Pages

Thursday, December 30, 2010

ಕೆಳದಿ ಕವಿಮನೆತನದ ಸಮಾವೇಶ






ಆಧುನಿಕತೆ ಬೆಳೆದಂತೆ  ಕುಟುಂಬದ ಪರಿಕಲ್ಪನೆಯೇ  ನಶಿಸುತ್ತಿರುವ ಈ ದಿನಗಳಲ್ಲಿ  ಒಂದು ವಂಶದ ಎಲ್ಲಾ ಬಂಧುಬಾಂಧವರನ್ನೂ ವರ್ಷದಲ್ಲಿ ಒಮ್ಮೆ ಒಂದುಕಡೆ ಸಮಾವೇಶಗೊಳಿಸಿ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುತ್ತಾ ಸಂಬಂಧದ ಕೊಂಡಿಯನ್ನು ಭದ್ರಪಡಿಸುವ ಒಂದು ಅಪೂರ್ವ ಪ್ರಯತ್ನವು ಮೊನ್ನೆ ಭಾನುವಾರ ಶಿಕಾರಿಪುರದಲ್ಲಿ ನಡೆಯಿತು.ಸೋದರರಾದ ಕವಿ ನಾಗರಾಜ್ ಮತ್ತು ಕವಿ ಸುರೇಶ್ ಮತ್ತು ಅವರ ಸಂಬಂಧಿಗಳು  ಶಿಕಾರಿಪುರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ  ಸ್ವತ: ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು. ಶ್ರೀ ಕವಿಸುರೇಶ್ ಅಥವಾ ಕವಿನಾಗರಾಜ್  ಸಮಾವೇಶದ ಬಗ್ಗೆ ಪೂರ್ಣ ಮಾಹಿತಿಯನ್ನು ಬರೆಯಬಹುದು. ನನ್ನ ಮಗ ಶ್ರೀಕಂಠನು ಕ್ಲಿಕ್ಕಿಸಿದ್ದ ಒಂದೆರಡು ಫೋಟೋ ಗಳನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಪ್ರಕಟಿಸಿರುವೆ. ಅಂತೂ ಒಂದು ಭಾವಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದ  ಶ್ರೀ ನಾಗರಾಜ್ ಬಂಧುಗಳಿಗೆ ಧನ್ಯವಾದಗಳನ್ನು ಹೇಳುತ್ತಾ ವೇದಸುಧೆಯ ಅಭಿಮಾನಿಗಳಿಗಾಗಿ ಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲು ಅವರಲ್ಲಿ ಕೋರುವೆ.

ವೇದಸುಧೆ ಬಳಗದ ಸಮಾಲೋಚನಾ ಸಭೆ


ಆತ್ಮೀಯರೇ,
ಬರುವ 30.01.2011 ರಂದು ಹಾಸನದಲ್ಲಿ  ನಡೆಯಲಿರುವ ವೇದಸುಧೆಯ ಪ್ರಥಮ ವಾರ್ಷಿಕೋತ್ಸವದ ವ್ಯವಸ್ಥೆಯ ಬಗ್ಗೆ ಸಮಾಲೋಚಿಸಲು ಸಭೆಯೊಂದನ್ನು ಬೆಂಗಳೂರಿನಲ್ಲಿ ದಿನಾಂಕ 2.1.2011 ರಂದು ಭಾನುವಾರ ಮಧ್ಯಾಹ್ನ 4.00 ಗಂಟೆಗೆ ಆಯೋಜಿಸಲಾಗಿದೆ.   ವೇದಸುಧೆಯ ಬಳಗದ ಸದಸ್ಯರು ಮತ್ತು ಅಭಿಮಾನಿಗಳು ಸಭೆಯಲ್ಲಿ ದಯಮಾಡಿ ಭಾಗವಹಿಸಿ ವಾರ್ಷಿಕೋತ್ಸವವನ್ನು ಯಶಸ್ಸುಗೊಳಿಸಲು ತಮ್ಮ  ಅಮೂಲ್ಯ ಸಲಹೆ-ಸಹಕಾರವನ್ನು ನೀಡಬೇಕೆಂದು ಕೋರುವೆ.
ಸ್ಥಳ: ವೇದಾಧ್ಯಾಯೀ ಸುಧಾಕರಶರ್ಮರ ನಿವಾಸ,  ನಂಬರ್-15 ಮೌಂಟ್ ಜಾಯ್ ರಸ್ತೆ, ಹನುಮಂತನಗರ, ಬೆಂಗಳೂರು-19
[ಗಣೇಶಭವನ್ ಬಸ್ ಸ್ಟಾಪ್ ಸಮೀಪ ಇರುವ ಸೌದೆ ಅಂಗಡಿಯ ಹಿಂಬಾಗ]
ಸಂಪರ್ಕ ದೂರವಾಣಿ: 08022421950,    9448842474,   9663572406

ವಂದನೆಗಳೊಡನೆ
-ಹರಿಹರಪುರ ಶ್ರೀಧರ್
ಸಂಪಾದಕ

ವೇದಸುಧೆಯ ವಾರ್ಷಿಕೋತ್ಸವ

ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ,
ಇದೇ ಫೆಬ್ರವರಿ ಆರರಂದು ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿರುವುದರಿಂದ  ಅಂದು ನಡೆಯಬೇಕಿದ್ದ ವೇದಸುಧೆಯ ವಾರ್ಷಿಕೋತ್ಸವವನ್ನು  ಜನವರಿ ೩೦ ರಂದು ಭಾನುವಾರ  ಹಾಸನದಲ್ಲಿ ನಡೆಸಲುದ್ಧೇಶಿಸಿದೆ. ಆದ್ದರಿಂದ ಬಳಗದ ಸದಸ್ಯರು ಮತ್ತು ಅಭಿಮಾನಿ ಬಂಧುಗಳು ವಾರ್ಷಿಕೋತ್ಸವದ ಯಶಸ್ಸಿಗಾಗಿ ತಮ್ಮ ಸಲಹೆಗಳನ್ನು ಜನವರಿ  ೧ನೇ ದಿನಾಂಕದೊಳಗೆ ವೇದಸುಧೆಗೆ ಮೇಲ್ ಮಾಡಬೇಕೆಂದು ಕೋರುವೆ. ಜನವರಿ ೨ ರಂದು ನಡೆಯಲಿರುವ ವೇದಸುಧೆಯ ಬಳಗದ ಸಭೆಯಲ್ಲಿ  ವಾರ್ಷಿ ಕೋತ್ಸವದ ಕಾರ್ಯಕ್ರಮಗಳಬಗ್ಗೆ ಅಂತಿಮವಾಗಿ ಚರ್ಚಿಸಿ ತೀರ್ಮಾನಿಸಲಾಗುವುದು.

ವಂದನೆಗಳೊಡನೆ
-ಶ್ರೀಧರ್

Wednesday, December 29, 2010

ಊಟವನ್ನು ಏಕೆ ಮಾಡಬೇಕು?ಯಾವಾಗ ಮಾಡಬೇಕು?ಏನು ಸೇವಿಸಬೇಕು? Part-1

ಶ್ರೀ ಶ್ರೀನಾಥರ ಪ್ರಶ್ನೆಗೆ ಶ್ರೀ ಸುಧಾಕರಶರ್ಮರು ನೀಡಿರುವ ವಿವರಣೆ ಇಲ್ಲಿದೆ.

 ಆಹಾರಸೇವನೆಯ ಬಗ್ಗೆ ವೇದ ಮತ್ತು ಆಯುರ್ವೇದ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರಗಳು.
1. ಊಟ ಏಕೆ ಮಾಡಬೇಕು?
ನಿರಂತರ ಕಾರ್ಯಚಟುವಟಿಕೆಗಳಿಂದ ಕಳೆದುಹೋದ ಶಕ್ತಿಯನ್ನು ಮರುಪೂರೈಕೆ ಮಾಡಲು. (ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಶಕ್ತಿಯಿರಬೇಕು ಎಂಬುದನ್ನು ಮತ್ತ ಹೇಳಬೇಕಿಲ್ಲ).
2. ಯಾವಾಗ ತಿನ್ನಬೇಕು?
ಹಸಿವಾದಾಗ. ಹಸಿವೆಯಲ್ಲಿ ಎರಡು ವಿಧ - ನಿಜ ಹಸಿವು, ಕಳ್ಳ ಹಸಿವು!
ಗಡಿಯಾರ ನೋಡಿ ಊಟ ಮಾಡುವವರಿಗೆ ಆ ಸಮಯಕ್ಕೆ ಸರಿಯಾಗಿ ಹೊಟ್ಟೆಯಲ್ಲಿ ಏನೋ ಒಂದು ತರಹ ಆಗುತ್ತದೆ. ಅದನ್ನು ಹಸಿವೆಂದು ತಿನ್ನುತ್ತಾರೆ. ಇದು ಕಳ್ಳ ಹಸಿವು. ನಮಗೆ ಇಷ್ಟವಾದ ತಿನಿಸನ್ನು ನೋಡಿದಾಗಲೂ ಹಸಿವಿನಂತೆ ಏನೂ
ಆಗುತ್ತದೆ. ಇದೂ ಕಳ್ಳ ಹಸಿವು.
ಮೊದಲು ತಿಂದ ಆಹಾರ ಜೀರ್ಣವಾದಮೇಲೆ ಆಹಾರ ತಿನ್ನುವ ಬಯಕೆ ಆದಲ್ಲಿ ಅದು ನಿಜ ಹಸಿವು. ಮೊದಲು ತಿಂದ ಆಹಾರ ಜೀರ್ಣವಾಗಿದೆ ಎಂದು ತಿಳಿಯುವುದು ಹೇಗೆ?
ಉದ್ಗಾರ ಶುದ್ಧಿರುತ್ಸಾಹೋ ವೇಗೋತ್ಕರ್ಷೋ ಯಥೋಚಿತಃ|
ಲಘುತಾ ಕ್ಷುತ್ ಪಿಪಾಸಾ ಚ ಜೀರ್ಣಾಹಾರಸ್ಯ ಲಕ್ಷಣಮ್||
ಉಸಿರು ಶುದ್ಧವಾಗಿರಬೇಕು, ಬಾಯಿ ವಾಸನೆಯಿರಬಾರದು, ಕಮರು ತೇಗು ಮೊದಲಾದವು ಇರಬಾರದು; ಉತ್ಸಾಹ, ಲವಲವಿಕೆ ಇರಬೇಕು; ಮಲಮೂತ್ರಾದಿಗಳು ಕಾಲಕಾಲಕ್ಕೆ ಸರಿಯಾಗಿ ಆಗಿ, ಅವುಗಳ ಶೇಷ ಶರೀರದಲ್ಲಿ ಇರಬಾರದು; ಹಗುರವಾಗಿದೆ ಎನಿಸಬೇಕು, ಮೈ-ಮನಗಳು ಭಾರವಾಗಿವೆ ಎಂದೆನಿಸಬಾರದು; ನೀರನ್ನು ಕುಡಿದರೂ ಅದರ ಸವಿ ನಾಲಿಗೆಗೆ ಅರಿವಾಗಬೇಕು. ಇಂತಹ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿ ಚುಮು ಚುಮು ಎಂದು, ಆಹಾರ ಸೇವಿಸಬೇಕು ಎಂದೆನಿಸಿದರೆ ಅದು ನಿಜವಾದ ಹಸಿವು.!! (ಎಷ್ಟು ಸಲ ನಾವು ಊಟಕ್ಕೆ ಮುಂಚೆ ಎಷ್ಟೆಲ್ಲಾ ಪರಿಶೀಲನೆ ಮಾಡಿದ್ದೇವೆ?! - ನನ್ನನ್ನೂ ಸೇರಿಸಿಕೊಂಡು!)
3. ಏನು ಸೇವಿಸಬೇಕು?
ಆಗಲೇ ಹೇಳಿದ ಹಾಗೆ ಸತ್ವಭರಿತವಾದ ಆಹಾರವನ್ನು ಸೇವಿಸಬೇಕು.
(ಮುಂದುವರೆಸುವೆ)
-ಸುಧಾಕರ ಶರ್ಮ

Saturday, December 25, 2010

ಯೋಚಿಸಲೊ೦ದಿಷ್ಟು...೨೨

೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ  ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು!
೨. ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ ಚಿ೦ತಿಸುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ಹೆಮ್ಮೆ ಪಡುವುದು ಲೇಸು!
೩. ಜೀವನವೊ೦ದು ಪುಸ್ತಕವಿದ್ದ ಹಾಗೆ. ಪುಟಗಳನ್ನು ತೆರೆದಷ್ಟು ಪುಸ್ತಕದ  ಆ೦ತರ್ಯದ ಅರಿವಾಗುವ ಹಾಗೆ, ಪ್ರತಿ ದಿನವೂ ಜೀವನದ ಒಳಗುಟ್ಟು ನಮ್ಮ ಮು೦ದೆ ತೆರೆಯಲ್ಪಡುತ್ತಲೇ ಹೋಗುತ್ತದೆ!!
೪. ಕನಸುಗಳು ಆಸೆಯನ್ನು ಹುಟ್ಟಿಸಿದರೆ, ಆಸೆಯೆ೦ಬುದು ಪ್ರಯತ್ನಕ್ಕೆ ದಾರಿ... ಆ ಪ್ರಯತ್ನವು ಸಾಧನೆಯ ಯಶಸ್ಸಿಗೆ ಹಾದಿ ಮಾಡಿಕೊಡುತ್ತದೆ.
೫. ಯಾರೂ ಪರಿಪೂರ್ಣರಲ್ಲ! ನಮ್ಮ ಹತ್ತಿರ ಬ೦ದವರನ್ನು ಅವರಲ್ಲಿರುವ ಹುಳುಕುಗಳ ಆಧಾರದ ಮೇಲೆ ದೂರ ಮಾಡುತ್ತಲೇ ಹೋದರೆ, ನಾವೂ ಜೀವನ ಪೂರ್ತಿ ಏಕಾ೦ಗಿಯಾಗಿಯೇ ಕಾಲ ಕಳೆಯಬೇಕಾದೀತು!
೬.ಜೀವನವೊ೦ದು ಪ್ರಶ್ನೆಯಾಗಿದ್ದು ಅದಕ್ಕೆ ಉತ್ತರವನ್ನು ಕ೦ಡುಕೊಳ್ಳಲು ಸಾಧ್ಯವಾಗದಿದ್ದ೦ತೆಯೇ, ಸಾವು ಒ೦ದು ಉತ್ತರವಾದರೂ ಅದನ್ನು ಯಾರೂ ಪ್ರಶ್ನಿಸಲಾಗದು!
೭. ಜೀವನದಲ್ಲಿ ಅತ್ಯ೦ತ ಪ್ರಾಶಸ್ತ್ಯವಾದ ಸ್ಥಾನವನ್ನು ಯಾರಿಗೂ ನೀಡಬಾರದು. ಆ ಸ್ಥಾನವನ್ನು ಅವರಿಗಾಗಿ  ಕಲ್ಪಿಸುವುದು ನಮಗೆ ಸುಲಭವಾದರೂ, ಅವರು ನಾವು ನೀಡಿದ ಸ್ಥಾನದ ಬೆಲೆಯನ್ನರಿಯದೇ ವರ್ತಿಸಿದಲ್ಲಿ, ಅತ್ಯ೦ತ ಹೆಚ್ಚು ದು:ಖ ಪಡುವವರು ನಾವೇ ಆಗಿದ್ದು, ಆ ಮನೋವ್ಯಾಕುಲತೆಯಿ೦ದ ಹೊರಬರುವುದು ಅತ್ಯ೦ತ ಕಷ್ಟವಾದೀತು!
೮. ನಮ್ಮ ಮಾತು ಹಾಗೂ ಭಾವನೆಗಳನ್ನು ಅತ್ಯ೦ತ ಹೆಚ್ಚು ಜಾಗರೂಕತೆಯಿ೦ದ ನಿಭಾಯಿಸಬೇಕಾಗುತ್ತದೆ.ಆಡಿದ ಮಾತು ಹಾಗೂ ಮುರಿದು ಹೋದ ಹೃದಯಗಳೆರಡನ್ನೂ ದುರಸ್ತಿಗೊಳಿಸುವುದು ಕಷ್ಟ!
೯. ಒ೦ದು ಶಾಲೆಯಲ್ಲಿ ಮಕ್ಕಳಿಗೆ ಕೇಳಲಾದ ಪ್ರಶ್ನೆ : ನಿಮ್ಮ ತ೦ದೆ ನಿಮಗೋಸ್ಕರ ಮಾಡಿದ ಉತ್ತಮ ಕಾರ್ಯ ಯಾವುದು?
   ಆ ಪ್ರಶ್ನೆಗೆ ಒ೦ದು ಅತ್ಯುತ್ತಮ ಉತ್ತರ ಹೀಗಿತ್ತು: ನನ್ನ ತ೦ದೆ ನನ್ನ ತಾಯಿಯನ್ನು ಮದುವೆಯಾದುದೇ ನನಗೋಸ್ಕರ ಮಾಡಿದ ಅತ್ಯುತ್ತಮ ಕಾರ್ಯ!
೧೦. ನಮ್ಮ ಜೀವನದಲ್ಲಿನ ಪ್ರತಿಯೊ೦ದು ಸಮಸ್ಯೆಯೂ , ನಮ್ಮ ಭವಿಷ್ಯತ್ ಜೀವನದಲ್ಲಿ ನಾವು ಪಡೆಯಬಹುದಾದ ಉತ್ತಮ ಅವಕಾಶಗಳ ಆರ೦ಭವಾಗಿರುತ್ತದೆ!
೧೧. ಕೆಲವೊ೦ದು ಕಾರಣಗಳು ಆತ್ಮೀಯತೆಯ ಮೌಲ್ಯವನ್ನು ಹೆಚ್ಚಿಸಿದರೂ, ಒ೦ದು ಉತ್ತಮ ಸ೦ಬ೦ಧವು ಯಾವುದೇ ಕಾರಣವಿಲ್ಲದೇ ಇಬ್ಬರು ವ್ಯಕ್ತಿಗಳ ನಡುವೆ ಏರ್ಪಡುತ್ತದೆ!
೧೨. ನೆನಪುಗಳು ಜಗತ್ತಿನ ಎಲ್ಲಾ ಸ೦ಬ೦ಧಗಳ ನಡುವಿನ ಒ೦ದು ಸರಪಳಿ!
೧೩. ನಾವು ಎಲ್ಲರೊ೦ದಿಗೂ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು! ಆದರೆ ನಮ್ಮ ಆತ್ಮೀಯರೊ೦ದಿಗೆ ಮಾತ್ರವೇ ನಮ್ಮ ಕೋಪವನ್ನು ವ್ಯಕ್ತಪಡಿಸಬಹುದಷ್ಟೇ!
೧೪. ಜೀವನದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕ೦ಡುಕೊಳ್ಳಲಾಗದಿದ್ದ೦ತೆಯೇ, ಎಲ್ಲವನ್ನೂ ಕೇವಲ ಪ್ರಶ್ನೆಗಳೆ೦ದು ಕೈಬಿಡಲೂ ಆಗುವುದಿಲ್ಲ!
೧೫. ಪೌರುಷವು ಬಾಯಿಬಡುಕತನದಲ್ಲಿಲ್ಲ. ಅದು ಸರಿಯಾದ ಕಾರ್ಯಗಳನ್ನು ಮಾಡುವುದರಲ್ಲಿ ಹಾಗೂ ಅದರಿ೦ದ ಉ೦ಟಾಗುವ ಸಮಸ್ಯೆಗಳನ್ನು ಎದುರಿಸುವುದರಲ್ಲಿ ಇದೆ!

Friday, December 24, 2010

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -3

     ಆ ಜೀವಾತ್ಮನ ಸ್ವರೂಪವೇನು? ವೇದ ಹೇಳುತ್ತಲಿದೆ:-


ದಂಡಾ ಇವೇದ್ ಗೋ ಅಜನಾಸ ಆಸನ್ ಪರಿಚ್ಛಿನ್ನಾ ಭರತಾ ಅರ್ಭಕಾಸಃ|
ಅಭವಚ್ಛ ಪುರ ಏತಾ ವಸಿಷ್ಠ ಆದಿತ್ ತೃತ್ಸೂನಾಂ ವಿಶೋ ಅಪ್ರಥಂತ|| (ಋಕ್. ೭.೩೩.೬)


     [ಪರಿಚ್ಛಿನ್ನಃ] ಏಕದೇಶಿಗಳೂ [ಭರತಾ] ಶರೀರಧಾರಿಗಳೂ [ಅರ್ಭಕಾಸಃ] ಅಣುಪ್ರಮಾಣರೂ ಆದ ಜೀವಾತ್ಮರು [ಗೋ ಅಜನಾಸಃ ದಂಡಾಃ ಇವ] ಗೋವುಗಳನ್ನು ಮುನ್ನಡೆಸುವ ದಂಡಗಳಂತೆ [ಗೋ ಅಜನಾಸಃ] ಇಂದ್ರಿಯಗಳು ಮತ್ತು ವಾಣಿಯನ್ನು ಸಂಚಾಲನಗೊಳಿಸುವವರು [ಆಸನ್] ಆಗಿದ್ದಾರೆ. [ವಸಿಷ್ಠಃ] ಸರ್ವಶ್ರೇಷ್ಠ ಆಧಾರ ಮತ್ತು ಆಶ್ರಯದಾತೃವಾದ ಭಗವಂತನು [ಪುರ ಏತಾ ಅಭವತ್] ಇವರ ನಾಯಕನಾಗಿದ್ದಾನೆ. [ಆತ್ ಇತ್] ಅನಂತರವೇ [ತೃತ್ಸೂನಾಮ್] ತೃಪ್ತಿಯನ್ನರಸುವ, ತೃಷಿತರಾದ ಜೀವಾತ್ಮರ [ವಿಶಃ] ಮಕ್ಕಳು [ಅಪ್ರಥಂತ] ವಿಕಸಿತರಾಗುತ್ತಾರೆ.
     ಮೊದಲಿನ ಎರಡು ಚರಣಗಳಲ್ಲಿ ಜೀವಾತ್ಮರ ಲಕ್ಷಣಗಳನ್ನು ಹೇಳಿ ಆಮೇಲೆ ವೇದವು ಜೀವಸಂತತಿ ಉತ್ಕರ್ಷ ಹೊಂದಬೇಕಾದರೆ ಭಗವಂತನ ಆದೇಶದಂತೆ ವರ್ತಿಸಬೇಕು ಎಂದು ಬೋಧಿಸುತ್ತದೆ.


     ಪರಿಚ್ಛಿನ್ನ ಚೇತನನಾದ ಜೀವಾತ್ಮನು ಬೇರೆ ಬೇರೆ ಯೋನಿಗಳಲ್ಲಿ ಜನಿಸಿ ಕ್ರಮವಾಗಿ ವಿಕಾಸ ಹೊಂದುತ್ತಾ ಹೋಗುತ್ತಾನೆ. ಪುನರ್ಜನ್ಮ ಸಿದ್ಧಾಂತ ಕೇವಲ ಒಂದು ಕುರುಡು ನಂಬಿಕೆಯಲ್ಲ. ಆತ್ಮನು ಪರಮಾತ್ಮನಿಂದ ಸೃಜಿಸಲ್ಪಟ್ಟವನು, "ಇದೇ ಮೊದಲನೆಯ  ಜನ್ಮ, ಇದೇ ಅವನ ಕೊನೆಯ ಜನ್ಮ "- ಎಂದು ಹೇಳುವ ಸಾಂಪ್ರದಾಯಿಕರಿಗೆ ಆಧ್ಯಾತ್ಮಿಕ ಜಗತ್ತಿನ ವೈಶಾಲ್ಯದ ಅರಿವೇ ಇಲ್ಲ. ಆತ್ಮನು ಅನಾದಿ-ಅನಂತ, ಅವನು ತನ್ನ ಕರ್ಮಾನುಸಾರ ಒಳ್ಳೆಯ ಅಥವಾ ಕೆಟ್ಟ ಜನ್ಮಗಳನ್ನೆತ್ತುತ್ತಾನೆ. ಪುನರ್ಜನ್ಮಕ್ಕೆ ಪ್ರತ್ಯಕ್ಷ ಪ್ರಮಾಣ ಇಲ್ಲವೆನ್ನುವವರು ಮಾನವ ಜೀವನವನ್ನೂ ಕೂಡ ತೆರೆದ ಕಣ್ಣುಗಳಿಂದ ಅವಲೋಕಿಸುವುದಿಲ್ಲ. ಒಂದೇ ಮಾತಾ-ಪಿತೃಗಳಿಂದ ಜನ್ಮ ತಾಳಿದ ಅಣ್ಣ-ತಮ್ಮಂದಿರಲ್ಲಿಯೂ, ಅಕ್ಕ-ತಂಗಿಯರಲ್ಲಿಯೂ ಕೂಡ ಸಾಮರ್ಥ್ಯ-ಅಭಿರುಚಿ ಮೊದಲಾದುವುಗಳಲ್ಲಿ ವ್ಯತ್ಯಾಸವೇಕೆ? ಕೆಲವರು ೧೦-೧೦ ಗಂಟೆ ದುಡಿದರೂ ಸಾಫಲ್ಯ ಗಳಿಸರು. ಕೆಲವರಿಗೆ ಶ್ರಮವಿಲ್ಲದಿದ್ದರೂ ಸಾಫಲ್ಯ ತಾನಾಗಿ ಒಲಿಯುವುದು. ಈ ಜೀವನದಲ್ಲಿ ಸತ್ಪ್ರವೃತ್ತಿಗಳಲ್ಲೇ ತೊಡಗಿದ್ದರೂ ನಾನಾ ರೋಗರುಜಿನಗಳಿಂದ, ಕಷ್ಟ-ಕಾರ್ಪಣ್ಯಗಳಿಂದ ನರಳುವುದು, ಇದೆಲ್ಲಾ ಏತಕ್ಕಾಗಬೇಕು? ಗಂಭೀರವಾಗಿ ಆಲೋಚಿಸಿದಾಗ ಇದೊಂದೇ ಸಾರಿಯಲ್ಲ ನಾವು ಹುಟ್ಟಿರುವುದು, ಅದೆಷ್ಟೋ ಸಾರಿ ಜನ್ಮವೆತ್ತಿ ನಾನಾ ಬಗೆಯ ಸುಸಂಸ್ಕಾರ-ಕುಸಂಸ್ಕಾರಗಳ ಬುತ್ತಿ ಕಟ್ಟಿಕೊಂಡು ಬಂದಿದ್ದೇವೆ ಎಂಬುದು ತಾನಾಗಿಯೇ ಗೊತ್ತಾಗುತ್ತದೆ. ಭಗವಂತನಂತೂ ನಿರ್ದಯ ಹಾಗೂ ಅನ್ಯಾಯಕಾರಿಯಲ್ಲ. ನಮಗೆ ಹಿಂದಿನ ಜನ್ಮಗಳ ನೆನಪಿಲ್ಲ ಎಂದ ಮಾತ್ರಕ್ಕೆ ಪುನರ್ಜನ್ಮವೇ ಇಲ್ಲವೇ? ಈ ಜನ್ಮದಲ್ಲಿಯೇ ನಾವು ಮಾಡಿದ ಅನೇಕ ಕಾರ್ಯಗಳ, ಓದಿದ ಅನೇಕ ಪಾಠಗಳ ನೆನಪಿರುವುದಿಲ್ಲ, ಅಂದ ಮಾತ್ರಕ್ಕೆ ನಾವು ಆ ಕಾರ್ಯಗಳನ್ನು ಮಾಡಿಯೇ ಇಲ್ಲವೇ? ಆ ಪಾಠಗಳನ್ನು ಓದಲೇ ಇಲ್ಲವೇ? ಪುನರ್ಜನ್ಮದ ಸಂಸ್ಕಾರ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪೂ ಇರುತ್ತದೆ. ಸಾಧಾರಣತಃ ಜನರಿಗೆ ಅದರ ನೆನಪಿಲ್ಲದಿರುವುದೂ ಭಗವತ್ಕೃಪೆಯೇ ಎಂದರಿಯಬೇಕು. ಏಕೆಂದರೆ, ಹಿಂದಿನ ಜನ್ಮಗಳ ನಮ್ಮ ಕಾರ್ಯಗಳೆಲ್ಲಾ ನಮಗೆ ನೆನಪಿದ್ದರೆ ಘಳಿಗೆ ಘಳಿಗೆಗೂ ಏನಾಗುವುದೋ ಎಂಬ ಭೀತಿಯೇ ಬಾಳನ್ನು ಹಾಳುಮಾಡಿಬಿಡುತ್ತಿತ್ತು.

ಕಾಮೆಂಟ್ ಬರೆಯುವಾಗ ಸಮಸ್ಯೆ

ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ...

ಕಾಮೆಂಟ್ ಬರೆಯುವಾಗ  ಸರಿಯಾಗಿ ಪೋಸ್ಟ್  ಮಾಡಲು ಸಾಧ್ಯವಾಗುತ್ತಿಲ್ಲವೆಂಬ ಅಭಿಪ್ರಾಯಗಳು ನನ್ನ ಅರಿವಿಗೆ ಬಂದಿದೆ. ನಾನೂ ಕೂಡ ಸಮಸ್ಯೆಯನ್ನು ಎದುರಿಸಿದ್ದೇನೆ. ಸಮಸ್ಯೆ ಕಂಡವರು ದಯಮಾಡಿ ತಮ್ಮ ಯಾವುದೇ ಅಭಿಪ್ರಾಯವನ್ನು ವೇದಸುಧೆಗೆ ಮೇಲ್ ಮಾಡಿದರೆ ಅದನ್ನು ಸೂಕ್ತ ಪುಟದಲ್ಲಿ ಪ್ರಕಟಿಸಲಾಗುವುದು.
ವಂದನೆಗಳು
-ಶ್ರೀಧರ್

Monday, December 20, 2010

ಮೂಢ ಉವಾಚ -16

ಕೋಪವೆಂಬುದು ಕೇಳು ವಂಶದಾ ಬಳುವಳಿಯು|
ಸಜ್ಜನರ ಸಹವಾಸವೇ ಪರಿಹಾರದಮೃತವು||
ಕೋಪದ ತಾಪದಿಂ ಪಡದಿರಲು ಪರಿತಾಪ|
ಶಾಂತಚಿತ್ತದಲಿ ಅಡಿಯನಿಡು ಮೂಢ||


ದೇಹದೌರ್ಬಲ್ಯವದು ಸಿಡಿಮಿಡಿಗೆ ಕಾರಣವು|
ಅಸಹಾಯಕತೆ ತಾ ಕೋಪಾಗ್ನಿಗದು ಘೃತವು||
ದೇಹಧಾರ್ಢ್ಯವನು ಕಾಪಿಟ್ಟು ಧೃಢಚಿತ್ತದಲಿ|
ಮುನ್ನಡೆದು ವ್ಯಗ್ರತೆಯ ನಿಗ್ರಹಿಸು ಮೂಢ||


ಕೀಳರಿಮೆಯದು ತಾ ಸಿಟ್ಟಿಗದು ಹೇತುವು|
ಅಭಿಮಾನಕಾಘಾತ ಕಿಚ್ಚಿಗದು ಕಾರಣವು||
ಬಲಶಾಲಿಗಳೊಡನಾಡಿ ಧೀಶಕ್ತಿ ನೀಗಳಿಸು|
ಛಲದಿಂದ ಬಲಗಳಿಸಿ ಮೇಲೇರು ಮೂಢ||


ರಾಷ್ಟ್ರ ರಾಷ್ಟ್ರದ ನಡುವೆ ರಾಜ್ಯ ರಾಜ್ಯದ ನಡುವೆ
ಗ್ರಾಮ ಗ್ರಾಮದ ನಡುವೆ ಜಾತಿ ಜಾತಿಯ ನಡುವೆ||
ಮನುಜ ಮನುಜರನಡುವೆ ಧಗಧಗಿಸುವ ದ್ವೇಷದ|
ಮೂಲ ಕ್ರೋಧಾಗ್ನಿಯಲ್ಲದೆ ಮತ್ತೇನು ಮೂಢ||
***************
-ಕವಿನಾಗರಾಜ್.

Sunday, December 19, 2010

ಬಲಿವೈಶ್ವದೇವ ಯಜ್ಞ - ಈ ನನ್ನ ಅಭಿಪ್ರಾಯ ಸರಿಯೇ?

ಶ್ರೀ ಸುಧಾಕರ ಶರ್ಮರಿಗೆ  ಮತ್ತು ಶ್ರೀ ಶ್ರೀಧರ್ ರವರಿಗೆ  ನಮಸ್ಕಾರಗಳು.
ನನ್ನ ಒಂದೆರಡು ಪ್ರಶ್ನೆಗಳು: 
ಬಲಿವೈಶ್ವದೇವ ಯಜ್ಞ

1.   ಈಗಿನ ಯಾಂತ್ರಿಕ ಯುಗದಲ್ಲಿ ನೀವು ಹೇಳಿದಂತೆ ಸಮಾಧಾನವಾಗಿ ಟಿವಿ ನೋಡದೆ, ಪೇಪರ್ ಓದದೆ, ಇನ್ನೊಬ್ಬರ ಜೊತೆ ಮಾತಾಡದೆ ಊಟ ಮಾಡುವುದು ಕಷ್ಟ.  ಅದರಲ್ಲೂ ನಾವು ಹೊರಗೆ ಹೋಟೆಲ್ ಮುಂತಾದ ಕಡೆಗಳಲ್ಲಿ ತಿನ್ನುವಾಗ ನಿಂತುಕೊಂಡೆ ತಿನ್ನಬೇಕಾಗುತ್ತದೆ. ಅದೂ ಮಸಾಲೆದೋಸೆ ಇತ್ಯಾದಿ,.....,  ಹಾಗೆ ತಿನ್ನುವಾಗ (ಅಂದರೆ ಒಂದೆರಡು ಅನ್ನದ ಅಗಳು ತಿನ್ನುವ ಬದಲು),  " ಪ್ರಾಣಾಯ ಸ್ವಾಹ....................... " ಮಂತ್ರ ಹೇಳಿಕೊಂಡು ತಿಂದಾಗ  ಏನಾದರೂ  ತೊಂದರೆಯಾಗುತ್ತದೆಯೇ?

2. ಹಿಂದೆ ವೇದಗಳ ಕಾಲದಲ್ಲಿ ಆಹಾರ, ನೀರು, ಗಾಳಿ ಇತ್ಯಾದಿಗಳು ಕಲಬೆರಿಕೆಯಾಗಿರಲಿಲ್ಲ, ಹಾಗಾಗಿ ಅವರು ತಿನ್ನುವ ಆಹಾರವನ್ನು 'ಪ್ರಾಣಾಯ ಸ್ವಾಹ..................' ಎಂದು ತಿನ್ನುತ್ತಿದ್ದರು, ಆದರೆ ಈಗ  ನಾವು ತಿನ್ನುವ ಆಹಾರ, ನೀರು, ಗಾಳಿ ಇತ್ಯಾದಿಗಳು ವಿಷಮಯವಾಗಿದೆ, ಹಾಗಾಗಿ ನಾವು 'ಪ್ರಾಣಾಯ ಸ್ವಾಹ..........' ಎಂದಾಗ  ಅದರಿಂದ ಏನಾದರೂ Negative effect   ಇದೆಯೇ? (ಅಂದರೆ ನನ್ನ ಆಭಿಪ್ರಾಯ "ಹಿಂದೆ ವೇದಗಳ ಕಾಲದಲ್ಲಿ ಜನರು ತಾವು 'ಪ್ರಾಣಾಯಸ್ವಾಹ...... 'ಹೇಳಿ  ಸೇವಿಸಿದ 'ಶುದ್ಧ' ಆಹಾರ ಅಮೃತವಾಗುತ್ತಿತ್ತು, ಈಗ ನಾವು ತಿನ್ನುವ 'ಕಲಬೆರಿಕೆ' ಆಹಾರದಲ್ಲಿ ವಿಷ ತುಂಬಿರುವುದರಿಂದ ಈ 'ಪ್ರಾಣಾಯಸ್ವಾಹ........ ' ಹೇಳದೆ ಇದ್ದರೆ,  ಶರೀರ ವಿಷವನ್ನು ಸಾಧ್ಯವಾದಷ್ಟು ಹೊರಗೆ ಕಳುಹಿಸುತ್ತದೆ, ಈ ಮಂತ್ರ ಹೇಳಿ ತಿಂದರೆ ಅನ್ನದಲ್ಲಿರುವ  ವಿಷ ದೇಹವನ್ನು ವ್ಯಾಪಿಸುತ್ತದೆ." ಈ ನನ್ನ ಅಭಿಪ್ರಾಯ ಸರಿಯೇ?)

ವಂದನೆಗಳೊಂದಿಗೆ
ಜಿ.ಎ.ಸ್. ಶ್ರೀನಾಥ

Saturday, December 18, 2010

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -2

     ವೇದಗಳ ಸಿದ್ಧಾಂತದ ಪ್ರಕಾರ, ಚೇತನ ಜೀವಾತ್ಮರು ವಿರಾಟ್ ಚೇತನದಿಂದ ಸರ್ವಥಾ ಬೇರೆಯಾದ ಸ್ವತಂತ್ರ ತತ್ವಗಳು. ಋಗ್ವೇದದ ಈ ಕರೆಯನ್ನು ಗಮನವಿತ್ತು ಆಲಿಸಿರಿ:-


ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವಂತಂ ಯದನಸ್ಥಾ ಬಿಭರ್ತಿ|
ಭೂಮ್ಯಾ ಅಸುರಸೃಗಾತ್ಮಾ ಕ್ವ ಸ್ವಿತ್
ಕೋ ವಿದ್ವಾಂಸಮುಪ ಗಾತ್ ಪ್ರಷ್ಟುಮೇತತ್|| (ಋಕ್. ೧.೧೬೪.೪)


     [ಯತ್ ಅನಸ್ಥಾ] ಮೂಳೆಗಳಿಲ್ಲದ ಯಾವ ಚೇತನನು [ಅಸ್ಥನ್ವಂತಮ್] ಮೂಳೆಗಳಿಂದ ಕೂಡಿದ ದೇಹವನ್ನು [ಬಿಭರ್ತಿ] ಧರಿಸುತ್ತಾನೋ [ಜಾಯಮಾನಂ ಪ್ರಥಮಮ್] ಜನ್ಮವೆತ್ತುವ ಆ ಶ್ರೇಷ್ಠ ಅಸ್ತಿತ್ವವನ್ನು [ಕೋ ದದರ್ಶ] ಯಾವನು ನೋಡುತ್ತಾನೆ? [ಭೂಮ್ಯಾ] ಭೌತಿಕ ಜಗತ್ತಿನಿಂದ [ಅಸುಃ ಅಸೃಕ್] ಪ್ರಾಣ-ರಕ್ತ-ಮಾಂಸಗಳೇನೋ ಹುಟ್ಟುತ್ತವೆ. [ಆತ್ಮಾ ಕ್ವ ಸ್ವಿತ್] ಆತ್ಮನು ಎಲ್ಲಿಂದ ಬರುತ್ತಾನೆ? [ಏತತ್ ಪ್ರಷ್ಟುಮ್] ಇದನ್ನು ಕೇಳಲು [ಕಃ] ಯಾವನು [ವಿದ್ವಾಂಸಂ ಉಪಗಾತ್] ವಿದ್ವಾಂಸನ ಬಳಿಗೆ ಹೋಗುತ್ತಾನೆ?
ಈ ಜಿಜ್ಞಾಸೆಗೆ ಪ್ರೇರಣೆ ನೀಡಿ ಆಮೇಲೆ ವೇದಗಳು ಮಾರ್ಗದರ್ಶನ ಮಾಡುತ್ತವೆ.


ಅಯಂ ಹೋತಾ ಪ್ರಥಮಃ ಪಶ್ಯತೇಮಮಿದಂ ಜ್ಯೋತಿರಮೃತಂ ಮರ್ತ್ಯೇಷು|
ಅಯಂ ಸ ಜಜ್ಞೇ ಧ್ರುವ ಆ ನಿಷತ್ತೋ ಮರ್ತ್ಯಸ್ತನ್ವಾ ವರ್ಧಮಾನಃ|| (ಋಕ್. ೬.೯.೪)


    [ಅಯಂ] ಈ ಜೀವಾತ್ಮನು [ಪ್ರಥಮಃ ಹೋತಾ] ಮೊದಲನೆಯ ಆದಾನ-ಪ್ರದಾನಕರ್ತನು. [ಇಮಂ ಪಶ್ಯತ] ಇವನನ್ನು ನೋಡಿರಿ. [ಮರ್ತ್ಯೇಷು] ಮೃತ್ಯುವಿಗೀಡಾಗುವ ಭೌತಿಕ ಶರೀರದಗಳಲ್ಲಿ [ಇದಂ ಅಮೃತಂ ಜ್ಯೋತಿಃ] ಇದು ಅಮರ ಜ್ಯೋತಿಯಾಗಿದೆ. [ಅಯಂ] ಇವನು [ಸ ಧೃವಃ] ಆ ಶಾಶ್ವತನಾದ ಆತ್ಮನು. [ಅಮರ್ತ್ಯಃ] ಅಮರನಾದ ಆ ಆತ್ಮನು [ಆ ನಿಷತ್ತಃ] ಜಗತ್ತಿನಲ್ಲಿ ಕುಳಿತು [ತನ್ವಾ ವರ್ಧಮಾನಃ] ದೇಹದಿಂದ ವೃದ್ಧಿ ಹೊಂದುತ್ತಾ [ಜಜ್ಞೇ] ಪ್ರಕಟನಾಗುತ್ತಾನೆ.
     ಪರಿಚ್ಛಿನ್ನ ಚೇತನನಾದ ಜೀವಾತ್ಮನು ಶರೀರದ ಭಾಗವಲ್ಲ. ಅದರಿಂದ ಸರ್ವಥಾ ಭಿನ್ನನು. ಆತ್ಮ ಚೇತನ, ದೇಹ ಜಡ. ಆತ್ಮ ಅಮರ, ದೇಹ ಮರಣಕ್ಕೀಡಾಗುವ ವಸ್ತು. ಶರೀರದಲ್ಲಿ ಪಂಚ ಜ್ಞಾನೇಂದ್ರಿಯಗಳು, ನಾಲ್ಕು ಅಂತಃಕರಣಗಳು ಹೋತೃಗಳಾಗಿವೆ, ಕೊಡುವ ತೆಗೆದುಕೊಳ್ಳುವ ಅಂಗಗಳಾಗಿವೆ. ಆದರೆ ಅವೆಲ್ಲಾ ಎಷ್ಟೇ ಚೆನ್ನಾಗಿದ್ದರೂ ಪ್ರಥಮ ಹೋತೃವಾದ, ಮೊದಲನೆಯ ಆದಾತೃ-ಪ್ರದಾತೃವಾದ ಆತ್ಮನಿಲ್ಲದಿದ್ದರೆ, ಶರೀರ ಆರಿಹೋದ ದೀಪದಂತೆ ಅಪ್ರಯೋಜಕ, ನಗರದಿಂದ ಹೊರಸಾಗಿಸಲರ್ಹವಾದ ಶವ ಮಾತ್ರ. ಆತ್ಮನು ಶರೀರದಲ್ಲಿ ಪ್ರವಿಷ್ಟನಾಗುವುದು ಪ್ರಭುವಿನ ಆದೇಶದಂತೆ ಉತ್ಕರ್ಷ ಸಾಧಿಸುವುದಕ್ಕೆ. ಕೇವಲ ತಿನ್ನುವುದಕ್ಕೆ, ಕುಡಿಯುವುದಕ್ಕಲ್ಲ.

Friday, December 17, 2010

ಯೋಚಿಸಲೊ೦ದಿಷ್ಟು...೨೧

೧.ಪ್ರೀತಿಯ ಮು೦ದೆ ತಪ್ಪುಗಳು ನಗಣ್ಯವಾಗುತ್ತವೆ!
೨. ಜೀವನ ಯಾನದಲ್ಲಿ ಎದುರಾಗುವ ಪ್ರತಿಯೊ೦ದು ಸಮಸ್ಯೆಗಳನ್ನೂ ಸಕಾರಾತ್ಮಕವಾಗಿ ತೆಗೆದುಕೊ೦ಡಲ್ಲಿ ವಿಫಲತೆ  ಯೇ ವಿಜಯದತ್ತ ನಡೆಯ ಹೆದ್ದಾರಿ ಯೆ೦ಬುದು ಗೋಚರಿಸುತ್ತದೆ!
೩. ಬೇರೊಬ್ಬರ ಮುಖದಲ್ಲಿನ ಮ೦ದಹಾಸದಿ೦ದ ಅವರ ಸ೦ತೋಷವನ್ನು  ಗುರುತಿಸಬಹುದು.. ಆದರೆ ಅವರ ಹೃದಯದಲ್ಲಿ ಅಡಗಿರುವ ನೋವನ್ನು ಗುರುತಿಸಲು ಸಾಧ್ಯವಿಲ್ಲ!
೪. ಕಾಲ ಮತ್ತು ಪ್ರೀತಿ ಯ ಮು೦ದೆ ಮನುಷ್ಯ ಯಾವಾಗಲೂ ಸೋಲುತ್ತಾನೆ!!
೫. ಪ್ರತಿಯೊ೦ದು ಸೋಲಿನಿ೦ದ ನಿರಾಸೆಯನ್ನೇ ಅನುಭವಿಸುತ್ತಿದ್ದರೂ ಸೋಲನ್ನು ಒಪ್ಪಿಕೊಳ್ಳದೇ ಆಶಾವಾದಿಗಳಾಗಿಯೇ,ನಮ್ಮ ಸಾಧನೆಯ ಹಾದಿಯನ್ನು ಪರಾಮರ್ಶಿಸುತ್ತ, ಸರಿಪಡಿಸಿಕೊಳ್ಳುತ್ತಲೇ ಸಾಗೋಣ! ವಿಜಯದ ಶಿಖರ ಸನಿಹವಾಗತೊಡಗುತ್ತದೆ!
೬. ಕನಸುಇದ್ದಲ್ಲಿ ಅದನ್ನು ನನಸಾಗಿಸುವ ಯೋಜನೆಯು, ತುಡಿತ ವಿದ್ದಲ್ಲಿ ಅನುಸರಣೆಯ ಹಾದಿಯು ಇದ್ದೇ ಇರುತ್ತದೆ… ಇವೆರಡೂ ಇದ್ದಲ್ಲಿ ವಿಜಯವೆ೦ಬುದು ನಮ್ಮ ಕೈಗೆಟಕುವ ಸನಿಹದಲ್ಲಿರುತ್ತದೆ!
೭. ಪ್ರತಿಯೊಬ್ಬ ಸಾಧಕನ  ಸಾಧನೆಯ ಹಿ೦ದೆಯೂ ಅವನಲ್ಲಿನ ಸಕಾರಾತ್ಮಕ ಮನೋಭಾವದ ಪಾತ್ರ ವಿದ್ದೇ ಇರುತ್ತದೆ!
೮. ನಮ್ಮ ಆತ್ಮೀಯರು ನಮ್ಮ  ಮೇಲೆ ತೋರಿಸಬಹುದಾದ ಮಮತೆಯನ್ನು ಕಡೆಗಣಿಸುತ್ತಾ ಬ೦ದಲ್ಲಿ ನಾವೊ೦ದು ದಿನ  ಮಮತೆ ಹಾಗೂ ಆತ್ಮೀಯರು ಎರಡನ್ನೂ ಕಳೆದುಕೊಳ್ಳಬೇಕಾಗಬಹುದು!
೯. ಸುತ್ತಿಗೆಯು ಗಾಜನ್ನು ಪುಡಿಗೊಳಿಸಿದರೆ, ಕಬ್ಬಿಣವನ್ನು ಗಟ್ಟಿಯಾಗಿಸುತ್ತದೆ! ಹಾಗೆಯೇ ಸಮಸ್ಯೆಯೆ೦ಬುದೂ ಒ೦ದು ಸುತ್ತಿಗೆಯ೦ತೆ.. ಅದರ ಹೊಡೆತಕ್ಕೆ ಗಾಜಾಗಬೇಕೋ ಅಥವಾ ಕಬ್ಬಿಣವಾಗಬೇಕೋ ಎ೦ಬುದರ ನಿರ್ಧಾರ ಮಾತ್ರ ನಮಗೆ ಬಿಟ್ಟದ್ದು!!
೧೦. ನಮ್ಮಿ೦ದ ಬೇರೆಯವರು ನೋವನ್ನನುಭವಿಸಿದಾಗ ಅದಕ್ಕಾಗಿ ಕ್ಷಮೆಯಾಚಿಸುವುದರಲ್ಲಿ ನಾವೇ ಮೊದಲಿಗರಾಗೋಣ! ಅ೦ತೆಯೇ ನಿಜವಾಗಿಯೂ ಪಶ್ಚಾತಾಪಪಟ್ಟು ನಮ್ಮಲ್ಲಿ ಕ್ಷಮೆಯನ್ನು ಕೇಳುವವರ ತಪ್ಪನ್ನು ಕ್ಷಮಿಸುವ ಮೊದಲಿಗರೂ ನಾವೇ ಆಗೋಣ.
೧೧. ನಮ್ಮನ್ನು ಕಾಯುತ್ತಿರುವವರಿಗೆ ಬೇರೆ ಯಾವುದೇ ಕಾರ್ಯವಿಲ್ಲವೆ೦ದು ತುಚ್ಛೀಕರಿಸುವ ಬದಲು, ನಮಗಿ೦ತ ಬೇರೆ ಯಾವುದೇ ಕಾರ್ಯವೂ ಅವರಿಗೆ ಮುಖ್ಯವಲ್ಲ ಎ೦ಬುದನ್ನು ಗಮನಿಸೋಣ!
೧೨. ನಮ್ಮ ನೋವು ಇನ್ನೊಬ್ಬರಿಗೆ ನಗುವ ವಿಷಯವಾದಾಗ ಚಿ೦ತಿಸದಿದ್ದರೂ..  ನಮ್ಮ ನಗುವು ಮತ್ತೊಬ್ಬರ ನೋವಿಗೆ ಕಾರಣವಾದಲ್ಲಿ ಮಾತ್ರ ಚಿ೦ತಿಸಲೇಬೇಕಾಗುತ್ತದೆ!!
೧೩. ಸ೦ಶೋಧಕನಿಗೆ ಸ೦ಶೋಧನೆಯಲ್ಲಿ ತೊಡಗಿಕೊಳ್ಳುವಲ್ಲಿನ ಖುಷಿ, ಯುಧ್ಧದಲ್ಲಿ ತೊಡಗಿದಾಗಲೂ ದೊರೆಯಲಾರದು!
೧೪. ಪ್ರೀತಿ ಮತ್ತು ಆತ್ಮೀಯತೆಗಳು ಬದುಕಲು ದಾರಿ ಮಾಡಿಕೊಟ್ಟ೦ತೆಯೇ ಬದುಕಿನಿ೦ದ ನಿರ್ಗಮಿಸಲೂ ಹಾದಿ ಮಾಡಿಕೊಡುತ್ತವೆ!!
೧೫. ಏಕಾ೦ತತೆಯನ್ನು ನಾವೇ ಆರಿಸಿಕೊ೦ಡಲ್ಲಿ ಅದರಲ್ಲಿ ಸಿಗುವ ಸ೦ತಸ ಮತ್ಯಾವುದರಲ್ಲಿಯೂ ಸಿಗಲಾರದು! ಆದರೆ ಅದೇ ಅನಿವಾರ್ಯವಾದಾಗ ಮಾತ್ರ ಅದು ನೀಡುವ ನೋವನ್ನು ಅನುಭವಿಸಲಾಗದು!!

Tuesday, December 14, 2010

ಮೂಢ ಉವಾಚ -15


ಕೆಂಡ ಕಾರುವ ಕಣ್ಣು ಗಂಟಿಕ್ಕಿದಾ ಹುಬ್ಬು|
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು||
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ|
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||


ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ|
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ||
ತಡೆಯಬಂದವರನೆ ತೊಡೆಯಲುದ್ಯುಕ್ತ|
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||


ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ|
ಕೋಪದಿಂದಲೆ ನಾಶ ಕೋಪದಿಂದಲೆ ಭಯವು||
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ|
ಕೋಪಿಷ್ಠರವರು ಪಾಪಿಷ್ಠರೋ ಮೂಢ||

ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ|
ಮಾತಿಲ್ಲ ಕತೆಯಿಲ್ಲ ನಗುವು ಮೊದಲೇ ಇಲ್ಲ||
ಕೋಪಿಷ್ಠರಾ ಮನೆಯು ಸೂತಕದ ಅಂಗಣವು|
ಕೋಪವದು ನರಕದ್ವಾರವೋ ಮೂಢ||
*****************
-ಕವಿನಾಗರಾಜ್.

ನಿಮ್ಮ ಅಭಿಪ್ರಾಯಗಳನ್ನು ಬರೆಯಲು ಇಲ್ಲಿ ಚಿಟುಕಿಸಿ

ವೇದಸುಧೆಯ ಸಹೃದಯೀ ಅಭಿಮಾನಿಗಳೇ,
ಇದು ನಿಮ್ಮ ಪುಟ.ಇಲ್ಲಿ  ಮೂಡುವ ನಿಮ್ಮ ಅಭಿಪ್ರಾಯಗಳನ್ನು/ಸಲಹೆಗಳನ್ನು ಸ್ವೀಕರಿಸಿ ಪ್ರಮುಖ ಬರಹವಾಗಿ ಪ್ರಕಟಿಸಲಾಗುವದು. ನೀವು ಮಾಡಬೇಕಾದ್ದಿಷ್ಟೆ. ನಿಮ್ಮ ಸಲಹಗಳನ್ನು ಪ್ರತಿಕ್ರಿಯೆ ಕಾಲಮ್ ನಲ್ಲಿ ಬರೆಯಿರಿ.

ದೇವರು: ಹೀಗೊಂದು `ಶೂನ್ಯ ನೋಟ'!

 ಶ್ರೀಯುತ ಹೆಚ್.ಎಸ್.ಪ್ರಭಾಕರರು ದಾವಣಗೆರೆಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿದ್ದಾರೆ.ಹಾಸನದಲ್ಲಿ ಅವರ ಕುಟುಂಬವಿದೆ.ವೇದಸುಧೆ ಬಳಗದ ಒಬ್ಬ ಸನ್ಮಿತ್ರರು.ಸದಾಕಾಲವೂ ವೃತ್ತಿಯ ಕಾರ್ಯ ಒತ್ತಡದ ಮಧ್ಯೆಯೂ ವೇದಸುಧೆಯನ್ನು ಓದುವ ಶ್ರೀಯುತರು ವೇದಸುಧೆಯಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.
---------------------------------------------------------------------

ಸನ್ಮಾನ್ಯ ಸುಧಾಕರ ಶರ್ಮರು ಎತ್ತಿರುವ ಚರ್ಚೆ- `ಭಗವಂತನ ಆಕಾರ- ನಿರಾಕಾರ: ಒಂದು ಜಿಜ್ಞಾಸೆ' ಕುರಿತು ನನಗಿರುವ ಸೀಮಿತ ಜ್ಞಾನದ ಪರಿಧಿಯಲ್ಲಿ ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೇನೆ. ಈ ನನ್ನ ಬರಹವನ್ನು ಪ್ರತಿಕ್ರಿಯೆ ಎಂದಾದರೂ ಸ್ವೀಕರಿಸಿ; ಅಥವಾ ಪ್ರತ್ಯೇಕ ಲೇಖನ ಎಂದಾದರೂ ಪರಾಂಬರಿಸಿ; ಚಿಂತೆಯಿಲ್ಲ! ಅದಕ್ಕೂ ಮುನ್ನ ನಿಮ್ಮೆಲ್ಲರಲ್ಲೂ ಇರುವ ಆ `ಪರಮಾತ್ಮ'ನ ಸಹಿತವಾಗಿ ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು.
`ದೇವರು ಸರ್ವ ವ್ಯಾಪಿ ಎನ್ನುವವರು ಚಿತ್ರ, ಆಕಾರ ಸ್ವೀಕರಿಸುವಂತಿಲ್ಲ; ರೂಪ, ಆಕಾರ ಸ್ವೀಕರಿಸುವವರು ದೇವರು ಎಲ್ಲ ಕಡೆಯೂ ಇದ್ದಾನೆ ಎನ್ನುವಂತಿಲ್ಲ' ಎಂಬ ಶರ್ಮಾಜಿಯವರ ವಿಶ್ಲೇಷಣೆಯನ್ನು ನಾನು ಮನೋವೈಜ್ಞಾನಿಕ ವಿಧಾನದಲ್ಲಿ ವ್ಯಾಖ್ಯಾನಿಸಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ.
ಸದ್ಯಕ್ಕೆ ದೇವರ ವಿಚಾರ ಬದಿಗಿಟ್ಟು ಕೇವಲ `ಆಕಾರ-ನಿರಾಕಾರ' ವಿಷಯಗಳತ್ತ ಗಮನ ಹರಿಸೋಣ. ಮಾನವನ ಇಂದ್ರಿಯಗಳು ಹಾಗೂ ಮನಸ್ಸಿನ ಕಾರ್ಯ ವಿಧಾನ ಹೇಗಿದೆ? ಕಣ್ಣು, ಕಿವಿಗಳು ರವಾನಿಸುವ `ಸಿದ್ಧ ಮಾದರಿ' ಸಂವೇದನೆಗಳ ಫಲಿತಾಂಶವನ್ನು ನಮ್ಮ ಸ್ಮೃತಿ ಪಟಲ ಸೆರೆ ಹಿಡಿದ ನಂತರ, ಮೆದುಳಿನ ಆಯಾ ಭಾಗಗಳು ಆ ಮಾದರಿಗಳನ್ನು `ತಿಳಿಸಿಕೊಡುವುದು' ಚಿತ್ರ ಅಥವಾ ಆಕಾರದ ಮೂಲಕ ಮಾತ್ರ. ಉದಾಹರಣೆಗೆ, `ಪುಸ್ತಕ' ಎಂದಾಕ್ಷಣ ನಮ್ಮಸ್ಮೃತಿ ಪಟಲದ ಮೇಲೆ ಪುಸ್ತಕದ ಚಿತ್ರವೊಂದು ಮೂಡುವುದೇ ಹೊರತು; ಪುಸ್ತಕ ಓದಿದ `ಅನುಭವ' ಮೂಡುವುದಿಲ್ಲ. ಹಿಂದೆ ಒಮ್ಮೆ ನೀವು ಕಂಡುದ್ದನ್ನು, ಕೇಳಿದ್ದನ್ನು, ಓದಿದ್ದನ್ನು ನೆನಪಿಸಿಕೊಂಡರೆ ಅದು `ಸ್ಮರಣೆ' (ಅದೂ ಕೂಡಾ ದೃಶ್ಯದ ಮೂಲಕವೇ) ಆಗುತ್ತದೆ ಅಷ್ಟೆ. ನಾವು ಕೃತಿಯೊಂದನ್ನು ಓದುವಾಗಲೂ ಸಹ ನಮ್ಮ ಮೆದುಳು ``ಓದುವುದು'' ಚಿತ್ರ-ಆಕಾರಗಳ ಮೂಲಕವೇ! ನಾವು ಕಣ್ಣು ಮುಚ್ಚಿ ಮಲಗಿರುವಾಗಲೂ ಸಹ ಕನಸು ``ಕಾಣುವುದು'' ಚಿತ್ರ ಅಥವಾ ದೃಶ್ಯದ ಮೂಲಕವೇ. ಪರಿಚಿತ ಶಬ್ದವೊಂದನ್ನು ಕಿವಿಯಿಂದ ಕೇಳಿದಾಗಲೂ ಸಹ ಆ ಧ್ವನಿಗೆ ಸಂಬಂಧಿಸಿದ ವಸ್ತು ಅಥವಾ ವ್ಯಕ್ತಿಯ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ ಅಲ್ಲವೆ? ಒಟ್ಟಾರೆ ಹೊರ ಜಗತ್ತಿನ ಯಾವುದೇ ಆಗುಹೋಗುಗಳನ್ನು ನಮ್ಮ ಕಣ್ಣು-ಕಿವಿಗಳ ಮಾರ್ಗವಾಗಿ ಮೆದುಳು `ಓದುವುದು' ಆಕಾರ ಆಥವಾ ಚಿತ್ರಗಳ ಮೂಲಕವೇ ಹೊರತು ತಕ್ಷಣದ ಅನುಭವದಿಂದಲ್ಲ. ಹಿಂದಿನ ಆಥವಾ ಈಗಿನ ಅನುಭವದ ಆಧಾರದ ಮೇಲೆ ಬರೀ ಪರಿಣಾಮವಷ್ಟೇ ನಮ್ಮ ಮೇಲಾಗುವುದು ಅದರ `ಸ್ಮರಣೆ'ಯಿಂದ ಮಾತ್ರ (ಸ್ಮರಿಸಿಕೊಂಡಾಕ್ಷಣ ಮೈ ನವಿರೇಳುವುದು; ಭಯದಿಂದ ಕಂಪಿಸುವುದು ಇತ್ಯಾದಿ).
ಇಂದ್ರಿಯಗಳ ಈ ವೈಜ್ಞಾನಿಕ ಕಾರ್ಯ ವಿಧಾನದ ಹಿನ್ನೆಲೆಯಲ್ಲಿ ಈಗ `ದೇವರ ಆಕಾರ'ದ ವಿಚಾರಕ್ಕೆ ಬರೋಣ. ಪ್ರಸ್ತುತ ವಿಗ್ರಹಾರಾಧನೆ ಅಥವಾ ಫೋಟೋಗಳ ಮೂಲಕ ಇದೀಗ ಭಗವಂತನನ್ನು ಸಾಮಾನ್ಯ ಜನ `ಅರ್ಥೈಸಿಕೊಳ್ಳುತ್ತಿರುವುದೂ' ಸಹ ಇದೇ ವಿಧಾನದಿಂದಲೇ ಅಲ್ಲವೆ? ದೇವರು ಎಂದಾಕ್ಷಣ ಯಾವುದೋ ದೇವರ ವಿಗ್ರಹ ಅಥವಾ ವಿವಿಧ ಆಕರ್ಷಕ ವೇಷ ಭೂಷಣ ತೊಟ್ಟ `ವ್ಯಕ್ತಿ'ಯೊಬ್ಬನ ಚಿತ್ರ ನಮ್ಮ ಮನಸ್ಸಲ್ಲಿ ಮೂಡುತ್ತದೆ; ಅಂತಹ ``ಪೂರ್ವ ನಿರ್ಧಾರಿತವಾದ ನಿರ್ಧಿಷ್ಟ ಆಕಾರ'' ಕಂಡಾಕ್ಷಣ ಮನಸ್ಸಿನಲ್ಲಿ `ಭಕ್ತಿ' ಮೂಡುವುದಾದರೆ ಅದು ನಂತರದ ಮಾನಸಿಕ ಪ್ರಕ್ರಿಯೆಯಾಗುತ್ತದೆ!

`ಒಳಗಿನಿಂದ ಹೊರನೋಟ':
ಇಂತಹ ಇಂದ್ರಿಯಾಧಾರಿತ `ಆಕಾರ'ದ ಸೀಮಿತ ಚೌಕಟ್ಟಿನಲ್ಲೇ ನಾವು ದೇವರನ್ನು `ಅರಿಯಲು' ಸಾಧ್ಯವಿಲ್ಲವೆ? ನಮ್ಮ ಚಿಂತನೆಯ ವೈಶಾಲ್ಯತೆಯನ್ನು ಬ್ರಹ್ಮಾಂಡದಷ್ಟು ವಿಸ್ತರಿಸಿಕೊಂಡಾಗ ಮಾತ್ರ ಅದು ಸಾಧ್ಯವಾದೀತೇನೋ! `ಸೀಮಿತ'ವನ್ನು `ಸೀಮಾತೀತ' ಮಾಡಿ ನೋಡೋಣ. ಉದಾ: `ದೇವರ ಫೋಟೋ ತೂಗು ಹಾಕಿದ ಮೊಳೆಯಲ್ಲಿ ಮತ್ತು ಆ ಮೊಳೆಯನ್ನು ಹಿಡಿದಿಟ್ಟಿರುವ ಗೋಡೆಯಲ್ಲಿ ಎಷ್ಟು ಮಂದಿ ದೇವರನ್ನು ಕಂಡಿದ್ದಾರೆ?'. ಶರ್ಮಾಜಿಯವರ ಈ ಪ್ರಾಮಾಣಿಕ ಪ್ರಶ್ನೆಯನ್ನೇ ಇನ್ನಷ್ಟು ವಿಸ್ತರಿಸೋಣ. ದೇವರ ಫೋಟೋ ತೂಗುಹಾಕಲು ಮೊಳೆ ಹೊಡೆಸಿಕೊಂಡ ಅಂತಹ ಕೋಟ್ಯಾಂತರ ಗೋಡೆಗಳನ್ನು ಭದ್ರವಾಗಿ ಎತ್ತಿ ಹಿಡಿದಿರುವ ವಿಶಾಲವಾದ ಗುಂಡನೆಯ ಒಂದೇ ಭೂಮಿ; ಕಲ್ಪನೆಗೂ ನಿಲುಕದಷ್ಟು ವಿಶಾಲವಾದ ಬಾಹ್ಯಾಕಾಶದ ಅಂಧಕಾರದ ಯಾವುದೋ ಮೂಲೆಯಲ್ಲಿ `ಒಂದು ಹಿಡಿತಕ್ಕೆ' ಸಿಕ್ಕಿ ತೇಲುತ್ತಾ ತಿರುಗುತ್ತಿರುವ ಆ ಭೂಮಿ; ಅದನ್ನು `ಹಿಡಿದಿಟ್ಟುಕೊಂಡಿರುವ' ಗುರುತ್ವಾಕರ್ಷಣ ಶಕ್ತಿ (ಇದು ಮಾತ್ರ ನಿರಾಕಾರ-ಚಿಂತೆಯಿಲ್ಲ); ಅಂತಹ ಶಕ್ತಿಯ ಪ್ರಭಾವ-ಪರಿಣಾಮದಿಂದ ಭೂಮಿಯೂ ಸೇರಿದಂತೆ ಇರುವ ಅನೇಕ ಗ್ರಹ, ನಕ್ಷತ್ರ, ಕ್ಷುದ್ರ ಕಾಯಗಳನ್ನು ಒಳಗೊಂಡ ಅಪರಿಮಿತವಾದ ಬ್ರಹ್ಮಾಂಡ-ಈ ಎಲ್ಲ `ಆಕಾರ'ಗಳಲ್ಲೂ ನಾವು ದೇವರನ್ನು ಕಾಣಬೇಕು. ಈ ಇಡೀ `ಬ್ರಹ್ಮಾಂಡ ಆಕಾರ' ವ್ಯವಸ್ಥೆಯ ಸೂತ್ರಧಾರ ಯಾರು? ಈ ಬ್ರಹ್ಮಾಂಡ ವ್ಯವಸ್ಥೆಯ `ಗುರುತ್ವ ಶಕ್ತಿ'ಯಲ್ಲಿ ಏನೇ ಕೊಂಚ ಎಡವಟ್ಟಾದರೂ (ಗೋಡೆಗಳು, ಮೊಳೆಗಳು, ಅದಕ್ಕೆ ತೂಗುಬಿದ್ದ ಫೋಟೋಗಳ ಕಥೆ ಹಾಗಿರಲಿ...) ನಮ್ಮ ಭೂಮಿ ಹಾಗೂ ಅದರಲ್ಲಿನ ನಾವಾದರೂ ಬದುಕುಳಿಯಲು ಸಾಧ್ಯವೆ? ಈ ವೈಶಾಲ್ಯತೆಯ ಅರಿವಾದಾಗಲಷ್ಟೇ ನಮಗೆ `....ಸಹಸ್ರ ಶೀರ್ಷ; ಸಹಸ್ರ ಪಾಥ್...' ಎಂಬ ಪುರುಷ ಸೂಕ್ತದ ಮಂತ್ರದ ಅರ್ಥ ಅನುಭವಕ್ಕೆ ಬಂದೀತು!
ನಾನು ಹೇಳುವುದಿಷ್ಟೆ: ದೇವರನ್ನು ಆಕಾರದ ಮೂಲಕ ನೋಡಬಯಸುವವರು ಯಕಶ್ಚಿತ್ ಫೋಟೋ ಅಥವಾ ವ್ಯಕ್ತಿಯ ಆಕಾರ ಕಲ್ಪಿಸಿಕೊಳ್ಳುವುದನ್ನು ಬಿಟ್ಟು, `ದೇವರು' ಎಂದಾಕ್ಷಣ ಅಪರಿಮಿತ ಬ್ರಹ್ಮಾಂಡದ ಚಿತ್ರವನ್ನು ತಕ್ಷಣ ತಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು ಪ್ರಜ್ಞಾವಂತಿಕೆಯ ಲಕ್ಷಣವಾಗುತ್ತದೆ. ಇದು ಬಾಹ್ಯಾಕಾಶದ ವಿಚಾರವಾಯಿತು.
ಅದೆಲ್ಲ ಬೇಡ ಎನ್ನುವುದಾದರೆ ನಮ್ಮ ಮಟ್ಟಿಗೆ ವಿಶಾಲವಾಗಿರುವ ಈ ಭೂಮಿಯಲ್ಲೇ `ಕಾಣುವ', `ಕೇಳುವ', `ಅನುಭವಿಸುವ' ಯಾವುದೇ ವಸ್ತು, ಪ್ರಾಣಿ, ಪಕ್ಷಿ, ಲಕ್ಷಾಂತರ ಜೀವ ವೈವಿಧ್ಯತೆ ಇತ್ಯಾದಿ ಅಥವಾ ಎದುರಾದ ವ್ಯಕ್ತಿಗಳಲ್ಲಿ ಮತ್ತು `ಆಕಾರ'ಗಳಲ್ಲಿನ ಸತ್-ಚಿತ್ ಸ್ವರೂಪಗಳನ್ನೇ `ದೇವರು' ಎಂದು ಭಾವಿಸಬಹುದಲ್ಲವೆ? (ಇಲ್ಲಿ ನನಗೆ ಶ್ರೀಶಂಕರರು ಹಾಗೂ ಚಾಂಡಾಲನ ಪ್ರಸಂಗ ನೆನಪಾಗುತ್ತಿದೆ) ಅಂತಹ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡು ಹಾಗೆಯೇ ನಾವು ನಡೆದುಕೊಂಡಾಗ ಜೀವನ ವಿಧಾನ ಹಾಗೂ ದೇವರ ಬಗೆಗಿನ ನಮ್ಮ ಇಡೀ ನಡವಳಿಕೆಯೇ ಬದಲಾಗುತ್ತದೆ! ನಮ್ಮ ಆತ್ಮದ ಮೇಲೆ ಅದರಿಂದ ಆಗುವ ಅಗಾಧ ಹಾಗೂ ಅದ್ಭುತ ಪರಿಣಾಮದಿಂದ ನಮ್ಮ ಆತ್ಮೋದ್ಧಾರವೂ ಆದೀತು!

`ಹೊರಗಿನಿಂದ ಒಳ ನೋಟ':
ಈವರೆಗೆ ಹೇಳಿದ್ದೆಲ್ಲ `ಒಳಗಿನಿಂದ ಹೊರನೋಟ' ಎನಿಸಿತು. `ಈ ಹೊರ ನೋಟವೆಲ್ಲ ಬೇಡ; ನಾವು ಇದ್ದಲ್ಲೇ ಇರುತ್ತೇವೆ' ಎನ್ನುವುದಾದರೆ, ಈಗ `ಹೊರಗಿನಿಂದ ಒಳ ನೋಟ' ಎಂಬ ಕಾಲ್ಪನಿಕವಾದ ಉಲ್ಟಾ ದೃಶ್ಯವೊಂದನ್ನು ನೋಡೋಣ! ಇದನ್ನು `ಇನ್ನರ್ ಸ್ಪೇಸ್' ಎಂದೇ ನಾನು ಕರೆಯುತ್ತೇನೆ; ಆ ಹೆಸರಿನ ಆಂಗ್ಲ ಚಲನ ಚಿತ್ರವೂ ಇದೆ. ನೀವೂ ಸಹ ಆ `ಆಕಾರ' ನೋಡಲು ಸಿದ್ಧರಾಗಿ!!
ನಮ್ಮ ಕಣ್ಣು, ಕಿವಿ ಸೇರಿದಂತೆ ಇಂದ್ರಿಯಗಳೆಲ್ಲ ಕೇವಲ ಬಾಹ್ಯ ಪ್ರಪಂಚ ನೋಡುವ ಕಿಟಕಿಗಳೆಂದು ನಿಮಗೂ ಗೊತ್ತು. ಸ್ವಲ್ಪ ಕಾಲ ಈ `ಕಿಟಕಿ'ಗಳನ್ನೆಲ್ಲ ಮುಚ್ಚಿ. ಕಣ್ಣು ಗುಡ್ಡೆ (ಗೋಲಿ)ಗಳನ್ನು ಅವು ಇದ್ದಲ್ಲಿಯೇ ಸರಕ್ಕನೆ ಸಂಪೂರ್ಣ ಹಿಂದಕ್ಕೆ ತಿರುಗಿಸಿ; ಹೊರಗಿವಿಯ ಆಲಿಕೆಗಳೂ ಸಹ ಒಳಭಾಗಕ್ಕೆ ಸರಿಯಲಿ; ಮೂಗು ನಾಲಿಗೆಗಳೂ ಒಳಮುಖವಾಗಿ ಚಾಚಲಿ. ಈಗ ಎಲ್ಲ ಇಂದ್ರಿಯಗಳನ್ನೂ ಒಮ್ಮೆಗೇ ತೆರೆಯಿರಿ. ಅಬ್ಬಾ! ಅದೆಷ್ಟು ಭಯಾನಕ ಕೆಂಪು ಬಣ್ಣದ ವಿಶಾಲ ರಕ್ತ ಪ್ರಪಂಚ!! ಅದೇನು ಭಯಂಕರ ಸದ್ದು... (ಕಿವಿ ಹೊರಗಿದ್ದಾಗಲೇ ಒಂದು ತೊಟ್ಟು ನೀರು ಕಿವಿಯೊಳಗೆ ಕುಳಿತರೂ `ಭರ್ ಭರ್' ಎಂದು ದೊಡ್ಡ ಸದ್ದು ಕೇಳುತ್ತಿದ್ದುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ) ಈಗ ರಕ್ತ ನದಿಯು ಭೋರ್ಗರೆಯುತ್ತಾ ಸಂಚರಿಸುತ್ತಿರುವ ಶಬ್ದ ಕೇಳುತ್ತಿದೆ. ನೀವು ಮಾಂಸಾಹಾರಿಗಳಾಗಿದ್ದಲ್ಲಿ ಈಗ ಸಿಕ್ಕಿರುವ ಅವಕಾಶದಲ್ಲೇ ನಿಮ್ಮ ಮೂಗು-ನಾಲಿಗೆಗಳಿಗೂ `ಕೆಲಸ ಕೊಡಿ'; ಬೇಡವೆಂದವರಾರು!
ಮಿಸುಕಾಡುತ್ತಿರುವ ನರ ನಾಡಿ. ಅವಯವಗಳ ನಡುವೆಯೇ ನಿಮ್ಮ ಕಣ್ಣು ನೇರವಾಗಿ ನಿಮ್ಮ ಮೆದುಳಿನ ಹಿಂಭಾಗವನ್ನು ವೀಕ್ಷಿಸುತ್ತಿದೆಯಲ್ಲವೆ? ದೃಷ್ಟಿಯನ್ನು ಮೇಲ್ಭಾಗಕ್ಕೆ ಸರಿಸಲಂತೂ ಸಾಧ್ಯವಿಲ್ಲ. ಏಕೆಂದರೆ ನಿಮ್ಮ ಕಣ್ಣ ಗುಡ್ಡೆಗಳ ಮೇಲ್ಭಾಗದಲ್ಲೇ ರಕ್ತದಲ್ಲಿ ಒದ್ದೆಯಾದ ಮೆದುಳಿನ ಮುಂಭಾಗ ದೊಡ್ಡ ಬಂಡೆಯಂತೆ ಚಾಚಿಕೊಂಡು ಅಡ್ಡ ನಿಂತಿದೆ. ಹೀಗಾಗಿ ಬೇಡ ಬಿಡಿ; ಹಾಗೆಯೇ ದೃಷ್ಟಿಯನ್ನು ಕೆಳಕ್ಕೆ ಸರಿಸಿ ನೋಡಿ. ಎಲುಬಿನ ಗೂಡಿನೊಳಗೆ ನಿಮ್ಮ ಪುಪ್ಪಸ (ಶ್ವಾಸ ಕೋಶ)ದಲ್ಲಿನ ಎಲ್ಲ ಕೋಶಗಳೂ ಕಮ್ಮಾರನ ತಿದಿಯೊತ್ತುವ ಕೆಲಸ ಮಾಡುತ್ತಿವೆಯಲ್ಲವೆ? ಅದರ ಹಿಂಭಾಗ ನೋಡಿ; ಲಬ್ ಡಬ್ ಎಂದು ಒಂದೇ ಸಮನೆ ಬಡಿಯುತ್ತಾ `ರಕ್ತದೋಕುಳಿ' ಆಡುತ್ತಿರುವ ಹೃದಯ ಕಾಣುತ್ತದೆ. ಜೋಕೆ ನಿಮ್ಮ ಕಿವಿಯ ತಮಟೆ ಒಡೆದುಹೋದೀತು! ಅದರ ಕೆಳಗೆ ಸಣ್ಣ ಕರುಳು, ದೊಡ್ಡ ಕರುಳುಗಳು, ಯಕೃತ್, ಪಿತ್ಥ ಜನಕಾಂಗ, ಮಾಂಸ ಖಂಡಗಳೆಲ್ಲ ಸಮರ್ಪಕವಾಗಿವೆಯೆ? ಅಗೋ! ಅಲ್ಲಿ ಜನನೇಂದ್ರಿಯದ ಕೆಳಗೆ `ಒಳ ಕೋಣೆ'ಯೊಂದಿದೆ; ಅಲ್ಲಿ ಗಾಢಾಂಧಕಾರವಿದೆ; ಹುಷಾರಾಗಿ ಕಣ್ಣು ಕೀಲಿಸಿ ನೋಡಿದರೂ ಅಲ್ಲಿರಬಹುದಾದ ವೀರ್ಯದಲ್ಲಿನ `ವಂಶವಾಹಿನಿ'ಗಳು...ಅರೆರೆ! ಏನು ಮಾಡಿದರೂ ಕಾಣುತ್ತಿಲ್ಲವಲ್ಲಾ? ಹೋಗಲಿ ಬಿಡಿ! ಈ `ಮೂಳೆ ಮಾಂಸದ ತಡಿಕೆ'ಯ ಆಂತರಿಕ ಆಕಾಶದಲ್ಲಿನ ನೀರು, ಗಾಳಿ, ಮಣ್ಣು, ಆಕಾಶ, ಬೆಂಕಿಯ ಕಾವಿನ ಒತ್ತಡ ನಿಮ್ಮ ಇಂದ್ರಿಯಗಳಿಗೆ ಅಸಹನೀಯ ಎನಿಸುತ್ತಿರಬೇಕು.
ಎಲ್ಲವನ್ನೂ ಒಂದಕ್ಕೊಂದು ಗಂಟು ಹಾಕಿ ಸಾಲಾಗಿ ಹಗ್ಗದಂತೆ ಎಳೆದುಕೊಂಡು ಸಾಗಿದರೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇಡೀ ದೇಶವನ್ನು 4 ಬಾರಿ ಸುತ್ತಿ ಬರುವಷ್ಟು ನರ ನಾಡಿಗಳ ಜಾಲವನ್ನೆಲ್ಲ `ನೋಡುವಷ್ಟು' ಈ ಕಣ್ಣುಗಳು ಶಕ್ತವಾಗಿಲ್ಲ; ಬಿಟ್ಟು ಬಿಡಿ!! ಈ ನಿಗೂಢ ಆಂತರಿಕ ಆಕಾಶದಲ್ಲಿ ಹೆಚ್ಚು ಹೊತ್ತು ಇರಲು ಸಾಧ್ಯವಿಲ್ಲ. ಈಗ ನಿಮ್ಮ ಇಂದ್ರಿಯಗಳನ್ನೆಲ್ಲ ಹೊರಗೆ ಎಳೆದುಕೊಂಡು ಯಥಾಪ್ರಕಾರ ಬಾಹ್ಯ ಪ್ರಪಂಚದ ಕಿಟಕಿಗಳನ್ನಾಗಿ ನಿಲ್ಲಿಸಿಕೊಳ್ಳಿ. ಈಗ ಕೆಳಗೆ ಕುಳಿತು ದಣಿವಾರಿಸುತ್ತಾ ಚಿಂತಿಸಿ. ಹೇಗಿತ್ತು `ಹೊರಗಿನಿಂದ ಒಳನೋಟ'!? ಯಾವ ಉಸಾಬರಿ ಇಲ್ಲದೆ ತಮ್ಮ ಪಾಡಿಗೆ ತಾವು ಕೆಲಸ ಮಾಡುವ ಈ ಆಂತರಿಕ ಆಕಾಶದಲ್ಲಿನ ಅನೈಚ್ಛಿಕ ಅಂಗಾಂಗಳೆಲ್ಲವೂ `ಆಕಾರ'ಗಳೇ! ಇವುಗಳ ಕಾರ್ಯ ವಿಧಾನದಲ್ಲಿ ಕೊಂಚ ಎಡವಟ್ಟಾದರೂ ನಮಗೆ ಈ ಪ್ರಪಂಚವೇ `ಶೂನ್ಯ'ವಾಗುವುದಲ್ಲವೆ? `ಕಾಣುವ ಕಣ್ಣು'ಗಳಿದ್ದಲ್ಲಿ ಈ ಆಕಾರಗಳಲ್ಲೇ ದೇವರನ್ನು ಕಾಣಲು ಸಾಧ್ಯ.

ನಿರಾಕಾರ ಶೂನ್ಯ:
ಇನ್ನು `ನಿರಾಕಾರ'ದ ವಿಷಯಕ್ಕೆ ಬರೋಣ. ಮೇಲೆ ಕೈಬಿಟ್ಟಿದ್ದ ಉಳಿದ ಇಂದ್ರಿಯಗಳಾದ ವಾಸನೆ (ಮೂಗು), ರುಚಿ (ನಾಲಿಗೆ) ಮತ್ತು ಸ್ಪರ್ಶ (ಚರ್ಮ)ಗಳು ಇಲ್ಲಿ ಕೆಲಸಕ್ಕೆ ಬರುತ್ತವೆ. ಇವೆಲ್ಲ `ಅನುಭವ'ಕ್ಕೆ ಸೀಮಿತವಾದುವು. ದೇವರನ್ನು ನಾವು ನಿರಾಕಾರವಾಗಿ ಇಲ್ಲಿ ಅನುಭವಿಸಲು ಅವಕಾಶವಿದೆ. ಉದಾ: ಮೆಣಸಿನಕಾಯಿ ಎಂದಾಕ್ಷಣ ಮನಸ್ಸಿನಲ್ಲಿ ಅದರ ಚಿತ್ರ ಮೂಡಬಹುದೇ ಹೊರತು ಮತ್ತಾವ ಪರಿಣಾಮವೂ ಸಾಧ್ಯವಿಲ್ಲ. ಅದರ ವಾಸನೆ ಅಥವಾ ಘಾಟಿನ ಪ್ರಮಾಣ ತಿಳಿಯಬೇಕೆಂದರೆ ಅದನ್ನು ಮೂಗಿನ ಬಳಿ ಹಿಡಿಯಬೇಕು; ರುಚಿ ಅನುಭವಿಸಬೇಕೆಂದರೆ ಅದನ್ನು ನಾಲಿಗೆಯ ಮೇಲೆ ಘರ್ಷಿಸುತ್ತಾ ತಿನ್ನಬೇಕು. ಅದೇ ರೀತಿ ವಿದ್ಯುತ್ ಎಂದಾಕ್ಷಣ ನಮಗೇನೂ ಕರೆಂಟ್ ಹೊಡೆಯುವುದಿಲ್ಲ. ಅಬ್ಬಬ್ಬಾ ಎಂದರೆ ಫ್ಯೂಜು, ವೈರುಗಳ ಚಿತ್ರಣ ನಮ್ಮ ಮನಸ್ಸಿನಲ್ಲಿ ಮೂಡಬಹುದಷ್ಟೆ. ನಿಜವಾಗಿಯೂ ವಿದ್ಯುತ್ ಸ್ಪರ್ಶವಾದಾಗಲಷ್ಟೇ ನಮಗೆ ಅದರ ತೀವ್ರತೆಯ ಅನುಭವವಾದೀತು.
ಈಗ ಹೇಳಿ: ಈ ಗುರುತ್ವಾಕರ್ಷಣ ಶಕ್ತಿ, ವಾಸನೆ, ರುಚಿ, ವಿದ್ಯುತ್ ಅಥವಾ ಶಬ್ದ ತರಂಗಗಳು, ಗಾಳಿ, ನಮಗಾಗುವ ವಿಧ ವಿಧವಾದ ನೋವುಗಳು; ಜೀವ ವೈವಿಧ್ಯತೆಯಲ್ಲಿನ ಇನ್ನೂ ಅದೆಷ್ಟೋ ಆಂತರಿಕ `ನಿರಾಕಾರ' ವ್ಯವಸ್ಥೆ-ವ್ಯವಹಾರಗಳು ಇತ್ಯಾದಿಗಳೆಲ್ಲ ನಮ್ಮ ಕಣ್ಣಿಗೆ ಕಾಣುವ ಯಾವ `ಆಕಾರ'ವನ್ನು ಹೊಂದಿಲ್ಲ. ಈ ವ್ಯವಸ್ಥಿತ ನಿರಾಕಾರ ಸ್ವರೂಪಗಳಲ್ಲೇ ನಾವು ದೇವರನ್ನು ಕಾಣಬಹುದು.
ಒಮ್ಮೆ ಶಿಷ್ಯ ವಿವೇಕಾನಂದರು ಆರಂಭದಲ್ಲಿ ಅವರ ಗುರು ರಾಮಕೃಷ್ಣ ಪರಮಹಂಸರಲ್ಲಿ ಹೋಗಿ, `ನೀವು ದೇವರನ್ನು ಕಂಡಿದ್ದೀರಂತಲ್ಲ; ನನಗೂ ಒಮ್ಮೆ ತೋರಿಸಲು ಸಾಧ್ಯವೇ?' ಎಂದು ಪ್ರಶ್ನಿಸಿದರಂತೆ. ಆಗ ಪರಮಹಂಸರು ವಿವೇಕಾನಂದರ ಕೆನ್ನೆಗೆ ಛಟೀರನೆ ಬಾರಿಸಿದಂತೆ. ಕಪಾಳ ಸವರಿಕೊಳ್ಳುತ್ತಾ ತಲೆ ತಗ್ಗಿಸಿ ನಿಂತ ವಿವೇಕಾನಂದರನ್ನು ಉದ್ದೇಶಿಸಿ ನೋವಾಯಿತೇ ಎಂದು ಕೇಳಿದರಂತೆ; ವಿವೇಕಾನಂದರು ಹೌದು ಎಂದು ತಲೆಯಾಡಿಸಿದಾಗ ಪರಮಹಂಸರು `ಎಲ್ಲಿ; ನಿನಗಾದ ನೋವನ್ನು ತೋರಿಸು ನೋಡೋಣ' ಎಂದಾಗ `ನೋವನ್ನು ತೋರಿಸಲು ಹೇಗೆ ಸಾಧ್ಯ; ಅದನ್ನು ಅನುಭವಿಸಬೇಕಷ್ಟೇ' ಎಂದರಂತೆ; ಆಗ ಪರಮಹಂಸರು `ದೇವರನ್ನು ಸಹ ತೋರಿಸಲು ಸಾಧ್ಯವಿಲ್ಲ; ಅದನ್ನು ಅನುಭವಿಸಿ ಅರಿಯಬೇಕಷ್ಟೆ' ಎಂದರಂತೆ! ಈ ಒಂದು ದೃಷ್ಟಾಂತದಿಂದಲೇ ನಾವು ನಿರಾಕಾರನಾದ ಆ ದೇವರನ್ನು ಅನುಭವಿಸಿ ಅರಿಯಬೇಕಷ್ಟೆ ಎಂದು ತಿಳಿಯಬಹುದು.
ಆದರೆ ದೇವರ `ಆಕಾರ-ನಿರಾಕಾರ-ಅರಿವಿನ' ಕುರಿತ ಜಿಜ್ಞಾಸೆಗಳೆಲ್ಲ ನಾವು ನೀವು ಅಂದುಕೊಂಡಷ್ಟು ಸುಲಭ ಸಾಧ್ಯ ಸಂಗತಿಗಳಲ್ಲ ಎಂಬುದು ನನ್ನ ಅಭಿಮತ. ನನ್ನ ದೃಷ್ಟಿಯಲ್ಲಿ ದೇವರು ಎಂದರೆ ಅದೊಂದು `ಪರಮಾತ್ಮ ತತ್ವ'. ಒಟ್ಟಾರೆ ಇಡೀ ಬ್ರಹ್ಮಾಂಡದಲ್ಲಿ `ಸರ್ವಾಂತರ್ಯಾಮಿ' ಆಗಿರುವ ಪರಮ ಶೂನ್ಯವೂ ದೇವರಿರಬಹುದು. ಒಮ್ಮೆ ಯೋಚಿಸಿ ನೋಡಿ; ಅಣು ಚೇತನ ಶಕ್ತಿಗಳಾದ ನಾವುಗಳು ಆ ವಿಶ್ವ ಚೇತನ ಶಕ್ತಿಯಾದ `ಶೂನ್ಯ'ದಲ್ಲೇ ಸದಾ ವಿಹರಿಸುತ್ತಿರುತ್ತೇವೆ; ಆದರೆ ಅದು ನಮ್ಮ ಅರಿವಿಗೇ ಬರುವುದಿಲ್ಲ. ಅದು ಹೇಗೆ? ಹೌದು! ನೀವು ಕುಳಿತ, ನಿಂತ, ಮಲಗಿದ, ಸಂಚರಿಸಿದ, ವ್ಯವಹರಿಸಿದ ಜಾಗವೆಲ್ಲವೂ ಶೂನ್ಯವೇ! ಭೌತಿಕ ಕಟ್ಟಡ- ವಸ್ತು ವಿಶೇಷಗಳ ಮಧ್ಯೆಯೂ, ಎಷ್ಟೇ ಕೋಟ್ಯಾನುಕೋಟಿ ಕಿಕ್ಕಿರಿದ ಜನಗಳ ನಡುವೆಯೂ ನೀವು (ಅಥವಾ ನಿಮ್ಮ ವಾಹನ) ಅತ್ತಿತ್ತ ಹೇಗೋ ಹೊಂದಿಸಿಕೊಂಡು ಶೂನ್ಯದಲ್ಲೇ ಸಂಚರಿಸಬೇಕೇ ಹೊರತು ನಿಮಗೆ ಎದುರಾದ ಅಡೆತಡೆ ಅಥವಾ ಜನಗಳ ಮೇಲೆಯೇ ನೇರವಾಗಿ ನೀವು ಸಾಗಿ ಹೋಗಲು ಸಾಧ್ಯವಿಲ್ಲ; ತೆರದ ಬಾಗಿಲು ಎಂಬ ಶೂನ್ಯ ಪ್ರದೇಶ ಬಿಟ್ಟು ಗೋಡೆ ಎಂಬ ತಡೆಯನ್ನು ಹಾಯ್ದುಕೊಂಡೇ ನೀವು ಕೋಣೆಯ ಒಳ ಹೊಕ್ಕಲು ಸಾಧ್ಯವಿಲ್ಲ. ಶೂನ್ಯದಲ್ಲೇ ಹೋಗಬೇಕು! ಒಬ್ಬರನ್ನೊಬ್ಬರು ಪರಸ್ಪರ ಎಷ್ಟೇ ಬಿಗಿಯಾಗಿ ತಬ್ಬಿಕೊಂಡರೂ ನೀವು ತಬ್ಬಿದ ವ್ಯಕ್ತಿಯ ದೇಹವನ್ನೇ ಹಾಯ್ದು ಆಚೆ ಬರಲು ಸಾಧ್ಯವಿಲ್ಲ! ಅಪ್ಪುಗೆ ತೊರೆದು ಮತ್ತೆ ನೀವು ಶೂನ್ಯಕ್ಕೇ ಮರಳಬೇಕು. ನಿಮ್ಮ ಸಂತಾನೋತ್ಪತ್ತಿಗೆ ಕಾರಣವಾಗುವ ಎಲ್ಲ ಪ್ರಕ್ರಿಯೆಗಳು ನಡೆಯುವುದು ಸಹ ಶೂನ್ಯದಲ್ಲೇ! ಇದೆಲ್ಲವೂ ಹೌದೋ ಅಲ್ಲವೋ ಮತ್ತೊಮ್ಮೆ ಯೋಚಿಸಿ ನೋಡಿ; ಆಗ ಸರ್ವಾಂತರ್ಯಾಮಿಯಾದ `ಶೂನ್ಯ' ಅಥವಾ ಅದರೊಳಗಿರಬಹುದಾದ `ನಿರಾಕಾರ ಪರಮಾತ್ಮ ತತ್ವ'ದ ಮಹತ್ವ ನಿಮ್ಮ ಅರಿವಿಗೆ ಬಂದೇ ತೀರುತ್ತದೆ.
ಸಾಕಷ್ಟಾಯಿತು ಎಂದುಕೊಳ್ಳುತ್ತೇನೆ. ಈ ನನ್ನ ತೊದಲ್ನುಡಿಗಳಿಂದ ನಿಮಗೆ ಬೋರಾಗಿದ್ದರೆ ಕ್ಷಮಿಸಿ. ಇನ್ನು ವಿರಮಿಸುತ್ತೇನೆ. ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರಗಳು
 
-ಹೆಚ್.ಎಸ್.ಪ್ರಭಾಕರ, ದಾವಣಗೆರೆ

Monday, December 13, 2010

ವೇದಸುಧೆಯ ಅಭಿಮಾನಿಗಳಲ್ಲಿ ನಮಸ್ಕಾರಗಳು

ಶ್ರೀ ಶ್ರೀನಾಥ್  ಇವರು ಕೇಳಿದ್ದ ಪ್ರಶ್ನೆಗಳಿಗೆ ಶ್ರೀ ಸುಧಾಕರಶರ್ಮರು ನೀಡಿರುವ ಉತ್ತರವನ್ನು ಶರ್ಮರ ಪುಟದಲ್ಲಿ ಪ್ರಕಟಿಸಲಾಗಿದೆ. ಹೀಗೆಯೇ ಇಲ್ಲಿಯರೆಗೆ ಪ್ರಕಟವಾಗಿರುವ ಉಪನ್ಯಾಸಗಳಬಗ್ಗೆ ನಿಮ್ಮ ಸಂದೇಹಗಳನ್ನು ಕೇಳುವುದರಿಂದ ಹಲವರ ಸಂದೇಹಗಳು ಪರಿಹಾರವಾಗುತ್ತವೆ.ಅಲ್ಲದೆ ಇಲ್ಲಿ ನೀಡಿರುವ ಉತ್ತರಗಳನ್ನು ಒಪ್ಪಬೇಕೆಂಬ ಒತ್ತಾಯವೇನಿಲ್ಲ. ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳಲು ಅವಕಾಶಗಳು ಇದ್ದೇ ಇದೆ. ಬಾಲಪ್ರತಿಭೆ ಕುಮಾರಿ ಸಹನಾ-ಇವರ ಪ್ರತಿಭೆಯನ್ನು ಮೆಚ್ಚಿ ಆಶೀರ್ವದಿಸಿರುವ ಹಿರಿಯರಿಗೆ ಸಹನಳ ಪರವಾಗಿ ಕೃತಜ್ಞತೆಗಳು. ಬರುವ ಫೆಬ್ರವರಿ ಆರರಂದು ಹಾಸನದಲ್ಲಿ ನಡೆಯಲಿರುವ ವೇದಸುಧೆಯ ವಾರ್ಷಿಕೋತ್ಸವದಲ್ಲಿ ಇಂತಹ ಬಾಲಪ್ರತಿಭೆಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡಲುದ್ಧೇಶಿಸಲಾಗಿದೆ.
-ಶ್ರೀಧರ್
ಸಂಪಾದಕ

ಬಾಲ ಪ್ರತಿಭೆ ಕುಮಾರಿಸಹನಾ

ಪುಟಾಣಿ ಸಹನ ಹಾಡ್ತಾಳೆ ಅಂತಾ ಕೇಳಿದ್ದೆ. ಆದರೆ ಆ ಪುಟ್ಟಿಯನ್ನು ನೋಡಲು ಅವಕಾಶ ಸಿಕ್ಕಿದ್ದು ಮೊನ್ನೆ. ನನ್ನ ಮಿತ್ರ ಶ್ರೀಯುತ ರಂಗೇಗೌಡ ಮತ್ತು ಶ್ರೀ ಮತಿ ಪುಷ್ಪಲತಾ ದಂಪತಿಗಳಿಗೆ ಚಿನ್ನದಂತಾ ಇಬ್ಬರು ಮಕ್ಕಳು. ಹಿರಿಯ ಮಗ ಭರತ್ ಏಳನೆಯ ತರಗತಿಯಲ್ಲಿ ಓದುತ್ತಿದ್ದು ಜೊತೆಯಲ್ಲಿ ವೇಣುವಾದನ ಕಲಿಯುತ್ತಿದ್ದಾನೆ. ತಂಗಿಯ ಹಾಡಿಗೆ ಸೊಗಸಾಗಿ ಕೊಳಲು ನುಡಿಸುತ್ತಾನೆ.ಎರಡನೆಯ ಮಗಳು ಕು|| ಸಹನಾ. ಇವತ್ತಿನ ನಮ್ಮ ಅತಿಥಿ.ನಾಲ್ಕನೇ ತರಗತಿ ಓದುತ್ತಿರುವ ಈ ಮಗುವನ್ನು ಯಾವಾಗಿನಿಂದ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದೀಯಾ? ಎಂದರೆ ತನ್ನ ಎಲ್.ಕೆ.ಜಿ.ತರಗತಿಯಿಂದ ಎಂದು ಉತ್ತರಿಸುತ್ತಾಳೆ.ಶಾಲೆಯಲ್ಲಿ ಟಾಪರ್. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮುಗಿಸಿರುವ ಈಕೆ ಭರತನಾಟ್ಯ ಹಾಗೂ ವೀಣಾವಾದನವನ್ನೂ ಕಲಿಯುತ್ತಿದ್ದಾಳೆ.ಇಂದು ಆಕೆಯ ಮೊದಲನೆ ಕಂತನ್ನು ಕೇಳಿ.






Saturday, December 11, 2010

Rig Veda Mantra

DEVAAN DEVYATE YAGYA

---------(15/12, Rigveda)

A person who desires godliness should respect scholars. Being respectful to the knowledgeable persons is an important criteria for acquiring knowledge. One has to be humble if he desires to acquire knowledge. In real worship,we just not do ritualistic worship but we try to imbibe the qualities of the one we are worshipping.By attaining godliness one shall be blessed with happiness and growth.


ಪ್ರಶ್ನೆ-ಪರಿಹಾರ

ಶ್ರೀ ಸುಧಾಕರ ಶರ್ಮರಿಗೆ ನಮಸ್ಕಾರಗಳು.

ವೇದಸುಧೆಯಲ್ಲಿ ನಿಮ್ಮ ಉಪನ್ಯಾಸಗಳು ಚೆನ್ನಾಗಿವೆ, ನಿಮಗೂ ಹಾಗೂ ಪ್ರಕಟಿಸಿದ ಶ್ರೀಧರ್ ರವರಿಗೆ ಧನ್ಯವಾದಗಳು.

ನನಗೆ ಬಂದ ಕೆಲವು ಅನುಮಾನಗಳಿಗೆ ತಾವು ಪರಿಹರಿಸುತ್ತೀರಿ ಎನ್ನುವ ಆಶಯದೊಂದಿಗೆ ನನ್ನ ಒಂದೆರಡು ಪ್ರಶ್ನೆಗಳು:

1. ತಾವು ತಮ್ಮ ಉಪನ್ಯಾಸದಲ್ಲಿ 2೦,೦೦೦ ಕ್ಕೂ ಹೆಚ್ಚಿರುವ ವೇದಮಂತ್ರಗಳಿಗೆ amendment ಇಲ್ಲ ಅಂತ ಹೇಳಿದ್ದೀರಿ, ಹಾಗಾದರೆ ನಮಕ, ಚಮಕ, ಪುರುಷಸೂಕ್ತ ಇತ್ಯಾದಿಗಳು, ಒಂದಕ್ಕಿಂತ ಹೆಚ್ಚು ವೇದಗಳಲ್ಲಿ ಬರುತ್ತವೆ. ಅವು ಋಗ್ವೇದದಲ್ಲಿ ಬರುವ ನಮಕ, ಚಮಕ, ಪುರುಷಸೂಕ್ತಕ್ಕೂ ಯಜುರ್ವೇದದಲ್ಲಿ ಬರುವುದಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಇದು amendment ಅಲ್ಲವೇ? ಈ ವ್ಯತ್ಯಾಸಕ್ಕೆ ಕಾರಣಗಳೇನು ?

2. ನಾವು ನಮಕ, ಚಮಕ, ಪುರುಷಸೂಕ್ತ ಪಠಣ ಮಾಡುವುದಾದರೆ ಅಥವಾ ಕೇಳುವುವುದಾದರೆ ಯಾವುದನ್ನು ಕೇಳಬೇಕು?ಓದಬೇಕು? ಋಗ್ವೇದದ್ದೇ?ಯಜುರ್ವೇದದ್ದೇ ? ಇದಕ್ಕೇನಾದರು ನಿಯಮಗಳಿವೆಯೇ? ಬೆಳಿಗ್ಗೆ, ಸಾಯಂಕಾಲ ಪಠಣ ಮಾಡಬೇಕಾದರೆ ಯಾವುದನ್ನು ಅನುಸರಿಸಬೇಕು?

3. ಶುಕ್ಲ ಯಜುರ್ವೇದ ಮಾಧ್ಯಂದಿನದಲ್ಲಿ ಪುರುಷಸೂಕ್ತದಲ್ಲಿ ಸಹರ್ಸಶೀರ್ಷಾ, ಪುರುಷ ಇತ್ಯಾದಿ ಶಬ್ದಗಳಿಗೆ ಸಹಸ್ರ ಶೀರುಖಾ, ಪುರೂಖಾ ಇತ್ಯಾದಿ ಹೇಳುತ್ತಾರಲ್ಲ ಕಾರಣವೇನು? (ಇದರೊಟ್ಟಿಗೆ ಅ ಆಡಿಯೋ ಫೈಲ್ ಕಳುಹಿಸಿದ್ದೇನೆ)


-ಜಿ.ಎಸ್.ಶ್ರೀನಾಥ್
-----------------------------------------------------------
ಶ್ರೀ ಸುಧಾಕರಶರ್ಮರು ಏನು ಹೇಳುತ್ತಾರೆ, ನೋಡೋಣ.....

1. Amendmentನ ಅರ್ಥವೇನೆಂದರೆ ಈಗಿರುವುದು ಸರಿಯಿಲ್ಲ, ಆದ್ದರಿಂದ ತಿದ್ದಿ ಬರೆಯಲಾಗಿದೆ. ಆಗ ಹಳೆಯದು ಅನೂರ್ಜಿತವಾಗುತ್ತದೆ.
ಇಲ್ಲಿ ಆ ತರಹದ ತಿದ್ದುಪಡಿಗಳಿಲ್ಲ.
ಹಲವು ಸೂಕ್ತಗಳು ಒಂದಕ್ಕಿಂತ ಹೆಚ್ಚು ವೇದಗಳಲ್ಲಿ ಕಂಡುಬರುವುದುಂಟು.
ಸಾಮವೇದದಲ್ಲಿ ಸಾಕಷ್ಟು ಮಂತ್ರಗಳು ಋಗ್ವೇದದ್ದೇ ಆಗಿವೆ.
ಇದು repetition ಕೂಡ ಅಲ್ಲ!
ಕಾರಣವಿಷ್ಟೇ.
ಋಗ್ವೇದ ಜ್ಞಾನಪ್ರಧಾನ (ಕರ್ಮ, ಉಪಾಸನೆ, ವಿಜ್ಞಾನುವೂ ಇದೆ)
ಯಜುರ್ವೆದ ಕರ್ಮಪ್ರಧಾನ (ಜ್ಞಾನ, ಉಪಾಸನೆ, ವಿಜ್ಞಾನವೂ ಇದೆ)
ಸಾಮವೇದವು ಉಪಾಸನಾಪ್ರಧಾನ (ಜ್ಞಾನ, ಕರ್ಮ, ವಿಜ್ಞಾನವೂ ಇದೆ)
ಅಥರ್ವವೇದವು ವಿಜ್ಞಾನಪ್ರದಾನ (ಜ್ಞಾನ, ಕರ್ಮ, ಉಪಾಸನೆಗಳೂ ಇದೆ)
ಅದೇ ಮಂತ್ರ/ಸೂಕ್ತವು ಬೇರೆ ಬೇರೆ ವೇದಗಳಲ್ಲಿ ಕಂಡುಬಂದರೂ ಅವುಗಳ
Frame of Reference ಬೇರೆ ಬೇರೆಯೇ ಅಗಿರುತ್ತದೆ! ಅದೇ ಮಂತ್ರದ ಬೇರೆ ಬೇರೆ ಮಗ್ಗುಲಗಳನ್ನು ಕಾಣಬೇಕಾಗುತ್ತದೆ.
2. ವೇದಗಳ ಅಧ್ಯಯನಕ್ಕೆ, ಪಠಣಕ್ಕೆ ಎಲ್ಲ ಕಾಲವೂ ಸೂಕ್ತವೇ! ಧ್ವನಿಯ ರೂಪದಲ್ಲಿ ಮಾಡುವಾಗ ಬಳಿಯಿರುವ ಇತರರ ಹಿತಾಹಿತಗಳು ಗಮನದಲ್ಲಿದ್ದರೆ ಸಾಕು.
ಇನ್ನು ಓದಿ ಅರ್ಥ ತಿಳಿಯುವ ವಿಚಾರ. ನಾಲ್ಕು ವೇದಗಳೂ ಒಂದಕ್ಕೊಂದು ಶತ್ರುಗಳಲ್ಲ, ವಿರೋಧವೂ ಇಲ್ಲ. ಸ್ಮೃತಿಶಕ್ತಿ ಕಡಿಮೆಯಾದಾಗ ಅನುಕೂಲಕ್ಕಾಗಿ ಒಬ್ಬೊಬ್ಬರು ಒಂದೊಂದು ವೇದವನ್ನು ನೆನಪಿನಲ್ಲಿಟ್ಟುಕೊಳ್ಳುವ ಪದ್ಧತಿ ಬಂದಂತೆ ಕಾಣುತ್ತದೆ. ಆದರೆ, ಯಾವುದೇ ವೇದದ ಮಂತ್ರದ ಅರ್ಥವನ್ನು ತಿಳಿಯುವಾಗ ಇತರ ವೇದಗಳಲ್ಲಿರುವ ಪೂರಕ ಮಂತ್ರಗಳ ಸಹಾಯ ಬೇಕೇ ಬೇಕು. ಸರಿಯಾದ ರೀತಿಯಲ್ಲಿ ವೇದಗಳ ಅಧ್ಯಯನವನ್ನು ಮಾಡುವುದೆಂದರೆ ನಾಲ್ಕೂ ವೇದಗಳನ್ನೂ ಅಧ್ಯಯನ ಮಾಡುವುದೇ ಆಗಿದೆ.
3. ನೀವು ಕಳಿಸಿರುವ ಆಡಿಯೋ ಕ್ಲಿಪ್ ಕೇಳಿದೆ. ಬಹುಷಃ ಉತ್ತರಭಾರತದ ವೇದಪಾಠಿಗಳು ಹೇಳಿದಂತೆ ಕಾಣುತ್ತದೆ. ಚಾರಿತ್ರಿಕ ಕಾರಣಗಳಿಂದಾಗಿ (ಮೇಲಿಂದ ಮೇಲಿಂದ ವಿದೇಶೀಯರ ಆಕ್ರಮಣ, ದಬ್ಬಾಳಿಕೆ)ಸ್ವರಶುದ್ಧತೆ, ಭಾಷಾಶುದ್ಧತೆಗಳನ್ನು ನಿರಿಕ್ಷಿಸುವಂತಿಲ್ಲ. ಈ ವಿಚಾರದಲ್ಲಿ ದಾಕ್ಷಿಣಾತ್ಯರ ಸ್ವರ, ಉಚ್ಚಾರಣೆಗಳೇ ಅನುಕರಣೀಯ.
ಇನ್ನು ಸಾಮಗಾನ ಮಾಡುವಾಗ, ಭಾವಾಭಿವ್ಯಕ್ತಿಯೇ ಪ್ರಧಾನವಾದ್ದರಿಂದ ಅಲ್ಲಿಯ ಸ್ವರವ್ಯವಸ್ಥೆಯೇ ಬೇರೆ ರೀತಿಯಲ್ಲಿರುತ್ತದೆ. ಕೆಲವೊಮ್ಮೆ ಪದ, ಅಕ್ಷರಗಳನ್ನು ಎಳೆದು, ಬಿಡಿಸಿ ಹಾಡುವುದುಂಟು.
ಏನೇ ಆದರೂ ಶೀರ್ಷಾ ಎಂಬುದು ಶೀರುಖಾ ಎಂಬಷ್ಟು ವ್ಯತ್ಯಾಸವಾಗುವುದು ಸರಿಯಿಲ್ಲ. (ಇದು ನನ್ನ ಅಭಿಪ್ರಾಯ - ಏಕೆಂದರೆ, Ultimately ಅರ್ಥವು ನಮಗೆ ಬೇಕಾಗುವುದರಿಂದ ಅದು Distort ಆಗುತ್ತದೆ)
ಅಷ್ಟೊಂದು ಉಚ್ಚಾರಣೆಯ ವ್ಯತ್ಯಾಸಕ್ಕೆ, ಅರ್ಥವ್ಯತ್ಯಾಸವಾಗದಂತೆ, ಯಾರಾದರೂ ಸಾಧಾರವಾಗಿ ವಿವರಣೆ ಕೊಡುವುದಾದರೆ, ಪರಿಶೀಲಿಸಲು ಸಿದ್ಧನಿದ್ದೇನೆ.
-ಸುಧಾಕರ ಶರ್ಮಾ

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -2



ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿ ಷಸ್ವಜಾತೇ|
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ಯನಶ್ನನ್ನನ್ಯೋ ಅಭಿ ಚಾಕಶೀತಿ|| (ಋಕ್.೧.೧೬೪.೨೦)


     [ಸಯುಜಾ] ಸದಾ ಒಂದಿಗಿರುವ, [ಸಖಾಯಾ] ಪರಸ್ಪರ ಸ್ನೇಹಿತರಾದ ಅಥವಾ ಆತ್ಮ ಎಂಬ ಸಮಾನಖ್ಯಾನವನ್ನು ಹೆಸರಾಗುಳ್ಳ [ದ್ವಾ ಸುಪರ್ಣಾ] ಎರಡು ಸುಂದರವಾದ ರೆಕ್ಕೆಗಳನ್ನುಳ್ಳ ಪಕ್ಷಿಗಳು ಅಥವಾ ಸೊಗಸಾದ ಗತಿಯನ್ನುಳ್ಳ ಇಬ್ಬರು ಆತ್ಮರು [ಸಮಾನಂ ವೃಕ್ಷಂ] ಒಂದೇ ಮರವನ್ನು ಅಥವಾ ಕತ್ತರಿಸಲರ್ಹವಾದ ಪ್ರಾಕೃತಿಕ ಜಗತ್ತನ್ನು [ಪರಿ ಷಸ್ವಜಾತೇ] ಆಶ್ರಯಿಸಿದ್ದಾರೆ. [ತಯೋಃ ಅನ್ಯಃ] ಅವರಲ್ಲೊಬ್ಬನು, ಭೋಕ್ತ್ಯವಾದ ಜೀವಾತ್ಮನು [ಸ್ವಾದು ಪಿಪ್ಪಲಂ ಅತ್ತಿ] ಮಧುರವಾದ ಫಲವನ್ನು ಸವಿಯುತ್ತಿದ್ದಾನೆ. [ಅನ್ಯಃ] ಮತ್ತೊಬ್ಬನು [ಅನಶ್ನನ್] ಭುಂಜಿಸದೆ [ಅಭಿ ಚಾಕಶೀತಿ] ಸಾಕ್ಷಿರೂಪನಾಗಿ ವಿರಾಜಿಸುತ್ತಿದ್ದಾನೆ.
     ಇದೊಂದು ಆಕರ್ಷಕವಾದ ರೂಪಕ. ಜೀವಾತ್ಮ-ಪರಮಾತ್ಮರು ಅನಾದಿಕಾಲದಿಂದಲೂ ಒಂದಾಗಿದ್ದಾರೆ. ಪ್ರಾಕೃತಿಕ ಜಗತ್ತು ನಶ್ವರವಾದರೂ ಕೂಡ ಅಸ್ತಿತ್ವ ಹೊಂದಿದೆ. ಅಲ್ಪಜ್ಞ ಭೋಕ್ತವಾದ ಜೀವಾತ್ಮ ಪ್ರಾಕೃತಿಕ ಜಗತ್ತಿನ ಸುಖವನ್ನು ಭೋಗಿಸುತ್ತಿದ್ದಾನೆ. ಅಭೋಕ್ತವಾದ ಸರ್ವಜ್ಞ ಪರಮಾತ್ಮ ಸಾಕ್ಷಿರೂಪನಾಗಿ ರಾರಾಜಿಸುತ್ತಿದ್ದಾನೆ. ಇಲ್ಲಿ ಸ್ಪಷ್ಟವಾಗಿ ಪರಬ್ರಹ್ಮ ಪರಮಾತ್ಮನಿಂದ ಸರ್ವಥಾ ಭಿನ್ನವಾದ ಅನಾದಿ ಜೀವಾತ್ಮನ ವರ್ಣನೆಯಿದೆ. ನಶ್ವರವಾದರೂ ಮಿಥ್ಯೆಯಲ್ಲದ ಜಗತ್ತಿನ ಚಿತ್ರಣವು ಇದೆ. ಯುಕ್ತಿಯುಕ್ತವಾಗಿ ಇದನ್ನು ಖಂಡಿಸಲು ಸಾಧ್ಯವೇ ಇಲ್ಲ. ಆದರೂ ಇದು ವ್ಯಾವಹಾರಿಕ ಸತ್ಯ ಮಾತ್ರ, ಪಾರಮಾರ್ಥಿಕವಲ್ಲ ಎಂದು ಹೇಳಿ ಸುಲಭವಾಗಿ ತಳ್ಳಿಹಾಕಲು ಕೆಲವರು ಯತ್ನಿಸಿದ್ದಾರೆ. ಸ್ವತಃ ವೇದಗಳೇ ಸತ್ಯಕ್ಕೆ ವ್ಯಾವಹಾರಿಕ- ಪಾರಮಾರ್ಥಿಕ ಭೇದವನ್ನು ಕಲ್ಪಿಸದಿರುವಾಗ ಹಾಗೆ ಮಾಡಲು ಇವರಿಗೇನು ಅಧಿಕಾರವೋ?

Friday, December 10, 2010

ಮೂಢ ಉವಾಚ -14

         ಮೂಢ ಉವಾಚ -14



ತನುಮನಗಳ ತೀರದ ದಾಹವದೆ ಕಾಮ|
ದಾಹವನು ತಣಿಸಲು ಮಾಡುವುದೆ ಕರ್ಮ||
ತಣಿಯದದು ಕಾಮ ನಿಲ್ಲದದು ಕರ್ಮ|
ದೇವನಾಟವನರಿತವರಾರಿಹರೋ ಮೂಢ||


ಹಿತಕಾಮ ಮಿತಕಾಮ ವಿಕಟಕಟಕಾಮ|
ಸತ್ಕಾಮ ದುಷ್ಕಾಮ ಸುರಾಸುರರ ಕಾಮ||
ಎಂತಪ್ಪ ಜನರಿಹರೋ ಅಂತಪ್ಪ ಕಾಮ|
ನಿಷ್ಕಾಮ ಕಾಮ್ಯತೆಯೆ ಗುರಿಯಿರಲಿ ಮೂಢ||


ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು|
ಕಾಮವೆಂಬುದು ಪಾಶ ಕಾಮದಿಂದಲೆ ನಾಶ||
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ|
ಕಾಮದಿಂದಲೆ ಸಕಲ ಸಂಪದವು ಮೂಢ||


ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು|
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು||
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ|
ದಿವ್ಯಕಾಮ ರಮ್ಯ ಕಾಮ ನಿನದಲ್ತೆ ಮೂಢ||
*****************
-ಕವಿನಾಗರಾಜ್.

Science in Ancient India

ಸ್ವಲ್ಪವಾದರೂ ಸಮಯಮಾಡಿಕೊಂಡು ಕೇಳಿ, ನಮ್ಮ ಪ್ರಾಚೀನ ಭಾರತದ ವಿಜ್ಞಾನದ ಬಗ್ಗೆ ಹೆಮ್ಮೆ ಎನಿಸದೆ ಇರದು.

Tuesday, December 7, 2010

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -1


     ಇದುವರೆಗೆ ಭಗವತ್ ಸ್ವರೂಪದ ಬಗೆಗೆ ಸಾಕಾದಷ್ಟು ವಿಚಾರ ಮಥನ ಮಾಡಿಯಾಯಿತು. ವ್ಯಕ್ತಿರೂಪನಲ್ಲದ ಮತ್ತು ಕೇವಲ ಶಕ್ತಿರೂಪನಾದ ಭಗವಂತ ಈ ಅದ್ಭುತ ರಚನೆಯ ಕರ್ತೃ, ಧರ್ತೃ ಮತ್ತು ಸಂಹರ್ತೃ ಎಂಬುದನ್ನು ತಿಳಿದೆವು. ಈಗ ಪ್ರಶ್ನೆ ಉದ್ಭವಿಸುತ್ತದೆ - ಈ ವಿಶ್ವ ಬ್ರಹ್ಮಾಂಡದ ರಚನೆಯನ್ನು ಯಾರ ಸಲುವಾಗಿ ಮಾಡುತ್ತಾನೆ? ತನ್ನ ಸಲುವಾಗಿಯಂತೂ ಅಲ್ಲ. ಏಕೆಂದರೆ ಭಗವಂತ ಪರಿಪೂರ್ಣ ಮತ್ತು ಪ್ರಾಪ್ತಸರ್ವಸ್ವ. ಈ ಸೃಷ್ಟಿಯಿಂದ ಅವನಿಗೆ ಆವರೆಗೆ ಸಿಕ್ಕದಿರುವ ಯಾವುದಾದರೂ ಒಂದು ನೂತನ ವಸ್ತುವಾಗಲೀ, ಅದುವರೆಗೆ ಅನುಭವಕ್ಕೆ ಬಾರದಿರುವ ಹೊಸಬಗೆಯ ತೃಪ್ತಿ, ಸಂತೋಷ ಅಥವಾ ಆನಂದವಾಗಲಿ ಅವನಿಗೆ ಲಭಿಸುತ್ತದೆ ಎಂದು ಹೇಳುವುದು ಭಗವಂತ ಅಪೂರ್ಣ ಎಂದು ಹೇಳಿದಂತೆಯೇ ಸರಿ. ಹಾಗಾದರೆ ಯಾರ ಸಲುವಾಗಿ ಈ ರಚನೆ? ಜಡವಾದ ಪ್ರಕೃತಿಯ ಸಲುವಾಗಿಯೇ? ಹಾಗೆ ತೋರುವುದಿಲ್ಲ. ಏಕೆಂದರೆ ಜಡಪ್ರಕೃತಿ ಅಥವಾ ಪರಮಾಣುಗಳ ಸಂಘಾತ ಭೋಗ್ಯವೇ ಹೊರತು ಭೋಕ್ತ್ಯವಲ್ಲ. ಭೋಕ್ತ್ಯಭಾವ ಚೇತನದಲ್ಲಿ ಸಂಘಟಿಸುವುದೇ ಹೊರತು ಜಡದಲ್ಲಿ ಅಲ್ಲ. ಪೂರ್ಣ ತೃಪ್ತ ಹಾಗೂ ಪ್ರಾಪ್ತಸರ್ವಸ್ವನಾದ ಮಹಾನ್ ಭಗವಂತನೂ ಭೋಕ್ತ್ಯವಲ್ಲ, ಜಡ ಪ್ರಕೃತಿಯೂ ಭೋಕ್ತ್ಯವಲ್ಲ. ಹಾಗಾದರೆ, ಸರ್ವಜ್ಞನಾದ ಭಗವಂತನು ಭೋಕ್ತ್ಯವೇ ಅಲ್ಲದಿರುವಾಗ ಭೋಗ್ಯ ಜಗತ್ತನ್ನು ರಚಿಸಿದನಾದರೂ ಏಕೆ? ಭೋಕ್ತ್ಯ ಯಾವನೋ ಇದ್ದೇ ಇದ್ದಾನೆ. ಮಹಾಚೇತನನಾದ ಪರಮಾತ್ಮನೂ ಅಲ್ಲದ, ಚೇತನರಹಿತನಾದ ಜಡಪ್ರಕೃತಿಯೂ ಅಲ್ಲದ ಮತ್ತೊಬ್ಬ ಚೇತನ - ಹಾಗೆಂದರೆ ತಪ್ಪಾದೀತು - ಬಹುಸಂಖ್ಯಾತರಾದ ಅಲ್ಪಚೇತನರು ಅನಾದಿಕಾಲದಿಂದಲೂ ಇದ್ದೇ ಇದ್ದಾರೆ. ಈ ಪರಿಚ್ಛಿನ್ನ ಚೇತನರನ್ನು ಜೀವಾತ್ಮರು ಎನ್ನುತ್ತಾರೆ.

     ಕೆಲವು ಮತೀಯರು, ಚೇತನ ಜೀವಾತ್ಮರು ಅನಾದಿಗಳಲ್ಲ, ಪರಮಾತ್ಮನು ಅವರನ್ನು ಸೃಜಿಸಿದನು -ಎಂದು ತಿಳಿದಿದ್ದಾರೆ. ಈ ಬಗೆಯ ತಿಳಿವು, ವೈಜ್ಞಾನಿಕ ವಿಶ್ಲೇಷಣದ ಮುಂದೆ ಅರೆಕ್ಷಣವೂ ನಿಲ್ಲಲಾರದು. ಹಾಗೆ ಪರಮಾತ್ಮನು ಈ ಜೀವಾತ್ಮರನ್ನು ಸೃಜಿಸಿದನೆಂದಾದರೆ, ಎಲ್ಲಕ್ಕಿಂತಲೂ ಮೊದಲು ಏಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರಾಪ್ತಸರ್ವಸ್ವನಾದ ಪರಮಾತ್ಮನಿಗೆ ಬೇಕಾದುದಾದರೂ ಏನು? ಬೇಕು ಎಂಬ ಭಾವನೆ ಯಾವುದೋ ಒಂದು ಅಭಾವದ ಅನುಭವವಾಗದೆ ಉದ್ಭವಿಸಲಾರದು. ಪರಿಪೂರ್ಣನಾದ ಭಗವಂತನಿಗೆ ಯಾವುದರ, ಯಾವುದೇ ಕಾಮ್ಯತತ್ವದ ಅಭಾವವೂ ಇಲ್ಲ. ಆದುದರಿಂದ ಏಕೆ? ಎಂಬ ಪ್ರಶ್ನೆ ಏಕೋ ಹಾಗೆಯೇ ಉಳಿದುಹೋಗುತ್ತದೆ! ಎರಡನೆಯದಾಗಿ, ಅಭಾವದಿಂದ ಭಾವೋತ್ಪತ್ತಿಯಾಗಲಾರದು. ಆದುದರಿಂದ ಏನಾದರೂ ಆಗಿರಲೊಲ್ಲದೇಕೆ, ಭಗವಂತನು ಯಾವುದರಿಂದ ಜೀವಾತ್ಮರನ್ನು ಸೃಜಿಸಿದನು? - ಎಂಬ ಮತ್ತೊಂದು ಜಟಿಲ ಪ್ರಶ್ನೆ ಉದ್ಭವಿಸುತ್ತದೆ. ಪ್ರಕೃತಿಯಿಂದ - ಎನ್ನುವುದಾದರೆ, ಅದರಿಂದ ಜಡ ಶರೀರದ ಸೃಜನ ಸಾಧ್ಯವೇ ಹೊರತು, ಚೇತನನಾದ ಜೀವಾತ್ಮನ ಸೃಜನ ಎಂದೆಂದಿಗೂ ಸಂಭವವಿಲ್ಲ. ಚೇತನನಾದ ತನ್ನಿಂದಲೇ ಎನ್ನುವುದಾದರೆ, ಅಖಂಡನಾದ ಸರ್ವವ್ಯಾಪಕನಾದ ಭಗವಂತ, ಖಂಡ ಖಂಡವಾಗಿ ತನ್ನನ್ನೇ ತುಂಡರಿಸಿಕೊಳ್ಳಲು ಸಾಧ್ಯವೇ? ತನ್ನ ಎಷ್ಟು ಭಾಗವನ್ನು ಜೀವಾತ್ಮರುಗಳ ರಚನೆಗಾಗಿ ವ್ಯಯ ಮಾಡಿದನು? ಅಷ್ಟು ಭಾಗ ನಷ್ಟವಾದ ಮೇಲೂ ಅವನು ಪರಿಪೂರ್ಣನಾಗಿಯೇ ಉಳಿದನೇ? ಈ ಮೊದಲಾದ ಅರುಚಿಕರ ಮತ್ತು ಉತ್ತರ ಕೊಡಲಾಗದ ಕಹಿ ಪ್ರಶ್ನೆಗಳು ತಲೆಯೆತ್ತುತ್ತವೆ. ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ, ಏತರಿಂದ ಎಂಬ ಪ್ರಶ್ನೆಗೂ ಬುದ್ಧಿಸಂಗತವಾದ ಉತ್ತರವಿಲ್ಲ. ಈ ಪರಿಚ್ಛಿನ್ನ ಚೇತನರಾದ ಜೀವಾತ್ಮರೂ ಕೂಡ ಪರಮಾತ್ಮನಂತೆಯೇ ಅನಾದಿಗಳು, ಪರಮಾತ್ಮನ ಶಾಶ್ವತ ಪ್ರಜೆಗಳು ಎಂದೇ ಒಪ್ಪಿಕೊಳ್ಳಬೇಕಾಗುತ್ತದೆ. ಏಕೋ, ಏತರಿಂದಲೋ, ಹೇಗೋ ಪರಮಾತ್ಮ ಜೀವಾತ್ಮರನ್ನು ಸೃಜಿಸಿದನು ಎಂದು ವಾದಿತೋಷನ್ಯಾಯಕ್ಕಾಗಿ ಸ್ವಲ್ಪ ಹೊತ್ತು ಒಪ್ಪಿಕೊಂಡರೂ ಕೂಡ, ಅನಾದಿಗಳಲ್ಲದೇ ಜೀವಾತ್ಮರು ಅನಂತರೂ ಆಗಿರಲಾರರು, ಅವರು ಶೂನ್ಯವಿಲೀನರೂ ಆಗಿಹೋಗುತ್ತಾರೆ. ಈ ಪರಿಸ್ಥಿತಿಯಲ್ಲಿ ಧರ್ಮ, ಮೋಕ್ಷ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ಅಲ್ಲದೇ ನಿಷ್ಕಾರಣವಾಗಿ ಕೆಲವರನ್ನು ದುಃಖಿಗಳನ್ನಾಗಿಯೂ, ಕೆಲವರನ್ನು ಸುಖಿಗಳನ್ನಾಗಿಯೂ ಸೃಜಿಸಿದ ಪರಮಾತ್ಮ ಪಕ್ಷಪಾತಿ ಹಾಗೂ ನಿಷ್ಕರುಣ - ಎಂದು ಹೇಳಬೇಕಾಗುತ್ತದೆ. ಅಲ್ಲದೆ ಆ ಸ್ಥಿತಿಯಲ್ಲಿ ಜೀವಾತ್ಮರು ಮಾಡುವ ಪಾಪಕ್ಕೂ, ಪುಣ್ಯಕ್ಕೂ ಭಗವಂತನೇ ಹೊಣೆಯಾಗಬೇಕಾಗುತ್ತದೆ. ತಾತ್ವಿಕ ಹಾಗೂ ದಾರ್ಶನಿಕ ದೃಷ್ಟಿಯಿಂದ, ವೈಜ್ಞಾನಿಕವಾದ ಮತ್ತು ಹೇತುಸಹಿತವಾದ ವಿವೇಚನೆಯ ದೃಷ್ಟಿಯಿಂದ, ಇಂತಹ ಅಪಸಿದ್ಧಾಂತಗಳಿಗೆ ಏನೇನೂ ಬೆಲೆ ಸಿಕ್ಕುವುದಿಲ್ಲ.

     ಮತ್ತೆ ಕೆಲವರು ಜೀವಾತ್ಮ ಬೇರೆ ಯಾವ ತತ್ವವೂ ಅಲ್ಲ, ಶರೀರದಲ್ಲಿಯೇ ಹುಟ್ಟುವ ಒಂದು ಚೈತನ್ಯ ವಿಶೇಷ ಅದು. ಶರೀರದಿಂದಲೇ ಹುಟ್ಟಿ ಶರೀರದಲ್ಲಿಯೇ ಹುಟ್ಟಿ ನಾಶವಾಗುತ್ತದೆ - ಎಂದು ಭಾವಿಸುವುದೂ ಉಂಟು. ಜೀವಾತ್ಮ ಶರೀರದಲ್ಲಿಯೇ ಹುಟ್ಟುವ ಒಂದು ಶಕ್ತಿಯಾಗಿದ್ದರೆ ಶರೀರವಿರುವವರೆಗೂ ಅದಿರಲೇಬೇಕಾಗಿತ್ತು. ಆದರೆ, ನಾವು ಗಟ್ಟಿಮುಟ್ಟಾದ ಶವಗಳನ್ನೂ ನೋಡುತ್ತೇವಲ್ಲ! ಆ ಶಕ್ತಿ ಶರೀರಗಳಿಗೆ ಶವರೂಪವನ್ನಿತ್ತು ಅಡಗಿಹೋದುದೇಕೆ? ಜಡವಾದ ಶರೀರದಿಂದ ಜಡವಸ್ತುಗಳೇನೋ ಹುಟ್ಟಬಹುದು, ಚೇತನ ಉದ್ಭವಿಸುವುದು ಮೂರು ಕಾಲಕ್ಕೂ ಸಾಧ್ಯವಿಲ್ಲ. ಶರೀರದಲ್ಲಿ ಹುಟ್ಟುವ, ನೀವು ಹೇಳುವ ಆ ಚೈತನ್ಯ, ಆ ಶಕ್ತಿ, ಶರೀರದ ಗುಣವೋ, ಅಥವಾ ಬೇರೊಂದು ದ್ರವ್ಯವೋ? ಶರೀರದ ಗುಣವಾಗಿದ್ದಲ್ಲಿ ಅದು ಶರೀರವನ್ನು ಬಿಟ್ಟು ಹೋಗುವಂತಿಲ್ಲ. ಬೇರೊಂದು ದ್ರವ್ಯವಾಗಿದ್ದಲ್ಲಿ ಅದು ಶರೀರದಿಂದ ಬೇರೆಯೇ ಆದ ತತ್ತ್ವವಾಗಿರಬೇಕು. ಏಕೆಂದರೆ, ಅದು ಶರೀರದಂತೆ ಜಡ ದ್ರವ್ಯವಲ್ಲ, ಜ್ಞಾನಸಮನ್ವಿತವಾದ ಚೇತನ. ಅದು ಶರೀರದಲ್ಲಿ ಹುಟ್ಟಿದುದಲ್ಲ.. ಶರೀರದ ಮೂಲಕ ಪ್ರಕಟವಾದ, ಬೇರೆ ಎಲ್ಲಿಂದಲೋ ದೇಹಕ್ಕೆ ಬಂದು ಸೇರಿದ ಸ್ವತಂತ್ರ ಸತ್ತೆ. ಅದು ದೇಹ ಹುಟ್ಟುವ ಮುನ್ನವೂ ಇದ್ದಿತು, ಶರೀರದಲ್ಲಿ ಬಂದು ಸೇರಿತು, ಶರೀರದಿಂದ ಬೇರೆಯಾಗಿ ಹೋಯಿತು. ಹೀಗೆ ನೋಡಿದರೂ ಆ ಪರಿಚ್ಛಿನ್ನ ಚೇತನ ಅನಾದಿ-ಅನಂತವೆಂದೇ ಸಿದ್ಧವಾಗುತ್ತದೆ.

     ಇನ್ನೂ ಕೆಲವರು, ಜೀವಾತ್ಮ ಬೇರೆ ಅಲ್ಲವೇ ಅಲ್ಲ, ಅವನೂ ಬ್ರಹ್ಮವೇ. ಅಜ್ಞಾನಕ್ಕೆ ಸಿಕ್ಕಿ ಜೀವಭಾವ ಪಡೆದಿದೆ ಬ್ರಹ್ಮತತ್ವ. ಜ್ಞಾನೋದಯವಾದ ಮೆಲೆ ಮತ್ತೆ ಬ್ರಹ್ಮಭಾವ ಹೊಂದುತ್ತದೆ - ಎನ್ನುತ್ತಾರೆ. ಇದಕ್ಕಿಂತ ದುರ್ಬಲವಾದ, ತಿರುಳಿಲ್ಲದ ಸಿದ್ಧಾಂತವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅಜ್ಞಾನ ಯಾರಿಗೆ? ಸ್ವತಃ ಪ್ರಜ್ಞಾನ ಸ್ವರೂಪನಾದ ಬ್ರಹ್ಮಕ್ಕೆ? ಬ್ರಹ್ಮದ ಅಷ್ಟೂ ಭಾಗವು ಅಜ್ಞಾನಕ್ಕೆ ಸಿಕ್ಕಿ ಜೀವಭಾವ ತಳೆಯಿತೋ ಅಥವಾ ಯಾವುದಾದರೂ ಅಲ್ಪ ಭಾಗವೋ? ಸಂಪೂರ್ಣ ಬ್ರಹ್ಮಭಾವವೇ ಜೀವಭಾವ ಪಡೆಯಿತೆಂದಾದರೆ, ಈಗ ಬ್ರಹ್ಮ ಇಲ್ಲವೇ ಇಲ್ಲವೇ? ಯಾವುದಾದರೂ ಸ್ವಲ್ಪ ಭಾಗ ಎಂದರೆ ಬ್ರಹ್ಮದ ಅಖಂಡತ್ವ ಎಲ್ಲಿ ಉಳಿಯಿತು? ನಿಮ್ಮ ಸಿದ್ಧಾಂತದ ಪ್ರಕಾರ ಈವರೆಗೆ ಈ ಸೃಷ್ಟಿ ಉದ್ಭವಿಸಿ ಸುಮಾರು ಇನ್ನೂರು ಕೋಟಿ ವರ್ಷಗಳಾಗಿವೆ. ಯಾರೂ ಬ್ರಹ್ಮಭಾವ ಪಡೆದೇ ಇಲ್ಲವೇ? ಪಡೆದಿದ್ದರೆ, ಯಾವ ಕ್ಷಣದಲ್ಲಿ ಮತ್ತೆ ತಲೆಕೆಟ್ಟು ಜೀವಭಾವ ತಾಳುತ್ತಾರೋ, ಪಾಪ!

      ವಸ್ತುತಃ ಇದೊಂದು ಮಾಯಾಜಾಲ. ಅಖಂಡವಾದ ಬ್ರಹ್ಮವು ಖಂಡ ಖಂಡವಾಗುವುದು, ಪ್ರಜ್ಞಾನ ಸ್ವರೂಪ ಬ್ರಹ್ಮವು ಅಲ್ಪಜ್ಞ ಜೀವನಾಗುವುದು, ನಿರ್ವಿಕಾರವಾದ ಬ್ರಹ್ಮ ಸವಿಕಾರವಾಗುವುದು, ನಿರಾಕಾರನಾದ ಬ್ರಹ್ಮ ಜೀವಭಾವ ತಳೆದು ಶರೀರಧಾರಿಯಾಗಿ ಸಾಕಾರವಾಗಿ ಬರುವುದು, ಆನಂದಮಯವಾದ ಬ್ರಹ್ಮ ಸುಖ-ದುಃಖಗಳ ಹೊಯ್ದಾಡಕ್ಕೆ ಸಿಕ್ಕಿ ನರಳುವುದು - ಇವೆಲ್ಲಾ ಆಲೋಚನೆಗಳು ಕೂಡ ಅರ್ಹವಲ್ಲದ ಶಬ್ದಜಾಲ ಮಾತ್ರವಾಗಿದೆ. ಜೀವಾತ್ಮ ಎಂದೆಂದೂ ಬ್ರಹ್ಮವಾಗಿರಲಿಲ್ಲ, ಎಂದಿಗೂ ಬ್ರಹ್ಮವಾಗುವುದೂ ಇಲ್ಲ.



ಹೀಗೆ ಆಲೋಚಿಸಿದಾಗ, ಈ ಚೇತನ ಜೀವಾತ್ಮ ಪ್ರಕೃತಿಯ ಪರಿಣಾಮವೂ ಅಲ್ಲ, ಪರಬ್ರಹ್ಮ ಪರಮಾತ್ಮನ ವಿಕೃತ ಪರಿಣಾಮವೂ ಅಲ್ಲ. ಅದೇ ಬೇರೆ ಒಂದು ನಿತ್ಯ ಸತ್ಯವಾದ ಅನಾದಿ ತತ್ವ ಎಂದು ಒಪ್ಪಲೇಬೇಕಾಗುತ್ತದೆ.

Sunday, December 5, 2010

5.12.2010 ರಂದು ಹಾಸನದಲ್ಲಿ ಶುಭಾರಂಭಗೊಂಡ ಶ್ರೀ ರಾಮಕೃಷ್ಣ ಸೇವಾಶ್ರಮ.

ವೇದಿಕೆ

ಸ್ವಾಮಿ ಸುರೇಶಾನಂದಜಿ ಮಹಾರಾಜ್

ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್

ಭಕ್ತವೃಂದ

 ಹಾಸನದ ಎನ್.ಡಿ.ಆರ್.ಕೆ.ಬಾಲಕಿಯರ ಪ್ರೌಢಶಾಲೆಯಲ್ಲಿ ಆಶ್ರಮಕ್ಕಾಗಿ  ಶ್ರೀ ಪ್ರಸಾದ್ ಇವರು ನೀಡಿರುವ ಕೊಠಡಿಯಲ್ಲಿ ಸ್ಥಾಪಿತವಾಗಿರುವ  ಶ್ರೀ ರಾಮಕೃಷ್ಣ-ವಿವೇಕಾನಂದ ಮತ್ತು ಶಾರದಾದೇವಿ ಯವರ ಭಾವ ಚಿತ್ರ

ಸೋಲೇ ಗೆಲುವಿನ ಮೊದಲ ಮೆಟ್ಟಿಲು

ಸೋಲೇ ಗೆಲುವಿನ ಮೊದಲ ಮೆಟ್ಟಿಲು

ದಾಟುವೆನೆಂದೂ ತುಂಬಿದ ನದಿಯ
ತೀರದೆ ಕುಳಿತರೆ ದುರ್ಲಭವೇ
ಅಲ್ಪ ಸ್ವಲ್ಪವೇ ದಿನವೂ ಕಲಿಯೇ
 ಈಜಿ ದಾಟಲು ಸುಲಭವೆ

ಕಲಿಯುವ ಆಸೆ ನಿನ್ನಲಿ ಬಲಿತರೆ
 ಕಷ್ಟವೂ ಇಷ್ಟವೇ ಅನಿಸುವುದೂ
ಆಸೆಯ ನಿಗೃಹ ಬೆಳೆಸುತ ಕಲಿತರೆ
ಸಾರ್ಥಕ ಬದುಕೂ ಹನಿಸುವುದು

ಸೋಲೇ ಗೆಲುವಿನ ಮೊದಲ ಮೆಟ್ಟಿಲು
ಸಾಧಕ ಗುರಿಯನು ಮುಟ್ಟಲು
ಸತತ ಪರಿಶ್ರಮ ಸಾರ್ಥಕ ಬಟ್ಟಲು
ಯಶಸ್ಸು  ಕೀರ್ತಿಯನು ಕಟ್ಟಲು

ಕಲಿವದು ಎಂದಿಗೂ ಮುಗಿಯದ ಆಟ
ಬದುಕಿನ ಅಂತಿಮ ಘಳಿಗೆಗೂ ಪಾಠ
ದಿನದಿನ ಹೊಸತನ ಕಲಿವುದೇ ರೀತಿ
ಪ್ರಕೃತಿಯ ಅಣು ಅಣು ಕಲಿಸದೇ ನೀತಿ

ಜೀವನ ಮತ್ತು ಬದುಕು ಎರಡೂ ಒಂದೇ ಅಲ್ಲ!

ಬದುಕಿಗೂ ಮತ್ತು ಜೀವನಕ್ಕೂ ಇರುವ ವ್ಯತ್ಯಾಸವನ್ನು, ಮುಕ್ತಿಗೂ ಮತ್ತು ಅಮರತ್ವಕ್ಕೂ ಇರುವ ಅಂತರವನ್ನು ಗ್ರಹಿಸದೇ ಹೋದಾಗ ಎಲ್ಲಗೊಂದಲಗಳು, ಮನುಷ್ಯನ ಮನಸ್ಸಿನಲ್ಲಿ, ಹಾಗೂ ಮೌಢ್ಯಗಳು. ಅವುಗಳನ್ನೇ ಮಕ್ಕಳಿಗೆ ಪಾಠ ಒಪ್ಪಿಸುವುದಾಗುತ್ತದೆ. ಇಂದಿಗೂ ಬಹಳಷ್ಟು ಮಂದಿಗೆ ಬದುಕು ಮತ್ತು ಜೀವನ ಎರಡೂ ಒಂದೇ ಎಂದು ಭಾವಿಸಿದ್ದಾರೆ. ಜೀವನ ನಶ್ವರ ಎಂದು ಯಾರು ಹೇಳಿದರೋ ಅದು ಸರಿಯಲ್ಲ. ಬದುಕು ನಶ್ವರ. ಜೀವಿಸುವುದಕ್ಕಾಗಿ ನಾವು ಬದುಕುವುದಲ್ಲವೇ? ಅದ್ಯಾವಾಗ ಜೀವ ಹೋಗುತ್ತದೋ ಯಾರಿಗೂ ಗೊತ್ತಿಲ್ಲ. ಆಗ ಬದುಕು ಇರುವುದಿಲ್ಲ
.
ಜೀವ ಈ ಶರೀರವನ್ನು ತ್ಯಜಿಸಿ ಹೋಗುತ್ತದೆ. ಅದು ಪುನರ್ಜನ್ಮ ಪಡೆಯ ಬಹುದಾಗಿದೆ; ಅದೆಂದಿಗೂ ಶಾಶ್ವತ ಅಥವಾ ಅಮರ.
ಜೀವವು ಸತ್ಯ ಸುಂದರ, ಹಾಗೆಯೇ ಈ ಜೀವನವೂ ಕೂಡ. ಇಂಥ ಅಮೂಲ್ಯ ಜೀವನವನ್ನು ಅನುಭವಿಸುವುದಕ್ಕಾಗಿಯೆ ನಾವು ಧೀರ್ಘಾಯುಷಿಗಳಾಗಿ ಬದುಕಲು ಪ್ರಯತ್ನಿಸಬೇಕು.

ಶಾಶ್ವತ ಮುಕ್ತಿಗಾಗಿ ಎಂದು ಯಾರು ಹೇಳಿದರೂ ಅದು ಸರಿಯಲ್ಲ. ಮುಕ್ತಿ ಎಂಬುದು ಈ ಶರೀರದಿಂದ ಬಿಡುಗಡೆಯಷ್ಟೇ. ಅದೇ ಶಾಶ್ವತ ಹೇಗಾದೀತು!
ನಾವು ಸತ್ಯಸುಂದರವಾದ ಈ ಪ್ರಪಂಚದಲ್ಲಿ ಜೀವಿಸುತ್ತೇವೆ.( We are living in this finite world) .
ನಮ್ಮಈ ಬದುಕು ನಮಗೆ ಬಂಧುರವಾಗಲು, ಅಷ್ಟೇ ಸುಧೀರ್ಘವಾಗಲು ನಿತ್ಯವೂ ಪ್ರಯತ್ನಿಸಬೇಕು.
ಇಲ್ಲಿಂದ ಮುಕ್ತರಾಗಿ ಅಮರತ್ವವನ್ನು ಹೊಂದಬೇಕು .( from this finite to infinite). ಅಂಥ ಮಹತ್ತರವಾದ ಸದಾಶಯ ನಮ್ಮದಾಗಬೇಕಲ್ಲವೇ..

Saturday, December 4, 2010

"ಸಪ್ತಗರಿ ಸಂಪದ" ಶ್ರೀವೆಂಕಟೇಶ ಪುರಾಣಕಥೆ -(ಒಂದು ಶೋಧನೆ)

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |

ಶ್ರೀಮದ್ವೆಂಕಟನಾಥಾಯ ಶ್ರೀನಿವಾಸಾಯತೇನಮಃ ||

ಜಗತ್ತು ತ್ರಿಗುಣಾತ್ಮಕವಾಗಿದೆ. ಇಲ್ಲಿ ಮೂರು ಭಾಗ ಜಲಾವೃತವಾಗಿದೆ. ಒಂದು ಭಾಗ ಮಾತ್ರ ಭೂಮಿ. ಈ ಒಂದು ಭಾಗ ಭೂಮಿಯಲ್ಲಿ ಮೂರು ಭಾಗ ಪರಮ ಪಾಪಿಗಳೆ ತುಂಬಿದ್ದಾರೆ. ಹೌದು, ಪರಮ ಪಾಪಿಗಳಿಗೇ ಸುಭಿಕ್ಷ ಕಾಲವೆಂದರು ನಮ್ಮ ಹರಿದಾಸರು 15ನೇ ಶತಮಾನದಲ್ಲಿಯೆ. ಈಗ ಜನ ಸಂಖ್ಯೆ ಹೆಚ್ಚುತ್ತಲೇ ಇದೆ ಪರಮ ಪಾಪಿಗಳೂ ಹೆಚ್ಚುತ್ತಲೆ ಇದ್ದಾರೆ. ಹೌದು, ಮೂರು ಭಾಗ ಪರಮ ಪಾಪಿಗಳಾದರೆ, ಇನ್ನೊಂದು ಭಾಗದಲ್ಲಿ ಸಾತ್ವಿಕರು. ಈ ಸಾತ್ವಿಕರಿಂದಲೇ ಇಡೀ ಜಗತ್ತು ಅಸ್ತಿತ್ವದಲ್ಲಿರುವುದು; ಚಲನೆಯಲ್ಲಿರುವುದು. ಜಗತ್ತಿನಲ್ಲಿ ಸಾತ್ವಿಕ ಶಕ್ತಿಯೆ ಮೇಲು. ನಾವು ಯಾರ ಜೊತೆ ಬದುಕ ಬೇಕೆಂಬುದ ನಮ್ಮ ಆಯ್ಕೆಗಷ್ಟೇ ಎದಿರಾಗಿ ಬಿಡುವುದು ಒಂದು ಸವಾಲು ಅಲ್ಲವೇ...?

ತಿರುಪತಿ ತಿರುಮಲೇಶ ಸಂಪತ್ತಿನ ಸ್ವಾಮಿ, ಬಡ್ಡಿ ಕಾಸಿನವನೆಂದೇ ಭಾವಿಸುವುದಲ್ಲ. ಅವನು ಸಾತ್ವಿಕ ಸಂಪನ್ನ. ಇಡೀ ಜಗತ್ತಿಗೆ ಸಾತ್ವಿಕ ಶಕ್ತಿ ಸಾರಲೆಂದೇ ಭೂಮಿಗಿಳಿದು ಬಂದ ಭಗವಂತನವನು ಎಂಬ ಸತ್ಯ ತಿಳಿದವರೂ ಕಡಿಮೆಯೆ . ಭಕ್ತಿ ಭಾವದಿಂದ ಅವನಿಗೆ ಹರಕೆ ಕಾಣಿಕಗಳನ್ನೊಪ್ಪಿಸಿದರೆ ಸಾಕು, ತಮ್ಮ ಇಷ್ಟಾರ್ಥಗಳು ಸಿದ್ಧಿಸುವುವೆಂದು ನಂಬಿರುವ ಸಮುದಾಯ ಬಹಳ ದೊಡ್ಡದು. ಸಾಮಾನ್ಯವಾಗಿ ರಾಮಾಯಣ ,ಮಹಾಭಾರತ ಈ ಎರಡು ಮಹಾ ಪುರಾಣ ಕಥೆಗಳು ಎಲ್ಲಕಾಲಕ್ಕೂ ಸಮಕಾಲೀನ ಜೀವನ ಮೌಲ್ಯಗಳನ್ನು ಒದಗಿಸುತ್ತವೆ ಎಂಬ ಭಾವನೆಯೆ ಪ್ರಚಲಿತದಲ್ಲಿದೆ.. ಇವುಗಳನ್ನು ಹೊರತು ಪಡಿಸಿ ಬೇರೆ ಯಾವುದಾದರೂ ಪುರಾಣ ಕಥೆ ನಮ್ಮ ಬದುಕಿಗೆ ಮೌಲಿಕ ವೆನಿಸೀತೇ.... ಸಾರ್ವಕಾಲಿಕ ಸತ್ಯವನ್ನು ತೆರೆದಿಡಬಲ್ಲದೇ ಎಂಬ ಶೋಧನೆಯಲ್ಲಿ ನಾನಿದ್ದಾಗ ಮೂಡಿ ಬಂದ ಕೃತಿ “ಸಪ್ತಗಿರಿ ಸಂಪದ”. ಮಹಾಭಾರತದಷ್ಟು ವಿಸ್ತಾರವಾದ ವಿಸ್ತೃತವಾದ ಭೂಮಿಕೆಯಲ್ಲಿ ಜೀವನಮೌಲ್ಯಗಳನ್ನು ಈ ಕೃತಿ ಒದಗಿಸಲಾರದು. ಮಹಾಭಾರತದ ವಿಧುರ,ಧರ್ಮರಾಜ,ವಿಭೀಷಣ ಹಾಗೂ ರಾಮಾಯಣದ ಸಾತ್ವಿಕ ಪ್ರಭು ಶ್ರೀರಾಮಚಂದ್ರನ ಪಾತ್ರಗಳಲ್ಲಿ ಸತ್ವಗುಣದ ಹಿರಿಮೆಯನ್ನೇ ಈ ಕೃತಿಯಲ್ಲೂ ಕಾಣಬಹುದು. ಹೌದು,ಸತ್ವಗುಣಾಧಿಕ್ಯ ಹೊಂದುವುದರಿಂದಲೇ ಮನುಷ್ಯ ರಾಜೋ ಮತ್ತು ತಮೋಗುಣವನ್ನು ಹಾಗೂ ಅರಿಷಡ್ವರ್ಗಗಳನ್ನೂ ಗೆಲ್ಲಬಹುದು. ಮನುಷ್ಯ ಸಭ್ಯನಾಗಿರುವುದು, ಸಭ್ಯಗೃಹಸ್ಥನಾಗಿ ಬದುಕುವುದೇ ಮುಖ್ಯವಲ್ಲವೇ...?

1998ರಲ್ಲಿ ಪ್ರಕಟವಾದ ಈ ನನ್ನ ಪೌರಾಣಿಕ ಕೃತಿ ಸಾಕಷ್ಟು ಜನ ಮನ್ನಣೆ ಗಳಿಸಿತಾದರೂ , ತಿರುಪತಿ ಪುಣ್ಯಕ್ಷೇತ್ತ್ರದ ಗಣ್ಯರ ಗಮನಕ್ಕೆ ಇನ್ನೂ ಬಂದಿಲ್ಲ. ಈ ಪ್ರಚಾರ ಪ್ರಪಂಚದಲ್ಲಿ ನನ್ನಂಥ ಸಾಮಾನ್ಯ ಲೇಖಕನಿಗೆ ಅದು ಸಾಧ್ಯವೂ ಆಗದ ಮಾತಲ್ಲವೇ... ಈ ಬರಹಗಾರನ ಬದುಕಿನಲ್ಲೊಂದು ಮಹತ್ವದ ಕೃತಿಯಾಗಿರುವ ಈ “ಸಪ್ತಗಿರಿ ಸಂಪದ” ವನ್ನು ಅಂತರ್ಜಾಲದಲ್ಲಿ ಪೌರಾಣಿಕ ಕಥಾನಕವಾಗಿ ಬ್ಲಾಗ್ ಮಾಡ ಬಯಸಿದ್ದೇನೆ. ದಯವಿಟ್ಟು ಇದನ್ನೊಂದು ಧಾರ್ಮಿಕ ಕೃತಿಯೆಂದು ನೀವು ಖಂಡಿತ ಊಹಿಸಿದಿರಿ. ಮುಖ್ಯವಾಗಿ ಇಂದಿನ ಪೀಳಿಗೆಯ ಎಲ್ಲ ಧರ್ಮೀಯರೂ ಇಷ್ಟ ಪಡುವಂತಹ ಸಾರ್ವಕಾಲಿಕವಾದ ಸಾಮಾಜಿಕ ಮೌಲ್ಯಗಳು ಈ ಕೃತಿಯಲ್ಲಿದೆ. ಜಗತ್ತಿನಲ್ಲಿ ಸಭ್ಯನಾಗಿರುವುದು ಸಭ್ಯಗೃಹಸ್ತನಾಗಿ ಬದುಕುವುದನ್ನು ಬಿಟ್ಟರೆ ಬೇರೇನಿದೆ ಎಂದು ಹೇಳಿದರೆ ಏನೂ ಹೇಳಿದಂತಾಗದು..... ಈ ಸಪ್ತಗಿರಿ ಸಂಪದದ ಸ್ವಾರಸ್ಯ ಮತ್ತು ಸಾರವಿರುವುದೇ ಸಾತ್ವಿಕತೆ ಮತ್ತು ಸಾತ್ವಿಕ ಶಕ್ತಿ ಸಂದೇಶದಲ್ಲಿ.


ನೀವೂ ತಿರುಪತಿ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಿರಬಹುದು. ನಾನು ಮೊದಲ ಬಾರಿಗೆ ಭೇಟಿ ಕೊಟ್ಟಾಗ (1993)ಯಾಕೆ ಇಲ್ಲಿ ಜನ ತಂಡೋಪತಂಡವಾಗಿ ಬರುತ್ತಾರೆ. ತಮ್ಮ ಹರಕೆ ಕಾಣಿಕೆಗಳನ್ನೊಪ್ಸಿದ ಈ ಜನ ತಮ್ಮ ಮುಂದಿನ ಬದುಕಿಗೆ ಅದೇನನ್ನು ಕೊಂಡೊಯ್ಯುತ್ತಾರೆಂದು ತುಂಬ ತಲೆ ಕೆಡಿಸಿಕೊಂಡವನು. ಅಲ್ಲಿ ಸಿಗುವ ಮಗ್ಗಿ ಪುಸ್ತಕಗಳ ಮಾದರಿಯ ಸ್ಥಳ ಪುರಾಣ ಕಥೆಯಿಂದ ಬದುಕಿಗೆ ಭಕ್ತಿಯೊಂದನ್ನು ಹೊರುತು ಪಡಿಸಿ ಬೇರೇನನ್ನೂ ಕಾಣದವನಾಗಿ ಚಡಪಡಿಸಿದವನು. ಅಷ್ಟೇ ಅಲ್ಲ, ಜಗತ್ತಿನಲ್ಲಿ ಈ ದೇವರ ದರ್ಶನ ಮಾಡುತ್ತಿದ್ದಂತೆ ಪಾಮರರೂ ,ಪಾಪಿಗಳು, ಜ್ಞಾನಿಗಳೆಲ್ಲರೂ ಒಕ್ಕೊರಲಿನಿಂದ “ಗೋವಿಂದಾ” ಎಂದು ಕೈಮುಗಿಯುವುದೇಕೆಂದು ಚಿಂತಾಕ್ರಾಂತನಾದವನು. ಇಲ್ಲಿ ಸಹಸ್ರಾರು ಜನರು ಪ್ರತಿದಿನವೂ ದೇವರ ದರ್ಶನಕ್ಕಾಗಿ ಬರುತ್ತಿದ್ದಾರೆಂದರೆ, ಇಲ್ಲಿ ಅದೆಂಥ ಚುಂಬಕ ಶಕ್ತಿ ಇದ್ದೀತು! ಅದು ಸಾತ್ವಿಕ ಶಕ್ತಿಯೆ...?

ಭೃಗು ಮಹರ್ಷಿಯಿಂದ ಪರೀಕ್ಷೆಗೊಳಗಾದ ಶ್ರೀಹರಿ ತಾನೇ ಸಾತ್ವಿಕನೆಂದು ಶೃತ ಪಡಿಸುತ್ತಾನಲ್ಲವೇ..?, ಆ ಶ್ರೀಹರಿಯ ಸಾತ್ವಿಕ ಸಂದೇಶವು ಆ ಮೂರು ಲೋಕಗಳಿಗೆ ಮಾತ್ರ ಸೀಮಿತವೆನಿಸುತ್ತದೆ. ಆನಂತರ, ಭಕ್ತಿರಸವಷ್ಟೇ ಪ್ರಧಾನವಾಗಿಬಿಡುತ್ತದೆ. ಆದರೆ, ಇಡೀ ಜಗತ್ತಿಗೆ ಸಾತ್ವಿಕ ಸಂದೇಶವನ್ನು ಆ ಸಾತ್ವಿಕ ಶಕ್ತಿಯೇ ಮೇಲೆಂದು ಸಾರಲು ಶ್ರೀಹರಿಯು ಶ್ರೀನಿವಾಸನಾಗಿ ಧರೆಗೆ ಬಂದನೆಂಬುದನ್ನು ಪುಟಪುಟಗಳಲ್ಲಿಯೂ ನಾವು ಕಾಣಬಹುದಾಗಿದೆ. ಅದೇ ಸಾಮಾನ್ಯವಾಗಿ ಲಭ್ಯವಿರುವ ಸ್ಥಳಪುರಾಣ ಕಥೆ ಪುಸ್ತಕಗಳಲ್ಲಿ ಕಾಣಸಿಗಲಾರದು.

ಇಂದಿನ ಯುವ ಪೀಳಿಗೆಯು ಏನೆಲ್ಲವನ್ನೂ ಪ್ರಾಕ್ಟಿಕಲ್ ಲೈಫ್ ಗೆಂದೇ ಹೋಲಿಸಿನೊಡುವಂತಹ ಈ ಕಾಲಮಾನದಲ್ಲಿ ಬದುಕುತ್ತಿರುವ ಹಿರಿಯರಾದ ನಾವು, ಅವರ ಅಂತಹ ಉಪಯುಕ್ತತೆ ಏನಿದೆ ಪುರಾಣ ಕಥೆಗಳಲ್ಲಿ ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಖಂಡಿತ ಸಾಧ್ಯವಿದೆ ಎಂಬುದೇ ನಮ್ಮ ಸಾಂಸ್ಕೃತಿಕ ಹಗ್ಗಳಿಕೆಯಾಗಿದೆ.

ಶ್ರೀ ವೆಂಕಟೇಶ ಪುರಾಣವನ್ನು ಪುರಾಣ ಕಥೆಯನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ ಶೋಧನೆಗಿಳಿದಾಗ ನಮ್ಮ ಆದಿ ಋಷಿಗಳು ಎಂಥಹ ಮಹಾಜ್ಞಾನಿಗಳು. ಅವರು ಯುಗಪ್ರವರ್ತಕರು. ಪ್ರಗತಿಗಾಮಿಗಳು. ದೂರದೃಷ್ಟಿಯುಳ್ಳವರು. ಮನುಕುಲಕೆ ಮಾರ್ಗದರ್ಶಕರು. ಅವರು ತಮ್ಮ ಕೃತಿ ರಚನೆಯಲ್ಲಿ ಭಕ್ತಿಭಾವದಿಂದಲೇ, ಮಾನವೀಯ ಪ್ರೀತಿ ಪ್ರೇಮದ ಪರಿಯಲ್ಲೇ ನಮ್ಮೆಲ್ಲರ ಇಂದ್ರಿಯ ಕಲ್ಯಾಣದ ಶಿಷ್ಟ ಸಂಸ್ಕೃತಿಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವರು ಎಂಬುದು ವೇದ್ಯವಾಗುತ್ತದೆ.
ಆದ್ದರಿಂದ, ಇಂತಹ ಸ್ಥಳ ಪುರಾಣಗಳಷ್ಟೋ ಇವೆಯಲ್ಲ... ಅವೆಲ್ಲ ಕಂದಾಚಾರದ ಮೌಢ್ಯತುಂಬಿದವುಗಳಲ್ಲ. ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗ ಎನ್ನುತ್ತಾರೆ. ನಮ್ಮ ಮಹರ್ಷಿಗಳ ಪರಂಪರೆಯೇ ಅಂತಹದು. ಆ ಮಹರ್ಷಿಗಳು ತಮ್ಮ ದಾರ್ಶನಿಕ ದೃಷ್ಟಿಯಲ್ಲೇ ದೇವರ ದರ್ಶನವನ್ನೂ ಮಾಡಿಸಿರುವ ದ್ರಷ್ಟಾರರು.
ಇದೇ ಯುಗದಲ್ಲಿ ಆಗಿ ಹೋದ ಮಹಾನ್ ಯೋಗಿಗಳು, ಪ್ರಗಲ್ಭಜ್ಞಾನಿಗಳು, ದಾಸವರೇಣ್ಯರೂ ಯಾವೊಂದೂ ಫಲಾಪೇಕ್ಷೆಯಿಲ್ಲದೆಯೆ ಅವರು ಕಂಡಂಥ ದೇವರನ್ನು ನಾವು ಸ್ವತಃ ಕಾಣಲಾರವೇಕೆ? ಅನಿಸಿದಾಗ ನಾವು ವೇದಕಾಲದ ಆ ದಾರ್ಶನಿಕರ ಪ್ರಪಂಚಕ್ಕೇ ಹೋಗಬೇಕಾಗುತ್ತದೆ. ಅದು ವ್ಯಷ್ಟಿ-ಸಮಷ್ಟಿಯನ್ನು ನೈತಿಕ ಮತ್ತು ಅಧ್ಯಾತ್ಮಿಕ ಶಕ್ತಿಗಳೇ ನಿಗ್ರಹಿಸುತ್ತಿದ್ದ ಕಾಲ. ಆ ಕಾಲವನ್ನು ನಾವು ಒಳ ಹೊಕ್ಕು ನೋಡಬೇಕಾಗುತ್ತದೆ...

ಅಂತಹ ಒಂದು ಪ್ರಯತ್ನವನ್ನೊಳಗೊಂಡಿದೆ; ತಿರುಮಲೇಶನ ಸ್ಥಳ ಈ ಪುರಾಣ ಕಥೆ "ಸಪ್ತಗಿರಿ ಸಂಪದ". ಸುಮಾರು ಏಳುವರ್ಷಗಳೇ ಈ ಕೃತಿಯ ಬಗ್ಗೆ ಚಿಂತಿತನಾಗಿ ಚಿಂತನೆಗಿಳಿದವನು ನಾನು. ನಾನು ಇಲ್ಲಿ ಮಾಡಿರುವುದು ಶೋಧನೆಯೋ ಅಥವಾ ಆ ದೇವ ದೇವ ಗೋವಿಂದನ ಪ್ರೇರಣೆಯಲ್ಲಿ ಈ ಕೆಲಸ ಮಾಡಿದ್ದೇನೆಂದೇ ನನ್ನ ನಂಬಿಕೆ. ದಯವಿಟ್ಟು, ನೀವೂ ಬನ್ನಿ ಈ ವೆಂಕಟೇಶ ಪುರಾಣ ಕಥೆಯಲ್ಲೇ ಮತ್ತೊಮ್ಮೆ ಒಳ ಹೊಕ್ಕು ನೋಡಬನ್ನಿ,
ಆ ಭಗವಂತನ ಪ್ರೇರಣೆಯಿಂದ ಮೊದಲು ಕನ್ನಡದಲ್ಲಿ ಬರೆದ ಕೃತಿ "ಸಪ್ತಗಿರಿ ಸಂಪದ" 1998 ರಲ್ಲಿ ಪ್ರಕಟವಾಯಿತು (ಕೃತಿಗಳು ಲಭ್ಯವಿಲ್ಲ)

ದಯವಿಟ್ಟು ಕ್ಷಮಿಸಿಬಿಡಿ, ಖಂಡಿತ ನಾನು ಪ್ರಚಾರ ಪ್ರಿಯನಲ್ಲ.
"ಬಿನ್ನಹಕೆ ಬಾಯಿಲ್ಲವಯ್ಯ; ಅನಂತ ಅಪರಾಧ ನನ್ನಲ್ಲಿ ಇರಲಾಗಿ"
ಎಂಬ ದಾಸರ ವಾಣಿಯೂ ಏಕೋ ನೆನಪಾಗುತ್ತಿದೆಯಲ್ಲ....

ಹಾಂ, ಏಳು ವರುಷಗಳೇ ಕಳೆದರೂ ಈ ಕೃತಿ ಇನ್ನೂ ಗಣ್ಯರ ಗಮನಕ್ಕೆ ಬಂದಿಲ್ಲವೆಂದರೆ, ನಾನು ಮಾಡಿದ ಅಪರಾಧವೇನು ಎಂಬುದಾದರೂ ತಿಳಿಯಬಾರದೇ...? ಯಾಕೆಂದರೆ, ಇದೇ ಕೃತಿಯನ್ನು ಇತ್ತೀಚೆಗೆ ಇಂಗ್ಲೀಷ್ ನಲ್ಲೂ(ಸಂಪೂರ್ಣ ಉಚಿತ ಇ-ಪುಸ್ತಕ ಲಭ್ಯವಿದೆ The Message from Seven Hills) ಬರೆದು ಇನ್ನೊಂದು ಮಹಾಪರಾಧವನ್ನೇ ಮಾಡಿದೆನೇನೋ....(ನನ್ನ ಅಭಿಪ್ರಾಯದಲ್ಲಿ ಇಂಗ್ಲೀಷ್ ನಲ್ಲಿ ಇನ್ನಷ್ಟು ಮೌಲಿಕ ಅಂಶಗಳು ಮೂಡಿ ಬಂದಿದ್ದು ಅಚ್ಚರಿಯುಂಟು ಮಾಡಿದೆ; ಈಗ ಮತ್ತೊಮ್ಮೆ ಕನ್ನಡದಲ್ಲಿ ಬರೆಯುವ ಉತ್ಕಟೇಚ್ಛೆ ಯೂ ಇದೆ. ಈ ಪ್ರಯತ್ನದಲ್ಲಿ ನನಗೊಂದಿಷ್ಟು ಸಮಾಧಾನ ಸಿಕ್ಕಿರುವುದಂತೂ ನಿಜ).
ಅಷ್ಟಕ್ಕೂ, ನಮ್ಮ ಪುರಾಣ ಕಥೆಗಳಲ್ಲಿ ಇಲ್ಲದ ಹುಳುಕನ್ನು ಹೆಕ್ಕಿ ತೆಗೆದು ಪ್ರಚಾರಗಿಟ್ಟಿಸಿದವರಿಗೇನು ಕಡಿಮೆಯಿಲ್ಲವಲ್ಲ! ಆದರೆ, ಒಂದು ಪುರಾಣ ಕಥೆಯಲ್ಲಿ ಸಮಕಾಲೀನ ಜೀವನ ಮೌಲ್ಯಗಳನ್ನು ಶೋಧಿಸುವುದೆಂದರೆ ಅದು ಸುಲಭವೇನಲ್ಲವೆಂದರೆ ಉತ್ಪ್ರೇಕ್ಷೆಯಾಗಲಾರದು.
(ಸೂಚನೆ:ತಿದ್ದಿ ತಿದ್ದಿ ಬರೆದ ಬರಹವೇ ಅತ್ಯುತ್ತಮವಾಗುವುದು ಎಂದು ನಮ್ಮ ಹಿರಿಯ ಸಾಹಿತಿ ಶಿವರಾಮ ಕಾರಂತರು ಹೇಳಿದ್ದಾರೆ. ಈ ನನ್ನ ಪುರಾಣ ಕಥೆಯ ಬರವಣಿಗೆಯನ್ನು ಅದೆಷ್ಟು ಬಾರಿ ತಿದ್ದಿದ್ದೇನೆಯೋ ಆ ಸಪ್ತಗಿರಿಯೊಡೆಯ ಗೋವಿಂದನಿಗೆ ಅದೇನು ಪ್ರೀತಿಯೋ.. .)

ವೇದಪಾಠ-೧

ನನ್ನ ಮಿತ್ರರಾದ ಬೇಲೂರಿನ ವೇದಾಧ್ಯಾಯೀವಿಶ್ವನಾಥಶರ್ಮರು ವೇದಸುಧೆಯ ಆರಂಭಕ್ಕೆ ಕಾರಣಕರ್ತರೆಂದರೆ ಅಚ್ಚರಿಯುಂಟಾಗಬಹುದು. ಸುಧಾಕರಶರ್ಮರು ಬೇಲೂರಿನಲ್ಲಿ ಮಾಡಿದ ಉಪನ್ಯಾಸವನ್ನು ವಿಶ್ವನಾಥರು ನನಗೆ ಕೇಳಿಸಿದ್ದರ ಪರಿಣಾಮವಾಗಿ ಉಪನ್ಯಾಸದಿಂದ ನಾನು ಆಕರ್ಷಿತನಾಗಿ ಉಪನ್ಯಾಸವನ್ನು ಎಂ.ಪಿ.-೩ ಕ್ಕೆ ಕನ್ವರ್ಟ್ ಮಾಡಿ ಅಂತರ್ಜಾಲದ ಮೂಲಕ ನೂರಾರು ಜನರಿಗೆ ತಲುಪಿಸಬೇಕೆಂಬ ಉದ್ಧೇಶದಿಂದ ವೇದಸುಧೆಯನ್ನು ಆರಂಭಿಸಿದ್ದಾಯ್ತು. ವೇದಸುಧೆಯ ಆರಂಭವಾಗಿ ಹತ್ತು ತಿಂಗಳ ನಂತರ ವಿಶ್ವನಾಥಶರ್ಮರು ವೇದಸುಧೆಯಲ್ಲಿ ವೇದಪಾಠವನ್ನು ಆರಂಭಿಸಿರುವುದು ಸಂತೋಷದ ವಿಷಯವಾಗಿದೆ.
ಶರ್ಮರು ಹಾಸನದಲ್ಲಿ ಕಳೆದ ತಿಂಗಳಿನಿಂದ ತಿಂಗಳಿಗೊಮ್ಮೆ ವೇದಾರ್ಥವಿವರಣೆಯ ಹೆಸರಿನಲ್ಲಿ ವೇದಪಾಠವನ್ನು ಆರಂಭಿಸಿದ್ದಾರೆ. ವೇದಮಂತ್ರಗಳಿಗೆ ಬಹಳ ಸರಳವಾಗಿ ಮನಮುಟ್ಟುವಂತೆ ಅರ್ಥ ವಿವರಣೆಯೊಡನೆ ಸ್ವರಬದ್ಧವಾಗಿ ಮಂತ್ರವನ್ನು ಕಲಿಸುತ್ತಾ ಆರಂಭಿಸಿರುವ ಪಾಠವನ್ನು ವೇದಸುಧೆಯಲ್ಲಿ ಪ್ರಕಟಿಸಲಾಗುತ್ತಿದೆ. ಮಂತ್ರದ ಅರ್ಥವನ್ನು ತಿಳಿದುಕೊಂಡು ವೇದಮಂತ್ರಗಳನ್ನು ಕಲಿಯಬೇಕೆನ್ನುವವರಿಗೆ ಶರ್ಮರ ವೇದಪಾಠವು ರುಚಿಸುತ್ತದೆ.
ವಿ.ಸೂ: ಇಲ್ಲಿರುವ ಧ್ವನಿಸುರುಳಿಯನ್ನು ಕೇಳುತ್ತಾ ಮಂತ್ರವನ್ನು ಕಲಿಯಬಹುದಾಗಿದೆ. ಒಂದು ವೇಳೆ ಇದು ಅರ್ಥವಾಗುತ್ತಿಲ್ಲವೆಂಬ ಅಭಿಪ್ರಾಯವು ಬಂದರೆ ,ನಿಮ್ಮ ಸಂದೇಹಗಳನ್ನು ವೇದಸುಧೆಗೆ ಮೇಲ್ ಮಾಡಿದರೆ ಶರ್ಮರು ಉತ್ತರಿಸುವರು. ಇಲ್ಲಿ ಕಲಿಯುತ್ತಿರುವವರ ಧ್ವನಿಯೂ ಇರುವುದರಿಂದ ಕಲಿಯಲು ಸೂಕ್ತವಾಗಿಲ್ಲವೆನ್ನುವ ಅಭಿಪ್ರಾಯವು ಬಂದರೆ ಇದೇ ಪಾಠವನ್ನು ಕೇವಲ ವಿಶ್ವನಾಥ ಶರ್ಮರ ಧ್ವನಿಯಲ್ಲಿ ಪ್ರತ್ಯೇಕ ರೆಕಾರ್ಡ್ ಮಾಡಿ ಪ್ರಕಟಿಸಲಾಗುವುದು. ಪಾಠವನ್ನು ಕಲಿಯಲಿಚ್ಛಿಸುವವರು ದಯಮಾಡಿ ವೇದಸುಧೆಗೆ ನಿಮ್ಮ ಹೆಸರು ಮತ್ತು ಚರವಾಣಿ ಸಂಖ್ಯೆಯನ್ನು ತಿಳಿಸಬೇಕಾಗಿ ಕೋರುವೆ.
ಭಾಗ-೧


ಭಾಗ-೨


ಭಾಗ-೩


Thursday, December 2, 2010

ಮಾಯೆ...೨

ಹರುಕು ಮುರುಕು ಮ೦ತ್ರಗಳನೇ
ಗರ್ವದಿ೦ ಭಜಿಸಿ, ತನ್ನಾತ್ಮ ಕಥೆಯನೇ

ವೈಭವೀಕರಿಸುತ್ತಾ,ಘಳಿಗೆಗೊಮ್ಮೆ ನಿನ್ನ ಕರೆಯುತ್ತ,

ಮಾತಿಗೊಮ್ಮೆ ನಿನ್ನಾಣೆಯನು ಹಾಕುತ್ತ

ಕರೆಯದಿರುವವರ ಮನೆಗೆ ಹೋಗುತ್ತ

ಬದುಕಿ ಬಾಳಿದರೇನು ಫಲ

ನನ್ನ೦ತರ೦ಗದೇವಾ,

ನನ್ನದೇ ಸರಿ ಎನ್ನುವವರ ರಕ್ಷಣೆ ಹೇಗಯ್ಯಾ...



ಹೃದಯದೊಳು ನಿನ್ನ ನೆಲೆಗೊಳಿಸಿದ ಮೇಲೆ

ಗುಡಿ ಗೋಪುರಗಳೇಕಯ್ಯಾ

ಎಲ್ಲರಲೂ ನಿನ್ನನೇ ಕಾಣುವ ಪರಿ

ಅದೆಷ್ಟು ಸೊಗಸಯ್ಯಾ ನನ್ನ೦ತರ೦ಗದೇವಾ..

ಕುಣಿಯಲಾರದವಳು ನೆಲ ಸಮನಿಲ್ಲವೆ೦ದ೦ತೆ

ನಿನ್ನರಿವು ಇರದೇ ಧ್ಯಾನಿಸುತಿಹರು ನೋಡಯ್ಯಾ..



ಬುವಿಯಿ೦ದ ಕ೦ಬಗಳನೇರಿಸಿ,

ಮೇಲೊ೦ದು ನೆಲಸಮ ಮಾಡಿ

ಮೇಲೊ೦ದು ಗೋಪುರ, ಅದಕ್ಕೊ೦ದು ಕಲಶ!

ನೀ ನನ್ನೊಳಗಿದ್ದ ಮೇಲೆ,

ಕಾಲೆ೦ಬ ಕ೦ಬಗಳ ಮೇಲೆ ನಿ೦ತ

ಈ ದೇಹವೊ೦ದು ದೇಗುಲವಾಗಿ

ದಿನನಿತ್ಯ ಪೂಜೆ ಮ೦ಗಳಾರತಿಯ ಸೇವಿಸಲು

ನಾನೆ೦ಬ ದೇಹಕ್ಕಿ೦ತ ಮಿಗಿಲಾದ ದೇಗುಲವಾವುದಯ್ಯಾ..

ನನ್ನ೦ತರ೦ಗದೇವಾ... ನಿನ್ನಿರವ ಅರಿಯದೇ ಸುತ್ತುವುದು ನೋಡಯ್ಯಾ...

ವೇದವನ್ನು ಕಲಿಯೋಣ ಬನ್ನಿ

अथ ओ३म् श्रीः
ओं नमः सच्चिदानन्दवेदपुरुषपरम्ब्रह्मणे
धियो यो नः प्रचोदयात्


ಎಲ್ಲರೂ ವೇದಕ್ಕಾಗಿ :- ಜ್ಞಾನಾರ್ಥಿಗಳು ಜ್ಞಾನವನ್ನು ಅಧ್ಯಯನ, ಆರ್ಜನೆ ಮಾಡುವುದು ಎಲ್ಲಿಂದ? ಎಲ್ಲಿ ಯಥಾರ್ಥ ಜ್ಞಾನ ಲಭಿಸುವುದೋ ಅಲ್ಲಿಂದ. ಅಂತಹ ಜ್ಞಾನಭಂಡಾರವೇ ವೇದ. ಆದ್ದರಿಂದ ಎಲ್ಲರೂ ವೇದಕ್ಕಾಗಿ.


ಎಲ್ಲರೂ :-ಈ ಎಲ್ಲರೂ ಎಂದರೆ ಯಾರು? ಎಲ್ಲರೂ ಎಂದರೆ ಮಾನವರು ಎಂದೇ ಅರ್ಥ. ಮಾನವ ಎಂಬ ಪದದ ಅರ್ಥವೇ ಜ್ಞಾನಿ ಅಥವಾ ಜ್ಞಾನಾರ್ಥಿ ಎಂದು.

ಜ್ಞಾನ :- ಜ್ಞಾನವೆಂದರೆ ಯಥಾರ್ಥ ಅರಿವು, ತಿಳಿವಳಿಕೆ. ಇದರ ಆರ್ಜನೆಯಿಂದ ಆತ್ಮೋದ್ಧಾರ, ಅದರೊಂದಿಗೆ ಪರೋದ್ಧಾರ. ಅದರಿಂದ ಸಮಾಜೋದ್ಧಾರ.

ವೇದಾಧ್ಯಯನಕ್ಕೆ ಅರ್ಹತೆ :- ಸಸ್ಯಾಹಾರಿ ಮಾನವ ಸಮಾಜ, ಉಪನಯನ ಸಂಸ್ಕಾರ ಹೊಂದಿದವರು. ಆಸಕ್ತ ಶ್ರದ್ಧಾವಂತರು. ಈ ಅರ್ಹತೆಗಳುಳ್ಳವರು.
ಹಾಗಾದರೆ....., ಈಗಿನ ಮತ, ಪಂಥ-ಪಂಗಡಗಳ ಗೊಂದಲದಲ್ಲಿ ಈ ಅರ್ಹತೆ ಇಲ್ಲದಿರುವ,...... ಆದರೆ, ಆಸಕ್ತಿ ಮತ್ತು ಶ್ರದ್ಧೆಯುಳ್ಳವರಿಗೆ ವೇದಾಧ್ಯಯನ ಮಾಡಲು ಅವಕಾಶವಿಲ್ಲವೇ? ಖಂಡಿತ ಇದೆ. ಈ ವಿಚಾರ ನನ್ನದಲ್ಲ !
ಯಜುರ್ವೇದ ೨೬ ನೇ ಅಧ್ಯಾಯದ ೨ ನೇ ಮಂತ್ರವು ಓಂ ಯಥೇಮಾಂ ವಾಚ ಕಲ್ಯಾಣೀಮಾವದಾನಿ ಜನೇಭ್ಯಃ || ಅರ್ಥ:- ಪರಮಾತ್ಮನ ಮಾತು ಇಂತಿದೆ. ಈ ಮಂಗಲಕರವಾದ ವಾಣಿಯನ್ನು (ವೇದ ವಾಣಿಯನ್ನು) ಎಲ್ಲ ಜನರಿಗಾಗಿ ಉಪದೇಶಿಸುತ್ತಿದ್ದೇನೆ. ಎಂದು. ಹೀಗೆ ವೇದದ್ದೇ ಆದೇಶ. ಹೀಗಿರುವಾಗ ಗೊಂದಲಕ್ಕೆ ಅವಕಾಶವೆಲ್ಲಿ ? ಆದರೆ ವೇದಾಧ್ಯಯನಕ್ಕೆ ಅರ್ಹತೆ ಹೊಂದಲು ಅವರು ಸಸ್ಯಾಹಾರಿಗಳಾಗಬೇಕು, ಉಪನಯನ ಸಂಸ್ಕಾರ ಪಡೆಯಬೇಕು. ಮತ್ತು ಇದರಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ. ಸಮಾನವಾದ ಅವಕಾಶ, ಅರ್ಹತೆ ಇದೆ. ಈ ವಿಚಾರವೂ ನನ್ನದಲ್ಲ !! ಋಗ್ವೇದ ೮ ನೇ ಮಂಡಲ ೩೩ ನೇ ಸೂಕ್ತ ೧೯ ನೇ ಮಂತ್ರವು ಸ್ತ್ರೀ ಹಿ ಬ್ರಹ್ಮಾ ಭೂವಿ || ಅರ್ಥ:- "ವನಿತಾವರೇಣ್ಯಳು ಚತುರ್ವೇದಜ್ಞಳಾಗಿ ವಿರಾಜಿಸಬಲ್ಲಳು. ಎಂದು ತಿಳಿಸುತ್ತಿದೆ. ಇದೂ ವೇದ ವಿಷಯವೇ. ವಿಷಯಗಳು ನಿಮ್ಮ ಮನಮುಟ್ಟಿ, ಮನತಟ್ಟಿ, ನಿಮ್ಮ ವಿಮರ್ಶೆಯ ಮೂಸೆಯಲ್ಲಿ ಚಿಂತನ-ಮಂಥನ ಮಾಡಿ, ನಿಮ್ಮ ಆತ್ಮ-ಮನಸ್ಸಿಗೆ ಸರಿ ಎನಿಸಿದರೆ....., ಏಕೆಂದರೆ ಈ ಮಾತೂ ನನ್ನದಲ್ಲ !!! ಋಗ್ವೇದ ೧ ನೇ ಮಂಡಲ ೮೬ ನೇ ಸೂಕ್ತ ೯ ನೇ ಮಂತ್ರವು ಯೂಯಂ ತತ್ಸತ್ಯಶವಸ ವಿಷ್ಕರ್ತಾ ಮಹಿತ್ವನಾ || ಅರ್ಥ:- ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ ! (ಸತ್ಯವಾದ ಶಕ್ತಿಯಿಂದಲೇ ವಿರಾಜಿಸುವ ಧೀರರೇ !) ನೀವು ನಿಮ್ಮ ಸ್ವಂತ ಮಹಿಮೆಯಿಂದಲೇ ಆ ಸತ್ಯವನ್ನು ಆವಿಷ್ಕರಿಸಿರಿ, ಬೆಳಕಿಗೆ ತನ್ನಿರಿ. ಎಂದು ಸ್ವತಃ ವೇದವೇ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ.ಆದ್ದರಿಂದ, ಯಥಾರ್ಥ ಜ್ಞಾನ ಆರ್ಜನೆಗಾಗಿ ನಾನೂ ವೇದಾಧ್ಯಯನ ಮಾಡಲೇ ಬೇಕು ಎಂದು ಮುಕ್ತ ಮನಸ್ಸಿನಿಂದ ನಿಶ್ಚಯಿಸಿ, ಆತ್ಮಪೂರ್ವಕವಾಗಿ ನೀವೂ ದೃಢ ನಿರ್ಧಾರಕ್ಕೆ ಬಂದಿದ್ದರೆ, ತಪ್ಪದೆ ತಡಮಾಡದೆ ಬನ್ನಿ. ಈ ಕೂಡಲೇ ವೇದಾಧ್ಯಯನ ಪ್ರಾರಂಭಿಸಿ.

ವಿ.ಸೂ.:- ಈ ವಿಚಾರಗಳಿಂದ ಅಕಸ್ಮಾತ್ ಗೊಂದಲಗೊಂಡಿದ್ದರೂ..... ಬನ್ನಿ. ಮುಕ್ತ ಮನಸ್ಸಿನಿಂದ ಮುಖತಃ ಮಾತನಾಡೋಣ. ಸಮಸ್ಯಾ ಮುಕ್ತರಾಗೋಣ.
ಸಸ್ನೇಹ ನಮಸ್ತೇ,


- ಪುರೋಹಿತ ವೇಲಾಪುರಿ ವಿಶ್ವನಾಥ ಶರ್ಮಾ-ವೇದಾಧ್ಯಾಯೀ, ಬೇಲೂರು.

ವೇದವನ್ನು ಕಲಿಯೋಣವೆಂದು ಶ್ರೀ ವಿಶ್ವನಾಥ ಶರ್ಮರು ಕರೆ ಕೊಟ್ಟಿರುವುದರಿಂದ ಸಹಜವಾಗಿ ಯಾವಾಗ ಪಾಠಮಾಡುತ್ತೀರೆಂದು ಪ್ರಶ್ನೆ ಕೇಳಬಹುದಲ್ಲವೇ? ಈಗಾಗಲೇ ಪಾಠ ಆರಂಭವಾಗಿದೆ.ಇನ್ನು ಕೆಲವೇ ದಿನಗಳಲ್ಲಿ, ವೇದಸುಧೆಯಲ್ಲೂ ಆರಂಭ ಗೊಳ್ಳಲಿದೆ...ನಿರೀಕ್ಷಿಸಿ...
-ಶ್ರೀಧರ್

ಯೋಚಿಸಲೊ೦ದಿಷ್ಟು..೨೦

“ಬೆಳಕಿನ ಚಿ೦ತನೆಗಳು“

೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ!

೨.  ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು ಸಣ್ಣ ಹಣತೆಯನ್ನು ಮುಚ್ಚಿಬಿಡುವ ಸಾಮರ್ಥ್ಯ ಅದಕ್ಕಿಲ್ಲ!

೩. ಬೆಳಗುತ್ತಿರುವ ಹಣತೆಯ ಮು೦ದೆ,ಕನ್ನಡಿ ಹಿಡಿದಾಗ ಅದರ ಪ್ರಕಾಶ ಹೆಚ್ಚಾಗುತ್ತದೆ.ನಮಗೆ ಹಣತೆಯಾಗಲು ಆಗದಿದ್ದರೆ, ಕನ್ನಡಿಯಾದರೂ ಆಗೋಣ!

೪.  ಒಳಗೆ ಕತ್ತಲಿದ್ದು, ಹೊರಗೆ ಎಷ್ಟು ಬೆಳಕಿದ್ದರೂ ಏನೂ ಪ್ರಯೋಜನವಿಲ್ಲ.

೫.ಪರ್ವತದ ಸುತ್ತಮುತ್ತ ಹರಡಿರುವ ಕತ್ತಲೆಯ ಆಚೆ ಏನಿದೆ?ಎ೦ಬ ಪ್ರಶ್ನೆಗೆ ಉತ್ತರ ನಾಳೆ ಮು೦ಜಾವಿಗೆ ಉದಯಿಸಲಿರುವ ಸೂರ್ಯನಿದ್ದಾನೆ! ಎ೦ಬ ಉತ್ತರವೇ ಸೂಕ್ತ! “ನಾಳಿನ ಸೂರ್ಯ“ ನಮ್ಮ ಬೆಳಕಿನ ನಿರೀಕ್ಷೆಯ ಪ್ರತೀಕ.

೬. ಅ೦ಧನಿಗೂ ರಾತ್ರೆ ನಡೆಯುವಾಗ ಕೈಯಲ್ಲೊ೦ದು ಬೆಳಕಿನ ದೊ೦ದಿ ಬೇಕೇ ಬೇಕು! ಅದು ಅವನಿಗಲ್ಲ.ಅವನ ವಿರುಧ್ಧ ದಿಕ್ಕಿನಲ್ಲಿ ನಡೆದು ಬರುವವನಿಗೆ!

೭.ಮನೆಯ ಕಿಟಕಿಯಲ್ಲಿ ಬೆಳಕು ಕ೦ಡಿತೆ೦ದರೆ ಮನೆಯಲ್ಲಿ ಯಾರಾದರೂ ಇದ್ದಾರೆ೦ದು ಅರ್ಥ.ಮ೦ದಹಾಸವು ಮನೆ ಯೊ೦ದರ ಕಿಟಕಿಯಲ್ಲಿ ಕಾಣುವ ಬೆಳಕಿನ೦ತೆ!

೮. ಕತ್ತಲೆಯಿ೦ದಾಗಿಯೇ ನಕ್ಷತ್ರಗಳು ಬೆಳಗುತ್ತಿವೆ!

೯. ಸಾಲು ಸಾಲು ಹಣತೆಗಳು ಬೆಳಗಿದರೂ ಬೆಳಕು ಮಾತ್ರ ಒ೦ದೇ!

೧೦. ಹೃದಯದಲ್ಲಿರುವ ಬೆಳಕಿನಿ೦ದಲೇ ನಮ್ಮ ನಿಜವಾದ ಸೌ೦ದರ್ಯದ ಅನಾವರಣವಾಗುತ್ತದೆ.

೧೧.ವಜ್ರದ ಮೇಲೆ ಬಿದ್ದ ಬೆಳಕು ಪ್ರತಿಫಲಿಸುತ್ತದೆ. ನಾವೂ ವಜ್ರಗಳಾಗೋಣ,ಕಲ್ಲಾಗದಿರೋಣ!

೧೨. ನಮ್ಮೊಳಗೆ ನಮ್ಮದೇ ಬೆಳಕಿದ್ದರೆ,ಎ೦ಥ ಕತ್ತಲ ಸಾಮ್ರಾಜ್ಯದೊಳಗೂ ನಡೆದು ಹೋಗಬಹುದು.

೧೩. ಅಗ್ನಿಯು ಒಲೆಯಲ್ಲಿ ಉರಿದರೆ ಬೆ೦ಕಿ! ಹಣತೆಯಲ್ಲಿ ಉರಿದರೆ ದೀಪ!

೧೪. ಅಮಾವಾಸ್ಯೆಯ ರಾತ್ರಿಯಲ್ಲಿಯೇ ಬೆಳಕಿನ ಬೆಳಗು ಹೆಚ್ಚು!

೧೫. ಗೂಡೊಳಗಿನ ದೀಪದಿ೦ದ ಗೂಡಿನ ಒಳಗೂ ಬೆಳಕು! ಹೊರಗೂ ಬೆಳಗು!

ಸಂಪಾದಕೀಯ

ಸ್ನೇಹಿತರೊಬ್ಬರ  ಮೇಲ್ ಹೀಗಿದೆ-" ಬೇರೆ ಬೇರೆ ವಿದ್ವಾಂಸರ ಉಪನ್ಯಾಸಗಳನ್ನೂ ದಯಮಾಡಿ ಪ್ರಕಟಿಸಿ"   
ವೇದಸುಧೆಯಾದರೋ ಈ ಬಗ್ಗೆ ಹಲವಾರು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಲಭ್ಯವಾದ ಉಪನ್ಯಾಸಗಳನ್ನು ಪ್ರಕಟಿಸಲಾಗುತ್ತಿದೆ.ಮತ್ತೊಮ್ಮೆ  ವೇದಸುಧೆಯ ಎಲ್ಲಾ ಅಭಿಮಾನಿಗಳಲ್ಲೂ ವಿನಂತಿಸಲಾಗಿದೆ. ಒಂದು ಉತ್ತಮ ಉಪನ್ಯಾಸವನ್ನು ನೀವು ಕೇಳಿದಾಗ ಅದರ ಕೊಂಡಿಯನ್ನಾದರೂ ವೇದಸುಧೆಗೆ ಮೇಲ್ ಮಾಡಿದರೆ  ಆ ಉಪನ್ಯಾಸವನ್ನು ಪಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಪ್ರಕಟಿಸಲಾಗುವುದೆಂದು ತಿಳಿಸಲು ವೇದಸುಧೆಯು ಬಯಸುತ್ತದೆ.

ಬಲಿವೈಶ್ವದೇವ ಯಜ್ಞ



ನಮ್ಮ ಆಚರಣೆಗಳು-ಬಲಿವೈಶ್ವದೇವ ಯಜ್ಞ -ಒಂದು ವೈಜ್ಞಾನಿಕ ವಿಶ್ಲೇಷಣೆ-ವೇದಾಧ್ಯಾಯೀ ಸುಧಾಕರಶರ್ಮರಿಂದ-10 ನಿಮಿಷಗಳ ವಿವರಣೆ

Wednesday, December 1, 2010

THE REAL DISEASE IS FEAR


Date: 29.11.2010
Actually, nine – tenths of the danger in an illness comes from fear. Fear can give us the apparent symptoms of an illness; and it can give us the illness too,- its effects can go so far as that.
There are physical movements, effects of the pressure, which sometimes create underground fear that may do harm if the fear is not rejected. There is, for instance, a certain pressure in the head of which there has been question and which is felt by many, especially in the earlier stages, when something is still closed has to open. It is a discomfort that comes nothing and can easily be got over, if we know that it is an effect of the pressure of the forces to which we are opening when they works strongly on the body to produce a result and to hasten the transformation. Taken quietly, it can turn into a not un-pleasurable sensation. But if we get frightened, we are sure to contract a very bad headache; it may even go as far as a fever. The discomfort is due to some resistance in the nature; if we know how to release the resistance, then we are immediately free from the discomfort. But, get frightened and the discomfort may turn into something much worst.
Whatever the character of the experience we have, we must give no room to fear; we must keep an unshaken confidence and feel that whatever happens is the thing that had to happen. Once we have chosen the path, we must bold by accept all the consequences of our choice. But, if we choose and then draw back and choose again and again drawback, always waving, always doubting, always fearful, we create a disharmony in our being, which not only retards our progress, but, can be the origin of all kinds of disturbance in the mind and vital being and discomfort and disease in the body.
So, the real disease is fear, throw the fear among and the disease will go. The first thing from which we must cure once forever is Fear. It is more dangerous than the worst disease. We must understand that without fear nothing can happen.
Not to worry. More we think of it, more we concentrate upon it and above all, more we fear, more we give a chance for things to now. If, on the contrary, we turn our attention and interest elsewhere, we increase the possibility of cure. All fear must be overcome and replaced by a total confidence in the Divine grace.
(See you next week)

ಮೂಢ ಉವಾಚ -13

ಆರು ಅರಿಗಳನು ಅರಿಯದವರಾರಿಹರು?
ದೇವಕಾಮದ ಫಲವಲ್ಲವೇ ಚರಾಚರರು||
ನಿತ್ಯಮುಕ್ತ ಪರಮಾತ್ಮನಾಧೀನ ಕಾಮವಾದರೆ|
ಕಾಮನಾಧೀನರಾಗಿಹರು ನರರು ಮೂಢ||


ಆತ್ಮನೇ ತಾನೆಂಬ ಅರಿವು ಮರೆಯಾಗಿ|
ತನು-ಮನವೆ ತಾವೆಂದುಭ್ರಮಿತರಾಗಿರಲು||
ತುಂಬಿದಜ್ಞಾನದಿಂ ಜನಿಸುವುದು ಕಾಮ|
ಕಾಮಫಲಿತಕ್ಕಾಗಿ ಕರ್ಮಗೈವರೋ ಮೂಢ||


ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು||
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು|
ಕಾಮ ಅದಕಿಲ್ಲ ಪೂರ್ಣ ವಿರಾಮ ಮೂಢ||


ಹೊನ್ನು ಕಾರಣವಲ್ಲ ಹೆಣ್ಣು ಕಾರಣವಲ್ಲ|
ಮಣ್ಣು ಕಾರಣವಲ್ಲ ಮನಸು ಕಾರಣವಲ್ಲ||
ಬೇಕು ಬೇಕು ಬೇಕೆಂಬ ಅನಂತಾತೃಪ್ತತೆಗೆ|
ಕಾಮ ಕಾರಣವಲ್ಲದೆ ಮತ್ತೊಂದಲ್ಲ ಮೂಢ||
***************
-ಕವಿನಾಗರಾಜ್.

Rig Veda

MAHO ARNAHA SARASWATI PRA CHETAYATI KETUNA |
DHIYO VISHWA VI RAAJATI ||

-------------(3/12, Rigveda)

Only 'knowledge' can help us to know the universe, which is vast like an ocean. It enlightens everyone's minds.

Knowledge destroys the darkness of ignorance. There are two ways by which knowledge can be imbibed- from an able guru and self study. By attaining knowledge the mind becomes enlightened. We should try to acquire knowledge from all the sources and by all means-studying the scriptures, contemplation,meditation,etc. Scriptures are invaluable source of knowledge because it is only through their study that the mind is filled with good thoughts. Good thoughts help us in leading a virtuous life.This is the sure way for growth of the mind and also to acquire eternal happiness and peace.

ಹೃದಯದ ಭಾವದೆ ಅರ್ಥವನರಿಯದೇ



ಕಾಣದ ಪ್ರೀತಿಯ ಆಂತರ್ಯವರಿಯದೇ
ಅರಸುತಲಿದ್ದೆ  ಮನವೆಲ್ಲಾ
ಹೃದಯದ ಒಳಗೂ ಕಾಣದೇ ಹೊರಗೂ
ಹುಡುಕುತಲಿದ್ದೆ ದಿನವೆಲ್ಲಾ

ಹೃದಯದ ಭಾವದೆ ಅರ್ಥವನರಿಯದೇ
ಅಲೆಯುತಲಿದ್ದೆ ಹೊರಗೆಲ್ಲಾ
ಅರಸುವದರಿಯದೆ ಹರಸುವದರಿಯದೇ
ಬಯಸುವದರಿಯದೇ ಒಳಗೆಲ್ಲಾ

ಎಲ್ಲೋ ಹುಟ್ಟಿದೆ ಎಲ್ಲಿಯೋ ಬೆಳೆದೆ
ಅರಿಯದೆ ನನ್ನ  ಹೊರೆಯೆಲ್ಲಾ
ಅರಿವನು ಬಯಸದೆ ಕಲಿತೆನು ಕಲಿಯದೆ
ಸರಿಸದೆ ನನ್ನ ಪೊರೆಯೆಲ್ಲಾ

ಕಣ್ಣಿಗೆ ಕಾಣದ ಮನಸಿಗೂ ನಿಲುಕದ
ಅರಿವನೆ ಹರಡುತೆ ಇಲ್ಲೆಲ್ಲೂ
ಅರಿವನು ಅರಸದೆ ಕೆಸರನು  ಬೆರೆಸದೆ
ತಿಳಿವನೆ ಮೆರೆಸುತೆ ಎಲ್ಲೆಲ್ಲೂ

ಅರಿವಿನ ಪಕ್ಷಿಯ  ತೆರೆಯುತೆ ಅಕ್ಷಿಯ
ನಿರುತದೆ ಸತ್ಯವ ಅರಸುತಲೂ
ಹರಸುವ ನಮಿಸುವ ಕ್ಷಮಿಸುವ ಮನದಲು
 ಸ್ಫುರಿಸುವ ಭಾವವೇ ಬರಿಸುತಲೂ

ಕಾಣದ ಪ್ರೀತಿಯ ಆಂತರ್ಯವರಿಯುವೆ
ಅರಸುತಲಿದ್ದೂ ಮನವೆಲ್ಲಾ
ಹೃದಯದ ಹೊರಗೂ  ಒಳಗೂ ಕಾಣುವೆ
ಹುಡುಕದೇ ಇದ್ದೂ ದಿನವೆಲ್ಲಾ

Tuesday, November 30, 2010

ನಮ್ಮ ಆಚರಣೆಗಳು -5 ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ

ವೇದಗಳು ಪರಮಪ್ರಮಾಣ, ಹೇಗೆ?

ವೇದಗಳು ಪರಮ ಪ್ರಮಾಣ, ಹೇಗೆ?"- ವೇದಾಧ್ಯಾಯೀ ಸುಧಾಕರ ಶರ್ಮರಿಂದ ವಿಮರ್ಶೆ



.

ಯಾರೂ ನಾಸ್ತಿಕರಲ್ಲ

ದಿನಾಂಕ ೬.೬.೨೦೧೦ ಭಾನುವಾರ ಬೆಂಗಳೂರು ವಿಜಯನಗರದ ಶ್ರೀಮತಿ ಸ್ವರ್ಣಾಂಬ ರಾಮಕೃಷ್ಣರ ಮನೆಯಲ್ಲಿ ಒಂದು ಸತ್ಸಂಗ. ವೇದಾಧ್ಯಾಯೀ ಸುಧಾಕರಶರ್ಮರ ಉಪನ್ಯಾಸ-" ಯಾರೂ ನಾಸ್ತಿಕರಲ್ಲ"

ಪರಾಪೂಜಾ


ಶ್ರೀ ಶಂಕರಾಚಾರ್ಯ ವಿರಚಿತ "ಪರಾಪೂಜಾ" ವಿಚಾರವಾಗಿ ಶ್ರೀ ಸುಧಾಕರಶರ್ಮರ ಮಾತು ಇಲ್ಲಿದೆ.




ವೇದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?

ವೇದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?ವೇದಾಧ್ಯಾಯೀ ಸುಧಾಕರಶರ್ಮರ ಈ ಉಪನ್ಯಾಸಮಾಲೆ ಜಿಜ್ಞಾಸುಗಳಿಗೆ ಉಪಯುಕ್ತವಾಗಿದೆ.ಅಧ್ಯಯನಕ್ಕಾಗಿಯೇ ವ್ಯವಧಾನದಿಂದ ಈ ಉಪನ್ಯಾಸವನ್ನು ಆಲಿಸಿದರೆ ಉಂಟಾಗಬಹುದಾದ ಸಂದೇಹಗಳಿಗೆ ಶರ್ಮರು ಉತ್ತರಿಸುತ್ತಾರೆ.ನಿಮ್ಮ ಸಂದೇಹಗಳನ್ನು ವೇದಸುಧೆಗೆ ಮೇಲ್ ಮಾಡಬಹುದು.