Pages

Tuesday, November 23, 2010

ವೇದಸುಧೆ ಬಳಗದ ಆತ್ಮೀಯ ಸ್ವಾಗತ

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮ,ಶ್ರೀ ಜಿ.ಎಸ್.ಶ್ರೀನಾಥ್,ಶ್ರೀ ಹೆಚ್.ಎಸ್.ಪ್ರಭಾಕರ್,ಶ್ರೀ ಪರಾಂಜಪೆ ಕೆ.ಎನ್,ಶ್ರೀ ಬೆಳ್ಳಾಲ ಗೋಪಿನಾಥರಾವ್,ಡಾ|| ಹೆಚ್.ಆರ್.ಶ್ರೀಪಾದ್-ಇವರುಗಳು ವೇದಸುಧೆಯ ಆಹ್ವಾನವನ್ನು ಮನ್ನಿಸಿ ಲೇಖಕರಾಗಿ ವೇದಸುಧೆಯಲ್ಲಿ ಬರೆಯಲು ಒಪ್ಪಿದ್ದು, ಈಗಾಗಲೇ ಶ್ರೀ ಶರ್ಮರು ಲೇಖನವನ್ನು ಪ್ರಕಟಿಸಿರುತ್ತಾರೆ. ಎಲ್ಲರಿಗೂ ವೇದಸುಧೆ ಬಳಗದ ಆತ್ಮೀಯ ಸ್ವಾಗತ ವನ್ನು ಕೋರುತ್ತೇವೆ. ಆಡಿಯೋ ಸರಿಯಾಗಿ ತೆರೆದುಕೊಳ್ಳುತ್ತಿಲ್ಲವೆಂಬ ಮಾತು ಕೇಳಿಬಂದಿದೆ. ಹಾಗೊಂದು ವೇಳೆ ಆಡಿಯೋ ಸಮಸ್ಯೆ ಇದ್ದರೆ ದಯಮಾಡಿ ವೇದಸುಧೆಗೆ ಮೇಲ್ ಮಾಡಿ.
vedasudhe@gmail.com

ಕಲ್ಲಿನಲ್ಲಿ ವಿಗ್ರಹ

ವ್ಯಕ್ತಿಯೊಬ್ಬನು ಶಿಲ್ಪಿಗೆ ಕೇಳಿದ- "ಇಷ್ಟು ಸುಂದರವಾದ ವಿಗ್ರಹವನ್ನು ಕಲ್ಲಿನಿಂದ ಹೇಗೆ ಕೆತ್ತುತ್ತೀಯಾ?"
ಶಿಲ್ಪಿ ಹೇಳಿದ - " ನಾನು ವಿಗ್ರಹವನ್ನು ಕೆತ್ತುವುದಿಲ್ಲ. ಅದಾಗಲೇ ವಿಗ್ರಹವು ಕಲ್ಲಿನಲ್ಲಿದೆ, ಆದರೆ ನಾನು ಅದರೊಟ್ಟಿಗಿರುವ ಅನಗತ್ಯವಾದ ಕಲ್ಲನ್ನು ತೆಗೆದು ಹಾಕುವೆ"
ಜೀವನವೂ ಹಾಗೆಯೇ ಅಲ್ಲವೇ? ಆನಂದವೆಂಬುದು ಅದಾಗಲೇ ನಮ್ಮಲ್ಲಿದೆ. ಆದರೆ  ಅದರೊಟ್ಟಿಗಿರುವ  ಅನಗತ್ಯವಾದ ಚಿಂತೆಯನ್ನು ತೆಗೆದುಹಾಕಬೇಕಷ್ಟೆ.

ಗಂಡನ ಮನೆಯಲ್ಲಿ ವಿರಾಜಿಸು


ಬ್ರಹ್ಮಾಪರಂ ಯುಜ್ಯತಾಂ ಬ್ರಹ್ಮ ಪೂರ್ವಂ

ಬ್ರಹ್ಮಾಂತತೋ ಮಧ್ಯತೋ ಬ್ರಹ್ಮ ಸರ್ವತಃ ಅನಾವ್ಯಾಧಾಂ ದೇವಪುರಾಂ ಪ್ರಪದ್ಯ

ಶಿವಾ ಸ್ಯೋನಾ ಪತಿಲೋಕೇ ವಿ ರಾಜ

(ಅಥರ್ವ.೧೪.೧.೬೪)

(ಹೇ ನಾರಿ!) [ಅಪರಮ್] (ನಿನ್ನ) ಎದುರಿನಲ್ಲಿ, [ಬ್ರಹ್ಮ ಯುಜ್ಯತಾಮ್] ವೇದವು ಇರಲಿ. [ಪೂರ್ವಮ್] ಹಿಂದೆ (ವೇದವಿರಲಿ). [ಮಧ್ಯತಃ ಅಂತತಃ] ಮಧ್ಯದಲ್ಲಿ ಮತ್ತು ಕೊನೆಯಲ್ಲಿ, [ಬ್ರಹ್ಮ] ವೇದವು (ಇರಲಿ). [ಸರ್ವತಃ] ಎಲ್ಲೆಡೆಯಿಂದಲೂ, [ಬ್ರಹ್ಮ] ವೇದವು (ಸುತ್ತುವರೆದಿರಲಿ). [ಅನಾವ್ಯಾಧಾಮ್] ತೊಂದರೆಗಳಿಲ್ಲದ, [ದೇವಪುರಾಮ್] ಗೃಹಸ್ಥಾಶ್ರಮವನ್ನು, [ಪ್ರಪದ್ಯ] ಹೊಂದಿ, [ಶಿವಾ ಸ್ಯೋನಾ] ಮಂಗಳಕಾರಿಣಿಯೂ, ಸುಖಕಾರಿಣಿಯೂ (ಆಗಿ), [ಪತಿಲೋಕೇ ವಿ ರಾಜ] ಗಂಡನ ಮನೆಯಲ್ಲಿ ವಿರಾಜಿಸು.

ಜಗತ್ತಿನಲ್ಲಿ ಸರ್ವವ್ಯಾಪಕವಾದ, ನಿರಾಕಾರವಾದ ವಿಶ್ವಚೇತನಶಕ್ತಿಯನ್ನು ಬಿಟ್ಟರೆ, ಉಳಿದಂತೆ ಇರುವ ಅಲ್ಪಚೇತನಶಕ್ತಿಯೇ ಜೀವಾತ್ಮ. ಈ ಜೀವಾತ್ಮವು ಮುಕ್ತಿ, ಮೋಕ್ಷ, ಆನಂದದ ಕಡೆಗೆ ಹೋಗಲು ತೀವ್ರವಾದ ಪ್ರಯತ್ನ ಮಾಡಲಿರುವ ಅವಕಾಶವೇ ಕರ್ಮಯೋನಿ, ಮನುಷ್ಯ ಜನ್ಮ. ಸಾಧನವೇ ಮನುಷ್ಯ ಶರೀರ, ಹೆಣ್ಣಾಗಬಹುದು, ಗಂಡಾಗಬಹುದು. ಸಾಧಕ ಆತ್ಮ, ಗಂಡೂ ಅಲ್ಲ, ಹೆಣ್ಣೂ ಅಲ್ಲ. ವೇದಗಳು ಸಾಧಕ ಆತ್ಮಕ್ಕೆ ಮಾರ್ಗದರ್ಶನ ನೀಡಿದೆ ಎಂದ ಮೇಲೆ, ಶರೀರದ ಹಂತದ ಭೇದ - ಗಂಡು, ಹೆಣ್ಣು - ಮುಖ್ಯವಾಗುವುದೇ ಇಲ್ಲ! ಇಷ್ಟು ಸರಳವಾಗಿರುವುದನ್ನು ಅರ್ಥಮಾಡಿಕೊಳ್ಳಲು ತಿಣುಕುವವರಿದ್ದಾರೆ!!

ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೊರಡುವ ಸನ್ನಿವೇಶದಲ್ಲಿ ಹೇಳಿದಂತಿದೆ ಮೇಲಿನ ಮಂತ್ರ. ‘ಬ್ರಹ್ಮ’ ಎಂದರೆ ಜ್ಞಾನ, ವೇದಜ್ಞಾನ, ಸತ್ಯಜ್ಞಾನ. ನಿನ್ನ ಹಿಂದೆ, ಮುಂದೆ ವೇದವಿರಲಿ. ಜೀವನದ ಪ್ರತಿಹೆಜ್ಜೆಯಲ್ಲೂ ಮಾರ್ಗದರ್ಶನಕ್ಕೆ ಅವುಗಳಿರಲಿ. ಅವುಗಳ ಮಾರ್ಗದರ್ಶನದಲ್ಲಿ ಜೀವನವನ್ನು ನಡೆಸಿದಾಗ ಅದು ನಿಜವಾದ ಮಾನವೀಯ ಜೀವನವಾಗುತ್ತದೆ. ಮಾನವರು ಮಾನವೀಯ ಜೀವನ ನಡೆಸಿದಾಗಲ್ಲವೇ ಸುಖ, ಶಾಂತಿ, ನೆಮ್ಮದಿ?! ಜೀವನದಲ್ಲಿ ಪ್ರತಿ ಹೆಜ್ಜೆಯಲ್ಲೂ ಅವಶ್ಯಕವಿರುವ ಜ್ಞಾನವನ್ನು ವೇದಗಳು ನೀಡುತ್ತವೆ. ಮಗಳ ಕರ್ತವ್ಯ, ಹೆಂಡತಿಯ ಕರ್ತವ್ಯ, ತಾಯಿಯ ಕರ್ತವ್ಯ, ಸೊಸೆಯ ಕರ್ತವ್ಯ, ಅತ್ತಿಗೆಯ ಕರ್ತವ್ಯ, ಒಟ್ಟಿನಲ್ಲಿ ಪ್ರತಿಯೊಂದು ಸಂಬಂಧದ ವಿಶೇಷತೆಯನ್ನು ಅರ್ಥಮಾಡಿಕೊಂಡು ಅದರಂತೆ ಮಾಡಬೇಕಾದ ಕರ್ತವ್ಯಗಳನ್ನು ವೇದಗಳಲ್ಲಿ ಕಾಣಬಹುದು, ಬೀಜರೂಪದಲ್ಲಿ! ಮೂಲವಿಚಾರ ದೊರೆತಮೇಲೆ ಅದನ್ನು ಮೂಲಕ್ಕೆ ಧಕ್ಕೆ ಬಾರದಂತೆ ವಿಸ್ತರಿಸಿಕೊಳ್ಳುವುದು ನಮ್ಮ ಶ್ರದ್ಧೆ ಮತ್ತು ಮೇಧಾಶಕ್ತಿಗಳಿಗೆ ಬಿಟ್ಟಿದ್ದು.

ಜೀವನದ ಮಧ್ಯಭಾಗದಲ್ಲಿ, ಕೊನೆಯಭಾಗದಲ್ಲಿಯೂ ವೇದಗಳು ನಮ್ಮೊಟ್ಟಿಗಿರಲಿ. ಬ್ರಹ್ಮಚರ್ಯಾಶ್ರಮದಲ್ಲಿ ಜೀವನಕ್ಕೆ ಇಳಿದುಬಂದ ವೇದಗಳು ಜೀವನವಿಡೀ ನಮ್ಮೊಡನೆ ಇರಲು ಯೋಗ್ಯವಾದವು. ಬಿಡಲು ಸಲ್ಲ. ಒಟ್ಟಿನಲ್ಲಿ ಎಲ್ಲೆಡೆಯೂ, ಎಲ್ಲ ಅವಸ್ಥೆಗಳಲ್ಲೂ, ಎಲ್ಲ ಕಾಲದಲ್ಲೂ ದಾರಿತೋರುವ ಬೆಳಕಿದು.

ಗೃಹಸ್ಥಾಶ್ರಮವೆಂದರೆ ವಿಶೇಷವಾದ ಹೊಣೆಗಾರಿಕೆಗಳು. ವಿ + ವಹನ, ಹೊಣೆಗಾರಿಕೆಗಳನ್ನು ವಹಿಸಿಕೊಳ್ಳುವುದು = ವಿವಾಹ. ವಿಶೇಷ ಸಂದರ್ಭಗಳಲ್ಲಂತೂ ವೇದಗಳ ಮಾರ್ಗದರ್ಶನದ ಅವಶ್ಯಕತೆ ಮತ್ತೂ ಹೆಚ್ಚೇ ಇರುತ್ತದೆ. ಕರ್ತವ್ಯ ನಿರ್ವಹಣೆಗೆ ಉತ್ಸಾಹ, ಆರೋಗ್ಯಗಳು ಮುಖ್ಯ. ಮುಂದಿನ ಜೀವನ ಗಂಡನ ಮನೆಯಲ್ಲಿ, ಅದೇ ಮುಂದಿನ ಕಾರ್ಯಕ್ಷೇತ್ರ = ದೇವಪುರ. ಆ ಕಾರ್ಯಕ್ಷೇತ್ರದಲ್ಲಿ ತನಗೂ, ಇತರರಿಗೂ ಮಂಗಳವನ್ನು ಉಂಟುಮಾಡುವುದು, ಸುಖ-ಸಂತೋಷಗಳನ್ನು ಉಂಟುಮಾಡುವುದು ಕರ್ತವ್ಯವೆನಿಸುತ್ತದೆ. ಇದರರ್ಥ ಅಲ್ಲಿರುವವರ ನಿರೀಕ್ಷೆಗಳನ್ನು ಪೂರೈಸುವುದು ಎಂದಷ್ಟೇ ಅಲ್ಲ. ಅಲ್ಲಿರುವವರ ಆರೋಗ್ಯಕರ ನಿರೀಕ್ಷೆಗಳನ್ನು ಪೂರೈಸುವುದಷ್ಟೇ ಅಲ್ಲದೆ, ಅವರ ಅನಾರೋಗ್ಯಕರ ನಿರೀಕ್ಷೆಗಳನ್ನು ಎದುರಿಸಿ, ತಿದ್ದಿ ಸನ್ಮಾರ್ಗಕ್ಕೆ ತರುವವರೆಗೂ ಹೊಣೆಯಿರುತ್ತದೆ. ಈ ಧೀಮಂತಿಕೆ ಹೆಣ್ಣಿಗೆ ಬೇಕು, ಬರಬೇಕಾದರೆ ಜೊತೆಯಲ್ಲಿ ವೇದವಿರಬೇಕು! ಇದೀಗ ವೇದದ ಆದೇಶ - ಗಂಡನ ಮನೆಯಲ್ಲಿ ವಿರಾಜಿಸು - ಎಂಬುದಕ್ಕೆ ಸ್ಪಷ್ಟ ಅರ್ಥ ದೊರೆತಂತಾಯಿತು.

ಪರೋಕ್ಷವಾಗಿ, ಈ ಕಾರ್ಯ ಮಾಡುವುದಕ್ಕೆ ಆ ಹೆಣ್ಣಿಗೆ ಗಂಡ, ಅತ್ತೆ, ಮಾವ, ಮೈದುನ, ನಾದಿನಿ ಮುಂತಾದವರು ಪ್ರೋತ್ಸಾಹ, ಸಹಕಾರಗಳನ್ನು ನೀಡಬೇಕು ಎಂಬ ಆದೇಶವೂ ಇದೆ. ಇಡೀ ಕುಟುಂಬದ ಕ್ಷೇಮ, ಅಭಿವೃದ್ಧಿಯ ಸಾಧನೆ ಈ ಮಾರ್ಗದಲ್ಲಿದೆ. ಇಂತಹ ವಾತಾವರಣದಲ್ಲಿ ಹುಟ್ಟಿ, ಬೆಳೆಯುವ ಸಂತಾನ ಸತ್ಸಂತಾನವಾಗಿರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಸಂದರ್ಭಗಳಲ್ಲಿ, ವಿವಾಹ ಸಂದರ್ಭಗಳಲ್ಲಿ, ಹೆಣ್ಣನ್ನು ಮನೆ ತುಂಬಿಸಿಕೊಳ್ಳುವ ಸಂದರ್ಭಗಳಲ್ಲಿ ಈ ವೈದಿಕ ವಿಚಾರಗಳನ್ನು ಮೆಲಕು ಹಾಕಿದರೆ, ಅದರಂತೆ ನಡೆವ ಸಂಕಲ್ಪವನ್ನು ಮಾಡಿದರೆ, ವರದಕ್ಷಿಣೆಯ ಕಾಟ, ವಧೂದಹನ, ಗಂಡ-ಹೆಂಡತಿ ಪ್ರತ್ಯೇಕವಾಗಿ ಮನೆ ಮಾಡುವುದು, ಅತ್ತೆ-ಸೊಸೆ ಜಗಳ ಮೊದಲಾದ ಅನೇಕಾನೇಕ ಸಮಸ್ಯೆಗಳು ಮೂಲದಲ್ಲೇ ಚಿವುಟಿಹಾಕಲ್ಪಡುತ್ತವೆ. ಕುಟುಂಬಗಳು ಸೊಸೆಯನ್ನು ಆಹ್ವಾನಿಸುವುದರೊಂದಿಗೆ, ಕುಟುಂಬದ ಶಾಂತಿ, ಉನ್ನತಿಗಳನ್ನೂ ಆಹ್ವಾನಿಸಿದಂತಾಗುತ್ತದೆ.

ಭಗವಂತನ ಆಕಾರ-ನಿರಾಕಾರ ಒಂದು ಜಿಜ್ಞಾಸೆ

ದೇವರ ಬಗ್ಗೆ ವಿಮರ್ಶೆ ಮಾಡುವಾಗ ಮೊದಲಿಗೆ ಕೆಲವು ವೈರುಧ್ಯಗಳನ್ನು ಬಿಡಿಸಿಕೊಳ್ಳಬೇಕಾಗಿದೆ. - ಭಗವಂತನನ್ನು ಸರ್ವವ್ಯಾಪಿ ಎಂದು ಹೇಳುವ ಉಸುರಿನಲ್ಲೇ ಭಗವಂತನ ಚಿತ್ರ, ರೂಪ,ಆಕಾರಗಳನ್ನು ಒಪ್ಪುತ್ತೇವೆ. ಆದರೆ, ಯಾವುದೇ ಚಿತ್ರ, ರೂಪ, ಆಕಾರವು ಸರ್ವವ್ಯಾಪಿಯಲ್ಲ ಎಂಬುದು ಸ್ಪಷ್ಟವಾಗಿಯೇ ಇದೆ. ಸರ್ವವ್ಯಾಪಿ ಎನ್ನುವವರು ಚಿತ್ರ, ಆಕಾರಗಳನ್ನು ಸ್ವೀಕರಿಸುವಂತಿಲ್ಲ. ರೂಪ, ಆಕಾರವನ್ನು ಸ್ವೀಕರಿಸುವವರು ದೇವರು ಎಲ್ಲ ಕಡೆಯೂ ಇದ್ದಾನೆ ಎನ್ನುವಂತಿಲ್ಲ. ಈ ಗೊಂದಲವನ್ನು ಮೊದಲು ಬಿಡಿಸೋಣವೇ?
-ಸುಧಾಕರ ಶರ್ಮಾ

-------------------------------------------------------

[ಸರ್ವವ್ಯಾಪಿ ಎನ್ನುವವರು ಚಿತ್ರ, ಆಕಾರಗಳನ್ನು ಸ್ವೀಕರಿಸುವಂತಿಲ್ಲ. ರೂಪ, ಆಕಾರವನ್ನು ಸ್ವೀಕರಿಸುವವರು ದೇವರು ಎಲ್ಲ ಕಡೆಯೂ ಇದ್ದಾನೆ ಎನ್ನುವಂತಿಲ್ಲ]
ಶ್ರೀ ಶರ್ಮಾಜಿ, ನಿಮ್ಮ ಆ ವಾದವನ್ನೇ ನಾನು ಒಪ್ಪುವುದಿಲ್ಲ. ಭಗವಂತನು ಸರ್ವವ್ಯಾಪಿ ಎನ್ನುವವರು ಭಗವಂತನಿಗೆ ಆಕಾರವನ್ನೇಕೆ ಕೊಡಬಾರದು? ಚಿತ್ರದಲ್ಲಿ ಭಗವಂತನಿದ್ದಾನೆಂದರೆ ಬೇರೆಡೆ ಇಲ್ಲವೆಂದೇನೂ ಅಲ್ಲ.ಆದರೆ ಎಲ್ಲೆಡೆ ಇರುವ ಭಗವಂತನನ್ನು ಕಾಣುವುದಾದರೂ ಹೇಗೆ? ಭಗವಚ್ಛಕ್ತಿಯನ್ನು ಒಪ್ಪುವವರು ಅದಕ್ಕೊಂದು ರೂಪವನ್ನು[ನೆಪಮಾತ್ರಕ್ಕೆ]ಕೊಟ್ಟರು.ಇದರಿಂದ ನಮ್ಮ ಗಮನವನ್ನು ಭಗವಂತನೆಡೆ ಕೇಂದ್ರೀಕರಿಸಲು ಸುಲಭವಾಗುವುದಿಲ್ಲವೇ?ಕಾಶಿಯ ವಿಶ್ವನಾಥನ ದೇವಾಲಯದಲ್ಲಿ ಕಾಣುವ ಭಗವಂತನನ್ನು ನಮ್ಮೂರ ಮಾರಮ್ಮನಗುಡಿಯಲ್ಲೂ ,ನಮ್ಮ ತೋಟದ ಅರಳೀಮರದಲ್ಲೂ ,ಮನೆ ಮುಂದಿನ ತುಳಸಿಯಲ್ಲೂ , ಹರಿವ ನದಿ,ಗಿರಿ-ಪರ್ವತ, ಎಲ್ಲೆಲ್ಲೂ ಕಾಣುವಂತಹ ವಿಶಾಲ ದೃಷ್ಟಿಕೋನ ನಮ್ಮ ಹಿಂದೂ ಧರ್ಮದಲ್ಲಿದೆ[ಹಿಂದುವೆಂಬ ಪದವೂ ಚರ್ಚೆಗೊಳಗಾಗುತ್ತದೆಂಬ ಅರಿವಿದೆ]ಹಾಗಾಗಿ ನನ್ನ ನಂಬಿಕೆಯಲ್ಲಿ ನನಗೆ ವಿಶ್ವಾಸವಿದೆ.
-ಹರಿಹರಪುರಶ್ರೀಧರ್
--------------------------------------------------------
ಪ್ರತಿಕ್ರಿಯೆ ಮೇಲುನೋಟಕ್ಕೆ ಸೊಗಸಾಗಿದೆ. ಸೂಕ್ಷ್ಮವಾಗಿ ನೋಡಿದಾಗ ಕೆಲವು ತೊಡಕುಗಳಿವೆ.
ಚಕ್ಕುಬಂದಿಯಿಲ್ಲದೆ ಆಕಾರ ಸಿಗುವುದಿಲ್ಲ. ಚಕ್ಕುಬಂದಿ ಬಂದಾಗ ಸರ್ವವ್ಯಾಪಿ ಎಂಬುದಕ್ಕೆ ಅರ್ಥವೆಲ್ಲಿ ಉಳಿಯಿತು! ಇದನ್ನೇ ವೈರುಧ್ಯವೆಂದು ಕರೆದದ್ದು!
ಇನ್ನು ದೇವರ ಚಿತ್ರವನ್ನು ನೋಡುವಾಗ, ಎಷ್ಟು ಸಲ ಆ ಚಿತ್ರದ ಫ್ರೇಮ್ ನಲ್ಲಿ, ಮೊಳೆಯಲ್ಲಿ, ದಾರದಲ್ಲಿ, ಗೋಡೆಯಲ್ಲಿ ನಾವು ದೇವರನ್ನು ಕಂಡಿದ್ದೇವೆ, ಪ್ರಾಮಾಣಿಕ ಉತ್ತರ ಬರಲಿ.
ಏಕಾಗ್ರತೆ, ಕೇಂದ್ರೀಕರಣ ಎಂಬುದೊಂದು ನೆಪವಾಗಿಯೇ ಕಾಣುತ್ತದೆ. ಏಕೆಂದರೆ ಇದಕ್ಕೆ ಬೇಕಾದ್ದು "ಏಕಾಗ್ರ". ಒಂದು ಚೂಪಾದ ಅತ್ಯಂತ ಕಿರಿದಾದ "Point". ಗಾತ್ರವುಳ್ಳ ಆಕಾರಗಳಲ್ಲ. ಯೋಗಶಾಸ್ತ್ರದಲ್ಲಿ ಮೂಗಿನ ತುದಿ, ಭ್ರೂಮಧ್ಯೆಗಳನ್ನು ಇದಕ್ಕಾಗಿ ಬಳಸಲು ಸಲಹೆ ಕೊಟ್ಟಿದ್ದಾರೆ.
ಇನ್ನು ಭಗವಂತ ಎಂಬ ಅಸ್ತಿತ್ವವನ್ನು ಕಾಣುವುದಲ್ಲ, ಕೇಳುವುದಲ್ಲ, ಮೂಸುವುದಲ್ಲ, ರುಚಿನೋಡುವುದೂ ಅಲ್ಲ, ಮುಟ್ಟುವುದೂ ಅಲ್ಲ. ಅನುಭವಿಸುವುದು.
ಗಮನಿಸಿ. ಇಂದ್ರಿಯಗಳು ಕೇವಲ ಸಂವೇದನೆಗಳನ್ನು ಮಿದುಳಿಗೆ ತಲುಪಿಸುತ್ತವೆ, ಅವು ಸ್ವತಃ ನೋಡುವುದೂ ಇಲ್ಲ, ಕೇಳುವುದೂ ಇಲ್ಲ!! ಮಿದುಳನ್ನು Monitor ಮಾಡುತ್ತಿರುವ ಒಳಗಿನ ಚೇತನವೇ ನಿಜವಾಗಿ ನೋಡುವುದು, ಕೇಳುವುದು. ಅಂತೆಯೇ ಅನುಭವಿಸುವುದೂ ಕೂಡ ಅದೇ!!!
ಹಾಗಾಗಿ ಶರೀರದಲ್ಲಿರುವ ಆ ಚೇತನವು ಅನುಭವಿಸಲು ಯೋಗ್ಯವಾದ ವಿಷಯವೇ ಆ ಭಗವಂತ. ಆ ಅನುಭವವೇ "ಆನಂದ". ಆನಂದದ ಅನುಭವ ಯಾರ್ಯಾರಿಗೆ ಆಗಿದೆಯೋ ಅವರೆಲ್ಲರಿಗೂ ಭಗವಂತನ ಅನುಭವ ಆಗಿಯೇ ಇದೆ!!! (ಆನಂದದ ಸ್ವರೂಪದ ಬಗ್ಗೆ ಮತ್ತೊಮ್ಮೆ ಚರ್ಚಿಸುವ)
ಇದು ಇಡೀ ಹಿಂದೂಧರ್ಮದ ಮೂಲಸ್ರೋತಸ್ಸಾದ ವೇದಗಳ ವೈಜ್ಞಾನಿಕ ಚಿಂತನೆ, ಮಾರ್ಗದರ್ಶನ.
ಎಲ್ಲೆಡೆಯೂ ಇರುವ ಭಗವಂತ ವಿಗ್ರಹದಲ್ಲಿಲ್ಲವೇ? ಇರುವುದು ನಿಜವಾದರೂ ವಿಗ್ರಹಕ್ಕೂ ಭಗವಂತನಿಗೂ ಇರುವ ಸಂಬಂಧ ವ್ಯಾಪ್ಯ-ವ್ಯಾಪಕ ಸಂಬಂಧ.
ಇದರ ವೈಜ್ಞಾನಿಕ ವಿಶ್ಲೇಷಣೆಯನ್ನು ಮತ್ತೊಮ್ಮೆ ನೋಡೋಣ.
(Pending topics = ಆನಂದ ಸ್ವರೂಪ ಮತ್ತು ವ್ಯಾಪ್ಯ-ವ್ಯಾಪಕ ಸಂಬಂಧ)
ಒಪ್ಪುವ,ಒಪ್ಪದಿರುವ ವಿಚಾರದಲ್ಲಿ ಸ್ವಾತಂತ್ರ್ಯ ನಿಮ್ಮದೇ. ಒಪ್ಪಿದರೂ ನೀವು ನಮ್ಮ ಆತ್ಮೀಯರೇ! ಒಪ್ಪದಿದ್ದರೂ ನೀವು ನಮ್ಮ ಆತ್ಮೀಯರೇ!!
-ಸುಧಾಕರ ಶರ್ಮಾ

----------------------------------------------------
ಭಗವಂತನು ಸರ್ವವ್ಯಾಪಿ ಎನ್ನುವವರು ಭಗವಂತನಿಗೆ ಆಕಾರವನ್ನೇಕೆ ಕೊಡಬಾರದು?
ಭಗವಂತನಿಗೆ ಆಕಾರ ಕೊಡಲು ನಾವ್ಯಾರು.ನಾವು ಕೊಡುವ ಆಕಾರ ಭಗವಂತನದ್ದಾಗಿರುವುದಿಲ್ಲ ಅದು ನಮ್ಮ ಬುದ್ಧಿಮಟ್ಟಕ್ಕೆ ತಕ್ಕಂತ ರೂಪವಿರುತ್ತದೆ.
ಮನುಷ್ಯನಿಗೆ ಎಲ್ಲ ಜೀವಿಗಳಿಗಿಂತ ಬುದ್ಧಿ ಹೆಚ್ಚು ಆದರೆ ಆ ಬುದ್ಧಿ ಭಗವಂತನಿಗೆ ಆಕರ ಕೊಡುವಷ್ಟು ಸಮರ್ಥ ಅಂತ ಅನ್ನಿಸುವುದಿಲ್ಲ.

ಆದರೆ ಎಲ್ಲೆಡೆ ಇರುವ ಭಗವಂತನನ್ನು ಕಾಣುವುದಾದರೂ ಹೇಗೆ?
ಭಗವಂತನನ್ನು ನಾವು ಎಲ್ಲೆಡೆ ಕಾಣುತ್ತಿದ್ದೇವೆ ಮತ್ತು ಕಾಣಬಹುದು.ಅವನನ್ನು ನಮ್ಮಂತೆ ರೂಪವಿರುವ ಕಲ್ಲಿನ ಮೂರ್ತಿಯಲ್ಲೇ ಇದ್ದರೆ ಅವನು ಭಗವಂತ ಅಂತ ಹೇಳುವುದು ಸರಿಯೇ.ಭಗವಂತನನ್ನು ಕಣ್ಣಿನಿಂದಲೇ ಕಾಣಬೇಕೆಂದರೆ ಸೂರ್ಯ,ಚಂದ್ರ,ಮರ ಗಿಡ,ಬೆಟ್ಟ,ನೀರು,ಹಣ್ಣುಗಳಲ್ಲಿ ಕಾಣಬಹುದು. ಆದರೆ ಭಗವಂತನನ್ನು ಕಣ್ಣಿನಿಂದ ಕಾಣುವುದಕ್ಕಿಂತ ಅನುಭವಿಸಿದರೆ ಅವನ ಗುಣಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.
ಇದರಿಂದ ನಮ್ಮ ಗಮನವನ್ನು ಭಗವಂತನೆಡೆ ಕೇಂದ್ರೀಕರಿಸಲು ಸುಲಭವಾಗುವುದಿಲ್ಲವೇ?
ನನ್ನ ಪ್ರಕಾರ ಭಗವಂತ shortcut ಹಾದಿಯಲ್ಲಿ ಸಿಗುವವನಲ್ಲ.ನಮ್ಮ ದೌರ್ಬಲ್ಯವನ್ನು ನಾವು ಸರಿಪಡಿಸಿಕೊಳ್ಳಬೇಕು, ನಮಗೆ ಏಕಾಗ್ರತೆ ಇಲ್ಲ ಅಂದರೆ ಅದು ನಮ್ಮ ಪ್ರಾಬ್ಲಮ್ ಅಲ್ಲವೇ?
ಭಗವಂತನ ನಿಯಮ, ನಮಗೆ ಜೀವನ ಸಿಕ್ಕಿರುವ ಉದ್ದೇಶ, ಅವನ ಸೃಷ್ಟಿಯ ವೈಜ್ಞಾನಿಕತೆ ಮತ್ತು ಕೋಟ್ಯಾನುಕೋಟಿ ಅದ್ಭುತ ಗುಣಗಳನ್ನು ಅರಿತು ಮುನ್ನೆಡೆಯಲು ಆಕಾರ ಬೇಕೆಬೇಕೆ ?

ವಿಶಾಲ್
---------------------------------------------------------
ಸ್ವಾಮೀ ಶರ್ಮರೇ ನಮಸ್ಕಾರ, ನಾನೊಬ್ಬ ಏನೊ ತಿಳಿಯದ ವ್ಯಕ್ತಿ ಎಂದು ತಿಳಿದುಕೊಳ್ಳಿ. ಆಗ ನನಗೆ ನಿರಾಕಾರ ದೇವರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರುವುದಿಲ್ಲ. ಇದಕ್ಕೆ ಒಂದು ಕ್ಷುಲ್ಲಕ ಉದಾಹರಣೆ ಕೊಡುತ್ತೇನೆ- ಹದಿಹರೆಯದ ಹುಡುಗನೊಬ್ಬ ಹುಡುಗಿಯೊಬ್ಬಳನ್ನು ನೋಡಿದರಷ್ಟೇ ಅವನಿಗೆ ಅವನಲ್ಲಿನ ವಿಷಯಾಸಕ್ತಿ ಜಾಗ್ರತವಾಗಿ, ಪ್ರೇಮವೋ ಕಾಮವೋ ಘಟಿಸುತ್ತದೆ, ಹುಡುಗಿಯನ್ನೇ ನೋಡದ ಹುಡುಗನಿಗೆ ಯಾರದೋ ವರ್ಣನೆಯಿಂದ ಹುಡುಗಿ ಹೀಗಿದ್ದಾಳೆ ಎಂಬ ಕಲ್ಪನೆ ಬರವುದಿಲ್ಲ ! ಒಂದೊಮ್ಮೆ ಬರುವುದಾದರೂ ಇನ್ನೊಬ್ಬ ಹುಡುಗಿಯನ್ನಾದರೂ ತೋರಿಸಿ ನೋಡಪ್ಪಾ ಹೀಗಿದ್ದಾಳೆ ಎಂದರೆ ಆಗ ಆತನಿಗೆ ರೂಪದ ಕಲ್ಪನೆಯಾಗುತ್ತದೆ. ಇದೇ ರೀತಿ ಹುಟ್ಟಿದಾರಭ್ಯ ತಂದೆಯನ್ನೇ ಕಂಡಿರದ ವ್ಯಕ್ತಿಗೆ ತಂದೆಯ ಛಾಯಾಚಿತ್ರವನ್ನು ತೋರಿಸಿದರೆ ಮಾತ್ರ ಆತ ಈತ ತನ್ನ ತಂದೆ ಎಂಬುದನ್ನು ಮನಗಾಣಬಹುದು.

ಈಗ ನಮ್ಮದನ್ನೇ ತೆಗೆದುಕೊಳ್ಳೋಣ. ಜಗತ್ತಿನ ಅಸಂಖ್ಯ ಜನರಾಶಿಯಲ್ಲಿ ಒಬ್ಬರಂತೇ ಒಬ್ಬರಿಲ್ಲ, ಪ್ರತಿಯೊಬ್ಬರಿಗೂ ಕೊನೇ ಪಕ್ಷ ಏನಾದರೂ ಒಂದು ವ್ಯತ್ಯಾಸ ಇದ್ದೇ ಇರುತ್ತದೆ. [ಅದೇ ಮಾನವ ನಿರ್ಮಿತ ಗಾಡ್ರೆಜ್ ಬೀಗ ತೆಗೆದುಕೊಳ್ಳಿ --ಅಲ್ಲಿ ಒಂದೇ ಥರದ ಬೀಗಗಳು ಇರುತ್ತವೆ ಆದರೆ ಅವು ಅಲ್ಲಲ್ಲಿ ಹಂಚಿಹೋಗಿರುತ್ತವೆ, ಹೀಗಾಗಿ ಗೊತ್ತಾಗುವುದಿಲ್ಲ!] ನಾನು ನಾನಲ್ಲವೆಂದು ನನಗೇ ಅನ್ನಿಸಿದ್ದರೂ ನನ್ನಿಂದ ನಡೆಯುವ ಎಲ್ಲಾ ಲೌಕಿಕ ಕಾರ್ಯಗಳಿಗೆ ನನ್ನ ಪ್ರಸ್ತುತಿ ಅಥವಾ ನನ್ನ ಛಾಯಾಚಿತ್ರದ ಪ್ರಸ್ತುತಿ ಇದ್ದೇ ಇರುತ್ತದೆ. ಅದು ನನ್ನನ್ನು ಇತರರಿಂದ ಬೇರ್ಪಡಿಸಲೋಸುಗ, ಅಲ್ಲವೇ ? ಹೀಗೇ ಪರಮಾತ್ಮ ಸರ್ವವ್ಯಾಪಿಯೇ ಆದರೂ ಅತನ ಆ ನಿರಾಕಾರವನ್ನು ಪರಿಗಣಿಸಿ ನಿರ್ವಿಷಯ ಧ್ಯಾನದಲ್ಲಿ ತಲ್ಲೀನರಾಗಬಲ್ಲ ಜನ ಎಷ್ಟು ಸಿಗುತ್ತಾರೆ? ಇದನ್ನೆಲ್ಲಾ ತಿಳಿದೇ ಹುಡುಗನೊಬ್ಬ ಹುಡುಗಿಯ ಛಾಯಾಚಿತ್ರವನ್ನು ಕಂಡು ಅದರಲ್ಲಿ ತಲ್ಲೀನನಾಗುವಂತೇ ಭಕ್ತನೊಬ್ಬ ಮೂರ್ತಿಯಲ್ಲಿ ಪರಮಾತ್ಮನಿದ್ದಾನೆ ಎಂಬ ಭಾವನೆಯಿಂದ ತಲ್ಲೀನನಾಗಲಿ-ಅಲ್ಲಿಂದ ಮುಂದಕ್ಕೆ ಹಂತ ಹಂತವಾಗಿ ಆತನಿಗೆ ಮುಂದೆ ನಡೆಯಲು ಸಾಧ್ಯ ಎಂಬುದರ ಪರಿವೆಯನ್ನು ತಳೆದು ಕಾಲುಗಟ್ಟಿಯಾಗದ ಹಸುಗೂಸಿಗೆ ಓಡಾಡಲು ಚಿಕ್ಕ ತಳ್ಳುಗಾಡಿಯನ್ನು ಕೊಟ್ಟಂತೇ ನಮಗೆ ಋಷಿಗಳು/ತತ್ಸಮಾನರು ಮೂರ್ತಿಗಳನ್ನು ಕೊಟ್ಟರು ಎಂಬುದು ನನ್ನ ಅಭಿಪ್ರಾಯ. ಎಲ್ಲರೂ ತಮ್ಮ ಮಟ್ಟಕ್ಕೆ ಬೆಳೆಯಲು ತಕ್ಷಣಕ್ಕೆ ಸಾಧ್ಯವೇ ? ಹೀಗಾಗಿ ಜನಸಾಮಾನ್ಯನಿಗೆ ಕಲ್ಪನೆಗಾಗಿ ಮೊದಲಾಗಿ ಕೊಟ್ಟ ಈ ಮೂರ್ತಿಪೂಜೆಯನ್ನು ಮೇಲ್ಮಟ್ಟಕ್ಕೆ ಹೋದಾಗ ವರ್ಜಿಸಬಹುದು ಎಂದು ಶಂಕರರೇ ಹೇಳಿದ್ದಾರಲ್ಲವೇ ? ನಾನು ಅದೇ ತತ್ವಕ್ಕೆ ಆತುಕೊಳ್ಳುತ್ತೇನೆ. ನಾನು ತಮಗೆ ವಿರುದ್ಧವಲ್ಲ, ಆದರೆ ತಾವು ನಮಗಿಂತಾ ಮೇಲ್ಮಟ್ಟಕ್ಕೆ ತಲ್ಪಿದ್ದೀರಿ ಎಂಬುದು ಈ ಮಾತಿನ ಅರ್ಥ, ನಮಸ್ಕಾರ.


ಇತಿಹಾಸ ನಿರ್ಮಾಣ ಮಾಡುವವರು ನೀವೇ ಏಕಾಗಬಾರದು? -ಮಾತಾಜಿ ವಿವೇಕಮಯೀ



[ಮನವಿ: ಲೇಖನ ಒಂದು ಸ್ವಲ್ಪ ಉದ್ದವಾದಾಗ ಓದುವ ತಾಳ್ಮೆ ಇಲ್ಲ ವಾಗುತ್ತೆ. ಆದರೆ ನಿಮಗಾಗಿ, ನಿಮ್ಮ ಮಕ್ಕಳ ಉತ್ತಮ ಭವಿಷ್ಯಕಾಗಿ ಈ ಲೇಖನ ಓದಿ. ನನ್ನ ಒಂದು ಮಾತೂ ಕೂಡ ಇದರಲ್ಲಿಲ್ಲ. ಆದರೆ ಮಾತಾಜಿ ವಿವೇಕಮಯೀ ಅವರ ಕಳಕಳಿಯ ಮಾತುಗಳು ನಮಗೆ ದಾರಿ ದೀಪವಾಗಬಲ್ಲದು. ಆದ್ದರಿಂದ ಬಲವಂತವಾಗಿಯೇ ಈ ಲೇಖನ ಓದಿ, ನಂತರ ಪ್ರತಿಕ್ರಿಯಿಸಿ, ನಿಮ್ಮ ಪ್ರತಿಕ್ರಿಯೆಗಳು ಲೇಖನದ ಪರವಾಗಿಯೇ ಇರಬೇಕೆಂದೇನೂ ಇಲ್ಲ.]

ಇಂದಿನ ಸಮಾಜದಲ್ಲಿ ನಾವು ಚಿಂತಿಸುವ ರೀತಿಯಾದರೂ ಹೇಗಿರುತ್ತೆ? ನಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು, ಏಕೆಂದರೆ ಮುಂದೆ ಒಳ್ಳೆಯ ಕಾಲೇಜಿಗೆ ಸೇರಿಸ ಬೇಕು, ಒಳ್ಳೆಯ ಕಾಲೇಜಾದರೂ ಏಕೆಂದರೆ ನಮ್ಮ ಮಕ್ಕಳು ಒಳ್ಳೆಯ ಕೆಲಸಕ್ಕೆ ಸೇರಿ ತುಂಬಾ ಸಂಪಾದಿಸಬೇಕು, ಸುಖವಾದ ಜೀವನ ಮಾಡಬೇಕು, ಅಂತೂ ತುಂಬಾ ಹಣ ಸಂಪಾದಿಸಿದರೆ ನಮ್ಮ ಮಕ್ಕಳ ಜೀವನ ಸುಖವಾಗಿರುತ್ತೆ,ಎಂಬ ಕಲ್ಪನೆ.

ಒಬ್ಬ ವಿದ್ಯಾರ್ಥಿಯು ತನ್ನ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸ್ತಾನೆ. ಅವನ ತಾಯಿಗೆ ವಿಷಯ ತಿಳಿಸಲು ಹೋಗ್ತಾನೆ. ಅವರ ಅಮ್ಮನಿಗೆ ತುಂಬಾ ಆನಂದ ವಾಗುತ್ತೆ -ಎಂದು ಸಹಜವಾಗಿ ಬಯಸಿದ್ದ ವಿದ್ಯಾರ್ಥಿಗೆ ಅವನ ತಾಯಿ " ಸಂತೋಷ " ಎಂದಷ್ಟೇ ಹೇಳಿ ಮೌನವಾಗಿಬಿಡ್ತಾಳೆ.ವಿದ್ಯಾರ್ಥಿಗೆ ಸಹಜವಾಗಿ ಬೇಜಾರಾಗಿ ಬಿಡುತ್ತೆ. ಅವನು ಅಮ್ಮನನ್ನು ಕೇಳ್ತಾನೆ-" ಅಮ್ಮ ನಾನು ಅತ್ಯಂತ ಉನ್ನತ ಶ್ರೇಣಿಯಲ್ಲಿ ನಮ್ಮ ಯೂನಿವರ್ಸಿಟಿಗೆ ಪ್ರಥಮನಾಗಿ ತೇರ್ಗಡೆ ಹೊಂದಿರುವುದು ನಿನಗೆ ಸಂತೋಷದ ವಿಷಯ ವಲ್ಲವೇ?" ಅದಕ್ಕೆ ಅವನ ತಾಯಿ ಹೇಳ್ತಾಳೆ- " ನೋಡು ನೀನು ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದು, ಮುಂದೆ ಒಳ್ಳೆಯ ಕೆಲಸಕ್ಕೆ ಸೇರುವುದು, ಯಾವುದೂ ನನಗೆ ದೊಡ್ದ ವಿಷಯವಲ್ಲ, ನೀನು ಎಷ್ಟು ಸಂಪತ್ತು ಸಂಪಾದಿಸುತ್ತೀಯ ಎಂಬುದು ಮುಖ್ಯವಲ್ಲ,ಆದರೆ ನಿನ್ನ ಬದುಕನ್ನು ಹೇಗೆ ರೂಪಿಸುತ್ತೀಯ -ಎಂಬುದು ಮುಖ್ಯ. ಕೂಲಿ ಕೆಲಸ ಮಾಡಿದರೂ ಚಿಂತೆಯಿಲ್ಲ ನನ್ನ ಮಗ ಪ್ರಾಮಾಣಿಕನಾಗಿ ಜೀವನ ಮಾಡುತ್ತಾನಾ? ಜೀವನದಲ್ಲಿ ಆದರ್ಷವಾಗಿ ಬದುಕಿ ತೋರಿಸ್ತಾನಾ?ಅದು ಮುಖ್ಯ!"

ವಿದ್ಯಾರ್ಥಿ ಜೀವನದಲ್ಲಿ ಅಂತಹ ಒಬ್ಬ ತಾಯಿಯ ಆದರ್ಷದಿಂದ ಇಂದು ಸಮಾಜದಲ್ಲಿ ಸುರೇಶ್ ಕುಲಕರ್ಣಿ ಯವರಂತಹ ಪ್ರಾಮಾಣಿಕ ಚಿಂತಕರನ್ನು ಕಾಣ ಬಹುದಾಗಿದೆ. ಅಂದು ಆರು- ಏಳು ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗೆ ಅವನ ತಾಯಿ ಒಂದು ಒಳ್ಳೆಯ ಕೆಲಸಕ್ಕೆ ಸೇರಿ ಚೆನ್ನಾಗಿ ಹಣ ಸಂಪಾದಿಸು -ಎಂದಷ್ಟೇ ಹೇಳಿದ್ದರೆ ಸಮಾಜಕ್ಕೆ ಇಂತಹ ಮಹನೀಯರು ಸಿಗುತ್ತಿರಲಿಲ್ಲ-ಅಲ್ಲವೇ " ಅಂದು ಸುರೇಶ್ ಕುಲಕರ್ಣಿಯವರಿಗೆ ಗೋಚರವಾಯ್ತು " ಪದವಿಯಲ್ಲಿ ಪಡೆದ ಚಿನ್ನದ ಪದಕಕ್ಕಿಂತಲೂ ಹೆಚ್ಚಿನದು , ಹಣ ಗಳಿಸುವುದಕ್ಕಿಂತ ಹೆಚ್ಚಿನದು ಜೀವನದಲ್ಲಿ ಬೇರೆ ಯೇನೋ ಇದೆ." ಎಂದು.

ಹೌದು ಜೀವನದಲ್ಲಿ ನಾವು ಗಳಿಸುವ ಹಣಕ್ಕಿಂತಲೂ ಹೆಚ್ಚಿನದು ಬೇರೆ ಏನೋ ಇದೆ, ಆದರೆ ನಾವು ಅದಕ್ಕೆ ಅಂತಹ ಸ್ಥಾನವನ್ನು ಕೊಡಬೇಕಷ್ಟೆ.ನಾವು ಜೀವನದಲ್ಲಿ ಮೌಲ್ಯಗಳಿಗೆ ಸ್ಥಾನ ಕೊಡಬೇಕು. ನಿಧಾನವಾಗಿ ನಮ್ಮ ಸಹಜ ಜೀವನ ಹೇಗೆ ಬದಲಾಗುತ್ತಿದೆ ! ನಮ್ಮ ಪರಂಪರಾಗತ ಜೀವನದ ಆದರ್ಶಗಳು ಪಾಶ್ಚಿಮಾತ್ಯ ಪ್ರಭಾವಕ್ಕೊಳಗಾಗಿ ಜೀವನದ ಸುಖಭೋಗಗಳಿಗೆ ಹೆಚ್ಚು ಹೆಚ್ಚು ಪ್ರಾಶಸ್ತ್ಯ ಕೊಡುತ್ತಾ, ನಮ್ಮ ಆದರ್ಶಗಳು ಹೇಗೆ ಮರೆಯಾಗುತ್ತಿವೆ! ನಮ್ಮ ಜೀವನದ ಅಗತ್ಯಗಳು ಹೆಚ್ಚುತ್ತಾ ಹೆಚ್ಚುತ್ತಾ,ಸುಖಭೋಗಗಳು ಹೆಚ್ಚಿನ ಪ್ರಾಶಸ್ತ್ಯ ಗಳಿಸುತ್ತಾ ಮನುಷ್ಯಜೀವನದ ಎಲ್ಲಾ ಶಕ್ತಿ ಸಾಮರ್ಥ್ಯಗಳೂ ಆ ಒಂದೇ ನಿಟ್ಟಿನಲ್ಲಿ ಒಂದು ಚಿಕ್ಕ ಉದ್ದೇಶಕ್ಕಾಗಿ ವ್ಯಯವಾಗುತ್ತಿದೆಯಲ್ಲಾ! ವಿವೇಕಾನಂದರು ಹೇಳುತ್ತಾರೆ- "ಸೃಷ್ಟಿಯಲ್ಲಿ ಅತ್ಯದ್ಭುತವಾದದ್ದೆಂದರೆ ಮನುಷ್ಯ ಜನ್ಮ." ಯಾಕೆಂದರೆ ಒಬ್ಬ ಮನುಷ್ಯನೇ ಬುದ್ಧನಾದದ್ದು, ರಾಮನಾದದ್ದು,ಕೃಷ್ಣನಾದದ್ದು. ಸಾವಿರಾರು ವರ್ಷಗಳು ಕಳೆದರೂ ಜನರು ಅವರನ್ನು ಸ್ಮರಿಸುತ್ತಾರೆಂದರೆ ಅವರು ಆರೀತಿ ಬದುಕಿ ತೋರಿಸಿದರು.ಅವರ ಫೋಟೊಗಳಿಗೆ ನಾವು ನಮಸ್ಕರಿಸುವುದಾದರೂ ಏಕೆ? ಅದಕ್ಕೆ ಉತ್ತರವನ್ನು ವಿವೇಕಾನಂದರು ಕೊಡುತ್ತಾರೆ-" ಪ್ರತಿಯೊಬ್ಬ ಮನುಷ್ಯನೂ ಹುಟ್ಟುವಾಗ ಚೈತನ್ಯವನ್ನು ಇಟ್ಟುಕೊಂಡೇ ಹುಟ್ಟಿದ್ದಾನೆ.ಆದರೆ ಸಾಮಾನ್ಯ ಜನರು ಇದನ್ನು ತಿಳಿಯದೆ ಅತ್ಯಂತ ಸಣ್ಣ ಉದ್ದೇಶಕ್ಕಾಗಿ ಜೀವನವನ್ನು ಸೆವೆಸಿ ಬಿಡುತ್ತಾರೆ.ಅತ್ಯಂತ ನಿಕೃಷ್ಟ ಬದುಕು ಸವೆಸಿ ಬಿಡುತ್ತಾರೆ. ಆ ಬದುಕು ಸಾರ್ಥಕತೆ ಪಡೆಯುವುದಿಲ್ಲ.ಬದುಕಿಗೊಂದು ಉದಾತ್ತ ಧ್ಯೇಯ ವಿರಬೇಕು, ಮಕ್ಕಳ ಮುಂದೆ ಇಂತಹ ಉದಾತ್ತ ಗುರಿಗಳ ಬಗ್ಗೆ ಮಾತನಾಡಬೇಕು. ಓದಿನಲ್ಲಿ ಹೆಚ್ಚು ಅಂಕ ಗಳಿಸಬೇಕು ಎಂಬುದು ಮುಖ್ಯ ಹೌದು, ಆದರೆ ಅದಕ್ಕಿಂತಲೂ ಮುಖ್ಯ ಜೀವನದಲ್ಲಿ ಉದಾತ್ತವಾಗಿ ಬಾಳುವುದು. ಉನ್ನತ ಆದರ್ಶಗಳಿಗಾಗಿ ಬದುಕುವುದನ್ನು ಮಕ್ಕಳಿಗೆ ಕಲಿಸಬೇಕು. ಪುರಾಣದಲ್ಲಿ ಒಂದು ಕಥೆ ಇದೆ. ಮದಾಲಸೆ ಎಂಬ ರಾಣಿ ಇದ್ದಳು. ಅವಳು ಎಂತಹಾ ಮಹಾನ್ ಜ್ಞಾನಿಯಾಗಿದ್ದಳೆಂದರೆ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವಾಗ ಜೋಗುಳ ಹಾಡುತ್ತಿದುದಾದರೂ ಏನು-" ಮಗು ನೀನು ಆತ್ಮ ಸ್ವರೂಪಿ, ಮಗೂ ನೀನು ದುರ್ಬಲನಲ್ಲ.ಮಗೂ ನಿನ್ನ ಜೀವನ ಸಾರ್ಥಕ ವಾಗಬೇಕು, ನೀನು ಏನಾದರೂ ಸಾಧಿಸಬೇಕು, ನೀನು ದುರ್ಬಲನಾಗಿ ಅಳುತ್ತಾ ಅಳುತ್ತಾ ಜೀವನ ಕಳೆಯಬೇಡ.ನೀನು ಧೈರ್ಯಶಾಲಿಯಾಗು,ನೀನು ಶಕ್ತಿಶಾಲಿಯಾಗು,ನಿನ್ನ ನಿಜ ಸ್ವರೂಪವನ್ನು ನೀನು ಕಂಡುಕೋ, " ಹೀಗೆ ತೊಟ್ಟಿಲು ತೂಗುತ್ತಾ ತೂಗುತ್ತಾ ಬೆಳಸಿದ ನಾಲ್ಕು ಮಕ್ಕಳು ದೊಡ್ದವರಾದಾಗ ಯೋಗಿಗಳಾಗಿ ಬಿಡುತ್ತಾರೆ. ಇನ್ನು ಹೀಗೆಯೇ ಆಗಿ ಬಿಟ್ಟರೆ ರಾಜನ ವಂಶ ಬೆಳೆಯುವುದಾದರೂ ಹೇಗೆಂದು ಮತ್ತೊಬ್ಬ ಮಗನನ್ನು ರಾಜನು ಇವಳಿಂದ ಬೇರೆಯೇ ಬೆಳೆಸುತ್ತಾನೆ.ಈಕಥೆಯ ನೀತಿಯಾದರೂ ಏನು? ನಮ್ಮ ಮಕ್ಕಳೆಲ್ಲಾ ಯೋಗಿಳಾಗಬೇಕಿಲ್ಲ. ಆದರೆ ಆ ಮಹಾತಾಯಿ ಚಿಕ್ಕಂದಿನಲ್ಲಿ ಮಕ್ಕಳ ಕಿವಿಯಲ್ಲಿ ಶ್ರೇಷ್ಟ ವಿಚಾರಗಳನ್ನೇ ತಿಳಿಸಿದ್ದರಿಂದ ಮಕ್ಕಳು ಶ್ರೇಷ್ಟವಾದ ಆದರ್ಶವನ್ನು ಕಣ್ಮುಂದೆ ಇಟ್ಟುಕೊಂಡು ಬೆಳೆದರು. ಅಂದರೆ ಚಿಕ್ಕಂದಿನಲ್ಲಿ ಮಕ್ಕಳಿಗೆ ನಾವು ಏನು ಕೊಡುತ್ತೇವೋ ಮಕ್ಕಳು ಅದೇ ಆಗುತ್ತಾರೆ.ಆದ್ದರಿಂದ ನಾವು ಪ್ರತಿನಿತ್ಯ ನಮ್ಮ ಮಕ್ಕಳಿಗೆ ಯಾವ ವಿಚಾರವನ್ನು ಹೇಳುತ್ತೇವೆ, ನಮ್ಮ ದೇಶದಲ್ಲಿ ಆಗಿಹೋದ ಮಹಾಪುರುಷರ ಜೀವನ ದ ಸ್ಪೂರ್ತಿದಾಯಕ ಘಟನೆಗಳನ್ನು ತಿಳಿಸುತ್ತೀವಾ? ಮಕ್ಕಳು ಯಾರಂತೆ ಬೆಳೆಯಬೇಕೆಂದು ಅವರಿಗೆ ಮನಮುಟ್ಟುವಂತೆ ಹೇಳುತ್ತೇವಾ? ರಾಮಕೃಷ್ಣಪರಮಹಂಸರ ತಂದೆಯವರ ಒಂದು ಉದಾಹರಣೆ . ಕಲ್ಕತ್ತಾ ಸಮೀಪ ದೇರಾ ಎಂಬ ಎಂಬ ಒಂದು ಹಳ್ಳಿ ಅಲ್ಲಿ ಕ್ಷುದೀರಾಮ ಚಟ್ಟೋಪಾಧ್ಯಾಯ ಎಂಬ ಬ್ರಾಹ್ಮಣ ನೆಲಸಿರುತ್ತಾರೆ. ಬಹಳ ಪ್ರಾಮಾಣಿಕವಾದ ಜೀವನ.ಶ್ರೇಷ್ಠವಾದ ಆದರ್ಶಗಳಿಂದ ಊರಿನಲ್ಲಿ ಜನಪ್ರಿಯರು.ಬಡತನವಿದ್ದರೂ ಸತ್ಯವಾದಿ. ಆದಿನಗಳಲ್ಲಿ ಇವರ ಸನ್ನಡತೆಯಿಂದ ಊರಿನ ಎಲ್ಲರ ಗೌರವಕ್ಕೆ ಪಾತ್ರರು. ಅದೇ ಊರಿನಲ್ಲಿ ಒಬ್ಬ ಜಮೀನ್ದಾರ. ಮಹಾ ವಂಚಕ. ಊರಿನಲ್ಲಿರುವ ಎಲ್ಲರ ಆಸ್ತಿಯ ಮೇಲೆ ಇವನ ಕಣ್ಣು. ಆಸ್ತಿಯ ವ್ಯಾಜ್ಯ ಒಂದಕ್ಕೆ ಇವನಿಗೆ ಸುಳ್ಳು ಸಾಕ್ಷಿ ಹೇಳುವವರು ಬೇಕಾಗುತ್ತಾರೆ. ಚಟ್ಟೋಪಾಧ್ಯರು ಸಾಕ್ಷಿ ಹೇಳಿಬಿಟ್ಟರೆ ಕೇಸಿನಲ್ಲಿ ಇವನ ಗೆಲವು ಗ್ಯಾರಂಟಿ ಎಂದು ತಿಳಿದು ಜಮೀನ್ದಾರನು ಇವರಲ್ಲಿಗೆ ಬರುತ್ತಾನೆ. ಚಟ್ಟೋಪಾಧ್ಯಾಯರಿಗೆ ಬೆದರಿಕೆ ಒಡ್ಡುತ್ತಾನೆ " ನೀವು ನನ್ನ ಪರವಾಗಿ ಸಾಕ್ಷಿ ಹೇಳಲೇ ಬೇಕು, ಇಲ್ಲದಿದ್ದರೆ ನೀವು ಈ ಊರಿನಲ್ಲಿರಲಾರಿರಿ, ನನ್ನ ಪರವಾಗಿ ಸಾಕ್ಷಿ ಹೇಳಿದರೆ ನಿಮಗೆ ಬೇಕಾದ್ದು ಕೊಡುತ್ತೇನೆ". ಚಟ್ಟೋಪಾಧ್ಯಾಯರು ಜಮೀನ್ದಾರನ ಆಸೆಗೂ ಬಲಿಯಾಗಲಿಲ್ಲ, ಬೆದರಿಕೆಗೂ ಬಗ್ಗಲಿಲ್ಲ.ಕಡೆಗೆ ರಾಮಕೃಷ್ಣರಪರಮಹಂಸರ ತಂದೆಯವರು ಆ ಹಳ್ಳಿಯನ್ನು ತೊರೆಯ ಬೇಕಾಗುತ್ತದೆ.ರಾಮಕೃಷ್ಣ ಪರಮಹಂಸರು ಅಷ್ಟು ದೊಡ್ಡ ವ್ಯಕ್ತಿಯಾಗಿ ಬೆಳೆಯಲು ತಂದೆಯ ಸತ್ಯನಿಷ್ಟ ಜೀವನ, ಆದರ್ಶದ ಬದುಕು ಕಾರಣ ವಾಗುತ್ತದೆ. ಆದ್ದರಿಂದ ಮಕ್ಕಳು ಒಂದು ಉತ್ತಮವಾದ ದಾರಿಯಲ್ಲಿ ಬೆಳೆಯಬೇಕೆಂದರೆ ನಾವು ಉತ್ತಮ ಹಾದಿಯಲ್ಲಿ ನಡೆಯುತ್ತಿದ್ದೀವಾ? ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮ ಪ್ರತಿಯೊಂದು ನಡೆಯನ್ನೂ ಮಕ್ಕಳು ಗಮನಿಸುತ್ತಿರುತ್ತಾರೆಂಬುದು ನಮಗೆ ತಿಳಿದಿರಬೇಕು. ವಿವೇಕಾನಂದರ ಬಾಲ್ಯದ ಒಂದು ಘಟನೆ. ನರೇಂದ್ರನನ್ನು ಶಾಲೆಯಲ್ಲಿ ಮೇಸ್ಟ್ರು ಯಾವುದೋ ಒಂದು ಪ್ರಶ್ನೆ ಕೇಳುತ್ತಾರೆ. ನರೇಂದ್ರ ಬುದ್ದಿವಂತ. ಸರಿಯಾದ ಉತ್ತರ ಕೊಟ್ಟಿರುತ್ತಾನೆ. ಮೇಸ್ಟ್ರು ಅದನ್ನು ಒಪ್ಪದೆ ತಪ್ಪು ಎಂದು ಹೇಳುತ್ತಾರೆ.ನರೆಂದ್ರನಿಗೆ ಅದು ಸರಿ ಎಂದು ನೂರಕ್ಕೆ ಇನ್ನೂರರಷ್ಟು ಗೊತ್ತು. ಆದರೂ ಮೇಸ್ಟ್ರು ಸರಿಇಲ್ಲವೆಂದು ಹೇಳುತ್ತಾರೆ. ಇವನು ಮತ್ತೊಮ್ಮೆ ಹೇಳುತ್ತಾನೆ. " ನನ್ನ ಉತ್ತರ ಸರಿಯಿದೆ " ಎಂದು. ಮೇಸ್ಟ್ರಿಗೆ ಸಿಟ್ಟು ಬರುತ್ತೆ. ಬಲವಾಗಿ ಹೊಡೆಯುತ್ತಾರೆ. ಅಳುತ್ತಾ ಬಾಲಕ ನರೇಂದ್ರ ಮನೆಗೆ ಬರುತ್ತಾನೆ. ಅಮ್ಮ ಭುವನೇಶ್ವರಿ ಎಲ್ಲಾ ಕೇಳಿ ತಿಳಿದುಕೊಳ್ಳುತ್ತಾಳೆ. ಮಗುವಿಗೆ ಹೇಳುತ್ತಾಳೆ " ಮಗು ನೀನು ಸರಿಯಾಗಿಯೇ ಹೇಳಿದ್ದೀಯ" ನೀನು ಯಾವಾಗಲೂ ಸುಳ್ಳನ್ನು ಒಪ್ಪಿಕೊಳ್ಳಬೇಡ. ಸುಳ್ಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಡ.ಪ್ರಾಣ ಹೋದರೂ ಚಿಂತೆಯಿಲ್ಲ. ಸುಳ್ಳಿಗೆ ಶರಣಾಗ ಬೇಡ. " ನರೆಂದ್ರನ ಕೈಯ ಮೇಲಿನ ಬಾಸುಂಡೆ ನೋಡಿದ ತಾಯಿ " ಮಗು ನೀನು ಒಂದು ಸತ್ಯದ ಮಾತಿಗಾಗಿ ಏಟು ತಿನ್ನುವ ಬದಲು ಮೇಸ್ಟ್ರು ಹೇಳಿದ್ದನ್ನೇ ಒಪ್ಪಿ ಕೊಂಡು ಏಟು ತಪ್ಪಿಸಿಕೊಳ್ಳಬಹುದಿತ್ತು- ಎಂದು ಹೇಳ ಬಹುದಿತ್ತು, ಆದರೆ ಆ ಮಹಾತಾಯಿ ಹಾಗೆ ಮಾಡಲಿಲ್ಲ. ಸತ್ಯಕ್ಕೆ ಅಪಚಾರ ವಾಗುವುದನ್ನು ಎಂದೂ ಸಹಿಸಬೇಡವೆಂದು ಬಾಲ್ಯದಲ್ಲಿಯೇ ತಾಯಿಯು ಕಲಿಸಿದ್ದರಿಂದ ಒಬ್ಬ ಸತ್ಯವಾದಿ ವಿವೇಕಾನಂದ ನಾಗಿ ನರೇಂದ್ರನು ಬೆಳೆಯುತ್ತಾನೆ. ಕಷ್ಟವನ್ನು ತಪ್ಪಿಸಿಕೊಳ್ಳುವುದಕ್ಕೆ ದಾರಿಯನ್ನು ಸ್ವಲ್ಪ ಬದಲಿಸಿ ಸುಗುಮಗೊಳಿಸಲು ಆ ತಾಯಿ ಹೇಳಿಕೊಡಲಿಲ್ಲ.ನೇರವಾದ ದಾರಿಯಲ್ಲಿ ಕಲ್ಲುಮುಳ್ಳು ಇರುತ್ತೆ ಎಂದು ಸ್ವಲ್ಪ ಸುಗುಮವಾದ ದಾರಿ ಹಿಡಿಯೋಣವೆಂದು ಆ ತಾಯಿ ಹೇಳಿಕೊಡಲಿಲ್ಲ.ಮುಂದೆ ವಿವೇಕಾನಂದರು ಹೇಳಿಕೊಳ್ಳುತ್ತಾರೆ " ಇವತ್ತು ನಾನು ಏನಾಗಿದ್ದರೂ ಅದಕ್ಕೆ ನನ್ನ ತಾಯಿ ಕಾರಣ ವೆಂದು".

ಸ್ವಾತಂತ್ರ್ಯ ಪೂರ್ವದಲ್ಲಿ ಇಪ್ಪತ್ತು ದಾಟಿರದ ಯುವಕರು ನಗುನಗುತ್ತಾ ನೇಣುಗಂಬವನ್ನು ಏರಿದ್ದು ಇತಿಹಾಸ ವಾದರೆ ಇಂದಿನ ನಮ್ಮ ಮಕ್ಕಳ ಕಥೆ ಏನು? ಪರೀಕ್ಷೆಯಲ್ಲಿ ಮೊದಲ RANK ಬದಲು ನಾಲ್ಕನೇ RANK ಬಂದರೆ ಮಕ್ಕಳು ಆತ್ಮಹತ್ಯೆಗೆ ಶರಣಾಗುವುದನ್ನು ನಾವು ಕಾಣುತ್ತೇವೆ? ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವೇ ಇಲ್ಲ. ಮಕ್ಕಳ ಆತ್ಮ ಶಕ್ತಿಯನ್ನು ಜಾಗೃತ ಗೊಳಿಸಬೇಡವೇ? ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ನಾವು ಎಡವಿದ್ದೆಲ್ಲಿ? ಪ್ರಶ್ನೆ ಹಾಕಿಕೊಳ್ಳ ಬೇಡವೇ? ನಾವು ಈಗ ಲಾದರೂ ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದಾರಿ ಕಂಡುಕೊಳ್ಳಬೇಡವೇ? ಎಲ್ಲರೂ ಯಾವುದೋ ದಾರಿಯಲ್ಲಿ ಹೋಗುತ್ತಿದ್ದಾರೆಂದರೆ ನಾವೂ ಅದೇ ದಾರಿಯಲ್ಲಿ ಹೋಗಬೇಕೆ? ನಾವು ಕುರಿಮಂದೆಯಲ್ಲಾ! ಅಲ್ಲವೇ?ನಾವು ಜೀವನವನ್ನು ಹೇಗೆಂದರೆ ಹಾಗೆ ತೆಗೆದುಕೊಳ್ಳ ಬಾರದು.ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲವೂ ಹಳ್ಳಕ್ಕೆ ಬೀಳುತ್ತವೆ. ಕುರಿಗೂ ನಮಗೂ ವೆತ್ಯಾಸ ಬೇಡವೇ? ಯಾವುದೋ ಭ್ರಮೆಯಲ್ಲಿ ನಾವು ಬದುಕುತ್ತಿದ್ದೇವೆ. ನಮಗೆ ವಿದ್ಯಾಭ್ಯಾಸ ಇರಬಹುದು ಆದರೆ ಸ್ವತಂತ್ರವಾದ ಆಲೋಚನೆಯನ್ನು ಕಳೆದುಕೊಂಡುಬಿಟ್ಟಿದ್ದೇವೆ. ನಮಗೆ ಪ್ರತಿಕ್ರಿಯಿಸುವ ಶಕ್ತಿಯೇ ಇಲ್ಲವಾಗಿದೆ. ಸಮಾಜದಲ್ಲಿರುವ ದೀನ ದರಿದ್ರರ ಸ್ಥಿತಿಗತಿ ನಮಗೆ ಅರ್ಥವಾಗುವುದೇ ಇಲ್ಲ. ನಮ್ಮ ಈ ಸಂಪತ್ತಿಗೆ, ನಮ್ಮ ವಿದ್ಯೆಗೆ ಸಮಾಜದ ಎಷ್ಟು ಜನರ ಕೊಡುಗೆ ಇದೆ ಎಂಬ ಅರಿವು ನಮಗಿದೆಯೇ? ಹಳ್ಳಿಯ ರೈತ ಬೆಳಿಯದಿದ್ದರೆ ನಗರದಲ್ಲಿರುವವರು ಹಣ ಇಟ್ಟುಕೊಂಡು ಏನು ಮಾಡಲು ಸಾಧ್ಯ? ಮನೆಯ ಮುಂದಿನ ಕಸವನ್ನು ಜಾಡಮಾಲಿ ಬಂದು ಗುಡಿಸ ದಿದ್ದರೆ ನಮ್ಮ ನಗರ ಕೊಳೆತು ನಾರುವು ದಿಲ್ಲವೇ? ಹಾಗಾದರೆ ಯಾರಿಗೆ ಮಹತ್ವ ಕೊಡಬೇಕು? ನಾವು ಕೊಡುತ್ತಿದ್ದೇವೆಯೇ? ಎಲ್ಲರಂತಾಗುವುದರಲ್ಲೇನೂ ಅತಿಶಯವಿಲ್ಲ. ಬೇರೆಯದಾಗಿಯೇ ಚಿಂತನೆ ನಡೆಸಿ.ವಿವೇಕಾನಂದರು ಹೇಳುತ್ತಾರೆ" ಇತಿಹಾಸ ನಿರ್ಮಾಣ ಮಾಡುವವರು ಯಾರೋ ಕೆಲವರೇ ಹೌದು, ಆ ಕೆಲವರು ನಾವೇ ಏಕಾಗ ಬಾರದು? ಆಕೆಲವರು ನಮ್ಮ ಮಕ್ಕಳೇ ಏಕಾಗ ಬಾರದು ? ಎಂಬ ಪ್ರಶ್ನೆ ಮಾಡಿಕೊಳ್ಳಬೇಕು.

ಉಪನ್ಯಾಸದ ಎರಡನೆಯ ಭಾಗ: ಮಕ್ಕಳಿಗೆ ಕಷ್ಟ ದು:ಖಗಳ ಅರಿವು ಮೂಡಿಸಿ: ನಮ್ಮ ಮಕ್ಕಳು ಹಾಗೆ ವಿಶೇಷ ವ್ಯಕ್ತಿತ್ವ ಉಳ್ಳ ಪ್ರಜೆಗಳಾಗಿ ಬೆಳೆಯಬೇಕಾದರೆ ಅವರನ್ನು ಹೇಗೆ ಬೆಳೆಸಬೇಕು?ಅದರಲ್ಲಿ ನಮ್ಮ ಹೊಣೆ ಏನು? ನಾವು ಚಿಂತಿಸಬೇಕಾಗುತ್ತದೆ.ನಮ್ಮ ಮಕ್ಕಳು ವಿಶೇಷವಾಗಿ ಬೆಳೆಯ ಬೇಕಾದರೆ ಆನಿಟ್ಟಿನಲ್ಲಿ ನಾವು ಅವರನ್ನು ಬೆಳೆಸಬೇಕಾಗುತ್ತದೆ.ಈಗಿನ ಮಕ್ಕಳನ್ನು ಗಮನಿಸಿದಾಗ ಅವರಲ್ಲಿ ಮನೋಸ್ಥೈರ್ಯ ಕಡಿಮೆ ಇರುವುದನ್ನು ನಾವು ಕಾಣುತ್ತೇವೆ. ಮಕ್ಕಳ ಮನೋದೌರ್ಬಲ್ಯಕ್ಕೆ ಕಾರಣ ಕಂಡುಕೊಂಡಿದ್ದೀವಾ? ನಿಜವಾಗಿ ಮಕ್ಕಳಿಗೆ ಕಷ್ಟದ ಪರಿಕಲ್ಪನೆಯೇ ಇಲ್ಲ. ಅವರಿಗೆ ಕಷ್ಟವೆಂದರೇನು-ಅದರ ಅರಿವಿಲ್ಲ. ಅವರಿಗೆ ಕಷ್ಟದ ಅರಿವಾಗದಂತೆ ಸುಖದಲ್ಲಿ ಬೆಳೆಸಿದ್ದೇವೆ. ನಮ್ಮ ಚಿಂತನೆ ಹೇಗಿದೆ ಎಂದರೆ ಮಕ್ಕಳು ಬಯಸಿದ್ದನ್ನೆಲ್ಲಾ ನಾವು ಅವರಿಗೆ ಒದಗಿಸಿ ಕೊಟ್ಟರೆ ನಮ್ಮ ಮಕ್ಕಳು ಚೆನ್ನಾಗಿ ಓದುತ್ತಾರೆ, ಅದಕ್ಕಾಗಿ ನಾವು ಶಾಲೆಯನ್ನು ಹುಡುಕುತ್ತೇವೆ, ಯಾವ ಶಾಲೆಯಲ್ಲಿ ಸೌಕರ್ಯಗಳು ಹೆಚ್ಚಿದೆ,ಯಾವ ಶಾಲೆಯಲ್ಲಿ ಕಟ್ಟಡ ಚೆನ್ನಾಗಿದೆ,ಯಾವ ಶಾಲೆಗಳಿಗೆ ಶ್ರೀಮಂತ ಮಕ್ಕಳೇ ಹೋಗುತ್ತಾರೆ,ಯಾವ ಶಾಲೆಯಲ್ಲಿ ಅತಿ ಹೆಚ್ಚು ಫೀಸು ವಸೂಲು ಮಾಡುತ್ತಾರೋ ಅಂತಹ ಶಾಲೆಯನ್ನು ಹುಡುಕಿ ಸೇರಿಸುತ್ತೇವೆ. ನಾವಂತೂ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟಿದ್ದಾಯ್ತು, ಯಾವ ಅನುಕೂಲಗಳಿಲ್ಲದೆ ಬೆಳೆದಿದ್ದಾಯ್ತು ನಮ್ಮ ಮಕ್ಕಳಾದರೂ ಸುಖವಾಗಿರಲೆಂದು ನಮ್ಮ ಮಕ್ಕಳಿಗೆ ಕಷ್ಟದ ಸೋಂಕೂ ಬಾರದಂತೆ ಬೆಳೆಸುತ್ತೇವೆ, ಪರಿಣಾಮ ಏನಾಗುತ್ತದೆಂದರೆ ದೊಡ್ಡವನಾದಾಗ ಅವನಿಗೆ ಒಂದು ಚಿಕ್ಕ ಕಷ್ಟ ಬಂದರೂ ತತ್ತರಿಸಿ ಹೋಗುತ್ತಾನೆ.ಅವನಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಆತ್ಮ ಸ್ಥೈರ್ಯವಿಲ್ಲ.

ಹಾಗಾದರೆ ಮಕ್ಕಳನ್ನು ಹೇಗೆ ಬೆಳೆಸಬೇಕು? ಪೋಷಕರು ಕೆಲವು ಕಟ್ಟುಪಾಡುಗಳನ್ನು ಹಾಕಿಕೊಳ್ಳಬೇಕು, ನಿಮ್ಮಲ್ಲಿ ಈಗ ಸಾಕಷ್ಟು ಸಾಮರ್ಥ್ಯವಿರಬಹುದು, ನಿಮ್ಮ ಸಂಪತ್ತಿನಿಂದ ಮಕ್ಕಳಿಗೆ ನೀವು ಏನು ಬೇಕಾದರೂ ಪೂರೈಸಬಹುದು, ಆದರೂ ಮಕ್ಕಳಿಗೆ ನೀವು ಹೆಚ್ಚು ಹೆಚ್ಚು ಸೌಕರ್ಯಗಳನ್ನು ಒದಗಿಸಿದಾಗಲೂ ನೀವು ಅವರನ್ನು ಹೆಚ್ಚು ಹೆಚ್ಚು ದುರ್ಬಲರನ್ನಾಗಿ ಮಾಡುತ್ತಿದ್ದೀರೆಂಬುದನ್ನು ನೀವು ಮರೆಯ ಬಾರದು, ಅವರು ಮಕ್ಕಳಾಗಿದ್ದಾಗ ನೀವೇನೋ ಎಲ್ಲವನ್ನೂ ಪೂರೈಸಿ ಬಿಡುವಿರಿ, ಆದರೆ ಅವನು ದೊಡ್ದವನಾದಾಗ ಯಾವ ಕಷ್ಟಗಳೂ ಎದುರಾಗಬಹುದು,ಪ್ರತಿಯೊಬ್ಬ ಮನುಷ್ಯನ ಜೀವನ ದಲ್ಲೂ ಸುಖ-ದು:ಖ ಗಳೆಂಬುದು ಬಂದು ಹೋಗುವಂತಹ ಸಾಮಾನ್ಯ ಸಂಗತಿಗಳೆಂಬುದು ನಮಗೆ ತಿಳಿದಿರಬೇಕು.ಅದನ್ನು ಮಕ್ಕಳಿಗೆ ಕಲಿಸಿ ಕೊಡಬೇಡವೇ?ಬಾಲ್ಯದಲ್ಲಿ ಕಷ್ಟವನ್ನೇ ಅರಿಯದವನು ಮುಂದೆ ಬೆಳೆದು ದೊಡ್ದವನಾದಾಗ ಒಂದು ಚಿಕ್ಕ ಕಷ್ಟ ಎದುರಾದರೂ ಕುಸಿದು ಹೋಗುತ್ತಾನೆ.ಆದ್ದರಿಂದ ಚಿಕ್ಕಂದಿನಿಂದಲೇ ಮನಸ್ಸನ್ನು ಗಟ್ಟಿಗೊಳಿಸಬೇಕಿದೆ.ನಿಮ್ಮಲ್ಲಿ ಕೊಡುವ ಶಕ್ತಿ ಇದ್ದರೂ ಕೂಡ ಸ್ವಲ್ಪ ಮಟ್ಟಿಗೆ ನಿರಾಕರಿಸಿ, ನಾವು ಬಯಸಿದ್ದೆಲ್ಲಾ ಎಲ್ಲಾ ಕಾಲಕ್ಕೂ ಸಿಗುವುದಿಲ್ಲವೆಂಬ ನಿಜದ ಅರಿವನ್ನು ನಿಮ್ಮ ಮಕ್ಕಳಿಗೆ ಮಾಡಿ. ಸಮಾಜದಲ್ಲಿ ಸ್ಥಿತಿವಂತರು ಮಾತ್ರವೇ ಇಲ್ಲ, ದೀನ-ದರಿದ್ರರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿದೆ. ಅವರ ಕಷ್ಟದ ಜೀವನದ ದೃಶ್ಯವನ್ನು ನಿಮ್ಮ ಮಕ್ಕಳಿಗೆ ಪರಿಚಯಿಸಿ.ದುರ್ಬಲರ ಬಗ್ಗೆ ಪ್ರೀತಿ, ಕರುಣೆ, ಸಹಾಯ ಹಸ್ತ ನೀಡುವುದನ್ನು ಕಲಿಸಿ, ಮುಖ್ಯವಾಗಿ ಸರಳ ಬದುಕನ್ನು ಕಲಿಸಿ.

ಭಾಗ-೩:- "ಮನಸ್ಸನ್ನು ಗಟ್ಟಿಗೊಳಿಸಿ"

ಬೆಳವಣಿಗೆಯ ಮುಖ್ಯ ಅಂಶವೆಂದರೆ ಮನಸ್ಸನ್ನು ಗಟ್ಟಿಗೊಳಿಸುವುದು. ಸಾಮಾನ್ಯವಾಗಿ ನಾವೆಲ್ಲಾ ಶರೀರಕ್ಕೆ ಗಮನ ಕೊಡುತ್ತೇವೆ. ಶರೀರ ಗಟ್ಟಿಯಾಗಲು ಅಗತ್ಯವಾದ ಒಳ್ಳೆಯ ಆಹಾರ, ವಿಟಮಿನ್ ಗಳನ್ನು ಮಕ್ಕಳಿಗೆ ಕೊಡುತ್ತೇವೆ. ಆದರೆ ಮನಸ್ಸು ಗಟ್ಟಿಯಾಗಲು ಏನು ಕೊಡುತ್ತೇವೆ? ಹಿಂದಿನ ನಮ್ಮ ಪರಂಪರೆಯಲ್ಲಿ ಮಕ್ಕಳ ಮನಸ್ಸನ್ನು ಗಟ್ಟಿ ಮಾಡಲು ತುಂಬಾ ಗಮನ ಕೊಡುತ್ತಿದ್ದರು. ರಾಜನೂ ಕೂಡ ತನ್ನ ಮಕ್ಕಳನ್ನು ಕಾಡಿನಲ್ಲಿದ್ದ ಗುರುಕುಲಕ್ಕೆಕಳಿಸುತ್ತಿದ್ದ. ಗುರುಕುಲದಲ್ಲಿ ಅತ್ಯಂತ ದೈಹಿಕ ಶ್ರಮದ ಕೆಲಸವನ್ನು ಮಾಡಬೇಕಿತ್ತು, ಹಸುಗಳ ಮೈ ತೊಳೆಯಬೇಕಿತ್ತು, ಕಾಡಿನಲ್ಲಿ ಅಲೆದು ಸಮಿತ್ತು ತರಬೇಕಿತ್ತು, ಅವನು ಯುವರಾಜನಾದರೂ ಕೂಡ ಗುರುವಿನ ಸೇವೆ ಮಾಡಲೇ ಬೇಕಿತ್ತು,ಇತರ ಮಕ್ಕಳೊಂದಿಗೆ ಸರಿಸಮಾನವಾಗಿ ಬದುಕ ಬೇಕಿತ್ತು,ಮಕ್ಕಳೆಲ್ಲಾ ಕೃಷಿಯ ಕೆಲಸ ಮಾಡಬೇಕಿತ್ತು, ಹೀಗೆ ಎಲ್ಲಾ ಬಗೆಯ ಕೆಲಸಗಳನ್ನು ಎಲ್ಲಾ ಮಕ್ಕಳೂ ಮಾಡುತ್ತಾ ಮಾಡುತ್ತಾ, ಕಷ್ಟ ಸುಖಗಳನ್ನು ಒಟ್ಟಾಗಿ ಎದುರಿಸುತ್ತಾ ಎದುರಿಸುತ್ತಾ ಗಟ್ಟಿಯಾಗುತ್ತಿದ್ದರು. ತನ್ಮೂಲಕ ಅವರು ದೊಡ್ದವರಾಗಿ ಬೆಳೆದಾಗ ಕಷ್ಟ ಬರಲಿ ಸುಖವಿರಲಿ ಒಂದೇ ರೀತಿಯಲ್ಲಿ ಎದುರಿಸಲು ಸಮರ್ಥರಾಗುತ್ತಿದ್ದರು.ಜೀವನ ಕಷ್ಟ ಬಂದೇ ಬರುತ್ತದೆ, ಆದರೆ ಕಷ್ಟ ಬಂದಾಗ ಧೈರ್ಯ ಗುಂದದೆ ಎದುರಿಸುತ್ತಿದ್ದರು.ಕಷ್ಟ ಬಂದಾಗ,ದು:ಖ ಬಂದಾಗ ಅದಕ್ಕೆ ಹೆದರದೆ ಧೈರ್ಯ ಗುಂದದೆ ಎದುರಿಸಿ ನಿಂತಾಗ ಅದು ತಾನೇ ತಾನಾಗಿ ಪಲಾಯನ ಮಾಡುತ್ತೆ.

ವಿವೇಕಾನಂದರ ಜೀವನದಲ್ಲಿನ ಒಂದು ಘಟನೆ. ಕಾಶಿಯಲ್ಲಿ ರಸ್ತೆಯಲ್ಲಿ ನಡೆದು ಹೋಗುವಾಗ ಒಂದು ಕೋತಿಗಳ ಹಿಂಡು ವಿವೇಕಾನಂದರನ್ನು ಅಟ್ಟಿಸಿಕೊಂಡು ಬರುತ್ತವೆ, ವಿವೇಕಾನಂದರು ರಸ್ತೆಯಲ್ಲಿ ಓಡಿ ಹೋಗುತ್ತಿರುತ್ತಾರೆ, ಕೋತಿಗಳು ಅಟ್ಟಿಸಿಕೊಂಡು ಬರುತ್ತಲೇ ಇವೆ. ಒಬ್ಬ ಸನ್ಯಾಸಿ ಎದುರಾಗುತ್ತಾನೆ.ಕೇಳುತ್ತಾನೆ." ಏಕೆ ಓಡುತ್ತಿರುವೆ?" ವಿವೇಕಾನಂದರು ಹೇಳುತ್ತಾರೆ " ನೋಡಿ ಅಲ್ಲಿ, ಕೋತಿಗಳ ಹಿಂಡು ಅಟ್ಟಿಸಿಕೊಂಡು ಬರುತ್ತಿವೆ"

ಸನ್ಯಾಸಿ ಹೇಳುತ್ತಾನೆ" ನಿಲ್ಲು, ಹೆದರಿ ಪಲಾಯನ ಮಾಡಬೇಡ, ಎದುರಿಸು"

ವಿವೇಕಾನಂದರು ಕೋತಿಯ ಹಿಂಡಿನ ಎದುರು ನಿಲ್ಲುತ್ತಾರೆ. ಅವರ ಧೀರ-ಗಂಭೀರ ನಿಲುವನ್ನು ಕಂಡ ಕೋತಿಗಳು ಹಿಂದಿರುಗಿ ಓಡುತ್ತವೆ. ಈ ಘಟನೆಯನ್ನು ವಿವೇಕಾನಂದರು ತಮ್ಮ ಶಿಷ್ಯರಿಗೆ ಹೇಳುತ್ತಿರುತ್ತಾರೆ." ಜೀವನದಲ್ಲಿ ಕಷ್ಟಗಳು ಬಂದಾಗ, ದು:ಖ ಬಂದಾಗ ಹೆದರಿ ಪಲಾಯನ ಮಾಡದಿರಿ, ಎದುರಿಸಿ ಮೆಟ್ಟಿನಿಲ್ಲಿ, ಕಷ್ಟಗಳು ನಿಮಗರಿವಿಲ್ಲದಂತೆ ಕರಗಿ ಹೋಗುತ್ತವೆ. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮೊಳಗಿದೆ ಎಂಬುದನ್ನು ನಾವು ತಿಳಿಯ ಬೇಕು,ಕಷ್ಟಗಳು ಬರಲೇ ಬಾರದೆನ್ನಬೇಡಿ, ಸರ್ವಶಕ್ತನಾದ ಪರಮೇಶ್ವರನು ನನ್ನೊಳಗೆ ಇರುವಾಗ ಬಂದ ಕಷ್ಟಗಳನ್ನು ನನ್ನ ಆತ್ಮ ಶಕ್ತಿಯಿಂದ ಎದುರಿಸುತ್ತೇನೆಂಬ ವಿಶ್ವಾಸ ತಾಳಿ, ಮಕ್ಕಳಿಗೂ ಅದನ್ನೇ ಕಲಿಸಿ.ಮಕ್ಕಳಿಗೆ ಸೋಲಿನ ಅನುಭವವನ್ನೂ ಕೂಡ ಕಲಿಸಿ. ಒಂದು ಚಿಕ್ಕ ಘಟನೆ- "ಒಬ್ಬ ವಿದ್ಯಾರ್ಥಿ ಶಾಲೆಯಲ್ಲಿ ಎಲ್ಲಾ ಪರೀಕ್ಷೆಗಳಲ್ಲೂ ಮೊದಲ ಸ್ಥಾನ ಪಡೆಯುತ್ತಾ ಬಂದಿರುತ್ತಾನೆ. ಒಮ್ಮೆ ಅವನಿಗೆ ನಾಲ್ಕನೆಯ ಸ್ಥಾನ ಬಂದುಬಿಡುತ್ತೆ.ಅವನ ತಾಯಿ ನನ್ನೊಡನೆ ಹೇಳುತ್ತಾಳೆ " ಮಾತಾಜಿ ನನಗೆ ತುಂಬಾ ಸಂತೋಷವಾಯ್ತು. ನನ್ನ ಮಗನಿಗೆ ಎಲ್ಲರೀತಿಯ ಅನುಭವವೂ ಆಗಬೇಕು, ಜೀವನ ಒಂದೇ ರೀತಿ ಇರುವುದಿಲ್ಲವೆಂದು ಅವನಿಗೆ ಅರಿವಾಗಬೇಕು. ಮಕ್ಕಳಿಗೆ ಜೀವನದಲ್ಲಿ ನಂಬಿಕೆ,ಶ್ರದ್ಧೆ, ಸಹನೆಗಳನ್ನು ಕಲಿಸಿಕೊಡಿ. ಮಗುವಿಗೆ ತಿಳಿಸಿ " ನೀನು ಸಾಮಾನ್ಯನಲ್ಲ,ನೀನು ಅಸಾಮಾನ್ಯ, ನಮ್ಮ ದೇಶದಲ್ಲಿ ಆಗಿಹೋದ ಅನೇಕ ಮಹಾಪುರುಷರ ಜೀವನ ಚರಿತ್ರೆಯನ್ನು ಅವರಿಗೆ ತಿಳಿಸಿಕೊಟ್ಟು ನಿಮ್ಮ ಮಗುವಿಗೆ ಹೇಳಿ" ನೀನೂ ಮಹಾಪುರುಷ ನಾಗಬೇಕು, ಅದಕ್ಕಾಗಿಯೇ ನಿನ್ನ ಜನ್ಮ ವಾಗಿದೆ" ಜೀವನದಲ್ಲಿನ ಶ್ರೇಷ್ಟ ವಿಚಾರಗಳನ್ನು ಮಕ್ಕಳ ಕಿವಿಯಮೇಲೆ ನಿರಂತರ ಬೀಳುವಂತೆ ಮಾಡಿ.

ನಿಮ್ಮ ಆತ್ಮ ಪರೀಕ್ಷೆ ಮಾಡಿಕೊಳ್ಳಿ: ಮಕ್ಕಳಿಗೆ ಸಂಯಮದ ಪಾಠವನ್ನು ಹೇಳುವ ಮೊದಲು ನೀವು ಸಂಯಮವನ್ನು ಅಭ್ಯಾಸ ಮಾಡಿಕೊಳ್ಳಿ. ಮಕ್ಕಳು ಟಿವಿ ನೋಡಬಾರದೆಂದಾರೆ ನೀವು ಟಿವಿ ನೋಡುವದನ್ನು ನಿಲ್ಲಿಸಿ. ನೀವು ಟಿವಿ ನೋಡುತ್ತಾ ಮಕ್ಕಳನ್ನು "ನೀನು ರೂಮಿನಲ್ಲಿ ಓದು"ಎಂದು ಹೇಳಿದರೆ ಅದು ಯಾವ ನ್ಯಾಯ?ಮೊದಲು ನೀವು ಸಂಯಮ ಕಲಿತುಕೊಳ್ಳಿ.ನೀವು ಟಿವಿ ನೋಡುವುದನ್ನು ಬಿಟ್ಟರೆ ಮಕ್ಕಳೂ ಸಂತೋಷದಿಂದಲೇ ಬಿಡುತ್ತಾರೆ. ಒಳ್ಳೆಯ ಕಾರ್ಯಕ್ರಮ ಒಂದನ್ನು ನೀವು ಟಿವಿ ಯಲ್ಲಿ ನೋಡ ಬೇಕೆಂದರೆ ಮಕ್ಕಳನ್ನೂ ಕೂರಿಸಿಕೊಂಡು ಒಟ್ಟಿಗೇ ನೋಡಿ.ಉತ್ತಮ ಕಾರ್ಯಕ್ರಮಗಳನ್ನೇ ನೋಡಿ. ಮಕ್ಕಳಿಗೆ ಆದರ್ಶಗಳನ್ನು ಹೇಳುವ ಮುಂಚೆ ನಾವು ಜೀವನದಲ್ಲಿ ಅದನ್ನು ಅಳವಡಿಸಿ ಕೊಂಡಿದ್ದೀವಾ? ಯೋಚಿಸಿ. ಸಹನೆಯ ಮಾತನ್ನು ಮಕ್ಕಳಿಗೆ ಹೇಳುವಾಗ ನಾವು ತಂದೆತಾಯಿ ಹೇಗಿದ್ದೇವೆಂದು ಆತ್ಮ ಪರೀಕ್ಷೆ ಮಾಡಿಕೊಳ್ಳಿ. ಮೊದಲು ಆಚರಣೆಗೆ ತಂದು ನಂತರ ಮಕ್ಕಳಿಗೆ ಹೇಳಿದಾಗ ನೀವು ಅದ್ಭುತ ಪರಿಣಾಮವನ್ನು ಕಾಣಬಲ್ಲಿರಿ. ಅಪ್ಪ-ಅಮ್ಮ ಪರಸ್ಪರ ಹೇಗಿರುತ್ತಾರೆ, ಸಿಟ್ಟು ಮಾಡುತ್ತಾರಾ? ಕೆಟ್ಟ ಮಾತನ್ನಾಡುತ್ತಾರಾ? ಮಕ್ಕಳು ನಿಮ್ಮನ್ನು ಸದಾಕಾಲ ನೋಡುತ್ತಲೇ ಇರುತ್ತಾರೆ. ಮಕ್ಕಳು ಹೇಳಿದ್ದನ್ನು ಕಲಿಯುವುದಿಲ್ಲ,ಬದಲಿಗೆ ನೋಡಿದ್ದನ್ನು ಕಲಿಯುತ್ತಾರೆ.ಅಪ್ಪ-ಅಮ್ಮ ಹೇಗೆ ಬದುಕುತ್ತಾರೆ, ಅದರಂತೆ ಮಕ್ಕಳು ಬೆಳೆಯುತ್ತಾರೆ.ನೀವು ಮನೆಯಲ್ಲಿ ಎಷ್ಟು ಪವಿತ್ರವಾತಾವರಣ ವನ್ನುನಿರ್ಮಿಸುತ್ತೀರಿ, ಎಷ್ಟು ಶಾಂತತೆ ಕಾಪಾಡುತ್ತೀರಿ, ಎಷ್ಟು ಆನಂದದ ವಾತಾವರಣ ನಿರ್ಮಿಸುತ್ತೀರಿ, ಅಷ್ಟು ಸುರಕ್ಷಿತವಾಗಿ ನಿಮ್ಮ ಮಕ್ಕಳು ಬೆಳೆಯುತ್ತಾರೆ.ಹಳ್ಳಿಗಳಲ್ಲಿ ಅನೇಕ ಮನೆಗಳಲ್ಲಿ ನಾವು ಗಮನಿಸುತ್ತೇವೆ.ಮನೆ ತುಂಬಾಜನ. ತಾಯಿ ಯಾದವಳು ಹೆಚ್ಚೇನೂ ಓದಿರುವುದಿಲ್ಲ.ಶಾಂತವಾಗಿ ಎಲ್ಲರಿಗೂ ಅಡಿಗೆ ಮಾಡಿ ಪ್ರೀತಿಯಿಂದ ಉಣ ಬಡಿಸಿ,ಎಲ್ಲರಿಗೂ ಪ್ರೀತಿಯಿಂದ ಸೇವೆ ಮಾಡುತ್ತಾ ನಂತರ ಕಟ್ಟಕಡೆಗೆ ತಾನು ಉಳಿದಿದ್ದರೆ ಊಟ ಮಾಡುತ್ತಾಳೆ.ಅಂತಹ ಶಾಂತ ವಾತಾವರಣದಲ್ಲಿ ಬೆಳೆದ ಮಕ್ಕಳು ಅದ್ಭುತ ವ್ಯಕ್ತಿತ್ವ ಪಡೆಯುತ್ತಾ ಬೆಳೆಯುತ್ತಾರೆ. ಶಾಂತ ಸ್ವಭಾವದ ತಾಯಿ, ಪ್ರಭುದ್ಧ ತಂದೆ,ಇಂತಹ ಮನೆಯಲ್ಲಿ ಬೆಳೆಯುವ ಮಕ್ಕಳು ಸಹಜವಾಗಿ ಶ್ರೇಷ್ಟರಾಗಿ ಬೆಳೆಯುತ್ತಾರೆ.ಮಕ್ಕಳು ಗಮನಿಸುತ್ತಿರುತ್ತಾರೆ-ತಂದೆತಾಯಿ ಮನೆಯಲ್ಲಿ ಮಾತನಾಡುವಾಗ ಏನು ಮಾತಾಡ್ತಾರೆ,ದೇವರ ಕುರಿತು ಮಾತಾಡ್ತಾರಾ,ಸಮಾಜದ ಕುರಿತು ಮತಾಡ್ತಾರಾ, ದೇಶದ ಕುರಿತು ಮಾತಾಡ್ತಾರಾ!ಮಕ್ಕಳ ಬೆಳವಣಿಗೆ ಬಹಳ ಸುಲಭ,ಅವರಿಗೆ ನಾವು ಏನೂ ಹೇಳಬೇಕಾಗಿಲ್ಲ, ಅವರು ಮನೆಯಲ್ಲಿ-ಸುತ್ತಮುತ್ತ ಏನು ನೋಡುತ್ತಾರೋ, ಏನು ಗಮನಿಸುತ್ತಾರೋ, ಅದನ್ನು ಕಲಿಯುತ್ತಾರೆ. ಮುದ್ದಿನಜೊತೆಗೆ ಗುದ್ದು: ಒಬ್ಬ ತಾಯಿ ಸ್ವಾಮೀಜಿ ಪುರುಷೋತ್ತಮಾನಂದರ ಬಳಿ ಬಂದು ಸ್ವಾಮೀಜಿಯವರನ್ನು ಕೇಳುತ್ತಾಳೆ-" ಸ್ವಾಮೀಜಿ ನನ್ನ ಮಗ ನನ್ನ ಮಾತನ್ನು ಕೇಳುವುದೇ ಇಲ್ಲ ವಲ್ಲಾ, ಏನು ಮಾಡಲಿ?"

ಸ್ವಾಮೀಜಿ ಹೇಳುತ್ತಾರೆ. " ಚಿಕ್ಕಂದಿನಲ್ಲಿ ನೀನು ಮಗುವನ್ನು ಮುದ್ದುಮಾಡುವುದರ ಜೊತೆಗೆ ಗುದ್ದನ್ನೂ ಕೊಟ್ಟಿದ್ದರೆ ಇಂದು ನಿನ್ನ ಮಗ ನಿನ್ನ ಮಾತು ಕೇಳ್ತಾ ಇದ್ದ. ಆದರೆ ಒಂದು ಮಾತು ನಾವು ತಿಳಿದು ಕೊಳ್ಳ ಬೇಕು-ಸ್ವಾಮೀಜಿ ಹೇಳಿದ್ದು "ಮುದ್ದಿನ ಜೊತೆಗೆ ಗುದ್ದು" ಅಂದರೆ ಕೇವಲ ಮುದ್ದು ಮಾಡಿದರೂ ಸಾಲದು, ಕೇವಲ ಗುದ್ದು ಕೊಟ್ಟರೂ ಸಾಲದು. ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಹೃದಯಪೂರ್ವಕವಾಗಿ ತಾಯಿಯ ಪ್ರೀತಿ ಇದ್ದಾಗ ಮಾತ್ರ ಗುದ್ದು ಮಕ್ಕಳಲ್ಲಿ ಪರಿಣಾಮ ಉಂಟು ಮಾಡುತ್ತೆ.

ಮಕ್ಕಳನ್ನು ಬೆಳೆಸುವುದು ಒಂದು ಕಲೆಯೂ ಹೌದು, ಸವಾಲೂ ಹೌದು:

ನಿಮ್ಮ ಮಕ್ಕಳು ಹೀಗೆ ಬೆಳೆಯ ಬೇಕು ಎಂದು ನೀವು ನಿರೀಕ್ಷಿಸುವ ಮೊದಲು ನೀವು ಹಾಗಾಗಿರಬೇಕು. ಮಕ್ಕಳು ಸತ್ಯ ಹೇಳಬೇಕೆಂದರೆ ಮೊದಲು ನೀವು ಸತ್ಯವಂತರಾಗಿ,ಯಾವ ಸದ್ಗುಣಗಳನ್ನು ನೀವು ನಿಮ್ಮ ಮಕ್ಕಳಲ್ಲಿ ಅಪೇಕ್ಷಿಸುತ್ತೀರೋ ಅವುಗಳನ್ನು ಮೊದಲು ನೀವು ರೂಢಿಸಿಕೊಳ್ಳಿ. ಅತಿಯಾಗಿ ಸಿಹಿತಿನ್ನುತ್ತಿದ್ದ ಒಂದು ಮಗುವಿಗೆ ’ ನೀನು ಅತಿಯಾಗಿ ಸಿಹಿ ತಿನ್ನ ಬೇಡ’ ಎಂದು ಹೇಳಲು ಶ್ರೀ ರಾಮಕೃಷ್ಣ ಪರಮಹಂಸರು ತಾವು ಮೊದಲು ಸಿಹಿ ತಿನ್ನುವುದನ್ನು ನಿಲ್ಲಿಸಿ ತಾವು ಸಿಹಿಯ ಆಸೆ ತ್ಯಜಿಸಿದ ಮೇಲೆ ಮಗುವಿಗೆ " ಮಗು, ನೀನು ಸಿಹಿ ತಿನ್ನ ಬೇಡ" ಎಂದು ಹೇಳಿದ ಕಥೆ ನಮಗೆ ಗೊತ್ತಿರ ಬೇಕು.

ಮಕ್ಕಳಲ್ಲಿ ಹೆದರಿಕೆ ಉಂಟು ಮಾಡಬೇಡಿ: ಮಕ್ಕಳಲ್ಲಿ ಭಯವನ್ನು ಉಂಟು ಮಾಡಲೇ ಬೇಡಿ-" ಕತ್ತಲಿಗೆ ಹೋಗ ಬೇಡ,ಗುಮ್ಮ ಹಿಡಿದುಕೊಂಡು ಬಿಡುತ್ತೆ" -ಹೀಗೆ ಮಕ್ಕಳಲ್ಲಿ ಸಲ್ಲದ ಭಯವನ್ನು ಉಂಟು ಮಾಡುವ ತಾಯಂದಿರಿದ್ದಾರೆ. ಇದರಿಂದ ಮುಂದೆ ಮಕ್ಕಳು ಕಾಣದ ಜಾಗಕ್ಕೆ ಹೋಗುವಾಗ ಭಯ ಭೀತರಾಗುತ್ತಾರೆ.ಅಪರಿಚಿತ ಜಾಗಕ್ಕೆ ಹೋಗುವ ಸಾಹಸವನ್ನೇ ಮಾಡುವುದಿಲ್ಲ. ಬದಲಿಗೆ ಮಕ್ಕಳಿಗೆ ಹೇಳಿ-" ಕತ್ತಲಲ್ಲಿ ಹೋಗು, ಏನಿದೆ,ಪರೀಕ್ಷೆ ಮಾಡಿ ನೋಡು? ಏನೂ ಆಗುವುದಿಲ್ಲ" ಹೀಗೆ ಧೈರ್ಯ ತುಂಬಿ. ಅದರಿಂದ ಮುಂದೆ ನಿಮ್ಮ ಮಗ ಸಾಹಸಿಯಾಗಿ ಬೆಳೆಯುತ್ತಾನೆ.

ಮಕ್ಕಳನ್ನು ಎಡವಲು ಬಿಡಿ: ಮಕ್ಕಳು ತಪ್ಪು ಮಾಡಿದರೂ ಚಿಂತೆಯಿಲ್ಲ, ಅವರಿಗೆ ಮಾಡಲು ಬಿಡಿ. ನಡೆಯುವ ಕಾಲು ಎಡುವದಿರದು-ಎಂಬ ಮಾತಿನಂತೆ ಎಡವಿದರೂ ಪರವಾಗಿಲ್ಲ ಮುಂದೆ ನಡೆಯುವುದನ್ನು ಅವನು ಕಲಿಯುತ್ತಾನೆ ಆದ್ದರಿಂದ ಎಡವಲು ಬಿಡಿ.ಮಕ್ಕಳನ್ನು ಸ್ವತಂತ್ರವಾಗಿ ಬೆಳೆಯಲು ಬಿಡಿ.ಮುಂದೆ ಜೀವನದಲ್ಲಿ ಎಷ್ಟು ಎಡರು ತೊಡರುಗಳು ಬರುತ್ತದೋ ಯಾರಿಗೆ ಗೊತ್ತು, ಮುಂದೆ ಅವುಗಳನ್ನೆಲ್ಲಾ ಎದುರಿಸುವಂತಾಗಲು ಈಗ ಎಡವಲು ಬಿಡಿ, ತಿದ್ದಿಕೊಂಡು ನಡೆಯುವುದನ್ನು ಕಲಿಯುತ್ತಾನೆ.

ಮಗುವಿನ ಬೆನ್ನಿನ ಮೇಲೊಂದು ಲಗ್ಗೇಜು: ಸ್ವಾಮೀಜಿಯೊಬ್ಬರು ಯೂರೋಪ್ ಪ್ರವಾಸ ಮಾಡುವಾಗ ವಿಮಾನ ನಿಲ್ದಾಣದಲ್ಲಿ ತಾಯಿಯೊಬ್ಬಳು ಮಗುವಿನೊಡನೆ ಬರುತ್ತಿರುವುದನ್ನು ನೋಡುತ್ತಾರೆ. ತಾಯಿಯಹತ್ತಿರ ಒಂದು ಲಗ್ಗೇಜ್ ಇದೆ, ಐದು ವರ್ಷದ ಮಗುವಿನ ಬೆನ್ನಿನ ಮೇಲೂ ಒಂದು ಪುಟ್ಟ ಬ್ಯಾಗ್ ಇದೆ. ಆ ಬ್ಯಾಗಿನಲ್ಲಿ ಆ ಮಗುವಿನ ಬಟ್ಟೆಗಳು. ತಂದೆ ಬರುತ್ತಾನೆ. ಮಗುವನ್ನು ಮುದ್ದಾಡುತ್ತಾನೆ," ಅಯ್ಯೋ ಮಗುವಿನ ಬೆನ್ನಿನಮೇಲೆ ಹೊರೆ ಯಿದೆಯಲ್ಲಾ!! ಎಂದು ಸಂಕಟ ಪಟ್ಟು ಬ್ಯಾಗನ್ನು ತಾನು ಪಡೆಯುವುದಿಲ್ಲ ಬದಲಿಗೆ ಅದಕ್ಕೇ ಹೊರಲು ಬಿಡುತ್ತಾನೆ. ತನ್ನ ಜೀವನದ ಜವಾಬ್ದಾರಿ ತಾನೇ ಕಲಿಯಲೆಂಬ ಉದ್ದೇಶ ಅದರ ಹಿಂದೆ ಇರುವುದನ್ನು ಆತಂದೆ ತಿಳಿಸುತ್ತಾನೆ.

ಮಗುವಿಗೆ ಯಾವಾಗಲೂ" ನಿನಗೆ ಆಗುವುದಿಲ್ಲ, ನೀನಿನ್ನೂ ಚಿಕ್ಕವನು ಮಾಡಬೇಡ" ಹೀಗೆ ನಕಾರಾತ್ಮಕ ಮಾತುಗಳನ್ನು ಹೇಳಲೇ ಬೇಡಿ.ಅದು ತಪ್ಪು ಮಾಡಿದರೂ ಚಿಂತೆಯಿಲ್ಲ ಮಾಡಲು ಬಿಡಿ.ಹತ್ತು ಸಲ ತಪ್ಪು ಮಾಡಿದರೂ ಚಿಂತೆಯಿಲ್ಲ. ಹನ್ನೊಂದನೆಯ ಭಾರಿಯೂ ಮಾಡಲು ಬಿಡಿ, ಉತ್ತೇಜನ ಕೊಡಿ,ಆಗ ಸರಿ ಮಾಡುತ್ತಾನೆ.

ಅಮ್ಮ ಹೇಳಿದ್ದೆಲ್ಲಾ ಸತ್ಯ: ಮಕ್ಕಳು ಹೇಗೆ ಭಾವಿಸುತ್ತಾರೆಂದರೆ ಒಂದು ಸತ್ಯ ಘಟನೆಯನ್ನು ಗಮನಿಸಬೇಕು.ಆಕಾಶದಲ್ಲಿ ಮೋಡಕವಿದ ವಾತಾವರಣವಿರುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ " ಮಳೆ ಬರುತ್ತೆ,ಹೊರಗೆ ಹರವಿರುವ ಬಟ್ಟೆಯನ್ನುತೆಗೆದುಕೊಂಡು ಬಾ" ಎಂದು. ಬಟ್ಟೆ ತಂದ ಸ್ವಲ್ಪ ಸಮಯದಲ್ಲಿಯೇ ಮಳೆ ಬಂದು ಬಿಡುತ್ತೆ.ಮಗುವಿಗೆ ಅನ್ನಿಸುತ್ತೆ-ತನ್ನ ತಾಯಿ ಹೇಳಿದಂತೆ ಆಗುತ್ತೆ. ಇನ್ನೊಂದು ದಿನ ಅಪ್ಪ ಕಛೇರಿಯಿಂದ ಫೋನ್ ಮಾಡುವುದಾಗಿ ಮನೆಯಲ್ಲಿ ಹೇಳಿ ಹೋಗಿರುತ್ತಾನೆ.ಫೋನ್ ರಿಂಗಣಿಸುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ " ಅಪ್ಪ ಫೋನ್ ಮಾಡಿರ ಬಹುದು ಫೋನ್ ತೆಗೆದುಕೋ" -ಮಗು ಫೋನ್ ತೆಗೆದುಕೊಳ್ಳುತ್ತೆ. ಹೌದು ಅಪ್ಪನೇ ಫೋನ್ ಮಾಡಿರುವುದು. ಈಗಲೂ ಮಗುವಿಗೆ ಅನ್ನಿಸುತ್ತೆ ನಮ್ಮ ಅಮ್ಮ ಹೇಳೋದೆಲ್ಲಾ ನಿಜ.ಕಾಲಿಂಗ್ ಬೆಲ್ ಆಗುತ್ತೆ.ಬೆಲ್ ಶಬ್ಧ ತಾಯಿಗೆ ಮಾತ್ರ ಕೇಳಿಸಿರುತ್ತೆ, ತಾಯಿ ಮಗುವಿಗೆ ಹೇಳ್ತಾಳೆ " ಹೋಗಿ ಬಾಗಿಲು ತೆಗೆ, ಯಾರೋ ಬಂದಿದ್ದಾರೆ. ಮಗು ಬಾಗಿಲು ತೆಗೆಯುತ್ತೆ. ಹೌದು ಯಾರೋ ಬಂದಿದ್ದಾರೆ. ಮಗುವಿಗೆ ಒಂದು ಸಂಗತಿ ಗ್ಯಾರಂಟಿಯಾಯ್ತು. ಅಮ್ಮ ಹೇಳೋದೆಲ್ಲಾ ನಿಜವಾಗುತ್ತೆ. ಮಗುಸ್ವಲ್ಪ ದೊಡ್ಡದಾಯ್ತು, ಶಾಲೆಗೆ ಹೋಗುವಾಗ ಹಠ ಮಾಡ್ತು, ಆಗ ತಾಯಿ ಹೇಳಿದಳು "ನೀನು ಮೂರ್ಖ, ಶಾಲೆಗೆ ಹೋಗಬೇಡ, ಹಸು ಮೇಯಿಸಲು ಹೋಗು" ಅಮ್ಮ ಹೇಳಿದ್ದೆಲ್ಲಾ ನಿಜವಾಗುತ್ತದೆಂಬುದು ಈಗಾಗಲೇ ಮಗುವಿನ ಮನಸ್ಸಿನಲ್ಲಿ ಇದೆ, ಆಮಗು ತಾನು ಮೂರ್ಖನೇ ಇರಬೇಕು, ಅಂತಾ ಅಂದು ಕೊಂಡ.ಬರಬರುತ್ತಾ ದಡ್ದನೇ ಆಗಿಬಿಟ್ಟ.ಮನ:ಶಾಸ್ತ್ರದಲ್ಲಿ ಸಂಶೋಧನೆ ಮಾಡಿರುವ ಘಟನೆ ಇದು. ಮನೆಯಲ್ಲಿ ನಕಾರಾತ್ಮಕ ಮಾತುಗಳನ್ನು ಆಡಲೇ ಬೇಡಿ.

ಮಕ್ಕಳಿಗೆ ಹಂಚಿಕೊಂಡು ತಿನ್ನುವುದನ್ನು ಕಲಿಸಿ: ಮಕ್ಕಳು ಮನೆಯಲ್ಲಿ ಏನೋ ತಿಂಡಿ ತಿನ್ನುತ್ತಾ ಇರುತ್ತಾರೆ ಯಾರೋ ಬೇರೆ ಮಕ್ಕಳು ಮನೆಗೆ ಬರುವುದು ಗೊತ್ತಾಗುತ್ತೆ, ಆಗ ನಾವು ಸಾಮಾನ್ಯವಾಗಿ ಏನು ಮಾಡ್ತೇವೆ? ಹೋಗು ಒಳಗೆ ಹೋಗಿ ತಿನ್ನು,ಅಂತಾ ಮಕ್ಕಳಿಗೆ ಹೇಳುತ್ತೇವೆ.ಅದರ ಬದಲು ಆ ಮಗುವಿಗೂ ಸ್ವಲ್ಪ ಕೊಡು, ಆಮಗುವೂ ನಿನ್ನಂತ ಮಗುವೇ ಅಲ್ಲವೇ? ಎನ್ನುವ ಒಳ್ಳೆಯ ಮಾತನ್ನು ನಾವು ಹೇಳಿಕೊಡುತ್ತೇವೆಯೇ?

ಕೊನೆಯದಾಗಿ ಒಂದು ಘಟನೆ. ಒಂದು ಹಳ್ಳಿಯಲ್ಲಿ ಒಬ್ಬ ವಿಧವೆ.ಅತೀ ಬಡತನದಿಂದ ಮಗನನ್ನುಪಟ್ಟಣದಲ್ಲಿ ಓದಿಸಿ ದೊಡ್ದವನನ್ನಾಗಿ ಮಾಡುತ್ತಾಳೆ. ಒಂದು ಸರಕಾರಿ ಕೆಲಸ ಸಿಗುತ್ತೆ.ಅಲ್ಲಿಯವರಗಿದ್ದ ಬಡತನವೆಲ್ಲಾ ದೂರವಾಗುತ್ತದೆಂದು ಹಳ್ಳಿಯ ಜನರೆಲ್ಲಾ ಮಾತನಾಡಿಕೊಳ್ಳುತ್ತಾರೆ.ಸಂಬಳದ ಜೊತೆಗೆ ಲಂಚವೂ ಸಿಗುವಂತ ಕೆಲಸವೆಂದು ಜನರಾಡುವ ಮಾತು ಈ ತಾಯಿಯ ಕಿವಿಗೆ ಬೀಳುತ್ತೆ. ಅಮ್ಮನಿಗೆ ವಿಷಯವನ್ನು ತಿಳಿಸಲು ಮಗ ಹಳ್ಳಿಗೆ ಬಂದು ನಮಸ್ಕರಿಸುತ್ತಾನೆ, ಆಗ ತಾಯಿಯು -" ನೀನು ನನ್ನ ಎದೆಹಾಲು ಕುಡಿದು ಬೆಳೆದ ಮಗನೇ ಆಗಿದ್ದಲ್ಲಿ ಸಂಬಳದ ಹೊರತಾಗಿ ಒಂದು ಬಿಡಿಗಾಸನ್ನೂ ಲಂಚವಾಗಿ ಪಡೆಯ ಕೂಡದು, ನನ್ನ ಬಡತನ ಹೀಗೆಯೇ ಇದ್ದರೂ ಚಿಂತೆಯಿಲ್ಲ, ನೀನು ಮಾತ್ರ ಪ್ರಾಮಾಣಿಕನಾಗಿ ಜನರ ಸೇವೆ ಮಾಡಬೇಕು" ಎಂದು ಹರಸುತ್ತಾಳೆ.ಮಗ ಅಮ್ಮನ ಮಾತನ್ನು ಶಿರಸಾ ಪಾಲಿಸುತ್ತಾನೆ.ದೊಡ್ಡ ಅಧಿಕಾರಿಯಾಗಿ ಪ್ರಾಮಾಣಿಕನಾಗಿ ಸೇವೆ ಸಲ್ಲಿಸಿ ಹೆಸರು ಗಳಿಸುತ್ತಾನೆ.ಅಮ್ಮನಿಗೆ ಆನಂದ ವಾಗುತ್ತದೆ. ಸಮಾಜದಲ್ಲಿ ಇಂತಾ ಉದಾಹರಣೆಗಳು ಸಾಕಷ್ಟಿವೆ. ನೀವುಗಳೂ ಕೂಡ ಒಳ್ಳೆಯ ತಂದೆ-ತಾಯಿಯಾಗಿ ಆದರ್ಶ ವಾಗಿ ಬಾಳುತ್ತಾ ನೀವೂ ಬೆಳೆಯಿರಿ ಮಕ್ಕಳನ್ನೂ ಉತ್ತಮರನ್ನಾಗಿ ಬೆಳೆಸಿ.