Pages

Sunday, August 1, 2010

ಭಗವಂತನು ಕೊಟ್ಟಿದ್ದಕ್ಕೆ ಲೆಕ್ಖ ಇಟ್ಟವರಾರು?

ಮೊನ್ನೆ ಸತ್ಸಂಗದಲ್ಲಿ ಮಿತ್ರರೊಬ್ಬರು ಒಂದು ಮಾತು ಹೇಳಿದರು " ನಿತ್ಯವೂ ನಾವು ಮಾಡುವ ಹಣದ ಖರ್ಚಿನ ಲೆಕ್ಖವನ್ನು ಡೈರಿಯಲ್ಲಿ ಸಾಮಾನ್ಯವಾಗಿ ಬರೆದಿಡುತ್ತೇವೆ.ಆದರೆ ನಮಗರಿವಿಲ್ಲದಂತೆ ನಾವು ಯಥೇಚ್ಯವಾಗಿ ಖರ್ಚುಮಾಡುವ ನೀರು, ಗಾಳಿ, ಬೆಳಕಿನ ಲೆಕ್ಖ ಇಡುತ್ತೇವೆಯೇ?"

ಪ್ರಶ್ನೆ ಕೇಳಿದೊಡನೆ ಬೆಚ್ಚಿಬಿದ್ದೆ. ಅಲ್ವಾ! ಪ್ರತಿ ಸೆಕೆಂಡಿನಲ್ಲಿ ಉಸಿರಾಡಲು ಗಾಳಿಬೇಕು, ದಿನಕ್ಕೆ ಅದೆಷ್ಟು ಪ್ರಮಾಣದಲ್ಲಿ ನೀರು ವೆಚ್ಚ ಮಾಡುತ್ತೇವೆಯೋ ನಮಗೇ ಗೊತ್ತಿರುವುದಿಲ್ಲ. ಸೂರ್ಯ ಒಂದು ದಿನ ಮಂಕಾದರೆ ಸಾಕು ನಮ್ಮ ಜೀವನದಲ್ಲೂ ಮಂಕು ಕವಿಯದೇ ಇರಲಾರದು. ಇತ್ತೀಚೆಗಂತೂ ಕೆಲವೆಡೆ ಕುಡಿಯಲು ನೀರಿಗೆ ಹಾಹಕಾರವಾದರೆ ಕೆಲವು ಮನೆಗಳಲ್ಲಿ ಪುರಸಭೆಯವರು/ಪಂಚಾಯ್ತಿ ಯವರು ಸರಬರಾಜು ಮಾಡುವ ನೀರು ಮನೆಯ ತೊಟ್ಟಿ ತುಂಬಿ ಓವರಹೆಡ್ ಟ್ಯಾಂಕ್ ತುಂಬಿ ಹೆಚ್ಚಾಗಿ ಮೋರಿಯಲ್ಲಿ ಹರಿದುಹೋಗುವ ಪರಿ! ಆನೆತೊಳೆಯಲು ಸಾಕಾಗುವಷ್ಟು ನೀರನ್ನು ಕಾರ್ ತೊಳೆಯಲು ಉಪಯೋಗಿಸುವ ರೀತಿ!

ಹೌದಲ್ವಾ!

ನಾವು ಖರ್ಚುಮಾಡುವ ಪ್ರತಿ ಹನಿ ನೀರಿಗೆ ಲೆಕ್ಖ ಇಡುವ ಪರಿಸ್ಥಿತಿ ಇದ್ದಿದ್ದರೆ!

ಸಿಲಿಂಡರ್ ನಲ್ಲಿ ಗಾಳಿಯನ್ನು ಕೊಂಡು ಉಪಯೋಗಿಸುವಂತಿದ್ದರೆ!

ಸೂರ್ಯನ ಬೆಳಕಿಗೂ ಕಾಸು ಕೊಡಬೇಕಾಗಿದ್ದರೆ!

ಭಗವಂತನು ಅದೆಷ್ಟು ದಯಾಮಯ! ಅವನು ಕೊಟ್ಟಿದ್ದನ್ನೆಲ್ಲಾ ಬಿಟ್ಟಿ ಪಡೆಯುವ ನಾವು ಅವನನ್ನು ಮರೆತು ಚಿಲ್ಲರೆ ಲೆಕ್ಖ ಇಟ್ಟಿದ್ದೇ ಇಟ್ಟಿದ್ದು!!

ಭಕ್ತಿ-ಶ್ರದ್ಧೆ-ಸೇವೆ


ಭಕ್ತಿ-ಶ್ರದ್ಧೆ-ಸೇವೆ

ಯಾತ್ರೆ ಹೋಗಲುಬೇಕು ತೀರ್ಥಕ್ಷೇತ್ರಂಗಳಿಗೆ
ಜಾತ್ರೆ ನೋಡಲು ಜನರ ಬಹುರೂಪಗಳನು
ಮಾತ್ರೆ ನುಂಗುವ ಬದಲು ರಕ್ತದೊತ್ತಡವದಕೆ
ಸೂತ್ರ-ಮನಮುದಗೊಳಿಸು | ಜಗದಮಿತ್ರ

ಪ್ರೀತಿಸುತ ದೈವಗಳ ಪಲ್ಲಕಿಯ ಹೊರು ನೀನು
ರೀತಿಯಲಿ ಬಹುವಿಧದಿ ಪೂಜಿಸುತಲವನ
ಭೀತಿಯಿಂ ಮುಗ್ಗರಿಸಿ ಹೊರನೋಟದಲಿ ಭಜಿಸೆ
ನೀತಿಯದು ಸರಿಯಿರದು | ಜಗದಮಿತ್ರ

ಕಾವ ದೇವನ ಕಂಡು ಜಾವದಲಿ ಸರದಿಯಲಿ
ಭಾವಭಕ್ತಿಯ ಹೃದಯ ತೆರೆದಿಡುತಲವಗೆ
ಮಾವು ತೆಂಗಿನಕಾಯಿ ಜಾಜಿ-ಮಲ್ಲಿಗೆಯಿಟ್ಟು
ಜೀವಕಳೆ ನೀ ಕಾಣು | ಜಗದಮಿತ್ರ

ಪತ್ರೆಯಾದರು ಇರಲಿ ಪುಷ್ಪವಾದರು ಬರಲಿ
ಗಾತ್ರದಲಿ ಮನ ಮಾತ್ರ ಬಹುದೊಡ್ಡದಿರಲಿ
ಹತ್ರದಲಿ ಸಿಗುವಂತ ಫಲ ನೀರು ಪನ್ನೀರು
ಪಾತ್ರೆಯೊಳಗಿಟ್ಟು ಮುಗಿ | ಜಗದಮಿತ್ರ

ಹೃದಯಕಮಲದ ಮಧ್ಯೆ ಸಿಂಹಾಸನದಿ ಕುಳಿತ
ಉದಯ ನಾರಾಯಣನ ಮುದದಿಂದ ನೆನೆದು
ಬದುಕಿನಲಿ ಜೊತೆಗಾರ ಅನನ್ಯ ಸಹಕಾರ
ವಿಧಿಯವನೆ ಹಿಡಿಯವನ | ಜಗದಮಿತ್ರ

ಛತ್ರ ಚಾಮರನೀಡು ಶಯನದುತ್ಸವ ಮಾಡು
ಉತ್ತರೋತ್ತರ ನಾಮ ಸ್ಮರಣೆಯದ ಪಾಡು
ಕ್ಷಾತ್ರನಾ ಚಂಡಕೌಶಿಕ ಜಪಿಸಿ ಮುನಿಯಾದ
ಖಾತ್ರಿಯದು ನೀ ಪಡೆವೆ | ಜಗದಮಿತ್ರ

ನರ್ತಿಸುತ ಕೈಕಾಲು ದಂಡಿಸುತ ಶಿರ ಬಾಗಿ
ವರ್ತನೆಯೊಳಾದೈವ ಸಂಪ್ರೀತಗೊಳಿಸು
ವ್ಯರ್ಥಮಾಡದೆ ಸಮಯ ಅಷ್ಟಾಂಗ ಸೇವಿಸಲು
ಪಾರ್ಥಸಾರಥಿಯೊಲಿವ | ಜಗದಮಿತ್ರ

--ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ 'ಜಗದಮಿತ್ರನ ಕಗ್ಗ' ಸಂಕಲನದಿಂದ