Pages

Tuesday, May 24, 2011

ಬರಹ ಸಾರ್ಥಕವಾಯ್ತು.

 ತನ್ನ ಓದುಗರಲ್ಲಿ ನಿರ್ಭೀತ ಸತ್ಯ ಪಥದಲ್ಲಿ ಸಾಗುವ ಕೆಲವು ವಿಚಾರಗಳ ಲೇಖನಗಳನ್ನು ವೇದಸುಧೆಯು ಪ್ರಕಟಿಸುತ್ತಿರುವುದು ನಿಮಗೆಲ್ಲಾ ತಿಳಿದಿದೆ. ಒಂದು ಬರಹದಿಂದ ಒಬ್ಬ ಓದುಗರ ಮೇಲೆ ಸತ್ಪರಿಣಾಮವಾದರೂ ಆ ಬರಹ ಸಾರ್ಥಕವಾದಂತಯೇ.
ನನ್ನದೇ ಕವನದ ಒಂದು ನುಡಿ ನೆನಪಾಯ್ತು.

ಎಲ್ಲ ಕವನ ರಾಶಿಯಲ್ಲಿ
ಎನ್ನ ಕವನದೊಂದು ಪದವು
ನಿಮ್ಮ ಮನಕೆ ಮುದವ ನೀಡೆ 
ನಾನೆ ಧನ್ಯನು
ನನ್ನ ಕವನ ಧನ್ಯವು||
ಮಿತ್ರರಾದ ಶ್ರೀ ರಂಗನಾಥರ ಪತ್ರವು ಇಲ್ಲಿದೆ, ಅದನ್ನು ಓದಿದ ನನ್ನ ಅನಿಸಿಕೆಯನ್ನು ಹೀಗೆ ವ್ಯಕ್ತ ಪಡಿಸಿದೆ ಅಷ್ಟೆ.ಆದರೆ ನೆಮ್ಮದಿಯ ಬದುಕಿಗೆ ನೆರವಾಗಬಲ್ಲ  ಶ್ರೀ ಸುಧಾಕರ ಶರ್ಮರಂತಹ, ಚತುರ್ವೇದಿಗಳಂತಹ ಪಂಡಿತರ ಹಲವು ವಿಚಾರಗಳು ಪ್ರಕಟವಾಗುತ್ತಲೇ ಇವೆ. ಅವನ್ನು ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಲೂ ಇದ್ದಾರೆ. ಆದರೆ ಸಾಮಾನ್ಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವವರು ವಿರಳ. ಹೀಗಾದಾಗ ಸಹಜವಾಗಿ ಮುಂದಿನ ಬರಹಗಳು ನಿಧಾನವಾಗುತ್ತವೆ.ಕಾರಣ ಈಗಾಗಲೇ ಪ್ರಕಟವಾಗಿರುವ ಬರಹಗಳಿಂದ ಓದುಗರಿಗೆ ಪ್ರಯೋಜನವಾಗಿದೆಯೇ ಎಂಬ ಫೀಡ್ ಬ್ಯಾಕ್ ಸಿಕ್ಕಿರುವುದಿಲ್ಲ. ಆದ್ದರಿಂದ  ಓದುಗರು ತಮ್ಮ ಮುಕ್ತ ಅಭಿಪ್ರಾಯಗಳನ್ನು ದಯಮಾಡಿ ಬರೆಯಿರಿ ಎಂದು ವಿನಂತಿಸುವೆ.ಈಗ ಶ್ರೀ ರಂಗನಾಥರ ಪತ್ರವನ್ನು ಓದಿ.
---------------------------------

ನಮಸ್ಕಾರ,
ಬೆಂಗಳೂರಿನಲ್ಲಿ ಕಳೆದ ೩ ವರ್ಷಗಳ ಹಿಂದೆ ದಕ್ಷಿಣಾಭಿಮುಖವಾದ 20 X 30 ಜಾಗವೊಂದನ್ನು ಖರೀದಿಸಿದ್ದೆ. ಆದರೆ ಮನೆ ಕಟ್ಟುವುದಕ್ಕೆ ಹಿಂದೇಟು ಹಾಕುತಿದ್ದೆ, ಕಾರಣ ದಕ್ಷಿಣದ ಬಾಗಿಲು ಬರುತ್ತದಲ್ಲಾ ಅನ್ನುವ ಕಾರಣಕ್ಕೆ.
ನಿಮ್ಮ ಹಳೆಯ ವಾಸ್ತು ಕುರಿತಾದ ಕೆಲ ಪ್ರತಿಕ್ರಿಯೆ ಗಳನ್ನು ಓದುತಿದ್ದೆ, ನಿಮ್ಮ ಖಡಕ್ ಪ್ರತಿಕ್ರಿಯೆಗಳು ನನ್ನ ಮನದಲ್ಲಿನ ಕೆಲ ಸಂದೇಹಗಳನ್ನು ದೂರ ಮಾಡಿವೆ.
ಟಿವಿಯಲ್ಲಿ ಬರುವ ಜ್ಯೋತಿಷ್ಯ ವಾಸ್ತು ಕುರಿತಾದ ಕಾರ್ಯಕ್ರಮಗಳು ನಮ್ಮ ಮನಸ್ಸನ್ನು ಹಾಳು ಮಾಡುತ್ತವೆ. ಇಂತಹ ಕಾರ್ಯಕ್ರಮಗಳನ್ನು ನಿಲ್ಲಿಸದೇ ಹೋದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವುದರಲ್ಲಿ ಸಂದೇಹವಿಲ್ಲ.

ಧನ್ಯವಾದಗಳೊಂದಿಗೆ

ರಂಗನಾಥ.