Pages

Sunday, March 2, 2014

ನಮ್ಮ ಮನೆಗಳು ಹೇಗಿರಬೇಕು? ಹೇಗಿರಬಾರದು?

ನಮ್ಮ ಮನೆಗಳು  ಹೇಗಿರಬಾರದೆಂಬುದನ್ನು  ಅಥರ್ವ ವೇದದ ಒಂದು ಮಂತ್ರವು ಸೊಗಸಾಗಿ ಹೇಳಿದೆ.
ಅಸೌ ಯೋ ಅಧರಾತ್ ಗೃಹಸ್ತತ್ರ ಸನ್ತ್ವರಾಯ್ಯ: |
ತತ್ರ ಸೇದಿರ್ನುಚ್ಯತು  ಸರ್ವಾಶ್ಚ ಯಾತು ಧಾನ್ಯ: ||
[ಅಥರ್ವ:೨.೧೪.೩]
ಯ: = ಯಾವ
ಗೃಹ:  = ಮನೆಯು
ಅಧರಾದ್ = ಅಂಧಕಾರದಿಂದ ತುಂಬಿ ನಿಮ್ನ ಸ್ಥಿತಿಯಲ್ಲಿರುವುದೋ
ತತ್ರ= ಅಲ್ಲಿ
ಸರ್ವಾ: = ಎಲ್ಲಾ
ಯಾತು ಧಾನ್ಯ: = ಪ್ರಜೆಗಳನ್ನು ಪೀಡಿಸುವ ವಿಪತ್ತುಗಳು, ರೋಗಗಳು
ಅರಾಯ್ಯ: = ಮನುಷ್ಯನ ಧನಸಂಪತ್ತನ್ನು  ಮತ್ತು ಶೋಭೆಯನ್ನು ಹರಣ ಮಾಡುವಂತಹ ಸಂಕಷ್ಟಗಳು
ಸನ್ತು = ಇರುತ್ತವೆ
ತತ್ರ = ಅಲ್ಲಿ
ಸೇದಿ: = ದು:ಖಗಳು
ನಿ ಉಚ್ಯತು = ಯಾವಾಗಲೂ ಇರುತ್ತವೆ
ಹಾಗೆಂದರೇನು?
ಸತ್ಪುರುಷರಿಲ್ಲದ , ಸತ್ ಕಾರ್ಯಗಳು ನಡೆಯದ ,ಸಜ್ಜನರು ಬಾರದ ,ವಿದ್ಯೆ ವಿಜ್ಞಾನಗಳಿಲ್ಲದ ಮನೆಗಳು ಸಕಲ ಅನರ್ಥಗಳಿಗೂ ನಿಲಯಗಳಾಗುತ್ತವೆ. ಅಲ್ಲಿ ದುಷ್ಟರು . ವಿಷಕೀಟಗಳು.ವಿವಿಧವ್ಯಾಧಿಗಳು, ಅನೇಕ ಆಪತ್ತುಗಳು, ದು:ಖಗಳು ನೆಲೆಸಲು ಅವಕಾಶವಾಗುತ್ತದೆ. ಅಲ್ಲಿ ಒಳ್ಳೆಯವರು ಇರಲಾರರು. ಕೆಲವು ಮನೆಗಳಿಗೆ ಹೋದರೆ ಸ್ವಲ್ಪಹೊತ್ತು ಕುಳಿತುಕೊಳ್ಳಲೂ ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತರೆ ಸಾಕೆನಿಸುತ್ತದೆ.ಇನ್ನು ಕೆಲವು ಮನೆಗಳಲ್ಲಿ ಇನ್ನೂ ಸ್ವಲ್ಪ ಸಮಯ ಇದ್ದು ಹೋಗೋಣ   ಎನಿಸುತ್ತದೆ. ಇಂತಹ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ.
ಸಾದು ಸತ್ಪುರುಷರ ಸಮಾಗಮ,ಸತ್ಕರ್ಮಗಳು ನಡೆಯುವ ಗೃಹಗಳು ಸುಖದಾಯಕವಾಗಿ ಇರಬಲ್ಲವು. ನಾವು ಹಲವು ಗ್ರಂಥಗಳನ್ನು ಓದಬಹುದು, ಹಲವು ಉಪನ್ಯಾಸಗಳನ್ನು ಕೇಳಬಹುದು, ಮಠ ಮಂದಿರಗಳಿಗೆ ಸುತ್ತಬಹುದು, ತೀರ್ಥಯಾತ್ರೆಗಳನ್ನು ಮಾಡಬಹುದು, ಆದರೆ ನಮ್ಮ ಮನೆ ಹೇಗಿರಬೇಕೆಂದು ಎಂದಾದರೂ ಯೋಚಿಸಿದ್ದೇವೆಯೇ? ನಮ್ಮ ಮನೆಯಲ್ಲಿ ಸಿಗದ ಸುಖ-ನೆಮ್ಮದಿಯನ್ನು ಬೇರೆಲ್ಲೋ ಹುಡುಕಿ ಹೊರಟರೆ ಸಿಕ್ಕೀತೇ?
ನಮ್ಮ ಚಿಕ್ಕವಯಸ್ಸಿನಲ್ಲಿ ಹಿರಿಯರು ನಮಗೆ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತದೆ” ಮನೆಯಲ್ಲಿ ಯಾವಾಗಲೂ ಋಣಾತ್ಮಕ ಮಾತುಗಳನ್ನು ಆಡಬೇಡಿ, ಜಗಳ ಮಾಡಬೇಡಿ. ಬೈದಾಡಬೇಡಿ?.ಹೀಗೆ ಮಾಡಿದರೆ ಮನೆಯ ತೊಲೆಯಲ್ಲಿ ಕುಳಿತಿರುವ ವಾಸ್ತು ಪುರುಷ” ಅಸ್ತು” ಎಂದು ಬಿಡುತ್ತಾನೆ. ಆಗ ಕೆಟ್ಟ  ಮಾತುಗಳನ್ನಾಡಿದರೆ ಕೆಟ್ಟ   ಪರಿಣಾಮವೇ ಆಗುತ್ತದೆ. ಅದಕ್ಕಾಗಿ ಒಳ್ಳೆಯ ಮಾತುಗಳನ್ನೇ ಆಡಿ, ಆಗ ಒಳ್ಳೆಯದೇ ಆಗುತ್ತದೆ.
ವಾಸ್ತು ಪುರುಷ ಎಲ್ಲಿರುತ್ತಾನೋ, ಇರುವುದಿಲ್ಲವೋ ಚಿಂತಿಸಬೇಕಾಗಿಲ್ಲ. ಆದರೆ  ನಮ್ಮ ಹಿರಿಯರ ಮಾತಿನ ಸಂದೇಶವನ್ನು ಗಮನಿಸಬೆಕಲ್ಲವೇ? ಒಳ್ಳೆಯ ಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಒಳ್ಳೆಯ ಪರಿಣಾಮ ಆಗಲೇಬೇಕು. ಇದು ವೈಜ್ಞಾನಿಕವಾಗಿ ಕೂಡ ಸತ್ಯವೇ ಹೌದು. ವೇದವು ಇನ್ನೂ ಮುಂದೆ ಹೋಗಿ ತಿಳಿಸುತ್ತದೆ” ಸಜ್ಜನರ ಸಾಮೀಪ್ಯವಿರಬೇಕು , ಸತ್ ಕಾರ್ಯಗಳು ನಡೆಯುತ್ತಿರಬೇಕು” ಇಲ್ಲವಾದಲ್ಲಿ  ಅಂತಹ ಮನೆಯಲ್ಲಿ ಜನರ ನೆಮ್ಮದಿ ಹಾಳಾಗುತ್ತದೆ, ಅನಾರೋಗ್ಯ,ಅಸಹನೆ, ದು:ಖ ಎಲ್ಲವೂ ಸುತ್ತಿಕೊಳ್ಳುತ್ತವೆ.

ಹೌದಲ್ಲವೇ? ಇವೆಲ್ಲವೂ ನಮ್ಮ ಅರಿವಿಗೆ ತಿಳಿದಿರುವ ವಿಷಯಗಳೇ ಆಗಿವೆ. ಆದರೂ ನಮ್ಮ ಮನೆಗಳಿಗೆ ಯಾರು ಬಂದು ಹೋಗುತ್ತಾರೇ, ಯಾವ ಮಾತುಕತೆ ನಡೆಯುತ್ತದೆ, ಯಾವುದನ್ನೂ ನಾವು ಗಮನಿಸುವುದೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ  ನಮ್ಮ ಮನೆಯಲ್ಲಿ ಸ್ಥಾನಪಡೆದಿರುವ ಟಿ.ವಿ ಎಂಬ ಪೆಡಂಬೂತ!!
ಟಿ.ವಿಯಲ್ಲಿ ಒಳ್ಳೆಯ ಕಾರ್ಯಕ್ರಮಗಳು ಬಿತ್ತರಿಸುವುದಿಲ್ಲವೆಂದಲ್ಲ, ಆದರೆ ಬಹುಪಾಲು ಮನೆಗಳಲ್ಲಿ ಗಮನಿಸಿ, ದಿನದಲ್ಲಿ ಆರೇಳು ಗಂಟೆಗೂ ಮಿಗಿಲಾಗಿ, ಅಶ್ಲೀಲ ದೃಶ್ಯಗಳು, ರಕ್ತಸಿಕ್ತ ಕೊಲೆ ಸುಲಿಗೆಯ ದೃಷ್ಯಗಳು, ಕಿವಿಯನ್ನು ಕತ್ತರಿಸುವಂತಹ ಕರ್ಕಶ ಹಾಡುಗಳು!!
ರಾತ್ರಿ ಮಲಗುವಾಗಲೂ “ ಕ್ರೈಮ್ ಸ್ಟೋರಿ” ನೋಡಿ ಮಲಗುವ ಎಷ್ಟು ಮನೆಗಳಿಲ್ಲಾ! ಮಲಗುವ ವೇಳೆಯಲ್ಲೂ ಇಂತಹ ಭಯಾನಕ ದೃಷ್ಯಗಳನ್ನು ನೋಡಿ ಮಲಗಿದಾಗ ನಿದ್ರೆಯಲ್ಲಿ ನಮ್ಮ ಮನ:ಸ್ಥಿತಿ ಹೇಗಿದ್ದೀತು? ಸುಖವಾದ ನಿದ್ರೆಯು ಬಯಸಿದರೆ ಸಿಕ್ಕೀತೇ?

ನಮ್ಮ ಆರೋಗ್ಯಕ್ಕೂ ನಮ್ಮ ಜೀವನ ಶೈಲಿಗೂ ನೇರವಾದ ಸಂಬಂಧವಿದೆ ಎಂದು ಮನೋವೈದ್ಯರು ಸಾರುತ್ತಿದ್ದಾರೆ, ಆದರೂ ನಾವು ನಮ್ಮ ಸ್ವಾಸ್ಥ್ಯದ ಬಗ್ಗೆ ಗಮನಕೊಟ್ಟಿದ್ದೇವೆಯೇ? ಇತ್ತೀಚೆಗೆ ವೇದ ವಿದ್ವಾಂಸರೊಬ್ಬರೊಡನೆ ಮಾತನಾಡುತ್ತಿದ್ದೆ”  ವೇದ ಮಂತ್ರ ಗಳನ್ನು ನಿತ್ಯವೂ ಪಠಿಸುವುದರಿಂದ ಏನು ಫಲ ಸಿಗುತ್ತೆ? ನಿಮಗೇನು ಪ್ರಯೋಜನವಾಗಿದೆ? ಎಂದು ಕೇಳಿದಾಗ ಅವರು ಹೇಳಿದರು “ ನೋಡಿ ಏನು ಲಾಭ ಎಂದು ನಾನು ತಲೆಕೆಡಸಿಕೊಳ್ಳಲು ಹೋಗಿಲ್ಲ,  ನನಗೀಗ ಎಪ್ಪತ್ತು ವರ್ಷ ವಯಸ್ಸು, ಆರೋಗ್ಯವಾಗಿದ್ದೇನೆ. ಶುಗರ್, ಬಿ.ಪಿ ಅಥವಾ ಯಾವ ಖಾಯಿಲೆಯೂ ಇಲ್ಲ. ನಿತ್ಯವೂ ನನ್ನ ಎಲ್ಲಾ ಕೆಲಸಗಳನ್ನೂ ಮಾಡಿಕೊಳ್ಳುತ್ತೇನೆ, ಬೆಳಿಗ್ಗೆ ಸಂಜೆ  ಒಂದೊಂದು ಗಂಟೆ ಸಂಧ್ಯಾಕರ್ಮಗಳ ಜೊತೆಯಲ್ಲಿ ಒಂದಿಷ್ಟು ವೇದ ಮಂತ್ರಗಳನ್ನು ಹೇಳಿಕೊಳ್ಳುತ್ತೇನೆ. ರಾತ್ರಿ ಎಂಟರೊಳಗೆ ಸ್ವಲ್ಪ ಉಪಹಾರ ಸ್ವೀಕರಿಸಿ  ಹತ್ತರೊಳಗೆ ಹಾಸಿಗೆ ಮೇಲೆ ಹೋದರೆ ಐದು ನಿಮಿಷಗಳಲ್ಲಿ ನಿದ್ರೆ ಬರುತ್ತೆ, ಎಚ್ಚರವಾಗುವಾಗ ಬೆಲಗಿನ ಜಾವ ಐದು ಗಂಟೆಯಾಗಿರುತ್ತೆ. ಐದಕ್ಕೆ ಎದ್ದರೆ ರಾತ್ರಿ ಹತ್ತರವರೆಗೂ ಒಂದಲ್ಲಾ ಒಂದು ಕೆಲಸ ಮಾಡುತ್ತಿರುತ್ತೇನೆ. ಸುಖವಾಗಿದ್ದೇನೆ. ನನಗೆ ಇನ್ನೇನು ಬೇಕು?

ಹೌದು ನಮ್ಮೆಲ್ಲರ ಮನೆಗೂ ಒಂದು ನೀತಿ ಸಂಹಿತೆ ಇರಬೇಕು. ಅದರಮೇಲೆ ನಮ್ಮ ನಿಗಾ ಇರಬೇಕು. ಸಾದು ಸಜ್ಜನರಿಗೆ, ವಿದ್ವಾಂಸರಿಗೆ ಮನೆಯಲ್ಲಿ ಆಶ್ರಯ ಕೊಡಬೇಕು. ಅವರ ಹಿತವಾದ ಮಾತುಗಳು ನಮ್ಮ ಮನೆಯ ಜನರ ಕಿವಿಯಮೇಲೆ ಬೀಳುತ್ತಿರಬೇಕು. ನಮ್ಮ ಮನೆಯಲ್ಲಿ ಸಮಸ್ಯೆ ಇಟ್ಟುಕೊಂಡು ದೇವಾಲಯಗಳಿಗೆ ಸುತ್ತಿದರೆ ಆ ಭಗವಂತನು ಮೆಚ್ಚಿ ಅವನೇ ಬಂದು ನಮ್ಮ ಮನೆ ಸಮಸ್ಯೆಗಳನ್ನು ನಿವಾರಿಸುವುದಿಲ್ಲ. ನಮ್ಮ ಮನೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಒಂದು ಕುಟುಂಬದ ನಾವೇ ಅದನ್ನು ಸರಿಪಡಿಸಿಕೊಂಡು  ಸಜ್ಜನರ ಸಹವಾಸವನ್ನಿಟ್ಟುಕೊಂಡು ಸತ್ಕರ್ಮಗಳನ್ನು ಮಾಡುತ್ತಾ ನಮ್ಮ ಮನೆಯನ್ನು  ದೇವಾಲಯವನ್ನಾಗಿಯೂ ಮಾಡಬಹುದು, ಸ್ವರ್ಗವಾಗಿಯೂ ಮಾಡಬಹುದು. ಎಲ್ಲವೂ ನಮ್ಮ ಕೈಲೇ ಇದೆ.