Pages

Saturday, April 14, 2012

ವಿವೇಕ ಚೂಡಾಮಣಿ -ಭಾಗ -೨೦




मूलम् - ಮೂಲ:

अयं स्व्भावस्स्व्त एव यत्पर श्रमापनोदप्रवणं महात्मनाम् ।
सुधांशुरेष स्वयमर्क - कर्कश-प्रभाभितत्पा-मवति क्षितिं किल ॥೩೯।


ಅಯಂ ಸ್ವಭಾವಃ ಸ್ವತ ಏವ ಯತ್ಪರ-ಶ್ರಮಾಪನೋದ -ಪ್ರವಣಂ  ಮಹಾತ್ಮನಾಮ್ |
ಸುಧಾಂಶುರೇಷ ಸ್ವಯಮರ್ಕ-ಕರ್ಕಶ-ಪ್ರಭಾಽಭಿತಪ್ತಾಮವತಿ ಕ್ಷಿತಿಂ ಕಿಲ ||೩೯||

ಪ್ರತಿಪದಾರ್ಥ :

(ಸ್ವತಃ ಏವ = ತಾವಾಗಿಯೇ, ಪರಶ್ರಮಾಪನೋದ-ಪ್ರವಣಂ ಯತ್ = ಇತರರ ಕಷ್ಟ(ಶ್ರಮ)ಪರಿಹಾರದಲ್ಲಿ ಪ್ರವೃತ್ತಿಯು ಯಾವುದೋ, ಅಯಂ = ಇದು ಮಹಾತ್ಮರ, ಸ್ವಭಾವಃ = ಸಹಜಗುಣ, ಅರ್ಕ-ಕರ್ಕಶಪ್ರಭಾ-ಅಭಿತಪ್ತಾಂ = ಸೂರ್ಯನ ಪ್ರಖರವಾದ ಬಿಸಿಲಿನಿಂದ ಬೆಂದಿರುವ, ಕ್ಷಿತಿಂ = ಭೂಮಿಯನ್ನು, ಏಷಃ ಸುಧಾಂಶುಃ = ಈ ಚಂದ್ರಮನು, ಸ್ವಯಂ = ತಾನೇ, ಅವತಿ ಕಿಲ = ರಕ್ಷಿಸುವನಲ್ಲವೆ ? )

ತಾತ್ಪರ್ಯ :

ಇತರರ ಕಷ್ಟವನ್ನು, ಬೇನೆಗಳನ್ನು ಪರಿಹರಿಸುವುದರಲ್ಲಿ ತಾವಾಗಿಯೇ ಮುನ್ನುಗುವುದು ಮುಂದಾಲೋಚಿಸುವುದು ಮಹಾತ್ಮರು ಜ್ಞಾನಿಗಳೆನಿಸಿಕೊಂಡವರ ಸಹಜಗುಣವು.  ನೇಸರನ ತುಂಬ ಚುರುಕಾದ ಬಿಸಿಲಿನಿಂದ ಬೇಯುವ ಭೂಮಿಯನ್ನು ತಿಂಗಳನು ತಾನೇ ತನ್ನ  ಬೆಳಕಿನಿಂದ ತಂಪಾಗಿಸುವುದಿಲ್ಲವೆ ? .

ವಿವರಣೆ :

ಕಬ್ಬಿನಲ್ಲಿ ಸಿಹಿಯು ಏಕಿರಬೇಕು ಎಂಬ ಪ್ರಶ್ನೆಯೇ ಅಸಂಗತವಾಗಿಬಿಡುತ್ತದೆ. ಸಕ್ಕರೆಯಲ್ಲಿ ಸಿಹಿಯ ಕಾರಣವನ್ನು ಹುಡುಕಿದಂತೆ !.  ಕಬ್ಬಿನಲ್ಲಿ ಸಿಹಿಯು ಇರುವುದು ಹುಟ್ಟಿನಿಂದಲೇ ಬಂದುದಾಗಿರುತ್ತದೆ.  ಹಾಗೆಯೇ ಬ್ರಹ್ಮಜ್ಞಾನಿಗಳೆನಿಸಿಕೊಂಡವರು ಲೋಕದ ಸಂಕಟಕ್ಕೆ ತಾವಾಗಿಯೇ ಯಾವ ಪ್ರಚೋದನೆಗೂ ಒಳಗಾಗದೆ ಮರುಗುವ ಮತ್ತು ಕಷ್ಟವನ್ನು ಹೋಗಲಾಡಿಸುವ ಸಹಜಗುಣವನ್ನು ಹೊಂದಿರುತ್ತಾರೆ.

ಆಕ್ಷೇಪ :      ನಿಮಿತ್ತವಿಲ್ಲದೆ ಪ್ರವೃತ್ತಿಯೂ ಇಲ್ಲ ಅಲ್ಲವೆ ?
ಸಮಾಧಾನ : ರವಿ-ಚಂದ್ರರು ಯಾವ ನಿಮಿತ್ತದಿಂದ (ಕಾರಣದಿಂದ) ಧರೆಗೆ ಬೆಳಕನೀಯುತ್ತಿದ್ದಾರೆ ? ಈ ಪ್ರಕ್ರಿಯೆಯು ದಿನವೂ ಅನಿಮಿತ್ತವಾಗಿಯೇ ನೆಡೆಯುತ್ತಿದೆ.

ನೇಸರನ ಪ್ರಖರವಾದ ಕಿರಣಗಳು ಭೂಮಿಯನ್ನು ದಿನವೆಲ್ಲಾ ಕಾಯಿಸಿದರೆ ಇರುಳಿನಲ್ಲಿ ಚಂದ್ರನು ತನ್ನ ಸೊಬಗಿನ ಬೆಳಕಿನಿಂದ ಧರೆಯನ್ನು ತಂಪಾಗಿಸುತ್ತಾನೆ. ಇಬ್ಬರಿಗೂ ಯಾವ ಕಾರ್ಯ-ಕಾರಣಗಳೂ ಇಲ್ಲಿ ಇರುವುದಿಲ್ಲ. ಪ್ರಕೃತಿಯಲ್ಲಿನ ಸಹಜಕ್ರಿಯೆಗಳಂತೆ ಮಹಾತ್ಮರಾದವರೂ ಸಹ ಅನ್ಯರಿಗಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.  ದ.ರಾ. ಬೇಂದ್ರೆಯವರು ಹೇಳುವಂತೆ " ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ " ಎಂಬ ಭಾವವು ಇಲ್ಲಿ ಕಂಡುಬರುತ್ತದೆ. ಕರ್ಮಗಳೆಂಬ ಬಿರುಬಿಸಿಲಿನಲ್ಲಿ ಬೆಂದು ನೊಂದು ಬರುವ ಅಪೇಕ್ಷಿಯನ್ನು, ಜ್ಞಾನಿಯು ತತ್ವವೆಂಬ ತಿಂಗಳ ಬೆಳಕಿನಿಂದ ಸಂತೈಸುತ್ತಾನೆ. ಕಾರಿರುಳೆಂಬ ರಕ್ಕಸಿಯು ತೊಲಗಿದ ನಂತರ ಬೆಳಕೆಂಬ ಅಮೃತವು ಸಹಜವಾಗಿ ಬರುತ್ತದೆ. ಅಜ್ಞಾನವನ್ನು ತೊಡೆದು ಹಾಕುವುದಷ್ಟೇ ಗುರುವಿನ ಕೆಲಸ. ಜ್ಞಾನ ಪ್ರಾಪ್ತಿಯ ನಂತರ ಗುರುವೂ ಇಲ್ಲಿ ನಗಣ್ಯ !. ಇರುಳೇ ಇರದಿದ್ದರೆ ’ಹಗಲು ಬರುತ್ತದೆ’ ಎಬುದಕ್ಕೆ ಅರ್ಥವುಂಟೆ ? . ಮುಂದಿನದೆಲ್ಲವೂ ಸ್ವಾನುಭವದಿಂದಲೆ ಬರುವಂತಹುದು. ಜ್ಞಾನಿಗೆ ಯಾವ ನಿಮಿತ್ತವೂ ಇರುವುದಿಲ್ಲ.  ಮಾಗಿದ ಹಣ್ಣು ತಂತಾನೇ ಬೀಳುವಂತೆ ಮಹಾತ್ಮರೂ ಸಹ ಅನಿಮಿತ್ತವಾಗಿ ಲೋಕವನ್ನು ರಕ್ಷಿಸುತ್ತಾರೆ ಎಂದು ಆಚಾರ್ಯರು ವಿವರಿಸಿರುತ್ತಾರೆ.

मूलम् - ಮೂಲ

ब्रम्हानन्द-रसानुभूति-कलितैः पूतैः सुशीतैः सितैः
युष्मद्वाक्कल शोज्झितैः श्रुतिसुखैः वाक्यामृतैः सेचय ।
संतप्तं भवतापदावदहन-ज्वालाभिरेनं प्रभो
धन्यास्ते भवदिक्षण-क्षणगतेः पात्रिकृताः स्वीकृताः ॥४೦॥

ಬ್ರಹ್ಮಾನಂದ- ರಸಾನುಭೂತಿ-ಕಲಿತೈಃ ಪೂತೈಃ ಸುಶೀತೈರ್ಹಿತೈಃ(ಸಿತೈಃ)
ಯುಷ್ಮದ್-ವಾಕ್ಕಲಶೋಜ್ಝಿತೈಃಶ್ರುತಿಸುಖೈರ್ವಾಕ್ಯಾಮೃತೈಃ ಸೇಚಯ|
ಸಂತಪ್ತಂ ಭವತಾಪ -ದಾವದಹನ -ಜ್ವಾಲಾಭಿರೇನಂ ಪ್ರಭೋ
ಧನ್ಯಾಸ್ತೇ ಭವದೀಕ್ಷಣ -ಕ್ಷಣಗತೇಃ ಪಾತ್ರೀಕೃತಾಃ ಸ್ವೀಕೃತಾಃ || ೪೦||

ಪ್ರತಿಪದಾರ್ಥ :

(ಪ್ರಭೋ = ಹೇ ಗುರುವೆ, ಭವತಾಪ-ದಾವದಹನ-ಜ್ವಾಲಾಭಿಃ= ಸಂಸಾರವೆಂಬ ಕಾಳ್ಗಿಚ್ಚಿನ ಜ್ವಾಲೆಗಳಿಂದ, ಸಂತಪ್ತಂ = ಬೆಂದಿರುವ, ಏನಂ = ಈ (ನನ್ನನ್ನು), ಬ್ರಹ್ಮಾನಂದ -ರಸಾನುಭೂತಿ-ಕಲಿತೈಃ = ತನ್ನರಿವಿನ (ಬ್ರಹ್ಮಾನಂದದ) ಅನುಭವದಿಂದ ಕೂಡಿರುವ- ಮಧುರವಾಗಿರುವ, ಪೂತೈಃ= ಅಪ್ಪಟವಾದ(ಶುದ್ಧವಾದ), ಸುಶೀತೈಃ = ತಂಪಾಗಿರುವ (ಶೀತಲವಾಗಿರುವ), ಹಿತೈಃ = ಒಳ್ಳೆಯದಾದ(ಹಿತವಾಗಿರುವ), ಯುಷ್ಮತ್-ವಾಕ್-ಕಲಶ-ಉಜ್ಝಿತೈಃ = ನಿಮ್ಮ ಮಾತುಗಳೆಂಬ ಕಲಶದಿಂದ ಹೊರಹೊಮ್ಮಿರುವ, ಶ್ರುತಿಸುಖೈಃ = ಕೇಳಲು ಇಂಪಾಗಿರುವ, ವಾಕ್ಯಾಮೃತೈಃ = ನಲ್ನುಡಿಗಳೆಂಬ ಅಮೃತಧಾರೆಗಳಿಂದ, ಸೇಚಯ = ತೋಯಿಸು (ಚಿಮುಕಿಸು), ಭವತ್-ಈಕ್ಷಣ-ಕ್ಷಣ-ಗತೇ = ನಿನ್ನ ಕಟಾಕ್ಷದ ಕ್ಷಣಮಾತ್ರ -ಪ್ರಸರಣೆಗೆ, ಪಾತ್ರೀ-ಕೃತಾಃ = ಪಾತ್ರರಾಗಿರುವ, ಸ್ವೀಕೃತಾಃ = ಒಪ್ಪಿಗೆಯಾಗಿರುವ, ತೇ = ಅವರು(ಅಪೇಕ್ಷಿಯು), ಧನ್ಯಾಃ = ಧನ್ಯರು.)

ತಾತ್ಪರ್ಯ :

ಹೇ ಗುರುವೆ, ಸಂಸಾರತಾಪತ್ರಯವೆಂಬ ಕಾಳ್ಗಿಚ್ಚಿನಿಂದ ಬೆಂದಿರುವ ನೊಂದಿರುವ ನನ್ನನ್ನು ಬ್ರಹ್ಮಾನಂದ -ರಸಾನುಭವದಿಂದ ಕೂಡಿರುವ ಮಧುರವಾಗಿರುವ ಕೇಳಲು ಇಂಪಾಗಿರುವ ನಿಮ್ಮ ಮಾತೆಂಬ ಕಲಶದಿಂದ ಹೊರಹೊಮ್ಮಿರುವ ನಲ್ನುಡಿಗಳಿಂದ-ಉಪದೇಶಾಮೃತದಿಂದ ತೋಯಿಸಿರಿ-ಚಿಮುಕಿಸಿರಿ; ಇಂತಹ ನಿಮ್ಮ ಕಟಾಕ್ಷದ ಕ್ಷಣಮಾತ್ರದ ಪ್ರಸರಣೆಗೆ ಪಾತ್ರರಾಗಿ ಒಪ್ಪಿಗೆಯಾಗಿರುವವರೇ ಧನ್ಯರು !.

ವಿವರಣೆ :

ಹೀಗೆ ಶಿಷ್ಯನಾಗುವವನು ಗುರುವಿನ ಮುಂದೆ ನಿವೇದಿಸಿಕೊಳ್ಳುತ್ತಾ ತನ್ನನ್ನು ಸಂಸಾರದ ಜಂಜಡಗಳಿಂದ ಪಾರುಮಾಡಿ ಎಂದು ಕೇಳಿಕೊಳ್ಳುತ್ತಾನೆ. ಆ ಗುರುವಾದರೂ ಸ್ವತಃ ಬ್ರಹ್ಮಜ್ಞಾನಿಯೇ ಆಗಿರುತ್ತಾನೆ. ಬ್ರಹ್ಮಾನಂದದ ರಸಾನುಭವದಲ್ಲಿ ಮಿಂದಿರುತ್ತಾರೆ. ಗುರುವಿನ ತತ್ವೋಪದೇಶವು ಇಂಪಾದ ಸಂಗೀತದಂತಿರುತ್ತದೆ. ಇಂತಹ ಉಪದೇಶಾಮೃತವನ್ನು ನನಗೆ ಚಿಮುಕಿಸಿ ಎಂದು ಅಪೇಕ್ಷಿಯು ವಿನಂತಿಸುತ್ತಾನೆ. ಇಂತಹ ಕ್ಷಣಮಾತ್ರದ ಘಟನೆಗೆ ಪಾತ್ರರಾಗುವವರೇ ಧನ್ಯರು ಎಂದು ಆಚಾರ್ಯರು ವಿವರಿಸುತ್ತಾರೆ. ಗುರೂಪದೇಶವು ಅಜ್ಞಾನವನ್ನು ತೊಡೆದು ಹಾಕುವುದರಿಂದ ಅದು ಅಪ್ಪಟವಾದು (ಪೂತೈಃ) ಅಥವಾ ಪವಿತ್ರವಾದುದು ಮತ್ತು ರಜಸ್ಸು ಮತ್ತು ತಮಸ್ಸನ್ನು ಹೋಗಲಾಡಿಸಿ ಸತ್ವಗುಣಮಾರ್ಗವೊಂದನ್ನೆ ಹೊಂದಿಸುವುದರಿಂದ ಅದು ನಿರ್ಮಲವಾದುದು (ಸಿತೈಃ) ಎಂದು ಶ್ರೀ ಚಂದ್ರಶೇಖರ ಭಾರತಿಗಳು ವ್ಯಾಖ್ಯಾನಿಸಿರುತ್ತಾರೆ.
ಬ್ರಹ್ಮಜ್ಞಾನಕ್ಕೆ ಸ್ವಾನುಭವವೇ ಮುಖ್ಯವಾದರೂ ಗುರುವಿಲ್ಲದ ಗುರೂಪದೇಶವಿಲ್ಲದ ಜ್ಞಾನವು ವ್ಯರ್ಥವೆಂದೇ ತಿಳಿಯಬೇಕಾಗುತ್ತದೆ. ಗುರುವು catalyst (ವೇಗವರ್ಧಕ) ನಂತೆ ಕಾರ್ಯ ನಿರ್ವಹಿಸುತ್ತಾರೆ. ಉಪದೇಶವು ಮುಗಿದ ನಂತರ ಶಿಷ್ಯನು ಜ್ಞಾನಿಯೇ ಆಗಿರುತ್ತಾನೆ. ಶ್ರವಣಮಾತ್ರದಿಂದಲೇ (ಶ್ರುತಿ ಸುಖೈಃ) ಬ್ರಹ್ಮದ ಆನಂದವು ಲಭಿಸುವುದರಿಂದ ಮುಂದೆ ಉಪದೇಶದ ಅಗತ್ಯವಿಲ್ಲದೆ ಮನನ ಮತ್ತು ನಿಧಿಧ್ಯಾಸನಗಳಿಂದ ಬ್ರಹ್ಮದ ಅನುಭವವನ್ನು ಪಡೆಯುತ್ತಾನೆ ಎಂದು ಆಚಾರ್ಯರು ವಿವರಿಸುತ್ತಾರೆ.
ಗುರೂಪದೇಶವೆಂದರೆ ವೇದಾಂತದ ಅರ್ಥ ವಿಚಾರಗಳನ್ನು ತಿಳಿಯುವುದು ಚರ್ಚಿಸುವುದು ಮತ್ತು ಜ್ಞಾನಪ್ರಾಪ್ತಿಯ ನಂತರ ವಿಚಾರ-ಚರ್ಚೆಗಳನ್ನು ಬದಿಗಿಟ್ಟು ಬ್ರಹ್ಮಾನುಭವದಲ್ಲಿ ತೊಡಗುವುದು ಎಂದು ಹೇಳುತ್ತಾರೆ.
"ವೇದಾಂತದ ಅರಿವಿಲ್ಲದ ಜ್ಞಾನವೂ ವ್ಯರ್ಥ ಜ್ಞಾನಪ್ರಾಪ್ತಿಯ ನಂತರ ವೇದಾಂತವೂ ವ್ಯರ್ಥ" ಎಂದು ರಮಣಮಹರ್ಷಿಗಳು ಒಂದೆಡೆ ಹೇಳುತ್ತಾರೆ. (’ಜ್ಞಾನ ಬಂದಮೇಲೆ ವೇದಾಂತ ಏಕಪ್ಪಾ ? ತಲೆ ಚಚ್ಕೋಳೋಕೆ !’ ಎನ್ನುತ್ತಾರೆ ರಮಣರು) .
ಆಚಾರ್ಯರು ಜ್ಞಾನದ ಪಾರಮ್ಯದಲ್ಲಿ ಕರ್ಮವನ್ನು ಕಡೆಗಣಿಸಿದ್ದಾರೆ ಎಂಬ ಆಕ್ಷೇಪಗಳು ಅಲ್ಲಲ್ಲಿ ಬರುತ್ತಿರುತ್ತದೆ. ವಾಸ್ತವದಲ್ಲಿ ಶಂಕರರು ಕರ್ಮಕ್ಕೆ ಸಲ್ಲಬೇಕಾದ ಎಲ್ಲ ಗೌರವವನ್ನೂ ನೀಡಿದ್ದಾರೆ. ಅದನ್ನು ಆಚಾರ್ಯರ ಕೃತಿಗಳ ಅಧ್ಯಯನದಿಂದಲೇ ಕಂಡುಕೊಳ್ಳಬಹುದು. ಕರ್ಮದಲ್ಲಿ ಹೊಂದಾಣಿಕೆಯು ಬರುವಂತೆ ಜ್ಞಾನದಲ್ಲಿ ಯಾವ ಹೊಂದಾಣಿಕೆಯೂ ಬರುವುದಿಲ್ಲ.  ಪಕ್ಕದ ಮನೆಯವರು ತಿರುಪತಿಗೆ ಹೊರಟಿದ್ದಾರೆ ಎಂದರೆ ನಾವೂ ನೂರು ರೂಪಾಯಿ ಕೊಟ್ಟು ನಮ್ಮದೂ ಒಂದು ನಮಸ್ಕಾರ ಹಾಕಿ ಬನ್ನಿ ಎಂದು ಸವರಿಸಿ ಕುಳಿತಲ್ಲೇ ಗೋವಿಂದ ಎನ್ನಬಹುದು !. ಹಿರಿಯರ ಕಾರ್ಯಗಳನ್ನು ಮಾಡುವಾಗ (ಶ್ರಾದ್ಧಾದಿಗಳು) ಅನಿರ್ವಾಹ ಪಕ್ಷದಲ್ಲಿ ಸಂಬಂಧಿಕರಿಂದ ಅಂತಹ ಕರ್ಮಗಳನ್ನು ಮಾಡಿಸುವ ಅವಕಾಶವೂ ಉಂಟು. ಪಕ್ಕದಲ್ಲಿ ಇರದಿದ್ದರೂ ಅವರ ಹೆಸರು-ಕುಲ-ಗೋತ್ರಗಳನ್ನು ಹೇಳಿ ಕಾರ್ಯಗಳನ್ನು ನೆಡೆಸಬಹುದು ನೆಡೆಯಿಸುತ್ತಿದ್ದೇವೆ. ಇಂತಹ ಹೊಂದಾಣಿಕೆಗಳ ಗೊಂದಲದಲ್ಲಿ ಕರ್ಮದ ಬಲವು ಕಡಿಮೆಯಾಗುತ್ತದೆ. ಆದರೆ ಜ್ಞಾನವು ವಿಚಾರದಿಂದ ಮತ್ತು ಸ್ವಾನುಭದಿಂದ ಮಾತ್ರವೇ ಬರುವಂತಹುದಾದುದರಿಂದ ಹೊಂದಾಣಿಕೆಯ ಪ್ರಶ್ನೆಯೇ ಬರುವುದಿಲ್ಲ. ಹೋಟೆಲಿನ ಮಾಣಿಯು ಬಗೆಬಗೆಯ ತಿನಿಸುಗಳ ಪಟ್ಟಿಯನ್ನು ವದರಿದ ಮಾತ್ರಕ್ಕೆ ನಮ್ಮ ಹೊಟ್ಟೆ ತುಂಬಿಬಿಡುತ್ತದಯೆ ? ನಾವೇ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾಗುತ್ತದೆ.  ವದರುವ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು ಆದರೆ ತಿನ್ನುವುದು ಮಾತ್ರ ಸ್ವಾನುಭವದ ಕೆಲಸ !.

ಮುಂದೆ ಗುರು-ಶಿಷ್ಯರ ಸಂವಾದದ ಮೂಲಕ ಬ್ರಹ್ಮವಿದ್ಯೆಯ ಆರಂಭವನ್ನು ತಿಳಿಯೋಣ.

ವಂದನೆಗಳು.