Pages

Saturday, February 11, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೩


     ಎಷ್ಟಾದರೂ ವೇದ ಭ್ರಾಂತಿಪೂರ್ಣವಾದ ಪೌರುಷೇಯ ಕೃತಿಯಲ್ಲ. ಅದು ಸರ್ವಜ್ಞ ಭಗವದುಕ್ತ. ಆದುದರಿಂದ, ಪರಮ ವೈಜ್ಞಾನಿಕ. ಮಾನವರೆಲ್ಲರನ್ನೂ ಸಮಾನ ದೃಷ್ಟಿಯಿಂದಲೇ ನೋಡಬೇಕೆಂಬುದು ಸತ್ಯ ಸಿದ್ಧಾಂತ. ಆದರೆ ಮಾನವರು ಯಾಂತ್ರೀಕೃತರಲ್ಲ, ಎಲ್ಲಾ ವಿಷಯಗಳಲ್ಲಿಯೂ ಸರ್ವಥಾ ಸಮಾನವಾಗಿರುವುದಕ್ಕೆ. ಒಂದು ಯಂತ್ರಾಗಾರದಿಂದ ಒಂದೇ ರೂಪದ, ಒಂದೇ ತೂಕದ, ಒಂದೇ ಬಣ್ಣದ, ಒಂದೇ ಶಕ್ತಿಯ ಸಹಸ್ರಾರು ಮೋಟಾರುಗಳನ್ನು ನಿರ್ಮಿಸಬಹುದು. ಆದರೆ ಅತ್ಯಂತ ಸಮರ್ಥನಾದ ಆಚಾರ್ಯನೂ ಕೂಡ ಒಂದೇ ಶಕ್ತಿಯ, ಒಂದೇ ಅಭಿರುಚಿಯ, ಒಂದೇ ಭಾವನೆಯ ಸಾವಿರ, ಏಕೆ, ನೂರು ಶಿಷ್ಯರನ್ನೂ ತಯಾರು ಮಾಡಲಾರನು. ಅದಕ್ಕೆ ಕಾರಣವೂ ಇದೆ. ಪ್ರತಿಯೊಬ್ಬ ಜೀವಾತ್ಮನೂ ತನ್ನದೇ ಆದ ಸಂಸ್ಕಾರಗಳನ್ನು ಹೊತ್ತು, ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಬರುತ್ತಾನೆ. ಪರಿಚ್ಛಿನ್ನ ಚೇತನ ಎಂಬ ಅಧ್ಯಾಯದಲ್ಲಿ ಪಾಠಕರು ಈ ವಿಷಯವನ್ನು ಓದಿದ್ದಾರೆ. ಋಗ್ವೇದ ಹೇಳುತ್ತಲಿದೆ:-


ಆದಹ ಸ್ವಧಾಮನು ಪುನರ್ಗರ್ಭತ್ವಮೇರಿರೇ |
ದಧಾನಾ ನಾಮ ಯಜ್ಞಿಯಮ್ || (ಋಕ್. ೧.೬.೪.)


    ಈ ಜೀವಾತ್ಮನು [ಯಜ್ಞಿಯಮ್ ನಾಮ ದಧಾನಾಃ] ಆದರಯೋಗ್ಯ ಪದವನ್ನು ಪಡೆಯುತ್ತಾ [ಆತ್ ಅಹ] ನಿರಂತರ ಕ್ರಮದಲ್ಲಿ [ಸ್ವಧಾಂ ಅನು] ತಮ್ಮ ಧಾರಣಶಕ್ತಿಗಳಿಗೆ ಅಂದರೆ ಸಂಸ್ಕಾರಗಳ ದೃಷ್ಟಿಯಿಂದ ಯೋಗ್ಯತೆಗೆ ಅನುಸಾರವಾಗಿ [ಪುನಃ ಗರ್ಭತ್ವಂ ಏರಿರೇ] ಮರಳಿ ಗರ್ಭತ್ವವನ್ನು - ಮಾತೃಯೋನಿಯಲ್ಲಿನ ಇರುವಿಕೆಯನ್ನು ಪಡೆಯುತ್ತಾರೆ. ಮಾನವಯೋನಿ ಏನೋ ಒಂದೇ, ಮಾನವತ್ವ ಸಾಮಾನ್ಯ ಧರ್ಮವೂ ಅಹುದು. ಈ ದೃಷ್ಟಿಯಿಂದ ಮಾನವರೆಲ್ಲಾ ಸಮಾನರೇ ಸರಿ. ಆದರೆ ಸಂಸ್ಕಾರಜನಿತವಾದ ಸಾಮರ್ಥ್ಯಗಳಲ್ಲಿ ಮತ್ತು ಒಲವುಗಳಲ್ಲಿ ಸಹಜವಾದ ಭೇದವಿರುತ್ತದೆ. ಅದನ್ನು ಗಮನಿಸಿ, ಪ್ರತಿಯೊಬ್ಬನಿಗೂ ತನ್ನದೇ ಆದ ರೀತಿಯಲ್ಲಿ ಏಳಿಗೆ ಸಾಧಿಸುವ ಅನುಕೂಲವನ್ನು ಕಲ್ಪಿಸಿಕೊಡುವುದೇ ಮನೋವಿಜ್ಞಾನಕ್ಕನುಗುಣವಾದ ಕ್ರಮ.
*************************

Thursday, February 9, 2012

ಪರಮಾತ್ಮ ಸ್ವರೂಪ

     ಶ್ರೀ ರವಿ ತಿರುಮಲೈರವರು ದಿನಾಂಕ 05-02-2012ರಂದು ಬೆಂಗಳೂರಿನಲ್ಲಿ ನಡೆದ ಹರಿಹರಪುರ ಶ್ರೀಧರರ ಮಗನ ವಿವಾಹ ನಿಶ್ಚಿತಾರ್ಥದ ಸಂದರ್ಭದಲ್ಲಿ ಪರಿಚಯವಾದ ಸಹೃದಯಿ. 'ದಾಸಾನುದಾಸ' ಎಂಬ ಅವರ ತಾಣದಲ್ಲಿ ಅನೇಕ ಧಾರ್ಮಿಕ, ವೈಚಾರಿಕ ಬರಹಗಳನ್ನು ಓದಬಹುದು. ಪರಮಾತ್ಮನ ಕುರಿತು ಅವರ ಒಂದು ಲೇಖನವನ್ನು ಮಿಂಚಂಚೆ ಮೂಲಕ ಕಳಿಸಿರುವುದನ್ನು ಇಲ್ಲಿ ಪ್ರಕಟಿಸಿದೆ. ವಾಚಕರು ಈ ವಿಚಾರದಲ್ಲಿ ಜಿಜ್ಞಾಸೆ ನಡೆಸಬಹುದಾಗಿದೆ.
-ಕ.ವೆಂ.ನಾಗರಾಜ್.
..........................................................................................
ಆವರವರ ಭಾವಕ್ಕೆ ಅವರವರ ಭಕುತಿಗೆ 
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ
ನರರೇನು ಭಾವಿಸುವರದರಂತೆ ಕಾಣುವನು  

     ಎಂತಹ ಸುಂದರ ಕಲ್ಪನೆ.ವೀರಶೈವ ಪಂಥದ ಯಾರೋ ಶರಣರು ಬರೆದ ಪಂಕ್ತಿಗಳು.ಇದೇ ರೀತಿಯ ಕಲ್ಪನೆಯನ್ನು ಬಹಳ ಜನ ಸಂತರು ಬೇರೆ ಬೇರೆ ಸಮಯಗಳಲ್ಲಿ ಅನುಭವಿಸಿದ್ದಾರೆ. ಉದಾಹರಣೆಗೆ ತೆಲುಗಿನ  ಶ್ರೇಷ್ಠ ಕವಿ ಭಕ್ತ ವರೇಣ್ಯ ಶ್ರೀ ತಾಳ್ಳಪಾಕ ಅನ್ನಮಾಚಾರ್ಯರು  " ಎಂತ ಮಾತ್ರಮುನ ಎವ್ವರು ತಲಚಿನ ಅಂತಮಾತ್ರಮೆ ನೀವು. ಅಂತರಾಂತರಮು ವೆತಕಿ ಚೂಡ ಪಿಂಡಂತೆ ನಿಪ್ಪಟಿ ಅನ್ನಟ್ಟು "ಎಂದು ಹೇಳುತ್ತಾ ಭಗವಂತನನ್ನು,  "ಹಿಟ್ಟಿನ ಗಾತ್ರದ೦ತೆ ನಿಪ್ಪಟ್ಟು" ಇದ್ದಹಾಗೆ, ಮಾನವ ಮನಸ್ಸಿನ  ಕಲ್ಪನೆ ಹೇಗಿರುತ್ತದೋ ಅವರಿಗೆ ಹಾಗೆ ದೇವರು ಕಾಣುವನೆಂದು ಭಾವಿಸುತ್ತಾರೆ.ಹಾಗೆ ಆ ದೇವರು ಎಂಬ ವಸ್ತು  ಮಾನವರು ಏನೆಂದು ನೆನೆದರೆ ಅಷ್ಟು.
     ಮಾನವನ ಮಷ್ಟಿಷ್ಕದಲ್ಲಿ ಆಲೋಚನೆ ಮಾಡುವ ಪ್ರವೃತ್ತಿ ಬಂದಾಗಿನಿಂದ,ಈ ಪರಮಾತ್ಮ ನಾರು ?ಇವನ ಸ್ವರೂಪವೇನು ?ಎಂಬ ಕುತೂಹಲ ಕಾಡಿದೆ.ತಮಗೆ ಕಾಣದ ಆದರೂ ತಮ್ಮನ್ನು ರಕ್ಷಿಸುವ ಯಾವುದೋ ಒಂದು ಶಕ್ತಿಯೇ ಆ ದೇವರು ಎಂಬ ವಿಚಾರ ಮನುಷ್ಯನ ಮನಸ್ಸಿನಲ್ಲಿ ಮೂಡಿದುದು ಹೀಗಿರಬಹುದು.
ಬಹಳ ಬಹಳ ಹಿಂದೆ ಮನುಷ್ಯ ಇನ್ನೂ ಕಾಡಿನಲ್ಲಿ ಅಲೆಮಾರಿ ಜೀವನ ಮಾಡುತ್ತಿದ್ದಾಗ, ಏನೋ ಸಿಕ್ಕ ಆಹಾರವನ್ನು ತಿನ್ನುವುದು, ಕೈಗೆ ಸಿಕ್ಕ ಹಣ್ಣು, ಗೆಡ್ಡೆ, ಗೆಣಸು, ಪ್ರಾಣಿಗಳ ಮಾಂಸಗಳನ್ನು  ತಿಂದು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಾ,ಬೇರೆ ದುಷ್ಟ ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದ.ಆಗ ತಾನೇ ಅಲ್ಪ ಸ್ವಲ್ಪ ವಿಚಾರ ಅವನ ಮನಸ್ಸಿನಲ್ಲಿ ಮೂಡುತ್ತಿರುವಾಗ ಅವನಲ್ಲಿ ಬಂದ ಯೋಚನೆ ಹೀಗಿದ್ದಿರಬಹುದು.ದಿನದ ಯಾವೊದೋ ಸಮಯದಲ್ಲಿ ಆಕಾಶದಲ್ಲಿ ಯಾವುದೋ ಒಂದು ವಸ್ತು ಬರುತ್ತದೆ.ಅದು ಬಂದಾಗ ತನಗೆ ಎಲ್ಲ ವಸ್ತುಗಳೂ ನಿಚ್ಚಳವಾಗಿ ಕಾಣುತ್ತದೆ.ಆಗ ತನ್ನ ಮತ್ತು ತನ್ನ ಸಂಗಡಿಗರ ರಕ್ಷಣೆಯನ್ನು ಸಮರ್ಪಕವಾಗಿ ಮಾಡಿಕೊಳ್ಳಬಹುದು.ಆದರೆ ಯಾವುದೋ ಸಮಯಕ್ಕೆ,ಆ ವಸ್ತು ಕಾಣೆಯಾದಾಗ ಕಣ್ಣು ಕತ್ತಲಿಟ್ಟು, ಏನೂ ಕಾಣದಾದಾಗ,ದುಷ್ಟ ಕಾಡುಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿ ಕೊಳ್ಳಲಾಗುತ್ತಿರಲ್ಲಿಲ್ಲ.ಅವನು ಹೆದರುತ್ತಾ ಹೆದರುತ್ತಾ ಬದುಕುತ್ತಿದ್ದ. ಹೆದರಿದಾಗ, ಸ್ವ ರಕ್ಷಣೆಗೆ ನಾವು ಯಾರನ್ನಾದರೂ ಅವಲಂಬಿಸುವಂತೆ, ತನ್ನ ರಕ್ಷಣೆಗೆ ಸಹಾಯಮಾಡುವ ಆ "ವಸ್ತು"ವನ್ನು ತನ್ನ ಆಪ್ತನೆಂದು,ರಕ್ಷಕನೆಂದು,ದೇವರೆಂದು ನಂಬಿ ಅವಲಂಬಿಸಿರಬಹುದು.ಅದೇ ರೀತಿ ಮೇಲಿಂದ ಬರುವ ಮಳೆ, ಮಳೆಯಿಂದಾಗುವ ಬೆಳೆ, ಬೆಳೆಯಿಂದ  ಸಿಗುವ ಆಹಾರ, ಹೀಗೆ ತನಗೆ ಉಪಯೋಗಕ್ಕೆ ಬರುವ ಎಲ್ಲಾ ವಸ್ತುಗಳನ್ನೂ ದೈವವೆಂದು ಭಾವಿಸುವ,ಆರಾದಿಸುವ, ಪೂಜಿಸುವ ಮತ್ತು ಅವಲಂಬಿಸುವ ಪ್ರವೃತ್ತಿ ಅವನಲ್ಲಿ ಬೆಳೆಯುತ್ತಾ ಹೋಗಿರಬಹುದು.
ಮಾನವನ ವಿಚಾರ ಶಕ್ತಿ ಬೆಳೆಯುತ್ತಾ ಹೋದಂತೆ ಅವನ ಕಲ್ಪನೆಯೂ ಬೆಳೆಯುತ್ತಾ ಹೋಯಿತು. ಯಾರ ಕಲ್ಪನೆ ಪ್ರಬಲವಾಗಿತ್ತೋ ಅವರ ಪ್ರಭಾವ ಸುತ್ತಲಿನ ಜನಸಮೂಹದಮೇಲೆ ಘಾಡವಾಗಿ ಆಯಿತು.ಅವರನ್ನು ಮತ್ತು ಅವರ ವಿಚಾರಧಾರೆಯನ್ನು ಮಿಕ್ಕೆಲ್ಲರೂ ನಂಬ ತೊಡಗಿದರು.ಅವರನ್ನೇ ಹಿಂಬಾಲಿಸುತ್ತಾ ಹೋದರು.ಹೀಗೆ ಬೆಳೆಯುತ್ತಾ ಹೋದ ಆ ದೇವರ ಕಲ್ಪನೆ ಹತ್ತು ಹಲವಾರು ಆಯಾಮಗಳನ್ನು ಸೃಷ್ಟಿಸಿಕೊಂಡು ಇಂದಿಗೂ ಬದಲಾಗುತ್ತಲೇ ಇದೆ. ಹೊಸ ಹೊಸ ಕಲ್ಪನೆಗಳು ಬೆಳೆಯುತ್ತಾ, ಹಳೆಯ ಮತ್ತು ಬಲಹೀನ ಕಲ್ಪನೆಗಳು ಮತ್ತು ಅವುಗಳ ಮೇಲಿನ ನಂಬಿಕೆ ಅಳಿಸಿಹೊಗುತ್ತಾ ಹೋದವು.ಸತ್ಯಕ್ಕೆ ಹತ್ತಿರವಾದ ವಿಶ್ಲೇಷಣೆಗಳು ಮತ್ತು ವ್ಯಾಖ್ಯಾನಗಳು ಸ್ಥಿರವಾಗಿ ನಿಂತು ಇಂದಿಗೂ ಪ್ರಚಾರದಲ್ಲಿವೆ. ಈ  ಗುಂಪಿಗೆ ಸೇರುವುದೇ ವೇದೋಪನಿಷತ್ತುಗಳು ಮತ್ತು ಅವುಗಳನ್ನುಅವಲಂಬಿಸಿದ ಕಾವ್ಯ ಪುರಾಣ ಗಳು.ಕಾಲಾನುಕಾಲಕ್ಕೆ ಈ ವೇದ ಉಪನಿಷತ್ತುಗಳನ್ನೂ ಮತ್ತು ಅದರ ಘಹನವಾದ ಅರ್ಥವನ್ನೂ ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಿಸುತ್ತಾ ಹೋದಂತೆ ಬೇರೆ ಬೇರೆ ಪಂಥಗಳೂ,ಮತಗಳು ಪಂಗಡಗಳೂ ಹುಟ್ಟಿಕೊಂಡವು.ತಮ್ಮ ಅಭಿಮತವೇ ಉತ್ಕೃಷ್ಟವೆನ್ನುವ ಅಭಿಪ್ರಾಯ ಪ್ರಾಯಶಃ ಎಲ್ಲಾ ಪಂಗಡದವರಿಗೂ ಇತ್ತು. 
ಆದರೆ ಬೇರೆ ಬೇರೆ ವಿಚಾರಧಾರೆಗಳು ಸೃಷ್ಟಿಯಾದಂತೆ ಬೇರೆ ಬೇರೆ ಧರ್ಮಗಳೂ ಮತ್ತು ಬೇರೆ ಬೇರೆ ಜಾತಿಗಳೂ ಹುಟ್ಟಿಕೊಳ್ಳತೊಡಗಿದವು.ಬೇರೆಬೇರೆ ಪಂಗಡಗಳು ತಮ್ಮ ಮತವನ್ನು ತೀವ್ರವಾಗಿ ಪ್ರಚಾರಮಾಡಲು ಮೊದಲಾದವು.ಪಂಗಡ ಪಂಗಡಗಳಲ್ಲೇ ಪರಮಾತ್ಮನ ವಿಚಾರವಾಗಿ ಪೈಪೋಟಿ, ವಾದ, ವಿವಾದ, ಜಗಳ ಯುಧ್ಧಗಳು ಮೊದಲಾದವು.
ಪಾಪ ದೇವರು ತನ್ನ ಸ್ವರೂಪವನ್ನು ಇಟ್ಟಕೊಂಡು ತನ್ನಷ್ಟಕ್ಕೆ ತಾನು ಹಾಯಾಗಿ ಇದ್ದರೂ ಅವನಲ್ಲಿ ಇಲ್ಲದ ಭೇಧವನ್ನು ಕುರುತು ತಮ್ಮ ಕಲ್ಪನೆಗನುಸಾರವಾಗಿ ಚರ್ಚೆ,ವಾದ ಮತ್ತು ವಿವಾದ ವಿಕೋಪಕ್ಕೆ ಹೋಗಿ, ಇನ್ನೂ ಹೆಚ್ಚು ಹೆಚ್ಚು ಮತಗಳು, ಆ ಮತಗಳನ್ನು ಅವಲಂಬಿಸುವ ಪಂಗಡಗಳು, ಆ ಪಂಗಡಗಳ ಮತ್ತು ಒಳ ಪಂಗಡಗಳ ಮಧ್ಯೆ ಛಲ ಮತ್ತು ಯುಧ್ಧ ನಡೆಯುತ್ತಲೇ ಬ೦ದಿದೆ.
ಆದರೆ ಕೋಟ್ಯಾಂತರ ಜನರ ನಂಬಿಕೆಗೆ ಪಾತ್ರನಾದ,ಈ ಪರಮಾತ್ಮನಾರು.ಈ ಪರಮಾತ್ಮನನ್ನು ನಂಬಬೇಕೆ ಅಥವಾ ಪೂಜಿಸಬೇಕೆ ಅಥವಾ ಬೇಡವೇ,ಎಂಬ ಪ್ರಶ್ನೆಗಳು ಪ್ರತಿಯೊಬ್ಬನ ಹೃದಯದಲ್ಲೂ ಪ್ರಮಾಣ ಭೇಧವಿದ್ದರೂ,ಬಂದೆ ಬಂದಿರುತ್ತದೆ.
ನಮ್ಮ ಜೀವನದಲ್ಲಿ ನಡೆದ,ನಡೆಯುತ್ತಿರುವ ಮತ್ತು ನಡೆಯಬಹುದಾದ ಘಟನೆಗಳಿಗೆ ನಾವು ಸರಿಯಾದ ಕಾರಣವನ್ನು ಕೊಡಲು ಅಸಾಧ್ಯ.ಏಕೆಂದರೆ ಈ ಸೃಷ್ಟಿಯ ಎಲ್ಲ ರಹಸ್ಯಗಳನ್ನೂ ಮಾನವ ಇನ್ನೂ ಭೇದಿಸಿಲ್ಲ.ವಿಜ್ಞಾನಿಗಳು ಅಲ್ಪ ಪ್ರಮಾಣದಲ್ಲಿ ಈ ಸೃಷ್ಟಿಯ ರಹಸ್ಯಗಳನ್ನು ಛೇದಿಸುವ ಪ್ರಯತ್ನವನ್ನು ಮಾಡಿದ್ದರೂ ಅಘಾದವಾದ ವಿಶ್ವದ ಮತ್ತು ಸೃಷ್ಟಿಯ ರಹಸ್ಯಗಳು ಇನ್ನೂ ನಿಘೂಡ ವಾಗಿಯೇ ಇವೆ.ನಿರಂತರ ಬದಲಾಗುವ ಈ ಪ್ರಪಂಚದಲ್ಲಿ ಹೊಸ ಹೊಸ ರಹಸ್ಯಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ.ಹಾಗಾಗಿ ಯಾವುದೇ ಕಾಲಕ್ಕೂ ಸೃಷ್ಟಿಯ ಎಲ್ಲಾ ರಹಸ್ಯಗಳನ್ನೂ ಮತ್ತು  ನಿಘೂಡತೆಗಳನ್ನೂ  ಛೇದಿಸಲು ಎಂದಿಗೂ ಸಾಧ್ಯವೇ ಇಲ್ಲ ಎಂದು ಹೇಳಬಹುದು.
     ಹಾಗಾಗಿ ನಮ್ಮ ತಿಳುವಳಿಕೆಗೆ ನಿಲುಕದ ಮತ್ತು ನಮ್ಮ ಜೀವನದಲ್ಲಿ ನಡೆದ ಮತ್ತು ನಡೆಯಬಹುದಾದ ಘಟನೆಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದೆ,ಅವುಗಳನ್ನೆಲ್ಲ ಆ ಕಾಣದ ದೇವನಿಗೆ ಆರೋಪ ಮಾಡಿ ನಾವು ನೆಮ್ಮದಿಯಿಂದ ಇರಬೇಕಷ್ಟೇ.ನಂಬ ಬೇಕು ಮತ್ತು ನಂಬಲೇಬೇಕು. ಬೇರೆ ದಾರಿ ಇಲ್ಲ. ಆದರೆ ಏನನ್ನು ನಂಬುವುದು? ಹಾಗೆ ಮತ್ತೊಂದು ರೀತಿಯಲ್ಲಿ ಯೋಚಿಸಿ, ಈ ಸೃಷ್ಟಿಯಲ್ಲಿ ನಾನು ಒಂದಂಶ.ಎಲ್ಲ ಪ್ರಾಣಿಗಳಂತೆಯೇ ನಾನೂ ಇದ್ದೇನೆ. ಎಲ್ಲವೂ ವ್ಯವಸ್ತಿತ ರೀತಿಯಲ್ಲಿ ನಡೆಯುತ್ತಿದೆ. ಯಾವುದರಿಂದ ನಡೆಯುತ್ತದೆ, ಏಕೆ ನಡೆಯುತ್ತದೆ ಹೇಗೆ ನಡೆಯುತ್ತದೆ ಎಂದು ಯೋಚನೆ ಮಾಡದೆ,ನಾನು ಸುಮ್ಮನೆ ಜೀವನ ಮಾಡಿದರೆ ಸಾಲದೇ ಎಂದರೆ,ಹೌದು ಸಾಕು.ಆದರೆ ದೇವರಿದ್ದಾನೆ ಎಂದು ನಂಬುವುದರಿಂದ ಇಡೀ ಪ್ರಪಂಚದ ಸಾಮಾಜಿಕ ವ್ಯವಸ್ತೆಯೇ ಒಂದು ಸುವ್ಯವಸ್ತೆಗೆ ಬಂದಿದೆಯಂದರೆ,ಆ ದೇವರನ್ನು ನಂಬಿದರೆ ತಪ್ಪೇನು.ನಾನು ಎಂಬ ಅಹಂಕಾರ ಒಂದು ವ್ಯಕ್ತಿಯನ್ನು ಸತ್ಪ್ರಜೆಯಾಗಿ ರೂಪಿಸುವಲ್ಲಿ ಭಾದಕವಾಗಿರುತ್ತದೆ.ವ್ಯವಸ್ಥಿತರೀತಿಯಲ್ಲಿ ಒಂದು ಸಮಾಜದ ಬೆಳವಣಿಗೆಗೆ ಸಹಕಾರ ಮತ್ತು ಸಹಬಾಳ್ವೆ ಅಗತ್ಯ.ಹಾಗೆ ಹುಟ್ಟಿಕೊಂಡ ಈ ದೇವರ ನಂಬಿಕೆಯಿಂದ ಪ್ರಪಂಚದ ಎಲ್ಲ ಸಮಾಜಗಳೂ ವ್ಯವಸ್ಥಿತ ರೀತಿಯಲ್ಲಿ ರೂಪುಗೊಂಡಿದೆ ಎಂದಾಗ, ಆ ದೇವರನ್ನು  ನಂಬಿದರೆ ತಪ್ಪೇನು? 

     ವಿಚಾರವಂತನಾದವನು, ಜಿಜ್ಞಾಸೆಯಿಂದ ಈ ಪರಮಾತ್ಮ ಸ್ವರೂಪವನ್ನು ತನ್ನದೇ ರೀತಿಯಲ್ಲಿ  ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ.ಏಕೆಂದರೆ ಸ್ವತಂತ್ರವಾಗಿ ಯೋಚಿಸುವ ಮತ್ತು ತಾನು ಕಂಡುಕೊಂಡಂತಹ ವಿಚಾರವನ್ನು ನಂಬಲು ಮತ್ತು ತನ್ನ ನಂಬಿಕೆಯಂತೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಮಾನವನಿಗೆ ಇದೆ. 
ಹಾಗೆ  ನನಗೆ ಉಂಟಾದ ಜಿಜ್ಞಾಸೆಯಿಂದ ಹುಟ್ಟಿದ ಅಭಿಪ್ರಾಯವು ಈ ರೀತಿ ಇದೆ. ಪುರುಷ ಸೂಕ್ತ ದಲ್ಲಿ ಪುರುಷನು (ಪುರೇ ಶಯತೀತಿ ಪುರುಷಃ-ನವರಂದ್ರಗಳಿಂದ ಕೂಡಿದ ಈ ದೇಹ (ಪುರ) ವನ್ನು ಧಾರಣೆಮಾಡಿರುವವನು)ಸಾವಿರಾರು ತಲೆ,ಕಣ್ಣು,ಕಾಲುಗಳು ಉಳ್ಳವನು ಎಂದೂ,( this is just a hyperbole) ಈ ಭೂಮಿಯನ್ನೂ ಸೇರಿದಂತೆ ಇಡೀ ವಿಶ್ವವನ್ನೇ ಆವರಿಸಿಕೊಂಡು ಅದರಮೇಲೆ ಹತ್ತಂಗುಲದಲ್ಲಿ ನಿಂತಿದ್ದಾನೆ,ಎಂಬ ವ್ಯಾಖ್ಯಾನವಿದೆ.ಈ ಜಗತ್ ಸೃಷ್ಟಿಗೆ ಕಾರ್ಯಕಾರಣ ಸ್ವರೂಪಿಯಾಗಿಯೂ ತಾನೇ ವಿವಿಧರೂಪದಲ್ಲಿ ಪ್ರಕಟಗೊಂಡು ಈ ಜಗತ್ತನ್ನು ಅನುಭವಿಸುತ್ತಿದ್ದಾನೆ ಎಂಬ ಅಭಿಮತವೂ ಉಂಟು."ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈ,ಅನ್ದಮೈನ ಶ್ರೀ ವೆಂಕಟಾದ್ರಿನಿ ಸೇವಿಂಚಿ ಅಂದರಾನಿ ಪದಮುಲು ಅ೦ದನೆರಡುಜಾಲ"ಎಂಬುದು ಅನ್ನಮಾಚಾರ್ಯರ ಗೀತೆಯ ಉಕ್ತಿ.ಅಂದರೆ "ಎಲ್ಲರಲ್ಲೂ ಹುಟ್ಟಿ, ಎಲ್ಲರಲ್ಲೂ ಸೇರಿ ಎಲ್ಲರ ರೂಪವು ತಾನಾಗಿರುವ ಅಂದವಾದ ವೆಂಕಟಾದ್ರಿ" ಎಂದು ಅದರ ಅರ್ಥ.ಅದರ ಪ್ರಕಾರ ಎಲ್ಲವೂ ಪರಮಾತ್ಮನೇ ಅಲ್ಲವೇ?
ಆದರೆ ಇದು ನಂಬಿಕೆಗೆ ಸೇರಿದ್ದು.ಇದಕ್ಕೆ ಒಂದು ವೈಜ್ಞಾನಿಕ ಆಯಾಮವನ್ನು ಸೇರಿಸಿ ನೋಡಿದರೆ ನಮಗೆ ಗೊತ್ತಾಗುವುದು ಏನಂದರೆ,ನಮಗೆ ಕಾಣುವ ಮತ್ತು ನಮ್ಮ ಸೌರಮಂಡಲದಲ್ಲಿರುವ ಸೂರ್ಯನ ಸುತ್ತಳತೆ 13,92,000ಕಿಲೋ ಮೀಟರ್ ಮತ್ತು ನಾವಿರುವ ಭೂಮಿಯ ಸುತ್ತಳತೆ  12756ಕಿಲೋ ಮೀಟರುಗಳು. ಆ  ಲೆಖ್ಕದಲ್ಲಿ 13ಲಕ್ಷ ಭೂಮಿಗಳನ್ನು ನಮ್ಮ ಸೂರ್ಯನೊಳಕ್ಕೆ ಹಾಕಬಹುದು.ಆದರೆ ವಾಸ್ತವವಾಗಿ ಸೂರ್ಯನೂ ಭೂಮಿಯಂತೆ ಗುಂಡಾಗಿರುವುದರಿಂದ,ಕೇವಲ 980000ಭೂಮಿಗಳನ್ನು ನಮ್ಮ ಸೂರ್ಯನೊಳಕ್ಕೆ ಸೇರಿಸಿ ಬಿಡಬಹುದು.ಈ ಸೌರಮಂಡಲ,ಭೂಮಿ ಮತ್ತು ಇತರೆ ಗ್ರಹಗಳು ಎಲ್ಲವೂ ಒಂದು ಅದ್ಭುತ ಸೂತ್ರದಲ್ಲಿ ಹೆಣೆಯಲ್ಪಟ್ಟಿದೆ. ಇದು ನಿಶ್ಚಯ.      
ನಾವಿರುವ ಭೂಮಿಯ ಸೌರಮಂಡಲ,ಒಂದು ಕ್ಷೀರಪಥದಲ್ಲಿರುವ ಲಕ್ಷಾಂತರ ಸೌರ ಮಂಡಲಗಳಲ್ಲಿ ಒಂದು. ಇಂತಹ ಕ್ಷೀರಪಥಗಳು ಒಂದು ಆಕಾಶಗಂಗೆಯಲ್ಲಿ ಲಕ್ಷಾಂತರ.ಈ ಜಗತ್ತಿನ ಸೃಷ್ಟಿಯಲ್ಲಿ ಇಂಥ ಆಕಾಶಗಂಗೆಗಳು ಲಕ್ಷಾಂತರ.ಯಾವ ಶಕ್ತಿಯ ಸೂತ್ರದಲ್ಲಿ ನಮ್ಮ ಸೌರಮಂಡಲದ ಭೂಮಿ,ಅನ್ಯ ಗ್ರಹಗಳು ಮತ್ತು ಈ ಸೌರಮಂಡಲದ ಅಧಿಪತಿಯಾದ ಮತ್ತು ನಮಗೆ ಕಾಣುವ ಸೂರ್ಯ ಎಲ್ಲವೂ ಹೆಣೆದುಕೊಂಡಿವೆಯೋ ಅದೇ ಶಕ್ತಿಯು ತನ್ನ ವಿಸ್ತಾರ ರೂಪದಿಂದ ಎಲ್ಲ ಕ್ಷೀರಪಥಗಳನ್ನೂ,ಎಲ್ಲ ಅಕಾಶಗಂಗೆಗಳನ್ನೂ ಒಂದೇ ಸೂತ್ರದಲ್ಲಿ ಹಿಡಿದಿಟ್ಟಿದೆ.ಅಂದರೆ ಆ ಶಕ್ತಿಯು ಇವೆಲ್ಲವನ್ನೂ ತನ್ನ ಹಿಡಿತದಲ್ಲಿ ಒಂದು ಸೂತ್ರದಲ್ಲಿ ಹಿಡಿದಿಟ್ಟುಕೊಂಡಿದೆ ಎಂದರೆ,"ಆ ಶಕ್ತಿ ಇವೆಲ್ಲಕ್ಕಿಂತ ಉನ್ನತ ಸ್ಥಾನದಲ್ಲಿದೆ"ಯೆಂದು ಅರ್ಥವಲ್ಲವೇ. ಹಾಗೆ ಈ ಸೃಷ್ಟಿಯನ್ನೇ ತನ್ನ ಸೂತ್ರದ ಹಿಡಿತದಲ್ಲಿ ಇಟ್ಟಿಕೊಂಡಿರುವ ಆ ಶಕ್ತಿಯೇ ಪರಮಾತ್ಮ ಅಥವಾ ದೈವ ಎಂದರೆ ತಪ್ಪಗಲಾರದಲ್ಲವೇ? ಇದೇ ಶಕ್ತಿಯೇ ಈ ಜಗತ್ತಿನ ಎಲ್ಲಕ್ಕೂ ಕಾರಣವೆಂದು ಎಲ್ಲರ ಅಭಿಮತ ಮತ್ತು ಈ ವಿಷಯದಲ್ಲಿ ಮಾತ್ರ ಎಲ್ಲರ ಏಕೀಭಾವವಿದೆ.ಆದರೆ ಅದರ ಸ್ವರೂಪ ಮತ್ತು ಅದರ ಕಾರ್ಯ ವೈಖರಿಯ ಬಗ್ಗೆ ಸಾವಿರಾರು ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳು.
ಪ್ರಾಣವೆಂದರೆ ಚೇತನ.ಜಡವ ಕಾರ್ಯರೂಪಕ್ಕೆ ಪ್ರೇರೇಪಿಸುವುದೇ ಈ ಶಕ್ತಿ.  ಜಡ ಮತ್ತು ಶಕ್ತಿಯ ಸಮ್ಮಿಲನದಿಂದ ನಡೆಯುವ ಕೆಲಸ ಕಾರ್ಯಗಳೇ ಈ ಜಗದ್ವ್ಯಾಪಾರ.ಅಂದರೆ ಈ ಜಗತ್ತಿನ ಆಗು ಹೋಗುಗಳೆಲ್ಲಾ ಈ ಶಕ್ತಿಯ ಮೇಲೆ ಅವಲಂಬಿಸಿರುತ್ತದೆ.ಈ ಜಗತ್ತಿನ ಎಲ್ಲ ವಸ್ತುಗಳೂ ಅದೇ ಶಕ್ತಿಯ ಸಹಾಯದಿಂದ ಕಾರ್ಯೋನ್ಮುಖವಾದರೂ, ಆಯಾಯ ವಸ್ತುವಿನ ಕಾರ್ಯದ ಪ್ರಮಾಣ ಮತ್ತು ವ್ಯಾಪ್ತಿ,ಆ ವಸ್ತುವಿನ ಆಕಾರ ಮತ್ತು ಕ್ಷಮತೆಯ (capacity)ಮೇಲೆ ಆಧಾರವಾಗಿರುತ್ತದೆ.
ಇದಕ್ಕೊಂದು ಉದಾಹರಣೆಯನ್ನು ಕೊಡುವ.ನಮ್ಮ ಶಿವನಸಮುದ್ರದ ಅಥವ ಯಾವುದೇ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಪ್ರಮಾಣವನ್ನು Mega Watts ಎನ್ನುತ್ತಾರೆ. ಆ ವಿದ್ಯುತ್ತಿನ ಶಕ್ತಿಯ ತೀವ್ರತೆ ಎಷ್ಟಿರುತ್ತದೆ ಎಂದರೆ ಅದರ ಹತ್ತಿರ ಹೋಗಲು ಯೋಚನೆ ಮಾಡಿದರೆ ಸಾಕು ಸುಟ್ಟು ಬೂದಿಯೂ ಮಿಗದಂತಾಗುತ್ತದೆ.ಅಷ್ಟು ತೀವ್ರವಾಗಿರುತ್ತದೆ ಅದರ ಶಕ್ತಿ.ಅದನ್ನೇ ಪರಮಾತ್ಮ ಎಂದು ಇಟ್ಟುಕೊಳ್ಳೋಣ.ಅಲ್ಲಿ ಉತ್ಪಾದನೆಯಾದ ವಿದ್ಯುತ್ತೇ ನಿಮ್ಮ-ನಮ್ಮ ಮನೆಗಳಿಗೆ ಬರುವುದು.ಆದರೆ ಅದು ನೇರವಾಗಿ ಬರುವುದಿಲ್ಲ. ಹಂತ ಹಂತವಾಗಿ ಅದರ ತೀವ್ರತೆಯನ್ನು ಕಡಿಮೆಗೊಳಿಸುತ್ತ (step down) ಕಡೆಗೆ    ನಮ್ಮ-ನಿಮ್ಮ ಬೀದಿಯಲ್ಲಿರುವ ಒಂದು transformer ಗೆ ಕಳುಹಿಸಿ ಅದರಿಂದ ನಿಮ್ಮ ಬೀದಿಯಲ್ಲಿರುವ ಎಲ್ಲ ಮನೆಗಳಿಗೆ ತಂತಿಗಳ ಮೂಲಕ ಕಳುಹಿಸುತ್ತಾರೆ. ನಿಮ್ಮ ಮನೆಗೆ ಬರುವ ವಿದ್ಯುತ್ತಿನ ಪರಿಮಾಣ 220 volts ಆಗಿರುತ್ತೆ. ಹಾಗೆ ಎಲ್ಲೋ ಮೂಲವಿರುವ ಆ ವಿದ್ಯುತ್ತನ್ನು ನಿಮ್ಮ ಮನೆಗೆ ಕಳುಹಿಸಿದಾಗ ನೀವು ಅದನ್ನು ಬೇರೆ ಬೇರೆ ಉಪಕರಣಗಳನ್ನು ಉಪಯೋಗಿಸಲು ಬಳಸುತ್ತೀರಿ.ಆದರೆ ಪ್ರತಿಯೊಂದು ಉಪಕರಣವೂ ಅದೇ ವಿದ್ಯುತ್ತನ್ನು ಉಪಯೋಗಿಸಿದರೂ, ಅದರಿಂದ ಹೊರಬರುವ ಫಲ(output)ಮಾತ್ರ ಬೇರೆ ಬೇರೆಯಾಗಿರುತ್ತದೆ. geyser,Fridge,TV,Iron ಬಾಕ್ಸ್, ಫ್ಯಾನ್, ಹೀಗೆ ಎಲ್ಲವೂ ಅದೇ ವಿದ್ಯುತ್ತನ್ನು ಉಪಯೋಗಿಸಿಕೊಂಡರೂ ಅದರ ಉಪಯೋಗಗಳು ನಮಗೆ ಬೇರೆ ಬೇರೆ ರೀತಿಯಲ್ಲಿರುತ್ತದೆ.
ಹಾಗೆಯೇ ಈ ಜಗತ್ತನ್ನು ಸೃಜಿಸಿ, ನಿಯಂತ್ರಿಸಿ, ನಡೆಸಿಕೊಂಡು ಹೋಗುವ  ಆ ಅದ್ಭುತ ಶಕ್ತಿಯೇ ಬೇರೆ ಬೇರೆ ಪ್ರಾಣಿ ಪಕ್ಷಿ,ಕೀಟ, ಗಿಡ ಮರ ಹೀಗೆ ಈ ಸೃಷ್ಟಿಯಲ್ಲಿ ಏನೇನಿದೆಯೋ ಅದೆಲ್ಲದರಲ್ಲೂ ಸೇರಿ ಬೃಹತ್ ಚೇತನದ ಅಲ್ಪ ರೂಪದಲ್ಲಿ ಆಯಾಯಾ ದೇಹಗಳ ಶಕ್ತಿಯ ಮಿತಿಯಲ್ಲಿ ಕೆಲಸ ಮಾಡುತ್ತಾ ಇರುತ್ತದೆ. ಈ ಪ್ರಪಂಚದ ಎಲ್ಲಾ ಬೇರೆ ಬೇರೆ ಪ್ರಾಣಿ ಪಕ್ಷಿ,ಕೀಟ, ಗಿಡ,ಮರ ಎಲ್ಲದರ ದೇಹರಚನೆ ಮತ್ತು ಆಕಾರ ಭಿನ್ನ ಭಿನ್ನವಾಗಿರುವಾಗ,ಇವೆಲ್ಲವೂ ಜೀವಂತವಾಗಿರಲು ಒಂದೇ ಶಕ್ತಿಯನ್ನು ಉಪಯೋಗಿಸಿಕೊಂಡರೂ, ಮಾಡುವ ಕೆಲಸ, ಕೆಲಸ ಮಾಡುವ ರೀತಿ, ಆ ಕೆಲಸದ ಕಾರಣ ಮತ್ತು ಆ ಕೆಲಸದಿಂದ ಆಗುವ ಪ್ರಯೋಜನ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ.
     ಈ ಜಗತ್ತನ್ನು ಒಂದು ಸೂತ್ರದಲ್ಲಿ ನಿಯಂತ್ರಿಸುತ್ತಿರುವ ಆ ಅದ್ಭುತ ಶಕ್ತಿಯನ್ನು ನಾವು ಪರಮಾತ್ಮ ಎಂದು ಪರಿಗಣಿಸಿದರೆ, ಸೃಷ್ಟಿಯಲ್ಲಿರುವ ಅಖಂಡ ಸಂಖ್ಯೆಯ ಜೀವರಾಶಿಗಳಲ್ಲಿರುವ ಚೇತನವೂ ಅದೇ ಪರಮಾತ್ಮನ ಸ್ವರೂಪವಾದದು ಎಂದರೆ ತಪ್ಪಾಗಲಾರದು. ಹಾಗಾಗಿ ಎಲ್ಲ ಜೀವಿಗಳನ್ನೂ ಚೈತನ್ಯದಿಂದಿಡುವ ಆ ಚೇತನ ಮತ್ತು ಈ ಜಗತ್ತನ್ನು ಒಂದು ಸೂತ್ರದಲ್ಲಿ ನಿಯಂತ್ರಿಸುವ ಆ ಬೃಹತ್ ಚೇತನವೂ ಒಂದೇ ಎಂದು ಒಪ್ಪಲೇಬೇಕು. ಪರ್ಯಾಯ ವಿಶ್ಲೇಷಣೆ ಇಲ್ಲ.
ಇದನ್ನೊಪ್ಪಿದರೆ,ಆ ಪರಮಾತ್ಮನನ್ನು ಎಲ್ಲ ಜೀವಿಗಳಲ್ಲೂ ಕಾಣುತ್ತಾ ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾ ಈ ಜೀವನವನ್ನು ಎಲ್ಲರೂ ಸುಂದರವನ್ನಾಗಿಸಿಕೊಳ್ಳಬಹುದಲ್ಲವೇ.
     ಜೀವಾತ್ಮ ಪರಮಾತ್ಮ ಸಂಬಂಧವನ್ನು ಹೀಗೆ ಅರ್ಥಮಾಡಿಕೊಂಡ ನನಗೆ ಎಲ್ಲ ಪ್ರಾಣಿಗಳಲ್ಲೂ ಆ ಬೃಹತ್ ಚೇತನದ ರೂಪವೇ ಕಾಣುವಾಗ ಆ ದೇವರನ್ನು ಬೇರೆಲ್ಲೋ ಹುಡುಕಬೇಕೆ ನೀವೇ ಹೇಳಿ?


ಸರ್ವೇ ಜನಾಃ ಸಜ್ಜನೋ ಭವಂತು
ಸರ್ವೇ ಸಜ್ಜನಾಃ ಸುಖಿನಃ ಸಂತು 
- ರವಿ ತಿರುಮಲೈ

Tuesday, February 7, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೨


       ಅಥರ್ವ ವೇದವಂತೂ ಉಚ್ಛ-ನೀಚಭಾವದ ಬುಡಕ್ಕೇ ಕೊಡಲಿ ಪೆಟ್ಟು ಹಾಕುತ್ತಾ ಹೇಳುತ್ತದೆ: 


 ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ವ್ರತಂ ಸಹ ಚಿತ್ತಮೇಷಾಮ್ |
 ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || (ಅಥರ್ವ.೬.೬೪.೨.)


      ಈ ಮಾನವರೆಲ್ಲರ [ಮಂತ್ರಃ ಸಮಾನಃ] ಮಂತ್ರ ಸಮಾನವಾಗಿರಲಿ. [ಸಮಿತಿಃ ಸಮಾನೀ] ಸಮಿತಿ ಸಮಾನವಾಗಿರಲಿ. [ವ್ರತಂ ಸಮಾನಮ್] ವ್ರತವೂ ಸಮಾನವಾಗಿರಲಿ. [ಏಷಾ ಚಿತ್ತಂ ಸಹ] ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ. [ವಃ] ನಿಮ್ಮೆಲ್ಲರಿಗೂ, [ಸಮಾನೇನ ಹವಿಷಾ] ಸಮಾನವಾದ ಖಾದ್ಯ, ಪೇಯಗಳನ್ನೇ [ಜುಹೋಮಿ] ದಾನ ಮಾಡುತ್ತೇನೆ. [ಸಮಾನಂ ಚೇತಃ] ಸಮಾನವಾದ ಚೈತನ್ಯದಲ್ಲಿಯೇ [ಅಭಿ ಸಂ ವಿಶಧ್ವಮ್] ಎಲ್ಲೆಡೆಯಿಂದಲೂ ಪ್ರವೇಶಿಸಿರಿ.  
     ಭಗವಂತ ಇಷ್ಟು ಸ್ಪಷ್ಟವಾಗಿ ಸಮಾನತೆಯ ಸಂದೇಶವನ್ನು ಸಾರುತ್ತಿದ್ದಾನೆ. ಅಥರ್ವವೇದದಲ್ಲಿ ಇನ್ನೊಂದೆಡೆ ಸಮಾನೀ ಪ್ರಪಾ ವೋsನ್ನಭಾಗಃ|| (ಅಥರ್ವ.೩.೩೦.೬.) [ಪ್ರಪಾ ಸಮಾನೀ] ನಿಮ್ಮೆಲ್ಲರ ಜಲಾಶಯಗಳೂ ಒಂದಾಗಿರಲಿ. [ವ ಅನ್ನಭಾಗಃ] ನಿಮ್ಮ ಆಹಾರಭಾಗಗಳೂ ಒಂದಿಗೇ ಇರಲಿ ಎನ್ನುತ್ತಿದೆ. ಇಂತಹ ಅದೆಷ್ಟೋ ಮಂತ್ರಗಳನ್ನುದ್ಧರಿಸಬಹುದು. ಅದರೆ ಇಷ್ಟರಿಂದಲೇ ಪಾಠಕರು ವೇದಗಳ ಭಾವನೆಯನ್ನು ತಿಳಿದುಕೊಳ್ಳಬಲ್ಲರು.
 ************** 

Monday, February 6, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೧


     ಮಾನವಸಮತಾ ಭಾವನೆಯನ್ನು ವೇದಗಳಿಗಿಂತ ಚೆನ್ನಾಗಿ ಪ್ರತಿಪಾದಿಸುವ ಶಾಸ್ತ್ರ ಜಗತ್ತಿನಲ್ಲಿ ಬೇರಾವುದೂ ಇಲ್ಲ. ವಿಷಯ ಪ್ರವೇಶದಲ್ಲೇ ವೇದಗಳು ಮಾನವ ಮಾತ್ರರನ್ನು ದೇವಪುತ್ರರು, ಋಷಿಗಳು, ಅಮೃತನಾದ ಪ್ರಭುವಿನ ಮಕ್ಕಳು ಎಂದು ಕರೆದಿರುವುದನ್ನು ಪಾಠಕರು ನೋಡಿದ್ದಾರೆ. ಸಮಾನತೆ ವೇದೋಪದೇಶದ ಒಂದು ಆಧಾರ ಶಿಲೆ. ಈ ಕೆಳಗಿನ ಮಂತ್ರವನ್ನೇ ನೋಡಿರಿ:-


ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ |
ಯುವಾ ವಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || (ಋಕ್.೫.೬೦.೫.)

     [ಏತೇ] ಈ ಮಾನವರು, [ಅಜ್ಯೇಷ್ಠಾಸಃ] ಯಾರೂ ದೊಡ್ಡವರಲ್ಲ. [ಅಕನಿಷ್ಠಾಃ] ಇವರು ಯಾರೂ ಚಿಕ್ಕವರೂ ಅಲ್ಲ. [ಸಂ ಭ್ರಾತರಃ] ಇವರು ಪರಸ್ಪರ ಸಹೋದರರು. [ಸೌಭಗಾಯ] ಸೌಭಾಗ್ಯಪ್ರಾಪ್ತಿಗಾಗಿ [ವಾವೃಧುಃ] ಮುಂದುವರೆಯುತ್ತಾರೆ. [ಯುವಾ ಸೃಪಾ ರುದ್ರಃ] ಅಜರನೂ, ಆತ್ಮರಕ್ಷಕನೂ, ದುಷ್ಟರಿಗೆ ದಂಡ ನೀಡುವವನೂ ಆದ ಪ್ರಭುವು, [ಏಷಾಂ ಪಿತಾ] ಇವರೆಲ್ಲರ ತಂದೆ. [ಪೃಶ್ನಿಃ] ಭೂಮಾತೆ, [ಮರುದ್ಭ್ಯಃ] ಈ ಮರ್ತ್ಯರಿಗೆಲ್ಲಾ [ಸುದುಘಾ] ಉತ್ತಮ ಶಕ್ತಿಯನ್ನೆರೆಯುವವಳೂ [ಸುದಿನಾ] ಉತ್ತಮ ದಿನಗಳನ್ನು ತೋರಿಸುವವಳೂ ಆಗಿದ್ದಾಳೆ.
     ಇನ್ನೊಂದೆಡೆ ಅದೇ ವೇದ, ಇದೇ ಸಮಾನತೆಯ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರಿ, ಕೊನೆಗೆ - ಸುಜಾತಾಸೋ ಜನುಷಾ ಪೃಶ್ನಿಮಾತರೋ ದಿವೋ ಮರ್ಯಾಃ|| (ಋಕ್. ೫.೫೯.೬.) ಅಂದರೆ ಇವರೆಲ್ಲಾ [ಪೃಶ್ನಿಮಾತರಃ] ಭೂಮಿಯನ್ನೇ ತಾಯಿಯಾಗಿ ಹೊಂದಿರುವವರೂ, [ದಿವಃ ಮರ್ಯಾಃ] ಜ್ಯೋತಿರ್ಮಯ ಪ್ರಭುವಿನ ಮಕ್ಕಳಾದ ಮಾನವರೂ ಆದಕಾರಣ [ಜನುಷಾ ಸುಜಾತಾಸಃ] ಜನ್ಮದಿಂದ ಉತ್ತಮ ಕುಲೀನರೇ ಆಗಿದ್ದಾರೆ ಎನ್ನುತ್ತದೆ.
**************

Thursday, February 2, 2012

ನೀನಿಲ್ಲೆ ಇರುವಾಗ ಎಲ್ಲಿ ಹೋಗಲಿ ನಾನು

ಇಂದು  ಬೆಳಿಗ್ಗೆ ಧ್ಯಾನ ಮಾಡುವಾಗ ನನ್ನ ಮನದಲ್ಲಿ ಬಂದ ಭಾವನೆಗಳಿಗೆ  ಅಕ್ಷರ ಕೊಟ್ಟಾಗ ಮೂಡಿಬಂದ  ಹಾಡಿಗೆ ಶ್ರೀಮತಿ ಲಲಿತಾ ರಮೇಶ್ ರಾಗ ಹಾಕಿ ಹಾಡಿದ್ದಾರೆ.


Podcast Powered By Podbean

ಶ್ರೀ ರಮಣ ಮಹರ್ಷಿಗಳ ಸಂದೇಶ--ಅನನ್ಯ ಶರಣಾಗತಿ



   ಸಂಪೂರ್ಣ ಶರಣಾಗತಿಯ ಬಗ್ಗೆ ಹಲವು ರೀತಿಯ ಅಭಿಪ್ರಾಯಗಳಿವೆ. ಅದರಲ್ಲಿ ಕೆಲವು ಮೂಡನಂಬಿಕೆಯು ಸಹ ಸೇರಿದೆ. ಕೆಲವೊಂದು ಸಂಶಯಗಳಿಗೆ ಸರಿಯಾದ ಉತ್ತರ ದೊರೆಯದೆ ಇದ್ದಾಗ ಶರಣಾಗತಿಯ ಬಗ್ಗೆ ಶ್ರದ್ಧೆ ಕಡಿಮೆಯಾಗುತ್ತದೆ ಅಥವಾ ತಪ್ಪು ಗಹಿಕೆಯಿಂದ ಕೂಡಿರುತ್ತದೆ. ಇಂತಹ ಸಂದರ್ಭದಲ್ಲಿ ಒಬ್ಬ ಭಕ್ತರು ಶ್ರೀ ಭಗವಾನರಲ್ಲಿ ಈ ರೀತಿಯಾಗಿ ಪ್ರಶ್ನೆ ಇಟ್ಟರು.

                             "ಭಗವಂತನಲ್ಲಿ ಸಂಪೂರ್ಣ ಶರಣಾಗಿ, ಯಾವುದರ ಬಗ್ಗೆಯು ಚಿಂತಿಸದೆ ಇದ್ದಲ್ಲಿ, ಅಂತಹವರಿಗೆ ಭಗವಂತನಿಂದಲೇ  ಎಲ್ಲವೂ ಸಿಕ್ಕುತ್ತದೆ ಎಂದು ಒಂದು ನಂಬಿಕೆ.  ಒಂದೇ ಕಡೆ ಕೂತು ಭಗವಂತನ ಧ್ಯಾನದಲ್ಲೇ ಸದಾ ಕಾಲ ಮುಳುಗಿ, ಎಲ್ಲ ಯೋಚನೆಗಳನ್ನು ತೊರೆದು ಅಂದರೆ,  ದೇಹ ಪೋಷಣೆಗೆ ಅವಶ್ಯಕವಾಗಿ ಬೇಕಾದ ಅನ್ನಾಹಾರ, ನೀರಿನ ಯೋಚನೆಯನ್ನು ಬಿಟ್ಟು ಕೂತುಬಿಡುವುದೇ?  ದೇಹಾರೋಗ್ಯ ಕೆಟ್ಟು ಹೋದಂತಹ ಸಮಯದಲ್ಲಿ, ಅವಶ್ಯವಿರುವ ಔಷಧಿ ಮತ್ತು ಶಿಶ್ರುಷೆಯ ಬಗ್ಗೆ ಯೋಚಿಸದೆ ಭಗವಂತನಲ್ಲೇ ಚಿಂತಿಸುತ್ತಾ ಕೂರಬೇಕೆ?"

                             "ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾನೆ: " ಯಾವ ಪುರುಷನು ಎಲ್ಲಾ ಆಶೆ ಆಕಾಂಕ್ಷೆಗಳನ್ನು ತೊರೆದು, ಮಮತಾರಹಿತ, ಅಹಂಕಾರರಹಿತ ಹಾಗು ಇಚ್ಚರಹಿತನಾಗಿ ವರ್ತಿಸುತ್ತಾನೋ ಅವನು ಶಾಂತಿಯನ್ನು ಪಡೆಯುತ್ತಾನೆ".(2 :71 )  ಅಂದರೆ, ಎಲ್ಲಾ ಆಸೆಯನ್ನು ಬಿಡಬೇಕೆಂದು ಹೇಳಿರುತ್ತಾನೆ. ಆದ್ದರಿಂದ ನಾವು ಸಂಪೂರ್ಣವಾಗಿ ಭಗವಂತನ ಧ್ಯಾನದಲ್ಲಿ ಮುಳುಗಿ, ಏನನ್ನು ಕೇಳದೆ, ಭಗವಂತನ ಅನುಗ್ರಹದಲ್ಲಿ ಸಿಗುವಂತಹ ಅನ್ನಾಹಾರ ನೀರು ಮಾತ್ರ ಸೇವಿಸುತ್ತ ಕೂಡಬೇಕೇ? ಅಥವಾ ನಾವು ಈ ಬಗ್ಗೆ ಸ್ವಲ್ಪ ಪ್ರಯತ್ನವನ್ನು ಮಾಡಬೇಕೆ? ಭಗವನ್, ದಯಮಾಡಿ    ಶರಣಾಗತಿಯ    ರಹಸ್ಯವನ್ನು  ತಿಳಿಸಿ  ಕೊಡಬೇಕಾಗಿ  ಪ್ರಾರ್ಥನೆ." 

                               ಭಗವಾನರು ನಸುನಕ್ಕು ಉತ್ತರಿಸುತ್ತಾರೆ :  "ಅನನ್ಯ    ಶರಣಾಗತಿ ಎಂದರೆ  ಯಾವ   ಯೋಚನೆಗಳಿಗೂ   ಅಂಟಿಕೊಳ್ಳದೆ  ಭಗವಂತನಲ್ಲಿ ಧ್ಯಾನಿಸುತ್ತಾ ಇರುವುದು  ಎಂದು  ಅರ್ಥ .  ಇದರಲ್ಲಿ  ಸಂಶಯವೇ  ಇಲ್ಲ. . ಆದರೆ , ದೇಹದ  ಅವಶ್ಯಕತೆಗೆ  ಬೇಕಾಗಿರುವ  ಅನ್ನಾಹಾರ ನೀರುಗಳನ್ನೂ  ತ್ಯಜಿಸಬೇಕು   ಎಂದು  ಅರ್ಥವಲ್ಲ .    ಪ್ರಶ್ನೆ ಮಾಡಿದವರ ಕಡೆಗೆ ಕೈತೋರಿಸಿ, ಈಗ  ಅವರು   ಕೇಳುತ್ತಿದ್ದಾರೆ " ನಾನು  ಏನನ್ನು ದೇವರನ್ನು  ಕೇಳದೆ, ಭಗವಂತ  ಏನನ್ನು ದಯಪಾಲಿಸುತ್ತನೋ  ಅದನ್ನು  ಮಾತ್ರ ತಿನ್ನಬೇಕೆ ?   ಅಥವಾ ನಾನು  ಏನಾದರು  ಪ್ರಯತ್ನ   ಮಾಡಬೇಕೆ?" ಎಂದು.
" ಅವರು ಹೇಳಿದಂತೆ ಹಾಗೆಯೇ ಆಗಲಿ, ಈಗ ನಾವೇನು ತಿನ್ನಬೇಕೋ ಅದು ತನ್ನಷ್ಟಕ್ಕೆ ತಾನೇ ಬಂದಿದೆ ಎಂದೇ  ಇಟ್ಟುಕೊಳ್ಳೋಣ. ಆದರೆ, ಆಗಲೂ  ಕೂಡ ಊಟ ಮಾಡುವವರು ಯಾರು?  ಆಯಿತು,  ಯಾರೋ ಬಂದು ನಮ್ಮ ಬಾಯಿಗೆ ತುತ್ತು ಹಾಕುತ್ತಾರೆ ಎಂದುಕೊಂಡರೂ , ಕಡೇಪಕ್ಷ ನಾವು ಅದನ್ನು ನುಂಗಬೇಕಲ್ಲವೇ? ಅಲ್ಲಿ ನಮ್ಮ ಪ್ರಯತ್ನ ಇಲ್ಲವೇ? 

                              ಅವರು ಕೇಳುತ್ತಾರೆ " ನಾನೇನಾದರು ಅನಾರೋಗ್ಯ ಪೀದಿತನಾದರೆ ನಾನು ಔಷದಿ ತೆಗೆದುಕೊಳ್ಳಬೇಕೆ  ಅಥವ ನಾನು ನನ್ನ ಆರೋಗ್ಯ ಮತ್ತು ಅನಾರೋಗ್ಯವನ್ನು ಭಗವಂತನ ಕೈಯಲ್ಲಿ ಹಾಕಿ ಸುಮ್ಮನೆ ಕೂಡಬೇಕೇ?"    ಇದಕ್ಕೆ  ಶ್ರೀ ಶಂಕರರು ಬರೆದಿರುವ ಸಾಧನಾ ಪಂಚಕಂನಲ್ಲಿ, ಶಂಕರರು ಹೇಳುತ್ತಾರೆ, "ಈ ಹಸಿವು ಎನ್ನುವ ರೋಗಕ್ಕೆ ಭಿಕ್ಷೆಯಿಂದ ಬಂದ ಆಹಾರವನ್ನು ಸೇವಿಸಬೇಕು." ಆದರೆ, ಈ ಭಿಕ್ಷೆಯನ್ನು ಪಡೆಯಲಿಕ್ಕಾದರು ಹೊರಗೆ ಹೋಗಬೇಡವೇ? ಇಲ್ಲೂ ಪ್ರಯತ್ನ ಬೇಡವೇ?    ಎಲ್ಲರು ಕಣ್ಣು ಮುಚ್ಚಿ ಕುಳಿತು ತಾನಿರುವಲ್ಲಿಗೆ ಆಹಾರಾದಿಗಳು ಬರಲಿ ಎಂದು ಕಾಯುತ್ತ ಕೂತರೆ ಈ ಪ್ರಪಂಚ ನಡೆಯುವುದಾದರು ಹೇಗೆ?  ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಸಂಪ್ರದಾಯಕ್ಕೆ ಬಂದಿರುವ ಕುಲಕಸುಬನ್ನು ಕೈಗೊಳ್ಳಬೇಕು. ಆದರೆ,  ಇದೆಲ್ಲವನ್ನು ನಾನು ಮಾಡುತ್ತಿದ್ದೇನೆಂಬ ಭಾವದಿಂದ ಮುಕ್ತನಾಗಿರಬೇಕು.  ಇಲ್ಲಿ ನಾನು ಮಾಡುತ್ತಿರುವೆ ಎಂಬುದೇ ನಮ್ಮನ್ನು ಕಟ್ಟಿಹಾಕಿ ಬಿಡುವುದು. ಆದ್ದರಿಂದ ಈ ಭಾವದಿಂದ ಹೊರಬರುವಂತಹ ವಿಧಾನವನ್ನು ಅರಿಯುವುದು ಅವಶ್ಯವಾಗಿದೆ.  ಅದನ್ನು ಬಿಟ್ಟು,  ರೋಗಕ್ಕೆ ಔಷದಿ ತೆಗೆದುಕೊಳ್ಳಬೇಕಾ? ಹಸಿವೆಯಾದಾಗ ಊಟ ಮಾಡಬೇಕಾ? ಎಂದೆಲ್ಲ ಸಂಶಯದ ಪ್ರಶ್ನೆಗಳನ್ನು ಕೇಳಬಾರದು. ಈ ರೀತಿಯ ಸಂಶಯದ ಪ್ರಶ್ನೆಗಳು ಬರಲು ಪ್ರಾರಂಭವಾದರೆ  ಅದಕ್ಕೆ ಕೊನೆಮೊದಲಿಲ್ಲ.   ' ನಂಗೆ ನೋವಾದರೆ ನರಳಬೇಕೆ ಬಿಡಬೇಕೇ? ನಾನು ಉಸಿರು ತೆಗೆದುಕೊಂಡ ಮೇಲೆ  ಉಸಿರು ಬಿಡಬೇಕೋ ಹಾಗೆ ಇರಬೇಕೋ?     ಎಂಬೆಲ್ಲ ಪ್ರಶ್ನೆಗಳು ಬಂದು ಆವರಿಸುತ್ತವೆ."

                                   "ಈಶ್ವರನೆಂದು  ಕರೆಯಿರಿ,  ಕರ್ಮವೆಂದು ಕರೆಯಿರಿ, ಕರ್ತನೆಂದು ಕರೆಯಿರಿ, ಏನೆಂದು ಕರೆದರೂ ಅದು ಪ್ರತಿಯೊಬ್ಬರ ಮಾನಸಿಕ ಬೆಳವಣಿಗೆಯಂತೆಯೇ ಈ ಪ್ರಪಂಚದಲ್ಲಿ ಇರುತ್ತದೆ. ನಾವು ನಮ್ಮ ಜವಾಬ್ದಾರಿಗಳನ್ನು ಆ ಉನ್ನತ ಶಕ್ತಿಯ ಮೇಲೆ ಹಾಕಿದರೆ ಅದು ಹೇಗೆ ನಡೆಯಬೇಕೋ ಹಾಗೆ ನಡೆಸಿಕೊಳ್ಳುತ್ತದೆ. ನಾವು ಈ ಭೂಮಿಯ ಮೇಲೆ ನಡೆಯುತ್ತೇವೆ. ಹೀಗೆ ಮಾಡುವಾಗ ನಾವು ಒಂದು ಕಾಲನ್ನು ಎತ್ತುವ ಮುಂಚೆ ಇನ್ನೊಂದು ಕಾಲನ್ನು ಎಲ್ಲಿ ಇಟ್ಟಿರಬೇಕು ಎಂದೆಲ್ಲ ಚಿಂತಿಸಿರುವುದಿಲ್ಲ. ತನ್ನಷ್ಟಕ್ಕೆ ತಾನೇ ಅದು ನಡೆಯುವುದಿಲ್ಲವೆ? ಅದೇ ರೀತಿ ಉಸಿರಾಟವು ಕೂಡ ತನ್ನಷ್ಟಕ್ಕೆ ತಾನೇ ನಡೆಯುತ್ತದೆ.ಇದಕಾಗಿ ಯಾವರೀತಿಯ ವಿಶೇಷ ಪರಿಶ್ರಮವನ್ನು ಹಾಕಬೇಕಿಲ್ಲ. ಇದೆ ರೀತಿಯಲ್ಲಿ ನಮ್ಮ ಜೀವನ ಕೂಡ. ನಾವು ಏನಾದರು ಕೊಡಬೇಕಾದರೆ ಅಥವಾ ಬಿಡಬೇಕಾದರೆ ನಾವಿಷ್ಟಬಂದಂತೆ ಮಾಡಲಾದಿತೆ?  ಈ ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ವಿಚಾರಗಳು ನಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ನಡೆದು ಹೋಗಿರುತ್ತವೆ. ಭಗವಂತನಲ್ಲಿ ಸಂಪೂರ್ಣ ಶರಣಾಗತಿ ಎಂದರೆ ಎಲ್ಲ ಯೋಚನೆಗಳನ್ನು ಬಿಟ್ಟು ಭಗವಂತನಲ್ಲಿ ಮನಸನ್ನು ಕೇಂದ್ರೀಕರಿಸುವುದು. ನಾವು ನಮ್ಮ ಮನಸನ್ನು ಅವನಲ್ಲಿ ಕೇಂದ್ರೀಕರಿಸಿದರೆ ಬೇರೆ ವಿಚಾರಗಳು ಮಾಯವಾಗಿ ಬಿಡುತ್ತವೆ. ಕಾಯ, ವಾಚ, ಮನಸು ಆ ಭಗವಂತನಲ್ಲಿ ಸೇರಿಹೊದರೆ ನಮ್ಮೆಲ್ಲ ಜೀವನದ ಚಿಂತೆಗಳ ಹೊರೆಯು ಆತನ ಮೇಲಕ್ಕೆ ವರ್ಗಾವಣೆ ಆಗುತ್ತದೆ."

                              "ಆದರೆ , ಇಲ್ಲಿ ಮುಖ್ಯ ತೊಂದರೆ ಏನೆಂದರೆ,  ಮನುಷ್ಯ ತಾನೆ ಎಲ್ಲವನ್ನು ಮಾಡುವವನು ಎಂದು ಯೋಚಿಸುತ್ತಾನೆ. ಇದು ತಪ್ಪು. ಇದೆಲ್ಲವನ್ನು ಅಗೋಚರವಾದ ಅಪಾರ ಚೈತನ್ಯಶಕ್ತಿ ಮಾಡಿಸುತ್ತಿದೆ, ಮನುಷ್ಯ ಕೇವಲ ಆ ಶಕ್ತಿಯ ಉಪಕರಣ. ಇದನ್ನು ಮನುಷ್ಯ ಒಪ್ಪಿಕೊಂಡರೆ ಎಲ್ಲ ತೊಂದರೆಗಳಿಂದ ಮುಕ್ತನಾಗುತ್ತಾನೆ,ಇಲ್ಲವಾದಲ್ಲಿ ಎಲ್ಲವನ್ನು ತಾನೇ ಎದುರಿಸಬೇಕಾಗುತ್ತದೆ.  ನೋಡಿ, ಒಂದು ದೇವಸ್ತಾನದ ಗೋಪುರದ ಕೆಳಭಾಗದ ಕೆತ್ತನೆಯ ಶಿಲ್ಪವನ್ನು ನೋಡುವಾಗ ಆ ಗೋಪುರದ ಎಲ್ಲಭಾರವನ್ನು ಆ ಶಿಲ್ಪದಲ್ಲಿ ಇರುವವನೇ ಹೆಗಲ ಮೇಲೆ ಹೊತ್ತಂತೆ ಭಾಸವಾಗುತ್ತದೆ.  ಶಿಲ್ಪಿಯು ಶಿಲ್ಪದಲ್ಲಿ ಎಲ್ಲ ರೀತಿಯಲ್ಲಿ ಭಾರ ಹೊತ್ತಿ ರು ವವನ ಮುಖಚರ್ಯೆ ಮತ್ತು ಭಂಗಿಯನ್ನು ಅಷ್ಟೇ  ಚಂದವಾಗಿ ಮೂಡಿಸಿರುವ ಕಾರಣ, ನಿಜದಲ್ಲಿ ಕೂಡ ಅದರ ಮೇಲೆ ಭಾರ ಹೊತ್ತಿರುವುದೇನೋ ಎಂಬಂತೆ ಭಾಸವಾಗುತ್ತದೆ.  ಈಗ ಯೋಚಿಸಿನೋಡಿ ಇದು ಸತ್ಯವೇ? ಭೂಮಿಯೊಳಗಿಂದ  ಕಟ್ಟಲಾದ  ಗಟ್ಟಿ ತಳಪಾಯದೊಂದಿಗೆ ಗೋಪುರದತನಕ  ನಿರ್ಮಿತವಾಗಿದೆ ಮತ್ತು ಈ ತಳಪಾಯದ ಮೇಲೆ ಈ ಇಡಿ ಕಟ್ಟಡ ನಿಂತಿದೆ ಎನ್ನುವುದು ಸತ್ಯ.   ಶಿಲ್ಪವೂ ಕೂಡ ಈ ಕಟ್ಟಡದ ಒಂದು ಭಾಗವೇ ಹೊರತು ಬೇರೆಯಲ್ಲ. ಶಿಲ್ಪದಲ್ಲಿ ನೋಡಿದಂತೆ ಇಡೀ ಕಟ್ಟಡದ ಭಾರವನ್ನು ಹೊತ್ತಿದೆಯೆಂದು ಭಾವಿಸಿದರೆ ಅದು ಹಾಸ್ಯಾಸ್ಪದ ಎನಿಸುವುದಿಲ್ಲವೇ? ಇದೆ ರೀತಿ ಮನುಷ್ಯನು ಕೂಡ ಅಪಾರವಾದ ಚೈತನ್ಯ ಶಕ್ತಿಯನ್ನು ಮರೆತು,  ತಾನೇ ಎಲ್ಲವನ್ನು ಮಾಡುತ್ತಿದ್ದೇನೆಂದು ಕೊಳ್ಳುವುದು ಹಾಸ್ಯಾಸ್ಪದ."

                                    ಓಂ ನಮೋ ಭಗವತೇ ರಮಣಾಯ.