Pages

Saturday, August 27, 2011

ಯಜ್ಞದ ಫಲ

ನಾನು ಮನೆ ವಿಸ್ತರಣೆ ಮಾಡುತ್ತಿರುವ ವಿಚಾರವನ್ನು  ವೇದಸುಧೆಯಲ್ಲಿಯೇ ಈ ಹಿಂದೆ  ಬರೆದಿದ್ದೆ. ವಾಸಮಾಡುತ್ತಾ ಮನೆಯನ್ನು ಕಟ್ಟುವುದೆಂದರೆ ಬಲು ತ್ರಾಸದ ಕೆಲಸ. ಜೊತೆಗೆ ನನ್ನ ಪತ್ನಿಗೆ ಕೈ ನೋವು ಬೇರೆ ಕಾಡುತ್ತಿದೆ.  ಹೇಗೂ ನಾನು ಸ್ವಯಂ ನಿವೃತ್ತಿ  ತೆಗೆದು ಕೊಂಡಿರುವುದರಿಂದ ಮನೆಯನ್ನು ನಿತ್ಯವೂ ಸ್ವಚ್ಛ ಮಾಡುವ ಕೆಲಸವನ್ನು ನಾನು ವಹಿಸಿ ಕೊಂಡಿರುವೆ. ಮನೆ ನಿರ್ಮಾಣದ ಕೆಲಸ ಆರಂಭವಾದ ಸಮಯದಲ್ಲಿ ಅಷ್ಟು ಗೊತ್ತಾಗಲಿಲ್ಲ. ಕೆಲಸ ಮುಂದುವರೆದಂತೆ ಕಟ್ಟಡವನ್ನು ಕ್ಯೂರ್ ಮಾಡುವಾಗ ಹಾಕುವ ನೀರು ವಾಸದ ಮನೆಯ ಆರ್.ಸಿ.ಸಿ ಮತ್ತು ಗೋಡೆಗಳಲ್ಲೆಲ್ಲಾ ಪಸರಿಸಿ ಮನೆಯೆಲ್ಲಾ ಸೀತ ವ್ಯಾಪಿಸಿ ಕೊಂಡು ಮನೆಯ ವಸ್ತುಗಳೆಲ್ಲಾ ದುರ್ಗಂಧ ವ್ಯಾಪಿಸಿ ಬದುಕು ದುಸ್ತರ ವಾಗುತ್ತದೆ. ಈ ನಡುವೆ ಹಾಸನದಲ್ಲಿ ಬಲು ಮಳೆ. ಸೂರ್ಯನ ದರ್ಶನವೇ ಕಷ್ಟ.   ವೇದಸುಧೆಯಲ್ಲಿ  ಇದೆಲ್ಲಾ ಯಾಕೆ ಅಂದ್ರಾ? ನೋಡಿ ಇಲ್ಲೇ ಇರೋದು ಕರ್ಮಯೋಗ.
ಇವತ್ತು  ಬೆಳಿಗ್ಗೆ ಆರು ಗಂಟೆಯಲ್ಲಿ ಆರಂಭಗೊಂಡ ಸ್ವಚ್ಚತೆಯ ಕೆಲಸ ಮುಗಿದು ಸ್ನಾನವಾಗುವಾಗ  ಸೂರ್ಯ ನೆತ್ತಿಗೇರಿದ್ದ. ಮನೆಯಾಕೆ ಏನ್ರೀ ಇನ್ನೂ ಎಷ್ಟು ಹೊತ್ತಿಗೆ ನಿಮ್ಮ  ಅಗ್ನಿಹೋತ್ರ ಮುಗಿದು ಉಪಹಾರ ಮಾಡೋದು? ಎಂದು ತನ್ನ ಆತಂಕ ವ್ಯಕ್ತ ಪಡಿಸಿದಳು. ನಾನು ಸುಮ್ಮನಿದ್ದು  ಅಗ್ನಿಹೊತ್ರಕ್ಕೆ ಸಿದ್ಧ ಗೊಳಿಸಿಕೊಂಡೆ. ಅಗ್ನಿಹೋತ್ರ ಆರಂಭ ವಾಯ್ತು. ಆಗ ಪತ್ನಿಗೆ ಹೇಳಿದೆ. " ಇಲ್ಲಿಯ ವರಗೆ ಮಾಡಿದೆನಲ್ಲಾ! ಅದೇ ಯಜ್ಞ." ಮನೆಯೆಲ್ಲಾ  ಚೊಕ್ಕಟ ವಾಗಿದೆ.. ಮನಸ್ಸಿಗೆ ಆನಂದವಾಗಿದೆ. ಹಿತವಾಗಿದೆ. ಈಗ ಅದರ ಫಲ ಅನುಭವಿಸುವ ಸಮಯ. ನೆಮ್ಮದಿಯಾಗಿ ಕುಳಿತುಕೋ ಎಂದೆ. ೨೦ ನಿಮಿಷದಲ್ಲಿ ಅಗ್ನಿಹೋತ್ರ ಮುಗಿಯಿತು. ಬೆಳಗಿನಿಂದ ಆಗಿದ್ದ ಆಯಾಸವೆಲ್ಲಾ ಪರಿಹಾರವಾಗಿತ್ತು. ಇದಲವ್ವಾ  ನಿಜವಾದ ಯಜ್ಞ? ಎಂದು ಮನೆಯಾಕೆಯನ್ನು ಕೇಳಿದೆ. ಕತ್ತು ಆಡಿಸಿದ್ದು ಕಂಡು ಸಮಾಧಾನವಾಯ್ತು. ಪೂಜೆಯನ್ನು ಮಾಡುವ ಮೊದಲು ಸ್ವಚ್ಚತೆಗೆ ೯೦%  ಸಮಯ ಮೀಸಲಿಟ್ಟು ಆನಂತರ ನಮಗೆ ತೋಚಿದಂತೆ ಪೂಜೆ ಮಾಡಿದರೆ ಮನಸ್ಸಿಗೆ ಆನಂದ ವಾಗುವಿದಿಲ್ಲವೇ? ಅದೇ ಅಲ್ಲವೇ? ಯಜ್ಞ ಮತ್ತು ಯಜ್ಞದ ಫಲ?

ನಿಮ್ಮೊಡನೆ

ಆತ್ಮೀಯ ವೇದಸುಧೆಯ ಓದುಗರೇ, ಅಭಿಮಾನಿಗಳೇ, ವೇದಸುಧೆ ಬಳಗದ ನನ್ನ ಸಹವರ್ತಿಗಳೇ, ನಿಮಗೆ ಹೀಗೆ ಅಪರೂಪಕ್ಕೊಮ್ಮೆ ವಂದನೆ ಸಲ್ಲಿಸುವ ಮನಸ್ಸಾಯ್ತು, ಅದಕ್ಕೇ ಬರೆಯುತ್ತಿದ್ದೇನೆ.

ಆರಂಭದಲ್ಲಿ ಎಲ್ಲರಿಗೂ ಕ್ಷೇಮವನ್ನು ಬಯಸಿ ಹಾರೈಸುತ್ತೇನೆ.

ಪುಣ್ಯದ ಶ್ರಾವಣ ನೋಡುತ್ತಿದ್ದಂತೆಯೇ ಕಳೆದುಹೋಯ್ತು, ಶುಭದ ಭಾದ್ರಪದ ಬರುತ್ತಿದೆ, ಹಬ್ಬದ ಸಾಲು ಆರಂಭವಾಗಿ ತಿಂಗಳೇ ಕಳೆಯಿತು. ಎಲ್ಲರಿಗೂ ವೇದಸುಧೆಯ ಪರವಾಗಿ ಹಾರ್ದಿಕ ಶಭಾಶಯಗಳು.

ಇಲ್ಲೊಂದು ಆಚಾರ್ಯರುಗಳಿಂದ, ಪ್ರಾಜ್ಞರಿಂದ ರಚಿತವಾದ ಅಷ್ಟಕಗಳೂ ಶತಕಗಳೂ ಮತ್ತು ಸ್ತೋತ್ರಗಳೂ ಇರುವ ಬ್ಲಾಗ್ ಕೊಂಡಿ ಕೊಡುತ್ತಿದ್ದೇನೆ, ದಯವಿಟ್ಟು ಆದಾಗ ಓದಿಕೊಳ್ಳಿ.

http://samskarasaurabha.blogspot.com/

ಮತ್ತು ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡಲು ಪಾಲಕರಿಗೆ ಪೂರಕ ಮಾಹಿತಿಗಳಿಲ್ಲ, ಹಿರಿಯರಿಲ್ಲದ ಎಷ್ಟೋ ಮನೆಗಳಲ್ಲಿ ಇತಿಹಾಸ ಪುರಾಣಗಳ ಸಾಹಸಗಾಥೆಗಳು ಮತ್ತು ಕಥೆಗಳ ಪರಿಚಯ ಇರುವುದಿಲ್ಲ. ಇವನ್ನೆಲ್ಲಾ ಗಮನದಲ್ಲಿಟ್ಟು ಧರ್ಮರಕ್ಷಣ ಸಂಸ್ಥಾನದವರು ಒಂದು ಹೊಸ ವೆಬ್‍ಸೈಟ್ ಮೊನ್ನೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದಾರೆ. ಅದನ್ನೂ ಕೂಡ ತಮ್ಮೆಲ್ಲರ ಆವಗಾಹನೆಗೆ ತರುತ್ತಿದ್ದೇನೆ :

http://www.balsanskar.com/kannada

ಸದ್ಯ ಹಿಂದಿ, ಕನ್ನಡ, ಮರಾಠಿ, ಆಂಗ್ಲ ಭಾಷೆಗಳಲ್ಲಿ ಲಭ್ಯವಿರುವ ವಿವರಣೆಗಳು ಮುಂಬರುವ ದಿನಗಳಲ್ಲಿ ಭಾರತೀಯ ಹಲವು ಭಾಷೆಗಳಲ್ಲಿ ಕೊಡಮಾಡಲ್ಪಡುತ್ತವೆ.

ನಿಸ್ಪೃಹ ವೇದಿಕೆಯೊಂದು ಜನಸೇವೆಗೆ ನಡೆಸುವ ಇಂತಹ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಈ ಕೊಂಡಿಗಳನ್ನು ತಮ್ಮ ಬಂಧು-ಮಿತ್ರ-ಹಿತೈಷಿ-ಸಜ್ಜನರೆಲ್ಲರಿಗೂ ಮಿಂಚಂಚೆಯ ಮೂಲಕ ತಲ್ಪಿಸುವರೇ ತಮ್ಮೆಲ್ಲರಲ್ಲಿ ಇದನ್ನು ಅಪೇಕ್ಷಿಸಲಾಗಿದೆ.

ಕಾಲಕಾಲಕ್ಕೆ ವೇದಸುಧೆಯ ಮಧುರಸುಧಾರಸವನ್ನು ಪಾನಮಾಡುತ್ತಿದ್ದೀರಿ, ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳು, ವಿವರಗಳು ಎಲ್ಲರಿಗೂ ದೊರೆಯಲಿ ಮತ್ತು ಪರಸ್ಪರ ಎಲ್ಲರೂ ಜ್ಞಾತರಾಗಿ, ಇಂತಹ ವಿಷಯಗಳಲ್ಲಿ ಸ್ನಾತಕರಾಗಿ ಭೂಯಃ ಶ್ರೇಯೋಭಾಜನರಾಗಬೇಕೆಂಬುದು ನಮ್ಮೆಲ್ಲರ ಮನದಾಳದ ಅನಿಸಿಕೆಯಾಗಿದೆ. ಈ ದಿಸೆಯಲ್ಲಿ ನಮ್ಮ ಸಂಪಾದಕರಾದ ಶ್ರೀ ಹರಿಹರಪುರ ಶ್ರೀಧರ್ ರವರು ಬಹಳ ಮುತುವರ್ಜಿಯಿಂದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಾವೆಲ್ಲಾ ಆಗಾಗ ಬರಹೋಗುವವರಾದರೂ ನಿರಂತರ ವೇದಸುಧೆಯ ಉಸ್ತುವಾರಿ ಹೊತ್ತ ಅವರಿಗೆ ಪ್ರತ್ಯೇಕವಾಗಿ ಆಭಾರಿಯಾಗಿದ್ದೇನೆ. ಸಾಧ್ಯವಾದರೆ ಈ ಎರಡು ಕೊಂಡಿಗಳನ್ನು ವೇದಸುಧೆ ಬಳಸುವ ಬ್ಲಾಗ್ ಮಾಲಿಕೆಗಳ ಪಟ್ಟಿಯಲ್ಲಿ ಜೋಡಿಸಿ ಓದುಗರಿಗೆ ದಾರಿ ಕಲ್ಪಿಸಲು ಶ್ರೀಧರರಲ್ಲಿ ವಿನಂತಿಸುತ್ತಿದ್ದೇನೆ. ಬಳಗದ ಹಿರಿಯ ಸದಸ್ಯರಾದ ಶ್ರೀ ಸುಧಾಕರ ಶರ್ಮರು ಶೀಘ್ರ ಗುಣಮುಖರಾಗಿ ನಮ್ಮೆಲ್ಲರನ್ನೂ ಸೇರಿಕೊಳ್ಳಲಿ ಎಂಬ ಮಹದಾಸೆ ಇದ್ದರೂ ನಿಧಾನಗತಿಯಲ್ಲಿ ಸುಧಾರಿಸಿಕೊಳ್ಳುತ್ತಿರುವ ಅವರ ಆರೋಗ್ಯದಿಂದ ಕೆಲವು ತಿಂಗಳಲ್ಲಿ ಅವರು ಮರಳಿ ನಮ್ಮೆಲ್ಲರಿಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸಲಿದ್ದಾರೆ. ’ ವೇದಸುಧೆ ’ ಯಲ್ಲಿ ಮಿಂದ ಎಲ್ಲರಿಗೂ ಭಗವಂತ ಸುಖ, ಶಾಂತಿ, ಸಮೃದ್ಧಿ ದೊರಕಿಸಲಿ, ಎಲ್ಲರೂ ನೆಮ್ಮದಿಯ ಜೀವನ ಸಾಗಿಸುವಂತಾಗಲಿ ಎಂದು ಮತ್ತೊಮ್ಮೆ ಜಗನ್ನಿಯಾಮಕ ಶಕ್ತಿಯಲ್ಲಿ ಪ್ರಾರ್ಥಿಸಿ ಹಾರೈಸಿ ನಿಮ್ಮಿಂದ ಸದ್ಯಕ್ಕೆ ಬೀಳ್ಕೊಳ್ಳುತ್ತಿದ್ದೇನೆ, ನಮಸ್ಕಾರಗಳು.

---ವಿ.ಆರ್.ಭಟ್