Pages

Monday, August 4, 2014

ಅನ್ಯಾಯದ ವಿರುದ್ಧ ಧ್ವನಿ ಎತ್ತೋಣ

ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)
     ಎಲ್ಲಿ ಬ್ರಾಹ್ಮೀಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಪ್ರವೃತ್ತವಾಗುತ್ತವೋ, ಎಲ್ಲಿ ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ. 
     ಸಮಾಜದಲ್ಲಿ ಯಾವೊಂದು ರೀತಿಯ ವಿಭಾಗವೂ ಮೇಲಲ್ಲ, ಕೀಳೂ ಅಲ್ಲ. ವಿದ್ವಜ್ಜನರು, ವ್ಯಾಪಾರಿಗಳು, ಶ್ರಮಿಕರು, ಯೋಧರು ಇವರೆಲ್ಲರೂ ಪರಸ್ಪರ ಅವಲಂಬಿತರು. ಇದು ನನ್ನ ಕೆಲಸವಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ, ಅವರ ಕೆಲಸ ಅವರು ಮಾಡಲಿ; ನನ್ನ ತಂಟೆಗೆ ಅವರು ಬರುವುದು ಬೇಡ, ಅವರ ತಂಟೆಗೆ ನಾನೂ ಹೋಗುವುದಿಲ್ಲವೆಂದರೆ ಅದು ಸಮಾಜಕ್ಕೆ ಪೂರಕವಾದ ನಡೆಯಾಗುವುದಿಲ್ಲ. ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಸಹಕರಿಸುತ್ತಾ ನಡೆದರೆ ಸಮಾಜವೂ, ದೇಶವೂ ಅಭಿವೃದ್ಧಿಯತ್ತ ಸಾಗುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನವನ್ನು ಆಳುವವರಿಗೆ ವಿದ್ವಜ್ಜನರು ನೀಡದಿದ್ದರೆ, ಅಥವ ಆಳುವವರು ದುಷ್ಟಕೂಟದ ಸಂಚಿಗೆ ಬಲಿಯಾಗಿ ಸಮಾಜಹಿತಕ್ಕೆ ವಿರೋಧವಾಗಿ, ಅನ್ಯಾಯಿಗಳಾಗಿ, ಪಕ್ಷಪಾತಿಗಳಾಗಿ ವರ್ತಿಸಿದರೆ ಅವರನ್ನು ಎಚ್ಚರಿಸುವ ಕೆಲಸವನ್ನು ವಿದ್ವಜ್ಜನರು ಮತ್ತು ಭುಜಬಲಿಗಳು ಒಟ್ಟಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಜನರನ್ನು ಯೋಗ್ಯ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ವಿದ್ವಜ್ಜನರದ್ದೇ ಆಗಿದೆ. ಈ ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ ಅದರ ಫಲವನ್ನು ಅನುಭವಿಸುವವರೂ ಅವರೇ ಆಗುತ್ತಾರೆ.
     ಬ್ರಹ್ಮತೇಜ ಮತ್ತು ಕ್ಷಾತ್ರ ತೇಜಗಳ ಸಮ್ಮಿಲನವಾದರೆ ಎಂತಹ ಚಮತ್ಕಾರವಾಗುತ್ತದೆ ಎಂಬುದಕ್ಕೆ ಚಂದ್ರಗುಪ್ತನನ್ನು ಪ್ರೇರಿಸಿದ ಚಾಣಕ್ಯ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಉದಾಹರಣೆಗಳಾಗಿದ್ದಾರೆ. ವೈದಿಕ ಭಜನೆಯ ಈ ಸಾಲುಗಳು ಅನುಕರಣೀಯವಾಗಿವೆ.
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ |
ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
     ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಮನಸ್ಸಿರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಯಾರಿಗೆ ಯಾವ ರೀತಿಯಲ್ಲಿ ಉತ್ತರಿಸಬೇಕೋ ಆ ರೀತಿ ಉತ್ತರಿಸಬೇಕಾಗುತ್ತದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?

ಮಾತನ್ನು ಹೇಗೆ ಆಡಬೇಕು?

ಸಕ್ತುಮಿವ ತಿತ ಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತಾ|
ಅತ್ರ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿ ವಾಚಿ|| (ಋಗ್ವೇದ.೧೦.೭೧.೨.)
ಹಿಟ್ಟನ್ನು ಜರಡಿಯಾಡುವಂತೆ ಪವಿತ್ರಗೊಳಿಸಲ್ಪಟ್ಟ ಮಾತನ್ನು ಮನಃಪೂರ್ವಕವಾಗಿ ಎಲ್ಲಿ ಧೀರರು ಉಂಟುಮಾಡುತ್ತಾರೋ ಅಲ್ಲಿ ಸ್ನೇಹವು ಸ್ನೇಹವನ್ನು ಅರಿಯುತ್ತದೆ ಮತ್ತು ಅಂತಹ ಮಾತುಗಳಲ್ಲಿಯೇ ಮಂಗಳಕರವಾದ ಸಂಪತ್ತು ಸ್ಥಿರವಾಗಿ ನೆಲೆಗೊಂಡಿರುತ್ತದೆ.
ನಮಗೆ ಮಾತನಾಡುವುದಕ್ಕೆ ಬರುತ್ತದೆ ಎಂದು ಹೇಗಾದರೂ ಮಾತನಾಡಲಾದೀತೇ? ಮಾತನ್ನು ಹೇಗೆ ಆಡಬೇಕು? ವೇದಮಂತ್ರವು ಹೇಳುತ್ತದೆ ” ನಿನ್ನ ಮೆದುಳಿನಲ್ಲಿ ಇಂತಾ ಮಾತನಾಡಬೆಕೆಂದು ನಿರ್ದೇಶನ ಸಿಕ್ಕಿ ಬಾಯಿ ಮೂಲಕ ಮಾತು ಹೊರಬರುವ ಮುಂಚೆ  ಹಿಟ್ಟನ್ನು ಜರಡಿಯಾಡುವಂತೆ  ಅದನ್ನು ಜರಡಿ ಯಾಡಿರಬೇಕು,  ನಾನಾಡುತ್ತಿರುವ ಮಾತು ಬೇರೆಯವರ ಮೇಲೆ ಏನು ಪರಿಣಾಮ ಉಂಟುಮಾಡುತ್ತದೆ, ಅದು ಇನ್ನೊಬ್ಬರಿಗೆ ನೋವುಂಟುಮಾಡುತ್ತದೆಯೇ? ಸತ್ಯವಾಗಿದೆಯೇ? ಕೇಳುವವರಿಗೂ ಹೇಳುವ ನನಗೂ ಹಿತಮಾಗಿದೆಯೇ? ಇಬ್ಬರಿಗೂ ಪ್ರಿಯ ವಾಗಿದೆಯೇ? …ಹೀಗೆ ಎಲ್ಲಾ ರೀತಿಯಲ್ಲೂ ಜರಡಿಯಾಡಿ ಮಾತು ಹೊರಬೀಳಬೇಕು.

ಜರಡಿಯ ಮೂರು ಪದರಗಳಂತೆ  ಸತ್ಯ, ಹಿತ, ಪ್ರಿಯ ಈ ಮೂರೂ ಗುಣಗಳಿರುವಹಾಗೆ ಜರಡಿಯಾಡಿ ಆನಂತರ ಮಾತು ಹೊರಬೀಳ ಬೇಕು. ಹೊರ ಬಿದ್ದ ಮಾತು ಎಷ್ಟಿರಬೇಕು?      ಮಿತವಾಗಿರಬೇಕು. ವ್ಯರ್ಥ ಮಾತನ್ನು ಆಡಬಾರದು.ಹೀಗಿದ್ದಾಗ ನಮ್ಮ ಸ್ನೇಹ ಗಟ್ಟಿ ಯಾಗಿ ಉಳಿಯುತ್ತದೆ. ಇದರಿಂದ ಧೀರನಾದವನು  ವ್ಯರ್ಥವಾದ ಮಾತನ್ನು ಆಡಲಾರ. ಅವನ ಮಾತು ಮಧುರವಾಗಿ, ಸತ್ಯವಾಗಿ, ಹಿತವಾಗಿ ಮಿತವಾಗಿ ಎಲ್ಲರಿಗೂ ಆಪ್ಯಾಯಮಾನವಾಗಿರುತ್ತದೆ.