Pages

Monday, March 14, 2016

Sunday, March 13, 2016

ಸಾಮಾಜಿಕ ಜಾಗೃತಿಗಾಗಿ .......

ನಿಮ್ಮ ಮನೆಯಲ್ಲಿ ಮಕ್ಕಳ ಜನ್ಮದಿನ, ವಿವಾಹವಾಗಿ 25 ವರ್ಷ ನಿಮಿತ್ತ ವಿವಾಹ ರಜತಮಹೋತ್ಸವ, 60ವರ್ಷ ತುಂಬಿದಾಗ ಶಷ್ಠ್ಯಬ್ಧಿ ಕಾರ್ಯಕ್ರಮ.........ಇತ್ಯಾದಿ ಕಾರಣ ಗಳಿಂದ ಏನಾದರೊಂದು ಶುಭಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಏನಿಲ್ಲದಿದ್ದರೂ ಮಕ್ಕಳು ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬ, ಅಪ್ಪ-ಅಮ್ಮನ ಹುಟ್ಟು ಹಬ್ಬಕ್ಕಾಗಿ ಸ್ನೇಹಿತರನ್ನು ಕರೆದು ಪಾರ್ಟಿ ಮಾಡುವ ಹೊಸ ಸ್ಟೈಲಂತೂ ಶುರುವಾಗಿದೆ. ಹೇಗೂ ಕಾರ್ಯಕ್ರಮಗಳು ನಡೆಯುತ್ತವೆ, ಅದನ್ನೇ ಏಕೆ ವೇದೋಕ್ತವಾಗಿ ನಡೆಸಬಾರದು! ಹೀಗೊಂದು ಆಲೋಚನೆ ನನ್ನ ತಲೆಯಲ್ಲಿ ಯಾವಾಗಲೂ ಇದ್ದದ್ದೇ! ತಮ್ಮ ಮದುವೆಯಾಗಿ 25 ವರ್ಷ ಆಯ್ತು. ಶನಿವಾರ ನಮ್ಮ ಮನೆಗೆ ಬನ್ನಿ, ಒಟ್ಟಿಗೆ ಊಟ ಮಾಡೋಣ,ಎಂದು ಮಿತ್ರರಾದ ಶ್ರೀ ಶೇಷಪ್ಪ ಆಹ್ವಾನಿಸಿದರು. ನಾನು ಅವರಿಗೆ ಒಂದು ಸಲಹೆ ಕೊಟ್ಟೆ. ಅದನ್ನೇ ನಮ್ಮ ಸತ್ಸಂಗದಲ್ಲಿ ಆಚರಿಸೋಣ.ಮಿತ್ರರನ್ನೆಲ್ಲಾ ಕರೆಯಿರಿ, ಎಂದೆ. ಇಂದು 13.3.2016] ಕಾರ್ಯಕ್ರಮ ನಡೆದೇ ಹೋಯ್ತು. ಎಲ್ಲಾ ವೇದ ಮತ್ತು ಯೋಗ ಬಂಧುಗಳೂ ನಮ್ಮ ಮನೆಯಲ್ಲಿ ಸೇರಿದರು. ಒಟ್ಟಿಗೆ ಅಗ್ನಿಹೋತ್ರ ಮಾಡಿದೆವು. ಹಿಂದೂ ಕುಟುಂಬ ವ್ಯವಸ್ಥೆಯ ವೈಶಿಷ್ಠ್ಯ ಮತ್ತು ಅದು ಕುಸಿಯುತ್ತಿರುವ ವಿಚಾರಗಳನ್ನು ಸ್ನೇಹಿತರ ಮುಂದೆ ತೆರೆದಿಡುವ ಪ್ರಯತ್ನ ಮಾಡಿದೆ. ಇಂತಾ ಸಂದರ್ಭಗಳನ್ನು ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಲು ಉಪಯೋಗಿಸಿಕೊಳ್ಳಬೇಕೆಂಬ ಅಂಶವನ್ನು ಕವಿನಾಗರಾಜ್ ಕೂಡ ತಿಳಿಸಿದರು.ಮಿತ್ರರೆಲ್ಲಾ ಶುಭಹಾರೈಸಿದಮೇಲೆ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ನಂತರ ಲಘು ಭೋಜನವನ್ನು ಸ್ವೀಕರಿಸಿ ಎಲ್ಲರೂ ಮನೆಗೆ ತೆರಳಿದರು. ಒಂದು ಸರಳಸಮಾರಂಭವನ್ನು ಸಾಮಾಜಿಕಜಾಗೃತಿಗಾಗಿ ಪೂರ್ಣ ಬಳಸಿಕೊಳ್ಳಲಾಯ್ತು. ಇಂತಾ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಬೇಕಲ್ವಾ?














Thursday, March 3, 2016

ವೇದಭಾರತಿಯ ಚಟುವಟಿಕೆಗಳ ಬಗ್ಗೆ ಶ್ರೀ ಕೆ.ಎಸ್.ಕರಂಜೆ ಅವರ ಅಭಿಮಾನದ ಮಾತು ಭಾಗ-1



ಕೆಲವೊಮ್ಮೆ ಕೆಲವು ಸಾಮಾಜಿಕ ಚಟುವಟಿಕೆಗಳು ಜನರ ಮೆಚ್ಚುಗೆ ಪಡೆಯುತ್ತವೆ. ಕೆಲವಕ್ಕೆ ಅಡೆತಡೆಗಳು ಬರುತ್ತವೆ. ಏನೇ ಆದರೂ ಸಾಮಾಜಿಕ ಕಳಕಳಿ ಇರುವ ಕಾರ್ಯಕರ್ತನಾದವನು ತನ್ನ ಆತ್ಮಸಾಕ್ಶಿ ಒಪ್ಪಿದ್ದನ್ನು ಮಾಡುತ್ತಾ ಹೋಗುತ್ತಾನೆ. ಅದು ಸಮಾಜದ ಹಿತ ಕಾಪಾಡುವಂತಿದ್ದರೆ ಇಂದಲ್ಲಾ ನಾಳೆ ಜನರು ಒಪ್ಪುತ್ತಾರೆ, ಇಲ್ಲವಾದರೆ ತಿರಸ್ಕರಿಸುತ್ತಾರೆ. ಇಷ್ಟೆಲ್ಲಾ ಮಾತೇಕೆ ಎಂದರೆ ವೇದಭಾರತಿಯ ಹೆಸರಲ್ಲಿ ನಾವುಗಳು ಚಟುವಟಿಕೆ ಆರಂಭಿಸಿದ ಹೊಸದರಲ್ಲಿ ಹಲವರು ಭಾವಿಸಿದ್ದರು ಇಲ್ಲಿ ಪೂಜಾ ಮಂತ್ರವನ್ನು ಹೇಳಿಕೊಡುತ್ತಾರೆಂದು.ಇನ್ನು ಕೆಲವರು ನಮ್ಮ ಮಕ್ಕಳಿಗೆ "ಸಂಧ್ಯಾವಂದನೆ ಹೇಳಿಕೊಡುತ್ತೀರಾ? ಋಗ್ವೇದದಲ್ಲೋ? ಯಜುರ್ವೇದದಲ್ಲೋ? ಹೀಗೆ ಕೇಳುತ್ತಿದ್ದರು.

ನಾವು ಹೇಳುತ್ತಿದ್ದುದು ಒಂದೇ " ಇಲ್ಲಿ ನಿತ್ಯಪೂಜಾ ಮಂತ್ರ ಹೇಳಿಕೊಡುವುದಿಲ್ಲ" ಇಲ್ಲಿ ವೇದದ ಪರಿಚಯ ಮಾಡಿಕೊಡಲಾಗುತ್ತದೆ. ಅಗ್ನಿಹೋತ್ರವನ್ನು ಕಲಿಸಲಾಗುತ್ತದೆ. " ವೇದಪಾಠವು ನಡೆಯುತ್ತದೆ"
ಆಗ ಕೆಲವರು ಕೇಳುತ್ತಿದ್ದರು - ಕೇವಲ ಬ್ರಾಹ್ಮಣಹುಡುಗರು ಮಾತ್ರಾ ಬರುತ್ತಾರಲ್ಲವೇ?

- ನಮ್ಮ ಉದ್ದೇಶ ಇರುವುದೇ "ಎಲ್ಲರಿಗಾಗಿ ವೇದ " ಪರಿಚಯ ಮಾಡಿಕೊಡುವುದು. ಇಲ್ಲಿ ಎಲ್ಲಾ ಜಾತಿಯವರಿಗೂ ಪ್ರವೇಶ ಇದೆ. ನಾವು ಯಾರ ಜಾತಿಯನ್ನೂ ಕೇಳುವುದಿಲ್ಲ.

ವೇದ ಪಾಠ ಶುರುವಾಯ್ತು. ಬರುತ್ತಿದ್ದ ಕೆಲವರು ನಿಲ್ಲಿಸಿದರು. ಹೊಸಬರು ಬಂದರು. ನೂರಾರು ಕಡೆಯಿಂದ ಅಗ್ನಿಹೋತ್ರಕ್ಕಾಗಿ ಆಹ್ವಾನ ಬಂತು. ಸಾಧ್ಯವಾದಲ್ಲೆಲ್ಲಾ ವೇದಭಾರತಿಯ ಕಾರ್ಯಕರ್ತರು ಹೋಗಿ ಉಚಿತವಾಗಿ ಅಗ್ನಿಹೋತ್ರ ನಡೆಸಿ ವೇದದ ಸರಳ ಪರಿಚಯ ಮಾಡಿಕೊಟ್ಟು ಬಂದೆವು.
ಕ್ರಮೇಣ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮಗಳು ನಡೆದವು.ಶಿಬಿರಗಳು ನಡೆದವು. ವೇದಭಾರತಿಯ ಹೆಸರು ಪ್ರಚಾರವಾಯ್ತು. ನಾವು ನಡೆಸಿದ ವೇದೋಕ್ತ ಜೀವನ ಶಿಬಿರದಲ್ಲಿ ಮೊಟ್ಟ ಮೊದಲಿಗೆ ಏಳು ಜನರಿಗೆ ಉಪನಯನ ಮಾಡಿಸಿ ಯಜ್ಞೋಪವೀತ ಧಾರಣೆ ನಡೆಸಿದೆವು.ಅದರಲ್ಲಿ ನಾಲ್ವರು ಸ್ತ್ರೀಯರು,ಮೂವರು ಪುರುಷರು. ಕೆಲವರ ಜಾತಿ ಗೊತ್ತಿದ್ದರೂ ಕೆಲವರದ್ದು ನಮಗೆ ಗೊತ್ತಿಲ್ಲ. ವೇದಭಾರತಿಗೆ ಬರುವವರು ಯಾರು ಯಾವ ಜಾತಿಗೆ ಸೇರಿದವರೆಂದು ಗೊತ್ತಾಗುವುದೇ ಇಲ್ಲ. ಕಾರಣ ಅದು ನಮಗೆ ಬೇಕಿಲ್ಲ.

ಕಳೆದ ಒಂದುವರ್ಷದಿಂದ ವೇದಭಾರತಿಯ ಬಗ್ಗೆ ತಿಳಿದುಕೊಂಡಿದ್ದ ಸೇವಾಬಸ್ತಿಯ ಬಂಧು ಒಬ್ಬರಿಗೆ ತಮ್ಮ ಮಗನಿಗೆ ಉಪನಯನ ಮಾಡಿಸುವ ಇಚ್ಛೆಯಾಯ್ತು. ವಿಚಾರ ನಮಗೆ ತಿಳಿಸಿದರು. ಫೆಬ್ರವರಿ 19 ರಂದು ಅವರ ಗ್ರಾಮದಲ್ಲೇ ವೇದೋಕ್ತವಾಗಿ ಉಪನಯನ ವಾಯ್ತು. ಪತ್ರಿಕೆಗಳಲ್ಲಿ ಅದು ಬಿಸಿ ಸುದ್ಧಿಯಾಯ್ತು. ಸಾಮಾಜಿಕ ತಾಣಗಳಲ್ಲೂ ಸುದ್ದಿ ಹರಿದಾಡಿತು. ಹಲವರು ಮೆಚ್ಚಿದರು.ಯಾರೋ ಒಬ್ಬಿಬ್ಬರು ಇದು ಶಾಸ್ತ್ರ ಸಮ್ಮತವಲ್ಲ-ಎಂದರು. ಶಾಸ್ತ್ರಸಮ್ಮತವಲ್ಲ ಎನ್ನುವವರಿಗೆ ವೇದ ಮಂತ್ರದ ಆಧಾರ ಕೊಡುವುದಾಗಿ ತಿಳಿಸಿದ್ದಾಯ್ತು. ವಿಷಯ ಹಳೆಯದಾಯ್ತು.

ಇಲ್ಲಿ ಒಂದು ಮಾತು ನಾನು ಹೇಳಲೇ ಬೇಕು. ಸಾಮಾನ್ಯವಾಗಿ ನಮ್ಮ ಚಟುವಟಿಕೆಗಳನ್ನು ಮೆಚ್ಚುತ್ತಿದ್ದ ಹಲವರು ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ! ಮೌನಮ್ ಸಮ್ಮತಿ ಲಕ್ಷಣಮ್ ಎಂಬುದು Facebook ಮತ್ತು ಇತರ ಸಾಮಾಜಿಕ ತಾಣಗಳಿಗೆ ಹೊಂದುವ ಮಾತಲ್ಲ. ಇಲ್ಲಿ ಮೆಚ್ಚಬೇಕು.ಇಲ್ಲ ವಿರೋಧಿಸಬೇಕು. ಅಥವ ಕೀಟಲೆ ಮಾಡಬೇಕು.ಯಾವಾಗಲೂ ಪ್ರತಿಕ್ರಿಯೆ ನೀಡುತ್ತಿದ್ದವರು ಈ ಸುದ್ದಿಗೆಪ್ರತಿಕ್ರಿಯಿಸಲಿಲ್ಲ ವೆಂದರೆ ಅವರುಗಳಿಗೆ ಇದು ಸಮಾಧಾನವಾಗದ ವಿಷಯವೆಂದೇ ಅರ್ಥ.ಪರವಾಗಿಲ್ಲ.ಅದು ಅವರ ಇಷ್ಟ. ಆದರೆ ಈ ಪೋಸ್ಟ್ ಬರೆಯಲು ಪ್ರಮುಖ ಕಾರಣ ಶ್ರೀ ಕೆ.ಎಸ್.ಕರಂಜೆ ಎಂಬ facebook ಮಿತ್ರರು. ಅವರು ಬೀದರ್ ನ ಶ್ರೀಮದ್ ವೀರ ಶೈವ ರಾಜ ಪೀಠದ ಅಧ್ಯಕ್ಷರು.ಶಿವಾದ್ವೈತ ಆಗಮಿಕ ಅನುಯಾಯಿ.ಹಿಂದಿಯಲ್ಲಿ ಸೊಗಸಾಗಿ ಮಾತನಾಡುತ್ತಾರೆ. ಕನ್ನಡ ಕಷ್ಟ. ಮೊನ್ನೆ ರಾತ್ರಿ ನನಗೆ ಫೋನ್ ಮಾಡಿದರು. ಅವರು ಮಾತು ಆರಂಭಿಸುವುದೇ " ನಮಸ್ತೆ ಪ್ರಭು ಕೈಸೆ ಹೈ?"
ನನಗೆ ಹಿಂದಿ ಅರ್ಥವಾದರೂ ಮಾತನಾಡಲು ಬಲು ಕಷ್ಟ. ಆದರೂ ತಪ್ಪು ತಪ್ಪಾಗಿ ಮಾತನಾಡಿದರೂ. ಭಾವನೆಯನ್ನು ಅರ್ಥಮಾಡಿಕೊಂಡು ಸೊಗಸಾಗಿ ಮಾತು ಮುಂದುವರೆಸುತ್ತಾ 40 ನಿಮಿಷ ಮಾತನಾಡಿದರು. ಅವರ ಕಳಕಳಿಯನ್ನು ಸ್ನೇಹಿತರ ಗಮನಕ್ಕೆ ತರಲು ಈ ಪ್ರಯತ್ನ.
ಕರಂಜೆ : ವಿಶೇಷ ಕಾರ್ಯಕ್ರಮವನ್ನು ನೀವು ಮಾಡಿದಿರಂತೆ. ವಿಷಯ ತಿಳಿಯಿತು
ನಾನು : ಹೌದು ಸೇವಾಬಸ್ತಿಯ ಯುವಕನಿಗೆ ಉಪನಯನ ಮಾಡಿಸಿದೆವು
ಕ: ತುಂಬಾ ಸಂತೋಷ. ಇಂತಾ ಕಾರ್ಯಕ್ರಮಗಳು ನಡೆಯಬೇಕು
ನಾನು : ಸಂತೋಷ
ಕ : ನೋಡಿ, ಅವರಿಗೆ ಮುಂದಿನ ಸಂಸ್ಕಾರಕ್ಕೆ ಏನು ಮಾಡುವಿರಿ? ನಾನು ಹಲವು ಕಡೆ ನೋಡಿದ್ದೀನಿ. ಸಾವಿರಾರು ಜನರಿಗೆ ಶಿವ ದೀಕ್ಷೆ ಕೊಡಿಸಿಬಿಡುತ್ತಾರೆ. ನಂತರ ಮುಂದೆ ಅವರಿಗೆ ಏನೂ ಸಂಸ್ಕಾರವಾಗುವುದಿಲ್ಲ.
ನಾನು : ಉಪನಯನ ಮಾಡಿಸಿಕೊಂಡ ವಟುವೂ ಅವನ ತಂದೆಯೂ ನಮ್ಮ ಗುರುಗಳ ಹತ್ತಿರ ಪಾಠಕ್ಕೆ ಬರುತ್ತಾರೆ.
ಕ : ಆ ಕೆಲಸ ಆಗಬೇಕು. ಸಾವಿರ ಜನರಿಗೆ ದೀಕ್ಷೆ ಕೊಟ್ಟರೆ ಪ್ರಯೋಜನವಿಲ್ಲ. ಒಮ್ಮೆ ದೀಕ್ಷೆಕೊಟ್ಟಮೇಲೆ ಆ ಮಾರ್ಗದಲ್ಲಿ ಅವನು ಮುಂದುವರೆಯಬೇಕು. ಆ ಒಂದು ಕುಟುಂಬಕ್ಕೆ ಪೂರ್ಣ ವೈದಿಕ ಸಂಸ್ಕಾರವಾದರೆ ಅವರಿಂದ ಮುಂದೆ ಹತ್ತಿಪ್ಪತ್ತು ವರ್ಷಗಳಲ್ಲಿ ನೂರಾರು ಮನೆಗಳಿಗೆ ವೈದಿಕ ಸಂಸ್ಕಾರ ಸಿಗುವಂತಾಗುತ್ತದೆ.
ಕರಂಜೆಯವರು 40 ನಿಮಿಷ ಮಾತನಾಡಿದರು. ಅವರ ಮಾತಿನಲ್ಲಿ ಕಳಕಳಿಯಿತ್ತು. ವೇದಭಾರತಿಯೇ ಆಗಲೀ ಅಥವಾ ಬೇರೆ ಯಾವುದೇ ಸಂಘಟನೆಯೇ ಆಗಲೀ ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಾರ್ಯಕ್ರಮಗಳನ್ನು ರೂಪಿಸಬೇಕೆನ್ನಿಸಿತು.

ವೇದಭಾರತಿಯ ಚಟುವಟಿಕೆಗಳ ಬಗ್ಗೆ ಶ್ರೀ ಕೆ.ಎಸ್.ಕರಂಜೆ ಅವರ ಅಭಿಮಾನದ ಮಾತು ಭಾಗ-2

ಬೀದರ್ ನ ಶ್ರೀಮದ್ ವೀರಶೈವ ರಾಜಪೀಠದ ಅಧ್ಯಕ್ಷರೂ,ಶಿವಾದ್ವೈತ ಆಗಮಿಕ ಅನುಯಾಯಿಗಳೂ ಆದ ಶ್ರೀ ಕೆ.ಎಸ್.ಕರಂಜೆ ಎಂಬ facebook ಮಿತ್ರರು ನನ್ನೊಡನೆ ತಮ್ಮ ವಿಚಾರವನ್ನು ಹಂಚಿಕೊಂಡ ಬಗ್ಗೆ ನಿನ್ನೆ ಬರೆದಿದ್ದೆ.

ನಿನ್ನೆ ಸಂಜೆ facebook vedio chat ಮೂಲಕ ವೇದಭಾರತಿಯ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡಿದರು. ಅಲ್ಲದೆ ನಾವು ಮಾಡುವ ಅಗ್ನಿಹೋತ್ರವನ್ನು ನೋಡಿ ಸಂತೋಷವನ್ನು ವ್ಯಕ್ತಪಡಿಸಿದರು. ಅವರ ಮಾತಿನ ಸಾರಾಂಶವನ್ನು ಇಲ್ಲಿ ಬರೆದಿರುವೆ.

"ವೇದ ಬಂಧುಗಳೇ ಅತ್ಯಧಿಕ ಸಂಖ್ಯೆಯ ಮಹಿಳೆಯರೂ ಮತ್ತು ಪುರುಷರೂ ಮಾಡಿದ ಅಗ್ನಿಹೋತ್ರವನ್ನು ನೋಡಿ ಬಲು ಸಂತೋಷವಾಯ್ತು.ಕಳೆದ ಕೆಲವು ದಿನಗಳಲ್ಲಿ ದಲಿತ ಬಂಧುಒಬ್ಬನಿಗೆ ಉಪನಯನ ಮಾಡಿದ ವಿಚಾರವೂ ತಿಳಿಯಿತು. ನೀವು ಬಹಳ ಅದ್ಭುತ ಕೆಲಸ ಮಾಡುತ್ತಿದ್ದೀರಿ. ಇಂತಾ ಕೆಲಸ ಮಾಡುವಾಗ ಹಲವು ವಿರೋಧಗಳೂ ಬರುತ್ತವೆ.ತಿಳುವಳಿಕೆಯ ಕೊರತೆಯಿಂದ ಬರುವ ವಿರೋಧಗಳು ಅವು ಅಷ್ಟೆ. ಆದರೆ ಮುಂದಿನ ದಿಗಳಲ್ಲಿ ನಿಮ್ಮ ಕಾರ್ಯವನ್ನು ಜನರು ಮೆಚ್ಚಲೇ ಬೇಕಾಗುತ್ತದೆ. ಅಂತಾ ಸಮಾಜಮುಖಿಕಾರ್ಯವನ್ನು ನೀವೆಲ್ಲರೂ ಮಾಡುತ್ತಿದ್ದೀರಿ. ನಿಮಗೆ ನನ್ನ ಧನ್ಯವಾದಗಳು.

ಒಂದು ವಿಷಯವು ನಿಮಗೆಲ್ಲಾ ತಿಳಿದಿರಬೇಕು. ಜಾತಿ ಎಂಬುದು ಎರಡು ರೀತಿಯಿಂದ ಬರುತ್ತದೆ. ಮೊದಲನೆಯದು ಹುಟ್ಟಿನಿಂದ. ಎರಡನೆಯದು ಕರ್ಮದಿಂದ. ವ್ಯಾಸ, ವಾಲ್ಮೀಕಿ ಯಂತಾ ಹಲವರು ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಲ್ಲ. ಆದರೆ ಅವರ ಮಹಾನ್ ಸಾಧನೆಯಿಂದ ಮಹರ್ಷಿಗಳಾದರು.ಬ್ರಾಹ್ಮಣ ಕರ್ತವ್ಯವನ್ನು ನಿರ್ವಹಿಸಿದರು. ಪೂಜ್ಯರಾದರು. ವೇದದ ರಾಶಿಯನ್ನು ಋಕ್ ,ಯಜುರ್, ಸಾಮ ಮತ್ತು ಅಥರ್ವ ವೇದಗಳಾಗಿ ವಿಂಗಡಿಸಿ ವೇದವ್ಯಾಸರಾದರು. ಯಾವ ಸಾಹಿತ್ಯವನ್ನು ಇಡೀ ಜಗತ್ತು ಅತ್ಯಂತ ಪ್ರಾಚೀನವೆಂದು ಭಾವಿಸುತ್ತದೋ ಅಂತಾ ವೇದವನ್ನು ವಿಂದಡಿಸಿದವನೇ ಹುಟ್ಟಿನಿಂದ ಬ್ರಾಹ್ಮಣನಲ್ಲ. ಪ್ರಪಂಚಕ್ಕೇ ಆದರ್ಶ ಗ್ರಂಥವಾಗಿರುವ ರಾಮಾಯಣ ಮಹಾಗ್ರಂಥವನ್ನು ರಚಿಸಿದ ವಾಲ್ಮೀಕಿ ಬೇಡರ ಜಾತಿಯಲ್ಲಿ ಹುಟ್ಟಿ ಪ್ರಾಣಿಗಳನ್ನು ಕೊಲ್ಲುತ್ತಿದ್ದವನು. ಆದರೆ ಅಂತಾ ಸ್ಥಿತಿಯಿಂದ ಮಹರ್ಷಿಯಾಗಬೇಕಾದರೆ ಅವನ ಸಾಧನೆ ಎಷ್ಟಿರಬಹುದು! ರಾಮಾಯಣ ಬರೆದು ಮಹರ್ಷಿ ವಾಲ್ಮೀಕಿಯಾದ.

ಶ್ರೀ ಶಂಕರರ ವಿಚಾರಕ್ಕೆ ಬಂದಾಗ ಚಾಂಡಾಲನ ಭೇಟಿಯ ಸಂದರ್ಭವು ಅವರ ಜೀವನದಲ್ಲೇ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ಗಂಗಾ ನದಿಯಿಂದ ಶ್ರೀ ಶಂಕರರು ಸ್ನಾನ ಮಾಡಿ ಕಾಶಿಯ ಬೀದಿಯಲ್ಲಿ ಬರುತ್ತಿದ್ದಾಗ ಎದುರು ಚಾಂಡಾಲನೊಬ್ಬನು ಬರುತ್ತಾನೆ. ಶಂಕರರ ಶಿಷ್ಯರು ಅವನನ್ನು ದೂರಸರಿ, ದೂರ ಸರಿ, ಎನ್ನುತ್ತಾರೆ. ಆಗ ಚಾಂಡಾಲ ಶಂಕರರಿಗೆ ಕೇಳುತ್ತಾನೆ. " ನಿಮ್ಮ ಶಿಷ್ಯರು ಯಾವುದಕ್ಕೆ ದೂರಸರಿ ಎನ್ನುತ್ತಿದ್ದಾರೆ? ಈ ಶರೀರಕ್ಕೋ? ಅಥವಾ ನನ್ನೊಳಗಿರುವ ಆತ್ಮಕ್ಕೋ? ನೀವು ಅಧ್ವೈತ ಸಿದ್ಧಾಂತವನ್ನು ಬೋಧಿಸುತ್ತಿದ್ದೀರಿ. ಭಗವಂತ ಮತ್ತು ನಾನು ಒಂದೇ ಎಂಬುದಲ್ಲವೇ ಸಿದ್ಧಾಂತ. ನೀವು ದೂರಸರಿ ಎಂದರೆ ನಾನು ಬೇರೆ , ನನ್ನೊಳಗಿರುವ ಪರಮಾತ್ಮ ಬೇರೆ , ಎಂದಾಗುತ್ತದಲ್ಲವೇ? ಇದು ಅಧ್ವೈತ ಸಿದ್ಧಾಂತಕ್ಕೆ ಹೊಂದುತ್ತದೆಯೇ?

ಆಗ ಶಂಕರರು ನೇರವಾಗಿ ಚಾಂಡಾಲನ ಪಾದಗಳಿಗೆರಗಿ " ನೀನು ನನ್ನ ಕಣ್ತೆರೆಸಿದೆ, ನೀನೇ ನನ್ನ ಗುರು" ಎಂದು ಅವನನ್ನು ಗುರುವಾಗಿ ಸ್ವೀಕರಿಸುತ್ತಾರೆ. ಮಣಿಷಾ ಪಂಚಕವನ್ನು ಬರೆಯುತ್ತಾರೆ. ಶ್ರೀ ಬಸವೇಶ್ವರರೂ ದೀನ ದಲಿತ ಬಂಧುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರೂ ಸಹ ಒಬ್ಬ ದಲಿತ ಬಂಧುವನ್ನು ಗುರುವಾಗಿ ಸ್ವೀಕರಿಸಲಿಲ್ಲ. ಹಾಗೆಂದು ಅವರ ಕಾರ್ಯವನ್ನು ನಾನು ಕಡಿಮೆ ಎಂದು ಹೇಳುತ್ತಿಲ್ಲ. ಆದರೆ ಶಂಕರರು ಒಬ್ಬ ಚಾಂಡಾಲನನ್ನು "ನೀನು ನನ್ನ ಕಣ್ ತೆರೆಸಿ ಗುರುವಾದೆ " ಎಂಬ ಮಾತು ನಮ್ಮ ಕಣ್ ತೆರೆಸಬೇಡವೇ?

ಸ್ತ್ರೀಯರು ವೇದಾಧ್ಯಯನ ಮಾಡಕೂಡದೆನ್ನುವವರಿಗೂ ಶ್ರೀ ಶಂಕರರೇ ಆದರ್ಶವಾಗಬೇಕು. ಮಂಡನ ಮಿಶ್ರರರಿಗೂ ಶಂಕರರಿಗೂ ಸಂವಾದ ನಡೆದು ಪಂಥಾಹ್ವಾನಕ್ಕೆ ವೇದಿಕೆ ನಿರ್ಮಾಣವಾದಾಗ ಒಬ್ಬ ತೀರ್ಪುಗಾರರು ಬೇಕಾಯ್ತು. ಆಗ ಪುರುಷ ವಿದ್ವಾಂಸರಿಗೇನೂ ಕೊರತೆ ಇರಲಿಲ್ಲವಾದರೂ ಮಂಡನ ಮಿಶ್ರರ ಪತ್ನಿ ಭಾರತೀ ದೇವಿಯನ್ನು ತೀರ್ಪುಗಾರರ ಸ್ಥಾನದಲ್ಲಿ ಕೂರಿಸಿದ ಘಟನೆ ನಮ್ಮ ಕಣ್ತೆರಸ ಬೇಡವೇ?
ಕಾಲಗರ್ಭವನ್ನು ನೋಡುತ್ತಾ ಹೋದರೆ ಇಂತಹ ಹಲವು ಉಧಾಹರಣೆಗಳು ಸಿಗುತ್ತವೆ. ಇಂದು ಸಮಾಜದಲ್ಲಿ ಸಾಮರಸ್ಯಕ್ಕಾಗಿ ಕೆಲಸಮಾಡುವುದು ಅತ್ಯಂತ ಅಗತ್ಯವಾದ ಪವಿತ್ರವಾದ ಕೆಲಸವಾಗಿದೆ. ವೇದಭಾರತಿಯಿಂದ ಇಂತಾ ಒಂದು ಪವಿತ್ರಕಾರ್ಯದಲ್ಲಿ ತೊಡಗಿರುವ ನಿಮಗೆಲ್ಲಾ ಆಭಗವಂತನು ಮಂಗಳವನ್ನುಂಟುಮಾಡಲಿ.