Pages

Tuesday, July 3, 2012

ವಿವೇಕ ಚೂಡಾಮಣಿ ಭಾಗ -೨೧




मूलम्-ಮೂಲ


कथं तरेयं भवसिन्धुमेतं का 
वा गतिर्मे कतमोस्तुपायः ।
जाने न किञ्चित्कृपयाव मां 
प्रभो संसारदुःख-क्षतिमानतुष्व ॥४१॥

ಕಥಂ ತರೇಯಂ ಭವಸಿಂಧುಮೇತಂ ಕಾ ವಾ ಗತಿರ್ಮೇ ಕತಮೋಽಸ್ತ್ಯುಪಾಯಃ |
ಜಾನೇ ನ ಕಿಂಚಿತ್ ಕೃಪಯಾವ ಮಾಂ ಪ್ರಭೋ ಸಂಸಾರ ದುಃಖ -ಕ್ಷತಿಮಾತನುಷ್ವ ||೪೧||

ಪ್ರತಿಪದಾರ್ಥ :

(ಏತಂ ಭವಸಿಂಧುಂ = ಈ ಸಂಸಾರಸಾಗರವನ್ನು,  ಕಥಂ ತರೇಯಂ = ಹೇಗೆ ದಾಟಬಲ್ಲೆನು ? , ಮೇ =ನನಗೆ, ಗತಿಃ=ದಾರಿಯು, ಕಾ ವಾ =ಯಾವುದು ?, ಕತಮಃ = ಯಾವ, ಉಪಾಯಃ ಅಸ್ತಿ = ಉಪಾಯವಿರುವುದು ?,
ಕಿಂಚಿತ್ = ಯಾವುದನ್ನೂ , ನ ಜಾನೇ = ಅರಿಯೆನು, ಪ್ರಭೋ = ಗುರುವೆ, ಮಾಂ=ನನ್ನನ್ನು, ಕೃಪಯಾ = ಕೃಪೆತೋರಿ, ಅವ = ಕಾಪಾಡು, ಸಂಸಾರದುಃಖ-ಕ್ಷತಿಂ-ಆತನುಷ್ವ = ಸಂಸಾರದುಃಖವನ್ನು ನಾಶಮಾಡು ).

ತಾತ್ಪರ್ಯ : 

ಈ ಸಂಸಾರಸಾಗರವನ್ನು ಹೇಗೆ ದಾಟಬಲ್ಲೆನು ? ನನಗೆ ದಾರಿ ಯಾವುದು ? ಮೋಕ್ಷೋಪಾಯಗಳು ಯಾವುದು ? ಇದ್ಯಾವುದನ್ನೂ ನಾನರಿಯೆನು. ಹೇ ಗುರುವೆ ನನ್ನನ್ನು ಕೃಪೆತೋರಿ ಕಾಪಾಡು. ಈ ಸಂಸಾರದುಃಖವನ್ನು ನಾಶಮಾಡು.

ವಿವರಣೆ :

ಶಿಷ್ಯನು ಗುರುವಿನ ಮುಂದೆ ಜ್ಞಾನೋಪದೇಶವನ್ನು ನೀಡುವಂತೆ ಬೇಡಿಕೊಂಡ ನಂತರ ತನ್ನ ಭಯವನ್ನು ಅಥವಾ ಭೀತಿಯನ್ನು ಗುರುವಿನ ಮುಂದೆ ಪ್ರಕಟಪಡಿಸುತ್ತಾನೆ. ಶಿಷ್ಯನಿಗೆ ಸಂಸಾರಸಾಗರವನ್ನು ದಾಟುವುದು ಹೇಗೆ ? ಎಂಬ ಭೀತಿಯಿದೆ. ಸಾಧನ ಚತುಷ್ಟಯ ಸಂಪನ್ನನಾಗಿದ್ದರೂ ಉಪದೇಶವಾಗದ ಹೊರತು ಜ್ಞಾನದ ಹಿರಿಮೆಯು ತಿಳಿಯುವುದಿಲ್ಲ. ಹಾಗೆ ತಿಳಿಯಲಾರದೆ ಉಳಿದರೆ ತನ್ನ ಗತಿಯೇನು ? ಬೇರೆ ದಾರಿಯಾದರೂ ಯಾವುದಿದೆ ? ಎಂಬ ಭೀತಿಯು ಶಿಷ್ಯನನ್ನು ಕಾಡುತ್ತದೆ. ಹೀಗೆ ಭೀತನಾದ ಶಿಷ್ಯನು ಗುರುವಿನ ಮುಂದೆ ಬಾಗಿ ಕೃಪೆತೋರಿ ತನ್ನ ಭಯವನ್ನು ಹೋಗಲಾಡಿಸುವಂತೆ ಕೇಳಿಕೊಳ್ಳುತ್ತಾನೆ. ಶಿಷ್ಯನಿಗೆ ಮೋಕ್ಷೋಪಾಯಗಳ ಕುರಿತಾಗಿ ಸಂದೇಹವಿದೆ. ಹಾಗಾಗಿ ಕರ್ಮ-ಭಕ್ತಿ-ಜ್ಞಾನ ಗಳಲ್ಲಿ ಮೋಕ್ಷಕ್ಕೆ ಕಾರಣವಾಗುವುದು ಯಾವುದೆಂದು ಗುರುವನ್ನು ವಿನಯದಿಂದ-ಭಯದಿಂದ ಕೇಳುತ್ತಾನೆ. ಈ ಸಂಸಾರದುಃಖವನ್ನು ಬುಡಸಮೇತ ಕಿತ್ತುಹಾಕುವಂತೆ ಗುರುವಿನಲ್ಲಿ ವಿನಂತಿಸಿಕೊಳ್ಳುತ್ತಾನೆ.
ಶಿಷ್ಯನು ತುಂಬ ಸ್ಪಷ್ಟವಾಗಿ ತನ್ನ ಮನದಿಂಗತವನ್ನು ಹೊರಹಾಕುವುದನ್ನು ಈ ಶ್ಲೋಕದಲ್ಲಿ ಗಮನಿಸಬಹುದಾಗಿರುತ್ತದೆ. ಗುರುವಿನ ಮುಂದೆ ನಿವೇದಿಸಿಕೊಳ್ಳುವಾಗ ಹಿಂಜರಿಕೆಯಾಗಲೀ, ಗೋಪ್ಯತೆಗಳಾಗಲೀ ಇರಬಾರದೆಂಬುದಕ್ಕೆ ಈ ಶ್ಲೋಕವು ನಿದರ್ಶನ ಎನ್ನಬಹುದು.

मूलम्-ಮೂಲ


तथावदन्तं शरणागतं स्वं संसार-दावानल-तापतप्तम् ।
निरीक्ष्य कारुण्यरसार्द्र-दृष्ट्या दध्यादभीतिं सहसा महात्मा ॥४२॥

ತಥಾ ವದಂತಂ ಶರಣಾಗತಂ ಸ್ವಂ ಸಂಸಾರ-ದಾವಾನಲ-ತಾಪತಪ್ತಮ್ |
ನಿರೀಕ್ಷ್ಯ ಕಾರುಣ್ಯ-ರಸಾರ್ದ್ರ-ದೃಷ್ಟ್ಯಾ ದದ್ಯಾದಭೀತಿಂ ಸಹಸಾ ಮಹಾತ್ಮಾ ||೪೨||

ಪ್ರತಿಪದಾರ್ಥ :

(ತಥಾ = ಹೀಗೆ, ವದಂತಂ = ಹೇಳುತ್ತಿರುವ, ಶರಣಾಗತಂ = ಶರಣಾಗತನಾದ, ಸ್ವಂ = ತನ್ನವನೇ ಆದ(ಆತ್ಮೀಯನಾದ), ಸಂಸಾರ-ದಾವಾನಲ-ತಾಪತಪ್ತಂ = ಸಂಸಾರವೆಂಬ ಕಾಡ್ಗಿಚ್ಚಿನಿಂದ ಬೆಂದಿರುವ (ಶಿಷ್ಯನನ್ನು),
ಮಹಾತ್ಮಾ = ಮಹಾತ್ಮನು, ಕಾರುಣ್ಯ-ರಸಾರ್ದ್ರ-ದೃಷ್ಟ್ಯಾ = ಕರುಣೆಯು ತುಂಬಿರುವ ನೋಟದಿಂದ, ನಿರೀಕ್ಷ್ಯ = ನೋಡಿ, ಸಹಸಾ = ಕೂಡಲೇ, ಅಭೀತಿಂ = ಅಭಯವನ್ನು(ಧೈರ್ಯವನ್ನು), ದದ್ಯಾತ್ = ಕೊಡಬೇಕು)

ತಾತ್ಪರ್ಯ : 

ಹೀಗೆ ಬೇಡಿಕೊಳ್ಳುತ್ತಿರುವ , ಸಂಸಾರವೆಂಬ ಕಾಡ್ಗಿಚ್ಚಿನಿಂದ ಬೆಂದು ಶರಣಾಗತನಾಗಿರುವ ತನ್ನ ಶಿಷ್ಯನನ್ನು ಮಹಾತ್ಮನಾದ ಗುರುವು ಕರುಣಾಪೂರಿತವಾದ ನೋಟದಿಂದ ನೋಡಿ ಕೂಡಲೇ ಅಭಯವನ್ನು ನೀಡ.ಬೇಕು.

ವಿವರಣೆ : 

'ಹೆದರಿದವನ ಮೇಲೆ ಕಪ್ಪೆ ಎಸೆಯುವ ’ ಬದಲು ಅಂಜಿಕೆಯನ್ನು ಹೋಗಲಾಡಿಬಲ್ಲಂತಹ ನಾಲ್ಕು ಒಳ್ಳೆಯ ಮಾತುಗಳನ್ನು ಆಡುವುದು ಸೌಜನ್ಯತೆ. ವಿವೇಕಾನಂದರು " stregnth is life weakness is death" ಎಂದು ಸಾರುವ ಮೂಲಕ ಎಲ್ಲರಲ್ಲೂ ಧೈರ್ಯವನ್ನು ತುಂಬಿದ್ದಾರೆ. ಮಹಾತ್ಮನಾದ ಗುರುವು ದೀನನಾಗಿ ತನ್ನ ಬಳಿಗೆ ಬರುವ ಶಿಷ್ಯನಿಗೆ ಮೊದಲು ಅಭಯವನ್ನು ಕೊಡಬೇಕು ಮತ್ತು ಆತನನ್ನು ಕರುಣೆಯಿಂದ ಕಂಡು ಉಪಚರಿಸಬೇಕು ಎಂದು ಆಚಾರ್ಯರು ಹೇಳುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.
---------------

ಕೊ : ಈ ಕಂತಿನಲ್ಲಿರುವ  ವಿಚಾರಗಳು ಈಗಾಗಲೇ ಮತ್ತೆ-ಮತ್ತೆ ಬಂದಿರುವುದರಿಂದ  ಚಿಕ್ಕದಾಗಿ ಹೇಳಿದ್ದೇನೆ . ಅಗತ್ಯವಿರುವಲ್ಲಿ ವಿಸ್ತರಿಸುತ್ತೇನೆ.

ಗುರು ಪೂರ್ಣಿಮಾ







Add caption

Add caption





ಜೀವನದಲ್ಲಿ ಪ್ರೇರಣೆ ನೀಡಿ ಮುನ್ನಡೆಸುತ್ತಿರವ ಧ್ಯೇಯಕ್ಕೆ, ವೈಚಾರಿಕ ಅರಿವನ್ನು ಮೂಡಿಸುತ್ತಿರುವ ನೂರಾರು ಗುರುಗಳಿಗೆ ಸಾಸ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಿರುವೆ. ವೇದಸುಧೆಯ    ಎಲ್ಲಾ ಆತ್ಮೀಯರಿಗೂ  ಸದ್ಗುರುವಿನ ಮಾರ್ಗದರ್ಶನ ಸಿಗಲೆಂದು ಹಾರೈಸುವೆ.