Pages

Wednesday, August 11, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -14
ಪರಮ ವೈಜ್ಞಾನಿಕವಾದ ವೇದಗಳು, ಶ್ರದ್ಧೆಯನ್ನು ನಿಜವಾದ ಶ್ರದ್ಧೆಯಾಗಿ ಉಳಿಸಿಕೊಳ್ಳುವ ದಿವ್ಯಪಥವನ್ನು ತೋರಿ, ಯಾವ ಬಗೆಯ ಭೇಧ ಭಾವಗಳಿಗೂ ಎಡೆಯಿಲ್ಲದಂತೆ ಮಾಡಿ, ಪೃಥ್ವಿಯ ಸರ್ವಮಾನವರಿಗೂ ಮಾನವತ್ವದ ವಿಕಾಸ ಮಾಡಿಕೊಲ್ಳುವ ಬಗೆಯನ್ನು ಬಣ್ಣಿಸಿ ಹೇಳುತ್ತವೆ. ವೇದಗಳಲ್ಲಿ ಮತಮತಾಂತರಗಳ ಗೊಂದಲವಿಲ್ಲ, ಮಾನವ ಜಾತಿಯನ್ನು ಹರಿದು ಹಂಚಿಹಾಕುವ ಹೊಂಚಿಲ್ಲ. ವೇದಗಳನ್ನು ಹಿಂದೂಗಳ ಶಾಸ್ತ್ರವೆಂದು ಕರೆಯುವುದು ವೇದಗಳ ಔನ್ನತ್ಯಕ್ಕೆ ಅಪಮಾನ ಮಾಡಿದಂತೆಯೇ ಸರಿ. ಈಸ್ವರೀಯ ವೇದಗಳು ಸರ್ವಮಾನವರ ಸಂಪತ್ತು. ವೇದಗಳು ಜೀವಮಾತ್ರರನ್ನು -ಇನ್ನು ಮಾನವಮಾತ್ರರೆಂದು ಬೇರೆ ಹೇಳಬೇಕೇನು?- ಅಮರನಾದ ಪ್ರಭುವಿನ ಮಕ್ಕಳೆಂದು ಕರೆಯುತ್ತವೆ:-

ಯುಜೇ ವಾಂ ಬ್ರಹ್ಮ ಪೂರ್ವ್ಯಂ ನಮೋಭಿರ್ವಿ
ಶ್ಲೋಕ ಏತು ಪಥ್ಯೇವ ಸೂರೇಃ|
ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾ ಆ ಯೇ ಧಾಮಾನಿ ದಿವ್ಯಾನಿ ತಸ್ಥುಃ|| (ಯಜು.11.5)

ನರನಾರಿಯರೇ! [ವಾಮ್] ನಿಮ್ಮಿಬ್ಬರನ್ನೂ [ಪೂರ್ವ್ಯಂ ಬ್ರಹ್ಮಯುಜೇ] ಅನಾದಿ ಭಗವದ್ವಾಣಿಯೊಂದಿಗೆ ನಿಯೋಜಿಸುತ್ತೇನೆ. [ಸೂರೇ ಪಥ್ಯಾ ಇವಾ] ಜ್ಞಾನಿಯ ಮಾರ್ಗದಲ್ಲಿ ನಡೆದಂತೆ [ನಮೋಭಿಃ] ವಿನಯದಿಂದ [ಶ್ಲೋಕಃ ವಿ ಏತು] ನಿಮ್ಮ ಕೀರ್ತಿ ಹರಡಲಿ. [ಯೇ] ಯಾರು [ದಿವ್ಯಾನಿ ಧಾಮಾನಿ ಆತಸ್ಥುತುಃ] ದೇವನಿರ್ಮಿತ ನೆಲೆಗಳಲ್ಲಿ ನೆಲೆಸಿರುವರೋ [ಅಮೃತಸ್ಯ ವಿಶ್ವೇ ಪುತ್ರಾಃ] ಆ ಅಮರ ಪ್ರಭುವಿನ ಮಕ್ಕಳೆಲ್ಲರೂ [ಶೃಣ್ವಂತು] ಆಲಿಸಲಿ. ವೇದಗಳ ದೃಷ್ಟಿಯಲ್ಲಿ ಮಾನವರೆಲ್ಲಾ ಭಗವದ್ಪುತ್ರರೇ. ಅಷ್ಟೇ ಅಲ್ಲ ಮಾನವ ಗೌರವವನ್ನು ವೇದಗಳು ಸಾರುತ್ತಿರುವ ರೀತಿಯೂ ಅದ್ಭುತವೇ.