Pages

Thursday, March 3, 2016

ವೇದಭಾರತಿಯ ಚಟುವಟಿಕೆಗಳ ಬಗ್ಗೆ ಶ್ರೀ ಕೆ.ಎಸ್.ಕರಂಜೆ ಅವರ ಅಭಿಮಾನದ ಮಾತು ಭಾಗ-2

ಬೀದರ್ ನ ಶ್ರೀಮದ್ ವೀರಶೈವ ರಾಜಪೀಠದ ಅಧ್ಯಕ್ಷರೂ,ಶಿವಾದ್ವೈತ ಆಗಮಿಕ ಅನುಯಾಯಿಗಳೂ ಆದ ಶ್ರೀ ಕೆ.ಎಸ್.ಕರಂಜೆ ಎಂಬ facebook ಮಿತ್ರರು ನನ್ನೊಡನೆ ತಮ್ಮ ವಿಚಾರವನ್ನು ಹಂಚಿಕೊಂಡ ಬಗ್ಗೆ ನಿನ್ನೆ ಬರೆದಿದ್ದೆ.

ನಿನ್ನೆ ಸಂಜೆ facebook vedio chat ಮೂಲಕ ವೇದಭಾರತಿಯ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡಿದರು. ಅಲ್ಲದೆ ನಾವು ಮಾಡುವ ಅಗ್ನಿಹೋತ್ರವನ್ನು ನೋಡಿ ಸಂತೋಷವನ್ನು ವ್ಯಕ್ತಪಡಿಸಿದರು. ಅವರ ಮಾತಿನ ಸಾರಾಂಶವನ್ನು ಇಲ್ಲಿ ಬರೆದಿರುವೆ.

"ವೇದ ಬಂಧುಗಳೇ ಅತ್ಯಧಿಕ ಸಂಖ್ಯೆಯ ಮಹಿಳೆಯರೂ ಮತ್ತು ಪುರುಷರೂ ಮಾಡಿದ ಅಗ್ನಿಹೋತ್ರವನ್ನು ನೋಡಿ ಬಲು ಸಂತೋಷವಾಯ್ತು.ಕಳೆದ ಕೆಲವು ದಿನಗಳಲ್ಲಿ ದಲಿತ ಬಂಧುಒಬ್ಬನಿಗೆ ಉಪನಯನ ಮಾಡಿದ ವಿಚಾರವೂ ತಿಳಿಯಿತು. ನೀವು ಬಹಳ ಅದ್ಭುತ ಕೆಲಸ ಮಾಡುತ್ತಿದ್ದೀರಿ. ಇಂತಾ ಕೆಲಸ ಮಾಡುವಾಗ ಹಲವು ವಿರೋಧಗಳೂ ಬರುತ್ತವೆ.ತಿಳುವಳಿಕೆಯ ಕೊರತೆಯಿಂದ ಬರುವ ವಿರೋಧಗಳು ಅವು ಅಷ್ಟೆ. ಆದರೆ ಮುಂದಿನ ದಿಗಳಲ್ಲಿ ನಿಮ್ಮ ಕಾರ್ಯವನ್ನು ಜನರು ಮೆಚ್ಚಲೇ ಬೇಕಾಗುತ್ತದೆ. ಅಂತಾ ಸಮಾಜಮುಖಿಕಾರ್ಯವನ್ನು ನೀವೆಲ್ಲರೂ ಮಾಡುತ್ತಿದ್ದೀರಿ. ನಿಮಗೆ ನನ್ನ ಧನ್ಯವಾದಗಳು.

ಒಂದು ವಿಷಯವು ನಿಮಗೆಲ್ಲಾ ತಿಳಿದಿರಬೇಕು. ಜಾತಿ ಎಂಬುದು ಎರಡು ರೀತಿಯಿಂದ ಬರುತ್ತದೆ. ಮೊದಲನೆಯದು ಹುಟ್ಟಿನಿಂದ. ಎರಡನೆಯದು ಕರ್ಮದಿಂದ. ವ್ಯಾಸ, ವಾಲ್ಮೀಕಿ ಯಂತಾ ಹಲವರು ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಲ್ಲ. ಆದರೆ ಅವರ ಮಹಾನ್ ಸಾಧನೆಯಿಂದ ಮಹರ್ಷಿಗಳಾದರು.ಬ್ರಾಹ್ಮಣ ಕರ್ತವ್ಯವನ್ನು ನಿರ್ವಹಿಸಿದರು. ಪೂಜ್ಯರಾದರು. ವೇದದ ರಾಶಿಯನ್ನು ಋಕ್ ,ಯಜುರ್, ಸಾಮ ಮತ್ತು ಅಥರ್ವ ವೇದಗಳಾಗಿ ವಿಂಗಡಿಸಿ ವೇದವ್ಯಾಸರಾದರು. ಯಾವ ಸಾಹಿತ್ಯವನ್ನು ಇಡೀ ಜಗತ್ತು ಅತ್ಯಂತ ಪ್ರಾಚೀನವೆಂದು ಭಾವಿಸುತ್ತದೋ ಅಂತಾ ವೇದವನ್ನು ವಿಂದಡಿಸಿದವನೇ ಹುಟ್ಟಿನಿಂದ ಬ್ರಾಹ್ಮಣನಲ್ಲ. ಪ್ರಪಂಚಕ್ಕೇ ಆದರ್ಶ ಗ್ರಂಥವಾಗಿರುವ ರಾಮಾಯಣ ಮಹಾಗ್ರಂಥವನ್ನು ರಚಿಸಿದ ವಾಲ್ಮೀಕಿ ಬೇಡರ ಜಾತಿಯಲ್ಲಿ ಹುಟ್ಟಿ ಪ್ರಾಣಿಗಳನ್ನು ಕೊಲ್ಲುತ್ತಿದ್ದವನು. ಆದರೆ ಅಂತಾ ಸ್ಥಿತಿಯಿಂದ ಮಹರ್ಷಿಯಾಗಬೇಕಾದರೆ ಅವನ ಸಾಧನೆ ಎಷ್ಟಿರಬಹುದು! ರಾಮಾಯಣ ಬರೆದು ಮಹರ್ಷಿ ವಾಲ್ಮೀಕಿಯಾದ.

ಶ್ರೀ ಶಂಕರರ ವಿಚಾರಕ್ಕೆ ಬಂದಾಗ ಚಾಂಡಾಲನ ಭೇಟಿಯ ಸಂದರ್ಭವು ಅವರ ಜೀವನದಲ್ಲೇ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ಗಂಗಾ ನದಿಯಿಂದ ಶ್ರೀ ಶಂಕರರು ಸ್ನಾನ ಮಾಡಿ ಕಾಶಿಯ ಬೀದಿಯಲ್ಲಿ ಬರುತ್ತಿದ್ದಾಗ ಎದುರು ಚಾಂಡಾಲನೊಬ್ಬನು ಬರುತ್ತಾನೆ. ಶಂಕರರ ಶಿಷ್ಯರು ಅವನನ್ನು ದೂರಸರಿ, ದೂರ ಸರಿ, ಎನ್ನುತ್ತಾರೆ. ಆಗ ಚಾಂಡಾಲ ಶಂಕರರಿಗೆ ಕೇಳುತ್ತಾನೆ. " ನಿಮ್ಮ ಶಿಷ್ಯರು ಯಾವುದಕ್ಕೆ ದೂರಸರಿ ಎನ್ನುತ್ತಿದ್ದಾರೆ? ಈ ಶರೀರಕ್ಕೋ? ಅಥವಾ ನನ್ನೊಳಗಿರುವ ಆತ್ಮಕ್ಕೋ? ನೀವು ಅಧ್ವೈತ ಸಿದ್ಧಾಂತವನ್ನು ಬೋಧಿಸುತ್ತಿದ್ದೀರಿ. ಭಗವಂತ ಮತ್ತು ನಾನು ಒಂದೇ ಎಂಬುದಲ್ಲವೇ ಸಿದ್ಧಾಂತ. ನೀವು ದೂರಸರಿ ಎಂದರೆ ನಾನು ಬೇರೆ , ನನ್ನೊಳಗಿರುವ ಪರಮಾತ್ಮ ಬೇರೆ , ಎಂದಾಗುತ್ತದಲ್ಲವೇ? ಇದು ಅಧ್ವೈತ ಸಿದ್ಧಾಂತಕ್ಕೆ ಹೊಂದುತ್ತದೆಯೇ?

ಆಗ ಶಂಕರರು ನೇರವಾಗಿ ಚಾಂಡಾಲನ ಪಾದಗಳಿಗೆರಗಿ " ನೀನು ನನ್ನ ಕಣ್ತೆರೆಸಿದೆ, ನೀನೇ ನನ್ನ ಗುರು" ಎಂದು ಅವನನ್ನು ಗುರುವಾಗಿ ಸ್ವೀಕರಿಸುತ್ತಾರೆ. ಮಣಿಷಾ ಪಂಚಕವನ್ನು ಬರೆಯುತ್ತಾರೆ. ಶ್ರೀ ಬಸವೇಶ್ವರರೂ ದೀನ ದಲಿತ ಬಂಧುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರೂ ಸಹ ಒಬ್ಬ ದಲಿತ ಬಂಧುವನ್ನು ಗುರುವಾಗಿ ಸ್ವೀಕರಿಸಲಿಲ್ಲ. ಹಾಗೆಂದು ಅವರ ಕಾರ್ಯವನ್ನು ನಾನು ಕಡಿಮೆ ಎಂದು ಹೇಳುತ್ತಿಲ್ಲ. ಆದರೆ ಶಂಕರರು ಒಬ್ಬ ಚಾಂಡಾಲನನ್ನು "ನೀನು ನನ್ನ ಕಣ್ ತೆರೆಸಿ ಗುರುವಾದೆ " ಎಂಬ ಮಾತು ನಮ್ಮ ಕಣ್ ತೆರೆಸಬೇಡವೇ?

ಸ್ತ್ರೀಯರು ವೇದಾಧ್ಯಯನ ಮಾಡಕೂಡದೆನ್ನುವವರಿಗೂ ಶ್ರೀ ಶಂಕರರೇ ಆದರ್ಶವಾಗಬೇಕು. ಮಂಡನ ಮಿಶ್ರರರಿಗೂ ಶಂಕರರಿಗೂ ಸಂವಾದ ನಡೆದು ಪಂಥಾಹ್ವಾನಕ್ಕೆ ವೇದಿಕೆ ನಿರ್ಮಾಣವಾದಾಗ ಒಬ್ಬ ತೀರ್ಪುಗಾರರು ಬೇಕಾಯ್ತು. ಆಗ ಪುರುಷ ವಿದ್ವಾಂಸರಿಗೇನೂ ಕೊರತೆ ಇರಲಿಲ್ಲವಾದರೂ ಮಂಡನ ಮಿಶ್ರರ ಪತ್ನಿ ಭಾರತೀ ದೇವಿಯನ್ನು ತೀರ್ಪುಗಾರರ ಸ್ಥಾನದಲ್ಲಿ ಕೂರಿಸಿದ ಘಟನೆ ನಮ್ಮ ಕಣ್ತೆರಸ ಬೇಡವೇ?
ಕಾಲಗರ್ಭವನ್ನು ನೋಡುತ್ತಾ ಹೋದರೆ ಇಂತಹ ಹಲವು ಉಧಾಹರಣೆಗಳು ಸಿಗುತ್ತವೆ. ಇಂದು ಸಮಾಜದಲ್ಲಿ ಸಾಮರಸ್ಯಕ್ಕಾಗಿ ಕೆಲಸಮಾಡುವುದು ಅತ್ಯಂತ ಅಗತ್ಯವಾದ ಪವಿತ್ರವಾದ ಕೆಲಸವಾಗಿದೆ. ವೇದಭಾರತಿಯಿಂದ ಇಂತಾ ಒಂದು ಪವಿತ್ರಕಾರ್ಯದಲ್ಲಿ ತೊಡಗಿರುವ ನಿಮಗೆಲ್ಲಾ ಆಭಗವಂತನು ಮಂಗಳವನ್ನುಂಟುಮಾಡಲಿ.

No comments:

Post a Comment