Pages

Thursday, April 1, 2010

ಮೃತ್ಯುವು ಕೇಕೆ ಹಾಕುತ್ತಾ ಕುಣಿಯುತ್ತಿದೆ

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ|
ಮೃತ್ಯು ಕುಣಿಯುತಲಿಹುದು ಕೇಕೆ ಹಾಕುತಲಿ|
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ|
ಎತ್ತಲಿದಕೆಲ್ಲ ಕಡೆ ಮಂಕುತಿಮ್ಮ||

ಇಂದು ಈ ಭೂಮಿಯನ್ನು ದುರ್ದೈವವೊಂದು ಮುತ್ತಿದೆ. ಮೃತ್ಯುವು ಕೇಕೆ ಹಾಕುತ್ತಾ ಕುಣಿಯುತ್ತಿದೆ. ಪ್ರತಿದಿನದ ಲೋಕದ ವಾರ್ತೆಗಳು ತಲೆ ಸುತ್ತು ಬರಿಸುತ್ತಿವೆ. ಇದಕ್ಕೆಲ್ಲಾ ಕಡೆ ಎಂದು?

ಡಿ ವಿ ಜಿ ಯವರು ಆದಿನಗಳ ಬಗ್ಗೆಯೇ ಅಷ್ಟು ನೊಂದು ಮನದಾಳದ ನೋವನ್ನು ಕಗ್ಗದಮೂಲಕ ಹೊರಹಾಕಿದ್ದಾರೆ. ಇಂದು ಡಿ ವಿ ಜಿ ಬದುಕಿದ್ದರೆ! ಗಾಂಧೀಜಿ ಬದುಕಿದ್ದರೆ! ಮೊನ್ನೆ ತಾನೇ ಚಪಲ ಚನ್ನಿಗರಾಯ ನಿತ್ಯಾನಂದ[ಸ್ವಾಮಿ]ಯ ರಾದ್ಧಾಂತ! ರೇಣುಕಾಚಾರ್ಯ ಜಯಲಕ್ಷ್ಮಿ ವಿಲಾಸ!! ದೇಶದ ಹಣ ರಾಜಾರೋಶವಾಗಿ ಲೂಟಿ ಮಾಡುತ್ತಿರುವ ರಾಜಕಾರಣಿಗಳು! ದೇಶದ ಭದ್ರತೆಗೆ ಸವಾಲೊಡ್ದಿರುವ ಆತಂಕವಾದಿಗಳು! ಕೊಲೆ ಸುಲಿಗೆಗಳು! ಅತ್ಯಾಚಾರಗಳು!!
ಇದು ದುರ್ದೈವವಲ್ಲವೇ? ಇಂತಹ ಸುದ್ಧಿಗಳಿಂದ ತಲೆ ಸುತ್ತಿಬರಬೇಡವೇ? ಇದಕ್ಕೆಲ್ಲಾ ಕಡೆ ಎಂದು? ಉತ್ತರಿಸುವವರಾರು? ಉತ್ತರಿಸಬೇಕಾದ ಯುವಕರೆಲ್ಲಾ ಟಿ.ವಿ. ಮುಂದೆ ಕುಳಿತು ಕ್ರಿಕೆಟ್ ನೋಡುತ್ತಾ ಕೇಕೆ ಹಾಕುತ್ತಿದ್ದಾರೆ! ಆ ಭಗವಂತನೇ ಧರೆಗೆ ಇಳಿದು ಬರಬೇಕೆ?
------------------------------------------------------------------------------------------------
ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ
ವಲೆವಂತೆ ಲೋಕ ತಲ್ಲಣಿಸುತಿಹುದು|
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ|
ತಳಮಳಕೆ ಕಡೆಯೆಂದೋ? ಮಂಕುತಿಮ್ಮ||

ಇಹವನ್ನು ತೊರೆದು ಪರವನ್ನೂ ಮುಟ್ಟದ ಪ್ರೇತವು ದಿಕ್ಕುತಪ್ಪಿ ಅಲೆಯುವಂತೆ ಜಗತ್ತು ಹಪಹಪಿಸುತ್ತಿದೆ. ಇದ್ದ ಹಳೆಯ ಧರ್ಮವು ಸತ್ತು ಹೋಗಿದೆ. ಹೊಸ ಧರ್ಮವು ಹುಟ್ಟಿಲ್ಲ. ಈಗಿನ ತಲ್ಲಣಕೆ ಕೊನೆ ಎಂದೋ?- ಎಂದು ಡಿ ವಿ ಜಿ ಯವರು ಆತಂಕ ವ್ಯಕ್ತಪಡಿಸುತ್ತಾರೆ.
ಡಿವಿಜಿಯವರು ಏಳೆಂಟು ದಶಕಗಳ ಹಿಂದೆ ಕಂಡುಕೊಂಡ ಸತ್ಯವು ಇಂದು ಇನ್ನೂ ಹೆಚ್ಚು ಅನ್ವಯವಾಗುವಂತೆ ತೋರುತ್ತಿದೆ. ನಮ್ಮ ಋಷಿ ಮುನಿಗಳು ತಮ್ಮ ತಪಸ್ಸಿನ ಫಲವಾಗಿ ಹಾಕಿಕೊಟ್ಟ ಮಾರ್ಗವನ್ನು ಸಂದೇಹದಿಂದ ನೋಡುತ್ತಾ ಅದನ್ನು ಗೊಡ್ಡು ಎಂದು ದೂರತಳ್ಳಿ[ಹಳೆ ಧರ್ಮ ಸತ್ತಿಹುದು] ಹೊಸ ದಾರಿಯನ್ನು ಕಂಡುಕೊಳ್ಳಲಾಗದೆ ತಲ್ಲಣಗೊಂಡಿರುವ ನಮ್ಮ ಇಂದಿನ ಸ್ಥಿತಿಯು ಅಂದು ಡಿ ವಿ ಜಿ ಕಂಡ ಸ್ಥಿತಿಗಿಂತಲೂ ಇನ್ನೂ ಕೆಟ್ಟಿದೆಯಲ್ಲವೇ?
ನಮ್ಮ ಪೂರ್ವಜರು ಬೆಳೆಸಿದ್ದ ಧರ್ಮ ವೃಕ್ಷದಡಿಯಲ್ಲಿ ಮರವೇ ಕಾಣದಂತೆ ಕಳೆ ಬೆಳೆದಿರುವುದು ನಿಜ. ಆ ಕಳೆಯನ್ನು ತೆಗೆದು ಮರಕ್ಕೆ ಗೊಬ್ಬರ ನೀರು ಹಾಕಿ ಬೆಳೆಸ ಬೇಕೋ ಅಥವಾ ಮರದ ಸುತ್ತ ಕಳೆಯಿದೆ ಎಂದು ಮರವನ್ನೇ ಉರುಳಿಸ ಬೇಕೋ? ಮರವನ್ನು ಉರುಳಿಸುವ ಕೆಲಸವಂತೂ ಭರದಿಂದ ಸಾಗಿದೆ.ನೆರಳು ಮಾಯವಾಗಿದೆ. ಜನತೆ ಕಂಗಾಲಾಗಿದ್ದಾರೆ. ಕಳೆ ತೆಗೆದು ಮರವನ್ನು ಉಳಿಸುವ ಕೆಲಸ ಆಗಬೇಕಿದೆ. ಅದು ನಮ್ಮ ಕೈಲೇ ಇದೆ.

ಸುಭಾಷಿತ ರತ್ನ -ದಿನಕ್ಕೊಂದು ಸುಭಾಷಿತ

1 ನೇ ಏಪ್ರಿಲ್ 2010

ಅಹಂಕಾರ ಮಮಕಾರಗಳ ತ್ಯಾಗದಿಂದಲೇ ಸುಖ

ನಾಸ್ತಿ ವಿದ್ಯಾಸಮಂ ಚಕ್ಷು: ನಾಸ್ತಿ ಸತ್ಯಸಮ: ತಪ:|
ನಾಸ್ತಿ ರಾಗಸಮಂ ದು:ಖಂ ನಾಸ್ತಿ ತ್ಯಾಗಸಮಂ ಸುಖಮ್ ||

ವಿದ್ಯೆಗೆ ಸಮನಾದ ಕಣ್ಣಿಲ್ಲ. ಸತ್ಯಕ್ಕೆ ಸಮನಾದ ತಪಸ್ಸಿಲ್ಲ. ರಾಗಕ್ಕೆ ಸಮನಾದ ದು:ಖವಿಲ್ಲ. ತ್ಯಾಗಕ್ಕೆ ಸಮನಾದ ಸುಖವಿಲ್ಲ.

ವಿದ್ಯಾವಂತನಾಗದೆ ಕಣ್ಣಿದ್ದರೂ ಕುರುಡನಂತೆಯೇ. ಕುರುಡನೂ ವಿದ್ಯಾವಂತನಾಗಿದ್ದರೆ ಅವನು ಕುರುಡನಲ್ಲ. ಮಾನವನಿಗೆ ವಿದ್ಯೆಯೇ ನಿಜವಾದ ಕಣ್ಣು. ಜೀವನದಲ್ಲಿ ಸತ್ಯವಂತನಾಗಿ ಬಾಳಿದರೆ ಅದರ ಮುಂದೆ ಯಾವ ತಪಸ್ಸೂ ಕಡಿಮೆಯೇ.

ದು:ಖಕ್ಕೆ ಮೂಲ ಯಾವುದು? ಇದು ನನ್ನದು, ನನ್ನದು ಎಂಬ ಅನುರಾಗ. ನನ್ನದೆಂಬುದಕ್ಕೆ ಕಿಂಚಿತ್ ನೋವಾಗುವುದನ್ನೂ ಮನ ಸಹಿಸದು.ಮಿತಿಮೀರಿದ ಪ್ರೀತಿಯೇ ಅನುರಾಗ. ಅದರಿಂದಲೇ ದು:ಖ. ನನ್ನದೇನೂ ಇಲ್ಲ, ಅವನದೇ ಎಲ್ಲಾ, ಎಂದು ಎಲ್ಲಾ ಆ ಭಗವಂತನದೇ ಎಂದು ತಿಳಿದರೆ ದು:ಖಕ್ಕೆ ಕಾರಣವೆಲ್ಲಿ?

ನನಗಾಗಿ ಎಷ್ಟು ಮಾಡಿಕೊಂಡರೂ ಇನ್ನೂ ಬೇಕೆಂಬ ಅತೃಪ್ತಿ ಇದ್ದೇ ಇರುತ್ತದೆ. ಆದರೆ ಕೈಲಾಗದವನಿಗೆ ಒಂದಿಷ್ಟು ಸಹಾಯ ಮಾಡಿ ನೋಡಿ, ಅವನ ಕಣ್ಣಲ್ಲಿ ನಲಿವು ಕಂಡಾಗ ಆಗುವ ಸಂತೋಷಕ್ಕಿಂತ ಬೇರೆ ಏನು ಬೇಕು?
-------------------------------------------------------------------
2 ನೇ ಏಪ್ರಿಲ್ 2010

ಜಠರಂ ಪೂರಯೇದರ್ಧಂ

ತದರ್ಧಂ ತು ಜಲೇನ ಚ|
ವಾಯೋ: ಸಂಚಾರೇಣಾರ್ಥಂ ತು
ಭಾಗಯೇಕಂ ವಿಸರ್ಜಯೇತ್||

ಹೊಟ್ಟೆಯ ಅರ್ಧಭಾಗ ಆಹಾರ, ಉಳಿದರ್ಧದಲ್ಲಿ ಅರ್ಧಭಾಗ ನೀರು, ಕಾಲುಭಾಗವನ್ನು ಗಾಳಿಯ ಸಂಚಾರಕ್ಕಾಗಿ ಬಿಡಬೇಕು.

ನಮ್ಮ ಪೂರ್ವಜರ ಸೂತ್ರ ಹೇಗಿದೆ ನೋಡಿ.ಜಾನಪದದಲ್ಲಿ ಒಂದು ಮಾತಿದೆ. ಒಂದು ಹೊತ್ತು ಉಂಡವ ಯೋಗಿ. ಎರಡೊತ್ತು ಉಂಡವ ಭೋಗಿ, ಮೂರೊತ್ತು ಉಂಡವ ರೋಗಿ, ನಾಲ್ಕೊತ್ತು ಉಂಡವನನ್ನು ಹೊತ್ಕೊಂಡ್ ಹೋಗಿ. ಈ ಎರಡೂ ಸೂತ್ರಗಳು ಮಿತಾಹಾರವನ್ನೇ ಹೇಳುತ್ತವೆ. ಮನುಷ್ಯನಾದರೋ ಬಾಯಿ ಚಪಲಕ್ಕೆ ಹೆಚ್ಚೆಚ್ಚು ಆಹಾರ ಸೇವಿಸಿ ರೋಗಕ್ಕೆ ತುತ್ತಾಗುತ್ತಾನೆ.
----------------------------------------------------------------------
3ನೇ ಏಪ್ರಿಲ್ 2010

ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವ:|
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||

ಪ್ರಿಯವಾದ ಮಾತಿನಿಂದ ಎಲ್ಲಾ ಪ್ರಾಣಿಗಳೂ ಸಂತೋಷಪಡುತ್ತವೆ. ಆದ್ದರಿಂದ ಸದಾ ಪ್ರಿಯವಾದ ಮಾತುಗಳನ್ನೇ ಆಡಬೇಕು. ಪ್ರಿಯವಾದ ಮಾತಿಗೆ ಬಡತನವುಂಟೆ?

ಭಗವಂತನು ಕರುಣಿಸಿರುವ ಅದ್ಭುತ ಸಂಪತ್ತೆಂದರೆ ಮಾತು. ಮನುಷ್ಯನನ್ನು ಸಂತೋಷಗೊಳಿಸಲು ಎಲ್ಲಕ್ಕಿಂತಲೂ ಉತ್ತಮಮಾರ್ಗವೆಂದರೆ ಮಾತು. ಯಾವುದರಿಂದಲೂ ಸಮಾಧಾನಪಡಿಸಲಾಗದ್ದು ಒಳ್ಳೆಯ ಮಾತಿನಿಂದ ಸಾಧ್ಯವಾಗುತ್ತದೆ. ಮಾತೇಮುತ್ತು. ಮಾತೇ ಮೃತ್ಯು. ಒಳ್ಳೆಯ ಮಾತನ್ನಾಡಿ ಸಮಾಜದಲ್ಲಿ ಒಳ್ಳೆಯವನೆನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮಾತಿನಿಂದಲೇಮತ್ತೊಬ್ಬರಿಗೆ ತಲೆನೋವು ತರುವ ಜನರೂ ಇದ್ದಾರೆ. ಕೆಲವರಿಗೆ ಮಾತು ಒಂದು ಚಟ.ಆದರೆ ನಿರ್ಮಲ ಹೃದಯದಿಂದಮತ್ತೊಬ್ಬರಿಗೆ ಕಿರಿಕಿರಿಯಾಗದಂತೆ ಮಾತನಾಡುವುದು ಒಂದು ಕಲೆಯೂ ಹೌದು, ಗುಣವೂ ಹೌದು. ಪ್ರಿಯವಾದ ಮಾತಿಗೆಬಡತನವಿಲ್ಲ. ಪ್ರಿಯವಾದ ಮಾತನ್ನೇ ಆಡೋಣ.

---------------------------------------------------------------------------------------------