Pages

Wednesday, March 14, 2012

ಶ್ರದ್ಧಾಂಜಲಿ



"ಅನಾಯಾಸೇನ ಮರಣಂ ವಿನಾಧೈನ್ಯೇನ ಜೀವನಂ " -ಅನ್ನೋ ಮಾತು ಕೇಳಿದ್ದೆ. ನಿನ್ನೆ ನಮ್ಮನ್ನಗಲಿದ ನನ್ನ ಮಿತ್ರ ಶ್ರೀ ದಾಸೇಗೌಡರ ವಿಷಯದಲ್ಲಿ    ಆ  ಮಾತು  ನಿಜವಾಯ್ತು. ಜೀವವಿರುವಾಗ ದೇಹೀ ಅನ್ನುವ ಪರಿಸ್ಥಿತಿ ಬರಲಿಲ್ಲ. ಅನಾಯಾಸವಾಗಿ ಐದು ನಿಮಿಷದಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯ್ತು.

ಶ್ರೀ ದಾಸೇಗೌಡರು ಬಲು ಅಪರೂಪದ ವ್ಯಕ್ತಿ. ಅವರ ಬಗ್ಗೆ ನಾನು ಮಾತನಾಡುವ ಮುಂಚೆ ಅವರ ಬಗ್ಗೆ ಈಗ ತಾನೇ ಬಂದ ಒಂದು ಎಸ್.ಎಂ.ಎಸ್  ಸಂದೇಶವನ್ನು  ಯಥಾವತ್ತಾಗಿ ನಿಮ್ಮ ಗಮನಕ್ಕೆ ತಂದು ಬಿಡುವೆ. ಸಂದೇಶವನ್ನು ಕಳಿಸಿದವರು ರಾಷ್ಟ್ರೀಯ ಸ್ವಯಂಸೇವಕ ಸಂಘದ [R.S.S]  ಅಖಿಲ ಭಾರತ ಸಹ ಸರಕಾರ್ಯವಾಹ [All India  Joint General Secretary] ಮಾನನೀಯ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು-" It is a personal loss to me" 

 ಶ್ರೀ ದತ್ತಾತ್ರೇಯ ಹೊಸಬಾಳೆಯವರು ಸಂಘದ ಪೂರ್ಣಾವಧಿ ಪ್ರಚಾರಕರು. ಅಷ್ಟೇ ಅಲ್ಲ.ಸಂಘದಲ್ಲಿ  ಅತ್ಯಂತ  ಉನ್ನತ ಜವಾಬ್ದಾರಿಯನ್ನು ಹೊತ್ತಿರುವವರು. ಅವರಿಗೆ "ಸ್ವಂತಕ್ಕೆ ನಷ್ಟ" ಎಂದರೆ ನಾವಾದರೂ ಊಹಿಸಬೇಕು. ಅವರಿಗೆ ಸ್ವಂತದ್ದು ಅಂತಾ ಏನೂ ಬಯಕೆಗಳಿಲ್ಲ. ಎಲ್ಲವೂ ಸಂಘಕ್ಕಾಗಿ, ಸಮಾಜಕ್ಕಾಗಿ. ಅಂತವರು ಈ ಮಾತು ಹೇಳಬೇಕೆಂದರೆ ಅದು ರಾಷ್ಟ್ರೀಯ ನಷ್ಟವೆಂದೆ ಭಾವಿಸ ಬೇಡವೇ.

ಕಳೆದ ಆರೇಳು ತಿಂಗಳಲ್ಲಿ  ಹಾಸನಕ್ಕೆ ಆಗಮಿಸಿದ್ದ ಕರ್ನಾಟಕ ಸರ್ಕಾರದ ಮಂತ್ರಿಗಳಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಶ್ರೀ ದಾಸೆಗೌದರ ಬಗ್ಗೆ ಹೇಳಿದ ಮಾತು"  ಶ್ರೀ ದಾಸೆಗೌಡರು ಸಮಾಜದ ಕೆಲಸದಲ್ಲಿ ನನಗಿಂತ ಹಿರಿಯರು. ನನಗಿಂತ ಮುಂಚಿನಿಂದಲೂ ಸಂಘಕಾರ್ಯ, ABVP ಕೆಲಸ  ನಂತರ BJP ಯ ಹೊಣೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಬಂದ ಶ್ರೀ ದಾಸೆಗೌಡರಿಗೆ ರಾಜಕೀಯ ಸ್ಥಾನಮಾನವೇನೂ ಇಲ್ಲ ಎಂದರೆ ಆಶ್ಚರ್ಯವಾಗುತ್ತೆ.

 1975 ರ ಸುಮಾರಿನಲ್ಲಿ ದೇಶಕ್ಕೆ ತುರ್ತುಪರಿಸ್ಥಿತಿ ಬಂದಾಗ ದಾಸೇಗೌಡರು  ABVP [ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ] ನ  ಪೂರ್ಣಾವಧಿ ಕಾರ್ಯ ಕರ್ತರು.ನಾನು ಸಂಘದ ಕಾರ್ಯಕರ್ತ. ಅಬ್ಭಾ! ಅದೆಷ್ಟು ಕ್ರಿಯಾಶೀಲ ವ್ಯಕ್ತಿ! ಅದ್ಭುತ! ಅದ್ಭುತ!!  ಕಾರ್ಯಕರ್ತರ  ನಡುವೆ ಅವರು ಬೆರೆಯುತ್ತಿದ್ದ ಅವರ ಸ್ವಭಾವವಂತೂ ಎಲ್ಲರನ್ನೂ ಆಕರ್ಶಿಸಿತ್ತು .  ಕರ್ನಾಟಕದ ಮೂಲೆ ಮೂಲೆಗಳಲ್ಲಿ ದಾಸೆಗೌಡರ ಪರಿಚಿತರು ಈಗಲೂ ಇದ್ದಾರೆ. 

ಅವರು ನಡೆಸುತ್ತಿದ್ದ  ಹೊಯ್ಸಳ ಟೂರಿಸಂ  ಪತ್ರಿಕೆಗಾಗಿ ಬೇಲೂರಿನ ಡಾ.ಶ್ರೀವತ್ಸವಟಿಯವರೊಡನೆ ನಾವುಗಳು ಹಾಸನ ಜಿಲ್ಲೆಯ ಹಲವು ಊರುಗಳನ್ನು ಭೇಟಿ ಮಾಡಿ ಅಲ್ಲಿನ ದೇವಾಲಯಗಳ ಬಗ್ಗೆ ಮಾಹಿತಿ ತಂದು ಅವರ ಪತ್ರಿಕೆಯಲ್ಲಿ ಬರೆಯುತ್ತಿದ್ದೆವು.  ಅವರ ಕಲ್ಪನೆಯಾದರೋ ಬಲು ದೊಡ್ಡದು. ಹೊಯ್ಸಳ ಅಧ್ಯಯನ  ಕೆಂದ್ರವನ್ನು ತಮ್ಮ ಮನೆಯಲ್ಲೇ ತೆರೆಯ ಬೇಕೆಂದು ಅದಕ್ಕೆ ಪೂರಕವಾಗಿ ಅವರ ಮನೆಯನ್ನೂ ಸಹ ಇತ್ತೀಚಿಗೆ ಕಟ್ಟಿದ್ದರು. ಮನೆಯ ಮೇಲೊಂದು ಪಿರಿಮಿಡ್ ಧ್ಯಾನ ಮಂದಿರ. ಅಧ್ಯಯನ ಕೇಂದ್ರಕ್ಕೆ ಅಗತ್ಯವಾದ ಕೊಠಡಿಗಳು, ಸಭಾಂಗಣ. ಅವರ ಕಲ್ಪನೆಯ ಎಲ್ಲವೂ ಸಾಕಾರಗೊಳ್ಳುವ ಹಂತಕ್ಕೆ  ಬಂದಿತ್ತು. ಅಷ್ಟರಲ್ಲಿ  ಗೆಳೆಯ ಕಣ್ಮರೆಯಾದರು. ವೇದಸುಧೆಯನ್ನು ಬಹುವಾಗಿ ಪ್ರೀತಿಸುತ್ತಿದ್ದ  ಶ್ರೀ ದಾಸೆಗೌಡರಿಗೆ ವೇದಸುಧೆಯ ಪರವಾಗಿ ಸದ್ಗತಿಯನ್ನು ಕೋರುತ್ತೇನೆ. ಪತ್ನಿ ಒಬ್ಬ ಪುತ್ರ ನನ್ನು ಅಷ್ಟೇ ಅಲ್ಲ, ನನ್ನಂತಹ  ಸಹಸ್ರಾರು ಅಭಿಮಾನಿಗಳನ್ನು ಬಿಟ್ಟು ಹೋಗಿರುವ ದಾಸೇಗೌಡ ರ ಕುಟುಂಬಕ್ಕೆ ಅವರು ಇಲ್ಲದಿರುವಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ಕೊಡಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ. 
ದಾಸೆಗೌಡರೊಡನೆ ಕಳೆದ ಕ್ಷಣಗಳ ಸ್ಮರಣೆ 


 
ನಮ್ಮ ಮನೆಯಲ್ಲಿ   ಡಾ.ಶ್ರೀವತ್ಸ ಎಸ್.ವಟಿಯರ ಸಂದರ್ಶನ ಮಾಡಿದಾಗ. 


 



 

ಕೊನೆಯ ನಗುವೆಂದು ನಾನಂದು ಭಾವಿಸಿರಲಿಲ್ಲ. 

3 comments:

  1. ಶ್ರೀಧರರೇ, ಪ್ರತ್ಯಕ್ಷವಾಗಿ ನಾನು ದಾಸೇಗೌಡರನ್ನು ನೋಡಿದ ನೆನಪು ನನಗಂತೂ ಇಲ್ಲ; ಇನ್ನುಮೇಲೆ ನೋಡುವ ಅವಕಾಶವೇ ಇಲ್ಲವಲ್ಲ ಎಂದು ಬೇಸರವಾಗುತ್ತಿದೆ. ದಿ|ದಾಸೇಗೌಡರು ತೀರಿಕೊಂಡಿದ್ದು ಹೇಗೆ ಎಂಬುದನ್ನು ತಾವು ತಿಳಿಸಿಲ್ಲ, ಹೃದಯಾಘಾತವಿರಬಹುದು ಎಂದುಕೊಳ್ಳುತ್ತೇನೆ. ಅವರ ಮುಖಚಹರೆಯಿಂದ ಹೇಳಬಹುದಾದರೆ ಅವರೊಬ್ಬ ಸಂಘಜೀವಿಯಾಗಿದ್ದರು, ಗುರುಹಿರಿಯರಲ್ಲಿ ಮತ್ತು ಪ್ರಾಜ್ಞರಲ್ಲಿ ಗೌರವವನ್ನಿಟ್ಟ ವ್ಯಕ್ತಿಯಾಗಿದ್ದರು, ಇನ್ನಿಲ್ಲದ ಭಕ್ತಿಭಾವ ದೇವರಲ್ಲೂ ದೇಶದಮೇಲೂ ಇತ್ತು. ಅಲ್ಪತೃಪ್ತರು ಅರ್ಥಾತ್ ಗಳಿಕೆಯ ಬೆನ್ನುಹತ್ತಿದವರಲ್ಲ, ಜೀವನಕ್ಕೆ ದೇವರು ಕೊಟ್ಟಷ್ಟು ಸಾಕು ಎಂದುಕೊಂಡು ಜೀವನ ನಡೆಸಿದವರು ಎಂಬುದು ನನಗೆ ತೋರಿಬರುತ್ತಿದೆ. ಕಳೆದಸಲ ವೇದಸುಧೆಯ ಮೊದಲವಾರ್ಷಿಕೋತ್ಸವಕ್ಕೆ ಬಂದಿದ್ದರೋ ಏನೋ ಗಡಿಬಿಡಿಯಲ್ಲಿ ವಿಚಾರಿಸಲೂ ಆಗಲಿಲ್ಲ. ಅವರ ಆತ್ಮಕ್ಕೆ ಸದ್ಗತಿಯನ್ನೂ ಅವರ ಕುಟುಂಬಕ್ಕೆ ನೋವು ಭರಿಸಿಕೊಳ್ಳುವ ಶಕ್ತಿಯನ್ನೂ ಕೊಡಲಿ ಎಂದೂ ಅವರ ಮಕ್ಕಳಿಗೆ ಹೆಚ್ಚಿನ ಆಯುರಾರೋಗ್ಯ ಐಶ್ವರ್ಯ, ನೆಮ್ಮದಿ ಪ್ರಾಪ್ರವಾಗಲೆಂದೂ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರ ಜೊತೆ ಈ ಶೋಕಸಂದೇಶದಲ್ಲಿ ನಾನೂ ಸೇರಿಕೊಂಡಿದ್ದೇನೆ.

    ReplyDelete
  2. ಆತ್ಮೀಯ ಶ್ರೀಧರ್,
    ಶ್ರೀ ದಾಸೇಗೌಡರು ಸ್ನೇಹಜೀವಿ. ಎಲ್ಲರೊಟ್ಟಿಗೆ ನಗುನಗುತ್ತ ಮಾತನಾಡಿಕೊಂಡು ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುತ್ತಿದ್ದ ಸಂಘಜೀವಿ ಕೂಡ. ಹೆಚ್ಚು ಒಡನಾಟವಿರದ್ದಿದ್ದರು ಸ್ನೇಹವಿತ್ತು. ನಮ್ಮ ಆತ್ಮೀಯರಾದ ಶ್ರೀ ಬಸುರವರು ಅವರ ಮನೆಯ ವಿನ್ಯಾಸ ಮಾಡಿದ ಸಂದರ್ಭದಲ್ಲಿ ಹೆಚ್ಚು ಒಡನಾಟವಿತ್ತು.
    ಮಿಂಚಿನಂತೆ ಮಾಯವಾಗಿಬಿಟ್ಟ ದಾಸೇಗೌಡರ ಅಗಲಿಕೆ ನಿಜಕ್ಕೂ ಮಿತ್ರಕೂಟಕ್ಕೆ ನಷ್ಟವೇ ಸರಿ.
    ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲೆಂದು ಭಗವಂತನಲ್ಲಿ ಪ್ರಾರ್ಥನೆ.
    ಪ್ರಕಾಶ್

    ReplyDelete
  3. ಇಲ್ಲಿ ಪ್ರಕಟಿಸಬೇಕೋ ಬೇಡವೋ ಎಂದು ಬಹಳ ಯೋಚಿಸಿ ಕೊನೆಗೆ ನನ್ನ ಮನಸ್ಸಿನ ಸಮಾಧಾನಕ್ಕಾಗಿ ಪ್ರಕಟಿಸಿದೆ. ಶ್ರೀ ದಾಸೇ ಗೌಡರಿಗೆ ರಾಜ್ಯಾದ್ಯಂತ ಸ್ನೇಹಿತರಿದ್ದಾರೆ. ಹಾಸನದಲ್ಲಿ ಈಗ ABVP ಯ 31ನೇ ರಾಜ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನ ಸಿದ್ಧತೆ ಕೆಲಸಗಳಿಗೆ ತಮ್ಮನ್ನು ತೊಡಗಿಸಿಕೊಂಡಿದ್ದ ದಾಸೇಗುಡರು ಸಮ್ಮೇಳನ ಆರಂಭಕ್ಕೆ ಮುಂಚೆಯೇ ಕಣ್ಮುಚ್ಚಿ ಸಮ್ಮೇಳನದಲ್ಲಿ ಅವರ ಬದಲು ಅವರ ಭಾವಚಿತ್ರ ಸ್ಥಾನ ಪಡೆದಿದೆ. ಕೊನೆ ಉಸುರಿನ ತನಕ ಸಮಾಜಕಾರ್ಯ ಮಾಡುವುದೆಂದರೆ ಇದೇ ಅಲ್ಲವೇ? ಈ ಸಂದರ್ಭದಲ್ಲಿ ಭಾವನೆಗಲನ್ನು ಹಂಚಿಕೊಂಡಿರುವ ನಿಮಗೆ ಧನ್ಯವಾದಗಳು.

    ReplyDelete