Pages

Tuesday, February 1, 2011

ನಮ್ಮೂರಿನ ಸಹೃದಯಿಗಳು

ವೇದಸುಧೆಯ ವಾರ್ಷಿಕೋತ್ಸವವನ್ನು ಮಾಡಬೇಕೆಂದು ಕೊಂಡಿದ್ದು ವೇದಸುಧೆಯ ಗೌರವ ಸಂಪಾದಕರಾದ ಕವಿ ನಾಗರಾಜರು,ಶ್ರೀ ಪ್ರಭಾಕರ್ ಮತ್ತು ನಾನು ಮಾತ್ರ . ಬೆಂಗಳೂರಿನ ಶ್ರೀ ಸುಧಾಕರಶರ್ಮರ ಮನೆಯಲ್ಲಿ ನಂತರದ ಬೈಠಕ್ ಮಾಡಿದರೂ ಉಳಿದದ್ದೆಲ್ಲಾ ನಾಗರಾಜರೊಡನೆ ಕುಳಿತು ಹಾಸನದಲ್ಲಿ ಮಾತುಕತೆ ಮಾಡಿ ವಾರ್ಷಿಕೋತ್ಸವದ  ಖರ್ಚನ್ನು ನಾವಿಬ್ಬರೂ ಭರಿಸುವುದೆಂದು ನಿರ್ಧರಿಸಿದೆವು. ಶ್ರೀ ಶಂಕರ ಮಠದಲ್ಲಿ  ಸ್ಥಳಾವಕಾಶದ  ಅನುಮತಿ ಪಡೆದನಂತರ ನಮ್ಮೊಡನೆ ಮಿತ್ರ ಕೆ.ವಿ.ರಾಮಸ್ವಾಮಿ ಸೇರಿಕೊಂಡರು.ಸಾರ್ ನನ್ನದೊಂದು ಚಿಕ್ಕ ಕಾಣಿಕೆ ನೀವು ಪಡೆಯಲೇ ಬೇಕೆಂದರು.ಅವರು ನೀಡಿದ 505.00 ರೂ ಪಾಯಿಗಳು ಐವತ್ತು ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನದು. ಕಾರಣ ಅವರ ಮನೆಯ ಸಧ್ಯದ ಪರಿಸ್ಥಿತಿ ಹಾಗಿದೆ. ನಂತರ  ಭೇಟಿಯಾಗಿದ್ದು ಹಾಸನದ ಶಿಕ್ಷಣ ತಜ್ಞರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರನ್ನು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಅವರನ್ನು ಕೇಳಿಕೊಂಡಾಗ ಕಾರ್ಯಕ್ರಮದ ಸಂಪೂರ್ಣ ವಿವರ ಪಡೆದು 150 ಜನರಿಗೆ ಊಟದ ವ್ಯವಸ್ಥೆಯಾಗಬೇಕಲ್ಲಾ![ಆಗಿನ ನಮ್ಮ ಅಂದಾಜು ಅಷ್ಟೇ ಇತ್ತು ]ನನ್ನ ಪಾಲು 10 ಸಾವಿರ ರೂಪಾಯಿ ಇರಲಿ, ಎಂದು ಹಣವನ್ನು ಕೈಲಿಟ್ಟು , ಕ್ಯಾರಿ ಆನ್, ದೇವರು ಒಳ್ಳೆಯದು ಮಾಡ್ತಾನೆ, ಅಂದರು. ಸರಿ, ನಮಗೆ ಆಗ ಅನ್ನಿಸ್ತು, ಈ ಕಾರ್ಯಕ್ರಮ ನಮ್ಮಿಬ್ಬರದ್ದಲ್ಲ. ಇದು ವೇದಾಭಿಮಾನಿಗಳದ್ದು. ಆ ಹೊತ್ತಿಗಾಗಲೇ ಶ್ರೀ ವಿಶಾಲ್ ರನ್ನು ಸಂಪರ್ಕಿಸಿ  ಈ ಹಿಂದೆ ಹಾಸನದಲ್ಲಿ ಶ್ರೀ ಶರ್ಮರು ನೀಡಿದ್ದ ಅದ್ಭುತವಾದ ಉಪನ್ಯಾಸಗಳ ಸಿ.ಡಿ ಮಾಡಲು ತಯಾರಿ ನಡೆದಿತ್ತು.  ಒಂದು ಸಾವಿರ ಸಿ.ಡಿ ಮಾಡಲು ಸುಮಾರು ಹದಿನೈದು ಸಹಸ್ರರೂಪಾಯಿ ಅಂದಾಜು ಮಾಡಲಾಗಿತ್ತು.ದನ್ನು ವೈಯಕ್ತಿಕವಾಗಿ ನಾನು ಭರಿಸುವುದಾಗಿ ತಿಳಿಸಿದ್ದೆ. ಆತ್ಮೀಯರಾದ ಶ್ರೀ ಪ್ರಕಾಶ್ ಎಸ್.ಯಾಜಿಯವರಿಗೆ ಈ ವಿಷಯ ತಿಳಿದಾಗ ಹಾಸನದ ಪ್ರಖ್ಯಾತ ದಾನಿಗಳೂ ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಗೋವಿಂದರಾಜ ಶ್ರೇಷ್ಠಿಯವರು ಹಾಗೂ ಶ್ರೀ ಗೋಪಾಲಕೃಷ್ಣ ಪ್ರಭುಗಳೊಡನೆ ಸೇರಿ ನಾವು ಮೂವರು ಭರಿಸುವುದಾಗಿ ತಿಳಿಸಿದರು.  ವಿಷಯ ತಿಳಿದ ಶ್ರೀ ಗೋವಿಂದರಾಜಶ್ರೇಷ್ಠಿಯವರು ಅವರನ್ನು ಭೇಟಿಯಾಗುತ್ತಿದ್ದಂತೆ ನಾವು ಬರುವ ಮುಂಚೆಯೇ, ಅವರೊಡನೆ ಪ್ರಸ್ತಾಪಮಾಡುವ ಮುಂಚೆಯೇ ಹನ್ನೊಂದುಸಾವಿರದ ಒಂದುನೂರ ಹನ್ನೊಂದು ರೂಪಾಯಿಗಳನ್ನು ನಮ್ಮ ಕೈಲಿಟ್ಟು ಶುಭ ಕೋರಿದರು. ಶ್ರೀ ನಿಟ್ಟೂರು ಜಯರಾಮ್ ವೀಡಿಯೋ ನನ್ನ ಪಾಲಿಗಿರಲಿ, ಎಂದರು. ಮಿತ್ರ ಶ್ರೀ ರಂಗೇಗೌಡರು ಆಕಾಶವಾಣಿಯ ರೆಕಾರ್ಡಿಂಗ್ ಮಾಡಿಸಿ ಬಿಡಿ, ಅದರ ಖರ್ಚು ನನಗಿರಲಿ, ಎಂದರು. ಸೆಸ್ಕ್ ಅಧಿಕಾರಿ ಶ್ರೀಮತಿ ಲತಾ, ಮಿತ್ರ ಶ್ರೀ ಪಾರಸ್ ಮಲ್, ಶ್ರೀ ಕೇಶವ ಪ್ರಕಾಶ್ ,ಇವರುಗಳು ಬ್ಯಾನರ್ ಮಾಡಿಸಲು, ಆಹ್ವಾನಪತ್ರಿಕೆ ಮಾಡಿಸಲು ಮುಂದೆ ಬಂದರು. ನಾವಿಬ್ಬರು ಎಲ್ಲಾ ಖರ್ಚನ್ನೂ ಭರಿಸಬೇಕೆಂದು ನಿಶ್ಚಯಿಸಿದ್ದಾಗ ಮಿತ್ರರಾದ ಕವಿ ಸುರೇಶ್, ನನ್ನ ಪಾಲೂ ಇರಲಿ, ಎಂದರು. ಮಗಳನ್ನು ಕರೆದುಕೊಂಡು ಬಂದು ಸುಶ್ರಾವ್ಯವಾದ ವಯೋಲಿನ ಕಛೇರಿ ವ್ಯವಸ್ಥೆ ಮಾಡಿಯೇ ಬಿಟ್ಟರು.
ಸಹೃದಯಿಗಳು ಹೀಗೆ ಮುಂದೆ ಬಂದಾಗ ಎಂತಹಾ ಸ್ಪೂರ್ಥಿ ಸಿಕ್ಕೀತು! ಲೋಕಲ್ ಚಾನೆಲ್ ಅಮೋಘ ದವರು ಕಾರ್ಯಕ್ರಮದ ಮುಂಚೆಯೇ ಸಂದರ್ಶನ ನಡೆಸಿ ಪ್ರಚಾರಕ್ಕೆ ಚಾಲನೆ ಕೊಟ್ಟರೆ, ಸ್ಥಳೀಯ ಪತ್ರಿಕೆ"ಹಾಸನವಾಣಿ"
ಸಂಪಾದಕರಾದ ಶ್ರೀಮತೀ ಲೀಲಾವತಿಯವರು ಪತ್ರಿಕೆಯಲ್ಲಿ ಸುದ್ಧಿ ಪ್ರಕಟಿಸುವುದೇ ಅಲ್ಲದೆ ನಮ್ಮೊಡನೆ ಉಳಿದ ಕೆಲಸಗಳಲ್ಲೂ ಕೈ ಜೋಡಿಸಿದರು. ಇಷ್ಟೆಲ್ಲಾ ಸಹಕಾರ ಸಿಕ್ಕಿದಮೇಲೆ ನಮ್ಮನಿರೀಕ್ಷೆಗೂ ಮೀರಿ  ಸುಮಾರು ೩೫೦-೪೦೦ ಜನ ವೇದಾಭಿಮಾನಿಗಳು ವೇದಸುಧೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಯುವ ವರೆಗೂ ಶಾಂತ ಭಾವದಿಂದ ಕುಳಿತು ಕಾರ್ಯಕ್ರಮದಲ್ಲಿ ತಮ್ಮನು ತಾವು  ಮರೆತಿದ್ದರು. ಎಲ್ಲರ ಮನಸೆಳೆದ "ಅಗ್ನಿಹೋತ್ರ ಕಾರ್ಯಕ್ರಮ " ಹಾಗೂ ವೇದಾಧ್ಯಾಯೀ ಸುಧಾಕರ ಶರ್ಮರ ಅದ್ಭುತವಾದ ಉಪನ್ಯಾಸ , ವಿಚಾರ ಸಂಕಿರಣ, ಪುಟಾಣಿ ಸಹನಳ ದೀಪ ನೃತ್ಯ, ಮಧ್ಯೆ ಮಧ್ಯೆ ಸ್ವಾತಿ , ಸಹನ ಹಾಗೂ ಶ್ರೀಮತಿ ಲಲಿತಾ ರಮೇಶ ರ ಗೀತ ಗಾಯನ, ಎಲ್ಲವೂ ವೇದಾಭಿಮಾನಿಗಳ ಮನ ಗೆದ್ದವು.
ವಾರ್ಷಿಕೋತ್ಸವ ಮುಗಿದ ಮಾರನೆಯ ದಿನವೇ ಅದರ ಲೆಕ್ಖಾಚಾರ ಮುಗಿದಿತ್ತು. ಶ್ರೀ ಕವಿ ನಾಗರಾಜ್ ಮತ್ತು ನನ್ನ ಪಾಲಿಗೆ ಬಂದಿದ್ದು ಅತ್ಯಲ್ಪ ಮಾತ್ರ. ಹಾಸನದ  ಸಹೃದಯಿಗಳ ಮನ: ಪೂರ್ವಕ ಸಹಕಾರವನ್ನು ನಾವು ಮರೆಯುವುದಾದರೂ ಹೇಗೆ?
ಕಾರ್ಯಕ್ರಮದ ಜಮಾ -ಖರ್ಚು ಎಲ್ಲರಿಗೂ ತಿಳಿದಿರಲಿ, ಎಂದು ಪ್ರಕಟಿಸಿರುವೆ. ಸಿಡಿ ಮಾರಾಟದಿಂದ ಬರುವ ಉತ್ಪತ್ತಿಯನ್ನು ಶ್ರೀ ಶರ್ಮರು ವೇದಸಾಹಿತ್ಯ ಪ್ರಕಟಣೆಗೆ ಸದ್ವಿನಿಯೋಗ ಮಾಡಿಕೊಳ್ಳುವರು. 
ವೇದಸುಧೆ ಅಂತರ್ಜಾಲದ ಪ್ರಥಮ ವಾರ್ಷಿಕೋತ್ಸವದ ಜಮಾ ಖರ್ಚು ವಿವರ

                ಜಮಾ                                                  ಖರ್ಚು
1
ಶ್ರೀ ಕೆ.ವಿ.ರಾಮಸ್ವಾಮಿ
505.00
ಬ್ಯಾನರ್
750.00
2
ಶ್ರೀ ಸಿ.ಎಸ್.ಕೃಷ್ಣಸ್ವಾಮಿ
10000.00
ಊಟೋಪಚಾರ
18000.00
3
ಶ್ರೀ ಗೋವಿಂದರಾಜ ಶ್ರೇಷ್ಠಿ
11111.00
ಸಿ.ಡಿ. ತಯಾರಿ
6700.00
4
ಶ್ರೀ ಗೋಪಾಲಕೃಷ್ಣ ಪ್ರಭು 
ಶ್ರೀ ಪ್ರಕಾಶ್ ಎಸ್.ಯಾಜಿ
5000.00
ಆಕಾಶವಾಣಿ
6254.00
5 ಶ್ರೀ ದಿನಮಣಿ 200.00

6
ಶ್ರೀ ಜಯರಾಮ್ ನಿಟ್ಟೂರು
5000.00
ವೀಡಿಯೋ
5000.00
7
ಶ್ರೀ ಪಾರಸ್ ಮಲ್
1000.00
ಧ್ವನಿ ವರ್ಧಕ
1000.00
8
ಶ್ರೀಮತಿ ಬಿ.ಟಿ.ಲತಾ
1000.00
ಆಹ್ವಾನ ಪತ್ರಿಕೆ ಮುದ್ರಣ
1200.00
9
ಶ್ರೀ ಕೇಶವ ಪ್ರಕಾಶ್
1000.00
ಅತಿಥಿಗಳಿಗೆ ವಸತಿ
500.00
10
ಶ್ರೀ ಎಂ.ಬಿ. ರಂಗೇಗೌಡ
5000.00
ಇತರೆ [ಹೋಮದ ತಯಾರಿ,ಕೆಲಸದವರಿಗೆ, ಇತ್ಯಾದಿ]
1000.00
11
ಶ್ರೀ ನಾಗರಾಜ್ ನಿಟ್ಟೂರು
110.00
ಛತ್ರಕ್ಕೆ[ಸ್ವಚ್ಚತೆ,ವಿದ್ಯುತ್, ಚಪ್ಪರ,ಇತ್ಯಾದಿ]
2450.00
12 ಕವಿ ನಾಗರಾಜ್ 1464.00

13
ಹರಿಹರಪುರಶ್ರೀಧರ್
1464.00


14
ಒಟ್ಟು
42854.00

42854.00





’ವೇದಸುಧೆ’ ಅಂಬೆಗಾಲಿಕ್ಕಿದ ಚಂದ


’ವೇದಸುಧೆ’ ಅಂಬೆಗಾಲಿಕ್ಕಿದ ಚಂದ

ನಿನ್ನೆ ೩೦.೦೧.೨೦೧೧ ರಂದು ಹಾಸನದ ಶ್ರೀ ಶಂಕರಮಠದ ಶ್ರೀಭಾರತೀತೀರ್ಥ ಸಂಭಾಂಗಣದಲ್ಲಿ ಸುಮಾರು ೭೦೦ ಜನರಷ್ಟು ಸೇರಿದ್ದರು. ಬಂದವರಲ್ಲಿ ಅನೇಕರು ಬ್ಲಾಗಿಗರೂ ಇದ್ದರೆಂಬುದು ಸಂತಸದ ವಿಷಯ. ತಮಗೆಲ್ಲಾ ಮೊದಲೇ ಹೇಳಿದ ಹಾಗೇ ’ವೇದಸುಧೆ’ಯ ವಾರ್ಷಿಕೋತ್ಸವದ ಸಂಭ್ರಮ. ವೇದಸುಧೆ ಬಳಗ ಅದರಲ್ಲೂ ಪ್ರಮುಖವಾಗಿ ಮಿತ್ರರಾದ ಶ್ರೀ ಹರಿಹರಪುರ ಶ್ರೀಧರ್, ಕವಿ ಸುರೇಶ್, ಕವಿ ನಾಗರಾಜ್, ರಾಮಸ್ವಾಮಿ ಮೊದಲಾದವರು ತಮ್ಮ ಅನೇಕ ದಿನಗಳ ಶ್ರಮಕ್ಕೆ ಫಲವನ್ನು ಕಾಣುತ್ತಿದ್ದರು. ಬೆಳಿಗ್ಗೆ ಬಿಸಿಬಿಸಿ ಶ್ಯಾವಿಗೆ ಬಾತು, ಕಾಫಿ/ಟೀ ೯ ಗಂಟೆಗೆ ಎಲ್ಲರಿಗೂ ನೀಡಲ್ಪಟ್ಟು ಉಪಾಹಾರ ಅಚ್ಚುಕಟ್ಟಾಗಿ ಮುಗಿದರೆ ಸಭಾಕಾರ್ಯಕ್ರಮ ಸರಿಯಾಗಿ ಹತ್ತು ಗಂಟೆಗೆ ಆರಂಭವಾಯಿತು. ಕವಿ ಸುರೇಶ್ ಅವರು ತಮ್ಮ ಸರಳ ನಿರೂಪಣಾ ಶೈಲಿಯಲ್ಲಿ ಅತಿಥಿಗಳೆಲ್ಲರನ್ನೂ ವೇದಿಕೆಗೆ ಆಹ್ವಾನಿಸಿದರೆ, ಪ್ರಾಸ್ತವಿಕ ಮಾತುಗಳನ್ನಾಡುತ್ತಾ ಶ್ರೀಧರ್ ಅವರು ’ವೇದಸುಧೆ’ ರೂಪುತಳೆದ ಬಗೆಯನ್ನು ವಿವರಿಸಿದರು. ಶಂಕರಮಠದ ಧರ್ಮಾಧಿಕಾರಿಗಳಾದ ಶ್ರೀ ಎಮ್.ಎಸ್, ಶ್ರೀಕಂಠಯ್ಯ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಮಾರಿ ಸಹನಾಳಿಂದ ಮನಮೋಹಕ ದೀಪನೃತ್ಯ ನಡೆಯಿತು. ಶರ್ಮರಿಂದ ಪ್ರವಚಿಸಲ್ಪಟ್ಟ ’ವೇದೋಕ್ತ ಜೀವನಪಥ’ ಎಂಬ ಶ್ರಾವ್ಯಮಾಧ್ಯಮ ತಟ್ಟೆಯ ಬಗ್ಗೆ ವೇದಸುಧೆಯ ಶ್ರೀ ವಿಶಾಲ್ ಅವರು ಮಾತನಾಡಿದರು. ನಂತರ ಆ ಶ್ರಾಯ್ವ ಮಾಧ್ಯಮ ತಟ್ಟೆ[ಆಡಿಯೋ ಸೀಡಿ] ಬಿಡುಗಡೆಗೊಂಡಿತು. ಶಿವಮೊಗ್ಗೆಯ ಕುಮಾರಿ ಅಂಬಿಕಾ ಸುಶ್ರಾವ್ಯವಾಗಿ ವಯೋಲಿನ್ ನುಡಿಸಿದರು. ನಂತರ ಆರಂಭವಾದ ’ಆರೋಗ್ಯಕರ ಬದುಕು ಮತ್ತು ವೇದ’ ವಿಚಾರಸಂಕಿರಣದಲ್ಲಿ ಡಾ|ಶ್ರೀವತ್ಸ ಎಸ್.ವಟಿ, ಡಾ| ವಿವೇಕ್, ಕುಮಾರಿ ಶೃತಿ, ಶ್ರೀ ದಕ್ಷಿಣಾಮೂರ್ತಿ, ಶ್ರೀ ನಾಗರಾಜ್ ದೀಕ್ಷಿತ್ ಮತ್ತು ನಾನು ಭಾಗವಹಿಸಿದ್ದೆವು. ವಿವಿಧ ದೃಷ್ಟಿಕೋನಗಳ ವಿಚಾರಧಾರೆಗಳು ಹರಿದವು. ಮಧ್ಯೆ ಮಧ್ಯೆ ಶ್ರೀಮತೀ ಲಲಿತಾ ರಮೇಶ್ ಮತ್ತು ಕುಮಾರಿ ಸ್ವಾತಿ ಮತ್ತು ಕುಮಾರಿ ಸಹನಾ ಈ ಮೂವರಿಂದ ಸುಮಧುರ ಗೀತ ಗಾಯನಗಳು ನಡೆದವು. ಶ್ರೀ ಸುಧಾಕರ ಶರ್ಮರು ತಮ್ಮ ಆಳವಾದ ವಿಶ್ಲೇಷಣೆಯೊಂದಿಗೆ ವಿಚಾರ ಸಮನ್ವಯಗೊಳಿಸಿದರು. ವೇದಸುಧೆಯ ಎಲ್ಲಾ ಕಾರ್ಯಗಳಿಗೆ ಆಧಾರವಾಗಿ ನಿಂತಿರುವ ಹಾಗೂ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಶ್ರೀ ಸಿ.ಎಚ್.ಕೃಷ್ಣಸ್ವಾಮಿಯವರು [ಹಲವು ವೇದಿಕೆಗಳಲ್ಲಿ ನಡೆಯುವಂತೇ:ಯಾವ ಸಬೂಬನ್ನೂ ಹೇಳಿ ತೆರಳದೇ]ಕಾರ್ಯಕ್ರಮದ ಅಂತ್ಯದವರೆಗೂ ವೇದಿಕೆಯಲ್ಲೇ ಹಾಜರಿದ್ದು ಸಮಯಾಭಾವದಿಂದ ಕೇವಲ ಎರಡೇ ಹಿತನುಡಿಗಳಲ್ಲಿ ತಮ್ಮ ಮಾತು ಮುಗಿಸಿದರು. ವೇದಸುಧೆಯ ವತಿಯಿಂದ ವೇದಿಕೆಯಲ್ಲಿರುವ ಎಲ್ಲರಿಗೂ ಹಾರಾರ್ಪಣೆಯ ಗೌರವದೊಂದಿಗೆ ವೇದಸುಧೆ ಹೊರತಂದ ’ವೇದೋಕ್ತ ಜೀವನ ಪಥ’ ಸೀಡಿ ನೀಡಿ ಸನ್ಮಾನಿಸಲಾಯಿತು. ವೇದಸುಧೆ ಬಳಗದ ನೇತೃತ್ವ ವಹಿಸಿ ಕಾರ್ಯಕ್ರಮದ ರೂವಾರಿಯಾದ ಶ್ರೀ ಹರಿಹರಪುರ ಶ್ರೀಧರ್ ಅವರಿಗೆ ವೇದಸುಧೆ ಬಳಗದ ಮಿಕ್ಕೆಲ್ಲರೂ ಸೇರಿ ಹಾರಾರ್ಪಣೆ ಮಾಡಿ ಗೌರವಿಸಿದರು.

ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ಮಧ್ಯಾಹ್ನ ೩ ಗಂಟೆ ಯಾಗಿತ್ತಾದರೂ ಜ್ಞಾನದಾಹಿಗಳಾದ ಸಭಿಕರು ದೈಹಿಕ ಹಸಿವನ್ನು ತಡೆಯುತ್ತ ತಮ್ಮ ಜ್ಞಾನದ ಹಸಿವಿಗೆ ಪುಷ್ಟಿನೀಡಿದ್ದರು. ವೇದಸುಧೆಯ ಬಳಗದಲ್ಲಿ ಪ್ರೇರಕರಾದ ಶ್ರೀ ಶರ್ಮರು ಸ್ವಾಮಿ ದಯಾನಂದ ಸರಸ್ವತಿಯವರು ಬರೆದ ಕೆಲವು ಪುಸ್ತಕಗಳನ್ನು ಮುದ್ರಣ ವೆಚ್ಚಪಡೆದು ವಿತರಿಸುವ ಏರ್ಪಾಟುಮಾಡಿದ್ದರು. ಪುಷ್ಕಳ ಭೋಜನ ವ್ಯವಸ್ಥೆಯಾಗಿತ್ತು. ಎಲ್ಲರೂ ಊಟ ಮಾಡಿಬಂದ ಮೇಲೆ ಅದಾಗಲೇ ತಡವಾಗಿತ್ತಾದ್ದರಿಂದ ೪ ಗಂಟೆಯಿಂದ ಹಾಸನದ ಮನೆಮನೆ ಕವಿಗೋಷ್ಠಿ ಆರಂಭಗೊಂಡಿತು. ಬೋರೇಗೌಡರಾದಿಯಾಗಿ ಹಲವು ನಿವೃತ್ತ ಅಧಿಕಾರಿಗಳು ಜನಪದ ಗೀತೆಗಳನ್ನು ಲಯಬದ್ಧವಾಗಿ ಹಾಡಿ ರಂಜಿಸಿದರು. ಅತಿಥಿಗಳನ್ನು ಸ್ವಾಗತಿಸಿ ಗುಲಾಬಿ ಹೂ ಗಳನ್ನು ನೀಡಿ ಗೌರವಿಸಲಾಯಿತು. ಶ್ರೀ ಚಂದ್ರಕಾಂತ್ ಪಡೆಸೂರ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯಲ್ಲದ ಸಂಘಟನೆಯೆನಿಸಿದ ’ಮನೆ ಮನೆ ಕವಿಗೋಷ್ಠಿ’ಯ ಹದಿನಾಲ್ಕು ವರ್ಷಗಳ ನಡಿಗೆಯನ್ನು ಕಾರ್ಯದರ್ಶಿ ಶ್ರೀ ಎಸ್. ಸತ್ಯನಾರಾಯಣ ಅವರು ವಿವರಿಸಿದರು. ವೇದಿಕೆಯಲ್ಲಿ ಶ್ರೀ ಸುಧಾಕರ ಶರ್ಮ ಉದ್ಘಾಟಕರಾಗಿ ಭಾಗವಹಿಸಿ ಗಿಡವೊಂದಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ನಡೆಯಿತು. ಪುಸ್ತಕಗಳ ಬಿಡುಗಡೆಗಾಗಿ ಆಗಮಿಸಿದ್ದ ಅತಿಥಿಗಳಾದ ಹಾಸನದ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಶ್ರೀಮತಿ ಆಶಾಲತಾ ಮತ್ತು ಕಾರವಾರದ ಆಕಾಶವಣಿಯ ಮುಖ್ಯಸ್ಥರಾದ ಶ್ರೀ ವಸಂತ ಕುಮಾರ್ ಪೆರ್ಲ ಅವರುಗಳು ಕ್ರಮವಾಗಿ ಕವಿ ನಾಗರಾಜ್ ಕೃತ ’ಮೂಢ ಉವಾಚ’ ಮತ್ತು ಕೊಟ್ರೇಶ್ ಉಪ್ಪಾರ ಕೃತ ’ಮೃತ್ಯುವಿನಾಚೆಯ ಬದುಕು’ ಕವನ ಸಂಕಲನಗಳನ್ನು ಬಿಡುಗಡೆಮಾಡಿದರು. ಕೃತಿಗಳ ಕುರಿತು ಅತಿಥಿಗಳು ವಿಚಾರ ಮಂಡಿಸಿದರೆ, ಲೇಖಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

’ವೇದಸುಧೆ; ಮತ್ತು ’ಮನೆಮನೆಕವಿಗೋಷ್ಠಿ’ ಜಂಟಿಯಾಗಿ ಏರ್ಪಡಿಸಿದ್ದ ಇಡೀ ದಿನದ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಸಂಪನ್ನಗೊಂಡವು ಎಂಬಲ್ಲಿಗೆ ’ವೇದಸುಧೆ’ ಚಂದವಾಗಿ ಅಂಬೆಗಾಲಿಕ್ಕುತ್ತಿದೆ ಎನ್ನುವುದು ಸಾಬೀತಾಯಿತು. ವೇದಕ್ಕೆ ಜಾತಿ ಮತ, ಧರ್ಮಗಳ ಗಡಿಯಿಲ್ಲ! ವೇದವೆಂದರೆ ಅತ್ಯಪೂರ್ವ ಮಾನವೀಯ ಸುಖ ಜೀವನವನ್ನು ಸಾಧಿಸುವ ಕಲೆ. ವೇದ ಎಲ್ಲರದಾಗಲಿ, ವೇದ ಎಲ್ಲರಿಗಾಗಿರಲಿ. ಮುಂಬರುವ ವರ್ಷಗಳಲ್ಲಿ ಇಂತಹ ಕಾರ್ಯಕ್ರಮಗಳು ಜಿಲ್ಲಾವಾರು ನಡೆಯುವಂತೇ ’ವೇದಸುಧೆ’ ಬೆಳೆಯಲಿ ಮತ್ತು ಎಲ್ಲರೂ ವೇದಾಮೃತಪಾನ ಮಾಡುವಂತಾಗಲಿ ಎಂಬುದು ’ವೇದಸುಧೆ’ ಯ ಸದಾಶಯ. ಈ ಸಂದರ್ಭದಲ್ಲಿ ವೇದಸುಧೆ ತಮ್ಮೆಲ್ಲರಿಗೆ ಶುಭಹಾರೈಸುತ್ತಿದೆ.
 

ವೇದಸುಧೆ ವಾರ್ಷಿಕೋತ್ಸವ - ಕವಿ ಸುರೇಶರ ಅನಿಸಿಕೆ

ಪ್ರಿಯ ಶ್ರೀದರ್ ರವರೇ,

    ವೇದಸುಧೆ ಅಂತರ್ಜಾಲ ತಾಣದ ವಾರ್ಷಿಕೋತ್ಸವ ಒಂದು ವಿನೂತನ ಕಾರ್ಯಕ್ರಮ, ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು. ಅದಕ್ಕಾಗಿ ನೀವು ಮತ್ತು ನನ್ನಣ್ಣ ನಾಗರಾಜ್ ಸಾಕಷ್ಟು ಶ್ರಮ ವಹಿಸಿದ್ದೀರಿ. ನಿಮ್ಮ ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ನಿಮ್ಮಿಬ್ಬರಿಗೂ ನನ್ನ ಹಾರ್ದಿಕ ಧನ್ಯವಾದಗಳು. ವೇದಗಳನ್ನು ಹೊಸ ರೀತಿಯಲ್ಲಿ ನೋಡುವಂತಹ ಮತ್ತು ಹೊಸ ರೀತಿಯಲ್ಲಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಬಹಳಷ್ಟು ಜನರಿಗೆ ಪ್ರೇರಕವಾಯಿತೆಂಬುದು ನನ್ನನಿಸಿಕೆ. ಸದುದ್ದೇಶದಿಂದ ಮಾಡಿದ ಯಾವುದೇ ಕಾರ್ಯ ಸಫಲವಾಗಲೇ ಬೇಕು. ಹಾಗೆಯೇ ಈ ಕಾರ್ಯಕ್ರಮ ಕೂಡ ಜರುಗಿದೆ.
ಮತ್ತೊಮ್ಮೆ ನಿಮ್ಮಿಬ್ಬರಿಗೂ ನನ್ನ ಅಭಿನಂದನೆಗಳು. ಸಂಪರ್ಕದಲ್ಲಿರುವೆ...

ನಿಮ್ಮವ,
ಕವಿ ಸುರೇಶ್.

ವೇದಸುಧೆ ವಾರ್ಷಿಕೋತ್ಸವಕ್ಕೆ ಶೃಂಗೇರಿ ಶ್ರೀ ಶಾರದಾಪೀಠದ ವತಿಯಿಂದ ಸಂದೇಶ