Pages

Thursday, December 29, 2011

ಭಗವಾನ್ ರಮಣ ಮಹರ್ಷಿಗಳು



ಭಾರತ ದೇಶದಂತಹ ಪುಣ್ಯಭೂಮಿಯಲ್ಲಿ ಅದೆಷ್ಟು ಮಹಾಮಹಿಮರು ಜನ್ಮವೆತ್ತಿ ಈ ನೆಲವನ್ನು ಪಾವನಗೊಳಿಸಿ ಜನ್ಮ ಸಾರ್ಥಕ್ಯ ಮಾಡಿಕೊಂಡು ಅಜರಾಮರರಾಗಿದ್ದರೋ ಲೆಕ್ಕವಿಲ್ಲ . ಇಂತಹ ಮಹಾಮಹಿರಲ್ಲಿ ಭಗವಾನ್ ರಮಣ ಮಹರ್ಷಿಗಳು ಒಬ್ಬರು. 30 ನೆ ಡಿಸೆಂಬರ್ 1879 ರ ಪುಣ್ಯ ದಿನದಂದು ತಾಯಿ ಅಳಗಮ್ಮಾಲ್, ತಂದೆ ಸುಂದರಂ ಐಯೆರ್ರವರ ಸುಪುತ್ರರಾಗಿ ಜನಿಸಿದರು. ಇವರ ಹುಟ್ಟು ಹೆಸರು ವೆಂಕಟರಮಣ. ಈ ಭೂಮಿ ಕಂಡ ಅತ್ಯಂತ ಸರಳ, ಮೌನ ಸಾಧಕ ಮತ್ತು ಶ್ರೇಷ್ಠ ಆತ್ಮಜ್ನಾನಿಗಳಲ್ಲಿ ಒಬ್ಬರೆಂದರೆ, ಅವರೆ ಶ್ರೀ ರಮಣ ಮಹರ್ಷಿಗಳು. ಇವರ ಜನ್ಮ ದಿನದ ಅಂಗವಾಗಿ ಈ ಸಂಕ್ಷಿಪ್ತ ಲೇಖನವನ್ನು ಮಹರ್ಷಿಗಳ ನೆನಪಿನಲ್ಲಿ ಗೌರವಪೂರ್ಣವಾಗಿ ಓದುಗರಿಗೆ ಅರ್ಪಿಸುತ್ತಿದ್ದೇನೆ.
1896 ರ ಒಂದು ದಿನ ವೆಂಕಟರಮಣನಿಗೆ ಆದ ಒಂದು ಅನುಭವ ಈತನ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು. ತನ್ನ ಚಿಕ್ಕಪ್ಪನ ಮನೆಯ ಮಹಡಿಯ ಕೊಟಡಿಯಲ್ಲಿ ಒಬ್ಬನೇ ಮಲಗಿದ್ದಾಗ, ಇದ್ದಕಿದ್ದಂತೆ ಸಾವಿನ ಭೀತಿ ಕಾಣಿಸಿಕೊಂಡಿತು. ಕೆಲವುನಿಮಿಶಗಲ್ಲಿ ದೇಹ ನಿಶ್ಚಲವಾದಂತೆ ಭಾಸವಾಗತೊಡಗಿತು. ಸಾವು ಬಂದಂತೆ ಅನುಭವವಾಯಿತು.
ಆದರೆ ಈ ಎಲ್ಲ ಪ್ರಕ್ರಿಯೆಗಳು ಆತನಿಗೆ ತಿಳಿಯುತ್ತಿತು. ತನ್ನ ಸಾವನ್ನು ತಾನೆ ನೋಡುತ್ತಿರುವಂತೆ ಭಾಸವಾಯಿತು. ಕೆಲವು ಕ್ಷಣಗಳಲ್ಲಿ ಎಲ್ಲವು ಸರಿಯಾಗಿ ಸಹಜ ಸ್ತಿತಿಗೆ ಮರಳಿದರೂ, 'ಸಾವು' ದೇಹಕ್ಕೆ ಆದರೆ ಈ ಸಾವನ್ನು ನೋಡಿದ್ದು ಯಾರು ? ಈ ಚೈತನ್ಯ ವಸ್ತು ಯಾವುದು? ಎಂಬ ಪ್ರಶ್ನೆ 16 ವರ್ಷದ ಬಾಲಕನನ್ನು ಕಾಡಿತು. ವಾರಗಟ್ಟಲೆ ಕಳೆಯಿತು. ಉತ್ತರ ಸಿಗಲಿಲ್ಲ. ಮನಸ್ಸು ಮಾತ್ರ ತುಡಿಯುತ್ತಿತ್ತು. ಒಂದು ದಿನ ಇದ್ದಕ್ಕೆ ಇದ್ದಹಾಗೆ ಯಾರಿಗೂ ಹೇಳದೆ ಮನೆಯನ್ನು ತೊರೆದು ಸತ್ಯವನ್ನು ಅರಸಲು ಹೊರಟ. ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ಏನೂ ಗೊತ್ತಿಲ್ಲ. ದೈವಾನುಗ್ರಹ ಈ ಬಾಲಕನನ್ನು ತಿರುವಣ್ಣ ಮಲೈ ಕಡೆಗೆ ಆಕರ್ಷಿಸಿತು. ಸರ್ವಸಂಗ ಪರಿತ್ಯಾಗಿಯಾಗಿ ಸ್ವಸ್ವರೂಪವನ್ನು ಅರಿಯಲು ಅರುಣಾಚಲದ ಗುಹೆಯೊಂದರಲ್ಲಿ ಧ್ಯಾನಾಸಕ್ತನಾದ. ದೇಹಭಾವ ತೊರೆದು ಆತ್ಮಭಾವದಲ್ಲಿ ನೆಲನಿಂತ ಈತನ ಉಗ್ರ ತಪ್ಪಸಿಗೆ ಯಾವುದು ಅಡ್ಡಿಯಾಗಲಿಲ್ಲ. ಕ್ರಿಮಿಕೀಟಗಳು ಕಾಲಿನ ಮತ್ತು ತೊಡೆಯ ಕೆಲವು ಭಾಗಗಳನ್ನು ತಿಂದರು ಯಾವುದರ ಪರಿವೆ ಇಲ್ಲದೆ ನಿಶ್ಚಲನಾಗಿ ಕುಳಿತುಬಿಟ್ಟ. ತಲೆ ಕೂದಲು, ಉಗುರುಗಳು ಊಹೆಮಾಡಲು ಸಾಧ್ಯವಾಗದಷ್ಟು ಬೆಳದು ಬಿಟ್ಟಿದ್ದವು. ನಿತ್ರಾಣನಾಗಿದ್ದ ವೆಂಕಟರಮಣನನ್ನು ಸ್ಥಳೀಯ ವಾಸಿಗಳು ಕಂಡು ಸಂತೈಸಿದರು. ನಿಧಾನವಾಗಿ ಸಹಜಸ್ತಿತಿಗೆ ಬಂದರೂ ಹೆಚ್ಚು ಕಾಲ ಮೌನದಲ್ಲೇ ಇರುತ್ತಿದ್ದ ಈ ಸಾಧಕನನ್ನು ಅರ್ಥಮಾಡಿಕೊಳ್ಳಲು ಸ್ತಳೀಯರಿಗೆ ಸಾಕಷ್ಟು ಸಮಯವೇ ಬೇಕಾಯಿತು.
ದಿನಗಳು ಉರುಳಿದಂತೆ ಈ ಸಾಧಕ ಯುವಕನ ಪ್ರಭಾವಲಯಕ್ಕೆ ಸ್ವಲ್ಪ ಸ್ವಲ್ಪವಾಗಿ ಜನರು ಬರಲು ಪ್ರಾರಂಭ ಮಾಡಿದರು. ಎಷ್ಟೇ ಜನಸಮೂಹ ಇದ್ದರು ಎಲ್ಲರಿಗು ಮೌನವೇ ಉತ್ತರ. ಎಲ್ಲಾ ಸಮಸ್ಯೆಗೂ ಮೌನದಲ್ಲೇ ಉತ್ತರನೀಡುತ್ತಿದ್ದ. ಈ ಮೌನಿಯುವಕನ ಪ್ರಸಿದ್ದಿ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಇಂತಹ ಸಮಯದಲ್ಲಿ ಒಬ್ಬ ಸಾಧಕರು ಈ ಯುವಕನ ಸಾಮಿಪ್ಯಕ್ಕೆ ಬಂದರು.ಇವರೇ ಕಾವ್ಯ ಕಂಠ ಗಣಪತಿ ಮುನಿ . ಇವರು ಈ ಯುವಕನ ಅದ್ಯಾತ್ಮ ಸಾಧನೆಗೆ ಮಾರುಹೋಗಿ "ಭಗವಾನ್ ಶ್ರೀ ರಮಣ ಮಹರ್ಷಿ" ಎಂದು ತುಂಬು ಹೃದಯದಿಂದ ನಾಮಕರಣ ಮಾಡಿದರು. ಅಂದಿನಿಂದ ಈ ಯುವಕ ರಮಣ ಮಹರ್ಷಿ ಆದರು. ಮೌನ ತಪಸ್ಸಿನಿಂದ ಪ್ರತಿ ಕ್ಷಣವೂ ಆತ್ಮಚಿಂತನೆ ಮಾಡುತ್ತಾ ತಮ್ಮನ್ನು ಅರಸಿ ಬಂದವರಿಗೆ ದಿವ್ಯಾನುಗ್ರಹ ಮಾಡುತ್ತಿದ್ದರು. ಮೌನ ಬ್ರಾಹ್ಮಣಮುನಿ ಎಂದು ಪ್ರಸಿದ್ದಿ ಹೊಂದಿದ ಇವರ ದರ್ಶನಕ್ಕಾಗಿ ಬರುವ ಭಕ್ತರ ಸಂಖೆ ದಿನದಿಂದ ದಿನಕ್ಕೆ ಹೆಚ್ಹಾಗ ತೊಡಗಿತು. ದರ್ಶನ ಮಾತ್ರಕ್ಕೆ ಬರುವ ಸಂಖೆಗಿಂತ ತಮ್ಮ ಕಷ್ಟ ಪರಿಹಾರಕ್ಕಾಗಿ ಬರುವವರ ಸಂಖೆ ಜಾಸ್ತಿ ಇತ್ತು. ಆದರೆ ಮಹರ್ಷಿಗಳು ಯಾವುದೇ ಪವಾಡವನ್ನಾಗಲಿ ಮಾಡುತ್ತಿರಲಿಲ್ಲ, ಭವಿಷ್ಯವನ್ನಾಗಲಿ ಹೇಳುತ್ತಿರಲಿಲ್ಲ, ಬದಲಿಗೆ ದಿವ್ಯ ತೇಜಸ್ಸಿನ ತಮ್ಮ ಕಣ್ಣುಗಳ ಮೂಲಕ ಸಾಂತ್ವನ ಹೇಳುತ್ತಿದ್ದರು. ಇದು ಬೇಡಿ ಬಂದವರಿಗೆ ಸಾಕಾಗುತ್ತಿತ್ತು . ದರ್ಶನ ಮಾತ್ರದಿಂದಲೇ ತಮ್ಮ ಮಾನಸಿಕ ಕ್ಲೇಶಗಳು ದೂರವಾಗುತ್ತಿದ್ದವು.
ಮಹರ್ಷಿಗಳು ದಿನದ 24 ಘಂಟೆಗಳು ಭಕ್ತರಿಗೆ ಲಭ್ಯವಾಗಿರುತ್ತಿದ್ದರು. 1896 ರಿಂದ 1950 ರ ತನಕ ಆಶ್ರಮ ಬಿಟ್ಟು ಎಲ್ಲೂ ಹೋಗಲೇ ಇಲ್ಲ. ಹೆಚ್ಚೆಂದರೆ ಎರಡು ಕಿ ಮಿ ದೂರ ಹೋಗಿರಬಹುದು. ಆದರೆ ಪ್ರಪಂಚದ ಎಲ್ಲಾ ಭಾಗಗಳಿಂದ ಭಕ್ತರನ್ನು ಸೆಳದುಕೊಂಡರು. ದೇಶ ವಿದೇಶಗಳಿಂದ ಬರುವ ಆಗರ್ಭ ಶ್ರೀಮಂತ ಭಕ್ತನಿಂದ , ಕಡು ಬಡವನವರಗೆ ಒಂದೇ ತೆರನಾದ ಅವಕಾಶ ಮತ್ತು ಆತಿಥ್ಯ ಆಶ್ರಮದಲ್ಲಿ ದೊರೆಯುತ್ತಿತ್ತು. ಮಹರ್ಷಿಗಳು ಎಲ್ಲರೊಟ್ಟಿಗೆ ಕೂತು ಊಟಮಾಡುತ್ತಿದ್ದರು. ಯಾವ ರೀತಿಯ ವಿಶೇಷ ಸವಲತ್ತನ್ನು ಬಯಸದೆ ಸರಳವಾದ ನಡೆ ನುಡಿಗಳನ್ನು ಸ್ವಯಂ ಪಾಲಿಸಿ ಇತರರಿಗೆ ಮಾದರಿಯಾಗಿದ್ದರು. ಮುಂಜಾನೆ 3 ಘಂಟೆಗೆ ಎದ್ದು ಆಶ್ರಮವಾಸಿಗಳಿಗೆ ಊಟ ತಿಂಡಿ ವ್ಯವಸ್ತೆ ಏನಾಗಿದೆ ವಿಚಾರಿಸುತ್ತಿದ್ದರು, ಸ್ವತಹ ಕೂತು ತರಕಾರಿ ಹೆಚ್ಚುತ್ತಿದ್ದರು, ರುಬ್ಬಲು ಸಹಾಯ ಮಾಡುತ್ತಿದ್ದರು, ಕಸ ಗುಡಿಸುವುದರಿಂದ ಎಲ್ಲಾ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು.ನಂತರದಲ್ಲಿ ಬರುವ ಭಕ್ತರ ಜೊತೆ ಸಂವಾದ ನಡೆಸುತ್ತಿದ್ದರು. ಪ್ರಾಣಿ, ಪಕ್ಷಿ ಮತ್ತು ಗಿಡ ಮರಗಳನ್ನು ವಿಶೇಷವಾಗಿ ಪ್ರೀತಿಸುತ್ತಿದ್ದರು. ಗಿಡದ ಎಲೆಗಳನ್ನು ಮತ್ತು ಹೂವುಗಳನ್ನು ಕೀಳಬೇಡಿ ಎಂದು ಸದಾಕಾಲ ಹೇಳುತ್ತಿದ್ದರು. ಆಶ್ರಮದಲ್ಲಿ ಈಗಲೂ ಕಾಗೆಗೊಂದು, ಹಸುವಿಗೊಂದು, ಮಂಗನಿಗೊಂದು ಸಮಾಧಿ ಇದೆ. ಇದು ಇವರ ಪ್ರಾಣಿ ಪ್ರೇಮವನ್ನು ಹೇಳುತ್ತದೆ.
ಇವರ ವಸ್ತುವಾಗಿ ಕೇವಲ ಒಂದು ಹುಲಿ ಚರ್ಮ, ನೀರಿಗಾಗಿ ಒಂದು ಚೆಂಬು ಮತ್ತು ಆಸರೆಗಾಗಿ ಒಂದು ಊರುಗೋಲು ಬಿಟ್ಟರೆ ಬೇರೇನೂ ಇರಲಿಲ್ಲ. ಸರಳ , ಸಾತ್ವಿಕ,ಸಜ್ಜನರಾದ ಇವರು ಶಾಂತ, ಸಹಜ ಸ್ತಿತಿಯಲ್ಲಿ ಯಾವಾಗಲು ಇರುತ್ತಿದ್ದರು.
1950 ರಲ್ಲಿ ಇವರ ಮೊನಕೈಯಲ್ಲಿ ಆದ ಗಂಟುಗಳು ಇವರನ್ನು ಭಾದಿಸತೊಡಗಿತು. ದೇಶದ ಪ್ರಸಿದ್ದ ವೈದ್ಯರು ಇವರ ಮೊಣಕೈಯನ್ನು ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು. ಆದರು ಯಾವುದೇ ಗುಣ ಕಾಣಲಿಲ್ಲ. ಉಲ್ಬನಗೊಳ್ಳುತ್ತ ಹೋಯಿತು. ಮಹರ್ಷಿಗಳು ದಿನದಿಂದ ದಿನಕ್ಕೆ ಕ್ರುಶವಾಗುತ್ತ ಸಾಗಿದರು. ಯಾತನೆ ಜಾಸ್ತಿಯಾಯಿತು ಆದರೂ ಇವರ ಮುಖ ಮಾತ್ರ ಶಾಂತವಾಗೆ ಇರುತ್ತಿತ್ತು. ಯಾವ ಯಾತನೆಯು ಇಲ್ಲವೇನೋ ಎಂಬಂತೆ ಶಾಂತವಾಗಿ ಮಲಗಿರುತ್ತಿದ್ದರು. ಭಕ್ತರು ಇವರ ದರ್ಶನಕ್ಕೆ ಮುಗಿಬೀಳಲು ಪ್ರಾರಂಭ ಮಾಡಿದರು. ಅಲೋಪತಿ, ಆಯುರ್ವೇದ ಮತ್ತು homeaopathi ಔಷಧಿಗಳು ಕೆಲಸ ಮಾಡಲಿಲ್ಲ. 14 ಏಪ್ರಿಲ್ 1950 ರಂದು ಭಗವಾನ್ ರಮಣರು ತಮ್ಮ ದೇಹವನ್ನು ತ್ಯಾಗ ಮಾಡಿದರು. ಒಂದು ದಿವ್ಯ ಚೇತನ ನಮ್ಮ ಕಣ್ಣಿಂದ ಮರೆಯಾಯಿತು. ಆದರೆ,ರಮಣರ ಸಂದೇಶ ಎಂದೆಂದಿಗೂ ಶಾಶ್ವತ. ಅವರ ಕೃಪೆ ಇಂದಿಗೂ ಲಕ್ಷಾಂತರ ಭಕ್ತಸಮೂಹದ ಮೇಲೆ ಸದಾ ಕಾಲ ನಿತ್ಯ ನೂತನವಾಗಿದೆ. ಇಂತಹ ಆತ್ಮಜ್ನಾನಿಗಳು ಸಾಯುವುದಿಲ್ಲ, ಸದಾಕಾಲ ನಮ್ಮ ಹೃದಯ ಗುಹೆಯಲ್ಲೇ ನೆಲಸಿರುತ್ತಾರೆ.
-ಹೆಚ್.ಏನ್. ಪ್ರಕಾಶ್, ಹಾಸನ