Pages

Wednesday, July 25, 2012

"ಷಡ್ದರ್ಶನ"ಗಳು -ಮುನ್ನುಡಿ


ಶ್ರೀಯುತ ಶ್ರೀಧರ್ ಭಂಡ್ರಿ ಯವರು ಅಂತರ್ಜಾಲ ತಾಣದಲ್ಲಿ ಸಂಪದ, ಫೇಸ್ ಬುಕ್  ಮುಂತಾದೆಡೆ ಸದ್ವಿಚಾರಗಳನ್ನು ಸಮಾನ ಮಾನಸಿಕರಲ್ಲಿ ಹಂಚಿಕೊಳ್ಳುವ ಉತ್ತಮ ಚಿಂತಕರು. ವೇದಸುಧೆಗಾಗಿ ಶ್ರೀಯುತರು ಸ್ವಾಮಿ ಹರ್ಷಾ ನಂದರ  ಷಡ್ ದರ್ಶನ ಗ್ರಂಥವನ್ನು ಪರಿಚಿಸಲು ಆರಂಭಿಸಿದ್ದಾರೆ. ವೇದಸುಧೆಯ ಓದುಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೋರುವೆ. ವೇದಸುಧೆಯ ಪ್ರೇರಕರಾದ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ತಮ್ಮ ಅಭಿಪ್ರಾಯವನ್ನು ತಿಳಿಸಿದರೆ ಉತ್ತಮ.  ಓದುಗರು ಮತ್ತು ಲೇಖಕರೊಡನೆ     ಒಂದು ವಿಚಾರವನ್ನು ಇಲ್ಲಿ  ಹಂಚಿಕೊಳ್ಳಲು ಇಚ್ಚಿಸುವೆ.  ಈ ತಾಣದಲ್ಲಿ  ಲೇಖಕರು ತಮ್ಮ ತಮ್ಮ  ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊ ಬಹುದು. ಹಲವು ಭಾರಿ ಸುಧಾಕರ ಶರ್ಮರ ಚಿಂತನೆಗೂ ಉಳಿದವರ ಚಿಂತನೆಗೂ ಬೇಧ ಇರಲು ಸಾಧ್ಯತೆ ಗಳಿವೆ. ಚಿಂತೆ ಇಲ್ಲ. ಒಟ್ಟಿನಲ್ಲಿ ನಮ್ಮ ಚಿಂತನೆಗಳು ಸಮಾಜಮುಖಿಯಾಗಿದ್ದರೆ ಸಾಕು. 
-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ
---------------------------------------------------------------------------------
            "ಒಬ್ಬ ಹಿಂದೂ ಎಲ್ಲಾ ಕಾರ್ಯಗಳನ್ನೂ ಒಳ್ಳೆಯದಿರಲಿ ಅಥವಾ ಕೆಟ್ಟದ್ದಿರಲಿ ಅವನು ಅದನ್ನು ಧಾರ್ಮಿಕವಾಗಿಯೇ ಮಾಡುತ್ತಾನೆ!" ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಅಂದರೆ ಧರ್ಮವೆನ್ನುವುದು ಅವನ ರಕ್ತದಲ್ಲಿಯೇ ಇದೆ ಎನ್ನುವುದು ಇದರರ್ಥ.

            ಆದರೆ ಹಿಂದೂ ಧರ್ಮ ಎನ್ನುವುದು ಕೇವಲ ಕೆಲವೊಂದು ಪದ್ಧತಿ ಮತ್ತು ನಂಬಿಕೆಗಳ - ಬಾಹ್ಯಾಚರಣೆಯ ಗೊಡ್ಡು ಕಂತೆಯಲ್ಲ. ಪ್ರತಿಯೊಂದು ಆಚರಣೆಯ ಹಿನ್ನಲೆಯಲ್ಲಿಯೂ ಸಾವಿರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ಶ್ರುತಿ ಅಥವಾ ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಗಹನವಾದ ತತ್ವಗಳ ಭದ್ರ ಬುನಾದಿಯಿದೆ.

            ಪ್ರತಿಯೊಬ್ಬ ಪೌರಾಣಿಕ ಋಷಿ ಹಾಗೂ ತತ್ವಶಾಸ್ತ್ರಜ್ಞನಾದವನು ಅದು ಗೌತಮ ಅಥವಾ ಕಪಿಲನಾಗಲಿ; ಅಥವಾ ಜೈಮಿನಿ ಇಲ್ಲಾ ಬಾದರಾಯಣ ವ್ಯಾಸನಿರಲಿ - ಇವರೆಲ್ಲರೂ ಕಠಿಣತಮ ತಪಗಳನ್ನಾಚರಿಸಿ ವೇದಗಳ ಆಧಾರದ ಮೇಲೆ ತನಗೆ "ದರ್ಶನ"ವಾದ ಅಥವಾ ಗೋಚರವಾದ ಸತ್ಯಗಳ ಕುರಿತು ತಮ್ಮ ತಮ್ಮ ತತ್ವಗಳನ್ನು ಭೋದಿಸಿದ್ದು. ಇವೇ ಹಿಂದೂಗಳೆಲ್ಲರಿಗೂ ಇಂದು ಪರಿಚಯವಿರುವ "ಷಡ್ದರ್ಶನ"ಗಳು ಅಥವಾ ಆರು ದರ್ಶನಗಳು.

            ಈ ಆರು ದರ್ಶನಗಳು ಸತ್ಯಾನ್ವೇಷಣೆಯ ವಿವಿಧ ಮಾರ್ಗಗಳನ್ನು ಅನುಸರಿಸಿದರೂ ಕೂಡ ಅವೆಲ್ಲವುಗಳಲ್ಲಿ ಒಂದು ಏಕತೆಯಿದೆ ಅದೇನೆಂದರೆ - ಮಾನವನ ಅಂತಿಮ ಗುರಿ ಏನು ಎಂಬುದರ ಕುರಿತಾಗಿ. ಅದು ಮಾನವನನ್ನು ದುಃಖ ಅಥವಾ ಯಾತನೆಯಿಂದ ಮುಕ್ತಗೊಳಿಸಬೇಕೆನ್ನುವುದು ಮತ್ತು ಅತ್ಯುನ್ನತ ಆನಂದವನ್ನು ಹೊಂದಬೇಕೆಂಬುದು ಹಾಗೂ ಅದನ್ನು ಹೇಗೆ ಪಡೆಯಬೇಕೆನ್ನುವ ವಿಧಾನವನ್ನು ಕುರಿತಾಗಿದೆ.  ಇದನ್ನೇ ಒಟ್ಟಾರೆಯಾಗಿ ಹೇಳಬೇಕೆಂದರೆ "ಅಂತಿಮ ಸತ್ಯದ ಜ್ಞಾನ" ಅಥವಾ "ತತ್ವಜ್ಞಾನ"ವನ್ನು ಪಡೆಯಬೇಕೆನ್ನುವುದೇ ಎಲ್ಲ ದರ್ಶನಗಳ ಅಂತಿಮ ಗುರಿಯಾಗಿತ್ತು. ಆದ್ದರಿಂದ ಈ ಅಂತಿಮ ಸತ್ಯದ ದರ್ಶನವೇ ಹಿಂದೂಗಳ ತತ್ವವೆಂದು ನಾವು ಹೇಳಬಹುದು ಮತ್ತು ಈ ಆರು ವಿಧಾನಗಳು ಅದನ್ನು ಹೊಂದುವ ವಿವಿಧ ಮಾರ್ಗಗಳು ಎನ್ನಬಹುದು. ಈ ವಿವಿಧ ಮಾರ್ಗಗಳನ್ನು ಮತ್ತು ಅವುಗಳು ಪ್ರತಿಪಾದಿಸಿದ ವಿಧಾನದ ಆಧಾರದಿಂದ ಅವನ್ನು "ನ್ಯಾಯ ದರ್ಶನ", "ಸಾಂಖ್ಯ ದರ್ಶನ" ಮುಂತಾದವುಗಳಾಗಿ ಕರೆಯಬಹುದು. 

            ಡಾ! ಸರ್ವೇಪಲ್ಲಿ ರಾಧಾಕೃಷ್ಣನ್, ಸುರೇಂದ್ರನಾಥ್ ದಾಸ್‍ಗುಪ್ತ ಮತ್ತು ಎಂ. ಹಿರಿಯಣ್ಣನಂತಹ ಹಲವಾರು ಮೇಧಾವಿಗಳು ಮತ್ತು ಹೆಚ್ಚು ಪರಿಚಿತರಲ್ಲದ ಆದರೆ ಪ್ರಬುದ್ಧರಾಗಿರುವ ಹಲವಾರು ಪಂಡಿತರು "ಷಡ್ದರ್ಶನ"ಗಳು ಅಥವಾ ಆರು ದರ್ಶನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಆದರೆ ಅವೆಲ್ಲವುಗಳೂ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಥವಾ ತತ್ವಶಾಸ್ತ್ರವನ್ನು ಆಳವಾಗಿ ತಿಳಿದುಕೊಳ್ಳಬೇಕೆನ್ನುವವರಾಗಿ ಮೀಸಲಾಗಿವೆ.

            ಈ ಕಿರುಹೊತ್ತಿಗೆಯು ಮೂಲಭೂತವಾಗಿ ಹೆಚ್ಚು ಓದಿಲ್ಲದ ಆದರೆ "ಷಡ್ದರ್ಶನ"ಗಳ ಕುರಿತಾಗಿ ಸಾಮಾನ್ಯ ತಿಳುವಳಿಕೆಯನ್ನು ಹೊಂದಲು ಬಯಸುವ ಜನಸಾಮನ್ಯನಿಗಾಗಿ ಬರೆಯಲ್ಪಟ್ಟಿದೆ. ಅವನಿಗೆ ಈ ಪುಸ್ತಕ ಹಿಡಿಸಿದರೆ ನಾವು ಕೃತಾರ್ಥರಾದಂತೆ.

-ಸ್ವಾಮಿ ಹರ್ಷಾನಂದ
-ಶ್ರೀಧರ್ ಭಂಡ್ರಿ

ಅಕ್ಷರಾಭ್ಯಾಸ





ನನ್ನ ಅದೃಷ್ಟವೋ ಅವಕಾಶವೋ ನಾನರಿಯೆ. ತುಂಬಾ ಉತ್ತಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಲಭ್ಯವಾಗುತ್ತಿರುತ್ತದೆ. ಇಂದು ಅಂತಹ ಒಂದು ಉತ್ತಮ ಅನುಕರಣೀಯ ಕಾರ್ಯಕ್ರಮ ಮುಗಿಸಿ ಈಗ ತಾನೇ ಬಂದೆ. ನನ್ನ ಭಾವನೆಯನ್ನು ಹಂಚಿಕೊಳ್ಳೋಣ ವೆನಿಸಿ ಈ ಬರಹ ಆರಂಭಿಸಿದೆ. ಹಾಸನದಲ್ಲಿ ವಾಸವಿ ವಿದ್ಯಾಸಂಸ್ಥೆಯ ಹೆಸರಿನ ಒಂದು ಶಾಲೆ.ಆಧುನಿಕವಾದ ಕಂಪ್ಯೂಟರ್ ಸಹಿತ ಎಲ್ಲಾ ಸೌಲಭ್ಯಗಳಿವೆ.ಅಷ್ಟು ಮಾತ್ರ ವಾಗಿದ್ದರೆ ಈ ಲೇಖನ ಬರೆಯ ಬೇಕಾಗಿರಲಿಲ್ಲ. ಅಲ್ಲಿನ ವಿಶೇಷ ಏನೆಂದರೆ ಕಳೆದ ಮೂರು ವರ್ಷಗಳಿಂದ ವರ್ಷಾರಂಭದಲ್ಲಿ ಒಂದು ಕಾರ್ಯಕ್ರಮ ಮಾಡುತ್ತಾರೆ. ಶಾಲೆಗೆ ಎಲ್.ಕೆ.ಜಿ/ಯು.ಕೆ.ಜಿ ಗೆ ಹೊಸದಾಗಿ ಸೇರಿದ ಮಕ್ಕಳೊಡನೆ ಅವರ ಪೋಷಕರನ್ನೂ ಕರೆಸುತ್ತಾರೆ. ಶಾರದೆಯ ಪೂಜೆ ಆರಂಭವಾಗುತ್ತೆ. ಎಲ್ಲ ಮಕ್ಕಳೊಡನೆ ಅವರ ಪೋಷಕರು, ಶಾಲೆಯ ವ್ಯವಸ್ಥಾಪಕ ವೃಂದ, ಟೀಚರ್ ಗಳು ಎಲ್ಲರೂ ಉಪಸ್ಥಿತರಿರುತ್ತಾರೆ. ಅರ್ಚಕರು ವಿಧಿವತ್ತಾಗಿ ಪೂಜೆ ಮಾಡುತ್ತಾರೆ. ಎಲ್ಲಾ ಮಕ್ಕಳನ್ನೂ ಅವರ ಪೋಷಕರು ತೊಡೆಯ ಮೆಲೆ ಕುಳ್ಳಿರಿಸಿಕೊಳ್ಳುತ್ತಾರೆ. ಒಂದು ತಟ್ಟೆಯಲ್ಲಿ ಅಕ್ಕಿ ಮತ್ತು ಒಂದು ಅರಿಶಿನದ ಕೊನೆಯನ್ನು ಇರಿಸಿ ಪೋಷಕರಿಗೆಕೊಡುತ್ತಾರೆ. ಆಚಾರ್ಯರು ಎಲ್ಲರಿಂದ ಸಂಕಲ್ಪ ಮಾಡಿಸುತ್ತಾರೆ.ನಂತರ ಓಂಕಾರ ತಿದ್ದಿಸುವ ಮೂಲಕ ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ಹಿಂದಿನ ಗುರುಕುಲವನ್ನು ಹೋಲುವ ಈ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಪೋಷಕರಿಗೆ ಹಿತನುಡಿಗಳನ್ನು ಹೇಳಲಾಗುತ್ತದೆ. ಪೋಷಕರಿಗೆ ನಾಲ್ಕು ಮಾತುಗಳನ್ನು ಹೇಳಿ, ಎಂದು ನನಗೆ ಸೂಚಿಸಿದ್ದರು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ನನಗೂ ಸಂತಸದ ಸಂಗತಿಯೇ ಹೌದು.ಭಗವತ್ ಪ್ರೇರಣೆಯಿಂದ ಆಡಿಸಿದ ನಾಲ್ಕು ಮಾತುಗಳ ಕ್ಲಿಪ್ ಇಲ್ಲಿದೆ.

.