Pages

Thursday, March 13, 2014

ಜೀವನ ವೇದ-೦೮

ಸತ್ಯವನ್ನು ಆವಿಷ್ಕರಿಸಿ-ನಿರ್ಭೀತರಾಗಿ ಜೀವನ ನಡೆಸಿ
ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು  ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ  ಕಾರಣ.
    ಧರ್ಮಾಚರಣೆಯ ಹೆಸರಲ್ಲಿ ಮೌಢ್ಯದಿಂದ ವರ್ತಿಸುವ ಹಲವು ಉಧಾಹರಣೆಗಳಿವೆ.ಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು ಕಥೆ ಎಲ್ಲರಿಗೂ ತಿಳಿದದ್ದೇ.ಆದರೂ ನೆನಪು ಮಾಡುವೆ.
ಬ್ರಾಹ್ಮಣನೊಬ್ಬನ ಮನೆಯಲ್ಲಿ ಅವನ ತಂದೆಯ ಶ್ರಾದ್ಧದ ದಿನ ಮನೆಯಲ್ಲಿದ್ದ ಬೆಕ್ಕಿನ ಮೇಲೆ  ಕುಕ್ಕೆಯೊಂದನ್ನು ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಕಾರಣ ಬಲು ಸರಳ. ಮನೆಯಲ್ಲಿ ಬೆಕ್ಕು ಓಡಾಡುತ್ತಿದ್ದರೆ ಶ್ರಾದ್ಧದ ಊಟ ಮಾಡುತ್ತಿದ್ದವರ ಎಲೆಗೆ ಬೆಕ್ಕಿನ ಕೂದಲು ಬಿದ್ದೀತೆಂಬ ಮುನ್ನೆಚ್ಚರಿಕೆ. ಹೀಗೇ ಹಲವು ವರ್ಷಗಳು ನಡೆಯಿತು. ಮನೆಯ ಯಜಮಾನ ಮರಣ  ಹೊಂದಿದ. ಅವನ ಮಗ ಈಗ ಅವನ ಶ್ರಾದ್ಧಮಾಡಬೇಕು. ಶ್ರಾದ್ಧದ ದಿನ ಬಂತು. ತನ್ನ ಅಪ್ಪ ಶ್ರಾದ್ಧ ಮಾಡುವಾಗ ಬೆಕ್ಕಿನ ಮೇಲೆ ಕುಕ್ಕೆ ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಆದರೆ ಇವನ ಕಾಲಕ್ಕೆ ಮನೆಯಲ್ಲಿ ಬೆಕ್ಕು ಇಲ್ಲದಂತಾಗಿದೆ. ಏನು ಮಾಡುವುದು? ಊರೆಲ್ಲಾ ಸುತ್ತಿ ಒಂದು ಬೆಕ್ಕು ತಂದ. ಅದರ ಮೇಲೆ ಕುಕ್ಕೆ ಮುಚ್ಚಿದ. ಶ್ರಾದ್ಧ ಮಾಡಿದ್ದಾಯ್ತು. ಎಲ್ಲರೂ  ಊಟವನ್ನೂ ಮಾಡಿದರು. ರಾತ್ರಿಯಾಯ್ತು. ಆ ದಿನ ಕಳೆದು ಹೋಯ್ತು. ಬೆಳಿಗ್ಗೆ ಎದ್ದಾಗ ಕುಕ್ಕೆ ಮುಚ್ಚಿದ್ದ ಬೆಕ್ಕಿನ ಬಗ್ಗೆ ನೆನಪಾಯ್ತು. ಕುಕ್ಕೆ ಎತ್ತುತ್ತಾನೆ. ಬೆಕ್ಕು ಉಸಿರಾಡದೆ ಮಲಗಿದೆ. ಗಾಳಿಯೇ ಆಡದ ಪ್ಲಾಸ್ಟಿಕ್ ಕುಕ್ಕೆಯನ್ನು ಮುಚ್ಚಿ ಅದರ ಮೇಲೆ ಅಲುಗಾಡದಂತೆ ತೂಕವನ್ನು ಇಟ್ಟಿದ್ದ ಪರಿಣಾಮ ಉಸಿರಾಡಲೂ ಸಾಧ್ಯವಿಲ್ಲದೆ ಬೆಕ್ಕು ಕೊನೆ ಉಸಿರೆಳೆದಿತ್ತು!! ಇಂತಾ ಘೋರ ಕೃತ್ಯಕ್ಕೆ ಕಾರಣವಾದರೂ ಏನು? ಹಿಂದಿನ ಉದ್ಧೇಶವನ್ನೇ ತಿಳಿಯದೆ ಆಚರಿಸಿದ  ಕುರುಡು ಆಚರಣೆಯಲ್ಲವೇ?  

ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.

ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷ: ||
[ಋಕ್-೧.೮೬.೯]

ಸತ್ಯಶವಸ: = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷ: = ದುಷ್ಕಾಮನೆಗಳನ್ನು
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.
ಒಂದೊಮ್ಮೆ ಈ ಮಂತ್ರದ ಅರಿವಿದ್ದಿದ್ದರೆ ಬೆಕ್ಕನ್ನು ಕೊಲ್ಲುವ ಮೌಢ್ಯದ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ. ಬೆಕ್ಕಿನ ಕಥೆಯಲ್ಲಿ ಅತಿರೇಕವಿರ ಬಹುದು. ಆದರೆ ಸತ್ಯವಿಲ್ಲದೆ ಇಲ್ಲ!
ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ?  ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು  ಮಾತ್ರವೇ ಹೇಳಲು ಸಾಧ್ಯ.

ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ  ಅನರ್ಥಕ್ಕೆ ಕಾರಣವಾಗುತ್ತದೆ                                                                                                          
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆವುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ.
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ  ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ  ಬೇಕೆನ್ನುವ ಗುಂಪಿನಿಂದ  ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
 ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧ ಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.
ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.

ಜೀವನವೇದ-೦೭


ಸಂಧ್ಯಾವಂದನೆ ಮತ್ತು ದೇವತಾರ್ಚನೆ ಮಾಡುವಾಗ ಹೇಳುವ ಮಾರ್ಜನ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.
ಅಥರ್ವ ವೇದದ ಮೊದಲ ಕಾಂಡದ ಐದನೇ ಸೂಕ್ತ:
ಮಂತ್ರ-೧
ಆಪೋ ಹಿ ಷ್ಠಾ ಮಯೋ ಭುವಸ್ತಾ ನ ಊರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ ||
ಅರ್ಥ:
ಆಪ: = ಜಲಧಾರೆಗಳೇ
ಮಯೋಭುವ: = ನೀವು ಕಲ್ಯಾಣದಾಯಿನಿಯರು
ಸ್ಥ = ಆಗಿದ್ದೀರಿ
ತಾ: = ಆ ಜಲಧಾರೆಗಳು
ನ: = ನಮ್ಮನ್ನು
ಊರ್ಜೇ = ಬಲಯುತರನ್ನಾಗಿಸಲಿ
ಮಹೇ ರಣಾಯ ಚಕ್ಷಸೇ = ಮಹಾ ರಮಣೀಯವಾದ ದೃಷ್ಟಿಗಾಗಿ
ದಧಾತನ = ಒದಗಲಿ
ಭಾವಾರ್ಥ:-
ಕಲ್ಯಾಣದಾಯಿನಿಯರಾದ ಈ ನದೀನದಾದಿಗಳು ನಮ್ಮನ್ನು  ಸುಂದರರನ್ನಾಗಿಯೂ, ಬಲಶಾಲಿಗಳನ್ನಾಗಿಯೂ ಮಾಡಲಿ. ಸಂಧ್ಯಾವನೆ ಆರಂಭದಲ್ಲಿ  ಉದ್ಧರಣೆಯಲ್ಲಿ ನೀರು ತುಂಬಿ ಬೆರಳುಗಳನ್ನು ಅದರಲ್ಲಿ ಅದ್ದಿ ಈ ಮಂತ್ರವನ್ನು ಹೇಳುತ್ತಾ ದೇಹದ ಅಂಗಾಂಗಗಳಮೇಲೆ ಚುಮುಕಿಸಿಕೊಳ್ಳುತ್ತೇವೆ. ಉಪನಯನ ಸಂಸ್ಕಾರವಾಗುವ ವಟುಗಳಿಗೆ ಸಾಮಾನ್ಯವಾಗಿ ಈ ಮಂತ್ರದ ಲಾಭವನ್ನು ಹೇಳುವಾಗ ಹೀಗೆ ಹೇಳುವುದನ್ನು ಕೇಳಿದ್ದೇನೆ  ನಿಮಗರಿವಿದ್ದೋ ಅಥವಾ ಅರಿವಿಲ್ಲದೆಯೋ ಶಾರೀರಿಕವಾಗಿ ಮಾಡಿದ ಪಾಪವು ಈ ಮಂತ್ರಹೇಳಿ ನೀರನ್ನು ಪ್ರೋಕ್ಷಣೆಮಾಡಿಕೊಳ್ಳುವುದರಿಂದ ನಿವಾರಣೆಯಾಗಿ  ಶರೀರವು ಶುದ್ಧಿಯಾಗುತ್ತದೆ
ವೇದಮಂತ್ರಗಳನ್ನು  ಹೀಗೆ ಅರ್ಥೈಸುವುದು ಎಷ್ಟು ಸರಿ? ಈ ಮಂತ್ರವನ್ನು ಹೇಳುತ್ತಾ  ನೀರನ್ನು ಪ್ರೋಕ್ಷಿಸಿಕೊಳ್ಳುವುದರಿಂದ  ನೀನು ಮಾಡಿದ  ಪಾಪವು ಪರಿಹಾರವಾಗುತ್ತದೆಂದು ಈ ಮಂತ್ರದಲ್ಲಿ ಎಲ್ಲಿ ಹೇಳಿದೆ? ವೇದವಾದರೋ ಪಾಪಕೃತ್ಯವನ್ನು ಮಾಡಲು ಆಸ್ಪದವನ್ನೇ ಕೊಡುವುದಿಲ್ಲ.ಒಂದು ವೇಳೆ ಪಾಪಕೃತ್ಯವನ್ನು ಮಾಡಿದರೆ ಅದರ ಪ್ರತಿಫಲವನ್ನು ಅವನು ಎದುರಿಸಲೇ ಬೇಕಾಗುತ್ತದೆ.
ಹಾಗಾದರೆ ಈ ಮಂತ್ರವು ಏನು ಹೇಳುತ್ತದೆ?
 ಈ ಮಂತ್ರದ ಸರಿಯಾದ  ಅರ್ಥವನ್ನು ತಿಳಿದು ಸಂಧ್ಯಾವಂದನೆ ಮಾಡಿದರೆ! ನೀರನ್ನು ಮೈ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವಾಗ ಅದನ್ನು ನೀಡಿರುವ ಭಗವಂತನನ್ನು ಮನದಲ್ಲಿ ಸ್ಮರಿಸಿಕೊಂಡು “ ಆ  ಭಗವಂತನು ನನಗೆ ಶಕ್ತಿ ಕೊಡಲಿ, ಕಾಂತಿ ಕೊಡಲಿ” ಎಂದು ಪ್ರಾರ್ಥಿಸುತ್ತಾ ಕ್ರಿಯೆಯನ್ನು ಮಾಡಿದರೆ ಮನಸ್ಸಿನಲ್ಲಿ ನಾವು ಏನು ಭಾವಿಸುತ್ತೇವೆಯೋ ಅದರಂತೆಯೇ ಆಗುತ್ತೇವೆ. ಆದ್ದರಿಂದ ನೀರನ್ನು ಪ್ರೋಕ್ಷಿಸಿಕೊಳ್ಳುವುದು ಒಂದು ನೆಪ ಅಷ್ಟೆ. ಆದರೆ ನೀರನ್ನು ಪ್ರೋಕ್ಷಿಸಿಕೊಳ್ಳುವಾಗ ನಮ್ಮಲ್ಲಿ ಈ ಅಂಶಗಳು ಮೂಡಿದರೆ ನಾವು ಆರೋಗ್ಯವಂತರೂ, ರಮಣೀಯರೂ, ಬಲಶಾಲಿಗಳೂ ಆಗುವುದರಲ್ಲಿ ಸಂದೇಹವಿಲ್ಲ. ಆದರೆ ಯಾಂತ್ರಿಕವಾಗಿ ನೀರನ್ನು ಪ್ರೋಕ್ಷಿಸಿಕೊಳ್ಳುತ್ತಾ ಮನದಲ್ಲಿ ಅನ್ಯ ಚಿಂತೆಗಳು ಮೂಡಿದರೆ ನಾವು ಹೇಳುವ ಮಾರ್ಜನ ಮಂತ್ರದ ಪ್ರಭಾವವು ನಮ್ಮ ಶರೀರ ಮನಸ್ಸುಗಳ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು. ಅಲ್ಲದೆ ಕೇವಲ ನೀರನ್ನು ಪ್ರೋಕ್ಷಿಸಿಕೊಂಡರೆ ಮಾಡಿದ್ದ ಪಾಪವು ಪರಿಹಾರವಾಗಲಾರದು. 

ಮಂತ್ರ-೨
ಯೋ ವ: ಶಿವತಮೋ ರಸಸ್ತಸ್ಯ ಭಾಜಯತೇಹ ನ: |
ಉಶತೀರಿವ ಮಾತರ: ||
ಅರ್ಥ:
ಯ: = ಯಾವ
ವ: = ಆ ಜಲವು
ಶಿವತಮ: ರಸ: = ಅತ್ಯಂತ ಕಲ್ಯಾಣಕಾರವಾದ ರಸವಿದೆಯೋ
ಉಶತೀ: ಮಾತರ: ಇವ = ಮಮತೆಯ ಮಾತೆಯರಂತೆ
ನ: ಇಹ ತಸ್ಯ ಭಾಜಯತೇ = ನಮಗೆ ಅದರ ಭಾಗವು ಲಭಿಸಲಿ
ಭಾವಾರ್ಥ: ತಾಯಂದಿರು ವಾತ್ಸಲ್ಯದಿಂದ ತಮ್ಮ ಮಕ್ಕಳಿಗೆ ನೆಲೆ ನೀಡುವಂತೆ, ಆಸರೆಯಾಗುವಂತೆ ಅಮೃತಮಯ ಜಲಧಾರೆಗಳ ಆಶ್ರಯದಲ್ಲಿ ನಮಗೆ ಬದುಕು ಲಭಿಸಲಿ.
ಈ ಮಂತ್ರದ ಅರ್ಥ ಎಷ್ಟು ಸೊಗಸಾಗಿದೆ!  ಎಂತಹಾ ಅದ್ಭುತ ಹೋಲಿಕೆ! ತಾಯಾಂದಿರು ತಮ್ಮ ಮಕ್ಕಳಿಗೆ ಮಮಕಾರದಿಂದ ಆಶ್ರಯ ಕೊಡುವಂತೆ ನಮಗೆ ಭಗವಂತನು ಸೃಷ್ಟಿಸಿರುವ ಜಲಧಾರೆಗಳು ಆಶ್ರಯ ಕೊಡಲಿ. ಇಲ್ಲಿ ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಪ್ರೋಕ್ಷಿಸಿಕೊಳ್ಳುತ್ತಿರುವ ನೀರು ಅಂತಿಂತಾ ನೀರಲ್ಲ. ಅದು ಪವಿತ್ರ ಗಂಗೆ! ಅದು ನನಗೆ ಆಶ್ರಯ ಕೊಡಲಿ, ಎಂದರೆ ನಮ್ಮ ಆರೋಗ್ಯಭಾಗ್ಯ ನಮಗೆ ಲಭಿಸಿರುವುದೇ ಈ ಪವಿತ್ರವಾದ ನೀರಿನಿಂದ. ನೀರಿಲ್ಲದ ಒಂದು ದಿನವನ್ನು ಕಲ್ಪಿಸಿಕೊಳ್ಳಿ. ಮನುಶ್ಯನಿಗೆ ಏನಿಲ್ಲದಿದ್ದರೂ ಗಾಳಿ, ನೀರು ಮಾತ್ರ ಅತ್ಯಗತ್ಯವಾಗಿ ಬೇಕು. ನಮಗೆ ಅದರ ಮಹತ್ವ ಗೊತ್ತಿದೆಯೇ? ಎಲ್ಲವೂ ನಮಗೆ ಯಾವ ಸಮಸ್ಯೆಇಲ್ಲದೆ ದೊರಕುತ್ತಿದ್ದಾಗ ಅದರ ಮಹತ್ವ ಗೊತ್ತಾಗುವುದಿಲ್ಲ. ಆದರೆ ಅದರ ಲಭ್ಯತೆ ಕಷ್ಟವಾದಾಗ ಆ ವಸ್ತುವಿನ ಮಹತ್ವ ಗೊತ್ತಾಗುತ್ತದೆ. ನಮ್ಮ ಆರೋಗ್ಯದ ವಿಚಾರದಲ್ಲೂ ಅಷ್ಟೆ. ಮನುಶ್ಯನು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿದ್ದಾಗ  ಆರೋಗ್ಯದ ಮಹತ್ವ ಗೊತ್ತಾಗುವುದೇ ಇಲ್ಲ. ಆದರೆ ಒಂದುವಾರ ಹಾಸಿಗೆ ಹಿಡಿದು ಮಲಗಿ ಪುನ: ಸುಧಾರಿಸಿಕೊಂಡು ಹಾಸಿಗೆಯಿಂದ ಎದ್ದಾಗ ಮನುಶ್ಯನ ಮಾನಸಿಕತೆ ಹೇಗಿರುತ್ತದೆ? ಮನುಶ್ಯನು ಬಲು ಸಂತಸಗೊಂಡು ಸ್ನೇಹಿತರೊಡನೆಲ್ಲಾ ತನ್ನ ಸಂತಸವನ್ನು ಹಂಚಿಕೊಳ್ಳುತ್ತಾನೆ. ಈಗ ಯೋಚಿಸೋಣ. ಆರೋಗ್ಯ ಕೆಡುವುದಕ್ಕಿಂತ ಒಂದು ದಿನ ಹಿಂದೆ ಇವತ್ತು ಪಡುತ್ತಿರುವ ಸಂತೋಷ ಅನುಭವಿಸಿದ್ದಿರಾ? ಇಲ್ಲ,  ಎನ್ನುವುದಾದರೆ ಯಾಕೇ?  ಏಕೆಂದರೆ ಆರೋಗ್ಯವಂತ ಬದುಕಿನ ಮಹತ್ವ ನಮಗೆ ಗೊತ್ತಿಲ್ಲ. ಯಾವಾಗ ಆರೋಗ್ಯ ಕೆಡುತ್ತದೆಯೋ ಆಗ ಅದರ ಮಹತ್ವದ ಅರಿವಾಗುತ್ತದೆ.
ನೀರಿನ, ಗಾಳಿಯ ವಿಷಯದಲ್ಲೂ ಅಷ್ಟೆ. ನಾವು ನೀರನ್ನು ಅದೆಷ್ಟು ಪೋಲು ಮಾಡುತ್ತೇವೋ! ವಾತಾವರಣವನ್ನು ಅದೆಷ್ಟು ಕಲುಶಿತಗೊಳಿಸುತ್ತೇವೆಯೋ! ಕಾರಣ ಗಾಳಿ ಮತ್ತು ನೀರನ್ನು ಹಣಕೊಟ್ಟು ಕೊಳ್ಳಲಿಲ್ಲವಲ್ಲಾ! [ನಗರಗಳಲ್ಲಿ  ವಾಟರ್ ಟ್ಯಾಕ್ಸ್ ಕಟ್ಟಿದರೂ ಅದು ಬಲು ಕಡಿಮೆ] ರಸ್ತೆಯಲ್ಲಿ ತಿರುಗಾಡುವಾಗ  ನಾಲ್ಕಾರು ಮನೆಗಳಿಂದ ಓವರ್ ಹೆಡ್ ಟ್ಯಾಂಕ್ ತುಂಬಿ ಚಿರಂಡಿಗೆ ಅದೆಷ್ಟು ನೀರು ಹರಿದು ಹೋಗುತ್ತದೋ! ಅಂತೆಯೇ ಗಾಳಿಯನ್ನು ನಾವು ಅದೆಷ್ಟು ಕಲುಶಿತಗೊಳಿಸುತ್ತೇವೆಯೋ!
ಈ ಮಂತ್ರವನ್ನು ಹೇಳುವಾಗ   ನೀರು ಮತ್ತು ಗಾಳಿಯ ಮಹತ್ವವು ನಮಗೆ  ಅರ್ಥವಾಗಬೇಕು. ಮಹತ್ವವರಿತು  ಅದರಂತೆ ನಡೆದರೆ  ನೀರು ನಮಗೆ ಆರೋಗ್ಯವನ್ನೂ , ಜೀವನದಲ್ಲಿ ನೆಮ್ಮದಿ, ಶಾಂತಿಯನ್ನೂ ನೀಡುತ್ತದೆ.
ಮಂತ್ರ-೩     
ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|ಆಪೋ ಜನಯಥಾ ಚ ನ: ||
ಅರ್ಥ:
ಯಸ್ಯ ಕ್ಷಯಾಯ ಜಿನ್ವಥ = ಯಾವನನ್ನು ನೆಲೆಗೊಳಿಸಲು ಅವು ಹರಿದುಬರುತ್ತವೋ
ತಸ್ಮೈ = ಅವನಿಗಾಗಿ
ಅರಂ ಗಮಾಮ = ಸೂಕ್ತವಾಗಿ ಬಳಸಿಕೊಳ್ಳುತ್ತೇವೆ [ಅವು]
ನ: = ನಮ್ಮನ್ನು
ಜನಯಥ = ಬಲಪಡಿಸಲಿ
ಭಾವಾರ್ಥ:
ನಮ್ಮ ಕಲ್ಯಾಣಕ್ಕೆಂದೇ ಹರಿಯುವ ಜಲರಾಶಿಯನ್ನು ಸಂಪೂರ್ಣವಾಗಿ ಆಶ್ರಯಿಸುತ್ತೇವೆ. ಅವು ನಮ್ಮ ಬದುಕನ್ನು ನಿರಂತರ ಸಂಮೃದ್ಧಗೊಳಿಸಲಿ.
ಮಂತ್ರ-೪
ಈಶಾನಾ ವಾರ್ಯಾಣಾಂ ಕ್ಷಯಂತೀಶ್ಚರ್ಷಣೀನಾಮ್ |
ಅಪೋ ಯಾಚಾಮಿ ಭೇಷಜಮ್ ||
ಅರ್ಥ:
ವಾರ್ಯಾಣಾಂ = ಅಭಿಲಾಷೆ ಪಟ್ಟ ಇಷ್ಟಾರ್ಥಗಳ
ಈಶಾನಾ ಆಪ: = ಗಂಗಾ ಮಾತೆಯಿಂದ
ಚರ್ಷಣೀನಾಂ = ಜೀವಕೋಟಿಗಳ
ಕ್ಷಯಂತೀ: = ರೋಗಗಳನ್ನು ನಾಶಮಾಡುವ
ಭೇಷಜಂ ಯಾಚಾಮಿ = ಔಷಧಿಯು ದೊರಕಲಿ
ಭಾವಾರ್ಥ:
ಇಷ್ಟಾರ್ಥಗಳನ್ನು ನೀಡುವ ಜಲಧಾರೆಗಳು ನಮಗೆ ದಿವ್ಯ ಔಷಧಿಗಳನ್ನು ನೀಡಲಿ.
ಈ ಎರಡು ಮಂತ್ರಗಳು ನೀರಿನ ವಿಶೇಷ ಗುಣಗಳನ್ನು ವಿವರಿಸುತ್ತಾ ,ಇಂತಾ ಪವಿತ್ರ ನೀರು ನಮ್ಮ ಬದುಕನ್ನು ಸಂಮೃದ್ಧ ಗೊಳಿಸಲೆಂದೂ, ನೀರಿನ ಔಷಧ ಗುಣವು ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟಿರಲಿ ಎಂದೂ ಭಗವಂತನನ್ನು ನಾವು  ಈ ಮಂತ್ರದ ಮೂಲಕ ಪ್ರಾರ್ಥಿಸುವಾಗಲೇ ನೀರಿನ ಪಾವಿತ್ರ್ಯವನ್ನು ಹಾಳುಗೆಡವದಂತೆ ನಾನು ಜೀವನ ನಡೆಸುತ್ತೇನೆಂದೂ ಸಹ ಸಂಕಲ್ಪ ಮಾಡಿದಾಗ, ನಮ್ಮ ಸಂಧ್ಯಾವಂದನೆಯು  ನಮ್ಮ ಆರೋಗ್ಯದ ಮೇಲೆ ಸತ್ಪ್ರಭಾವವನ್ನು ಬೀರುವುದಲ್ಲದೆ ನಮ್ಮ ಬದುಕಿನಲ್ಲಿ  ನೆಮ್ಮದಿಯೂ  ಶಾಂತಿಯೂ ನೆಲೆಸುವುದು.

-ಹರಿಹರಪುರಶ್ರೀಧರ್