನಿತ್ಯ ಜೀವನ ಸಾಗಲಿ, ಈ ಔಷಧಗಳು ಜೊತೆಗಿರಲಿ, ನೀವು ಸುಧಾರಿಸುತ್ತೀರಿ. ಹೋಗಿಬನ್ನಿ, ನಿಮಗೆ ಒಳ್ಳೆಯದಾಗಲೀ"
.........ನನ್ನ ಪತ್ನಿಯನ್ನು    ಒಂದು ವಾರವಾದರೂ ಆಸ್ಪತ್ರೆಯ ಒಳರೋಗಿಯಾಗಿ ಇಟ್ಟುಕೊಳ್ಳುತ್ತಾರೆಂದು ನಾನು ತಯಾರಾಗೇ ಹೋಗಿದ್ದೆ. ಆದರೆ ಹಾಗಾಗಲೇ ಇಲ್ಲ. ನಾನು ನಿರೀಕ್ಷಿಸಿದಂತೆ ಖರ್ಚುಗಳೂ ಇಲ್ಲ.ಕೇವಲ ಔಷಧಿಯ ಮೌಲ್ಯವನ್ನು ಪಡೆದಿದ್ದರಷ್ಟೆ.ಸಮಾಲೋಚನೆಗಾಗಿ ದುಬಾರಿ ಶುಲ್ಕವೂ ಇಲ್ಲ. ರೋಗಿಗಳಿಗೆ ಅನಗತ್ಯ ಚಿಕಿತ್ಸೆಯೂ ಇಲ್ಲ. ಗುಣಮುಖರಾಗಲೂ ಏನು ಬೇಕೋ ಅಷ್ಟು. ಆದರೆ ಅನೇಕ ಖಾಸಗೀ ಆಸ್ಪತ್ರೆಗಳಲ್ಲಷ್ಟೇ ಅಲ್ಲ, ಸರ್ಕಾರೀ ಆಸ್ಪತ್ರೆಗಳಲ್ಲೂ ಸುಲಿಗೆ ಮಾಡುವ ಪ್ರವೃತ್ತಿಯು ಸಾಮಾನ್ಯ ವಾಗಿರುವಾಗ ಇಂತಾ ಒಬ್ಬ ವೈದ್ಯರ ಪರಿಚಯ ಮಾಡಿಸಿದ ಶ್ರೀಕವಿನಾಗರಾಜ್ ಮತ್ತು  ಕವಿ ಸುರೇಶ್ ಸೋದರರಿಗೆ ನಾನು ಋಣಿ.
ವೇದಸುಧೆಯ ವಾರ್ಷಿಕೋತ್ಸವದ ವಿಚಾರ ಸಂಕಿರಣದಲ್ಲಿ ತಮ್ಮ ವಿಚಾರವನ್ನು ಮಂಡಿಸಿದ ಡಾ|| ವಿವೇಕ್ ಅವರ ವಿಚಾರಗಳನ್ನು ಕೇಳುವಾಗಲೂ ನಮಗೆ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಇಂತಹ ಅನೇಕ ವೈದ್ಯರುಗಳು ಇರಬಹುದು. ಅಂತವರ ಬಗೆಗೆ ವೇದಸುಧೆಯ ಅಭಿಮಾನಿಗಳು ವೇದಸುಧೆಗೆ ಮಾಹಿತಿಕೊಡಬೇಕೆಂದು ವಿನಂತಿಸುತ್ತೇನೆ.
ಶಿವಮೊಗ್ಗೆಯಲ್ಲಿ ನಾವು ಭೇಟಿಮಾಡಿದ ಆಸ್ಪತ್ರೆಯ ವಿಳಾಸ:


ಆಯುರ್ ಲೈಫ್
[ಶ್ರೀ ಸದ್ಗುರು ಚಿಕಿತ್ಸಾಲಯದ ಘಟಕ]
ಸರ್ ಎಂ.ವಿ. ಕಾಂಪ್ಲೆಕ್ಸ್, ತಿಲಕ್ ನಗರ ಮುಖ್ಯರಸ್ತೆ. ಶಿವಮೊಗ್ಗ-577201
ದೂರವಾಣಿ: 08182-405667,402611
web:  www.srisadguruchikitsalaya.org
E-Mail:  srisadguru@gmail.com

Wednesday, May 25, 2011

ಪಂ.ಸುಧಾಕರಚತುರ್ವೇದಿಯವರ ವಿಚಾರಧಾರೆ-2

ಒಳ್ಳೆಯ ರೀತಿ ಬಾಳೋಣ

ಸರ್ದಾರ್ ಭಗತ್ ಸಿಂಗ್ ಹೆಸರು ಕೇಳಿದ್ದೀರಿ, ಮಹಾನ್ ಕ್ರಾಂತಿಕಾರಿ, ಅವನು ನನ್ನ ಶಿಷ್ಯ. ಲಾಹೋರಿನಲ್ಲಿ ದಯಾನಂದ ಆರ್ಯ ವೇದಿಕ್ ಕಾಲೇಜಿನಲ್ಲಿ ಅವನು ಓದುತ್ತಿದ್ದಾಗ ನಾನು ಗಣಿತದ ಪಾಠ ಹೇಳಲು ಹೋಗುತ್ತಿದ್ದೆ. ಒಂದು ಸಲ ಅವನು ನನ್ನ ಹತ್ತಿರ ಬಂದು ಹೇಳಿದ್ದ - ಪಂಡಿತಜಿ, ನಾನು ಲೆಕ್ಕದಲ್ಲಿ ಸ್ವಲ್ಪ ಹಿಂದೆ. ಕಡಿಮೆ ಅಂಕ ಬಂದರೆ ಕರುಣೆ ಇದ್ದರೆ ನನಗೆ ಐದು ಅಂಕ ಸೇರಿಸಿ ಕೊಟ್ಟರೆ ಉಪಕಾರವಾಗುತ್ತದೆ. ನಾನು ಹೇಳಿದೆ ಲಕ್ಷಣವಾಗಿ ಫೇಲಾಗು. ನಾನು ಅಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದಿದ್ದೆ. ಇವನು ನನ್ನ ಶಿಷ್ಯ, ಇವನು ಉದ್ಧಾರವಾಗಲಿ ಎಂದು ನಾನು ಅಂಕ ಸೇರಿಸಿಕೊಟ್ಟು ನನ್ನ ಆತ್ಮವಂಚನೆ ಮಾಡಿಕೊಳ್ಳಲು ನಾನು ಸಿದ್ಧನಿರಲಿಲ್ಲ.
ಗಂಭೀರವಾಗಿ ಯೋಚಿಸಿ, ಆಲೋಚಿಸಿ, ವೇದದ ಮಂತ್ರ ಹೇಳುತ್ತೆ, ಸತ್ಕರ್ಮ ಮಾಡುವುದನ್ನು ಬಿಟ್ಟು ಬೇರೆಡೆ ಹೊರಳದಿರೋಣ, ನಾವು ಯಾವ ದಾರಿಯಲ್ಲಿ ಹೋಗಬೇಕೋ ಆ ದಾರಿಯನ್ನು ಬಿಟ್ಟು ಹೋಗದಿರೋಣ, ಸರ್ವೈಶ್ವರ್ಯನಾದ ಪರಮಾತ್ಮ ನಮಗೆ ಬದುಕು ಕೊಟ್ಟಿದ್ದಾನೆ, ಜೊತೆಗೆ ಐಶ್ವರ್ಯವನ್ನೂ ಕೊಟ್ಟಿದ್ದಾನೆ. 'ಸೋಮ' ಅನ್ನುವ ಪದ ಇದೆ, ಆ ಪದಕ್ಕೆ ೪೦ ಅರ್ಥ ಇದೆ. ಎಲ್ಲಾ ಬೇಡ, ೨-೩ ಅರ್ಥ ನೋಡೋಣ, ಒಂದು 'ಮಥನ ಮಾಡು' ಅಂತ. ಹಾಲನ್ನು ಸುಮ್ಮನೆ ಇಟ್ಟರೆ ಕೆನೆ ಸಿಕ್ಕುವುದಿಲ್ಲ, ಕಾಯಿಸಿ ಹೆಪ್ಪಿಟ್ಟರೆ ಮೊಸರಾಗುತ್ತದೆ, ಮಥಿಸಿದರೆ ಬೆಣ್ಣೆ ಸಿಗುತ್ತದೆ, ಆ ಮಥನ ಶಕ್ತಿ ನಿಮ್ಮಲ್ಲಿರಬೇಕು. ಇನ್ನೊಂದು 'ವಿಚಾರ ಮಾಡುವ ಶಕ್ತಿ', ಆಲೋಚನೆ ಮಾಡುವ ಶಕ್ತಿ. ಗುರೂಜಿ ಎಲ್ಲಾ ಯೋಚನೆ ಮಾಡಿಬಿಟ್ಟಿದ್ದಾರೆ, ನಾವೇನು ಯೋಚನೆ ಮಾಡುವುದು ಬೇಡ, ಅವರು ಹೇಳಿದಂತೆ ನಡೆದರೆ ಸಾಕು ಎಂದು ಭಾವಿಸುವುದು ಸರಿಯಲ್ಲ. ಗುರು ಅಂದರೆ ಎರಡು ನಮೂನೆ - ಒಂದು ಸತ್ಯೋಪದೇಶ ಮಾಡುವವನು, ಇನ್ನೊಂದು ಭಾರ ಅಂತ. ಈಗ ಹೆಚ್ಚಿನ ಗುರುಗಳು ಭಾರವಾಗಿರುವವರೇ. ನನಗೆ ಚೆನ್ನಾಗಿ ಜ್ಞಾಪಕವಿದೆ. ನನ್ನ ತಂದೆಯವರು ಸಂಪ್ರದಾಯಸ್ಥ ಬ್ರಾಹ್ಮಣರು. ಅವರು ಸ್ನಾನ ಮಾಡಿಕೊಂಡು ಬರುವಾಗ ಎದುರಿಗೆ ಶೂದ್ರರು ಬರುವಂತೇ ಇಲ್ಲ, ಬ್ರಾಹ್ಮಣರಲ್ಲೂ ಅದರಲ್ಲೂ ಯಾರೋ ಸ್ಮಾರ್ತರು, ಆಚಾರ್ಯರು, ಶಾಸ್ತ್ರಿಗಳು ಬಂದರೆ 'ನಮಸ್ಕಾರ ಆಚಾರ್ರೇ, ದೀಕ್ಷಿತರೇ' ಅಂತ ಹೇಳಿಬಿಡೋರು, ಅವರು ಹೋದ ನಂತರ ಪುನಃ ಬಚ್ಚಲು ಮನೆಗೆ ಹೋಗಿ ಪುನಃ ಸ್ನಾನ ಮಾಡಿಕೊಂಡು ಶುಚಿಯಾದೆ ಅಂದುಕೊಂಡು ಬರುತ್ತಿದ್ದರು. ನಮ್ಮಪ್ಪಂದೇ ಈ ಗತಿ. ನನ್ನನ್ನು ಕಂಡು 'ಯಾವ ಪಾಪದ ಫಲವಾಗಿ ನೀನು ನಮ್ಮ ಮನೆಯಲ್ಲಿ ಹುಟ್ಟಿದೆಯೋ, ನೀನೊಂದು ಪಾಪದ ಮುದ್ದೆ, ನಮ್ಮ ಮನೆಯಲ್ಲಿ ಏಕೆ ಹುಟ್ಟಿದೆ, ನಮ್ಮ ಮನೆಯ ಹೆಸರು ಕೆಡಿಸುತ್ತೀಯಾ' ಎನ್ನುತ್ತಿದ್ದರು. ಅವರದು ಭಾರೀ ಮಡಿ. ನಾನು ಬೆಳಿಗ್ಗೆ ಏಳುವಾಗ 'ಶಂಭೋ, ಮಹಾದೇವಾ, ಕಾಪಾಡಪ್ಪಾ' ಅಂತಿದ್ದರೆ ಅವರಿಗೆ ಮೈ ಉರಿ, ಮಾಧ್ವರ ಮನೆಯಲ್ಲಿ ಹುಟ್ಟಿ ಶೈವರ ದೇವರ ಹೆಸರು ಹೇಳುತ್ತಾನಲ್ಲಾ ಅಂತ. ಅವರು ಎರಡು ಹೊತ್ತು ವಿಷ್ಣು ಸಹಸ್ರನಾಮ ಹೇಳಿಕೊಂಡು ಪೂಜೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಹೂವು ಬಿಡುತ್ತಿರಲಿಲ್ಲ, ಪಕ್ಕದ ಮನೆಯಲ್ಲಿ ಬಿಡುತ್ತಿದ್ದ ಹೂವು ಕದ್ದು ಕಿತ್ತು ದೇವರಿಗೆ ಪೂಜೆ ಮಾಡಿದರೆ ಪುಣ್ಯ ಬರುತ್ತದೆಯೇ ಎಂದು ನಾನು ಅಪ್ಪನನ್ನು ಕೇಳುತ್ತಿದ್ದೆ. ಅದರಲ್ಲಿ ಎರಡು ಪಾಪದ ಕೆಲಸ ಆಗುತ್ತದೆ. ಹೂವನ್ನು ಕದ್ದು ಕಿತ್ತಿದ್ದೊಂದು ಪಾಪ, ಇನ್ನೂ ಅರಳದಿರುವ ಹೂವು, ಅಲ್ಲೇ ಇದ್ದಿದ್ದರೆ ಪೂರ್ತಿ ಅರಳಿ ಬೀಳುವವರೆಗೆ ಎಷ್ಟು ಪರಿಮಳ ಬೀರಿ ಮುದ ತರುತಿತ್ತೋ ಆ ಹೂವನ್ನು ಕಿತ್ತು ಬಾಡಿಸಿದ್ದು ಇನ್ನೊಂದು. ಅದನ್ನು ಕಿತ್ತರೆ ಅದಕ್ಕೆ ನೋವಾಗುತ್ತದೆ, ನಮಗೆ ಗೊತ್ತಾಗುವುದಿಲ್ಲ. ನಿಮಗೆ ಇಷ್ಟವಾಗದೇ ಹೋಗಬಹುದು, ನಿಮಗೆ ಕೋಪ ಬರುತ್ತೇನೋ! ಹೂವನ್ನು ಕಿತ್ತು ಮುಡಿದುಕೊಳ್ಳುವುದೂ ಸರಿಯಲ್ಲ. ಹೀಗೆ ಆಲೋಚನೆ ಮಾಡಿ ಯಾರು ನಡೆದುಕೊಳ್ಳುತ್ತಾರೊ ಅವರನ್ನು ಮನುಷ್ಯ ಅಂತ ಕರೆಯಬಹುದು, ಆಲೋಚನೆ ಮಾಡದಿರುವವರು ಕೇವಲ ಮನುಷ್ಯರ ಆಕಾರ ಹೊಂದಿರುವವರು ಅಷ್ಟೆ.
ಯಜ್ಞ ಅಂದಕೂಡಲೆ ಪಶುಬಲಿ ಬೇಕೇಬೇಕು ಅಂತಾರೆ. ಯಾವ ಯಜ್ಞ ಹಿಂಸೆಯಿಂದ ಕೂಡಿರುವುದಿಲ್ಲವೋ -ಅಧ್ವರ - ಹಿಂಸೆಯಿಲ್ಲದ್ದು- ಅದೇ ಯಜ್ಞ ಎಂದು ವೇದದಲ್ಲಿ ಸ್ಪಷ್ಟವಾಗಿದೆ. ಯಜ್ಞಕ್ಕೆ ಬಲಿ ಕೊಡುವ ಪದ್ಧತಿ ಏಕೆ ಸೇರಿತೋ ಗೊತ್ತಿಲ್ಲ. ಕೋಣಬಲಿ ಕೊಟ್ಟರೆ ಶ್ರೇಷ್ಠವಂತೆ, ಅದರಿಂದ ಸೂರ್ಯದೇವನಿಗೆ ತೃಪ್ತಿಯಾಗುತ್ತಂತೆ! ಕಾಲಕಾಲಕ್ಕೆ ಮಳೆ, ಬೆಳೆ ಕೊಡುತ್ತಾನಂತೆ! ಅದು ಹೇಗೆ ತೃಪ್ತಿಯಾಗುತ್ತೋ! ಅದಕ್ಕಾಗಿ ಪಾಪ, ಆ ಕೋಣನನ್ನು ಬಲಿಕೊಡಬೇಕೆ? ನಾನು . . . . ಸಮೀಪದ ಒಂದು ಮಠದ ಮುಖ್ಯಸ್ಥ . . .ರನ್ನು (ಮಠದ ಮತ್ತು ಮುಖ್ಯಸ್ಥರ ಹೆಸರನ್ನು ಚತುರ್ವೇದಿಯವರು ಹೇಳಿದ್ದರು, ಆದರೆ ಇಲ್ಲಿ ಅದನ್ನು ಬಳಸಿಲ್ಲ -ಲೇ.) ಕೇಳಿದೆ: 'ಸ್ವಾಮಿ, ನೀವು ಯಾಕೆ ಪ್ರಾಣಿಹಿಂಸೆ ಮಾಡ್ತೀರಿ?' ಅವರು ಹೇಳಿದರು: ನಾವು ಎಲ್ಲಾ ಪ್ರಾಣಿಗಳನ್ನೂ ಬಲಿ ಕೊಡಲ್ಲ, ಸಸ್ಯಾಹಾರಿ, ಸಾಧು ಪ್ರಾಣಿ ಮಾತ್ರ ಬಲಿ ಕೊಡ್ತೀವಿ, ಅವು ಶುದ್ಧವಾಗಿರುತ್ತವೆ, ಅವನ್ನು ಬಲಿ ಕೊಟ್ಟರೆ ಸೂರ್ಯನಾರಾಯಣನಿಗೆ ತೃಪ್ತಿಯಾಗುತ್ತೆ. ನಾನು ಹೇಳಿದೆ - 'ನನ್ನ ಜೊತೆಗೆ ಬನ್ನಿ, ಕೆಲವು ತಿಂಗಳು ನಿಮಗೆ ವಡೆ, ಚಕ್ಕುಲಿ, ಏನೂ ಕೊಡಲ್ಲ, ಬರೀ ಹುಲ್ಲೇ ತಿನ್ನಿಸಿ ಆಮೇಲೆ ಯಜ್ಞಕ್ಕೆ ಬಲಿ ಕೊಡುತ್ತೇನೆ, ಸೂರ್ಯದೇವನಿಗೆ ತುಂಬಾ ಸಂತೋಷ ಆಗುತ್ತೆ'. ಅವರು 'ಅಯ್ಯೋ, ನಾನು ಮನುಷ್ಯ ಕಣಯ್ಯಾ' ಅಂದರು. 'ಮನುಷ್ಯ ಎಂದು ಏಕೆ ಹೇಳುತ್ತಿ? ಮನುಷ್ಯ ಜಾತಿಗೆ ಏಕೆ ಅವಮಾನ ಮಾಡುತ್ತಿ? ಆಲೋಚನೆ ಮಾಡಿ ಕೆಲಸ ಮಾಡುವವನು ಮನುಷ್ಯ ಎಂದು ಶಾಸ್ತ್ರ ಹೇಳುತ್ತೆ. ಆಲೋಚನೆ ಮಾಡದೆ ಕೆಲಸ ಮಾಡುವ ನೀನು ಹೇಗೆ ಮನುಷ್ಯ?' ಎಂದು ಹೇಳಿದೆ. ಯಜ್ಞ ಶ್ರೇಷ್ಠವಾದ ಕರ್ಮ, ಅಂತಹ ಯಜ್ಞದ ಹೆಸರಿನಲ್ಲಿ ಇಂತಹ ಪಾಪ ಏಕೆ ಮಾಡಬೇಕು? ಯಾವತ್ತೂ ಮಾಡಬಾರದು.
ಭಗವಂತ ಐಶ್ವರ್ಯ ಕೊಡುತ್ತಾನೆ, ಯಾರಿಗೆ? ಯಾರು ನೂರು ಕೈಗಳಿಂದ ದುಡಿದು ಸಾವಿರ ಕೈಗಳಿಂದ ದಾನ ಮಾಡುತ್ತಾನೋ ಅವರಿಗೆ! ನಾನು ಒಬ್ಬನೇ ತುಪ್ಪ ತಿಂದರೆ ನನಗೊಬ್ಬನಿಗೆ ಲಾಭ ಆಗಬಹುದು, ಅದನ್ನು ಯಜ್ಞ ಮಾಡುವಾಗ ಅಗ್ನಿಗೆ ಹಾಕಿದರೆ ನಾಶವಾಗುವುದಿಲ್ಲ, ಸೂಕ್ಷ್ಮ ಕಣಗಳಾಗಿ ಮಾರ್ಪಟ್ಟು ವಾಯುಮಂಡಲದಲ್ಲಿ ಹರಡುತ್ತೆ, ಅದರ ಲಾಭ ಎಲ್ಲರಿಗೂ ಸಿಕ್ಕುತ್ತೆ, ಈ ವೈಜ್ಞಾನಿಕ ಸತ್ಯವನ್ನು ಯಾರೂ ಯೋಚನೆ ಮಾಡುವುದಿಲ್ಲ, ನಿಮಗೆ ಗೊತ್ತಿದೆ, ಬೆಂಕಿಗೆ ಮಾತ್ರ ಆ ಶಕ್ತಿ ಇರೋದು, ಬೆಂಕಿಗೆ ತನಗೆ ಸಿಗುವ ಎಲ್ಲಾ ವಸ್ತುಗಳನ್ನು ದಹಿಸಿ, ಛಿನ್ನ ಭಿನ್ನಗೊಳಿಸಿ ಎಲ್ಲಾ ಕಡೆ ಹರಡುವ ಶಕ್ತಿ ಇದೆ, ಅದು ಒಳ್ಳೆಯದನ್ನೂ ಕೊಟ್ಟರೂ ಮಾಡುತ್ತೆ, ಕೆಟ್ಟದನ್ನು ಕೊಟ್ಟರೂ ಮಾಡುತ್ತೆ. ನೀರಿನಲ್ಲಿ ಹೋಮ ಮಾಡಿದರೆ ಏನೂ ಪ್ರಯೋಜನವಿಲ್ಲ. ಸೋಮ ಪದಕ್ಕೆ ಇರುವ ಮತ್ತೊಂದು ಅರ್ಥ ಸಾರಭೂತವಾದದ್ದು ಅಂತ. ಉದಾಹರಣೆಗೆ ಹೇಳಬೇಕೆಂದರೆ ಸೋಮ ಅನ್ನುವ ಬಳ್ಳಿ ಇದೆ, ಅದರಲ್ಲೂ ಬಿಡುವುದು ಒಂದೇ ಎಲೆ, ಅದರಲ್ಲಿ ೪೧ ವಿಧವಾದ ಔಷಧೀಯ ಗುಣಗಳಿವೆ. ಅದನ್ನು ಉಪಯೋಗಿಸಿ ಮಾಡುವ ಯಜ್ಞಕ್ಕೆ ಸೋಮಯಾಗ ಅನ್ನುತ್ತಾರೆ, ಸೋಮದ ಎಲೆ ಅಂತ ಯಾವುದೋ ಕಡ್ಡಿ ಹಾಕುತ್ತಾರೆ, ಹಾಕಬೇಕಾದ್ದನ್ನು ಹಾಕದೆ ಬೇರೆ ಏನೋ ಹಾಕಿ ಹಾಕಿದೆವೆಂದು ಅಂದುಕೊಳ್ಳುತ್ತಾರೆ. ಪುರೋಹಿತರು ಅಂತಾರಲ್ಲಾ ಅವರು ಪುರೋಹತರೇ! ಆತ್ಮಶುದ್ಧಿಯಿಲ್ಲದೆ ಪೂಜೆ ಮಾಡಿಸುವ ಪುರೋಹಿತರೆಲ್ಲಾ ಪುರೋಹತರೇ! ಸೋಮ ಅನ್ನುವ ಪದಕ್ಕೆ 'ಪ್ರಸವೈಶ್ವರ್ಯ' ಅನ್ನುವ ಹೆಸರೂ ಇದೆ. ಯಾವತ್ತೂ ವೇದ ಬಡವರಾಗಿರಿ ಎಂದು ಹೇಳುವುದಿಲ್ಲ, ತಾವಾಗೇ ಬಡತನ ಬಯಸಿದರೆ ಪರವಾಗಿಲ್ಲ, ವಿನೋಬಾ ಬಾವೆಯವರಂತೆ! ಬಡತನ ಅನ್ನುವುದು ಒಂದು ಅಭಿಶಾಪ. ಭಗವಂತ ಸರ್ವೈಶ್ಯರ್ಯ ಸಂಪನ್ನ. ಅವನ ಮಕ್ಕಳು ನಾವು ಬಡತನದಲ್ಲಿದ್ದರೆ ಅವನಿಗೆ ಸಂತೋಷವಿರುತ್ತೇನು? ಅವನ ಮಕ್ಕಳು ನಾವು ಚೆನ್ನಾಗಿ ತಿನ್ನಬೇಕು, ಸುಖವಾಗಿರಬೇಕು, ಅದು ಭಗವಂತನ ಆಸೆ. ನಾವು ಬಲವಂತವಾಗಿ ಉಪವಾಸ ಮಾಡಿದರೆ ಅವನಿಗೆ ಸಂತೋಷ ಆಗುತ್ತೆ ಅಂತ ಮಾಡಿದ್ದೀರಾ? ಗಾಂಧೀಜಿ ಪತ್ನಿ ಕಸ್ತೂರಿಬಾ ಹೇಳುತ್ತಿದ್ದರು,' ನಮ್ಮ ಯಜಮಾನರು ೭ ದಿನ, ೧೫ ದಿನ, ೨೧ ದಿನ ಹೀಗೆಲ್ಲಾ ಉಪವಾಸ ಮಾಡುತ್ತಾರೆ, ಸ್ವಲ್ಪ ಸ್ವಲ್ಪ ದಿನ ಏಕೆ, ಪೂರ್ಣ ಸಾಯುವವರೆಗೂ ಉಪವಾಸ ಮಾಡಿ ಸತ್ತುಬಿಡಲಿ, ನಾಲ್ಕು ದಿನ ಅತ್ತು ಸುಮ್ಮನಾಗುತ್ತೇನೆ, ನಂತರ ಮರೆತುಬಿಡುತ್ತೇನೆ' ಅಂತ. ಆ ಸಾಧ್ವಿಯ ಬಾಯಲ್ಲಿ, ಮಹಾಪತಿವ್ರತೆಯ ಬಾಯಲ್ಲಿ ಅಂತಹ ಮಾತು ಬರಬೇಕಾದರೆ ಎಷ್ಟು ನೊಂದಿರಬೇಕು, ಊಹಿಸಿ. ಕಸ್ತೂರಿಬಾ ಬಹಳ ಕಾಯಿಲೆಯಿಂದ ನರಳಿದವರು. ಅವರು ಸಾಯುವ ಸಮಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಡೆದ ಘಟನೆ. ಅವರು ಆಯುರ್ವೇದದ ಔಷಧಿ ಮಾತ್ರ ಬಳಸುತ್ತಿದ್ದರು, ಇಂಗ್ಲಿಷ್ ಔಷಧಿ ತೆಗೆದುಕೊಳ್ಳುತ್ತಿರಲಿಲ್ಲ. ಹತ್ತಿರವಿದ್ದವರಲ್ಲಿ ಏನೋ ಒಂದು ಆಸೆ, ಅಲ್ಲಿದ್ದ ವೈದ್ಯರೊಬ್ಬರು ಪೆನ್ಸಿಲಿನ್ ಇಂಜೆಕ್ಷನ್ ತಂದು ಕಸ್ತೂರಿಬಾರಿಗೆ ಕೊಡಲೇ ಎಂದು ಕೇಳಿದರು. ಅವರು ಗಾಂಧೀಜಿಯನ್ನು ಕೇಳಿಬಿಡಿ ಅಂದರು. ಆ ಗಾಂಧೀಜಿಯೂ ಇಂಗ್ಲಿಷ್ ಔಷಧಿ ಬಳಸುತ್ತಿರಲಿಲ್ಲ. ಅವರನ್ನು ಕೇಳುವುದೂ ಒಂದೆ, ಬಿಡುವುದೂ ಒಂದೇ ಎಂದು ಸುಮ್ಮನಾದರು. ಆ ಗಾಂಧೀಜೀನೋ, ಅವರನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರಷ್ಟೇ ಎತ್ತರ ಬೆಳೆಯಬೇಕು. ಅವರನ್ನು ಬಯ್ಯುವುದು ಸುಲಭ.
ನಾವು ಮನಸ್ಸಿನಲ್ಲಿ ಎಲ್ಲರೂ ಸುಖವಾಗಿರಲಿ ಅನ್ನುತ್ತೇವೆ, ಆದರೆ ನಾವು ಅನ್ನುವುದನ್ನು ಬಿಡುವುದಿಲ್ಲ. ನಮ್ಮ ಸ್ವಾರ್ಥವನ್ನು ನಾವು ಬಿಡುವುದಿಲ್ಲ. ಗೋಬ್ರಾಹ್ಮಣೇಭ್ಯಃ ಶುಭಂಭವತು ಅಂತೀವಿ, ಗೋವು, ಬ್ರಾಹಣರಿಗೆ -ಅವರೂ ಒಂದು ತರಹ ಪ್ರಾಣಿಗಳೇ ಅಂದುಕೊಳ್ಳಿ - ಶುಭವಾಗಲಿ ಅಂತ. ಈ ಗೋವು, ಬ್ರಾಹ್ಮಣರು ಈ ಪ್ರಪಂಚದಿಂದ ಹೊರಗಿದ್ದಾರೆಯೇ? 'ಲೋಕಾಸಮಸ್ತಾಃ ಸುಖಿನೋಭವಂತು' ಎಂದು ವೇದ ಹೇಳುವಾಗ ಇವೆರಡನ್ನು ಮಾತ್ರಾ ಎತ್ತಿ ಏಕೆ ತೋರಿಸಬೇಕು? ಹೀಗೆ ನಮ್ಮ ತಂದೆಗೆ ಹೇಳಿದಾಗ ಅವರಿಗೆ ಬಹಳ ಕೋಪ ಬರುತ್ತಿತ್ತು. 'ಏನಪ್ಪಾ ನೀನು, ಶಾಸ್ತ್ರಕ್ಕೆ ವಿರುದ್ಧವಾಗಿ ಮಾತನಾಡುತ್ತೀ' ಅನ್ನುತ್ತಿದ್ದರು. 'ಅದು ಯಾವ ಶಾಸ್ತ್ರ?' ಅಂತ ಕೇಳಿದರೆ ಅವರಿಗೆ ಸರಿಯಾಗಿ ಉತ್ತರ ಕೊಡಲಾಗುತ್ತಿರಲಿಲ್ಲ, 'ಶಾಸ್ತ್ರ ಶಾಸ್ತ್ರ ಕಣಯ್ಯಾ' ಅನ್ನುತ್ತಿದ್ದರು. ಸಂಸ್ಕೃತದಲ್ಲಿ ಇರುವುದೆಲ್ಲಾ ಶಾಸ್ತ್ರವಾ? ಇವೆಲ್ಲಾ ಆಲೋಚನೆ ಮಾಡಿದರೆ ಮಾತ್ರ ಗೊತ್ತಾಗುವುದೇ ಹೊರತು, ಇಲ್ಲದಿದ್ದರೆ ಗೊತ್ತಾಗುವುದಿಲ್ಲ. ನಾವು ಸತ್ಕರ್ಮಕ್ಕೆ ವಿಮುಖರಾಗದಿರೋಣ, ಐಶ್ವರ್ಯ ಇದ್ದಾಗ ಆಡಂಬರದಿಂದ ಹಬ್ಬ, ನಾಮಕರಣ, ಉಪನಯನ, ಮದುವೆ, ಇತ್ಯಾದಿಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ, ಬಡವ ಏನು ಮಾಡಬೇಕು? ಬಡವ, ಭಾಗ್ಯವಂತ ಎಲ್ಲಾ ನಾವು ಮಾಡಿಕೊಂಡಿರೋದು, ಬೆಂಕಿಯಲ್ಲಿ, ಗಾಳಿಯಲ್ಲಿ, ಭೂಮಿಯಲ್ಲಿ, ಆಕಾಶದಲ್ಲಿ, ನೀರಿನಲ್ಲಿ ಎಲ್ಲಾ ಕಡೆ ಐಶ್ವರ್ಯ ತುಂಬಿಕೊಂಡಿದೆ. ಬುದ್ಧಿಹೀನರಾದ ನಾವು ಆ ಐಶ್ವರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತೇವೆ. ವಾಯುವಿನಲ್ಲಿ ಪ್ರಾಣ ಕೊಡುವ ಶಕ್ತಿ ಇದೆ. ಜನ ಹೋಮ, ಹವನ ಮಾಡಿ ಗಾಳಿಯಲ್ಲಿ ಶುದ್ಧತೆ ಹರಡುವುದಿಲ್ಲ, ಬೀಡಿ, ಸಿಗರೇಟು, ಚುಟ್ಟಾ ಸೇದಿ ಗಾಳಿಯಲ್ಲಿ ಹೊಗೆ ಬಿಟ್ಟು ಅವರೂ ಹಾಳಾಗಿ ನಮ್ಮನ್ನೂ ಹಾಳು ಮಾಡುತ್ತಾರೆ, ಯಾತಕ್ಕೆ? ಪಂಚಭೂತಗಳನ್ನು ಶುದ್ಧವಾಗಿಡಲು ಕರ್ಮ ಮಾಡಬೇಕು. ಯಜ್ಞ ಮಾಡುವುದಕ್ಕೆ ತುಪ್ಪ ಇಲ್ಲ, ಯಾವುದೋಎಣ್ಣೆ ಹಾಕುವುದು, ಅದೂ ಇಲ್ಲ, ವನಸ್ಪತಿ, ಹಾಕಬೇಕಾದ ಸಮಿತ್ತು ಇಲ್ಲ, ಯಾವುದೋ ಕಡ್ಡಿ ಹಾಕಿದರಾಯಿತು, ಈ ರೀತಿ ಮಾಡಿದರೆ ಸರಿಯೇ? ಅದರಲ್ಲಿ ಸತ್ವ ಇಲ್ಲ. ಹಾಕಬೇಕಾದ್ದನ್ನು ಹಾಕದೆ ಬಿಟ್ಟು ಯಜ್ಞ ಮಾಡಿದರೇನು, ಬಿಟ್ಟರೇನು! ನನಗೆ ಗೊತ್ತಿರುವ ಒಂದು ಕುಟುಂಬ ಇದೆ -ದೊಡ್ಡ ಆರ್ಯಸಮಾಜಿ ಪರಿವಾರ ಅದು- ಅವರ ಮನೆಯಲ್ಲಿ ಒಮ್ಮೆ ಯಜ್ಞ ಮಾಡುವಾಗ ಮನೆಯ ಯಜಮಾನಿಯಾದ ಅಜ್ಜಿ -ಅವರೂ ಉಪಾಧ್ಯಾಯಿನಿ ಆಗಿದ್ದವರು- ತನ್ನ ಅಳಿಯನಿಗೆ ತುಪ್ಪ ತರಲು ಹೇಳಿದರು, ಅವರು ಅಡಿಗೆ ಮನೆಯಿಂದ ತುಪ್ಪ ತಂದರೆ, ಅದಲ್ಲಾ, ಅದು ತಿನ್ನುವ ತುಪ್ಪ, ಯಜ್ಞಕ್ಕೆ ಅಂತ ಇಟ್ಟಿರುವ ಬೇರೆ ತುಪ್ಪ ತನ್ನಿ ಅಂತ ಹೇಳಿದರು. ಇಂಥ ಯಜ್ಞ ಯಾಕೆ ಮಾಡಬೇಕು? ಮಾಡಲೇಬಾರದು. ಬದಲಿಗೆ ನಾಸ್ತಿಕರಾಗಿ, ನಾನು ಒಪ್ಪುತ್ತೇನೆ. ಆಸ್ತಿಕತೆ ಹೆಸರಿನಲ್ಲಿ ಎಲ್ಲರ ತಲೆ ಬೋಳಿಸುವ ಕೆಲಸ ಇದೆಯಲ್ಲಾ, ಅದು ಮಹಾ ಪಾಪ. ಒಬ್ಬರು ಮಹಾಶಯರು ನನಗೆ ಹೇಳಿದ್ದರು, ನೀನು ನಾಸ್ತಿಕ ಕಣಯ್ಯಾ ಅಂತ. ಆಗಲಿ, ನಿಮ್ಮ ಆಶೀರ್ವಾದದಿಂದ ನಾನು ನಾಸ್ತಿಕನಾಗೆ ಇರುತ್ತೇನೆ ಎಂದು ಉತ್ತರಿಸಿದ್ದೆ. ಅಷ್ಟೆಲ್ಲಾ ಸಂಪ್ರದಾಯಸ್ಥರಾಗಿದ್ದ ನನ್ನ ತಂದೆ ಸಾಯುವ ಕಾಲಕ್ಕೆ ಆಸ್ಪತ್ರೆಯಲ್ಲಿದ್ದಾಗ ನಾನು ಹೊರಗೆ ಇದ್ದೆ. ನನ್ನ ತಂದೆ ನರ್ಸ್‌ಗೆ ಹೇಳಿ ನನ್ನನ್ನು ಕರೆಸಿದರು. ನನ್ನ ಕೈಹಿಡಿದು 'ಮಗೂ, ನಿನಗೆ ನಾನು ಸಿಕ್ಕಾಪಟ್ಟೆ ಬೈದುಬಿಟ್ಟಿದ್ದೀನಿ. ಮರೆತುಬಿಡು, ನೀನು ದೊಡ್ಡ ಮನುಷ್ಯ ಆಗುತ್ತೀಯ, ನಿನ್ನಿಂದ ನಮ್ಮ ಕುಲಕ್ಕೆ ಒಳ್ಳೆ ಹೆಸರು ಬರಬೇಕು' ಎಂದು ಹೇಳಿದ್ದರು. ಶಾಪ ಕೊಟ್ಟಿದ್ದ ತಂದೆಯಿಂದ ನನಗೆ ಆಶೀರ್ವಾದ ಸಿಕ್ಕಿತು, ನನಗೆ ತೃಪ್ತಿ. ಅವರು ಆಶೀರ್ವಾದ ಕೊಡದೇ ಹೋಗಿದ್ದರೂ ನನ್ನ ತೃಪ್ತಿಯಲ್ಲಿ ಕೊರತೆಯಾಗುತ್ತಿರಲಿಲ್ಲ. ನನ್ನ ತಂದೆ ನನಗೆ ಪೂಜ್ಯರು ಹೌದು, ಆದರೆ ಯಾರಿಗೆ ಗೊತ್ತು, ಎಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾರೋ ಏನೋ, . . . ಹಳ್ಳಿಯಲ್ಲಿ ಇದ್ದಾಗ ಪಟೇಲರು, ಶಾನುಭೋಗರು, ಅವರು, ಇವರು ತರಕಾರಿ, ಎಣ್ಣೆ, ತುಪ್ಪ, ಅಕ್ಕಿ, ಬೇಳೆ ತಂದು ಕೊಡುತ್ತಿದ್ದರು. ನಾನು ಕೇಳುತ್ತಿದ್ದೆ, 'ಅಪ್ಪಾ, ಇದಕ್ಕೆ ನೀವು ದುಡ್ಡು ಕೊಡುತ್ತೀರಾ?' ಅಂತ. 'ಇಲ್ಲ, ಅವರು ಶ್ರದ್ಧೆಯಿಂದ ಕೊಡ್ತಾರೆ' ಅಂತಿದ್ದರು. 'ಅವರು ಶ್ರದ್ಧೆಯಿಂದ ಕೊಡ್ತಾರೆ, ನೀವು ಶ್ರದ್ಧೆಯಿಂದ ತೊಗೋತೀರಾ?' ಅದಕ್ಕೆ ಅವರು ಉತ್ತರಿಸುತ್ತಿರಲಿಲ್ಲ. ಯಾರು ಏನೇ ಅನ್ನಲಿ, ನಿಮ್ಮನ್ನು ಶತ್ರುವಾಗೇ ಕಾಣಲಿ, ನೀವು ಮಾತ್ರಾ ನಾನು ಎಲ್ಲರ ಮಿತ್ರ ಎಂದುಕೊಳ್ಳಿ, ಇತರರು ನಿಮ್ಮನ್ನು ದ್ವೇಶಿಸಲಿ, ಪ್ರತಿಯಾಗಿ ನೀವು ದ್ವೇಶಿಸಲು ಹೋಗಬೇಡಿ. ದೊಡ್ಡಮಾತು, ಮಹಾತ್ಮರಿಗೆ ಅರ್ಥವಾಗುತ್ತೆ, ನಮಗೆ ಅರ್ಥವಾಗಲ್ಲ, ನಮಗೆ ಯಾಕೆ? ಅಂದುಕೊಂಡು ಅವನು ಎರಡು ಮಾತು ಬೈದನಲ್ಲಾ, ಹತ್ತು ಮಾತು ಜಾಡಿಸಿಬಿಡುತ್ತೇನೆ ಅಂದರೆ ಅವನದು ಎರಡು, ನಿಮ್ಮದು ಹತ್ತು, ಹನ್ನೆರಡು ಮಾತು ಕೇಳಿ ಬಂತು, ಯಾರ ಉದ್ಧಾರಕ್ಕೆ? ನಾವು ಈರೀತಿ ಯೋಚನೆ ಮಾಡುವುದನ್ನು ಕಲಿಯಬೇಕು, ಯೋಚನೆ ಮಾಡದೆ ಯಾವ ಕೆಲಸವನ್ನೂ ಮಾಡಬಾರದು, ವಿದ್ಯೆ, ಜ್ಞಾನದಿಂದ ಮಾಡುವ ಕೆಲಸದಲ್ಲಿ ಶಕ್ತಿ ತುಂಬಿಕೊಂಡಿರುತ್ತದೆ, ಎಲ್ಲರೊಡನೆ ಮೃದುವಾಗಿ, ಮಧುರವಾಗಿ ಮಾತನಾಡಬೇಕೆಂದು ವೇದ ಹೇಳುತ್ತದೆ. ಜೇನುತುಪ್ಪದಂತಿರಬೇಕೆಂದು ಹೇಳುತ್ತದೆ. ಒಳ್ಳೆಯ ಮಾತು ಎಲ್ಲಿ ಕೇಳುತ್ತೇವೆ, ಒಬ್ಬರನ್ನೊಬ್ಬರು ಬಯ್ಯುವುದು, ಒಬ್ಬರನ್ನೊಬ್ಬರು ಹಂಗಿಸುವುದು, ಇದರಲ್ಲೆ ಕಳೆಯುತ್ತೇವೆ. ಆಲೋಚನೆ ಮಾಡೋಣ, ಒಳ್ಳೆಯ ರೀತಿ ಬಾಳೋಣ.

Tuesday, May 24, 2011

ಬರಹ ಸಾರ್ಥಕವಾಯ್ತು.

 ತನ್ನ ಓದುಗರಲ್ಲಿ ನಿರ್ಭೀತ ಸತ್ಯ ಪಥದಲ್ಲಿ ಸಾಗುವ ಕೆಲವು ವಿಚಾರಗಳ ಲೇಖನಗಳನ್ನು ವೇದಸುಧೆಯು ಪ್ರಕಟಿಸುತ್ತಿರುವುದು ನಿಮಗೆಲ್ಲಾ ತಿಳಿದಿದೆ. ಒಂದು ಬರಹದಿಂದ ಒಬ್ಬ ಓದುಗರ ಮೇಲೆ ಸತ್ಪರಿಣಾಮವಾದರೂ ಆ ಬರಹ ಸಾರ್ಥಕವಾದಂತಯೇ.
ನನ್ನದೇ ಕವನದ ಒಂದು ನುಡಿ ನೆನಪಾಯ್ತು.

ಎಲ್ಲ ಕವನ ರಾಶಿಯಲ್ಲಿ
ಎನ್ನ ಕವನದೊಂದು ಪದವು
ನಿಮ್ಮ ಮನಕೆ ಮುದವ ನೀಡೆ 
ನಾನೆ ಧನ್ಯನು
ನನ್ನ ಕವನ ಧನ್ಯವು||
ಮಿತ್ರರಾದ ಶ್ರೀ ರಂಗನಾಥರ ಪತ್ರವು ಇಲ್ಲಿದೆ, ಅದನ್ನು ಓದಿದ ನನ್ನ ಅನಿಸಿಕೆಯನ್ನು ಹೀಗೆ ವ್ಯಕ್ತ ಪಡಿಸಿದೆ ಅಷ್ಟೆ.ಆದರೆ ನೆಮ್ಮದಿಯ ಬದುಕಿಗೆ ನೆರವಾಗಬಲ್ಲ  ಶ್ರೀ ಸುಧಾಕರ ಶರ್ಮರಂತಹ, ಚತುರ್ವೇದಿಗಳಂತಹ ಪಂಡಿತರ ಹಲವು ವಿಚಾರಗಳು ಪ್ರಕಟವಾಗುತ್ತಲೇ ಇವೆ. ಅವನ್ನು ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಲೂ ಇದ್ದಾರೆ. ಆದರೆ ಸಾಮಾನ್ಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವವರು ವಿರಳ. ಹೀಗಾದಾಗ ಸಹಜವಾಗಿ ಮುಂದಿನ ಬರಹಗಳು ನಿಧಾನವಾಗುತ್ತವೆ.ಕಾರಣ ಈಗಾಗಲೇ ಪ್ರಕಟವಾಗಿರುವ ಬರಹಗಳಿಂದ ಓದುಗರಿಗೆ ಪ್ರಯೋಜನವಾಗಿದೆಯೇ ಎಂಬ ಫೀಡ್ ಬ್ಯಾಕ್ ಸಿಕ್ಕಿರುವುದಿಲ್ಲ. ಆದ್ದರಿಂದ  ಓದುಗರು ತಮ್ಮ ಮುಕ್ತ ಅಭಿಪ್ರಾಯಗಳನ್ನು ದಯಮಾಡಿ ಬರೆಯಿರಿ ಎಂದು ವಿನಂತಿಸುವೆ.ಈಗ ಶ್ರೀ ರಂಗನಾಥರ ಪತ್ರವನ್ನು ಓದಿ.
---------------------------------

ನಮಸ್ಕಾರ,
ಬೆಂಗಳೂರಿನಲ್ಲಿ ಕಳೆದ ೩ ವರ್ಷಗಳ ಹಿಂದೆ ದಕ್ಷಿಣಾಭಿಮುಖವಾದ 20 X 30 ಜಾಗವೊಂದನ್ನು ಖರೀದಿಸಿದ್ದೆ. ಆದರೆ ಮನೆ ಕಟ್ಟುವುದಕ್ಕೆ ಹಿಂದೇಟು ಹಾಕುತಿದ್ದೆ, ಕಾರಣ ದಕ್ಷಿಣದ ಬಾಗಿಲು ಬರುತ್ತದಲ್ಲಾ ಅನ್ನುವ ಕಾರಣಕ್ಕೆ.
ನಿಮ್ಮ ಹಳೆಯ ವಾಸ್ತು ಕುರಿತಾದ ಕೆಲ ಪ್ರತಿಕ್ರಿಯೆ ಗಳನ್ನು ಓದುತಿದ್ದೆ, ನಿಮ್ಮ ಖಡಕ್ ಪ್ರತಿಕ್ರಿಯೆಗಳು ನನ್ನ ಮನದಲ್ಲಿನ ಕೆಲ ಸಂದೇಹಗಳನ್ನು ದೂರ ಮಾಡಿವೆ.
ಟಿವಿಯಲ್ಲಿ ಬರುವ ಜ್ಯೋತಿಷ್ಯ ವಾಸ್ತು ಕುರಿತಾದ ಕಾರ್ಯಕ್ರಮಗಳು ನಮ್ಮ ಮನಸ್ಸನ್ನು ಹಾಳು ಮಾಡುತ್ತವೆ. ಇಂತಹ ಕಾರ್ಯಕ್ರಮಗಳನ್ನು ನಿಲ್ಲಿಸದೇ ಹೋದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವುದರಲ್ಲಿ ಸಂದೇಹವಿಲ್ಲ.

ಧನ್ಯವಾದಗಳೊಂದಿಗೆ

ರಂಗನಾಥ.

Monday, May 23, 2011

ಪಂ.ಸುಧಾಕರಚತುರ್ವೇದಿಯವರ ವಿಚಾರಧಾರೆ-1


ಆತ್ಮೀಯರೇ,
      ಅಪ್ಪಟ ಕನ್ನಡಿಗರಾದ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ ’ಚತುರ್ವೇದಿ’ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ೧೩ ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು, ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತ್ಯೆಯಾದವರ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್‌ಸಿಂಗರ ಗುರುವಾಗಿದ್ದವರು. ಈಗ ೧೧೫ ವರ್ಷಗಳಾಗಿರುವ ಚತುರ್ವೇದಿಯವರ ಜೀವನೋತ್ಸಾಹ ನಿಜಕ್ಕೂ ಬತ್ತದ ಚಿಲುಮೆ. ಇವರು ಬೆಂಗಳೂರಿನ ಜಯನಗರ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿ ಯಲ್ಲಿ ವಾಸವಿದ್ದಾರೆ. ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಇವರ ಮನೆಯಲ್ಲಿ ಸತ್ಸಂಗ ನಡೆಯುತ್ತಿದ್ದು ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಲ್ಲಿ ಭಾಗವಹಿಸಲು ಪರಿಚಯವಿರಬೇಕಾದ ಮತ್ತು ಆಹ್ವಾನಿಸಬೇಕಾದ ಅಗತ್ಯವಿಲ್ಲ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. ನೀವೂ ಈ ಅಪರೂಪದ ಸಾಧಕರನ್ನು ಭೇಟಿ ಮಾಡಬೇಕು ಮತ್ತು ಅವರ ಮಾತುಗಳನ್ನು ಆಲಿಸಬೇಕು ಎಂಬುದು ನನ್ನ ಆಶಯ.
     ಕಳೆದ ೧೪-೦೫-೨೦೧೧ರಂದು ನಡೆದ ಸತ್ಸಂಗದಲ್ಲಿ ಪಂ. ಚತುರ್ವೇದಿಯವರು ಮುಂದಿಟ್ಟ ವಿಚಾರಗಳನ್ನು ಎರಡು ಕಂತುಗಳಲ್ಲಿ ತಮ್ಮ ಮುಂದಿಟ್ಟಿದೆ. ಅವರು ಮಧ್ಯೆ ಮಧ್ಯೆ ವೇದದ ಮಂತ್ರಗಳನ್ನು ಉಲ್ಲೇಖಿಸುತ್ತಿದ್ದು ಅವುಗಳನ್ನು ಪದಬಳಕೆಯಲ್ಲಿ ಎಲ್ಲಿ ತಪ್ಪಾದೀತೋ ಎಂಬ ಭಾವನೆಯಿಂದ ಈ ಲೇಖನದಲ್ಲಿ ಹಾಕಿಲ್ಲ. ಇಲ್ಲಿರುವುದೆಲ್ಲಾ ಅವರದೇ ಮಾತುಗಳು. ಪ್ರತಿಕ್ರಿಯೆಗೆ ಸ್ವಾಗತ.
-ಕ.ವೆಂ.ನಾಗರಾಜ್.
*************


ಬದುಕೋಣ, ಸಾಯದಿರೋಣ

     ಋಗ್ವೇದದ ಒಂದು ಮಂತ್ರದಲ್ಲಿ ನಾವು ಯಾವ ದಾರಿಯನ್ನು ಹಿಡಿದು ನಡೆಯಬೇಕು, ಯಾವ ದಾರಿಯಲ್ಲಿ ಹೋದರೆ ನಮಗೆ ಆತ್ಮವಿಕಾಸ ಉಂಟಾಗುತ್ತದೆ ಎಂದು ವಿವರಿಸಿದೆ. ಇದು ಪ್ರಾರ್ಥನಾ ರೂಪದಲ್ಲಿದೆ. ವೇದಗಳಲ್ಲಿ ಇದೊಂದು ವಿಶೇಷ. ಪ್ರಾರ್ಥನಾ ರೂಪದಲ್ಲೇ ಎಲ್ಲವನ್ನೂ ನಾವು ತಿಳಿದುಕೊಳ್ಳುತ್ತೇವೆ. 'ವಿಶ್ವಾನಿ ದೇವ ಸವಿತರ್. . . . . 'ಎಂಬ ಮಂತ್ರದಲ್ಲಿ ಭಗವಂತ, ಜಗತ್ ಶ್ರೇಯಕ, ಜಗದುತ್ಪಾದಕ, ನೀನು ನಮಗೆ ಯಾವುದು ಒಳ್ಳೆಯದು ಇದೆಯೋ ಅದರ ಕಡೆಗೆ ಮಾತ್ರ ಕರೆದುಕೊಂಡು ಹೋಗು, ಕೆಟ್ಟದರಿಂದ ನಮ್ಮನ್ನು ದೂರ ಇರಿಸು ಎಂದು ಹೇಳಿದೆ. ತಾತ್ಪರ್ಯವೆಂದರೆ ನಮ್ಮ ನಡೆಯಲ್ಲಿ ನಮ್ಮ ನುಡಿಯಲ್ಲಿ ಕೊಂಕು, ಸುತ್ತು ಇರಬಾರದು, ನೇರವಾದ ಮಾತು, ನೇರವಾದ ಯೋಚನೆಗಳು, ನೇರವಾದ ಕಾರ್ಯಗಳು, ಹೀಗಿದ್ದರೆ ಮಾತ್ರ ನಾವು ಧರ್ಮಿಗಳಾಗುತ್ತೇವೆ. ಮನುಷ್ಯ ಜನ್ಮ ಸಿಕ್ಕುವುದೇ ಕಷ್ಟ. ಸಿಕ್ಕಿರುವಾಗ ಅದನ್ನು ವ್ಯರ್ಥವಾಗಿ ಕಳೆಯುವುದು ಯಾರಿಗೂ ಶುಭವಲ್ಲ. ಜ್ಞಾಪಕವಿಟ್ಟುಕೊಳ್ಳಿ, ೮೬ ಲಕ್ಷ ಯೋನಿಗಳಿವೆ ಎನ್ನುತ್ತಾರೆ, ಅದರಲ್ಲಿ ಇದೂ ಒಂದು. ಸ್ವಲ್ಪ ಕಾಲು ಜಾರಿತೆಂದರೆ ಮನುಷ್ಯ ಜನ್ಮದಿಂದ ಕೆಳಗೆ ಬೀಳುತ್ತೇವೆ. ಮತ್ತೆ ಮೇಲಕ್ಕೆ ಬರಬೇಕೆಂದರೆ ಎಷ್ಟು ಜನ್ಮ ಜನ್ಮಾಂತರಗಳು ಬೇಕೋ ಗೊತ್ತಿಲ್ಲ. ಸಿಕ್ಕಿದೆಯಲ್ಲಾ ಮಾನವಜನ್ಮ, ಈ ಜನ್ಮದಲ್ಲಿ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ? ನಾವು ಒಂದು ವಿಷಯ ಮರೆಯುತ್ತೇವೆ, ೮೬ ಲಕ್ಷ ಹೋಗಲಿ, ಈ ಒಂದು ಜನ್ಮ ಇದೆಯಲ್ಲಾ ಇದು ಸಿಕ್ಕಬೇಕಾದರೆ ನಾವು ಎಷ್ಟು ಸಲ ಈ ಪ್ರಪಂಚಕ್ಕೆ ಬಂದಿರಬಹುದು, ಹೋಗಿರಬಹುದು! ಹಳೆಯ ಜನ್ಮಗಳ ನೆನಪಿಲ್ಲ. ಕೆಲವರು ಹೇಳುತ್ತಾರೆ - 'ಪುನರ್ಜನ್ಮ ಇದ್ದರೆ ನೆನಪಿರಬೇಕಿತ್ತು, ನೆನಪೇಕಿಲ್ಲ?'  ಅದಕ್ಕೆ ನಾವು ಎರಡು ಕಾರಣ ಕೊಡುತ್ತೇವೆ - ಒಂದು, ಹಳೆಯ ಜನ್ಮದ ಒಳ್ಳೆಯ, ಕೆಟ್ಟ ಸಂಗತಿಗಳು ನೆನಪಿದ್ದರೆ, ಒಳ್ಳೆಯ ವಿಷಯಗಳನ್ನೇನೋ ಉತ್ಸಾಹದಿಂದ ಒಪ್ಪಿಕೊಳ್ಳಬಹುದು, ಕೆಟ್ಟ ವಿಷಯಗಳಿದ್ದರೆ ಈ ಜನ್ಮದ ಸುಖ ಎಲ್ಲೋ ಹೊರಟುಹೋಗುತ್ತದೆ. ನಾವು ಹಿಂದಿನ ಜನ್ಮದಲ್ಲಿ ಯಾರದೋ ಮನೆ ಕೊಳ್ಳೆ ಹೊಡೆದಿದ್ದೇವೆಂದು ನೆನಪಿಗೆ ಬಂದರೆ ಈ ಜನ್ಮದಲ್ಲಿ ನಮ್ಮ ಮನೆಯನ್ನು ಇನ್ನು ಯಾರು ಕೊಳ್ಳೆ ಹೊಡೆಯುತ್ತಾರೋ, ಏನು ಮಾಡುತ್ತಾರೋ ಎಂದು ಚಿಂತೆಯಲ್ಲೇ ನೆಮ್ಮದಿ ಕಳೆದುಕೊಳ್ಳುತ್ತೇವೆ. ಹಳೆಯ ಜನ್ಮದ್ದಿರಲಿ, ಈಗಿರುವ ಜನ್ಮದಲ್ಲೇ ನಮಗೆ ಎಲ್ಲಾ ವಿಷಯ ನೆನಪಿನಲ್ಲಿ ಇರುವುದಿಲ್ಲ, ಅದು ಭಗವಂತನ ಕರುಣೆ ಎಂದಿಟ್ಟುಕೊಳ್ಳಿ. ಜ್ಞಾಪಕ ಇದ್ದಿದ್ದರೆ ಕೆಟ್ಟದು ನೆನಪಿಗೆ ಬರುತ್ತಾ ಇದ್ದರೆ ಅದರ ಚಿಂತೆಯಲ್ಲೇ, ಕೊರಗಿನಲ್ಲೇ ಜೀವನ ಕಳೆದುಹೋಗುತ್ತಿತ್ತು. ಭೀಷ್ಮಾಚಾರ್ಯರಿಗೆ, ಅಶ್ವತ್ಥಾಮರಿಗೆ ಇಚ್ಛಾಮರಣಿತ್ವದ ವರ ಇತ್ತೆಂದು ಹೇಳುತ್ತಾರೆ. ಯಾವಾಗ ಸಾಯಬೇಕು ಅನ್ನಿಸುವುದೋ ಆವಾಗ ಸಾಯುವ ಶಕ್ತಿ! ಅದೇನೋ ನನಗೆ ಅರ್ಥವಾಗುವುದಿಲ್ಲ, ಬದುಕಬೇಕಾದರೇನೋ ಕಷ್ಟ ಇದೆ, ಸಾಯುವುದಕ್ಕೇನು? ಬೆಳಿಗ್ಗೆ ಎದ್ದಾಗ ನ್ಯೂಸ್ ಪೇಪರ್ ನೋಡಿದರೆ ಆ ಹುಡುಗ ವಿಷ ತಿಂದು ಸತ್ತ, ಈ ಹುಡುಗಿ ನೇಣು ಹಾಕಿಕೊಂಡು ಸತ್ತಳು, ಅಂತೆಲ್ಲಾ ಓದುತ್ತೀವಿ. ನಮಗೆ ಮೊದಲೇ ಗೊತ್ತಿದ್ದರೆ, ಇಂತಹ ದಿನವೇ ಸಾವು ಬರುತ್ತದೆ ಎಂದು ಗೊತ್ತಿದ್ದರೆ ಬದುಕುವುದಕ್ಕೆ ಉತ್ಸಾಹವೇ ಇರುತ್ತಿರಲಿಲ್ಲ.

     ಸ್ವಲ್ಪ ಯೋಚನೆ ಮಾಡಿ, ಒಂದು ಜೈಲಿನಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಳಿತಿರಬೇಕಾದರೆ ಎಷ್ಟು ಬೇಸರವಾಗುತ್ತದೆ. ಅಂತಹುದರಲ್ಲಿ ಒಟ್ಟು ೧೩ ವರ್ಷ ಜೈಲಿನಲ್ಲಿ -ಕರಾಚಿಯಿಂದ ಹಿಡಿದು ಬೆಂಗಳೂರು ಸೆಂಟ್ರಲ್ ಜೈಲಿನವರೆಗೆ, ಕೊಚ್ಚಿ, ಆಂಧ್ರ ಸೇರಿ ಹಲವು ಜೈಲುಗಳಲ್ಲಿ -ಕಳೆದಿದ್ದೇನೆ. ಅಲ್ಲಿನ ರೊಟ್ಟಿ, ಅನ್ನ ಎಲ್ಲಾ ತಿಂದಿದ್ದೇನೆ. ಅದೂ ಎಂತಹ ರೊಟ್ಟಿ? ಹಿಟ್ಟಿನಲ್ಲಿ ಬೇಕಂತಲೇ ಮರಳು ಸೇರಿಸಿ ತಿನ್ನಕ್ಕಾಗಬಾರದು ಎಂದು ಮಾಡಿದ್ದ ರೊಟ್ಟಿ. ಸಾರಿನಲ್ಲೂ ಬೇಳೆಕಾಳು ಕಡಿಮೆ, ಮರಳೇ ಜಾಸ್ತಿ. ಅದನ್ನೇ ತಿಂದು ಬದುಕಬೇಕು. ಭಗವಂತನ ದಯೆ ಅಂತ ಕಾಣುತ್ತೆ, ಅಂತಹುದನ್ನು ತಿಂದೂ ಸಹ ಈಗಲೂ ಬದುಕಿದ್ದೀನಿ, ಇನ್ನೂ ಸಾಯುವ ಪ್ಲಾನಿಲ್ಲ. ಏಕೆ ಹೇಳಿದೆನೆಂದರೆ ಬದುಕುವುದು ಕಷ್ಟ, ಸಾಯುವುದು ಸುಲಭ, ಬಹಳ ಸುಲಭ. ಸುಲಭವೆಂದು ಹೇಳಿ ಸಾಯಲು ಹೋಗಬಾರದು. ಪೂರ್ಣವಾಗಿ ಬದುಕಬೇಕು. ವೇದ ಹೇಳುತ್ತೆ, ಸರಿಯಾಗಿ ಬಾಳಿದರೆ ಜಮದಗ್ನಿಗೆ ೩೦೦ ವರ್ಷ ಆಯಸ್ಸು ಅಂತ. ಜಮದಗ್ನಿ ಅಂದರೆ ಋಷಿಯಲ್ಲ, ಅಗ್ನಿಯನ್ನು ತನ್ನ ವಶದಲ್ಲಿಟ್ಟುಕೊಂಡವನು, ಅಗ್ನಿಹೋತ್ರ ಮಾಡುವವನು -ಗೃಹಸ್ಥ/ಗೃಹಿಣಿ - ಜಮದಗ್ನಿ ಎಂದು ಅರ್ಥ. ನಿಜವಾಗಿ ಅರ್ಥ ಇಟ್ಟುಕೊಂಡು ಮಾಡಿದರೆ ಅಂದರೆ ಅಗ್ನಿಯನ್ನು ವಶದಲ್ಲಿಟ್ಟುಕೊಂಡರೆ ೩೦೦ ವರ್ಷ ಬದುಕಬಹುದು. ಅಷ್ಟೊಂದು ಭಗವಂತ ನಮಗೆ ಹೇಳಿರುವಾಗ ನಾವು ಯಾಕೆ ಸಾಯಬೇಕು, ಸಾಯಬೇಕು ಅನ್ನಬೇಕು? ಆ ಸಾವು ಇದೆಯಲ್ಲಾ, ಅದು ನಿರ್ಲಜ್ಜ. ನೀವು ಕರೆದರೂ ಬರುತ್ತೆ, ಕರೆಯದಿದ್ದರೂ ಬರುತ್ತೆ. ಯಾವತ್ತೂ ನೀವು ಸಾಯಬೇಕು ಎಂದು ಆಸೆಪಡಲೇಬೇಡಿ. ಜೀವೇದ ಶರದಶ್ಶತಮ್ ಕನಿಷ್ಠ ಪಕ್ಷ ನೂರು ವರ್ಷ ಆದರೂ ಬದುಕಿರಬೇಕು, ನೂರು ವರ್ಷಕ್ಕಿಂತ ಹೆಚ್ಚುಕಾಲ ಬದುಕೋಣ. ಲೋಕಾರೂಢಿ 'ಶತಾಯುರ್ ವಯ ಪುರುಷಃ' ಅಂತ, ಒಬ್ಬ ಮನುಷ್ಯನ ವಯಸ್ಸು ನೂರು ವರ್ಷ, ನೂರು!  ಆಶ್ಚರ್ಯ ಪಡಬೇಡಿ, ನಾವು ಆಸ್ತಿಕರು, ಭಗವಂತನಲ್ಲಿ ನಂಬಿಕೆ ಇರುವವರು, ಜೀವನವನ್ನು ಪರಿಪಕ್ವವಾಗಿ ಇಟ್ಟುಕೊಳ್ಳಬೇಕು ಅನ್ನುವವರು, ನಾವು ಏಕೆ ಆಸೆ ಕಳೆದುಕೊಳ್ಳಬೇಕು? ರಷ್ಯಾದಲ್ಲಿ ಕೆಲವು ಪ್ರದೇಶಗಳಿವೆ, 'ಡಡ್ ಸೀ' ಅಂತ, ಸತ್ತ ಸಮುದ್ರ, ಅದು ಯಾವ ಕಾಲದಲ್ಲಿ ನೀರಿತ್ತೋ, ಈಗ ನೀರಿಲ್ಲ, ಅದರ ಸುತ್ತಮುತ್ತ ಎಲ್ಲಾ ಸಾವೇ! ಅಂತಹ ಕಡೆ ಕೂಡ ಒಬ್ಬ ಮುದುಕ ೧೯೦ ವರ್ಷ ಬದುಕಿದ್ದನಂತೆ. ತಿನ್ನಬಾರದ್ದೆಲ್ಲಾ ತಿಂದುಕೊಂಡು, ಕುಡಿಯಬಾರದ್ದೆಲ್ಲಾ ಕುಡಿದುಕೊಂಡು, ಮಾಡಬಾರದ್ದೆಲ್ಲಾ ಮಾಡಿಕೊಂಡು ೧೯೦ ವರ್ಷ ಬದುಕಿದ್ದ. ಅಂಥವನೇ ಅಷ್ಟು ಕಾಲ ಬದುಕಿದ್ದಾಗ ಪವಿತ್ರವಾಗಿ ಬಾಳುವ ನಮಗೇಕೆ ಸಾಧ್ಯವಿಲ್ಲ? ನಾವು ಸೋತುಬಿಡುತ್ತೇವೆ, ಅದೇ ಕಷ್ಟ, ಸೋಲಿನ ಮನೋಭಾವ ಇದೆಯಲ್ಲಾ, ನಿರಾಶಾವಾದ ಅದು ತುಂಬಾ ಕೆಟ್ಟದ್ದು. ನಾನು ದುರ್ಯೋಧನನ ಉದಾಹರಣೆ ಕೊಡುತ್ತೇನೆ. ಭೀಷ್ಮ ಹೋದರು, ದ್ರೋಣ ಹೋದರು, ಕರ್ಣನೂ ಹೋದ. ಆದರೆ ಶಲ್ಯ ಇನ್ನೂ ಇದ್ದಾನೆ, ಅವನು ಪಾಂಡವರನ್ನು ಜಯಿಸಿ ನನಗೆ ಗೆಲುವು ತಂದುಕೊಡುತ್ತಾನೆ ಎಂಬ ವಿಶ್ವಾಸ ಅವನಿಗೆ. ಶಲ್ಯನೂ ಹೋದ, ದುರ್ಯೋಧನನೂ ಸತ್ತ, ಅದು ಬೇರೆ ವಿಷಯ. ಬದುಕುವ ಅವನ ಆತ್ಮವಿಶ್ವಾಸ ಮೆಚ್ಚುವಂತಹುದು. ಮುಖ್ಯವಾಗಿ ನನ್ನ ಗುರು ಸ್ವಾಮಿ ಶ್ರದ್ಧಾನಂದಜೀಯವರು ಹೇಳುತ್ತಿದ್ದರು - Optimism is life, Pessimism is death itself!  - ಆಶಾವಾದ ನಿಜವಾದ ಜೀವನ, ನಿರಾಶಾವಾದ ಸಾವು! ಸಾವನ್ನು ಏಕೆ ಬಯಸಬೇಕು? ಅದು ಬಂದೇ ಬರುತ್ತೆ, ಬಂದಾಗ ಹೋಗೋಣ, ಸಾವು ಬಂದಾಗ ಸ್ವಾಗತಿಸೋಣ, ಆಗ ಯಮನಿಗೆ ನಮಸ್ಕರಿಸಿ ಹೊರಡೋಣ. ಯಮ ಅಂದರೆ ಕೋಣನ ಮೇಲೆ ಕುಳಿತುಕೊಂಡು ಜೀವ ತೆಗೆದುಕೊಂಡು ಹೋಗಲು ಬರುತ್ತಾನೆ ಅಂತಾರಲ್ಲ, ಅವನಲ್ಲ, ಸಂಪೂರ್ಣ ಜಗತ್ತನ್ನೇ ತನ್ನ ವಶದಲ್ಲಿಟ್ಟುಕೊಂಡಿದ್ದಾನಲ್ಲಾ, ಜಗನ್ನಿಯಾಮಕ ಭಗವಂತ, ಅವನು ಯಮ! ಅವನು ಅನ್ಯಾಯವಾಗಿ ಯಾರಿಗೂ ಸಾವು ಕೊಡುವುದಿಲ್ಲ, ಯಾವನ ಇಚ್ಛೆಯಿಂದಲೇ ಅಮೃತ ಸಿಕ್ಕುತ್ತೋ, ಯಾವನ ಇಚ್ಛೆಯಿಂದ ಸಾವು ಸಿಗುತ್ತದೋ ಆ ಯಮನಿಗೆ ನಮಸ್ಕಾರ! ಸಾವು, ಬಾಳು ಎರಡೂ ಅವನ ವಶದಲ್ಲೇ ಇದೆ, ಆ ಪರಮಾತ್ಮ ಯಾವ ಜೀವ ಎಷ್ಟು ಬಾಳಬೇಕು, ಬದುಕಬೇಕು ಅದನ್ನು ನಿರ್ಧರಿಸಿರುತ್ತಾನೆ, ಅದು ತೀರುವವರೆಗೂ ಸಾಯುವಹಾಗಿಲ್ಲ, ಬಾವಿಗೆ ಬಿದ್ದು, ನೇಣು ಹಾಕಿಕೊಂಡು ಮುಂಚೆಯೇ ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ, ನಿಜವಾದ ಸಾವಲ್ಲ, ಅಪಮೃತ್ಯು, ಅದು ಯಾರಿಗೂ ಬೇಡ, ಅದಾಗೇ ಸಾವು ಬಂದಾಗ ಬಾ ಮೃತ್ಯು, ಕರೆದುಕೊಂಡು ಹೋಗು ಎಂದು ಹೇಳುವ ಧೈರ್ಯ ನಮಗೆಲ್ಲಿ ಬರಬೇಕು! ಸ್ವಾಮಿ ದಯಾನಂದರಿಗೆ ಸಾವು ಬಂದಾಗ ಅವರು ಅಳುಕಲಿಲ್ಲ, ಭಗವಂತ, ನಿನ್ನ ಇಚ್ಛೆ, ಕರೆದುಕೊಂಡು ಹೋಗು ಎಂದರು. ಅವರಿಗೆ ಸಾಯಬೇಕೆಂದಿರಲಿಲ್ಲ. ಭಗವಂತನ ಇಚ್ಛೆಯಿದ್ದರಿಂದ ಸಾಯಲು ಸಿದ್ಧರಾದರು, ಅಷ್ಟೆ. ಬದುಕುವುದಕ್ಕೆ ಆ ಹಟ ಇರಬೇಕು. ಯಾವತ್ತೂ ಸಾಯಬೇಕೆಂದು ಬಯಸಬೇಡಿ. ಏಕೆಂದರೆ ಆ ಆಸೆ ಇದೆಯಲ್ಲಾ ಅದು ದುರಾಸೆ, ಅದು ನಮ್ಮ ನಿಜವಾದ ನಿಶ್ಚಯ ಶಕ್ತಿಯನ್ನೇ ಹಾಳುಮಾಡಿಬಿಡುತ್ತದೆ.

Sunday, May 22, 2011

"ಸಮಾನೋ ಮಂತ್ರ: ಸಮಿತಿ: ಸಮಾನೀ-ಕೆಲವು ಸಂದೇಹಗಳು


"ಸಮಾನೋ  ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ" ಲೇಖನವನ್ನು ಓದಿದ ಶ್ರೀ ಪಿ.ಎಸ್. ರಂಗನಾಥ್ ಇವರು ಕೆಲವು ಸಂಶಯಗಳನ್ನು ಬರೆದಿದ್ದಾರೆ. ಅದಕ್ಕೆ ನನ್ನ ಸಮಾಧಾನವನ್ನು ಕೋರಿದ್ದಾರೆ.  ಅವರ ಸಂಶಯಗಳಿಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ.
-ಹರಿಹರಪುರಶ್ರೀಧರ್

ನಿಮ್ಮ ಲೇಖನ "ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ" ಯನ್ನು ಓದಿದೆ. ನಿಮ್ಮ ಪ್ರಯತ್ನ ಶ್ಲಾಘನೀಯ. ಒಳ್ಳೊಳ್ಳೆ ವಿಚಾರಗಳನ್ನು ತಿಳಿಸುತ್ತಿರುವ ತಮಗೆ ದೇವರು ಸದಾಕಾಲ ಒಳ್ಳೆಯದನ್ನು ಮಾಡಲಿ ಎಂದು ನಾನು ಕೋರುತ್ತೇನೆ. ನನ್ನಲ್ಲಿ ಕೆಲ ಸಂಶಯಗಳು ಇವೆ. ಒಂದೊಂದಾಗಿ ನಿಮ್ಮಲ್ಲಿ ಪರಿಹರಿಸಿಕೊಳ್ತಿನಿ.ನಿಮ್ಮ ಉತ್ತರದ ನಂತರ ನನ್ನ ಮುಂದಿನ ಪ್ರಶ್ನೆ ಗಳನ್ನು ನಿಮ್ಮ ಮುಂದಿಡತ್ತೇನೆ.

-ಪಿ.ಎಸ್.ರಂಗನಾಥ್

·    ಸಂಶಯ: ನನ್ನಲ್ಲಿ ಕೆಲ ಸಂಶಯಗಳು ಇವೆ. ಒಂದೊಂದಾಗಿ ನಿಮ್ಮಲ್ಲಿ ಪರಿಹರಿಸಿಕೊಳ್ತಿನಿ

ಉ: ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಷ್ಟೆ. ಸಂಶಯ ಪರಿಹರಿಸುವಷ್ಟು ಸಮರ್ಥನಲ್ಲ.

·     ಪ್ರ: ಸಸ್ಯ, ಗಿಡ ಮರಗಳಿಗೆ ಜೀವ ಇದೆಯೇ?

ಉ: ಜೀವ ಇದೆ.

·     ಪ್ರ:ಹಸುವಿನ ಹಾಲು, ತುಪ್ಪ ಮತ್ತು ಮೊಸರನ್ನು ಸಸ್ಯಹಾರ ವರ್ಗದಲ್ಲಿ ಯಾಕೆ ಸೇರಿಸಿದ್ದಾರೆ?
ಉ: ಗೊತ್ತಿಲ್ಲ.ಅದರೆ ಕರು ಕುಡಿದು ಬಿಟ್ಟ ಹಾಲನ್ನು ಉಪಯೋಗಿಸುವುದರಿಂದ ಅದನ್ನು ಅಹಿಂಸಾತ್ಮಕ ಹಾಲು ಎಂದು ಹೇಳಬಹುದು.

·    ಪ್ರ: ರಸ್ತೆ ಅಗಲೀಕರಣ ಸಂಧರ್ಭದಲ್ಲಿ ನೂರಾರು ಮರಗಳನ್ನು ಕಡಿದಾಗ, ನಾವೆಲ್ಲರು ಹೇಳುವ ಮಾತು "ಮರಗಳ ಮಾರಣ ಹೋಮ" ಅಂತ ಅಥವ ರಸ್ತೆ ಅಗಲೀಕರಣಕ್ಕೆ ಮರಗಳ ಬಲಿ. ಮಾತನಾಡಲು ಬರದ ಮತ್ತು ಕೆಂಪು ರಕ್ತವಿಲ್ಲದ ಹಾಗು ಮೆದುಳೇ ಇಲ್ಲದ ಮರಗಳನ್ನು ಕಡಿದಾಗ ನಮ್ಮ ಮನ ಮಿಡಿಯುವುದೇಕೆ. ಅಥವ ನಾವೇ ಕೈಯಾರೆ ನೆಟ್ಟ ಒಂದು ಹೂ ಗಿಡ ಅಥವ ಹಣ್ಣಿನ ಗಿಡ ನಮ್ಮೆದುರುಗೆ ಬೆಳೆದು ನಿಂತಾಗ ನಮಗಾಗುವ ಆನಂದ ಅಷ್ಟಿಷ್ಟಲ್ಲ, ಯಾರಾದರು ಅದಕ್ಕೆ ಘಾಸಿ ಮಾಡಿದರೆ ಮನಸ್ಸು ಮುದುಡುವುದೇಕೆ?
ಉ: ಇದೆಲ್ಲ ಮಾನವೀಯತೆಯ ಲಕ್ಷಣಗಳಲ್ಲವೇ? ಬಹುಷ: ನಿಮ್ಮ ಮುಂದಿನ ಪ್ರಶ್ನೆ ಹೀಗಿರಬಹುದು. ತರಕಾರಿಯನ್ನು ಕೊಯ್ದಾಗ ಸಸ್ಯಕ್ಕೆ ಹಿಂಸೆಯಾಗುವುದಿಲ್ಲವೇ? ಬತ್ತ, ರಾಗಿ ಜೋಳ ಮುಂತಾದ ಸಸ್ಯಗಳನ್ನು ಕೊಯ್ದು ದವಸ ಧಾನ್ಯ ಪಡೆಯುವುದು ಹಿಂಸೆಮಾಡಿದಂತಲ್ಲವೇ? ಕೊತ್ತಂಬರಿ, ಕರಿಬೇವು ಎಲ್ಲವನ್ನೂ ಗಿಡ/ಮರದಿಂದ ಕೊಯ್ದು ಅವಕ್ಕೆ ಹಿಂಸೆಯುಂಟುಮಾಡುವಿದಿಲ್ಲವೇ? ಹೀಗೆ ಯೋಚಿಸುತ್ತಾ ಹೋದರೆ ಬಹಳ ಪ್ರಶ್ನೆಗಳು ಹುಟ್ಟುತ್ತವೆ.  ಹುಲಿ-ಸಿಂಹ ಗಳು ಒಂದು ಪ್ರಾಣಿಯನ್ನು ಕೊಂದು ಅದನ್ನು ತನ್ನ ಆಹಾರಮಾಡಿಕೊಳ್ಳುತ್ತವೆ. ಅದು ಸೃಷ್ಟಿ ನಿಯಮ. ಒಂದು ಪ್ರಾಣಿ ಮತ್ತೊಂದು ಪ್ರಾಣಿಯ ಆಹಾರ. ಮನುಷ್ಯನಾದರೋ ಕೆಲವು ಮರ/ಗಿಡ/ಬಳ್ಳಿಗಳನ್ನು ಮತ್ತು ಅದರ ಬೆಳೆಯನ್ನು ತನ್ನ ಆಹಾರ ಮಾಡಿಕೊಂಡಿದ್ದಾನೆ. ಹೌದು, ಒಂದು ಗಿಡ ತಾನೇ ತಾನಾಗಿ ಸಾಯುವುದಕ್ಕಿಂತ ಮುಂಚೆಯೇ ಮನುಷ್ಯನು ಅದರ ಆಯುಶ್ಯವನ್ನು ಮುಗಿಸಿ ಬಿಡುತ್ತಾನೆ. ಇನ್ನೂ ಬೇರೆ ರೀತಿಯಲ್ಲಿ ಯೋಚಿಸಿದಾಗ ಇರುವೆ, ಜಿರಲೆ, ಸೊಳ್ಳೆ, ನೊಣ, ಇಲಿ ಮುಂತಾದುವುಗಳನ್ನು ಕೊಲ್ಲುವಾಗ ಅದು ಹಿಂಸೆ ಎನಿಸುವುದಿಲ್ಲ. ಜಿರಲೆ ಔಷಧಿ ಸ್ಪ್ರೆ ಮಾಡಿದಾಗಲಂತೂ ನೂರಾರು ಹೆಣ ಉರುಳುತ್ತವೆ. ಇದೆಲ್ಲಾ ಮಾಡುವ ನಾವೆಲ್ಲರೂ ಪ್ರಾಣಿ ಹಿಂಸೆ ಮಾಡಿದಂತಾಗಲಿಲ್ಲವೇ? ಇಂತಹ ಸಂಶಯಗಳಿಗೆ ಸಮಾಧಾನ ಕಷ್ಟ. ಅಥವಾ ಚರ್ಚೆಯಿಂದ ಲೇ ಸಮಾಧಾನವಾಗುವುದೂ ಇಲ್ಲ. ಇಂತಾ ಸಂಶಯಗಳಿಗೆ ನನ್ನ ಸಮಾಧಾನ ಏನೆಂದರೆ……

ನಮ್ಮ ಆಹಾರಕ್ಕಾಗಿ ಮನುಷ್ಯನು ಪ್ರಾಣಿಯನ್ನು ಕೊಲ್ಲಬಾರದು. ಮನುಷ್ಯನು ಸಸ್ಯಾಹಾರಿ. ಆದರೆ ನಮಗೆ ಉಪಟಳ ಕೊಡುವ ಜಿರಲೆ, ಇರುವೆ,ಇಲಿ,ಇವುಗಳ ನಾಶ ಮಾಡದೆ ವಿಧಿಯಿಲ್ಲ-ನಮ್ಮ ನಿರಾಳ ಬದುಕಿಗಾಗಿ[ಆಹಾರಕ್ಕಾಗಿ ಅಲ್ಲ] ಅಂತೆಯೇ ಸಸ್ಯಾಹಾರ ಪಡೆಯಲು ಸಸ್ಯಗಳನ್ನು ಕೊಲ್ಲುವುದಕ್ಕಾಗಿಯೇ ಬೆಳೆಯುತ್ತೇವೆ.ಸಸ್ಯಗಳನ್ನು ಕೊಯ್ಯುವ ಪ್ರಕ್ರಿಯೆಯನ್ನು ಪ್ರಾಣಿಗಳನ್ನು ಕೊಲ್ಲುವ ಪ್ರಕ್ರಿಯೆಗೆ ಹೋಲಿಸಲಾಗದು.

ನನ್ನ ಸ್ವಭಾವ ತಿಳಿಸುವೆ. ನಮ್ಮ ಕಛೇರಿ ಆವರಣದಲ್ಲಿ ಸಾಕಷ್ಟು ಹೂ ಗಿಡ ಬೆಳೆದಿದ್ದೇವೆ. ಪ್ರತಿದಿನ ಸಾಕಷ್ಟು ಹೂ ಅರಳುತ್ತವೆ. ನಮ್ಮ ಕಛೇರಿಯ ಸಿಬ್ಬಂಧಿಗಳು ಅವುಗಳನ್ನು ಕೊಯ್ದು ದೇವರ ಫೋಟೋ ಗಳಿಗೆ ಅಲಂಕರಿಸುತ್ತಾರೆ.ನಾನು ಅವರಲ್ಲಿ ಸಾಮಾನ್ಯವಾಗಿ ಹೇಳುತ್ತೇನೆ. “ ಗಿಡಗಳಲ್ಲಿ ಹೂ ಅರಳಿದ್ದಾಗ  ಅವು  ಗಾಳಿಗೆ ತೂಗುತ್ತಿದ್ದರೆ ಅವನ್ನು ನೋಡಲು ಚೆಂದವೋ? ಅಥವಾ ಕಿತ್ತ ಹೂ ಸ್ವಲ್ಪ ಹೊತ್ತಿನಲ್ಲಿ ಬಾಡಿ ದೇವರ ಪಟದ ಮೇಲೆ ಮುದುಡಿಕೊಳ್ಳುವ ಚಿತ್ರಣ ಅಂದವೋ? ಹಾಗಂತ ಯಾರೂ ಗಿಡದಿಂದ ಹೂ ಕೀಳದೇ ಇರುವುದಿಲ್ಲ. ಆದರೆ ಹೂ ವು ಗಿಡದಲ್ಲಿದ್ದರೇನೇ ಚೆಂದ. ಪೈರು ಬಂದಾಗ ಬೆಳೆಕೊಯ್ದು ದವಸ ಧಾನ್ಯವನ್ನು ಆಹಾರಕ್ಕೆ ಪಡೆಯುವುದೇ ಯೋಗ್ಯ.

ಇವೆಲ್ಲಾ ನನ್ನ ಭಾವನೆಗಳು. ಶ್ರೀ ಸುಧಾಕರಶರ್ಮರಂತವರು ಸೂಕ್ತ ಉತ್ತರ ಕೊಡಬಲ್ಲರು. ಆದರೆ ಶರ್ಮರಿಗೆ ಆರೋಗ್ಯ ಉತ್ತಮವಾಗಿಲ್ಲ. ಸಧ್ಯಕ್ಕೆ ಶರ್ಮರು ಉತ್ತರಿಸಲಾರರು. ಬೇರೆ ಚಿಂತಕರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುವುದು ಸೂಕ್ತವಾಗಿದೆ.

Thursday, May 19, 2011

ಯೋಚಿಸಲೊ೦ದಿಷ್ಟು...೩೪

೧.ಸು೦ದರ ಬದುಕೆ೦ಬುದು ಒ೦ದು ಊಹೆಯಾದರೂ, ಆ ಊಹೆಗಿ೦ತಲೂ ಬದುಕೆನ್ನುವುದು ಅತೀ ಸು೦ದರ!!

೨. ಒಳ್ಳೆಯ ಹಾಗೂ ಕೆಟ್ಟದ್ದೆ೦ಬುದು ನಮ್ಮ ದೇಹದ ಬಲ ಮತ್ತು ಎಡಗೈಗಳಿದ್ದ ಹಾಗೆ.. ಅವು ತಮ್ಮದೇ ಆದ ಉದ್ದೇಶವನ್ನು ಸಾಧಿಸುತ್ತವೆ!!

೩. ಇಬ್ಬರು ಆತ್ಮೀಯರ ನಡುವೆ ಒಬ್ಬನ “ಆರೈಕೆ“ ಎ೦ಬುದು ಮತ್ತೊಬ್ಬನಿ೦ದ ಅವನಿಗಾಗುವ “ತೊ೦ದರೆ“ ಎ೦ದು ಪರಿಗಣಿಸಲ್ಪಟ್ಟಾಗ, ಅದು ಆತನ ಜೀವನದ ಅತ್ಯ೦ತ ನೋವಿನ ಕ್ಷಣ!

೩. ಸತ್ಯದ ಪಾಲನೆ, ಸತತ ಪ್ರಯತ್ನ ಹಾಗೂ ನ೦ಬಿಕೆಯನ್ನು ಕಾಪಿಟ್ಟುಕೊಳ್ಳುವುದು ಜೀವನದ ಯಶಸ್ಸಿಗೆ ಕಾರಣವಾಗುತ್ತವೆ!

೪. ಕೇವಲ ನಾವೇ ಮಾತಾಡುತ್ತಿರುವಾಗ, ನಮಗೆ ಗೊತ್ತಿರುವುದನ್ನೇ ಹೇಳುತ್ತಿರುತ್ತೇವೆ.. ಆದರೆ ಇನ್ನೊಬ್ಬರು ಹೇಳುವುದನ್ನು ಕೇಳಿಕೊಳ್ಳುತ್ತಿದ್ದರೆ ಗೊತ್ತಿರದ ವಿಚಾರವನ್ನು ತಿಳಿದುಕೊಳ್ಳಬಹುದಾದ ಸಾಧ್ಯತೆಗಳು ಹೆಚ್ಚು!!

೫. ಹಿ೦ದುಳಿಯುವುದೇನೂ ತಪ್ಪಲ್ಲ.! ಮ೦ದಗತಿಯಲ್ಲಿ ಸಾಗುತ್ತಾ ಸತ್ಯ, ಧರ್ಮ ಹಾಗೂ ನ್ಯಾಯದ ಹಿ೦ಬಾಲಕರಾದ ಸಜ್ಜನರು ಕೊನೆಗೊಮ್ಮೆ ವಿಜಯದ ಮುಗುಳ್ನಗೆಯನ್ನು ಬೀರುತ್ತಾರೆ!- ಡಾ|| ವೀರೇ೦ದ್ರ ಹೆಗ್ಗಡೆ

೬. ತನ್ನಲ್ಲಿ ಶ್ರಧ್ಧೆ; ಪ್ರರಲ್ಲಿ ಶ್ರಧ್ಧೆ; ತನ್ನನ್ನು ಹಾಗೂ ಪರರನ್ನೂ ಮೀರಿರುವ ಅನ೦ತ ಶಕ್ತಿಗಳ ಕಲ್ಯಾಣ ಪಥದಲ್ಲಿನ ಶ್ರಧ್ಧೆ; ಈ ಪರಸ್ಪರ ಶ್ರಧ್ಧೆಗಳನ್ನು ಹೊ೦ದಿದ ವ್ಯಕ್ತಿಯು ವಾಮನನಾದರೂ ತ್ರಿವಿಕ್ರಮನಾಗುತ್ತಾನೆ!- ವಿ.ಕೃ.ಗೋಕಾಕ್

೭.ಕೆಲವು ರೋಗಗಳಿಗೆ ನಾವು ಆತಿಥ್ಯ ನೀಡುತ್ತೇವೆ.. ಕೆಲವು ರೋಗಗಲು ಅಭ್ಯಾಗತರ೦ತೆ ಬ೦ದು ನಮ್ಮಲ್ಲಿಯೇ ನೆಲೆಸಿಬಿಡುತ್ತವೆ!!- ಎಮ್.ವಿ.ಸೀತಾರಾಮಯ್ಯ

೮.ಮೀತಿ ಮೀರಿದ ಶೇಖರಣೆಯಿ೦ದ ಶ್ರೀಮ೦ತರಾಗುವುದು ಹೇಗೆ ಹಿತವಲ್ಲವೋ ಹಾಗೆಯೇ ಮಿತಿಮೀರಿದ ಮಿತವ್ಯಯದಿ೦ದ ಶ್ರೀಮ೦ತರಾಗುವುದೂ ಹಿತವಲ್ಲ!!- ಎಡ್ಮ೦ಡ್ ಬರ್ಕ್

೯.ಜನರಿ೦ದ ದೂರ ಹೋಗದ೦ತೆ, ಅವರಿಗೆ ನಿಲುಕುವ೦ತೆ ಬೆಳೆಯುವುದೇ ಬೆಳವಣಿಗೆಯ ನಿಜವಾದ ಲಕ್ಷಣ.. ಏಕೆ೦ದರೆ ನಾವು ವಾಸಿಸುವುದು ಜನರ ಮಧ್ಯದಲ್ಲಿಯೇ!!- ಆರ್.ಎಮ್.ಹಡಪದ್

೧೦. ಯಾವುದಾದರೂ ಕೆಲಸಗಳಲ್ಲಿ ತೊಡಗಿಕೊ೦ಡಿರುವುದು ಮನದಲ್ಲಿನ ಬೇಗುದಿಯನ್ನು ಕಡಿಮೆಗೊಳಿಸುತ್ತದೆ ಹಾಗೂ ಅಸ೦ತೋಷವು ನಮ್ಮಲ್ಲಿ ಸದಾ ನೆಲೆಸುವುದನ್ನು ತಡೆಯುತ್ತದೆ.

೧೧. ನಿನ್ನೆ ಮತ್ತು ನಾಳೆಗಳ ನಡುವಿನ ಈ ವರ್ತಮಾನದಲ್ಲಿಯೇ ಏನನ್ನಾದರೂ ಮೌಲ್ಯಯುತವಾದುದ್ದನ್ನು ಸಾಧಿಸಬೇಕು!

೧೨. ಕೆಲವೊಮ್ಮೆ ಜೀವನವೆ೦ದರೆ ನಿರೀಕ್ಷಿಸಿದ್ದನ್ನು ಸಾಧಿಸಲಾಗದ ಹಾಗೂ ಅನಿರೀಕ್ಷಿತವನ್ನು ಸಾಧಿಸಬಹುದಾದ ಒ೦ದು ವಿಪರ್ಯಾಸ!

೧೩. ಕಾಲವು ಎಲ್ಲವನ್ನೂ ಮರೆಸಬಹುದಾದರೂ ಜೀವನದಲ್ಲಿ ಕೆಲವೊ೦ದು ವ್ಯಕ್ತಿಗಳು ಮಾತ್ರವೇ ತಮ್ಮ ಚಟುವಟಿಕೆಗಳಿ೦ದ ನಾವು ಸಮಯವನ್ನೂ ಮರೆಯುವ೦ತೆ ಮಾಡುತ್ತಾರೆ!!

೧೪. ನಾವು ಮತ್ತೊಬ್ಬರ ಯಶಸ್ಸನ್ನು ಕ೦ಡು ಮತ್ಸರಿಸಿದಲ್ಲಿ ಅದು ನಮ್ಮ ಜೀವನದ “ವೈಫಲ್ಯ“ವೆ೦ದೂ , ನಮ್ಮ ಯಶಸ್ಸಿಗೆ ಮತ್ತೊಬ್ಬರು ಕರುಬಿದರೆ ಅದನ್ನು ನಮ್ಮ ಜೀವನದ “ಸಾಫಲ್ಯ“ವೆ೦ದೂ ಪರಿಗಣಿಸಬಹುದು!

೧೫. ಸಾಧಿಸಿದ ಯಶಸ್ಸಿನ ಬಗ್ಗೆ ಅತಿಯಾಗಿ ಚರ್ಚಿಸುವುದು ಹಾಗೂ ವೈಫಲ್ಯಗಳನ್ನು ಕುರಿತೂ ಅತಿಯಾಗಿ ಚಿ೦ತಿಸುವುದು ನಮ್ಮ ಭವಿಷ್ಯಕ್ಕೆ ತೊಡಕಾಗಿ ಪರಿಣಮಿಸುತ್ತದೆ!

Tuesday, May 17, 2011

ವೇದೋಕ್ತ ಜೀವನ ಪಥ: ಮಾನವ ಧರ್ಮ -3

ಅದೇ ಅಥರ್ವವೇದ ಮತ್ತೆ ಹೇಳುತ್ತಲಿದೆ:


ಉದ್ಯಾನಂ ತೇ ಪುರುಷ ನಾವಯಾನಂ ಜೀವಾತುಂ ತೇ ದಕ್ಷತಾತಿಂ ಕೃಣೋಮಿ |
ಆ ಹಿ ರೋಹೇಮಮಮೃತಂ ಸುಖಂ ರಥಮಥ ಜಿರ್ವಿರ್ವಿದಥಮಾ ವದಾಸಿ ||
(ಅಥರ್ವ. ೮.೧.೬.)


     [ಪುರುಷ] ಓ ದೇಹಧಾರಿ ಜೀವ! [ತೇ ಯಾನಂ ಉತ್] ನಿನ್ನ ಮಾರ್ಗ ಮೇಲಕ್ಕಿದೆ. [ನ ಆವಯಾನಮ್] ಕೆಳಕ್ಕೆ ಹೋಗುವುದಲ್ಲ. [ತೇ] ನಿನಗಾಗಿ, [ಜೀವಾತುಮ್] ಜೀವನಕಲೆಯನ್ನೂ, [ದಕ್ಷತಾತಿಮ್] ಜೀವನಸಾಮರ್ಥ್ಯವನ್ನೂ, [ಕೃಣೋಮಿ] ಉಂಟುಮಾಡುತ್ತೇನೆ. [ಇಮಮ್ ಅಮೃತಂ ಸುಖಂ ರಥಮ್] ಈ ಜೀವಂತವಾದ ಸುಖಕರವಾದ ಜೀವನರಥವನ್ನು, [ಹಿ ಆರೋಹ] ನಿಜವಾಗಿ ಏರು. [ಅಥ] ಆಮೇಲೆ [ಜಿರ್ವಿ] ವಾರ್ಧ್ಯಕ್ಯ ಪಡೆದು [ವಿದಥಮ್] ಜ್ಞೇಯವಾದ ಸತ್ಯಜ್ಞಾನವನ್ನು, [ಆ ವದಾಸಿ] ಪ್ರಸರಿಸುತ್ತಾ ಓಡಾಡುವೆ.

     ಹೌದು, ಧರ್ಮದ ಮಾರ್ಗ ಧಾರಕಮಾರ್ಗ, ಎತ್ತಿ ಹಿಡಿಯುವ ಮಾರ್ಗ. ಪತನಕ್ಕಿಲ್ಲಿ ಅವಕಾಶವೇ ಇಲ್ಲ. ಇಹದಲ್ಲಿ ಸೊಗಸಾಗಿ ಬಾಳಿ, ಇತರರನ್ನೂ ಸೊಗಸಾಗಿ ಬಾಳಿಸಿ, ಪರದಲ್ಲಿ ಅವಿಚ್ಛಿನ್ನ ಆನಂದವನ್ನು ಪಡೆದುಕೊಳ್ಳುವ ಜೀವನಕಲೆಯ ಮತ್ತು ಜೀವನಸಾಮರ್ಥ್ಯದ ದಿವ್ಯಮಾರ್ಗ. ನಾವು ಹಿಂದೆ ಹೇಳಿರುವಂತೆ, ಧರ್ಮವಿರುವುದು ಮಾನವ ಮಾತ್ರರಿಗೆಲ್ಲಾ ಒಂದೇ. ಅದು ಮತಗಳಂತೆ ಸಾವಿರಾರು ಇಲ್ಲ. ಆದರೂ ವೇದಗಳಲ್ಲಿ ಧರ್ಮ ಎಂಬ ಶಬ್ದವನ್ನು ಏಕವಚನ, ಬಹುವಚನ ಎರಡರಲ್ಲಿಯೂ ಬಳಸಲಾಗಿದೆ. ಉದಾಹರಣೆಗೆ, 'ತಾನಿ ಧರ್ಮಾಣಿ ಪ್ರಥಮಾನ್ಯಾಸನ್' (ಯಜು.೩೧.೧೬.) - ಅವು ಪ್ರಥಮ ಧರ್ಮಗಳಾದವು, ಎಂಬಲ್ಲಿ ಬಹುವಚನಪ್ರಯೋಗವಿದೆ. 'ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ'(ಋಕ್. ೫.೬೩.೭.) - ಧರ್ಮದಿಂದ ಸ್ನೇಹಪರ ಹಾಗೂ ವರಣೀಯ ನರ-ನಾರಿಯರು ಜ್ಞಾನಿಗಳಾಗುತ್ತರೆ, ಎಂಬಲ್ಲಿ ಏಕವಚನ ಪ್ರಯೋಗವಿದೆ. ಬಹುವಚನ ಪ್ರಯೋಗ ಕಂಡು ಪಾಠಕರು ವೇದಗಳು ಅನೇಕ ಧರ್ಮಗಳನ್ನು ಉಪದೇಶಿಸುತ್ತವೆ ಎಂದು ಭ್ರಾಂತರಾಗುವ ಸಂಭವವಿದೆ. ಆದರೆ, ಅಂತಹ ಭ್ರಾಂತಿಗೆ ಅವಕಾಶವಿಲ್ಲ. ಏಕೆಂದರೆ, ನಾವು ಈಗ ಯಾವ ಭಾವನೆಯನ್ನು ಧರ್ಮ ಎಂಬ ಶಬ್ದವನ್ನು ಗ್ರಹಿಸುತ್ತೇವೋ, ಅದನ್ನು ಸೂಚಿಸಲು ವೇದಗಳು ಋತ ಎಂಬ ಶಬ್ದವನ್ನು ಬಳಸುತ್ತವೆ. ಧರ್ಮ ಎಂಬ ಶಬ್ದದ ಅರ್ಥ ಧಾರಕ ಎಂದು. ವಸ್ತುತಃ ಸದ್ಗುಣವೇ ಧಾರಕತತ್ವ. ಅಂತಹ ಸದ್ಗುಣ ಒಂದೇ ಅಲ್ಲ ಇರುವುದು. ಅನೆಕ ಸದ್ಗುಣಗಳಿವೆ. ಯಾವುದಾದರೂ ಸದ್ಗುಣವನ್ನು ಸೂಚಿಸುವಾಗ ವೇದ ಧರ್ಮ ಎಂಬ ಶಬ್ದವನ್ನೂ, ಅನೇಕ ಧರ್ಮಗಳನ್ನು ಸೂಚಿಸಬೇಕಾದಾಗ ಧರ್ಮಗಳು ಎಂಬ ಶಬ್ದವನ್ನೂ ಉಪಯೋಗಿಸುತ್ತವೆ. ಎಲ್ಲ ಧರ್ಮಗಳು ಎಂದರೆ ಆತ್ಮೋದ್ಧಾರಕವಾದ ಸದ್ಗುಣಗಳ ಮೊತ್ತವನ್ನು, ಒಟ್ಟನ್ನು ಸೂಚಿಸುವಾಗ, ವೇದ ಋತ ಎಂಬ ವ್ಯಾಪಕ ಶಬ್ದವನ್ನು ಬಳಸುತ್ತದೆ. ವೇದಗಳ ಶೈಲಿಯಲ್ಲಿ ಧರ್ಮ ಒಂದು ಸದ್ಗುಣವಾದರೆ, ಋತ ಸಮಸ್ತ ಸದ್ಗುಣಗಳ ರಾಶಿ. ಸಾರ್ವಭೌಮ ಈಶ್ವರೀಯ ವಿಧಾನವೇ, ಆತ್ಮನ ಉನ್ನಾಯಕವಾದ ಜೀವನಕ್ರಮವೇ ಋತ. ಆ ಈಶ್ವರೀಯ ವಿಧಾನ ವೇದಗಳಲ್ಲಿ ಪ್ರಕಟವಾಗಿರುವುದರಿಂದ, ವೇದಗಳನ್ನೂ ಕೂಡ ಋತ ಎಂದು ನಿರ್ದೇಶಿಸುವುದುಂಟು. ಸುಲಭವಾದ ಮಾತುಗಳಲ್ಲಿ ಹೇಳಬೇಕಾದರೆ, ಆತ್ಮೋದ್ಧಾರದ ಸಮಸ್ತ ಸದ್ಗುಣಗಳ ಸಂಘಾತವೇ ಋತ, ಈಗಿನ ಬಳಕೆಯ ಮಾತಿನಲ್ಲಿ ಅದೇ ಧರ್ಮ. ಆ ಸದ್ಗುಣಗಳು ಜೀವನಕ್ಕಿಳಿದು ಬಂದಾಗ, ಅವೆಲ್ಲಾ ಸೇರಿ ಒಂದು ಜೀವನಮಾರ್ಗಕ್ಕೆ ರೂಪ ಕೊಡುತ್ತವೆ.
******************************

Monday, May 16, 2011

ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ

ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ  ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ "ವಿಶ್ವಗುರುವಿನ" ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ "ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದ್ದರೆಂದೂ" ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗ್ಭವೇತ್"-ಎಲ್ಲರೂ ಸುಖವಾಗಿರಬೇಕು........, ಯಾರಿಗೂ ದು:ಖ ಬರುವುದು ಬೇಡ". ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!
ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು " ಇದೇನೋ ನೀನು "ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!" ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ" ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ?
ಅವರು ನಿರುತ್ತರರಾಗಿದ್ದರು.
ಬ್ರಾಹ್ಮಣರೆಂದು ಕರೆಸಿಕೊಳ್ಳುವ , ಅಲ್ಪಸ್ವಲ್ಪ ಸಾಮಾಜಿಕ  ಅರಿವು ಹೊಂದಿರುವ ಇವರೇ ಹೀಗೆ ಚಿಂತಿಸಿದರೆ ಹಿಂದುಸಮಾಜವು  ಇನ್ನೂ ಯಾವ ಬಗೆಯ ಅಜ್ಞಾನದ ಸುಳಿಯಲ್ಲಿ ಸಿಲುಕಿ ಬಳಲುತ್ತಿರಬಹುದೆಂದು ಚಿಂತೆಗೊಳಗಾಗುತ್ತೇನೆ. ಚಿಂತೆಗೆ ಕಾರಣವಿದೆ. ಯಜ್ಞೋಪವೀತವನ್ನು ಧಾರಣೆ ಮಾಡಿರುವ ಎಲ್ಲರಿಗೂ ವೈಜ್ಞಾನಿಕವಾಗಿ ಅದರ ಮಹತ್ವವನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ, ಸಂಧ್ಯಾವಂದನೆ ಮಾಡುವ, ಗಾಯತ್ರಿ ಮಂತ್ರ ಜಪಿಸುವ, ಊಟಮಾಡುವಾಗಿನ ಪರಿಶಂಚನೆಗೂ ಅರ್ಥ ವಿವರಣೆ ಕೊಟ್ಟು ಅದರಿಂದಾಗಿ ನಮ್ಮ  ಆರೋಗ್ಯದ ಮೇಲಾಗುವ ಸತ್ಪರಿಣಾಮದ ಬಗೆಗೆ ಅರಿವು ಮಾಡಿಸಲಾಗುತ್ತದೆ.ಆದರೆ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗ್ಭವೇತ್"- ಎಂದು ಪ್ರಾರ್ಥಿಸುವ ನಾವು ನಮ್ಮೊಡನೆ ಉಪನಯನ ಸಂಸ್ಕಾರದಿಂದ, ವೇದಾಧ್ಯಯನದಿಂದ ಎಷ್ಟು ಜನ ನಮ್ಮ ಸೋದರರು ವಂಚಿತರಾಗಿದ್ದಾರೆಂಬ ಬಗ್ಗೆ ಯೋಚಿಸಿದ್ದೇವೆಯೇ?  " ಆತ್ಮವತ್ ಸರ್ವ ಭೂತೇಶು" ಎನ್ನುವ ನಮಗೆ ಮಾನವ ಜಾತಿಯಲ್ಲೂ ಒಂದುಬಹುದೊಡ್ದ ಭಾಗ ಈ ಸಂಸ್ಕಾರಗಳಿಂದ ವಂಚಿತವಾಗಿದೆ, ಎಂದು ಅನಿಸುವುದಿಲ್ಲವೇ?ಅವರಿಗೆ ಉತ್ತಮ ಆರೋಗ್ಯ ಬೇಡವೇ? ಉತ್ತಮ ಬದುಕು ಬೇಡವೇ?
ನನಗೆ ಚಿಂತೆ ಕಾಡಲೂ ಇನ್ನೂ ಕಾರಣಗಳಿವೆ. ವೇದಾಧ್ಯಯನವನ್ನು ಮಾಡಿರುವ ಅದೆಷ್ಟು ವಿದ್ವಾಂಸರುಗಳಿಲ್ಲ! ಅವರಲ್ಲಿ ಈ ಚಿಂತೆ ಯಾಕೆ ಕಾಡುತ್ತಿಲ್ಲ? ನಮ್ಮ ವೈದಿಕ ಪರಂಪರೆಯಿಂದ ಒಂದು ಆರೋಗ್ಯಯುತವಾದ ಜೀವನ ನಡೆಸಬಹುದೆಂದಾದರೆ ಆ ಜೀವನ ಕೆಲವರಿಗೆ ದಕ್ಕಿದರೆ ಸಾಕೇ?

ಸಮಾನೋ ಮಂತ್ರ:  ಸಮಿತಿ: ಸಮಾನೀ
ಸಮಾನಂ ವ್ರತಂ ಸಹ ಚಿತ್ತಮೇಷಾಮ್|
ಸಮಾನೇನ ವೋ ಹವಿಷಾ ಜುಹೋಮಿ
ಸಮಾನಂ ಚೇತೋ ಅಭಿಸಂವಿಶಧ್ವಮ್||
[ಅಥರ್ವ-೬.೬೪.೨]

ಅಥರ್ವ ವೇದ ಈ ಮಂತ್ರ ಏನು ಹೇಳುತ್ತದೆ?

ಸಮಾನೋ ಮಂತ್ರ: = ಮಾನವರೆಲ್ಲರ ಮಂತ್ರವು ಸಮಾನವಾಗಿರಲಿ
ಸಮಿತಿ: ಸಮಾನೀ= ಸಮಿತಿಯು ಸಮಾನವಾಗಿರಲಿ[ ಸಮಿತಿ ಎಂದರೆ ಸಭೆ, ಕೂಟ, ಸಂಸ್ಥೆ,ಸಮಾಜ,ಸೇರುವಿಕೆ]
ಸಮಾನಂ ವ್ರತಂ=ವ್ರತವೂ ಸಮಾನವಾಗಿರಲಿ[ವ್ರತವೆಂದರೆ ಕಟ್ಟು, ಕಟ್ಟಳೆ,ನಿಯಮ,ಶಾಸನ,ವಿಧಿ, ಯಜ್ಞ,ಪೂಜೆ,ಧಾರ್ಮಿಕ ಪ್ರತಿಜ್ಞೆ ]

ಸಹ ಚಿತ್ತಮೇಷಾಮ್= ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ
ವ:=ನಿಮ್ಮೆಲ್ಲರಿಗೂ
ಸಮಾನೇನ  ಹವಿಷಾ=ಸಮಾನವಾದ ಖಾದ್ಯ,ಪೇಯಗಳನ್ನೇ
ಜುಹೋಮಿ=ದಾನ ಮಾಡುತ್ತೇನೆ
 ಸಮಾನಂ ಚೇತ:=ಸಮಾನವಾದ ಚೈತನ್ಯದಲ್ಲಿಯೇ
ಅಭಿಸಂವಿಶಧ್ವಮ್= ಎಲ್ಲೆಡೆಯಿಂದಲೂ ಪ್ರವೇಶಿಸಿರಿ



ಈ ಮಂತ್ರದ ಅರ್ಥವನ್ನು ತಿಳಿದಾಗ ಆ ಭಗವಂತನೇ ನೀಡಿರುವ  ಸವಲತ್ತನ್ನೂ ಕೂಡ ನಾವು ಸರಿಯಾಗಿ ಎಲ್ಲರೂ ಅನುಭವಿಸಲು ಸಾಧ್ಯವಾಗಿಲ್ಲವಲ್ಲಾ! [ಸುಪ್ರೀಮ್ ಕೋರ್ಟ್ ಆದೇಶವಿದ್ದರೂ ಸಹ ಸರ್ಕಾರವು  ಕಾರ್ಯಕ್ರಮವನ್ನು ಅನುಷ್ಠಾನ ಮಾಡದಿರುವಂತೆ]
ಯಾಕೆ ಹೀಗೆ? ಯಾಕೆ ಹೀಗೆ? ಚಿಂತೆ ಕಾಡುತ್ತಿರುವುದು ತಪ್ಪೇ?
ಸಾಮಾಜಿಕ ಸಾಮರಸ್ಯದ ಬಗೆಗೆ ಚಿಂತನೆ ಮಾಡುವಾಗ  ನಿಜವಾಗಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಅದು ಮಾಂಸಾಹಾರ ಸೇವನೆ ಯ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸುವುದೇನೂ ಕಷ್ಟವಿಲ್ಲ. ಆದರೂ ಬೆಳೆದುಬಂದಿರುವ ರೂಢಿಯಿಂದ ಹಲವರು ಮಾಂಸಾಹಾರದ ಅಭ್ಯಾಸವನ್ನು ಮಾಡಿಕೊಂಡಿರುವುದು ಸುಳ್ಳಲ್ಲ. ಮಾಂಸಾಹಾರಿ ಮಿತ್ರರನ್ನು ಬಹಳ ಆತ್ಮೀಯವಾಗಿ ವಿಚಾರಿಸಿದಾಗ ಅವರಿಂದ ಪ್ರಾಮಾಣಿಕವಾಗಿ ಬರುವ ಉತ್ತರವೇನು ಗೊತ್ತೇ? “ ಬಾಯಿ ಚಪಲ ದಿಂದಾಗಿ ಮಾಂಸಾಹಾರ ಬಿಡಲು ಆಗುತ್ತಿಲ್ಲ” ಸಸ್ಯಾಹಾರವು ಆರೋಗ್ಯಕ್ಕೆ ಉತ್ತಮವೆಂದು ಹೇಳಿದರೆ ಉತ್ತರ ಒಂದು ಸಿದ್ಧವಾಗಿರುತ್ತದೆ” ಬಹುತೇಕ  ವಿಜ್ಞಾನಿಗಳು ಭಾರತೀಯರಲ್ಲ. ಪಾಶ್ಚಿಮಾತ್ಯರಲ್ಲಿ ಮಾಂಸಾಹಾರ ಸರ್ವೇ ಸಾಮಾನ್ಯ. ಆದ್ದರಿಂದ ಮಾಂಸಾಹಾರಿ ವಿಜ್ಞಾನಿಗಳಿರಲಿಲ್ಲವೇ?
ನಿಜವಾಗಿ ಪಾಶ್ಚಿಮಾತ್ಯ ವಿಜ್ಞಾನಿಗಳ ಆಹಾರ ಕ್ರಮವನ್ನು ಇವರೇನೂ ಅಧ್ಯಯನ ಮಾಡಿಲ್ಲ. ಆದರೂ ಅವರೆಲ್ಲರನ್ನೂ ಮಾಂಸಾಹಾರಿಗಳೆಂದು ಪರಿಗಣಿಸಿ ಮಾಂಸಾಹಾರ ಸೇವನೆಗೂ ಜ್ಞಾನಕ್ಕೂ  ಸಬಂಧವಿಲ್ಲ” ಎಂಬ ಸ್ವಂತ ತೀರ್ಮಾನಕ್ಕೆ ಬಂದು ಅದಕ್ಕೇ ಅಂಟಿಕೊಳ್ಳುವರಿಗೇನೆನ್ನಬೇಕು?
ಯಜ್ಞಕ್ಕೆ ಅಧ್ವರ ಎಂಬ ಸಮಾನ ಪದವೂ ಇದೆ. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದಾಯ್ತು. ಹಾಗಾಗಿ ಹಿಂಸೆ ಮಾಡದೆ ,ಪ್ರಾಣಿಯನ್ನು ಕೊಲ್ಲದೆ ಮಾಂಸಾಹಾರ ಸೇವನೆ ಸಾಧ್ಯವೇ? ಆದ್ದರಿಂದ ಯಜ್ಞವನ್ನು ಮಾಡಬೇಕಾದ ಎಲ್ಲಾ ಮಾನವರೂ ಕೂಡ ಸಸ್ಯಾಹಾರಿಗಳೇ ಆಗಿರಬೇಕಲ್ಲವೇ?
ಈ ಮಾತು ಹೇಳುವಾಗ  ಮಾಂಸಪ್ರಿಯರು ಕೂಡಲೇ ಉತ್ತರಿಸುತ್ತಾರೆ “ ನಾವು ಕುರಿ-ಕೋಳಿ ಕೊಂದು ತಿನ್ನದಿದ್ದರೆ , ಅವುಗಳ ಸಂಖ್ಯೆ ಎಷ್ಟಾಗುತ್ತಿತ್ತು ಗೊತ್ತಾ?
ಎಂತಹಾ ಪ್ರಶ್ನೆ!
ಸಿಂಹ, ಹುಲಿ ಇತ್ಯಾದಿ ಪ್ರಾಣಿಗಳ ಆಹಾರವೇ ಮತ್ತೊಂದು ಪ್ರಾಣಿಯ ಮಾಂಸ. ಸಿಂಹ, ಹುಲಿಗಳಿಗೆ  ಸಸ್ಯಾಹಾರ ಉಣಿಸಲು ಸಾಧ್ಯವೇ? ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಆಹಾರ. ಆದರೆ ಯಾವ ಪ್ರಾಣಿಯೂ ಮನುಷ್ಯನಿಗೆ ಆಹಾರವಾಗಬಾರದು. ಮನುಷ್ಯನ ದೇಹದ ರಚನೆಯೂ ಕೂಡ ಸಸ್ಯಾಹಾರಕ್ಕೇ ರಚಿತವಾಗಿದ್ದು.
ಇಂತಹ ಸೂಕ್ಷ್ಮ ವಿಷಯಗಳ ಬಗೆಗೆ ಚಿಂತನ-ಮಂಥನ ಮಾಡಬಾರದೇ?
ಬದಲಾಗಬೇಕಾದವರು ಕೇವಲ ಒಂದು ವರ್ಗವಲ್ಲ. ವೇದಜ್ಞಾನವನ್ನು ಹೊಂದಿರುವವರು ವೇದಜ್ಞಾನವಿಲ್ಲದ ಆದರೆ ಅದನ್ನು ಕಲಿಯುವ ಆಸಕ್ತಿ ಇರುವ ಯಾವುದೇ ವ್ಯಕ್ತಿಗಾಗಲೀ ಕಲಿಸಿಕೊಡಲು ಮುಂದೆ ಬರಬೇಕು, ಅಂತೆಯೇ ವೇದಜ್ಞಾನವಿಲ್ಲದವರು ವೇದಜ್ಞಾನವನ್ನು ಪಡೆಯಲು ಬೇಕಾದ ಮಾನಸಿಕತೆಯನ್ನು ಹೊಂದಬೇಕು. ಅಲ್ಲವೇ?
 ಇಡೀ ವಿಶ್ವಕ್ಕೆ ಉತ್ತಮ ಬದುಕು  ನೀಡುವ ಸಾಮರ್ಥ್ಯವು ವೇದದಲ್ಲಿದ್ದು ಅದನ್ನು ಬಲ್ಲವರು ಆಸಕ್ತರಿಗೆ ನೀಡಲು 
ಮನಸ್ಸು ಮಾಡಬೇಕು,ಪಡೆಯುವವರೂ ಕೂಡ ಪಡೆಯಲು ಬೇಕಾದ ಮಾನಸಿಕತೆಯನ್ನು ಬೆಳಸಿಕೊ ಳ್ಳಬೇಕು. ಏನಂತೀರಾ?


Sunday, May 15, 2011

ಕಾ ಣ ದ ಕೈ




ಜೀವನವೊಂದು ಅಪೂರ್ವವಾದ, ಅನುಪಮವಾದ ಮತ್ತು ಅನನ್ಯವಾದ ಅನುಭವದ ಪಯಣ. ನಿತ್ಯ ಜೀವನದ ಏಳು-ಬೀಳುಗಳನ್ನು ದಾಟಿ, ನಿಗದಿಪಡಿಸಿಕೊಂಡ ಗುರಿಯತ್ತ ಸಾಗುವಾಗ ಬರುವ ಅಡೆ-ತಡೆಗಳನ್ನು ಎದುರಿಸಿ, ಅಂತಿಮವಾಗಿ ಸಾಫಲ್ಯವನ್ನು ಕಂಡಾಗ-ಸಾರ್ಥಕ್ಯ ಸಿದ್ಧಿಯಾದಾಗ ಅದರ ಅನುಭವವೇ ಅನನ್ಯ; ಅತೀತ. ಆದರೆ ಇಂತಹ ಒಂದು ಅನಿಶ್ಚಿತವಾದ ಜೀವನ ಪಯಣದಲ್ಲಿ ನಾವೆಷ್ಟೋ ಸಾರಿ ಹಲವಾರು ತೊಂದರೆಗಳಿಗೆ ಸಿಲುಕಿಕೊಂಡಿದ್ದೇವೆ; ದಾರಿಯಲ್ಲಿ ಹಲವಾರು ವಿಘ್ನಗಳು ಎದುರಾಗಿವೆ; ಅನರೀಕ್ಷಿತವಾದ ಸಮಸ್ಯೆಗಳನ್ನು ಕೂಡ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಅಂತಹ ಸನ್ನಿವೇಶಗಳಿಂದ ಮನುಷ್ಯ ಪ್ರಯತ್ನದಿಂದ ಪಾರಾದರೂ, ಇನ್ನು ಕೆಲವು ಸಂಕಷ್ಟಗಳು/ಸಮಸ್ಯೆಗಳು ಮಾನವ ಪ್ರಯತಕ್ಕೂ ಮೀರಿದ್ದಾಗಿರುತ್ತವೆ. ಆಗ ನಾವು ಕೈ ಚೆಲ್ಲಿ ಕೂರದೇ ಗತ್ಯಂತರವಿಲ್ಲದಂತಾಗಿರುತ್ತದೆ. ದೇವರಿದ್ದಾನೋ ಇಲ್ಲವೋ ಎಂಬ ಬಗ್ಗೆ ಚರ್ಚಿಸಲು ನಾವೇನೂ (ಕು) ಬುದ್ಧಿಜೀವಿಗಳಲ್ಲ; ಆ ಬಗ್ಗೆ ಚರ್ಚೆ ಇಲ್ಲಿ ಅಪ್ರಸ್ತುತ ಮತ್ತು ಅನಗತ್ಯ ಕೂಡಾ. ಆದರೂ ಬಹಳ ಸಂದರ್ಭಗಳಲ್ಲಿ ಕಾಣದ ಕೈ ಯೊಂದು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿರುವ ಅನೇಕ ಘಟನೆಗಳು ನನ್ನ ಜೀವನದಲ್ಲಂತೂ ಸಾಕಷ್ಟು ಸಂಭವಿಸಿವೆ. ಇದೇ ರೀತಿ ಅನೇಕರ ಸತ್ಯ ಅನುಭವಗಳನ್ನೂ ನಾನು ಕೇಳಿದ್ದೇನೆ. ಸಾಮಾನ್ಯವಾಗಿ ಹೇಳಬಹುದಾದರೆ, ಬಹುಶ: ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇಂತಹ ಅನುಭವವನ್ನು - ನಿಗೂಢ ಶಕ್ತಿಯ ಸಹಾಯವನ್ನು - ಅನುಭವಿಸಿಯೇ ಇರುತ್ತಾನೆ. ಆದರೆ ವಿಚಾರವಂತರ(?) ತರ್ಕಕ್ಕೆ ಇಲ್ಲಿ ಸಾಕ್ಷಾಧಾರಗಳು ಸಿಗದಿರಬಹುದು; ವಿವರಣೆ ಇಲ್ಲದಿರಬಹುದು. ಆದರೂ ಆದ ಅನುಭವ ಸುಳ್ಳಲ್ಲವಲ್ಲ! ಅನಿರೀಕ್ಷಿತ ವಲಯದಿಂದ ಬಂದ ಸಹಾಯ ಹುಸಿಯಲ್ಲವಲ್ಲ! ಆ ನಿಗೂಢ ಶಕ್ತಿಯ ಕಲ್ಪನೆ ಮಾತ್ರಾ ಆಯಾ ವ್ಯಕ್ತಿಯ ಸಂಸ್ಕಾರಕ್ಕೆ ಮತ್ತು ವಿವೇಚನೆಗೆ ಬಿಟ್ಟ ವಿಚಾರ. ನನ್ನ ಜೀವನದಲ್ಲಿ ಜರುಗಿದ ಇಂತಹ ಕೆಲವು ಘಟನೆಗಳನ್ನು ಇಲ್ಲಿ ಮುಂದಿಡ ಬಯಸುತ್ತೇನೆ.
ಸುಮಾರು ೨೦ ವರ್ಷಗಳ ಹಿಂದಿನ ಮಾತು. ಚೊಚ್ಚಲ ಹೆರಿಗೆಗಾಗಿ ನನ್ನ ಮಡದಿಯನ್ನು ಸರ್ಕಾರೀ ಆಸ್ಪತ್ರೆಗೆ ದಾಖಲಿಸಿದ್ದೆವು. ಸಿಸೇರಿಯನ್ ಆಪರೇಷನ್ ಆಗಿದ್ದರಿಂದ ಒಂದು ವಾರ ಅಲ್ಲಿಯೇ ಇರಬೇಕಾಯಿತು. ಹೊಲಿಗೆ ಬಿಚ್ಚಿದ ವೈದ್ಯರು ಮನೆಗೆ ಹೋಗಲು ಅನುಮತಿ ಇತ್ತರು. ಆಗ ಸುಮಾರು ಬೆಳಿಗ್ಗೆ ೯ ಗಂಟೆ. ನಾವುಗಳು ೧೦.೩೦ರ ವೇಳೆಗೆ ಮನೆಗೆ ಹೋಗುವುದೆಂದು ತೀರ್ಮಾನಿಸಿದೆವು. ಆದರೆ ಹೊರಡುವ ಸ್ವಲ್ಪ ಮುಂಚೆ ನನ್ನ ಶ್ರೀಮತಿ ಈಗ ಬೇಡ, ಸಂಜೆ ಹೋಗೋಣ ಎಂದಾಗ ನಾನೂ ತಲೆಯಾಡಿಸಿದ್ದೆ. ಆದರೆ ಸ್ವಲ್ಪ ಸಮಯದಲ್ಲಿಯೇ ನನ್ನ ಶ್ರೀಮತಿ ಪುನ: ಮನಸ್ಸು ಬದಲಾಯಿಸಿ ತಕ್ಷಣ ಹೊರಡಲು ಒತ್ತಾಯಿಸಿದಾಗ ನಾವು ಮನೆಗೆ ಹೊರಟೆವು. ನಾವು ಮನೆ ಸೇರಿ ಇನ್ನೂ ೧೦ ನಿಮಿಷ ಕೂಡ ಆಗಿರಲಿಲ್ಲ. ನನ್ನ ಮಡದಿಯನ್ನು ಮತ್ತು ಮಗುವನ್ನು ಉಪಚರಿಸುತ್ತಿದ್ದ ನರ್ಸ್ ಓಡುತ್ತಾ ನಮ್ಮ ಮನೆಗೆ ಬಂದಾಗ ನಮಗೆ ಗಾಭರಿ. ವಿಷಯ ಏನೆಂದರೆ, ಯಾವ ಹಾಸಿಗೆಯ ಮೇಲೆ ನನ್ನ ಶ್ರೀಮತಿ ಮತ್ತು ಮಗು ಒಂದು ವಾರ ಕಳೆದಿದ್ದರೋ ಮತ್ತು ಮಗು ಯಾವ ಸ್ಥಳದಲ್ಲಿ ಮಲಗುತ್ತಿತ್ತೋ ಅದರ ಮೇಲೆ ಹಳೆ ಸರ್ಕಾರೀ ಆಸ್ಪತ್ರೆ ಕಟ್ಟಡದ ಒಳಛಾವಣಿಯ ಗಾರೆಯ ಒಂದು ದೊಡ್ಡ ತುಂಡು ಬಿದ್ದಿತ್ತು! ಸಾಯಂಕಾಲ ಹೊರಡೋಣವೆಂದು ಕೊಂಡಿದ್ದ ವಿಚಾರವನ್ನು ನೆನೆಸಿಕೊಂಡ ನಾವೆಲ್ಲಾ ನಿಜವಾಗಿ ಆಗ ನಡುಗಿಬಿಟ್ಟೆವು. ತಕ್ಷಣ ಹೊರಡಲು ಪ್ರೇರೇಪಿಸಿದ ಆ (ದಿವ್ಯ) ಶಕ್ತಿಗೆ ಶರಣಾದೆವು. ಆ ನನ್ನ ಮಗನೇ ಇಂದು ರಾಜ್ಯ ಮಟ್ಟದ ಓರ್ವ ಪ್ರತಿಭಾನ್ವಿತ ವಯಲಿನ್ ವಾದಕ ಎಂಬುದನ್ನು ಈ ಘಟನೆಯ ಹಿನ್ನೆಲೆಯಲ್ಲಿ ನೆನೆಸಿಕೊಂಡಾಗಲೆಲ್ಲಾ ಮೈ-ಮನಸ್ಸು ಝುಮ್ ಎನ್ನುತ್ತದೆ; ಆ ದಿವ್ಯ ಪ್ರೇರಣೆಗೆ ತಲೆಬಾಗುತ್ತದೆ.

ಮತ್ತೊಂದು ಘಟನೆ. ನನ್ನ ತಂದೆಯವರು ಅನೇಕ ವರ್ಷಗಳಿಂದ ಹೃದಯ ರೋಗ ಪೀಡಿತರು. ಅವರಿಗೆ ಅಪರೇಷನ್ ಕೂಡ ಆಯಿತು. ಆದರೂ ವಯಸ್ಸಿನ ಪ್ರಭಾವದಿಂದ ಆಗಾಗ್ಯೆ ತೊಂದರೆಗಳು ಮರುಕಳಿಸುತ್ತಿದ್ದು, ಪದೇ ಪದೇ ಆಸ್ಪತ್ರೆಗೆ ಹೋಗಬೇಕಾಗಿತ್ತು. ಒಮ್ಮೆ ಆಫೀಸಿನಿಂದ ಮನೆಗೆ ಹೊರಟಿದ್ದೆ. ಆಗಲೇ ಸಾಕಷ್ಟು ತಡವಾಗಿತ್ತು. ಹೊರಡುವ ವೇಳೆ ಆಫೀಸಿನ ಜವಾನ ೧೦೦ ರೂ. ಸಾಲ ಕೇಳಿದ. ಮಾರನೇ ದಿನವೇ ಸಂಬಳದ ದಿನ. ಜೇಬಿನಲ್ಲಿ ಸರಿಯಾಗಿ ೧೦೫ ರೂ ಇತ್ತು. ಹೇಗಿದ್ದರೂ ನಾಳೆ ಸಂಬಳವಾಗುತ್ತದಲ್ಲ ಎಂದೆಣಿಸಿ ಅವನಿಗೆ ೧೦೦ ರೂ. ನೀಡಿ ಮನೆಗೆ ಹೊರಟೆ. ಮನೆಗೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ತಂದೆಯವರಿಗೆ ಹೃದಯದ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೊರಡಲೇ ಬೇಕಾಯಿತು,. ಆದರೆ ಜೇಬಿನಲ್ಲಿದ್ದುದು ಐದೇ ರೂಪಾಯಿ ಮಾತ್ರಾ! ದುರದೃಷ್ಟವಶಾತ್ ಸಣ್ಣ ಉಳಿತಾಯ ಏಜೆಂಟ್ ಆಗಿದ್ದ ನನ್ನ ಶ್ರೀಮತಿ ವಸೂಲಾದ ಎಲ್ಲಾ ಹಣವನ್ನೂ ಅಂದೇ ಅಂಚೆ ಕಚೇರಿಗೆ ಜಮಾ ಮಾಡಿ ಬಿಟ್ಟಿದ್ದಳು. ಹಾಗಾಗಿ ಮನೆಯಲ್ಲಿಯೂ ದುಡ್ಡಿರಲಿಲ್ಲ. ಆಸ್ಪತ್ರೆಗೆ ಹೋದರೆ ಇ.ಸಿ.ಜಿ. ವಗೈರೆಗಾಗಿ ಕನಿಷ್ಟ ೫೦೦ ರೂ.ಗಳಾದರೂ ಬೇಕಿತ್ತು. ಹೇಗಾದರಾಗಲಿ ಡಾಕ್ಟರರಿಗೇ ಹೇಳಿ ಮುಂದೆ ಕೊಟ್ಟರಾಯಿತು ಎಂದು ಕೊಂಡು ಹೊರಡಲು ಸಿದ್ಧರಾದೆವು. ಆ ಕ್ಷಣದಲ್ಲಿ ಮನೆಯ ಕಾಲಿಂಗ್ ಬೆಲ್ ಸದ್ದು ಮಾಡಿತು. ನನ್ನ ಮಡದಿಯ ಬಳಿ ಆರ್.ಡಿ. ಖಾತೆ ತೆರೆದಿದ್ದ ನಮ್ಮ ಮೈಸೂರಿನ ನೆಂಟರೊಬ್ಬರು ಒಂದು ವರ್ಷದಿಂದಲೂ ಆ ಬಾಬ್ತು ದುಡ್ಡು ಕೊಟ್ಟಿರಲಿಲ್ಲ. ನಾವೇ ಕಟ್ಟುತ್ತಿದ್ದೆವು. ಆ ಹಣ ನೀಡಲು ಅವರು ಆಗ ಬಂದಿದ್ದರು! ನನ್ನ ಶ್ರೀಮತಿ ಇರುವ ವಿಷಯವನ್ನು ಅವರಿಗೆ ತಿಳಿಸಿ, ಶೀಘ್ರ ಹಣ ಪಡೆದು ನನಗೆ ಕೊಟ್ಟಳು. ಮುಂದಿನದೆಲ್ಲವೂ ಸುಖಾಂತ. ಸುಮಾರು ಒಂದು ವರ್ಷದಿಂದ ಬಾರದ ಆ ವ್ಯಕ್ತಿ, ಯಾವುದೇ ಪೂರ್ವ ಸೂಚನೆಯಿಲ್ಲದೇ ನಮ್ಮ (ಕಷ್ಟದ) ಸಮಯಕ್ಕೆ ಸರಿಯಾಗಿ ಹಾಜರಾಗಿ ನೆರವಾದುದು ವಿಧಿಯ ಕೈವಾಡ (ಪವಾಡ) ವಲ್ಲದೇ ಮತ್ತೇನು?

ಇತ್ತೀಚೆಗೆ ನಡೆದ ಮತ್ತೊಂದು ಘಟನೆಯನ್ನು ನೋಡಿ. ನಾನು ಮತ್ತು ನನ್ನ ಮಗ ಕಾರ್ಯಾರ್ಥವಾಗಿ ಬೆಂಗಳೂರಿಗೆ ಹೋಗಿದ್ದೆವು. ವಾಪಸು ಬರಲು ಬಸ್ ಸ್ಟ್ಯಾಂಡಿಗೆ ಬಂದಾಗ ಸುಮಾರು ಐದು ಗಂಟೆ ಆಗಿತ್ತು. ನಾವು ಬಂದ ಕ್ಷಣದಲ್ಲೇ ಶಿವಮೊಗ್ಗಕ್ಕೆ ಒಂದು ಬಸ್ಸು ಹೊರಟು ನಿಂತಿತ್ತು. ಸಾಕಷ್ಟು ಆಸನಗಳು ಖಾಲಿಯೇ ಇದ್ದವು. ಅದೇ ಕ್ಷಣದಲ್ಲಿ ಇನ್ನು ೧೫ ನಿಮಿಷದ ನಂತರ ಹೊರಡುವ ಮತ್ತೊಂದು ಬಸ್ಸು ಅಲ್ಲಿಗೆ ಬಂದಿತು. ನನ್ನ ಮಗ ಆಗಲೇ ಹೊರಟು ನಿಂತಿದ್ದ ಬಸ್ಸಿಗೇ ಹೊರಡಲು ಒತ್ತಾಯಿಸಿದ. ಆದರೆ ನನಗೇನಸಿತೋ ತಿಳಿಯದು. ಬೇಡ, ಆರಾಮಾಗಿ ಮುಂದಿನ ಬಸ್ಸಿಗೆ ಹೋಗೋಣ ಎಂದು ಹಿಂದೆ ಸರಿದೆ (ನನ್ನ ಮಗನ ಮುಂದುವರೆದ ಒತ್ತಾಯದ ನಡುವೆಯೂ). ನಂತರ ನಮ್ಮ ಪ್ರಯಾಣ ನಂತರದ ಬಸ್ಸಿನಲ್ಲಿ ಸಾಗಿತು. ಸುಮಾರು ರಾತ್ರಿ ೧೦ ಗಂಟೆ ವೇಳೆ ನಾವು ಪಯಣಿಸುತ್ತಿದ್ದ ಬಸ್ಸು ತಕ್ಷಣ ನಿಂತಿತು. ಮುಂದೆ ನೋಡಿದರೆ ಮತ್ತೊಂದು ಬಸ್ಸು ತೀವ್ರವಾದ ಅಪಘಾತಕ್ಕೊಳಗಾಗಿ ಸಾಕಷ್ಟು ಸಾವು-ನೋವುಗಳಾಗಿದ್ದವು. ಹಾಗಾಗಿ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಯಿತು. ಮುಂದೆ ಸಾಗುವಾಗ ಅಪಘಾತವಾದ ಬಸ್ಸನ್ನು ಸಮೀಪದಿಂದ ನೋಡಿದ ನಮಗಾದ ಆಘಾತ ಅಷ್ಟಿಷ್ಟಲ್ಲ. ಅದು ಬೇರೆ ಯಾವುದೇ ಬಸ್ ಆಗಿರದೆ ನಾವು ಬೆಂಗಳೂರಿನಲ್ಲಿ ಸ್ಟ್ಯಾಂಡ್‌ಗೆ ಬಂದ ಕೂಡಲೇ ಹೊರಡು ರೆಡಿಯಾಗಿದ್ದ ಮೊದಲನೇ ಬಸ್! ಅಂದು ಆ ಸಮಯದಲ್ಲಿ ಪರಮಾತ್ಮ ನನಗೆ ಅಂತಹ ಮನಸ್ಸು ಹೇಗೆ ಕೊಟ್ಟ? ನಾನೇಕೆ ನನ್ನ ಮಗನ ಮಾತಿನಂತೆ ಆ ಬಸ್ಸಿಗೇ ಹತ್ತಲಿಲ್ಲ? ಎಂಬುದನ್ನು ನಾನು ಇಂದಿಗೂ ವಿಚಾರ ಮಾಡುತ್ತಲೇ ಇದ್ದೇನೆ.

ನಾವು ಮನೆ ಕಟ್ಟಲು ಉಪಕ್ರಮಿಸಿದಾಗ ಏನೂ ಅನುಭವವಿಲ್ಲದ ನಾವು ಬಹಳ ಚಿಂತೆಯಲ್ಲಿದ್ದೆವು. ಆಗ ನನ್ನ ಸ್ನೇಹಿತರೊಬ್ಬರ ಗೆಳೆಯರಾದ ಶ್ರೀನಿವಾಸ ಎಂಬುವವರು ಪರಿಚಿತರಾಗಿ, ನಮ್ಮ ಸಂದರ್ಭವನ್ನು ಅರಿತು ಸಹಾಯ ಮಾಡಲು ಮುಂದಾದರು. ಯಾವುದೇ ಪೂರ್ವ ಪರಿಚಯವಿಲ್ಲದಿದ್ದರೂ ಮೊದಲಿಂದ ಕೊನೆಯವರೆಗೆ ನಿರ್ಮಾಣ ಪೂರ್ಣವಾಗುವವರೆಗೆ ಸ್ವತ: ತಾವೇ ನಿಂತು ನಿಗಾ ವಹಿಸಿ ನಮ್ಮೆಲ್ಲ ಜವಾಬ್ದಾರಿಯನ್ನು ಸಾಕಷ್ಟು ತಾವೇ ಹೊತ್ತಿದ್ದರು. ಮನೆ ನಿರ್ಮಾಣವಾದ ಸ್ವಲ್ಪ ಸಮಯದಲ್ಲೇ ಯಾವುದೋ ಕಾರಣಕ್ಕಾಗಿ ನಾವು ಮನೆಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ನಡೆಸಿದೆವು. ಅದಾದ ಒಂದೆರಡು ವರ್ಷದಲ್ಲೇ ನಾನು ಸೇವೆಯಿಂದ ಸ್ವಯಂ ನಿವೃತ್ರಿ ಪಡೆದು ಆ ಮನೆಯನ್ನು ಮಾರಿ ಶಿವಮೊಗ್ಗಕ್ಕೆ ಬಂದೆ. ನನ್ನ ನಾದಿನಿಯ ಮೂಲಕ (ಅವರ ಪತಿಯೂ ಶ್ರೀನಿವಾಸನೇ!) ಅಕಸ್ಮಾತ್ ಸಿಕ್ಕ ಮಾಹಿತಿಯನ್ನನುಸರಿಸಿ ಹೊರಟಾಗ ನಾವು ಕೆಳದಿ ಕವಿ ಮನೆತನಕ್ಕೆ ಸೇರಿದ ವಿಷಯ ತಿಳಿಯಿತು. ನಮ್ಮ ಮನೆ ದೇವರು ಕೊಲ್ಲೂರು ಮೂಕಾಂಬಿಕೆ. ಆದರೆ ನಮ್ಮ ವಂಶದ ಬಗ್ಗೆ ತಿಳಿಯುತ್ತಾ ಹೋದಂತೆ ಕೊಲ್ಲೂರು ಮೂಕಾಂಬಿಕೆ ನಮ್ಮ ಆರಾಧ್ಯ ದೈವವೆಂದೂ, ಶ್ರೀ ವೆಂಕಟರಮಣಸ್ವಾಮಿ ನಮ್ಮ ಕುಲದೇವರೆಂಬ ಅಂಶವೂ ಹೊರಬಂದಿತ್ತು. ಶಿವಮೊಗ್ಗೆಯಲ್ಲಿ ಹೊಸದಾಗಿ ಬಂದಾಗ ನಮಗೆ ಆಶ್ರಯ ನೀಡಿದ್ದೂ ಮತ್ತು ಹೊಸ ನಿವೇಶನ ಖರೀದಿಸಲು ಸಹಾಯ ಮಾಡಿದ್ದೂ ಕೂಡ ನನ್ನ ಷಡ್ಡುಕರಾದ ಶ್ರೀನಿವಾಸ ರವರೇ! ಹೊಸ ಗೆಳೆಯನಾಗಿ ಬಂದ ಆ ಶ್ರೀನಿವಾಸ ನೇ ನಮಗೆಲ್ಲಾ ಆ ವೆಂಕಟರಮಣಸ್ವಾಮಿಯ ರೂಪದಲ್ಲಿ ಬಂದು ಮನೆ ನಿರ್ಮಿಸಲು ಸಹಾಯ ಮಾಡಿದ್ದು, ನಂತರ ನಮಗರಿವಿಲ್ಲದೆಯೇ ಆ ಮನೆಯಲ್ಲಿ ಶ್ರೀನಿವಾಸನ ಕಲ್ಯಾಣೋತ್ಸವ
ನಡೆದದ್ದು, ಶಿವಮೊಗ್ಗೆಯಲ್ಲಿ ನೆಲೆಸಲೂ ಪುನ: ಶ್ರೀನಿವಾಸನೇ ನೆರವಾದದ್ದು ಮತ್ತು ನಂತರ ವೆಂಕಟರಮಣಸ್ವಾಮಿಯೇ (ಶ್ರೀನಿವಾಸನೇ) ನಮ್ಮ ಕುಲದೇವರೆಂದು ತಿಳಿದದ್ದು - ಎಲ್ಲಾ ನೆನೆದಾಗ ನಾವು ಶ್ರೀನಿವಾಸ, ಶ್ರೀನಿವಾಸ ಅನ್ನದೇ ಬೇರೆನೆನ್ನಲು ಸಾಧ್ಯ?
ಇಂತಹ ಘಟನೆಗಳು - ಅನುಭವಗಳು ಹತ್ತು ಹಲವಾರು. ಇವುಗಳಿಗೆ ಮೂಲ ಶಕ್ತಿಯನ್ನಾಗಲೀ ಅಥವಾ ಆ ಸಮಯದ ಮನ: ಪ್ರೇರಣೆಗೆ ಕಾರಣವನ್ನಾಗಲೀ ಹುಡುಕುವುದು ಬಹಳ ಕಷ್ಟಕರವಾದ ಕೆಲಸ. ಆದರೆ ಒಂದು ಅಂಶವಂತೂ ಸತ್ಯ. ನಮಗೆ ಕಾಣಿಸದ, ನಮ್ಮನ್ನು ಮೀರಿದ, ನಮಗೆ ಇನ್ನೂ ಅರ್ಥವಾಗದ ಅತೀಂದ್ರಿಯವಾದ ಶಕ್ತಿ ಎಂಬುದೊಂದಿದೆ ಎನ್ನುವುದು. ಆಸ್ಥಿಕರು ಇದನ್ನು ಪರಮಾತ್ಮ/ದೇವರು ಎಂದರೆ (ಕು)ವಿಚಾರವಾದಿಗಳೆನಿಸಿಕೊಂಡವರು ಅದಕ್ಕೆ ಕಾಕತಾಳೀಯ ಇಲ್ಲವೇ ಪವಾಡ ವೆಂಬ ಹಣೆಪಟ್ಟಿ ಕಟ್ಟುವರು. ಆದರೆ ಈ ಇಬ್ಬರೂ ಇಂತಹ ಒಂದು ಅತೀಂದ್ರಿಯ ಶಕ್ತಿಯನ್ನು, ಅದರ ಮೂಲವನ್ನು ಸಂಪೂರ್ಣವಾಗಿ ಬೇಧಿಸುವಲ್ಲಿ ಮಾತ್ರ ಇಂದಿಗೂ ಅಸಮರ್ಥರಾಗಿರುವುದೆಂಬುದಂತೂ ಸತ್ಯ.

ಅದೇ ರೀತಿ ಪ್ರಕೃತಿಯ ಅನೇಕ ವೈಶಿಷ್ಟ್ಯಗಳನ್ನೂ ಗಮನಿಸಿ. ಆಗ ತಾನೇ ಹುಟ್ಟಿದ ಕರು ನಾಲ್ಕೈದು ಬಾರಿ ಎದ್ದು ಕುಳಿತು ನಿಂತುಕೊಂಡ ಮೇಲೆ ಅದು ತಾಯಿ ಹಸುವಿನ ಕೆಚ್ಚಲಿನ ಕಡೆಗೇ ಸಾಗುವುದನ್ನು ಅದಕ್ಕೆ ಕಲಿಸಿದವರಾರು? ಗೂಡಿನಲ್ಲಿ ಇನ್ನೂ ಕಣ್ತೆರೆಯದ ಮರಿಹಕ್ಕಿಗಳು ತಾಯಿಹಕ್ಕಿ ಬಂದೊಡನೆಯೇ ಚೀ ಗುಟ್ಟುತ್ತಾ ಬಾಯಿ ತೆರೆದುಕೊಳ್ಳುವುದೂ ಒಂದು ಆಶ್ಛರ್ಯವೇ. ದೇಶದಿಂದ ದೇಶಕ್ಕೆ ವಲಸೆ ಬಂದು, ಸಂತಾನ ಬೆಳೆಸಿ, ಪುನ: ಸಾವಿರಾರು ಮೈಲು ಕ್ರಮಿಸಿ ಸ್ವದೇಶ ಸೇರುವ ಹಕ್ಕಿಗಳಿಗೆ ದಾರಿದೀಪ ಯಾರು? ನದೀ ಅಥವಾ ಸಮುದ್ರ ತೀರಗಳಲ್ಲಿ ಮೊಟ್ಟೆಯೊಡೆದು ಹೊರ ಬರುವ ಅಸಂಖ್ಯಾತ ಆಮೆ ಮರಿಗಳು ನೇರವಾಗಿ ನದಿ ಇಲ್ಲವೇ ಸಮುದ್ರದೆಡೆಗೇ ಸಾಗಲು ಕಲಿಸಿದವರಾರು? ಯಾವುದೇ ತರಬೇತಿ ಇಲ್ಲದೇ ಈಜುವ ಹಸು, ನಾಯಿ, ಬೆಕ್ಕು, ಹುಲಿ, ಚಿರತೆ ಮುಂತಾದ ಪ್ರಾಣಿ-ಪಕ್ಷಿಗಳಿಗೆ ಈಜಲು ಕಲಿಸಿದವರಾರು? ಇಂತಹ ಪ್ರಕೃತಿಯ ನಿಗೂಢಗಳು ಅಸಂಖ್ಯಾತ ಮತ್ತು ಅಪಾರ.

ಎಲ್ಲವೂ ನನ್ನಿಂದಲೇ - ನನ್ನಿಂದಲೇ ಎಲ್ಲವೂ ಎಂದು ಭಾವಿಸಿರುವ ನಾವುಗಳು ಇಂತಹ ಅನುಭವಗಳನ್ನು ಮತ್ತು ಪ್ರಕೃತಿಯ ಮೇಲಿನಂತಹ ಚಮತ್ಕಾರಗಳನ್ನು ನೋಡಿದಾಗ ನಮ್ಮ ಕುಬ್ಜತನದ ಅರಿವಾದೀತು. ಕಷ್ಟಗಳು, ಸಮಸ್ಯೆಗಳು ಎಲ್ಲರಿಗೂ ಬಂದೇ ಬರುತ್ತದೆ. ಅಂತಹ ಕೈ ಮೀರಿದ ಅನೇಕ ಸಂದರ್ಭಗಳಲ್ಲಿ ನಮಗೆ ಅನಿರೀಕ್ಷಿತವಾದ ಜಾಗದಿಂದ, ಅಪರಿಚಿತ ವ್ಯಕ್ತಿಯಿಂದ ಇಲ್ಲವೇ ಕಾಣದ ಒಂದು ಶಕ್ತಿಯಿಂದ ಸಹಾಯ ಒದಗಿ ಬಂದಿರುತ್ತದೆ. ಅಂತಹ ಸಂದರ್ಭಗಳನ್ನು ನಾವೆಂದೂ ಮರೆಯಬಾರದು. ಆ ಉಪಕಾರ ಸ್ಮರಣೆ ಕಾಣುವ ಮತ್ತು ಕಾಣದಿರುವ ಶಕ್ತಿಗಳಿಗೂ ಸದಾ ನಮ್ಮಿಂದ ಸಲ್ಲಿಕೆಯಾಗಬೇಕು. ತೆಗೆದುಕೊಂಡ ಸಹಾಯವನ್ನು ಮತ್ತು ಉಪಕಾರವನ್ನು ನೆನೆಯದಿರುವವನು ಮಹಾದ್ರೋಹಿಯೇ ಸರಿ. ಇಂತಹ ಅನುಭವಗಳು ನಾವು ಇತರರ ಸಂಕಷ್ಟಗಳಿಗೆ ಸ್ಪಂದಿಸಲು ಸ್ಫೂರ್ತಿದಾಯಕ ಅಂಶಗಳಾಗಬೇಕು. ಆದರೆ ಪರರ ಕಷ್ಟದ ಕಾಲದಲ್ಲಿ ನೀವೇನಾದರೂ ಸಹಾಯ ಮಾಡಿದ್ದರೆ ಅದಕ್ಕಾಗಿ ಹೆಮ್ಮೆ ಪಡಬೇಡಿ; ಸಹಾಯ ಪಡೆದವನ ಮನಸ್ಸಿನಲ್ಲಿ ಅಂತಹ ಒಂದು ಭಾವನೆಗೂ ಎಡೆಮಾಡಬೇಡಿ. ಅಂತಹ ಒಂದು ಸದವಕಾಶ ನಿಮಗೆ ಸಿಕ್ಕಿತಲ್ಲ ಎಂದು ಸಂತಸ ಪಡಿ; ಅದಕ್ಕಾಗಿ ಆ ಶಕ್ತಿಗಳಿಗೆ ಋಣಿಯಾಗಿರಿ. ಏಕೆಂದರೆ ಆ ಭಗವಂತ ಅಥವಾ ಆ ಕಾಣದ ಕೈ ನಿಮ್ಮ ಮೂಲಕ ಆ ಒಳ್ಳೆಯ ಕೆಲಸವನ್ನು ಮಾಡಿಸಿದ್ದಾನಷ್ಟೆ. ಅವನೇ ನಿಜವಾದ ನಿರ್ದೇಶಕ. ನೀವೊಬ್ಬ ಕೇವಲ ನಟ ಅಥವಾ ಸಾಧನ ಮಾತ್ರ. ಪರರಿಗೆ ಸಹಾಯ ಮಾಡುವಾಗ ಮತ್ತು ಪರರಿಂದ ಸಹಾಯ ಪಡೆಯುವಾಗ ಇಂತಹ ಭಾವ ಸದಾ ನಮದಾಗಿರಲಿ. ಅರ್ಥವಾಗದ್ದಕ್ಕೆ, ಅರಗಿಸಿಕೊಳ್ಳಲಾರದ್ದಕ್ಕೆ ಮತ್ತು ವಿವರಣಾತೀತವಾದಂತಹ ಅಂತಹ ಶಕ್ತಿಗಳಿಗೆ ಸದಾ ಶರಣು, ಶರಣು ಎನ್ನಿ.

ಎಲ್ಲವೂ ನೀನೇ, ನಿನ್ನಿಚ್ಛೆಯೇ ನಡೆಯಲಿ ಎಂಬ ಸ್ಥಿತಿಯನ್ನು ಮುಟ್ಟಿದಾಗ ಮಾತ್ರ ಶರಣಾಗತಿ ಪೂರ್ಣವಾದಂತೆ. ನಾನು ನಿನಗೆ ಶರಣು ಎಂದು ಬಾಯಿಮಾತಿನಲ್ಲಿ ಹೇಳಿಬಿಟ್ಟು ಮನ ಬಂದಂತೆ ಮಾಡಬಹುದು, ಶರಣಾಗತಿ ಸುಲಭ ಎಂದು ಭಾವಿಸುವುದು ಉಂಟು. ಆದರೆ ವಸ್ತು ಸಂಗತಿ ಬೇರೆ. ಒಮ್ಮೆ ಶರಣು ಹೋದಮೇಲೆ ನಿಮಗೆ ಇಷ್ಟ-ಅನಿಷ್ಟ ಏನೂ ಇರಲಾರದು. ನಿಮ್ಮ ಸಂಕಲ್ಪ ಪೂರ್ಣವಾಗಿ ಅಳಿಸಿಹೋಗಬೇಕು. ಭಗವಂತನ ಸಂಕಲ್ಪವೇ ಪ್ರಧಾನವಾಗಬೇಕು.


ರಮಣ ಶ್ರೀ
-
* ಕವಿ ವೆಂ ಸುರೇಶ್
ಸೌಪರ್ಣಿಕಾ, ೩ನೇ ಮುಖ್ಯ ರಸ್ತೆ,
೩ನೇ ಅಡ್ಡ ರಸ್ತೆ, ಬಸವೇಶ್ವರನಗರ,
ಶಿವಮೊಗ್ಗ ೨೫.೯.೨೦೦೮