Pages

Tuesday, April 13, 2010

ವಿದ್ವಾಂಸರೇ, ಸಮಾಜದಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತಿ

[ಚಿತ್ರ ಕೃಪೆ: ಅಂತರ್ಜಾಲ]

ನಾಳೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ದಿನಾಚರಣೆ.ಸಹಜವಾಗಿ ನಮ್ಮ ದೇಶದಲ್ಲಿನ ದಲಿತ ಸಮುದಾಯಕ್ಕೆ ಸೇರಿದ ಜನಾಂಗದವರು ಅತ್ಯಂತ ಉತ್ಸಾಹದಿಂದ ಅಂಬೇಡ್ಕರ್ ಜನ್ಮದಿನವನ್ನು ಆಚರಿಸುತ್ತಾರೆ. ದುರ್ದೈವವೆಂದರೆ ನಮ್ಮ ದೇಶದ ಸಂವಿದಾನ ರಚನೆಯಲ್ಲಿ ಹಿರಿಯ ಪಾತ್ರ ವಹಿಸಿದ ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಉಳಿದ ಜನಾಂಗದವರು ಉತ್ಸಾಹದಿಂದ ಪಾಲ್ಗೊಳ್ಳುವುದಿಲ್ಲ. ಅದೇನೇ ಇರಲಿ, ನಮ್ಮ ದೇಶದಲ್ಲಿ ವೇದ-ಉಪನಿಷತ್ತುಗಳು ಒಂದು ವರ್ಗದ ಸ್ವತ್ತೆಂಬಂತೆ ಬಿಂಬಿತವಾಗಿದ್ದು ಇಂದು ದಲಿತಸಮುದಾಯವು ವೇದವನ್ನಾಗಲೀ, ನಮ್ಮ ಪರಂಪರೆಯನ್ನಾಗಲೀ ವಿರೋಧಮಾಡುವುದೇ "ದಲಿತ ಚಳುವಳಿ" ಎಂಬಂತಾಗಿ ವೇದದ ಮತ್ತು ನಮ್ಮ ಪರಂಪರೆಯ ನಿಜವಾದ ಅರಿವಿನಿಂದ ಇಡೀ ಸಮಾಜವು ವಂಚಿತವಾಗುತ್ತಿದೆಯಲ್ಲಾ!! ಎಂಬ ನೋವು ನನ್ನಲ್ಲಿ ಕಾಡುತ್ತದೆ. ಈ ದಿಕ್ಕಿನಲ್ಲಿ ಚಿಂತನೆ ಮಾಡುತ್ತಾ ನನ್ನ ಕೆಲವು ವಿಚಾರಗಳನ್ನಿಡುವೆ.

* ಮನೆಯಲ್ಲಿ ಮಗುವೊಂದು ಕಕ್ಕಸು ಮಾಡಿಕೊಂಡು, ಅದರಮೇಲೆಯೇ ತನ್ನ ಕೈಗಳಿಂದ ರಪ ರಪ ಬಡಿಯುತ್ತದೆ.ಕೈಯೆಲ್ಲಾ ಹೊಲಸಾಗುತ್ತದೆ. ಅದೇ ಕೈಯನ್ನು ಮೈಮೇಲೆಲ್ಲಾ ಇಟ್ಟುಕೊಳ್ಳುತ್ತದೆ. ಅದರ ತಾಯಿ ಹತ್ತಿರದಲ್ಲಿಲ್ಲ. ನೋಡಿದವರೆಲ್ಲಾ ಅಸಹ್ಯಪಟ್ಟುಕೊಂಡು ಅದರ ತಾಯಿಯನ್ನಷ್ಟು ಬೈದುಕೊಳ್ಳುತ್ತಾರೆ. ತಾಯಿ ಬರುತ್ತಾಳೆ. ಮಗುವನ್ನು ನೋಡಿ " ಅಯ್ಯೋ ಕಂದ, ಮೈಯೆಲ್ಲಾ ಕಕ್ಕ ಮಾಡಿಕೊಂಡು ಬಿಟ್ಟೆಯಲ್ಲೋ" ಎಂದು ಮೃದುವಾಗಿ ಅದನ್ನು ಎತ್ತಿಕೊಂಡು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ , ಬಟ್ಟೆ ಹಾಕಿ ಮುದ್ದಾಡುತ್ತಾಳೆ. ಹೀಗೆ ಒಂದು ಮಗುವನ್ನು ಶುಚಿಗೊಳಿಸುವ ತಾಯಿಯನ್ನು ನಾವು "ಮಾತೃ" ಎಂದು ಕರೆದು ಅವಳಿಗೆ ಅತ್ಯಂತ ಎತ್ತರದ ಸ್ಥಾನವನ್ನು ಕೊಡುತ್ತೇವೆ. ಕಾರಣ ಮಗುವಿನ ಮೇಲಿನ ತಾಯಿಯ ಮಮತೆ, ಪ್ರೀತಿ ಅವಳಿಗೆ ಸಮಾಜದಲ್ಲಿ ಒಂದು ಸ್ಥಾನವನ್ನೇ ಕಲ್ಪಿಸುತ್ತದೆ.
ಒಂದು ನಗರ. ಇಡೀ ದಿನವೆಲ್ಲಾ ಸಹಸ್ರಾರು ಜನರು ಮಾಡಿದ ಹೊಲಸೆಲ್ಲಾ ಬೆಳಗಾಗುವಾಗ ಮಾಯವಾಗಿರುತ್ತದೆ. ರಸ್ತೆಯಲ್ಲಿದ್ದ ಗಲೀಜೆಲ್ಲಾ ಕ್ಲೀನ್ ಆಗಿ ಕಸ ಕಡ್ದಿಗಳಿರುವುದಿಲ್ಲ. ವಾಸನೆ ಹೊಡೆಯುತ್ತಿದ್ದ ಚಿರಂಡಿ ಮತ್ತೆ ಮತ್ತೆ ಶುಚಿಯಾಗುತ್ತದೆ. ಇದನ್ನೆಲ್ಲಾ ಮಾಡುವವರಾರು? ಅವನಿಗೆ ನಾಮಕರಣ ವಾಗಿದೆ " ಜಾಡಮಾಲಿ". ಸಾಮಾನ್ಯವಾಗಿ ಅತ್ಯಂತ ಕಳಪೆ ಕೆಲಸವೆಂದು ಸಾಮಾನ್ಯರು ಭಾವಿಸುವ ಕೆಲಸ [ ನನ್ನ ದೃಷ್ಟಿಯಲ್ಲಿ ಅದೂಂದು ಯಜ್ಞ] ಜಾಡಮಾಲಿಗೆ ನಮ್ಮ ಸಮಾಜವು ಕೊಟ್ಟಿರುವ ಸ್ಥಾನ? ಅತ್ಯಂತ ಕನಿಷ್ಟ.
ನೋಡಿ ಒಂದು ಮಗುವನ್ನು ಶುಚಿಗೊಳಿಸುವ ತಾಯಿಯು ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವನ್ನು ಹೊಂದಿದ್ದರೆ, ಸಹಸ್ರಾರು ಜನರ ಹೊಲಸನ್ನು ಶುಚಿಗೊಳಿಸುವ ಜಾಡಮಾಲಿಗೆ ಅತ್ಯಂತ ಕನಿಷ್ಟತಮ ಸ್ಥಾನ!!
ಯೋಚಿಸಿ ನೋಡಿ, ನಾಲ್ಕು ದಿನ ನಿಮ್ಮ ರಸ್ತೆಯಲ್ಲಿ ಜಾಡಮಾಲಿ ಬಾರದಿದ್ದರೆ ನಿಮ್ಮ ನಗರದ ಸ್ಥಿತಿ ಏನಾದೀತು? ಕೊಳೆತು ನಾರುತ್ತಾ ಜನರೆಲ್ಲಾ ಹಿಡಿ ಶಾಪವನ್ನು ಹಾಕುತ್ತಾರಲ್ಲವೇ? ಹಾಗಾದರೆ ಜಾಡಮಾಲಿಯ ಸ್ಥಾನದ ಅರಿವು ಈಗಲಾದರೂ ಆದೀತೇ?

* ಬೆಂಗಳೂರಿನ ವೇದಾಧ್ಯಾಯೀ ಸುಧಾಕರ ಶರ್ಮರು ಕಳೆದ ವರ್ಷ ಹಾಸನಕ್ಕೆ ಬಂದಿದ್ದರು. ಕಾರೊಂದರಲ್ಲಿ ನಾವು ಮೂರ್ನಾಲ್ಕು ಜನ ಪ್ರಯಾಣಿಸುತ್ತಿದ್ದೆವು. ನಾನು ಸಹಜವಾಗಿ ಶರ್ಮರನ್ನು ಕೇಳಿದೆ" ಶರ್ಮರೇ, ಎಲ್ಲರಿಗಾಗಿ ವೇದ ವೆಂಬ ಪ್ರಚಾರ ಮಾಡುತ್ತಿದ್ದೀರಲ್ಲಾ, ನಿಮ್ಮೊಡನೆ ಬ್ರಾಹ್ಮಣೇತರರು ವೇದ ಪ್ರಚಾರದಲ್ಲಿ ಕೈ ಜೋಡಿಸಿದ್ದಾರೆಯೇ?
ಶರ್ಮರು ಹೇಳಿದರು" ಬೇರೆಲ್ಲೂ ಹೋಗಬೇಡಿ, ನಿಮ್ಮ ಪಕ್ಕದಲ್ಲೇ ಕುಳಿತಿರುವ ನನ್ನ ಮಿತ್ರರ ಬಾಯಿಂದ ವೇದಮಂತ್ರವನ್ನು ಕೇಳಿದಿರಲ್ಲವೇ? ನನಗಿಂತ ಹೆಚ್ಚಿನ ವಿದ್ವಾಂಸರಾದ ಇವರ ಜನ್ಮ ಯಾವ ಜಾತಿಯಲ್ಲಾಗಿದೆ ಗೊತ್ತಾ? ಈ ಸಮಾಜದಲ್ಲಿ ’ ಹೊಲೆಯರೆಂದು" ಯಾರನ್ನು ಕರೆಯುತ್ತಾರೆ, ಆ ಜಾತಿಯಲ್ಲಿ ಜನ್ಮ ತಾಳಿದ ಮಹಾನುಭಾವರಿವರು."
ಪ್ರಶ್ನೆ ಕೇಳಿ ತಪ್ಪು ಮಾಡಿದೆನೇ? ಎನಿಸಿತ್ತು

* ಇನ್ನು ವೇದದಲ್ಲಿ ನ ಎರಡು ಶ್ಲೋಕಗಳನ್ನು ನೋಡೋಣ...

ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮ: ಪೂರ್ವಜಾಯ
ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ
ಚ ನಮೋ ಜಘನ್ಯಾಯ ಬುಧ್ನ್ಯಾಯ ಚ||
[ಯಜು: ೧೬-೩೨]
ಅರ್ಥ:
ಜ್ಯೇಷ್ಠಾಯ = ಗುಣಕರ್ಮ ಸ್ವಭಾವಗಳಿಂದ ದೊಡ್ಡವನಾದವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಕನಿಷ್ಠಾಯ= ಗುಣಕರ್ಮ ಸ್ವಭಾವಗಳಿಂದ ಸಣ್ಣವನಾದವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಪೂರ್ವಜಾಯ = ವಯಸ್ಸಿನಲ್ಲಿ ಹಿರಿಯನಿಗೆ

ನಮ: = ನಮಸ್ಕರಿಸುವೆ
ಚ = ಹಾಗೂ
ಅಪರಜಾಯ= ವಯಸ್ಸಿನಲ್ಲಿ ಕಿರಿಯನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಮಧ್ಯಮಾಯ= ನಡು ವಯಸ್ಕನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಅಪಗಲ್ಫಾಯ = ಅಶಕ್ತನಿಗೆ
ನಮ: = ನಮಸ್ಕರಿಸುವೆ
ಜಘನ್ಯಾಯ=ಹೀನಸ್ಥಿತಿಯಲ್ಲಿರುವವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಬುಧ್ನ್ಯಾಯ= ವಿಶಾಲ ಮನಸ್ಕನಿಗೂ

ನಮ: = ನಮಸ್ಕರಿಸುವೆ

ಅಂದರೆ ದೊಡ್ದವ, ಚಿಕ್ಕವ, ಹಿರಿಯ-ಕಿರಿಯ, ಅಶಕ್ತ, ಶಕ್ತ, ಅತ್ಯಂತ ಹೀನ ಸ್ಥಿತಿಯಲ್ಲಿರುವವ, ಅತ್ಯಂತ ವಿಶಾಲ ಮನೋಭಾವದ, ಎಲ್ಲರಿಗೂ ನಮಸ್ಕಾರ.ನಮಸ್ಕರಿಸಲು ಭೇಧವೆಲ್ಲಿಂದ ಬಂತು? ಎಲ್ಲರಿಗೂ ಸಮಾನವಾಗಿ ಕಾಣಿರೆಂಬುದೇ ವೇದದಕರೆ.

ಇನ್ನೊಂದು ವೇದ ಮಂತ್ರವನ್ನು ನೋಡೋಣ.....

* ಉತದೇವಾ ಅವಹಿತಂ ದೇವಾ ಉನ್ನಯಥಾ ಪುನ:| ಉತಾಗಶ್ಚಕ್ರುಷಂ ದೇವಾ ದೇವಾ ಜೀವಯಥಾ ಪುನ: ||
ಋಗ್ವೇದ ೧೦.೧೩೫.೧

ದೇವಾ: ದೇವಾ: = ಜ್ಞಾನಜ್ಯೋತಿಯಿಂದ ಬೆಳಗುವ ಉದಾರ ಹೃದಯರೇ!
ಅವಹಿತಂ= ಕೆಳಗೆ ಬಿದ್ದವನನ್ನು
ಉತ= ನಿಶ್ಚಯವಾಗಿ
ಪುನ: ಉನ್ನಯತಾ=ಮತ್ತೆ ಮೇಲಕ್ಕೆತ್ತಿರಿ


ದೇವಾ: ದೇವಾ: = ನಿತ್ಯ ಜಾಗರೂಕರಾದ ವಿದ್ವಾಂಸರೇ!
ಆಗ: ಚಕ್ರುಷಂ= ಪಾಪ ಕರ್ಮ ನಿರತನಲ್ಲಿ
ಪುನ:=ಮತ್ತೆ
ಜೀವಯಥಾ= ನವಜೀವನವನ್ನು ತುಂಬಿರಿ[ಪಾಪ ಮಾಡಿ ಸತ್ತಂತೆ ಇರುವವನಲ್ಲಿ ಹೊಸ ಚೈತನ್ಯವನ್ನು ತುಂಬಿ, ಅವನಿಗೆ ನವ ಜೀವನವನ್ನು ಕೊಡಿ].

ವೇದದ ಕರೆ ಹೇಗಿದೆ, ನೋಡಿ,
ಎಲೈ ವಿದ್ವಾಂಸರೇ, ಸಮಾಜದಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತಿ, ಪಾಪಮಾಡಿ ಸತ್ತಂತೆ ಇರುವವನಲ್ಲಿ ನವ ಚೈತನ್ಯವನ್ನು ತುಂಬಿ ಹೊಸ ಜೀವನವನ್ನು ಕೊಡಿ.
ವೇದದ ಕರೆ ಸಮಾಜದಲ್ಲಿ ಎತ್ತರದಲ್ಲಿರುವವರ ಕಿವಿಗೆ ಮುಟ್ಟೀತೇ?

[ಕೃಪೆ: ವೇದ ಮಂತ್ರಗಳು: ಪಂ. ಸುಧಾಕರ ಚತುರ್ವೇದಿಯವರ " ಜನ್ಮಗತ ಜಾತಿ ಭೇದ ವೇದ ವಿರೋಧಿ" ಪುಸ್ತಕದಿಂದ ]

ಪಾತ್ರಾಪಾತ್ರವರಿತು ದಾನಮಾಡು

ಶಕ್ತ: ಪರಜನೇ ಜಾತಾ ಸ್ವಜನೇ ದು:ಖ ಜೀವಿನಿ|
ಮಧ್ವಾಪಾತೋ ವಿಷಾ ಸ್ವಾದ: ಸ ಧರ್ಮಪ್ರತಿರೂಪಕ:||
- ಮನು ಸ್ಮೃತಿ

ತನ್ನವರು ಕಷ್ಟದಿಂದ ಜೀವಿಸುತ್ತಿರುವಾಗ ,ಅವರನ್ನು ಉಪೇಕ್ಷಿಸಿ ಪರರಿಗೆ ಕೊಡುವುದು ಧರ್ಮವಲ್ಲ. ಅದು ಧರ್ಮದಂತೆ ಕಾಣುತ್ತದೆಯಷ್ಟೆ. ನೋಡಲು ಜೇನಿನಂತೆ ಕಂಡರೂ ಅದರ ರುಚಿ ಕಹಿಯೇ.
ದಾನಮಾಡಬೇಕು ನಿಜ. ಆದರೆ ಯಾರಿಗೆ ದಾನ ಮಾಡಬೇಕು? ಪಾತ್ರಾಪಾತ್ರವರಿತು ದಾನಮಾಡಬೇಕಲ್ಲವೇ? ಅಪಾತ್ರನಿಗೆ ದಾನಮಾಡುವುದು ಧರ್ಮವಲ್ಲ, ಬದಲಿಗೆ ಅದು ವ್ಯರ್ಥವೆನ್ನುತ್ತದೆ ವಿದುರ ನೀತಿ.
ದಾನವನ್ನು ಸ್ವೀಕರಿಸಲು ಹಲವಾರು ಪಾತ್ರಗಳಿದ್ದಾಗ ಸ್ವಜನರಿಗೆ ಪ್ರಥಮಾರ್ಹತೆ ಎನ್ನುತ್ತದೆ ಮನುಸ್ಮೃತಿ. ಸ್ವಜನರು ಯಾರು? ತನ್ನ ಹೆಂಡತಿ-ಮಕ್ಕಳು, ವೃದ್ಧರಾದ ತಂದೆತಾಯಿ,ತನ್ನನ್ನು ನಂಬಿಕೊಂಡಿರುವ ಅಶಕ್ತ ಬಂಧುವರ್ಗ.ಇವರನ್ನು ಉಪೇಕ್ಷಿಸಿ ಹೆಸರಿಗಾಗಿ,ಪ್ರಚಾರಕ್ಕಾಗಿ ಅನ್ಯರಿಗೆ ದಾನಮಾಡುವುದು ಅಧರ್ಮವೆನಿಸುತ್ತದೆ. ಈಬಗೆಯ ಹಲವು ನಿದರ್ಶನಗಳನ್ನು ನಾವು ಇಂದಿನ ಸಮಾಜದಲ್ಲಿ ಕಾಣಬಹುದಾಗಿದೆ. ಅಣ್ಣನಮನೆಯಲ್ಲೋ ,ತಮ್ಮನಮನೆಯಲ್ಲೋ ಬಡತನದಿಂದ ನರಳುತ್ತಿದ್ದು ಅವರ ದುರ್ದೈವಕ್ಕೆ ರೋಗ ಪೀಡಿತರೂ ಆಗಿ ಹಾಸಿಗೆ ಹಿಡಿದಿರುವ ಸಂದರ್ಭದಲ್ಲಿ ಅವರನ್ನು ಉಪೇಕ್ಷಿಸಿ ಈ ವ್ಯಕ್ತಿಯು ಯಾವುದೋ ಸಮಾರಂಭವನ್ನಾಚರಿಸುತ್ತಾ ಊರಿನವರನ್ನೆಲ್ಲಾ ಕರೆದು ಸತ್ಕರಿಸಿದರೆ ಯಾವ ದೇವರು ಮೆಚ್ಚುತ್ತಾನಲ್ಲವೇ?