Pages

Wednesday, January 12, 2011

" ಅದಕ್ಕಿನ್ನೂ ಕಾಲವಿದೆ" :

"ವೇದಸುಧೆ" ಎಂಬ ನನ್ನ ಬ್ಲಾಗ್ ಹೆಸರು  ಕೇಳಿದಾಗ [ಕ್ಷಮೆ ಇರಲಿ, ಇದು ವೇದಸುಧೆಬಳಗದ ಬ್ಲಾಗ್] ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ.
* ಈಗತಾನೇ ಬಿ.ಇ.ಮುಗಿಸಿ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುವ ನನ್ನ ಮಗನಿಗೆ ಹೇಳಿದೆ" ನನ್ನ ಬ್ಲಾಗ್ "ವೇದಸುಧೆ ಯನ್ನು ನೋಡು." ಅದರ ಬಗೆಗೆ ಪೂರ್ಣ ವಿಚಾರ ತಿಳಿಯಲು ವ್ಯವಧಾನವಿಲ್ಲದ ಅವನು ಹೇಳಿದ " ಅದಕ್ಕಿನ್ನೂ ಕಾಲವಿದೆ" " ನಾನೂ ನಿನ್ನ ವಯಸ್ಸಿಗೆ ಬಂದಾಗ ಅದೆಲ್ಲಾ  ಶುರುಮಾಡುವೆ
* ವೇದಸುಧೆ ಹೆಸರು ಕೇಳಿದೊಡನೆ ಪುರೋಹಿತರೊಬ್ಬರು " ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
* ಸಾಮಾನ್ಯ ಗೃಹಸ್ತರೊಬ್ಬರು ಯಾವುದೋ ಪೂಜಾ ವಿಧಾನದ ಬಗ್ಗೆ ತಮ್ಮ ಸಂಶಯ ಕೇಳಿದರು
* ಆಸ್ತಿಕರೊಬ್ಬರು ಯಜ್ಞ ಯಾಗಾದಿಗಳ ಫೋಟೋಗಳನ್ನು ಕಳುಹಿಸಿಕೊಟ್ಟರು
* ನಮ್ಮ ಮಕ್ಕಳಿಗೆ ಪುರಾಣಪುಣ್ಯಕಥೆಗಳ ಬಗ್ಗೆ ತಿಳಿಸಬೇಕೆಂದವರು ಕೆಲವರು
* ನಮ್ಮ ಯುವ ಪೀಳಿಗೆಗೆ ಹಬ್ಬ ಹರಿದಿನಗಳ ಬಗೆಗೆ  ವೇದಸುಧೆಯಲ್ಲಿ ಪರಿಚಯ ಮಾಡಿಸಬೇಕೆಂದವರು ಕೆಲವರು
* ನೋಡಿ ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ- ಅದನ್ನು ಉಳಿಸುವ ಕೆಲಸವಾಗಬೇಕೆಂದವರು ಒಬ್ಬ ಹಿರಿಯರು
         ವೇದವೆಂಬ ಎರಡಕ್ಷರವನ್ನು ಕೇಳಿದಾಗ ಹಲವರಿಂದ ಬಂದ ಹಲವು ಅಭಿಪ್ರಾಯಗಳಿವು. ಇವು ಅನೇಕರ ಅಭಿಪ್ರಾಯಗಳಿರಬಹುದು.ಒಂದೊಂದನ್ನೇ ವಿಮರ್ಶಿಸುತ್ತಾ ವಿಚಾರ ಮಾಡೋಣ.
" ಅದಕ್ಕಿನ್ನೂ ಕಾಲವಿದೆ" :
    ಒಂದು ಅತ್ಯಂತ ಬಡತನದ ಮನೆಯಲ್ಲಿ ಹುಟ್ಟಿದ್ದರಿಂದ ನನಗೆ  ಜೀವನಾನುಭವ ಸಾಕಷ್ಟು ಆಗಿದೆಯಾದ್ದರಿಂದ "   ನಿಜ ಮನುಷ್ಯನನ್ನು ಮಾಡುವ ನಿಜವಾದ ವೇದಾಧ್ಯಯನವು  ನನ್ನ ಬಾಲ್ಯದಿಂದಲೇ ಆಗಿದೆ ಎಂಬ ಸಮಾಧಾನ ನನಗಿದೆ" ನನ್ನ ಜೀವನದ ಪಾಠವು  ವೇದದಲ್ಲಿದೆ ಎಂಬುದು ಈಗೀಗ ಅರ್ಥವಾಗುತ್ತಿದೆ.ಆದ್ದರಿಂದ  ತುತ್ತು ಅನ್ನಕ್ಕೆ ಪರಿತಪಿಸುವ ಮನೆಯಲ್ಲಿ ನನ್ನ ಜನ್ಮಕ್ಕೆ ಕಾರಣನಾದ ಆ ಭಗವಂತ ಮತ್ತು ನನಗೆ ಬಡತನದ ಬದುಕು ಹೇಗಿರುತ್ತದೆಂದು ಅನುಭವ ನೀಡಿದ ನನ್ನ ಮಾತಪಿತೃಗಳೇ ನನಗೆ ನಿಜವಾದ ವೇದಾಧ್ಯಯನ ಮಾಡಿಸಿದ ಆಚಾರ್ಯರೆಂದು ತಿಳಿದು ಅವರನ್ನು ಸದಾಸ್ಮರಿಸುತ್ತೇನೆ.ಆದರೆ ನನ್ನ ಮಗ ಒಬ್ಬ ಸ್ಥಿತಿವಂತನ ಮನೆಯಲ್ಲಿ ಹುಟ್ಟಿದ[ಆಹೊತ್ತಿಗೆ ನನ್ನ ಬಡತನದ ಬೇಗೆ ಮಾಯವಾಗಿತ್ತು] ಅವನಿಗೆ ನನ್ನಂತೆ ಜೀವನಾನುಭವವೂ ಆಗಲಿಲ್ಲ. ವೇದಾಧ್ಯಯನವೂ ಆಗಲಿಲ್ಲ. ಅವನಿಗೆ ನಿಜವಾಗಿ ಸಮಯ ಜಾರುತ್ತಿದೆ. "ವೇದಸುಧೆಯಲ್ಲಿ ನೆಮ್ಮದಿಯ ಬದುಕಿಗಾಗಿ ವೇದ ಜ್ಞಾನದ ಬಗೆಗೆ ಸುಧಾಕರಶರ್ಮರು ಸಾಕಷ್ಟು ತಿಳುವಳಿಕೆ ನೀಡುತ್ತಿದ್ದಾರೆ. ಅವನಂತ ಯುವಕರಿಗೆ ಖಂಡಿತವಾಗಿಯೂ "ವೇದಸುಧೆಯು" ದಾರಿ ದೀಪವಾಗಬಲ್ಲದು. ಆದರೆ ಶರ್ಮರ ಉಪನ್ಯಾಸಗಳನ್ನಾದರೂ ನಿತ್ಯವೂ ಅರ್ಧಗಂಟೆಯಾದರೂ ಕೇಳಬೇಕು.
" ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
ವೇದದ ನಿಜವಾದ ಅರ್ಥವನ್ನು ತಿಳಿದಾಗ ವ್ರಥಕಥೆಗಳ ಮಾತೇ ಬರುವುದಿಲ್ಲ.
ಪೂಜಾ ವಿಧಾನ:
ನಿತ್ಯಬದುಕೇ ಒಂದು ಆರಾಧನೆ, ಒಂದು ಯಜ್ಞ.ಸಮಾಜಮುಖಿಯಾಗಿ ಬಾಳುವುದನ್ನು ವೇದವು ನಮಗೆ ಕಲಿಸಿಕೊಡುತ್ತದೆ, ನಾವೀಗ ಮಾಡುತ್ತಿರುವ ಪೂಜಾವಿಧಾನವೇ ಬದಲಾಗುತ್ತದೆ.
ಪುರಾಣಪುಣ್ಯಕಥೆಗಳ ಬಗ್ಗೆ :
ನನಗನಿಸುವಂತೆ  ಪೂರ್ವದಲ್ಲಿ ರಾಮಾಯಣ ಮಹಾಭಾರತದ ಯುದ್ಧ ಕಾಲದಲ್ಲಿ ವೇದ ಪ್ರಸಾರಕ್ಕೆ ಧಕ್ಕೆ ಬಂದಿದೆ[ ಇದನ್ನು ಬಲ್ಲವರು ಸರಿಯಾಗಿ ವಿವರಿಸ ಬೇಕು] ಆನಂತರ ಜನರು ಧರ್ಮಬ್ರಷ್ಠರಾಗುತ್ತಾರೆಂದು ಅರಿತ ಕೆಲವು ಋಷಿಗಳು[ಋಷಿ ಎಂಬ ಪದ ಉಚಿತವೋ ಅಲ್ಲವೋ ತಿಳಿಯದು] ಭೀತಿಯಿಂದ ಭಗವಂತನಲ್ಲಿ ನಂಬಿಕೆಬರುವಂತೆ ಸರಳವಾಗಿ ರಚಿಸಿರುವ ಕಥೆಗಳಿರಬಹುದು.ಯಾವುದೋ ಆಪತ್ಕಾಲಕ್ಕೆ ಮಾಡಿರುವ ಆ ಪ್ರಯತ್ನವು ತಲೆತಲಾಂತರಗಳಲ್ಲೂ ಮುಂದುವರೆದು ವೇದ-ಪುರಾಣಗಳೆಂಬ ಮಟ್ಟಿಗೆ ಬೆಳೆದದ್ದು ಸುಳ್ಳಲ್ಲ.  ವೇದವು ಆ ಸಂದರ್ಭದಲ್ಲಿ ನಾಶವಾಗಿಲ್ಲ. ಬದಲಿಗೆ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿ ಅದರ ಪರಿಣಾಮವಾಗಿ  ವೇದವನ್ನು ಬ್ರಾಹ್ಮಣರ ಹೊರತಾಗಿ ಅನ್ಯ ವರ್ಗದ ಜನರ ಕಿವಿಯ ಮೇಲೂ ಬೀಳಬಾರದೆಂಬ ಮಟ್ಟಿಗೆ ನಡೆದುಕೊಂಡದ್ದು ಕಥೆಯಲ್ಲ-ವಾಸ್ತವ.ಆದರೆ ಬ್ರಾಹ್ಮಣ ಪದದ ಅರ್ಥವೇ ಬೇರೆ. ಅದು ಒಂದು ಜಾತಿಯ ಹೆಸರಲ್ಲ. ಅದನ್ನು ವೇದಸುಧೆಯ ಶರ್ಮರ ಪುಟದಲ್ಲಿ ಆಡಿಯೋ ಕೇಳಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಪುರಾಣಪುಣ್ಯಕಥೆಗಳೆಂಬ ಕಟ್ಟು ಕಥೆಗಳ ಹಿಂದೆ ಬಿದ್ದು ನಿಜವಾದ ವೇದವನ್ನು ಮರೆತಿರುವುದು ಸರಿಯೇ? ಚಿಂತನೆ ಮಾಡಬೇಕು.
ಹಬ್ಬ ಹರಿದಿನಗಳ ಬಗೆಗೆ
 ಎಷ್ಟು ಓದಿದರೇನು? ನಾವಿನ್ನೂ ಕಂದಾಚಾರಗಳಿಗೇ ಕಟ್ಟು ಬಿದ್ದಿದ್ದೇವೆ.ಮೊನ್ನೆ ನನ್ನ ತಂಗಿಯ  ಮನೆಯಲ್ಲಿ "ಸುಬ್ರಹ್ಮಣ್ಯ ಷಷ್ಠಿ" ಯ ಆಚರಣೆ. .ಊಟದಲ್ಲಿ ಅಡಿಗೆಗೆ ಖಾರವನ್ನೇ ಹಾಕಿಲ್ಲ. ಬರಿ ಸಪ್ಪೆ. ಮಾಡಿದ್ದು ಹಲವು ಬಗೆ ಅಡಿಗೆ. ಅದರಲ್ಲಿ ಒಂದು  ಅವರೆ ಕಾಳಿನ ಸಾಂಬಾರ್ ಇರಬಹುದು.ಬರಿ ಸಪ್ಪೆ. ನಾನು ಉಪ್ಪಿನ ಕಾಯಿ ಹಾಕ್ತೀರಾ? ಎಂದೆ " ಇವತ್ತು ಹಾಕುವಂತಿಲ್ಲ" ಎಂದರು.
ನೋಡಿ ನಮ್ಮ ಆಚರಣೆಗಳ ಫಲ! ಬಹುಷ: ಆರೋಗ್ಯದ ಕಾರಣಕ್ಕೆ ಯಾವ ಕಾಲದಲ್ಲೋ ಯಾರೋ ಒಬ್ಬರು "ಸುಬ್ರಹ್ಮಣ್ಯ ಷಷ್ಠಿ"ಯ ಹೆಸರಲ್ಲಿ ಆರೋಗ್ಯಕರವಾದ ಅಡಿಗೆ ಹೇಳಿರಬಹುದು. ಆದರೆ ಕಡೆಯಲ್ಲಿ ಉಳಿದಿದ್ದೇನು? ಅಂದು ಅಡಿಗೆಗೆ  ಖಾರವನ್ನೇ ಹಾಕಬಾರದು. ಆದರೆ ಅವರೇ ಕಾಳಿನ ಸಾಂಬಾರ್ ಮಾಡಬಹುದೇ? ಚಿಂತಿಸಲೇ ಇಲ್ಲ.ನಮ್ಮ ಹಬ್ಬಗಳ ಆಚರಣೆ ಹೀಗಿದೆ. ಅರ್ಥ ಕಳೆದುಕೊಂಡಿದೆ ಎನಿಸುತ್ತಿಲ್ಲವೇ?
ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ
ಪ್ರಶ್ನೆ ಕೇಳಿದವರು ಬ್ರಾಹ್ಮಣ ಎಂದರೆ ಒಂದು ಜಾತಿಯನ್ನು ಉದ್ಧೇಶಿಸಿ ಕೇಳಿದ್ದರು. ಅದರೆ ಬ್ರಾಹ್ಮಣ ಪದಕ್ಕೆ ಅರ್ಥವೇ ಬೇರೆ. ಬ್ರಹ್ಮಜ್ಞಾನವನ್ನು ಪಡೆಯುವವ ಬ್ರಾಹ್ಮಣ.ಹೌದು ಬ್ರಹ್ಮಜ್ಞಾನದ ಪ್ರಸಾರವಾಗಬೇಕು.

ವೇದಸುಧೆಯಲ್ಲಿ ನಿಜವಾದ ವೇದಾರ್ಥಪ್ರಸಾರವಾಗಬೇಕು, ಬದುಕಿಗೆ ನಿಜವಾದ ಮಾರ್ಗದರ್ಶನ ವೇದಗಳಿಂದ ಸಿಗಬೇಕೆಂಬ ಮಹತ್ವಾಕಾಂಕ್ಷೆಯಿಂದ ವೇದಸುಧೆ ಆರಂಭವಾಗಿದೆ. ಆಪ್ರಯತ್ನದಲ್ಲಿ ಅವಿರತ ಶ್ರಮಿಸುತ್ತಿದೆ. ಇಂತಹ ವೇದಸುಧೆಯನ್ನು ಯಾವ ವಯಸ್ಸಿನಿಂದ  ಓದಬೇಕು? ಬಹಳ ಪ್ರೀತಿಂದ ಒಂದು ಮಾತು ಹೇಳಿ ಈ ಬರಹ ಮುಗಿಸುವೆ" ವೇದಸುಧೆಗೆ ತಾಂತ್ರಿಕ ಸಲಹೆ ನೀಡುತ್ತಿರುವ ನಮ್ಮ ಮಿತ್ರ ಪ್ರಸನ್ನ  ಪಿ.ಯು.ಸಿ ವಿದ್ಯಾರ್ಥಿ.
ಒಂದು ಮಾತು: ವೇದಸುಧೆಯಲ್ಲಿ ನಾನೊಬ್ಬ ಅಂಚೆ ಪೇದೆ. ನಿಮಗೆ ಏನೇ ಸಂಶಯವಿರಲಿ. ಕೇಳಿ ವೇದಾಧ್ಯಾಯೀ ಸುಧಾಕರಶರ್ಮರು ಉತ್ತರ ನೀಡುವರು. ಕಾರಣ ಅವರು ಮೂರು ದಶಕಗಳಿಂದ ವೇದಾಧ್ಯಯನ ಮಾಡುತ್ತಿದ್ದಾರೆ. ಅವರೇ ಸಮರ್ಥರು.