Pages

Wednesday, September 28, 2016

ಚನ್ನರಾಯಪಟ್ಟಣ ಪ್ರವಾಸ.

ಇಂದು ಶ್ರೀ ಶೇಷಪ್ಪ, ನಾಗಭೂಷಣ್ ಜೊತೆ ಚನ್ನರಾಯಪಟ್ಟಣ ಪ್ರವಾಸ.ಪರಿಸರವಾದಿ ಮತ್ತು ಪತಂಜಲಿ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಅಶೋಕ್ ಮತ್ತು ಮಿತ್ರರ ಭೇಟಿ. ಗಣಪತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಹಾಸತ್ಸಂಗದ ವಿಚಾರವನ್ನು ತಿಳಿಸುವ ಅವಕಾಶ. ನೂರು ಸಂಖ್ಯೆ ನಿರೀಕ್ಷೆ. ಅಶೋಕ್ ಅವರಿಂದ ನಮಗೆ ಗಿಡಗಳ ಉಡುಗೊರೆ.

ಹಾಸನದಲ್ಲಿ ನಡೆಯಲಿರುವ ಮಹಾ ಸತ್ಸಂಗಕ್ಕಾಗಿ ಸಕಲೇಶಪುರದಲ್ಲಿ ಭೈಠಕ್.



ಯಾರೋ ಮೆಚ್ಚಲಿ ಎಂದು ಸುಳ್ಳನ್ನೇ ಬರೆಯಬೇಕೆ?



ಸುಳ್ಳು, ಸುಳ್ಳು,ಸುಳ್ಳು...........
ಅಬ್ಬಾ ಅದೆಷ್ಟು ಸುಳ್ಳು ಹೇಳೋದು!

ಸುಳ್ಳನ್ನು ಯಾರೋ ಅಮಾಯಕರು ಹೇಳಿದ್ದರೆ ಬೇಸರವಾಗುತ್ತಿರಲಿಲ್ಲ.ಅಮಾಯಕರಿಗೆ ಸುಳ್ಳು ಹೇಳುವವರನ್ನು ಕಂಡಾಗ ಬಲು ಬೇಸರವಾಗುತ್ತೆ.


ಪಾಪ! ಒಬ್ಬ ಅಮಾಯಕ ಅವನ ಕಷ್ಟಕಾಲದಲ್ಲಿ ಇವರನ್ನು ನಂಬಿ ಬಂದರೆ ಅವನಿಗೆ ಸಮಾಧಾನ ಹೇಳಿ ಆತ್ಮ ವಿಶ್ವಾಸವನ್ನು ತುಂಬುವ ಬದಲು ಅವನನ್ನು ಇನ್ನೂ ಪ್ರಪಾತಕ್ಕೆ ತಳ್ಳಿದರೆ!

ಇಂತಾ ಒಂದು ಘಟನೆಯನ್ನು ಅಮಾಯಕ ವ್ಯಕ್ತಿ ನನ್ನೊಡನೆ ಹೇಳಿಕೊಂಡಾಗ ಆತನಿಗೆ ಸಮಾಧಾನ ಹೇಳಿದ್ದೆ. ಆದರೂ ಆತನಿಗೆ ಪೂರ್ಣ ಸಮಾಧಾನವಿಲ್ಲ. ನನಗೆ ನಾಲ್ಕೈದು ದಿನಗಳಿಂದ ಫೋನ್ ಮಾಡುತ್ತಲೇ ಇದ್ದಾನೆ. ದುರಾದೃಷ್ಟಕ್ಕೆ ನಾನು ಸತ್ಸಂಗದಲ್ಲೋ,ಯೋಗ ತರಗತಿಯಲ್ಲೋ ಇರುವಾಗಲೇ ಆತನ ಫೋನ್ ಬರುತ್ತಿತ್ತು." ಒಂದು ಕಾರ್ಯಕ್ರಮದಲ್ಲಿರುವೆ ಮುಗಿದಮೇಲೆ ಮಾತನಾಡುವೆ" ಎಂದು ಹೇಳುತ್ತಿದ್ದೆ.ಆ ನಂತರ ಮರೆತು ಬಿಡುತ್ತಿದ್ದೆ.
ಕೊನೆಗೂ ಬಿಡುವಿದ್ದಾಗ ಫೋನ್ ಬಂತು.

- " ಸಾರ್ ನೀವು ನಮ್ಮನೆಗೆ ಬಂದು ಅಗ್ನಿ ಹೋತ್ರ ಮಾಡಿಸ ಬೇಕು.ಎಷ್ಟು ಖರ್ಚಾಗುತ್ತೆ? ಸಾರ್?

- 50 ರೂಪಾಯಿ ಖರ್ಚಾಗುತ್ತೆ.

- ಸಾರ್, ನನ್ನನ್ನು ನೋಡಿ ತಮಾಶೆ ಮಾಡ್ತೀರ ಸಾರ್?

- ಖಂಡಿತಾ ಇಲ್ಲ. ತುಪ್ಪಕ್ಕೆ 50 ರೂಪಾಯಿ ಆಗಬಹುದು ಅಷ್ಟೆ.

ಆತ ಇರುವುದು ಬೆಂಗಳೂರಿನಲ್ಲಿ. ಬೆಂಗಳೂರಿಗೆ ಹೋದಾಗ ಅವರ ಮನೆಗೆ ಹೋಗಿ ಅಗ್ನಿಹೋತ್ರ ಮಾಡಿ ಅವನಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿಬರುವೆ. ಫೋನಿನ್ನಲ್ಲಿ ಸಾಕಷ್ಟು ಆಪ್ತ ಸಮಾಲೋಚನೆ ಮಾಡಿದ್ದಾಗಿದೆ.

ಆತನಿಗೆ ಕಷ್ಟ ಬಂದು ತೊಂದರೆಯಲ್ಲಿರುವಾಗ ತೊಂದರೆ ಪರಿಹರಿಸಲು ಆತನಿಗೆ ಕೊಟ್ಟ ಸಲಹೆಗೆ ತಗಲುವ ಖರ್ಚು ಎಷ್ಟು ಗೊತ್ತಾ?

ಬರೋಬರಿ 50 ಸಾವಿರ ರೂ!!

ಆತನ ಹತ್ತಿರ ಎರಡು ಹೊತ್ತು ಊಟಕ್ಕೆ ಗತಿ ಇಲ್ಲ!!

ಇದರಲ್ಲಿ ಯಾವುದೂ ಉತ್ಪ್ರೇಕ್ಷೆ ಇಲ್ಲ.

ನಾನು ಹಿಂದೆ ಕೂಡ ಇಂತಹ ಘಟನೆ ಬರೆದಿರುವೆ. ಆಗ ಮಿತ್ರರೊಬ್ಬರು ನನಗೆ ಮೆಸ್ಸೇಜ್ ಮಾಡಿದರು." ನೀವೇ ಹೀಗೆ ಬರೆದು ಬಿಟ್ಟರೆ! ಜನರಲ್ಲಿ ಧಾರ್ಮಿಕ ಶ್ರದ್ಧೆಯೇ ಹೊರಟು ಹೋಗಿ ಬಿಡುತ್ತೆ. ನೀವು ಸಾಮಾಜಿಕ ತಾಣಗಳಲ್ಲಿ ಬರೆಯುವ ಬದಲು ಅವರಿಗೆ ನೇರ ಮೆಸ್ಸೇಜ್ ಮಾಡ ಬಹುದಲ್ಲ! ಅಥವಾ ಫೋನಿನಲ್ಲೇ ತಿಳಿಸ ಬಹುದಲ್ಲ!

ಅವರದು ಒಂದು ರೀತಿಯ ಆಕ್ಷೇಪಣೆಯೇ ಅಗಿತ್ತು.
ಸರಿ- ಎಂದು ಸುಮ್ಮನಾದೆ.

ಕೆಲವು ದಿಗಳ ನಂತರ ಮುಕ್ತವಾಗಿ ಸಿಕ್ಕಾಗ ಹೇಳಿದೆ " ಇಂತಾ ಸಮಸ್ಯೆಗಳಲ್ಲಿ ನೆರಳುತ್ತಿರುವ ಬೇರೆಯವರಿಗೆ ಅನುಕೂಲವಾಗುವುದಿಲ್ಲವೇ?

- ಒಟ್ಟಿನಲ್ಲಿ ಹೆಚ್ಚು ವಿರೋಧಿಗಳನ್ನು ಕಟ್ಟಿಕೊಳ್ಳುತ್ತೀರಿ. ಅವರೆಂದರು.

ನಿಜವಾಗಿ ಹೇಳುವೆ " ಜನ ಮೆಚ್ಚಲಿ ಎಂದು ಹೊಗಳಿ ಬರೆಯಲಾರೆ. ಪ್ರಪಂಚದ ಸಮಸ್ಯೆಗಳಗೆಲ್ಲಾ ಪರಿಹಾರ ಸೂಚಿಸುವ ಬ್ರಮೆ ನನಗಿಲ್ಲ. ಆದರೆ ಸಾಮಾಜಿಕ ತಾಣಗಳಿಂದಲೇ ನನ್ನ ಬಗ್ಗೆ ತಿಳಿದು ನನ್ನ ಸಲಹೆ ಕೇಳಿದಾಗ ಬರೆಯದೆ ಇರಲಾರೆ.

ಯಾರೋ ಮೆಚ್ಚಲಿ ಎಂದು ಸುಳ್ಳನ್ನೇ ಬರೆಯಬೇಕೆ?

ಮತ್ತೊಮ್ಮೆ ಭಾರತವು ಜಗದ್ಗುರುವಾಗಲು......







ವಿಶ್ವದಲ್ಲಿ ಭಾರತಕ್ಕೆ ವಿಶೇಷವಾದಂತಹ ಗೌರವ ಇರುವುದು ಇಲ್ಲಿನ ಸಂಸ್ಕೃತಿ-ಪರಂಪರೆ ಮತ್ತು  ಇಲ್ಲಿನ ಜೀವನ ಶೈಲಿಗಾಗಿ. ಈಗಲೂ ಸಹ ಪಾಶ್ಚಿಮಾತ್ಯರು ನೆಮ್ಮದಿ ಹುಡುಕುತ್ತಾ ಭಾರತಕ್ಕೆ ಬರುತ್ತಾರೆ. ಕಾರಣ ಸಾವಿರಾರು ವರ್ಷಗಳ ಹಿಂದೆ ನಮ್ಮ ಋಷಿಮುನಿಗಳು ತಪಸ್ಸನ್ನು ಮಾಡಿ ಜೀವನದ ಸತ್ಯವನ್ನು ಕಂಡು ಕೊಂಡು ಅದರಂತೆ ಇಲ್ಲಿನ ಜೀವನ ಶೈಲಿಯನ್ನು ರೂಪಿಸಿದರು. 
ಅದರ ವಿಶೇಷ ಏನು? 
ಸರ್ವೇ ಭವಂತು ಸುಖಿನಃ | ಸರ್ವೇ ಸಂತು ನಿರಾಮಯಾಃ | ಸರ್ವೇಭದ್ರಾಣಿ ಪಶ್ಯಂತು| ಮಾ ಕಶ್ಚಿತ್ ದುಃಖ ಭಾಗ್‌ಭವೇತ್ || [ಎಲ್ಲರೂ ಸುಖವಾಗಿರಲಿ. ಎಲ್ಲರೂ ಆರೋಗ್ಯವಾಗಿರಲಿ.ಎಲ್ಲರೂ     
    ಆನಂದವಾಗಿರಲಿ.ಯಾರಿಗೂ ದುಃಖ ಬೇಡ]
ಕೃಣ್ವಂತೋ ವಿಶ್ವಮಾರ್ಯಂ [ವಿಶ್ವದ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡೋಣ]
ವಸುಧೈವ ಕುಟುಂಬಕಮ್  [ಇಡೀ ಜಗತ್ತೇ ಒಂದು ಕುಟುಂಬ]
ಮಾತಾ ಭೂಮಿಃ ಪುತ್ರೋ ಅಹಂ ಪೃಥಿವ್ಯಾಃ [ ಅಥರ್ವಣ ವೇದ ೧೨.೧.೧೨]
[ಭೂಮಾತೆಯು ನಮ್ಮ ತಾಯಿಯಾಗಿದ್ದಾಳೆ. ನಾನು ಅವಳ ಪುತ್ರ]
ಅಹಂ ಬ್ರಹ್ಮಾಸ್ಮಿ - ತತ್ ತ್ವಂ ಅಸಿ [ ಭಗವಂತನ ಸ್ವರೂಪವೇ ನಾನು, ನೀನೂ ಅದೇ ಆಗಿದ್ದೀಯೆ]
ಮಾತೃವತ್ ಪರದಾರೇಶು, ಪರದ್ರವ್ಯೇಶು ಲೋಷ್ಠವತ್, ಆತ್ಮವತ್ ಸರ್ವಭೂತೇಶು.......
[ ಪರಸ್ತ್ರೀಯರು ನನ್ನ ತಾಯಿ ಸ್ವರೂಪ, ಇನ್ನೊಬ್ಬರ ಸಂಪತ್ತು ನನಗೆ ಮಣ್ಣಿನ ಹೆಂಟೆಯ ಸಮಾನ, ಎಲ್ಲರಲ್ಲೂ ಪರಮಾತ್ಮನಿದ್ದಾನೆ ]

ಈಗೇನಾಗಿದೆ?

  ಇಂತಾ ಉದಾತ್ತ ವಿಚಾರಗಳಿಂದ ಕೂಡಿದ ನಮ್ಮ ಸಂಸ್ಕೃತಿ-ಪರಂಪರೆಯು  ಹಿಡಿಯಷ್ಟು ಸ್ವಾರ್ಥ ಜನರ ಕಾರಣ ನಶಿಸುತ್ತಾ ಬಂದು ಮನುಷ್ಯನ ನೈತಿಕ ಮೌಲ್ಯಗಳಲ್ಲಿ ಆದ ಕುಸಿತದ ಪರಿಣಾಮವನ್ನು ನಮ್ಮ ದೇಶವು ಎದಿರಿಸುತ್ತಿರುವುದನ್ನು ನಾವು ನಿತ್ಯವೂ ಟಿ.ವಿ. ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ನೋಡ ಬಹುದಾಗಿದೆ.

ನಿತ್ಯವೂ ನಾವು ಪತ್ರಿಕೆಗಳಲ್ಲಿ  ಕಾಣುವ ಸುದ್ದಿಗಳೇನು?

* ಕೊಲೆ, ಸುಲಿಗೆ, ಮೋಸ! 
* ಜಾತಿ ಜಾತಿಗಳ ನಡುವೆ ದ್ವೇಷ!
* ದೇವರ ಹೆಸರಲ್ಲಿ ಸಂಘರ್ಷ!
* ಧರ್ಮದ ಹೆಸರಲ್ಲಿ ಸಂಘರ್ಷ!
* ಭಾಷೆಯ ಹೆಸರಲ್ಲಿ ಸಂಘರ್ಷ!
* ಹಸುಳೆಯ ಮೇಲೆ ಅತ್ಯಾಚಾರ!
* ದೇಶದ ಸಂಪತ್ತಿನ ಲೂಟಿ!
* ಮತಾಂತರ!
* ಗೋಹತ್ಯೆ!

ಈ ದುರಂತಗಳಿಗೆಲ್ಲಾ ಕಾರಣ ಏನು?

ಮೇಲೆ ತಿಳಿಸಿರುವ ನಮ್ಮ ಋಷಿಮುನಿಗಳು ನಮಗೆ ಕೊಟ್ಟಿರುವ ಮಾರ್ಗದಲ್ಲಿ ನಾವು ಸಾಗುವುದರಲ್ಲಿ ವಿಫಲರಾಗಿದ್ದು ಇಂದಿನ ದುರಂತಗಳಿಗೆ ಮುಖ್ಯ ಕಾರಣವಾಗಿದೆ.ಪ್ರತಿಯೋಂದು ಶ್ಲೋಕಗಳನ್ನೂ ವಿಶ್ಲೇಶಿಸುವ ಅಗತ್ಯವೇನೂ ಇಲ್ಲ. ಎಲ್ಲವೂ ಉದಾತ್ತ ಚಿಂತನೆಗಳೇ ಆಗಿವೆ.
ವಿವೇಕಾನಂದರು ಅತ್ಯಂತ ಚಿಂತಿತರಾಗಿದ್ದು ಇಂತಾ ಉದಾತ್ತ ಚಿಂತನೆಗಳು ಎಲ್ಲಿ ಹೇಗೆ ಮಾಯವಾಯ್ತು? ಎಂಬ ಕಾರಣ ದಿಂದಲೇ. ಇಂತಾ ಭವ್ಯವಾದ ಸಂಸ್ಕೃತಿಯಲ್ಲಿ ಜನಿಸಿದ ನಮ್ಮ ವರ್ತನೆ ಏಕೆ ಹೀಗೆ? ಕನ್ಯಾಕುಮಾರಿಯ ಸಮುದ್ರದ ಬಂಡೆಯ ಮೇಲೆ ತಪಸ್ಸಿಗೆ ಕುಳಿತಾಗ ಭಗವತಿ ಕನ್ಯಾಕುಮಾರಿಯನ್ನು ವಿವೇಕಾನಂದರು ಪ್ರಾರ್ಥಿಸಿದ್ದು ಇದನ್ನೇ!  ತಾಯಿ ನನಗೆ ಮುಕ್ತಿ ಬೇಡ. ನಮ್ಮ ದೇಶದಲ್ಲಿ ತಾಂಡವವಾಡುತ್ತಿರುವ ಅಜ್ಞಾನವನ್ನು ದೂರ ಮಾಡು. ಈ ದೇಶದ ಅತ್ಯಂತ ಬಡಪಾಯಿಯೂ ಹಸಿವಿನಿಂದ ನೆರಳಬಾರದು. ಅಂತಹ ಸ್ಥಿತಿಯನ್ನು ದೇಶದಲ್ಲಿ ನಿರ್ಮಾಣಮಾಡಲು ನನಗೆ ಶಕ್ತಿ ಕೊಡು

ಒಂದು  ಶತಮಾನದ ಹಿಂದೆ ವಿವೇಕಾನಂದರು ಯಾವ ವಿಷಯದಲ್ಲಿ ಚಿಂತಿತರಾಗಿದ್ದರೋ ಆ ಸಮಸ್ಯೆಗಳು ಇಂದಿಗೂ ನಮ್ಮ ಸಮಾಜವನ್ನು ಕಾಡುತ್ತಿರುವುದು ಸುಳ್ಳಲ್ಲ! ನೈತಿಕ ಮೌಲ್ಯಗಳು ಇದೇ ರೀತಿ ಕುಸಿಯುತ್ತಾ ಹೋದರೆ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವೇನು?

ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಲು:

ನಮ್ಮ ಈಗಿನ ಪೀಳಿಗೆಗೆ ನಮ್ಮ ಉದಾತ್ತ ವಿಚಾರಗಳ ಪರಿಚಯವನ್ನು  ಮತ್ತೊಮ್ಮೆ ಮಾಡಿಕೊಡಲೇ ಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇದನ್ನೆಲ್ಲಾ ಆಳವಾಗಿ ಅರಿತಿರುವ ಪೂಜ್ಯ ಸ್ವಾಮಿ ಬಾಬಾ ರಾಮ ದೇವ್ ಜಿ ಯವರು  ನಮ್ಮ ದೇಶದ ಇಂತಾ  ದುಃಸ್ಥಿತಿಗೆ ಪರಿಹಾರವೆಂದರೆ ನಮ್ಮ ಋಷಿಪರಂಪರೆಯ ಪುನರುತ್ಥಾನ ಮಾತ್ರ. ಎಂದರಿತು ಯೋಗದ ಮೂಲಕ ಜನರ ಆರೋಗ್ಯ ಸುಧಾರಿಸುವುದರ ಜೊತೆಗೆ ಜನರಿಗೆ ನಮ್ಮ ಋಷಿಪರಂಪರೆಯ ಶ್ರೇಷ್ಠತೆಯನ್ನು ಪರಿಚಯಿಸುವ ಯೋಜನೆಯನ್ನು ರೂಪಿಸಿದ್ದಾರೆ.
ಗುರುಕುಲ ಶಿಕ್ಷಣ: 
ಪತಂಜಲಿ ಯೋಗ ಪೀಠದ ಮೂಲಕ ಹತ್ತಾರು ಯೋಜನೆಗಳನ್ನು ರೂಪಿಸಿದ್ದಾರೆ. ಜಿಲ್ಲೆಗೊಂದರಂತೆ ಆಚಾರ್ಯ ಕುಲಮ್ [ಗುರುಕುಲ] ಗಳನ್ನು ಆರಂಭಿಸಲಿದ್ದಾರೆ. ಅಲ್ಲಿ ಇಂದಿನ ಆಧುನಿಕ ವಿಜ್ಞಾನದ ಶಿಕ್ಷಣವನ್ನು ಕೊಡುವುದರ ಜೊತೆಗೆ ನಮ್ಮ ಋಷಿಪರಂಪರೆಯ ವೇದ/ಉಪನಿಷತ್ತುಗಳು, ಭಾರತೀಯ ಸಂಗೀತ, ಸಾಹಿತ್ಯ, ಕಲೆಗಳು ಮತ್ತು ಯೋಗದ ಶಿಕ್ಷಣವನ್ನು ಕೊಡಲಾಗುತ್ತದೆ. ಸ್ವದೇಶೀ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟ ಈಗಾಗಲೇ ಆರಂಭವಾಗಿ  ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದು ಬೆಳೆಯುತ್ತಿದೆ. 

ಪತಂಜಲಿ ಯೋಗ ಪೀಠವೆಂದರೆ ಕೇವಲ ಯೋಗ ಕೇಂದ್ರವಲ್ಲ

ಜನರಿಗೆ ಯೋಗ ಕಲಿಸುವುದರ ಮೂಲಕ ಚಟುವಟಿಕೆಗಳನ್ನು ಆರಂಭಿಸಿ, ಜೊತೆಜೊತೆಗೆ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುತ್ತ  ಭಾರತವು ಮತ್ತೊಮ್ಮೆ ಜಗದ್ಗುರು ವಾಗಬೇಕೆಂಬ ಮಹಾನ್ ಉದ್ದೇಶದಿಂದ ಪತಂಜಲಿ ಯೋಗ ಪೀಠವು ಭಾರತದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಸಹ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. ಯೋಗವನ್ನು ಯಾವುದೇ ಗುರುವಿನೊಡನೆ ಕಲಿಯುತ್ತಿದ್ದರೂ ಸಹ ಸ್ವಾಮಿ ಬಾಬಾ ರಾಮ್ ದೇವ್ ಜಿ ಯವರ ಮಹಾನ್ ಉದ್ದೇಶಕ್ಕಾಗಿ ಪತಂಜಲಿ ಯೋಗಪೀಠದೊಡನೆ ಕೈಜೋಡಿಸುವುದು ನಮ್ಮ ಋಷಿ ಸಂಸ್ಕೃತಿಯನ್ನು ಕಾಪಾಡ ಬೇಕೆಂಬ ಎಲ್ಲರ  ಕರ್ತವ್ಯವಾಗಿದೆ.
ಇದು ನಮಗಾಗಿ ಮತ್ತು ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ
ಭಾರತ್ ಮಾತಾ ಕಿ ಜೈ
-ಹರಿಹರಪುರಶ್ರೀಧರ್





Monday, September 26, 2016

ಹಾಸನ ಜೆಲ್ಲೆಯ ಅರಕಲಗೂಡಿನಲ್ಲಿ ಪತಂಜಲಿ ಯೋಗ ಸಮಿತಿಯಿಂದ ನಡೆದ ಸತ್ಸಂಗದಲ್ಲಿ ಧ್ಯಾನ!!!

ಅರಕಲಗೂಡಿನಲ್ಲಿ ನಡೆದ ಸಾರ್ಥಕ ಸತ್ಸಂಗ

ಪತಂಜಲಿ ಯೋಗ ಪರಿವಾರದಿಂದ ಹಾಸನಜೆಲ್ಲೆಯ ಅರಕಲಗೂಡಿನಲ್ಲಿ ನಡೆದ ಸಾರ್ಥಕ ಸತ್ಸಂಗ. ಪತಂಜಲಿ ಯೋಗ ಸಮಿತಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್ ನ ಎಲ್ಲಾ ಯೋಗ ಕೇಂದ್ರಗಳವರು ತಿಂಗಳಿಗೊಮ್ಮೆ ವಿಶೇಷ ಸತ್ಸಂಗ ಮಾಡಲು ನಿರ್ಧಾರ.





ಅರಕಲಗೂಡಿನಲ್ಲಿ ಪತಂಜಲಿ ಯೋಗ

ಹಾಸನಜೆಲ್ಲೆಯಲ್ಲಿ ಮೂರ್ನಾಲ್ಕು ತಾಲ್ಲೂಕುಗಳಿಗೆ ಪ್ರವಾಸ ಮಾಡಿದ್ದರೂ ಈ ಬಾರಿ ಇಡೀ ಪರಿವಾರ ಪ್ರಮುಖರ ಪ್ರವಾಸ ಯೋಜಿಸಲಾಗಿತ್ತು. ಭಾರತ್ ಸ್ವಾಭಿಮಾಕ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪನವರು, ಯುವಭಾರತ್ ಜಿಲ್ಲಾ ಪ್ರಭಾರಿ ಶ್ರೀ ಸುರೇಶ್ ಮತ್ತು ಸಹಪ್ರಭಾರಿ ಶ್ರೀ ರಮೇಶ್, ಕಿಸಾಯನ್ ಸೇವಾಸಮಿತಿಯ ಜಿಲ್ಲಾ ಪ್ರಭಾರಿ ಶ್ರೀ ನಾಗಭೂಷಣ್, ಪತಂಜಲಿ ಪರವಾಗಿ ನಾನು ಮತ್ತು ವೇದಭಾರತಿಯ ಶ್ರೀಮತಿ ಪಾರ್ವತಮ್ಮ ಒಟ್ಟಾಗಿ ಪ್ರವಾಸ ಮಾಡಿದೆವು. ಅರಕಲಗೂಡಿನಲ್ಲಿ ಶ್ರೀ ಶಿವಣ್ಣ ಮತ್ತು ಶ್ರೀ ಪ್ರವೀಣ್ ಜೊತೆಗೂಡಿ ಮೂರು ಗ್ರಾಮಗಳ ಭೇಟಿ ಮತ್ತು ಗ್ರಾಮದ ಯೋಗಾಸಕ್ತರ ಭೈಠಕ್ ನಡೆಸಿದೆವು. ಬರಗೂರು, ಕಣಿಯಾರ್ ಮತ್ತು ಕೊಣನೂರುಗಳಲ್ಲಿ ನಡೆದ ಭೈಠಕ್ ಗಳಲ್ಲಿ ಎಲ್ಲಾ ಗ್ರಾಮಗಳಲ್ಲೂ ಯೋಗ ಕೇಂದ್ರಗಳನ್ನು ಹೆಚ್ಚು ಮಾಡುವುದಲ್ಲದೆ ಎಲ್ಲಾ ಗ್ರಾಮಸ್ತರ ಸಮಾವೇಶಗಳನ್ನು ಮತ್ತು ಯುವಕರ ವಿಶೇಷವಾಗಿ ಕಾಲೇಜಿ ವಿದ್ಯಾರ್ಥಿಗಳ ಸಮಾವೇಶವನ್ನು ಇನ್ನೆರಡು ಮೂರು ತಿಂಗಳುಗಳಲ್ಲೇ ಆಯಾ ಗ್ರಾಮದಲ್ಲೇ ಆಯೋಜಿಸಬೇಕೆಂದು ನಿರ್ಧರಿಸಲಾಯ್ತು. ಗ್ರಾಮಗಳಲ್ಲಿ ಪತಂಜಲಿ ಉತ್ಪನ್ನಗಳ ಬೇಡಿಕೆ ಬಹಳವಾಗಿದ್ದು ಆ ಬಗ್ಗೆ ಗ್ರಾಮಸ್ತರು ಬಹಳ ಆಸಕ್ತಿಯಿಂದ ಪತಂಜಲಿ ಉತ್ಪನ್ನಗಳನ್ನು ಹೆಚ್ಚು ಸರಬರಾಜು ಮಾಡಲು ಬೇಡಿಕೆ ಇಡುತ್ತಿದ್ದುದು ವಿಶೇಷವಾಗಿತ್ತು.






Thursday, September 15, 2016

ಈ ಶ್ವರ ಸ್ತುತಿ ಪ್ರಾರ್ಥನಾ

ಅಗ್ನಿಹೋತ್ರ ಭಾಗ -2 [ ಪ್ರಾತಃ ಕಾಲದಲ್ಲಿ]

ಅಗ್ನಿಹೋತ್ರ ಭಾಗ -1

ಅಗ್ನಿಹೋತ್ರ ಭಾಗ - 2 [ಸಂಜೆ ಸಮಯದಲ್ಲಿ ಮಾಡುವ ಅಗ್ನಿಹೋತ್ರ ಭಾಗ]

ಅಗ್ನಿಹೋತ್ರ ಭಾಗ-3

ಯೋಗ ವೇದ ಸಂಗಮ ಒಂದು ನೆನಪು

ಮಿತ್ರ ಶೇಷಪ್ಪನವರ ವಿವಾಹ ರಜತ ಮಹೋತ್ಸವ ನಡೆದದ್ದು ಹೀಗೆ

Wednesday, September 14, 2016

ಯೋಗದ ಬಗ್ಗೆ ಭಗವದ್ಗೀತೆಯಲ್ಲಿ ಏನು ಹೇಳಿದೆ? -1

ಇಂದಿನಿಂದ ಒಂದೊಂದು ಶ್ಲೋಕದ ಬಗ್ಗೆ ವಿಚಾರ ಮಾಡೋಣ.
ಭಗವದ್ಗೀತೆ ಅಧ್ಯಾಯ 6 ಶ್ಲೋಕ : 11 
ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ | 
ನಾತ್ಯುಚ್ಛ್ರೀತಂ ನಾತಿನೀಚಂ ಚೈಲಾಜಿನಕುಶೋತ್ತರಮ್ || 
ಶುಚೌ = ಶುದ್ಧವಾದ 
ದೇಶೇ = ಭೂಮಿಯ ಮೇಲೆ 
ಚೈಲಾಜಿನಕುಶೋತ್ತರಮ್ = ಕ್ರಮವಾಗಿ ದರ್ಭೆ, ಕೃಷ್ಣಾಜಿನ ಮತ್ತು ವಸ್ತ್ರಗಳನ್ನು ಹಾಸಿ 
ನ ಅತ್ಯುಚ್ಛ್ರೀತಮ್ = ಬಹಳ ಎತ್ತರವಾಗಿರದ 
ನ ಅತಿ ನೀಚಮ್ = ಬಹಳ ತಗ್ಗಾಗಿಯೂ ಇರದಂತಹ 
ಆತ್ಮನಃ = ತನ್ನ 
ಆಸನಮ್ = ಆಸನವನ್ನು 
ಸ್ಥಿರಮ್ = ಸ್ಥಿರವಾಗಿ 
ಪ್ರತಿಷ್ಠಾಪ್ಯ = ಸ್ಥಾಪಿಸಿಕೊಂಡು 
ಶುದ್ಧವಾದ ಭೂಮಿಯಮೇಲೆ ಕ್ರಮವಾಗಿ ದರ್ಭೆ, ಜಿನ ಮತ್ತು ವಸ್ತ್ರಗಳನ್ನು ಹಾಸಿ ಅದರ ಮೇಲೆ ಬಹಳ ಎತ್ತರವಾಗಿಯೂ ಬಹಳ ತಗ್ಗಾಗಿಯೂ ಇರದ ಆಸನವನ್ನು ಸ್ಥಾಪಿಸಿಕೊಂಡು..... 
[ ಮುಂದೇನು ಮಾಡಬೇಕೆಂಬುದು ಮುಂದಿನ ಶ್ಲೋಕದಲ್ಲಿ] 
- ಇಲ್ಲಿ ದರ್ಭೆ, ಕೃಷ್ಣಾಜಿನ, ವಸ್ತ್ರ, ಆಸನ ಎಂದೆಲ್ಲಾ ಹೇಳಿದೆಯಲ್ಲಾ?
- ಅಂದಿಗೆ ಅದು ಸರಿ. - ಇಂದಿಗೆ? 
- ಶುಚಿಯಾದ ಸ್ಥಳ ಇರಬೇಕು. ಚೆನ್ನಾಗಿ ಗಾಳಿ ಬೆಳಕು ಇರಬೇಕು. ಆಸನ ಮಾಡಲು ಯೋಗ್ಯವಾದ ಒಂದು ಯೋಗ ಮ್ಯಾಟ್ ಅಥವಾ ಕೈಕಾಲು ಚಾಚಿ ಮಲಗುವಶ್ಟು ಅಳತೆಯ ಸ್ವಲ್ಪ ದಪ್ಪನಾದ ಜಮಖಾನ ಇರುವುದು ಉತ್ತಮ.

ಜೂನ್ 18 ರಂದು ಹಾಸನದಲ್ಲಿ ನಡೆದ ಯೋಗ ನಡಿಗೆಯ ಒಂದು ನೆನಪು





ಜಿಲ್ಲಾ ಪ್ರಭಾರಿ ಶ್ರೀ ಶೇಷಪ್ಪ ನವರ ನಾಯಕತ್ವ



ಜಿಲ್ಲಾ ಯುವಪ್ರಭಾರಿ ಶ್ರೀ ಸುರೇಶ್ ಮತ್ತು ಡಾ. ರಮೇಶ್ , 
ಸ್ವಾಮೀಜಿ ವೇಷದಲ್ಲಿ  ಶ್ರೀ ನಾಗ ಭೂಷಣ್

ನನ್ನಿಂದ ಸಾಂದರ್ಭಿಕ ಮಾತು


Sunday, September 11, 2016

ಮುಕ್ತಿಪಥ



      ಆದಿಗುರು ಶ್ರೀ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವನ್ನು ತೋರಿಸುವ ಈ ಪಂಚಕದಲ್ಲಿ ಒಂದೊಂದರಲ್ಲಿ 8 ಸೂತ್ರಗಳಂತೆ ಒಟ್ಟು  40 ಸೂತ್ರಗಳನ್ನು ಅಳವಡಿಸಲಾಗಿದೆ. ಇದರ ಕನ್ನಡ ಭಾವಾನುವಾದವನ್ನು ಮೂಢನ ಮುಕ್ತಕಗಳ ರೂಪದಲ್ಲಿ ಸಹೃದಯರ ಮಂದಿಟ್ಟಿರುವೆ. ಮೂಲ ಕೃತಿಯನ್ನೂ ಇಲ್ಲಿ ಅವಗಾಹನೆಗೆ ಮಂಡಿಸಿದೆ.  
     ಮುಕ್ತಿಪಥ 
(ಆದಿಗುರು ಶ್ರೀ  ಶಂಕರಾಚಾರ್ಯರ ಸಾಧನಾ ಪಂಚಕದ 
ಕನ್ನಡ ಭಾವಾನುವಾದ - ಮೂಢನ ಮುಕ್ತಕಗಳ ರೂಪದಲ್ಲಿ)
ನಿತ್ಯ ವೇದಾಧ್ಯಯನ ಮಾಡುವವನಾಗಿ
ವೇದೋಕ್ತ ಕರ್ಮಗಳ ಪಾಲಿಸುವನಾಗಿ |
ಈಶಾರಾಧನೆಯಾಗೆ ಕರ್ಮಗಳು ಸಕಲ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧ || 

ಹಾದಿ ತಪ್ಪಿಸುವ ಕರ್ಮಗಳ ತ್ಯಜಿಸಿ
ಅಂತರಂಗದ ಕೊಳೆಯ ತೊಳೆದುಹಾಕಿ |
ಹೊರಸುಖದ ದೋಷವನು ಗುರುತಿಸುವನಾಗೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೨ ||

ನಿನ್ನ ನಿಜರೂಪವನು ತಿಳಿಯಲೆಣಿಸಿರಲು
ಮೋಹ ಸಂಕಲೆಯ ಕಳೆಯಹೊರಟಿರಲು |
ಜ್ಞಾನಿಗಳ ಸಂಗದಲಿ ನಿಜವನರಿಯುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೩ ||

ಪರಮಾತ್ಮನಲಿ ಭಕ್ತಿ ಧೃಢವಾಗಿ ತಾನಿರಲು
ಶಾಂತಿ ಮತ್ತಿತರ ಗುಣಗಳನೆ ಪಡೆದಿರಲು |
ಸ್ವಾರ್ಥಪರ ಕರ್ಮದಲಿ ಆಸಕ್ತಿ ತ್ಯಜಿಸಿದೊಡೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೪ ||

ಸದ್ವಿದ್ಯದಾತರಲಿ ಆಶ್ರಯವ ಪಡೆದಿರಲು
ಸದ್ಗುರು ಪಾದಸೇವೆಯನು ನಿತ್ಯ ಗೈದಿರಲು |
ತಿಳಿಯಲುಜ್ಜುಗಿಸೆ ಓಂಕಾರದರ್ಥವನು 
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೫ ||

ಉಪನಿಷದ್ವಾಕ್ಯಗಳು ಸುಮನನವಾಗಿರಲು
ವಾಕ್ಯಾಂತರಾರ್ಥದ ಜಿಜ್ಞಾಸೆ ಮಾಡುತಲಿ |
ಉನಿಷದ್ವಾಕ್ಯವದೆ ನಿಜಜ್ಞಾನವೆನಿಸಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೬ || 

ವಿತಂಡವಾದದೊಡೆ ಇರಿಸಿ ಅಂತರವ
ಉಪನಿಷತ್ತಿನ ಪಥವೆ ನಿನ್ನ ಪಥವೆನಿಸಿರಲು |
ಬ್ರಹ್ಮಾನುಭವದಲ್ಲಿ ಒಂದಾಗಿ ಸಾಗುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೭ ||

ಗರ್ವದಲಿ ಮೆರೆಯದಿರು ಎಂದೆಂದಿಗು
ಶರೀರವಿದು ನೀನಲ್ಲ ನೆನಪಿಟ್ಟಿರು |
ತಿಳಿದವರ ಕೂಡೆ ವಾದವನು ಮಾಡದಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೮ ||

ಹಸಿವು ರೋಗಗಳ ಪರಿಹರಿಸಿಕೊಳಬೇಕು
ದಿನನಿತ್ಯದಾಹಾರ ಔಷಧಿಯೊಲಿರಬೇಕು |
ರುಚಿಯಾದ ಭೋಜನವ ಬಯಸದಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೯ || 

ತಾನಾಗಿ ಬಂದುದೇ ಪರಮಾನ್ನವೆನಬೇಕು
ಶೀತೋಷ್ಣ ಆದಿಗಳ ಸಹಿಸಿಕೊಳಬೇಕು |
ಅನುಚಿತ ಮಾತುಗಳನಾಡದಿರೆ ಮನುಜ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೦ || 

ನಿರ್ಲಿಪ್ತಭಾವವನು ಹೊಂದಿದವನಾಗಿ
ನಿಂದಾಪನಿಂದೆಗಳ ಗಣಿಸದಿರಬೇಕು |   
ಏಕಾಂತದಲಿ ಸುಖವನರಸುತಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೧ ||

ಪರಮಾತ್ಮನಲಿ ಚಿತ್ತ ಲೀನವಿರಿಸಲುಬೇಕು
ಎಲ್ಲೆಲ್ಲು ಅವನನ್ನೆ ಕಾಣುತಿರಬೇಕು |
ಜಗವಿದು ಮನಸಿನಾಟವೆಂದೆಣಿಸುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೨ ||

ಪೂರ್ವಕರ್ಮಗಳ ಫಲವನನುಭವಿಸಬೇಕು
ಒದಗುವ ಫಲದಿಂದ ಹೆದರದಿರಬೇಕು |
ಕರ್ಮಫಲವನನುಭವಿಸಿ ಕಳೆದಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೩ || 

ಬ್ರಹ್ಮಾನುಭವದಲ್ಲಿ ಅಚಲನಾಗಿರುತಿರಲು
ಪರಮಾನಂದವದು ಸನಿಹದಲಿರದೇನು |
ಆದಿಗುರು ಶಂಕರರು ತೋರಿರುವ ಮಾರ್ಗ
ಮನುಜಕುಲಕಿದು ಉತ್ತಮವು ಮೂಢ || ೧೪ ||
-ಕ.ವೆಂ.ನಾಗರಾಜ್.
***************
'ಸಾಧನಾ ಪಂಚಕಮ್'
ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನುಷ್ಠೀಯತಾಂ
ತೇನೇಶಸ್ಯ ವಿಧೀಯತಾಂ ಅಪಚಿತಿಃ ಕಾಮ್ಯೇ ಮತಿಸ್ತ್ಯಜತಾಮ್ |
ಪಾಪೌಘಃ ಪರುಧೂಯತಾಂ ಭವಸುಖೇ ದೋಷೋsನುಸಂಧೀಯತಾಂ
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್ || ೧ ||

ಸಂಗಃಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾsಧೀಯತಾಂ 
ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್ |
ಅದ್ವಿದ್ವಾಬುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || ೨ ||

ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃ ಪಕ್ಷಃ ಸಮಾಶ್ರೀಯತಾಂ
ದುಸ್ತರ್ಕಾತ್ ಸುವಿರಮ್ಯತಾಂ ಶ್ರುತಿಮತಸ್ತರ್ಕೋsನುಸಂಧೀಯತಾಮ್ |
ಬ್ರಹ್ಮಾಸ್ಮೀತಿ ವಿಭಾವ್ಯತಾಂ ಅಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇsಹಂ ಮತಿರುಝ್ಯುತಾಂ ಬುಧಜನೈರ್ವಾದಃ ಪರಿತ್ಯಜ್ಯತಾಮ್ || ೩ ||

ಕ್ಷುದ್ ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ಯನ್ನಂ ನ ತು ಯಾಚ್ಯತಾಂ ವಿಧಿವಶಾತ್ ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಂ
ಔದಾಸೀನ್ಯಮಭೀಷ್ಟತಾಂ ಜನಕೃಪಾನೈಷ್ಠುರ್ಯಮುತ್ ಸೃಜ್ಯತಾಮ್ || ೪ ||

ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷತಾಂ ಜಗದಿದಂ ತದ್ಭಾದಿತಂ ದೃಶ್ಯತಾಮ್ |
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಂ ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ || ೫ ||

ಚಿದಾನಂದರೂಪಃ ಶಿವೋ ಹಮ್ , ಶಿವೋಹಮ್

ಶಂಕರರ ಅಹಂ ನಿರ್ವಿಕಲ್ಪೋ..............ಚಿದಾನಂದರೂಪಃ ಶಿವೋ ಹಮ್ , ಶಿವೋಹಮ್

ಶ್ಲೋಕವನ್ನು ಕೇಳುತ್ತಾ ಅದರ ಅರ್ಥದ ಬಗ್ಗೆ ಚಿಂತನೆ ನಡೆಸುತ್ತಾ ಧ್ಯಾನ ಮಾಡಿದಾಗ ನಮ್ಮ ನಿಜ ಅಸ್ತಿತ್ವ ಏನೆಂಬ ಬಗ್ಗೆ ಸ್ವಲ್ಪವಾದರೂ ಅರಿವುಂಟಾಗುತ್ತದೆ.
ಇಂತಾ ಒಂದು ಪ್ರಯೋಗವನ್ನು ಸತತವಾಗಿ ಒಂದು ತಿಂಗಳು ಮಾಡಿ, ನಿಮ್ಮೆಲ್ಲಾ ಯೋಗಾಭ್ಯಾಸವಾದನಂತರ ಏಳು ನಿಮಿಷಗಳ ಈ ಶ್ಲೋಕವನ್ನು ಕೇಳುತ್ತಾ ಧ್ಯಾನಮಾಡಿ. ಧ್ಯಾನದ ಸ್ಥಿತಿಯಲ್ಲಿ ಶ್ಲೋಕದ ಅರ್ಥವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಿ. ಅಲ್ಪಸ್ವಲ್ಪವಾದರೂ ಅರ್ಥವಾಗದೇ ಇರದು.
ನಾನು ಎಂದರೆ ಕೇವಲ ಶರೀರ, ನಾನು ಎಂದರೆ ಪತ್ನಿಗೆ ಕೇವಲ ಪತಿ, ಮಕ್ಕಳಿಗೆ ಕೇವಲ ತಂದೆ/ತಾಯಿ, ನಾನು ಎಂದರೆ ಕೈ-ಕಾಲು, ರುಂಡ ಮುಂಡಗಳಿರುವ, ಪಂಚೇಂದ್ರಿಯ ಗಳನ್ನು ಹೊಂದಿರುವ, ಮನಸ್ಸು, ಬುದ್ಧಿ, ಅಹಂಕಾರ ವನ್ನು ಹೊಂದಿರುವ ಈ ಶರೀರ............. ಈ ರೀತಿಯ ಭಾವನೆಗಳಿರುವುದರಿಂದ ನಮ್ಮನ್ನು ಅರಿಷಡ್ವರ್ಗಗಳಾದ , ಕಾಮ,ಕ್ರೋಧ,ಲೋಭ, ಮೋಹ, ಮದ ಮತ್ಸರಗಳು ಕಾಡುತ್ತವೆ. ಶರೀರದ ವ್ಯಾಧಿಗಳು ಕಾಡುತ್ತವೆ...ಇಂತಾ ಸ್ಥಿತಿಯಲ್ಲಿ ನಾವು ದೇಹಭಾದಲ್ಲಿದ್ದೀವೆಂದು ಅರ್ಥ.


ಆದರೆ ಇವೆಲ್ಲಾ ಇದ್ದೂ ನನ್ನೊಳಗೆ ಒಂದು ಚೈತನ್ಯವಿದೆ. ಆ ಚೈತನ್ಯವಿಲ್ಲದೆ ಈ ಶರೀರ ಕೊರಡು! ಆ ಚೈತನ್ಯದಿಂದಲೇ ನನ್ನ ಎಲ್ಲಾ ಚಟುವಟಿಕೆಗಳು! ಎಂಬುದರ ಅರಿವುಂಟಾದಾಗ ನನ್ನ ನಿಜಸ್ವರೂಪದ ಅರಿವುಂಟಾಗುತ್ತದೆ. ನನ್ನ ನಿಜಸ್ವರೂಪವೇನು?
ಚಿದಾನಂದರೂಪಃ ಶಿವೋ ಹಮ್ , ಶಿವೋಹಮ್...ಎನ್ನುತಾರೆ ಶಂಕರರು. ನಾನು ಯಾವಾಗಲೂ ಆನಂದ ಸ್ವರೂಪನಾದ ಶಿವನೇ ನಾನು ಎಂಬ ಅರಿವು ಜಾಗೃತವಾದರೆ ನಮ್ಮ ದೇಹಬಾಧೆ ನಮ್ಮನ್ನು ಕಾಡಿಸುವುದಿಲ್ಲ. ವ್ಯಾಧಿ ಶರೀರಕ್ಕೋ? ಮನಸ್ಸಿಗೋ? ನಮ್ಮ ಶರೀರದಲ್ಲಿ ಯಾವುದೇ ನೋವಿರಲಿ ನಮಗೆ ಇಷ್ಟವಾಗುವ ಭಜನೆಯನ್ನೋ, ಹಾಡನ್ನೋ ಕೇಳುತ್ತಾ ಕುಳಿತರೆ ನೋವು ಮರೆತೇ ಹೋಗುತ್ತದೆ. ಹಾಗಾದರೆ ಶರೀರದ ನೋವು ವಾಸಿಯಾಯ್ತೆ. ಇಲ್ಲ. ಅದು ಶರೀರಕ್ಕೆ ಇದ್ದೇ ಇದೆ. ಆದರೆ ನಮ್ಮ ಮನಸ್ಸು ಆ ಕಡೆ ಗಮನ ಕೊಡಲೇ ಇಲ್ಲ. ಪರಿಣಾಮ ನೋವು ನಮ್ಮನ್ನು ಬಾಧಿಸಲೇ ಇಲ್ಲ. ಇನ್ನು ಸಾಕ್ಷಾತ್ ಶಿವನು ನಾನೇ ಎಂಬ ಭಾವ ಬಂದು ಬಿಟ್ಟರೆ ಆಗ ಸಿಗುವ ಆನಂದ ಬಣ್ಣಿಸಲು ಸಾಧ್ಯವಿಲ್ಲ.ಧ್ಯಾನದಿಂದ ಈ ಸ್ಥಿತಿ ಲಭ್ಯವಾಗಬೇಕು. ಆಗ ನಮ್ಮನ್ನು ಯಾವ ರೋಗವೂ ಕಾಡಲಾರದು.

Saturday, September 10, 2016

ವೇದಭಾರತಿಯಿಂದ ಅಗ್ನಿಹೋತ್ರದ ಒಂದು ತುಣುಕು

ರಾಯಚೂರು ಜಿಲ್ಲಾ ಭೈಠಕ್

Dhyana Yoga - 1

ಇತ್ತೀಚೆಗೆ ದೇಹವನ್ನು ತ್ಯಜಿಸಿದ ಪೂಜ್ಯ ಪಟ್ಟಾಭಿರಾಮ್ ಗುರೂಜಿಯವರು ಅವರ ವಿದ್ಯಾಭ್ಯಾಸ ಕಾಲದಲ್ಲಿ RSS ಕಾರ್ಯಕರ್ತರು. ನನ್ನ ಸ್ನೇಹಿತರು. ಭಗವದ್ಗೀತೆಯನ್ನು ಹೇಗೆ ಸರಳವಾಗಿ ಅರ್ಥಮಾಡಿಕೊಳ್ಳಬೇಕೆಂಬುದನ್ನು ಅವರ ಕಂಠದಿಂದಲೇ ಕೇಳಿ.

ಭಾರತವನ್ನು ಜಗದ್ಗುರುವಾಗಿಸಲು......

ವಿಶ್ವಯೋಗ ದಿನವನ್ನು ಕಳೆದ ವರ್ಷ ಪ್ರಧಾನಿಯವರು ಘೋಷಣೆ ಮಾಡಿದ ನಂತರ  ನನ್ನ ಮನದಲ್ಲಿ ಬಲವಾದ ಒಂದು ವಿಶ್ವಾಸ ಮೂಡಿದೆ. RSS ಕಳೆದ 90 ವರ್ಷಗಳಲ್ಲಿ  ಜನರಲ್ಲಿ ರಾಷ್ಟ್ರ ಭಕ್ತಿಯನ್ನು ಜಾಗೃತ ಮಾಡಿ ಹಿಂದು ಶಬ್ದವನ್ನು ವಿಶ್ವದಲ್ಲಿ ಮೊಳಗುವಂತೆ ಮಾಡಿದೆ. ಆರ್ಯಸಮಾಜವು ಕಳೆದ 150 ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಮೀರಿಸಿ RSS ಬಲಿಷ್ಟವಾಗಿದೆ.
ನನ್ನ ದೃಷ್ಟಿಯಲ್ಲಿ ಹಿಂದು, ಆರ್ಯ, ಸನಾತನ......ಈ ಪದಗಳಲ್ಲಿ ಅಂತಾದ್ದೇನೂ ವೆತ್ಯಾಸವಿಲ್ಲ. 

ಹಿಮಾಲಯಮ್ ಸಮಾರಭ್ಯ ಯಾವದಿಂದು ಸರೋವರಮ್
ತಂ ದೇವ ನಿರ್ಮಿತಮ್ ದೇಶಂ ಹಿಂದುಸ್ಥಾನಮ್ ಪ್ರಚಕ್ಷತೆ||

             ದೇವರೇ ನಿರ್ಮಿಸಿದ ಹಿಮಾಲಯದಿಂದ ಇಂದುಸರೋವರದ ವರಗಿನ ಈ ಭೂಮಿಯನ್ನು ಹಿಂದುಸ್ಥಾನ ಎನ್ನುತ್ತಾರೆ. ಬೃಹಸ್ಪತಿ ಆಗಮದಲ್ಲಿನ ಶ್ಲೋಕದ ಅರ್ಥವಿದು.
            ಇದನ್ನು ಆಧಾರವಾಗಿಟ್ಟುಕೊಂಡು ಹಿಂದು ಎಂದರೆ ಇದು ಜಾತಿಯಲ್ಲ, ಇದು ನಮ್ಮ ದೇಶದ ಹೆಸರು. ಇಲ್ಲಿರುವ ಎಲ್ಲರೂ ಯಾವುದೇ ದೇವರನ್ನು ಪೂಜಿಸಿದರೂ ಇಲ್ಲಿರುವವರೆಲ್ಲಾ ಹಿಂದುಗಳೇ ಎಂಬುದು RSS ವಿಚಾರಧಾರೆ. ಎಷ್ಟು ವಿಶಾಲ ಅರ್ಥವಿದೆ!
              ಸ್ವಾಮಿ ದಯಾನಂದರಾದರು 150 ವರ್ಷಗಳ ಹಿಂದೆಯೇ ವೇದವನ್ನು ಸರಿಯಾಗಿ ಅಧ್ಯಯನ ಮಾಡಿ , ಪ್ರಪಂಚದ ಮೂಲ ಸಾಹಿತ್ಯ "ವೇದ" . ವೇದವು ಎಲ್ಲರನ್ನೂ " ಆರ್ಯ " ಅಂದರೆ ಶ್ರೇಷ್ಠ ಎನ್ನುತ್ತದೆ. ಯಾವಾಗ ವೇದವನ್ನು ಅನುಸರಿಸದೆ  ಪುರಾಣದ ಆಧಾರದ ಮೆಲೆ ಸಂಪ್ರದಾಯಗಳು ನಡೆದುಬಂತೋ ಆಗ ವೇದದ ಸತ್ಯವನ್ನು ಮರೆಮಾಚುವಂತಹ ಕೆಲಸವನ್ನು ಕಂಡು ಮಹರ್ಷಿ ದಯಾನಂದ ಸರಸ್ವತಿಯವರು  ಮೇಲು ಕೀಳು, ಸ್ಪೃಶ್ಯ-ಅಸ್ಪೃಶ್ಯ, ಜಾತಿ-ಮತ  ಯಾವ ಭೇದವಿಲ್ಲದೆ ಮಾನವಮಾತ್ರದ ಎಲ್ಲರಿಗಾಗಿ  "ಆರ್ಯ ಸಮಾಜವನ್ನು " ಸ್ಥಾಪಿಸಿದರು.
            ಆದರೆ ಸಾವಿರಾರು ವರ್ಷಗಳ ದಾಸ್ಯದ ಪರಿಣಾಮವಾಗಿ ವೇದದ ನಾಡಿನಲ್ಲೇ ವೇದವನ್ನು ಪೋಷಿಸದೆ ಆರ್ಯ ಸಮಾಜದ ಕೆಲಸವು ನಿರೀಕ್ಷೆಯಷ್ಟು ಬೆಳೆಯಲಿಲ್ಲ. ಸಂಪ್ರದಾಯದ ಹೆಸರಲ್ಲಿ ಹಲವಾರು ಕುರುಡು ನಂಬಿಕೆಗಳೂ ಮುಂದುವರೆಯಿತು. ಅದರ ಪರಿಣಾಮವಾಗಿಯೇ ಸ್ಪೃಶ್ಯ -ಅಸ್ಪೃಶ್ಯ ಭಾವನೆಯನ್ನು ಇಂದೂ ಸಹ ಬುಡ ಸಹಿತ ತೊಲಗಿಸಲಾಗದೆ ಅದೊಂದು ಬೃಹತ್ ಸಮಸ್ಯೆಯಾಗಿ ದೇಶವನ್ನು ಕಾಡುತ್ತಿದೆ. 
RSS ಆದರೋ ಎಲ್ಲರಲ್ಲೂ "ಹಿಂದು " ಎಂಬ ಭಾವನೆ ಮೊದಲು  ಜಾಗೃತ ಗೊಳಿಸೋಣ ಎಂಬ ಸಂಕಲ್ಪ ತಾಳಿ ಅದರಂತೆ ಬಹುಪಾಲು ಯಶಸ್ಸು ಪಡೆದಿದೆ. ಆದರೆ ಬೆಳೆಯ ಜೊತೆಗೆ ಕಳೆಯೂ ಹುಲುಸಾಗಿಯೇ ಇದೆ. ಕಳೆಯನ್ನು ತೆಗೆಯಲೇ ಬೇಕು.ಇಂದಲ್ಲಾ ಇನ್ನು ಒಂದೆರಡು ದಶಕಗಳಲ್ಲಾದರೂ  ಆ ಕೆಲಸ ಆಗುತ್ತದೆಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಪೂಜ್ಯ ಸ್ವಾಮಿ ಬಾಬಾ ರಾಮ್ ದೇವ್ 2006 ರಲ್ಲಿ ಪತಂಜಲಿ ಯೋಗ ಪೀಠವನ್ನು ಸ್ಥಾಪಿಸಿದರೂ ಸಹ 1995 ರಿಂದಲೇ ಯೋಗವನ್ನು ಅಸ್ತ್ರವಾಗಿಟ್ಟುಕೊಂಡು ಮನುಷ್ಯನ ಎಲ್ಲಾ ಸಮಸ್ಯೆಗಳಿಗೂ ಅವನ ತಪ್ಪು ಆಹಾರ ಮತ್ತು ತಪ್ಪು ವಿಚಾರವೇ ಕಾರಣವೆಂದು ವಿವರಿಸುತ್ತಾ ಅದಕ್ಕೆ ವೇದದ ಹಿನ್ನೆಲೆಯನ್ನು ನೀಡುವುದರ ಮೂಲಕ ಜನರನ್ನು ಯೋಗ ಮಾರ್ಗದತ್ತ ಸೆಳೆದಿದ್ದಾರೆ.

 ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ  ಹಿಂದೆಯೇ ನಮ್ಮ ಪ್ರಾಚೀನ ಋಷಿಗಳು ತಮ್ಮ ತಪಸ್ಸಿನ ಫಲವಾಗಿ ನಮಗೆ ಆರೋಗ್ಯಕರವಾಗಿ ಬದುಕುವ ದಾರಿ ತೋರಿಸಿದ್ದಾರೆಂದು  ಪತಂಜಲಿ ಮಹಾಮುನಿಗಳ ಯೋಗ ದರ್ಶನವನ್ನು ಅಧ್ಯಯನ ಮಾಡಿದ್ದಲ್ಲದೆ , ಸರಿಯಾದ ಗುರುಗಳಿಂದ ವೇದಾಧ್ಯಯನವನ್ನೂ ಮಾಡಿ, ವೇದ ಉಪನಿಷತ್ತನ್ನು ಕರಗತ ಗೊಳಿಸಿಕೊಂಡು ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ವೇದದಲ್ಲಿ ಪರಿಹಾರವಿದೆ. ನಮ್ಮ ಋಷಿಗಳು ತೋರಿದ ಮಾರ್ಗದಲ್ಲಿ ನಡೆದರೆ ಇಡೀ ಜಗತ್ತು ಸುಖಮಯವಾಗಿರಬಹುದೆಂಬ ವಿಚಾರವನ್ನು ಕೋಟಿ ಕೋಟಿ ಜನರಿಗೆ ಯೋಗ ಶಿಬಿರಗಳ ಮೂಲಕ ಮನವರಿಕೆ ಮಾಡುತ್ತಿದ್ದಾರೆ. 

ಇಷ್ಟೆಲ್ಲಾ ಬರೆಯಲು ಕಾರಣವಿದೆ. ಪೂಜ್ಯ ಬಾಬಾ ರಾಮದೇವ್ ಸ್ವಾಮೀಜಿಯವರು ಯೋಗ, ಸ್ವದೇಶೀ ಉತ್ಪಾದನೆ, ಗೋಮಾತೆಯ ವಿಚಾರದಲ್ಲಿ ಶ್ರದ್ಧೆಯನ್ನು ಬೆಳೆಸುವಲ್ಲಿ , ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವಲ್ಲಿ ತಮ್ಮದೇ ಆದ ಹಾದಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಸ್ವಾಮೀಜಿಯವರ ಪ್ರಯತ್ನಕ್ಕೆ ಯಶಸ್ಸು ಸಿಗಲು RSS   90 ವರ್ಷಗಳಿಂದ ದೇಶದಲ್ಲಿ ಮಾಡಿರುವ ಜಾಗೃತಿಯೂ ಸಹ  ಕಾರಣವಾಗಿದೆ. ಸಂಘಸ್ಥಾಪಕರಾದ  ಪರಮ ಪೂಜನೀಯ   Dr. ಹೆಡಗೇ ವಾರರ ಆಶಯ ಒಂದಿತ್ತು. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ರಾಷ್ಟ್ರ ನಿಷ್ಠ ಕಾರ್ಯಕರ್ತರನ್ನು  ಬೆಳೆಸಿ ತನ್ಮೂಲಕ  ದೇಶದಲ್ಲಿ ಒಂದು ಪರಿವರ್ತನೆಯನ್ನು ತರಬೇಕೆಂದು.
ಪೂಜ್ಯ ಸ್ವಾಮೀಜಿಯವರ ಪತಂಜಲಿ ಯೋಗ ಪೀಠದ ಕೆಲಸದಲ್ಲಿ ಸಾವಿರಾರು ಜನ RSS ಕಾರ್ಯಕರ್ತರು ಕೈಜೋಡಿಸಿರುವುದು ಜನರಿಗೆ ಗೊತ್ತಾಗುವುದಿಲ್ಲ.

ಭಾರತವು ಮತ್ತೊಮ್ಮೆ ಜಗದ್ಗುರುವಾಗಬೇಕೆಂಬುದು RSS ಸಂಕಲ್ಪ. ಅದೇ ಸಂಕಲ್ಪ ಸ್ವಾಮೀಜಿಯವರದ್ದೂ ಆಗಿದೆ. ಈಗ ಆಗಬೇಕಾಗಿರುವ ಕೆಲಸವೆಂದರೆ RSS ಮತ್ತು ಪತಂಜಲಿ ಕಾರ್ಯಕರ್ತರು ಪರಸ್ಪರ ಅಲ್ಪ ಸ್ವಲ್ಪ ಹೊಂದಾಣಿಕೆಯನ್ನು ಮಾಡಿಕೊಂಡು ರಾಷ್ಟ್ರದ ಪುನರುತ್ಠಾನ ಕಾರ್ಯದಲ್ಲಿ ಪರಸ್ಪರ ಕೈ ಜೋಡಿಸುವುದು ದೇಶದ ದೃಷ್ಠಿಯಿಂದ ಅತ್ಯಂತ ಅಗತ್ಯವಾಗಿದೆ.
ಭಾರತವು ಮತ್ತೊಮ್ಮೆ ಜಗದ್ಗುರುವಾಗಲು.......

RSS ನ ರಾಷ್ಟ್ರ ಪ್ರೇಮ ಮತ್ತು ಶಿಸ್ತು
ಪತಂಜಲಿ ಪರಿವಾರದ ಯೋಗ ಮತ್ತು ವೇದ  ಚಿಂತನೆಗಳು
ಹಾಗೂ ಸಮಾನ ಮಾನಸಿಕತೆಯ ಎಲ್ಲರೂ   ಸ್ವದೇಶೀ ಮತ್ತು  ಗೋರಕ್ಷೆ ಹಾಗೂ  ದೇಶದ ಅಖಂಡತೆಗಾಗಿ ಒಗ್ಗೂಡಿ ಕೆಲಸ ಮಾಡಬೇಕಾಗಿದೆ.
ಇದು ನನ್ನ ಪ್ರಾಮಾಣಿಕ ಆಶಯ.

ಸಂಪಾದಕೀಯ

             ವೇದಸುಧೆಯ ಅಭಿಮಾನೀ ಮಿತ್ರರೇ, ಕಳೆದ ಆರೇಳು ವರ್ಷಗಳ ಹಿಂದೆ  ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ  ಆರಂಭವಾದ " ವೇದಸುಧೆ"  ಆರಂಭದ ದಿನಗಳಲ್ಲಿ  ಶ್ರೀ ಸುಧಾಕರ ಶರ್ಮರ ಆಡಿಯೋ /ವೀಡಿಯೋ ಗಳನ್ನು ಸಾಕಷ್ಟು ಪ್ರಕಟಿಸಿ ಜನರಲ್ಲಿ ವೇದದ ಅರಿವು ಮೂಡಿಸುವಂತಹ ಕೆಲಸಗಳನ್ನು ಸುಮಾರು ನಾಲ್ಕೈದು ವರ್ಷ ಮಾಡಿತು. ಆನಂತರದಲ್ಲಿ ಶರ್ಮರ ಆರೋಗ್ಯವೂ ಸ್ವಲ್ಪ ಕಮ್ಮಿಯಾಯ್ತು. ಅವರ ಪ್ರವಾಸ ಕಮ್ಮಿಯಾಯ್ತು. ಸಂಪರ್ಕ ಮುಂಚಿನಂತೆ ಹೆಚ್ಚು ಮಾಡುವುದು ಕಷ್ಟವಾಯ್ತು. ನಂತರದ ದಿನಗಳಲ್ಲಿ ವೇದಭಾರತಿಯ ಚಟುವಟಿಕೆಗಳನ್ನು ಹೆಚ್ಚು ಪ್ರಕಟಿಸುತ್ತಾ ವೇದಸುಧೆ ಮುಂದುವರೆಯಿತು.
Facebook  ನಲ್ಲಿ ಬರೆಯುವುದು ಆರಂಭವಾದಮೇಲೆ ಬ್ಲಾಗ್ ನಲ್ಲಿ ಬರೆಯುವುದೂ ಕಷ್ಟವಾಯ್ತು. ಕಳೆದ ಒಂದು ವರ್ಷದಿಂದ Face book ನಲ್ಲೇ ಎಲ್ಲಾ ಚಟುವಟಿಕೆಗಳನ್ನೂ ಪೋಸ್ಟ್ ಮಾಡುತ್ತಾ ಬ್ಲಾಗ್ ನಲ್ಲಿ ಹೆಚ್ಚು ಬರೆಯಲಾಗಲಿಲ್ಲ. ಆದರೆ "ವೇದಸುಧೆ" ಯು ತನ್ನದೇ ಆದ ಮಹತ್ವ ಪಡೆದಿದೆ.

ಇನ್ನುಮುಂದೆ ವೇದಭಾರತಿಯ ಮತ್ತು ಪತಂಜಲಿ ಯೋಗ ಪರಿವಾರದ ಚಟುವಟಿಕೆಗಳನ್ನು ವೇದಸುಧೆಯು ನಿರಂತರ ಪ್ರಕಟಿಸುವುದು. ಹೊಸದಾಗಿ ಲೇಖಕರಾಗಲು ಒಪ್ಪಿರುವ ಶ್ರೀ ಗುರುದತ್ತ ವಿದ್ಯಾರ್ಥಿಯವರು   "ಪತಂಜಲಿ ಪರಿವಾರ  ಕರ್ನಾಟಕ " ಚಟುವಟಿಕೆ ಗಳನ್ನು ಪ್ರಕಟಿಸುವರು. ಅವರಿಗೆ ವೇದಸುಧೆಯ ಸ್ವಾಗತ.

ಸಿಂಧನೂರಿನ ಗಣೇಶೋತ್ಸವದಲ್ಲಿ ಪತಂಜಲಿ ಯೋಗ ಸಮಿತಿಯ ಪ್ರಾಂತ ಪ್ರಭಾರಿಗಳಾದ ಶ್ರೀ ಭವರ್ ಲಾಲ್ ಆರ್ಯ ರಿಂದ ಸತ್ಸಂಗ

ಹಾಸನದಲ್ಲೂ ಹೀಗೆ ಮಾಡುವ plan ಇದೆ. ಭವರ್ಲಾಲ್ ಜಿ ಸಮಯ ಸಿಗಬೇಕಷ್ಟೆ.






ಯಾರು ಯೋಗಿ? ಸುಖೀ ಯಾರು?

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅರ್ಜುನ ಮೂಲಕ ನಮಗೆ ಹೇಳಿರುವ ಮಾತು ಕೇಳಿ...
ಅಧ್ಯಾಯ : 5 , ಶ್ಲೋಕ : 23
ಶಕ್ನೋತೀಹೈವ ಯಃ ಸೋಢುಂ ಪ್ರಾಕ್ಶರೀರವಿಮೋಕ್ಷಣಾತ್ |
ಕಾಮಕ್ರೋದೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ||
ಯಾವ ಸಾಧಕನು ಈ ಮನುಷ್ಯ ಶರೀರದಲ್ಲಿ ಶರೀರ ನಾಶವಾಗುವುದಕ್ಕಿಂತ ಮೊದಲೇ ಕಾಮಕ್ರೋಧಗಳಿಂದ ಉಂಟಾಗುವ ಉದ್ವೇಗವನ್ನು ಸಹಿಸಿಕೊಳ್ಳಲು ಸಮರ್ಥನೋ ಆ ಮನುಷ್ಯನೇ ಯೋಗಿ , ಅವನೇ ಸುಖೀ.
ಎಷ್ಟು ಸರಳವಾಗಿದೆ ಅಲ್ಲವೇ?
ಆದರೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಲು ಕಷ್ಟ. ಸ್ವಲ್ಪ ವಿಶ್ಲೇಷಿಸೋಣ.
ಮೊದಲಿಗೆ ...

ಕಾಮದಿಂದಾಗುವ ಉದ್ವೇಗ :
ಕಾಮ ಎಂದೊಡನೆ ಸ್ತ್ರೀ ಪುರುಷರ ನಡುವೆ ಇರುವ ಭೋಗ ಎಂದು ಭಾವಿಸಬೇಕಾಗಿಲ್ಲ.
ಕಾಮ ಎಂದರೆ ಬಯಕೆ, ಇಚ್ಛೆ, ವಿಷಯಾಭಿಲಾಷೆ.
ಸಣ್ಣಪುಟ್ಟ ಬಯಕೆಗಳೇ ಸಾಕು ನಮ್ಮನ್ನು ವಿಚಲಿತರನ್ನಾಗಿ ಮಾಡಲು,
ಅದು ಅಧಿಕಾರ ಇರಬಹುದು, ಗೌರವದ ಪ್ರಶ್ನೆ ಇರಬಹುದು, ಎಷ್ಟು ಬೇಗ ನಮ್ಮನ್ನಷ್ಟೇ ಅಲ್ಲ ಸಾದು ಸಂತರನ್ನೂ ಉದ್ವೇಗಗೊಳಿಸದೇ ಇರದು. ಒಬ್ಬ ಸಾದುವಿಗೆ ಸಾಮಾನ್ಯನೊಬ್ಬ ಗೌರವ ಕೊಡಲಿಲ್ಲ ಎಂಬ ಕಾರಣಕ್ಕೆ ಅವರು ಎಷ್ಟು ತಾಳ್ಮೆ ಕಳೆದುಕೊಂಡರೆಂದರೆ........
ನಾವು ಲೌಕಿಕರೆ ಪರವಾಗಿಲ್ಲ ಎನಿಸದೇ ಇರಲಿಲ್ಲ.

ಯಾವುದೋ ಸಮಾರಂಭದಲ್ಲಿ ಯೋಜಕರ ಕಾರ್ಯ ಒತ್ತಡದಿಂದ ಗಣ್ಯರೊಬ್ಬರನ್ನು ಗಮನಿಸದಿದ್ದಾಗ ಗಣ್ಯರ ಮುಖ ನೋಡ ಬೇಕು.....

ಇನ್ನು ಕ್ರೋಧದಿಂದಾಗುವ ಉದ್ವೇಗ : ಯಾರೋ ಒಬ್ಬ ಅವನ ಅಜ್ಞಾನದಿಂದ ತಪ್ಪೆಸಗಿದ ಪರಿಣಾಮ ಮತ್ತೊಬ್ಬನಿಗೆ ಅವಮಾನವಾಗುವ ಪ್ರಸಂಗ ಬರುತ್ತದೆ. ತಕ್ಷಣ ಎರಡನೆಯವನು ಅವನ ದೃಷ್ಟಿಯಿಂದಲೇ ಕ್ರೋಧವನ್ನು ಪ್ರಕಟಿಸುತ್ತಾನೆ.ಮೊದಲನೆಯವನಿಗೆ ಅವನ ತಪ್ಪಿನ ಅರಿವಿರುವುದಿಲ್ಲ ಅವನು ಶಾಂತವಾಗೇ ಇರುತ್ತಾನೆ. ಎರಡನೆಯವನು ಕ್ರೋಧದಿಂದ ಕುದ್ದು ಹೋಗುತ್ತಾನೆ. ಇದನ್ನೇ ಉದ್ವೇಗ ಎನ್ನುವುದು.

ಈ ಸ್ಥಿತಿಗಳಿಂದ ಹೊರಬಂದಾಗ ಅವನು ಯೋಗಿಯೂ ಹೌದು. ಸುಖಿಯೂ ಹೌದು.

ಈಶಾವಾಸ್ಯಮ್ ನಲ್ಲಿ ಹಾಸನದ ಪತಂಜಲಿ ಯೋಗ ಪರಿವಾರದ ಭೈಠಕ್

ಹಾಸನದ ಪತಂಜಲಿ ಯೋಗ ಪರಿವಾರದಿಂದ ಇದೇ 19 ರಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆಯಲಿರುವ ಯೋಗ ಶಿಕ್ಷಕ ತರಬೇತಿ ಶಿಬಿರದ ವ್ಯವಸ್ಥೆ ಬಗ್ಗೆ ಇಂದು ಕಾರ್ಯಾಲಯ ಈಶಾವಾಸ್ಯಮ್ ನಲ್ಲಿ ಭೈಠಕ್ ನಡೆದು ಸಮಗ್ರವಾಗಿ ಚರ್ಚಿಸಲಾಯ್ತು.