Pages

Tuesday, December 29, 2015

Saturday, December 26, 2015

K.R.ನಗರ ತಾಲ್ಲೂಕು ಹಂಪಾಪುರದ ಶ್ರೀ ಸುಭಾಷ್.ಎಂ.ರಾವ್ ಚಾರಿಟಬಲ್ ಟ್ರಸ್ಟ್ ಒಂದು ಅನುಕರಣೀಯ ಸಾಮಾಜಿಕ ಸಂಸ್ಥೆ

ನಿನ್ನೆ ಹಂಪಾಪುರದಲ್ಲಿ ಸುಭಾಷ್ ಎಂ ರಾವ್ ಟ್ರಸ್ಟ್ ನಲ್ಲಿ ನಡೆದ ಸುಭಾಷ್ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುವ ಸಂದರ್ಭದಲ್ಲಿ ಭಾಷಣವನ್ನು ಮನಸ್ಸಿಟ್ಟು ಕೇಳಿದ ತಾಯಿ ಯೊಬ್ಬರು ನನಗೆ ಆನಂತರ ಹೇಳಿದ್ದು "ಸಾರ್ ನೀವು ಇಷ್ಟು ನಿಷ್ಟೂರವಾಗಿ ಮಾತಾಡ್ತೀರಲ್ಲಾ! ವಿಚಾರದಲ್ಲಿ ಸತ್ಯವಿದೆ!! ಆದರೆ ಜನರು ನೂರಾರು ವರ್ಷಗಳಿಂದ ಅದು ಸರಿಯೋ ತಪ್ಪೋ ನಡೆಸಿಕೊಂಡು ಬಂದುಬಿಟ್ಟಿದ್ದಾರೆ ! ಅವರ ನಂಬಿಕೆಗೆ ಪೆಟ್ಟು ಕೊಡುವುದು ಸರಿಯೇ? "
ನಿಜವಾಗಿ ಆತಾಯಿಗೆ ನನ್ನ ಮೇಲೆ ಬಲು ವಾತ್ಸಲ್ಯ. ಇಷ್ಟು ಚೆನ್ನಾಗಿ ಮಾತಾಡ್ತಾರೆ. ಕೆಲವರಿಗೆ ಮನಸ್ಸಿಗೆ ಕಿರಿಕಿರಿ ಆಗುತ್ತೆ-ಎಂಬುದನ್ನು ಲೆಕ್ಕಿಸದೆ ಮಾತಾಡ್ತಾರಲ್ಲಾ! ಎಂಬ ಚಿಂತೆ ಅವರಿಗೆ. ಆಗ ನನಗೆ ನೆನಪಾದವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರೊಡನೆ ಸಾಕಷ್ಟು ಜಗಳವಾಡಿದ್ದೇನೆ. " " ಲಕ್ಷ ಲಕ್ಷ ಜನ ವಿದ್ವಾಂಸರು ಮತ್ತು ಈ ಸಮಾಜಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡವರು ನಡೆಸಿಕೊಂಡು ಬಂದಿರುವುದೆಲ್ಲಾ ತಪ್ಪು ಅಂತೀರಾ? ಎಂದಾಗ ವೇದಕ್ಕೆ ವಿರುದ್ಧವಾಗಿ ಯಾರು ಮಾಡಿದರೂ ಅದು ಅವೈದಿಕವೇ!! ತಪ್ಪೇ!! ಎಂದು ಶಾಂತವಾಗಿ ಅವ್ರು ಹೇಳಿದರೆ ನಾನು "ನಿಮ್ಮದು ಹುಚ್ಚುತನ " ಎಂದಿದ್ದೇನೆ.
ಆದರೆ ಶರ್ಮರ ಸಹವಾಸದಲ್ಲಿ ಎಂಟುಹತ್ತು ವರ್ಷಗಳು ಕಳೆದ ಮೇಲೆ " ನನ್ನನ್ನೂ ಹುಚ್ಚರ ಪಟ್ಟಿಗೆ " ಆ ತಾಯಿ ಸೇರಿಸಿದ್ದರು.

ನಾನು ಮಾಡಿದ ತಪ್ಪು ಇಷ್ಟೆ" ಕೋಟಿ ರೂಪಾಯಿ ಖರ್ಚು ಮಾಡಿ ದೇವರಿಗೆ ಕಿರೀಟವನ್ನು ತೊಡಿಸುವ ಬದಲು ಹಸಿದ ಮಕ್ಕಳಿಗೆ ತುತ್ತು ಅನ್ನ ಹಾಕುವ, ಅಳಿದುಹೋಗುತ್ತಿರುವ ಗೋಮಾತೆಯನ್ನು ರಕ್ಷಿಸುವ " ಕೆಲಸಗಳಿಗೆ ನಮ್ಮ ಗಳಿಕೆಯನ್ನು ಖರ್ಚು ಮಾಡಿದರೆ ದೇವರು ಮೆಚ್ಚುತ್ತಾನೆಂದೆ" ಅಷ್ಟೆ

ಹತ್ತಾರು ದೇವಾಲಯಗಳಿಗಾಗಿ ಲಕ್ಷಾಂತರ ರೂಪಾಯಿ ಸೇವೆ ಮಾಡಿಸುವ, ಮಠಾಧಿಪತಿಗಳ ಪಾದ ಪೂಜೆಯನ್ನು ರೆಗ್ಯುಲರ್ ಆಗಿ ಪ್ರತೀ ವರ್ಷ ಮಾಡಿ ಸಮಾಧಾನ ಪಡುವ ಈ ಶ್ರೀಮಂತ ತಾಯಿಗೆ ಯಾಕೋ ಕಸಿವಿಸಿ ಯಾಯ್ತು. ಆದರೂ ಅವರ ಬಾಯಿಂಬ ಬಂತು " ಹೌದು ಸಾರ್ ಇಂತಾ ಜೀವಂತ ದೇವರುಗಳಿಗಾಗಿ ಏನಾದರೂ ಮಾಡಬೇಕೂ ಸಾರ್" ಎಂದರು. ಅವರ ಕಣ್ಣು ತೇವವಾಗಿದ್ದನ್ನು ಗಮನಿಸಿದೆ.

ಸ್ವಾಮಿ ಚಿದ್ರೂಪಾನಂದರು ಕರ್ನಾಟಕದ ಹತ್ತಾರು ಕಡೆ ಛಾತ್ರಾಲಯಗಳನ್ನು ನಡೆಸುತ್ತಿದ್ದು ಅದರಲ್ಲಿ ಸಾವಿರಾರು ಕೊಳಚೆ ಪ್ರದೇಶಗಳಿಂದ ಕರೆದುಕೊಂಡು ಬಂದಿರುವ ಮಕ್ಕಳಿಗೆ ಊಟ ವಸತಿ ಕೊಟ್ಟು ಶಾಲೆಯ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕಾರವನ್ನು ಕೊಡುತ್ತಿದ್ದಾರೆ. ಪ್ರತೀ ದಿನ ಲಕ್ಷಾಂತರ ರೂಪಾಯಿ ಖರ್ಚು ಬರುತ್ತೆ. ಒಬ್ಬ ಸಂನ್ಯಾಸಿಯಾದವರು ನಿತ್ಯವೂ " ಈ ಮಕ್ಕಳನ್ನು ಸಾಕುವ ವಿಚಾರದಲ್ಲಿ ತಲೆ ಕೆಡಸಿ ಕೊಂಡು ಭಿಕ್ಷಾಪಾತ್ರೆಯನ್ನು ಹಿಡಿದು ರಾಜ್ಯದ ಮೂಲೆ ಮೂಲೆಯನ್ನೂ ಸುತ್ತುತ್ತಾರೆ.

ಈಗ ಹೇಳಿ ಭಗವಂತನು ಯಾವ ಸೇವೆಯನ್ನು ಮೆಚ್ಚುತ್ತಾನೆ? ಜೀವಂತ ದೇವರುಗಳ ಸೇವೆಯನ್ನೋ? ಅಥವಾ ದೇವಾಲಯಗಳ ವಿಗ್ರಹಗಳಿಗೆ ತೊಡಿಸುವ ಚಿನ್ನದ ಕವಚ ಅಥವಾ ವಜ್ರದ ಕಿರೀಟ ಸೇವೆಯನ್ನೋ?
ವೇದದ ನಿಜ ಅರಿವು ಮೂಡಿದಾಗ ಇಂತಾ ಮಾನವೀಯ ಚಿಂತನೆಗಳು ಗಟ್ಟಿಯಾಗುತ್ತವೆ. ನಿಷ್ಟುರ ಮಾತುಗಳು ನಮ್ಮ ಅರಿವಿಲ್ಲದೆ ಹೊರಬಂದಿರುತ್ತದೆ. ನಿಜವಾಗಿ ಅದಕ್ಕಾಗಿ ನನಗೆ ಪಶ್ಚಾತ್ತಾಪವಿಲ್ಲ.
-ಹರಿಹರಪುರಶ್ರೀಧರ್
ಹಾಸನ ವೇದಭಾರತಿಯ ವೇದ ಗುರುಗಳಾದ ವೇದಾಧ್ಯಾಯೀ ಶ್ರೀ ನವೀನ್ ಅವರಿಗೆ ಸನ್ಮಾನ ಹಂಪಾಪುರದಲ್ಲಿ


ಟ್ರಸ್ಟ್ ವತಿಯಿಂದ ಸಮ್ಸ್ಕಾರ ಪಡೆಯುತ್ತಿರುವ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದಾಗ


ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ





ಹಂಪಾಪುರದ ನದಿ ತೀರದಲ್ಲಿ ಶ್ರೀ ನವೀನ್ ಅವರಿಂದ ವೇದಮಂತ್ರಪಠಣ.

Tuesday, December 22, 2015

ಹಾಸನ ವೇದಭಾರತಿಯ ಐದನೇ ಸತ್ಸಂಗ ಆರಂಭ

ಗರ್ಭ ಗುಡಿಯಲ್ಲಿ ಶ್ರೀರಾಮನ ಪರಿವಾರ , ದೇವಾಲಯದ ಸುತ್ತ ಪ್ರಕೃತಿಯ ಸೊಬಗು-  ಇಂತಹ  ಸುಂದರವಾತಾವರಣದಲ್ಲಿರುವ ಹಾಸನದ  PWD ಕಾಲೊನಿ ಶ್ರೀ ರಾಮಮಂದಿರದಲ್ಲಿ ಇಂದು ವೇದಭಾರತಿಯ ಐದನೇ ಸತ್ಸಂಗವು ಆರಂಭವಾಯ್ತು. ಪ್ರತೀ ಮಂಗಳವಾರ ಸಂಜೆ 6.00 ರಿಂದ 7.00 ರವರಗೆ ಇನ್ನು ಮುಂದೆ ಶ್ರೀರಾಮ ಮಂದಿರದಲ್ಲಿ  ಅಗ್ನಿಹೋತ್ರ, ವೈದಿಕ ಭಜನೆ, ವೈದಿಕ ಚಿಂತನೆ ನಡೆಯಲಿದೆ.









Monday, November 30, 2015

ಲೌಕಿಕದಲ್ಲಿದ್ದು ಅಲೌಕಿಕ ಚಿಂತನೆ ಭಾಗ-1

ದಿನಾಂಕ 25.11.2015 ರಂದು ಹಾಸನ ಹೊಯ್ಸಳನಗರದ ಈಶಾವಾಸ್ಯಮ್ ನಲ್ಲಿ ವೇದಭಾರತೀ ಸಂಸ್ಥೆಯು ಆಯೋಜಿಸಿದ್ದ ಬೆಂಗಳೂರಿನ ಪೂಜ್ಯ ಶ್ರೀನಾರಾಯಣಾನಂದ ಸರಸ್ವತೀ ಸ್ವಾಮಿಗಳವರ ಉಪನ್ಯಾಸದ ಬರಹರೂಪದ ಮೊದಲ ಕಂತು
ಉಳಿದ ಎರಡು ಕಂತುಗಳನ್ನು ಮುಂದಿನ ಸೋಮವಾರಗಳಲ್ಲಿ ಕ್ರಮವಾಗಿ ಪ್ರಕಟಿಸಲಾಗುವುದು
[ಬರಹ ರೂಪಕ್ಕೆ : ಶ್ರೀ ಭೈರಪ್ಪಾಜಿ, ಸಂಸ್ಕೃತ ಉಪನ್ಯಾಸಕರು]


ಸಾಮಾನ್ಯವಾಗಿ ಅಲೌಕಿಕವೆಂದರೆ, ನಮಗೆ ನಿಲುಕದ್ದು ಎಂಬ ಅಭಿಪ್ರಾಯವಿದೆ. ಆದರೆ ಇದು ಇದು ಕಬ್ಬಿಣದ ಕಡಲೆಯೇನಲ್ಲ. ಅತ್ಯಂತ ಸುಲಭ ಮತ್ತು ಸರಳ. ನಮಗೆ ಯಾವುದು ಅತ್ಯಂತ ಸುಲಭ ಹಾಗೂ ಸರಳವೋ ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಯಾವುದು ಅತ್ಯಂತ ಸಮೀಪದಲ್ಲಿದೆಯೋ ಅದನ್ನು ನೋಡುವುದು ಕಷ್ಟ. ಯಾವುದು ಅತ್ಯಂತ ಪ್ರಕಾಶಮಾನವಾಗಿದೆಯೋ ಅದನ್ನು ನಾವು ಗ್ರಹಿಸುವುದು ಕಷ್ಟ. ಉದಾಹರಣೆಗೆ ಸೂರ್ಯದೇವ ಅತ್ಯಂತ ಪ್ರಕಾಶಮಯ. ನಮಗೆ ನೋಡಲು ಕಷ್ಟ ಅಲ್ಲವೇ ? ನಾವೇನಾದರು ಸೂರ್ಯನನ್ನು ದಿಟ್ಟಿಸಿ ನೋಡಲು ಹೋದರೆ ದೃಷ್ಟಿಯನ್ನೇ ಕಳೆದು ಕೊಳ್ಳಬೇಕಾಗುತ್ತದೆ ಅಲ್ಲವೇ ? ಅತ್ಯಂತ ಪ್ರಕಾಶಮಯ, ಅವನನ್ನು ದಿಟ್ಟಿಸಿ ನೋಡಲು ಸಾಧ್ಯವಿಲ್ಲ. ಹಾಗೆಯೇ ಭಗವಂತನ ಅಸ್ತಿತ್ವ ಅತ್ಯಂತ ಸಮೀಪ ಆದರೆ ನೋಡಲು ಆಗುವುದಿಲ್ಲ. ಹೇಗೆ ನೋಡಲು ಸಾಧ್ಯವಿಲ್ಲವೆಂದರೆ ಉದಾಹರಣೆಗೆ ನಮ್ಮ ಕಣ್ಣನ್ನು ನಾವೇ ಸ್ವತಃ ನೋಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಕಣ್ಣಿನ ಮೂಲಕ ಎಲ್ಲವನ್ನು ನೋಡುತ್ತೇವೆ. ಸ್ವತಃ ಕಣ್ಣನ್ನು ನೋಡಲು ಸಾಧ್ಯವಿಲ್ಲ ನಮಗೆ. ಯಾವುದೇ ಮಾಧ್ಯಮವಿಲ್ಲದೆ, ದರ್ಪಣ, ಕನ್ನಡಿ, ಮತ್ತು ಇತ್ಯಾದಿಗಳಿಲ್ಲದೆ ನಮ್ಮ ಕಣ್ಣುಗಳನ್ನು, ನೇತ್ರಗಳನ್ನು ನಾವೇ ನೋಡಿಕೊಳ್ಳಬೇಕು. ಹೇಗೆ ನೋಡಿಕೊಳ್ಳುವುದು ? ಲೋಕವನ್ನು ಕಣ್ಣುಗಳಿಂದ ನೋಡುತಿದ್ದೇವೆ. ಕಣ್ಣುಗಳಿಂದ ನೋಡುತ್ತಿದ್ದೇವೆ ಎನ್ನುವುದು ಅಲೌಕಿಕ. ಕಿಂಚಿತ್ ನಮ್ಮ ಭಾವನೆಯಲ್ಲಿ ಆಲೋಚನೆಯಲ್ಲಿ ಸ್ವಲ್ಪ ನಾವು ಜಾಗೃತೆಯನ್ನು ವಹಿಸಬೇಕಷ್ಟೆ ಅತ್ಯಂತ ಸುಲಭ ಸರಳ. 
ಒಬ್ಬರು ಆಶ್ರಮಕ್ಕೆ ಬಂದಿದ್ದರು. “ ಸ್ವಾಮೀಜಿ ನನಗೆ ಅತ್ಯಂತ ಉತ್ಸಾಹ ಬಂದು ಬಿಟ್ಟಿದೆ. ವೈರಾಗ್ಯ ತನ್ನಷ್ಟಕ್ಕೆ ತಾನೆ ಏನು ಉಕ್ಕಿ ಹರಿಯುತ್ತಿದೆ. ನೀವು ಏನೇನು ಕಾರ್ಯ ಹೇಳುತ್ತೀರೋ ಎಲ್ಲಾ ಮಾಡ್ತೇನೆ ನಾನು. ಅಹರ್ನಿಶಂ ಸೇವಾಮಹೇ. ಹಗಲೂ ರಾತ್ರಿ ಅನ್ನದೆ ಸೇವೆ ಮಾಡ್ತೇನೆ. ನೀವು ಹೇಳಿದರೆ ಸಾಕು ಇಂತದ್ದು ಅಂತ. ಮಾಡ್ತೇನೆ ನಾನು” ನಾವು ಹೇಳಿದೆವು. ಮಾರಾಯ್ರೆ ತಾವು ಏನು ಮಾಡದೆ ಸುಮ್ಮನೆ ಕೂತರೆ ಸಾಕಾಗಿದೆ. ಅದೇ ದೊಡ್ಡ ಸೇವೆ. ಅವರು ಹೇಳ್ತಾರೆ. ಸ್ವಾಮೀಜಿ ಅದೇ ದೊಡ್ಡ ಕಷ್ಟ. ಸುಮ್ಮನೆ ಕುಳಿತು ಕೊಳ್ಳುವುದು ಕಷ್ಟ ನನಗೆ ನೀವು ಏನಾದರು ಹೇಳಿ ಮಾಡ್ತೀನಿ. ಸುಮ್ಮನೆ ಕೂತ್ಕೋ ಅಂದ್ರೆ ನೋಡಿ ಅದು ಬಹಳ ಕಷ್ಟವಾಗುತ್ತೆ. ನೀವು ನೋಡಿ ಸುಮ್ಮನೆ ಕೂತ್ಕೊಳೋದು ಅಂದ್ರೆ ಏನು ಮಾಡೋದಿದೆ ? ಮಾಡಲು ಅಲ್ಲಿ ಏನಿಲ್ಲ. ಸುಮ್ಮನೆ ಕೂಡ್ರಪ್ಪ ಅಂದರೆ ಬಹಳ ಕಷ್ಟವಾಗುತ್ತೆ “ ನೀವೇನಾದ್ರು ಹೇಳಿ ಅದನ್ನು ಮಾಡ್ತೇನೆ. ಅಕಸ್ಮಾತ್ ಕೆಲಸ ಇಲ್ಲವಾ ? ಈ ಕುರ್ಚಿ ಒರೆಸು ಅಂದ್ರೆ ಒರೆಸ್ತೀನಿ” ನಾವು ಹೇಳಿದೆವು, ಏನು ಬೇಡಪ್ಪ ಸುಮ್ಮನೆ ಕೂತ್ಕೋ, ಅವರು ಹೇಳಿದರು, ಕಷ್ಟ ಸ್ವಾಮೀಜಿ ಬಹಳ ಕಷ್ಟ. 


ಆದ್ದರಿಂದ ಅತ್ಯಂತ ಸುಲಭ, ಆದ್ರೆ ನೋಡಿ ಅತ್ಯಂತ ಕಠಿಣ. ಆದರಿಂದ ಲೋಕದಲ್ಲಿ ಎರಡು ರೀತಿಯಾದಂತಹ ಜನರಿದ್ದಾರೆ. ಒಬ್ಬರು ನಾಸ್ತಿಕರು. ಇನ್ನೊಬ್ಬರು ಆಸ್ತಿಕರು. ಸಾಮಾನ್ಯವಾಗಿ ನಾವು ನಿಘಂಟನ್ನು ನೋಡಿದರೆ. ಸ್ತಿಕ ಅಂದ್ರೆ ದೇವರಲ್ಲಿ ನಂಬಿಕೆಯಿಲ್ಲದವಾ ಅಂತ ಸಾಮಾನ್ಯವಾಗಿ ಹೇಳಿಬಿಡ್ತಾರೆ. ಆದರೆ ವೇದದಲ್ಲಿ ಆ ರೀತಿಯ ಅರ್ಥ ಇಲ್ಲ. ನಾಸ್ತಿಕ ಯಾರು ಅಂತ ಹೇಳಿದ್ರೆ ಯಾರು ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲವೋ ಅವನು ನಾಸ್ತಿಕ. ನಮ್ಮ ಶಾಸ್ತ್ರದಲ್ಲಿ ಮೂರು ವರ್ಗ ಇದೆ ನಾಸ್ತಿಕರಲ್ಲಿ. ೧) ಚಾರ್ವಾಕರು, ೨) ಬೌದ್ಧರು, ೩) ಜೈನರು ಈ ಮೂರು ಜನರನ್ನು ನಾಸ್ತಿಕರು ಅನ್ನುವ ಪಟ್ಟಿಯಲ್ಲಿ ಸೇರಿಸ್ತಾರೆ. ದೇವರನ್ನ ನಂಬುವರಲ್ಲ ಅಂತ ಅರ್ಥ ಅಲ್ಲ. ನಂಬ್ತಾರೆ. ಆದರೆ ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲ. ಆದ್ದರಿಂದಲೇ ಅವರು ನಾಸ್ತಿಕರು. ನ ಅಸ್ತಿ ಇತಿ ಮನ್ಯತೇ | ಇಲ್ಲ ಅಂತ ಹೇಳ್ತಾರೆ, ವೇದವನ್ನು ನಂಬೋದಿಲ್ಲ ಅವರು. ಇನ್ನು ಷಡ್ದರ್ಶನಗಳಿವೆ. ಅವು ವೇದವನ್ನು ಪ್ರಮಾಣವಾಗಿ ಸ್ವೀಕಾರ ಮಾಡುತ್ತವೆ ಆಸ್ತಿಕರು, ಅಸ್ತಿ, ಅಸ್ತಿ, ಅಸ್ತಿ ಇತಿ ಕಥ್ಯತೇ | ಆಸ್ತಿಕರು, ಏನು ಅಸ್ತಿ ಅಂತ ಹೇಳ್ತಾರೆ ? ಏನು ಇದೆ ಅಂತ ಹೇಳ್ತಾರೆ ? ಅಸ್ತಿ ಇತಿ ಮನ್ಯತೇ | ಇದೆ ಅಂತ ಏನು ಇದೆ ? ಮಾನವನ ಒಂದು ಇಂದ್ರಿಯಕ್ಕೆ ನಿಲುಕದಂತ ಒಂದು ವಸ್ತು ಇದೆ. ದಿವ್ಯ ಅದ್ಭುತವಾದ ಒಂದು ಶಕ್ತಿ ಇದೆ. ಈ ಲೋಕ ಮಾತ್ರವಲ್ಲ ಬ್ರಹ್ಮಾಂಡವನ್ನು ನಡೆಸುತ್ತಿರುವ ಒಂದು ಶಕ್ತಿ ಇದೆ. ನಾವೆಲ್ಲರೂ ಅದನ್ನು ನಂಬಿದ್ದೇವೆ. ಇಂದ್ರಿಯಗಳಿಗೆ ಗೋಚರವಾಗಿಲ್ಲ ಅದು, ಗೋಚರವಾಗಲಿಕ್ಕೆ ಸಾಧ್ಯವಿಲ್ಲ ಅದು. ಇಂದ್ರಿಯಾತೀವಾಗಿರುವಂತದ್ದು ಅದು. ಕಣ್ಣಿಂದ ಕಿವಿಗಳಿಂದ ಅಥವಾ ನಮ್ಮ ಯಾವುದೇ ಇಂದ್ರಿಯಗಳಿಂದ ಅದನ್ನು ಅನುಭವಿಸಲು ಸಾಧ್ಯವಿಲ್ಲ. ನಿದ್ದೆಯಲ್ಲಿ ಶೂನ್ಯದ ಅವಸ್ಥೆಯಲ್ಲಿರುತ್ತೇವೆ. ನೋಡಿ ಅದು ಬ್ರಹ್ಮಾನಂದ ಸ್ಥಿತಿ. ಬ್ರಹ್ಮೈಕ್ಯದ ಸ್ಥಿತಿ. ಅದಕ್ಕೆ ಯಾರೋ ಒಬ್ಬರು ಹಿರಿಯರು ಹೇಳ್ತಾ ಇದ್ದರು. ನಾವು ನಿದ್ರೆ ಮಾಡಿದರೆ ಅದು ಅಲ್ಪ ಕಾಲದ ಮರಣ. ನಾವು ಸುಧೀರ್ಘವಾದ ನಿದ್ರೆ ಮಾಡಿದರೆ ಅದು ಮರಣ. ಅಲ್ಪ ಮರಣ ನಿದ್ರೆ. ಸುಧೀರ್ಘ ನಿದ್ರೆ ಮರಣ. ಎಷ್ಟು ಸೊಗಸಾಗಿ ಹೇಳಿದರು ನೋಡಿ. ಆ ಅಲ್ಪ ಮರಣದ ನಿದ್ರೆಯಲ್ಲಿ ಹೇಗೆ ಇರುತ್ತೇವೆ ನೋಡಿ, ಆಗ ಬ್ರಹ್ಮೈಕ್ಯದ ಸ್ಥಿತಿಯಲ್ಲಿರುತ್ತೇವೆ. ಯಾರನ್ನಾದರೂ ಎಬ್ಬಿಸಿ ಕೇಳಿ. ಏನಪ್ಪಾ ಹೇಗಿತ್ತು ? ಅವರು ಹೇಳ್ತಾರೆ. ಹೇಗಿತ್ತು..... ಅಹಂ ಕಿಮಪಿ ನ ಜಾನಾಮಿ | ನನಗೇನು ಗೊತ್ತಾಗಲಿಲ್ಲ. ಆದರೆ ಒಂಥರಾ ಒಂಥರಾ ಸುಖವಾಗಿತ್ತು. ಸುಖವಾಗಿತ್ತು ? ಆದರೆ ಏನು ಗೊತ್ತಾಗಿಲ್ಲ ಅಂತ ಹೇಳ್ತೀರಿ. ಮತ್ತೆ ಸುಖವಾಗಿದ್ದೆ ಅಂತ ಹೇಳ್ತೀರಿ ? ಅಲ್ಲ ಅದೇನೋ ಒಂಥರಾ ಎಲ್ಲ ಮರೆತಿದ್ದೆ ನಾನು. ನಾನು ಯಾರು ಎಂಬುದನ್ನು ಕೂಡ ಮರೆತಿದ್ದೆ. ವಿಚಾರ ಮಾಡಿ. ಆತ ಆಸ್ತಿಕ. ಸತ್ಯದ ಅವಸ್ಥೆಯಲ್ಲಿರುತ್ತಾನೆ. ಅದಕ್ಕೆ ಮಾಂಡೂಕ್ಯ ಉಪನಿಷತ್ತಿನಲ್ಲಿ ಹೇಳ್ತಾರೆ. ಹೇಗೆ ನಾವು ನಿದ್ರಾ ಸ್ಥಿತಿಯಲ್ಲಿದ್ದೆವೋ ಅದೇ ರೀತಿ ಜಾಗೃತಾವಸ್ಥೆಯಲ್ಲಿದ್ದರೆ ಅಲೌಕಿಕ ಚಿಂತನೆಯಲ್ಲಿದ್ದೇವೆ ಅಂತ ಅರ್ಥ. 

ಈ ಆಸ್ತಿಕ ನಾಸ್ತಿಕ ಭೇದದಲ್ಲಿ ಲೋಕದ ಜನರಿದ್ದಾರೆ. ಅಲೌಕಿಕ ಅಂದರೆ ಅರ್ಥ ಏನು ? ಈ ಲೋಕಕ್ಕೂ ಮಿಗಿಲಾಗಿರುವಂತದ್ದು. ಇಂಗ್ಲಿಷ್ ನಲ್ಲಿ ಹೇಳ್ತೇವೆ. ಹಿಯರ್ ಅಂಡ್ ಹಿಯರ್ ಆಫ್ಟರ್ [ಇಲ್ಲಿ ಮತ್ತು ಇಲ್ಲಿಂದಾಚೆ] ಯಾರೂ ಕೂಡ ಇದೂವರೆಗೆ ಇಲ್ಲಿಂದಾಚೆ ಹೋದವರು ಈ ಲೋಕದಿಂದ ಹೋದವರು ವಾಪಸ್ಸು ಬಂದು ನಮಗೆ ರಿಪೋರ್ಟ್ ಕೊಟ್ಟಿಲ್ಲ. ಓ ನೋಡಪ್ಪ ಅಲ್ಲಿ ಇದ್ದೀನಿ ನಾನು ಅಂತಾ ಯಾರೂ ತಿಳಿಸಿಲ್ಲ.ಹೋದರೆ ಹೋದಂತೆ, ಮತ್ತೆ ಅವರು ಎಲ್ಲಿದ್ದಾರೋ? ಯಾವ ಲೋಕ ಸೇರಿಕೊಂಡಿದ್ದಾರೋ ? ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೋ ? ಏನೂ ಗೊತ್ತಿಲ್ಲ. ರಹಸ್ಯವಾಗಿದೆ ಅದು. ಆದರಿಂದಲೇ ನಾವು ವೇದಪ್ರಮಾಣವನ್ನು ತೆಗೆದು ಕೊಂಡಾಗ ಹೇಗೆ ಜೀವಿಸಬೇಕು ಅನ್ನೋದನ್ನ ಕಲಿಯೋದು ಮಾತ್ರವಲ್ಲ. ಹೇಗೆ ಜೀವಿಸಿದರೆ ಹೇಗೆ ಪ್ರಾಪ್ತಿಯಾಗುತ್ತೆ ಅನ್ನೋದು ಕೂಡ ವೇದದಲ್ಲಿದೆ. ಏಕೆಂದರೆ ಅದನ್ನು ಮಾನವನು ಹೇಳೋಕೆ ಸಾಧ್ಯವಿಲ್ಲ. ಮಾನವ ಶರೀರ ಬಿಟ್ಟರೆ ಬಿಟ್ಟ ಹಾಗೆ. ವಾಪಸ್ಸು ಬಂದು ಹೇಳೋದಿಲ್ಲ. ಆದ್ದರಿಂದ ಅಲೌಕಿದಲ್ಲಿ ಹೇಗಿರುತ್ತೇ ಯಾರು ತಿಳಿದಿಲ್ಲ. ಶಾಸ್ತ್ರಮೇವ ಪ್ರಮಾಣಂ | ವಿಚಾರ ಮಾಡಿ ಆದ್ದರಿಂದ ಜೀವನವನ್ನ ಯಾವ ರೀತಿ ನಡೆಸಬೇಕು ಅನ್ನೊದರಲ್ಲಿ ವೇದ ಪ್ರಮಾಣ ಇದೆ. ಯಾವ ರೀತಿ ನಡೆಸಿದರೆ ಏನು ಅದರಿಂದ ಪರಿಣಾಮ ಅನ್ನೋದು ವೇದದಲ್ಲಿದೆ. ಆದ್ದರಿಂದ ನಾವು ಶಾಸ್ತ್ರಾಧಾರಿತವಾಗಿ ಜೀವನವನ್ನು ನಡೆಸಿದಾಗ ಲೋಪದೋಷಗಳು ಉಂಟಾಗುವುದಿಲ್ಲ. ವಿಚಾರ ಮಾಡಿ. ಆದರೆ ಸಾಮಾನ್ಯವಾಗಿ ನಾವು ಚಿಂತನೆ ಮಾಡಿದಾಗ ಪಾರಮಾರ್ಥಿಕ ಚಿಂತನೆ ನಮಗೆ ಎಲ್ಲೋ ಯತ್ಕಿಂಚಿತ್ ಆಗಬಹುದಷ್ಟೆ. ಶೇಕಡ ೯೯ ರಷ್ಟು ನಮ್ಮ ಚಿಂತನೆ ವ್ಯಾವಹಾರಿಕ ದೃಷ್ಟಿಯಲ್ಲೇ ಇರುತ್ತೇ. ಇಲ್ಲೇ ಸಂಚಾರ ಮಾಡ್ತಾ ಇರುತ್ತೇ. ಇದರಿಂದ ಮೇಲೆ ಹೋಗಲಿಕ್ಕೆ ಸಾಧ್ಯಾವಾಗುವುದಿಲ್ಲವೇನೋ ಅನ್ನುವಷ್ಟು ವ್ಯಾವಹಾರಿಕದಲ್ಲಿ ಮುಳುಗಿರುತ್ತೇವೆ ನಾವು. 
ಲೋಕ ಅಂದರೇನು ? ಅಥವಾ ಲೌಕಿಕ ಎಂದರೇನು ? ಅಲೌಕಿಕ ಎಂದರೇನು ? ಸರಳ ರೀತಿಯಲ್ಲಿ ವಿಚಾರ ಮಾಡೋಣ. ಎಲ್ಲಿ ನಾನು ಅನ್ನುವ ಪಟ್ಟಿಯಲ್ಲಿ ಏನೋನು ಬರುತ್ತೋ ಅದರಲ್ಲಿ ನಾವಿದ್ದರೆ ಅದು ಲೌಕಿಕ. ಎಲ್ಲಿ ನಾನು ಅನ್ನುವ ಪಟ್ಟಿಯಲ್ಲಿ ನಾವಿಲ್ಲವೋ ಅದು ಅಲೌಕಿಕ. ಅದೇನು ? ಅರ್ಥ ಮಾಡಿಕೊಳ್ಳುವುದು ಕಷ್ಟವಾಯ್ತಲ್ವಾ? ಇನ್ನು ಸರಳ ಮಾಡೋಣ. ನನ್ನ ಪುಸ್ತಕ, ನನ್ನ ಕೈಗಡಿಯಾರ, ನನ್ನ ಮೈಕ್ರೋಫೋನ್, ನನ್ನ ಒಂದು ಕಟ್ಟಡ, ನನ್ನ ಮಗ, ನನ್ನ ಹೆಂಡತಿ, ನನಗೆ ಸಂಬಂಧ ಪಟ್ಟಿದ್ದು, ಎಲ್ಲೆಲ್ಲಿ ನನಗೆ ಸಂಬಂದಪಟ್ಟಿದೆಯೋ ನಾವು ಲೋಕದಲ್ಲಿದ್ದೇವೆ ಅಂತ ಅರ್ಥ. ಅಲೌಕಿಕಕ್ಕೇ ಅಮೇಲೆ ಬರೋಣ, ಈ ಲೋಕದಲ್ಲಿ ಇನ್ನು ಸ್ವಲ್ಪ ಆಳವಾಗಿ ಮುಳುಗಿ ಆಮೇಲೆ ಎದ್ದು ಬರೋಣ. ಈಗ ನೋಡಿ ಎಷ್ಟು ಸುಲಭ ಅರ್ಥ ಮಾಡಿಕೊಳ್ಳೋದು. ನಾನೊಂದು ವಜ್ರದ ಕೈಗಡಿಯಾರವನ್ನು ಎಷ್ಟೋ ಕೋಟ್ಯಾಂತರ ಬೆಲೆಯನ್ನ ಕೊಟ್ಟು ಕೊಂಡಿದ್ದೇನೆ, ಎಂದು ಭಾವಿಸಿ. ವಜ್ರದ ಕೈಗಡಿಯಾರ. ಯಾರದದು ? ನನ್ನದು!! ಎಲ್ಲರಿಗೂ ತೋರಿಸ್ತೀನಿ! ಅವರು ನೋಡಲೇಬೇಕು ನೋಡದಿದ್ದರೆ ಏನು ಪ್ರಯೋಜನ!!! ಅದನ್ನ ನಾನು ಎಲ್ಲರಿಗೂ ತೋರಿಸ್ತಾ ಬರ್ತೇನೆ. ನೋಡಿ ನೋಡಿ ವಜ್ರದ ಕೈಗಡಿಯಾರ, ನೀವು ಮಾತಾಡ್ಕೋತೀರಿ ಏನು ಸ್ವಾಮಿಗಳಪ್ಪ ಅಯ್ಯೋ ವಜ್ರದ ಕೈಗಡಿಯಾರ. ಎಲ್ಲರಿಗೂ ಹೊಟ್ಟೆ ಉರೀಬೇಕು. ಆಗ ನನಗೆ ಖುಷಿ ನೋಡಿ ನೋಡಿ. ಆಗ ಯಾರೋ ಕೇಳ್ತಾರೆ ನಮ್ಮನ್ನ ನಾನು ಕೋಟ್ಯಾದೀಶ್ವರ. ಸ್ವಾಮೀಜಿ ನಿಮಗ್ಯಾಕದು ನಮಗೆ ಕೊಟ್ಟು ಬಿಡಿ. ನಾನು ತೆಗೆದು ಕೊಳ್ಳುತ್ತೇನೆ ಆಯ್ತು ಇನ್ನೇನು ತಗೋಳಿ ಅಂತ ನಾನು ಕೊಡ್ತೇನೆ, ಕೊಟ್ಟ ಕೂಡಲೇ ಅದಕ್ಕೆ ಏನು ಬೆಲೆ ಇದೆ ಅದು ನನ್ನ ಅಕೌಂಟಿಗೆ ಜಮಾ ಆಗಿ ಬಿಟ್ಟಿರುತ್ತೆ. ಕೊಟ್ಟಾಗಿದೆ. ಈಗ ವಜ್ರದ ಕೈಗಡಿಯಾರ ಯಾರದ್ದು ? ನನ್ನದಾಗಿದೆಯೇ ಅದು ? ನನ್ನದಾಗಿಲ್ಲ ಮಾರಿಬಿಟ್ಟಿದ್ದೇನೆ. ಮಾರಿ ಆದ ಮೇಲೆ ಕೊಡುಕೊಂಡ ಆಕೋಟ್ಯಾಧಿಪತಿ ಮಾರನೆ ದಿನವೇ ನನಗೆ ಮೊಬೈಲ್ ನಲ್ಲಿ ಪೋನ್ ಮಾಡ್ತಾರೆ. ಸ್ವಾಮಿಜಿ, ನೀವು ಕೊಟ್ಟರಲ್ಲ ವಜ್ರದ ಕೈಗಡಿಯಾರ ಕಳೆದು ಹೋಯ್ತು 
-ಆಹೌದಾ ನಾನೇನು ಮಾಡ್ಲಿ ? ನೀವು ಕಳೆದು ಕೊಂಡಿದ್ದು ಏನೂ ಆಗಿಲ್ಲವೆಂಬಂತೆ ನಾನು ಉತ್ತರಿಸುತ್ತೇನೆ. ಒಂದು ವೇಳೆ ವಜ್ರದ ಕೈಗಡಿಯಾರ ಇನ್ನೂ ನನ್ನದೂ ಅನ್ನೋ ಪಟ್ಟಿಯಲ್ಲಿ ಇದ್ದು ಅದನ್ನ ಕಳೆದು ಕೊಂಡಿದ್ದರೆ ನನ್ನ ಅವಸ್ಥೆ ನೀವು ನೋಡೋಕಾಗೋದಾ ? ಯಾಕಂದ್ರೆ ನನ್ನ ಅವಸ್ಥೇ ನಾನು ಕೂಡ ನೋಡಿಕೊಳ್ಳಲಾಗುವುದಿಲ್ಲ ಕನ್ನಡಿಯಲ್ಲಿ. ಅಷ್ಟು ಕರಗಿ ಹೋಗಿಬಿಡ್ತಿದ್ದೆ ನಾನು. ಆದರೀಗ ಮಾರಿ ಬಿಟ್ಟಿದ್ದೀನಿ. ಈಗದು ನನ್ನದು ಅನ್ನೋ ಪಟ್ಟಿಯಲ್ಲಿ ಇಲ್ಲ.
ವಿಚಾರ ಮಾಡಿ. ಯಾವುದು ನನ್ನದಲ್ಲ ಅನ್ನೊ ಪಟ್ಟಿಯಿಂದ ತೆಗೆದು ಹಾಕಿಬಿಡಿ ನೀವು ಆಗ ಅಲೌಕಿದಲ್ಲಿರುತ್ತೀರಿ. ಯಾವುದನ್ನೇ ತಗೊಳ್ಳಿ ನೀವು. ನಾನು ಸುಮ್ಮನೆ ವಜ್ರದ ಕೈಗಡಿಯಾರದ ಉದಾಹರಣೆ ಕೊಟ್ಟೆ. ಅದಕ್ಕೆ ಯಾವುದನ್ನೇ ಜೋಡಿಸಿಕೊಳ್ಳಿ. ನನ್ನದು ಅನ್ನೋ ಪಟ್ಟಿಯಲ್ಲಿ ಯಾರನ್ನೂ ಯಾವ ವಸ್ತುವನ್ನು ಸೇರಿಸಿಕೊಳ್ಳಬಾರದು. ನೀವು ಬಹಳ ಸುಖವಾಗಿರ್ತೀರಿ. ಎಲ್ಲಿ ನಾವು ಲೋಕದಲ್ಲಿ ಅಂಟಿಕೊಂಡಿರುತ್ತೇವೆಯೋ ಆಗ ನನ್ನದು ಅನ್ನೋ ಪಟ್ಟಿಯಲ್ಲಿ ಇರುತ್ತದೆ. ವಿಚಾರ ಮಾಡಿ ಇದು ಲೌಕಿಕ ಚಿಂತನೆ. ನಂದು, ನನ್ನದು, ನಾನು, ಮಮ, ಅಹಂ ಇತಿ ಇವೆರಡು ಇದ್ದು ಬಿಟ್ಟರೆ ನಾವು ಲೋಕದಲ್ಲೇ ಇರುತ್ತೇವೆ. ಅದಕ್ಕೆ ನಾವು ಅಗ್ನಿಹೋತ್ರವನ್ನು ಮಾಡಬೇಕಾದರೆ ನಾವು ಹೇಳುತ್ತೇವೆ. ಅಗ್ನಯೇ ಸ್ವಾಹಾ | ಅಗ್ನಯೇ ಇದಂ ನ ಮಮ | ಅಂದರೆ ನಾನು ಹವಿಸ್ಸನ್ನು ಹಾಕುತ್ತಾ ಇದ್ದೀನಿ. ಯಾವುದೊಂದರ ಅಪೇಕ್ಷೆಗಲ್ಲ. 

Friday, November 27, 2015

ಆದರ್ಶ ಪುರೋಹಿತರಾಗೋಣ!


     ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದಾಕ್ಷಣ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ  ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ. ಬುದ್ಧಿಜೀವಿಗಳೆನಿಸಿಕೊಂಡವರು ಸಾಮಾನ್ಯವಾಗಿ 'ಪುರೋಹಿತಶಾಹಿ' ಎಂಬ ಪದವನ್ನು ಒಂದು ವರ್ಗದವರನ್ನು ದೂಷಿಸಲು ಕಾರಣವಾಗಿಯೋ, ಅಕಾರಣವಾಗಿಯೋ ಸುಲಭವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲ ಅರ್ಥದಲ್ಲಿ ಬಳಕೆಯಾಗದೆ ವಿರುದ್ಧಾರ್ಥದಲ್ಲಿ ಬಳಕೆಯಾಗುತ್ತಿರುವುದು ವಿಪರ್ಯಾಸ. ಜಾತಿಯ ಬಲದಲ್ಲೇ ರಾಜಕಾರಣ ಮಾಡುತ್ತಿರುವವರು ಜಾತ್ಯಾತೀತತೆಯ ಮಾತನಾಡುತ್ತಾರೆ. ಯಾವುದಾದರೂ ಒಂದು ಕೋಮನ್ನು ದ್ವೇಷಿಸುವುದೇ ಬಂಡವಾಳವಾಗಿರುವವರು ಕೋಮು ಸೌಹಾರ್ದತೆಯ  ಮಾತನಾಡುತ್ತಾರೆ. ಕೋಟ್ಯಾಧೀಶರಾದರೂ, ಅಧಿಕಾರಸ್ಥಾನದಲ್ಲಿದ್ದು ಇತರರನ್ನು ನಿಯಂತ್ರಿಸುವ ಶಕ್ತಿಯಿರುವವರೂ ಹಿಂದುಳಿದವರು, ದಲಿತರು, ಶೋಷಿತರು ಎನಿಸಿಕೊಳ್ಳುವವರಿದ್ದಾರೆ. ಕಡುಬಡವರಾಗಿದ್ದರೂ ಹುಟ್ಟಿನ ಜಾತಿಯ ಕಾರಣ ಮುಂದುವರೆದವರು ಎಂದೆನಿಸಿಕೊಂಡವರಿದ್ದಾರೆ. ಮೂಲ ಅರ್ಥ ಕಳೆದುಕೊಂಡು ಸವಕಲಾಗಿರುವ ಪದಗಳ ಸಾಲಿನಲ್ಲಿ ಸೇರಿರುವ ಈ 'ಪುರೋಹಿತ' ಪದದ ಮೂಲ ಅರ್ಥ ಕುರಿತು ವಿಶ್ಲೇಷಿಸುವುದೇ ಈ ಲೇಖನದ ಉದ್ದೇಶವಾಗಿದೆ.
     ಮೂಲ ಸಂಸ್ಕೃತ ಪದವಾದ ಪುರೋಹಿತ ಎಂಬ ಪದದ ಶಬ್ದಾರ್ಥ 'ಪುರಸ್' ಎಂದರೆ ಮುಂದೆ 'ಹಿತ' ಎಂದರೆ ಇಡಲ್ಪಟ್ಟವನು ಅರ್ಥಾತ್ ಮುಂದೆ ಇರಿಸಲ್ಪಟ್ಟವನು, ಅಗ್ರಣಿ, ಮುಂದಿರುವವನು ಎಂದು. ಒಬ್ಬ ವ್ಯಕ್ತಿ ಪುರೋಹಿತನೆಂದು ಗೌರವಿಸಲ್ಪಡಬೇಕಾದರೆ ಆತನಲ್ಲಿ ವಿಶೇಷವಾದ ಜ್ಞಾನ ಮತ್ತು ಗುಣಗಳು ಇರಬೇಕಾಗುತ್ತದೆ. ಸಂದಿಗ್ಧ ಸಂದರ್ಭಗಳಲ್ಲಿ, ಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ ಅದಕ್ಕೆ ಸೂಕ್ತ ಪರಿಹಾರಗಳನ್ನು, ಸಮಸ್ಯೆಗಳಿಂದ ಹೊರಬರುವ ಮಾರ್ಗೋಪಾಯಗಳನ್ನು ತಿಳಿಸಬಲ್ಲ ಶಕ್ತಿ ಆತನಲ್ಲಿರಬೇಕಾಗುತ್ತದೆ. ಮುಂದಿರುವುದರಿಂದ ಹಿಂದೆ ಇರುವವರಿಗೆ ಆತ ಸಹಜವಾಗಿ ಮಾರ್ಗದರ್ಶಕನಾಗಿರಬೇಕಾಗುತ್ತದೆ. ಇತರರಿಗೆ ಬುದ್ಧಿ ಹೇಳಬೇಕಾದರೆ ಆತ ಸ್ವತಃ ಜ್ಞಾನವಂತ, ಶೀಲವಂತ, ಚಾರಿತ್ರ್ಯವಂತನಾಗಿರಬೇಕಾಗುತ್ತದೆ. ಇಂತಹ ಗುಣಗಳಿರುವವರು ಮಾತ್ರ ನೈಜ ಪುರೋಹಿತರೆನಿಸಿಕೊಳ್ಳಬಲ್ಲರು. ಪಂಡಿತರು ಎಂಬ ಪದ ಸಮಾನಾರ್ಥವನ್ನು ಕೊಡುವುದಾಗಿದೆ. ಗುರುಗಳು, ಸಾಧು-ಸಂತರು, ಸರ್ವರ ಹಿತವನ್ನು ಬಯಸುವವರೆಲ್ಲರೂ ಪುರೋಹಿತರೇ ಆಗುತ್ತಾರೆ. ಇದಕ್ಕೆ ಯಾವುದೇ ಜಾತಿಯ ಕಟ್ಟಾಗಲೀ, ಲೇಪವಾಗಲೀ ಇಲ್ಲವೆಂಬುದಕ್ಕೆ ಇತಿಹಾಸದಲ್ಲಿ ಅಸಂಖ್ಯ ಉದಾಹರಣೆಗಳಿವೆ. ವಿಶ್ವಾಮಿತ್ರ, ವಸಿಷ್ಠ, ವ್ಯಾಸ, ವಾಲ್ಮೀಕಿ ಮುಂತಾದ ಅನೇಕ ಋಷಿಮುನಿಗಳು ಒಂದು ಜಾತಿಯ ಎಲ್ಲೆಗೆ ಸೇರಿದವರಲ್ಲವೆಂಬುದನ್ನು ನೆನಪಿನಲ್ಲಿಡಬೇಕಿದೆ.
     ಹೆಮ್ಮೆಯ ವಿಜಯನಗರ ಸಂಸ್ಥಾನದ ರೂವಾರಿ ವಿದ್ಯಾರಣ್ಯರು ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಶಿಷ್ಯ ಮಾಧವನಿಗೂ (ಅರ್ಚಕರ ಮಗನಾಗಿದ್ದ ವಿದ್ಯಾರಣ್ಯರ ಪೂರ್ವಾಶ್ರಮದ ಹೆಸರು) ಕೇಳಿದ್ದರು: "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?"
ಮಾಧವ ಉತ್ತರಿಸಿದ್ದ: "ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ."
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, "ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ" ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದ್ದರು. ಮುಂದಿನದು ಇತಿಹಾಸ. ಹಕ್ಕ-ಬುಕ್ಕರನ್ನು ಮುಂದಿಟ್ಟುಕೊಂಡು ದೇಶ ಮತ್ತು ಧರ್ಮದ ಹಿತ ಕಾಪಾಡುವ ಧ್ಯೇಯದ ವಿಜಯನಗರ ಸಂಸ್ಥಾನ ಸ್ಥಾಪಿಸಿದರು. ವಿದ್ಯಾರಣ್ಯರು ಕೇವಲ ಮಾರ್ಗದರ್ಶಕರಾಗಿ ಉಳಿದರು. ಇದು ಆದರ್ಶ ಪುರೋಹಿತನ ಲಕ್ಷಣ.
     ಹಿಂದಿನ ರಾಜ-ಮಹಾರಾಜರುಗಳ ಆಸ್ಥಾನದಲ್ಲಿ ರಾಜಪುರೋಹಿತರುಗಳು ಇರುತ್ತಿದ್ದರು. ಅವರುಗಳು ಧಾರ್ಮಿಕ ಆಚರಣೆಗಳ ಕುರಿತಲ್ಲದೆ, ಸಮಸ್ಯೆಗಳು ಬಂದಾಗ ಅವನ್ನು ಎಲ್ಲಾ ದೃಷ್ಟಿಯಿಂದ ನೋಡಿ ಸೂಕ್ತ ಪರಿಹಾರ ರೂಪಿಸುವಲ್ಲಿ ರಾಜರಿಗೆ ನೆರವಾಗುತ್ತಿದ್ದರು. ಚಾಣಕ್ಯ, ಸಮರ್ಥ ಗುರು ರಾಮದಾಸರು ಮುಂತಾದ ನೂರಾರು ಮಾರ್ಗದರ್ಶಕರ ನೆರವಿನಿಂದ ಸನಾತನ ಸಂಸ್ಕೃತಿ ಜೀವಂತವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡ, ಸಾವಿರಾರು ಜನರಿಗೆ ಪ್ರೇರೇಪಣೆ ನೀಡಿದ ಸಾಧು-ಸಂತರ ಸಂಖ್ಯೆ ಗಣನೀಯವಾಗಿದೆ. ಒಮ್ಮೆ ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯ ಸ್ವಾಮಿ ಶ್ರದ್ಧಾನಂದರ ಆಶ್ರಮಕ್ಕೆ ಬ್ರಿಟಿಷ್ ಪೋಲಿಸರು ನುಗ್ಗಿ ತಪಾಸಣೆ ನಡೆಸಿದ್ದರು. ಅವರಿಗೆ ಅಲ್ಲಿ ಬಾಂಬುಗಳನ್ನು ತಯಾರಿಸಲಾಗುತ್ತಿದೆಯೆಂಬ ಗುಮಾನಿ ಇತ್ತಂತೆ. ಹುಡುಕಿದರೂ ಏನೂ ಸಿಗದೆ ಪೋಲಿಸರು ವಾಪಸಾಗಿದ್ದರು. ನಂತರದಲ್ಲಿ ಶ್ರದ್ಧಾನಂದರು ಅಲ್ಲಿದ್ದ ತಮ್ಮ ಶಿಷ್ಯರನ್ನು ಉದ್ದೇಶಿಸಿ "ಕಣ್ಣ ಮುಂದೆಯೇ ಇದ್ದ ಜೀವಂತ ಬಾಂಬುಗಳನ್ನು ಪೋಲಿಸರು ಗುರುತಿಸದೇ ಹೋದರಲ್ಲಾ!" ಎಂದು ತಮಾಷೆ ಮಾಡಿದ್ದರು. ಅಲ್ಲಿ ತಯಾರಾಗುತ್ತಿದ್ದುದು ಕೃತಕ ಬಾಂಬುಗಳಲ್ಲ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಬಲ್ಲ ಜೀವಂತ ಶಿಷ್ಯರ ರೂಪದಲ್ಲಿನ ಬಾಂಬುಗಳು! ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರು ನಮ್ಮ ಸಂಸ್ಕೃತಿಯ ಪುರೋಹಿತರು! ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಾರ್ಶನಿಕತೆ, ವಿದ್ವತ್ತುಗಳಿಗೆ ಹೆಸರಾದ ಸರ್ ಎಂ. ವಿಶ್ವೇಶ್ವರಯ್ಯ, ಡಿವಿಜಿ, ಡಾ. ರಾಧಾಕೃಷ್ಣನ್, ಅಬ್ದುಲ್ ಕಲಾಂ ಮುಂತಾದವರು, ನಾಡು-ನುಡಿಗಳಿಗೆ ಜೀವ ಸವೆಸಿದ ಅಸಂಖ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಗ್ರಣಿಗಳಾಗಿದ್ದು ಇತರರಿಗೆ ಮಾರ್ಗದರ್ಶಿಯಾಗಿದ್ದುದನ್ನು ಸ್ಮರಿಸಬೇಕು. ಇಂತಹವರು ನಿಜ ಪುರೋಹಿತರು, ಪುರದ ಹಿತ ಬಯಸುವವರು!
     ಪುರೋಹಿತನಾದವನ ಗುರುತರವಾದ ಹೊಣೆಗಾರಿಕೆ ಎಂದರೆ ಎಡವದೆ ನಡೆಯಬೇಕಾಗಿರುವುದು ಮತ್ತು ತಿಳಿದ ಜ್ಞಾನವನ್ನು ಸಮಾಜಕ್ಕೆ ತಿಳಿಸಿಕೊಡುವುದಾಗಿರುತ್ತದೆ. ಅಗ್ರಣಿಯಾದವನೇ ಎಡವಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಲ್ಲದೆ ಪುರೋಹಿತರೆಲ್ಲರೂ ಅಂತಹವರೇ ಎಂಬ ಭಾವನೆ ಮೂಡಲು ಕಾರಣವಾಗುತ್ತದೆ. ಕೆಸರೆರಚಲು ಕಾಯುತ್ತಿರುವ ಜನರು ಮತ್ತು ಮಾಧ್ಯಮಗಳವರು ಇದಕ್ಕೆ ನೀರೆರೆಯುತ್ತಾರೆ. ನಿತ್ಯಾನಂದ, ರಾಘವೇಶ್ವರರ ಉದಾಹರಣೆಗಳು ಇಲ್ಲಿ ಪ್ರಸ್ತುತವೆನಿಸುತ್ತವೆ. ಕಾವಿ ಧರಿಸಿದವರೆಲ್ಲರೂ ಸಂತರಾಗಲಾರರು ಮತ್ತು ಸಂತರಾಗಲು ಕಾವಿಯನ್ನೇ ಧರಿಸಬೇಕೆಂದಿಲ್ಲ.  ತಿಳಿದ ಜ್ಞಾನವನ್ನು ಆಸಕ್ತರಿಗೆ ಹಂಚದಿರುವುದು ಸಹ 'ಅಸ್ತೇಯ'(ಕಳ್ಳತನ)ವೆನಿಸುತ್ತದೆ. 'ಸರ್ವೇ ಭವನ್ತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಶಂತು ಮಾ ಕಶ್ಚಿತ್ ದುಃಖಭಾಗ್ಭವೇತ್||'  ಎಂದು ಸಾರುವ ನೈಜ ಪುರೋಹಿತರು ನಾವಾಗೋಣ.
-ಕ.ವೆಂ.ನಾಗರಾಜ್.

Wednesday, November 25, 2015

ಹಾಸನದ ವೇದಭಾರತೀ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ನಾರಾಯಣಾನಂದ ಸರಸ್ವತೀ ಸ್ವಾಮೀಜಿಯವರು ಉಪನ್ಯಾಸ ಮಾಡಿದರು

[ಪೂಜ್ಯ ಶ್ರೀ ನಾರಾಯಣಾನಂದ ಸರಸ್ವತೀ ಸ್ವಾಮೀಜಿಯವರು ಹಾಸನದ ವೇದಭಾರತಿಯಲ್ಲಿ ದಿನಾಂಕ 25.11.2015 ರಂದು ನಡೆಸಿಕೊಟ್ಟ ಉಪನ್ಯಾಸನ ಮೊದಲ ಕಂತು. ಉಪನ್ಯಾಸದ ಬರಹರೂಪವನ್ನು ಸಿದ್ಧಪಡಿಸಿದವರು ಸಂಸ್ಕೃತ ಶಿಕ್ಷಕರಾದ ಶ್ರೀ ಭೈರಪ್ಪಾಜಿ]
ಉಪನ್ಯಾಸದ  ಆಡಿಯೋ  ಮೊದಲ ಕಂತು ಕೆಳಗಿನ ಕೊಂಡಿಯಲ್ಲಿ ಲಭ್ಯ
http://www.vedasudhe.com/wp-content/uploads/2015/11/Astika-Nastika.mp3

ನಾಸ್ತಿಕ ಯಾರು ಅಂತ ಹೇಳಿದ್ರೆ ಯಾರು ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲವೋ ಅವನು ನಾಸ್ತಿಕ. ದೇವರನ್ನ ನಂಬುವರಲ್ಲ ಅಂತ ಅರ್ಥ ಅಲ್ಲ. ನಂಬ್ತಾರೆ. ಆದರೆ ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲ. ಆದ್ದರಿಂದಲೆ ಅವರು ನ ಅಸ್ತಿ ಇತಿ ಮನ್ಯತೇ | ಇಲ್ಲ ಅಂತ ಹೇಳ್ತಾರೆ ವೇದವನ್ನು ನಂಬೋದಿಲ್ಲ ಅವರು. ಇನ್ನು ಷಡ್ದರ್ಷನಗಳಿವೆ. ಅವು ವೇದವನ್ನು ಪ್ರಮಾಣವಾಗಿ ಸ್ವೀಕಾರ ಮಾಡುತ್ತವೆ. ಆಸ್ತಿಕರು, ಅಸ್ತಿ, ಅಸ್ತಿ, ಅಸ್ತಿ ಇತಿ ಕಥ್ಯತೇ | ಆಸ್ತಿಕರು, ಏನು ಇದೆ ಅಂತ ಹೇಳ್ತಾರೆ ? ಅಸ್ತಿ ಇತಿ ಮನ್ಯತೆ | ಇದೆ ಅಂತ ಏನು ಇದೆ ? ಮಾನವನ ಒಂದು ಇಂದ್ರಿಯಕ್ಕೆ ನಿಲುಕದಂತ ಒಂದು ವಸ್ತು ಇದೆ. ದಿವ್ಯ ಅದ್ಭುತವಾದ ಒಂದು ಶಕ್ತಿ ಇದೆ. ಈ ಲೋಕ ಮಾತ್ರವಲ್ಲ ಬ್ರಹ್ಮಾಂಡವನ್ನು ನಡೆಸುತ್ತಿರುವ ಒಂದು ಶಕ್ತಿ ಇದೆ. ನಾವೆಲ್ಲರೂ ಅದನ್ನು ನಂಬಿದ್ದೇವೆ.​ ಅದು ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ. ಅದು​ ಗೋಚರವಾಗಲಿಕ್ಕೆ ಸಾಧ್ಯವಿಲ್ಲ.ಇಂದ್ರಿಯಾತೀವಾಗಿರುವಂತದ್ದು ಅದು. ಕಣ್ಣಿಂದ ಕಿವಿಗಳಿಂದ ಅಥವಾ ನಮ್ಮ ಯಾವುದೇ ಇಂದ್ರಿಯಗಳಿಂದ ಅದನ್ನು ಅನುಭವಿಸಲಿಕ್ಕೆ ಸಾಧ್ಯವಿಲ್ಲ. ನಿದ್ದೆಯಲ್ಲಿ ಶೂನ್ಯದ ಅವಸ್ಥೆಯಲ್ಲಿರುತ್ತೇವೆ. ನೋಡಿ ಅದು ಬ್ರಹ್ಮಾನಂದಸ್ಥಿತಿ. ಬ್ರಹ್ಮೈಕ್ಯದ ಸ್ಥಿತಿ. ಅದಕ್ಕೆ ಯಾರೋ ಒಬ್ಗರು ಹಿರಿಯರು ಹೇಳ್ತಾ ಇದ್ದರು. ನಾವು ನಿದ್ರೆ ಮಾಡಿದರೆ ಅದು ಅಲ್ಪ ಕಾಲದ ಮರಣ. ನಾವು ಸುಧೀರ್ಘವಾದ ನಿದ್ರೆ ಮಾಡಿದರೆ ಅದು ಮರಣ. ಅಲ್ಪ ಮರಣ ನಿದ್ರೆ. ಸುಧೀರ್ಘ ನಿದ್ರೆ ಮರಣ. ಎಷ್ಟು ಸೊಗಸಾಗಿ ಹೇಳಿದರು ನೋಡಿ. ಆ ಅಲ್ಪ ಮರಣದ ನಿದ್ರೆಯಲ್ಲಿ ​ ಹೇಗೆ ಇರುತ್ತೇವೆ ನೋಡಿ. ಆಗ ಬ್ರಹ್ಮೈಕ್ಯದ ಸ್ಥಿತಿಯಲ್ಲಿರುತ್ತೇವೆ. ಯಾರನ್ನಾದರೂ ಎಬ್ಬಿಸಿ ಕೇಳಿ. ಏನಪ್ಪಾ ಹೇಗಿತ್ತು ?​ ಅಂದರೆ​ ಅವರು ಹೇಳ್ತಾರೆ. ಹೇಗಿತ್ತು..... ಅಹಂ ಕಿಮಪಿ ನ ಜಾನಾಮಿ | ನನಗೇನು ಗೊತ್ತಾಗಲಿಲ್ಲ. ಆದರೆ ಒಂಥರಾ ಒಂಥರಾ ಸುಖವಾಗಿತ್ತು. ಸುಖವಾಗಿತ್ತು ? ಆದರೆ ಏನು ಗೊತ್ತಾಗಿಲ್ಲ ಅಂತ ಹೇಳ್ತೀರಿ. ಮತ್ತೆ ಸುಖವಾಗಿದ್ದೆ ಅಂತ ಹೇಳ್ತೀರಿ ? ಅಲ್ಲ ಅದೇನೋ ಒಂಥರಾ ಎಲ್ಲ ಮರೆತಿದ್ದೆ ನಾನು. ನಾನು ಯಾರು ಎಂಬುದನ್ನು ಕೂಡ ಮರೆತಿದ್ದೆ. ವಿಚಾರ ಮಾಡಿ. ಆತ ಆಸ್ತಿಕ. ಸತ್ಯದ ಅವಸ್ಥೆಯಲ್ಲಿರುತ್ತಾನೆ. ಅದಕ್ಕೆ ಮಾಂಡೂಕ್ಯ ಉಪನಿಷತ್ತಿನಲ್ಲಿ ಹೇಳ್ತಾರೆ. ಹೇಗೆ ನಾವು ನಿದ್ರಾ ಸ್ಥಿತಿಯಲ್ಲಿದ್ದೆವೋ ಅದೇ ರೀತಿ ಜಾಗೃತಾವಸ್ಥೆಯಲ್ಲಿದ್ದರೆ ಅಲೌಕಿಕ ಚಿಂತನೆಯಲ್ಲಿದ್ದೇವೆ ಅಂತ ಅರ್ಥ. ಮತ್ತೊಮ್ಮೆ ಹೇಳ್ತೇವೆ. ನಿದ್ರೆಯ ಅವಸ್ಥೆಯಲ್ಲಿ ಹೇಗಿರುತ್ತೇವೆಯೋ ಅದೇ ಅವಸ್ಥೆಯನ್ನು ಜಾಗೃತ ಅವಸ್ಥೆಯಲ್ಲಿ ಅನುಭವಿಸಿದಾಗ ಅದು ಅಲೌಕಿಕವಾದಂತಹ ಸ್ಥಿತಿ. ಅರ್ಥ ಆಯ್ತಲ್ಲ ?
ಈ ಆಸ್ತಿಕ ನಾಸ್ತಿಕ ಭೇದದಲ್ಲಿ ಲೋಕದ ಜನರಿದ್ದಾರೆ. ಅಲೌಕಿಕ ಅಂದರೆ ಅರ್ಥ ಏನು ? ಈ ಲೋಕಕ್ಕೂ ಮಿಗಿಲಾಗಿರುವಂತದ್ದು. ಇಂಗ್ಲಿಷ್ ನಲ್ಲಿ ಹೇಳ್ತೇವೆ. Here and hereafter ಇಲ್ಲಿ ಮತ್ತು ಇಲ್ಲಿಂದಾಚೆ ಯಾರೂ ಕೂಡ ಇದೂವರೆಗೆ ಇಲ್ಲಿಂದಾಚೆ ಹೋದವರು ಈ ಲೋಕದಿಂದ ಹೋದವರು ವಾಪಸ್ಸು ಬಂದು ನಮಗೆ ರಿಪೋರ್ಟ್ ಕೊಟ್ಟಿಲ್ಲ. ಓ ನೋಡಪ್ಪ ಅಲ್ಲಿ ಇದ್ದೀನಿ ನಾನು. ಅಲ್ಲಿದ್ದೆ. No past tense, no present tense ಅಲ್ಲಿ. ಹೋದರೆ ಹೋದಾಗೆ. ಮತ್ತೆ ಅವರು ಎಲ್ಲಿದ್ದಾರೋ ? ಯಾವ ಲೋಕ ಸೇರಿಕೊಂಡಿದ್ದಾರೋ ? ಯಾವ ಹುದ್ದೆ ? ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೋ ? ಏನು ಗೊತ್ತಿಲ್ಲ. ರಹಸ್ಯವಾಗಿದೆ ಅದು. ಆದರಿಂದಲೇ ನಾವು ವೇದಪ್ರಮಾಣವನ್ನು ತೆಗೆದು ಕೊಂಡಾಗ ಹೇಗೆ ಜೀವಿಸಬೇಕು ಅನ್ನೋದನ್ನ ಕಲಿಯೋದು ಮಾತ್ರವಲ್ಲ. ಹೇಗೆ ಜೀವಿಸಿದರೆ ಹೇಗೆ ಪ್ರಾಪ್ತಿಯಾಗುತ್ತೆ ಅನ್ನೋದು ಕೂಡ ವೇದದಲ್ಲಿದೆ. ಏಕೆಂದರೆ ಅದನ್ನು ಮಾನವನು ಹೇಳೋಕೆ ಸಾಧ್ಯವಿಲ್ಲ. ಮಾನವ ಶರೀರ ಬಿಟ್ಟರೆ ಬಿಟ್ಟ ಹಾಗೆ. ವಾಪಸ್ಸು ಬಂದು ಹೇಳೋದಿಲ್ಲ.








Wednesday, November 11, 2015

ನಟೇಶ ಭಟ್ ಆಗುಂಬೆ
ನಿ(ನ)ಮ್ಮ ವೇದಸುಧೆಯಲ್ಲಿನ ವೇದದ(ವೇಂದಾಂತದ) ಮೂಲ ಚಿಂತನೆಗಳು ಎಲ್ಲಾ ಕಾಲಕು ಸಾಧುವಾದದ್ದು. ಇಂತಹ ಚಿಂತಕರು ಹಾಗು ಚಿಂತನೆಗಳು ಸಮಾಜದ ಮೂಲೆ ಮೂಲೆಗೆ ಪ್ರಸರಿಸಬೇಕು ವಂಬುದು ನನ್ನ ಅನಿಸಿಕೆ.ಹಳೆ ಬೇರು  ಹೊಸ  ಚಿಗರು  ಮೂಡಿರಲು ಮರ ಸೊಗಸು,  ಹಾಗೇಯೆ ವೇದ ವೆಂಬ ಮರಕ್ಕೆ ಶ್ರುತಿ ಮತ್ತು ಸ್ಮೃತಿ ಗಳ ಮೆಳೈಕೆಯ ವಿಚಾರಗಳು ಮನುಜಕುಲಕ್ಕೆ ಜ್ಞಾನದೀವಿಗೆ ಆಗಲಿದೆ. ನಿಮ್ಮ ಸತ್ಕಾರ್ಯ ಸಾಧುವಾದುದ್ದೆ ಆಗಿದೆ. ವೇದಪುರುಷ ನಿಮಗೆ ವೇದಸುಧೆಯನ್ನು ಸದಾನಿಡುವ ಶಕ್ತಿನೀಡಿ ಆಜ್ಞಾನದ ಕತ್ತಲೆಯಲ್ಲಿ ಇರುವ ಭಾರತದ ವೈದಿಕಸಂಸ್ಕ್ರತಿಯಾನ್ನು ಮರೆಯುತ್ತಿರುವವರಿಗೆ ಜ್ಞಾನದ ದೀಪದ ಮೂಲಕ ದಾರಿ ತೋರುವಂತಾಗಲಿ.
 ವೇದಸುಧೆಯ ಒದುಗ ನಟೇಶ ಭಟ್ ಆಗುಂಬೆ

Monday, November 9, 2015

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?


ಆ ತಾಯಿ ಹಳ್ಳಿ ಮುದುಕಿ ಗಂಡನ ಶವದ ಮುಂದೆ ಕುಳಿತಿದ್ದಳು. ಮಗಳು ರೋಧಿಸುತ್ತಿದ್ದಳು " ಅಪ್ಪಾ! ನೀನು ಹೋಗಿ ಬಿಟ್ಯೆಲ್ಲಾ!! ಇನ್ನು ತೌರಮನೆಗೆ ನಾನು ಹ್ಯಾಗ್ ಬರಲಿ? ನನ್ನ ಸುಖ -ದುಃಖ ಕೇಳೋರ್ಯಾರು? -ಹೆಣ್ಣು ಮಗಳ ರೋದನ ಮುಗಿಲು ಮುಟ್ಟಿತ್ತು. ಎಷ್ಟಾದರೂ ಹೆಣ್ಣು ಮಕ್ಕಳಿಗೆ ಅಪ್ಪನ ಬಗ್ಗೆ ಬಲು ವಾಂಚಲ್ಯ.

ಸ್ವಲ್ಪ ಹೊತ್ತು ಮಗಳು ಅಳುವುದನ್ನು ಕೇಳಿದ ತಾಯಿ ಮಗಳನ್ನು ತಬ್ಬಿಕೊಂಡಳು"ಸುಮ್ಕಿರು ಮಗ, ಅವ್ನು ಒಂಟು ಬಿಟ್ಟಾ ಅಂದ್ರೆ ಈ ಜೀವ ಬದುಕಿಲ್ವಾ? ನನ್ನ ಕೈಲಿ ಸಕ್ತಿ ಇರೋವರ್ಗೂ ಕೂಲಿನಾರೂ ಮಾಡಿ ನಿಂಗೆ ಗೌರಿಕಾಯಿ ಕೊಡ್ತೀನಿ.ಬಿಡಾಕಿಲ್ಲ, ಸುಮ್ಕಿರು ಅಳ್ ಬ್ಯಾಡ. ಆ ಮಗಿನ್ ಕಡೆ ನೋಡು, ಆ ಮಗಿಗ್ ಏನಾದ್ರೂ ಕುಡ್ಯಕ್ಕಾರು ಕೊಡು"

ಅಯ್ಯಪ್ಪ! ಆ ತಾಯಿ ಅಲ್ಲಿರೋ ತನ್ ಮಕ್ಕಳಿಗೆಲ್ಲಾ ಸಾಂತ್ವನ ಹೇಳುತ್ತಿದ್ದಳು.ಅವಳ ಗಂಡು ಮಕ್ಕಳೂ ಕೂಡ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ " ಏಳ್ಲಾ ಮಗ, ಮಾಡ ಜಬಾಬ್ದಾರಿ ಮಾಡು"
-ಈ ಮಾತು ಕೇಳುವಾಗ ನನಗೆ ವೇದಮಂತ್ರ ಒಂದರ ನೆನಪಾಯ್ತು

ಮಾ ಗತಾನಾಮಾ ದಿಧೀಥಾ ಯೇ ನಯಂತಿ ಪರಾವತಮ್|
ಆ ರೋಹ ತಮಸೋ ಜ್ಯೋತಿರೇಹ್ಯಾ ತೇ ಹಸ್ತೌರಭಾಮಹೇ
[ಅಥರ್ವ ವೇದ ಕಾಂಡ-೮, ಸೂಕ್ತ-೧ , ಮಂತ್ರ- ೮ ]


ಅರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,
ಯೇ ಪರಾವತಮ್ = ಯಾರು ಪರಲೋಕವನ್ನು
ನಯಂತಿ = ತಲುಪಿರುತ್ತಾರೋ ಅವರಿಗಾಗಿ
ಮಾ ದೀಧೀಥಾಃ = ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು
ಗತಾನಾಮ್ ಮಾ ಆ ದಿಧೀಥಾಃ = ಗತಿಸಿದವರ ಬಗ್ಗೆ ದುಃಖಿಸುತ್ತಾ ಕೂಡದಿರು
ತಮಃ ಆರೋಹ = ತಮಸ್ಸಿನಿಂದ ಮೇಲೇಳು
ಜ್ಯೋತಿಃ ಆ ಇಹಿ = ಬೆಳಕಿನತ್ತ ಪಯಣಿಸು
ತೇ ಹಸ್ತೌ ರಭಾಮಹೇ = ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ
ಭಾವಾರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,ಯಾರು ಪರಲೋಕವನ್ನು ತಲುಪಿರುತ್ತಾರೋ ಅವರಿಗಾಗಿ ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು, ಗತಿಸಿದವರ ಬಗ್ಗೆ ದು:ಖಿಸುತ್ತಾ ಕೂಡದಿರು. ತಮಸ್ಸಿನಿಂದ ಮೇಲೇಳು ಬೆಳಕಿನತ್ತ ಪಯಣಿಸು ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ.

ಈ ಮಂತ್ರವು ಗತಿಸಿದವರ ಬಗ್ಗೆ ದು:ಖಿಸುವುದನ್ನು ಅಜ್ಞಾನವೆಂದೇ ಹೇಳುತ್ತದೆ. ವೇದದ ಈ ಮಾತನ್ನು ಅರಗಿಸಿಕೊಳ್ಳುವುದು ಕಷ್ಟವೇ ಹೌದು. ಹಾಗಾದರೆ ಗತಿಸಿದವರ ಬಗ್ಗೆ ದುಃಖಿಸಬಾರದೇ? ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಸಂಬಂಧಿಕರು ಶೋಕಿಸದಿದ್ದರೆ ಸುತ್ತಮುತ್ತಲ ಜನರಾದರೂ ಏನೆಂದಾರು? ಇವರಿಗೆ ಮನುಷ್ಯತ್ವವೇ ಇಲ್ಲವೇ? ಇಷ್ಟೇನಾ ಸಂಬಂಧ? ಇವರ ಮುಖದಲ್ಲಿ ದುಃಖದ ಛಾಯೆಯೇ ಇಲ್ಲವಲ್ಲಾ!!

ನಾವು ಅತ್ಯಂತ ಮಹತ್ವಉಳ್ಳ ಈ ವಿಷಯದ ಬಗ್ಗೆ ಅತ್ಯಂತ ಗಂಭೀರವಾಗಿ ವಿಚಾರ ಮಾಡಬೇಕು. ಸತ್ತವರ ಬಗ್ಗೆ ಶೋಕಿಸುತ್ತಾ ಕೂರುವುದು ಅಜ್ಞಾನವೆಂದು ವೇದವು ಹೇಳುವುದು ಸತ್ಯವಾಗಿದೆ. ನಾವು ಶವದ ಮುಂದೆ ಕುಳಿತು ಅಳುವುದರಿಂದ ಪ್ರಯೋಜನವಾದರೂ ಏನು? ನಮ್ಮೊಳಗಿನ ದುಃಖವು ಕಡಿಮೆಯಾಗಬಹುದು ನಿಜ. ಆದರೆ ನಮಗೆ ದುಃಖವಾಗಿರುವುದನ್ನೇ ವೇದವು ತಮಸ್ಸು ಎಂದು ಹೇಳುತ್ತದೆ. ಈ ಕತ್ತಲಿನಿಂದ ಬೆಳಕಿನ ಕಡೆಗೆ ಅರ್ಥಾತ್ ಜ್ಞಾನದ ಕಡೆಗೆ ಪಯಣಿಸು ನಿನ್ನ ಕೈಗಳನ್ನು ನಾನು ಹಿಡಿದು ಮೇಲೆತ್ತುತ್ತೇನೆಂದು ಭಗವಂತನು ನುಡಿಯುತ್ತಾನೆ.

ಸಾವು ಯಾರ ವಯಸ್ಸನ್ನೂ ಕೇಳುವುದಿಲ್ಲ. ಆದರೆ ವಯಸ್ಸಾದಮೇಲೆ ಬರುವುದು ಸಹಜ ಸಾವು. ಹೆತ್ತ ಅಪ್ಪ-ಅಮ್ಮನನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳಬೇಕಾದ್ದು ಮಕ್ಕಳ ಕರ್ತವ್ಯ. ಮಕ್ಕಳು ವೃದ್ಧ ತಂದೆ-ತಾಯಿಯರ ಸೇವೆಮಾಡುತ್ತಿರುವಾಗ ಸಹಜವಾಗಿ ಸಾವು ಬಂದರೆ ಮಕ್ಕಳು ಅಳುತ್ತಾ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಬದುಕಿದ್ದಾಗ ತಂದೆ-ತಾಯಿಯರ ಸೇವೆ ಮಾಡಿದ ಸಮಾಧಾನವಿರುತ್ತದೆ. ಆದರೆ ಸೇವೆ ಮಾಡಬೇಕಾದಾಗ ಸೇವೆ ಮಾಡದೆ ಅಪ್ಪ-ಅಮ್ಮ ಸತ್ತಾಗ ಮೃತದೇಹದ ಮುಂದೆ ಕುಳಿತು ಕಣ್ಣೀರು ಹಾಕಿದರೇನು ಪ್ರಯೋಜನ? ಆಗ ನಿರ್ವಹಿಸಬೇಕಾದ ಜವಾಬ್ದಾರಿಯೇ ಬೇರೆ. ಮೃತದೇಹವನ್ನು ಪಂಚಭೂತಗಳಲ್ಲಿ ಲೀನವಾಗಿಸಲು ಅಗತ್ಯವಾದ ಅಂತ್ಯಸಂಸ್ಕಾರ ಕ್ರಿಯೆಗಳು. ಅಷ್ಟೆ
                 ಪುನರಪಿ ಜನನಮ್-ಪುನರಪಿ ಮರಣಮ್ ಪುನರಪಿ ಜನನೀ ಜಠರೇ ಶಯನಮ್, ಇಹಸಂಸಾರೇ ಬಹುದುಸ್ತಾರೇ ಕೃಪಯಾ ಪಾರೇ ಪಾಹಿ ಮುರಾರೇ,ಭಜಗೋವಿಂದಮ್, ಭಜಗೋವಿಂದಮ್, ಗೋವಿಂದಮ್ ಭಜ ಮೂಢಮತೇ-ಎಂದು ಶಂಕರರು ಹೇಳುತ್ತಾರೆ.
                        ಮತ್ತೆ ಹುಟ್ಟುವುದು ಮತ್ತೆ ಸಾಯುವುದು ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯ ಸಂಸಾರಕ್ಕೆ ಪಾರವೇ ಇಲ್ಲ. ಬಹಳ ಸುಲಭವಾಗಿ ಈ ಹುಟ್ಟು-ಸಾವುಗಳ ಚಕ್ರದಿಂದ ಹೊರಬರಲಾಗುವುದಿಲ್ಲ.ಆದ್ದರಿಂದ ಹುಟ್ಟಿರುವಾಗ ಆ ಭಗವಂತನ ಸ್ಮರಣೆಯನ್ನು ಮಾಡು, ಎಂದು ಶಂಕರರು ಹೇಳುತ್ತಾರೆ.

ಅಂದರೆ ಹುಟ್ಟು-ಸಾವುಗಳನ್ನು ಯಾರೂ ತಪ್ಪಿಸುಕೊಳ್ಳಲು ಸಾಧ್ಯವೇ ಇಲ್ಲ. ಹುಟ್ಟಿದವನು ಸಾಯಲೆ ಬೇಕು. ಸತ್ತವನು ಹುಟ್ಟಲೇ ಬೇಕು. ಈ ಹುಟ್ಟು ಸಾವುಗಳೆಲ್ಲಾ ಜಡ ಶರೀರಕ್ಕೇ ಹೊರತೂ ಆತ್ಮಕ್ಕಲ್ಲ. ಆದ್ದರಿಂದ ಶೋಕಿಸುವ ಅಗತ್ಯವಿಲ್ಲ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿ..
[ಸಾಂಖ್ಯಾಯೋಗ ಶ್ಲೋಕ - ೨೭]
ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾದಪರಿಹಾರ್ಯೇರ್ಥೇ ನತ್ವಂ ಶೋಚಿತು ಮರ್ಹಸಿ ||

ಹುಟ್ಟಿದವನಿಗೆ ಮರಣವು ನಿಶ್ಚಯವು ಮತ್ತು ಸತ್ತವನಿಗೆ ಜನ್ಮವು ನಿಶ್ಚಯವು. ಆದುದರಿಂದ ಪರಿಹರಿಸಲಾಗದ ಈ ವಿಷಯದಲ್ಲಿ ನೀನು ಶೋಕಿಸಬಾರದು

ದೇಹೀ ನಿತ್ಯ ಮವಧ್ಯೋಯಂ ದೇಹೇ ಸರ್ವಸ್ಯ ಭಾರತ |
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ||
[ಸಾಂಖ್ಯಾಯೋಗ ಶ್ಲೋಕ - ೩೦]
ಎಲ್ಲರ ದೇಹದಲ್ಲೂ ಇರುವ ಈ ಆತ್ಮನು ಎಂದಿಗೂ ನಾಶವಾಗುವುದಿಲ್ಲ. ಆದ್ದರಿಂದ ನೀನು ಸಮಸ್ತ ಪ್ರಾಣಿಗಳನ್ನು ಕುರಿತು ಶೋಕಿಸಬಾರದು. ಹೀಗೆ ಸಾವಿನ ಬಗ್ಗೆ ವೇದವು ಏನು ಹೇಳಿದೆಯೋ ಅದನ್ನೇ ಶ್ರೀ ಕೃಷ್ಣನೂ ಹೇಳಿದ್ದಾನೆ. ಶಂಕರಾಚಾರ್ಯರೂ ಹೇಳಿದ್ದಾರೆ.
ಗತಿಸಿದವರ ಬಗ್ಗೆ ಶೋಕಿಸದಿರು,ತಮಸ್ಸಿನಿಂದ ಮೇಲೇಳು, ನಿನ್ನ ಕೈ ಹಿಡಿದು ನಾನು ಮೇಲೆತ್ತುತ್ತೇನೆ- ಎಂಬ ಭಗವಂತನ ಮಾತು ನಮಗೆ ಧೈರ್ಯವನ್ನು ಕೊಡುವಂತಹದ್ದು. ತನ್ನ ಚಿಕ್ಕ ಪ್ರಾಯದಲ್ಲಿ ಪತಿಯನ್ನು ಕಳೆದುಕೊಂಡು ಚಿಕ್ಕಪುಟ್ಟ ಮಕ್ಕಳೊಡನೆ ಒಬ್ಬ ಸ್ತ್ರೀ ಬದುಕಬೇಕಾದ ಅನಿವಾರ್ಯ ಪರಿಸ್ಥಿಗಳು ಬಂದಿರುವ ಹಲವು ಉಧಾಹರಣೆಗಳನ್ನು ಕಾಣಬಹುದು. ಆ ಸಂದರ್ಭದಲ್ಲಿ ತಾಯಿಯಾದವಳು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕೋ ಅಥವಾ ಸತ್ತ ಪತಿಯ ಬಗ್ಗೆ ಶೋಕಿಸುತ್ತಾ ಕುಳಿತುಕೊಳ್ಳಬೇಕೋ. ಇಂತಹ ಸಂದರ್ಭದಲ್ಲಿ ವೇದವು ನಮಗೆ ಸಹಾಯಕ್ಕೆ ಬರುತ್ತದೆ. ಇಂತಹಾ ದು:ಖದ ಸ್ಥಿತಿಯಲ್ಲೂ ತಾಯಿಯಾದವಳು ಮಕ್ಕಳ ಅಭ್ಯುದಯದ ಬಗ್ಗೆ ಯೋಚಿಸಬೇಕೇ ಹೊರತೂ ಸತ್ತ ಪತಿಯ ಬಗ್ಗೆ ದು:ಖಿಸುತ್ತಾ ಕುಳಿತುಕೊಳ್ಳಕೂಡದು. ಅಂತಹಾ ತಮಸ್ಸಿನಿಂದ ಹೊರ ಬರಲು ವೇದವು ಕರೆಕೊಡುತ್ತದೆ. ಸಮಾಜದಲ್ಲಿ ತನ್ನ ಬಗ್ಗೆ ಜನರು ಏನು ಅಂದುಕೊಂಡಾರೋ ಎಂಬ ಭೀತಿಯಲ್ಲಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವ ಅನೇಕ ಸ್ತ್ರೀಯರನ್ನು ಸಮಾಜದಲ್ಲಿ ಕಾಣಬಹುದು. ಅಂತಹಾ ಸೋದರಿಯರಿಗೆಲ್ಲಾ ವೇದವು ಮಾನಸಿಕವಾಗಿ ಶಕ್ತಿಯನ್ನು ತುಂಬುತ್ತದೆ.

ಒಬ್ಬ ವ್ಯಕ್ತಿಯ ಸಾವಿನಿಂದ ಕುಟುಂಬದವರು ಶೋಕಸಾಗರದಲ್ಲಿ ಮುಳುಗಿದಾಗ ಅಂತವರಿಗೆ ವೇದವು ಹೇಳುತ್ತದೆ.. . . .
ಮೈತಂ ಪಂಥಾಮನು ಗಾ ಭೀಮ ಏಷ ಯೇನ ಪೂರ್ವಂ ನೇಯಥ ತಂ ಬ್ರವೀಮಿ|
ತಮ ಏತತ್ ಪುರುಷ ಮಾ ಪ್ರ ಪತ್ಥಾ ಭಯಂ ಪರಸ್ತಾದಭಯಂ ತೇ ಅರ್ವಾಕ್ ||

[ಅಥರ್ವ ವೇದ ಕಾಂಡ-೮, ಸೂಕ್ತ-೧, ಮಂತ್ರ-೧೦]

ಅನ್ವಯಾರ್ಥ:
ಏತಮ್ ಪಂಥಾನಮ್ ಮಾ ಅನುಗಾಃ = ಈ ಪಲಾಯನವಾದದ ಮಾರ್ಗವನ್ನು ಅನುಸರಿಸದಿರು
ಭೀಮ ಏಷ: = ಇದು ಭಯಾನಕವಾಗಿದೆ
ಯೇನ ಪೂರ್ವಮ್ ನ ಇಯಥ = ಯಾವ ಮಾರ್ಗದಲ್ಲಿ ನೀನು ಮೊದಲಿನಿಂದಲೂ ಹೋಗಿಲ್ಲವೋ
ತಮ್ ಬ್ರಮೀಮಿ = ಅದನ್ನು ಕುರಿತು ನಿನಗೆ ಹೇಳುತ್ತೇನೆ
ಏತತ್ ತಮಃ = ಈ ಮೌಢ್ಯದ ಮಾರ್ಗವು ತಮಸ್ಸಿನಿಂದ ತುಂಬಿದೆ
ಪುರುಷ = ಹೇ ಜೀವ ಪುರುಷನೇ
ಮಾ ಪ್ರಪತ್ಥಾಃ = ನೀನು ಕತ್ತಲೆಯಲ್ಲಿ ಹೋಗದಿರು,ಕೆಳಗೆ ಬೀಳದಿರು [ಏಕೆಂದರೆ]
ಪರಸ್ಥಾತ್ ಭಯಮ್ = ಅದರಾಚೆಗೆ ಭಯವಿದೆ
ತೇ ಅರ್ವಾಕ್ ಅಭಯಮ್ = ಮುಂದೆ ಮುನ್ನಡೆದರೆ ನಿನಗೆ ಅಭಯವಿದೆ,ಬೆಳಕಿದೆ.
ಭಾವಾರ್ಥ:-
ಯಾರೇ ಸತ್ತರೂ ದುಃಖಿಸಿ ಕೂರುವಂತಹ ಪಲಾಯನ ವಾದವನ್ನು ಅನುಸರಿಸಬೇಡ.ಏಕೆಂದರೆ ಆ ಮಾರ್ಗವು ಆತ್ಮಘಾತಕವೂ, ಭಯಕಾರವೂ ಆದುದಾಗಿದೆ. ನಿರ್ಭಯವಾದ ಸ್ವಚ್ಚ ಬೆಳಕಿನಲ್ಲಿ ಮುನ್ನಡೆದೆಯಾದರೆ ಅಲ್ಲಿ ಅಭಯವೂ ಇದೆ, ಬೆಳಕೂ ಇದೆ.
                ಈ ವೇದ ಮಂತ್ರದ ಅರ್ಥವನ್ನು ಅರಿಯುತ್ತಾ ಹೋದಂತೆ ರೋಮಾಂಚನವಾಗದಿರದು. ಯಾವುದೇ ದುಃಖದ ಸಮಯದಲ್ಲಿ ಶೋಕಿಸುತ್ತಾ ಕುಳಿತರೆ ಆ ಪರಿಸ್ಥಿತಿಯು ಸರಿಹೋಗುವುದಿಲ್ಲ.ಬದಲಿಗೆ ಭಯವು ಹೆಚ್ಚಾಗುತ್ತದೆ. ತನ್ನ ಬದುಕಿನ ಬಗ್ಗೆ ಬೇಸರಮೂಡುತ್ತದೆ. ಇದನ್ನೇ ವೇದವು ತಮಸ್ಸು ಎನ್ನುತ್ತದೆ. ಬದಲಿಗೆ ದುಃಖಿಸದೆ ಮುಂದೆ ಮುನ್ನಡೆದರೆ ದಾರಿ ಕಾಣುತ್ತದೆ, ಪರಿಸ್ಥಿಯನ್ನು ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯವು ತಾನೇ ತಾನಾಗಿ ಬರುತ್ತದೆ. ನಾನು ಕೈ ಹಿಡಿದು ಮೇಲೆತ್ತುತ್ತೇನೆ ಎಂಬ ಭಗವಂತನ ಅಭಯದ ಮಾತು ಎಷ್ಟು ಶಕ್ತಿಯನ್ನು ಕೊಡುತ್ತದೆ! ಅಲ್ಲವೇ?

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?

ಈ ಸಂದರ್ಭದಲ್ಲಿ ಹತ್ತಿರದ ಹಂಪಾಪುರದಲ್ಲೇ ಇಪ್ಪತ್ತು ವಯಸ್ಸಿನ ಮಗನನ್ನು ಕಳೆದುಕೊಂಡು ತಾಯಿಯು ಅವನ ಕೊರಗಿನಲ್ಲಿ ಹಾಸಿಗೆ ಹಿಡಿದಾಗ RSS ಪ್ರಚಾರಕರೊಬ್ಬರ ಸಲಹೆಯಂತೆ ನಾಲ್ಕು ಹಸುಗಳನ್ನು ಸಾಕಲು ಆರಂಭಿಸಿದವರು, ಈಗ ಗೋಶಾಲೆಯನ್ನೇ ನಡೆಸುತ್ತಾ ಗೋವುಗಳಲ್ಲೇ ಮಗನನ್ನು ಕಂಡು ಗೋ ಸೇವೆ ಮಾಡಿಕೊಂಡು ಸಮಾಜ ಮುಖಿ ಕೆಲಸದಲ್ಲಿ ಪೂರ್ಣ ತೊಡಗಿಸಿಕೊಂಡಿದ್ದಾರೆ.ಕಳೆದ ಕೆಲವು ದಿನಗಳಲ್ಲಿ ನನ್ನ ಸಂಬಂಧಿಗಳು ಮೂರು ಜನ ಕ್ಯಾಲಿಕಟ್ ಬೀಚ್ ನಲ್ಲಿ ಸಮುದ್ರದ ಅಲೆಗೆ ಸಿಕ್ಕಿ ಕೊನೆಯುಸಿರೆಳೆದರು. ಒಂದು ಮನೆಯ ಇಬ್ಬರು ಅಳಿಯಂದಿರು ಮತ್ತು ಒಬ್ಬ ಮೊಮ್ಮಗ. ಆ ಅತ್ತೆ-ಮಾವ ಮೌನವಾಗಿ ಎಲ್ಲವನ್ನೂ ಸಹಿಸಿದರೆ ಅಪ್ಪ-ಅಮ್ಮಂದಿರು ಕಂಗಾಲಾಗಿದ್ದರು. ಎಲ್ಲರಿಗೂ ವೇದದ ಹಾದಿಯೊಂದೇ ಪರಿಹಾರ. ಭಗವಂತನ ಮೇಲಿನ ಅಚಲ ನಂಬಿಕೆಯೇ ಅವರನ್ನೆಲ್ಲಾ ಮಕ್ಕಳ ಅಗಲುವಿಕೆಯ ನೋವಿನಿಂದ ಪಾರುಮಾಡಬೇಕು.

Tuesday, November 3, 2015

ನಿಮ್ಮ ಪಾತ್ರವೇನು?

ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ನಮ್ಮ ದೇಶದ ಯುವ ಸಂಪತ್ತಿನ ಬಗ್ಗೆ ಬಲು ವಿಶ್ವಾಸ ಹೊಂದಿದ್ದಾರೆ. ಇದೀಗ ಕಾಲ ಪಕ್ವವಾಗಿದೆ. ಯುವ ಮಿತ್ರರೇ, ನಿಮಗೆ ಈಗ ಪಂಥಾಹ್ವಾನವಿದೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ವಿಶ್ವದೆತ್ತರಕ್ಕೆ ಕೊಂಡುಯ್ಯುವ ಹೊಣೆ ನಿಮ್ಮ ಹೆಗಲ ಮೇಲಿದೆ. ಈಗ ನಿಮಗೆ ಸತ್ವ ಪರೀಕ್ಷೆಯ ಕಾಲ. ಧರ್ಮ ವಿರೋಧಿಗಳು, ಭಾರತದ ವಿರೋಧಿಗಳು ನಮ್ಮ ಧರ್ಮ, ಸಂಸ್ಕೃತಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಂದು ಸಣ್ಣ ಮೌಢ್ಯವನ್ನು ಹಿಡಿದು ಇಡೀ ಧರ್ಮವನ್ನು ವಿರೋಧಿಸುವ ಶಡ್ಯಂತ್ರ ನಡೆದಿದೆ. ಹೌದು, ಮೌಢ್ಯದ ವಿಚಾರದಲ್ಲಿ ನಾವೇಕೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಅನ್ಯಮತಗಳ ವಿಚಾರ ಹಾಗಿರಲಿ. ಹಿಂದುಸಮಾಜದಲ್ಲಿ ಇಂದಿನ ಕಾಲಕ್ಕೆ ಬಾಹಿರವಾದ ಆಚರಣೆಗಳಿದ್ದರೆ ಅದನ್ನೇಕೆ ಬುಡ ಸಮೇತ ಕಿತ್ತುಹಾಕಬಾರದು? ಧರ್ಮವಿರೋಧಿಗಳ ಹಲ್ಲಿಗೆ ಆಹಾರವಾಗುವ ಯಾವ ಸಂಗತಿಗಳಿದ್ದರೂ ಅದನ್ನು ಬೇರು ಸಮೇತ ಕಿತ್ತು ಹಾಕಲೇ ಬೇಕು. ನಮ್ಮ ಮನೆಯನ್ನು ಅಚ್ಚುಕಟ್ಟಾಗಿ ಗುಡಿಸಿಕೊಂಡು, ಆನಂದವಾಗಿರಬೇಡವೇ? ಇಂತಾ ಸ್ವಚ್ಚತಾ ಆಂದೋಳನದಲ್ಲಿ ನಿಮ್ಮ ಪಾತ್ರವೇನು?

ಯುವ ಲೇಖಕರಾದ ಶ್ರೀ ಈಶ್ವರಚಂದ್ರ ಜೋಯಿಸ್ ಇವರಿಗೆ ವೇದಸುಧೆ ಬಳಗದ ಸ್ವಾಗತ

  ಯುವ ಲೇಖಕರಾದ ಶ್ರೀ ಈಶ್ವರಚಂದ್ರ ಜೋಯಿಸ್ ಇವರಿಗೆ  ವೇದಸುಧೆ ಬಳಗದ  ಸ್ವಾಗತ.


PhD Research ScholarTirupathi, India

Monday, November 2, 2015

ಗೋವಂಶ ಉಳಿಸಿ, ಬೆಳಸಿ, ಗೋವನ್ನು ರಕ್ಷಿಸಿ-ಎನ್ನುವುದು BJP ಶ್ಲೋಗನ್ ಆಗಬೇಕೇ?


ಅಬ್ಬಾ!ಒಂದುಕಾಲದಲ್ಲಿ ಸೂರ್ಯೋದಯಕ್ಕೆ ಮುಂಚೆ ಹಾಸಿಗೆಯಿಂದೆದ್ದು ಮನೆಯ ಒಂದು ಭಾಗದಲ್ಲಿರುತ್ತಿದ್ದ ಕೊಟ್ಟಿಗೆಯಲ್ಲಿನ ಗೋವುಗಳ ದರ್ಶನ ಮಾಡಿ ಮುಖ ತೊಳೆದು , ಸೂರ್ಯೋದಯ   ವಾಗುತ್ತಿದ್ದಂತೆ ಮನೆಯ ಹೊರಗೆ ಸೂರ್ಯದೇವನಿಗೆ ಕೈ ಮುಗಿದು ಆರಂಭವಾಗುತ್ತಿದ್ದ ದಿನಚರಿ!! ಇದು ಸಾಮಾನ್ಯವಾಗಿ  ನಮ್ಮ ಎಲ್ಲಾ ಹಳ್ಳಿ ರೈತರ ಜೀವನ ಪದ್ದತಿ! ಸೋಮವಾರಗಳಲ್ಲಿ ಎತ್ತಿನ ಬದಲು ಪತಿಪತ್ನಿಯರೇ ನೊಗ ಹೊತ್ತು ಭೂಮಿ ಉಳುತ್ತಿದ್ದುದು ಸಾಮಾನ್ಯ ದೃಶ್ಯ!
ಗೋವೆಂದರೆ ಅಷ್ಟು ಭಕ್ತಿ. ಗೋಮಾತಾ ಪ್ರತ್ಯಕ್ಷ ದೇವತೆ. ಯಾರಿಗೆ ಈ ವಿಷಯ ಗೊತ್ತಿಲ್ಲ? ಸಿದ್ರಾಮಯ್ಯನವರಿಗೆ ಗೊತ್ತಿಲ್ಲವೇ? ಉಳಿದ ರಾಜಕಾರಣಿಗಳಿಗೆ ಗೊತ್ತಿಲ್ಲವೇ?
ರಾಜಕೀಯಕ್ಕಾಗಿ ಏನೆಲ್ಲಾ ಮಾತಾಡ್ತಾರೆ? ಏನೆಲ್ಲಾ ಮಾಡ್ತಾರೆ?
ರಸ್ತೆಯಲ್ಲಿ ಸಹಭೋಜನ ಮಾಡಿ-ಅಲ್ಲಿ ಗೋಮಾಂಸ ತಿನ್ನುತ್ತಾರೆ! ಪುರಭವನದೆದುರು, ಜಿಲ್ಲಾಧಿಕಾರಿಗಳ ಕಚೇರಿ ಎದಿರು ಗೋಮಾಂಸದೂಟಮಾಡುತ್ತಾರೆ!!
ಛೆ! ಛೇ!!
ಇದೇನಿದು? ಏನಾಯ್ತು ಈ ರಾಜಕಾರಣಿಗಳಿಗೆ?
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ. ಕಾಂಗ್ರೆಸ್ಸಿನ ನಮ್ಮ ಮುಖ್ಯ ಮಂತ್ರಿ ಹೇಳ್ತಾರೆ- " ಇದುವರೆವಿಗೆ ನಾನು ಗೋಮಾಂಸ ತಿಂದಿಲ್ಲ. BJP ಯವರಿಗೆ ಬುದ್ಧಿ ಕಲಿಸಲು ಗೋಮಾಂಸವನ್ನು ತಿನ್ನುವೆ. ಹಂದಿ ಮಾಂಸವನ್ನೂ ತಿನ್ನುವೆ.
ಸ್ವಾಮಿ, ಮುಖ್ಯಮಂತ್ರಿಗಳೇ
ನೀವು ಮುಖ್ಯಮಂತ್ರಿಗಳಾಗಲು ಕರ್ನಾಟಕದ ಮತದಾರ ಕಾರಣ. BJP ಯವರಿಗೆ ಚಾಲೆಂಜ್ ಮಾಡಲು ಗೋಮಾಂಸ ತಿನ್ನುತ್ತೇನೆಂದರೆ ಅದರರ್ಥವೇನು? ಸಾಮಾನ್ಯಮತದಾರನ ಭಾವನೆಗೆ ಅದೆಷ್ಟು ಪೆಟ್ಟು ಬೀಳುತ್ತದೆಂದು ಯೋಚಿಸಿದ್ದೀರಾ?
ಈಗಾಗಲೇ ನಮ್ಮ ಸಾಮಾಜಿಕ ಸ್ವಾಸ್ಥ್ಯ ಹದಗೆಟ್ಟಿರುವುದು ಸಾಲದೇ? ಇನ್ನೂ ಅದೆಷ್ಟು ಹದಗೆಡಬೇಕು? ನಾಡಹಸು ಎತ್ತುಗಳ ವಂಶ ಕೊನೆಯಾದರೆ ಅದೆಂತಹ ಘೋರಪರಿಣಾಮ ಬೀರುತ್ತದೆಂಬ ವಿವೇಚನೆ ನಿಮಗಿದೆಯೇ?
ದನಗಳ ಗೊಬ್ಬರದಿಂದ ಬೆಳೆಯುತ್ತಿದ್ದ ಬೆಳೆ ಹೇಗಿರುತ್ತಿತ್ತು?
ಮನೆಯಲ್ಲಿ ಒಂದು ಜೊತೆ ಎತ್ತು ಒಂದು ಕರಾವಿನ ಹಸು ಇದ್ದರೆ ಒಂದು ಎಕರೆ ಜಮೀನಿನಲ್ಲಿ ರೈತ ಎಷ್ಟು ಆನಂದವಾಗಿ ಬಾಳ್ಮೆ ನಡೆಸುತ್ತಿದ್ದರು!!
ಜೋಡೆತ್ತಿನ ಗಾಡಿ!!
ನೇಗಿಲಿನಿಂದ ಉಳುಮೆ!!
ದನಗಳ ಗೊಬ್ಬರ!
ಕರಾವಿನ ಹಸು!!
ಈ  ವಾಕ್ಯಗಳು ನೆನಪಾದಾಗ ನಿಮ್ಮ ಕಣ್ಣು ತೇವಗೊಳ್ಳಲಿಲ್ಲವೆಂದರೆ ಈ ನೆಲದ ವಾಸನೆ ಮರೆತು ಹೋಗಿದೆ ಎಂದೇ ಭಾವಿಸಬೇಕಾಗುತ್ತದೆ!!
ಇದೇ ನಾಡದನಗಳ ಸಗಣಿ, ಗಂಜಲಗಳು ಹಲವಾರು ರೋಗಗಳಿಗೆ ರಾಮಬಾಣ!! ಎನ್ನುವುದು ಇತ್ತೀಚಿನ ಸಂಶೋಧನೆ!!!!
ಆದರೆ ಇದೇ ನಾಡದನಗಳ ಉಸಿರಿನ ವಾಸನೆಯಿಂದಲೇ ಮನೆಯಲ್ಲಿ ಆರೋಗ್ಯ ನೆಲೆಸುತ್ತಿತ್ತು! ಎಂಬುದು ನಮ್ಮ ಹಿರಿಯರ ಅನುಭವ!!
ಸ್ವಾಮಿ,
ನಿಮ್ಮ  ರಾಜಕಾರಣಕ್ಕಾಗಿ ಸಮಾಜದ ಸ್ವಾಸ್ಥ್ಯವನ್ನು ನಾಶಮಾಡಬೇಡಿ.
ಇಡೀ ವಿಶ್ವವು ನಮ್ಮ ಕಡೆ ನೋಡುತ್ತಿದೆ! ಎಂಬ ಎಚ್ಚರ ನಿಮಗೂ ಇರಲಿ. ವಿಶ್ವವು ನಮ್ಮನ್ನು ಗೌರವಿಸಲು  ಪ್ರಮುಖ ಕಾರಣ ಏನೆಂಬುದರ ಅರಿವು ನಿಮಗಿಲ್ಲವೇ?
ಇಂದಿನ ಯುವಕರಿಗೆ ಈ ನೆಲದ ಮಣ್ಣಿನ ವಾಸನೆ ಗೊತ್ತಿಲ್ಲ. ಅದೆಲ್ಲಾ ರಾಸಾಯನಿಕ ಗೊಬ್ಬರದಿಂದ ಗಬ್ಬೆದ್ದು ಹೋಗಿದೆ! ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಮ್ಮ ನಿಜ ಸಂಸ್ಕೃತಿಯ ಅರಿವೇ ಇಲ್ಲವಾಗಿದೆ.
ಇಂದಿನ ನನ್ನ ಪ್ರೀತಿಯ ಯುವ ಮಿತ್ರರೇ!

ನಾವೆಲ್ಲಾ ಅಮ್ಮನ ಹಾಲು ಕುಡಿದದ್ದು ಒಂದೆರಡು ವರ್ಷ. ಆಮೇಲೇ?
 ಮನೆಯಲ್ಲಿರುತ್ತಿದ್ದ ನಾಡಹಸುವಿನ ಕೆಚ್ಚಲಿಗೆ ಬಾಯಿಹಾಕಿ ಚಪ್ಪರಿಸಿದವರು ನಾವು!!
ನಮ್ಮ    ಆಯುಶ್ಯ ಇನ್ನೇನು ಮುಗಿಯುತ್ತಾ ಬಂತು!  ನಮ್ಮ   ತಲೆಮಾರು ಮಾಯವಾಗುದಕ್ಕೆ ಮುಂಚೆಯೇ  ನಮ್ಮ ಗತವೈಭವಗಳೆಲ್ಲಾ ಮಾಯವಾಗುತ್ತಿವೆ!!
ಓಹ್! ಗತ ವೈಭವ ಎಂದಾಗ ನೀವು ಅಣಕಿಸುತ್ತೀರ, ಅಲ್ವಾ?
ಹೌದು, ಇಂದಿನಂತೆ ಕಂಪ್ಯೂಟರ್, ಮೊಬೈಲ್, ಟಿ.ವಿ. ನಮ್ಮ ಕಾಲದಲ್ಲಿರಲಿಲ್ಲ. ಕಾರ್ ಗಳ ಓಡಾಟವೂ ಇರಲಿಲ್ಲ.
ಜೊತೆ ಜೊತೆಗೆ  ನಮ್ಮ ಕಾಲದಲ್ಲಿ ಮಕ್ಕಳು ಕನ್ನಡಕ ಹಾಕುತ್ತಿರಲಿಲ್ಲ!
ಬಿ.ಪಿ. ಶುಗರ್  ಖಾಯಿಲೆ ಗೊತ್ತಿರಲಿಲ್ಲ!!
ಅಂದಿನ ಕಾಲದಲ್ಲಿ  ತಿಂಗಳಲ್ಲಿ    ಒಂದು ಕ್ವಿಂಟಾಲ್ ಅಕ್ಕಿ ಖರ್ಚಾಗುತ್ತಿದ್ದ ಮನೆಯಲ್ಲಿ ಇಂದು 10 ಕೆ.ಜಿ. ಅಕ್ಕಿ ಖರ್ಚಾಗುತ್ತಿಲ್ಲ.
ಅಂದು ಹಸಿವಿತ್ತು. ಆರೋಗ್ಯವಿತ್ತು. ಅನ್ನ ರುಚಿಸುತ್ತಿತ್ತು
ಇಂದು ಹಸಿವಿಲ್ಲ. ಆರೋಗ್ಯವಿಲ್ಲ. ಅನ್ನ ರುಚಿಸುವುದಿಲ್ಲ!!
ಇದು ಸತ್ಯವೋ? ಸುಳ್ಳೋ ನೀವೇ ಹೇಳಿ. ನಿಮಗೆ ಊಹಿಸಲು ಕಷ್ಟವಾದೀತು. ಬದುಕಿದ್ದರೆ  ನಿಮ್ಮ       ಅಜ್ಜ-ಅಜ್ಜಿ ಅಥವಾ ನಿಮ್ಮ ಅಪ್ಪ-ಅಮ್ಮನನ್ನು ಕೇಳಿ. ಸತ್ಯವನ್ನು ತಿಳಿದುಕೊಳ್ಳಿ.
ಗೋವಂಶ ಉಳಿಸಿ, ಬೆಳಸಿ, ಗೋವನ್ನು ರಕ್ಷಿಸಿ-ಎನ್ನುವುದು BJP ಶ್ಲೋಗನ್ ಆಗಬೇಕೇ? ಇನ್ನುಳಿದ ಪಕ್ಷಗಳು ಈ ನೆಲದ ಸಂಸ್ಕೃತಿಯ ವಿರೋಧಿಗಳೇ?

Tuesday, October 13, 2015

ದೇವಾಲಯಗಳಲ್ಲಿ ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ

 ಶರನ್ನವರಾತ್ರಿಯ  ಮೊದಲದಿನವಾದ ಇಂದು ವಿಜಯವಾಣಿಯಲ್ಲಿ ಡಾ.ಕೆ.ಎಸ್.ನಾರಾಯಣಾಚಾರ್ಯರ ಮನದಾಳದ ನೇರ-ದಿಟ್ಟ  ನುಡಿಗಳನ್ನು ಓದಿದ ಮೇಲೆ ದಿಕ್ಕೆಟ್ಟ ಜನರಿಗೆ ಸೂಕ್ತ ಮಾರ್ಗದರ್ಶಕರು ಈ ದೇಶದಲ್ಲಿ  ಇನ್ನೂ  ಇದ್ದಾರೆಂಬ ಭಾವನೆಯಿಂದ ನನ್ನ ಚಟುವಟಿಕೆಗಳಿಗೆ ಇನ್ನಷ್ಟು ವೇಗವನ್ನು ಕೊಡಬೇಕೆಂದು ಮನದಲ್ಲೇ ನಿರ್ಧರಿಸಿಕೊಂಡೆ.
ಈ ದೇಶ ಉದ್ಧಾರವಾಗಬೇಕಾದರೆ..... ಲೇಖನದ ಕೊನೆಯ ಮಾತು ದೇವಾಲಯಗಳಲ್ಲಿ  ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ ಎಂಬ ಮಾತು ಇಂದಿಗೆ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ನನಗೆ ಲೇಖನ ಓದುವಾಗ ಹಾಸನದ ಶಂಕರಮಠದಲ್ಲಿ ಈಗ್ಗೆ ಸುಮಾರು ಎಂಟು ಹತ್ತು ವರ್ಷಗಳಲ್ಲಿ ವಿಜಯದಶಮಿ ಸಂದರ್ಭಗಳಲ್ಲಿ ನಾವು ಆಯೋಜಿಸುತ್ತಿದ್ದ  ಜ್ಞಾನಯಜ್ಞದ ನೆನಪಾಗುತ್ತಿದೆ. ಗದಗ್ ಶ್ರೀರಾಮಕೃಷ್ಣಾಶ್ರಮದ ಪೂಜ್ಯ ನಿರ್ಭಯಾನಂದರು, ತುಮಕೂರಿನ ಪೂಜ್ಯ ವೀರೇಶಾನಂದರು, ಬೆಂಗಳೂರು ಭವತಾರಣಿ ಆಶ್ರಮದ ಮಾತಾಜಿ ವಿವೇಕಮಯೀ, ಚಿನ್ಮಯಾಮಿಷನ್ನಿನ ಬ್ರಹ್ಮಚಾರಿ ಸುಧರ್ಮಚೈತನ್ಯರು, ಹುಬ್ಬಳ್ಳಿಯ ಪೂಜ್ಯ ಚಿದ್ರೂಪಾನಂದಸರಸ್ವತೀ, ಬೆಂಗಳೂರಿನ ವೇದಾಧ್ಯಾಯೀ ಶ್ರೀಸುಧಾಕರಶರ್ಮರು. . . . ಇವರೆಲ್ಲಾ ಬಂದು ನಡೆಸಿಕೊಡುತ್ತಿದ್ದ ಉಪನ್ಯಾಸಗಳು! ಅಬ್ಬಾ! ಒಂದೇ ಎರಡೇ!!
ಈಗಲೂ ಹಲವು ಮಿತ್ರರು ನನ್ನನ್ನು ಆಗಿಂದಾಗ್ಗೆ ಕೇಳುತ್ತಾರೆ ಯಾಕೆ ಉಪನ್ಯಾಸಗಳನ್ನು ನಡೆಸುವುದನ್ನು ನಿಲ್ಲಿಸಿ ಬಿಟ್ಟಿರಿ? ನಿಲ್ಲಿಸಿಲ್ಲ. ನನ್ನ ಕಾರ್ಯಚಟುವಟಿಕೆಗಳಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ನಮ್ಮ ಮನೆ ಈಶಾವಾಸ್ಯಮ್ ನಲ್ಲಿ ಪ್ರತೀ ದಿನ ಸತ್ಸಂಗದಲ್ಲಿ ವೇದಭಾರತಿಯು ಇದೇ ಕೆಲಸವನ್ನು ಮಾಡುತ್ತಿದೆ-ಎನ್ನುತ್ತೇನೆ.
ಹೌದು ಶ್ರೀ ನಾರಾಯಣಾಚಾರ್ಯರ ಮಾತು ಎಷ್ಟು ಅರ್ಥಗರ್ಭಿತ! ದೇವಾಲಯಗಳಲ್ಲಿ  ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ ಇಂದಿನಿಂದ ಬಹುತೇಕ ದೇವಾಲಯಗಳಲ್ಲಿ ದುರ್ಗಾಮಾತೆಗೆ ಪ್ರತೀ ದಿನ ಒಂದೊಂದು ಅಲಂಕಾರ, ಹವನ-ಹೋಮಗಳು, ಪೂಜೆ ಪುನಸ್ಕಾರಗಳು ನಡೆಯುತ್ತವೆ. ಜನರು ಸಾಲುಗಟ್ಟಿ ದುರ್ಗೆಯ ದರ್ಶನ ಪಡೆಯುತ್ತಾರೆ. ಉತ್ತಮ ಕಾರ್ಯವೇ ಆಗಿದೆ. ಆದರೆ ಅಷ್ಟೇ ಸಾಕೇ? ಇವೆಲ್ಲವೂ ನಾವು ನೆಮ್ಮದಿಯಾಗಿರಬೇಕೆಂದು ಮಾಡುವ ದೇವತಾ ಕಾರ್ಯಗಳು ತಾನೇ? ಆದರೆ ನಿಜವಾಗಿ ನಮ್ಮ ಮನೆಗಳಲ್ಲಿ ನೆಮ್ಮದಿ ಇದೆಯೇ? ಸುಖ ಇದೆಯೇ? ಆನಂದಕ್ಕೆ ಆಸ್ಪದ ಇದೆಯೇ? ಮಕ್ಕಳೇ ಮನೆಗೆ ಆಸ್ತಿ ಅಲ್ಲವೇ? ಅವರು ನಿಜವಾಗಿ ಆಸ್ತಿಯಾಗಿದ್ದಾರಾ? ಒಂದು ವೇಳೆ ನಮ್ಮ ನಿರೀಕ್ಷೆಗೆ ತಕ್ಕಂತೆ ಅವರಿಲ್ಲವೆಂದಾದರೆ ತಪ್ಪು ಯಾರದ್ದು? ಮಕ್ಕಳದ್ದೇ? ಅಥವಾ ಪೋಷಕರದ್ದೇ?
ದೇವಾಲಯಗಳಲ್ಲಿ ನೋಡಿ, ಸಾಮಾನ್ಯವಾಗಿ ನಲವತ್ತು ವಯಸ್ಸಿನ ಮೇಲ್ಪಟ್ಟವರಿಂದಲೇ ತುಂಬಿರುತ್ತದೆ! ಉಪನ್ಯಾಸ ಕಾರ್ಯಕ್ರಮಗಳಿಗೆ ಬರುವವರು ಯಾರು? ಕಿವಿ ಮಂದವಾಗಿರುವ             ದೃಷ್ಟಿ ಕಮ್ಮಿಯಾಗಿರುವ! ಅರವತ್ತು ದಾಟಿದ ಎಪ್ಪತ್ತು ಎಂಬತ್ತರ ವೃದ್ಧರಿಗೆ ಉಪನ್ಯಾಸ! ಅವರಿಗೆ ವಿಷಯ ಯಾವುದಿರಬೇಕೋ ಅದಿರುತ್ತದೆ. ಆದರೆ ನಮ್ಮ ಯುವಕರು ಉಪನ್ಯಾಸಗಳಿಗೆ ಬರುತ್ತಾರಾ? ಬರುವುದಿಲ್ಲವಾದರೆ ಕಾgಣ ಏನು? ಅವರನ್ನು ಆಕರ್ಷಿಸುತ್ತಿರುವ ವಿಷಯಗಳು ಯಾವುವು? ಆಕರ್ಷಣೆಗೆ ಒಳಗಾಗುವ ವಿಷಯಗಳ ಪ್ರಭಾವ ಏನು? ಯುವಕರು ನಮ್ಮ ದೇಶದ ಸಂಪತ್ತೆಂಬುದು ನಮ್ಮ ನೆಚ್ಚಿನ ಪ್ರಧಾನಿಯವರ ಆಶಯ. ಆದರೆ ಎಷ್ಟು ಯುವಕರು ನಮ್ಮ ದೇಶಕ್ಕೆ ಆಸ್ತಿಯಾಗಿದ್ದಾರೆ! ಯುವ ಶಕ್ತಿಯ ಎಷ್ಟುಭಾಗ ದೂರದರ್ಶನದ ಮುಂದೆ ಕ್ರಿಕೆಟ್ ಪಂದ್ಯ ನೋಡುತ್ತಲೋ, ಅಂತರ್ಜಾಲದಲ್ಲಿ ಬೆತ್ತಲೆದೃಶ್ಯ ನೋಡುವುದರಲ್ಲೋ ಕಳೆದು ಹೋಗಿದೆ? ನಮ್ಮ ದೇಶದ ಎಷ್ಟು ಯುವಕರಿಗೆ ದೇಶಭಕ್ತಿ ಇದೆ? ದೇಶಕ್ಕಾಗಿ ನನ್ನ ಬದುಕು !! ಎನ್ನುವ ಮನೋಭಾವದ ಯುವಕರೆಷ್ಟು ಜನರಿದ್ದಾರೆ!!
ದೇಶದ ಇಂತಾ ದೊಡ್ದ ಯುವಸಂಪತ್ತಿನ ಉಪಯೋಗ ದೇಶಕ್ಕೆ ಸರಿಯಾಗಿ ಆಗಬೇಡವೇ? ಹಳ್ಳಿಗಳಲ್ಲಂತೂ ಪುಡಾರಿಗಳ ಹಿಂದೆ ಸುತ್ತುವ ಯುವಕರನ್ನು ನೋಡಿದಾಗ ಬಲು ದುಃಖವಾಗುತ್ತದೆ. ಇವರಲ್ಲಿ ಜಾಗೃತಿ ಮಾಡುವುದು ಯಾವಾಗ? ಯಾರು ಜಾಗೃತಿ ಕೆಲಸ ಮಾಡಬೇಕು!
ನಿಜವಾಗಿ ಅಂತಾ ಕೆಲಸ ಕೂಡ ನಡೆಯುತ್ತಿದೆ. ರಾ.ಸ್ವ. ಸಂಘ , ಪತಂಜಲಿ ಯೋಗ ಪೀಠ, ರಾಮಕೃಷ್ಣ ಮಿಷನ್, ಮುಂತಾದ ಸಂಘಟನೆಗಳು ಮಾಡುತ್ತಿವೆ. ಆದರೂ ಸಾಲದು. ನಮ್ಮ ಜನಸಂಖ್ಯೆಗೆ ಹೋಲಿಸಿದಾಗ ಕೆಲಸದ ವೇಗ ಇನ್ನೂ ಹೆಚ್ಚಬೇಕು.
ನಾರಾಯಣಾಚಾರ್ಯರು ತಮ್ಮ ಲೇಖನದಲ್ಲಿ  ದೇಶವನ್ನು ಕಾಡುತ್ತಿರುವ ಹಲಾವಾರು ಸಮಸ್ಯೆಗಳ ಬಗ್ಗೆ ಓದುಗರ ಕಣ್ ತೆರೆಸುವ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಂದು ವಿಷಯಗಳೂ ಒಂದು ಲೇಖನ ಬರೆಯುವಷ್ಟು ಮಹತ್ವ ಉಳ್ಳ ವಿಷಯಗಳೇ ಆಗಿವೆ. ಕೊನೆಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಅವರ ಒಂದು ಸಲಹೆ ಗಮನಾರ್ಹ.  ಸಾಮಾಜಿಕ ಸಾಮರಸ್ಯಕ್ಕಾಗಿ ನಾವು ಹಳಬರ ಮಾರ್ಗದರ್ಶನಕ್ಕೆ ಮೊರೆ ಹೋಗಬೇಕು. ಶ್ರೀರಾಮಕೃಷ್ಣ, ವಿವೇಕಾನಂದ,ನಾರಾಯಣಗುರು, ಫುಲೆ, ಅಮೃತಾನಂದಮಯೀ. ಚಿನ್ಮಯಾನಂದ, ದಯಾನಂದರ ವಿಚಾರಧಾರೆಗಳು ಒಟ್ಟಾಗಿ ಇತ್ತ ಶ್ರಮಿಸಬೇಕು
ಈ ಮೇಲಿನ ಸಲಹೆಯಿಂದ ನನಗೆಷ್ಟು ಸಮಾಧಾನವಾಗಿದೆ ಎಂದರೆ ನಾವೀಗ ವೇದಭಾರತಿ ಮತ್ತು ಪತಂಜಲಿ ಯೋಗ ಪೀಠ ಒಂದು ವೇದಿಕೆಯಲ್ಲಿ ಎಲ್ಲರಿಗಾಗಿ ವೇದ, ಎಲ್ಲರಿಗಾಗಿ ಯೋಗ ಎಂಬ ಉದ್ದೇಶದೊಡನೆ ಚಟುವಟಿಕೆಯನ್ನು ಈ ವರ್ಷ ವಿಶ್ವ ಯೋಗದಿನದಿಂದ ಆರಂಭಿಸಿದ್ದೇವೆ. ಈಗಾಗಲೇ ನೂರಾರು ಜನರಿಗೆ ಯೋಗದ ತರಬೇತಿ, ವೇದದ ಅರಿವು ಮೂಡಿಸುವ ಕೆಲಸ ಸಾಗಿದೆ  ವೇದ-ಯೋಗ ಸಂಗಮದ ಹೆಸರಲ್ಲಿ. ಜನರ ಸಹಕಾರ ಪಡೆದು ನಮ್ಮ ಕಾರ್ಯವೇಗವನ್ನು ಹೆಚ್ಚಿಸಬೇಕೆಂಬ ಉದ್ದೇಶವೂ ಇದೆ.
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ

Monday, October 12, 2015

ವೈದಿಕ ಧರ್ಮಾಭಿಮಾನೀ ಮಿತ್ರರೇ, ನಿಮ್ಮಲ್ಲೊಂದು ಮನವಿ.

ವೈದಿಕ ಧರ್ಮಾಭಿಮಾನೀ  ಮಿತ್ರರೇ,
ನಿಮ್ಮಲ್ಲೊಂದು ಮನವಿ.
ವೈದಿಕ ಧರ್ಮವು ನಿಂತ ನೀರಲ್ಲ. ಅದು ಗಂಗೆ. ಯಾವಾಗಲೂ ಹರಿಯುತ್ತಿದ್ದು ಅದರ ಸಂಪರ್ಕಕ್ಕೆ ಬಂದದ್ದನ್ನೆಲ್ಲಾ ಪಾವನ ಗೊಳಿಸುತ್ತಾ ತನ್ನನ್ನೂ ಕಾಲಕಾಲಕ್ಕೆ ಪವಿತ್ರಗೊಳಿಸಿಕೊಳ್ಳುತ್ತಾ ಸದಾಕಾಲ ಜಗತ್ತಿಗೆ ಹಿತವನ್ನುಂಟುಮಾಡುವುದೇ ವೈದಿಕ ಧರ್ಮದ ವೈಶಿಷ್ಠ್ಯ.
ವೇದವೇ ನಮಗೆ ಆಧಾರ. ಆದರೆ ವೇದಕ್ಕೆ ವಿರುದ್ಧವಾದ ಹಲವು ಆಚರಣೆಗಳೂ ಸಹ ಕಾಲಗತಿಯಲ್ಲಿ ರೂಢಿಯಲ್ಲಿ  ಸೇರಿಹೋಗಿರುವುದು ಸುಳ್ಳಲ್ಲ. ಅವುಗಳಲ್ಲಿ ಕೆಲವು ಯಾರಿಗೂ ಹಾನಿಮಾಡದೆ ಆಚರಿಸುವವನಿಗೆ ನೆಮ್ಮದಿ ಕೊಟ್ಟಿದ್ದರೆ  ಇನ್ನು ಕೆಲವು ಮಾನವೀಯತೆಗೇ ಕೊಡಲಿ ಪೆಟ್ಟು ಕೊಡುವಂತಹ ಆಚರಣೆಗಳು !
ಉದಾಹರಣೆಗೆ ವಿಗ್ರಹಾರಾಧನೆ. ಎಲ್ಲಿಯವರಗೆ ಇದು ವ್ಯಕ್ತಿಯ ನಿತ್ಯಬದುಕಿನಲ್ಲಿ ಮನಸ್ಸಿನ ನೆಮ್ಮದಿಗೆ ಅಗತ್ಯವೆನಿಸಿ ಆಚರಿಸಲ್ಪಡುತ್ತದೋ ಅಲ್ಲಿಯ ವರಗೆ ಈ ಬಗ್ಗೆ ಚರ್ಚೆ ಅನಗತ್ಯ. ಯಾವಾಗ ದೇವಾಲಯಗಳಲ್ಲಿ ವ್ಯಾಪಾರೀ ಮನೋಭಾವವಾಗಿ ಮಾರ್ಪಡುತ್ತದೋ ಆಗ ಅದು ಚರ್ಚೆಯ ವಿಷಯವಾಗುತ್ತದೆ. ಅಲ್ಲದೆ  ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ  ಕೆಲವರಿಗೆ ದೇವಾಲಯ ಪ್ರವೇಷವನ್ನೇ ನಿರ್ಬಂಧಿಸುವ ಪದ್ದತಿಯು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಕಾರಣ ವಾಗುತ್ತದೆ

ಮೇಲು-ಕೀಳು ಭಾವನೆ :
 ಎಲ್ಲರನ್ನೂ ಸಮಾನವಾಗಿ ಕಾಣುವ ಹಲವು ವೇದ ಮಂತ್ರಗಳಿದ್ದರೂ ಸಮಾಜದಲ್ಲಿ ಮೇಲು-ಕೀಳು ಭಾವನೆ ಪೂರ್ಣವಾಗಿ ಮಾಯವಾಗಿಲ್ಲ.

ವ್ರತ-ಕತೆಗಳು :

ಹಿಂದಿನಿಂದ ನಡೆದುಬಂದಿರುವ ಕೆಲವು ವ್ರತಕತೆಗಳಿವೆ. ಉದಾಹರಣೆಗೆ ವರಮಹಾಲಕ್ಷ್ಮೀ ವ್ರತ, ಗೌರಿ-ಗಣೇಶ ವ್ರತ, ಅನಂತ ಪದ್ಮನಾಭವ್ರತ. ಇವುಗಳನ್ನು ಕೆಲವರು ತಲೆತಲಾಂತರದಿಂದ ಆಚರಿಸಿಕೊಂಡು ಬಂದಿದ್ದಾರೆ. ಅದು ಅವರ ನಂಬಿಕೆ. ಆದರೆ ಇತ್ತೀಚೆಗೆ ಸಂಕಷ್ಟಹರ ಗಣಪತಿ ವ್ರತದಂತಾ ಕೆಲವು ಸಾಮೂಹಿಕ ವ್ರತಗಳು ಆರಂಭವಾಗಿವೆ. ಇವು ಸಹ ಚರ್ಚೆ ಮಾಡಲು ಅರ್ಹವಾಗಿವೆ

ಮಡೆಉರುಳು :
ಇಂತಾ ಅವೈದಿಕ ಆಚರಣೆಯ ಬಗ್ಗೆ ಚರಿಚಿಸಬಾರದೇ?

ಇವಲ್ಲದೆ ಮನುಷ್ಯ-ಮನುಷ್ಯನಲ್ಲಿ ಭೇದಮಾಡುವ ಹಲವು ಆಚರಣೆಗಳು ಇನ್ನೂ ಜೀವಂತವಾಗಿವೆ. ಈ ಬಗ್ಗೆ ಆರೋಗ್ಯಕರವಾದ ಚರ್ಚೆಯಾಗಬಾರದೇ?

ಸಮಾಜದ ಎಲ್ಲಾ ಸಮಸ್ಯೆಗಳಿಗೂ ವೇದವಿರೋಧಿಗಳದ್ದು ಒಂದೇ ಪ್ರಹಾರ " ವೇದವೇ ಶೋಷಣೆಗೆ ಮೂಲ"

ಹೀಗೆ ಹೇಳುವಾಗ ಅವರಿಗೆ ವೇದದ ಸರಿಯಾದ ಅರಿವಿಲ್ಲವೆಂಬುದು ಸತ್ಯವಾದರೂ  ವೇದದ ಹೆಸರಿನಲ್ಲಿ ನಡೆದಿರುವ ಅವೈದಿಕ ಆಚರಣೆಗಳೇ ಅವರಿಗೆ ಆಹಾರವಾಗಿರುವ ಪರಮ ಸತ್ಯ.  ವೇದಕ್ಕೆ ವಿರುದ್ಧವಾಗಿ ಮಾನವೀಯತೆಗೆ ಧಕ್ಕೆ ತರುವ ಆಚರಣೆಗಳನ್ನು "ಮೌಢ್ಯ" ಎಂದರೆ ತಪ್ಪಾಗಲಾರದು. ಇಂತಹ ಮೌಢ್ಯಗಳನ್ನು ವೇದಾಭಿಮಾನಿಗಳೇ ವಿರೋಧಿಸಿ ಶುದ್ಧ ವೈದಿಕಾಚರಣೆಗಳನ್ನು ರೂಢಿಗೆ ತಂದರೆ ವೇದ ವಿರೋಧಿಗಳಿಗೆ ವಿರೋಧಿಸಲು ವಿಷಯವೇ ಸಿಗಲಾರದು, ಜೊತೆಗೆ ಸಮಾಜದಲ್ಲಿ ಸಮರಸದಿಂದ , ನೆಮ್ಮದಿಯಾಗಿ ಬಾಳಲು ದಾರಿ ತೆರೆದುಕೊಳ್ಳುತ್ತದೆ.
ಈ ದಾರಿಯಲ್ಲಿ ಚರ್ಚೆ ಮಾಡಲು ಬರುವಿರಾ?

ಈ ಸಂಧಿಕಾಲದಲ್ಲಿ ನಾವಿಂತಾ ಚರ್ಚೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಇನ್ನೂ ದೊಡ್ದ ಪೆಟ್ಟು ಬೀಳಬಹುದು.
ಹೀಗೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ "ಚಿಂತನ-ಮಂಥನ " ನಡೆಸಬೇಕೆಂಬ ಇಚ್ಛೆ ನನ್ನದು. ಹತ್ತಾರುಜನರ ಸಹಮತ ಸಿಕ್ಕರೆ ಅದಕ್ಕೆ ಸರಿಯಾದ ರೂಪು ರೇಶ ಕೊಟ್ಟು, ಅದಕ್ಕೊಂದು ಸ್ಥಳ, ದಿನ ಎಲ್ಲವನ್ನೂ ಅಂತಿಮಗೊಳಿಸಿದರಾಯ್ತು.

ನಾಲ್ಕೈದು ಗಂಟೆಗಳ ಕಾರ್ಯಕ್ರಮವಾದರೂ ಆಗಬೇಕು. ಅದನ್ನು ಯಾವ ಬ್ಯಾನರ್ ನಲ್ಲಿ ಮಾಡ ಬೇಕೆಂಬುದನ್ನು ಮುಂದೆ ತೀರ್ಮಾನಿಸಬಹುದು. ಇಂದಿನ ಸಮಾಜಕ್ಕೆ ಒಪ್ಪುವಂತೆ ಮಾರ್ಗದರ್ಶನ ಮಾಡಲು ಯಾರನ್ನಾದರೂ ಸ್ವಾಮೀಜಿಯವರನ್ನೋ, ಸಾಮಾಜಿಕ ಚಿಂತಕರನ್ನೋ ಮಾರ್ಗದರ್ಶನಕ್ಕೆ ಕರೆಸಬಹುದು

  ಹಾಸನದಲ್ಲಿ ಮಾಡಲು ಒಮ್ಮತ ದೊರೆತರೆ        ನೂರು  ಜನ ಅಭಿಮಾನಿಗಳು ಪಾಲ್ಗೊಂಡ ರೂ ಅವರಿಗೆ ಉಚಿತ    ಊಟೋಪಚಾರದ ಭಾಗ ನನಗಿರಲಿ.ಬೆಂಗಳೂರಿನಲ್ಲೂ  ಆಗಬಹುದು. ಅಲ್ಲಿ ಮಾಡಿದರೂ ವ್ಯವಸ್ಥೆಗೆ ನನ್ನ ಪ್ರಯತ್ನ ಇದ್ದೇ ಇರುತ್ತೆ.
ನಿಮ್ಮ ಅಭಿಪ್ರಾಯ ತಿಳಿಸುವಿರಾ?

Friday, October 9, 2015

ಶ್ರೀ ಸುಧರ್ಮ ಚೈತನ್ಯರು ಕರೆ ಮಾಡಿದಾಗ.....

ಒಂದೆರಡು ವರ್ಷಗಳಿಂದ ಯಾರಿಗಾಗಿ ಹಂಬಲಿಸುತ್ತಿದ್ದೆನೋ, ಅವರಿಂದಲೇ ದೂರವಾಣಿ ಕರೆ ಬಂದಾಗ ಆದ ಸಂತೋಷಕ್ಕೆ ಪಾರವೇ ಇಲ್ಲ. ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ತಿಪಟೂರಿನ ಚಿನ್ಮಯ ಮಿಷನ್ ಆಶ್ರಮದಿಂದ ಹಾಸನಕ್ಕೆ ಬಂದು ಹಲವಾರು ಉಪನ್ಯಾಸಗಳನ್ನು ಮಾಡಿ ಧರ್ಮಾಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವರು ನೀಡಿದ ಉಪನ್ಯಾಸ "ಸಾಧನಾ ಪಂಚಕ" ವನ್ನು ಅದೆಷ್ಟು ಜನರಿಗೆ ನನ್ನ ವೆಬ್ ಸೈಟ್ ಮೂಲಕ ಕೇಳಿಸಿದ್ದೀನೋ! ಅವರು ಸಾಧನೆಗಾಗಿ ಹಿಮಾಲಯಕ್ಕೆ ಹೋಗಿರಬಹುದೆಂಬ ಅನುಮಾನವಿತ್ತು. ಆದರೂ ದೃಢ ಪಟ್ಟಿರಲಿಲ್ಲ. ಅವರೀಗ ಹರಿದ್ವಾರಕ್ಕೆ 12 ಕಿಲೋ ಮೀಟರ್ ದೂರದಲ್ಲಿರುವ ಸತ್ಯಂ ಸಾಧನ ಕುಟೀರದಲ್ಲಿದ್ದಾರೆ. ಹೇಗೂ ಬಾಬಾ ರಾಮದೇವ್ ಅವರ ಪತಂಜಲಿ ಆಶ್ರಮಕ್ಕೆ ಹರಿದ್ವಾರಕ್ಕೆ ಹೋಗುವ ಕಾರ್ಯಕ್ರಮವಿದೆ.ಆಗ ಅವರ ದರ್ಶನಭಾಗ್ಯವಿದೆ.

Friday, October 2, 2015

ಹೌದು, ಬಲು ಕಷ್ಟವಾಗುತ್ತೆ, ಹಿಂದಿನಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಪ್ರಶ್ನೆ ಮಾಡಲು ! ನಾನು ಸಂಪ್ರದಾಯ ವಿರೋಧಿಯಲ್ಲ! ಹಾಗೆ ತಪ್ಪು ತಿಳಿದೀರಿ! ಆದರೆ ಇಲ್ಲಿಯವರಗೆ ಯಾವುದಕ್ಕೂ ಯಾಕೆ? ಎನ್ನುವ ಪ್ರಶ್ನೆ ಮಾಡಬಾರದೆಂಬ  ಸಂಸ್ಕಾರದಲ್ಲಿ ನಾವೆಲ್ಲಾ     ಬೆಳೆದುಬಂದು ಬಿಟ್ಟಿದ್ದೇವೆ. ಯಾಕೆ ಹಾಗೆ ಬೆಳಸಿದರೋ ನಾನರಿಯೆ. ಆದರೆ ವೇದವನ್ನು ಅನುಸರಿಸುವ ನಮಗೆ ವೇದದಲ್ಲಿ ಹೇಳಿರುವ  ಪ್ರಶ್ನೆ ಮಾಡಿ ಅರ್ಥ ಮಾಡಿಕೋ, ಎಂಬುದನ್ನು ಮಾತ್ರ ಹೇಳಿಕೊಟ್ಟಿಲ್ಲ. ಹೀಗಾಗಿ ನಾನು ಸುಮಾರು ಏಳೆಂಟು ವರ್ಷಗಳು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ವಾದ ಮಾಡಿರುವೆ. ಅವರಿಗೆ ನಾನು ಕೇಳುತ್ತಿದ್ದೆ "  ನಮ್ಮ ಪೂರ್ವಜರು ಹಾಗಾದರೆ ದಡ್ದರೇ? ನೀವು ಮಾತ್ರವೇ ಬುದ್ಧಿವಂತರೋ?  

ಅದಕ್ಕೆ ಅವರು ಸ್ವಲ್ಪವೂ ಬೇಸರಿಸದೆ ಹೇಳುತ್ತಿದ್ದರು " ನಾನು ಸತ್ಯ  ಹೇಳಿದರೆ ನಿಮಗೆ ಬೇಸರವಾಗುತ್ತೆ. ನನ್ನ ಮೇಲೆ ಕೋಪವೂ ಬರಬಹುದು"

-ಏನು ಅಂತಾದ್ದು !!!?

- ಹೌದು, ನಮ್ಮ ಪೂರ್ವಜರು ಹಲವು ಸಂದರ್ಭಗಳಲ್ಲಿ  ಮೌಢ್ಯವನ್ನು ಪ್ರಶ್ನೆ ಮಾಡದೆ ತಾವೂ ಆಚರಿಸಿಕೊಂಡು ಬಂದು ಅದನ್ನೇ ಮುಂದುವರೆಯುವಂತೆ ಮಾಡಿದ್ದಾರೆ!!

-ಹೇಗೆ ಹೇಳ್ತೀರಾ? ನಮ್ಮ ಸಂಪ್ರದಾಯ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಲು ಜೀವನವನ್ನೇ ಮುಡಿಪಾಗಿಟ್ಟಿರುವ ಸಂಘದ ಸಾವಿರಾರು ಜನ  ಪ್ರಚಾರಕರುಗಳು ಇದ್ದಾರೆ. ಅವರೆಲ್ಲಾ ದಡ್ದರೆಂದು ನಿಮ್ಮ ಕಲ್ಪನೆಯೇ?

- ಮತ್ತೆ ಅದೇ ಪ್ರಶ್ನೆ ಕೇಳ್ತೀರಲ್ಲಾ!

- ನಾನಂತೂ ನಿಮ್ಮ ಮಾತು ಒಪ್ಪುವುದಿಲ್ಲ.

-ನನ್ನ ಮಾತು ಒಪ್ಪದಿದ್ದರೆ ಅದು ನಿಮ್ಮ ಖುಷಿ. ಆದರೆ ಸತ್ಯ ಎಂದಿದ್ದರೂ ಸತ್ಯವೇ. 

...............ಹೀಗೆ ಹಲವಾರು ವರ್ಷ ಶರ್ಮರೊಡನೆ ಗುದ್ದಾಡಿದರೂ ಅವರು ಬೇಸರಿಸಿಕೊಳ್ಳಲೇ ಇಲ್ಲ. ಪಂಡಿತ್  ಸುಧಾಕರಚತುರ್ವೇದಿಗಳ "ವೇದೋಕ್ತ ಜೀವನ ಪಥ" ಎಂಬ ಪುಟ್ಟ ಪುಸ್ತಕವನ್ನು ನನ್ನ ಕೈಗಿತ್ತರು. ಇದನ್ನು ಯಾವ ಪೂರ್ವಾಗ್ರಹವಿಲ್ಲದೆ ಓದಿ-ಎಂದರು.

ಮುಂದೆ ಕನ್ನಡ  ವೇದಭಾಷ್ಯದ ಎಲ್ಲಾ ಸಂಪುಟಗಳೂ ನನ್ನ ಮಿತ್ರ ಅಶೋಕ ರ  ಕೃಪೆಯಿಂದ ನನ್ನ ಕೊಠಡಿ ಸೇರಿದವು.  ಕಣ್ಣಾಡಿಸುತ್ತಾ ಹೋದಂತೆ ಹೊಸಬೆಳಕು ಕಾಣತೊಡಗಿತು. ಮಾನವೀಯ ಮೌಲ್ಯಗಳಿಗೆ ವಿರುದ್ಧವಾದದ್ದನ್ನು ನನ್ನ ಮನಸ್ಸು ಈಗ ಸುತಾರಾಮ್ ಒಪ್ಪುತ್ತಿಲ್ಲ. ಹಾಗಂತಾ ಎಲ್ಲವನ್ನೂ ವಿರೋಧಿಸಲೂ ಆಗ್ತಾ ಇಲ್ಲ. ಅದಕ್ಕೂ ಕಾರಣವಿದೆ. ನಾನು ಒಬ್ಬ ವೇದವಿದ್ವಾಂಸರ  ವೈಯಕ್ತಿಕ ಸಂಪರ್ಕಇಟ್ಟುಕೊಂಡು ಎಂಟು ಹತ್ತು ವರ್ಷ ಕಳೆದರೂ  ವೇದದ ಸತ್ಯ ಸಂದೇಶದಂತೆ ಇನ್ನೂ ನಡೆಯಲು ಸಾಧ್ಯ ಆಗ್ತಾ ಇಲ್ಲ. ಹೀಗಿರುವಾಗ  ನನ್ನ " ಜೀವನ ವೇದ ಪುಸ್ತಕ" ದಿಂದಲೋ ಅಥವಾ ನನ್ನ ಕೆಲವು ಬ್ಲಾಗ್ ಬರಹಗಳಿಂದಲೋ ಏನೋ ಬದಲಾವಣೆ ಆಗುತ್ತದೆಂಬ ಭ್ರಮೆ ನನಗಿಲ್ಲ. ಆದರೂ ಸತ್ಯವೆಂದು ಕಂಡಿದ್ದನ್ನು ನಿರ್ಭಯವಾಗಿ ಬರೆಯ ಬೇಕೆಂಬ ತುಡಿತವಂತೂ ಇದೆ.

ಮೌಢ್ಯದ ಪರಮಾವಧಿ!!!! ನಾಲ್ಕು ವರ್ಷದ ಬಾಲಕನ ಶಿರಚ್ಛೇದನ!!!

ಮೌಢ್ಯದ ಪರಮಾವಧಿ!!!! ನಾಲ್ಕು ವರ್ಷದ ಬಾಲಕನ ಶಿರಚ್ಛೇದನ!!! ಮನೆಯಲ್ಲೆಲ್ಲಾ  ರಕ್ತ ಸಂಪ್ರೋಕ್ಷಣೆ!!!!
ಆಂದ್ರದ ಪ್ರಕಾಶಮ್ ಜಿಲ್ಲೆಯ ಪೋಕೂರಿನಲ್ಲಿ ನಡೆದಿರುವ ಬರ್ಬರ ಕೃತ್ಯ. ಬರ್ಬರವಾಗಿ ಮಗುವನ್ನು ಕೊಂದ ರಾಕ್ಷಸನ ಹೆಸರು ತಿರುಮಲರಾವ್. ಮಂತ್ರವಾದಿಯಂತೆ.
ಕಾಳಿಗೆ ಆಹುತಿಯಂತೆ!!!!

ಈ ರಕ್ಕಸನನ್ನು ಆ ಊರಿನ ಜನರು ಮರಕ್ಕೆ ಕಟ್ಟಿ   ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟರು. ಪೋಲೀಸರು ಬಂದು ಇವನ ಪ್ರಾಣ  ಉಳಿಸಿದರು.
ಗಾಂಧಿ ಜಯಂತಿಯ ಹೆಸರಲ್ಲಿ ಇಂದು ಪ್ರಾಣಿ ವಧೆ ನಿಷೇಧ! ಮನುಷ್ಯಹತ್ಯೆ ನಡೆಯಿತು!!

ಇಂದಿಗೂ "ಅಶ್ವಮೇಧ" ಎಂದರೆ ಯಜ್ಞಕ್ಕೆ ಕುದುರೆಯನ್ನು ಬಲಿ ಕೊಡಲೇ ಬೇಕೆನ್ನುವ ಪಂಡಿತೋತ್ತಮರೆನ್ನುವವರು ಈಗಲೂ ಇದ್ದಾರೆ!! ಹಾಸನದಲ್ಲಿ ನಡೆದ ಅಶ್ವಮೇಧಯಾಗ ನಡೆಸಲು ಬಂದಿದ್ದ    ಐದು ಜನ ಪಂಡಿತರೊಡನೆ ನಾನು ಅಶ್ಚಮೇಧದ ಅಹಿಂಸಾ  ವಿವರಣೆಯನ್ನು ವೇದದ ಆಧಾರದಲ್ಲಿ ವಿವರಿಸಿದಾಗ ಅದನ್ನು ಸ್ವೀಕರಿಸುವ ಮಾನಸಿಕತೆ ಇಲ್ಲದ ಪಂಡಿತೋತ್ತಮರು ವಿತಂಡವಾದಮಾಡಲು ಹೊರಟಾಗ ನಾನು ಅವರಿಗೆ ಕೇಳಿದ್ದು ಒಂದೇ ಪ್ರಶ್ನೆ ....

ಪ್ರಾಣಿ ಕೊಲೆಮಾಡಕೂಡದೆಂಬುದಕ್ಕೆ ನಾನು ನಾಲ್ಕಾರು ವೇದಮಂತ್ರಗಳ ಆಧಾರ ಕೊಟ್ಟಿದ್ದೇನೆ. ಕುದುರೆಯನ್ನಾಗಲೀ, ಹಸುವನ್ನಾಗಲೀ ಕೊಂದು ಅಶ್ವಮೇಧ/ಗೋ ಮೇಧ ಯಾಗಗಳನ್ನು ಮಾಡಲು ಯಾವ ವೇದ ಮಂತ್ರದಲ್ಲಿ ಹೇಳಿದೆ? ಆಧಾರ ಕೊಡಿ- ಎಂದಾಗ ನಾನು ನಿಮಗೆ ಅಂಚೆ ಮೂಲಕ ಕಳಿಸುವೆ ಅಥವಾ ಮೇಲ್ ಮಾಡುವೆ ಎಂದವರು ಇನ್ನೂ ಆ ಕೆಲಸ ಮಾಡಲೇ ಇಲ್ಲ!!!!!

ಮೌಢ್ಯವಿರೋಧೀ ಕಾನೂನು ಮಾಡಬೇಕೆಂದಾಗ ಸಾರಾಸಗಟಾಗಿ ವಿರೋಧಿಸುವ ಬದಲು  ಮೌಢ್ಯವಿರೋಧಿ ಶಾಸನದ ವಿರುದ್ಧ ಮಾತನಾಡುವವರು ಯಾಕೆ  ಯಾವುದು ಮಾನವೀಯತೆಗೆ ವಿರೋಧವಾಗಿದೆ ಅವನ್ನು ನಿಶೇಧಿಸಿ ! ಎಂದು ಪಟ್ಟಿ ಮಾಡಿ ಸಲಹೆ ಕೊಡಬಾರದು?

ಹೌದು, ನಾನೂ ಒಪ್ಪುತ್ತೇನೆ. ಮೌಢ್ಯವಿರೋಧೀ ಶಾಸನಕ್ಕೆ ಬೆಂಬಲ ಕೊಡುವವರು ಹಿಂದು ಧರ್ಮವನ್ನೇ ಸಾರಾಸಗಟಾಗಿ ವಿರೋಧಿಸುವ ಗುಂಪು. ಆದರೆ ಹಿಂದು ಪರ ಸಂಘಟನೆಗಳ ಕರ್ತವ್ಯವೂ ಇದೆಯಲ್ಲವೇ? ಯಾವುದು ಮಾನವ ವಿರೋಧಿ ಎನ್ನಿಸುತ್ತದೆ-ಅದನ್ನು ಮೊದಲು ಹಿಂದು ಪರ ಸಂಘಟನೆಗಳೇ    ವಿರೋಧಿಸಿ ಹಿಂದುಗಳಲ್ಲಿ ಜಾಗೃತಿಯನ್ನೇಕೆ ಉಂಟುಮಾಡಬಾರದು?

ಯಾವುದೋ ತಾತನ ಕಾಲದಲ್ಲಿ  ಯಾವುದನ್ನೋ ಆ ಕಾಲಕ್ಕೆ ತಕ್ಕಂತೆ ಆಚರಣೆಗೆ ತಂದಿರಬಹುದು. ಇಂದಿಗೆ ಅದು ಎಷ್ಟು ಸರಿ! ಎಂಬ  ಚಿಂತನ-ಮಂಥನ ನಡೆಯಬೇಡವೇ?

RSS ನ ಪೂಜ್ಯ ಸರಸಂಘಚಾಲಕರು ಕೊಟ್ಟಿರುವ ಕರೆಯ ಬಗ್ಗೆ ಹಿಂದು ಪರ ಸಂಘಟನೆಗಳು ಚಿಂತನ-ಮಂಥನ ಆರಂಭಿಸಬೇಕಲ್ಲವೇ?

ಈಗ ಕಾಲ ಪಕ್ವವಾಗಿದೆ. ಹಿಂದು ವಿರೋಧಿಗಳ ಬಾಯಿ  ಮುಚ್ಚಿಸಬೇಕಾದರೆ ಅವರಿಗೆ ಮಾತನಾಡಲು ಸರಕು ಸಿಗದಂತೆ ಆಮೂಲಾಗ್ರವಾಗಿ ಶುದ್ಧೀಕರಣ ಕೆಲಸವನ್ನು ಹಿಂದು ಸಂಘಟನೆಗಳೇ ಮಾಡಬೇಕು. ನಮ್ಮ ಋಷಿಮುನಿಗಳ ಚಿಂತನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.ಯಾವುದು ಮಾನವೀಯತೆಗೆ ವಿರುದ್ಧವಾಗಿದೆ ಅದನ್ನು ಬಿಡಲೇ ಬೇಕು.ಮಾನವೀಯತೆಗೆ ಪೂರಕ ವಾಗಿರುವ , ನೈತಿಕ ಮೌಲ್ಯಗಳನ್ನು ಹೆಚ್ಚಿಸುವ , ಮನುಷ್ಯನನ್ನು ಆತ್ಮೋನ್ನತಿಯತ್ತ ಕೊಂಡೊಯ್ಯುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲೇ ಬೇಕು.
ಇದು ಕಾಲದ ಕರೆ.

Thursday, October 1, 2015

ಸತ್ಯವು ಅರ್ಥವಾಗಿ ಅದನ್ನು ಒಪ್ಪಲು ಇನ್ನೂ ಎಷ್ಟು ದಶಕಗಳು ಬೇಕೋ!

ಸತ್ಯವು ಅರ್ಥವಾಗಿ ಅದನ್ನು ಒಪ್ಪಲು ಇನ್ನೂ ಎಷ್ಟು ದಶಕಗಳು ಬೇಕೋ! ಶತಮಾನಗಳು ಎನ್ನುವುದಿಲ್ಲ.ಕಾರಣ ಸತ್ಯ ಗೋಚರ ಆಗುತ್ತಿದೆ.ಆದರೆ ನಿಧಾನವಾಗಿ ಆಗುತ್ತಿದೆ.ಹಲವು ಶತಮಾನಗಳಿಂದ ನಡೆದು ಬಂದಿರುವ ಸಂಪ್ರದಾಯಗಳು ಎಷ್ಟು ಆಳವಾಗಿ ಬೇರು ಬಿಟ್ಟಿವೆ! ಎಂದರೆ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವುದು ಮಹಾ ಪಾಪ! ಎಂದು ಮನಸ್ಸು ಭಯಭೀತವಾಗುತ್ತದೆ!! ಆದರೆ ವೇದವು ಹೇಳುತ್ತದೆ-ಸತ್ಯವನ್ನು ಆವಿಷ್ಕಾರ ಮಾಡು! ಸತ್ಯವು ಗೋಚರವಾದರೆ ಅದೆಷ್ಟು ನಿರ್ಭೀತರಾಗಿರಬಹುದು!

ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು  ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ  ಕಾರಣ.
 
ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.

ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ ||
[ಋಕ್-೧.೮೬.೯]

ಸತ್ಯಶವಸಃ = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷಃ = ದುಷ್ಕಾಮನೆಗಳನ್ನು
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.

ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ?  ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು  ಮಾತ್ರವೇ ಹೇಳಲು ಸಾಧ್ಯ.

ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ  ಅನರ್ಥಕ್ಕೆ ಕಾರಣವಾಗುತ್ತದೆ                                                                                                        
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆಯುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ.
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ  ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ  ಬೇಕೆನ್ನುವ ಗುಂಪಿನಿಂದ  ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
 ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವಃ ಅಂದರೆ ನಾಳೆ. ಅಶ್ವಃ ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲವಾಗುವವರು ನಾವು ನೀವು.
ಇನ್ನು "ಮೇಧೃ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.

Tuesday, September 29, 2015

ಅಗ್ನಿಹೋತ್ರ ಕಲಿಸಿ- ಮುಸ್ಲಿಮ್ ಸೋದರಿಯ ಕೋರಿಕೆ

ಒಬ್ಬ ಮುಸ್ಲಿಮ್ ಸೋದರಿ ನನಗೆ ಬರೆದಿರುವ ಪತ್ರ ನೋಡಿ. ಪತ್ರದಲ್ಲಿನ ಅಕ್ಷರಗಳ ತಪ್ಪನ್ನು ನೋಡಬೇಡಿ. ಭಾವನೆಯನ್ನು ನೋಡಿ.
---------------------------
ಧನ್ಯವಾದಗಳು ಸರ್, ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನಲ್ಲಿ ನಿಮ್ಮಿಂದ ಅಗ್ನಿಹೋತ್ರ ಹೋಮವನ್ನು ಅಪೇಕ್ಷಿಸುತ್ತೇನೆ. ಅಗ್ನಿಹೋತ್ರದಿಂದ ಆಗುವ ಉಪಯೋಗವನ್ನು ಜನಸಾಮ್ಯರಿಗೂ ಅರಿವಾಗಬೇಕಾಗಿದೆ.
- Reehana Firdose 
     --------------------------------------------
ನಮಸ್ತೆ,
ಹಾಸನ ವೇದಭಾರತೀ ಟೀಮ್ ಸಾಗರಕ್ಕೂ ಬಂದು ಅಗ್ನಿಹೋತ್ರಮಾಡಿಸಿ ಅದರ ಪರಿಚಯ ಮಾಡಿಸಲು ತೊಂದರೆಯೇನಿಲ್ಲ. ಅಲ್ಲಿ ಆರ್ಗನೈಸ್ ಮಾಡುವ ವ್ಯಕ್ತಿಗಳು ಬೇಕು. ನಿಮ್ಮಿಂದ ಸಾಧ್ಯವೇ ತಿಳಿಸಿ. ಅದಕ್ಕೆ ನೀವು ವೇದಭಾರತಿ ಕಾರ್ಯಕರ್ತರಿಗೆ ಯಾವ ಶುಲ್ಕ ಕೊಡಬೇಕಾಗಿಲ್ಲ. ಅಗ್ನಿಹೋತ್ರದ ಪೂರ್ಣ ವ್ಯವಸ್ಥೆ ನಾವೇ ಉಚಿತಮಾಡುತ್ತೇವೆ. ಜನರನ್ನು ಸೇರಿಸುವ ಜವಾಬ್ದಾರಿ ಸ್ಥಳೀಯರದ್ದು
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ​
------------------------------------------------
ನಮಸ್ತೆ ಸರ್,
ನಾನು ಒಬ್ಬ ಮುಸ್ಲಿಂ ಹುಡಗಿಯಾಗಿದ್ದು, ಪ್ರಸ್ತುತವಾಗಿ ಸಾಗರದಲ್ಲಿ ಕಂಪ್ಯೂಟರ್ ಆಫ್ ರೇಟರ್ ಆಗಿ ಕೆಲಸ ಮಾಡುತ್ತಿದ್ದೆನೇ ಬಿ.ಎ. ಡಿಗ್ರಿ ಆಗಿದೆ. ನನ್ನಗೆ ಹಿಂದೂ ಧರ್ಮದ ಮೇಲೆ ಅಪಾರವಾದ ಪ್ರೀತಿ ಹಾಗೂ ಅಭಿಮಾನವಿದೆ. ಹಾಗಾಗಿ ಅನೇಹ ಪುಸ್ತಕಗಳನ್ನು ಓದುತ್ತಿರುತ್ತೇನೆ. ಹಿಂದಿನ ಸಂಪ್ರಧಾಯಗಳು ನಮಗೆ ಎಷ್ಟು ಆರೋಗ್ಯ ಹಾಗೂ ಒಳೆಯ ಜೀವನವನ್ನು ನೀಡುತ್ತವೆ ಎಂಬ ಬಗ್ಗೆ ಸ್ವಲ್ಪಮಟ್ಟಿಗೆ ಅರಿತಿರುತ್ತೇನೆ. ಇಗಿನ ಕಾಲದಲ್ಲಿ ಆನೇಕರು ಆನರೋಗ್ಯದಿಂದ ಬಳಲುತ್ತಿರುತ್ತಾರೆ. ವಿವಿಧ ವಿವಿಧವಾದ ಕಾಯಿಲೆಗಳು, ಮಾನಸಿಕ ನೆಮ್ಮದಿ ಇಲ್ಲದೇ ಮನ್ಸ್ ಶಾಂತಿಯಿಲ್ಲದೆ ಸುಂದರವಾದ ಜೀವನವನ್ನು ಅನುಭವಿಸುವುದು ಜೀವನವನ್ನು ಕಳೆಯುವುದು ಕಷ್ಟಸಾಧ್ಯವಾಗಿದೆ. ನಾನು ಒಬ್ಬ ಸಾಮನ್ಯ ಹೆಣ್ಣಾಗಿರುವ ಕಾರಣ ನನ್ನಿಂದ ನಮ್ಮ ಜನರಿಗೆ ಏನು ಸಹಾಯ ಮಾಡಲು ಆಗದೆ ಇರುವುದರಿಂದ ನಿಮ್ಮಿಂದ ಏನಾದರು ನಮ್ಮ ಊರಿನ ಜನರಿಗೂ ಉಪಯೋಗವಗಬಹುದೇನೋ? ಎಂಬ ವಿಶ್ವಾಸದಿಂದ ನಿಮ್ಮಲ್ಲಿ ಮನವಿ ಮಾಡಿರುತ್ತೇನೆ. 

ಇಂತಿ ನಿಮ್ಮ ವಿಶ್ವಾಸಿ,

ರಿಹಾನ ಫೀರ್ಧೋಸ್,
ಸಾಗರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ.
------------------------------------------------------
 ನಮಸ್ತೆ,
ಸಾಗರದಲ್ಲಿನ ಯಾರಾದರೂ ಮಿತ್ರರ ಸಹಕಾರ ಪಡೆದು ಅಗ್ನಿಹೋತ್ರ ಶಿಬಿರ ಒಂದನ್ನು ನಡೆಸೋಣ ಭಗಿನೀ. ನಿಮ್ಮ ಆಪೇಕ್ಷೆಗೆ ಬಹಳ ಸಂತೋಷವಾಗಿದೆ. ನಿಜವಾಗಿ ಅಗ್ನಿಹೋತ್ರವು ಮಾನವೆಲ್ಲರೂ   ಮಾಡಬೇಕಾದ ದೈನಂದಿನ ವಿಧಿ
-ಹರಿಹರಪುರಶ್ರೀಧರ್

Sunday, September 27, 2015

ಚನ್ನರಾಯಪಟ್ಣದ ಸಾರ್ವಜನಿಕ ಗಣೇಶೋತ್ಸವದಲ್ಲಿ ಅಗ್ನಿಹೋತ್ರ ಪ್ರಾತ್ಯಕ್ಷಿಕೆ

 ವೇದಭಾರತಿಯ ಅಗ್ನಿಹೋತ್ರ ಆಂದೋಳನಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಪತಂಜಲಿ ಯೋಗ ಕೇಂದ್ರದ ಶ್ರೀ ಶೇಷಪ್ಪನವರು ಕಳೆದ ಹತ್ತು ದಿನಗಳಿಂದ  ಚನ್ನರಾಯಪಟ್ಟಣದಲ್ಲಿ ನಡೆಸುತ್ತಿರುವ ಯೋಗ ಶಿಬಿರದಲ್ಲಿ ಇಂದು ಆರು ಕುಂಡಗಳಲ್ಲಿ ಸಾಮೂಹಿಕ ಅಗ್ನಿಹೋತ್ರವನ್ನು ವೇದಭಾರತಿಯ ಸಹಪಾರದೊಡನೆ ಆಯೋಜಿಸಲಾಗಿತ್ತು. ಪರಿಸರವಾದಿ ಮತ್ತು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಅವರ ನೇತೃತ್ವದಲ್ಲಿ ನಡೆದ ಈ ಅದ್ಭುತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಭಾವವಶರಾದರು.
ಆರಂಭದಲ್ಲಿ "ಎಲ್ಲರಿಗಾಗಿ ವೇದ" ಮತ್ತು  ಅಗ್ನಿಹೋತ್ರ ಮಹತ್ವವನ್ನು ಕುರಿತು ನನ್ನ ಮಾತುಗಳು. ನಂತರ ನಡೆದ ಅಗ್ನಿಹೋತ್ರವು ಎಲ್ಲರನ್ನೂ ಆಕರ್ಶಿಸಿ ಕಾರ್ಯಕ್ರಮವು ಸಾರ್ಥಕವೆನಿಸಿತು.

















Saturday, September 26, 2015

RSS ನ ಗ್ರಾಮವಿಕಾಸ ಯೋಜನಾ ಕಾರ್ಯಕರ್ತರ ರಾಜ್ಯ ಮಟ್ಟದ ಶಿಬಿರದಲ್ಲಿ ಸಾಮೂಹಿಕ ಅಗ್ನಿಹೋತ್ರ

ಬೇಲೂರಿನಲ್ಲಿ  ದಿನಾಂಕ 25.9.2015 ರಂದು ಆಯೋಜಿಸಿದ್ದ  RSS ನ  ಗ್ರಾಮವಿಕಾಸ ಯೋಜನಾ ಕಾರ್ಯಕರ್ತರ ರಾಜ್ಯ ಮಟ್ಟದ ಶಿಬಿರದಲ್ಲಿ ಹಾಸನದ ವೇದಭಾರತೀ ಸದಸ್ಯರ  ಮಾರ್ಗದರ್ಶನದಲ್ಲಿ ನಡೆದ  ಸಾಮೂಹಿಕ ಅಗ್ನಿಹೋತ್ರ. 640 ಹಳ್ಳಿಗಳಲ್ಲಿ ಕೆಲಸ ಮಾಡುವ 80 ಪ್ರತಿನಿಧಿಗಳು ಭಾಗವಹಿಸಿದ್ದರು. ಗ್ರಾಮಗಳಲ್ಲಿ ಸಾಮರಸ್ಯ ವೃದ್ಧಿಸಲು  ಅಗ್ನಿಹೋತ್ರವು ಹೇಗೆ ನೆರವಾಗಬಲ್ಲದೆಂದು ತಿಳಿಸುವ ಹೊಣೆ ನನ್ನದಾಗಿತ್ತು. ಒಂದು ಉತ್ತಮ ಪ್ರಯೋಗ ನಡೆಯಲು ಅವಕಾಶ ಮಾಡಿದ ಗ್ರಾಮವಿಕಾಸದ ಪ್ರಾಂತ ಪ್ರಮುಖರಿಗೆ ವೇದಭಾರತಿಯು ಆಭಾರಿ.








Friday, September 25, 2015

RSS ನ ಪೂಜ್ಯ ಸರಸಂಘಚಾಲಕರು " ವೇದದ ಅರಿವು ಪಡೆಯಲು ಸಂಘದ ಶಾಖೆಗಳಿಗೆ ಬನ್ನಿ" ಎಂದು ಕೊಟ್ಟಿರುವ ಕರೆಗೆ ಮಿತ್ರರೊಬ್ಬರು ಹೀಗೆ ಪ್ರತಿಕ್ರಿಯಿಸಿದ್ದಾರೆ. " ಮೋಹನ್ ಜಿ ಭಾಗವತ್ ಅವರ ವೇದದ ಕಲ್ಪನೆ ಎಂದರೆ ವಿಗ್ರಹಾರಾಧನೆಗೆ ಮಹತ್ವ ಕೊಡುವುದು" ಎಂದು. ಆದರೆ ಹಾಗೆ ಹೇಳಿಲ್ಲ. ಜನರಿಗೆ ವೇದದ ನಿಜವಾದ ಅರಿವು ಮೂಡಿದರೆ ಇಡೀ ವಿಶ್ವ ನೆಮ್ಮದಿಯಿಂದ ಬದುಕ ಬಹುದು.ಅಷ್ಟು ಉತ್ಕೃಷ್ಠವಾಗಿದೆ. ವೇದವೆಂದರೆ ಕೇವಲ ಪೂಜಾ ಪುನಸ್ಕಾರದ ಅಥವಾ ಶ್ರಾದ್ಧ ಕರ್ಮಗಳ ಮಂತ್ರವಲ್ಲ. ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಬದುಕಿನ ಮಾರ್ಗದರ್ಶನ ವೇದದಲ್ಲಿದೆ. ಅದರ ಪರಿಚಯಆಗಬೇಕೆಂಬುದು ಸನ್ಮಾನ್ಯ ಶ್ರೀ ಮೋಹನ್ ಜಿ ಭಾಗವತ್ ಅವರ ಅಪೇಕ್ಷೆ. ವೇದಭಾರತಿಯು ಅದೇ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಈಗ ಸರಸಂಘಚಾಲಕರ ಮಾತು ನಮ್ಮ ಕೆಲಸಕ್ಕೆ ಹೆಚ್ಚು ಉತ್ಸಾಹ ತುಂಬಿದೆ. ಸಂಘದ ಎಲ್ಲಾ ಕಾರ್ಯಕರ್ತರು ಎಷ್ಟು ಬೇಗ ಸರಸಂಘಚಾಲಕರ ಮಾತನ್ನು ಅರ್ಥಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು. ಇದಕ್ಕೆ ಪೂರಕವಾಗಿ ಬಾಬಾ ರಾಮ್ ದೇವ್ ಅವರು ನಡೆಸುವ ಯೋಗಶಿಬಿರಗಳಲ್ಲಿ ವೇದದ ಅರಿವು ಮೂಡಿಸಲಾಗುತ್ತಿದೆ.ಅಗ್ನಿಹೋತ್ರವನ್ನು ಸಾರ್ವತ್ರೀಕರಣ ಗೊಳಿಸಲಾಗಿದೆ. ಅಗ್ನಿಹೋತ್ರದ ಬಗ್ಗೆ ಒಂದು ಮಾತು ಸ್ನೇಹಿತರ ಗಮನಕ್ಕೆ ತರುವುದು ಅವಶ್ಯಕವಾಗಿದೆ. ಅಗ್ನಿಹೋತ್ರದಿಂದ ಹಲವು ಖಾಯಿಲೆಗಳು ದೂರವಾಗುತ್ತದೆಂಬುದು ನಿಜ. ಆ ಕಾರಣ ದಿಂದ ಪಾಶ್ಚಿಮಾತ್ಯರೆಲ್ಲಾ ಅಗ್ನಿಹೋತ್ರ ಮಾಡುವುದನ್ನು ಆರಂಭಿಸಿದ್ದಾರೆ. ಅವರೆಲ್ಲಾ ಅಗ್ನಿಹೋತ್ರ ಮಾಡುವುದು ಕೇವಲ ಐದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಓಂ ಸೂರ್ಯಾಯ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ| ಮಂತ್ರಗಳನ್ನು ಸೂರ್ಯೋದಯದಲ್ಲೂ , ಅಗ್ನಯೇ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ ಮಂತ್ರಗಳನ್ನು ಸೂರ್ಯಾಸ್ತದಲ್ಲೂ ಹೇಳುತ್ತಾ ಅಗ್ನಿಹೋತ್ರ ಮಾಡುತ್ತಾರೆ. ಆದರೆ ಮಹರ್ಷಿ ದಯಾನಂದ ಸರಸ್ವತೀ ಅವರು ರಚಿಸಿರುವ ಅಗ್ನಿಹೋತ್ರ ವಿಧಿಯು ಬಲು ಸೊಗಸಾಗಿದೆ. ಸುಮಾರು 15 ನಿಮಿಷಗಳ ವಿಧಿ. ಅದಕ್ಕೆ ಪೂರ್ವದಲ್ಲಿ ಈಶ್ವರಸ್ತುತಿ ಹಾಗೂ ಶಾಂತಿಮಂತ್ರಗಳ ಪಠಣ. ಇದು ಅದ್ಭುತ. ವೇದಭಾರತಿಯು ಮಹರ್ಷಿ ದಯಾನಂದ ಸರಸ್ವತೀ ರೂಪಿಸಿರುವಂತೆ ಅಗ್ನಿಹೋತ್ರವನ್ನು ನಿತ್ಯವೂ ನಡೆಸುತ್ತಿದೆ. ಮಂತ್ರಗಳನ್ನು ಶೃಂಗೇರಿ ಪರಂಪರೆಯಂತೆ ಸ್ವರಬದ್ಧವಾಗಿ ಪಠಿಸುವಾಗ ಆನಂದವಾಗುತ್ತದೆ. ಯಾವ ಜಾತಿ-ಮತ-ಲಿಂಗ ವಯಸ್ಸಿನ ಭೇದವಿಲ್ಲದೆ ನಡೆಯುತ್ತಿರುವ ವೇದಭಾರತಿಯ ಅಗ್ನಿಹೋತ್ರ ಸತ್ಸಂಗದಲ್ಲಿ ಸುಮಾರು ಐವತ್ತು ಜನರು ನಿತ್ಯವೂ ಭಾಗವಹಿಸುತ್ತಾರೆ. ಅಲ್ಲದೆ ಹಾಸನದ ಪತಂಜಲಿ ಯೋಗ ಕೇಂದ್ರಗಳಲ್ಲಿ ಆಗಿಂದಾಗ್ಗೆ ಅಗ್ನಿಹೋತ್ರ ಮತ್ತು ವೇದದ ಪರಿಚಯ ನಡೆಯುತ್ತಿದೆ.
Vasudevarao Rao ಸಂಘದ ಶಾಖೆಗಳಲ್ಲಿ ವೇದದ ಬಗ್ಗೆ ಅರಿವು ಮೂಡಬೇಕಾದರೆ ವೇದದಲ್ಲಿ ಏನಿದೆ ಎನ್ನುವುದು ಮೊದಲು ತಿಳಿಯಬೇಕು. ಸಂಧ್ಯಾ ಮತ್ತು ಅಗ್ನಿಹೋತ್ರ ಮಿಗಿಲಾಗಿ ವೇದಗಳಲ್ಲಿ ಎಷ್ಟು ಉದಾತ್ತ ಮತ್ತು ನಿತ್ಯ ಪ್ರೇರಕ ವಿಷಯಗಳನ್ನು ತಿಳಿಯಲು ದಿ|| ಜಗದೀಶ್ವರಾನಂದ ಸರಸ್ವತಿಯವರು ಬರೆದ ವೈದಿಕ ಉದಾತ್ತ ಭಾವನೆಗಳು ಎಂಬ ಪುಸ್ತಕವನ್ನು ಒಂದು ಪಠ್ಯಪುಸ್ತಕವಾಗಿ ಮತ್ತು ಅದಕ್ಕೆ ಪೂರಕವಾಗಿ ಚತುರ್ವೇದಿಗಳು ಬರೆದ ವೇದೋಕ್ತ ಜೀವನ ಪಥ ಪುಸ್ತಕವನ್ನು ಕಡ್ಡಾಯವಾಗಿ ಇಡಬೇಕು ವೈದಿಕ ಉದಾತ್ತ ಭಾವನೆಗಳು ಪುಸ್ತಕದಲ್ಲಿ 52 ವಿಷಯಗಳ ಬಗ್ಗೆ ವೇದಗಳ ವಿಚಾರವನ್ನು ಪ್ರಸ್ತುತ ಪಡಿಸುತ್ತದೆ. ಉದಾ, ಸ್ವಾವಲಂಬನೆ, ದೇಶ ಪ್ರೇಮ, ಸಾಹಸ, ಭ್ರಾತೃಪ್ರೇಮ, ಸಂಸಾರದಲ್ಲಿ ಯಶಸ್ಸು, ವೀರತೆಯ ತರಂಗ, ಇತ್ಯಾದಿ ವಿಷಯಗಳು ಸದಾ ಪ್ರೇರಕವಾಗಿವೆ. ಇದನ್ನು ಓದಿದ ಯಾವುದೇ ವಿಚಾರವಾದಿಯು ವೇದಗಳನ್ನು ಶ್ಲಾಘಿಸದೇ ಇರಲಾರ. ಅಂದ ಹಾಗೆ ಈ ಪುಸ್ತಕ ಕನ್ನಡಕ್ಕೆ ಕೃಷ್ಣ ಮೂರ್ತಿಯವರು ಅನುವಾದಿಸಿದ್ದು ಇದನ್ನು ಆರ್ಯಸಮಾಜ 1995 ರಲ್ಲಿಯೇ ಪ್ರಕಟಮಾಡಿತು. ಸದ್ಯ ಇದರ ಪ್ರತಿಗಳು ಅಲಭ್ಯ. ಸಂಘವು ಈ ಪುಸ್ತಕವನ್ನು ಮತ್ತು ಚತುರ್ವೇದಿಗಳ ಪುಸ್ತಕಗಳನ್ನು ಮರು ಪ್ರಕಟಣೆ ಮಾಡಿ, ಇದನ್ನು ಎಲ್ಲಾ ಶಾಖೆಗಳಿಗೆ ಹಂಚಬೇಕು. ನನಗೆ ಗೊತ್ತಿರುವಂತೆ ಬಹುಪಾಲು ಪ್ರಚಾರಕರಕರಿಗೂ ವೇದಗಳ ಬಗ್ಗೆ ಇರುವ ಜ್ಞಾನ ತುಂಬಾ ಸೀಮಿತವಾದದ್ದು. ಮತ್ತು ಅದೂ ಸಹ ಪೌರಾಣಿಕ ಜಗತ್ತಿನ ಹಿನ್ನೆಲೆಯಿಂದ ಕೂಡಿದ್ದು. ವೇದಗಳು ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸಾರ್ವಭೌಮ ಸಾಹಿತ್ಯವಾಗಲು ಕ್ಷಮತೆಯಿದ್ದು ಈ ನಿಟ್ಟಿನಲ್ಲಿ ಮುಂದುವರೆದರೆ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಉಪಕಾರವಾದೀತು. ಸೆಕ್ಯುಲರ್ ಬುದ್ಧಿ ಜೀವಿಗಳು ಸಹ ಆಕ್ಷೇಪ ವೆತ್ತುವ ಪ್ರಸಂಗವೇ ಒದಗಿಬರದು.

ವೇದ ಸುಧೆ Vasudevarao Rao ಸಂಘವು ಈ ಸುಧೀರ್ಘ ಪಯಣದಲ್ಲಿ ಹಿಂದು ಸಮಾಜವನ್ನು ಗಟ್ಟಿ ಮಾಡಲು ಯಾವ ಆಚರಣೆಗಳನ್ನೂ ವಿರೋಧಿಸದೇ ಅವರಲ್ಲಿ ಹಿಂದುತ್ವ ಮತ್ತು ರಾಷ್ಟ್ರಭಕ್ತಿಯನ್ನು ತುಂಬುತ್ತಿದೆ. ವಿಗ್ರಹಾರಾಧನೆ ವಿರೋಧ ಮುಂತಾದ ಕೆಲವು ನಂಬಿಕೆಗಳನ್ನು ವಿರೋಧಿಸುವ ವಿಚಾರಗಳು ಚತುರ್ವೇದಿಗಳ ಸಾಹಿತ್ಯದಲ್ಲಿ ಮ್ರಮುಖ ಸ್ಥಾನ ಪಡೆಯುತ್ತವೆ. ಶತಶತಮಾನಗಳ ನಂಬಿಕೆಗಳನ್ನು ಹೋಗಲಾಡಿಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿಯೇ RSS ಆರ್ಯಸಮಾಜದ ಹಾದಿಯಲ್ಲಿ ಸಾಗುವುದಿಲ್ಲ. ಆದರೆ ಇಂದಲ್ಲಾ ನಾಳೆ ವೇದದ ಆಧಾರದಲ್ಲಿಯೇ ಸಮಾಜವು ನಡೆಯುವಂತೆ ಮಾಡುವ ಶಕ್ತಿ ಸಂಘಕ್ಕೆ ಇದೆ. ಆದರೆ ಸಂಘವು ಬಹಳ ಪ್ರಬುದ್ಧವಾಗಿ ಚಿಂತನೆ ನಡೆಸಿ ಒಂದೊಂದೇ ಹೆಜ್ಜೆ ಇಡುತ್ತಾ ಹೋಗುತ್ತದೆ. ಸಂಘವನ್ನು ಹತ್ತಿರದಲ್ಲಿ ಗಮನಿಸಿದವರಿಗೆ ಇದು ಗೊತ್ತಾಗುತ್ತದೆ.

ಸಂಘದ ಶಾಖೆಗಳಲ್ಲಿ ವೇದದ ಪರಿಚಯ

RSS ನ ಪೂಜ್ಯ ಸರಸಂಘಚಾಲಕರು " ವೇದದ ಅರಿವು ಪಡೆಯಲು ಸಂಘದ ಶಾಖೆಗಳಿಗೆ ಬನ್ನಿ" ಎಂದು ಕೊಟ್ಟಿರುವ ಕರೆಗೆ ಮಿತ್ರರೊಬ್ಬರು ಹೀಗೆ ಪ್ರತಿಕ್ರಿಯಿಸಿದ್ದಾರೆ. " ಮೋಹನ್ ಜಿ ಭಾಗವತ್ ಅವರ ವೇದದ ಕಲ್ಪನೆ ಎಂದರೆ ವಿಗ್ರಹಾರಾಧನೆಗೆ ಮಹತ್ವ ಕೊಡುವುದು" ಎಂದು. ಆದರೆ ಹಾಗೆ ಹೇಳಿಲ್ಲ. ಜನರಿಗೆ ವೇದದ ನಿಜವಾದ ಅರಿವು ಮೂಡಿದರೆ ಇಡೀ ವಿಶ್ವ ನೆಮ್ಮದಿಯಿಂದ ಬದುಕ ಬಹುದು.ಅಷ್ಟು ಉತ್ಕೃಷ್ಠವಾಗಿದೆ. ವೇದವೆಂದರೆ ಕೇವಲ ಪೂಜಾ ಪುನಸ್ಕಾರದ ಅಥವಾ ಶ್ರಾದ್ಧ ಕರ್ಮಗಳ ಮಂತ್ರವಲ್ಲ. ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಬದುಕಿನ ಮಾರ್ಗದರ್ಶನ ವೇದದಲ್ಲಿದೆ. ಅದರ ಪರಿಚಯಆಗಬೇಕೆಂಬುದು ಸನ್ಮಾನ್ಯ ಶ್ರೀ  ಮೋಹನ್ ಜಿ ಭಾಗವತ್  ಅವರ ಅಪೇಕ್ಷೆ. ವೇದಭಾರತಿಯು ಅದೇ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಈಗ ಸರಸಂಘಚಾಲಕರ ಮಾತು ನಮ್ಮ ಕೆಲಸಕ್ಕೆ ಹೆಚ್ಚು ಉತ್ಸಾಹ ತುಂಬಿದೆ. ಸಂಘದ  ಎಲ್ಲಾ  ಕಾರ್ಯಕರ್ತರು ಎಷ್ಟು ಬೇಗ ಸರಸಂಘಚಾಲಕರ ಮಾತನ್ನು ಅರ್ಥಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು. ಇದಕ್ಕೆ ಪೂರಕವಾಗಿ ಬಾಬಾ ರಾಮ್ ದೇವ್  ಅವರು ನಡೆಸುವ ಯೋಗಶಿಬಿರಗಳಲ್ಲಿ ವೇದದ ಅರಿವು ಮೂಡಿಸಲಾಗುತ್ತಿದೆ.ಅಗ್ನಿಹೋತ್ರವನ್ನು ಸಾರ್ವತ್ರೀಕರಣ ಗೊಳಿಸಲಾಗಿದೆ. ಅಗ್ನಿಹೋತ್ರದ ಬಗ್ಗೆ ಒಂದು ಮಾತು ಸ್ನೇಹಿತರ ಗಮನಕ್ಕೆ ತರುವುದು ಅವಶ್ಯಕವಾಗಿದೆ. ಅಗ್ನಿಹೋತ್ರದಿಂದ ಹಲವು ಖಾಯಿಲೆಗಳು ದೂರವಾಗುತ್ತದೆಂಬುದು ನಿಜ. ಆ ಕಾರಣ ದಿಂದ ಪಾಶ್ಚಿಮಾತ್ಯರೆಲ್ಲಾ  ಅಗ್ನಿಹೋತ್ರ ಮಾಡುವುದನ್ನು ಆರಂಭಿಸಿದ್ದಾರೆ. ಅವರೆಲ್ಲಾ ಅಗ್ನಿಹೋತ್ರ ಮಾಡುವುದು ಕೇವಲ ಐದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಓಂ ಸೂರ್ಯಾಯ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ| ಮಂತ್ರಗಳನ್ನು ಸೂರ್ಯೋದಯದಲ್ಲೂ ,  ಅಗ್ನಯೇ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ ಮಂತ್ರಗಳನ್ನು ಸೂರ್ಯಾಸ್ತದಲ್ಲೂ ಹೇಳುತ್ತಾ ಅಗ್ನಿಹೋತ್ರ ಮಾಡುತ್ತಾರೆ. ಆದರೆ ಮಹರ್ಷಿ ದಯಾನಂದ ಸರಸ್ವತೀ ಅವರು ರಚಿಸಿರುವ ಅಗ್ನಿಹೋತ್ರ ವಿಧಿಯು ಬಲು ಸೊಗಸಾಗಿದೆ. ಸುಮಾರು 15 ನಿಮಿಷಗಳ ವಿಧಿ. ಅದಕ್ಕೆ ಪೂರ್ವದಲ್ಲಿ ಈಶ್ವರಸ್ತುತಿ ಹಾಗೂ ಶಾಂತಿಮಂತ್ರಗಳ  ಪಠಣ. ಇದು ಅದ್ಭುತ. ವೇದಭಾರತಿಯು  ಮಹರ್ಷಿ ದಯಾನಂದ ಸರಸ್ವತೀ ರೂಪಿಸಿರುವಂತೆ ಅಗ್ನಿಹೋತ್ರವನ್ನು ನಿತ್ಯವೂ ನಡೆಸುತ್ತಿದೆ. ಮಂತ್ರಗಳನ್ನು ಶೃಂಗೇರಿ ಪರಂಪರೆಯಂತೆ ಸ್ವರಬದ್ಧವಾಗಿ ಪಠಿಸುವಾಗ  ಆನಂದವಾಗುತ್ತದೆ. ಯಾವ ಜಾತಿ-ಮತ-ಲಿಂಗ ವಯಸ್ಸಿನ ಭೇದವಿಲ್ಲದೆ ನಡೆಯುತ್ತಿರುವ ವೇದಭಾರತಿಯ ಅಗ್ನಿಹೋತ್ರ ಸತ್ಸಂಗದಲ್ಲಿ ಸುಮಾರು ಐವತ್ತು ಜನರು ನಿತ್ಯವೂ ಭಾಗವಹಿಸುತ್ತಾರೆ. ಅಲ್ಲದೆ ಹಾಸನದ ಪತಂಜಲಿ  ಯೋಗ ಕೇಂದ್ರಗಳಲ್ಲಿ ಆಗಿಂದಾಗ್ಗೆ ಅಗ್ನಿಹೋತ್ರ ಮತ್ತು ವೇದದ ಪರಿಚಯ ನಡೆಯುತ್ತಿದೆ.