Pages

Friday, June 10, 2011

ವೇದೋಕ್ತ ಜೀವನ ಪಥ ಲೇಖನ ಮತ್ತು ನಾವು

ವೇದಸುಧೆಯು ಯಾವ ಉದ್ಧೇಶದಿಂದ ಆರಂಭವಾಯ್ತೋ ಅದಕ್ಕೆ ಪೂರ್ಣ ನ್ಯಾಯವನ್ನು ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರು ಕೊಡುತ್ತಿದ್ದಾರೆ. ವೇದೋಕ್ತ ಜೀವನ ಪಥ ಗ್ರಂಥವನ್ನು ದಾರಾವಾಹಿಯಾಗಿ ಶ್ರೀ ನಾಗರಾಜರು ಬರೆಯುತ್ತಿದ್ದಾರೆ. ಆದರೆ ನನಗೊಂದು ಸಂಶಯ ಕಾಡುತ್ತಿದೆ. ವೇದಸುಧೆಯ ಓದುಗರು ಇಂತಹ ಮಹತ್ತರವಾದ ಬರವಣಿಗೆಯನ್ನು ಓದುತ್ತಿದ್ದಾರೆಯೇ? ಎಂದು ಸಂಶಯಿಸಲು ಕಾರಣ ಇಂತಹ ಅದ್ಭುತವಾದ ಲೇಖನಕ್ಕೆ ಓದುಗರು ಪ್ರತಿಕ್ರಿಯಿಸುವುದಿಲ್ಲ. ನನ್ನ ಕಳಕಳಿಯ ಮನವಿ ಇಷ್ಟೆ. " ಚೆನ್ನಾಗಿತ್ತು" "ಉಪಯೋಗವಾಯ್ತು" ಎಂಬ ಒಂದು ಪದದ ಪ್ರತಿಕ್ರಿಯೆ ವ್ಯಕ್ತವಾದರೂ ಬರೆದವರಿಗೆ ಅದನ್ನು ಮುಂದುವರೆಸಲು ಉತ್ಸಾಹಬರುತ್ತದೆ. ಇದು ಮಾನವ ಸಹಜ ಸ್ವಭಾವ. ಅಲ್ಲದೆ ಯಾರೂ ಓದದಿದ್ದರೆ ಬರೆಯುವ ಶ್ರಮವನ್ನಾದರೂ ತೆಗೆದುಕೊಳ್ಳಬೇಕೇಕೆ?
ವೇದೋಕ್ತ ಜೀವನ ಪಥದ ಇಂದಿನ ಭಾಗವಂತೂ ಅದ್ಭುತವಾಗಿದೆ.ಅದನ್ನು ಓದಲೇ ಬೇಕು. ಅದು ಜವನದಲ್ಲಿ ಪ್ರಗತಿಹೊಂದಬೇಕೆಂದು ಆಶಿಸುವವನಿಗೆ ಉಪಯೋಗವಾಗಬಲ್ಲ ಜೀವನ ಸೂತ್ರಗಳು. ಅದನ್ನು ಓದಿದ ನಾನು ನನ್ ಅನಿಸಿಕೆಯನ್ನು ಅಲ್ಲಿ ಬರೆದರೆ ಉದ್ದವಾಗುತ್ತದೆಂದು ಪ್ರತ್ಯೇಕ ಲೇಖನವನ್ನೇ ಮಾಡಿರುವೆ. ನಾಗರಾಜರು ಅನ್ಯಥಾಭಾವಿಸಬಾರದಾಗಿ ಕೋರುವೆ.
---------------------------------------------
ಮಂತ್ರ:
ಏತೇ ಅಸೃಗ್ರಮಾಶವೋssತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್. ೯.೬೩.೪.) ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ |ಅಪಘ್ನಂತೋ ಅರಾವ್ಣಃ || (ಋಕ್. ೯.೬೩.೫.) ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ |ಇಂದ್ರಂ ಗಚ್ಛಂತ ಇಂದವಃ || (ಋಕ್. ೯.೬೩.೬.)

ಅರ್ಥ:
೧]ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, ಕುಟಿಲ ಭಾವನೆಗಳನ್ನು ದಾಟಿ, ಮುಂದೆ ಸಾಗುತ್ತಾರೆ. ೨]ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, ತಮ್ಮ ಆತ್ಮವಿಶ್ವಾಸ ಮಾಡಿಕೊಳ್ಳುತ್ತಾ, ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ. ೩]ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.

ನನ್ನ ಅನಿಸಿಕೆ:
ಎಂತಹ ಪರಮ ಸತ್ಯವನ್ನು ವೇದಗಳು ಹೇಳುತ್ತಾ ಇವೆ ನೋಡಿ. ಜೀವನದಲ್ಲಿ ಪ್ರಗತಿ ಹೊಂದುವವರು ಯಾರು? ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ.ಯಾರು ಜೀವನದಲ್ಲಿ ಸೋಮಾರಿಗಳಲ್ಲ ಅವರು, ಜೀವನದಲ್ಲಿ ಪ್ರಮಾದವನ್ನುಮಾಡದವರು,ಆಚಾರವಿಚರಗಳು ಶುಬ್ರವಾಗಿರುವವರು, ಶಾಂತಸ್ವಭಾವದವರು,ಇವರು ಧರ್ಮದ ಪ್ರವಾಹದಲ್ಲಿ ನಡೆಯುತ್ತಾಎಲ್ಲಾ ಕುಟಿಲಭಾವನೆಗಳನ್ನು ದಾಟಿ ಮುಂದೆ ಹೋಗುತ್ತಾರೆ. ಇಂತವರು ಸಾಮಾನ್ಯವಾಗಿ ಕೆಲಸದಲ್ಲಿ ವೇಗಶಾಲಿಗಳಾಗಿರುತ್ತಾರೆ. ಆತ್ಮವಿಶ್ವಾಸದಿಂದ ಪ್ರಗತಿಯಲ್ಲಿ ಸಾಗುತ್ತಾ ಎಲ್ಲಾ ಸಂಕುಚಿತ ಮನೋಭಾವನೆಗಳನ್ನು ದೂರಮಾಡುತ್ತಾ ಇಡೀ ಮಾನವಕುಲವನ್ನು ಪ್ರೀತಿಸುತ್ತಾ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡಬೇಕೆಂಬ ಧ್ಯೇಯದಲ್ಲಿ ಮುಂದೆ ಸಾಗುತ್ತಾರೆ. ತಮ್ಮನ್ನು ತಾವು ಭಗವಂತನ ಮಕ್ಕಳೆಂದು ತಿಳಿದ ಇವರು ತಮ್ಮ ಚಾರಿತ್ರ್ಯವನ್ನು ನಿರ್ಮಲವಾಗಿಟ್ಟುಕೊಂಡು ನೀರಸವಾಗಿರುವ ಜೀವನದಲ್ಲಿ ಉಲ್ಲಾಸಗೊಳಿಸುತ್ತಾ, ಸರ್ವಶಕ್ತಿವಂತನಾದ ಪರಮಾತ್ಮನೆಡೆಗೆ ಸಾಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ನಿರಂತರವಾಗಿ ಮುಂದೆಸಾಗುತ್ತಾ ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆಯುವರು. ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಪ್ರಭೂಪಾಸನಾಚರಣದಿಂದ. ಜೀವನದಲ್ಲಿ ಉದ್ಧಾರವಾಗಬೇಕೆಂಬುವವನಿಗೆ ಇದಕ್ಕಿಂತ ಸೂತ್ರಗಳು ಬೇಕೆ?