Pages

Monday, September 30, 2013

ನೀವೇನಂತೀರಾ?

ಮಿತ್ರ ಲೋಕೇಶ್ ಒಂದು ಮಾತನ್ನು ಬಹಳ ಸ್ಪಷ್ಟ ಶಬ್ಧಗಳಲ್ಲಿ ಹೇಳಿದರು " ಈ ವಿಗ್ರಹಾರಾಧನೆ ಹೊರಟು ಹೋಗಲಿ, ಹಲವು ಸಮಸ್ಯೆಗಳು ತಾನೇ ತಾನಾಗಿ ಹೋಗುತ್ತವೆ" ಅದರಲ್ಲಿ ಮುಖ್ಯವಾದದ್ದು ಪ್ರಾಣಿಹಿಂಸೆ ಕಡಿಮೆ ಯಾಗುತ್ತೆ. ನನ್ನ ಮನಸ್ಸಿನಲ್ಲಿ ಅದು  ಹೇಗಪ್ಪಾ, ಪ್ರಾಣಿ ಹಿಂಸೆಗೂ ವಿಗ್ರಹಾರಾಧನೆಗೂ ಸಂಬಂಧ ಏನು ಅಂತಾ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಅವರು ಮಾತು ಮುಂದುವರೆಸಿದರು. ಪುರದಮ್ಮಾ ಇಲ್ವಾ ಸಾರ್ ಅಂದ್ರು. ನಾನು ಹೇಳಿದೆ " ಹೂ". ಹಾಸನದಲ್ಲಿ ಅತಿ ಹೆಚ್ಚು ಪ್ರಾಣಿಬಲಿ ಎಲ್ಲಿ ಆಗುತ್ತೆ? ಅಂತಾ ಯಾರನ್ನಾದರೂ ಕೇಳಿ.ಅದು ಪುರದಮ್ಮ ದೇವಸ್ಥಾನದಲ್ಲಿ. 
ಹೌದಾ?
ಪ್ರತೀ  ಹಳ್ಳಿಯಲ್ಲೂ ಗ್ರಾಮದೇವತೆ ಇರ್ತಾಳಲ್ಲಾ? ಅವಳಿಗೂ ಆಡು-ಕುರಿ-ಕೋಳಿ ಬಲೀ ಕೊಡಲೇ ಬೇಕು.ಇತ್ತೀಚಿಗೆ ಕೋಣನ ಬಲಿ ನಿಶೇಧಿಸಿದ್ದರೂ ಪೋಲೀಸರ ಕಣ್ಣಿಗೆ ಮಣ್ಣೆರಚಿ ಕೋಣನ ಬಲಿಯೂ ಆಗುತ್ತೆ.ಲೋಕೇಶ್ ಮಾತು ಕೇಳುತ್ತಿದ್ದರೆ ನನಗೆ ತಲೆ ಗಿರ್ ಅಂತಿತ್ತು. ನನ್ನ ಕಣ್ಮುಂದೆ ದೊಡ್ದ ದೊಡ್ದ ದೇವಸ್ಥಾನಗಳು ಮಾತ್ರ ಬಂದಿದ್ದವು. ಅಷ್ಟಕ್ಕೇ ಅವರು ಸುಮ್ಮನಾಗಲಿಲ್ಲ. ದೊಡ್ದ ದೊಡ್ದ ದೇವಸ್ಥಾನದಲ್ಲಿ ಪ್ರಾಣಿಬಲಿ ಇಲ್ಲಾ ಅಲ್ವಾ? ಅಲ್ಲಿ ಮನುಶ್ಯನೇ ಪುರೋಹಿತರಿಗೆ ಬಲಿ ಪಶುವಾಗ್ತಾನೆ. ಅಲ್ಲಿನ ಸೇವೆಯ ಪಟ್ಟಿ ನೋಡಿ.    ಗೊತ್ತಾಗುತ್ತೆ. ಹತ್ತು ರೂಪಾಯಿ ಯಿಂದ ಆರಂಭಗೊಂಡು ಇಪ್ಪತ್ತೈದು ಲಕ್ಷ ರೂಪಾಯಿವರಗೂ ಸೇವೆ ಇರುತ್ತೆ. ಅದಕ್ಕಿಂತ ಹೆಚ್ಚಾಗಿ ಮಂಗಳಾರತಿ ತಟ್ಟೆ ಹಿಡಿದು ತಟ್ಟೆಕಾಸಿಗಾಗಿ ಚಾಚುತ್ತಾರಲ್ಲಾ ಆದೃಶ್ಯ ಬೇಸರ ತರುವುದಿಲ್ಲವೇ? ಸಾವಿರಾರು ಜನ ಭಕ್ತರು ಸಾಲು ಗಟ್ಟಿ   ಹೋಗುವಾಗ ಒಬ್ಬ ರಾಜಕಾರಣಿ ಬಂದ್ರೆ ದೇವರ ದರ್ಶನ ಹೇಗಾಗುತ್ತದೆ, ಅಂತಾ ನಿಮಗೆ ಗೊತ್ತಾ? 
ನನಗೆ ತಲೆ ಇನ್ನೂ ಹೆಚ್ಚು ಗಿರ್ ಅನ್ನಲು ಶುರುವಾಯ್ತು. ನಾವು ದೇವಾಲಯಗಳ ಒಂದು ಮುಖ ಮಾತ್ರ ನೋಡಿ ಇದನ್ನೆಲ್ಲಾ ಉದಾಸೀನ ಮಾಡ್ತೀವಲ್ಲಾ! ಇದೂ ಸತ್ಯವಲ್ವಾ?
ಅಬ್ಭಾ! ನಮ್ಮ ಜೀವನೋಪಾಯಕ್ಕೆ ನಾವು ದೇವರನ್ನೂ ಬಲಿಪಶುಮಾಡಿಬಿಟ್ಟೆವು!!

ಅದು ಹೇಗೆ ಬಂತೋ ಈ ವಿಗ್ರಹಾರಾಧನೆ,ಇರಲಿ, ಚಿಂತೆ ಇಲ್ಲ. ಆದರೆ ಅದರ ಹೆಸರಲ್ಲಿ ನಡೆಯುತ್ತಿರುವ ಈ ದಂಧೆ ಶೋಭೆ ತರುತ್ತಾ?

ಹಾಗೇ ತುಲನೆ ಮಾಡಿದೆ. ಪ್ರತೀದಿನ ಹತ್ತಿಪ್ಪತ್ತು ಜನ ಒಟ್ಟಾಗಿ ಕುಳಿತು ಕಳೆದ ಒಂದು ವರ್ಷದಿಂದ ಸಾಮೂಹಿಕವಾಗಿ ಮಾಡುತ್ತಿರುವ ಅಗ್ನಿಹೋತ್ರಕ್ಕೆ ಖರ್ಚೇ ಇಲ್ಲ. ಹತ್ತಿಪ್ಪತ್ತು ರೂಪಾಯಿನ  ತುಪ್ಪ. ಯಾರೋ ತುಪ್ಪ ತಂದ್ರೆ ಮುಗೀತು.  ಸ್ತ್ರೀ ಪುರುಷರೆಲ್ಲಾ ಸಾಮೂಹಿಕವಾಗಿ ಮಂತ್ರ ಪಠಿಸುತ್ತಾ ಅಗ್ನಿಹೋತ್ರ ಮಾಡುವಾಗ ಸಿಗುವ ಆನಂದ ಬೇರೆಲ್ಲಿ ಸಿಕ್ಕೀತು? ಅದರ ಪರಿಣಾಮ? ನೆಮ್ಮದಿ,ಶಾಂತಿ, ಉತ್ತಮ  ಆರೋಗ್ಯ. ಇನ್ನೇನು ಬೇಕು? ಇಷ್ಟು ಸಾಕು.....ಹೀಗೆನ್ನುವಾಗ ಮತ್ತೊಬ್ಬ ಮಿತ್ರರು ಹೇಳ್ತಾರೆ " ಹಾಗಂತ ನಮ್ಮ ಪೂರ್ವಿಕರು ಆಚರಣೆಗೆ ತಂದಿರುವ ಪೂಜೆ ಪುನಸ್ಕಾರ ನಿಲ್ಲಿಸಲು ಸಾಧ್ಯವೇ?

ನಿಲ್ಲಿಸಿ,ಅಂತಾ ಯಾರು ಹೇಳಿದ್ರು? ಯೋಚಿಸಿ ಅಂತಾ ಅಷ್ಟೇ ಹೇಳಿದೆ. ನೀವೇನಂತೀರಾ?



Sunday, September 29, 2013

ಗುಜರಿ ಅಂಗಡಿ


ಇವತ್ತು ಬೆಳಗಿನಿಂದ ಈ ಮಕ್ಕಳ ಫೋಟೋ ಎಷ್ಟೊ ನೋಡಿದ್ರೂ ತೃಪ್ತಿಯಾಗ್ತಾಇಲ್ಲ. ಎಷ್ಟು ಕಡೆ ಬರೆದ್ರೂ ತೃಪ್ತಿಯಾಗ್ತಾ ಇಲ್ಲ. ಅಷ್ಟು ನೈಜ ಚಿತ್ರ! ಸಂತೃಪ್ತ ನಗುವಿನ ಭಾವ!
ಅದಕ್ಕೇ ಅಂತ ಕಾಣುತ್ತೆ  ಹಿರಿಯರು ಹೇಳ್ತಾರೆ "ಮಗುತ್ವ ಬೆಳೆಸಿಕೊಳ್ಳಿ". ಮಗುವಂತಾಗುವುದು ಅಷ್ಟು ಸುಲಭವಲ್ಲ. ನಮ್ಮ ಮನಸ್ಸು, ಹೃದಯ ಎಲ್ಲದರಲ್ಲೂ ನಮಗೆ ಗೊತ್ತಿಲ್ಲದಂತೆ ಕೊಳಕು ತುಂಬಿದೆ. ನಾನು...ನಾನು..ನಾನು...ಎಂಬ ಭಾವ ತುಂಬಿತುಳುಕುತ್ತಿರುತ್ತದೆ. ಎರಡಾಣೆ ಖರ್ಚು ಮಾಡಿ ಎರಡು ಲಕ್ಷದ ಪ್ರತಿಫಲ ಕೇಳೋ ನಾನು ಮಗುವಾಗಬೇಕಲ್ಲಾ! ನನ್ನೊಳಗಿನ ಕಸವನ್ನು ಕಿತ್ತು ದೂರ ಎಸೆಯ ಬೇಕಲ್ಲಾ! ಅದಕ್ಕಾಗಿ ಈ ಮಕ್ಕಳನ್ನು ಧ್ಯಾನಿಸುತ್ತಿದ್ದೇನೆ. ಮತ್ತೊಮ್ಮೆ ಐದು ದಶಕಗಳ ಹಿಂದಕ್ಕೆ ಹೋಗಬೇಕೆಂಬ ಆಸೆ. ಐದು ದಶಕಗಳು ಕ್ರಮಿಸುವಾಗ ಅದೆಷ್ಟು ಅಡಚಣೆಗಳು!! ಅದೆಲ್ಲವನ್ನೂ ಕ್ರಮಿಸಿ ಪಡೆದದ್ದು ಗುಜರಿ ಅಂಗಡಿ ಸಾಮಾನುಗಳು. ಈಗ ಅದರಿಂದ ಪ್ರಯೋಜನವಿಲ್ಲವೆಂದು ಗೊತ್ತಾಗಿದೆ. ಮತ್ತೆ ಐವತ್ತು ವರ್ಷ ಹಿಂದಕ್ಕೆ ಪ್ರಯಾಣಿಸಬೇಕಾಗಿದೆ. ಅದು ಇನ್ನೂ ಕಷ್ಟ. ನಮ್ಮ ಸ್ವಾಮೀಜಿ ಒಬ್ಬರು ಮೊನ್ನೆ ತಾನೇ ಹೇಳಿದ ಮಾತು ನೆನಪಾಗುತ್ತಿದೆ. ನಾವೇ ಹಾಕಿದ ಕಲ್ಲು ಚಪ್ಪಡಿಯನ್ನು ನಾವೇ ಎಡವಿ ಬೀಳುತ್ತಿದ್ದೇವೆ. ಎಡವಿ ಬೀಳುತ್ತಿರುವುದು ಗೊತ್ತಾಗುತ್ತಿದೆ. ಆದರೂ ಆ ಕಲ್ಲು ಚಪ್ಪಡಿಯ ಮೇಲೆ ವ್ಯಾಮೋಹ!! ಗುಜರಿ ಅಂಗಡಿಯ ಮೇಲೆ ವ್ಯಾಮೋಹ!!!

Saturday, September 28, 2013

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ಸಂದರ್ಶನ



ಇತ್ತೀಚೆಗೆ  ನಡೆದ ವೇದೋಕ್ತ ಜೀವನಶಿಬಿರದಲ್ಲಿ   ಪಾಲ್ಗೊಳ್ಳಲು  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಹಾಸನಕ್ಕೆ ಬಂದಿದ್ದಾಗ ಅವರ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆ ಹಾಸನದ ಆಕಾಶವಾಣಿಯ ಶ್ರೀ ಶ್ರೀನಿವಾಸ್ ಅವರು ಶರ್ಮರೊಡನೆ ಸಂದರ್ಶನ ನಡೆಸಿದರು. ಅದರ ಕೊಂಡಿ ಇಲ್ಲಿದೆ.

ಭಾಗ-1

1(2).mp3http://www.mediafire.com/listen/5bn6yihxh723gv0/AIR-1(2).mp3

ಭಾಗ-2

http://www.mediafire.com/listen/31t8mh1pe5vs5l3/AIR-2.mp3

ಭಾಗ-3

http://www.mediafire.com/listen/eu2h6akun9khww8/AIR-3.mp3

ಭಾಗ-4
http://www.mediafire.com/listen/ewhkhdziww1mgc0/AIR-4.mp3

Monday, September 23, 2013

ಒಂದು ಸಾರ್ಥಕ ಪ್ರಯೋಗ-"ಪರಂಪರೆ"







ಸಾಮಾನ್ಯವಾಗಿ ಒಂದು ಮಾತನ್ನು   ಹಲವರ ಬಾಯಲ್ಲಿ ಇತ್ತೀಚಿನ ದಿನಗಳಲ್ಲಿ ಕೇಳ ಬಹುದು " ಯಾರಿಗೆ ಬೇಕ್ ಸಾರ್ ವೇದ,ಉಪನಿಷತ್ತು? ಅದರ ಬದಲು  ಆರ್ಕೆಸ್ಟ್ರಾ ಇಡಿಸಿ,ಆಗ ನೋಡಿ ಜನ ಹೇಗೆ ಸೇರ್ತಾರೇ ಅಂತಾ!" ಈ ಮಾತು ಸುಳ್ಳಾ? ಆದರೆ ಈ ಮಾತನ್ನು ಸುಳ್ಳುಮಾಡುವ ಅದ್ಭುತ ಪ್ರಯತ್ನ ಒಂದು ಮೈಸೂರಿನಲ್ಲಿ    ನಡೆದಿದೆ.ಅದರ ಹೆಸರು "ಪರಂಪರೆ" 
ಹೆಸರೇ ಹೇಳುವಂತೆ ನಮ್ಮ  ಧರ್ಮ, ಸಂಸ್ಕೃತಿ ಪರಂಪರೆಯನ್ನುಳಿಸಲು ಒಂದು ಪ್ರಯತ್ನ. ವರ್ಷದಲ್ಲಿ ಹಲವಾರು ಉಪನ್ಯಾಸಗಳು. ರಾಮಾಯಣ , ಮಹಾಭಾರತ, ಗೀತೆ, ವೇದ, ಉಪನಿಷತ್ತು.......ಹೀಗೆ ಹಲವು ವಿಷಯಗಳ ಬಗ್ಗೆ ಉಪನ್ಯಾಸದ ಏರ್ಪಾಡು ಮಾಡುತ್ತಾರೆ. "ಪರಂಪರೆ" ಸಂಸ್ಥೆಗೆ 1200 ಕ್ಕಿಂತ ಹೆಚ್ಚು ಸದಸ್ಯರಿದ್ದಾರೆ. ಎಲ್ಲರ ವಿಳಾಸ, ಮೊಬೈಲ್ ನಂಬರ್, ಈ ಮೇಲ್ ವಿಳಾಸವು ಅದರ ಸಂಯೋಜಕರಾದ ಶ್ರೀ ಕೃಷ್ಣಕುಮಾರರ ಹತ್ತಿರವಿದೆ. ಒಂದು ಕಾರ್ಯಕ್ರಮವನ್ನು ಯೋಜಿಸಿದನಂತರ ಈ ಎಲ್ಲಾ 1200 ಜನರಿಗೆ ಆಮಂತ್ರಣವು  ಈಮೇಲ್ , SMS,ಮತ್ತು ಅಂಚೆ ಮೂಲಕ ತಲುಪುತ್ತದೆ. ಕೆಲವು ಸಂಯೋಜಕರಿಗೇ ವಾಪಸ್ ಕೂಡ ಬರುತ್ತವೆ. ಆದರೂ ಸುಮಾರು 700 ರಿಂದೆ 800 ಜನ ಸದಸ್ಯರು ತಪ್ಪದೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಉಪನ್ಯಾಸವನ್ನು ಕೇಳುತ್ತಾರೆ.
                    ಇಂತಾ ಒಂದು ಕಾರ್ಯಕ್ರಮದಲ್ಲಿ ಹಾಸನದ ವೇದ ಭಾರತಿಯ ಸದಸ್ಯರು ಪಾಲ್ಗೊಳ್ಳುವ ಒಂದು ಅವಕಾಶ ಸಿಕ್ಕಿತ್ತು. ಕಳೆದ 16.9.2013 ರಿಂದ  22.9.2013 ರವರಗೆ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉಪನ್ಯಾಸ ಮಾಲಿಕೆ ಏರ್ಪಾಡಾಗಿತ್ತು. ಕೊನೆಯ ದಿನ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ಪ್ರಾತ್ಯಕ್ಷಿಕೆ ನಡೆದರೆ, ಅಗ್ನಿಹೋತ್ರದ ಅರ್ಥ ವಿವರಣೆಯು  ಶ್ರೀ ಸುಧಾಕರ ಶರ್ಮರಿಂದ ನಡೆಯಿತು. ಅದರ ನಂತರ  ಸಂಸ್ಕೃತ ಸೌರಭ ಮತ್ತು ವೇದ ಪಠಣ ಕಾರ್ಯಕ್ರಮಗಳು. ಕೊನೆಯಲ್ಲಿ  ಶ್ರೋತೃಗಳ ಪ್ರಶ್ನೆಗಳಿಗೆ ಶರ್ಮರ ಉತ್ತರ.  ಒಂದು ಅಪರೂಪದ ಕಾರ್ಯಕ್ರಮದಲ್ಲಿ ಪಾಲ್ಗೊಂಡ  ಅನುಭವ.ಸೇರಿದ್ದ ಸುಮಾರು 800 ಜನ ಶ್ರೋತೃಗಳು ಸುಮಾರು ಮೂರು ಗಂಟೆ ಗಳ ಕಾಲ ಕಾರ್ಯಕ್ರಮದಲ್ಲಿ  ಶಿಸ್ತುಬದ್ಧವಾಗಿದ್ದು ವೇದದ ಸವಿಯನ್ನು ಅನುಭವಿಸಿದರು. ಇಂತಾ ಕಾರ್ಯಕ್ರಮಗಳು ಎಲ್ಲಾ ಊರುಗಳಲ್ಲೂ ನಡೆದರೆ ನಮ್ಮ ಪರಂಪರೆಯ ಉತ್ಥಾನವಾಗುವುದರಲ್ಲಿ ಸಂಶಯವಿಲ್ಲ.



Thursday, September 12, 2013

ನಾನಿಲ್ಲದೆ ಅವನಿಲ್ಲ!!

     ನನಗೆ ಬಹಳ ಸಂತೋಷವಾಗಿತ್ತು. 'ಆಗಲಾರದು, ಕಷ್ಟ' ಎಂದುಕೊಂಡಿದ್ದ ಕೆಲಸವೊಂದು ಯಶಸ್ವಿಯಾಗಿ ಪೂರ್ಣವಾಗಿಬಿಟ್ಟಿತ್ತು. ನನಗೇ ನಂಬಲಾಗುತ್ತಿರಲಿಲ್ಲ. "ನೀವು ಇಲ್ಲದಿದ್ದರೆ ಈ ಕೆಲಸ ಆಗುತ್ತಲೇ ಇರಲಿಲ್ಲ. ನೀವು ಗ್ರೇಟ್ ಸಾರ್" ಎಂಬಂತಹ ಮಾತುಗಳು ಕೇಳಿಬಂದಾಗ ಉಬ್ಬಿಹೋಗಿದ್ದೆ. 'ನನ್ನಿಂದಲೇ ಈ ಕೆಲಸ ಆಗಿದ್ದು, ಇಲ್ಲದಿದ್ದರೆ ಆಗುತ್ತಿರಲಿಲ್ಲ'ವೆಂಬ ಭಾವನೆ ನನಗೂ ಬಂದು ಹೆಮ್ಮೆಪಡುತ್ತಿದ್ದಾಗಲೇ ಬಂದಿದ್ದ ಅವನು ನನ್ನನ್ನು ನೋಡಿ ಮುಗುಳ್ನಗುತ್ತಾ ಕರೆದಿದ್ದ: "ಬಾ ಇಲ್ಲಿ."
ನಾನು: (ನಗುತ್ತಲೇ) ಏನು ಸಮಾಚಾರ?
ಅವನು: ಈ ಕೆಲಸ ನೀನೇ ಮಾಡಿದ್ದಾ? ಬಹಳ ಚೆನ್ನಾಗಿದೆ.
ನಾನು: ನಿನಗೂ ಗೊತ್ತಿದೆ, ನಾನೇ ಮಾಡಿದ್ದು ಅಂತ. ತಮಾಷೆ ಮಾಡಬೇಡ. ಎಲ್ಲರೂ ಹೇಳ್ತಾ ಇರೋದನ್ನೂ ಕೇಳ್ತಲೇ ಇದೀಯ.
ಅವನು: ಎಲ್ಲರೂ ಏನಾದರೂ ಹೇಳಲಿ. ನಿನಗೆ ಏನು ಅನ್ನಿಸುತ್ತೆ ಅದನ್ನು ಹೇಳು.
ನಾನು: (ಗಂಭೀರವಾಗಿ) ಅನುಮಾನ ಏಕೆ? ನಾನೇ ಇದನ್ನು ಮಾಡಿದ್ದು.
ಅವನು: ಹಾಗಲ್ಲಪ್ಪಾ. ನಾನು ಕೇಳಿದ್ದು ನೀನು ಅಂದರೆ ಯಾರು ಅಂತ!
ನಾನು: (ಅನುಮಾನದಿಂದ ನೋಡುತ್ತಾ) ನಾನು ಯಾರು ಅಂದರೆ ಏನರ್ಥ? ನಿನ್ನ ಎದುರಿಗೆ ನಿಂತಿರುವ ನನ್ನ ಆರಡಿ ಎತ್ತರದ ಶರೀರವೂ ಕಾಣ್ತಾ ಇಲ್ವಾ?
ಅವನು: ಓ! ಈ ಶರೀರ ನಿನ್ನದಾ?
ನಾನು: ಮತ್ತೇನು ನಿನ್ನದಾ?
ಅವನು: ಹೋಗಲಿ ಬಿಡು. ನಿನ್ನ ಶರೀರ ಅಂದೆಯಲ್ಲಾ, ಅದು ನೀನು ಹೇಳಿದಂತೆ ಕೇಳುತ್ತಾ?
ನಾನು: (ಇವನಿಗೆ ತಲೆ ಕೆಟ್ಟಿರಬೇಕೆಂದುಕೊಂಡು) ನನಗೆ ಸಮಯವಿಲ್ಲ. ಇನ್ನೊಮ್ಮೆ ಮಾತನಾಡೋಣ.
ಅವನು: ನಿನಗೆ ಸಮಯವಿಲ್ಲ. ಆಯಿತು. ನಾನು ಹೇಳುವುದನ್ನು ಬೇಗ ಹೇಳಿಬಿಡುತ್ತೇನೆ. ಈ ಶರೀರ ನಿನ್ನದು. ನೀನು ಹೇಳಿದಂತೆ ಅದು ಕೇಳಿ ಈ ಕೆಲಸ ಮಾಡಿಬಿಟ್ಟಿತು. ಭೇಷ್! ಈಗ ನೀನು ಉಸಿರಾಡ್ತಾ ಇರೋದರಿಂದ ನಿನ್ನ ಶರೀರ ಬದುಕಿದೆ. ಆ ಉಸಿರಾಡೋ ಕೆಲಸದ ಕಂಟ್ರೋಲು ನಿನ್ನ ಕೈಲಿದೆಯಾ? ಹುಟ್ಟಿದ ಕ್ಷಣದಿಂದಲೇ ನಿನಗೆ ಏನೂ ಗೊತ್ತಿಲ್ಲದಿದ್ದಾಗಿನಿಂದಲೇ ಈ ಉಸಿರಾಟ ನಡೀತಿದೆ. ಎಚ್ಚರವಿಲ್ಲದೆ ನೀನು ನಿದ್ದೆ ಮಾಡುತ್ತಿದ್ದಾಗಲೂ ಉಸಿರಾಟ ನಡೀತಾನೇ ಇರುತ್ತೆ. ಈಗ ಹೇಳು, ಈ ಉಸಿರಾಟ ನಿನ್ನಿಂದ ಆಗುತ್ತಿದೆಯಾ ಅಥವ ಬೇರೆ ಯಾರಾದರೂ ಮಾಡಿಸುತ್ತಿದ್ದಾರಾ? ನಿನ್ನಿಂದಲೇ ಉಸಿರಾಟ ಆಗುತ್ತಿದೆ ಅನ್ನವುದಾದರೆ ಈ ಉಸಿರಾಡುವ ಆಟ ನೀನು ನಿಲ್ಲಿಸುವುದೇ ಇಲ್ಲ. ಏಕೆಂದರೆ ನೀನು ಸಾಯಲು ಇಷ್ಟಪಡುವುದೇ ಇಲ್ಲ, ಅಲ್ಲವೇ?
ನಾನು: (ಗೊಂದಲದಿಂದ) ಆಂ?. . . .
ಅವನು: ನಿನ್ನ ಶರೀರದಲ್ಲಿ ರಕ್ತ ಸುತ್ತುತ್ತಲೇ ಇರುತ್ತೆ. ಕೆಟ್ಟ ರಕ್ತ ಹೃದಯಕ್ಕೆ ಹೋಗುತ್ತೆ. ಶುದ್ಧವಾಗಿ ಹೊರಬರುತ್ತೆ. ಕೆಟ್ಟ ರಕ್ತ ಹರಿಯುವ ರಕ್ತನಾಳವೇ ಬೇರೆ, ಒಳ್ಳೆಯ ರಕ್ತ ಹರಿಯುವ ನಾಳಗಳೇ ಬೇರೆ ಇವೆ. ಈ ರಕ್ತ ಹೀಗೇ ಹರಿಯುವಂತೆ ನೀನು ಮಾಡ್ತಾ ಇದೀಯಾ? ಅದನ್ನು ನೀನೇ ಕಂಟ್ರೋಲ್ ಮಾಡ್ತಾಇದೀಯಾ?
ನಾನು: (ತಲೆ ಪರಚಿಕೊಳ್ಳುತ್ತಾ) ಅಯ್ಯೋ!!
ಅವನು: ಸಿಟ್ಟು ಮಾಡಿಕೋಬೇಡ. ನಿನ್ನ ಹೃದಯ ಇದೀಯಲ್ಲಾ, ಅದು ನೀನು ಹುಟ್ಟಿದಾಗಿನಿಂದಲೂ ಲಬ್ ಡಬ್ ಅಂತ ಪುರುಸೊತ್ತಿಲ್ಲದೆ ಹೊಡಕೊಳ್ತಾನೇ ಇದೆ. ಅದಕ್ಕೆ ಯಾವಾಗಲಾದರೂ ಪುರುಸೊತ್ತು ಕೊಡ್ತೀಯಾ? ಕೊಡಕ್ಕೆ ನಿನಗೆ ಆಗುತ್ತಾ? ನಿನ್ನ ಕೈಲಿ ಆಗೋದಿದ್ದರೆ ಅದಕ್ಕೆ ನೀನು ಯಾವತ್ತೂ ವಿಶ್ರಾಂತಿ ಕೊಡೋದೇ ಇಲ್ಲ, ಅಲ್ವಾ? ಏಕೆಂದರೆ ಅದಕ್ಕೆ ವಿಶ್ರಾಂತಿ ಕೊಟ್ಟರೆ ನೀನು ಎಲ್ಲಿ ಇರ್ತೀಯಾ?
ನಾನು: (ಮೆತ್ತಗಾಗಿದ್ದೆ) ನೀನು ಏನು ಹೇಳಬೇಕೆಂದಿದ್ದೀಯಾ? ನೇರವಾಗಿ ಹೇಳು, ಪ್ಲೀಸ್.
ಅವನು: ಪುರುಸೊತ್ತಿಲ್ಲ ಅಂದಿದ್ದೆ? ಹೋಗಲಿ ಬಿಡು. ನಿನ್ನ ತಲೆ ತಿನ್ನುವುದರಿಂದ ನನಗೇನೂ ಲಾಭವಿಲ್ಲ. ನೋಡು, ನೀನು ಉಸಿರಾಡ್ತಾ ಇದೀಯಾ, ನಿನ್ನ ಹೃದಯ ಕೆಲಸ ಮಾಡ್ತಾ ಇದೆ. ಇವೆಲ್ಲದರ ಮೇಲೆ ನಿನ್ನ ಕಂಟ್ರೋಲು ಇಲ್ಲವೇ ಇಲ್ಲ. ಅದನ್ನು ಕಂಟ್ರೋಲು ಮಾಡುತ್ತಿರುವವನೇ ಬೇರೆ ಅಂತ ನಿನಗೆ ಗೊತ್ತಾಯ್ತಲ್ಲಾ, ಅಷ್ಟು ಸಾಕು. ನಿನ್ನ ಕಂಟ್ರೋಲೇ ಇಲ್ಲದೆ, ಬೇರೆಯವರ ಕಂಟ್ರೋಲಿನಿಂದ ಓಡ್ತಾ ಇರೋ ಈ ದೇಹದ ಸಹಾಯದಿಂದ ಮಾಡಿದ ಕೆಲಸ ಮಾತ್ರ ನೀನು ಮಾಡಿದ್ದು ಅಂತ ಹೇಗಾಗುತ್ತೆ?
     ಅವನು ಈ ರೀತಿಯಲ್ಲಿ ಏನೇನೋ ಮಾತನಾಡುತ್ತಿದ್ದಾಗ ಅರಿವಿಲ್ಲದೆ ನಾನು ಕಣ್ಣು ಮುಚ್ಚಿ ಯೋಚಿಸುತ್ತಿದ್ದವನು, ಅವನು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದಾಗ ಫಕ್ಕನೆ ಕಣ್ಣು ಬಿಟ್ಟು ನೋಡಿದೆ. ನೋಡಿದರೆ ಅವನು ಅಲ್ಲಿ ಇರಲೇ ಇಲ್ಲ. "ಏಯ್, ಎಲ್ಲಿದೀಯಾ?" ಎಂದು ಕೂಗಿದೆ. "ಹೇಳು, ನೀನು ಹೇಳಿದ್ದು ನನಗೆ ಕೇಳುತ್ತೆ. ನಾನು ಇಲ್ಲೇ ಇದ್ದೇನೆ" ಎಂಬ ಮಾತು ಕೇಳಿಸಿತು. ಆ ಮಾತುಗಳು ನನ್ನ ಒಳಗಿನಿಂದಲೇ ಬಂದಂತೆ ಅನ್ನಿಸಿತು. 
ನಾನು: ಹಾಂ? ನೀನು ನನ್ನೊಳಗೆ ಇದ್ದೀಯಾ? ಅಲ್ಲಿಗೆ ಹೇಗೆ ಹೋದೆ?
ಅವನು: ನಾನು ಇರುವುದೇ ಇಲ್ಲಿ. ಇಲ್ಲಿ ಬಿಟ್ಟು ಇನ್ನು ಎಲ್ಲಿಗೆ ಹೋಗಲಿ? ನೀನು ಇರುವ ಹೊತ್ತಿಗೇ ನಾನೂ ಇರೋದು. ನೀನಿಲ್ಲದಿದ್ದರೆ ನಾನೆಲ್ಲಿ ಇರ್ತಾ ಇದ್ದೆ? ನನ್ನನ್ನು ಕಂಟ್ರೋಲು ಮಾಡೋನೇ ನೀನು! ನೀನಿಲ್ಲದೆ ನಾನಿಲ್ಲ.
     ನನಗೆ ತಲೆ ಕೆಟ್ಟುಹೋದಂತಾಯಿತು. 'ನಾನಿಲ್ಲದೆ ಅವನಿಲ್ಲವಂತೆ! ನನ್ನ ಮೇಲೆ ನನಗೇ ಕಂಟ್ರೋಲಿಲ್ಲ. ನನ್ನನ್ನು ಕಂಟ್ರೋಲು ಮಾಡೋನೇ ಬೇರೆ ಇರುವಾಗ, ನಾನು ಅವನನ್ನು ಕಂಟ್ರೋಲು ಮಾಡ್ತೀನಂತೆ!' ಎಂದು ನಗುವೂ ಬಂತು. ಹೀಗೇ ಯೋಚಿಸುತ್ತಿದ್ದವನಿಗೆ ಏನೋ ಹೊಳೆಯಿತು. ಹೌದು, ನನ್ನನ್ನು ಕಂಟ್ರೋಲು ಮಾಡುತ್ತಿರುವವನು 'ಅವನೇ' ಇರಬೇಕು! ಕರೆಕ್ಟ್!! ಅವನೇ!! ಈಗ ಸರಿಯಾಯಿತು. ನನ್ನನ್ನು ಅವನು, ಅವನನ್ನು ನಾನು ಕಂಟ್ರೋಲ್ ಮಾಡ್ತಾ ಇದೀವಿ. ನನ್ನನ್ನು ಅವನು ಕಂಟ್ರೋಲ್ ಮಾಡುತ್ತಿರುವುದರಿಂದ ಅವನೇ ಗ್ರೇಟ್! ನಾನು ಇರುವುದರಿಂದಲೇ ಅವನು ಇರೋದು! ಅದಕ್ಕೇ ನಾನೂ ಗ್ರೇಟ್!!
     ನಾನಿಲ್ಲದೆ ಅವನಿಲ್ಲ, ಅವನಿಲ್ಲದೆ ನಾನಿಲ್ಲ! ಹೀಗೆ ನನ್ನಷ್ಟಕ್ಕೇ ನಾನೇ ಜಂಬಪಟ್ಟುಕೊಳ್ಳುತ್ತಿದ್ದಾಗ ಮೂಢನ ಗೊಣಗು ಕೇಳಿಸಿತು:
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನೆನಬೇಡ ನಿನದೆನಬೇಡ
ಜಗವೃಕ್ಷ ರಸ ಹರಿವ ಕೊಂಬೆ ನೀನು ಮೂಢ||

-ಕ.ವೆಂ.ನಾಗರಾಜ್.

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 120 ವರ್ಷ-ಹಾಸನ ಕಾರ್ಯಕ್ರಮದ ಕೊಂಡಿ ಇಲ್ಲಿದೆ.



ವೇದೋಕ್ತ ಜೀವನಶಿಬಿರ


ವೇದಸುಧೆಯ ಅಭಿಮಾನಿಗಳಲ್ಲಿ  ಮನವಿ. ವೇದೋಕ್ತ ಜೀವನಶಿಬಿರವು ಯಶಸ್ವಿಯಾಗಿ ಮುಗಿದ ನಂತರ ಶ್ರೀ ಸುಧಾಕರಶರ್ಮರ  ಮಾತುಗಳನ್ನು ನಿಮಗೆ ಪೂರ್ಣವಾಗಿ ಕೇಳಿಸಲು ಸಾಧ್ಯವಾಗಿಲ್ಲ. ಎಲ್ಲಾ ಉಪನ್ಯಾಸಗಳನ್ನೂ ರೆಕಾರ್ಡ್ ಮಾಡಲಾಗಿದೆ. ಅದರ ಎಡಿಟಿಂಗ್ ಆಗಬೇಕಾಗಿದೆ. ಆದರೆ ಈ ಕೆಲಸದ ನಡುವೆಯೇ ನನಗೂ ಮತ್ತು ಕವಿನಾಗರಾಜರಿಗೂ ವಿವೇಕಾನಂದ 150ನೇ ಜನ್ಮ ವರ್ಷ ಆಚರಣೆಯ ಜಿಲ್ಲಾ ಸಮಿತಿಯ ಹೊಣೆ ಕೂಡ ಇದೆ. ಈ ಕಾರ್ಯಕ್ರಮಗಳಿಗೂ ಗಮನ ಕೊಡಲೇ ಬೇಕಾದ್ದರಿಂದ ನಾವು ವೇದಸುಧೆಯಲ್ಲಿ ಶರ್ಮರ ಉಪನ್ಯಾಸಗಳನ್ನು ಪ್ರಕಟಿಸಲು ಸ್ವಲ್ಪ ತಡವಾಗುತ್ತಿದೆ, ಆದರೂ ಅವಕಾಶ ಮಾಡಿಕೊಂಡು ಪ್ರಕಟಿಸುತ್ತೇವೆ. ನಿಧಾನಕ್ಕಾಗಿ ಕ್ಷಮೆ ಇರಲಿ.

Monday, September 2, 2013

ಯಜ್ಞೋಪವೀತ - ಒಂದು ಜಿಜ್ಞಾಸೆ



         ಬ್ರಾಹ್ಮಣ್ಯದ ಸಂಕೇತವೆನ್ನಲಾಗುವ ಯಜ್ಞೋಪವೀತ(ಜನಿವಾರ)ದ ಕುರಿತು ಮನಸ್ಸಿನಲ್ಲಿ ಆಗಾಗ ಏಳುವ ವಿಚಾರತರಂಗಗಳು ವಿಮರ್ಶಾರ್ಹವಾಗಿವೆ. ಪ್ರಸ್ತುತ ಆಚರಣೆಯಲ್ಲಿರುವಂತೆ ಹುಟ್ಟಿನಿಂದ ಬ್ರಾಹ್ಮಣರೆನಿಸುತ್ತಿದ್ದು, ತಂದೆ ಬ್ರಾಹ್ಮಣನಾಗಿದ್ದರೆ ಮಗನೂ ಬ್ರಾಹ್ಮಣನೆನಿಸುತ್ತಾನೆ ಮತ್ತು  ಜನಿವಾರವೆನ್ನುವುದು ಬ್ರಾಹ್ಮಣನಾಗಿರುವ ಸೂಚಕವಾಗಿರುತ್ತದೆ. ಆಚರಣೆಯಲ್ಲಿರುವ ಈ  ನಂಬಿಕೆಗೂ ವಾಸ್ತವ ಸತ್ಯಕ್ಕೂ ಇರುವ ಅಜಗಜಾಂತರ ವ್ಯತ್ಯಾಸ ಪೂರ್ವಾಗ್ರಹರಹಿತರಾಗಿ ವಿಚಾರ ವಿಮರ್ಶೆ ಮಾಡುವ ಮನಸ್ಸುಗಳಿಗೆ ಅರ್ಥವಾಗಬಹುದು. ನಾಲ್ಕೂ ವೇದಗಳಲ್ಲಿ ಈಗ ಲಭ್ಯವಿರುವುದೆಂದು ಹೇಳಲಾಗಿರುವ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಮಂತ್ರಗಳ ಪೈಕಿ ಯಾವುದೇ ಒಂದು ಮಂತ್ರದಲ್ಲೂ ಹುಟ್ಟಿನಿಂದ ಬರುವ ಜಾತಿಪದ್ಧತಿಯನ್ನು ಸಮರ್ಥಿಸುವ ಒಂದು ಮಂತ್ರವೂ ಇಲ್ಲವೆಂದು ಹೇಳುತ್ತಾರೆ. ವೇದಗಳಲ್ಲಿ ಬರುವ ಬ್ರಾಹ್ಮಣ, ವೈಶ್ಯ, ಶೂದ್ರ, ಕ್ಷತ್ರಿಯರ ಕುರಿತು ಉಲ್ಲೇಖಗಳು ವರ್ಣಗಳಾಗಿವೆ. ವರ್ಣ ಪದದ ಅರ್ಥ 'ಆರಿಸಿಕೊಳ್ಳುವುದು' ಎಂಬುದಾಗಿದೆ. ಯಾರೇ ಆಗಲಿ, ತಮ್ಮ ತಮ್ಮ ಗುಣ, ಸಾಮರ್ಥ್ಯ, ಕರ್ಮ, ಸ್ವಭಾವ, ಇತ್ಯಾದಿಗಳಿಗೆ ಹೊಂದುವ ವರ್ಣವನ್ನು ಆರಿಸಿಕೊಳ್ಳಲು ಅವಕಾಶವಿದ್ದು, ಅದರಲ್ಲಿ ಮೇಲು-ಕೀಳುಗಳ ಪ್ರಶ್ನೆಯಿಲ್ಲ. ಹುಟ್ಟಿನಿಂದ ಯಾರೂ ಈ ವರ್ಣಗಳಿಗೆ ಸೇರಿದವರೆಂದು ಪರಿಗಣಿಸಲಾಗದು. ಯಾವುದೋ ಗೊತ್ತಿಲ್ಲದ ಬಹಳ ಹಿಂದಿನ ಕಾಲಘಟ್ಟದಲ್ಲಿ ಮೇಲು-ಕೀಳುಗಳ ಭಾವನೆಯನ್ನು ಸಮಾಜದ್ರೋಹಿಗಳು  ಸೃಷ್ಟಿಸಿರಬಹುದಾಗಿದ್ದು, ವೇದಗಳಲ್ಲಿ ಮೇಲು-ಕೀಳುಗಳ ಭಾವನೆ ಎಲ್ಲೂ ಇರುವುದಿಲ್ಲ. ಈ ವಿಚಾರವೇ ದೀರ್ಘವಾಗಿ ಚರ್ಚಿಸಬಹುದಾದ ಸಂಗತಿಯಾಗಿದೆ.

     ಭಗವಂತನ ಸ್ಟೃಷ್ಟಿಯಲ್ಲಿ ಅನೇಕ ಜೀವವೈವಿಧ್ಯಗಳಿವೆ. ವಿವಿಧ ಜೀವಿಗಳ ವರ್ಗಗಳನ್ನೇ ಜಾತಿಗಳೆನ್ನಬಹುದು. ಯಾವುದೇ ನಾಯಿಯನ್ನು ನೋಡಿದಾಕ್ಷಣ ಅದನ್ನು ನಾಯಿ ಎನ್ನಬಹುದು. ಕತ್ತೆಯ ಹೊಟ್ಟೆಯಲ್ಲಿ ಹುಟ್ಟುವುದು ಕತ್ತೆಯೇ ಹೊರತು ಬೆಕ್ಕಲ್ಲ. ಹಾಗೆಯೇ ಮನುಷ್ಯರಿಂದ ಮನುಷ್ಯರು ಹುಟ್ಟುತ್ತಾರೆಯೇ ಹೊರತು ಬೇರೆ ಅಲ್ಲ. ಹಾಗಾಗಿ ಮನುಷ್ಯರನ್ನು ಮನುಷ್ಯರ ಜಾತಿ ಅನ್ನಬಹುದೇ ಹೊರತು ಬೇರೆ ಹೇಳಲಾಗದು. ಭಗವಂತನ ಸೃಷ್ಟಿಯಲ್ಲಿನ ವೈವಿಧ್ಯ ಒಂದಕ್ಕೊಂದು ಪೂರಕವಾಗಿದ್ದರೆ, ಮಾನವನಿರ್ಮಿತ ವೈವಿಧ್ಯ ಹೆಚ್ಚಿನ ಸಂಗತಿಗಳಲ್ಲಿ ವಿನಾಶಕವಾಗಿವೆ. ಹುಟ್ಟಿನ ಜಾತಿ ಅನ್ನುವುದು ಮಾನವರ ಸೃಷ್ಟಿಯೇ ಹೊರತು ಮತ್ತೇನಲ್ಲ. ಅದು ದೇವರ ಸೃಷ್ಟಿ ಆಗಿದ್ದರೆ ನೋಡಿದ ತಕ್ಷಣ ಇಂತಹ ಜಾತಿ ಎಂದು ಹೇಳಲು ಅವಕಾಶವಿರುತ್ತಿತ್ತು.  ತಂದೆ-ತಾಯಿಯರು ಗೊತ್ತಿಲ್ಲದ ಅನಾಥರದ್ದು ಯಾವ ಜಾತಿ? ಆಗ ತಾನೇ ಹುಟ್ಟಿದ ಏಳೆಂಟು ಮಕ್ಕಳನ್ನು ಒಂದೆಡೆಯಿಟ್ಟು ಯಾವ ಮಗು ಯಾವ ಜಾತಿ ಗುರುತಿಸಿ ಎಂದರೆ ಗುರುತಿಸಲು ಸಾಧ್ಯವಿದೆಯೇ? ಸಾಧ್ಯವಿಲ್ಲ. ಮಾನವನಿರ್ಮಿತ ಜಾತಿಯನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. ಒಬ್ಬ ಹಿಂದೂ ಮುಸಲ್ಮಾನನಾಗಬಲ್ಲ, ಒಬ್ಬ ಕ್ರಿಶ್ಚಿಯನ್ ಹಿಂದೂ ಆಗಬಲ್ಲ. ಆದರೆ ದೇವರ ಸೃಷ್ಟಿಯಾದ ಒಂದು ಕುದುರೆ ನಾಯಿಯಾಗಬಹುದೇ? ಬೆಕ್ಕು ಇಲಿಯಾಗಲು ಸಾಧ್ಯವೇ? ಹುಟ್ಟಿನಿಂದ ಜಾತಿ ಬರುವುದಿಲ್ಲ ಎಂಬುದಕ್ಕೆ ಇಷ್ಟು ಸಾಕೆನಿಸುತ್ತದೆ. ಮನುಷ್ಯರಲ್ಲಿ ಇರುವುದು ಒಂದೇ ಜಾತಿ, ಅದು ಮನುಷ್ಯ ಜಾತಿ ಅಷ್ಟೆ. 

     ೧೬ ಸಂಸ್ಕಾರಗಳಲ್ಲಿ ಒಂದಾದ ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಯಜ್ಞೋಪವೀತ (ಜನಿವಾರವನ್ನು) ಹಾಕಿಸಲಾಗುತ್ತದೆ. 'ಉಪ' ಎಂದರೆ ಸಮೀಪಕ್ಕೆ, 'ನಯನ'ವೆಂದರೆ ಕರೆದೊಯ್ಯುವುದು ಎಂಬುದು ಪದಶಃ ಅರ್ಥ. ಹಿಂದೆ ಮಕ್ಕಳಿಗೆ ವೇದಾಭ್ಯಾಸ, ಶಿಕ್ಷಣ ಕೊಡಿಸುವ ಸಲುವಾಗಿ ಸುಯೋಗ್ಯ ಗುರುಕುಲಕ್ಕೆ ಕಳುಹಿಸಿಕೊಡುವಾಗ ಈ ಉಪನಯನ ವಿಧಿಯನ್ನು ಆಚರಿಸಲಾಗುತ್ತಿತ್ತು. ಜಾತಿ ಮತ್ತು ಲಿಂಗ ತಾರತಮ್ಯವಿಲ್ಲದೆ ಗುರುಕುಲಕ್ಕೆ ಹೋಗುವ ಮಕ್ಕಳೆಲ್ಲರೂ ಈ ವಿಧಿಯನ್ನು ಪಾಲಿಸಿ ಯಜ್ಞೋಪವೀತಧಾರಿಗಳಾಗುತ್ತಿದ್ದರು. ಯಜ್ಞೋಪವೀತ ಧರಿಸುವಾಗ 'ನಾನು ಸತ್ಯದ ದಾರಿಯಲ್ಲಿ ನಡೆಯುತ್ತೇನೆ; ವ್ರತಗಳನ್ನು ಪಾಲಿಸುತ್ತೇನೆ; ಶಿಸುಬದ್ದ ಜೀವನ ನಡೆಸುತ್ತೇನೆ' ಎಂದು ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆ ಮಾಡಿಸುವುದಿದೆ. ಆಗಲೇ ಹೇಳಿರುವಂತೆ ಯಾವುದೋ ಹಿಂದಿನ ಕಾಲಘಟ್ಟದಲ್ಲಿ ಕ್ರಮೇಣ ಅದು ಒಂದು ವರ್ಗಕ್ಕೆ ಮತ್ತು ಪುರುಷರಿಗೆ ಮಾತ್ರ ಸೀಮಿತವಾದ ಕ್ರಿಯೆಯಾಗಿ ಪರಿವರ್ತಿತವಾಗಿಬಿಟ್ಟಿದೆ. ವೇದದ ಬೆಳಕಿನಲ್ಲಿ ಸತ್ಯವನ್ನು ಅರಸುವ ಯಾರಿಗೇ ಆಗಲಿ, ಇದು ಒಂದು ವರ್ಗದವರಿಗೆ ಅಥವ ಪುರುಷರಿಗೆ ಮಾತ್ರ ಸೀಮಿತವಾದ ಸಂಸ್ಕಾರವಲ್ಲವೆಂಬುದು ಗೋಚರವಾಗದಿರದು.

     ಯಜ್ಞೋಪವೀತವೆನ್ನುವುದು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಲು ಬದ್ಧತೆಯನ್ನು ಜ್ಞಾಪಿಸುವ ಸಾಧನ ಮತ್ತು ಆ ಮೂರು ಋಣಗಳನ್ನು ತೀರಿಸುವ ಸಂಕಲ್ಪ ಮಾಡುವ ಸಂಕೇತವಾಗಿದೆ. ಈ ಮೂರು ಋಣಗಳು ಕೇವಲ ಒಂದು ನಿರ್ದಿಷ್ಟ ವರ್ಗ ಅಥವ ಲಿಂಗಕ್ಕೆ ಸೀಮಿತ ಎಂದರೆ ಹಾಸ್ಯಾಸ್ಪದವೆನಿಸುತ್ತದೆ. ಋಗ್ವೇದದ ಈ ಎರಡು ಮಂತ್ರಗಳು ಯಜ್ಞೋಪವೀತಧಾರಿಯ ಕರ್ತವ್ಯಗಳನ್ನು ಹೇಳುತ್ತವೆ:

ತ್ರಿವಂಧುರೇಣ ತ್ರಿವ್ರತಾ ರಥೇನ ತ್ರಿಚಕ್ರೇಣ ಸುವೃತಾ ಯಾತಮರ್ವಾತ್ |

ಪಿನ್ವತಂ ಗಾ ಜಿನ್ವತಮರ್ವತೋ ನೋ ವರ್ಧಯತಮಶ್ವಿನಾ ವೀರಮಸ್ಯೇ || (ಋಕ್.೧.೧೧೮.೨.)

     ಮೂರು ಉನ್ನತಶೀಲ, ಪ್ರಗತಿಪಥಕ್ಕೊಯ್ಯುವ, ಸತ್ವ ಮತ್ತು ಒಳ್ಳೆಯತನಗಳಿಂದ ಸುತ್ತುವರೆದ, ಮೂರು ಬಂಧನಗಳನ್ನು ಚಕ್ರವಾಗಿ ಹೊಂದಿರುವ ಜೀವನರಥದಲ್ಲಿ ಮುಂದೆ ಸಾಗಿರಿ. ನಿಮ್ಮ ಇಂದ್ರಿಯಗಳು, ವಾಣಿಯನ್ನು ಶಕ್ತಿಯುತವನ್ನಾಗಿಸಿಕೊಳ್ಳಿ, ಜೀವಾತ್ಮ ಚೇತನವನ್ನು ವಿಕಾಸಗೊಳಿಸಿಕೊಳ್ಳಿ ಮತ್ತು ಆತ್ಮನಿಗಾಗಿ ಪ್ರಾಣಶಕ್ತಿ ಹೆಚ್ಚಿಸಿಕೊಳ್ಳಿ ಎಂಬುದು ಇದರ ಅರ್ಥ.

ತ್ರಿವಂಧುರೇಣ ತ್ರಿವ್ರತಾ ಸುವೇಶಸಾ ರಥೇನ ಯಾತಮಶ್ವಿನಾ |

ಕಣ್ವಾಸೋ ವಾಂ ಬ್ರಹ್ಮ ಕೃಣ್ವಂತ್ಯಧ್ವರೇ ತೇಷಾಂ ಸು ಶೃಣುತಂ ಹವಮ್ || (ಋಕ್.೧.೪೭.೨.)

     ಮೂರು ಬಂಧನಗಳ, ಮೂರು ತತ್ವಗಳಿಂದ ಕೂಡಿದ ಸುಶೋಭಿತ ಜೀವನರಥಯಾನ ಮಾಡಿರಿ. ಧ್ಯಾನಶೀಲ ಜ್ಞಾನಿಗಳು ಅಹಿಂಸಾವೃತ್ತಿಯಲ್ಲಿ ತಿಳಿಸಿಕೊಡುವ ವೇದಜ್ಞಾನವನ್ನು ಪಡೆದುಕೊಳ್ಳಿರಿ ಎನ್ನುವ ಮಂತ್ರದ ಅರ್ಥ ಸುಸ್ಪಷ್ಟವಾಗಿದೆ. ಪ್ರತಿ ಜೀವಿಗೆ ಇರುವ ಮೂರು ಋಣಗಳ -ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ಬಗ್ಗೆ ಅವನ ಬದ್ಧತೆಯನ್ನು ಜ್ಞಾಪಿಸುವುದೇ ಈ ಮಂತ್ರಗಳ ಉದ್ದೇಶವಾಗಿದೆ.

     ದೇವಋಣವನ್ನು ತೀರಿಸುವುದೆಂದರೆ ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿಹಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊರುವುದು. ಪಿತೃಋಣವನ್ನು ತೀರಿಸುವುದೆಂದರೆ ಭೌತಿಕ ಶರೀರ ಬರಲು ಕಾರಣರಾದ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದು  ಆಚಾರ್ಯಋಣವನ್ನು ತೀರಿಸುವ ಉತ್ತಮ ರೀತಿಯಾಗಿದೆ. ಮಾನವಧರ್ಮದ ಮೂರು ಬೇರ್ಪಡಿಸಲಾಗದ ಅಂಗಗಳಾದ ಜ್ಞಾನ, ಕರ್ಮ ಮತ್ತು ಉಪಾಸನೆಗಳನ್ನೂ ಸಹ ಯಜ್ಞೋಪವೀತದ ಮೂರು ಎಳೆಗಳು ಸಂಕೇತಿಸುತ್ತವೆ. ಜೀವನದ ಉದ್ದೇಶವಾದ ಸತ್ಯದ ಅನ್ವೇಷಣೆಗೆ ಜ್ಞಾನ ಅಗತ್ಯ. ಕೇವಲ ಜ್ಞಾನದಿಂದ ಪ್ರಯೋಜನವಿಲ್ಲ, ಅದನ್ನು ಅನುಷ್ಠಾನಗೊಳಿಸುವ ಕರ್ಮದಿಂದ ಜ್ಞಾನಕ್ಕೆ ಅರ್ಥ ಬರುತ್ತದೆ. ಜ್ಞಾನ, ಕರ್ಮಗಳನ್ನು ಭಗವಂತನ ಕೃಪೆಯೆಂದು ತಿಳಿದು ಮಾಡುವುದೇ ಉಪಾಸನೆ.

     ಇನ್ನೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕೆನ್ನಿಸುತ್ತಿದೆ. ಯಜ್ಞೋಪವೀತವೆನ್ನುವುದು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ನೆನಪಿಸುವ ಬಾಹ್ಮಣಿಕೆಯ (ಜಾತಿಯಲ್ಲ), ಸಜ್ಜನಿಕೆಯ, ಸಚ್ಚಾರಿತ್ರ್ಯದ ನಡವಳಿಕೆಯನ್ನು ಹೊಂದುವ ಸಂಕಲ್ಪದ ಸಂಕೇತವೇ ಹೊರತು ಮತ್ತೇನೂ ಅಲ್ಲ. ಸಜ್ಜನಿಕೆಯ, ಸಚ್ಚಾರಿತ್ರ್ಯವನ್ನು ಹೊಂದುವುದು ನಿಜವಾದ ಮಾನವಧರ್ಮವಾಗಿದೆ. ಯಜ್ಞೋಪವೀತ ಧರಿಸಿದವರು ಸಚ್ಚಾರಿತ್ರ್ಯವಂತನಾದರೆ ಯಜ್ಞೋಪವೀತಕ್ಕೆ ಬೆಲೆಯಿರುತ್ತದೆ. ನೇರವಾಗಿ ಹೇಳಬೇಕೆಂದರೆ ಯಜ್ಞೋಪವೀತ ಧರಿಸಿದಾಕ್ಷಣ ಒಬ್ಬ ಸಚ್ಚಾರಿತ್ರ್ಯವಂತನಾಗುವುದಿಲ್ಲ ಅಥವ ಈಗಿನ ಬಳಕೆಯಲ್ಲಿ ತಿಳಿದಿರುವಂತೆ ಬ್ರಾಹ್ಮಣ್ಯ ಬರುವುದಿಲ್ಲ. ಯಜ್ಞೋಪವೀತವು ಅದನ್ನು ಧರಿಸಿದವರು ಬ್ರಾಹ್ಮಣ್ಯವನ್ನು(ಜಾತಿಯಲ್ಲ), ಸಚ್ಚಾರಿತ್ರ್ಯವನ್ನು ಗಳಿಸಬೇಕೆಂದು, ಉಳಿಸಿಕೊಳ್ಳಬೇಕೆಂದು ನೆನಪಿಸುವ ಕೇವಲ ಸಾಧನ ಮಾತ್ರವಾಗಿದೆ.
 ಕೇವಲ ಉತ್ತಮ ವಿಚಾರ ಹೊಂದಿದ್ದರೆ ಸಾಲದು, ಅದು ಆಚರಣೆಗೂ ಬರಬೇಕು. ಹಾಗಾದಾಗ ಮಾತ್ರ ವಿಚಾರಕ್ಕೆ ಬೆಲೆ, ಮನ್ನಣೆ ಸಿಗುತ್ತದೆ. ವಿಚಾರ ಮತ್ತು ಆಚಾರದ ಸಮನ್ವಯತೆ ಕಂಡ ಈ ಪ್ರಸಂಗ ಉಲ್ಲೇಖಾರ್ಹವಾಗಿದೆ. ಹಾಸನದ ವೇದಭಾರತೀ ಸಂಸ್ಥೆಯು ಕಳೆದ ಒಂದು ವರ್ಷದಿಂದಲೂ ಜಾತಿ, ಮತ, ಪಂಥ, ಲಿಂಗ ಮತ್ತು ವಯೋತಾರತಮ್ಯವಿಲ್ಲದೆ ಎಲ್ಲರಿಗೂ ವೇದಾಭ್ಯಾಸ ಮಾಡುವ ಅವಕಾಶ ಕಲ್ಪಿಸಿದೆ. ಹಲವಾರು ಚಿಂತಕರುಗಳಿಂದ ಉಪನ್ಯಾಸಗಳು, ಸಂವಾದಗಳನ್ನು ಏರ್ಪಡಿಸಿದೆ. ಮಕ್ಕಳಲ್ಲೂ ವೇದದ ಕಲಿಕೆ ಪ್ರೋತ್ಸಾಹಿಸಲು ಬಾಲಸಂಸ್ಕಾರ ಶಿಬಿರ ನಡೆಸಿದೆ. ಇತ್ತೀಚೆಗೆ ಮೂರು ದಿನಗಳ ವೇದೋಕ್ತ ಜೀವನ ಶಿಬಿರವನ್ನೂ ಹಾಸನದಲ್ಲಿ ನಡೆಸಿದ್ದು, ಮಹಾರಾಷ್ಟ್ರದ ಪುಣೆ, ಕರ್ನಾಟಕದ ಬೆಂಗಳೂರು, ದೊಡ್ಡಬಳ್ಳಾಪುರ, ತುಮಕೂರು, ಭದ್ರಾವತಿ, ಕನಕಪುರ, ಬೆಳ್ತಂಗಡಿ, ಚನ್ನರಾಯಪಟ್ಟಣ, ಬೇಲೂರು ಮತ್ತು ಹಾಸನಗಳಿಂದ ಬಂದಿದ್ದ ಸುಮಾರು ೬೦ ಆಸಕ್ತರು ಭಾಗವಹಿಸಿದ್ದರು. ಶಿಬಿರದ ಕೊನೆಯ ದಿನದಂದು ಏಳು ಶಿಬಿರಾರ್ಥಿಗಳು -ನಾಲ್ವರು ಮಹಿಳೆಯರೂ ಸೇರಿದಂತೆ- 'ಉಪನಯನ' ಸಂಸ್ಕಾರ ಪಡೆದರು. ಶ್ರೀ ಸುಧಾಕರ ಶರ್ಮರವರು ಉಪನಯನದ ನೈಜ ಅರ್ಥವನ್ನು ಮತ್ತು ಉಪನಯನ ವಿಧಿಯ ಪ್ರತಿ ಮಂತ್ರಾರ್ಥವನ್ನು ವಿವರಿಸುತ್ತಿದ್ದರೆ, ಅಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ತನ್ಮಯತೆಯಿಂದ ಕೇಳಿ ವಿಚಾರಗಳನ್ನು ಸರಿಯೆಂದು ಮನಗಂಡಿದ್ದು ವಿಶೇಷವಾಗಿತ್ತು. ಪತ್ರಿಕಾ ಮತ್ತು ದೃಷ್ಯಮಾಧ್ಯಮಗಳವರೂ ಈ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಹಾಜರಿದ್ದು, ಸುದ್ದಿ ಎಲ್ಲೆಡೆಯೂ ಪ್ರಚುರವಾಯಿತು. ಈಗಿನವರ ದೃಷ್ಟಿಯಲ್ಲಿ ಹುಟ್ಟಿನಿಂದ ಬ್ರಾಹ್ಮಣರೆನಿಸದವರೂ ಸಂಸ್ಕಾರ ಪಡೆದ ಈ ಏಳು ಜನರಲ್ಲಿದ್ದರು. ಶ್ರದ್ಧೆಯಿಂದ ವೇದಾಭ್ಯಾಸ ಮಾಡುತ್ತಿರುವ ಅವರು ಈ ಸಂಸ್ಕಾರ ಪಡೆದುದು ಸ್ತುತ್ಯಾರ್ಹವೇ ಆಗಿದೆ. ಅವರು ಯಜ್ಞೋಪವೀತ ಧರಿಸಿ ಈಗಿನ ರೂಢಿಯ ಬ್ರಾಹ್ಮಣರೆನಿಸುವ ಸಲುವಾಗಿ ಜಾತಿ ಬದಲಾಯಿಸಿಕೊಳ್ಳಬೇಕೆಂದುಕೊಂಡವರಲ್ಲ, ಬದಲಾಯಿಸಿಕೊಂಡವರಲ್ಲ, ಆ ಉದ್ದೇಶವೂ ಅವರದಲ್ಲ ಮತ್ತು ಅದರ ಅಗತ್ಯವೂ ಅವರಿಗಿಲ್ಲ. ಮೊದಲೇ ಹೇಳಿದಂತೆ ಹುಟ್ಟಿನ ಜಾತಿಗೆ ಮತ್ತು ಲಿಂಗಭೇದಕ್ಕೆ ವೇದಗಳಲ್ಲಿ ಯಾವುದೇ ಸ್ಥಾನವಿಲ್ಲ. ವೇದಗಳು ಹೇಳುವ ನೈಜ ವಿಚಾರಗಳಿಗೆ ಮನಸೋತು ಸ್ವ ಇಚ್ಛೆಯಿಂದ ಯಜ್ಞೋಪವೀತ ಧರಿಸಿದ ಅವರು ಅಭಿನಂದನಾರ್ಹರು. ಮಹಿಳೆಯರು ವೇದಾಭ್ಯಾಸ ಮಾಡಬಾರದು, ವೇದಗಳು ಒಂದು ವರ್ಗದ ಸ್ವತ್ತು ಎಂಬ ರೂಢಿಗತ ಅಂಧ ನಂಬಿಕೆಗಳನ್ನು ಅಲುಗಾಡಿಸಿ ವೇದ ತೋರಿದ ಸತ್ಯ ಪಥದಲ್ಲಿ ನಡೆದ, ವೇದಾಧ್ಯಯನದಲ್ಲಿ ಆಸಕ್ತಿ ಹೊಂದಿದ, 'ಆಡದೆ ಮಾಡಿದ ರೂಢಿಯೊಳಗುತ್ತಮರ' ಸಾಲಿಗೆ ಸೇರಿದ ಅವರೇ ಧೈರ್ಯವಂತರು. ಏನಾದರೂ ಬದಲಾವಣೆ ಬರುವುದಿದ್ದರೆ ಇಂತಹವರಿಂದಲೇ ಸರಿ!   

-ಕ.ವೆಂ.ನಾಗರಾಜ್.
 ವೇದಸುಧೆಯ ಆತ್ಮೀಯ ಬಂಧುಗಳೇ ,ಅಗತ್ಯವಿದ್ದವರಿಗೆ ಉಚಿತ ವೈದ್ಯಕೀಯ ಸಲಹೆ ನೀಡಲು ತುಮಕೂರಿನ ಡಾ|| ಕಾರ್ನಾಡ್ ಅವರು ಮುಂದೆ ಬಂದಿದ್ದಾರೆ. ಆಸಕ್ತರು ವೇದಸುಧೆಗೆ vedasudhe@gmail.com ಗೆ ಬರೆದರೆ ವೈದ್ಯರ ಸಂಪರ್ಕಕ್ಕೆ ವುಯವಸ್ಥೆ ಮಾಡಲಾಗುವುದು.