Pages

Friday, August 31, 2012

ಬ್ರಹ್ಮಸೂತ್ರಗಳು

          ಬ್ರಹ್ಮ(ಪರಿಪೂರ್ಣ ಭಗವಂತ)ನಿಗೆ ಸಂಭಂದಪಟ್ಟ ವಿಷಯದ ಕುರಿತಾಗಿ ಸರ್ವ ರೀತಿಯಿಂದಲೂ ಸಂಪೂರ್ಣವಾಗಿ ಚರ್ಚಿಸುವುದರಿಂದ ಈ ಕೃತಿಗೆ ಆ ಹೆಸರು ಬರಲು ಮೂಲ ಕಾರಣ. ಅದನ್ನು ನಾನಾ ವಿಧವಾದ ಹೆಸರುಗಳಿಂದಲೂ ಕರೆಯುತ್ತಾರೆ, ಅವು ಈ ರೀತಿಯಾಗಿ ಇವೆ:
೧) ವೇದಾಂತ ಸೂತ್ರಾ - ಇದು ವೇದಾಂತ ಅಥವಾ ಉಪನಿಷತ್ತಿನ ವಿಷಯಕ್ಕೆ ಸಂಭಂದಿಸಿದ್ದರಿಂದ,
೨) ಶಾರೀರಿಕ ಸೂತ್ರಾ - ಏಕೆಂದರೆ ಇದು ಶರೀರದಲ್ಲಿ ನೆಲೆಸಿರುವ ಆತ್ಮನ ವಿಚಾರವಾಗಿ ಚರ್ಚಿಸುವುದರಿಂದ,
೩) ಉತ್ತರ ಮೀಮಾಂಸ ಸೂತ್ರಾ - ಪೂರ್ವ ಮೀಮಾಂಸಕ್ಕೆ ವಿರುದ್ಧವಾಗಿ; ಏಕೆಂದರೆ ಇದು ವೇದಗಳ ಉತ್ತರ ಅಥವಾ ಅಂತಿಮ ಭಾಗಗಳ ಕುರಿತಾಗಿ ಮೀಮಾಂಸ ಅಥವಾ ಜಿಜ್ಞಾಸೆ ಮಾಡುವುದರಿಂದ.(ಜಿಜ್ಞಾಸೆ ಎಂದರೆ ಸಾಮಾನ್ಯ ಅರ್ಥದಲ್ಲಿ ವಿಚಾರಣೆ),
೪) ಭಿಕ್ಷುಸೂತ್ರಾ - ಏಕೆಂದರೆ ಈ ದರ್ಶನವು ವಿಶೇಷವಾಗಿ ’ಭಿಕ್ಷು’ಗಳು ಅಥವಾ ’ಸನ್ಯಾಸಿ’ಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದರಿಂದ.

ರಚನಕಾರ ಬಾದರಾಯಣ
         
          ಈ ಮಹತ್ತರ ಕೃತಿಯ ರಚನಕಾರನಾದ ಬಾದರಾಯಣನ ಬಗ್ಗೆ ಹೆಚ್ಚೇನೂ ತಿಳಿದು ಬಂದಿಲ್ಲ. ಸಂಪ್ರದಾಯವಾದಿಗಳು ಇವನನ್ನು ಮಹಾಭಾರತ ಮತ್ತು ಪುರಾಣಗಳ ಕರ್ತೃವಾದ ವ್ಯಾಸನೊಂದಿಗೆ ಏಕೀಭವಿಸುತ್ತಾರೆ; ಏಕೆಂದರೆ ಕೆಲವು ಭಾರತೀಯ ಹಾಗೂ ಪಾಶ್ಚಿಮಾತ್ಯ ಪಂಡಿತರ ಅಭಿಮತದಂತೆ ಈ ಕೃತಿಯು ಕ್ರಿ.ಪೂ. ೫೦೦ ರಿಂದ ಕ್ರಿ. ಪೂ. ೨೦೦ರ ಮಧ್ಯಕಾಲದಲ್ಲಿ ರಚಿತವಾಗಿದೆ. ಅದರೆ ಇನ್ನಿತರ ವಿದ್ವಾಂಸರು ಈ ಮಹಾಭಾರತದ ವ್ಯಾಸ ಮತ್ತು ವೇದಾಂತಸೂತ್ರಗಳ ವ್ಯಾಸ ಇಬ್ಬರೂ ಬೇರೆಯೆಂದು ಪ್ರತಿಪಾದಿಸಿ ಬಾದರಾಯಣನ ಕಾಲವನ್ನು ಕ್ರಿ. ಶ. ೨೦೦ಕ್ಕೆ ಮುಂದೂಡುತ್ತಾರೆ. 

ಕೃತಿಯ ಬಗ್ಗೆ

          ಬ್ರಹ್ಮಸೂತ್ರವು ನಾಲ್ಕು ಅಧ್ಯಾಯ ಅಥವಾ ವಿಭಾಗಗಳನ್ನು ಒಳಗೊಂಡಿದೆ. ಪ್ರತಿಯೊಂದು ಅಧ್ಯಾಯವು ನಾಲ್ಕು ಪಾದಗಳಾಗಿ ಉಪವಿಭಾಗಗೊಂಡಿದೆ. ಪಾದಗಳು ಅಧಿಕರಣ ಅಥವಾ ವಿಷಯಗಳನ್ನು ಒಳಗೊಂಡಿವೆ ಮತ್ತು ಆ ವಿಷಯಗಳು ಸೂತ್ರರೂಪದಲ್ಲಿವೆ.

          ಆದಿ ಭಾಷ್ಯಕಾರರಾದ ಶಂಕರರು ಬ್ರಹ್ಮಸೂತ್ರವು ಒಟ್ಟು ೧೯೧ ಅಧಿಕರಣಗಳನ್ನು ಹೊಂದಿದ್ದು; ೫೫೫ ಸೂತ್ರಗಳನ್ನು ಒಳಗೊಂಡಿದೆ ಎಂದು ಉಲ್ಲೇಖಿಸಿದ್ದಾರೆ. ಒಂದೇ ಕೃತಿಯ ವಿವಿಧ ಆವೃತ್ತಿಗಳಲ್ಲಿ ಮತ್ತು ಬೇರೆ ಬೇರೆ ಕೃತಿಗಳಲ್ಲಿ ಈ ಸಂಖ್ಯೆಯ ಬಗ್ಗೆ ಹಲವಾರು ವ್ಯತ್ಯಾಸಗಳು ಕಂಡು ಬರುತ್ತದೆ. ಒಂದು ಸೂತ್ರವನ್ನು ಎರಡಾಗಿ ವಿಭಾಗಿಸುವುದು, ಅಥವಾ ಎರಡು ಸೂತ್ರಗಳನ್ನು ಒಂದೇ ಆಗಿ ಪರಿಗಣಿಸುವುದು ಅಥವಾ ಒಂದು ಸೂತ್ರದ ಕಡೆಯ ಶಬ್ದವನ್ನು ಇನ್ನೊಂದು ಸೂತ್ರದ ಮೊದಲನೆಯ ಪದವನ್ನಾಗಿ ಓದಿಕೊಳ್ಳುವುದು, ಮುಂತಾದವುಗಳಿಂದ ಈ ರೀತಿಯ ವ್ಯತ್ಯಾಸ ಉಂಟಾಗಿದೆ. ಈ ರೀತಿಯ ವ್ಯತ್ಯಾಸಗೊಂಡ ಸೂತ್ರಗಳಿಂದಾಗಿ ಹಲವಾರು ವೈವಿಧ್ಯಮಯ ವ್ಯಾಖ್ಯೆಗಳು ಕೂಡ ಹುಟ್ಟಿಕೊಂಡಿವೆ. ಈ ರೀತಿ ವ್ಯತ್ಯಾಸಗೊಂಡ ಸೂತ್ರಗಳನ್ನೇ ’ಪೂರ್ವಪಕ್ಷ’ (ಎದುರಾಳಿಯ ಅಭಿಪ್ರಾಯ)ವೆಂದು ತಿಳಿದು ಕೆಲವೊಂದು ಶಾಖೆಗಳು, ಅವನ್ನು ಸಂಶಯ ಅಥವಾ ಆಕ್ಷೇಪಣೆಯನ್ನು ವ್ಯಕ್ತಪಡಿಸಲು ಉಪಯೋಗಿಸಿಕೊಂಡರೆ; ಇತರೇ ಕೃತಿಕಾರರು ಅವುಗಳನ್ನೇ ತಮ್ಮ ಸಿದ್ಧಾಂತವನ್ನು ಸ್ಥಾಪಿಸಲು ಪೂರಕವಾಗಿ ಬಳಸಿಕೊಂಡಿದ್ದಾರೆ.
         
ಈ ಹಿಂದೆ ತಿಳಿಸಿದಂತೆ ಪ್ರತಿಯೊಂದು ಪಾದವೂ ಹಲವಾರು ಅಧ್ಯಾಯಗಳನ್ನೊಳಗೊಂಡು, ಹಲವಾರು ಅಧಿಕರಣ ಅಥವಾ ವಿಷಯಗಳನ್ನು ಹೊಂದಿದೆ. ಒಂದು ಅಧಿಕರಣವು ನಿಯಮದಂತೆ ಅನುಕ್ರಮವಾಗಿ ಐದು ಹಂತಗಳನ್ನು ಒಳಗೊಂಡಿರಬೇಕು, ಅವೆಂದರೆ:
೧) ವಿಷಯ ೨) ವಿಶಯ ಅಥವಾ ಸಂಶಯ (ಶಂಖೆ), ೩) ಪೂರ್ವಪಕ್ಷ ಅಥವಾ ಎದುರಾಳಿಯ ಅಭಿಪ್ರಾಯ, ೪) ಸಿದ್ಧಾಂತ ಅಥವಾ ದೃಢಪಡಿಸಿಕೊಂಡ ವಿಷಯ ಅಥವಾ ತೀರ್ಮಾನಗೊಂಡ ವಿಷಯ, ೫) ಸಂಗತಿ ಅಥವಾ ವಿವಿಧ ವಿಭಾಗಗಳೊಂದಿಗಿನ ಸಂಭಂದ.

          ಯಾವುದೇ ಅಧಿಕರಣದಲ್ಲಿ ಇರುವ ಸೂತ್ರಗಳ ಸಂಖ್ಯೆಯು ಅಧಿಕರಣದ ವಿಷಯದ ಮೇಲೆ ಆಧಾರಿತವಾಗಿರುತ್ತದೆ. ಸೂತ್ರಗಳಲ್ಲಿ ಇರುವ ದ್ವಂದ್ವದ ಪರಿಣಾಮದಿಂದಾಗಿ ಮತ್ತು ಅಧಿಕರಣದ ಶೀರ್ಷಿಕೆಗಳಿಂದಾಗಿ ಸೂತ್ರಗಳ ಸಂಖ್ಯೆಯು ವ್ಯಾಖ್ಯಾನಕಾರನಿಂದ ವ್ಯಾಖ್ಯಾನಕಾರನಿಗೆ ವ್ಯತ್ಯಾಸಗೊಂಡಿದೆ. ನಿಂಬಾರ್ಕರು (ಕ್ರಿ. ಪೂ. ೧೩ನೇ ಶತಮಾನ) ಕನಿಷ್ಟ ಅಧಿಕರಣಗಳನ್ನು (೧೫೧) ಪ್ರತಿಪಾದಿಸಿದರೆ ಮಧ್ವರು (ಕ್ರಿ. ಪೂ. ೧೨೩೮-೧೩೧೭) ಗರಿಷ್ಟ ಸಂಖ್ಯೆಯ (೨೨೩) ಅಧಿಕರಣಗಳನ್ನು ಪ್ರತಿಪಾದಿಸುತ್ತಾರೆ.

          ಸೂತ್ರದ ಆಶಯವು ’ಷಡ್ವಿಧಲಿಂಗ’ಗಳು ಅಥವಾ ಆರು ಸಂಕೇತಗಳ ತತ್ವಗಳಿಗನುಸಾರವಾಗಿ ವ್ಯಾಖ್ಯಾನಕಾರನಿಂದ ರೂಪಿಸಲ್ಪಡುತ್ತದೆ. ಅವುಗಳೆಂದರೆ: ’ಉಪಕ್ರಮ’ ಮತ್ತು ’ಉಪಸಂಹಾರ’ (ಪ್ರಾರಂಭ ಮತ್ತು ಅಂತ್ಯ), ’ಅಭ್ಯಾಸ’ (ಪುನರಾವರ್ತನೆ ಅಥವಾ ಪುನರುಕ್ತಿ), ’ಅಪೂರ್ವತಾ’ (ಹಿಂದೆ ಇಲ್ಲದ್ದು ಅಥವಾ ಹೊಸತು), ’ಫಲ’ (ಉದ್ದೇಶ),”ಅರ್ಥವಾದ’ (ಸ್ತುತಿ ಅಥವಾ ಗುಣಗಾನ), ಮತ್ತು ’ಉಪಪತ್ತಿ’ (ತರ್ಕಬದ್ಧತೆ).

          ಹೆಸರೇ ಸೂಚಿಸುವಂತೆ ಬ್ರಹ್ಮಸೂತ್ರವು ಮೂಲತಃ ಅತ್ಯುನ್ನತ ಸತ್ಯವಾದ ಬ್ರಹ್ಮದ ಬಗ್ಗೆ ಚರ್ಚಿಸುತ್ತದೆ, ಬ್ರಹ್ಮವೊಂದೇ ಸತ್ಯವಾಗಿದ್ದು, ಅದನ್ನು ಅರಿತುಕೊಂಡವರಿಗೆ ಜನನ ಮರಣಗಳ ಚಕ್ರದಿಂದ ಬಿಡುಗಡೆಯುಂಟಾಗುತ್ತದೆ.  ಬ್ರಹ್ಮನ ಇರುವಿಕೆಯ ಬಗ್ಗೆ ಅಧಿಕಾರಯುತವಾಗಿ ತಿಳಿಸುವುದು ಮತ್ತು ಅದರ ಸ್ವರೂಪವನ್ನು ತಿಳಿಸಿಕೊಡುವುದು ನಮಗೆ ಶ್ರುತಿಗಳು ಅಥವಾ ವೇದಗಳ ಭಾಗವಾದ ಜ್ಞಾನಕಾಂಡದಲ್ಲಿ (ಬ್ರಹ್ಮ ಮತ್ತು ಆತ್ಮನ ಸ್ವರೂಪವನ್ನು ತಿಳಿಸಿಕೊಡುವ ಭಾಗಗಳು) ಬರುವ ಉಪನಿಷತ್ತುಗಳು. ಮನುಷ್ಯನ ಬುದ್ಧಿವಂತಿಕೆ ಅಥವಾ ಅರಿವು ಇಂದ್ರಿಯಗಳ ಮೂಲಕ ಅನುಭವಕ್ಕೆ ಬರುವುದರಿಂದ ಬ್ರಹ್ಮನನ್ನು ಅದರಿಂದ ಅರಿಯುವುದು ಸಾಧ್ಯವಿಲ್ಲ; ಏಕೆಂದರೆ ಬ್ರಹ್ಮವು ಶುದ್ಧ ಚೈತನ್ಯವಾಗಿದ್ದು, ಅದು ಇಂದ್ರಿಯಗಳಿಗೆ ಗೋಚರವಾಗದು. ಅದಕಾರಣ ದ್ರಷ್ಟ್ರಾರರಾದ ಋಷಿಗಳಿಂದ ಗ್ರಹಿಸಲ್ಪಟ್ಟ ಶ್ರುತಿಗಳು ಮಾತ್ರವೇ ನಮಗೆ ಬ್ರಹ್ಮನ ಸ್ವರೂಪವನ್ನು ತಿಳಿಸಿಕೊಡಬಲ್ಲ ಏಕೈಕ ಸಾಧನ.  ಆದ್ದರಿಂದ ಬ್ರಹ್ಮಸೂತ್ರವು ಶ್ರುತಿಗಳ (ಉಪನಿಷತ್ತುಗಳ) ಆಧಾರದ ಮೇಲೆ ರಚಿಸಲ್ಪಟ್ಟಿದೆ.

          ಈಗ ಬ್ರಹ್ಮಸೂತ್ರಕ್ಕೆ ಮೂಲ ವಸ್ತುವಾದ ಉಪನಿಷತ್ತುಗಳ ವಾಕ್ಯಗಳ ಬಗ್ಗೆ ಚಿಂತಿಸೋಣ. ಇವುಗಳು ಒಂದಕ್ಕೊಂದು ವೈರುದ್ಧತೆಯಿಂದ ಕೂಡಿದ ನುಡಿಗಟ್ಟುಗಳಾಗಿ ಕಂಡುಬಂದದ್ದರಂದ ಬಾದರಾಯಣನು ಅವನ್ನೆಲ್ಲಾ ಸಮನ್ವಯಗೊಳಿಸಿ ಎಲ್ಲರೂ ಒಪ್ಪಿಕೊಳ್ಳಬಹುದಾದಂತಹ ಹೊಸ ತತ್ವವೊಂದನ್ನು ರೂಪಿಸಿದ. ಈ ರೀತಿ ಮಾಡುವಾಗ ಬಾದರಾಯಣನು ಸಹಜವಾಗಿಯೇ ಸನಾತನವಾದ ಉಪನಿಷತ್ತುಗಳನ್ನು ಆಯ್ಕೆ ಮಾಡಿಕೊಂಡ. ಬಾದರಾಯಣನು ತನ್ನ ಸೂತ್ರಗಳಲ್ಲಿ ಉಲ್ಲೇಖಿಸಿರುವ ಈ ಉಪನಿಷತ್ತುಗಳು ಮತ್ತು ಅವುಗಳಲ್ಲಿ ಆಯ್ದುಕೊಂಡ ವಾಕ್ಯಗಳಾದರೂ ಯಾವುವು? ಸೂತ್ರಗಳು ಬಹಳ ಸಂಕ್ಷಿಪ್ತವಾಗಿರುವುದರಿಂದ ಅವುಗಳ ಮೂಲ ಉಪನಿಷತ್ತಿನ ಬಗ್ಗೆ ಸೂಚನೆಗಳು ದೊರೆಯುವುದಿಲ್ಲ. ಆ ಉಪನಿಷತ್ತುಗಳ ಮೂಲಕ್ಕಾಗಿ ನಾವು ಭಾಷ್ಯಕಾರರು ಅಥವಾ ವ್ಯಾಖ್ಯಾನಕಾರರ ಮೇಲೆ ಅವಲಂಭಿಸಬೇಕಾಗುತ್ತದೆ; ಅದೃಷ್ಟವಶಾತ್ ಎಲ್ಲಾ ವ್ಯಾಖ್ಯಾನಕಾರರು ಅವುಗಳ ಬಗ್ಗೆ ಏಕರೂಪವಾದ ಸುಳಿವುಗಳನ್ನು ಕೊಡುತ್ತಾರೆ.

          ಆದಿಶಂಕರರ ಭಾಷ್ಯದ ಪ್ರಕಾರ ಮೊದಲ ೩೧ ಅಧಿಕರಣಗಳಲ್ಲಿ ವಿಷಯ ಅಥವಾ ವಿಷಯವಾಕ್ಯಗಳಿಗೆ ಸಂಭಂದಪಟ್ಟ ಪ್ರಮುಖವಾದ ನುಡಿಗಟ್ಟುಗಳು ಅಥವಾ ವಾಕ್ಯಗಳನ್ನು ಒದಗಿಸುವ ಉಪನಿಷತ್ತುಗಳು ಆವರಣದಲ್ಲಿ ನಮೂದಿಸಿರುವ ಸಂಖ್ಯೆಗನುಗುಣವಾಗಿ ಈ ರೀತಿ ಇವೆ.
         
ಛಾಂದೋಗ್ಯ (೧೪), ಬೃಹದಾರಣ್ಯಕ (೫), ಕಠಾ (೪), ತೈತ್ತರೀಯ (೨), ಮುಂಡಕ (೩), ಪ್ರಶ್ನ (೧) ಮತ್ತು ಕೌಶೀತಕಿ (೨),

          ಉಳಿದ ದರ್ಶನಕಾರರ ಅಭಿಪ್ರಾಯಗಳನ್ನು ಮತ್ತು ಅವರು ಬೇರೆ ಬೇರೆ ಉಪನಿಷತ್ತುಗಳ ವಾಕ್ಯ ಪಂಕ್ತಿಗಳನ್ನು ಬಳಸಿಕೊಳ್ಳುವುದರ ಔಚಿತ್ಯವನ್ನು ಬಾದರಾಯಣನು ತನ್ನ ವಿಶ್ಲೇಷಣೆಯಲ್ಲಿ ಉಲ್ಲೇಖಿಸಿದ್ದಾನೆ. ಹೀಗೆ ಉಲ್ಲೇಖಿಸಲ್ಪಟ್ಟಿರುವ ಇತರ ದರ್ಶನಕಾರರೆಂದರೆ; ಆತ್ರೇಯ, ಆಶ್ಮರಾಥ್ಯ, ಔದುಲೋಮಿ, ಕಾರ್ಷ್ಣಾಜನಿ, ಕಾಶಕೃತ್ಸ್ನ, ಜೈಮಿನಿ ಮತ್ತು ಬಾದರಿ. ಸ್ವಲ್ಪ ಹೆಚ್ಚು ಕಡಿಮೆ ಈ ಎಲ್ಲಾ ಹೆಸರುಗಳು ಪುರಾತನ ಕೃತಿಗಳಾದ ಶ್ರೌತಸೂತ್ರ ಮತ್ತು ಗೃಹ್ಯಸೂತ್ರಗಳಲ್ಲಿ ಕಂಡುಬರುತ್ತವೆ. ಕೆಲವು ಕೃತಿಕಾರರು ಬಾದರಾಯಣನ ಕಾಲಕ್ಕಿಂತಲೂ ಹಿಂದಿನವರಾದರೆ ಜೈಮಿನಿ ಮೊದಲಾದವರು ಅವನ ಸಮಕಾಲೀನರೆಂದು ತೋರುತ್ತದೆ. ಬಾದರಾಯಣನು ಅವರೊಂದಿಗೆ ಅಭಿಪ್ರಾಯಭೇದವನ್ನು ಹೊಂದಿದ್ದರೂ ಕೂಡ ಅವರ ಅಭಿಪ್ರಾಯಗಳನ್ನು ಖಂಡಿಸಿಲ್ಲ; ಬಹುಶಃ ಅವರು ಉಪನಿಷತ್ತುಗಳು ಅತ್ಯುನ್ನತ ಸತ್ಯವಾದ ಬ್ರಹ್ಮವನ್ನು ಅರಿಯುವಲ್ಲಿ ಅಧಿಕಾರಯುತವಾದ ಮೂಲಗ್ರಂಥಗಳೆಂದು ಒಪ್ಪಿಕೊಂಡಿದ್ದರೆನ್ನುವುದು ಒಂದು ಕಾರಣವಾದರೆ ಮತ್ತೊಂದು ಕಾರಣ ಅವರು ಕೂಡ  ಖ್ಯಾತಿವೆತ್ತ ವೇದಾಂತಿಗಳಾಗಿದ್ದರು ಎನ್ನುವುದು. 

ಗುಣ ಮತ್ತು ಸ್ವಭಾವ

ಸರ್ವಸ್ಯ ಹಿ ಪರೀಕ್ಷ್ಯಂತೇ ಸ್ವಭಾವಾ ನೇತರೇ ಗುಣಾಃ ।
ಅತೀತ್ಯ ಹಿ ಗುಣಾನ್ ಸರ್ವಾನ್ ಸ್ವಭಾವೋ ಮೂರ್ಧ್ನಿ ವರ್ತತೇ ॥ 

ಎಲ್ಲರೂ (ಎಲ್ಲರ) ಮನುಷ್ಯರ ಸ್ವಭಾವವನ್ನು ಪರೀಕ್ಷಿಸುತ್ತಾರೆ; ಇತರ ಗುಣಗಳನ್ನಲ್ಲ. ಏಕೆಂದರೆ ಎಲ್ಲಗುಣಗಳನ್ನೂ ಮೀರಿಸಿ ಸ್ವಭಾವವು ಎಲ್ಲವುದಕ್ಕೂ ಮೇಲಿರುತ್ತದೆ. ಗುಣ ಮತ್ತು ಸ್ವಭಾವ ಪ್ರತ್ಯೇಕವಾಗಿರುತ್ತವೆ