Pages

Tuesday, June 7, 2011

ವೇದೋಕ್ತ ಜೀವನ ಪಥ: ಮಾನವಧರ್ಮ - ೬

     ಧರ್ಮವು ಕೇವಲ ಐಹಿಕಸುಖದ ಸಾಧನವೂ ಅಲ್ಲ, ಕೇವಲ ಆಮುಷ್ಮಿಕ ಸುಖದ ಸಾಧನವೂ ಅಲ್ಲ, ಇಹ-ಪರಗಳೆರಡಕ್ಕೂ ಗಮನವಿತ್ತು, ಎರಡನ್ನೂ ಸಾಧಿಸಿಕೊಡಬಲ್ಲ ಮಾರ್ಗವೇ ಧರ್ಮ. ಆ ಜೀವನಮಾರ್ಗ ರೂಪಗೊಳ್ಳುವುದು ಆತ್ಮೋದ್ಧಾರಕಾರಿಗಳಾದ ಸದ್ಗುಣಗಳ ಸಮೂಹದಿಂದ. ಹೀಗೆ ಹೇಳಿದರೆ, ಅದೆಷ್ಟು ಸದ್ಗುಣಗಳಿವೆಯೋ, ಎಷ್ಟನ್ನು ಅವಲಂಬಿಸಿದರೆ ಧರ್ಮವನ್ನು ಮೈಗೂಡಿಸಿಕೊಂಡಂತಾಗುವುದೋ ಯಾರ ಕಲ್ಪನೆಯ ಹಿಡಿತಕ್ಕೂ ಸಿಕ್ಕುವುದಿಲ್ಲ. ಆದುದರಿಂದ ಋಗ್ವೇದ ಸ್ಪಷ್ಟವಾದ ಮಾತಿನಲ್ಲಿ ಹೇಳುತ್ತಿದೆ:


ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ |
ವಿದ್ವಾನ್ ತ್ಸ ವಿಶ್ವಾ ಭುವನಾಭ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಅವ್ರತಾನ್ ||
(ಋಕ್. ೯.೭೩.೮.)

     [ಋತಸ್ಯ ಗೋಪಾ] ಋತದ, ಈಶ್ವರೀಯ ವಿಧಾನದ, ಧರ್ಮದ ರಕ್ಷಕನು, [ನ ದಭಾಯ] ಎಂದಿಗೂ ತುಳಿಯಲ್ಪಡಲಿಕ್ಕಿಲ್ಲ. [ಸ ಸುಕ್ತುಃ] ಆ ಉತ್ತಮ ವಿಚಾರಶೀಲನೂ, ಆಚರಣವಂತನೂ ಆದ ಮಾನವನು, [ಹೃದಿ ಅಂತಃ] ತನ್ನ ಹೃದಯದಲ್ಲಿ, [ತ್ರೀ ಪವಿತ್ರಾ] ಮೂರು ಪವಿತ್ರ ತತ್ತ್ವಗಳನ್ನು, ಉಪಾಸನೆಗಳನ್ನು, [ಆ ದಧೇ] ಸದಾ ಧರಿಸಿರುತ್ತಾನೆ. [ಸ ವಿದ್ವಾನ್] ಆ ಜ್ಞಾನಿಯಾದ ಮಾನವನು, [ವಿಶ್ವಾ ಭುವನಾ ಅಭಿಪಶ್ಯತಿ] ಸಮಸ್ತ ಲೋಕಗಳನ್ನೂ, ಎಲ್ಲೆಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. [ಆಜುಷ್ಟಾನ್ ಅವ್ರತಾನ್] ಅಪ್ರಿಯರಾದ ವ್ರತರಹಿತರನ್ನು [ಕರ್ತೇ ಆವ ವಿಧ್ಯತಿ] ಪತನರೂಪದಲ್ಲಿ ಕೆಳಗೆ ಬಿದ್ದವರನ್ನೂ ಕೂಡ, ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ.
    ವೇದಗಳ ಸಂದೇಶ ಬಹು ಗಂಭೀರ, ಬಹಳ ಆಳ. ಋತವನ್ನು ಈಶ್ವರೀಯ ವಿಧಾನವಾದ ಧರ್ಮವನ್ನು ಪಾಲಿಸುವವನ ವರ್ಣನೆ ಮಾಡುವಾಗ, ಋಗ್ವೇದ ಆ ಮಹಾಪುರುಷನು ಧರಿಸುವ ಮೂರು ಪವಿತ್ರ ಧರ್ಮಾಂಗಗಳನ್ನು, ಜ್ಞಾನಕರ್ಮೋಪಾಸನಾತ್ರಯವನ್ನು ಸೂಚಿಸುತ್ತದೆ. ಸತ್ಯ, ನ್ಯಾಯ, ದಯೆ, ತ್ಯಾಗ, ಸಂಯಮ, ದಾನ, ಮೈತ್ರಿ, ಅಹಿಂಸೆ ಮೊದಲಾದ ಮಾನವನ ಊಹೆಗಂದಬಹುದಾದ ಸಮಸ್ತ ಆತ್ಮೋದ್ಧಾರಕ ಗುಣಗಳೂ ಜ್ಞಾನ-ಕರ್ಮ-ಉಪಾಸನಾ ಎಂಬ ಮೂರು ಅಂಗಗಳಲ್ಲಿ ಅಡಕವಾಗಿ ಹೋಗುತ್ತವೆ. ಜ್ಞಾನಿ ಅನುದಾರನಾಗಲಾರ, ಸತ್ಕರ್ಮನಿರತನು ರಾಗ-ದ್ವೇಷಗಳಿಗೆ ಸಿಕ್ಕಲಾರನು, ಉಪಾಸಕನು ಯಾರ ವೈರಿಯೂ ಆಗಿರಲಾರನು. ಈ ಮೂರು ಅಂಗಗಳನ್ನೂ ತನ್ನ ಬಾಳಿಗೆ ಹೊಂದಿಸಿಕೊಂಡ ಧನ್ಯಾತ್ಮನು, ತನ್ನ ಸ್ವಂತ ದೌರ್ಬಲ್ಯದಿಂದಲೋ, ಪರರ ಒತ್ತಡದಿಂದಲೋ ಲೋಕಕ್ಕೆ ಅಪ್ರಿಯರಾದ, ವ್ರತಬಾಹಿರರಾದ ಅಧರ್ಮನಿರತರನ್ನು ಕಂಡು ಹೇಸಿಗೆಯಿಂದ ಮೂಗು ಮುರಿಯುವುದಿಲ್ಲ. ತಿರಸ್ಕಾರದಿಂದ ಧಿಕ್ಕರಿಸುವುದಿಲ್ಲ. ಪತನದ ಹಳ್ಳಕ್ಕೆ ಬಿದ್ದವರನ್ನೂ ಕೂಡ ಮೇಲೆತ್ತಿ, ಉತ್ತಮ ಶಾಸನಕ್ಕೆ, ಈಶ್ವರೀಯ ವಿಧಾನಕ್ಕೆ ಅವರೂ ಕೂಡ ತಲೆಬಾಗುವಂತೆ ಮಾಡುತ್ತಾನೆ.
**************