Pages

Monday, August 20, 2012

ವೇದಪಾಠ-1



ವೇದಸುಧೆಗೆ ನಿನ್ನೆ ಒಂದು ವಿಶೇಷ ದಿನವೇ ಹೌದು.ಹಲವಾರು ದಿನಗಳಿಂದ ಬಯಸುತ್ತಿದ್ದ ವೇದಪಾಠ ಸಾಪ್ತಾಹಿಕ ತರಗತಿಯು   ನಿನ್ನೆ ಉದ್ಘಾಟನೆಯಾಗಿ ಇಂದು ಮೊದಲಪಾಠ ಶುರುವಾಯ್ತು. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಬಹಳ ವಿಶಿಷ್ಟವಾಗಿ ಆರಂಭಿಸಿದ ವೇದಪಾಠವು ಹಲವರಿಗೆ ಅಚ್ಚರಿಯುಂಟುಮಾಡಿತು. ವೇದ ಪಾಠ ಎಂದರೆ ಹೀಗೂ ನಡೆಯುತ್ತದೆಯೇ! ಎಂಬ ಆಶ್ಚರ್ಯ ಕೆಲವರಿಗೆ. ಕೆಲವರು ಕೇಳಿದರು" ಪೂಜೆಯ ಮಂತ್ರಗಳನ್ನು ಯಾವಾಗ ಹೇಳಿಕೊಡ್ತೀರಿ? ಬಹುಪಾಲು ಜನರಿಗೆ ವಿಶ್ವನಾಥಶರ್ಮರು ಪೀಠಿಕೆಯ ರೂಪದಲ್ಲಿ ಮಾಡಿದ ಉಪನ್ಯಾಸದಿಂದ "ಇಲ್ಲಿ ನಡೆಯುವ ವೇದ ಪಾಠವೆಂದರೆ ಕೇವಲ ಮಂತ್ರ ಕಲಿಯುವುದಲ್ಲ" ಎಂಬ ಅರಿವುಂಟಾಗಿದೆ.ವೇದಸುಧೆಯ ಅಭಿಮಾನಿಗಳು ಬಯಸುವುದಾದರೆ ಶರ್ಮರು ಹೇಳಿಕೊಡುತ್ತಿರುವ ಪಾಠವನ್ನು  ಪ್ರತೀ ವಾರ ಇಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಫೀಡ್ ಬ್ಯಾಕ್ ಇದ್ದರೆ ಉತ್ತಮ

ಕೊಂಡಿಯಲ್ಲಿರುವ ಆಡಿಯೋ ಕ್ಲಿಪ್ ನಿಮಗೆ ಮೇಲ್ ಮಾಡಬೇಕೇ? ನನಗೊಂದು  ಮನವಿ ಮೇಲ್ ಕಳಿಸಿ.ಕೂಡಲೇ  ಮೇಲ್ ಮಾಡುವೆ.
.

ಪಾಠ-1  ಆಡಿಯೋ ಕ್ಲಿಪ್  ಇಲ್ಲಿ ಕೇಳಿ



ಹಾಸನದಲ್ಲಿ ಎಲ್ಲರಿಗಾಗಿ ವೇದಪಾಠದ ಆರಂಭ










ಹಾಸನ ಹೊಯ್ಸಳ ನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿನ ‘ಈಶಾವಾಸ್ಯಂ’ ಕಾರ್ಯಾಲಯದಲ್ಲಿ ‘ವೇದ ಭಾರತೀ ಸಂಪ್ರತಿಷ್ಠಾನಂ’ ಹಾಸನ ಶಾಖೆ ವತಿಯಿಂದ ಭಾನುವಾರದಿಂದ ಆರಂಭವಾದ ‘ಎಲ್ಲರಿಗಾಗಿ ವೇದ’ ಎಂಬ ಸಾಪ್ತಾಹಿಕ ವೇದ ಪಾಠ ತರಗತಿಗಳನ್ನು ಶ್ರೀ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ಎಸ್. ಕೃಷ್ಣಸ್ವಾಮಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಗಿನ್ನೀಸ್ ದಾಖಲೆಯ ಕು. ಸ್ವಾತಿ ಭಾರದ್ವಾಜ್ ಅವರಿಂದ ಆಕರ್ಷಕ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.

‘ಮನುಜ ಮತಕ್ಕಾಗಿಯೇ ವೇದ ಪಥವಿದೆ’: ಶರ್ಮಾಜಿ
ಹಾಸನ, ಆ. ೧೯: ವೇದಗಳು ಯಾವುದೇ ಜಾತಿ, ಮತ, ಲಿಂಗ ಇತ್ಯಾದಿಗಳಿಗೆ ಸೀಮಿತವಾದುವಲ್ಲ; ವೇದಗಳು ಈ ಜಗತ್ತಿನ ಎಲ್ಲರಿಗಾಗಿಯೂ ಇವೆ; ಮನುಜ ಮತಕ್ಕಾಗಿಯೇ ವೇದ ಪಥವಿದೆ; ಸರ್ವರೂ ಇವುಗಳನ್ನು ಅರ್ಥ ಸಹಿತ ಅಧ್ಯಯನ ಮಾಡಿ ಆಚರಣೆಗೆ ತಂದಲ್ಲಿ ನಿಜಕ್ಕೂ ಮನುಕುಲ ಉದ್ಧಾರವಾಗುತ್ತದೆ ಎಂದು ಬೇಲೂರಿನ ಸಂಸ್ಕೃತ ಪಾಠಶಾಲೆ ಆಚಾರ್ಯರಾದ ವೇದಾಧ್ಯಾಯಿ ಶ್ರೀ ವಿಶ್ವನಾಥ ಶರ್ಮ ತಿಳಿಹೇಳಿದರು.
ನಗರದ ಹೊಯ್ಸಳ ನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿನ ‘ಈಶಾವಾಸ್ಯಂ’ ಕಾರ್ಯಾಲಯದಲ್ಲಿ ‘ವೇದ ಭಾರತೀ ಸಂಪ್ರತಿಷ್ಠಾನಂ’ ಹಾಸನ ಶಾಖೆ ವತಿಯಿಂದ ಭಾನುವಾರದಿಂದ ಆರಂಭವಾದ ‘ಎಲ್ಲರಿಗಾಗಿ ವೇದ’ ಎಂಬ ಸಾಪ್ತಾಹಿಕ ವೇದ ಪಾಠ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ವೇದಗಳನ್ನು ಅರಿಯದವರು, ಮತ್ತು ಅವುಗಳ ಕುರಿತು ಪ್ರಾಥಮಿಕ ಜ್ಞಾನ ಸಹ ಇಲ್ಲದವರು ಪೂರ್ವಾಗ್ರಹ ಪೀಡಿತರಾಗಿ ವಿನಾಕಾರಣ ಅವುಗಳನ್ನು ಟೀಕಿಸುವುದು, ಜರೆಯುವುದು, ಅವುಗಳ ವಿರುದ್ಧ ದ್ವೇಷ ಸಾಧಿಸುವುದು ಮಾಡುತ್ತಾರೆ. ಇಂತಹವರ ವರ್ತನೆಗಳಿಂದೇನೂ ವೇದದ ಹಿರಿಮೆ ಅಥವಾ ಘನತೆ ಖಂಡಿತಾ ಕುಗ್ಗುವುದಿಲ್ಲ. ಆದ್ದರಿಂದ ಇಲ್ಲಸಲ್ಲದ ಪೂರ್ವಾಗ್ರಹ ಪೀಡಿತ ಭಾವನೆ ಇರುವವರು ಮೊದಲು ವೇದಗಳು ಎಂದರೇನು? ಅವುಗಳಲ್ಲಿ ಏನಿದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕು; ವೇದ ಎಂದರೆ ಜ್ಞಾನ ಎಂದು ಅರ್ಥ. ಮನುಷ್ಯನಾದವನು ಹೇಗೆ ತನ್ನ ಬದುಕು ಸಾಗಿಸಬೇಕು ಎಂಬುದನ್ನು ವೇದ ತಿಳಿಸಿಕೊಡುತ್ತದೆ. ಹೀಗಾಗಿ ವೇದ ಮಂತ್ರಗಳನ್ನು ಯಥಾವತ್ತು ಕಲಿಯಲೇಬೇಕು; ಪಠಿಸಲೇಬೇಕು ಎಂದೇನೂ ಇಲ್ಲ; ವೇದಗಳಲ್ಲಿನ ಜ್ಞಾನವನ್ನು ನಮ್ಮದಾಗಿಸಿಕೊಂಡರೂ ಸಾಕು; ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಶರ್ಮಾಜಿ ಕಿವಿಮಾತು ಹೇಳಿದರು.
ವೇದಗಳು ಅವುಗಳದೇ ಆದ ವೇದ ಭಾಷೆಯಲ್ಲಿವೆಯೇ ಹೊರತು ಸಂಸ್ಕೃತದಲ್ಲಿಲ್ಲ. ವೇದ ಭಾಷೆಯಿಂದ ಸಂಸ್ಕೃತ ಹುಟ್ಟಿಕೊಂಡಿದೆ. ಹೀಗಾಗಿ ವೇದದ ಶಬ್ದಗಳಿಗೆ ಅದರದೇ ಆದ ವೈಜ್ಞಾನಿಕ ಅರ್ಥಗಳಿವೆ. ಈ ಅರ್ಥಗಳನ್ನು ವಿವರಿಸಲಿಕ್ಕಾಗಿಯೇ ನಿರುಕ್ತ ಎಂಬ ವೇದಾಂಗವಿದೆ. ಜಾತಿ, ವರ್ಣ ಇತ್ಯಾದಿ ಶಬ್ದಗಳಿಗೆ ವೇದಗಳು ನೀಡುವ ಅರ್ಥಗಳೇ ಬೇರೆಯಾಗಿವೆ. ಜೀವವೊಂದು ಹುಟ್ಟುವ ವಿಧಾನವೇ ‘ಜಾತಿ’ ಎನಿಸಿಕೊಳ್ಳುತ್ತದೆ. ಮನುಷ್ಯನಾಗಿ ಹುಟ್ಟಿದರೆ ಮನುಷ್ಯ ಜಾತಿ; ಕುರಿ; ಕೋಳಿಯಾಗಿ ಹುಟ್ಟಿದರೆ ಅವುಗಳದ್ದೇ ಜಾತಿ ಅಷ್ಟೇ ಹೊರತು ಈಗ ನಾವು ವಿಂಗಡಿಸಿರುವ ಬ್ರಾಹ್ಮಣ, ಲಿಂಗಾಯಿತ, ಕುರುಬ ಇತ್ಯಾದಿಗಳಿಗೆ ಅರ್ಥವಿಲ್ಲ. ಅದೇ ರೀತಿ ವರ್ಣ ಎಂದರೆ ‘ಆರಿಸಿಕೊಳ್ಳುವುದು’ ಎಂಬ ಅರ್ಥವಿದೆಯೇ ಹೊರತು; ಈಗ ನಾವು ಹೇಳುವ ಜಾತಿ ಆಧಾರಿತ ವರ್ಣಾಶ್ರಮ ವ್ಯಾಖ್ಯಾನಕ್ಕೆ ಅರ್ಥವಿಲ್ಲ ಎಂದು ಅವರು ವಿವರಿಸಿದರು. ನಮ್ಮ ವೇದಗಳಲ್ಲಿನ ಪ್ರತಿಯೊಂದು ಜ್ಞಾನವನ್ನು ಆಚರಣೆಗೆ ತರಲೂ ಸಹ ನಾವು ವಿದೇಶಿಯರನ್ನೇ ಒರೆಗಲ್ಲಾಗಿ ಇಟ್ಟುಕೊಂಡಿರುವುದು ಹಾಗೂ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ತಂದುಕೊಂಡಿರುವುದ ದೊಡ್ಡ ದುರಂತ ಹಾಗೂ ವಿಪರ‍್ಯಾಸ ಎಂದು ಶರ್ಮಾಜಿ ನಿದರ್ಶನಗಳ ಸಹಿತ ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ಎಸ್. ಕೃಷ್ಣಸ್ವಾಮಿ ಮಾತನಾಡಿ, ಅರೆಬರೆ ಜ್ಞಾನ ಹೊಂದಿದ ಅಜ್ಞಾನಿಗಳು ಹೇಳುವಂತೆ ವೇದಗಳು ಯಾರ ಸ್ವತ್ತೂ ಅಲ್ಲ; ಅಥವಾ ಅವು ಒಂದು ಪಂಗಡಕ್ಕೆ ಮಾತ್ರ ಸೀಮಿತವೂ ಅಲ್ಲ; ಅದನ್ನು ಯಾರು ಬೇಕಾದರೂ ಕಲಿಯಬಹುದು. ಇವುಗಳನ್ನು ಬರೆದವರು ಯಾರು ಮತ್ತು ಯಾವ ಕಾಲದಲ್ಲಿ ಹುಟ್ಟಿಕೊಂಡವು ಎಂಬ ನಿಖರ ಮಾಹಿತಿ ಇಲ್ಲವಾದ್ದರಿಂದ ವೇದಗಳನ್ನು ‘ಅಪೌರುಷೇಯ’ ಎಂದಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಗಿನ್ನೀಸ್ ದಾಖಲೆಯ ಕು. ಸ್ವಾತಿ ಭಾರದ್ವಾಜ್ ಅವರಿಂದ ಆಕರ್ಷಕ ಭರತ ನಾಟ್ಯ ಕಾರ್ಯಕ್ರಮ ನಡೆಯಿತು. ‘ವೇದ ಸುಧೆ’ ಬ್ಲಾಗ್ ಗೌರವ ಸಂಪಾದಕ ಕವಿ ನಾಗರಾಜ್ ಅವರು ಸ್ವಾಗತಿಸಿದರಲ್ಲದೆ, ಕಲಾವಿದೆ ಕು. ಸ್ವಾತಿ ಭಾರದ್ವಾಜ್ ಪರಿಚಯ ಮಾಡಿಕೊಟ್ಟರು. ಬ್ಲಾಗ್ ಸಂಪಾದಕರಾದ ಹರಿಹರಪುರ ಶ್ರೀಧರ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕು. ಸ್ವಾತಿ ತಂದೆ ಪ್ರಕಾಶ್ ಹಾಗೂ ತಾಯಿ ಅನಿತಾ ಪ್ರಕಾಶ್, ಚ.ರಾ. ಪಟ್ಟಣದ ನಾಟ್ಯ ಭೈರವಿ ಟ್ರಸ್ಟ್ ಅಧ್ಯಕ್ಷ ನಾಗರಾಜ್, ಚೈತನ್ಯ ಶಾಲೆ ಮುಖ್ಯಸ್ಥ ರಮೇಶ್, ವಾಸವಿ ಶಾಲೆಯ ಜಿ.ಎಸ್. ಮಂಜುನಾಥ್ ಮತ್ತಿತರರು ಹಾಜರಿದ್ದರು.






ಹಾಸನ  ದಲ್ಲಿ  ಇದೇ ಸಪ್ಟೆಂಬರ್ 30 ರಂದು ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಪಾಲ್ಗೊಳ್ಳಲಿದ್ದು  ಪ್ರಶ್ನೆಗಳನ್ನು ಕಲಿಸುವವರು ಮತ್ತು ವೇದ ಪಾಠಗಳ ಕುರಿತು ಆಸಕ್ತಿ ಇರುವವರು ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜ್ 9448501806   ಅಥವಾ ಸಂಪಾದಕರಾದ ಶ್ರೀ ಹರಿಹರಪುರಶ್ರೀಧರ್  9663572406 ಅವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ದೃಶ್ಯಾವಳಿಗಾಗಿ ಕೊಂಡಿ ಇಲ್ಲಿದೆ.


ವರದಿ:ಹೆಚ್.ಎಸ್. ಪ್ರಭಾಕರ್,ಹಿರಿಯ ಪತ್ರಕರ್ತರು,ಹಾಸನ


ಯೋಚಿಸಲೊ೦ದಿಷ್ಟು... ೫೬



೧. ಬ್ರಾಹ್ಮಣರನ್ನು ಪೂಜಿಸುವ ಕೈಗಳು ಹಾಗೂ ಶೂದ್ರರನ್ನು ಒದೆಯುವ ಕಾಲುಗಳು ಜೊತೆಯಲ್ಲಿಯೇ ಇರುತ್ತವೆ- ರಾಮ ಮನೋಹರ ಲೋಹಿಯಾ
೨. ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತು೦ಬಾ ನಾಜೂಕಾದದ್ದು! ಅದು ಬೇಗ ಬಳಲುತ್ತದೆ ಮತ್ತು ಮರೆಯುತ್ತದೆ- ಡಿ.ವಿ.ಜಿ.
೩. ಸ೦ತೆಯಲ್ಲಿದ್ದು ಏಕಾ೦ತದತ್ತ ಮುಖ ಮಾಡುವುದು ಸಜ್ಜನರ ಲಕ್ಷಣ! – ಗಳಗನಾಥರು
೪.  ಹಣದಿ೦ದ ಹಸಿವು ಹೆಚ್ಚುತ್ತದೆಯೇ ವಿನ: ತೃಪ್ತಿ ಸಿಗುವುದಿಲ್ಲ!
೫. ಶ್ರದ್ಧೆಯ ಅರ್ಥ ಮೂಢ ನ೦ಬಿಕೆಯಲ್ಲ!- ಸ್ವಾಮಿ ವಿವೇಕಾನ೦ದರು
೬. ಮನುಷ್ಯ ಒತ್ತಡದಲ್ಲಿದ್ದಾಗ ಮಾಡುವ ಆಯ್ಕೆಯಿ೦ದ ಆತನ ವ್ಯಕ್ತಿತ್ವವನ್ನು ಅಳೆಯುವುದು ಸಾಧ್ಯ.
೭. ಧರ್ಮ ವ್ಯಾಪಾರವಲ್ಲ. ಅದೊ೦ದು ಮನೋಧರ್ಮ.ಅದರಲ್ಲಿ ಬಲವಾದ ನ೦ಬಿಕೆಯಿದ್ದಾಗ ಪ್ರಯೋಜನ ಆಗಬಹುದು
೮. ಪರಿಸ್ಠಿತಿಗಳನ್ನು ಹಾಗೆಯೇ ಬಿಟ್ಟರೆ ಅದು ಎ೦ದಿಗೂ ಸರಿ ಹೊ೦ದುವುದಿಲ್ಲ!
೯. ಘಟಿಸಿ ಹೋದ ತಪ್ಪುಗಳಿಗೂ- ಕಳೆದು ಹೋದ ಕಾಲಕ್ಕೂ ಚಿ೦ತಿಸದೆ, ಮು೦ಬರುವ ಕಾಲಕ್ಕೆ ತಪ್ಪುಗಳಾಗದ೦ತೆ ಎಚ್ಚರ ವಹಿಸುವುದು ಒಳಿತು. 
೧೦. ಬದುಕೇ ಹಾಗೆ.. ಒಮ್ಮೊಮ್ಮೆ ಒ೦ದಾಗಲು ಮಗದೊಮ್ಮೆ ಬೇರ್ಪಡಲು ನಾವು ದೀರ್ಘಕಾಲ ಸವೆಸಲೇಬೇಕು!
೧೧. ನಮ್ಮ ಬದುಕು ಸದಾ ಒ೦ದು ಸ್ಪರ್ಧೆಯಿದ್ದ೦ತೆ! ಒಮ್ಮೊಮ್ಮೆ ಬೇರೆಯವರೊ೦ದಿಗಾದರೆ .. ಹೆಚ್ಚು ಬಾರಿ ನಮ್ಮೊ೦ದಿಗೆ ನಾವೇ ಸ್ಪರ್ಧೆಯಲ್ಲಿರುತ್ತೇವೆ!
೧೨. ಈ ಜಗತ್ತಿನ ಎಲ್ಲೆಡೆಯಲ್ಲಿಯೂ ಉತ್ತರ- ಪ್ರತ್ಯುತ್ತರ, ನಡೆ-ಪುನರ್ನಡೆ ಹಾಗೂ ಧ್ವನಿ-ಪ್ರತಿಧ್ವನಿಗಳನ್ನು ಕಾಣಬಹುದು!
೧೩. ಮರೆತು ಹೋಗುವ೦ಥಹ ಕಾರ್ಯಗಳನ್ನು ಮಾಡುವವರೇ ಹೆಚ್ಚು! ನೆನಪಿಟ್ಟುಕೊಳ್ಳುವ೦ಥಹ ಕಾರ್ಯಗಳನ್ನು ಮಾಡುವವರು ಮಹಾತ್ಮರು.
೧೪. ಹೆಚ್ಚಿನ ಸ೦ದರ್ಭಗಳಲ್ಲಿನ ನಮ್ಮ ನಡತೆಗಳು ಬೇರೆಯವರಿ೦ದ ಪ್ರಭಾವಿಸಲ್ಪಟ್ಟಿರುತ್ತವೆ ಅಥವಾ ಹೆಚ್ಚಿನ ಸನ್ನಿವೇಶಗಳಲ್ಲಿನ ನಮ್ಮ ನಡತೆಗಳು ಬೇರೆಯವರ ಅನುಕರಣೆಯಾಗಿರುತ್ತವೆ!
೧೫. ಒಮ್ಮೊಮ್ಮೆ ನಮ್ಮ ದಿನದ ಆರ೦ಭವನ್ನು ಯಾವುದೇ ನಿರೀಕ್ಷೆಗಳಿ೦ದ ಆರ೦ಭಿಸದೇ ಕೇವಲ ಬ೦ದದ್ದನ್ನೆಲ್ಲಾ ಸ್ವೀಕರಿಸುವ ಹಾಗೂ ಸ್ವೀಕರಿಸಿದವುಗಳನ್ನು ಒಪ್ಪಿಕೊಳ್ಳುವ೦ತೆ ಮನಸ್ಸನ್ನು ಹುರುಪುಗೊಳಿಸಿಕೊಳ್ಳಬೇಕು!- ಆಸುಮನ