Pages

Saturday, January 15, 2011

ವೇದಸುಧೆ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಬೆಂಗಳೂರಿನ ಅಭಿಮಾನಿಗಳ ಗಮನಕ್ಕಾಗಿ

ವೇದಸುಧೆವಾರ್ಷಿಕೋತ್ಸವವು ನಡೆಯುವ ದಿನ 30.01.2011 ರಂದು ಭಾನುವಾರ ಬೆಳಗ್ಗೆ 5.30 ರ ಸುಮಾರಿಗೆ ಬೆಂಗಳೂರಿನಿಂದ ಹೊರಟು ಹಾಸನವನ್ನು 9.00 ಗಂಟೆಗೆ ತಲುಪನುಕೂಲವಾಗುವಂತೆ ಒಂದು ವಾಹನದ ವ್ಯವಸ್ಥೆ ಮಾಡಬೇಕೆಂಬ ಯೋಜನೆ ಇದೆ. ವಾಹನವು ಯಾವುದಾಗಿರಬೇಕೆಂಬುದು ಹೊರಡುವ ಸಂಖ್ಯೆಯನ್ನು ಅವಲಂಭಿಸಿದೆ. ಹಾಗೊಂದು ವೇಳೆ ಬೆಂಗಳೂರಿನಿಂದ ವಾಹನವು ಹೊರಟರೆ  ಬಸವನಗುಡಿ, ವಿಜಯನಗರ ಮತ್ತು ಇನ್ನೊಂದೆರಡು ಪಿಕ್ ಅಪ್ ಪಾಯಿಂಟ್ ಗಳನ್ನು ಗುರುತಿಸಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗುವುದು. ಸಮಾರಂಭವು ಮುಗಿದ ಮೇಲೆ ಹೊರಟು ಬೆಳಿಗ್ಗೆ ಬೆಂಗಳೂರಿನಲ್ಲಿಪಿಕ್ ಅಪ್ ಮಾಡಿದ ಸ್ಥಳಗಳಿಗೆ ರಾತ್ರಿ  ಡ್ರಾಪ್ ಮಾಡುವ ಉದ್ಧೇಶವಿದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಅಯ್ಯಪ್ಪಸ್ವಾಮಿ ಯಾತ್ರೆಗಾಗಿ  ವಾಹನಗಳು ಬಾಡಿಗೆಗೆ ಹೋಗುವುದರಿಂದ ಆದಷ್ಟು ಬೇಗ ನಮ್ಮ ಈ  ಪ್ರವಾಸಯೋಜನೆ ಫಿಕ್ಸ್ ಆಗಬೇಕು.ಇಲ್ಲವಾದರೆ ಸ್ವಂತ ವಾಹನದಲ್ಲೋ ಸರ್ಕಾರಿ ಬಸ್ ನಲ್ಲೋ ಹೊರಡಬೇಕಾಗುತ್ತದೆ. ಸಾಮೂಹಿಕವಾಗಿ ಒಂದು ಮಿನಿ ಬಸ್ ನಲ್ಲೋ ಅಥವಾ ಸಂಖ್ಯೆ ಹೆಚ್ಚಾದರೆ ದೊಡ್ದ ಬಸ್ ನಲ್ಲೋ ಹೊರಟರೆ ಎಲ್ಲರ ಪರಿಚಯ, ಮಾತುಕತೆ, ಹರಟೆ, ವಿಚಾರ ವಿನಿಮಯಕ್ಕೆ ಅವಕಾಶಗಳಿರುತ್ತದೆ. ಆದ್ದರಿಂದ ಬೆಂಗಳೂರಿನಿಂದ ಹೊರಡುವ  ಅಭಿಮಾನಿಗಳು  ಇಲ್ಲಿ ಪ್ರತಿಕ್ರಿಯೆ ಬರೆಯುವುದರ ಮೂಲಕ ಅಥವಾ ಕೆಳಗಿನ ಫೋನ್ ನಂಬರುಗಳಿಗೆ ದಿನಾಂಕ 20.01.2011 ರೊಳಗಾಗಿ ಕರೆಮಾಡಿ ತಿಳಿಸಬೇಕಾಗಿ ಕೋರುವೆ.
ಈಗಾಗಲೇ ವೇದಸುಧೆಯ ಗಮನಕ್ಕೆ ಬಂದಿರುವಂತೆ ಹಾಸನಕ್ಕೆ ಕುಟುಂಬ ಸಹಿತರಾಗಿ  ಹೊರಟಿರುವ ಅಭಿಮಾನಿಗಳ ಪಟ್ಟಿ
೧] ವೇದಾಧ್ಯಾಯೀ ಸುಧಾಕರ ಶರ್ಮ
೨] ಶ್ರೀ ವಿಷ್ಣುಭಟ್ 
೩] ಶ್ರೀ ವಿಶಾಲ್ 
೪] ಜಗದೀಶ್
೫] ಎಂ.ಡಿ.ಎನ್ ಪ್ರಭಾಕರ್ 
೬] ಶ್ರೀ ಹರೀಶ್ ಆತ್ರೇಯ
೭] ಶ್ರೀಮತಿ ಚಿತ್ರ ಮತ್ತು ಶ್ರೀ ಪ್ರಸನ್ನ
೮] ಶ್ರೀ ಕೃಷ್ಣಮೂರ್ತಿ
೯] ಡಾ|| ವಿವೇಕ್
೧೦] ಶ್ರೀ ದಕ್ಷಿಣಾಮೂರ್ತಿ

ಸಂಪರ್ಕಿಸಲು ದೂರವಾಣಿ:
ಶ್ರೀಸುಧಾಕರಶರ್ಮ: 9448842474 / 08022421950
ಶ್ರೀ ವಿಶಾಲ್:   9880455251
ಶ್ರೀ ಹರಿಹರಪುರಶ್ರೀಧರ್:  9663572406/ 08172250566
ಮೇಲ್ ಮೂಲಕ ಕೂಡ ನಿಮ್ಮೊಡನೆ  ಹಾಸನಕ್ಕೆ ಬರುವವರ ವಿವರವನ್ನು ದಿನಾಂಕ 20.01.2011 ರೊಳಗೆ ನೀಡಬಹುದಾಗಿದೆ.
ನಮ್ಮ ಮೇಲ್ ವಿಳಾಸ:  vedasudhe@gmail.com

ಹೊಸಬೆಳಕು











ವೇದಾಭಿಮಾನಿಗಳೇ,
ನಿನ್ನೆ ರಾತ್ರಿ [14.01.2011]ಚಂದನ ವಾಹಿನಿಯಲ್ಲಿ ಪ್ರಸಾರವಾಗಬೇಕಿದ್ದ ಈ ದಾರಾವಾಹಿಯು ಕಾರಣಾಂತರಗಳಿಂದ  ಎರಡುವಾರಗಳು ಮುಂದೂಡಲ್ಪಟ್ಟಿದೆ. ಬರುವ 28.01.2011 ರಿಂದ ಪ್ರತೀ ಶುಕ್ರವಾರ ರಾತ್ರಿ 8.00 ರಿಂದ 8.30 ರವರಗೆ ಪ್ರಸಾರವಾಗಲಿರುವ ಈ ದಾರಾವಾಹಿಯನ್ನು ನಿಮ್ಮ ಪರಿಚಿತರೆಲ್ಲರಿಗೂ ನೋಡುವಂತೆ ತಿಳಿಸಿ.ನಮ್ಮ ಜೀವನಕ್ಕೆ ಬೆಳಕಾಗಬಲ್ಲ ಈ ದಾರಾವಾಹಿಯು ಇಂದಿನ ದಿನಗಳಲ್ಲಿ ಒಂದು ಅತ್ಯಂತ ವಿನೂತನ ಮತ್ತು ಉತ್ತಮವಾದ ಪ್ರಯತ್ನ. ಸುಮಾರು 30 ಕ್ಕೂ ಹೆಚ್ಚು  ಕಂತುಗಳಲ್ಲಿ ಪ್ರಸಾರವಾಗಲಿರುವ  ಈ ದಾರಾವಾಹಿಯ ಬಗ್ಗೆ ನಿಮ್ಮ ಅನಿಸಿಕೆ  ಅಭಿಪ್ರಾಯಗಳನ್ನು ನೇರವಾಗಿ ಚಂದನ ವಾಹಿನಿಗೂ ಮತ್ತು ವೇದಸುಧೆಗೂ ಬರೆಯಿರಿ. ವೇದಸುಧೆಗೆ ಬರೆದ ನಿಮ್ಮ ಅಭಿಪ್ರಾಯಗಳನ್ನು ಗೌರವಪೂರ್ವಕವಾಗಿ ಪ್ರಕಟಿಸಲಾಗುವುದು. ಅಗತ್ಯವಿದ್ದರೆ ಈ ದಾರಾವಾಹಿಗಾಗಿಯೇ ಒಂದು ಪುಟ ತೆರೆಯಲಾಗುವುದು.

Friday, January 14, 2011

ಸತ್ತ ಕೈ ಮತ್ತೆ ಬಂದಾಗ, ಭಾಗ-೨

ನನ್ನ ಕೈಗೆ ಪುನರ್ಜೀವ ಬಂದ ಪವಾಡದ ಬಗ್ಗೆ ಇಂದು ಬರೆಯುತ್ತೇನೆಂದು  ನಿನ್ನೆ ತಿಳಿಸಿದ್ದೆ. ಏನ್ ಸಾರ್ ಅದು ಪವಾಡ? ಯಾವ ಸ್ವಾಮೀಜಿ ಹತ್ತಿರ ಹೋಗಿದ್ರಿ? ಅಂತಾ ನನ್ನ ಪರಿಚಯದವರು ಆಗಲೇ ನನಗೆ ಫೋನಿನಲ್ಲಿ ಕೇಳಿದ್ದಾಯ್ತು. ಪವಾಡ! ಆಬಗ್ಗೆ  ನಾನು ಏನೂ ಬರೆಯುವುದಿಲ್ಲ. ಆದರೆ ನನಗೆ ಪವಾಡವಾಗಿ ಗುಣಪಡಿಸಿದ್ದು ಪ್ರಾಣಾಯಾಮ!!    ಡಾ|| ಅರುಣಾಚಲಯ್ಯ  ಎಂಬ ವೈದ್ಯರೊಬ್ಬರು ಹಾಸನದಲ್ಲಿದ್ದರು. ಈಗ ಬೆಂಗಳೂರಿನಲ್ಲಿದ್ದಾರೆಂದು ಕಾಣುತ್ತೆ. ಒಂದು ಪ್ರಾಣಾಯಾಮ ತರಗತಿಯಲ್ಲಿ  ನನ್ನ ಅನುಭವವನ್ನು ಹೇಳಿದಾಗ, ಅವರು ಗೇಲಿ ಮಾಡಿ ಬಿಟ್ಟರು. ನಾನೇನೂ ಸುಮ್ಮನಾಗಲಿಲ್ಲ. "ಅಲ್ಲಾ ಡಾಕ್ಟ್ರೇ, ಪ್ರಾಣಾಯಾಮ ಅಭ್ಯಾಸ ಮಾಡುತ್ತಲೇ ನನ್ನ  ಕೈಗೆ ಪುನರ್ಜೀವ ಬಂದು ಈಗ ನಾನೂ ಎಲ್ಲರಂತೆ  ಸಾಕ್ಷಿಯಾಗಿ ಎದುರಿಗೇ ನಿಂತಿರುವಾಗ ,ನೀವು ತಮಾಶೆ ಮಾಡ್ತೀರಲ್ಲಾ! ಹಾಗಾದರೆ ನನ್ನ ಅನುಭವವೇ ಸುಳ್ಳೇ?"-ಎಂದು ಗಟ್ಟಿಯಾಗೇ ಹೇಳಿದಾಗ ಅವರು ಸುಮ್ಮನಾಗಬೇಕಾಯ್ತು. ಅಷ್ಟೇ ಅಲ್ಲ, ಅವರೂ ಪ್ರಾಣಾಯಾಮ ತರಗತಿಗಳಿಗೆ ಬರಲು ಆರಂಭಿಸಿ ಈಗ ಅವರು ಆರ್ಟ್ ಆಫ್ ಲಿವಿಂಗ್ ನಲ್ಲಿ ಟೀಚರ್  ಆಗಿರಬಹುದು.
ಈಗ ನನ್ನ ಕಥೆ ಮತ್ತೆ ಶುರು ಮಾಡುವೆ. ನನ್ನ ಎಡಗೈ ನಿತ್ರಾಣದಿಂದ  ನಾನು ಮಾನಸಿಕವಾಗಿ ಕುಸಿದುಹೋಗಿದ್ದೆ. ಒಂದು ದಿನ ಬೆಳಿಗ್ಗೆ ನ್ಯೂಸ್ ಪೇಪರ್ ಜೊತೆಯಲ್ಲಿ ಒಂದು ಕರಪತ್ರವು  ನನ್ನ ಮನೆ ಬಾಗಿಲಲ್ಲಿ ಬಿದ್ದಿತ್ತು.  ಎಸ್.ಎಸ್.ವೈ [ಸಿದ್ಧ ಸಮಾಧಿ ಯೋಗ] ತರಗತಿಯು ಆರಂಭವಾಗುವ ಬಗ್ಗೆ ಪ್ರಕಟಣೆ ಅದರಲ್ಲಿತ್ತು. ನೋಡಿದೆ"ಬಿ.ಪಿ. ಶುಗರ್, ಹೃದ್ರೋಗ, ಇತ್ಯಾದಿ ಯಾವುದೇ ಹಳೆಯ ರೋಗಗಳಿಗೆ ಯಾವ ಔಷಧ ವಿಲ್ಲದೆ ಚಿಕಿತ್ಸೆ"
ಕರಪತ್ರ ನೋಡಿದೊಡನೆ  ಧ್ಯಾನ-ಪ್ರಾಣಾಯಾಮ ತರಗತಿಯನ್ನು ಸೇರಲು ನಿರ್ಧರಿಸಿದೆ. ಹಾಸನದ ಜವೇನಹಳ್ಳಿ ಮಠದಲ್ಲಿ ಆರಂಭವಾದ ಆ ಶಿಭಿರವನ್ನು ನಡೆಸಿಕೊಟ್ಟವರು ಶ್ರೀ ಸುರೇಶ್ ಗುರೂಜಿ. ತರಗತಿ ಪ್ರಾರಂಭವಾಯ್ತು. ವಜ್ರಾಸನದಲ್ಲಿ ಕುಳಿತು ಪ್ರಾಣಾಯಾಮ ಅಭ್ಯಾಸ ಶುರುಮಾಡಬೇಕು. ಎರಡೂ ಹಸ್ತಗಳನ್ನು ಸೊಂಟದ ಮೇಲಿಡಬೇಕು. ಬಲಗೈ ಇಡಲು ಸಾಧ್ಯ, ಎಡಗೈ?    ಎಡ ಹಸ್ತವನ್ನು ಬಲಹಸ್ತದ ಸಹಾಯದಿಂದ ಸೊಂಟದ ಮೇಲಿಟ್ಟೆ. ವಿಭಾಗಶ: ಪ್ರಾಣಾಯಾಮ ಶುರುವಾಯ್ತು. ಅಂದು ಕಳೆಯಿತು. ಎರಡನೆಯ ದಿನವೂ ಆರಂಭದಲ್ಲಿ ಸೊಂಟದ ಮೇಲೆ ಎಡಹಸ್ತವನ್ನು ಬಲಹಸ್ತದ ಸಹಾಯದಿಂದಲೇ ಇಟ್ಟು  ಪ್ರಾಣಾಯಾಮ ಶುರು ಮಾಡಿದೆ. ಆನಂತರ ಹಸ್ತಗಳನ್ನು ಕೊಂಕಳಲ್ಲಿ ಇಡಬೇಕು. ಮತ್ತೆ ಅದೇ ರೀತಿ  ಎಡಗೈಯ್ಯನ್ನು  ಬಲಗೈ ಸಹಾಯದಿಂದ ಇಟ್ಟೆ. ಹೀಗೆ ಎರಡೂ ಸ್ಥಿತಿಯ ಪ್ರಾಣಾಯಾಮಗಳನ್ನು ಎರಡೂ ದಿನ ನಾಲ್ಕಾರು ಭಾರಿ ಪ್ರಯತ್ನ ಪೂರ್ವಕವಾಗಿ ಮಾಡಿದೆ. ಮೂರನೆಯ ದಿನ ಪ್ರಾಣಾಯಾಮ ತರಗತಿಯ ಆರಂಭದಲ್ಲಿ ಸ್ವಲ್ಪ ಎಡಗೈಯ್ಯನ್ನು  ಬಲಗೈ ಸಹಾಯದಿಂದಲೇ ಸ್ವಲ್ಪ ಸುಲಭವಾಗಿ ಸೊಂಟದಮೇಲಿಡಲು ಸಾಧ್ಯವಾಯ್ತು. ಆದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ.ಆಶ್ಚರ್ಯ! ಪ್ರಾಣಾಯಾಮ ಅಭ್ಯಾಸ ಮಾಡುತ್ತಾ ಮಾಡುತ್ತಾ ಕೈಯಲ್ಲಿ ಶಕ್ತಿಯ ಸಂಚಾರ ಆರಂಭ!! ಚಕಿತನಾದೆ. ಎನೋ ಒಂದು ಶಕ್ತಿಯು ಪ್ರವಹಿಸುವಂತೆ ಭಾಸವಾಯ್ತು. ಅಬ್ಭಾ! ಅದೆಷ್ಟು ದಿಗಳಿಂದ ಕಳೆದುಕೊಂಡಿದ್ದ ಕೈಯ್ಯನ್ನು ನಿಧಾನವಾಗಿ ಆಡಿಸುವಂತಾಯ್ತು. ಅಂದು ನನಗೆ ಹಬ್ಬ!!
ನೋಡಿ, ಮನುಷ್ಯನಿಗೆ ಎಲ್ಲಾ ಚೆನ್ನಾಗಿದ್ದಾಗ ಜೀವನ ಸಪ್ಪೆ ಎನಿಸುತ್ತೆ. ಕೊಟ್ಟಿದ್ದನ್ನು ಭಗವಂತ ಕಿತ್ತುಕೊಂಡು ಮತ್ತೆ ಕೊಟ್ಟಾಗ ನಮಗೆ ಅದರ ಮಹತ್ವ ಅರ್ಥವಾಗುತ್ತೆ. ಕ್ರಮೇಣ ದಿನಕಳೆದಂತೆ ಅದರ ಮಹತ್ವ ಮರೆಯಾಗುತ್ತಾ ಬರುತ್ತೆ. ನಾನು ಈ ವಿಚಾರದಲ್ಲಿ ಒಬ್ಬ ಪಕ್ಕಾ  ಉಧಾಹರಣೆಗೆ ಯೋಗ್ಯ. ಕಾರಣವೇನೆಂದರೆ ಧ್ಯಾನ-ಪ್ರಾಣಾಯಾಮವನ್ನು ಸತತವಾಗಿ ಎರಡು-ಮೂರು ವರ್ಷಗಳು ಮಾಡಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದ ನಾನು ಕ್ರಮೇಣ ಅನ್ಯಾನ್ಯ ಸಾಮಾಜಿಕ ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸಿಕೊಂಡವನು ನನ್ನ ಜೀವನ ಕ್ರಮವನ್ನು ವೆತ್ಯಾಸ ಮಾಡಿಕೊಂಡೆ. ಈಗ ಸಣ್ಣಪುಟ್ಟ  ರೋಗಗಳು ನನ್ನನ್ನು ಭಾಧಿಸುತ್ತವೆ. ಎಲ್ಲಕ್ಕೂ ನನ್ನಲ್ಲೇ ಪರಿಹಾರವಿದೆ, ಆದರೆ ನಾನೊಬ್ಬ ಭಾವುಕ. ಯವುದೋ ವಿಚಾರಕ್ಕೆ ಅಂಟಿಕೊಂಡರೆ  ನನ್ನ ಎಲ್ಲಾ ಸಮಯವನ್ನೂ ಅದಕ್ಕೆ ಮೀಸಲು ಮಾಡಿ ನನ್ನನ್ನು ನಾನು ಮರೆಯುತ್ತೇನೆ. ನೀವು ಹೀಗಾಗಬೇಡಿ ಎಂದು ವಿನಂತಿಸಲೇ ನಾನು ಈ ಪುಟ್ಟ  ಬರಹವನ್ನು  ಮುಕ್ತಾಯ ಮಾಡುವೆ.
--------------------------------------
 ಪ್ರಾಣಾಯಾಮದಿಂದ ನನಗೆ ಗುಣವಾಯ್ತೆಂದರೆ  ಸೋದರಿ ಚಿತ್ರನಂಬಲಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಯಾವ ಪ್ರಾಣಾಯಾಮ? ಎಂದಿದ್ದಾರೆ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಈ ಪ್ರಾಣಾಯಾಮವನ್ನು "ವಿಭಾಗೀಯ ಪ್ರಾಣಾಯಾಮಗಳು" ಎನ್ನುತ್ತಾರೆ. ಯೋಗಶಾಸ್ತ್ರದಲ್ಲಿ ಏನಿದೆಯೋ ನನಗೆ ತಿಳಿಯದು. ಆದರೆ ನನಗೆ ವರವಾದ ವಿಭಾಗೀಯ ಪ್ರಾಣಾಯಾಮದ ಒಂದು ಚಿಕ್ಕ ಕ್ಲಿಪ್ ಇಲ್ಲಿ ಹಾಕಿರುವೆ ಸೋದರಿ ಚಿತ್ರ ಇವರಿಗಾಗಿ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಪ್ರಾಣಾಯಾಮಗಳಲ್ಲಿ  ಇದು ಒಂದು. ಇಲ್ಲಿ ನನಗೆ ಯಾರ ಬಗ್ಗೆಯೂ  ಪ್ರಚಾರಕೊಡಬೇಕೆಂಬ ಆಸೆ ಇಲ್ಲ. ಆದರೆ ನನ್ನ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿರುವೆ ಅಷ್ಟೆ.


Thursday, January 13, 2011

ಸತ್ತ ಕೈ ಮತ್ತೆ ಬಂದಾಗ

ಸಾಮಾನ್ಯವಾಗಿ ಭಾವಜೀವಿಗಳಲ್ಲಿ ಒಂದು ಕೊರತೆ ಕಾಣುತ್ತೆ. ಯಾವುದೋ ಒಂದು ಭಾವಕ್ಕೆ ಬಂಧಿಯಾಗಿದ್ದರೆ ಉಳಿದದ್ದೆಲ್ಲವನ್ನೂ ಕಡೆಗಣಿಸುವ ಪ್ರವೃತ್ತಿ.ಉಧಾಹರಣೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅನೇಕರನ್ನು ನೋಡಿದ್ದೇನೆ. ಸರಿಯಾದ ಸಮಯಕ್ಕೆ  ಸ್ನಾನವಿಲ್ಲ, ಸರಿಯಾದ ಸಮಯಕ್ಕೆ ಆಹಾರವಿಲ್ಲ, ಸರಿಯಾದ ನಿದ್ರೆ ಇಲ್ಲ.ಶರೀರ ಮನಸ್ಸುಗಳಿಗೆ ಅಗತ್ಯವಾದ ವ್ಯಾಯಾಮವಿಲ್ಲ. ಆದರೆ ಎಲ್ಲದರಬಗ್ಗೆ ಬರೆಯುವುದಂತೂ ನಿಜ. ಮನುಷ್ಯನಿಗೆ ತನ್ನ ದೈಹಿಕ-ಮಾನಸಿಕ ಆರೋಗ್ಯವು ತನ್ನ ನಿಯಂತ್ರಣದಲ್ಲಿಲ್ಲದಿದ್ದರೆ ಏನು ಮಾಡಿ ಏನು ಪ್ರಯೋಜನ? [ ಮದ್ಯಸೇವನೆಮಾಡಿ,ಧೂಮಪಾನಮಾಡುತ್ತಾ ಬರೆಯುವವರೂ ಇದ್ದಾರೆ. ಇವರ ಬಗ್ಗೆ ಚರ್ಚಿಸುವುದಿಲ್ಲ]
ಸುಧಾಕರಶರ್ಮರಂತವರು ಅಪರೂಪ. ತಾವು ಯೋಗಿಯಂತೆ ಬದುಕುತ್ತಾ , ಆಹಾರವಿಹಾರಗಳಿಗೆ ಒಂದು ಪಥ್ಯವನ್ನು ಹಾಕಿಕೊಂಡು, ಪ್ರಾಣಾಯಾಮ-ಯೋಗವನ್ನು ಕಡೆಗಣಿಸದೆ, ಸಾಹಿತ್ಯಕೃಷಿ, ಅಧ್ಯಯನ ಮಾಡುತ್ತಾ, ಸಾಮಾಜಿಕ ಜಾಗೃತಿಗಾಗಿ ಚಟುವಟಿಕೆಗಳನ್ನು ನಡೆಸುತ್ತಾ ಮಾದರಿಯಾಗಿ ಬಾಳುವ ಕ್ರಮ.

           ನನಗಿರುವ ಕೊರತೆಗಳಿಗೆ ಪರಿಹಾರ ಹುಡುಕಲೆಂದೇ ಈ ಮಾತುಗಳು. 
ಒಂದು ಘಟನೆಯನ್ನು ವೇದಸುಧೆಯ ಎಲ್ಲಾ ಅಭಿಮಾನಿಗಳ ಗಮನಕ್ಕೆ ತಂದುಬಿಡುತ್ತೇನೆ. ಸುಮಾರು ೧೫ ವರ್ಷಗಳ ಹಿಂದೆ ಸರ್ವೈಕಲ್ ಸ್ಪಾಂಡಲೈಟಿಸ್ ಸಮಸ್ಯೆಯಿಂದಾಗಿ ಒಂದು ರಾತ್ರಿ ಇದ್ದಕ್ಕಿದ್ದಂತೆ ನನ್ನ ಎಡಗೈ  ಶಕ್ತಿಯನ್ನು ಕಳೆದುಕೊಂಡಿತು. ಅಂದರೆ ನನ್ನ ಪಾಲಿಗೆ ಅದು ಸತ್ತಂತಾಯ್ತು. ಕೈ ಒಂದಿಂಚೂ ಮೇಲೆತ್ತಲಾಗುತ್ತಿಲ್ಲ. ಗಾಭರಿಯಾಯ್ತು. ಬೆಳಿಗ್ಗೆ ಎದ್ದವನೇ ಆತಂಕದಿಂದ  ನನ್ನ ಮಿತ್ರರಾದ  ಹಾಸನದ " ಧರ್ಮಸ್ಥಳ ಆಯುರ್ವೇದಿಕ್ ಕಾಲೇಜಿನ " ಪ್ರಾಂಶುಪಾಲರಾದ ಡಾ|| ಪ್ರಸನ್ನರಾವ್ ಅವರಿಗೆ ಫೋನ್ ಮಾಡಿದೆ. ಗಾಭರಿ ಬೇಡ. ಬನ್ನಿ ಸರಿಮಾಡುತ್ತೇನೆಂದು ಭರವಸೆ ನೀಡಿದರು. ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಎಂಟು ದಿನಗಳು ಸತತವಾಗಿ ಆಯಿಲ್ ಮಸ್ಸೇಜ್, ಸ್ಟೀಮ್  ಬಾತ್ ಎಲ್ಲಾ ಮಾಡಿದ್ದಾಯ್ತು. ಏನೂ ಪರಿಣಾಮ ಬೀರಲಿಲ್ಲ. ನನಗೆ ಆತಂಕ ಹೆಚ್ಚಾಯ್ತು. ನಾನೆಂದೆ "ಡಾಕ್ಟ್ರೇ, ಏನೂ ಸುಧಾರಿಸಲಿಲ್ಲವಲ್ಲಾ! ನನ್ನನ್ನು ನಿಮ್ಹ್ಯಾನ್ಸ್ ಗೆ [ಹೀಗೆಂದಾಗ ಹುಚ್ಚಾಸ್ಪತ್ರೆಗೆ ಎಂದು ಗೇಲಿ ಮಾಡಿದವರಿದ್ದಾರೆ] ಕಳಿಸಿ ಬಿಡಿ. ಅಲ್ಲಾದರೂ ತೋರಿಸುತ್ತೇನೆ" 
ಆಗ ಪ್ರಸನ್ನರಾಯರು ಹೇಳಿದರು" ನೋಡಿ ಶ್ರೀಧರ್ ನೀವು ಅಲ್ಲಿ ತೋರಿಸಿದೊಡನೆ ಕುತ್ತಿಗೆ ಭಾಗದಲ್ಲಿ ಆಪರೇಶನ್ ಮಾಡಬೇಕೆಂದು ಹೇಳುತ್ತಾರೆ. ಆದರೆ ನೀವು ಆಪರೇಶನ್ ಮಾಡಿಸಿಕೊಳ್ಳಬೇಡಿ. ನನಗೆ ಫೋನ್ ಮಾಡಿ ಬೇರೆ ದಾರಿ ಹುಡುಕೋಣ ವೆಂದರು.ನಿಮ್ಹ್ಯಾನ್ಸ್ ನಲ್ಲಿ ಮೊದಲು ಪರೀಕ್ಷಿಸಿದ ವೈದ್ಯರು ಸುಮಾರು ಐನೂರು ರೂಪಾಯಿಗಳ ಮಾತ್ರೆ ಬರೆದುಕೊಟ್ಟರು. ಮೂರು ದಿನಗಳ ನಂತರ  ನನ್ನನ್ನು ಪರೀಕ್ಷಿಸಿದ ಹಿರಿಯ ವೈದ್ಯರು ಈ ಮಾತ್ರೆ ಬೇಡ " ಒಂದು ಆಪರೇಶನ್ ಆಗಬೇಕು, ಅದೂ ನೂರಕ್ಕೆ ನೂರು ಭರವಸೆ ಇಲ್ಲ. ಪ್ರಯತ್ನ ಮಾಡಬೇಕಷ್ಟೆ." ಎಂದರು . ಆಗ ಬೇರೆ ದಾರಿ  ಇಲ್ವಾ ಡಾಕ್ಟ್ರೇ ಎಂದಾಗ ಫಿಸಿಯೋ ತೆರೆಫಿ ಪ್ರಯತ್ನಿಸಬಹುದು ಅದು ತುಂಬಾ ನಿಧಾನ. ಸುಧಾರಣೆ ಕಷ್ಟ. ಎಂದರು.ಆದರೂ ಫಿಸಿಯೋ ತೆರೆಫಿ ಚಿಕಿತ್ಸೆ ಆರಂಭಿಸಲಾಯ್ತು. ಅಲ್ಲೂ ಸುಧಾರಿಸಲೇ ಇಲ್ಲ. ಆಗ ಸುಮಾರು ಆರು ತಿಂಗಳು ನನ್ನ ಸ್ಥಿತಿ ದೇವರೇ ಬಲ್ಲ. ಒಂದು ಕೈಯಲ್ಲಿ ಎಲ್ಲಾ ಕೆಲಸ ಮಾಡಬೇಕು. ಹೆಚ್ಚು ದಿನ ರಜೆ ಹಾಕುವಂತಿಲ್ಲ.
ಈ ಮಧ್ಯೆ ನನ್ನ ಮಿತ್ರರೊಬ್ಬರು ಒಂದು ಸಲಹೆ ನೀಡಿದರು. ಮುಂಬಯಿಯಲ್ಲಿ ಒಬ್ಬ ಸ್ಪಿರಿಚುಯಲ್ ಹೀಲರ್ ಇದ್ದಾರೆ. ಅವರಹತ್ತಿರ ಹೋದರೆ ಕೇವಲ ಸ್ಪರ್ಷಮಾತ್ರದಿಂದ ಗುಣಪಡಿಸುತ್ತಾರಂತೆ. ಫೋನ್ ನಂಬರ್ ಪಡೆದು ಅವರನ್ನು ಹುಡುಕಿದೆ. ಅವರು ಧಾರವಾಡದಲ್ಲಿ ಕ್ಯಾಂಪ್ ಮಾಡಿದ್ದರು. ಮುಳುಗುವವನಿಗೆ ಕಡ್ಡಿ ಕಂಡರೂ ಹಿಡಿದುಕೊಳ್ಳುವಂತೆ  ಅವರ ಬಳಿ ಹೋದೆ. ರಾತ್ರಿ ಟ್ರೈನ್ ನಲ್ಲಿ ಪ್ರಯಾಣಮಾಡುವಾಗ ಅನುಭವಿಸಿದ ನೋವು ಅವರ ಸ್ಪರ್ಷದ ನಂತರ ಸ್ವಲ್ಪ ಕಾಲ ಇರಲಿಲ್ಲ. "ನಾಲ್ಕೈದು ಭಾರಿ ಬಂದರೆ ಗುಣಪಡಿಸುವೆ" ಎಂದರು..... ಮತ್ತೆ ಅವರ ಬಳಿ ಹೋಗಲಾಗಲಿಲ್ಲ. ಆದರೂ ಔಷಧಿ-ಮಾತ್ರೆ ಇಲ್ಲದೆ, ಆಪರೇಶನ್ ಇಲ್ಲದೆ ನಾನು ಸಂಪೂರ್ಣ ಗುಣಮುಖನಾದೆ. ಅದು ಹೇಗೆ? ಆ ಪವಾಡವನ್ನು ನಾಳೆ ಬರೆಯುವೆ.

ಶ್ರೀ ಶೃತಿಪ್ರಿಯರೊಂದಿಗೆ ಕೇವಲ ನಾಲ್ಕು ನಿಮಿಷಗಳ ಮಾತುಕತೆ

ವೇದತರಂಗ ಪತ್ರಿಕೆಯ ಸಂಪಾದಕರಾದ ಶ್ರೀ ಶೃತಿಪ್ರಿಯರೊಂದಿಗೆ ವೇದಾಧ್ಯಾಯೀ ಸುಧಾಕರ ಶರ್ಮರ ಕೇವಲ ನಾಲ್ಕು ನಿಮಿಷಗಳ ಮಾತುಕತೆ ವೇದಸುಧೆಗಾಗಿ...

ಆಹಾರವನ್ನು ಹೇಗೆ ಸೇವಿಸಬೇಕು? Part-3

ಮೊದಲನೆಯ ಸುವರ್ಣ ಸೂತ್ರ - ಚೆನ್ನಾಗಿ ಅಗಿದು ಸೇವಿಸಬೇಕು.
ತಿನ್ನುವ ಪದಾರ್ಥ ಮೆತ್ತಗಿದ್ದರೂ ಅಗಿಯಲೇಬೇಕು. ಮೆತ್ತಗೆ/ನುಣ್ಣಗೆ ಮಾಡುವುದು ಅಷ್ಟು ಮುಖ್ಯವಾದ ಉದ್ದೇಶವಲ್ಲ! ತಿನ್ನುವ ಆಹಾರದೊಂದಿಗೆ ಸಾಕಷ್ಟು ಜೊಲ್ಲು ಸೇರಿಸಬೇಕೆಂಬುದು ಮುಖ್ಯ ಉದ್ದೇಶ. ಸಸ್ಯಾಹಾರಿಗಳಲ್ಲಿ, ಮಾನವನೂ ಶಾರೀರಿಕವಾಗಿ ಸಸ್ಯಾಹಾರಿಯೇ ಆದ್ದರಿಂದ, ಜೀರ್ಣಕ್ರಿಯೆ ಪ್ರಾರಂಭವಾಗುವುದು ಬಾಯಿಯಲ್ಲಿ! ಸರಿಸುಮಾರು 30ರಿಂದ 40-50 ಸಲ ಜಗಿಯಬೇಕು. Eat the Liquids and Drink the Solids ಎಂಬುದು ಒಂದು ವಿಚಿತ್ರವಾದ ಸೂತ್ರ! ದ್ರವಗಳನ್ನು ಗಟ್ಟಿಪದಾರ್ಥವೆಂಬಂತೆ ಬಾಯಲ್ಲಿ ಆಡಿಸಬೇಕು. ಗಟ್ಟಿ ಪದಾರ್ಥಗಳನ್ನು ನೀರಾಗುವವರೆಗೂ ಬಾಯಲ್ಲಿಯೇ ಆಡಿಸಿ ಕುಡಿಯಬೇಕು!
ಜೊಲ್ಲು ಒಂದು ಅದ್ಭುತ ರಚನೆ. ಬಾಯಿಯಿಂದ ಹಿಡಿದು ಗುದದ್ವಾರದವರೆಗೆ Gastro intestinal trackನಲ್ಲಿ ಯಾವುದೇ ತೊಂದರೆ, ಹುಣ್ಣುಗಳಿದ್ದರೆ ಅದಕ್ಕೆ ಪ್ರಕೃತಿ ನೀಡಿರುವ ಪರಿಣಾಮಕಾರಿಯಾದ ಹಾಗೂ ಉಚಿತವಾದ ಔಷಧಿಯೇ ಈ ಜೊಲ್ಲು!
ಇನ್ನು ಆಹಾರಗಳ ಮಿಶ್ರಣ. ನಾಮಾನ್ಯವಾಗಿ ಹಣ್ಣು - ತರಕಾರಿಗಳನ್ನು ಮಿಶ್ರ ಮಾಡುವುದಿಲ್ಲ. ತಿಂದರೆ ಬರೀ ಹಸಿ ತರಕಾರಿ, ಅಥವಾ ಬರೀ ಹಣ್ಣು. ಅದರಲ್ಲೂ Melon alone ಎಂದೂ ಹೇಳುತ್ತಾರೆ. ಒಣಹಣ್ಣುಗಳನ್ನು ಪ್ರತ್ಯೇಕವಾಗಿ ತಿನ್ನುವುದೇ ಸರಿಯೆನಿಸುತ್ತದೆ.
ಇದರ ಹಿಂದಿನ ವಿಜ್ಞಾನ ಅರಿಯಲು ಕಷ್ಟವೇನಿಲ್ಲ. ಒಂದೊಂದು ಆಹಾರಪದಾರ್ಥವೂ ಜೀರ್ಣವಾಗಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಸುಮಾರು ಒಂದೇ ಸಮಯವನ್ನು ತೆಗೆದುಕೊಳ್ಳುವ ಆಹಾರಗಳನ್ನು ಮಿಶ್ರ ಮಾಡಿದರೆ ಸಮಸ್ಯೆಯಿಲ್ಲ. ವಿಭಿನ್ನ ಸಮಯ ತೆಗೆದುಕೊಳ್ಳುವ ಆಹಾರಗಳನ್ನು ಬೆರೆಸಿದರೆ ಭಾಗಶಃ ಅರಗುತ್ತದೆ, ಭಾಗಶಃ ಅರಗಿರುವುದಿಲ್ಲ. ಎಲ್ಲಿ ತಿನ್ನಬೇಕು?
(ಮುಂದುವರೆಯುತ್ತದೆ)
-ಸುಧಾಕರಶರ್ಮ

ವಿ.ಸೂ. ಆಹಾರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿರಿ "ಮನುಜ! ಏನು ನಿನ್ನ ಆಹಾರ?" - ಲೇಖಕರು: ಶ್ರೀ ಜಿ.ವಿ.ವಿ.ಶಾಸ್ತ್ರಿ, ನಿಸರ್ಗ ಯೋಗ ಧಾಮ, 11ನೇ ಕ್ರಾಸ್, ಎಸ್.ಎಸ್.ಪುರಂ, ತುಮಕೂರು - 572102. ಫೋನ್: 0816-2278499.