Pages

Saturday, July 31, 2010

ಗಾಡಿಕಾರನ ರೂಢಿ




ಗಾಡಿಕಾರನ ರೂಢಿ




ಗೂಡಲಿರುವೀ ಕಣ್ಣ
ದೂರದೆಡೆ ಹರಿಬಿಟ್ಟು
ಆಡಿ ತುಂಬಿದೆ ಮನದಿ ರೂಪಗಳನ




ಬೇಡವೆಂದರು ಬಿಡದೆ
ಕಿವಿಗಳನು ತೆರೆದಿಟ್ಟು
ಜಾಡಿಸುತ ತುಂಬಿರುವೆ ಶಬ್ಧಗಳನ


ನಾಡನೆಲ್ಲವ ತಿರುಗಿ
ನಾಸಿಕದಿ ಆಘ್ರಾಣಿಸಿ
ಕಾಡಿ ತುರುಕಿದೆ ಒಳಗೆ ಕಂಪುಗಳನ


ಬೀಡಾಡಿ ತಿನ್ನುತ್ತ
ಮತ್ತಷ್ಟು ಒದರೆಂದು
ಜೋಡಿಸಿದೆ ಜಿಹ್ವೆಯೊಳು ರುಚಿಗ್ರಂಥಿಗಳನ


ಬೀಡುಬಿಡುತಲಿ ಸ್ಪರ್ಶ
ಸುಖ ನೀಡಿ ಪಡೆಯೆಂದು
ಮಾಡುಮಾಡಿದೆ ಚರ್ಮ ಪದರಗಳನ


ಗಾಡಿಯನು ನಮಗಿತ್ತು
ಸವಲತ್ತು ಕೊಟ್ಟುಣಿಸಿ
ಗಾಢಾಂಧಕಾರದಲಿ ಕೂಡಿ ನಮ್ಮನ್ನ

ಗಾಡಿಕಾರನೆ ನಿನ್ನ
ಅಡಿಯೆಲ್ಲಿ ಮುಡಿಯೆಲ್ಲಿ ?
ವಾಡಿಕೆಯು ಪೂಜಿಪುದು ಹಲರೂಪಗಳನ

’ನಿಮ್ಮೊಡನೆ ವಿ. ಆರ್. ಭಟ್’ ವಿಭಾಗದ ’ಚಿಂತನಶೀಲ ಕವನಗಳು’ ಸಂಕಲನದಿಂದ

5 comments:

  1. ಭಗವಂತನ ಸೃಷ್ಟಿ ವಿಶೇಷಗಳನ್ನು ಬಣ್ಣಿಸಿರುವ ನಿಮ್ಮ ರೀತಿಯಿಂದ ಬೆರಗಾದೆ|

    ಹೇ ಭಗವಂತ!
    ನೀನೆಂತಹ ಪಕ್ಷಪಾತಿ!
    ಆನೆಗೊಂದು ಬಲ|
    ಆಡಿಗೊಂದು ಬಲ ಕೊಟ್ಟೆ!
    ಇಷ್ಟೆ ಸಾಕೆಂಬ ನಮ್ಮಂತವರನ್ನೂ ಸೃಷ್ಟಿಸಿ ಬಿಟ್ಟೆ!!

    ತಾಮಾಶೆಗಾಗಿ ಬರೆದೆ, ಭಟ್ಟರೇ, ನಿಮ್ಮಂತವರು ವೇದಸುಧೆಗಷ್ಟೇ ಅಲ್ಲ ನಾಡಿನ ಆಸ್ತಿ. ಆ ಸರ್ವಶಕ್ತನಾದ ಭಗವಂತನು ನಿಮಗೆ ಇನ್ನೂ ಶಕ್ತಿ ಕೊಡಲಿ.
    -ಶ್ರೀಧರ್

    ReplyDelete
  2. ತಮಾಶೆಗಾಗಿ ಬರೆದೆ-ಎಂದು ದಯಮಾಡಿ ಓದಿಕೊಳ್ಳಿ.

    ReplyDelete
  3. ನಿಜವಾಗಿಯೂ ನೋಡಿ ಪಂಚೆಂದ್ರಿಯಗಳನ್ನು ಕರುಣಿಸಿದ ಭಗವಂತ ಅವುಗಳನ್ನು ನಡೆಸಲು ಗಾಡಿಗೆ ಬ್ರೇಕು ಇದ್ದಹಾಗೇ ಮನಸ್ಸನ್ನೂ ಕೊಟ್ಟ, ಆದರೆ ಅ ಮನಸ್ಸನ್ನು ಚಂಚಲ ಮಾಡಿ ಅದು ನಮ್ಮ ನಿಯಂತ್ರಣದಲ್ಲೇ ಇರದ ಹಾಗೇ ಮಾಡಿದ, ಈ ಸೃಷ್ಟಿಯ ನಿಯಾಮಕ ಮಾತ್ರ ಹಲವು ರೂಪಗಳಲ್ಲಿ ಪೂಜಿಸಲ್ಪಟ್ಟ, ಆದರೆ ಆಕಾಶ, ಭೂಮಿ, ವಾಯು, ಅಗ್ನಿ, ನೀರು ಕಣ್ಣಿಗೆ ಕಾಣುವ ಈ ಪಂಚ ಮಹಾಭೂತಗಳಲ್ಲಿ ಯಾರ ಹಿಡಿತವೂ ಇಲ್ಲ, ಏನಾಗಬೇಕೋ ಅದಾಗಲೇ ಬೇಕು ಅಲ್ಲವೇ ? ಈ ಗಾರುಡಿಗನ ಅಡಿಯಾಗಲೀ ಮುಡಿಯಾಗಲೀ ನಮಗೆ ಕಾಣಿಸುತ್ತಿಲ್ಲವಲ್ಲ ಎಂಬುದು ಆತಂಕ! ಕೊನೇಪಕ್ಷ ಅದನ್ನಾದರೂ ತೋರಿಸಿದ್ದರೆ ಮತ್ತಿನ್ನೇನೂ ಬೇಕಿರಲಿಲ್ಲ ಅಲ್ಲವೇ ? ನಾನು ಆಸ್ತಿ ಎಂಬುದಕ್ಕಿಂತ ದೇವರು ಏನೋ ಬರೆಯಲು ತಾಕತ್ತು ಕೊಟ್ಟಿದ್ದನಲ್ಲಾ-ಅದರಿಂದ ನಾಲ್ಕು ಜನರಿಗೆ ಏನಾದರೂ ಪ್ರಯೋಜನವಾದೀತೆ ಎಂಬುದು ನನ್ನ ಕ್ಷಣ ಕ್ಷಣದ ಲೆಕ್ಕ, ಪ್ರತಿಕ್ರಿಯಿಸಿದ ಶ್ರೀಯುತ ಹರಿಹರಪುರ ಶ್ರೀಧರ್ ತಮಗೆ ನಮನಗಳು.

    ReplyDelete
  4. ಕಾಣುವುದು ಕಣ್ಣಲ್ಲ!
    ಕೇಳುವುದು ಕಿವಿಯಲ್ಲ!
    ಮೂಸುವುದು ಮೂಗಲ್ಲ!
    ಸವಿಯುವುದು ರಸನೆಯಲ್ಲ!
    ಮುಟ್ಟಿ ತಟ್ಟುವುದು ಚರ್ಮವಲ್ಲ!
    ಇರಲು ದೇಹದಿ ಚೇತನ ಜೀವಾತ್ಮ
    ನಡೆಸುತಿಹುದು ಈ ಎಲ್ಲ ಕರ್ಮಗಳ!
    ಸಾಧನಗಳಿವು ಸಾಧಕನಿಗೆ!
    ಸಾಧಕನಧೀನ ಸಾಧನಗಳು ಲೆಕ್ಕವ ನೋಡಿದರೆ!
    ಸಾಧಕನು ಸಡಿಲಾಗೆ ಸಾಧನವು ದೊರೆಯಂತೆ
    ಮುಳುಗಿ ತಾನೂ ಮುಳುಗಿಸುತಿಹುದು
    ಸಾಧನೆಯ, ಸಾಧಕನ!!

    ReplyDelete