Pages

Sunday, April 3, 2011

ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ - 2

     ನಾನು ವಿಗ್ರಹಾರಾಧನೆಯನ್ನು ಸಮರ್ಥಿಸುವುದಿಲ್ಲವೆಂದ ಮಾತ್ರಕ್ಕೆ ಅದನ್ನು ವಿರೋಧಿಸುವುದಿಲ್ಲ. ಏಕೆಂದರೆ ನಾನು ಯಾವುದೇ ವಿಚಾರ, ತತ್ವಗಳನ್ನು ಪ್ರತಿಪಾದಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ. ವಿಗ್ರಹ ಪೂಜೆಯಿಂದ ಶಾಂತಿ, ನೆಮ್ಮದಿ ಪಡೆಯುತ್ತಿರುವ/ಪಡೆಯಬಯಸುವ ಬಹುತೇಕರ ಶ್ರದ್ಧೆ, ನಂಬಿಕೆಗಳು ಸುಳ್ಳೆಂದು ನಾನು ಹೇಗೆ ಹೇಳಲಿ? ಅವರುಗಳ ಪ್ರಾರ್ಥನೆಗೆ ವಿಗ್ರಹಗಳು ಮಾಧ್ಯಮವಾಗಿರಬಹುದು. ವಿಗ್ರಹಗಳು ಅವರ ಮನೋಶಕ್ತಿಯ ಕೇಂದ್ರೀಕರಣಕ್ಕೆ ಸಾಧನ ಹಾಗೂ ಸಹಕಾರಿಯಾಗಿ ಇರಬಹುದು. ವಿಗ್ರಹಗಳನ್ನು ದೇವರೆಂದು ಭಾವಿಸಿ, ನಂಬಿ ಪೂಜಿಸುವವರ ಮಾನಸಿಕ ಚಿಂತನೆಯ ಅಲೆಗಳು ವಿಗ್ರಹಗಳಲ್ಲಿ ಕ್ರೋಢೀಕೃತಗೊಂಡು ಅಲ್ಲಿ ಶಕ್ತಿ ಸಂಚಯನ ಆಗಿರಬಹುದು. ಅಂತಹ ಸ್ಥಳಗಳು ಶಕ್ತಿ ಕೇಂದ್ರಗಳಾಗಿರಬಹುದು. ಇಲ್ಲೂ ಸಹ ವಿಗ್ರಹಗಳಿಗಿಂತ ಅವುಗಳನ್ನು ಪೂಜಿಸುವವರ ಮನೋಶಕ್ತಿಯೇ ನಿರ್ಧಾರಕವೆಂದು ನನ್ನ ವೈಯಕ್ತಿಕ ಅನಿಸಿಕೆ. ದೇವರನ್ನು ವಿಗ್ರಹಗಳಲ್ಲಿ ಅಥವ ವಿಗ್ರಹಗಳ ಮೂಲಕ ಕಾಣುವುದರಲ್ಲಿಯೂ ಅರ್ಥವಿರಬಹುದು, ಇಲ್ಲದಿರಬಹುದು. ಆದರೆ ವಿಗ್ರಹಗಳೇ ದೇವರೆಂದು ಭಾವಿಸುವುದು ತಾರ್ಕಿಕವಾಗಿಯೂ ಸಹ ಕಷ್ಟಕರ ಸಂಗತಿ. ಒಂದು ಹಂತದ ಪರಿಪಕ್ವತೆ ಬಂದ ನಂತರದಲ್ಲಿ ವಿಗ್ರಹ ಪೂಜೆಯ ಅಗತ್ಯ ಬಾರದೇ ಹೋಗಬಹುದು. ಕೆಲವು ದೇವಸ್ಥಾನಗಳಲ್ಲಿ ದೇವರ ಪ್ರಸಾದ ಕೇಳಿ ಬೇಡುತ್ತಾ ಕುಳಿತ ಭಕ್ತರನ್ನು ಗಮನಿಸಿದ್ದೀರಾ? ಬಲಗಡೆ ಹೂವು ಬಿದ್ದರೆ ಒಪ್ಪಿಗೆಯೆಂತಲೂ ಎಡಗಡೆ ಬಿದ್ದರೆ ಅಶುಭವೆಂದು ನಂಬುವ ಅವರು ದೇವರೊಂದಿಗೆ ಮಾತನಾಡುವ ಪರಿಯನ್ನೂ ನೋಡಿದ್ದೇನೆ. ತಮ್ಮ ಕಷ್ಟ ಸುಖ ತೋಡಿಕೊಳ್ಳುತ್ತಾ 'ಯಾಕಪ್ಪಾ ಇಷ್ಟು ಪರೀಕ್ಷೆ ಮಾಡುತ್ತೀಯಾ? ಇನ್ನೂ ಸತಾಯಿಸಬೇಡ, ಒಳ್ಳೆಯದು ಮಾಡಪ್ಪಾ, ಬೇಗ ಪ್ರಸಾದ ಕೊಡು' ಎಂಬಿವೇ ಇತ್ಯಾದಿ ಹಳಹಳಿಸುತ್ತಿರುತ್ತಾರೆ. ಪ್ರಸಾದ ಕೇಳಲು ಬಂದ ಇತರರೂ ಅವರ ಸರದಿಗಾಗಿ ಕಾಯುತ್ತಿರುತ್ತಾರೆ. ಹಲವರಿಗೆ ಅದು ಭ್ರಮೆಯಂತೆ ಕಂಡರೂ ಭಕ್ತರ ತದೇಕ ಚಿತ್ತತೆ, ನಂಬಿಕೆ ಅಲ್ಲಿ ಎದ್ದು ಕಾಣುತ್ತದೆ. ಅಲ್ಲಿಯೂ ಅವರ ಮನೋಶಕ್ತಿಯೇ ಪ್ರಮುಖವೆಂದು, ವಿಗ್ರಹವಲ್ಲವೆಂದು ನನಗೆ ಅನ್ನಿಸುತ್ತದೆ. ವೈದ್ಯರಲ್ಲಿನ ನಂಬಿಕೆ ಅರ್ಧ ಕಾಯಿಲೆ ವಾಸಿ ಮಾಡುವಂತೆ ದೇವರಲ್ಲಿನ ಅವರ ನಂಬಿಕೆ ಅವರಿಗೆ ನೆಮ್ಮದಿ, ಶಾಂತಿ ಕಂಡುಕೊಳ್ಳಲು ನೆರವಾಗಬಹುದು. ಮೊದಲಿನಿಂದ ಪೂರ್ವಜರು ಮತ್ತು ಸುತ್ತಮುತ್ತಲಿನವರು ಇಟ್ಟುಕೊಂಡು ಬಂದ ನಂಬಿಕೆ, ನಡವಳಿಕೆಗಳನ್ನು ಅವರು ಮುಂದುವರೆಸುತ್ತಾರೆ. ಮುಂದೆ ಅವರ ಮಕ್ಕಳೂ ಅದೇ ರೀತಿಯಲ್ಲಿ ಸಾಗಬಹದು.


     ಒಂದು ಪ್ರಾಂತದ ರಾಜನೊಬ್ಬ ಸ್ವಾಮಿ ವಿವೇಕಾನಂದರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭ. ಆ ರಾಜನಿಗೆ ವಿಗ್ರಹಾರಾಧನೆಯಲ್ಲಿ/ಮೂರ್ತಿ ಪೂಜೆಯಲ್ಲಿ ನಂಬಿಕೆಯಿರಲಿಲ್ಲ. ವಿಗ್ರಹಪೂಜೆ ಬಗ್ಗೆ ಆತ ನಿಕೃಷ್ಟವಾಗಿ ಮಾತನಾಡಿದುದನ್ನು ಶಾಂತವಾಗಿ ಆಲಿಸಿದ ವಿವೇಕಾನಂದರು ರಾಜನ ಭಾವಚಿತ್ರವೊಂದನ್ನು ತರಿಸಲು ಹೇಳಿದರು. ಭಾವಚಿತ್ರ ತಂದಾಗ ಅಲ್ಲಿದ್ದ ಸಭಾಸದರೊಬ್ಬರನ್ನು ಕರೆದು ಆ ಭಾವಚಿತ್ರದ ಮೇಲೆ ಉಗುಳಲು ಹೇಳಿದರು. ಆ ವ್ಯಕ್ತಿ ನಡುಗಿಹೋದರು -'ರಾಜರ ಭಾವಚಿತ್ರದ ಮೇಲೆ ಉಗುಳುವುದೇ?'. ವಿವೇಕಾನಂದರು ಹೇಳಿದರು -'ಇದು ರಾಜರ ಭಾವಚಿತ್ರವೇ ಹೊರತು ರಾಜರಲ್ಲ; ಉಗುಳಿದರೆ ರಾಜರಿಗೆ ಏನೂ ಆಗುವುದಿಲ್ಲ'. ಅದಕ್ಕೆ ಅವರು 'ಸ್ವಾಮಿ, ಇದು ಭಾವಚಿತ್ರವಿರಬಹುದು. ಆದರೆ ಇದರಲ್ಲಿ ನಾವು ರಾಜರನ್ನು ಕಾಣುತ್ತಿದ್ದೇವೆ. ಇದರ ಮೇಲೆ ಉಗುಳುವುದು ನಮಗೆ ಕಲ್ಪನೆಯಲ್ಲಿಯೂ ಅಸಾಧ್ಯ'. ಆಗ ವಿವೇಕಾನಂದರು ರಾಜರಿಗೆ 'ದೇವರ ವಿಗ್ರಹಗಳು ದೇವರಲ್ಲ. ಅದರೆ ಜನ ಅಲ್ಲಿ ದೇವರನ್ನು ಕಾಣುತ್ತಾರೆ. ಅವುಗಳನ್ನು ಪೂಜಿಸಿ ನೆಮ್ಮದಿ, ಶಾಂತಿ ಕಂಡುಕೊಳ್ಳುತ್ತಾರೆ. ಆದ್ದರಿಂದ ವಿಗ್ರಹಪೂಜೆಯನ್ನು ವಿರೋಧಿಸುವುದು ಸಲ್ಲ' ಎಂದು ಮನವರಿಕೆ ಮಾಡಿಕೊಟ್ಟಿದ್ದರು.


     ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಮನುಷ್ಯನ ಒಳ್ಳೆಯ ನಡವಳಿಕೆ ಬಗ್ಗೆ ಒತ್ತು ನೀಡಿವೆ. ಆದರೆ ಅವುಗಳನ್ನು ನಂಬುವ ಜನರ ನಡವಳಿಕೆ ಒಳ್ಳೆಯ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ದೇವರನ್ನು ಹಲವು ಹೆಸರುಗಳಲ್ಲಿ, ಹಲವು ರೂಪಗಳಲ್ಲಿ ಪೂಜಿಸುತ್ತಿರುವ ಮತ್ತು ಹೊಸ ಹೊಸ ದೇವರುಗಳು ಮತ್ತು ಪೂಜಾ ಪದ್ಧತಿಗಳನ್ನು ಹುಟ್ಟು ಹಾಕಲಾಗುತ್ತಿರುವ ಹಿಂದೂ ಸಮಾಜದಲ್ಲಿ ಪರಧರ್ಮ ಸಹಿಷ್ಣುತೆ ಮೈಗೂಡಿದೆ. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಪರಧರ್ಮ ಸಹಿಷ್ಣುತೆಯ ಕೊರತೆ ಕಂಡು ಬರುತ್ತಿರುವುದು ಸುಳ್ಳೇನಲ್ಲ. ಹಾಗೆಂದು ನಾನು ಯಾವುದೇ ಧರ್ಮದ ಪರ ಅಥವಾ ವಿರೋಧಿ ಅಲ್ಲ. ನನಗೆ ಅದರ ಅಗತ್ಯವೂ ಇಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಗೊಂದಲ, ಸಮಸ್ಯೆ, ಸಂಘರ್ಷಗಳ ಬಗ್ಗೆ ಮಾತ್ರ ನನ್ನಲ್ಲಿ ತಳಮಳ ಇದೆ.

     ನನ್ನ ಮನಸ್ಥಿತಿ ಹೇಗಿದೆಯೆಂದರೆ ಯಾವುದಾದರೂ ಉತ್ತಮ ಗ್ರಂಥ ಓದಿದಾಗ ಅದರಲ್ಲಿನ ಒಳ್ಳೆಯ ಅಂಶಗಳಿಗೆ ಮಾರುಹೋಗುತ್ತೇನೆ. ಯಾವುದು ಮನಸ್ಸಿಗೆ ಹಿತ, ಸಂತೋಷ ನೀಡುತ್ತದೆಯೋ ಮತ್ತು ಅದನ್ನು ಅಂತಃಸಾಕ್ಷಿ ಒಪ್ಪುತ್ತದೆಯೋ ಅದು ಒಳ್ಳೆಯದೆಂದೇ ನನ್ನ ಭಾವನೆ. ಚಿಕ್ಕಂದಿನಲ್ಲಿ ಪ್ರತಿದಿನ ಸಾಯಂಕಾಲ ಆಟ ಆಡಿಕೊಂಡು ಬಂದ ನಂತರ ಕೈಕಾಲುಮುಖ ತೊಳೆದುಕೊಂಡು ನಾವು ಐವರು ಮಕ್ಕಳು ನಮ್ಮ ತಾಯಿ ಹೇಳಿಕೊಡುತ್ತಿದ್ದ ಪ್ರಾರ್ಥನೆ, ಭಜನೆಗಳನ್ನು ಒಟ್ಟಿಗೆ ಹೇಳಿ ದೇವರಿಗೆ ನಮಸ್ಕಾರ ಮಾಡಿದ ನಂತರವೇ ಓದಿಕೊಳ್ಳಲು ತೊಡಗುತ್ತಿದ್ದೆವು. ಹಬ್ಬ ಹರಿದಿನಗಳಲ್ಲಿ ತಂದೆಯವರು ಮಾಡುತ್ತಿದ್ದ ದೇವರ ಪೂಜೆ ನಂತರ ಮಂಗಳಾರತಿ, ತೀರ್ಥ, ಪ್ರಸಾದ ಪಡೆದ ಮೇಲಷ್ಟೇ ನಮಗೆ ತಿಂಡಿ ಸಿಗುತ್ತಿತ್ತು. ಆ ದಿನಗಳಲ್ಲಿ ತೋರಣ ಕಟ್ಟುವುದು, ಗಣಪತಿ ಪೂಜೆಗೆ ಮಂಟಪ ಸಿದ್ಧಪಡಿಸುವುದು, ನವರಾತ್ರಿಯಲ್ಲಿ ಗೊಂಬೆಗಳನ್ನು ಅಂದವಾಗಿ ಜೋಡಿಸುವುದು, ಇತ್ಯಾದಿಗಳನ್ನು ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ಮಾಡುತ್ತಿದ್ದೆ. ಸಾಮೂಹಿಕ ರಾಮನವಮಿ, ಗಣೇಶ ಉತ್ಸವಗಳ ಸಂದರ್ಭಗಳಲ್ಲಿ ಏರ್ಪಾಡಾಗುತ್ತಿದ್ದ ಹರಿಕಥೆಗಳು, ಸಂಗೀತ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ತಲ್ಲೀನನಾಗಿ ಕೇಳುತ್ತಿದ್ದೆ. ವಿಶೇಷವಾಗಿ ರಾಮಾಯಣ, ಮಹಾಭಾರತಗಳಿಗೆ ಸಂಬಂಧಿಸಿರುತ್ತಿದ್ದ ಹರಿಕಥೆಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿವೆ. ರಾಮಾಯಣ, ಮಹಾಭಾರತಗಳು ನಿಜವಾಗಿಯೂ ನಡೆದಿದೆಯೋ, ಇಲ್ಲವೋ ಎಂಬಿತ್ಯಾದಿ ವಿವಾದಗಳ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಅವುಗಳಲ್ಲಿ ತುಂಬಿರುವ ನೀತಿಪಾಠಗಳು, ಜೀವನದರ್ಶನ ಅನುಕರಣೀಯ.


     ದೇವರ ಕುರಿತು ಜಿಜ್ಞಾಸೆ, ದೇವರನ್ನು ಪೂಜಿಸುವ ರೀತಿ ಕುರಿತು ವಿವಿಧ ಆಲೋಚನೆಗಳು ಚಿಕ್ಕಂದಿನಿಂದಲೇ ಬಂದಿತ್ತು. ಹಬ್ಬ ಹರಿದಿನಗಳಲ್ಲಿ ತಂದೆಯವರು ಪೂಜೆ ಮಾಡುವ ಸಂದರ್ಭಗಳಲ್ಲಿ ನಾವು ಮಕ್ಕಳಿಗೆ ಸಹಜವಾದ ಆಟ, ಜಗಳಗಳಲ್ಲಿ ತೊಡಗಿ ಕಿರುಚಾಟ, ಅಳು, ಗಲಾಟೆ ಮಾಡುತ್ತಿದ್ದರಿಂದ ತಂದೆಯವರ ಏಕಾಗ್ರತೆಗೆ ಭಂಗ ಬಂದು ಅವರು ಸಿಟ್ಟಿಗೇಳುತ್ತಿದ್ದರು. ಆ ಸಿಟ್ಟಿನಲ್ಲಿ ಮಕ್ಕಳಲ್ಲಿ ದೊಡ್ಡವನಾದ ನನಗೆ ಬೈಗುಳ ಮತ್ತು ಪೆಟ್ಟುಗಳು ಬೀಳುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ನನ್ನ ತಪ್ಪಿಲ್ಲದಿದ್ದರೂ ನಾನು ಬೈಸಿಕೊಳ್ಳಬೇಕಾದಾಗ, ಪೆಟ್ಟು ತಿನ್ನಬೇಕಾಗಿ ಬಂದಾಗ ನನಗೆ ಸರಿಕಾಣುತ್ತಿರಲಿಲ್ಲ. ಆಗೆಲ್ಲಾ ನನ್ನ ಮನಸ್ಸು 'ಹಬ್ಬ ಮಾಡುವುದು ಎಲ್ಲರಿಗೂ ಒಳ್ಳೆಯದಾಗಲಿ, ಸಂತೋಷ ಸಿಗಲಿ ಎಂದು; ಇದರಿಂದ ಮನಸ್ಸಿಗೆ ಬೇಸರವಾಗುವುದಾದರೆ ಅಂತಹ ಹಬ್ಬ ಏಕೆ ಬೇಕು?' ಎಂದು ಯೋಚಿಸುತ್ತಿತ್ತು. ಚಿಕ್ಕಂದಿನಿಂದಲೇ ದೇವರ ಕುರಿತು ತರ್ಕ, ಜಿಜ್ಞಾಸೆಗಳಿಗೆ ಶ್ರೀಕಾರ ಬಿದ್ದಿತ್ತು.


     ಇಂದು ಯಾರನ್ನು ನಮ್ಮ ಕಷ್ಟ, ಕಾರ್ಪಣ್ಯಗಳಿಗಾಗಿ ಮೊರೆಯಿಡುತ್ತೇವೆಯೋ ಆ ದೇವರುಗಳೇ ಸಮಸ್ಯೆಗಳ ಮೂಲವಾಗಿರುವುದು ಯುಗಮಹಿಮೆ. ದೇವರಿಗಾಗಿ ಧರ್ಮಯುದ್ಧಗಳು, ಮಾರಣಹೋಮಗಳು ನಡೆಯುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ತಮ್ಮ ಮತ-ಧರ್ಮದ ವಿಸ್ತಾರದ ಹಿನ್ನೆಲೆಯೇ ದೇಶ-ದೇಶಗಳ ನಡುವೆ ನಡೆಯುವ ಯುದ್ಧಗಳ ನಿಜವಾದ ಕಾರಣವೆಂಬುದು ಸುಸ್ಪಷ್ಟ. ನಾನು ದೇವರು/ದೇವರುಗಳ ವಿರುದ್ಧ ಮಾತನಾಡುತ್ತಿಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನದ ಬಗ್ಗೆ ಹೇಳುತ್ತಿದ್ದೇನೆ. ದೇವರ ಹೆಸರಿನಲ್ಲಿ ಅನೇಕ ಒಳ್ಳೆಯ ಜೊತೆಗೆ ಕೆಟ್ಟ ಸಂಪ್ರದಾಯಗಳೂ ಆಚರಿಸಲ್ಪಡುತ್ತಿವೆ. ನಿಜವಾಗಿಯೂ ದೇವರು ತನ್ನನ್ನು ಕುರಿತು ಜನರು ಪೂಜಿಸಬೇಕು, ಪ್ರಾರ್ಥಿಸಬೇಕು ಎಂದು ಬಯಸುತ್ತಾನೆ ಎಂದು ನಾನು ನಂಬುವುದಿಲ್ಲ. ದೇವರನ್ನು ಪೂಜಿಸುವುದು, ಪ್ರಾರ್ಥಿಸುವುದು ಜನರಿಗೆ ಬೇಕಾಗಿದೆಯೇ ಹೊರತು ದೇವರಿಗಲ್ಲ. ನೂರೆಂಟು ಪಾಪಕೃತ್ಯಗಳನ್ನು ಮಾಡಿ ಪರಿಹಾರರೂಪವಾಗಿ ದೇವರಿಗೆ ಪೂಜೆ-ಪುನಸ್ಕಾರಗಳನ್ನು ಮಾಡುವುದು, ಹುಂಡಿಗೆ ಹಣ ಹಾಕುವುದು, ಇತ್ಯಾದಿ ಮಾಡಿ ಪಾಪ ಕಳೆದುಕೊಂಡ ಭಾವನೆ ಮೂಡಿಸಿಕೊಳ್ಳುವುದು ಕಾಣುತ್ತೇವೆ. ಪಾಪ ಮಾಡಿದ್ದನ್ನು ಕ್ಷಮಿಸುವಂತಹ ದೇವರಿಗಿಂತ ಪಾಪಕ್ಕೆ ತಕ್ಕ ಶಿಕ್ಷೆ ಕೊಡುವ ದೇವರು ನನಗೆ ಇಷ್ಟ. ಏಕೆಂದರೆ ಹೀಗಿದ್ದರೆ ಕೆಟ್ಟದನ್ನು ಮಾಡಲು ಹಿಂಜರಿಯುವಂತಹ ವಾತಾವರಣ ಬರಬಹುದು. ಆದರೆ ನಮ್ಮ ಇಷ್ಟ, ಕಷ್ಟ ಅನುಸರಿಸಿ ದೇವರು ಇರುತ್ತಾನೋ, ಇಲ್ಲವೋ ಗೊತ್ತಿಲ್ಲ.

     ದೇವರ ಕುರಿತು ಜಿಜ್ಞಾಸೆ, ಗೊಂದಲಗಳು ಬಗೆಹರಿಸಲು ಆ ದೇವರೇ ಬರಬೇಕು! ಬಸವಣ್ಣನವರು ಎಲ್ಲಾ ಜಾತಿಗಳವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಆಗಿದ್ದೇನು? ಅಂತಹವರದ್ದೇ ಒಂದು ಜಾತಿ/ಧರ್ಮ ಆಯಿತು. ಮಧ್ಯಪ್ರದೇಶದಲ್ಲೂ ಸಹ ಜಾತಿ ಪದ್ಧತಿ ವಿರೋಧಿಸುವ ಗುಂಪಿದ್ದು, ಅವರನ್ನು 'ಅಜಾತರು' ಎಂಬ ಜಾತಿ ಹೆಸರು ಇಟ್ಟು ಅವರದೇ ಜಾತಿ ಮಾಡಿಬಿಟ್ಟಿದ್ದಾರೆ. ಯಾವುದೇ ಹೊಸ ವಿಚಾರ, ಜ್ಞಾನ ಪಸರಿಸುವವರನ್ನೂ ಸಹ ಪ್ರತ್ಯೇಕಿಸಿ ಹೆಸರಿಟ್ಟುಬಿಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯಾನ್ವೇಶಿಗಳು ಗೊಂದಲ, ತೊಂದರೆಗಳಿಗೆ ಸಿಲುಕುತ್ತಾರೆ.


     ವೇದಗಳ ಕುರಿತು ವೇದಾಧ್ಯಾಯಿ ಸುಧಾಕರ ಶರ್ಮರವರ ಉಪನ್ಯಾಸಗಳು ಸೇರಿದಂತೆ ಹಲವಾರು ಜ್ಞಾನವೇತ್ತರ ಮಾತುಗಳನ್ನು ಕೇಳಿದ ನಂತರ ಮತ್ತು ಸಂಬಂಧಿಸಿದ ವಿಚಾರಧಾರೆಗಳಿರುವ ಪುಸ್ತಕಗಳನ್ನು ಓದಿದ ನಂತರ ಸಂದೇಹಗಳು ಬಗೆಹರಿದಿಲ್ಲವಾದರೂ ನನ್ನ ವಿಚಾರ ಸರಿಯಾದ ದಾರಿಯಲ್ಲಿದೆಯೆಂಬ ಭಾವ ಮೂಡುತ್ತಿದ್ದು ಒಂದು ರೀತಿಯ ಅಭಿಪ್ರಾಯ ನನ್ನೊಳಗೆ ಸಾಂದ್ರೀಕೃತವಾಗುತ್ತಿದೆ. ಅವೆಂದರೆ:
೧. ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ ಶಕ್ತಿ ಇದೆ. ಅದನ್ನು ದೇವರೆಂದಾದರೂ ಕರೆಯಿರಿ, ಯಾವ ಹೆಸರಿನಲ್ಲಾದರೂ ಕರೆಯಿರಿ. ಆ ಶಕ್ತಿ ಎಲ್ಲರನ್ನೂ -ನಂಬುವವರನ್ನೂ, ನಂಬದವರನ್ನೂ, ಕೆಟ್ಟವರನ್ನೂ, ಒಳ್ಳೆಯವರನ್ನೂ - ಸಮಾನಭಾವದಿಂದ ಕಾಣುತ್ತದೆ. ಆ ಶಕ್ತಿ ಕೇವಲ ಮಾನವ ಜೀವಿಗಳಿಗೆ ಮತ್ತು ನಿರ್ದಿಷ್ಟ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಲ್ಲ.
೨. ನಮಗೆ ಆಗುವ ಎಲ್ಲಾ ಒಳಿತು ಕೆಡಕುಗಳಿಗೆ ನಾವೇ ಕಾರಣರೇ ಹೊರತು ಇತರರಲ್ಲ, ದೇವರಲ್ಲವೇ ಅಲ್ಲ. ದೇವಸ್ಥಾನಕ್ಕೆ ಹೋಗಿ ತಪ್ಪುಕಾಣಿಕೆ ಹಾಕುವುದರಿಂದ ಮತ್ತು ಕ್ಷಮಿಸಲು ಪ್ರಾರ್ಥಿಸುವುದರಿಂದ ಮಾಡಿದ ಪಾಪ ಹೋಗುವುದಿಲ್ಲ. ಮಾಡಿದ ಕರ್ಮಕ್ಕೆ ಅನುಸಾರವಾಗಿ ಫಲ ಕಟ್ಟಿಟ್ಟ ಬುತ್ತಿ.
೩. ಪುನರ್ಜನ್ಮವಿದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಒಳಿತನ್ನೇ ತರುತ್ತದೆ, ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿ!
೪. ಒಳ್ಳೆಯದು ಮತ್ತು ಸತ್ಯವೆಂದು ಭಾವಿಸುವ ದಾರಿಯಲ್ಲಿ ನಡೆಯುವುದೇ ದೇವರ ಪೂಜೆ.
೫. ಮೊದಲಿನಿಂದ ನಡೆದುಬಂದ ಸಂಪ್ರದಾಯಗಳನ್ನು ವಿಮರ್ಶಿಸಿ ಅದರಲ್ಲಿನ ಅರ್ಥಪೂರ್ಣ ಅಂಶಗಳನ್ನು ಉಳಿಸಿಕೊಂಡು ಪಾಲಿಸುವುದು. ಅರ್ಥವಿಲ್ಲದ ಮತ್ತು ಇತರರರಿಗೆ ನೋವು ಉಂಟುಮಾಡಬಹುದಾದ ಸಂಗತಿಗಳನ್ನು ಬಿಡುವುದು ಅಗತ್ಯ.
೬. ಸತ್ಯ ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹವಿಲ್ಲದೆ ಸ್ವೀಕರಿಸುವ ಮತ್ತು ಅಗತ್ಯವೆನಿಸಿದಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಮನೋಭಾವ ಬರಬೇಕು.


      ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ. ಆತ ತನ್ನ ಕೆಲಸ ಮಾಡಿಯೇ ಮಾಡುತ್ತಾನೆ. ನಾವು ನಮ್ಮ ಕೆಲಸ ಮಾಡೋಣ, ಅಂದರೆ ನಾವು ಏಕೆ ಹುಟ್ಟಿದ್ದೇವೆ ಎಂಬುದನ್ನು ಅರಿತು ಸತ್ಯಾನ್ವೇಶಿಗಳಾಗಿ ನಡೆಯೋಣ, ಇರುವಷ್ಟು ಕಾಲ ಯಾರಿಗೂ ಉಪಕಾರ ಮಾಡದಿದ್ದರೂ ಅಪಕಾರವನ್ನಂತೂ ಮಾಡದಿರೋಣ!

************

-ಕ.ವೆಂ.ನಾಗರಾಜ್.

9 comments:

  1. ಇಂತಹ ವೈಚಾರಿಕ ,ಪ್ರಬುದ್ಧ ಲೇಖನ ನೀಡಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು ಸರ್.ನಮಸ್ಕಾರ.

    ReplyDelete
  2. ಪ್ರಿಯಶ್ರೀ ನಾಗರಾಜ್,
    ಲೇಖನವನ್ನು ಪೂರ್ಣ ಒಡಿದ ಮೇಲೆ ನಾವಿಬ್ಬರೂ ಒಂದೇ ದೋಣಿಯಲ್ಲಿ ಸಾಗುತ್ತಿದ್ದೇವೆಂಬುದು ಇನ್ನೂ ಹೆಚ್ಚು ಖಚಿತವಾಯ್ತು. ಶರ್ಮರ ವಿಚಾರ ಧಾರೆಯನ್ನು ಕೇಳಿದಮೇಲೆ ನಮ್ಮ ಅಪ್ಪ-ಅಮ್ಮ, ಅಜ್ಜ-ಮುತ್ತಜ್ಜಂದಿರುಗಳಿಗೆ ಸತ್ಯದ ದಾರಿ ತೆರೆಯಲು ಅವಕಾಶವೇ ಇಲ್ಲವಾಗಿ ಹಿಂದಿನವರು ನಡೆಸಿಕೊಂಡುಬಂದಿದ್ದೆಲ್ಲಾ ಸತ್ಯ, ಅದೇ ಧರ್ಮ, ಎಂಬ ನಂಬಿಕೆಯಿಂದ ತಮ್ಮ ಜೀವನವನ್ನು ಮುಗಿಸಿಬಿಟ್ಟರಲ್ಲಾ! ಎಂದು ವ್ಯಥೆಯಾಗುತ್ತದೆ.ಯಾಕೆ ಹೀಗಾಯ್ತು? ಸತ್ಯವನ್ನು ಏಕೆ ಬಚ್ಚಿಟ್ಟಿದ್ದರು? ವಿಚಾರಮಂಥನ ಮಾಡುವಷ್ಟು ಸಾಮರ್ಥ್ಯವೇ ಇರಲಿಲ್ಲವೇ?ಎಂದು ಆಶ್ಚರ್ಯವಾಗುತ್ತದೆ.
    "ಮೊದಲಿನಿಂದ ನಡೆದುಬಂದ ಸಂಪ್ರದಾಯಗಳನ್ನು ವಿಮರ್ಶಿಸಿ ಅದರಲ್ಲಿನ ಅರ್ಥಪೂರ್ಣ ಅಂಶಗಳನ್ನು ಉಳಿಸಿಕೊಂಡು ಪಾಲಿಸುವುದು. ಅರ್ಥವಿಲ್ಲದ ಮತ್ತು ಇತರರರಿಗೆ ನೋವು ಉಂಟುಮಾಡಬಹುದಾದ ಸಂಗತಿಗಳನ್ನು ಬಿಡುವುದು ಅಗತ್ಯ"
    ಎಂಬ ನಿಮ್ಮ ಸಲಹೆ ಸಮಂಜಸವಾಗಿದೆ.

    ReplyDelete
  3. ಪ್ರೀತಿಯ ನಾಗರಾಜ್ ಅವರ ಲೇಖನ ಹಾಗೂ ಶ್ರೀಧರ್ ಅವರ ಅಭಿಪ್ರಾಯ ಎರಡನ್ನೂ ಓದಿದ ಮೇಲೆ ನನಗನಿಸುವುದಿಷ್ಟು. ಇದೆಲ್ಲ ನಮಗನಿಸುವಷ್ಟು ಸುಲಭ ಸಂಗತಿಗಳಲ್ಲ! ನಾಗರಾಜ್ ಅವರ ಲೇಖನ ಸಾರ್ವತ್ರಿಕವಾಗಿದೆ. ಬಹುತೇಕ ಸಾತ್ವಿಕರ ಮನೋಸ್ಥಿತಿ ಹಾಗೂ ಚಿಂತನಾ ಲಹರಿ ಇದೇ ರೀತಿ ಇರುವುದು ಸಹಜ!ಏಕೆಂದರೆ ಇದರಲ್ಲಿ ಕಾಲದ ಪ್ರಶ್ನೆ ಅಡಗಿದೆ. ದೇವರು (ಅಥವಾ ವಿಶ್ವ ಚೇತನ ಶಕ್ತಿ)ಒಬ್ಬನೇ; ಅವನು ಸರ್ವ ವ್ಯಾಪಿ ಎಂಬುದು ನಮ್ಮ ಹಿಂದಿನ ತಲೆಮಾರುಗಳ ಹಿರಿಯರೂ ಸೇರಿದಂತೆ ಪ್ರತಿಯೊಬ್ಬರಿಗೂ ಗೊತ್ತಿತ್ತು ಮತ್ತು ಈಗಲೂ ಎಲ್ಲರಿಗೂ ಗೊತ್ತು. ಇದೆಲ್ಲ ಅನುಭೂತಿ ನಾವು ಪಡೆಯುವ ಸಂಸ್ಕಾರ, ಬೆಳೆದುಬಂದ ಹಾದಿ, ಸಾಮಾಜಿಕ ಶಿಕ್ಷಣ,ಆರ್ಥಿಕ ಸ್ಥಿತಿ ಗತಿಗಳು,ವಿವೇಚನೆ ಎಂಬ ಸಾಣೆಕಲ್ಲಿಗೆ ಉಜ್ಜುವ ನಮ್ಮ ಜೀವನ ಕ್ರಮ ಇತ್ಯಾದಿಗಳ ಮೇಲೆ ಅವಲಂಬಿತವಾಗಿವೆ. ಆದರೆ ಒಂದು ಪರಂಪರೆ ಸಾಗಿ ಬರುವ ಬಹು ದೂರದ ಮಾರ್ಗ ಮಧ್ಯೆ ಅನೇಕ ಅಗೋಚರ ಹಾಗೂ ಅಸಂಗತ ವ್ಯತ್ಯಾಸಗಳು, ಪರಿಕಲ್ಪನೆಗಳು,ಐತಿಹಾಸಿಕ ಘಟನಾವಳಿಗಳು, ಅನಿವಾರ್ಯ ಸಂದರ್ಭಗಳು ಎದುರಾಗಿರುತ್ತವೆ. ಅವು ಏನೇನು ಎಂದು ನಾವು ಪತ್ತೆ ಮಾಡಿ, ಕಾರಣಗಳನ್ನು ಹುಡುಕಿ ಸರಿಪಡಿಸಬೇಕು. ಇದೂ ಸಹ ಅಂದುಕೊಂಡಷ್ಟು ಸುಲಭವಲ್ಲ. ಉದಾ: ಮೂಲದಲ್ಲಿ ನೀರು ಶುದ್ಧವಾಗಿಯೇ ಇರುತ್ತದೆ. ಆದರೆ ನದಿ ಹರಿದಂತೆ ಕೆಲವೆಡೆ ನೀರು ಕೆಂಪಾಗಿರುತ್ತದೆ; ಹರಿಯದೆ ನಿಂತ ಕಡೆ ಹಸಿರಾಗಿರಲೂ ಬಹುದು! ಮೇಲೆ ತೇಲುವ ಕಸ, ಕಡ್ಡಿಗಳನ್ನಷ್ಟೆ ಸುಲಭವಾಗಿ ತೆಗೆಯಬಹುದು. ಹೆಚ್ಚು ವಿವರಣೆ ಅಗತ್ಯವಿಲ್ಲ; ಈ ಉದಾಹರಣೆ ನಿಮಗೆ ಅರ್ಥವಾಯಿತೆಂದುಕೊಳ್ಳುವೆ!
    ನಾಗರಾಜ್ ಅವರು ಹೇಳುವ ಮಾನಸಿಕ ಸ್ಥಿತಿ ಗತಿಗಳು ಪರಾಕಾಷ್ಟ ತಲುಪಿದಾಗ- ಅದೇ ಒಂದು ಸಾಧನೆಯಾಗಿಯೂ ಬದಲಾಗಬಹುದು; ವೈಜ್ಞಾನಿಕವಾಗಿ ಹೇಳಬೇಕೆಂದರೆ ಅದು ಪ್ಯಾರಾ ಸೈಕಾಲಜಿ (ಪಾರಮಾನಸ ಶಾಸ್ತ್ರ)ವಾಗಿ ಬದಲಾಗುವ ಸಾಧ್ಯತೆಗಳಿವೆ! ಒಟ್ಟಾರೆ ಎಲ್ಲದಕ್ಕೂ ಮೂಲ ಮನುಷ್ಯನ ಮನಸ್ಸು-ಅದೇ ನಿಗೂಢ!!
    ನಾಗರಾಜರ ಲೇಖನ ಸರಳ, ಸುಂದರ ಹಾಗೂ ಸರಸರ ಓದಿಸಿಕೊಂಡು ಹೋಗುತ್ತದೆ.ನನ್ನ ಅಭಿಪ್ರಾಯವೇನೆಂದರೆ ಈ ಮಾನಸಿಕ ಸ್ಥಿತಿಗತಿ ಜತೆಗೆ ಸ್ವಭಾವವೂ ಸೇರಿಕೊಳ್ಳುತ್ತದೆ. ಧರ್ಮ, ದೇವರು, ದೆವ್ವ, ಮೂಢನಂಬಿಕೆ, ಆಚರಣೆ, ಬಿಡಿಸಿಕೊಳ್ಳಲಾಗದಷ್ಟು ಬಂಧನ ಇತ್ಯಾದಿ ಅಪಭ್ರಂಶಗಳಿಗೆಲ್ಲ ಮನುಷ್ಯನ `'ಆರಾಧನಾ'' ಪ್ರವೃತ್ತಿಯೇ ಕಾರಣ. ಈ ಪ್ರವೃತ್ತಿ ನಿಜವಾದ ಜ್ಞಾನ ಹಾಗೂ ವಿವೇಚನಾ ಶಕ್ತಿಯ ಮೇಲೆ ಮುಸುಕು ಹಾಕುತ್ತದೆ. ಏನಂತೀರಿ?

    ReplyDelete
  4. [ಒಂದು ಪರಂಪರೆ ಸಾಗಿ ಬರುವ ಬಹು ದೂರದ ಮಾರ್ಗ ಮಧ್ಯೆ ಅನೇಕ ಅಗೋಚರ ಹಾಗೂ ಅಸಂಗತ ವ್ಯತ್ಯಾಸಗಳು, ಪರಿಕಲ್ಪನೆಗಳು,ಐತಿಹಾಸಿಕ ಘಟನಾವಳಿಗಳು, ಅನಿವಾರ್ಯ ಸಂದರ್ಭಗಳು ಎದುರಾಗಿರುತ್ತವೆ]
    ಸತ್ಯವಾದ ಮಾತು.
    ಆತ್ಮೀಯ ಪ್ರಭಾಕರ್, ನಿಮ್ಮ ಪ್ರತಿಕ್ರಿಯೆಯೇ ಒಂದು ಲೇಖನವಾಗಲು ಯೋಗ್ಯವಾಗಿದೆ.ನಿಮ್ಮ ಚಿಂತನಾಲಹರಿಯನ್ನು ದಯಮಾಡಿ ಹಂಚಿಕೊಳ್ಳಿ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಚಿಂತನೆಗಳನ್ನು ಹಂಚಿಕೊಳ್ಳುತ್ತೀರಾಗಿ ಆಶಿಸುವೆ.

    ReplyDelete
  5. "೩. ಪುನರ್ಜನ್ಮವಿದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಒಳಿತನ್ನೇ ತರುತ್ತದೆ, ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿ!"-ಲೇಖನದ ಈ ಭಾಗಕ್ಕೆ ನನ್ನ ಸಂಪೂರ್ಣ ವಿರೋದ!!! ಪುನರ್ಜನ್ಮ ಇಲ್ಲ!!!! ಸಾವಿನ ಸಮೀಪದ ಅನುಭವಗಳೇ ಪುನರ್ಜನ್ಮ ಕಲ್ಪನೆಗೆ ಕಾರಣ.

    ReplyDelete
  6. ಶ್ರೀ ಸುಬ್ರಹ್ಮಣ್ಯ,
    ನಮಸ್ತೆ,
    ಪುನರ್ಜನ್ಮದ ಬಗ್ಗೆ ಸಾಕಷ್ಟು ಬಿನ್ನಾಭಿಪ್ರಾಯಗಳಿವೆ. ಪುನರ್ ಜನ್ಮ ಇಲ್ಲವೆಂಬ ನಿಮ್ಮ ನಿಲುವಿನ ಬಗ್ಗೆ ನೀವು ವಿವರವಾಗಿ ಬರೆದರೆ ಉತ್ತಮ.ಅದು ಒಂದು ಚರ್ಚೆಯೇ ಆಗಲಿ. ಪುನರ್ಜನ್ಮದಬಗೆಗೆ ನಾನು ತಲೆಕೆಡಸಿಕೊಂಡಿಯೇ ಇಲ್ಲ."ಅನಾಯಾಸೇನ ಮರಣಂ,ವಿನಾದೈನ್ಯೇನ ಜೀವನಂ" ಎಂಬ ಮಾತಿದೆಯಲ್ಲ. ಅದಕ್ಕೆ ನನ್ನ ಒತ್ತು. ದೇಹೀ ಎನ್ನದಂತೆ ಜೀವನ ಸಾಗಿದರೆ ಸಾಕು,ಅಂತೆಯೇ ಮರಣವು ಅನಾಯಾಸವಾಗಿರಬೇಕು. ಅಂದರೆ ಅಂತ್ಯದ ಕಾಲದ ವರೆಗೂ ಶರೀರ ಮನಸ್ಸು ಆರೋಗ್ಯಕರವಾಗಿರಬೇಕು. ನನ್ನ ನಂಬಿಕೆಯಂತೆ ನಮ್ಮ ಚಿಂತನೆಗಳು, ಜೀವನ ಶೈಲಿ, ಆಹಾರ ಕ್ರಮ-ಇವೆಲ್ಲವೂ ಮತ್ತೊಬ್ಬರಿಗೆ ನೋವಾಗದಂತೆ-ತನಗೆ ಹಿತವೆನಿಸುವಂತಿದ್ದರೆ ಬಹುಷ: ಮೇಲಿನೆರಡೂ ಸಮಸ್ಯೆಗಳು ಎದುರಾಗದಿರಬಹುದು. ಅಥವಾ ಅವು ಸಮಸ್ಯೆ ಎನಿಸದೆ ಅದನ್ನು ಎದುರಿಸುವ ಮಾನಸಿಕತೆ ಉಂಟಾಗಬಹುದು. ಇಷ್ಟರಮಟ್ಟಿಗೆ ನನ್ನ ಚಿಂತನೆ ಬಹು ಸೀಮಿತ. ಸಾಕೆನಿಸುತ್ತದೆ. ಅದಕ್ಕೂ ಮುಂದೆ ಹೋಗಿ ವಿಚಾರ ಮಥನ ಮಾಡುವವರ ಮಾತು ಕೇಳಲು ಸಿದ್ಧ. ಪುನರ್ ಜನ್ಮವೆನ್ನುವುದು ಏನಿದ್ದರೂ ನಾವು ಸತ್ತಮೇಲೆ ತಾನೇ? ಈಗ ಬದುಕಿರುವವರೆಗೂ ಒಂದು ಉತ್ತಮ ಬದುಕನ್ನು ನಡೆಸೋಣ ಅಲ್ಲವೇ?

    ReplyDelete
  7. ".....ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ ಶಕ್ತಿ ಇದೆ. ಅದನ್ನು ದೇವರೆಂದಾದರೂ ಕರೆಯಿರಿ, ಯಾವ ಹೆಸರಿನಲ್ಲಾದರೂ ಕರೆಯಿರಿ. ಆ ಶಕ್ತಿ ಎಲ್ಲರನ್ನೂ -ನಂಬುವವರನ್ನೂ, ನಂಬದವರನ್ನೂ, ಕೆಟ್ಟವರನ್ನೂ, ಒಳ್ಳೆಯವರನ್ನೂ - ಸಮಾನಭಾವದಿಂದ ಕಾಣುತ್ತದೆ. ಆ ಶಕ್ತಿ ಕೇವಲ ಮಾನವ ಜೀವಿಗಳಿಗೆ ಮತ್ತು ನಿರ್ದಿಷ್ಟ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಲ್ಲ...."

    ಇದನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಆ ಶಕ್ತಿಯನ್ನು ಒಬ್ಬೊಬ್ಬರು ಒಂದೊಂದು ರೂಪದಲ್ಲಿ ನೋಡುತ್ತಾರೆ;ಪರಿಭಾವಿಸುತ್ತಾರೆ ಮತ್ತು ಅನುಭವಿಸುತ್ತಾರೆ. ಎಲ್ಲಿಯವರೆಗೆ ಇದು ಶಾಂತಿ;ನೆಮ್ಮದಿಗೆ ಪೂರಕವೋ ಮತ್ತು ಇತರರಿಗೆ ಕಿರಿಕರಿ ಉಂಟುಮಾಡುವುದಿಲ್ಲವೋ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅಂತಿಮವಾಗಿ ಬೇಕಾದ್ದು ಸತ್ಯಶೋಧಕನಿಗೆ ಸಿಗಬೇಕಾದ ನೆಮ್ಮದಿ. ಅದಕ್ಕಾಗಿ ತನಗೊಪ್ಪು ಮಾರ್ಗ ತುಳಿಯುವುದು ವ್ಯಕ್ತಿಗತವಾದದ್ದು.

    ಉತ್ತಮ ವಿಚಾರಗಳಿಗಾಗಿ ಅಭಿನಂದನೆಗಳು!!

    ReplyDelete
  8. ಓದಿ ವಿಮರ್ಶಾತ್ಮಕ ಪ್ರತಿಕ್ರಿಯೆ ನೀಡಿದ ಡಾ.ಕೃಷ್ಣಮೂರ್ತಿ, ಹರಿಹರಪುರ ಶ್ರೀಧರ್,ಪ್ರಭಾಕರ, ಸುಬ್ರಹ್ಮಣ್ಯ ಮಾಚಿಕೊಪ್ಪ ಮತ್ತು ಸುರೇಶರಿಗೆ ವಂದನೆಗಳು.
    ಪ್ರಿಯ ಪ್ರಭಾಕರ್, ನಿಮ್ಮ ವಿಮರ್ಶೆ ವಿವರಣಾತ್ಮಕವಾಗಿ ಒಂದು ಲೇಖನವಾಗಿ ಹೊರಬರಲಿ. ನನ್ನಂತಹವರಿಗೆ ಉಪಯೋಗವಾದೀತು.
    ಪ್ರಿಯ ಸುಬ್ರಹ್ಮಣ್ಯ ಮಾಚಿಕೊಪ್ಪ, ನಿಮ್ಮ ಅಭಿಪ್ರಾಯಕ್ಕೆ ವಂದನೆ. ನನ್ನ ಇದುವರೆಗಿನ ಅನುಭವ,ಅರಿವಿಗನುಸಾರವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಪೂರ್ವಾಗ್ರಹ ಪೀಡಿತನಾಗದೆ, ನನ್ನ ಅಭಿಪ್ರಾಯವೇ ಸರಿ ಎಂದು ಅಂಟಿಕೊಳ್ಳದೆ ನನ್ನ ಅಭಿಪ್ರಾಯ ಸರಿಯಲ್ಲವೆಂದು ಸಾಧಾರವಾಗಿ ತೋರಿಸಿಕೊಡುವ ಯಾವುದೇ ಸಂಗತಿ/ವಿಚಾರಗಳನ್ನು ಒಪ್ಪಿಕೊಳ್ಳುವೆ. ಈ ಕುರಿತು ವಿಸ್ತೃತವಾಗಿ ಬರೆಯಿರಿ.
    -ಕ.ವೆಂ.ನಾಗರಾಜ್.

    ReplyDelete
  9. ಈ ಲೇಖನದ ಕುರಿತು ಸಂಪದಿಗರ ಅಭಿಪ್ರಾಯಗಳು:
    Submitted by ksraghavendranavada on April 2, 2011 - 6:56pm.
    ನಿಮ್ಮ ಅನುಸರಿಸುವಿಕೆ ಸರಿಯಾದದ್ದು. ನಮ್ಮ ನ೦ಬಿಕೆಗಳು ನಮಗೆ ಮಾತ್ರವೇ ವಿನ: ಪರರಿಗಲ್ಲ.. ಅ೦ತೆಯೇ ಬೇರೊಬ್ಬರ ನ೦ಬಿಕೆಗೆ ಘಾಸಿ ಉ೦ಟು ಮಾಡುವಿಕೆಯು ತರವಲ್ಲ!

    ಮತ್ತೊ೦ದಿಷ್ಟು:

    ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಮಾತೊ೦ದು ಸೊಗಸಾಗಿದೆ: “ ಕಲಿಯುಗದಲ್ಲಿ ಮಾನವರು ನನ್ನನ್ನು ಯಾವ ರೀತಿಯಲ್ಲಿ ಬಯಸುತ್ತಾರೋ ಅದೇ ರೀತಿಯಲ್ಲಿ ನಾನವರಿಗೆ ದೊರಕುವೆ“..

    ನನ್ನ ಅನಿಸಿಕೆಯೆ೦ದರೆ ನಾಸ್ತಿಕತನವೂ ಒ೦ದು ರೀತಿಯ ದೇವರ ಮೇಲಿನ ನ೦ಬಿಕೆಯೇ.. ಸಕಲ ಚರಾಚರಗಳೂ ಆತನ ಅಣತಿಯಿಲ್ಲದೆ ಒ೦ದು ಹೆಜ್ಜೆಯನ್ನೂ ಮು೦ದಿಡಲಾರವು ಎ೦ಬ ಮಾತನ್ನು ನೆನಪಿಸಿಕೊ೦ಡರೆ ನಾಸ್ತಿಕತನವೂ ದೇವರ ಮೇಲಿನ ನ೦ಬಿಕೆಯೇ ಅಲ್ಲವೇ?

    “ಕಾಯಕವೇ ಕೈಲಾಸ“, ಪರರನ್ನು ಹಿ೦ಸಿಸದಿರುವುದು, ಸದ್ಗುಣಗಳು ಹಾಗೂ ಸತ್ ಚಿ೦ತನೆಗಳನ್ನು ಬೆಳೆಸಿಕೊಳ್ಳುವುದು- ಇವೇ ದೇವರನ್ನು ಒಲಿಸಿಕೊಳ್ಳುವ ಮಾರ್ಗಗಳು- ಪ್ರತಿಯೊ೦ದು ಒಳ್ಳೆಯದರಲ್ಲಿಯೂ ಅವನಿದ್ದಾನೆ ಎ೦ಬ ದೃಢ ನ೦ಬಿಕೆಯಿ೦ದ ಮು೦ದೆ ಸಾಗಿದಲ್ಲಿ ದೇವರ ಅಸಿತ್ವದ ಬಗ್ಗೆ ಸ೦ಶಯಗಳನ್ನೇಳಿಸಿಕೊಳ್ಳುವ ಪ್ರಮೇಯವೇ ಬಾರದು..

    ಎರಡೂ ಭಾಗಗಳೂ ಉತ್ತಮ ಚಿ೦ತನೆಯಿ೦ದ ಕೂಡಿದ, ಪ್ರಸ್ತುತ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಸ೦ದೇಶಗಳಿ೦ದ ಕೂಡಿದ ಪ್ರಬುಧ್ಧ ಲೇಖನವಾಗಿದೆ.

    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.
    ********
    Submitted by santhosh_87 on April 3, 2011 - 5:12pm.
    ವೈಯಕ್ತಿಕವಾಗಿ ದೇವರು ಮತ್ತು ಅವನ ಅಸ್ತಿತ್ವದ ಎಲ್ಲಾ ಸಾಧ್ಯತೆಗಳನ್ನೂ ನಾನು ನಂಬದಿದ್ದರೂ ’ದೇವರನ್ನು ದೇವರ ಪಾಡಿಗೆ ಬಿಟ್ಟು ಬಿಡೋಣ’ ಎಂಬ ಮಾತಿಗೆ ನನ್ನ ಸಹಮತವಿದೆ. ಹೇಗೆ ನಾಸ್ತಿಕವಾದಕ್ಕೆ ತನ್ನದೇ ಆದ ವಾದಗಳಿವೆಯೋ ಹಾಗೆಯೇ ಆಸ್ತಿಕವಾದವೂ ದೇವರ ಅಸ್ತಿತ್ವಕ್ಕಾಗಿ ಸೂಕ್ತ ಮಾಹಿತಿಯನ್ನು ನೀಡುತ್ತದೆ. ಆದ್ದರಿಂದ ಆ ವಿಷಯವನ್ನು ಚರ್ಚೆಯ ಪರಿಧಿಯಿಂದ ಹೊರಗಿಟ್ಟಷ್ಟೂ ಒಳ್ಳೆಯದೇ. ದೇವರಿಲ್ಲ ಎಂದು ಸಾಧಿಸಿದ ಪುರುಷ ಕೂಡ ಅವನ ಕಾಲಾನಂತರ ದೇವರಾಗುವ ಬುದ್ಧಿ ಮನುಷ್ಯ ಮಾತ್ರ ಪಡೆದಿದ್ದು. :)
    ****************
    Submitted by partha1059 on April 3, 2011 - 7:57pm.
    ನಾಗರಾಜ್ ಸರ್
    ದೇವರ ಬಗ್ಗೆ ಉತ್ತಮ ಚಿಂತನೆ . ದೇವರು ಮತ್ತು ದರ್ಮದ ಬಗ್ಗೆ ನಿಜವಾದ ಆಸಕ್ತಿ ಮತ್ತು ಶ್ರದ್ದೆ ಯಿದ್ದರೆ
    ಒಂದಂತು ಅನುಕೂಲವಿದೆ . ನಮಗೆ ಸ್ವಸ್ಥ ಸಮಾಜ , ಹಾಗು ಉತ್ತಮ ವಾತವರಣ ದೊರೆಯುತ್ತದೆ.
    ಪಾರ್ಥಸಾರಥಿ

    ReplyDelete