Pages

Wednesday, March 10, 2010

ಆತ್ಮೀಯ ಹಾರೈಕೆ

ಆತ್ಮೀಯ ಶ್ರೀಧರ್,
ನಮಸ್ಕಾರ ತಮಗೆ,
ತಮ್ಮ ಬಗ್ಗೆ ತಿಳಿದುಕೊಂಡೆ, ಬಹಳ ಸಂತೋಷವಾಯಿತು.
ಸ್ವಾರ್ಥಿಗಳು ಏನನ್ನೂ ಮಾಡಲಾರರೇ ವಿನಃ ನಿಸ್ವಾರ್ಥರು ತಮ್ಮನ್ನು ಸದಾ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡೆ ಇರುತ್ತಾರೆ. ತಮ್ಮ ಬಹುಮುಖಿ ವ್ಯಕ್ತಿತ್ವದ ಅರಿವಾಗುತ್ತಿದೆ. ತಮ್ಮ ಸಮಾಜಮುಖಿ ಕೆಲಸಕ್ಕೆ ಎಷ್ಟೇ ಕೃತಜ್ಞತೆ ಹೇಳಿದರೂ ಅದು ಸಾಲದ್ದು ಅಥವಾ ಏನೋ ನಮ್ಮಿಂದ ಆಗದ್ದಕ್ಕೆ ಸುಮ್ಮನೇ ಹೇಳಬೇಕಲ್ಲ ಅಂತ ಹೇಳಿದ್ದೆವೇನೋ ಅನ್ನಿಸಿಬಿಡುತ್ತದೆ. ಯಾವುದೇ ಪ್ರಶಸ್ತಿ-ಫಲಕಗಳ ಹಿಂದೆ ಬೀಳದೆ 'ನಿಜದ ಅರಿವಿ'ನೆಡೆಗೆ ನೀವು ಹೆಜ್ಜೆ ಹಾಕಿರುವುದು ನಿಮ್ಮ ಪುಣ್ಯ ಸಂಚಯನಕ್ಕೆ ಬಹಳ ಅನುಕೂಲ.
ಇನ್ನು ನೀವು ಹೇಳಿದ ಹಾಗೇ ವೃತ್ತಿ ಜೀವನ ಒಂದು ಇರಲೇಬೇಕು, ಅದರ ಹಕ್ಕು-ಬಾಧ್ಯತೆಗಳು ನಮ್ಮನ್ನು ಬಾಧಿಸುತ್ತಲೇ ಇರುತ್ತವೆ. ಮನೆ-ಕುಟುಂಬ ಇದರ ಜವಾಬ್ದಾರಿ ಇನ್ನೊದು ಕಡೆಗೆ. ಇವುಗಳ ಜೊತೆಗೇ ಇಂದಿನದಿನ ಸಮಾಜ ಸೇವೆ ಮಾಡುವುದು ಬಹಳ ಕಷ್ಟಸಾಧ್ಯದ ಮಾತೇ ಸರಿ. ಹಲ್ಲುಗಳ ಮಧ್ಯೆಯ ನಾಲಿಗೆಯಂತೆ, ಕಷ್ಟಗಳ ಮಧ್ಯೆಯೇ ನಮ್ಮನ್ನು ಮರೆತು ಉಳಿದ ಸಹಯಾತ್ರಿಕರಿಗೆ [ಜೀವನವೇ ಯಾತ್ರೆ ಅಂತ ತಿಳಿದರೆ] ಮಾರ್ಗದರ್ಶಿಸುವಲ್ಲಿ, ಒಳ್ಳೆಯ ಗುರು-ಹಿರಿಯ ತತ್ವಬೋಧಕರನ್ನು ತೋರಿಸುವಲ್ಲಿ ತಾವು ಮಾಡಿರುವ ಕೆಲಸ ಶ್ಲಾಘನೀಯ, ನಮ್ಮ ಬಾಯಿಮಾತಿನ ಶ್ಲಾಘನೆ ಬೇಡ ಬಿಡಿ, ಇದು ಬೂಟಾಟಿಕೆಯಾದೀತು, ನಿಮಗೆ ದೇವರೇ ನಿರ್ಮಿಸಿಕೊಡುವ ಬಹುದೊಡ್ಡ ಶ್ಲಾಘನೆ ಜನ್ಮಾಂತರಕ್ಕೂ ಸಿಗಲಿದೆ; ಇದರಲ್ಲಿ ಯಾವುದೇ ಸಂಶಯವಿಲ್ಲ.
ರಾ.ಸ್ವ.ಸಂಘದ ಬಗ್ಗೆ ಬಹಳ ಕುತೂಹಲ-ಆಸಕ್ತಿ ಇದ್ದ ನನಗೆ, ನಮ್ಮೂರಿನಲ್ಲಿ ನಾನು ಚಿಕ್ಕವನಿರುವಾಗಲೇ ನಮ್ಮ ಮನೆಯಲ್ಲಿ ಬೈಠಕ್ ನಡೆದಿತ್ತು, ಹೀಗಾಗಿ ಅದರ ಕಾರ್ಯತತ್ಪರತೆ ಗೊತ್ತಿರುವ ವಿಷಯ, ಅದಿಲ್ಲದಿದ್ದರೆ ನಮ್ಮ ಹಿಂದೂಗಳನ್ನೆಲ್ಲಾ ಕುತ್ಸಿತ ರಾಜಕಾರಣಿಗಳು ಏನುಮಾಡುತ್ತಿದ್ದರು ಎನ್ನುವುದು ಊಹಿಸಲೂ ಕಷ್ಟ. ಅದರಲ್ಲಿ ತೊಡಗಿದವರು ಒಂಥರಾ ರಾಮಕೃಷ್ಣಾಶ್ರಮದಲ್ಲಿ ತರಬೇತಿ ಪಡೆದಂತೆ ಇರುತ್ತಾರೆ ಎಂದು ಬೇರೆ ಹೇಳಬೇಕೇ?
ನಮ್ಮಲ್ಲಿ ವರದಹಳ್ಳಿಯ ಭಾಗವನ್ ಶ್ರೀಧರರ ಬಗ್ಗೆ ತಾವು ಕೇಳಿರಬಹುದು, ಅಂಥ ಮಹಾತ್ಮರ ಹೆಸರನ್ನು ಪಡೆದಿದ್ದೀರಿ, ನನಗೆ ಅದೂ ಬಹಳ ಸಲ ನೆನಪಿಗೆ ಬಂತು.ಹೀಗಾಗಿ ನಿಮ್ಮನ್ನು ಅರಿತುಕೊಂಡು ಬಹಳ ಆಭಾರಿಯಾಗಿದ್ದೇನೆ, ನಿಮಗೆ ಪ್ರಜ್ಞಾನಮೂಲ ಪರಬ್ರಹ್ಮ ಸುದೀರ್ಘ ಅಕ್ಷಯ ಆಯುರಾರೋಗ್ಯ ,ನಿರ್ವಿಘ್ನತೈಶ್ವರ್ಯ, ಜ್ಞಾನ-ಸಂಪತ್ ಸಮೃದ್ಧಿ ಕರುಣಿಸಲೆಂದು ಅವನಲ್ಲಿ ಪ್ರಾರ್ಥಿಸಿ ಶುಭಾಹಾರೈಸುತ್ತಿದ್ದೇನೆ .
|| ಸತ್ಯಾಃ ಸಂತು ಶ್ರೀ ಶ್ರೀಧರಸ್ಯ ಕಾಮಾಃ || [ಸ್ವರ ಸೇರಿಸಿ ಓದಿಕೊಳ್ಳಿ]
ಧನ್ಯವಾದಗಳು, ಶುಭದಿನ
ವಿ.ಆರ್.ಭಟ್