Pages

Tuesday, January 6, 2015

ಹಾಸನ ವೇದಭಾರತೀ,ಸಹಕಾರದೊಡನೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಒಂದು ಸಾವಿರ ಜನರ ಸಾಮೂಹಿಕ ಅಗ್ನಿಹೋತ್ರ




ಹಾವೇರಿ  ಸಮೀಪ ಮಲಗುಂದದಲ್ಲಿ ಪೂಜ್ಯ ಚಿದ್ರೂಪಾನಂದಸರಸ್ವತೀ ಸ್ವಾಮೀಜಿಯವರ ಆಶ್ರಮದಲ್ಲಿ  ದಿನಾಂಕ 10.2.2015 ರಂದು ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ ನಡೆಯಲಿದ್ದು ಆಸಕ್ತರು ಪಾಲ್ಗೊಳ್ಳಲು ಅವಕಾಶವಿದೆ. ಹಾಸನದಿಂದ ಸುಮಾರು ಒಂದು ನೂರು ವೇದಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 9.2.2015 ರಂದು ಸೋಮವಾರ ರಾತ್ರಿ 12.30 ಕ್ಕೆ ಹಾಸನದಿಂದ ರೈಲಿನಲ್ಲಿ ಹೊರಟು 10.2.2015 ಬೆಳಿಗ್ಗೆ 6.00 ಕ್ಕೆ  ಹಾವೇರಿ ತಲುಪಿ, ಅಲ್ಲಿಂದ ಆಶ್ರಮದ ಬಸ್ ಗಳಲ್ಲಿ  ಕಾರ್ಯಕ್ರಮ ಸ್ಥಳಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಇರುತ್ತದೆ. ಅಂದೇ ರಾತ್ರಿ 10.30 ಕ್ಕೆ ಹಾವೇರಿಯಿಂದ ರೈಲಿನಲ್ಲಿ ಹೊರಟು ಬೆಳಿಗ್ಗೆ 4.30 ಕ್ಕೆ ಹಾಸನಕ್ಕೆ ಹಿಂದಿರುಗಬಹುದಾಗಿದೆ. ಆಸಕ್ತರು ರೈಲಿನಲ್ಲಿ ಹೋಗಿಬರುವ  ಪ್ರಯಾಣದ ಖರ್ಚು ಒಬ್ಬರಿಗೆ  ರೂ 400.00 ನ್ನು ದಿನಾಂಕ 15.1.2015 ರೊಳಗೆ ಹರಿಹರಪುರಶ್ರೀಧರ್, ಮೊಬೈಲ್ ನಂಬರ್-9663572406,  ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ, ಹಾಸನ-ಇವರಿಗೆ ತಲುಪಿಸಿ ಅಗ್ನಿಹೋತ್ರಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಆಸಕ್ತರು ಪಾಲ್ಗೊಳ್ಳಲು    ಅವಕಾಶವಿದ್ದು ಪಾಲ್ಗೊಳ್ಳ  ಬಯಸುವವರು ಮೇಲ್ಕಂಡ ನನ್ನ ಮೊಬೈಲ್ ಗೆ ಕರೆಮಾಡಿ ತಿಳಿಸಲು ಕೋರುವೆ. ಮೇಲೆ ತಿಳಿಸುವ ರೈಲು ಮೈಸೂರು-ಧಾರವಾಡ ಟ್ರೈನ್ ಆಗಿದ್ದು ಅದು  ರಾತ್ರಿ 10.30 ಕ್ಕೆ ಮೈಸೂರು ಬಿಟ್ಟು ರಾತ್ರಿ 12.30ಕ್ಕೆ ಹಾಸನ ತಲುಪುತ್ತದೆ.ಅದೇ ರಲಿನಲ್ಲಿ ಹಾಸನದಿಂದ ನಾವು ನೂರು ಜನರು ಹೊರಟು ಹಾವೇರಿಯನ್ನು ಬೆಳಿಗ್ಗೆ 6.00 ಕ್ಕೆ ತಲುಪುತ್ತೇವೆ. ಅಲ್ಲಿಂದ ಆಶ್ರಮದ ಬಸ್ ನಲ್ಲಿ ಮಲಗುಂದಕ್ಕೆ ಹೋಗುವ ವ್ಯವಸ್ಥೆ ಎಲ್ಲರಿಗೂ ಇದೆ.
ಬೆಂಗಳೂರಿನಿಂದ ಹಾಗೂ ಉಳಿದ ನಗರಗಳಿಂದಲೂ ಹಾವೇರಿಗೆ ರೈಲು ವ್ಯವಸ್ಥೆ ಇದೆ. ಹಾವೇರಿಯಿಂದ ಆಶ್ರಮದ ವ್ಯವಸ್ಥೆಯಲ್ಲಿ ಮಲಗುಂದ ಕ್ಕೆ ಹೋಗ ಬೇಕೆಂದರೆ ಬೆಳಿಗ್ಗೆ 6.00 ಗಂಟೆಗೆ ಹಾವೇರಿ ತಲುಪಿರಬೇಕು. ಸಮಯ ವೆತ್ಯಾಸದಲ್ಲಿ ಹಾವೇರಿ ತಲುಪಿದರೆ ಹಾವೇರಿಯಿಂದ  ಅಕ್ಕಿಆಲೂರಿಗೆ KSRTC ಬಸ್ ನಲ್ಲಿ ಬಂದು ಅಲ್ಲಿಂದ ಆಟೋರಿಕ್ಷಾದಲ್ಲಿ ಮಲಗುಂದ ಆಶ್ರಮ ತಲುಪಬಹುದು.

ನೀನು ನನ್ನೊಳಗೇ ಇದ್ದೀಯ

ಭಗವಂತನೆಂಬುವನು ಒಬ್ಬನೇ. ಅದೂ ಕೂಡ ಒಂದು ಶಕ್ತಿಯ ರೂಪದಲ್ಲಿ. ಅವನು   ಗಂಡೂ ಅಲ್ಲ.ಹೆಣ್ಣೂ ಅಲ್ಲ. ಆದರೂ ಭಗವಂತನನ್ನು ಪುಲ್ಲಿಂಗ ರೂಪದಲ್ಲಿ ಕರೆಯುವುದು ರೂಢಿಯಲ್ಲಿ ಬಂದಿದೆ.  ಅವನಿಗೆ  ದೇಹವೇ ಇಲ್ಲ. ಅದೊಂದು ಶಕ್ತಿ -ವಿದ್ಯುತ್  ಇದ್ದಂತೆ. ವಿದ್ಯುತ್ ಗೆ ಆಕಾರ ಹೇಗಿರಲು ಸಾಧ್ಯ?  ಕಣ್ಣಿಗೆ  ಕಾಣುವ ಮೋಟಾರ್,ಜನರೇಟರ್, ವಿದ್ಯುತ್ ದೀಪಗಳನ್ನೇ  ವಿದ್ಯುತ್ ಎಂದು ಕರೆದರೆ ಸರಿಯೇ? ವಿದ್ಯುತ್ ಪ್ರಭಾವದಿಂದ ಓಡುವ ಮೋಟಾರ್ ನ್ನು  ನೋಡಬಹುದೇ ಹೊರತೂ ವಿದ್ಯುತ್ ನ್ನು ನೋಡಲು ಸಾಧ್ಯವಿಲ್ಲ. ಅಲ್ಲವೇ?
ಹಾಗೆಯೇ ಭಗವಚ್ಛಕ್ತಿ ಕೂಡ. ಅವನ ನಿಯಂತ್ರಣಕ್ಕೊಳಪಟ್ಟ ಜಗತ್ತನ್ನು ಕಾಣಬಹುದೇ ಹೊರತೂ ಅವನನ್ನು ನೋಡಲು ಸಾಧ್ಯವೇ ಇಲ್ಲ.  ನಮಗೆ    ಶರೀರವಿದೆ. ಅದರ ಚಿತ್ರವನ್ನೂ ಬರೆಯಬಹುದು. ಆದರೆ ಇಲ್ಲದ ಶರೀರದ ಚಿತ್ರ ಬರೆಯುವುದಾದರೂ ಹೇಗೆ? ಆದರೂ ಭಗವಂತನ ಹಲವಾರು ಕ್ರಿಯೆಗಳನ್ನು ಬಿಂಬಿಸುವ ರೂಪವನ್ನು ಕಲ್ಪಿಸಿ  ವಿಗ್ರಹಗಳನ್ನು ಶಿಲ್ಪಿಯೊಬ್ಬ ಕೆತ್ತಿದ. ವಿದ್ವಾಂಸನೊಬ್ಬ ಭಗವಂತನ ಲೀಲಾ ಪ್ರಸಂಗಗಳನ್ನು ಸ್ತೋತ್ರ ರೂಪದಲ್ಲಿ ಬರೆದ. ಆ ವಿಚಿತ್ರ ಶಕ್ತಿಯನ್ನು ಆರಾಧಿಸಿದ.ಆ ಪರಂಪರೆ ಮುಂದುವರೆಸಿದ. ಎಲ್ಲಿಯವರೆಗೆ ವಿಗ್ರಹಗಳು ಬಂದು ತಲುಪಿದೆಯೆಂದರೆ ಕ್ರಿಕೆಟ್ ಆಡುವ ಗಣಪನ ಮೂರ್ತಿಯನ್ನೂ ಸಹ ಇಂದು ಕಾಣಬಹುದು.ಕ್ರಿಕೆಟ್ ಗಣಪನಿಗೆ ಅಭಿಶೇಕ, ನೈವೇದ್ಯ, ಮಂಗಳಾರತಿ…ಎಲ್ಲವೂ ನಡೆಯುತ್ತವೆ!!!
ವೇದವು  ಸಾಮಾನ್ಯ  ಜನರಿಗೆ ಅರ್ಥವಾಗುವುದಿಲ್ಲ-ಎಂಬ ಸಬೂಬು ಹೇಳಿ ಪಂಡಿತರುಗಳೇ  ಕತೆಗಳನ್ನು ಕಟ್ಟಿ ವಿಗ್ರಹಾರಾಧನೆಯನ್ನು ವೈಭವೀಕರಿಸಿದರು. ಮನುಷ್ಯನ ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಮಾಹಿತಿಗಳು ವೇದದಲ್ಲಿರುವುದನ್ನು ಸಾಮಾನ್ಯ ಜನರಿಗೆ ಪರಿಚಯಿಸಲೆ ಇಲ್ಲ! ಬದಲಿಗೆ ಭಗವಂತನ ಸ್ತೋತ್ರಗಳನ್ನು ಹೇಳುವ , ಅವನ ಹೆಸರಲ್ಲಿ ಸಹಸ್ರನಾಮಗಳನ್ನು ಪಠಿಸುವ ಪದ್ದತಿಗಳನ್ನು ಹುಟ್ಟುಹಾಕಿದರು. ನಾನೊಮ್ಮೆ ಚಿನ್ಮಯಾ ಮಿಷನ್ನಿನ ಆಶ್ರಮ ಒಂದಕ್ಕೆ ಹೋಗಿದ್ದೆ. ಅಲ್ಲಿ ಪೂಜೆ ಮಾಡುವಾಗ ಹೇಳುವ ಚಿನ್ಮಯಾನಂದರ ಸಹಸ್ರನಾಮ ಕೇಳಿ ಅಚ್ಚರಿ ಗೊಂಡೆ.ಸಹಸ್ರನಾಮ ದಲ್ಲಿ ಒಂದು ನಾಮ ಏನು ಗೊತ್ತೆ? “ ಓಂ ಆಂಗ್ಲಭಾಷಾಪ್ರವೀಣಾಯೈ ನಮಃ” ಈ ಸಹಸ್ರನಾಮ ಅರ್ಚನೆ ಕೇಳಿದಾಗ ನಗು ಬರುವುದಿಲ್ಲವೇ? ಚಿನ್ಮಯಾನಂದರು ಭಗವದ್ಗೀತೆಯ ಸಾರವನ್ನು ಪ್ರಚುರಪಡಿಸುತ್ತಾ ಹೋದರೆ ಅವರ ಅನುಯಾಯಿಗಳು ಚಿನ್ಮಯ ಸಹಸ್ರನಾಮ ಪ್ರಚುರಪಡಿಸುತ್ತಿದ್ದಾರಲ್ಲಾ!!
ಹಿಂದುಗಳನ್ನು ನೋಡಿ ನೋಡಿ ಇತ್ತೀಚೆಗೆ ಕ್ರೈಸ್ತರೂ ಶುರುಮಾಡಿದರು “ ಜೀಸಸ್ ಸಹಸ್ರನಾಮ” ಹೀಗೆಯೇ ಮುಂದುವರೆದರೆ ಎಲ್ಲಾ ರಾಜಕೀಯ ನಾಯಕರು, ಸಿನೆಮಾ ನಟರುಗಳ ಸಹಸ್ರನಾಮ ಬರಲು ಕಾಲ ದೂರವಿಲ್ಲ.
ಇದೇನು! ಭಗವಂತನ ವಿಚಾರದಲ್ಲಿ ಹುಡುಕುವ ನಮ್ಮ ದಿಕ್ಕು ಸರಿ ಇದೆಯೇ? ಹೀಗೊಂದು ಚಿಂತನೆ ನನ್ನ ಮನದಲ್ಲಿ ಹೊಕ್ಕಾಗ….
ಎಲ್ಲಿ ಹುಡುಕಲಿ ನಿನ್ನ
ನಾ ಹೇಗೆ ಅರ್ಚಿಸಲಿ
ಯಾವ ಮಂತ್ರವ ಹೇಳಿ
ನಿನ್ನ ಮೆಚ್ಚಿಸಲಿ?
ಭಗವಂತನನ್ನು  ಹುಡುಕುತ್ತಾ ಹೊರಟಾಗ ಬಂದ ಪ್ರಶ್ನೆಗಳು. “ಭಗವಂತಾ, ನಿನ್ನನ್ನು ಎಲ್ಲಿ ಹುಡುಕಲಿ? ಎಲ್ಲಿದ್ದೀಯಾ ನೀನು? ನಿನ್ನನ್ನು ನಾನು ಹೇಗೆ ಆರಾಧಿಸಲಿ? ಯಾವ ಮಂತ್ರವನ್ನು ಹೇಳಿ ನಿನ್ನನ್ನು ನನ್ನವನನ್ನಾಗಿ ಮಾಡಿಕೊಳ್ಳಲಿ?

ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|

ನನ್ನ ಹುಚ್ಚುತನ ನೋಡು.ನಾನು ಸ್ನಾನ ಮಾಡುವುದು ಅನಿವಾರ್ಯ. ಆದರೆ ನಿನಗೂ ಮಾಡಿಸುವ ಭ್ರಮೆ ನನ್ನದು. ನಿತ್ಯಶುದ್ಧನಾದ ನಿನಗೆ ಮಡಿಯ ಮಾಡಿಸುವ ಭ್ರಮೆ ನನ್ನದು!! ನಾನು ಹಸಿವಿನಿಂದ ಇದ್ದು ನಿನಗೆ ನೈವೇದ್ಯ ಮಾಡುವ ಹುಚ್ಚು ನನಗೆ! ನಿನಗೆಲ್ಲಿಯ ಹಸಿವು? ನಿನಗೆ ನಾನು ತಿನ್ನಿಸಿಯಾಯ್ತೇ?

ಕಣ್ಮುಚ್ಚಿ ಕುಳಿತಿರುವ ನಿನ್ನ
ದೇಗುಲದೀ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?

ಭಗವಂತಾ, ಕಣ್ಣು ಮುಚ್ಚಿ ಕುಳಿತಿರುವ ನಿನ್ನ ವಿಗ್ರಹವನ್ನೇ ನೋಡಿ ಭ್ರಮಿಸಿದ ನನಗೆ ನಿನ್ನ ಪ್ರತ್ಯಕ್ಷ ದರ್ಶನ ಆಗಲೆ ಇಲ್ಲವಲ್ಲಾ! ಹೇಳು ಎಲ್ಲಿದ್ದೀಯಾ?

ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|

ಜಗತ್ತಿಗೆಲ್ಲಾ ಬೆಳಕು ಕೊಡುವ ನೀನು ಸ್ವಯಂ ಪ್ರಕಾಶ. ನಿನ್ನನ್ನು ಪುಟ್ಟ ಹಣತೆಯ ಬೆಳಕಿನಲ್ಲಿ ಹುಡುಕುವ ನನ್ನ ಹುಚ್ಚುತನಕ್ಕೆ ಏನು ಹೇಳಲಿ? ಜಗತ್ತೆಲ್ಲವನ್ನೂ ರಕ್ಷಿಸುವವನೇ ನೀನು, ನಿನಗೊಂದು ಗುಡಿ ಕಟ್ಟಿಸುವ ನನ್ನ ಹುಚ್ಚುತನ ನೋಡು. ನನ್ನ ಸಂತೋಷಕ್ಕೆ ನಾನು ಏನು ಬೇಕಾದರೂ ಮಾಡಿಕೊಳ್ಳಬಹುದು.ಆದರೆ ನಾನು ಹೇಳುವುದು ನಿನ್ನ ಹೆಸರನ್ನು! ನಿನಗೆ  ಮನೆ ಇಲ್ಲವಂತೆ! ಅದಕ್ಕೆ ಗುಡಿ ಕಟ್ಟಿಸಬೇಕಂತೆ!!

ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ
ಅಹುದೇ ದೇವ ತೋರು
ನಿನ್ನರೂಪ|

ಎಲ್ಲೆಲ್ಲೂ ಇರುವ ನಿನ್ನ   ನಿಜವಾದ ರೂಪವನ್ನು ನೋಡುವ ನನ್ನ ಹುಚ್ಚು ಆಸೆ ನೋಡು ಹೇಗಿದೆ? ಎಲ್ಲಾ ಕಡೆಯಲ್ಲಿ ವ್ಯಾಪಿಸಿರುವ ನಿನ್ನನ್ನು ನಾನು ನೋಡುವುದಾದರೂ ಹೇಗೆ? ಒಂದು ವೇಳೆ ನಾನು ನೋಡುತ್ತಿದ್ದೇನೆಂದರೂ  ಆ ನೋಡುತ್ತಿರುವ ಕಣ್ಣಿನಲ್ಲೂ ನೀನೇ ಇದ್ದೀಯಲ್ಲಾ!  ಆ ನಿನ್ನನ್ನು ನಾನು ಹೇಗೆ ನೋಡಲಿ?

ನನ್ನೊಳಗೆ ಇರುವ
ನಿನ್ನ ಮರೆತೂ ನಾನು
ಎಲ್ಲಿ ಕಾಣಲಿ ನಿನ್ನ ನಿಜದ ರೂಪ?

ಕೊನೆಯಲ್ಲಿ ನನಗೆ  ನಿನ್ನ ಬಗ್ಗೆ  ಸ್ವಲ್ಪ ಅರಿವುಂಟಾಗುತ್ತಿದೆ. . ನನ್ನಲ್ಲಿರುವ ನಿನ್ನನ್ನು ನಾನು ಮರೆತು ಎಲ್ಲೆಲ್ಲೋ ಹುಡುಕುತ್ತಿದ್ದೀನಲ್ಲಾ! ನನ್ನನ್ನು ಕ್ಷಮಿಸು ದೇವ. ನಿನ್ನ ಅನುಭವ ನನಗೆ ಮಾಡಿಬಿಡು ಸಾಕು. ನಿನ್ನ ರೂಪವನ್ನು ನೋಡುವ ಭ್ರಮೆಯನ್ನು ತೊರೆದುಬಿಡುವೆ.


ಇದೆಲ್ಲಾ ಓದಿದ ಮೇಲೆ ಇವನೊಬ್ಬ ಆರ್ಯಸಮಾಜಿ ಇವನು ವಿಗ್ರಹಾರಾಧನೆ ವಿರೋಧಿಸುತ್ತಾನೆ, ಎಂಬ ಭ್ರಮೆಗೆ ನೀವು ಬಂದರೆ ಅದು ನನ್ನ ತಪ್ಪಲ್ಲ. ಇದು ನನ್ನೊಳಗಿನ ಮಾತು. ಮ್ಕನುಷ್ಯನ ಆತ್ಮೋದ್ಧಾರಕ್ಕೆ ಅಗತ್ಯವಾಗಿರುವುದು  ಭಗವಂತನ ಸರ್ವವ್ಯಾಪಕತೆಯ ಬಗ್ಗೆ  ಬಲವಾದ ನಂಬಿಕೆ ಹೊರತೂ ಅವನನ್ನು ಸಂಕುಚಿತಗೊಳಿಸಿ ಅದಕ್ಕೊಂದು ಬಣ್ಣ ಕಟ್ಟುವುದಲ್ಲ. ಭಗವಂತನ ಈ ಭವ್ಯ ಸ್ಥಿತಿಯನ್ನು ಒಪ್ಪಿಅವನ ಗುಣಗಳನ್ನುನಮ್ಮದಾಗಿ ಮಾಡಿಕೊಳ್ಳುವುದೊಂದೇ ನಮ್ಮ ಆತ್ಮೋದ್ಧಾರಕ್ಕೆ ಇರುವ ಮಾರ್ಗ.

ಕೆಳಗಿನ ಕೊಂಡಿಯಲ್ಲಿ ಮೇಲಿನ ಹಾಡನ್ನು ಕೇಳಬಹುದು.
http://sridhar.vedasudhe.com/%e0%b2%8e%e0%b2%b2%e0%b3%8d%e0%b2%b2%e0%b2%bf-%e0%b2%b9%e0%b3%81%e0%b2%a1%e0%b3%81%e0%b2%95%e0%b2%b2%e0%b2%bf-%e0%b2%a8%e0%b2%bf%e0%b2%a8%e0%b3%8d%e0%b2%a8/