Pages

Wednesday, June 29, 2011

ನೆಚ್ಚುವುದು-ಮೆಚ್ಚುವುದು


ನೆಚ್ಚುವುದು-ಮೆಚ್ಚುವುದು

[ ಸ್ನೇಹಿತರೇ, ’ಜಗದಮಿತ್ರನ ಕಗ್ಗ’ದ ೨೩ನೇ ಕಂತು ನಿಮ್ಮೆಲ್ಲರ ಓದಿಗಾಗಿ: ]

ಯಾರದೋ
ಮೆಚ್ಚುಗೆಯ ದಾರಿಕಾಯಲು ಬೇಡ
ಯಾರನೋ ನಂಬಿ ನೀ ಜೀವಿಸಲು ಬೇಡ
ಭೂರಿ ಭೋಜನ ನಿನಗೆ ದೈವವಂ ನೆಚ್ಚಿದಡೆ
ಸಾರಿ ನೀ ಅದ ನಂಬು | ಜಗದಮಿತ್ರ

ಕೂರಿಸುತ ತೇರನೆಳೆವರು ನೀನು ಗೆದ್ದಾಗ
ಹಾರಿಸುವರಷ್ಟು ಪಟಾಕಿ ತೋಪುಗಳ
ಜಾರಿಕೊಳ್ಳುವರೆಲ್ಲ ನೀ ಬಿದ್ದು ಅಳುವಾಗ
ದೂರವಿಡು ಮೊಳದಷ್ಟು | ಜಗದಮಿತ್ರ

ಹಾರಿ ಬಂದಿಹ ಹದ್ದು ಹರೆದು ಹೋಗುವ ರೀತಿ
ಊರು ಉದರವು ಬೆನ್ನು ಸೊಂಟ ಕೈಕಾಲು
ಭಾರ ಹೇರಿದ ಹಾಗೆ ಬಳಲುವುದು ಕಾಯಿಲೆಯೊಳ್
ದೂರುವುದು ಯಾರಲ್ಲಿ ? ಜಗದಮಿತ್ರ

ನೂರೆಂಟು ತಿನಿಸುಗಳು ನಾನಾ ಭಕ್ಷ್ಯಗಳು
ಸೂರೆಹೊಡೆವವು ಕಣ್ಣು ಹಾಯಿಸಲು ಮನವ
ಮಾರಕವು ಜಿಹ್ವಾ ಚಾಪಲ್ಯ ಜೀವಕ್ಕೆ
ಮೀರದಂತಿರಲಿ ಮಿತಿ | ಜಗದಮಿತ್ರ

ಆರು ಗಾವುದ ನಡೆದು ನೂರು ಮೆಟ್ಟಿಲು ತುಳಿದು
ಊರುದ್ದ ಅಲೆಸಿ ದಂಡಿಸು ಶರೀರವನು
ಬೇರಾವ ಮಾರ್ಗಕಿಂ ಯೋಗವತಿಸೂಕ್ತ
ಆರೋಗ್ಯ ಸೂತ್ರವಿದು | ಜಗದಮಿತ್ರ

--ವಿ.ಆರ್.ಭಟ್

Wednesday, June 22, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೧:

ಋತದ, ಅಂದರೆ, ಈಶ್ವರೀಯ ವಿಧಾನವಾದ ಧರ್ಮದ ರಕ್ಷಕನು ತನ್ನ ಹೃದಯದಲ್ಲಿ ಮೂರು ಪವಿತ್ರ ತತ್ತ್ವಗಳನ್ನು ರೂಢಿಸಿಕೊಳ್ಳುತ್ತಾನೆ, ಜ್ಞಾನ, ಕರ್ಮ, ಉಪಾಸನೆಗಳೇ ಆ ಮೂರು ತತ್ತ್ವಗಳು ಎಂದು ಹೇಳಿದ್ದೇವಷ್ಟೇ? ಅವು ಮೂರೂ ಧರ್ಮದ ಕೇವಲ ಅಂಗಗಳಲ್ಲ, ಧರ್ಮದ ಅಭಿನ್ನವಾದ, ಅವಿಚ್ಛಿನ್ನವಾದ ಅಂಗಗಳು. ಆ ಮೂರರಲ್ಲಿ ಯಾವುದೊಂದು ನಷ್ಟವಾದರೂ, ಧರ್ಮ ಪರಿಪೂರ್ಣವಾಗಿ ಉಳಿಯುವುದಿಲ್ಲ. ವೇದ ಎಂಬ ಶಬ್ದದ ಅರ್ಥ, ಜ್ಞಾನ ಎಂದು. ಋಗ್ವೇದ - ಅಥರ್ವವೇದಗಳಲ್ಲಿ ಮುಖ್ಯತಃ ಆಧ್ಯಾತ್ಮಿಕ, ಭೌತಿಕ ಜ್ಞಾನ-ವಿಜ್ಞಾನಗಳೂ, ಯಜುರ್ವೇದದಲ್ಲಿ ಮುಖ್ಯತಃ ಕರ್ಮವಿಧಾನವೂ, ಸಾಮವೇದದಲ್ಲಿ ಮುಖ್ಯತಃ ಉಪಾಸನಾ ಸಂವಿಧಾನವೂ ಉಪದೇಶಿಸಲ್ಪಟ್ಟಿವೆ. ಇದೇ ಕಾರಣದಿಂದ, ಈಶ್ವರೋಕ್ತ ವೇದಗಳು ಸಂಖ್ಯೆಯಲ್ಲಿ ನಾಲ್ಕು ಇದ್ದರೂ, ಚತುರ್ವೇದವೇತ್ತರನ್ನು ತ್ರೈವಿದ್ಯರು ಎಂದು ವೈದಿಕ ಸಾಹಿತ್ಯದಲ್ಲಿ ಹೇಳಲಾಗಿದೆ.
ಧರ್ಮದ ಪ್ರಥಮ ಅಂಗವಾದ ಜ್ಞಾನವನ್ನು ತೆಗೆದುಕೊಳ್ಳೋಣ. ಜ್ಞಾನವು ಧರ್ಮದ ಶಿರಸ್ಸಿದ್ದಂತೆ. ವೇದವು ಹೇಳುತ್ತಲಿದೆ:-


ಜ್ಯೋತಿರ್ವೃಣೀತ ತಮಸೋ ವಿಜಾನನ್ನಾರೇ ಸ್ಯಾಮ ದುರಿತಾದಭೀಕೇ |
ಇಮಾ ಗಿರಃ ಸೋಮಪಾಃ ಸೋಮವೃದ್ಧ ಜುಷಸ್ವೇಂದ್ರ ಪುರುತಮಸ್ಯ ಕಾರೋಃ ||
(ಋಕ್. ೩.೩೯.೭.)


ಮಾನವನು, [ತಮಸಃ] ಅಂಧಕಾರದಿಂದ ಸರಿದು, [ವಿಜಾನನ್] ಜ್ಞಾನವನ್ನು ಗಳಿಸಿ, [ಜ್ಯೋತಿರ್ವೃಣೀತ] ಜ್ಯೋತಿಯನ್ನು ಪಡೆದುಕೊಳ್ಳಬೇಕು. ಹೀಗೆ ಮಾಡಿದಾಗಲೇ, ದುರಿತಾತ್ ಅರೇ] ದುರ್ಗತಿಯಿಂದ ದೂರಸರಿದು, [ಅಭೀಕೇ ಸ್ಯಾಮ] ನಿರ್ಭಯನಾದ ಸ್ಥಿತಿಯಲ್ಲಿ ಇರಬಲ್ಲೆವು. ಆದಕಾರಣ, [ಸೋಮಪಾಃ] ವಿವೇಚನೆಯನ್ನು ಕಾಪಾಡಿಕೊಳ್ಳುವ, [ಸೋಮವೃದ್ಧ] ವಿವೇಕದಿಂದಲೇ ವರ್ಧಿತನಾಗುವ [ಇಂದ್ರ] ದೇಹಾಧೀಶನಾದ ಇಂದ್ರಿಯವಂತನಾದ ಜೀವನೇ! [ಪುರುತಮಸ್ಯ] ಪೂರ್ಣತಮನಾದ [ಕಾರೋಃ] ಜಗತ್ಕರ್ತೃವಿನ, [ಇಮಾ ಗಿರಃ] ಈ ಮಾತುಗಳನ್ನು [ಜುಷಸ್ವ] ಪ್ರೀತಿಯಿಂದ ಆಲಿಸು.
ಈ ಮಂತ್ರದಲ್ಲಿ ಉಕ್ತವಾಗಿರುವ ಅಂಧಕಾರ, ಭೌತಿಕ ಪ್ರಕಾಶದ ಅಭಾವವಲ್ಲ, ಆಧ್ಯಾತ್ಮಿಕವಾದ ಅಂಧಕಾರ, ಎಂದರೆ ಅಜ್ಞಾನ. ಇಲ್ಲಿ ಹೇಳಿರುವ ಜ್ಯೀತಿಯೂ ಭೌತಿಕ ಪ್ರಕಾಶವಲ್ಲ, ಆಧ್ಯಾತ್ಮಿಕ ಪ್ರಕಾಶ, ಎಂದರೆ ಜ್ಞಾನ. ದುರಿತದಿಂದ, ದುರ್ವೃತ್ತಿಯಿಂದ, ದುರಾಚಾರದಿಂದ ಸರಿದು ಅಭಯದ ಸ್ಥಿತಿಯನ್ನು ಮುಟ್ಟುವ ಉಪದೇಶವಿರುವುದರಿಂದ, ಈ ನಮ್ಮ ಕಥನದ ಔಚಿತ್ಯ ಸ್ಪಷ್ಟವಾಗುವುದು. ಈ ಬಗೆಯ ನಿರ್ಮಲಜ್ಞಾನ ಪಡೆಯಲಾರದ ಮಾನವ, ಆಕಾರದಿಂದ ಮಾತ್ರ ಮಾನವನಾಗಿ ಕಂಡರೂ, ವಸ್ತುತಃ ಪಶುವಿಗಿಂತ ನೀಚ ಮಟ್ಟದಲ್ಲಿರುತ್ತಾನೆ. ಕಾರಣವೇನೆಂದರೆ, ಕೇವಲ ಸ್ವಾಭಾವಿಕ ಪ್ರವೃತ್ತಿಯಿಂದ ಜೀವನ ನಡೆಯಿಸುವ ಪಶುಗಳು ಮತ್ತು ಪಕ್ಷಿಗಳೂ ಕೂಡ, ಮಾರ್ಗ ತಪ್ಪಿ ನಡೆಯುವ ಸಂಭವವಿಲ್ಲ. ಆದರೆ ಜ್ಞಾನವಿಹೀನನಾದ ಮಾನವ, ಕರ್ತವ್ಯಾಕರ್ತವ್ಯಗಳ ನಿರ್ಣಯ ಮಾಡಲಾರದೆ, ಪಾಪಮಾರ್ಗದಲ್ಲಿ ಕಾಲಿಡುತ್ತಾನೆ. ನಿಜವಾಗಿ ಅಜ್ಞಾನದೆಶೆಯಲ್ಲಿ ನಡೆಯುವುದೆಂದರೆ, ಕತ್ತಲಿನಲ್ಲಿ ಎಡವಿದಂತೆಯೇ ಸರಿ. ಅಜ್ಞಾನವೆಂದರೆ ಆಧ್ಯಾತ್ಮಿಕ ಕತ್ತಲೆಯೆಂದು ಹೇಳಿಯೇ ಇದ್ದೇವೆ.
************

Monday, June 20, 2011

ನೀ ದುರ್ಗಿ ಯಾಗುವೆ ಎಂದು?

ಓ ತಾಯಿ ಭಾರತಿಯೆ
ನೀ ದುರ್ಗಿ ಯಾಗುವೆ ಎಂದು?||

ಕಳ್ಳ ಕಾಕರು ಸೇರಿ
ನಮ್ಮನಾಳಲುನೀನು
ಕಣ್ಮುಚ್ಚಿ ಕುಳಿತಿರುವೆ
ಇದು ನಿನಗೆ ಭೂಷಣವೇ?||

ಮಳ್ಳಿತನದಿ ಮಾತಾಡಿ
ಮರುಳು ಮಾಡಿ
ನಿನ್ನ ಪೂಜಿಪ ನೆಪದಿ
ಕೊಳ್ಳೆ ಹೊಡೆಯುವರು
ನಿನ್ನ ಸಂಪತ್ತನ್ನೇ
ಲೂಟಿ ಮಾಡುವರು
ಮೌನವೇತಕೆ ತಾಯೆ
ನೀ ದುರ್ಗಿ ಯಾಗುವೆ ಎಂದು?||

ಮಾನ ಮರ್ಯಾದೆಗಳ
ಒತ್ತೆ ಇಟ್ಟವರೆಲ್ಲಾ
ನಮ್ಮನಾಳಲು ನಾವು
ನಾಚುವುದೆ ಇಲ್ಲ
ಸತ್ತು ಹೋಗಿದೆಯಲ್ಲಾ
ಅಂತ:ಸತ್ವವು ತಾಯೆ
ಸಿಡಿದೇಳು ಮಲಗಿರುವ
ನಮ್ಮ ಕಣ್ಣ ತೆರಸು||

Thursday, June 16, 2011

ಆತ್ಮೀಯ ಅಭಿಮಾನೀ ಓದುಗರೇ,
ವೇದಸುಧೆಗೆ ಪ್ರೇರಕರಾಗಿರುವ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಆರೋಗ್ಯವು ಉತ್ತಮವಾಗಿಲ್ಲ.ಅವರಿಗೆ ಒಂದಿಷ್ಟು ದಿನಗಳ ವಿಶ್ರಾಂತಿ ಅನಿವಾರ್ಯವಾಗಿ ಬೇಕಾಗಿದೆ. ಆದ್ದರಿಂದ ಇನ್ನು ೫-೬ ತಿಂಗಳ ಕಾಲ ಮಾನ್ಯ ಓದುಗರು ಅವರೊಡನೆ ಸಮಾಲೋಚಿಸಲು ಸಾಧ್ಯವಾಗುವುದಿಲ್ಲ.ಆದರೆ ಅವರ ವಿಚಾರಗಳ ಧ್ವನಿಯನ್ನು ಈಗಾಗಲೇ ವೇದಸುಧೆಯಲ್ಲಿ ಸಾಕಷ್ಟು ಪ್ರಕಟಿಸಲಾಗಿದೆ.ಅದರ ಉಪಯೋಗವನ್ನು ಯಾವಾಗಲೂ ಪಡೆಯಬಹುದು.ವೇದಸುಧೆಯ ಹಲವು ಪುಟಗಳಲ್ಲಿ ಹರಡಿಹೋಗಿರುವ ಅವರ ವಿಚಾರಗಳನ್ನು "ಶರ್ಮರ ಪುಟ" ಕ್ಕೆ ವರ್ಗಾಯಿಸುವ ಪ್ರಯತ್ನ ಸಾಗಿದೆ. ಬ್ಲಾಗಿನ ತಲೆಬರಹದಡಿ ಕಾಣುವ "ಶರ್ಮರ ಪುಟ" ವನ್ನು ಕ್ಲಿಕ್ ಮಾಡಿದರೆ ಶರ್ಮರ ಹಲವು ಆಡಿಯೋ ಗಳನ್ನು ಕೇಳಬಹುದಾಗಿದೆ. ಎಲ್ಲರ ಸಹಕಾರ ಎಂದಿನಂತಿರಲಿ.
ನಮಸ್ಕಾರಗಳು.
-ಹರಿಹರಪುರಶ್ರೀಧರ್

ಯೋಚಿಸಲೊ೦ದಿಷ್ಟು...೩೭

೧.ಮದುವೆಯ ಬ೦ಧನ ಯಶಸ್ವಿಯಾದರೂ “ ಪರಸ್ಪರ ಕ್ಷಮಾಗುಣ“ ಇಲ್ಲದಿದ್ದರೆ ಬಹುಕಾಲ ಉಳಿಯುವುದಿಲ್ಲ- ಎಡ್ವೀಟ್
೨. ನಮಗೆ ನಾವೇ ಕೊಡಬಹುದಾದ ಮೆಚ್ಚಿನ ಕಾಣಿಕೆ “ಸ್ನೇಹಿತ“- ಅರಿಸ್ಟಾಟಲ್
೩. ನಮಗೆ ಸ್ನೇಹಿತರು ಬೇಕಾದರೆ ನಾವು ಸ್ನೇಹಿತರಾಗಿರಬೇಕು!- ಎಮರ್ ಸನ್
೪.ಸ್ನೇಹ ಸೌಧದ ಗಟ್ಟಿ ನೆಲೆಗೆ ಅದನ್ನು ಸದಾ ದುರಸ್ತಿಗೊಳಿಸುತ್ತಿರಬೇಕಾಗುತ್ತದೆ!
೫. ನಗು ಸ್ನೇಹಕ್ಕೆ ಅತ್ಯುತ್ತಮ “ಆರ೦ಭ“. ಅಲ್ಲದೇ ಸ್ನೇಹದ ಅತ್ಯುತ್ತಮ ಮುಕ್ತಾಯ ಸಹಾ ಅದೇ!- ಆಸ್ಕರ್ ವೈಲ್ಡ್
೬. ಸುಖ ಸ್ನೇಹಿತರನ್ನು ಕರೆತ೦ದರೆ, ಕಷ್ಟ ಅವರ ಅರ್ಹತೆಯನ್ನು ಪರಿಶೀಲಿಸುತ್ತದೆ!
೭.ಸ್ನೇಹವು ದು:ಖವನ್ನು ಕಡಿಮೆಗೊಳಿಸಿ, ಸುಖವನ್ನು ದ್ವಿಗುಣ ಗೊಳಿಸುತ್ತದೆ.
೮. ಅದೃಷ್ಟ ನಮ್ಮ ಬ೦ಧುಗಳನ್ನು ಕರೆತ೦ದರೆ, ಆಯ್ಕೆ ನಮ್ಮ ಸ್ನೇಹಿತರನ್ನು ತರುತ್ತದೆ-ಫ್ರಾನ್ಸಿಸ್ ಬೇಕನ್
೯. ಸ್ನೇಹಿತ ಅನುಕೂಲವಿದ್ದಾಗ ಆಹ್ವಾನ ಬ೦ದರೆ ಹೋಗಬೇಕು. ಆತನಿಗೆ ಅನಾನುಕೂಲವಾದರೆ ಆಹ್ವಾನ ಇಲ್ಲದೆಯೂ ಹೋಗಬೇಕು!
೧೦. ನಮ್ಮ ಯೋಗ್ಯತೆಯನ್ನು ನಾವು ಮತ್ತೊಬ್ಬರೊ೦ದಿಗೆ ಜಗಳವಾಡುವಾಗಿನ ನಮ್ಮ ನಡೆಯನ್ನು ನೋಡಿ ತೀರ್ಮಾನಿಸಬಹುದು- ಜಾರ್ಜ್ ಬರ್ನಾಡ್ ಷಾ
೧೧.ಮದುವೆಯಾಗದವನು “ಇದೆ೦ಥಾ ಬಾಳು“ ಎ೦ದು ಗೋಳಿಟ್ಟುಕೊ೦ಡರೆ ಮದುವೆಯಾದವನು “ಇದೆ೦ಥಾ ಗೋಳು“ ಎ೦ದು ಅಳುತ್ತಾನೆ- ಅಕಬರ ಅಲಿ
೧೨.ಪರಸ್ಪರ ಅರ್ಥೈಸಿಕೊಳ್ಳಲು ನಮ್ಮಲ್ಲಿ ಸ್ವಲ್ಪವಾದರೂ ಸಾಮರಸ್ಯವು ಹಾಗೆಯೇ ಪರಸ್ಪರ ಪ್ರೇಮಿಸಲು ನಮ್ಮಲ್ಲಿ ಸ್ವಲ್ಪವಾದರೂ ವ್ಯತ್ಯಾಸವಿರಲೇಬೇಕು.
೧೩. ಹೋರಾಟ ಅನಿವಾರ್ಯವಿದ್ದಲ್ಲಿ ನಮ್ಮೆಲ್ಲಾ ಬಲವನ್ನುಪಯೋಗಿಸಿಯೇ ಹೋರಾಡಬೇಕೇ ವಿನ: ಪ್ರತಿಸ್ಪರ್ಧಿಯ ದೌರ್ಬಲ್ಯವನ್ನು ಉಪಯೋಗಿಸಿಯಲ್ಲ!!
೧೪.ರಾಜಕಾರಣಿ ನೀತಿಕೋವಿದನಾಗಿರುವುದು ಸಾಧ್ಯವಿಲ್ಲ!
೧೫.ಮಾನವನ ಬಾಳು ಗೋಪುರದ ಗಡಿಯಾರವಿದ್ದ೦ತೆ! ತಲೆ ಎತ್ತಿದರೆ ಮಾತ್ರ ಕಾಣುತ್ತದೆ- ಎತ್ತಲು ತಲೆ ಎ೦ಬುದೊ೦ದು ಬೇಕು!- ಎತ್ತಬೇಕು ಎ೦ಬುದು ಆ ತಲೆಗೆ ತೋಚಬೇಕು!!- ಬೀಚಿ

Friday, June 10, 2011

ವೇದೋಕ್ತ ಜೀವನ ಪಥ ಲೇಖನ ಮತ್ತು ನಾವು

ವೇದಸುಧೆಯು ಯಾವ ಉದ್ಧೇಶದಿಂದ ಆರಂಭವಾಯ್ತೋ ಅದಕ್ಕೆ ಪೂರ್ಣ ನ್ಯಾಯವನ್ನು ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರು ಕೊಡುತ್ತಿದ್ದಾರೆ. ವೇದೋಕ್ತ ಜೀವನ ಪಥ ಗ್ರಂಥವನ್ನು ದಾರಾವಾಹಿಯಾಗಿ ಶ್ರೀ ನಾಗರಾಜರು ಬರೆಯುತ್ತಿದ್ದಾರೆ. ಆದರೆ ನನಗೊಂದು ಸಂಶಯ ಕಾಡುತ್ತಿದೆ. ವೇದಸುಧೆಯ ಓದುಗರು ಇಂತಹ ಮಹತ್ತರವಾದ ಬರವಣಿಗೆಯನ್ನು ಓದುತ್ತಿದ್ದಾರೆಯೇ? ಎಂದು ಸಂಶಯಿಸಲು ಕಾರಣ ಇಂತಹ ಅದ್ಭುತವಾದ ಲೇಖನಕ್ಕೆ ಓದುಗರು ಪ್ರತಿಕ್ರಿಯಿಸುವುದಿಲ್ಲ. ನನ್ನ ಕಳಕಳಿಯ ಮನವಿ ಇಷ್ಟೆ. " ಚೆನ್ನಾಗಿತ್ತು" "ಉಪಯೋಗವಾಯ್ತು" ಎಂಬ ಒಂದು ಪದದ ಪ್ರತಿಕ್ರಿಯೆ ವ್ಯಕ್ತವಾದರೂ ಬರೆದವರಿಗೆ ಅದನ್ನು ಮುಂದುವರೆಸಲು ಉತ್ಸಾಹಬರುತ್ತದೆ. ಇದು ಮಾನವ ಸಹಜ ಸ್ವಭಾವ. ಅಲ್ಲದೆ ಯಾರೂ ಓದದಿದ್ದರೆ ಬರೆಯುವ ಶ್ರಮವನ್ನಾದರೂ ತೆಗೆದುಕೊಳ್ಳಬೇಕೇಕೆ?
ವೇದೋಕ್ತ ಜೀವನ ಪಥದ ಇಂದಿನ ಭಾಗವಂತೂ ಅದ್ಭುತವಾಗಿದೆ.ಅದನ್ನು ಓದಲೇ ಬೇಕು. ಅದು ಜವನದಲ್ಲಿ ಪ್ರಗತಿಹೊಂದಬೇಕೆಂದು ಆಶಿಸುವವನಿಗೆ ಉಪಯೋಗವಾಗಬಲ್ಲ ಜೀವನ ಸೂತ್ರಗಳು. ಅದನ್ನು ಓದಿದ ನಾನು ನನ್ ಅನಿಸಿಕೆಯನ್ನು ಅಲ್ಲಿ ಬರೆದರೆ ಉದ್ದವಾಗುತ್ತದೆಂದು ಪ್ರತ್ಯೇಕ ಲೇಖನವನ್ನೇ ಮಾಡಿರುವೆ. ನಾಗರಾಜರು ಅನ್ಯಥಾಭಾವಿಸಬಾರದಾಗಿ ಕೋರುವೆ.
---------------------------------------------
ಮಂತ್ರ:
ಏತೇ ಅಸೃಗ್ರಮಾಶವೋssತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್. ೯.೬೩.೪.) ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ |ಅಪಘ್ನಂತೋ ಅರಾವ್ಣಃ || (ಋಕ್. ೯.೬೩.೫.) ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ |ಇಂದ್ರಂ ಗಚ್ಛಂತ ಇಂದವಃ || (ಋಕ್. ೯.೬೩.೬.)

ಅರ್ಥ:
೧]ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, ಕುಟಿಲ ಭಾವನೆಗಳನ್ನು ದಾಟಿ, ಮುಂದೆ ಸಾಗುತ್ತಾರೆ. ೨]ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, ತಮ್ಮ ಆತ್ಮವಿಶ್ವಾಸ ಮಾಡಿಕೊಳ್ಳುತ್ತಾ, ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ. ೩]ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.

ನನ್ನ ಅನಿಸಿಕೆ:
ಎಂತಹ ಪರಮ ಸತ್ಯವನ್ನು ವೇದಗಳು ಹೇಳುತ್ತಾ ಇವೆ ನೋಡಿ. ಜೀವನದಲ್ಲಿ ಪ್ರಗತಿ ಹೊಂದುವವರು ಯಾರು? ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ.ಯಾರು ಜೀವನದಲ್ಲಿ ಸೋಮಾರಿಗಳಲ್ಲ ಅವರು, ಜೀವನದಲ್ಲಿ ಪ್ರಮಾದವನ್ನುಮಾಡದವರು,ಆಚಾರವಿಚರಗಳು ಶುಬ್ರವಾಗಿರುವವರು, ಶಾಂತಸ್ವಭಾವದವರು,ಇವರು ಧರ್ಮದ ಪ್ರವಾಹದಲ್ಲಿ ನಡೆಯುತ್ತಾಎಲ್ಲಾ ಕುಟಿಲಭಾವನೆಗಳನ್ನು ದಾಟಿ ಮುಂದೆ ಹೋಗುತ್ತಾರೆ. ಇಂತವರು ಸಾಮಾನ್ಯವಾಗಿ ಕೆಲಸದಲ್ಲಿ ವೇಗಶಾಲಿಗಳಾಗಿರುತ್ತಾರೆ. ಆತ್ಮವಿಶ್ವಾಸದಿಂದ ಪ್ರಗತಿಯಲ್ಲಿ ಸಾಗುತ್ತಾ ಎಲ್ಲಾ ಸಂಕುಚಿತ ಮನೋಭಾವನೆಗಳನ್ನು ದೂರಮಾಡುತ್ತಾ ಇಡೀ ಮಾನವಕುಲವನ್ನು ಪ್ರೀತಿಸುತ್ತಾ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡಬೇಕೆಂಬ ಧ್ಯೇಯದಲ್ಲಿ ಮುಂದೆ ಸಾಗುತ್ತಾರೆ. ತಮ್ಮನ್ನು ತಾವು ಭಗವಂತನ ಮಕ್ಕಳೆಂದು ತಿಳಿದ ಇವರು ತಮ್ಮ ಚಾರಿತ್ರ್ಯವನ್ನು ನಿರ್ಮಲವಾಗಿಟ್ಟುಕೊಂಡು ನೀರಸವಾಗಿರುವ ಜೀವನದಲ್ಲಿ ಉಲ್ಲಾಸಗೊಳಿಸುತ್ತಾ, ಸರ್ವಶಕ್ತಿವಂತನಾದ ಪರಮಾತ್ಮನೆಡೆಗೆ ಸಾಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ನಿರಂತರವಾಗಿ ಮುಂದೆಸಾಗುತ್ತಾ ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆಯುವರು. ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಪ್ರಭೂಪಾಸನಾಚರಣದಿಂದ. ಜೀವನದಲ್ಲಿ ಉದ್ಧಾರವಾಗಬೇಕೆಂಬುವವನಿಗೆ ಇದಕ್ಕಿಂತ ಸೂತ್ರಗಳು ಬೇಕೆ?

Thursday, June 9, 2011

ವೇದೋಕ್ತ ಜೀವನ ಪಥ: ಮಾನವಧರ್ಮ - ೭

ವೇದಗಳ ದೃಷ್ಟಿಯಲ್ಲಿ ಧಾರ್ಮಿಕರಾದವರನ್ನು ವರ್ಣಿಸುತ್ತಾ ಋಗ್ವೇದ ಹೇಳುತ್ತದೆ:-


ಏತೇ ಅಸೃಗ್ರಮಾಶವೋssತಿ ಹ್ವರಾಂಸಿ ಬಭ್ರವಃ |
ಸೋಮಾ ಋತಸ್ಯ ಧಾರಯಾ ||
(ಋಕ್. ೯.೬೩.೪.)


ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ |
ಅಪಘ್ನಂತೋ ಅರಾವ್ಣಃ ||
(ಋಕ್. ೯.೬೩.೫.)


ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ |
ಇಂದ್ರಂ ಗಚ್ಛಂತ ಇಂದವಃ ||
(ಋಕ್. ೯.೬೩.೬.)


[ಏತೇ ಆಶವಃ ಸೋಮಾಃ] ಈ ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, [ಋತಸ್ಯ ಧಾರಯಾ] ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, [ಹ್ವರಾಂಸಿ ಅತಿ] ಕುಟಿಲ ಭಾವನೆಗಳನ್ನು ದಾಟಿ, ಅಸೃಗ್ರಮ್] ಮುಂದೆ ಸಾಗುತ್ತಾರೆ.
[ಅಪ್ತುರಃ] ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, [ಇಂದ್ರಂ ವರ್ಧಂತಃ] ತಮ್ಮ ಆತ್ಮವಿಶ್ವಾಸ ಮಾಡಿಕೊಳ್ಳುತ್ತಾ, [ವಿಶ್ವಂ ಆರ್ಯಂ ಕೃಣ್ವಂತಃ] ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ.
[ಸುತಾಃ ಬಭ್ರವಃ ಇಂದವಃ] ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, [ಇಂದ್ರಮ ಗಚ್ಛಂತಃ] ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, [ಸ್ವಂ ರಜಃ ಅನು] ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, [ಆ ಅಭಿ ಅರ್ಷಂತಿ] ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.


ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಪ್ರಭೂಪಾಸನಾಚರಣದಿಂದ. ಆದುದರಿಂದ, ಮುಂದಿನ ಅಧ್ಯಾಯದಲ್ಲಿ ಈ ಮೂರು ಧರ್ಮಾಂಗಗಳ ನಿಜವಾದ ಸ್ವರೂಪವನ್ನರಿತುಕೊಳ್ಳೋಣ ಬನ್ನಿ.
************

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ

ವೇದಸುಧೆ ಬಳಗದ ಹಾಸನದ ಶ್ರೀ ಹೆಚ್.ಎನ್.ಪ್ರಕಾಶ್ ಅವರು ಒಳ್ಳೆಯ ಹಾಡುಗಾರರು. ಶ್ರೀಯುತರು ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಹಾಡಿದ ಹಾಡು ಜನರನ್ನು ಸೆಳೆದಿತ್ತು. ಈಗ ನೀವೂ ಕೇಳಿ...




HNP

Tuesday, June 7, 2011

ವೇದೋಕ್ತ ಜೀವನ ಪಥ: ಮಾನವಧರ್ಮ - ೬

     ಧರ್ಮವು ಕೇವಲ ಐಹಿಕಸುಖದ ಸಾಧನವೂ ಅಲ್ಲ, ಕೇವಲ ಆಮುಷ್ಮಿಕ ಸುಖದ ಸಾಧನವೂ ಅಲ್ಲ, ಇಹ-ಪರಗಳೆರಡಕ್ಕೂ ಗಮನವಿತ್ತು, ಎರಡನ್ನೂ ಸಾಧಿಸಿಕೊಡಬಲ್ಲ ಮಾರ್ಗವೇ ಧರ್ಮ. ಆ ಜೀವನಮಾರ್ಗ ರೂಪಗೊಳ್ಳುವುದು ಆತ್ಮೋದ್ಧಾರಕಾರಿಗಳಾದ ಸದ್ಗುಣಗಳ ಸಮೂಹದಿಂದ. ಹೀಗೆ ಹೇಳಿದರೆ, ಅದೆಷ್ಟು ಸದ್ಗುಣಗಳಿವೆಯೋ, ಎಷ್ಟನ್ನು ಅವಲಂಬಿಸಿದರೆ ಧರ್ಮವನ್ನು ಮೈಗೂಡಿಸಿಕೊಂಡಂತಾಗುವುದೋ ಯಾರ ಕಲ್ಪನೆಯ ಹಿಡಿತಕ್ಕೂ ಸಿಕ್ಕುವುದಿಲ್ಲ. ಆದುದರಿಂದ ಋಗ್ವೇದ ಸ್ಪಷ್ಟವಾದ ಮಾತಿನಲ್ಲಿ ಹೇಳುತ್ತಿದೆ:


ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ |
ವಿದ್ವಾನ್ ತ್ಸ ವಿಶ್ವಾ ಭುವನಾಭ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಅವ್ರತಾನ್ ||
(ಋಕ್. ೯.೭೩.೮.)

     [ಋತಸ್ಯ ಗೋಪಾ] ಋತದ, ಈಶ್ವರೀಯ ವಿಧಾನದ, ಧರ್ಮದ ರಕ್ಷಕನು, [ನ ದಭಾಯ] ಎಂದಿಗೂ ತುಳಿಯಲ್ಪಡಲಿಕ್ಕಿಲ್ಲ. [ಸ ಸುಕ್ತುಃ] ಆ ಉತ್ತಮ ವಿಚಾರಶೀಲನೂ, ಆಚರಣವಂತನೂ ಆದ ಮಾನವನು, [ಹೃದಿ ಅಂತಃ] ತನ್ನ ಹೃದಯದಲ್ಲಿ, [ತ್ರೀ ಪವಿತ್ರಾ] ಮೂರು ಪವಿತ್ರ ತತ್ತ್ವಗಳನ್ನು, ಉಪಾಸನೆಗಳನ್ನು, [ಆ ದಧೇ] ಸದಾ ಧರಿಸಿರುತ್ತಾನೆ. [ಸ ವಿದ್ವಾನ್] ಆ ಜ್ಞಾನಿಯಾದ ಮಾನವನು, [ವಿಶ್ವಾ ಭುವನಾ ಅಭಿಪಶ್ಯತಿ] ಸಮಸ್ತ ಲೋಕಗಳನ್ನೂ, ಎಲ್ಲೆಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. [ಆಜುಷ್ಟಾನ್ ಅವ್ರತಾನ್] ಅಪ್ರಿಯರಾದ ವ್ರತರಹಿತರನ್ನು [ಕರ್ತೇ ಆವ ವಿಧ್ಯತಿ] ಪತನರೂಪದಲ್ಲಿ ಕೆಳಗೆ ಬಿದ್ದವರನ್ನೂ ಕೂಡ, ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ.
    ವೇದಗಳ ಸಂದೇಶ ಬಹು ಗಂಭೀರ, ಬಹಳ ಆಳ. ಋತವನ್ನು ಈಶ್ವರೀಯ ವಿಧಾನವಾದ ಧರ್ಮವನ್ನು ಪಾಲಿಸುವವನ ವರ್ಣನೆ ಮಾಡುವಾಗ, ಋಗ್ವೇದ ಆ ಮಹಾಪುರುಷನು ಧರಿಸುವ ಮೂರು ಪವಿತ್ರ ಧರ್ಮಾಂಗಗಳನ್ನು, ಜ್ಞಾನಕರ್ಮೋಪಾಸನಾತ್ರಯವನ್ನು ಸೂಚಿಸುತ್ತದೆ. ಸತ್ಯ, ನ್ಯಾಯ, ದಯೆ, ತ್ಯಾಗ, ಸಂಯಮ, ದಾನ, ಮೈತ್ರಿ, ಅಹಿಂಸೆ ಮೊದಲಾದ ಮಾನವನ ಊಹೆಗಂದಬಹುದಾದ ಸಮಸ್ತ ಆತ್ಮೋದ್ಧಾರಕ ಗುಣಗಳೂ ಜ್ಞಾನ-ಕರ್ಮ-ಉಪಾಸನಾ ಎಂಬ ಮೂರು ಅಂಗಗಳಲ್ಲಿ ಅಡಕವಾಗಿ ಹೋಗುತ್ತವೆ. ಜ್ಞಾನಿ ಅನುದಾರನಾಗಲಾರ, ಸತ್ಕರ್ಮನಿರತನು ರಾಗ-ದ್ವೇಷಗಳಿಗೆ ಸಿಕ್ಕಲಾರನು, ಉಪಾಸಕನು ಯಾರ ವೈರಿಯೂ ಆಗಿರಲಾರನು. ಈ ಮೂರು ಅಂಗಗಳನ್ನೂ ತನ್ನ ಬಾಳಿಗೆ ಹೊಂದಿಸಿಕೊಂಡ ಧನ್ಯಾತ್ಮನು, ತನ್ನ ಸ್ವಂತ ದೌರ್ಬಲ್ಯದಿಂದಲೋ, ಪರರ ಒತ್ತಡದಿಂದಲೋ ಲೋಕಕ್ಕೆ ಅಪ್ರಿಯರಾದ, ವ್ರತಬಾಹಿರರಾದ ಅಧರ್ಮನಿರತರನ್ನು ಕಂಡು ಹೇಸಿಗೆಯಿಂದ ಮೂಗು ಮುರಿಯುವುದಿಲ್ಲ. ತಿರಸ್ಕಾರದಿಂದ ಧಿಕ್ಕರಿಸುವುದಿಲ್ಲ. ಪತನದ ಹಳ್ಳಕ್ಕೆ ಬಿದ್ದವರನ್ನೂ ಕೂಡ ಮೇಲೆತ್ತಿ, ಉತ್ತಮ ಶಾಸನಕ್ಕೆ, ಈಶ್ವರೀಯ ವಿಧಾನಕ್ಕೆ ಅವರೂ ಕೂಡ ತಲೆಬಾಗುವಂತೆ ಮಾಡುತ್ತಾನೆ.
**************

Monday, June 6, 2011

ಯೋಚಿಸಲೊ೦ದಿಷ್ಟು...೩೬

೧. ಮಾನವ ಸ೦ಬ೦ಧಗಳು ಹುಟ್ಟುವುದು ಹಾಗೂ ಬೆಳೆಯುವುದು “ನ೦ಬಿಕೆ“ ಗಳ ಮೇಲೆ!
೨. ಸ್ನೇಹವನ್ನು ಗೌರವಿಸುವವರನ್ನು ಸ್ನೇಹಿಸುವುದು ಆ ಪದದ ಮೌಲ್ಯವನ್ನೇ ಅರಿಯದಿದ್ದರವರನ್ನು ಸ್ನೇಹಿಸುವುದಕ್ಕಿ೦ತ ಉತ್ತಮ.
೩. ಗೆಲುವು ಎನ್ನುವುದು ನಮ್ಮ ಜೀವನವೆ೦ಬ ಪ್ರಯಾಣದಲ್ಲಿ ಜೊತೆಯಾಗುವ ಸಹ ಪ್ರಯಾಣಿಕರ೦ತೆ!
೪. ನಿದ್ರೆಯಲ್ಲಿ ಕನಸು ಕಾಣುವುದು ಸಾಮಾನ್ಯ.. ನಿದ್ರೆಯಲ್ಲಿ ಕನಸನ್ನು ಕಾಣದಿದ್ದರೆ ಅದು ಸೋಮಾರಿತನ! ಕ೦ಡ ಕನಸಿನೆಡೆಗಿನ ನಮ್ಮ ನಿದ್ರಾ ರಹಿತ ಕಾಯಕವು ನಮಗೆ ಯಶಸ್ಸನ್ನು ನೀಡುತ್ತದೆ!!
೫. ನೋವಿನ ಬಗ್ಗೆ ಹೆಚ್ಚು ಚಿ೦ತಿಸಕೂಡದು .. ನೋವಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊ೦ಡು ಮು೦ದಿನ ಸು೦ದರ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ.
೬. ಒಳ್ಳೆಯ ಹೃದಯ ಸ೦ತಸದ ನೆಲೆವೀಡೆ೦ದು ಹೇಳಬಹುದಾದರೂ, ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಹೃದಯ ಹೆಚ್ಚು ನೋವನ್ನು ಅನುಭವಿಸುತ್ತದೆ!
೭. ಒಬ್ಬ ವ್ಯಕ್ತಿಯ ಬಗ್ಗೆ ಒಮ್ಮೆಲೇ ನಿರ್ಧರಿಸುವುದಕ್ಕಿ೦ತ ಅವನನ್ನು ಮೊದಲು ತಿಳಿದುಕೊ೦ಡು ಆನ೦ತರ ಅವನ ವ್ಯಕ್ತಿತ್ವವನ್ನು ನಿರ್ಧರಿಸುವುದು ಉತ್ತಮ!
೮. ಹೆಚ್ಚು ಗಳಿಕೆ- ಹೆಚ್ಚು ಬಳಕೆ ಹಾಗೂ ಹೆಚ್ಚು ಉಳಿಕೆಯಿ೦ದ ಯಾವುದೇ ವ್ಯಕ್ತಿ ಶ್ರೀಮ೦ತನಾಗಲಾರ! ಬದಲಾಗಿ ಎಲ್ಲವುದರ ಸಮಪಾಲಿನ ಬಳಕೆಯಿ೦ದಲೇ ಶ್ರೀಮ೦ತನೆನಿಸಿಕೊಳ್ಳುವುದು ( ಯಾವುದರ ಹೆಚ್ಚು ಯಾ ಕಡಿಮೆ ಬಳಕೆ ಮಾಡದಿರುವುದು)
೯. ಸೋಲು ನಿಶ್ಚಿತವೆ೦ದಿದ್ದರೂ ಛಲ ಬಿಡದೆ ಗೆಲುವಿನತ್ತ ಸಾಗುವುದೇ ನಿಜವಾದ ವೀರನ ಲಕ್ಷಣ!
೧೦. ನಮ್ಮ ಒಳ್ಳೆಯತನವೇ ನಮ್ಮ ನಿಜವಾದ ಬ೦ಡವಾಳ! ಬಡ್ಡಿ ಶೀಘ್ರವಾಗಿ ದೊರೆಯದಿದ್ದರೂ ನಿಧಾನವಾಗಿಯಾದರೂ ಪಡೆಯಬಹುದು!
೧೧. ಜೀವನದಲ್ಲಿ ಅತಿ ಹೆಚ್ಚಿನ ಸ್ವಾರ್ಥವು ಕೆಲವೊಮ್ಮೆ ಮೌಲ್ಯಯುತ ನಿರೀಕ್ಷೆಗಳು ವಿಫಲಗೊಳ್ಳುವಲ್ಲಿ ಹಾಗೂ ಮೌಲ್ಯಯುತ ವಸ್ತುಗಳ/ವ್ಯಕ್ತಿಗಳ/ಭಾವನೆಗಳನ್ನು ಕಳೆದುಕೊಳ್ಳುವಲ್ಲಿ ಪರ್ಯಾವಸಾನಗೊಳ್ಳುತ್ತದೆ!
೧೨. ನಾವು ನಮ್ಮ ಪ್ರತ್ಯೇಕತೆಗಳಿ೦ದಲೇ “ಇತರರಿಗಿ೦ತ ಭಿನ್ನರು“ ಎ೦ದು ಸಮಾಜದಲ್ಲಿ ಗುರುತಿಸಲ್ಪಡುತ್ತೇವೆ! ದುರದೃಷ್ಟವಶಾತ್ ನಾವು ಯಾವಾಗಲೂ ಇತರರ೦ತಾಗಲು ಪ್ರಯತ್ನಿಸುತ್ತಲೇ ಇರುತ್ತೇವೆ!
೧೩. ಕಳೆದುಕೊಳ್ಳಲು ಬೇರೇನೂ ಉಳಿದಿಲ್ಲವೆ೦ಬುದು ನಮ್ಮ ಕೊನೆಯ ನಿಲುವಾದರೂ... ನಾವು ಕಳೆದುಕೊಳ್ಳುತ್ತಲೇ ಇರುತ್ತೇವೆ!
೧೪. ಹಸಿದ ಹೊಟ್ಟೆಯವನಿಗೆ ಧರ್ಮದ ಕುರಿತು ಉಪನ್ಯಾಸ ನೀಡಿದರೇನೂ ಪ್ರಯೋಜನವಿಲ್ಲ! ಮೊದಲು ಆತನ ಹೊಟ್ಟೆಯ ಹಸಿವನ್ನು ನೀಗಿಸಬೇಕು- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೫. ಸತ್ಯಕ್ಕೆ ಒ೦ದೇ ಮುಖವಲ್ಲ,ಅದಕ್ಕೆ ಅನೇಕ ಮುಖಗಳಿವೆ! ಸತ್ಯದ ಒ೦ದೇ ಮುಖವನ್ನು ಕ೦ಡು “ ಇದು ಇಷ್ಟೇ “ ಎ೦ಬ ನಿರ್ಣಯಕ್ಕೆ ಬರಲಾಗದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

ಸತ್ಸಂಗ

ಹಾಸನದ ಶ್ರೀ ಶಂಕರಮಠಕ್ಕೆ ಆಗಮಿಸಿದ್ದ ಹೊಳೇನರಸೀಪುರ ಅಧ್ಯಾತ್ಮಪ್ರಕಾಶ ಕಾರ್ಯಾಲಯದ ಸ್ವಾಮೀಜಿಯವರಾದ ಪೂಜ್ಯಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ನಮ್ಮ ಮನೆಯಲ್ಲಿ ಸತ್ಸಂಗವನ್ನು ನಡೆಸಿ ಕೊಟ್ಟರು ಸತ್ಸಂಗದಲ್ಲಿ ನಾನು ರಚಿಸಿದ್ದ ಹಾಡುಗಳನ್ನು ಶ್ರೀಮತೀ ಲಲಿತಾ ರಮೇಶ್ ಅವರು ಸುಶ್ರಾವ್ಯವಾಗಿ ಹಾಡಿದರು. ಸ್ವಾಮೀಜಿಯವರು ಹಾಡನ್ನು ತದೇಕಚಿತ್ತದಿಂದ ಆಲಿಸಿದರಲ್ಲದೆ ಹಾಡಿನಲ್ಲಿರುವ ಆಧ್ಯಾತ್ಮಿಕ ಸಂದೇಶದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಳಿಗ್ಗೆ ಸುಮಾರು ೧೦ಗಂಟೆಯಿಂದ ಒಂದು ಗಂಟೆಗೂ ಮೀರಿ ನಡೆದ ಸತ್ಸಂಗವು ಸಾರ್ಥಕವಾಯ್ತೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿತ್ತು.






ಹಾಸನದ ಶ್ರೀಶಂಕರಮಠದಲ್ಲಿ ವೇದಾಂತ ಸಪ್ತಾಹ

ಹಾಸನದ ಶ್ರೀಶಂಕರಮಠದಲ್ಲಿ ಕಳೆದ ಒಂದುವಾರ ಕಾಲ ವೇದಾಂತ ಸಪ್ತಾಹವು ನಡೆಯಿತು.ಕೇವಲ ನಾಲ್ಕು ದಿನಗಳು ನಾನು ಈ ಪ್ರವಚನಗಳಲ್ಲಿ ಪಾಲ್ಗೊಳ ಲು ಸಾಧ್ಯ ಸಾಧ್ಯವಾಗಿದ್ದು ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ಒಂಬತ್ತನೇ ಶ್ಲೋಕದ ಬಗ್ಗೆ ಹೊಳೇನರಸೀಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಪೂಜ್ಯ ಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ಮಾಡಿದ ಪ್ರವಚನದ ಧ್ವನಿಯನ್ನು ಹಾಗೂ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.








Wednesday, June 1, 2011

ಅವರವರ ಭಾವಕ್ಕೆ...



 



ವೇದಸುಧೆ ಬಳಗದ ಶ್ರೀ ಹೆಚ್ .ಎನ್.ಪ್ರಕಾಶ್ ಅವರು ಈ ಕೆಳಗಿನ ಚಿತ್ರಗಳನ್ನು ಪ್ರಕಟಿಸಲು ಕಳುಹಿಸಿಕೊಟ್ಟಿದ್ದಾರೆ.ಓದುಗರ ಮನದಲ್ಲಿ ಮೂಡುವ ಭಾವನೆಗಳನ್ನು ವೇದಸುಧೆಯು ಸ್ವಾಗತಿಸುತ್ತದೆ.

This happened in Kalika Mata temple in Ratlam,M.P., last month. Pictures tell the true story. The Saint was telling the story of Ramayana and "Hanumanji" appeared in the form of langur !! The langur first went and sat near the singers and listened to the kirtan, held the mic of the mahantji, got blessed by him,then "blessed" the saints and then sat in front of Shri Ramji's photo and took some of the flowers (note similar position to Shri Hanumanji in the framed picture) and left quietly.
Bolo Siyavar Ramchandra ki Jai. PavanasutaHanuman ki Jai.