Pages

Wednesday, January 12, 2011

" ಅದಕ್ಕಿನ್ನೂ ಕಾಲವಿದೆ" :

"ವೇದಸುಧೆ" ಎಂಬ ನನ್ನ ಬ್ಲಾಗ್ ಹೆಸರು  ಕೇಳಿದಾಗ [ಕ್ಷಮೆ ಇರಲಿ, ಇದು ವೇದಸುಧೆಬಳಗದ ಬ್ಲಾಗ್] ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ.
* ಈಗತಾನೇ ಬಿ.ಇ.ಮುಗಿಸಿ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುವ ನನ್ನ ಮಗನಿಗೆ ಹೇಳಿದೆ" ನನ್ನ ಬ್ಲಾಗ್ "ವೇದಸುಧೆ ಯನ್ನು ನೋಡು." ಅದರ ಬಗೆಗೆ ಪೂರ್ಣ ವಿಚಾರ ತಿಳಿಯಲು ವ್ಯವಧಾನವಿಲ್ಲದ ಅವನು ಹೇಳಿದ " ಅದಕ್ಕಿನ್ನೂ ಕಾಲವಿದೆ" " ನಾನೂ ನಿನ್ನ ವಯಸ್ಸಿಗೆ ಬಂದಾಗ ಅದೆಲ್ಲಾ  ಶುರುಮಾಡುವೆ
* ವೇದಸುಧೆ ಹೆಸರು ಕೇಳಿದೊಡನೆ ಪುರೋಹಿತರೊಬ್ಬರು " ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
* ಸಾಮಾನ್ಯ ಗೃಹಸ್ತರೊಬ್ಬರು ಯಾವುದೋ ಪೂಜಾ ವಿಧಾನದ ಬಗ್ಗೆ ತಮ್ಮ ಸಂಶಯ ಕೇಳಿದರು
* ಆಸ್ತಿಕರೊಬ್ಬರು ಯಜ್ಞ ಯಾಗಾದಿಗಳ ಫೋಟೋಗಳನ್ನು ಕಳುಹಿಸಿಕೊಟ್ಟರು
* ನಮ್ಮ ಮಕ್ಕಳಿಗೆ ಪುರಾಣಪುಣ್ಯಕಥೆಗಳ ಬಗ್ಗೆ ತಿಳಿಸಬೇಕೆಂದವರು ಕೆಲವರು
* ನಮ್ಮ ಯುವ ಪೀಳಿಗೆಗೆ ಹಬ್ಬ ಹರಿದಿನಗಳ ಬಗೆಗೆ  ವೇದಸುಧೆಯಲ್ಲಿ ಪರಿಚಯ ಮಾಡಿಸಬೇಕೆಂದವರು ಕೆಲವರು
* ನೋಡಿ ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ- ಅದನ್ನು ಉಳಿಸುವ ಕೆಲಸವಾಗಬೇಕೆಂದವರು ಒಬ್ಬ ಹಿರಿಯರು
         ವೇದವೆಂಬ ಎರಡಕ್ಷರವನ್ನು ಕೇಳಿದಾಗ ಹಲವರಿಂದ ಬಂದ ಹಲವು ಅಭಿಪ್ರಾಯಗಳಿವು. ಇವು ಅನೇಕರ ಅಭಿಪ್ರಾಯಗಳಿರಬಹುದು.ಒಂದೊಂದನ್ನೇ ವಿಮರ್ಶಿಸುತ್ತಾ ವಿಚಾರ ಮಾಡೋಣ.
" ಅದಕ್ಕಿನ್ನೂ ಕಾಲವಿದೆ" :
    ಒಂದು ಅತ್ಯಂತ ಬಡತನದ ಮನೆಯಲ್ಲಿ ಹುಟ್ಟಿದ್ದರಿಂದ ನನಗೆ  ಜೀವನಾನುಭವ ಸಾಕಷ್ಟು ಆಗಿದೆಯಾದ್ದರಿಂದ "   ನಿಜ ಮನುಷ್ಯನನ್ನು ಮಾಡುವ ನಿಜವಾದ ವೇದಾಧ್ಯಯನವು  ನನ್ನ ಬಾಲ್ಯದಿಂದಲೇ ಆಗಿದೆ ಎಂಬ ಸಮಾಧಾನ ನನಗಿದೆ" ನನ್ನ ಜೀವನದ ಪಾಠವು  ವೇದದಲ್ಲಿದೆ ಎಂಬುದು ಈಗೀಗ ಅರ್ಥವಾಗುತ್ತಿದೆ.ಆದ್ದರಿಂದ  ತುತ್ತು ಅನ್ನಕ್ಕೆ ಪರಿತಪಿಸುವ ಮನೆಯಲ್ಲಿ ನನ್ನ ಜನ್ಮಕ್ಕೆ ಕಾರಣನಾದ ಆ ಭಗವಂತ ಮತ್ತು ನನಗೆ ಬಡತನದ ಬದುಕು ಹೇಗಿರುತ್ತದೆಂದು ಅನುಭವ ನೀಡಿದ ನನ್ನ ಮಾತಪಿತೃಗಳೇ ನನಗೆ ನಿಜವಾದ ವೇದಾಧ್ಯಯನ ಮಾಡಿಸಿದ ಆಚಾರ್ಯರೆಂದು ತಿಳಿದು ಅವರನ್ನು ಸದಾಸ್ಮರಿಸುತ್ತೇನೆ.ಆದರೆ ನನ್ನ ಮಗ ಒಬ್ಬ ಸ್ಥಿತಿವಂತನ ಮನೆಯಲ್ಲಿ ಹುಟ್ಟಿದ[ಆಹೊತ್ತಿಗೆ ನನ್ನ ಬಡತನದ ಬೇಗೆ ಮಾಯವಾಗಿತ್ತು] ಅವನಿಗೆ ನನ್ನಂತೆ ಜೀವನಾನುಭವವೂ ಆಗಲಿಲ್ಲ. ವೇದಾಧ್ಯಯನವೂ ಆಗಲಿಲ್ಲ. ಅವನಿಗೆ ನಿಜವಾಗಿ ಸಮಯ ಜಾರುತ್ತಿದೆ. "ವೇದಸುಧೆಯಲ್ಲಿ ನೆಮ್ಮದಿಯ ಬದುಕಿಗಾಗಿ ವೇದ ಜ್ಞಾನದ ಬಗೆಗೆ ಸುಧಾಕರಶರ್ಮರು ಸಾಕಷ್ಟು ತಿಳುವಳಿಕೆ ನೀಡುತ್ತಿದ್ದಾರೆ. ಅವನಂತ ಯುವಕರಿಗೆ ಖಂಡಿತವಾಗಿಯೂ "ವೇದಸುಧೆಯು" ದಾರಿ ದೀಪವಾಗಬಲ್ಲದು. ಆದರೆ ಶರ್ಮರ ಉಪನ್ಯಾಸಗಳನ್ನಾದರೂ ನಿತ್ಯವೂ ಅರ್ಧಗಂಟೆಯಾದರೂ ಕೇಳಬೇಕು.
" ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
ವೇದದ ನಿಜವಾದ ಅರ್ಥವನ್ನು ತಿಳಿದಾಗ ವ್ರಥಕಥೆಗಳ ಮಾತೇ ಬರುವುದಿಲ್ಲ.
ಪೂಜಾ ವಿಧಾನ:
ನಿತ್ಯಬದುಕೇ ಒಂದು ಆರಾಧನೆ, ಒಂದು ಯಜ್ಞ.ಸಮಾಜಮುಖಿಯಾಗಿ ಬಾಳುವುದನ್ನು ವೇದವು ನಮಗೆ ಕಲಿಸಿಕೊಡುತ್ತದೆ, ನಾವೀಗ ಮಾಡುತ್ತಿರುವ ಪೂಜಾವಿಧಾನವೇ ಬದಲಾಗುತ್ತದೆ.
ಪುರಾಣಪುಣ್ಯಕಥೆಗಳ ಬಗ್ಗೆ :
ನನಗನಿಸುವಂತೆ  ಪೂರ್ವದಲ್ಲಿ ರಾಮಾಯಣ ಮಹಾಭಾರತದ ಯುದ್ಧ ಕಾಲದಲ್ಲಿ ವೇದ ಪ್ರಸಾರಕ್ಕೆ ಧಕ್ಕೆ ಬಂದಿದೆ[ ಇದನ್ನು ಬಲ್ಲವರು ಸರಿಯಾಗಿ ವಿವರಿಸ ಬೇಕು] ಆನಂತರ ಜನರು ಧರ್ಮಬ್ರಷ್ಠರಾಗುತ್ತಾರೆಂದು ಅರಿತ ಕೆಲವು ಋಷಿಗಳು[ಋಷಿ ಎಂಬ ಪದ ಉಚಿತವೋ ಅಲ್ಲವೋ ತಿಳಿಯದು] ಭೀತಿಯಿಂದ ಭಗವಂತನಲ್ಲಿ ನಂಬಿಕೆಬರುವಂತೆ ಸರಳವಾಗಿ ರಚಿಸಿರುವ ಕಥೆಗಳಿರಬಹುದು.ಯಾವುದೋ ಆಪತ್ಕಾಲಕ್ಕೆ ಮಾಡಿರುವ ಆ ಪ್ರಯತ್ನವು ತಲೆತಲಾಂತರಗಳಲ್ಲೂ ಮುಂದುವರೆದು ವೇದ-ಪುರಾಣಗಳೆಂಬ ಮಟ್ಟಿಗೆ ಬೆಳೆದದ್ದು ಸುಳ್ಳಲ್ಲ.  ವೇದವು ಆ ಸಂದರ್ಭದಲ್ಲಿ ನಾಶವಾಗಿಲ್ಲ. ಬದಲಿಗೆ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿ ಅದರ ಪರಿಣಾಮವಾಗಿ  ವೇದವನ್ನು ಬ್ರಾಹ್ಮಣರ ಹೊರತಾಗಿ ಅನ್ಯ ವರ್ಗದ ಜನರ ಕಿವಿಯ ಮೇಲೂ ಬೀಳಬಾರದೆಂಬ ಮಟ್ಟಿಗೆ ನಡೆದುಕೊಂಡದ್ದು ಕಥೆಯಲ್ಲ-ವಾಸ್ತವ.ಆದರೆ ಬ್ರಾಹ್ಮಣ ಪದದ ಅರ್ಥವೇ ಬೇರೆ. ಅದು ಒಂದು ಜಾತಿಯ ಹೆಸರಲ್ಲ. ಅದನ್ನು ವೇದಸುಧೆಯ ಶರ್ಮರ ಪುಟದಲ್ಲಿ ಆಡಿಯೋ ಕೇಳಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಪುರಾಣಪುಣ್ಯಕಥೆಗಳೆಂಬ ಕಟ್ಟು ಕಥೆಗಳ ಹಿಂದೆ ಬಿದ್ದು ನಿಜವಾದ ವೇದವನ್ನು ಮರೆತಿರುವುದು ಸರಿಯೇ? ಚಿಂತನೆ ಮಾಡಬೇಕು.
ಹಬ್ಬ ಹರಿದಿನಗಳ ಬಗೆಗೆ
 ಎಷ್ಟು ಓದಿದರೇನು? ನಾವಿನ್ನೂ ಕಂದಾಚಾರಗಳಿಗೇ ಕಟ್ಟು ಬಿದ್ದಿದ್ದೇವೆ.ಮೊನ್ನೆ ನನ್ನ ತಂಗಿಯ  ಮನೆಯಲ್ಲಿ "ಸುಬ್ರಹ್ಮಣ್ಯ ಷಷ್ಠಿ" ಯ ಆಚರಣೆ. .ಊಟದಲ್ಲಿ ಅಡಿಗೆಗೆ ಖಾರವನ್ನೇ ಹಾಕಿಲ್ಲ. ಬರಿ ಸಪ್ಪೆ. ಮಾಡಿದ್ದು ಹಲವು ಬಗೆ ಅಡಿಗೆ. ಅದರಲ್ಲಿ ಒಂದು  ಅವರೆ ಕಾಳಿನ ಸಾಂಬಾರ್ ಇರಬಹುದು.ಬರಿ ಸಪ್ಪೆ. ನಾನು ಉಪ್ಪಿನ ಕಾಯಿ ಹಾಕ್ತೀರಾ? ಎಂದೆ " ಇವತ್ತು ಹಾಕುವಂತಿಲ್ಲ" ಎಂದರು.
ನೋಡಿ ನಮ್ಮ ಆಚರಣೆಗಳ ಫಲ! ಬಹುಷ: ಆರೋಗ್ಯದ ಕಾರಣಕ್ಕೆ ಯಾವ ಕಾಲದಲ್ಲೋ ಯಾರೋ ಒಬ್ಬರು "ಸುಬ್ರಹ್ಮಣ್ಯ ಷಷ್ಠಿ"ಯ ಹೆಸರಲ್ಲಿ ಆರೋಗ್ಯಕರವಾದ ಅಡಿಗೆ ಹೇಳಿರಬಹುದು. ಆದರೆ ಕಡೆಯಲ್ಲಿ ಉಳಿದಿದ್ದೇನು? ಅಂದು ಅಡಿಗೆಗೆ  ಖಾರವನ್ನೇ ಹಾಕಬಾರದು. ಆದರೆ ಅವರೇ ಕಾಳಿನ ಸಾಂಬಾರ್ ಮಾಡಬಹುದೇ? ಚಿಂತಿಸಲೇ ಇಲ್ಲ.ನಮ್ಮ ಹಬ್ಬಗಳ ಆಚರಣೆ ಹೀಗಿದೆ. ಅರ್ಥ ಕಳೆದುಕೊಂಡಿದೆ ಎನಿಸುತ್ತಿಲ್ಲವೇ?
ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ
ಪ್ರಶ್ನೆ ಕೇಳಿದವರು ಬ್ರಾಹ್ಮಣ ಎಂದರೆ ಒಂದು ಜಾತಿಯನ್ನು ಉದ್ಧೇಶಿಸಿ ಕೇಳಿದ್ದರು. ಅದರೆ ಬ್ರಾಹ್ಮಣ ಪದಕ್ಕೆ ಅರ್ಥವೇ ಬೇರೆ. ಬ್ರಹ್ಮಜ್ಞಾನವನ್ನು ಪಡೆಯುವವ ಬ್ರಾಹ್ಮಣ.ಹೌದು ಬ್ರಹ್ಮಜ್ಞಾನದ ಪ್ರಸಾರವಾಗಬೇಕು.

ವೇದಸುಧೆಯಲ್ಲಿ ನಿಜವಾದ ವೇದಾರ್ಥಪ್ರಸಾರವಾಗಬೇಕು, ಬದುಕಿಗೆ ನಿಜವಾದ ಮಾರ್ಗದರ್ಶನ ವೇದಗಳಿಂದ ಸಿಗಬೇಕೆಂಬ ಮಹತ್ವಾಕಾಂಕ್ಷೆಯಿಂದ ವೇದಸುಧೆ ಆರಂಭವಾಗಿದೆ. ಆಪ್ರಯತ್ನದಲ್ಲಿ ಅವಿರತ ಶ್ರಮಿಸುತ್ತಿದೆ. ಇಂತಹ ವೇದಸುಧೆಯನ್ನು ಯಾವ ವಯಸ್ಸಿನಿಂದ  ಓದಬೇಕು? ಬಹಳ ಪ್ರೀತಿಂದ ಒಂದು ಮಾತು ಹೇಳಿ ಈ ಬರಹ ಮುಗಿಸುವೆ" ವೇದಸುಧೆಗೆ ತಾಂತ್ರಿಕ ಸಲಹೆ ನೀಡುತ್ತಿರುವ ನಮ್ಮ ಮಿತ್ರ ಪ್ರಸನ್ನ  ಪಿ.ಯು.ಸಿ ವಿದ್ಯಾರ್ಥಿ.
ಒಂದು ಮಾತು: ವೇದಸುಧೆಯಲ್ಲಿ ನಾನೊಬ್ಬ ಅಂಚೆ ಪೇದೆ. ನಿಮಗೆ ಏನೇ ಸಂಶಯವಿರಲಿ. ಕೇಳಿ ವೇದಾಧ್ಯಾಯೀ ಸುಧಾಕರಶರ್ಮರು ಉತ್ತರ ನೀಡುವರು. ಕಾರಣ ಅವರು ಮೂರು ದಶಕಗಳಿಂದ ವೇದಾಧ್ಯಯನ ಮಾಡುತ್ತಿದ್ದಾರೆ. ಅವರೇ ಸಮರ್ಥರು.

Tuesday, January 11, 2011

ನನ್ನ೦ತೆ ನನ್ನ ಜಗತ್ತು....

ನಾನು ಕದ ತಟ್ಟಿದಲ್ಲೆಲ್ಲಾ ಬಾಗಿಲು ತೆರೆಯಲಾಗಿದೆ
ನಾನು ಅಲೆದಾಡಿದಲ್ಲೆಲ್ಲಾ ಒ೦ದು ದಾರಿ ಸೃಷ್ಟಿಯಾಗಿದೆ
ನಾನು ಪ್ರೀತಿಸಿದಲ್ಲೆಲ್ಲಾ ಜಗತ್ತು ಮಧುರವಾಗಿ ಕ೦ಡಿದೆ
ನಾನು ದ್ವೇಷಿಸಿದಾಗಲೆಲ್ಲಾ ಪ್ರಪ೦ಚ ಕುರೂಪಿಯಾಗಿ ಕ೦ಡಿದೆ
ನಾನು ನಕ್ಕಾಗಲೆಲ್ಲಾ ಸ್ವರ್ಗ ನನ್ನ ಬಳಿ ಬ೦ದಿದೆ
ನಾನು ಕಣ್ಣೀರಿಟ್ಟಾಗಲೆಲ್ಲ ಒ೦ದು ಸಾ೦ತ್ವನದ ಸ್ಪರ್ಶ ನನ್ನನ್ನು ಹಗುರಾಗಿಸಿದೆ
ನಾನು ಗೊಣಗಿದಾಗ ಈ ಜಗತ್ತು ಕರ್ಕಶವಾಗಿ ಕ೦ಡಿದೆ
ನಾನು ಪೂಜಿಸಿದಾಗ ದೇವರು ನನ್ನೊಳಗೇ ನುಸುಳಿದ್ದಾನೆ..
ನಾನು ಮೌನಕ್ಕೆ ಮೊರೆಹೋದಾಗಲೆಲ್ಲ ಪ್ರಕೃತಿಯ ನಾದ ಕೇಳಿದ್ದೇನೆ..

ನನ್ನ೦ತೆ ನನ್ನ ಜಗತ್ತು....
ಇದೇ ನನ್ನ ಜೀವನ ದರ್ಶನ..

ಡಾ||ಜ್ಞಾನದೇವ್

Sunday, January 9, 2011

ವೇದ ದೀವಿಗೆ


ವೇದ ದೀವಿಗೆ

ಸೇರು ಸಜ್ಜನರನ್ನು ದೂರಗಳ ಮಿತಿಯಿರದೇ
ಸಾರು ಅವರಿರುವೆಡೆಗೆ ದಾರಿ ಹುಡುಕುತಲಿ
ನಾರು ಹೂವಿನ ಜೊತೆಗೆ ದೇವಮುಡಿಗೈದಂತೆ
ಏರು ಆ ಎತ್ತರಕೆ | ಜಗದಮಿತ್ರ

ಯಾರಿಗೂ ಕಮ್ಮಿಯೇಂ ಎಂಬ ಭಾವವು ಬೇಡ
ದಾರಿಹೋಕರು ನಾವು ತಿಳಿಮೊದಲು ಅದನು
ಹೀರುತ್ತ ಈ ಜಗದ ಅಪವಿತ್ರ ಬಳುವಳಿಯ
ಜಾರುವುದು ತರವಲ್ಲ | ಜಗದಮಿತ್ರ

ಹೇರಿ ನಡೆವುದು ಕತ್ತೆ ಭಾರವನು ದೂರದೆಡೆ
ಯಾರದೋ ವಸ್ತುಗಳು ಅದಕೆ ಅರಿವಿರದೇ
ಊರೂರು ಸುತ್ತುವುದು ಭಾರೀ ಪೆಟ್ಟಿಗೆ ಹೆದರಿ
ಕೇರಿ ಬೇಕಾದ್ದು ಪಡೆ | ಜಗದಮಿತ್ರ

ಸೂರು ಸಂತತಿ ಸಂಪದಭಿವೃದ್ಧಿಯಲಿ ತೊಡಗಿ
ತೇರೆತ್ತರದ ಬಯಕೆ ರಾಶಿಗಳ ನಡುವೆ
ಮೀರುತ್ತ ಕರ್ತವ್ಯ ಮಿತಿಯ ಸ್ವಾರ್ಥಕ್ಕಾಗಿ
ತೂರಿ ಪುನರಪಿ ಬರುವೆ | ಜಗದಮಿತ್ರ

ಯಾರೂ ಹೇಳುವುದಿಲ್ಲ ಬೇರೇ ಮಾರ್ಗವದಿಲ್ಲ
ಪಾರಾಗಲದುವೊಂದೇ ಜ್ಞಾನದ್ಹಾಯ್ದೋಣಿ
ಬೇರು ಎಲ್ಲಿಹುದೆಂದು ಹುಡುಕುತ್ತ ಮುನ್ನಡೆದು
ಭೂರಿ ಆನಂದ ಪಡೆ | ಜಗದಮಿತ್ರ

ಹಾರಿಹೋಗುವ ಮೊದಲು ಅರಿಯುತ್ತ ವೇದಗಳ
ದಾರಿದೀವಿಗೆಯಾಗಿ ಬಳಸು ತತ್ವಗಳ
ಖಾರ-ಉಪ್ಪುಗಳತಿಯ ಹಿಂಸೆಯಿರುವಶನಗಳ
ದೂರವಿಡು ತಿನ್ನದಲೇ | ಜಗದಮಿತ್ರ

ವಾರವಾರಕು ನವ್ಯ ವರುಷವರುಷಕು ದಿವ್ಯ
ಯಾರೋ ಕವಿ-ಸಾಹಿತಿಯ ಸೃಷ್ಟಿಯಂತಲ್ಲ
ನೂರಾರು ಯುಗಗಳನು ದಾಟುತ್ತ ನಡೆತಂದು
ಸೋರಿಕರಗದು ವೇದ |
ಜಗದಮಿತ್ರ


- ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ ’ಜಗದಮಿತ್ರನ ಕಗ್ಗ ’ ಸಂಕಲನದಿಂದ



Saturday, January 8, 2011

ಊಟವನ್ನು ಏಕೆ ಮಾಡಬೇಕು?ಯಾವಾಗ ಮಾಡಬೇಕು?ಏನು ಸೇವಿಸಬೇಕು? Part-2

(ಮುಂದುವರೆದಿದೆ)
ಪ್ರಕೃತಿಯು ಮನುಷ್ಯರಿಗಾಗಿ ಸಿದ್ಧಪಡಿಸಿರುವ ಆಹಾರವು ಅತ್ಯಂತ ಸತ್ವಭರಿತ, ಶ್ರೇಷ್ಠ. ಅವೇ ಹಣ್ಣುಗಳು. ಮಾನವರು ಶರೀರರಚನೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಹೇಳುವುದಾದರೆ ಬರೀ Vegetarian ಅಷ್ಟೇ ಅಲ್ಲ, Frutarian! Dry Fruits ಮತ್ತು Nuts ಕೂಡ ಇದರೊಂದಿಗೆ ಸೇರುತ್ತದೆ.
ಆ ಹಣ್ಣುಗಳನ್ನು ಬೆರೆಸುವ, ಅವಕ್ಕೆ ಸ್ವಲ್ಪ ಹಾಲು, ಬೆಲ್ಲ, ಜೇನು, ಕಾಯಿತುರಿ ಇತ್ಯಾದಿಗಳನ್ನು ಬೆರೆಸಿ/ಸಂಸ್ಕರಿಸಿ ಬಳಸಿದರೂ Good. ಮೊಳಕೆ ಬರಿಸಿ ಸೇವಿಸಿದರೂ Good. ಆದರೆ, ಸತ್ವಭರಿತದಲ್ಲೇ ಎರಡನೆಯ ದರ್ಜೆ.
ಆಹಾರವನ್ನು ಬೇಯಿಸಿ ತಿನ್ನುವುದು ಮುಂದಿನ ಕೆಳದರ್ಜೆ. ಈ ದರ್ಜೆಯಲ್ಲಿ ಬೇಯಿಸಿರುವುದಷ್ಟೇ. ಆದರೆ ಸಪ್ಪೆ. ಅಥವಾ ಅತ್ಯಂತ ಸ್ವಲ್ಪ ಉಪ್ಪು, ಹುಳಿ, ಖಾರ.
ಇಲ್ಲಿಂದ ಮುಂದೆ ಸೇವಿಸಲು ಅರ್ಹವಾದದ್ದಿಲ್ಲ. ಅವುಗಳ ವಿವರ ಹೀಗಿದೆ.
ಬೇಯಿಸಿದ ಆಹಾರ. ಯದ್ವಾತದ್ವಾ ಉಪ್ಪು, ಹುಳಿ, ಖಾರಗಳನ್ನು ಹಾಕಿ ತಿನ್ನುವುದು. (ಆದರೂ ಪರವಾಗಿಲ್ಲ! ಕಾಲಾನಂತರದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದಾಗ ಬಿಡಲೇಬೇಕಾಗುತ್ತದೆ!!)
ಮುಂದಿನದು ನಿಷಿದ್ಧ ಆಹಾರ.
ಹಿಂಸೆಯ ಪರಿಣಾಮವಾಗಿ ಬರುವ ಮಾಂಸಾಹಾರ.
(ಈ ಬಗ್ಗೆ ವ್ಯಾಪಕ ಚರ್ಚೆ ಯಾವಾಗಲೂ ನಡೆಯುತ್ತಿರುತ್ತದೆ. ಮಾಂಸಾಹಾರವನ್ನು ಸಮರ್ಥಿಸುವವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಮ್ಮ ನಾಲಿಗೆಗೆ/ಚಪಲಕ್ಕೆ ಸಿಲುಕಿರುತ್ತಾರೆ. ಹೃದಯವಾಗಲೀ, ಮಿದುಳಾಗಲೀ ಕೆಲಸ ಮಾಡುತ್ತಿರುವುದಿಲ್ಲ!)
ಇದರ ಬಗ್ಗೆ ಮತ್ತೊಮ್ಮೆ ವ್ಯಾಪಕವಾಗಿ ಚಿಂತಿಸೋಣ.
Golden Rule ಹೀಗಿದೆ -
ಪ್ರಕೃತಿಗೆ ಎಷ್ಟು ಹತ್ತಿರವಾಗಿರುತ್ತೇವೋ, ಸಂಸ್ಕರಣ ಎಷ್ಟು ಕಡಿಮೆಯಿರುತ್ತದೋ (Zero ಕೂಡ ಆಗಬಹುದು) ಅಷ್ಟೂ ಆ ಆಹಾರ ಸೇವಿಸಲು ಹೆಚ್ಚು ಹೆಚ್ಚು ಯೋಗ್ಯವಾಗಿರುತ್ತದೆ.
ಮುಂದಿನ ಪ್ರಶ್ನೆ ಹೇಗೆ ಸೇವಿಸಬೇಕು?
(ಮುಂದುವರೆಯುವುದು)
Sudhakarasharma

Thursday, January 6, 2011

ಮೊರೆ

ರಚನೆ: ಕವಿ ನಾಗರಾಜ್
ಗಾಯಕಿ: ಶ್ರೀಮತಿ ಲಲಿತಾರಮೇಶ್


ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಡಿ ಸಿಲುಕಿ ತೊಳಲಾಡುತಿರಲಾಗಿ
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಬಲ್ಲಿದರ ನುಡಿ ಕೇಳಿ ನೇರಮಾರ್ಗದಿ ನಡೆದೆ
ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ|
ಅರಿಗಳಾರರ ಬಂದಿ ದಿಕ್ಕೆಟ್ಟು ಕುಸಿದಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂದಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||



“ವೇದಸುಧೆ” ವಾರ್ಷಿಕೋತ್ಸವ


ಆತ್ಮೀಯ ವೇದಸುಧೆಯ ಅಭಿಮಾನಿ ಬಂಧುಗಳೇ, ನಮಸ್ತೆ,
    ವೇದಸುಧೆಯ ಪ್ರಥಮ ವಾರ್ಷಿಕೋತ್ಸವದ ಆಮಂತ್ರಣ ಇಲ್ಲಿದೆ. ದಯಮಾಡಿ ನಿಮ್ಮ  ಅಂಚೆಯ ವಿಳಾಸವನ್ನು ವೇದಸುಧೆಗೆ ಮೇಲ್ ಮಾಡಿದರೆ ಅಂಚೆಯ ಮೂಲಕ ಕೂಡ ನಿಮಗೆ ಆಮಂತ್ರಣ ಪತ್ರಿಕೆಯನ್ನು  ಕಳುಹಿಸಿಕೊಡಲಾಗುವುದು. ವಾರ್ಷಿಕೋತ್ಸವವು ಹಾಸನದಲ್ಲಿ ನಡೆಯುತ್ತಿರುವುದರಿಂದ ಈಗಾಗಲೇ ವೇದಸುಧೆಯ ಸಂಪರ್ಕದಲ್ಲಿರುವವರಿಗೆ  ಹಾಸನ ಬಹಳ ದೂರವೇನೂ ಆಗಲಾರದೆಂದು ಭಾವಿಸುವೆ.ಆದರೂ ಸಕಾಲಕ್ಕೆ ನೀವು ಬರಬೇಕಾದ್ದರಿಂದ ಕೆಳಗಿನ  ಕೆಲವು ಅಂಶಗಳನ್ನು ವೇದಸುಧೆಗೆ ಮೇಲ್ ಮೂಲಕ ತಿಳಿಸಿದರೆ ಸಾಧ್ಯವಾದಷ್ಟೂ ಉತ್ತಮ ವ್ಯವಸ್ಥೆ ಮಾಡಲಾಗುವುದು. ಬೆಂಗಳೂರಿನಿಂದ ಹಾಗೂ ಶಿವಮೊಗ್ಗಗಳಿಂದ ಬರುವವರು  ನಿಮ್ಮೂರಿನ ಬಸ್ ನಿಲ್ದಾಣದಿಂದ ಮುಂಜಾನೆ 5.30 ಕ್ಕೆ ಬಸ್ ನಲ್ಲಿ ಹೊರಟರೆ  ಸಕಾಲದಲ್ಲಿ ಹಾಸನ ತಲುಪಬಹುದು. ಸ್ವಂತ ಕಾರ್ ನಲ್ಲಿ ಬರುವವರಿಗೆ ಮೂರುವರೆ ಇಂದ ನಾಲ್ಕು ಗಂಟೆ ಬೇಕಾಗಬಹುದು.
ಆಮಂತ್ರಣದಲ್ಲಿ ಕಾರ್ಯಕ್ರಮಗಳ ವಿವರ ಇದೆ.
ಇತರೆ ವ್ಯವಸ್ಥೆ ಗಳು:
* ಉಪಹಾರ: ಪ್ರಾತ: ಕಾಲ 8.30 ರಿಂದ 9.15
* ಚಹ/ಕಾಫೀ/ಬಾದಾಮಿ ಹಾಲು: ಕಾರ್ಯಕ್ರಮದ ನಡುವೆ ಬೆಳಿಗ್ಗೆ 11.00 ಕ್ಕೆ    

  ಮತ್ತು  ಮಧ್ಯಾಹ್ನ 4.00 ಕ್ಕೆ
* ಭೋಜನ: ಮಧ್ಯಾಹ್ನ 1.30 ರಿಂದ 2.30
* ಸಮಾರಂಭದ ಸ್ಥಳದಲ್ಲಿ ವೇದದ ಸಾಹಿತ್ಯಗಳು ಮಾರಾಟಕ್ಕೆ ಲಭ್ಯವಿರುತ್ತದೆ.
* ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾದ ಬೇಲೂರು, ಹಳೇಬೀಡು ಮತ್ತು ಶ್ರವಣ ಬೆಳಗೊಳ ಗಳನ್ನು ನೋಡಬಯಸುವವರಿಗೆ ಬಾಡಿಗೆ ಕಾರ್ ವ್ಯವಸ್ಥೆ ಬೇಕಾದರೆ ಮುಂಚಿತವಾಗಿ ತಿಳಿಸಿ.
* ಶನಿವಾರ ರಾತ್ರಿ ಬರುವವರಿಗೆ ಉಳಿಯುವ ಮತ್ತು ಊಟೋಪಚಾರದ ಸಾಮಾನ್ಯ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಹೋಟೆಲ್ ನಲ್ಲಿ ರೂಮ್ ಮಾಡಬಯಸುವವರು ಮುಂಚಿತವಾಗಿ ತಿಳಿಸಿದರೆ ಆರಕ್ಷಣೆ ಮಾಡಲಾಗುವುದು. 
----------------------------------------
*  ಹೆಸರು:
*  ಊರು:
*  ಮೊಬೈಲ್ ನಂಬರ್:
*  ನಿಮ್ಮೊಡನೆ ಎಷ್ಟು ಜನ ಬರುವರು?
*  ಯಾವ ಸಮಯಕ್ಕೆ ಹಾಸನ ತಲುಪುವಿರಿ?
*  29.1.2011 ರಂದು ರಾತ್ರಿ ಹಾಸನದಲ್ಲಿ  ವಸತಿ ವ್ಯವಸ್ಥೆ ಬೇಕೇ?
*  ನಿಮ್ಮ ಸ್ನೇಹಿತರುಗಳನ್ನು ಆಹ್ವಾನಿಸಲು ನಿಮಗೆ ಹೆಚ್ಚು ಆಮಂತ್ರಣ    
    ಪತ್ರಿಕೆಗಳು ಬೇಕೆ?